Demo image Demo image Demo image Demo image Demo image Demo image Demo image Demo image

“ಇಂಗ್ಲೀಷ್ ವಿಂಗ್ಲೀಷ್” ಗೃಹಿಣಿಯೊಬ್ಬಳು ಇಂಗ್ಲೀಷ್ ಕಲಿಯುವ ಕಥೆಯಷ್ಟೇ ಅಲ್ಲ

  • ಶನಿವಾರ, ಡಿಸೆಂಬರ್ 08, 2012
  • ಬಿಸಿಲ ಹನಿ


  • “ಇಂಗ್ಲಿಷ್ ವಿಂಗ್ಲಿಷ್” ಗೃಹಿಣಿಯೊಬ್ಬಳು ಇಂಗ್ಲಿಷ್ ಬಾರದೇ ಪೇಚಾಡುವ, ಅವಮಾನಕ್ಕೊಳಗಾಗುವ ಮತ್ತದನ್ನು ಜಯಿಸಿ ಬರುವ ಕಥೆ ಮಾತ್ರವಲ್ಲ ಹೆಣ್ಣೊಬ್ಬಳ ಛಲ, ಆತ್ಮವಿಶ್ವಾಸ, ಮತ್ತವಳ ಜೀವನ ಪ್ರೀತಿಯ ಪ್ರತೀಕದ ಕಥೆಯೂ ಹೌದು ಹಾಗೂ ಎಲ್ಲಿಯೂ ತನ್ನ ಸಂಯದ ಎಲ್ಲೆಯನ್ನು ಮೀರದೆ ಎಲ್ಲವನ್ನೂ ಚಾಕಚಕ್ಯತೆಯಿಂದ ನಿಭಾಯಿಸಿ ಎಲ್ಲರನ್ನೂ, ಎಲ್ಲವನ್ನೂ ಗೆಲ್ಲುವ ಒಬ್ಬ ಪರಿಪೂರ್ಣ ಮಹಿಳೆಯೊಬ್ಬಳ ಕಥೆಯೂ ಹೌದು. ನಿರ್ದೇಶಕಿ ಗೌರಿ ಶಿಂಧೆ ತೀರಾ ಸಾಮಾನ್ಯವೆನಿಸುವಂಥ ಮತ್ತು ಇವತ್ತಿನ ಜಗತ್ತಿನಲ್ಲಿ ಇಂಗ್ಲೀಷಿನಲ್ಲಿ ಮಾತನಾಡಲೇಬೇಕಾದಂಥ ಅನಿವಾರ್ಯತೆಯ ಕಥಾವಸ್ತುವೊಂದನ್ನು ಆಯ್ದುಕೊಂಡು ಅದನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ ಪ್ರೇಕ್ಷಕರ ಮನಸ್ಸನ್ನು ಗೆದ್ದು ಬಿಡುವಲ್ಲಿ ಯಶಸ್ವಿಯಾಗಿಬಿಡುತ್ತಾರೆ. ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರ ಅಲ್ಲವೇನೋ ಅನಿಸುವಷ್ಟರಮಟ್ಟಿಗೆ ಚಿತ್ರದುದ್ದಕ್ಕೂ ಗೌರಿ ಶಿಂಧೆ ಬಿಗುವಾದ ನಿರೂಪಣೆಯನ್ನು ಕಾಯ್ದುಕೊಂಡು ಬಂದಿದ್ದಾರೆ. ಎಲ್ಲೂ ಅನವಶ್ಯಕ ದೃಶ್ಯಗಳನ್ನು ತುರುಕದೆ, ಅನವಶ್ಯಕ ಸಂಭಾಷಣೆಗಳನ್ನು ಹೆಣೆಯದೆ ಹೇಳಬೇಕಾದ್ದನ್ನು ಚಿಕ್ಕ ಚಿಕ್ಕ ದೃಶ್ಯಗಳ ಮೂಲಕ ಮನಮುಟ್ಟುವಂತೆ ಹೇಳುತ್ತಾರೆ. ಹ್ಯಾಟ್ಸಾಫ್ ಟು ಗೌರಿ ಶಿಂಧೆ!


    ಇವತ್ತಿನ ಜಗತ್ತಿನಲ್ಲಿ ಇಂಗ್ಲೀಷ್ ಎಷ್ಟೊಂದು ಅವಶ್ಯಕ ಮತ್ತು ಅನಿವಾರ್ಯವಾಗಿದೆಯೆಂದರೆ ಇಂಗ್ಲೀಷ್ ಬಾರದವರನ್ನು ಅವಮಾನಿಸುವ, ಕೀಳಾಗಿ ಕಾಣುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರು ಯಾರೇ ಆಗಿರಲಿ (ಹೆಣ್ಣು ಅಥವಾ ಗಂಡು), ಎಷ್ಟೇ ಓದಿರಲಿ, ಎಷ್ಟೇ ಸ್ಮಾರ್ಟ್ ಆಗಿರಲಿ, ಅಥವಾ ಏನೆಲ್ಲ ಸ್ಕಿಲ್‍ಗಳನ್ನು ಹೊಂದಿರಲಿ ಆದರೆ ಇಂಗ್ಲೀಷ್ ಸ್ಪೀಕಿಂಗ್ ಸ್ಕಿಲ್ ಇಲ್ಲದೇ ಹೋದರೆ ಏನೆಲ್ಲ ಅನುಭವಿಸಬೇಕಾಗುತ್ತದೆ ಎನ್ನುವದನ್ನು ಎಷ್ಟು ಜಾಗೂರುಕತೆಯಿಂದ ನಿರ್ದೇಶಕಿ ನಿರೂಪಿಸುತ್ತಾರೋ ಅಷ್ಟೇ ಜಾಗೂರುಕತೆಯಿಂದ ಅದನ್ನು ಕಲಿತರೆ ಎಷ್ಟೆಲ್ಲ ಪಡೆಯಬಹುದೆನ್ನುವದನ್ನು ಸಹ ಹೇಳುತ್ತಾರೆ. ಇಲ್ಲಿ ನಿರ್ದೇಶಕಿ ಇಂಗ್ಲೀಷ್ ಭಾಷೆ ಅನ್ಯ ಭಾಷೆಗಳ ಮೇಲೆ ದಾಳಿ ಮಾಡುತ್ತಿದೆ ಎನ್ನುವ ಒಣ ಹಾರಾಟಕ್ಕೆ ಇಂಬು ಕೊಡದೆ, ಆ ಭಾಷೆ ಹೇಗೆ ನಮ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ ಮತ್ತದನ್ನು (ಎಷ್ಟು ಬೇಕೋ ಅಷ್ಟನ್ನು) ಅಪ್ಪಿಕೊಳ್ಳುವದು ಎಷ್ಟೊಂದು ಅನಿವಾರ್ಯವಾಗಿದೆ ಎನ್ನುವದನ್ನು ಯಾವೊಂದೂ ಹಿಜರಿತವಿಲ್ಲದೆ ಅತ್ಯಂತ ಸಲೀಸಾಗಿ ಹೇಳಿಬಿಡುತ್ತಾರೆ.

    ಕಥಾನಾಯಕಿ ಶಶಿ ಒಬ್ಬ ಸಾಮಾನ್ಯ ಮಧ್ಯಮವರ್ಗದ ಮಹಿಳೆ. ಎಲ್ಲ “ಹೌಸ್ ವೈಪ್” ಮಹಿಳೆಯರಂತೆ ಶಶಿ ಕೂಡ ದಿನಾ ಬೆಳಿಗ್ಗೆ ಎದ್ದು ಅತ್ತೆ, ಗಂಡ, ಮತ್ತು ಮಕ್ಕಳ ಅವಶ್ಯಕತೆಗಳನ್ನು ಪೂರೈಸುತ್ತಾ ಮನೆಯನ್ನು ನಿಭಾಯಿಸುವ ಒಬ್ಬ ಸಾಮಾನ್ಯ ಗೃಹಿಣಿ ಮತ್ತು ಆಕೆ ತನ್ನ ಬಿಡುವಿನ ವೇಳೆಯಲ್ಲಿ ಲಡ್ಡುಗಳನ್ನು ಮಾಡುತ್ತಾ ಅವುಗಳನ್ನು ಮನೆಮನೆಗೆ ಹೋಗಿ ಮಾರುತ್ತಾ ಒಂದಷ್ಟು ಪುಡಿಗಾಸನ್ನು ಸಂಪಾದಿಸುವವಳು. ಸಿನಿಮಾ ಆರಂಭವಾಗುವದೇ ಅವಳ ದಿನಚರಿಯೊಂದಿಗೆ. ಬೆಳಿಗ್ಗೆ ಎದ್ದು ಕಾಫಿ ಮಾಡಿಕೊಂಡು ಕುಡಿಯುತ್ತಾ ಆಗಷ್ಟೇ ಬಂದ ದಿನಪತ್ರಿಕೆಯ ಪುಟವನ್ನು ತಿರುವಿ ಹಾಕಬೇಕು ಅನ್ನುವಷ್ಟರಲ್ಲಿ ಅವಳ ಅತ್ತೆ ಕಾಫಿ ಬೇಕು ಎಂದು ಕೇಳುತ್ತಾಳೆ. ಶಶಿ ಆಕೆಗೆ ಕಾಫಿ ಹಾಕಿಕೊಟ್ಟು ಮತ್ತೆ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದಂತೆ ಗಂಡ ಚಹಾ ಬೇಕೆಂದು ಕೇಳುತ್ತಾನೆ. ಅದಾದ ಮೇಲೆ ಮನೆಯವರೆಲ್ಲರಿಗೂ ತಿಂಡಿ ತಯಾರಿಸುವ ಕೆಲಸ. ಹೀಗೆ ಒಂದಾದ ಮೇಲೊಂದು ಬೆಳಗಿನ ಕೆಲಸ ಮಾಡುವದರಲ್ಲಿ ತೊಡಗುವದರಿಂದ ಆಕೆಗೆ ದಿನಪತ್ರಿಕೆಯನ್ನು ಓದಲಾಗುವದೇ ಇಲ್ಲ. ಆದರೆ ಆಕೆ ಈ ಬಗ್ಗೆ ಒಂಚೂರು ಬೇಸರವನ್ನು ವ್ಯಕ್ತಪಡಿಸದೆ ತನ್ನ ಕೆಲಸದಲ್ಲಿ ಮಗ್ನಳಾಗುತ್ತಾಳೆ.

    ಮುಂದಿನ ದೃಶ್ಯದಲ್ಲಿ ನಿರ್ದೇಶಕಿ ಚಿತ್ರದ ಆಶಯದ ಬಗ್ಗೆ ಸುಳಿವು ಕೊಟ್ಟುಬಿಡುತ್ತಾರೆ. ತಿಂಡಿ ತಯಾರಿಸಿದ ಮೇಲೆ ಎಲ್ಲರಿಗೂ ಬಡಿಸಬೇಕಾದರೆ ಶಶಿಯ ಮಗಳು ಸಪ್ನಾ ಬ್ರೌನ್ ಬ್ರೆಡ್ಡೇ ಬೇಕೆಂದು ಗೋಗರೆಯುತ್ತಾಳೆ. ಮಗನೂ ಅದನ್ನೇ ಕೇಳುತ್ತಾನೆ. ಆದರೂ ಅವಳು ಒಂದಿಷ್ಟು ಬೇಸರ ಮಾಡಿಕೊಳ್ಳದೆ ಮಾಡಿಕೊಡುತ್ತಾಳೆ. “ಸಪ್ನಾ, ನೀನು ಈ ರೀತಿ ಬ್ರೌನ್ ಬ್ರೆಡ್, ವೈಟ್ ಎಗ್ಸ್ ಕೇಳೋದೆಲ್ಲಾ ನೀನು ಆ ಝಾಸ್ ಡ್ಯಾನ್ಸ್ ಕ್ಲಾಸು ಸೇರಿದಾಗಿನಿಂದ ಶುರುವಾಗಿದೆ.” ಎಂದು ಮಗಳ ಮೇಲೆ ಹುಸಿ ಮುನಿಸು ತೋರಿಸುತ್ತಾಳೆ. ತಕ್ಷಣ ಆಕೆಯ ಮಗಳು ಮತ್ತು ಗಂಡ ಅವಳ ತಪ್ಪು ಉಚ್ಛಾರಣೆಯನ್ನು ಪರಿಹಾಸ್ಯ ಮಾಡುತ್ತಾ ಬಿದ್ದು ಬಿದ್ದು ನಗುತ್ತಾರೆ. ಶಶಿಗೆ ಅವಮಾನವಾಗುತ್ತದೆ. ಪಕ್ಕದಲ್ಲಿಯೇ ಇರುವ ಮಗ “ಮಾ, ಅದು ಝಾಸ್ ಡ್ಯಾನ್ಸ್ ಅಲ್ಲ. ಝೇಸ್ ಡ್ಯಾನ್ಸ್.” ಎಂದು ಹೇಳಿದಾಗ ಅವಳು ಪೆಚ್ಚಾಗುತ್ತಾಳೆ. ಅಲ್ಲಿಂದಾಚೆ ಅವಳು ಆ ಪದವನ್ನೆ ಮತ್ತೆ ಮತ್ತೆ ಮನನ ಮಾಡುವದರ ಮೂಲಕ ಅವಳ ಇಂಗ್ಲೀಷ್ ಕಲಿಯುವ ತುಡಿತ ಸಣ್ಣದಾಗಿ ಶುರುವಾಗುತ್ತದೆ.

    ಇಂಗ್ಲೀಷ್ ಬರದೆ ಇರುವ ಶಶಿ ತನ್ನ ಮಗಳಿಂದಲೇ ಕೀಳಾಗಿ ಕಾಣಲ್ಪಡುತ್ತಾಳೆ. ಒಂದು ಸಾರಿ ಶಶಿಯ ಮಗಳು ಸಪ್ನಾ ತನ್ನ ಗೆಳತಿ ರೂಪಲ್‍ಳ ಮನೆಯಲ್ಲಿ ಓದು ಮುಗಿಸಿ ವಾಪಾಸಾದಾಗ ಶಶಿ ಅವಳನ್ನು “ಎಲ್ಲಿಗೆ ಹೋಗಿದ್ದೆ? ಇಲ್ಲೇ ಮನೆಯಲ್ಲೇ ಓದ್ಕೋಬಹುದಿತ್ತಲ್ವ?” ಎಂದು ಕೇಳುತ್ತಾಳೆ. ಅದಕ್ಕೆ ಮಗಳು “ಇಂಗ್ಲೀಷ್ ಲಿಟರೇಚರ್ ನೀನು ಹೇಳಿಕೊಡುತಿದ್ಯಾ?” ಎಂದು ವ್ಯಂಗ್ಯವಾಗಿ ಹೇಳಿ ಅವಳನ್ನು ನೋಯಿಸುತ್ತಾಳೆ. ಇನ್ನೊಂದು ಸಾರಿ ಅವಳ ಸ್ಕೂಲಿನಲ್ಲಿ ಪೇರೆಂಟ್ಸ್ ಟೀಚರ್ ಮೀಟಿಂಗ್ ದಿನ ಶಶಿಯ ಗಂಡನಿಗೆ ಹೋಗಲಾಗದಿರುವದರಿಂದ ಅನಿವಾರ್ಯವಾಗಿ ಆಕೆ ಹೋಗಬೇಕಾಗುತ್ತದೆ. ಆದರೆ ಮಗಳಿಗೆ ಅವಳನ್ನು ತನ್ನ ಸ್ಕೂಲಿಗೆ ಕರೆದೊಯ್ಯಲು ಇಷ್ಟವಿಲ್ಲ. ಏಕೆಂದರೆ ಶಶಿಗೆ ಇಂಗ್ಲೀಷ್ ಮಾತನಾಡಲು ಬರುವದಿಲ್ಲ. ಆದರೆ ಶಶಿ ಹೋಗೇ ಹೋಗುತ್ತಾಳೆ. ಅಲ್ಲಿ ಮಗಳ ಗೆಳತಿಯ ಅಮ್ಮನೊಂದಿಗೆ ಶಶಿ ಮಾತನಾಡುವಾಗ ಅವಳ ಮಗಳೇ ಎಲ್ಲದಕ್ಕೂ ಇಂಗ್ಲೀಷಿನಲ್ಲಿ ಉತ್ತರ ಕೊಡುತ್ತಾಳೆ ಹಾಗೂ ಅಲ್ಲಿ ಬಹಳ ಹೊತ್ತು ನಿಂತರೆ ಎಲ್ಲಿ ತನ್ನ ಅಮ್ಮನಿಗೆ ಇಂಗ್ಲೀಷ್ ಬರುವದಿಲ್ಲ ಅನ್ನುವ ಸತ್ಯ ತನ್ನ ಗೆಳತಿಯ ಅಮ್ಮನಿಗೆ ಗೊತ್ತಾಗಿಬಿಡುತ್ತದೋ ಎಂದು ಅವಳನ್ನು ಆದಷ್ಟು ಬೇಗ ಅಲ್ಲಿಂದ ಜಾಗ ಖಾಲಿ ಮಾಡಿಸುತ್ತಾಳೆ. ಮುಂದೆ ಮಗಳ ಕ್ಲಾಸ್ ಟೀಚರ‍್ ನ್ನು ಭೇಟಿಯಾದಾಗ ಆತ ಅವಳ performance ಬಗ್ಗೆ ಇಂಗ್ಲೀಷ್‍ನಲ್ಲಿ ಹೇಳುವಾಗ ಶಶಿ ಅವರನ್ನು ತಡೆದು “Father, my English is not good. ನಿಮಗೆ ತೊಂದರೆ ಇಲ್ಲದಿದ್ದರೆ ಹಿಂದಿಯಲ್ಲೇ ಹೇಳುತ್ತೀರಾ?” ಎಂದು ಕೇಳುತ್ತಾಳೆ. ಹೀಗೆ ಆಕೆ ಹಿಂದಿಯಲ್ಲಿ ಮಾತನಾಡುವಾಗ ಮಗಳು ಸಪ್ನಾ ತನ್ನ ಟೀಚರ್ ಮುಂದೆ ಮುಜುಗರಕ್ಕೀಡಾಗುತ್ತಾಳೆ ಮತ್ತು ತನ್ನ ಅಮ್ಮ ಹಿಂದಿಯಲ್ಲಿ ಮಾತನಾಡಿದ್ದು ತನ್ನ ಪ್ರತಿಷ್ಟೆಗೆ ಕುಂದು ಎಂದು ಭಾವಿಸುತ್ತಾಳೆ. ಈ ಸನ್ನಿವೇಶದ ಮೂಲಕ ನಿರ್ದೇಶಕಿ ಇವತ್ತಿನ ‘ಇಂಗ್ಲೀಷ್ ಮೀಡಿಯಂ’ ಮಕ್ಕಳ ಈ ತೆರನಾದ ಮನೋಸ್ಥಿತಿಯು ಅತ್ಯಂತ ಸಹಜವೆಂಬಂತೆ ನಿರೂಪಿಸುತ್ತಾರೆ.

    ಮುಂದೆ ತನ್ನ ಅಕ್ಕನ ಮಗಳ ಮದುವೆ ತಯಾರಿ ಸಲುವಾಗಿ ಒಬ್ಬಳೇ ಅಮೆರಿಕಾಕ್ಕೆ ಹೋಗಬೇಕಾಗಿ ಬಂದಾಗ ವಿಮಾನ ನಿಲ್ದಾಣದಲ್ಲಿ ಇಂಗ್ಲೀಷ್ ಬರದ ಶಶಿ ಅನುಭವಿಸುವ ಆತಂಕ, ಕಳವಳಗಳು ನಮ್ಮ ಮನಸ್ಸನ್ನು ಕಲಕಿಬಿಡುತ್ತವೆ. ಹೀಗೆ ಧುತ್ತೆಂದು ಬರೀ ಇಂಗ್ಲೀಷ್ ಮಾತನಾಡುವ ದೇಶಕ್ಕೆ ಬಂದಿಳಿದಾಗ ಅಲ್ಲಿ ಶಶಿ ಹೇಗೆ ನಿಭಾಯಿಸುತ್ತಾಳೆ ಎನ್ನುವದೇ ಚಿತ್ರದ ಕುತೂಹಲಕಾರಿ ಘಟ್ಟ. ಇಲ್ಲಿಂದ ಮುಂದೆ ಬರೀ ಇಂಗ್ಲೀಷ್ ಮಾತನಾಡುವ ಅಮೆರಿಕದಂಥ ಅಪರಿಚಿತ ಪರಿಸರದಲ್ಲಿ ಇಂಗ್ಲಿಷ್‍ನಲ್ಲಿ ವ್ಯವಹರಿಸಲಾಗದೆ ಶಶಿ ಕೀಳರಿಮೆಯಿಂದ ನರಳುತ್ತಾಳೆ, ಒಂದು ಸಾರಿ ಶಶಿಯ ಅಕ್ಕನ ಮಗಳ ಭಾವಿಪತಿ ಮನೆಗೆ ಭೇಟಿ ಕೊಟ್ಟಾಗ ಎಲ್ಲರೂ ಅವನೊಂದಿಗೆ ಇಂಗ್ಲೀಷ್‍ನಲ್ಲಿ ವ್ಯವಹರಿಸುವದನ್ನು ನೋಡಿ ಶಶಿಗೆ ತಾನು ಪರಕೀಯಳು ಎಂಬ ಭಾವ ಮೂಡುತ್ತದೆ. ಮುಂದೆ ಮನ್‍ಹತ್ತನ್ ಕಾಫಿ ಶಾಪೊಂದರಲ್ಲಿ ಸ್ಯಾಂಡ್‍ವಿಚ್ ಮತ್ತು ಕಾಫಿ ಆರ್ಡರ್ ಮಾಡಲು ಹೋಗಿ ಅಲ್ಲಿಯ ಜನರ ಗೇಲಿಗೊಳಗಾಗುತ್ತಾಳೆ. ಈ ಘಟನೆ ಅವಳ ಆತ್ಮಗೌರವಕ್ಕೆ ಧಕ್ಕೆ ತರುವದಲ್ಲದೆ ಅಲ್ಲಿ ಅವಳನ್ನು ನಾಲ್ಕು ವಾರಗಳ ಇಂಗ್ಲಿಷ್ ಕ್ರ್ಯಾಸ್ ಕೋರ್ಸಿಗೆ ಸೇರಿಕೊಳ್ಳುವಂತೆ ಪ್ರೇರಿಪಿಸುತ್ತದೆ.

    ಇಂಗ್ಲೀಷ್ ಕ್ಲಾಸಿನಲ್ಲಿ ಮೆಕ್ಸಿಕನ್ ನ್ಯಾನಿ, ಪಾಕಿಸ್ತಾನಿ ಡ್ರೈವರ್, ಚೈನೀಸ್ ಹೇರ್ ಸ್ಟೈಲಿಸ್ಟ್, ಸೌಥ್ ಇಂಡಿಯನ್ ಸಾಫ್ಟ್ವೇರ್ ಇಂಜಿನೀಯರ್, ಮತ್ತು ಫ್ರೆಂಚ್ ಚೆಫ್ ನನ್ನು ಭೇಟಿಯಾಗುತ್ತಾಳೆ. ಅವರೆಲ್ಲರೂ ಪ್ರಪಂಚದ ಮೂಲೆ ಮೂಲೆಯಿಂದ ಕೆಲಸ ಹುಡುಕಿಕೊಂಡು ಅಮೆರಿಕಾಕ್ಕೆ ಬಂದವರು. ಆದರೆ ಇಂಗ್ಲೀಷ್ ಬರದೆ ಇರುವವರು. ಅವರನ್ನು ನೋಡಿ ಶಶಿಗೆ ತಾನೊಬ್ಬಳೇ ಈ ಕೀಳರಿಮೆಯಿಂದ ಬಳಲುತ್ತಿಲ್ಲ, ಇನ್ನೂ ಎಷ್ಟೋ ಜನ ಇದ್ದಾರೆ ಎಂದು ಕೊಂಚ ಸಮಾಧಾನವಾಗುತ್ತದೆ. ಅಲ್ಲಿ ಅವರೊಟ್ಟಿಗಿನ ಸ್ನೇಹ ಮತ್ತು ಅವಳ ಟೀಚರ್ ನೀಡುವ ಪ್ರೋತ್ಸಾಹ ಅವಳಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತದೆ. ಅಲ್ಲಿ ಇಂಗ್ಲೀಷ್ ಕಲಿಯಲು ಬಂದ ಅವರೆಲ್ಲರೂ ಎಷ್ಟೋ ಪ್ರಸಂಗಗಳಲ್ಲಿ ಹೇಳಬೇಕಾದ್ದನ್ನು ಇಂಗ್ಲೀಷಿನಲ್ಲಿ ಹೇಳಲಾಗದೆ, ಪದಗಳಿಗೆ ತಡಕಾಡುವಾಗ ಧೀಡಿರ್ ಅಂತ ಮಾತೃಭಾಷೆಗೆ ಹಿಂದಿರುಗುತ್ತಾರೆ. ಅವರೆಲ್ಲರೂ ಇಂಗ್ಲೀಷ್ ಕಲಿಯುವ ಪರಿ ಮತ್ತು ಅದರ ಹಿಂದಿನ ಅವಶ್ಯಕತೆಯನ್ನು ನಿರ್ದೇಶಕಿ ತುಂಬಾ ರಿಯಲಿಸ್ಟಿಕ್ ಆಗಿ ಕಟ್ಟಿಕೊಡುತ್ತಾರೆ.

    ಹೀಗೆ ನಿಧಾನವಾಗಿ ಶಶಿ ಎಡುವತ್ತಾ, ತಡವರಿಸುತ್ತಾ ಕೊನೆಗೂ ಇಂಗ್ಲೀಷ್ ಕಲಿಯುತ್ತಾಳೆ. ಕೊನೆಯಲ್ಲಿ ಶಶಿ ಹೊಸದಾಗಿ ಮದುವೆಯಾದ ಹೆಣ್ಣು-ಗಂಡನ್ನು ಉದ್ದೇಶಿಸಿ ಒಂದೊಂದೇ ವಾಕ್ಯವನ್ನು ಪೋಣಿಸುತ್ತಾ ಇಂಗ್ಲೀಷಿನಲ್ಲಿ ಮಾತನಾಡುದು ನಮ್ಮ ಮೆಚ್ಚುಗೆಯನ್ನು ಗಳಿಸುವದಲ್ಲದೆ ನಮ್ಮ ಮನಸ್ಸನ್ನು ತಾಕಿಬಿಡುತ್ತದೆ. ಹೀಗೆ ಸ್ವಂತ ಆಸಕ್ತಿ ಹಾಗು ಪರಿಶ್ರಮದಿಂದ ಶಶಿ ಇಂಗ್ಲಿಷ್ ಕಲಿತು ಇಡಿ ಪ್ರಪಂಚವನ್ನೇ ಗೆದ್ದ ಭಾವದಲ್ಲಿ ಹೊಸ ಆತ್ಮವಿಶ್ವಾಸದೊಂದಿಗೆ ಸ್ವದೇಶಕ್ಕೆ ಮರಳುತ್ತಾಳೆ. ಇಂಗ್ಲೀಷ್ ಕಲಿತ ಮೇಲೆ ಶಶಿ ಅದನ್ನು ಅವಶ್ಯಕತೆ ಬಿದ್ದಾಗ ಮಾತ್ರ ಬಳಸುತ್ತಾಳೆ. ಅಥವಾ ಅದರ ಮೇಲೆ ಅನವಶ್ಯಕ ವ್ಯಾಮೋಹವನ್ನು ಬೆಳೆಸಿಕೊಳ್ಳುವದಿಲ್ಲ. ಆಕೆ ಸ್ವದೇಶಕ್ಕೆ ಮರಳುವಾಗ ವಿಮಾನದಲ್ಲಿ ಗಗನಸಖಿ ಇಂಗ್ಲೀಷ್ ದಿನಪತ್ರಿಕೆಗಳನ್ನು ಪ್ರಯಾಣಿಕರಿಗೆ ವಿತರಿಸುತ್ತಾ ಬರುವಾಗ ಶಶಿಯ ಗಂಡ ಇಂಗ್ಲೀಷ್ ಪತ್ರಿಕೆ ತೆಗೆದುಕೊಳ್ಳುತ್ತಾನೆ. ಆದರೆ ಶಶಿ ಹಿಂದಿ ಪತ್ರಿಕೆ ಬೇಕೆಂದು ಕೇಳುತ್ತಾಳೆ. ಆ ಮೂಲಕ ಶಶಿ ಇಂಗ್ಲೀಷ್ ಕಲಿತರೂ ತನ್ನ ಮಾತೃಭಾಷೆಯ ಮೇಲಿನ ಪ್ರೀತಿಯನ್ನು, ಗೌರವವನ್ನು ಕಳೆದುಕೊಳ್ಳುವದಿಲ್ಲವೆಂದು ಗೊತ್ತಾಗುತ್ತದೆ.

    ಶಶಿ ಒಬ್ಬ ಸಾಮಾನ್ಯ ಗೃಹಿಣಿಯಾದರೂ ಆಧುನಿಕ ಸಮಾಜದ ಬದಲಾವಣೆಗಳನ್ನು ಎಗ್ಗಿಲ್ಲದೆ ಒಪ್ಪಿಕೊಳ್ಳುವಂಥವಳು. ತಮ್ಮ ಟೀಚರ್ ಒಬ್ಬ ಗೇ ಅಂತಾ ಗೊತ್ತಾದಾಗ ಅವನ ವಿದ್ಯಾರ್ಥಿಗಳು ಅವನನ್ನು ಆಡಿಕೊಂಡು ನಗುತ್ತಾರೆ. ಆದರೆ ಶಶಿ ಅವರನ್ನು ಖಂಡಿಸುತ್ತಾ ‘ಅವರು ಮನುಷ್ಯರಲ್ಲವೇ?’ ಎಂದು ಅದೊಂದು ಸಾಮಾನ್ಯ ವಿಷಯವೆಂಬಂತೆ ಸ್ವೀಕರಿಸುತ್ತಾಳೆ. ಇನ್ನು ತನ್ನ ಟೀನೇಜ್ ಮಗಳು ತುಂಡುಲಂಗವನ್ನು ಹಾಕಿಕೊಂಡು ಕಾಫಿ ಡೇಗೆ ಹೋಗುವದನ್ನು ಮತ್ತು ತನ್ನ ಮುಂದೆಯೇ ತನ್ನ ಗಂಡ, ಪರ ನಾರಿಯನ್ನು ಹಗ್ ಮಾಡುವುದನ್ನು ನಿರಾಳವಾಗಿ ಒಪ್ಪಿಕೊಳ್ಳುತ್ತಾಳೆ.

    ಸಿನಿಮಾದ ಮುಖ್ಯ ಆಕರ್ಷಣೆ ಶಶಿಯ ಫ್ರೆಂಚ್ ಸಹಪಾಠಿ ಮತ್ತು ಶಶಿಯ ಅಕ್ಕನ ಮಗಳು. ಅವರಿಬ್ಬರೂ ಶಶಿಗೆ ಇಂಗ್ಲೀಷ್ ಕಲಿಯುವದರಲ್ಲಿ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಅವಳ ಫ್ರೆಂಚ್ ಸಹಪಾಠಿ ಕೂಡ ಶಶಿಯಂತೆ ಅಡಿಗೆಯನ್ನೇ ಕೆಲಸವನ್ನಾಗಿ ಮಾಡಿಕೊಂಡವ. ಇದೇ ಕಾರಣಕ್ಕಾಗಿ ಅವರಿಬ್ಬರೂ ಹತ್ತಿರವಾಗುತ್ತಾರೆ. ಆತ ಶಶಿಯ ಲಡ್ಡು ಬಗ್ಗೆ, ಅವಳ ಅಡಿಗೆ ಕಲೆಯ ಬಗ್ಗೆ, ಮತ್ತು ಅವಳ ಸ್ಪೋಕನ್ ಇಂಗ್ಲೀಷ್ ಬಗ್ಗೆ ಇಂಗ್ಲೀಷಿನಲ್ಲಿ ಒಂದೊಂದೇ ಪದವನ್ನು ಪೋಣಿಸುತ್ತಾ ಅವಳನ್ನು ಹುರಿದುಂಬಿಸುತ್ತಾನೆ. ಹೀಗೆ ಶಶಿಯನ್ನು ಹುರಿದುಂಬಿಸುತ್ತಲೇ ನಿಧಾನವಾಗಿ ಅವಳೆಡೆಗೆ ಆಕರ್ಷಿತನಾಗುತ್ತಾನೆ. ಆದರೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಪಡೆದ ಶಶಿ ಅವನ ಪ್ರೀತಿಯನ್ನು ನಯವಾಗಿ ತಿರಸ್ಕರಿಸುತ್ತಾಳೆ. ಆದರೂ ಅವರಿಬ್ಬರ ನಡುವೆ ನಡೆಯುವ ಮಧುರ ಮಾತುಕತೆ ನಮಗೆ ಇಷ್ಟವಾಗುದೆ ಹೋದರೆ ಕೇಳಿ. ಆತ ಎಷ್ಟೋ ಸಾರಿ ಹೇಳಬೇಕಾದ್ದನ್ನು ತನ್ನ ಮುಗುಳುನಗೆಯೊಂದರಲ್ಲೇ ಎಲ್ಲವನ್ನು ಹೇಳುತ್ತಾನೆ. ಇನ್ನು ಇಡಿ ಚಿತ್ರದಲ್ಲಿ ಶಶಿಯ ಅತ್ತೆಯನ್ನು ಬಿಟ್ಟರೆ ಅವಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವವಳೆಂದರೆ ಶಶಿಯ ಅಕ್ಕನ ಮಗಳು. ಆಕೆ ಹೆಜ್ಜೆಹೆಜ್ಜೆಗೂ ಶಶಿಗೆ ಇಂಗ್ಲೀಷ್ ಕಲಿಯಲು ಪ್ರೋತ್ಸಾಹ ನೀಡುವದರ ಮೂಲಕ ಶಶಿಗೆ ಆಸರೆಯಾಗಿ ನಿಲ್ಲುತ್ತಾಳೆ.

    ಇನ್ನು ಶಶಿಯ ಪಾತ್ರಕ್ಕೆ ಶ್ರೀದೇವಿ ಪ್ರತಿಯೊಂದು ದೃಶ್ಯದಲ್ಲಿ ಅತ್ಯಂತ ಸಹಜವಾಗಿ ಅಭಿನಯಿಸುವದರ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಎಲ್ಲೂ ಆಕೆಯ ಅಭಿನಯ ನಾಟಕೀಯ ಅನಿಸುವದೇ ಇಲ್ಲ. ಆಕೆಯನ್ನು ಬಿಟ್ಟರೆ ಮತ್ಯಾರು ಸರಿಹೊಂದುತ್ತಿರಲಿಲ್ಲವೇನೋ ಅನ್ನುವಷ್ಟರಮಟ್ಟಿಗೆ ಶ್ರೀದೇವಿ ಪಾತ್ರದೊಳಕ್ಕೆ ಇಳಿದು ನಟಿಸಿದ್ದಾರೆ. ಬಹುಶಃ ಆಕೆಗೆ ಈ ಪಾತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಸಿಕ್ಕರೂ ಸಿಗಬಹುದು. ಶಶಿಯನ್ನು “ನೀನು ಲಡ್ಡು ಮಾಡುವದಕ್ಕಾಗಿಯೇ ಹುಟ್ಟಿರುವದು” ಎಂದು ಅವಳನ್ನು ಛೇಡಿಸಿದರೂ ಮನಃಪೂರ್ವಕವಾಗಿ ಪ್ರೀತಿಸುವ ಅವಳ ಗಂಡನಾಗಿ ಅಭಿನಯಿಸಿದ ಆದಿಲ್ ಹುಸೇನ್ ಗಮನ ಸೆಳೆಯುತ್ತಾರೆ. ಇನ್ನು ಶಶಿಯ ಅಕ್ಕನಾಗಿ ಸುಜಾತ ಕುಮಾರ್, ಅವಳ ಪ್ರೀತಿಯ ಅತ್ತೆಯಾಗಿ ಸುಲಭಾ ದೇಶಪಾಂಡೆ, ಅಮೆರಿಕನ್ನರಿಗೇ ನಿಮ್ಮ ಎಕಾನಮಿಯನ್ನು ಇಂಪ್ರೂವ್ ಮಾಡಲು ಬಂದಿದ್ದೇನೆ ಎಂದು ಹೇಳುವ ಅಮಿತಾಬಚ್ಚನ್, ಹಾಗೂ ಶಶಿಯ ಮಕ್ಕಳಾಗಿ ಅಭಿನಯಿಸಿದ ಮಕ್ಕಳಿಬ್ಬರೂ ಮನಸ್ಸಿನಲ್ಲಿ ಅಚ್ಚೊತ್ತಿಬಿಡುತ್ತಾರೆ.

    -ಉದಯ್ ಇಟಗಿ



    ಗುರುತು ಪತ್ರ

  • ಶನಿವಾರ, ಡಿಸೆಂಬರ್ 01, 2012
  • ಬಿಸಿಲ ಹನಿ
  • ಕವನದ ಹಿನ್ನೆಲೆ: ಮೊಹಮ್‍ದ ಡರ್ವಿಸ್ ಪ್ಯಾಲೈಸ್ತೀನಾದ ಪ್ರಸಿದ್ಧ ಕವಿ. ಹುಟ್ಟಿದ್ದು 1941ರಲ್ಲಿ ಪ್ಯಾಲೈಸ್ತೀನಾದ ಆಲ್-ಬಿರ್ವಿ ಎನ್ನುವ ಒಂದು ಸಣ್ಣ ಹಳ್ಳಿಯಲ್ಲಿ. 1948ರಲ್ಲಿ ಇಸ್ರೇಲಿಯರು ಈತನ ಊರಾದ ಆಲ್-ಬಿರ್ವಿಯನ್ನು ಆಕ್ರಮಿಸಿಕೊಂಡಿದ್ದರಿಂದ ಅವರಿಗೆ ಹೆದರಿ ಈತನ ಕುಟುಂಬ ಲೆಬನಾನ್‍ಗೆ ಓಡಿಹೋಗುತ್ತದೆ. ಒಂದು ವರ್ಷ ಬಿಟ್ಟು ಮತ್ತೆ ಅವರು ತಮ್ಮ ಊರಿಗೆ ವಾಪಾಸಾದಾಗ ಈತನ ಊರು ಸೇರಿದಂತೆ ಹಲವು ಊರುಗಳು ಇಸ್ರೇಲಿಯರ ದಾಳಿಗೆ ನಾಶವಾಗಿ ಅವರ ಹಿಡಿತದಲ್ಲಿ ಸಿಕ್ಕಿಕೊಳ್ಳುತ್ತವೆ. ಹೀಗಾಗಿ ಡರ್ವಿಸ್ ಕುಟುಂಬ ಬೇರೊಂದು ಹಳ್ಳಿಯಲ್ಲಿ ನೆಲೆಸಬೇಕಾಗುತ್ತದೆ. ಆ ಮೂಲಕ ಅವರು ತಮ್ಮದೇ ನೆಲದಲ್ಲಿ ಪರಕೀಯರಾಗಿ ಜೀವಿಸತೊಡಗುತ್ತಾರೆ. ತಮ್ಮದೇ ನೆಲದಲ್ಲಿ ತಮಗೆ ಸ್ಥಾನಪಲ್ಲಟವಾಗಿದ್ದನ್ನು ಹಾಗೂ ತಮ್ಮ ಗುರುತು ಅಳಿಸಿಹೋಗುವದನ್ನು ಕವಿ ಇನ್ನಿಲ್ಲದಂತೆ ಅನುಭವಿಸುತ್ತಾನೆ. ಹಾಗೆಂದೇ ಅವನ ಕವನಗಳು 1948ರಲ್ಲಿ ಉಂಟಾದ ಆಪತ್ತಿನಿಂದ ಪ್ಯಾಲೈಸ್ತೀನಿಯನ್ನರು ಅನುಭವಿಸಿದ ನಷ್ಟಗಳನ್ನು ಹಾಗೂ ಅವರ ಮೇಲೆ ಇಸ್ರೇಲಿಯರು ನಡೆಸಿದ ಸಾಂಸ್ಕೃತಿಕ ಮತ್ತು ರಾಜಕೀಯ ದಬ್ಬಾಳಿಕೆಯನ್ನು ಚಿತ್ರಿಸುತ್ತವೆ. ಪ್ರಸ್ತುತ ಕವನದಲ್ಲಿ ಕವಿಯು ಇಸ್ರೇಲಿಯರು ಪ್ಯಾಲೈಸ್ತೀನಿಯನ್ನರ ಗುರುತನ್ನು ಅಳಿಸಿಹಾಕುವ ಪ್ರಯತ್ನಗಳಿಗೆ ತೀವ್ರ ವಿರೋಧವನ್ನು ಹಾಗೂ ಆಕ್ರೋಶವನ್ನು ವ್ಯಕ್ತಪಡಿಸುತ್ತಾನೆ.



    ಬರೆದುಕೊಳ್ಳಿ!

    ನಾನೊಬ್ಬ ಅರೇಬಿ

    ನನ್ನ ಗುರುತು ಪತ್ರದ ಸಂಖ್ಯೆ ಐವತ್ತು ಸಾವಿರ

    ನನಗೆ ಎಂಟು ಜನ ಮಕ್ಕಳು

    ಒಂಬತ್ತನೆಯದು ಈ ಬೇಸಿಗೆಯ ನಂತರ ಬರುತ್ತದೆ.

    ನಿಮಗೆ ಕೋಪವೇ?


    ಬರೆದುಕೊಳ್ಳಿ!

    ನಾನೊಬ್ಬ ಅರೇಬಿ

    ನಾನು ನನ್ನ ಗೆಳೆಯರೊಟ್ಟಿಗೆ

    ಕಲ್ಲುಗಣಿಯಲ್ಲಿ ಕೆಲಸ ಮಾಡುವವ

    ನನಗೆ ಎಂಟು ಜನ ಮಕ್ಕಳು

    ಅವರೆಲ್ಲರ ಊಟ, ವಸತಿ,

    ಓದು, ಬಟ್ಟೆಬರೆಯೆಲ್ಲವನ್ನೂ

    ಈ ಕಲ್ಲುಗಣಿ ದುಡಿಮೆಯಲ್ಲಿಯೇ

    ತೂಗಿಸುತ್ತೇನೆ.

    ನಿಮಗೆ ಕೋಪವೇ?


    ನಾನು ನಿಮ್ಮ ಮನೆಯ

    ಬಾಗಿಲಿಗೆ ಬಂದು ಭಿಕ್ಷೆ ಬೇಡುವದಿಲ್ಲ.

    ಅಥವಾ ನಿಮ್ಮ ಕಾಲಿಗೆ ಬಿದ್ದು

    ಕರುಣೆ ತೋರಿಸೆಂದು ಬೇಡಿ

    ಸಣ್ಣವನಾಗುವದಿಲ್ಲ.

    ಅದಕ್ಕೇ ನಿಮಗೆ ಕೋಪವೇ?


    ಬರೆದುಕೊಳ್ಳಿ!

    ನಾನೊಬ್ಬ ಅರೇಬಿ

    ಬಿರುದು ಬಾವಲಿಗಳಿಲ್ಲದ

    ಸಾಧಾರಣ ಮನುಷ್ಯ.

    ರೊಚ್ಚಿಗೆದ್ದ ಜನರ ನಾಡಿನಲ್ಲಿ

    ತಾಳ್ಮೆಯಿಂದ ಕಾಯುತ್ತಿದ್ದೇನೆ.

    ನನ್ನ ಹುಟ್ಟಿಗಿಂತ ಮೊದಲೇ

    ನಾನಿಲ್ಲಿ ಬೇರು ಬಿಟ್ಟಿದ್ದೇನೆ

    ಅಷ್ಟೇ ಏಕೆ ಯುಗಗಳು ಆರಂಭವಾಗುವದಕ್ಕೆ ಮುಂಚೆ,

    ಪೈನ್ ಮತ್ತು ಆಲಿವ್ ವೃಕ್ಷಗಳು ಹುಟ್ಟುವ ಮುಂಚೆ

    ಹಾಗೂ ಹುಲ್ಲು ಹುಟ್ಟುವ ಮೊದಲೇ

    ನಾನಿಲ್ಲಿ ಗಟ್ಟಿಯಾಗಿ ನೆಲೆಯೂರಿದ್ದೇನೆ.

    ನನ್ನ ಅಪ್ಪ ಸಾಧಾರಣ

    ರೈತಾಪಿ ಕುಟುಂಬದಿಂದ ಬಂದವನು

    ನನ್ನ ಅಜ್ಜನೂ ಸಹ ರೈತನೇ!

    ಅವ ಒಳ್ಳೆಯ ಮನೆತನದಲ್ಲಿ ಹುಟ್ಟಲಿಲ್ಲ

    ಒಳ್ಳೆಯ ಶಿಕ್ಷಣ ಪಡೆಯಲಿಲ್ಲ.

    ಆದರೆ ನನಗೆ ಓದನ್ನು ಹೇಳಿ ಕೊಡುವ ಮೊದಲು

    ಸೂರ್ಯನಿಗೆ ಮುಖಮಾಡಿ ನಿಲ್ಲುವದನ್ನು ಹೇಳಿಕೊಟ್ಟವನು.

    ನನ್ನ ಮನೆ ಹುಲ್ಲು ಕಡ್ಡಿಗಳಿಂದ

    ಮಾಡಿದ ಕಾವಲುಗಾರನ ಗುಡಿಸಲಿನಂತಿದೆ.

    ಹೇಳಿ, ನಿಮಗೆ ನನ್ನ ಸ್ಥಾನಮಾನದ ಬಗ್ಗೆ ತೃಪ್ತಿಯೇ?


    ಬರೆದುಕೊಳ್ಳಿ!

    ನಾನೊಬ್ಬ ಅರೇಬಿ

    ನೀವು ನನ್ನ ಪೂರ್ವಿಕರ

    ಹಣ್ಣುತೋಟ ಮತ್ತು ನಾನು ನನ್ನ ಮಕ್ಕಳೊಟ್ಟಿಗೆ

    ಉಳುಮೆ ಮಾಡುತ್ತಿದ್ದ ಭೂಮಿಯನ್ನು

    ಕಿತ್ತುಕೊಂಡವರು.

    ನೀವು ನಮಗೆ

    ಈ ಕಲ್ಲುಬಂಡೆಗಳನ್ನು ಬಿಟ್ಟು

    ಬೇರೇನೇನನ್ನೂ ಬಿಡಲಿಲ್ಲ.

    ಆದರೂ ನಿಮಗೆ ಕೋಪವೇ!


    ಆದ್ದರಿಂದ

    ಬರೆದುಕೊಳ್ಳಿ

    ಮೊದಲ ಪುಟದ ಮೊದಲ ಸಾಲಿನಲ್ಲಿ.

    ನಾನು ಜನರನ್ನು ದ್ವೇಷಿಸುವದಿಲ್ಲ

    ಅಥವಾ ಆಕ್ರಮಿಸುವದಿಲ್ಲ.

    ಆದರೆ ನಾನು ಹಸಿದರೆ,

    ರೊಚ್ಚಿಗೆದ್ದರೆ

    ದುರಾಕ್ರಮಣಕಾರರ ಮಾಂಸವೇ

    ನನ್ನ ಆಹಾರವಾಗುತ್ತದೆ.

    ಎಚ್ಚರ.........

    ಎಚ್ಚರ.........

    ನನ್ನ ಹಸಿವಿನ ಬಗ್ಗೆ

    ಮತ್ತು ನನ್ನ ರೊಚ್ಚಿನ ಬಗ್ಗೆ!



    ಮೂಲ ಅರೇಬಿ: ಮೊಹಮ್‍ದ ಡರ್ವಿಸ್

    ಕನ್ನಡಕ್ಕೆ: ಉದಯ್ ಇಟಗಿ





    ಬಿಳಿ ಸಾಹೇಬನಿಗೊಂದು ಭೋಜನಕೂಟ

  • ಭಾನುವಾರ, ನವೆಂಬರ್ 11, 2012
  • ಬಿಸಿಲ ಹನಿ
  • ಈ ಸಂಜೆ ಮಿಸ್ಟರ್ ಶಾಮನಾಥನು ತನ್ನ ಮೇಲಾಧಿಕಾರಿಗಾಗಿ ತನ್ನ ಮನೆಯಲ್ಲಿ ಭೋಜನಕೂಟವೊಂದನ್ನು ಏರ್ಪಡಿಸಿದ್ದಾನೆ. ಹೀಗಾಗಿ ಬೆಳಿಗ್ಗೆಯಿಂದ ಅವನು ಮತ್ತು ಅವನ ಹೆಂಡತಿ ಮಿಸೆಸ್ ಶಾಮನಾಥ್ ಒಂದಲ್ಲಾ ಒಂದು ಕೆಲಸದಲ್ಲಿ ಮುಳುಗಿಹೋಗಿದ್ದಾರೆ. ಅದೆಷ್ಟೊಂದು ತಮ್ಮ ಕೆಲಸದಲ್ಲಿ ಮುಳುಗಿದ್ದಾರೆಂದರೆ ಇಬ್ಬರಿಗೂ ತಮ್ಮ ಬೆವರನ್ನು ಒರೆಸಿಕೊಳ್ಳವಷ್ಟು ಪುರುಸೊತ್ತಾಗಲಿ, ಸಮಯವಾಗಲಿ ಸಿಕ್ಕಿಲ್ಲ.

    ಮಿಸೆಸ್ ಶಾಮನಾಥ್ ಇವತ್ತು ಕೆಲಸದ ಗಡಿಬಿಡಿಯಲ್ಲಿ ಒಂದು ಗೌನುನಷ್ಟೇ ಹಾಕಿಕೊಂಡು ತನ್ನ ಕೂದಲನ್ನು ಬಾಚದೆ ಹಾಗೆ ತುರುಬು ಕಟ್ಟಿ ಬಿಟ್ಟಿದ್ದಳು. ಆದರೆ ಮುಖಕ್ಕೆ ಪೌಡರ್ ಮತ್ತು ಕೆನ್ನೆಗೆ ಕೆಂಪು ಬಳಿದುಕೊಳ್ಳುವದನ್ನು ಮರೆತಿರಲಿಲ್ಲ. ಮಿಸ್ಟರ್ ಶಾಮನಾಥ್ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಸಿಗರೇಟ್ ಮೇಲೆ ಸಿಗರೇಟ್ ಸೇದುತ್ತಾ ಅತ್ತಿಂದಿತ್ತ ಆತಂಕದಲ್ಲಿ ಸುಳಿದಾಡುತ್ತಿದ್ದ. ಇಬ್ಬರೂ ಒಬ್ಬರಿಗೊಬ್ಬರು “ಅದನ್ನು ಮಾಡು, ಇದನ್ನು ಮಾಡು, ಅದನ್ನಿಲ್ಲಿಡು, ಇದನ್ನಿಲ್ಲಿಡು” ಎಂದು ಹೇಳುತ್ತಾ ಆ ಕೋಣೆಯಿಂದ ಈ ಕೋಣೆಗೆ ಈ ಕೋಣೆಯಿಂದ ಆ ಕೋಣೆಗೆ ಅವಸರವಸರವಾಗಿ ಓಡಾಡುತ್ತಿದ್ದರು.

    ಅಂತಿಮವಾಗಿ ಎಲ್ಲ ತಯಾರಿಗಳು ಮುಗಿದಾಗ ಸಂಜೆ ಐದು ಘಂಟೆಯಾಗಿತ್ತು. ವರಾಂಡದಲ್ಲಿ ಒಂದು ಟೇಬಲ್, ಒಂದಿಷ್ಟು ಖುರ್ಚಿಗಳು, ಸ್ಟೂಲ್‍ಗಳು, ನ್ಯಾಪ್ಕಿನ್‍ಗಳು ಮತ್ತು ಹೂದಾನಿಗಳನ್ನು ಜೋಡಿಸಿಡಲಾಯಿತು. ಕುಳಿತುಕೊಳ್ಳುವ ಕೊಠಡಿಯಲ್ಲಿ ಕುಡಿತಕ್ಕೆ ಏರ್ಪಾಡು ಮಾಡಲಾಯಿತು. ದಿನ ಬಳಕೆಯ ಅನವಶ್ಯಕ ವಸ್ತುಗಳನ್ನೆಲ್ಲಾ ಕಪಾಟುಗಳ ಹಿಂದೆ ಹಾಗೂ ಮಂಚಗಳ ಕೆಳಗೆ ಬಚ್ಚಿಡಲಾಯಿತು. ತಯಾರಿಯೆಲ್ಲಾ ಮುಗಿದಾದ ಮೇಲೆ ಶಾಮನಾಥನಿಗೆ ಇದ್ದಕ್ಕಿದ್ದಂತೆ ತನ್ನ ಅಮ್ಮನ ಬಗ್ಗೆ ಯೋಚನೆ ಶುರುವಾಯಿತು. ಅವಳನ್ನು ಏನು ಮಾಡುವದು? ಎಲ್ಲಿ ಬಚ್ಚಿಡುವದು? ಇಡೀ ಕಾರ್ಯಕ್ರಮಕ್ಕೆ ಆಕೆ ಒಂದು ದೊಡ್ಡ ತೊಡರಾಗುವಂತೆ ಭಾಸವಾಗತೊಡಗಿದಳು.

    ಇಷ್ಟು ಹೊತ್ತು ಅವನಾಗಲಿ, ಅವನ ತಕ್ಕ ಹೆಂಡತಿಯಾಗಲಿ ಈ ವಿಷಯದ ಬಗ್ಗೆ ಒಂಚೂರು ತಲೆಕೆಡಿಸಿಕೊಂಡಿರಲಿಲ್ಲ. ಮಿಸ್ಟರ್ ಶಾಮನಾಥನು ಮಿಸೆಸ್ ಶಾಮನಾಥನೆಡೆಗೆ ತಿರುಗುತ್ತಾ ಇಂಗ್ಲೀಷಿನಲ್ಲಿ ಕೇಳಿದ “ಅಮ್ಮನನ್ನು ಏನು ಮಾಡುವದು?”

    ಮಿಸೆಸ್ ಶಾಮನಾಥ ತನ್ನ ಕೆಲಸವನ್ನು ನಿಲ್ಲಿಸಿ ಒಂದು ಕ್ಷಣ ಯೋಚಿಸಿ ಹೇಳಿದಳು “ಆಕೆಯನ್ನು ನಮ್ಮ ಮನೆಯ ಹಿಂದೆ ಇರುವ ಆಕೆಯ ಗೆಳತಿಯ ಮನೆಗೆ ಕಳಿಸಿಬಿಡಿ. ಈ ರಾತ್ರಿ ಅಲ್ಲೇ ಉಳಿದು ಬೆಳಿಗ್ಗೆ ಎದ್ದು ಬರಲಿ.”

    ಶಾಮನಾಥನು ಸಿಗರೇಟೊಂದನ್ನು ಬಾಯಲ್ಲಿಟ್ಟುಕೊಳ್ಳುತ್ತಾ ತನ್ನ ಹೆಂಡತಿಯನ್ನು ಒಮ್ಮೆ ದಿಟ್ಟಿಸಿ ನೋಡಿದ. ಮರುಕ್ಷಣ ಏನನ್ನೋ ಯೋಚಿಸಿ ತನ್ನ ತಲೆಯನ್ನು ಅಲ್ಲಾಡಿಸುತ್ತಾ ಹೇಳಿದ, “ಬೇಡ. ಅಲ್ಲಿಗೆ ಕಳಿಸುವದು ಬೇಡ. ಇವತ್ತು ಅಮ್ಮ ಅಲ್ಲಿಗೆ ಹೋದರೆ ನಾಳೆಯಿಂದ ಆ ಮುದುಕಿ ಮತ್ತೆ ನಮ್ಮ ಮನೆಗೆ ಬರುವದಿಕ್ಕೆ ಶುರುಮಾಡುತ್ತೆ. ಅದು ನಂಗೆ ಬೇಕಿಲ್ಲ. ನಿನಗೇ ಗೊತ್ತಲ್ಲ? ಈ ಹಿಂದೆ ಆಕೆಯನ್ನು ದೂರವಿಡಲು ನಾವು ಎಷ್ಟೊಂದು ಕಷ್ಟಪಡಬೇಕಾಯಿತೆಂದು? ಬದಲಿಗೆ, ಅಮ್ಮನಿಗೆ ಬೇಗನೆ ಊಟ ಮಾಡಿ ಅವಳ ಕೋಣೆಯಲ್ಲಿರಲು ಹೇಳಿದರಾಯಿತು. ಹೇಗೂ ಅತಿಥಿಗಳು ಬರೋದು ಎಂಟು ಘಂಟೆಗೆ! ಅಷ್ಟರಲ್ಲಿ ಅವಳು ಎಲ್ಲ ಮುಗಿಸಿ ಕೋಣೆಯಲ್ಲಿದ್ದರಾಯಿತು.”

    ಇಬ್ಬರಿಗೂ ಅದೊಂದು ಒಳ್ಳೆಯ ಸಲಹೆಯಂತೆ ಕಂಡಿತು ಮತ್ತದನ್ನು ಒಟ್ಟಿಗೆ ಅನುಮೋದಿಸಿದರು. ಆದರೆ ಮಿಸೆಸ್ ಶಾಮನಾಥ್ ಇದ್ದಕ್ಕಿದ್ದಂತೆ ಏನನ್ನೋ ಜ್ಞಾಪಿಸಿಕೊಳ್ಳುತ್ತಾ ಹೇಳಿದಳು “ನಿಮಗೇ ಗೊತ್ತೇ ಇದೆ! ಅತ್ತೆ ಜೋರಾಗಿ ಗೊರಕೆ ಹೊಡೆಯುತ್ತಾರೆ! ಇಲ್ಲಿ ವರಾಂಡದಲ್ಲಿ ಎಲ್ಲ ಜನ ಊಟ ಮಾಡುವಾಗ ಅವರು ಅಕಸ್ಮಾತ್ ನಿದ್ದೆ ಹೋಗಿ ಗೊರಕೆ ಹೊಡೆಯೋಕೆ ಶುರು ಮಾಡಿದರೆ ಏನು ಮಾಡೋದು? ಅವರ ರೂಮು ಬೇರೆ ವರಾಂಡಾದ ಪಕ್ಕದಲ್ಲಿಯೇ ಇದೆ!”

    “ಹಾಗಾದರೆ ಆಕೆಯನ್ನು ಆಕೆಯ ಕೋಣೆಗೆ ಬೇಗನೆ ಕಳಿಸಿ ಬಾಗಿಲನ್ನು ಮುಚ್ಚಿ ಒಳಗಿನಿಂದ ಬೋಲ್ಟ್ ಹಾಕಿಕೊಳ್ಳಲು ಹೇಳಿದರಾಯಿತು. ಆಮೇಲೆ ನಾನದನ್ನು ಹೊರಗಿನಿಂದ ಲಾಕು ಮಾಡುತ್ತೇನೆ. ಅಥವಾ ಅವಳನ್ನು ಒಳಗೆ ಕಳಿಸಿ ನಮ್ಮ ಪಾರ್ಟಿ ಮುಗಿಯುವವರೆಗೂ ನಿದ್ದೆ ಮಾಡಬೇಡ, ಎಚ್ಚರವಿರು ಎಂದು ಹೇಳಿದರಾಯಿತು. ಅಷ್ಟೇ........”

    “ಒಂದು ವೇಳೆ ಅವರಿಗೆ ತೂಕಡಿಕೆ ಬಂದರೆ? ಈ ಪಾರ್ಟಿ ಬೇರೆ ಎಷ್ಟೊತ್ತಿಗೆ ಮುಗಿಯುತ್ತೋ ದೇವರೇ ಬಲ್ಲ! ನೀವು ಬೇರೆ ಕುಡಿಯೋಕೆ ಶುರು ಮಾಡಿದರೆ ಬೇಗನೆ ಮುಗಿಸಲ್ಲ.”

    ಶಾಮನಾಥನಿಗೆ ರೇಗಿಹೋಯಿತು. ಕೋಪದಲ್ಲಿ ತನ್ನ ಕೈಗಳನ್ನು ಒದರುತ್ತಾ ಹೇಳಿದ “ಅವಳನ್ನು ಅವಾಗಲೇ ನನ್ನ ತಮ್ಮನ ಮನೆಗೆ ಕಳಿಸೋನಿದ್ದೆ. ಆದರೆ ನೀನೆ......ನೀನೆ ಎಲ್ಲ ಮಾಡಿದ್ದು! ಎಲ್ರ ಕಣ್ಣಲ್ಲಿ ಒಳ್ಳೇಳಾಗೋಕೆ ಹೋಗಿ ಮಧ್ಯ ಮೂಗು ತೂರಿಸಿ ನಿಲ್ಲಿಸಿದಿ!!”

    “ಈಗ ಅದೆಲ್ಲಾ ಯಾಕೆ? ಅವತ್ತು ಅಗಿದ್ದೇ ಬೇರೆ! ಆ ವಿಷ್ಯ ಬಿಡಿ ಈಗ...............” ಮಿಸೆಸ್ ಶಾಮನಾಥ ವಿಷಯವನ್ನು ಮರೆಸಿದಳು.

    ಮಿಸ್ಟರ್ ಶಾಮನಾಥ ಸುಮ್ಮನಾದ. ಇದು ವಾದ ಮಾಡುವ ಸಮಯಯಾಗಲಿ, ಸಂದರ್ಭವಾಗಲಿ ಅಲ್ಲವೆಂದುಕೊಂಡು ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಮುಂದಾದ. ಸ್ವಲ್ಪ ಹೊತ್ತು ಯೋಚಿಸಿ ಬಳಿಕ ತನ್ನ ತಾಯಿಯಿದ್ದ ಕೋಣೆಗೆ ಬಂದ. ಆ ಕೋಣೆ ವರಾಂಡಕ್ಕೆ ಸರಿಯಾಗಿ ಮುಖಮಾಡಿಕೊಂಡು ನಿಂತಿತ್ತು. ಅಲ್ಲಿ ಅವನ ತಾಯಿ ಗೋಡೆಗಾನಿಸಿಟ್ಟ ಹೊರಸಿನ ಮೇಲೆ ತಲೆ ತುಂಬಾ ಸೆರಗನ್ನು ಹೊದ್ದು ಕೈಯಲ್ಲಿ ಜಪಮಣಿಯನ್ನು ಹಿಡಿದು ಪ್ರಾರ್ಥಿಸುತ್ತಾ ಕುಳಿತಿದ್ದಳು. ಬೆಳಿಗ್ಗೆಯಿಂದ ಇವರಿಬ್ಬರ ಆತಂಕವನ್ನು ನೋಡಿ ಅವಳೆದೆ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ಇವತ್ತು ಮಗನ ಆಫೀಸಿನಿಂದ ಬಿಳಿ ಸಾಹೇಬರು ಬರುವವರಿದ್ದಾರೆ. ಎಲ್ಲ ಸುಖಕರವಾಗಿ ಸಾಗಲಿ ಎಂದು ಪ್ರಾರ್ಥಿಸಿದಳು.



    “ಅಮ್ಮ, ಇವತ್ತು ನೀನು ಬೇಗನೆ ಊಟ ಮಾಡಿಬಿಡು. ಅತಿಥಿಗಳು ಏಳೂವರೆಗೆಲ್ಲಾ ಬಂದು ಬಿಡುತ್ತಾರೆ.” ಶಾಮನಾಥ ಹೇಳಿದ.

    ಆಕೆ ತನ್ನ ತಲೆಯ ಮೇಲಿನ ಸೆರಗನ್ನು ಸರಿಸುತ್ತಾ ಮಗನೆಡೆಗೆ ನೋಡುತ್ತಾ ಹೇಳಿದಳು, “ನಾನಿವತ್ತು ಊಟ ಮಾಡೋದಿಲ್ಲ ಮಗಾ. ಮನೆಯಲ್ಲಿ ಮೀನು-ಮಾಂಸ ಮಾಡಿದ ದಿನ ನಾನು ಯಾವತ್ತು ಊಟ ಮಾಡಿದ್ದೇನೆ?”

    “ಆಯ್ತು. ಅದೇನು ಮಾಡಬೇಕು ಅಂತಿದ್ದೆಯೋ ಅದನ್ನೆಲ್ಲಾ ಬೇಗ ಮಾಡಿ ಮುಗಿಸು.”

    “ಸರಿ, ಮಗಾ”

    “ಹಾಂ, ಅಮ್ಮ, ಮರೆತಿದ್ದೆ. ನಾವು ಮೊದಲು ಸಿಟ್ಟಿಂಗ್ ರೂಮಿನಲ್ಲಿ ಕುಳಿತಿರುತ್ತೇವೆ. ಅಷ್ಟೊತ್ತು ನೀನು ವರಾಂಡದಲ್ಲಿರು. ಆಮೇಲೆ ನಾವು ಹೊರಗೆ ಬಂದಾಗ ಬಾತ್‍ರೂಮ್ ಮೂಲಕ ಹಾದು ಸಿಟ್ಟಿಂಗ್ ರೂಮಿಗೆ ಹೋಗು.”

    ಅವನ ತಾಯಿ ಏನೂ ಮಾತನಾಡಲಿಲ್ಲ. ಅವನನ್ನೊಮ್ಮೆ ನೋಡಿ ಮೆತ್ತಗೆ ಹೇಳಿದಳು, “ಸರಿ, ಮಗಾ.”

    “ಹಾಂ, ಇನ್ನೊಂದು ವಿಷ್ಯ! ಇವತ್ತು ಬೇಗನೆ ಮಲಗೋದಿಕ್ಕೆ ಹೋಗಬೇಡ. ನೀನು ಗೊರಕೆ ಹೊಡೆಯುವ ಸದ್ದು ಅಷ್ಟು ದೂರದವರೆಗೂ ಕೇಳಿಸುತ್ತೆ.”

    ತಕ್ಷಣ ಅವನ ತಾಯಿ ನಾಚಿಕೆ ಬಿಟ್ಟು ಹೇಳಿದಳು, “ನಾನೇನ್ ಮಾಡ್ಲಿ, ಮಗಾ? ಅದೆಲ್ಲಾ ನನ್ನ ಕೈಲಿಲ್ಲಾ. ನಾನು ಜಡ್ಡಿಗೆ ಬಿದ್ದು ಎದ್ದಾಗಿನಿಂದ ನಂಗೆ ಮೂಗಿನಿಂದ ಸರಿಯಾಗಿ ಉಸಿರಾಡೋದಿಕ್ಕೆ ಆಗ್ತಿಲ್ಲ.”

    ಮಿಸ್ಟರ್ ಶಾಮನಾಥ್ ಅತಿಥಿಗಳು ಬರುವದಕ್ಕೆ ಮುನ್ನ ಎಲ್ಲವನ್ನೂ ಅಚ್ಚುಕಟ್ಟಾಗಿ ಸಿದ್ಧಗೊಳಿಸಿದ. ಆದರೂ ಮನಸ್ಸಿಗೇಕೋ ಸಮಾಧಾನವಿರಲಿಲ್ಲ. ಒಂದುವೇಳೆ ಬಾಸ್ ಈ ಕಡೆಗೆ ಬಂದರೆ? ಸುಮಾರು ಎಂಟ್ಹತ್ತು ಜನ ಅತಿಥಿಗಳು! ಇಂಡಿಯನ್ ಆಫಿಸಿಯಲ್ಸ್ ಮತ್ತವರ ಹೆಂಡಿರು! ಯಾರಾದರೂ ಬಾತ್‍ರೂಮಿಗೆ ಹೋಗಬಹುದು. ಆಗ ಅವರು ಅಕಸ್ಮಾತ್ ಅಮ್ಮನನ್ನು ನೋಡಿಬಿಟ್ಟರೆ ಏನು ಮಾಡೋದು? ಶಾಮನಾಥ ಕೋಪದಲ್ಲಿ ತನ್ನ ಕೈಕೈ ಹಿಸುಕಿಕೊಂಡ. ಒಂದು ಖುರ್ಚಿಯನ್ನೆತ್ತಿಕೊಂಡು ಅದನ್ನು ವರಾಂಡದಲ್ಲಿರುವ ತನ್ನ ತಾಯಿಯ ಕೋಣೆಯ ಹೊರಬಾಗಿಲ ಬಳಿ ಇಡುತ್ತಾ “ಅಮ್ಮ, ಇಲ್ಲಿ ಬಾ. ಇದರ ಮೇಲೆ ಕುಳಿತ್ಕೋ” ಎಂದು ಹೇಳಿದ.

    ಅವನ ತಾಯಿ ತನ್ನ ಜಪಮಣಿಯನ್ನು ಒಂದು ಕೈಲಿ ಹಿಡಿದುಕೊಂಡು ಇನ್ನೊಂದು ಕೈಲಿ ತನ್ನ ಸೆರಗನ್ನು ಸರಿಮಾಡಿಕೊಳ್ಳುತ್ತಾ ನಿಧಾನವಾಗಿ ನಡೆದು ಬಂದು ಆ ಖುರ್ಚಿಯ ಮೇಲೆ ಕಾಲಿಟ್ಟುಕೊಂಡು ಕುಳಿತಳು.

    “ಅಯ್ಯೋ, ಹಾಗಲ್ಲಮ್ಮ! ಖುರ್ಚಿ ಮೇಲೆ ಕಾಲಿಟ್ಕೊಂಡು ಕೂರಬಾರದು. ಇದು ಹೊರಸು ಅಲ್ಲ.”

    ಅವನ ತಾಯಿ ಕಾಲು ಇಳಿಬಿಟ್ಟಳು.

    “ಎಲ್ರೂ ಇರುವಾಗ ಬರಿಗಾಲಲ್ಲಿ ಎಲ್ಲೂ ಓಡಾಡಬೇಡ. ಆ ನಿನ್ನ ದರಿದ್ರ ಕಟ್ಟಿಗೆ ಚಪ್ಪಲಿಗಳನ್ನು ಹಾಕಿಕೊಂಡು ಯಾರ ಮುಂದೆನೂ ಸುಳಿಬೇಡ.”

    ಅವನ ತಾಯಿ ತುಟಿ ಪಿಟ್ಟೆನ್ನಲಿಲ್ಲ.

    “ಯಾವ ಡ್ರೆಸ್ ಹಾಕ್ಕೊಂತಿಯಮ್ಮ?”

    “ನನ್ಹತ್ರ ಇರೋದು ಮಗಾ! ಅಥವಾ ನೀನು ಯಾವುದನ್ನು ಹೇಳ್ತಿಯಾ ಅದನ್ನು ಮಗಾ!”

    ಬಾಯಲ್ಲಿ ಸಿಗರೇಟ್‍ನ್ನಿಟ್ಟುಕೊಂಡೇ ಮಿಸ್ಟರ್ ಶಾಮನಾಥ ಅವಳನ್ನೊಮ್ಮೆ ಓರೆಗಣ್ಣಿನಿಂದ ನೋಡುತ್ತಾ ಆಕೆಯ ಉಡುಗೆಯನ್ನು ಪರಿಶೀಲಿಸಿದ. ಶಾಮನಾಥನಿಗೆ ಎಲ್ಲವೂ ಸರಿಯಾದ ರೀತಿಯಲ್ಲಿಯೇ ಆಗಬೇಕು. ಮನೆಯ ಆಗುಹೋಗುಗಳೆಲ್ಲಾ ಅವನ ಮೂಲಕವೇ ಆಗಬೇಕು: ಮನೆಯಲ್ಲಿ ಹುಕ್‍ಗಳೆಲ್ಲರಿಬೇಕು? ಮಂಚಗಳೆಲ್ಲರಿಬೇಕು? ಯಾವ ಸೈಜಿನ ಟೇಬಲ್ಲಿರಬೇಕು? ಯಾವ ಬಣ್ಣದ ಕರ್ಟನ್ನುಗಳಿರಬೇಕು? ಕೊನೆಗೆ ಅವನ ಹೆಂಡತಿ ಯಾವ ಸೀರೆ ಉಡಬೇಕು? ಎನ್ನುವದನ್ನು ಕೂಡ ನಿರ್ಧರಿಸವವನು ಅವನೇ! ಶಾಮನಾಥನಿಗೆ ಇಷ್ಟೆಲ್ಲಾ ತಯಾರಿ ಮಾಡಿದ್ದರೂ ಏನೋ ಒಂದು ಅಳುಕಿದ್ದೇ ಇತ್ತು. ಒಂದುವೇಳೆ ಬಾಸ್ ಅಮ್ಮನನ್ನು ನೋಡಿಬಿಟ್ಟರೆ? ಅವರಿಗೆ ಮುಜುಗರವಾಗಬಹುದು. ಆಕೆಯ ವೇಷಭೂಷಣಗಳನ್ನು ನೋಡಿ ಅಸಹ್ಯಪಟ್ಟುಕೊಳ್ಳಬಹುದು. ಏನು ಮಾಡುವದು? ಶಾಮನಾಥ ಪೇಚಿಗೆ ಸಿಲುಕಿದ. ಇದೇ ಯೋಚನೆಯಲ್ಲಿ ಆತ ಒಂದು ಸಾರಿ ತನ್ನ ಅಮ್ಮನನ್ನು ಕೆಳಗಿನಿಂದ ಮೇಲಿನವರೆಗೆ ನೋಡಿ ಹೇಳಿದ “ಅಮ್ಮ, ಈ ಸಂಜೆ ಬಿಳಿ ಸಲ್ವಾರ್ ಮತ್ತು ಬಿಳಿ ಕಮೀಜ್‍ನ್ನು ಹಾಕಿಕೋ....... ಹೋಗು ಈಗ್ಲೇ ಹಾಕಿಕೊಂಡು ಬಾ....... ನಾನು ನೋಡಬೇಕು.”

    ಆಕೆ ಬಟ್ಟೆ ಬದಲಾಯಿಸಲು ನಿಧಾನವಾಗಿ ಎದ್ದು ತನ್ನ ಕೋಣೆಯೊಳಗೆ ಹೋದಳು. ಶಾಮನಾಥ ಮತ್ತೊಮ್ಮೆ ತನ್ನ ಹೆಂಡತಿಗೆ ಇಂಗ್ಲೀಷಿನಲ್ಲಿ ಹೇಳಿದ. “ಈಕೆ ಸಮಸ್ಯೆಯಾಗಲಿದ್ದಾಳೆ......ಜನ ವಿವೇಕದಿಂದ ಮಾತನಾಡುವ ಹಾಗಿದ್ದರೆ ಮಾತ್ರ ಮಾತನಾಡಬೇಕು. ಇಲ್ಲದಿದ್ದರೆ ತೆಪ್ಪಗಿರಬೇಕು. ಅದು ಬಿಟ್ಟು ಈಕೆ ಏನೋ ಮಾತನಾಡಲು ಹೋಗಿ ಇನ್ನೇನೋ ಮಾತನಾಡಿ ನಗೆಪಾಟಲಿಗೀಡಾದರೆ? ಬಾಸ್‍ ತಪ್ಪಾಗಿ ತಿಳಿಯಬಹುದು. ಆಗ ಇಡೀ ಪಾರ್ಟಿಯ ಮೂಡು ಹಾಳಾಗಿಬಿಡುತ್ತದೆ.”

    ಅವನ ತಾಯಿ ಬಿಳಿ ಸಲ್ವಾರ್ ಮತ್ತು ಬಿಳಿ ಕಮೀಜ್‍ನ್ನು ತೊಟ್ಟು ಹೊರಬಂದಳು. ಆಕೆ ಆ ಉಡುಗೆಯಲ್ಲಿ ಮುಂಚೆಗಿಂತ ಸ್ವಲ್ಪ ಕುಳ್ಳಗಿರುವಂತೆ ಕಂಡಳು. ಇನ್ನು ಆಕೆಯ ಸುಕ್ಕುಗಟ್ಟಿದ ದೇಹ ಬಿಳಿ ಬಟ್ಟೆಯಲ್ಲಿ ಸುತ್ತಿದಂತೆ ಕಾಣುತ್ತಿತ್ತು. ಅವಳ ಅಳಿದುಳಿದ ಕೂದಲುಗಳು ದುಪ್ಪಟ್ಟಾದೊಳಗೆ ಅಡಗಿಕೊಂಡಿದ್ದವು. ಈಗ ಮೊದಲಿಗಿಂತ ಮತ್ತಷ್ಟು ಕುರೂಪಿಯಾಗಿ ಕಂಡಳು.

    “ಗುಡ್! ಚನ್ನಾಗಿದೆ. ಬಳೆ ಅಥವಾ ಒಡವೆಗಳೇನಾದರಿದ್ದರೆ ಅವನ್ನೂ ಹಾಕಿಕೋ. ಪರ್ವಾಗಿಲ್ಲ.”

    “ಒಡವೆ ಎಲ್ಲಿಂದ ತರ್ಲಿ ಮಗಾ? ನಾನು ಅವನ್ನೆಲ್ಲಾ ನಿನ್ನ ಓದಿಸೋಕೆ ಮಾರಿದ್ದು ನಿಂಗೆ ಗೊತ್ತೇ ಇದೆ.”

    ಈ ಮಾತು ಶಾಮನಾಥನನ್ನು ಬಾಣದಂತೆ ಬಂದು ನಾಟಿತು. ಸ್ವಲ್ಪ ಖಾರವಾಗಿ ಹೇಳಿದ “ಅದನ್ನೆಲ್ಲಾ ಹೇಳೋ ಅಗತ್ಯ ಏನಿದೆ ಈಗ? ಸುಮ್ನೆ ನಿನ್ಹತ್ರ ಯಾವ ಒಡವೆನೂ ಇಲ್ಲಾ ಅಂತಾ ಹೇಳು, ಸಾಕು. ನಂಗೆ ಅರ್ಥವಾಗುತ್ತೆ. ಆ ವಿಷ್ಯ ಯಾಕೆ ಕೆದಕತಿಯಾ ಈಗ? ನೀನು ಒಡವೆ ಮಾರಿದ್ದು ನಿಂಗೆ ಲಾಭವೇ ಆಗಿದೆ. ನಿನ್ನ ಮಗ ಓದಿ ಕೆಲಸಕ್ಕೆ ಸೇರಿದ. ಅದುಬಿಟ್ಟು ಫೇಲ್ ಆಗಿ ವಾಪಸ್ ಬಂದು ಮನೇಲಿ ಕೂರಲಿಲ್ವಲ್ಲ? ಅದಕ್ಕೆ ಖುಷಿಪಡು...... ನೀನು ಏನೇನು ಕೊಟ್ಟಿದ್ದೀಯೋ ಅದರ ಎರಡರಷ್ಟು ವಾಪಾಸ್ ಕೊಡತೇನಿ ತಗೋ......!

    “ಅಯ್ಯೋ, ದೇವರೆ! ಎಲ್ಲಾದ್ರು ಉಂಟೆ? ನಿನ್ನಿಂದ ನಾನು ಒಡವೆ ವಾಪಾಸ್ ತಗೊಳ್ಳೋದಂದ್ರೇನು? ಏನೋ ಬಾಯಿ ತಪ್ಪಿ ಹಾಗೆ ಹೇಳಿಬಿಟ್ಟೆ ಮಗಾ! ನನ್ನ ನಾಲ್ಗಿ ಸುಡ್ಲಿ!”

    ಆಗಲೇ ಘಂಟೆ ಐದೂವರೆಯಾಗಿತ್ತು. ಶಾಮನಾಥನು ಸ್ನಾನ ಮುಗಿಸಿ ಸಿದ್ಧವಾಗಬೇಕಿತ್ತು. ಮಿಸೆಸ್ ಶಾಮನಾಥ ಅದಾಗಲೇ ತನ್ನ ಕೋಣೆ ಸೇರಿ ಬಹಳ ಹೊತ್ತಾಗಿತ್ತು. ಶಾಮನಾಥನು ಅಲ್ಲಿಂದ ಹೋಗುವ ಮುನ್ನ ತನ್ನ ತಾಯಿಗೆ ಮತ್ತೊಂದು ಉಪದೇಶ ನೀಡಿದ. “ಅಮ್ಮ, ದಿನಾ ಮೂಗನ ತರ ಕೂತ್ಕೊಳ್ಳೋ ಹಾಗೆ ಕೂತ್ಕೋಬೇಡ. ಅಕಸ್ಮಾತ್ ಸಾಹೇಬ್ರೇನಾದರು ಈ ಕಡೆ ಬಂದು ನಿನ್ನ ಏನಾದ್ರು ಕೇಳಿದರೆ, ಸರಿಯಾಗಿ ಉತ್ತರ ಕೊಡು.”

    “ನಾನು ಯಾವತ್ತೂ ಈಸ್ಕೂಲಿಗೆ ಹೋಗಿ ಓದು ಬರಹ ಕಲಿತವಳಲ್ಲ. ಹಿಂಗಿದ್ದ ಮೇಲೆ ನಾನ್ಹೇಗೆ ಅವರಿಗೆ ಉತ್ತರ ಕೊಡಲಿ? ಅವರಿಗೆ ಮೊದ್ಲೇ ಹೇಳಿಬಿಡು ನಾನು ಓದು ಬರಹ ಬರದಾಕಿ ಎಂದು. ಆಗ ಅವರು ನನ್ನ ಏನೂ ಕೇಳೋದಿಲ್ಲ.”

    ಏಳು ಘಂಟೆಯಾಗುತ್ತಿದ್ದಂತೆ ಅವನ ತಾಯಿಯ ಎದೆ ಒಂದೇ ಸಮನೆ ಹೊಡೆದುಕೊಳ್ಳತೊಡಗಿತು. ಒಂದು ವೇಳೆ ಬಾಸ್ ಅವಳ ಬಳಿ ಬಂದು ಏನಾದರೂ ಕೇಳಿದರೆ ಏನು ಹೇಳುವದು? ಅವಳು ದೂರದಿಂದಲೇ ಇಂಗ್ಲೀಷರನ್ನು ನೋಡಿದರೆ ಸಾಕು ಹೆದರಿಬಿಡುತ್ತಿದ್ದಳು. ಈಗ ಬರುತ್ತಿರುವವರು ಅಮೆರಿಕಾದ ಸಾಹೇಬರು ಬೇರೆ. ಅವರೇನು ಕೇಳುತ್ತಾರೋ? ಈಕೆ ಏನು ಹೇಳುತ್ತಾಳೋ? ದೇವರಿಗೊಂದು ಗೊತ್ತು! ಆಕೆ ಸುಮ್ಮನೆ ಮನೆಯ ಹಿಂದೆ ಇರುವ ಆಕೆಯ ವಿಧವೆ ಗೆಳತಿಯ ಮನೆಗೆ ಹೋಗಿದ್ದರಾಗುತ್ತಿತ್ತು! ಆದರೆ ಅವಳು ತಾನೆ ಹೇಗೆ ಮಗನ ಮಾತನ್ನು ಮೀರುತ್ತಾಳೆ? ಈಗ ಸುಮ್ಮನೆ ಕಾಲು ಇಳಿಬಿಟ್ಟು ಆ ಖುರ್ಚಿಯ ಮೇಲೆ ಕುಳಿತುಕೊಂಡಳು.

    ಒಂದು ಯಶಸ್ವಿ ಪಾರ್ಟಿ ಅಂದ ಮೇಲೆ ಅಲ್ಲಿ ಮದ್ಯ ಯಥೇಚ್ಛವಾಗಿ ಹರಿಯಲೇಬೇಕು. ಶಾಮನಾಥನ ಪಾರ್ಟಿ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಅದು ಯಶಸ್ವಿನ ತುತ್ತತುದಿಯನ್ನು ಮುಟ್ಟುವದರಲ್ಲಿತ್ತು. ಅವರ ಸಂಭಾಷಣೆಯೂ ಸಹ ಮದ್ಯವನ್ನು ಗ್ಲಾಸಿಗೆ ಸುರಿದಷ್ಟೇ ವೇಗದಲ್ಲೇ ಸಾಗುತ್ತಿತ್ತು. ಅಲ್ಲಿ ಯಾವುದೇ ಅಡ್ಡಿ ಆತಂಕಗಳಿರಲಿಲ್ಲ. ಸಾಹೇಬರು ವಿಸ್ಕಿಯನ್ನು ತುಂಬಾ ಇಷ್ಟಪಟ್ಟರು. ಸಾಹೇಬರ ಹೆಂಡತಿ ಮನೆಯ ಕರ್ಟನ್ನುಗಳನ್ನು, ಸೋಫಾ ಕವರಿನ ವಿನ್ಯಾಸವನ್ನು, ಹಾಗೂ ದಿವಾನಖಾನೆಯ ಅಲಂಕಾರವನ್ನು ತುಂಬಾ ಇಷ್ಟಪಟ್ಟಳು. ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು?

    ಪಾನಗೋಷ್ಠಿಯ ಎರಡನೇ ಸುತ್ತಿನಿಂದ ಮಾತ್ರ ಸಾಹೇಬರು ಜೋಕುಗಳನ್ನು ಹೇಳುವದಿಕ್ಕೆ, ತಮಾಷೆ ಮಾಡುವದಕ್ಕೆ ಶುರು ಮಾಡಿದರು. ಆಫಿಸಿನಲ್ಲಿ ಎಷ್ಟು ಫ್ರೆಂಡ್ಲಿಯಾಗಿರುತ್ತಿದ್ದರೋ ಅಷ್ಟೆ ಫ್ರೆಂಡ್ಲಿಯಾಗಿ ಇಲ್ಲೂ ಇದ್ದರು. ಮತ್ತವರ ಹೆಂಡತಿ ಕಪ್ಪು ಗೌನನ್ನು ಧರಿಸಿ, ಕುತ್ತಿಗೆಗೆ ಬಿಳಿ ಮುತ್ತಿನ ಹಾರವನ್ನು ಹಾಕಿಕೊಂಡು, ಪೌಡರ್ ಮತ್ತು ಸುಗಂಧ ದ್ರವ್ಯಗಳಲ್ಲಿ ಘಮಗುಡುತ್ತಾ ಅಲ್ಲಿರುವ ಭಾರತೀಯ ಹೆಣ್ಣುಮಕ್ಕಳ ಮೆಚ್ಚುಗೆಗೆ ಪಾತ್ರಳಾದಳು. ಆಕೆ ಎಲ್ಲದಕ್ಕೂ ಒಯ್ಯಾರದಿಂದ ನಗುತ್ತಾ ತಲೆ ಅಲ್ಲಾಡಸುತ್ತಿದ್ದಳು. ಶಾಮನಾಥನ ಹೆಂಡತಿ ತನ್ನ ಹಳೆಯ ಸ್ನೇಹಿತೆಯೇನೋ ಎಂಬಷ್ಟು ಸಲಿಗೆಯಿಂದ ಆಕೆಯ ಹತ್ತಿರ ಮಾತನಾಡುತ್ತಿದ್ದಳು.

    ಪಾನಗೋಷ್ಠಿಯ ಪ್ರವಾಹದಲ್ಲಿ ಮುಳುಗಿದವರಿಗೆ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ. ಅದಾಗಲೇ ಹತ್ತು ಘಂಟೆ ಮೂವತ್ತು ನಿಮಿಷವಾಗಿತ್ತು.

    ಕೊನೆಯದಾಗಿ ಎಲ್ಲರೂ ತಂತಮ್ಮ ಗ್ಲಾಸುಗಳಿಂದ ಕೊನೆಯ ಗುಟುಕನ್ನು ಹೀರಿ ಖಾಲಿ ಮಾಡಿದರು. ಈಗ ಎಲ್ಲರೂ ಎದ್ದು ಊಟಕ್ಕಾಗಿ ಕುಳಿತುಕೊಳ್ಳುವ ಕೊಠಡಿಯತ್ತ ಹೊರಟರು. ದಾರಿ ತೋರಿಸಲು ಶಾಮನಾಥ ಮುಂದೆ ನಡೆದರೆ ಅವನ ಹಿಂದೆ ಅವನ ಬಾಸ್ ಮತ್ತು ಇತರ ಅತಿಥಿಗಳು ನಡೆದರು.

    ವರಾಂಡಕ್ಕೆ ಬರುತ್ತಿದ್ದಂತೆ ಅಲ್ಲಿ ಅವನ ಅಮ್ಮ ಕುಳಿತಿದ್ದ ದೃಶ್ಯವನ್ನು ನೋಡಿ ಶಾಮನಾಥ ಇದ್ದಕ್ಕಿದ್ದಂತೆ ದಂಗು ಬಡಿದವನಂತೆ ನಿಂತುಬಿಟ್ಟ. ಅವನ ತಾಯಿ ವರಾಂಡದಲ್ಲಿದ್ದ ತನ್ನ ಕೋಣೆಯ ಮುಂದುಗಡೆ ಬಲಭಾಗದಲ್ಲಿ ಮಗನ ಆದೇಶದಂತೆ ಸರಿಯಾಗಿ ಖುರ್ಚಿಯ ಮೇಲೆ ಕುಳಿತಿದ್ದಳು. ಆದರೆ ಅವಳ ಪಾದಗಳು ಖುರ್ಚಿಯ ಮೇಲಿದ್ದವು. ಅವಳ ತಲೆ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಜೋಲಾಡುತ್ತಿತ್ತು ಹಾಗೂ ಅವಳ ಬಾಯಿಂದ ಭಯಂಕರ ಗೊರಕೆಯ ಸದ್ದು ಹೊರಡುತ್ತಿತ್ತು. ಅವಳ ದುಪ್ಪಟ್ಟಾ ತಲೆಯ ಮೇಲಿಂದ ಕೆಳಗೆ ಜಾರಿತ್ತು. ಇವರೆಲ್ಲರ ಸದ್ದಿನಿಂದಾಗಿ ಆಕೆ ಎಚ್ಚರಗೊಂಡಳು.

    ಆಕೆಯನ್ನು ನೋಡಿದ್ದೇ ತಡ ಶಾಮನಾಥನ ಪಿತ್ತ ನೆತ್ತಿಗೇರಿತು. ಶಾಮನಾಥನಿಗೆ ಅವಳ ಕಾಲನ್ನು ಹಿಡಿದು ದರದರನೆ ಎಳೆದು ಅವಳ ಕೋಣೆಯಲ್ಲಿ ಬೀಸಾಕಬೇಕೆನಿಸಿತು. ಆದರೆ ಅವನ ಬಾಸ್ ಮತ್ತು ಇತರ ಅತಿಥಿಗಳು ಹತ್ತಿರದಲ್ಲಿಯೇ ಇದ್ದುದರಿಂದ ಅದು ಸಾಧ್ಯವಾಗಲಿಲ್ಲ.

    ಪಕ್ಕದಲ್ಲಿಯೇ ಇದ್ದ ಶಾಮನಾಥನ ಇಂಡಿಯನ್ ಅಧಿಕಾರಿಗಳ ಹೆಂಡಿರು ಅವನ ಅಮ್ಮನನ್ನು ನೋಡಿ ಕಿಸಿಕಿಸಿಯೆಂದು ನಕ್ಕರು. ಆದರೆ ಬಾಸ್ ಮಾತ್ರ “ಪೂರ್ ಡಿಯರ್!” ಎಂದು ಸೌಮ್ಯವಾಗಿ ಹೇಳಿದರು.

    ಇವರೆಲ್ಲರನ್ನು ನೋಡಿ ಅಮ್ಮ ಆತುರಾತುರದಲ್ಲಿ ನೇರವಾಗಿ ಕುಳಿತಳು. ತನ್ನ ಮುಂದಿರುವ ಅಷ್ಟೂ ಜನರನ್ನು ನೋಡಿ ಗಾಬರಿಯಲ್ಲಿ ಅಮ್ಮನಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ತಕ್ಷಣ ತನ್ನ ದುಪ್ಪಟ್ಟಾವನ್ನು ತಲೆಯ ಮೇಲೆಳೆದುಕೊಳ್ಳುತ್ತಾ ಎದ್ದು ನಿಂತು ನೆಲವನ್ನೇ ದಿಟ್ಟಿಸತೊಡಗಿದಳು. ಅವಳ ಕಾಲುಗಳು ಭಯದಿಂದ ತತ್ತರಿಸುತ್ತಿದ್ದವು.

    “ಅಮ್ಮ, ಹೋಗಿ ಮಲ್ಕೋ. ಇನ್ನೂ ಯಾಕ ಎದ್ದಿದ್ದೀಯಾ?” ಎಂದು ಹೇಳುತ್ತಾ ಶಾಮನಾಥನು ತನ್ನ ಬಾಸ್‍ನನ್ನು ನೋಡಿ ಪೆಚ್ಚು ನಗೆ ನಕ್ಕ.

    ಬಾಸ್ ನಗುತ್ತಾ ನಿಂತಲ್ಲಿಂದಲೇ “ನಮಸ್ತೆ” ಎಂದು ಹೇಳಿದರು.

    ಅವನ ತಾಯಿ ಹಿಂದುಮುಂದು ನೋಡುತ್ತಾ ಅತ್ಯಂತ ಸಂಕೋಚದಿಂದ ಒಂದು ಕೈಯನ್ನು ದುಪ್ಪಟ್ಟಾದೊಳಗಿಟ್ಟು ಅದರಲ್ಲಿ ಜಪಮಣಿಯನ್ನು ಹಿಡಿದು ಇನ್ನೊಂದು ಕೈಯನ್ನು ದುಪ್ಪಟ್ಟಾದ ಹೊರಗಿಟ್ಟು ಅವೆರಡನ್ನೂ ಜೋಡಿಸಿ ನಮಸ್ತೆ ಎಂದು ಹೇಳಿದಳು. ಆದರೆ ಅದು ಸರಿಯಾಗಿ ಬರಲಿಲ್ಲ. ಶಾಮನಾಥ ಹಲ್ಲುಕಚ್ಚಿದ. ಅಷ್ಟರಲ್ಲಿ ಬಾಸ್ ತನ್ನ ಬಲಗೈಯನ್ನು ಚಾಚಿ ಅವಳ ಕೈ ಕುಲುಕಲು ಮುಂದಾದ. ಆದರೆ ಆಕೆ ಮತ್ತಷ್ಟು ಗಾಬರಿಗೊಳಗಾದಳು.

    “ಅಮ್ಮ, ಕೈ ಶೇಕ್ ಮಾಡು”

    ಅವಳ ಬಲಗೈಯಲ್ಲಿ ಜಪಮಣಿಯಿದ್ದುದರಿಂದ ಅವಳು ತಾನೆ ಹೇಗೆ ಕೈ ಕುಲುಕಿಯಾಳು? ಗಾಬರಿಯಲ್ಲಿ ಅವಳು ತನ್ನ ಎಡಗೈಯನ್ನು ತೆಗೆದು ಸಾಹೇಬರ ಕೈಯಲ್ಲಿಟ್ಟಳು. ಶಾಮನಾಥ ಒಳಗೇ ಕುದಿಯತೊಡಗಿದ. ಅವನ ಇಂಡಿಯನ್ ಅಧಿಕಾರಿಗಳ ಹೆಂಡಿರು “ಹೇ ಹೇ.....” ಎಂದು ಹಲ್ಲು ಗಿಂಜಿದರು.

    “ಹಾಗಲ್ಲಮ್ಮಾ. ಬಲಗೈಯಿಂದ ಶೇಕ್ ಮಾಡಬೇಕು ಅಂತಾ ನಿಂಗೆ ಗೊತ್ತಿಲ್ವಾ? ಎಲ್ಲಿ ಬಲಗೈ ಕೊಡು.”

    ಅಷ್ಟೊತ್ತಿಗಾಗಲೇ ಬಾಸ್ ಅವಳ ಎಡಗೈಯನ್ನು ಹಲವಾರು ಬಾರಿ ಕುಲುಕಿ ಇಂಗ್ಲೀಷಿನಲ್ಲಿ ಕೇಳುತ್ತಿದ್ದರು “ಹೌ ಡು ಯೂ ಡು?”

    “ಅಮ್ಮ, ಸಾಹೇಬರಿಗೆ ಹೇಳು, ‘ಐ ಯಾಮ್ ಫೈನ್. ಐ ಯಾಮ್ ವೆಲ್.’ ಅಂತಾ”

    ಅವನ ತಾಯಿ ಏನೋ ಒಂದು ಗೊಣಗಿದಳು.

    “ಅಮ್ಮ ಹೇಳ್ತಿದ್ದಾಳೆ, ಅವಳು ಚನ್ನಾಗಿದ್ದಾಳಂತೆ. ಎಲ್ಲಿ ಅಮ್ಮ ನೀನೂ ಒಂದು ಸಾರಿ ಹೇಳು, ‘ಹೌ ಡು ಯೂ ಡು?’”

    ಅವಳು ನಿಧಾನವಾಗಿ ಅತ್ಯಂತ ಮುಜುಗರದಿಂದ ಹೇಳಿದಳು, “ಹೌ ಡು ಡು..........”

    ಅಲ್ಲಿ ನಗೆಯ ರಿಂಗಣ ಮೊಳಗಿತು.

    ಬಿಗುವಿನಿಂದ ಕೂಡಿದ್ದ ವಾತಾವರಣ ಈಗ ಸ್ವಲ್ಪ ತಿಳಿಯಾಯಿತು. ಸಾಹೇಬರು ಇಡೀ ಸನ್ನಿವೇಶವನ್ನು ಹತೋಟಿಗೆ ತೆಗೆದುಕೊಂಡಿದ್ದರು. ಜನರೆಲ್ಲಾ ಒಬ್ಬರೊನ್ನೊಬ್ಬರು ತಮಾಷೆ ಮಾಡಿಕೊಳ್ಳುತ್ತಾ ನಗತೊಡಗಿದರು. ಆದರೆ ಶಾಮನಾಥನು ಇನ್ನೂ ಕಳವಳಗೊಂಡೇ ಇದ್ದ.

    ಸಾಹೇಬರು ಇನ್ನೂ ಅಮ್ಮನ ಕೈ ಹಿಡಿದೇ ಇದ್ದರು. ಅಮ್ಮ ನಾಚಿ ನೀರಾಗುತ್ತಿದ್ದಳು. ಸಾಹೇಬರ ಬಾಯಿಂದ ಮದ್ಯದ ವಾಸನೆ ಅವಳ ಮೂಗಿಗೆ ಬಂದು ಬಡಿಯುತ್ತಿತ್ತು.

    ಶಾಮನಾಥ ಇಂಗ್ಲೀಷಿನಲ್ಲಿ ಹೇಳಿದ “ನನ್ನಮ್ಮ ಹಳ್ಳಿಯಿಂದ ಬಂದಾಕೆ. ತನ್ನ ಮುಕ್ಕಾಲು ಜೀವನವನ್ನು ಅಲ್ಲೇ ಕಳೆದಾಕೆ. ಅದಕ್ಕೇ ಅವಳಿಗೆ ನಿಮ್ಮನ್ನು ಕಂಡರೆ ಏನೋ ಒಂಥರಾ ಹಿಂಜರಿತ.”

    ಇದನ್ನು ಕೇಳಿ ಬಾಸ್ ತುಂಬಾ ಖುಷಿಪಟ್ಟ. “ರಿಯಲೀ? ನಂಗೆ ಜಾನಪದ ಹಾಡುಗಳೆಂದರೆ ತುಂಬಾ ಇಷ್ಟ. ಹಾಗಾದ್ರೆ ನಿಮ್ಮ ತಾಯಿಗೆ ಜಾನಪದ ಹಾಡು, ಕುಣಿತಗಳೆಲ್ಲ ಗೊತ್ತಿರಬೆಕಲ್ಲ?” ಎಂದು ಹೇಳುತ್ತಾ ಆಕೆಯನ್ನೇ ದಿಟ್ಟಿಸಿ ನೋಡತೊಡಗಿದ.

    “ಅಮ್ಮ, ಸಾಹೇಬರಿಗೆ ನೀನು ಒಂದು ಹಾಡು ಹಾಡಬೇಕಂತೆ. ಯಾವುದೋ ಒಂದು ಹಾಡು ಸಾಕು. ಹೇಗೂ ನಿಂಗೆ ಬಹಳಷ್ಟು ಹಾಡುಗಳು ಗೊತ್ತಿವೆಯಲ್ಲಾ?”

    ಅವನ ತಾಯಿ ವಿನಮ್ರಳಾಗಿ ಉತ್ತರಿಸಿದಳು, “ಹೇಗೆ ಹಾಡಲಿ ಮಗಾ? ಯಾವತ್ತಾದರೂ ನಾನು ಹಾಡಿದ್ದಿದೆಯೇ?”

    “ಅರೆ, ಅಮ್ಮಾ! ಅತಿಥಿಗಳು ಕೇಳಿದಾಗ ಇಲ್ಲ ಅನ್ನೋಕಾಗುತ್ಯೆ? ಸಾಹೇಬರು ತುಂಬಾ ಖುಷಿಯಲ್ಲಿದ್ದಾರೆ. ನೀನು ಹಾಡದೆ ಹೋದರೆ ಅವರು ಬೇಜಾರು ಮಾಡ್ಕೊತಾರೆ.”

    “ಯಾವ ಹಾಡು ಹಾಡಲಿ ಮಗಾ? ನಂಗ್ಯಾವದು ಗೊತ್ತಿದೆ?”

    “ಅರೆ! ಯಾವುದೋ ಒಂದು ಒಳ್ಳೆ ಜಾನಪದ ಗೀತೆ.”

    ಅಷ್ಟು ಹೇಳುತ್ತಿದ್ದಂತೆ ಇಂಡಿಯನ್ ಆಫೀಸಿಯಲ್ಸ್ ಮತ್ತವರ ಹೆಂಡಿರು ಚಪ್ಪಾಳೆ ತಟ್ಟತೊಡಗಿದರು. ಅಮ್ಮ ದೀನಳಾಗಿ ಮಗನನ್ನೊಮ್ಮೆ ಸೊಸೆಯನ್ನೊಮ್ಮೆ ನೋಡತೊಡಗಿದಳು.

    ಈ ಮಧ್ಯೆ ಅವಳ ಮಗ ಗಂಭೀರವಾಗಿ ಆಜ್ಞಾಪಿಸಿದ, “ಅಮ್ಮ!”

    ಮಗ ಅಪ್ಪಣೆ ಕೊಟ್ಟ ಮೇಲೆ ವಾದ ಮಾಡುವ ಪ್ರಶ್ನೆಯೇ ಇರಲಿಲ್ಲ. ಆಕೆ ಕೆಳಗೆ ಕೂತು ತನ್ನ ಬಡುಕಲು ದ್ವನಿಯಲ್ಲಿ ನಡುಗುತ್ತಾ ಯಾವುದೋ ಒಂದು ಮದುವೆ ಹಾಡನ್ನು ಹಾಡತೊಡಗಿದಳು.

    ಅದು ತುಂಬಾ ತಮಾಷೆಯಾಗಿದ್ದುದರಿಂದ ಇಂಡಿಯನ್ ಹೆಣ್ಣುಮಕ್ಕಳು ಬಿದ್ದುಬಿದ್ದು ನಗತೊಡಗಿದರು. ಮೂರು ಸಾಲು ಹಾಡಿರಲಿಕ್ಕಿಲ್ಲ ಅಮ್ಮ ಹಾಡುವದನ್ನು ನಿಲ್ಲಿಸಿಬಿಟ್ಟಳು. ವರಾಂಡ ಚಪ್ಪಾಳೆಯ ಸದ್ದಿನಿಂದ ಪ್ರತಿದ್ವನಿಸತೊಡಗಿತು. ಸಾಹೇಬರು ಚಪ್ಪಾಳೆಯ ಮೇಲೆ ಚಪ್ಪಾಳೆ ಹೊಡೆಯತೊಡಗಿದರು. ಶಾಮನಾಥನ ಕಸಿವಿಸಿ ಈಗ ಹೆಮ್ಮೆಯಾಗಿ ತಿರುಗಿತು. ಅವನ ತಾಯಿ ಪಾರ್ಟಿಗೆ ಒಂದು ಹೊಸ ಕಳೆಯನ್ನು ತಂದುಕೊಟ್ಟಿದ್ದಳು.

    ಚಪ್ಪಾಳೆಯ ಸದ್ದು ಕಡಿಮೆಯಾದ ಮೇಲೆ ಬಾಸ್ ಕೇಳಿದ “ನಿಮ್ಮ ಪಂಜಾಬಿನ ಹಳ್ಳಿಗಳಲ್ಲಿ ಯಾವ್ಯಾವ ಕರಕುಶಲಕಲೆಗಳಿವೆ?”

    ಶಾಮನಾಥ ಸಂತೋಷದಿಂದ ತೊನೆಯುತ್ತಾ “ಓ, ತುಂಬಾ ಇವೆ ಸಾಹೇಬರೇ! ಎಲ್ಲಾ ಒಂದೊಂದು ಸೆಟ್‍ನ್ನು ನಿಮಗೆ ಉಡುಗೊರೆಯಾಗಿ ಕೊಡುತ್ತೇನೆ. ಅವನ್ನು ನೋಡಿ ನೀವು ಖಂಡಿತ ಇಷ್ಟಪಡುತ್ತೀರಿ.”

    ಆದರೆ ಸಾಹೇಬರು ತಲೆ ಅಲ್ಲಾಡಿಸುತ್ತಾ ಹೇಳಿದರು, “ಬೇಡ, ಅಂಗಡಿಯಿಂದ ನಂಗೇನೂ ಬೇಡ. ಮನೆಯಲ್ಲಿ ಮಾಡಿದ ವಸ್ತುಗಳು ಬೇಕು. ಅಂದಹಾಗೆ ಪಂಜಾಬಿ ಮನೆಗಳಲ್ಲಿ ಯಾವ್ಯಾವ ಕರಕುಶಲಕಲೆಗಳನ್ನು ಮಾಡ್ತಾರೆ? ಇಲ್ಲಿ ಹೆಣ್ಮಕ್ಕಳು ಏನೇನು ಹೆಣಿತಾರೆ?”

    ಶಾಮನಾಥ ಸ್ವಲ್ಪ ಯೋಚಿಸಿ ಹೇಳಿದ “ಹುಡುಗೀರು ಗೊಂಬೆಗಳನ್ನು ಮಾಡ್ತಾರೆ. ಹೆಂಗಸರು ಪುಲ್ಕಾರಿಗಳನ್ನು ಮಾಡ್ತಾರೆ.”

    “ಪುಲ್ಕಾರಿ? ಹಾಗಂದರೇನು?”

    ಪುಲ್ಕಾರಿ ಎಂದರೇನೆಂದು ಸರಿಯಾಗಿ ವಿವರಿಸಲು ಬಾರದೆ ಶಾಮನಾಥನು ತನ್ನ ತಾಯಿಯನ್ನು ಕೇಳಿದ, “ಮನೇಲಿ ಯಾವುದಾದರೂ ಹಳೇ ಪುಲ್ಕಾರಿ ಇದೆಯಾ?”

    ಆಕೆ ಒಳಗೆ ಹೋಗಿ ಒಂದು ಹಳೆಯ ಪುಲ್ಕಾರಿ ತೆಗೆದುಕೊಂಡು ಬಂದಳು.

    ಸಾಹೇಬರು ತುಂಬಾ ಆಸಕ್ತಿಯಿಂದ ಬಣ್ಣಬಣ್ಣದ ಕಸೂತಿ ಹಾಕಿದ ಆ ಬಟ್ಟೆಯನ್ನು ಪರೀಕ್ಷಿಸಿದರು. ಅದು ಹಳೆಯ ಬಟ್ಟೆಯಾಗಿದ್ದು ಅಲ್ಲಲ್ಲಿ ದಾರ ಕಿತ್ತಿತ್ತು. ಇನ್ನು ಕೆಲವು ಕಡೆ ಪಿಸಿದಿತ್ತು. ಇದನ್ನು ಗಮನಿಸಿದ ಶಾಮನಾಥನು ಹೇಳಿದ “ಸಾಹೇಬರೇ, ಇದು ಹರಿದುಹೋಗಿದೆ. ನಿಮಗೆ ಹೊಸಾದು ಮಾಡಿಸಿಕೊಡ್ತೇನೆ. ನನ್ನ ತಾಯಿ ಮಾಡಿಕೊಡ್ತಾಳೆ. ಅಮ್ಮ, ಸಾಹೇಬರಿಗೆ ನಿನ್ನ ಪುಲ್ಕಾರಿ ತುಂಬಾ ಇಷ್ಟವಾಗಿದೆ. ನೀನು ಅವರಿಗೆ ಇಂಥದೊಂದು ಮಾಡಿಕೊಡ್ತಿಯಲ್ವಾ?”

    ಅವನ ತಾಯಿ ಮೌನವಾಗಿದ್ದಳು. ನಂತರ ಮೆಲ್ಲಗೆ ಅಳಕುತ್ತಾ ಹೇಳಿದಳು “ಈಗ ಎಷ್ಟೂ ಅಂತಾ ನೋಡೋಕಾಗುತ್ತೆ ಮಗಾ? ನಂಗೆ ಬೇರೆ ವಯಸ್ಸಾಗಿದೆ. ಮುದಿ ಕಂಗಳು ಹೇಗೆ ತಾನೆ ನೋಡಬಲ್ಲವು?”

    ಆದರೆ ಅವನ ತಾಯಿಯನ್ನು ಅರ್ಧದಲ್ಲಿ ತಡೆಯುತ್ತಾ ಶಾಮನಾಥ ಸಾಹೇಬರಿಗೆ ಹೇಳಿದ “ಆಕೆ ಖಂಡಿತ ನಿಮಗೊಂದು ಮಾಡಿಕೊಡ್ತಾಳೆ. ಯೋಚ್ನೆ ಮಾಡಬೇಡಿ. ನೀವದನ್ನು ನೋಡಿ ಖುಷಿಪಡೋದರಲ್ಲಿ ಎರಡು ಮಾತಿಲ್ಲ.”

    ಸಾಹೇಬರು ತಲೆದೂಗುತ್ತಾ ಅವನಿಗೊಂದು ಥ್ಯಾಂಕ್ಸ್ ಹೇಳಿ ಸಣ್ಣದಾಗಿ ಓಲಾಡುತ್ತ ಡೈನಿಂಗ್ ಟೇಬಲ್‍ನತ್ತ ನಡೆದರು. ಬೇರೆ ಅತಿಥಿಗಳೆಲ್ಲಾ ಅವರನ್ನು ಹಿಂಬಾಲಿಸಿದರು.

    ಎಲ್ಲರೂ ಅಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮುದುಕಿ ನಿಧಾನವಾಗಿ ಎದ್ದು ಅವರ ಕಣ್ಣಿಗೆ ಕಾಣಿಸದಂತೆ ತನ್ನ ಕೋಣೆಯೊಳಗೆ ಹೋದಳು.

    ಆಕೆ ಕೋಣೆಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಅವಳ ಕಂಗಳು ತುಂಬಿ ಬಂದವು. ಅವನ್ನು ತನ್ನ ದುಪ್ಪಟ್ಟಾದಿಂದ ಪದೆಪದೆ ಒರೆಸಿಕೊಂಡಳಾದರೂ ಮತ್ತೆ ಮತ್ತೆ ತುಂಬಿ ಬಂದವು. ತನ್ನನ್ನು ಸಮಾಧಾನಪಡಿಸಿಕೊಳ್ಳುತ್ತಾ ತನ್ನ ಮಗನಿಗೆ ದೀರ್ಘಾಯಸ್ಸು ಸಿಗಲಿ ಎಂದು ಆ ದೇವರಲ್ಲಿ ಕಣ್ಣು ಮುಚ್ಚಿ ಪ್ರಾರ್ಥಿಸಿದಳು. ಆದರೆ ಅವಳ ಕಣ್ಣೀರು ಮಾನ್ಸೂನ್ ಮಳೆಯಂತೆ ಒಂದೇ ಸಮನೆ ತೊಟ್ಟಿಕ್ಕತ್ತಿದ್ದವು.

    ಅದು ಮಧ್ಯರಾತ್ರಿಯಾಗಿರಬಹುದು. ಅತಿಥಿಗಳೆಲ್ಲಾ ಊಟಮಾಡಿ ಒಬ್ಬೊಬ್ಬರಾಗಿ ಜಾಗ ಖಾಲಿಮಾಡಿದರು. ಅಮ್ಮ ಏನನ್ನೋ ನೋಡುತ್ತಾ ಗೋಡೆಗೊರಗಿಕೊಂಡು ಕುಳಿತಿದ್ದಳು. ಬೆಳಿಗ್ಗೆಯಿಂದ ಮನೆಯಲ್ಲಿದ್ದ ಉದ್ವಿಗ್ನತೆ ಈಗ ಮಾಯವಾಗಿತ್ತು. ಸುತ್ತಮುತ್ತಲಿನ ಮನೆಗಳಿಗೆ ಆವರಿಸಿದ್ದ ನೀರವತೆ ಈಗ ಶಾಮನಾಥನ ಮನೆಗೂ ಆವರಿಸಿತ್ತು. ಇದ್ದಕ್ಕಿದ್ದಂತೆ ಯಾರೋ ಅವಳ ಬಾಗಿಲನ್ನು ಜೋರಾಗಿ ತಟ್ಟಿದರು.

    “ಅಮ್ಮ, ಬಾಗಿಲು ತೆಗಿ!”

    ಅವಳ ಎದೆ ಧಸಕ್ಕೆಂದಿತು. ಅವಸರವಸರವಾಗಿ ಎದ್ದು ನಿಂತಳು. ಇನ್ನೊಂದು ತಪ್ಪೇನಾದರು ಮಾಡಿದ್ದೇನೆಯೇ? ಯಾಕಾದರೂ ನಿದ್ದೆ ಮಾಡಿದೆನೋ? ಯಾಕಾದರೂ ತೂಕಡಿಕೆ ಬಂತೋ? ಎಂದು ಇನ್ನಿಲ್ಲದಂತೆ ಅವಳು ತನ್ನನ್ನು ತಾನೇ ಶಪಿಸಿಕೊಂಡಳು.

    ಆಕೆಯ ಮಗ ಇನ್ನೂ ಅವಳನ್ನು ಕ್ಷಮಿಸಿಲ್ಲವೆ? ನಡುಗುವ ಕೈಗಳಿಂದ ಬಾಗಿಲನ್ನು ತೆಗೆದಳು.

    ಬಾಗಿಲನ್ನು ತೆಗೆಯುತ್ತಿದ್ದಂತೆ ಶಾಮನಾಥ ಮುಂದೆ ಬಂದು ಅವಳನ್ನು ತಬ್ಬಿಕೊಂಡ.

    “ಓ, ಅಮ್ಮ! ಈ ರಾತ್ರಿ ನೀನು ಅದ್ಭುತವಾದ ಪವಾಡವನ್ನೇ ಮಾಡಿಬಿಟ್ಟೆ. ಸಾಹೇಬರು ತುಂಬಾ ಸಂತೋಷಪಟ್ಟರು. ಐ ಯಾಮ್ ಹ್ಯಾಪಿ. ಐ ಕಾಂಟ್ ಟೆಲ್ ಯೂ. ಓ, ಅಮ್ಮಿ! ಅಮ್ಮಿ!”

    ಅವಳ ಸಣಕಲು ದೇಹ ಅವನ ಅಪ್ಪುಗೆಯಲ್ಲಿ ಮುದುಡಿ ಕೂತಿತ್ತು. ಅವಳ ಕಂಗಳಲ್ಲಿ ಮತ್ತೆ ನೀರು ಚಿಮ್ಮಿತು. ಅವನ್ನು ಒರೆಸಿಕೊಳ್ಳುತ್ತಾ “ಮಗಾ, ನನ್ನನ್ನು ಹರಿದ್ವಾರಕ್ಕೆ ಕಳಿಸಿಬಿಡು. ನಾನು ನಿಂಗೆ ತುಂಬಾ ದಿವಸದಿಂದ ಹೇಳ್ತಾನೇ ಇದ್ದೇನೆ.”

    ತಕ್ಷಣ ಶಾಮನಾಥನು ತನ್ನ ಅಪ್ಪುಗೆಯನ್ನು ಸಡಿಲಗೊಳಿಸಿ ಹುಬ್ಬುಗಂಟಿಕ್ಕುತ್ತಾ ಕೇಳಿದ “ಏನಮ್ಮಾ? ಏನು ಹೇಳಿದೆ ನೀನು? ಇದ್ಯಾವ ರಾಗ ಶುರು ಮಾಡಿದಿ ಈಗ?”

    ಶಾಮನಾಥನ ಕೋಪ ಹೆಚ್ಚುತ್ತಾ ಹೋಯಿತು. “ಏನಮ್ಮಾ ನನ್ನ ಮರ್ಯಾದೆ ಕಳಿಬೇಕಂತ ಮಾಡಿಯಾ? ಜನಾ ಎಲ್ಲಾ ಏನು ಅಂತಾರೆ? ಮಗ ಅವರಮ್ಮನ್ನ ತನ್ನ ಜೊತೆ ಇಟ್ಕೊಳ್ಳಲಾರದೆ ಹರಿದ್ವಾರಕ್ಕೆ ಕಳಿಸಿದ್ದಾನೆ ನೋಡು ಅಂತಾ ಆಡಿಕೊಳ್ಳೊಲ್ಲಾ?”

    “ಇಲ್ಲ ಮಗಾ! ನೀನೀಗ ನಿನ್ನ ಹೆಂಡತಿ ಜೊತೆ ಹ್ಯಾಗೆ ಬೇಕೋ ಹಾಗಿರು. ನಾನು ಚನ್ನಾಗಿ ಉಂಡಿದ್ದೇನೆ, ಉಟ್ಟಿದ್ದೇನೆ. ನಂದು ಎಲ್ಲಾ ಮುಗಿದಿದೆ. ಇಲ್ಲಿ ಇದ್ದು ಏನು ತಾನೆ ಮಾಡ್ಲಿ? ಏನೋ ಇರೋ ಇನ್ನು ಸ್ವಲ್ಪ ದಿನ ದೇವರ ಹೆಸರು ಹೇಳಿಕೋತ ಕಾಲ ಕಳಿತೇನಿ. ನನ್ನ ಹರಿದ್ವಾರಕ್ಕೆ ಕಳಿಸಿಬಿಡು!”

    “ನೀನು ಹೋದರೆ ಪುಲ್ಕಾರಿ ಹೆಣೆದುಕೊಡೋರು ಯಾರು? ನಿನ್ನ ಮುಂದೆನೇ ಸಾಹೇಬರಿಗೆ ಪುಲ್ಕಾರಿ ಹೆಣಿಸಿಕೊಡ್ತೇನಿ ಅಂತಾ ಹೇಳಿದ್ದೇನೆ.”

    “ಪುಲ್ಕಾರಿ ಹೆಣೆದು ಕೊಡುವಷ್ಟು ನನ್ನ ಕಣ್ಣು ಕಾಣಿಸೋದಿಲ್ಲ ಮಗಾ. ಬೇರೆ ಎಲ್ಲಾದ್ರೂ ಹೆಣಿಸಿಕೊಡು. ಅಥವಾ ಒಂದು ರೆಡಿಮೇಡೇ ತಂದುಕೊಡು.”

    “ಅಮ್ಮಾ, ನನ್ನ ಕೆಳಗಿಳಿಸಬೇಕಂತ ಮಾಡಿಯೇನು? ನನ್ನ ಭವಿಷ್ಯದ ಏಳಿಗೆಯನ್ನು ಹಾಳು ಮಾಡಬೇಕಂತ ಅನ್ಕೊಂಡಿದ್ದೀಯಾ? ನಿಂಗೊತ್ತಿಲ್ವಾ ಸಾಹೇಬರನ್ನು ಖುಶಿಗೊಳಿಸಿದರೆ ನಂಗೆ ಪ್ರಮೋಶನ್ ಸಿಗುತ್ತೆ ಅಂತಾ?”

    ಅವನ ತಾಯಿ ಸ್ವಲ್ಪ ಹೊತ್ತು ಸುಮ್ಮನಿದ್ದು ಬಳಿಕ ಮಗನನ್ನು ನೋಡುತ್ತಾ ಕೇಳಿದಳು “ನಿಂಗೆ ಪ್ರಮೋಶನ್ ಸಿಗುತ್ತಾ? ಸಾಹೇಬರು ನಿಂಗೆ ಪ್ರಮೋಶನ್ ಕೊಡ್ತಾರಾ? ಅವರು ಹಾಗಂತ ಹೆಳಿದ್ದಾರೆಯೇ?”

    “ಹಾಗಂತ ಏನೂ ಹೇಳಿಲ್ಲ. ಆದರೆ ಅವರು ಎಷ್ಟು ಖುಷಿಯಾಗಿದ್ದರು ಅಂತಾ ನೀನೇ ನೋಡಲಿಲ್ವಾ? ಅವರು ಹೇಳ್ತಾ ಇದ್ದರು ನೀನು ಪುಲ್ಕಾರಿ ಹೆಣೆಯೋಕೆ ಶುರು ಮಾಡಿದಾಗ ಅದನ್ನು ಹೇಗೆ ಮಾಡತಿಯಾ ಅಂತ ನೋಡೋಕೆ ಒಂದು ದಿವಸ ಬರ್ತಾರಂತೆ. ನಾವು ಸಾಹೇಬರನ್ನು ಸಂತೋಷಪಡಿಸಿದರೆ ನಂಗೆ ಇದಕ್ಕಿಂತ ಒಳ್ಳೆ ಕೆಲಸ ಸಿಗ್ತದಮ್ಮಾ. ನಾನು ಸೀನಿಯರ್ ಎಗ್ಜಿಕ್ಯುಟಿವ್ ಆಗಬಹುದು.”

    ನಿಧಾನವಾಗಿ ಸುಕ್ಕುಗಟ್ಟಿದ ಅವನ ತಾಯಿಯ ಮುಖ ಕಾಂತಿಯಿಂದ ಪ್ರಕಾಶಿಸತೊಡಗಿತು. ಕಂಗಳು ಮಿಂಚಿನಿಂದ ಹೊಳೆಯತೊಡಗಿದವು.

    “ಹಾಗಾದ್ರೆ ನಿಂಗೆ ಪ್ರಮೋಷನ್ ಸಿಗುತ್ತಾ ಮಗಾ?”

    “ಹಾಗೆ ಸಿಕ್ಕಬಿಡುತ್ತಾ ಅಮ್ಮಾ? ನಾನು ಸಾಹೇಬರನ್ನು ಖುಷಿಪಡಿಸಿದರೆ ಮಾತ್ರ ಅವರು ಏನಾದರೂ ಮಾಡ್ತಾರೆ. ಇಲ್ಲಾಂದ್ರೆ ಅವರನ್ನು ಖುಷಿಪಡಿಸಿ ಪ್ರಮೋಷನ್ ತಗೊಳ್ಳೋ ಜನರಿಗೇನೂ ಕೊರತೆಯಿಲ್ಲ.”

    “ಹಾಗಾದ್ರೆ ನಾನು ಮಾಡ್ತೀನಿ ಮಗಾ. ಹೇಗೋ ಬೇಕೋ ಹಾಗೆ ಮಾಡ್ತೀನಿ.”

    ಆಕೆ ಮನಸ್ಸಲ್ಲಿ ತನ್ನ ಮಗನ ಉಜ್ವಲ ಭವಿಷ್ಯಕ್ಕಾಗಿ ಉತ್ಕಟವಾಗಿ ಹಾರೈಸಿದಳು. ಶಾಮನಾಥನು ತನ್ನ ತಾಯಿಗೆ “ಈಗ ಮಲಗು” ಎಂದು ಹೇಳಿ ಕೊಂಚ ಮುಗ್ಗರಿಸುತ್ತಾ ತನ್ನ ಕೋಣೆಯತ್ತ ನಡೆದುಬಂದ.



    ಮೂಲ: ಭೀಷ್ಮ ಸಹಾನಿ

    ಕನ್ನಡಕ್ಕೆ: ಉದಯ್ ಇಟಗಿ

    ಈ ಕಥೆ ಫೆಬ್ರುವರಿ 24, 2013ರ “ಉದಯವಾಣಿ” ಯಲ್ಲಿ ಪ್ರಕಟವಾಗಿದೆ.
    http://www.udayavani.com/news/255625L15-ಬ-ಳ--ಸ-ಹ-ಬನ-ಗ---ದ--ಭ-ಜನಕ-ಟ.html


























    ಈ ಸಂಜೆ ಪ್ರಿತಿಯೊಡನೆ

  • ಭಾನುವಾರ, ಅಕ್ಟೋಬರ್ 14, 2012
  • ಬಿಸಿಲ ಹನಿ
  • ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ - ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್‍ನ ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ಆ ಗಡಿಯಾರವನ್ನು ನೋಡುತ್ತಾ ಸಮಯವನ್ನು ಧೃಡಪಡಿಸಿಕೊಂಡ. ಅವನ ಎದೆ ಒಂದೇಸಮನೇ ಜೋರಾಗಿ ಹೊಡೆದುಕೊಳ್ಳುತ್ತಿತ್ತು; ಅದೆಷ್ಟು ಜೋರಾಗಿ ಹೊಡೆದುಕೊಳ್ಳುತ್ತಿತ್ತೆಂದರೆ ಆ ಸದ್ದನ್ನು ಕೇಳಿ ಅವನೇ ಭಯಗೊಂಡನಲ್ಲದೆ ಅವನದನ್ನು ತಹಬದಿಗೆ ತರಲು ಇನ್ನಿಲ್ಲದ ಪ್ರಯತ್ನಮಾಡಿ ಸೋಲುತ್ತಿದ್ದ.

    ಇನ್ನಾರೇ ಆರು ನಿಮಿಷ! ಆ ಆರು ನಿಮಿಷಗಳಲ್ಲಿ ಆತ ಅವಳನ್ನು ಭೇಟಿಯಾಗಲಿದ್ದ; ಅವಳೆಂದರೆ ಹದಿಮೂರು ತಿಂಗಳುಗಳಿಂದ ಅವನ ಜೀವನದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಾಕೆ. ಅವಳನ್ನೆಂದೂ ನೋಡಿಲ್ಲ, ಮಾತನಾಡಿಸಿಲ್ಲ. ಆದರೆ ಅವಳು ಬರೆದ ಪತ್ರಗಳು ಮಾತ್ರ ಅವನೊಟ್ಟಿಗೆ ಬಹಳಷ್ಟು ಮಾತನಾಡಿವೆ. ಜೊತೆಗೆ ಸಾಕಷ್ಟು ಸ್ಫೂರ್ತಿ, ಬೆಂಬಲ ನೀಡಿವೆ.

    ಮಾಹಿತಿ ಕೇಂದ್ರಕ್ಕೆ ಅಂಟಿ ಕುಳಿತಂತೆ ಆತನಿಗೆ ಆ ಭಯಾನಕ ಯುದ್ಧದ ರಾತ್ರಿಯ ನೆನಪಾಯಿತು. ಪಕ್ಕದಲ್ಲೇ ಜನರು ಪ್ರಶ್ನೆಗಳ ಮಳೆ ಸುರಿಸುತ್ತಾ ಅಲ್ಲಿನ ಅಧಿಕಾರಿಗಳಿಗೆ ಮುಗಿಬಿದ್ದಿದ್ದರು.

    ಒಂದುಸಾರಿ ತಾನು ಯುದ್ಧ ಮಾಡುತ್ತಿದ್ದ ಕತ್ತಲ ರಾತ್ರಿಯಲ್ಲಿ ಅಚಾನಾಕಾಗಿ ತನ್ನ ಯುದ್ಧ ವಿಮಾನವೊಂದು ವೈರಿಗಳ ಪಾಳಯದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅದನ್ನಾತ ಬಿಡಿಸಿಕೊಳ್ಳಲು ಹೆಣಗಾಡುತ್ತಿರಬೇಕಾದರೆ ಅದನ್ನು ನೋಡಿ ವೈರಿ ವಿಮಾನ ಚಾಲಕ ಕುಹಕ ನಗೆ ನಕ್ಕಿದ್ದ. ಅಂದಿನಿಂದ ಅವನಿಗೆ ಆಗಾಗ ಭಯ ಆವರಿಸುತ್ತಿತ್ತು.

    ಈ ರೀತಿ ಅವನು ಆಗಾಗ ಭಯಗೊಳ್ಳುತ್ತಿದ್ದುದನ್ನು ತನ್ನದೊಂದು ಪತ್ರದಲ್ಲಿ ಆಕೆಯ ಹತ್ತಿರ ನಿವೇದಿಸಿಕೊಂಡಿದ್ದ. ಅದಕ್ಕವಳಿಂದ ಉತ್ತರವೂ ಬಂದಿತ್ತು. “ಹೌದು, ನೀನು ಭಯಗೊಂಡಿರುವೆ.....ಎಲ್ಲ ಯೋಧರಂತೆ! ಹೆದರದ ಯೋಧರು ಯಾರಿದ್ದಾರೆ? ಅಂಥಾ ಧೀರಾನುಧೀರ ರಾಜ ಡೇವಿಡ್‍ನೂ ಹೆದರಿರಲಿಲ್ಲವೆ? ಅದಕ್ಕೆ ಅಲ್ಲವೇ ಆತ ಇಪ್ಪತ್ಮೂರನೇ ಪ್ರಾರ್ಥನಾಗೀತೆ (ಕ್ರಿಶ್ಚಿಯನ್ನರ) ಯನ್ನು ಬರೆದಿದ್ದು? ಮುಂದಿನ ಬಾರಿ ನೀ ಭಯಗೊಂಡಾಗ ನಾ ನಿನಗಾಗಿ ಪಠಿಸುತ್ತಿರುವದನ್ನು ಕಲ್ಪಿಸಿಕೋ: “ಸಾವಿನ ನೆರಳಿನ ಕಣಿವೆಯಲ್ಲಿ ನಾ ನಡೆದಾಡುತ್ತಿದ್ದರೂ, ನನಗ್ಯಾವ ದುಷ್ಟಶಕ್ತಿಗಳ ಭಯವಿಲ್ಲ, ಏಕೆಂದರೆ ನೀ ನನ್ನ ಜೊತೆಯಲ್ಲಿರುವೆ.” ಅವನು ಅವಳ ದ್ವನಿಯನ್ನು ಕಲ್ಪಿಸಿಕೊಂಡು ಉತ್ತೇಜಿತನಾಗಿದ್ದ.
    ಇನ್ನು ಕೆಲವೇ ಕೆಲವು ಕ್ಷಣಗಳಲ್ಲಿ ಅವಳ ನೈಜ, ಮಧುರ ಧ್ವನಿಯನ್ನು ಕೇಳುವವನಿದ್ದಾನೆ.
    ಆರಕ್ಕೆ ನಾಲ್ಕು ನಿಮಿಷ ಮಾತ್ರ ಬಾಕಿಯಿದೆ. ಅವನು ಚುರುಕಾದ.

    ಅಸಂಖ್ಯ ತಾರಾಗಣಗಳ ಚಪ್ಪರದಡಿ ಜನ ಲಗುಬಗೆಯಿಂದ ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಅವರೆಲ್ಲರ ಮಧ್ಯದಿಂದ ಚೆಂದನೆಯ ಹುಡುಗಿಯೊಬ್ಬಳು ನಡೆದು ಬಂದು ಅವನ ಹತ್ತಿರದಲ್ಲೇ ಹಾದು ಹೋದಳು. ಲೆಫ್ಟಿನಂಟ್ ಬ್ಲಾಂಡ್ಫೋರ್ಡ್ ಕುಳಿತಲ್ಲೇ ಕದಲಿದ. ಅವಳು ತನ್ನ ಸೂಟಿನ ಮೇಲೆ ಕಡುಗೆಂಪು ಬಣ್ಣದ ಹೂ ಧರಿಸಿದ್ದಳು. ಆದರದು ಇವರಿಬ್ಬರ ಒಪ್ಪಂದದಂತೆ ಚಿಕ್ಕ ಕೆಂಗುಲಾಬಿಯಾಗಿರಲಿಲ್ಲ. ಮೇಲಾಗಿ ಈ ಹುಡುಗಿ ಹದಿನೆಂಟರ ತರುಣಿಯಾಗಿದ್ದಳು. ಆದರೆ ಹೋಲಿಸ್ ಮೀನಲ್ ಅವನಿಗೆ ಯಾವುದೇ ಮುಚ್ಚುಮರೆಯಿಲ್ಲದೆ ತನಗೆ ಮೂವತ್ತು ವರ್ಷ ಎಂದು ಹೇಳಿದ್ದಳು. “ಆದರೇನಂತೆ? ನನಗೀಗ ಮೂವತ್ತೆರೆಡು.” ಎಂದು ಬರೆದಿದ್ದ. ಆದರೆ ಅವನಿಗಾದುದು ಇಪ್ಪತ್ತೊಂಬೊತ್ತು ಮಾತ್ರ.

    ಅವನ ಮನಸ್ಸು ಆ ಪುಸ್ತಕಕ್ಕೆ ಮರಳಿತು. ಫ್ಲೋರಿಡಾದ ತರಬೇತಿ ಶಿಬಿರದಲ್ಲಿದ್ದವನಿಗೆ ಸೈನ್ಯದ ಗ್ರಂಥಾಲಯದಲ್ಲಿದ್ದ ಸಾವಿರಾರು ಪುಸ್ತಕಗಳಲ್ಲಿ ದೇವರೇ ಆ ಪುಸ್ತಕವನ್ನು ಇವನ ಕೈಗೆ ನೀಡಿದಂತಿತ್ತು. ಆ ಪುಸ್ತಕದ ಹೆಸರು “Of Human Bondage”. ಅದರ ತುಂಬಾ ಹೆಂಗಸೊಬ್ಬಳು ತನ್ನ ಕೈ ಬರಹದಲ್ಲಿ ಬರೆದಿಟ್ಟ ಕೆಲವು ಟಿಪ್ಪಣಿಗಳಿದ್ದವು. ಈ ರೀತಿ ಪುಸ್ತಕಗಳಲ್ಲಿ ಬರೆಯುವದನ್ನು ಅವನು ಎಂದೂ ಇಷ್ಟಪಡುತ್ತಿರಲಿಲ್ಲ. ಆದರೆ ಇಲ್ಲಿ ಬರೆದಿದ್ದ ಟಿಪ್ಪಣಿಗಳು ತುಂಬಾ ವಿಭಿನ್ನವಾಗಿದ್ದರಿಂದ ಅವನ ಮನಸ್ಸನ್ನು ಬಹುವಾಗಿ ತಾಕಿದ್ದವು. ಒಂದು ಹೆಂಗಸು ಇಷ್ಟು ಸೂಕ್ಷ್ಮವಾಗಿ ಮತ್ತು ಇಷ್ಟು ಚನ್ನಾಗಿ ಒಬ್ಬ ಗಂಡಸಿನ ಎದೆಯಾಳವನ್ನು ಅರ್ಥಮಾಡಿಕೊಳ್ಳಬಹುದೆಂಬ ಊಹೆ ಕೂಡ ಆತನಿಗಿರಲಿಲ್ಲ. ಆಕೆ ಹೋಲಿಸ್ ಮೀನಲ್; ಆಕೆಯ ಹೆಸರು ಪುಸ್ತಕ-ಫಲಕದ ಮೇಲೆ “ಹೋಲಿಸ್ ಮೀನಲ್” ಎಂದು ಬರೆದಿತ್ತು. ನ್ಯೂಯಾರ್ಕ್ ಟೆಲಿಫೋನ್ ಡೈರೆಕ್ಟರಿ ತೆಗೆದುಕೊಂಡು ಅವಳ ವಿಳಾಸವನ್ನು ಪತ್ತೆ ಹಚ್ಚಿ ಅಂದೇ ಅವಳಿಗೆ ಪತ್ರವನ್ನು ಬರೆದ. ಅವಳೂ ಉತ್ತರಿಸಿದಳು. ಅವನು ಕೆಲಸದ ನಿಮಿತ್ತ ಬೇರೆ ಬೇರೆ ಊರುಗಳಿಗೆ ಹೋಗಬೇಕಾಗಿ ಬಂತು. ಹೋದ ಕಡೆಗಳಿಂದಲೇ ಬಿಡುವು ಮಾಡಿಕೊಂಡು ಅವಳಿಗೆ ಪತ್ರ ಬರೆಯುತ್ತಿದ್ದ. ಅವಳೂ ಉತ್ತರಿಸುತ್ತಿದ್ದಳು. ಅವರಿಬ್ಬರ ಪತ್ರವ್ಯವಹಾರ ಮುಂದುವರಿಯಿತು.

    ಹದಿಮೂರು ತಿಂಗಳುಗಳು ಕಾಲ ಅವಳು ಶ್ರದ್ಧೆಯಿಂದ ಚಾಚೂ ತಪ್ಪದೇ ಉತ್ತರ ಬರೆದಳು ಮತ್ತು ಅವನಿಂದ ಯಾವುದೇ ಕಾಗದ ಬರದೇ ಹೋದಾಗ ಅವಳೇ ಬರೆಯುತ್ತಿದ್ದಳು. ನಿಧಾನವಾಗಿ ಲೆಫ್ಟಿನೆಂಟ್ ಬ್ಲಾಂಡ್ಫೋರ್ಡ್‍ನಿಗೆ ತಾನು ಅವಳನ್ನು ಪ್ರೀತಿಸುತ್ತಿದ್ದೇನೆ ಮತ್ತು ಅವಳೂ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಅನಿಸತೊಡಗಿತು.

    ಒಂದುಸಾರಿ ಅವಳಿಗೆ ಅವಳ ಫೋಟೋ ಕಳುಹಿಸಲು ಕೋರಿದ. ಆದರೆ ಆಕೆ ಆತನ ಕೋರಿಕೆಯನ್ನು ತಿರಸ್ಕರಿಸಿ ತನ್ನ ಪೋಟೋವನ್ನು ಕಳುಹಿಸಲಿಲ್ಲ. ಮೇಲಾಗಿ, ಹಾಗೆಲ್ಲಾ ಫೋಟೋ ಕಳಿಸುವದು ಅವಳಿಗೆ ಸರಿಯೆನಿಸಲಿಲ್ಲ. ಅದಕ್ಕವಳು ಕಾರಣವನ್ನೂ ಕೊಟ್ಟಿದ್ದಳು. “ನಿನ್ನ ಭಾವನೆಗಳು ನಿಜವೇ ಆಗಿದ್ದರೆ, ಪ್ರಾಮಾಣಿಕವಾಗಿದ್ದರೆ ನನ್ನ ರೂಪ ಮುಖ್ಯವಾಗುವುದಿಲ್ಲ. ನಾನೇನಾದರೂ ರೂಪವತಿಯಾಗಿದ್ದರೆ, ನೀ ನನ್ನ ರೂಪಕ್ಕೆ ಮರುಳಾಗಿ ಪ್ರೀತಿಸಿದೆ ಎಂಬ ಭಾವನೆ ನನ್ನನ್ನು ಕಾಡುತ್ತಿರುತ್ತದೆ ಮತ್ತು ಆ ರೀತಿಯ ಪ್ರೀತಿ ನನ್ನಲ್ಲಿ ಹೇಸಿಕೆ ಹುಟ್ಟಿಸುತ್ತದೆ. ಒಂದುವೇಳೆ ನಾನೇನಾದರೂ ಕುರೂಪಿಯಾಗಿದ್ದರೆ, (ಇರಬಹುದೆಂದು ನೀನು ನಂಬಬೇಕು) ನೀನು ಒಂಟಿಯಾಗಿರುವೆ ಮತ್ತು ಅದೇ ಕಾರಣಕ್ಕೆ ನಿನ್ನ ಒಂಟಿತನವನ್ನು ಹೋಗಲಾಡಿಸಲು ನನಗೆ ಪತ್ರ ಬರೆಯುತ್ತಿದ್ದೀಯಾ ಎಂದು ನಂಬಬೇಕಾಗುತ್ತದೆ. ಬೇಡ, ನನ್ನ ಪೋಟೋವನ್ನು ಕೇಳಬೇಡ. ನೀನೇ ನ್ಯೂಯಾರ್ಕಿಗೆ ಬಂದಾಗ ನನ್ನನ್ನು ನೋಡಿದ ಮೇಲೆ ಒಂದು ನಿರ್ಧಾರಕ್ಕೆ ಬರುವಿಯಂತೆ. ನೆನಪಿರಲಿ, ನನ್ನ ನೋಡಿದ ಮೇಲೆ ನಿನಗೆ ನನ್ನ ಸಂಬಂಧ ಮುಂದುವರಿಸಬೇಕೆನಿಸಿದರೆ ಮುಂದುವರಿಸು. ಇಲ್ಲವಾದರೆ ಇಲ್ಲ. ಆಯ್ಕೆ ನಿನಗೆ ಬಿಟ್ಟಿದ್ದು.”

    ಇದೀಗ ಹಸಿರು ಸೂಟು ಧರಿಸಿದ್ದ ಹುಡುಗಿಯೊಬ್ಬಳು ಅತಿ ವೇಗವಾಗಿ ಅವನ ಪಕ್ಕದಲ್ಲೇ ನಡೆದು ಹೋದಳು. ಆರಕ್ಕೆ ಒಂದು ನಿಮಿಷ ಮಾತ್ರ...............

    ಲೆಫ್ಟಿನೆಂಟ್ ಬ್ಲಾಂಡ್ಫೋರ್ಡ್‍ನ ಎದೆ ಆತನ ವಿಮಾನದ ಎತ್ತರಕ್ಕೆ ಜಿಗಿಯಿತು.

    ಒಬ್ಬಳು ನವತರುಣಿ ಅವನ ಬಳಿಗೆ ನಡೆದು ಬಂದಳು. ಅವಳು ನೀಳ ಮತ್ತು ತೆಳ್ಳಗಿನ ಶರೀರದವಳಾಗಿದ್ದು ಆಕರ್ಷಕ ಮೈಕಟ್ಟನ್ನು ಹೊಂದಿದ್ದಳು. ಅವಳ ಹೊಂಬಣ್ಣದ ಕೂದಲು ಸುರುಳಿ ಸುರುಳುಯಾಗಿ ಸುತ್ತಿಕೊಂಡು ಅವಳ ಕೋಮಲ ಕಿವಿಗೆ ಮುತ್ತನ್ನಿಡುತ್ತಿದ್ದವು. ಅವಳ ಕಂಗಳು ನೀಲಿ ಹೂಗಳಂತಿದ್ದವು. ಅವಳ ತುಟಿ ಮತ್ತು ಗಲ್ಲ ಮೃದು ನಿಲುವನ್ನು ತಳೆದಿದ್ದವು. ಅವಳು ತನ್ನ ತಿಳಿ ಹಸುರಿನ ಉಡುಗೆಯಲ್ಲಿ ವಸಂತ ಋತುವೇ ಮೈವೆತ್ತಂತೆ ಬಂದಳು. ಅವನು ಅವಳೆಡೆಗೆ ನಡೆದುಬಂದ. ಆದರೆ ಅವಳು ಗುಲಾಬಿಯನ್ನು ತೊಟ್ಟಿಲ್ಲವೆಂಬುದನ್ನು ಆತ ಗಮನಿಸಲಿಲ್ಲ.

    ಆತ ಅವಳನ್ನು ಸಮೀಪಿಸುತ್ತಿದ್ದಂತೆ ಅವಳ ತುಟಿಗಳ ಮೇಲೆ ಸಣ್ಣದೊಂದು ತುಂಟ ನಗು ಸುಳಿದು ಮಾಯವಾಯಿತು.

     “ನೀವು ನನ್ನ ಹಾದಿಯಲ್ಲಿದ್ದೀರಾ, ಲೆಫ್ಟಿನೆಂಟ್?” ಎಂದೇನೋ ಗುನುಗುನಿಸಿದಳು. ತನಗರಿವಿಲ್ಲದೆಯೇ, ಆತ ಒಂದು ಹೆಜ್ಜೆ ಅವಳಿಗೆ ಹತ್ತಿರವಾದ. ಅಲ್ಲಿ ಹೋಲಿಸ್ ಮೀನಲ್‍ಳನ್ನು ನೋಡಿದ. ಆಕೆ ಸರಿಯಾಗಿ ಆ ಹುಡುಗಿಯ ಹಿಂದೆಯೇ ನಿಂತಿದ್ದಳು. ಸುಮಾರು ನಲವತ್ತರ ಹತ್ತಿರವಿರಬಹುದಾದ ಹೆಂಗಸು ಆಕೆ. ಅವಳು ತನ್ನ ಮಾಸಲು ಕೂದಲನ್ನು ತಾನು ಧರಿಸಿದ್ದ ಟೋಪಿಯೊಳಗೆ ಅಡಗಿಸಿಟ್ಟಿದ್ದಳು. ನೋಡಲು ಸ್ವಲ್ಪ ಧಡೂತಿಯಾಗಿದ್ದು ತನ್ನ ದಪ್ಪನೆಯ ಕಾಲುಗಳನ್ನು ಷೂನೊಳಗೆ ಬಲವಂತವಾಗಿ ತುರುಕಿದಂತೆ ಕಾಣುತ್ತಿತ್ತು. ಆದರೆ ಅವಳು ತನ್ನ ಸುಕ್ಕುಗಟ್ಟಿದ್ದ ಕಂದುಬಣ್ಣದ ಮೇಲಂಗಿ(ಸೂಟಿನಲ್ಲಿ)ಯಲ್ಲಿ ಕೆಂಗುಲಾಬಿ ಧರಿಸಿದ್ದಳು.

    ತಿಳಿ ಹಸಿರು ಬಣ್ಣದ ಉಡುಗೆ (ಸೂಟು) ತೊಟ್ಟಿದ್ದ ಹುಡುಗಿ ಮೆಲ್ಲನೆ ಅಲ್ಲಿಂದ ಮಾಯವಾದಳು.

    ಬ್ಲಾಂಡ್ಫೋರ್ಡ್ ಇಕ್ಕಟ್ಟಿಗೆ ಸಿಲುಕಿದ. ಅಲ್ಲಿಂದ ಮಾಯವಾದ ಹುಡುಗಿಯನ್ನು ಹಿಂಬಾಲಿಸಬೇಕೋ? ಅಥವಾ ತನ್ನ ಕಣ್ಮುಂದೆ ಇರುವ ಹೋಲಿಸ್ ಮೀನಲ್‍ಳಿಗೆ ಮನಸೋಲಬೇಕೋ? ಒಂದು ಕ್ಷಣ ಗಲಿಬಿಲಿಗೊಂಡ. ಆದರೆ ಪ್ರತಿಬಾರಿ ಅವನನ್ನು ಹುರಿದುಂಬಿಸಿದ, ಅವನಲ್ಲಿ ಸ್ಫೂರ್ತಿಯನ್ನು ತುಂಬಿದ ಹಾಗೂ ಇನ್ಮುಂದೆ ಜೀವನ ಪೂರ್ತಿ ತನ್ನ ಜೊತೆಯಲ್ಲೇ ಇರುವ ಹೋಲಿಸ್ ಮೀನಲ್‍ಳ ಚೈತನ್ಯಕ್ಕೆ ಅವನ ಮನಸ್ಸು ಸೋತಿತ್ತು. ಇದೀಗ ಅವರಿಬ್ಬರು ಮುಖಾಮುಖಿಯಾಗಿ ನಿಂತಿದ್ದರು. ಅವಳಿಗೆ ದುಂಡುದುಂಡಾದ ಮಾಸಲು ಮುಖವಿತ್ತು. ಆದರೆ ಅದರಲ್ಲಿ ಸ್ಥಿಗ್ನಸೌಂದರ್ಯ ಮನೆಮಾಡಿತ್ತು. ಅವಳ ಕಂಗಳು ಬೆಚ್ಚನೆಯ ಪ್ರೀತಿಯನ್ನು ಹೊರಸೂಸುತ್ತಿದ್ದವು.

    ಲೆಫ್ಟಿನೆಂಟ್ ಬ್ಲಾಂಡ್ಫೋರ್ಡ್ ಹಿಂದೆ ಸರಿಯಲಿಲ್ಲ. ಆತನ ಕೈ ಬೆರಳುಗಳು “Of Human Bondage” ಪುಸ್ತಕವನ್ನು ದೃಢವಾಗಿ ಹಿಡಿದಿದ್ದವು. ಅದು ಆಕೆಗೆ ಈತನನ್ನು ಗುರುತುಹಿಡಿಯಲು ಸಹಕಾರಿಯಾಗಿತ್ತು. ಪ್ರಾಯಶಃ ಇದು ಪ್ರೀತಿಯಲ್ಲ, ಅದಕ್ಕಿಂತಲೂ ಮಿಗಿಲಾದ, ಅಮೂಲ್ಯವಾದ ಜೀವಮಾನವಿಡಿ ಒಬ್ಬರಿಗೊಬ್ಬರು ಋಣಿಯಾಗಿರಬೇಕಾದ ಒಂದು ಅಪೂರ್ವ ಸ್ನೇಹ ಸಂಬಂಧ.

    ಆತ ತನ್ನ ಎದೆ ಸೆಟಿಸಿ ಆಕೆಗೆ ಒಂದು ಸೆಲ್ಯೂಟ್ ಹೇಳಿದ. ತನ್ನ ಕೈಯಲ್ಲಿದ್ದ ಪುಸ್ತಕವನ್ನು ಅವಳೆಡೆಗೆ ಚಾಚುತ್ತಾ ತನಗೆ ನಿರಾಶೆಯಾದರೂ ಹೇಳಿದ: “ನಾನು ಲೆಫ್ಟಿನೆಂಟ್ ಜಾನ್ ಬ್ಲಾಂಡ್ಫೋರ್ಡ್ ಮತ್ತು ನೀವು...... ? ನೀವು....... ಮಿಸ್ ಮೀನಲ್ ಅಲ್ಲವೆ? ನಿಮ್ಮನ್ನು ಭೇಟಿಯಾದದ್ದು ಬಹಳ ಸಂತೋಷವಾಯಿತು..... ನಿಮ್ಮದೇನೂ ಅಭ್ಯಂತರವಿರದಿದ್ದರೆ ನನ್ನ ಜೊತೆ......ನನ್ನ ಜೊತೆ ಊಟಕ್ಕೆ ಬರುವಿರಾ?” ಅವಳ ಮುಖ ನಗುವಿನಿಂದ ಅರಳಿತು. “ಇದೆಲ್ಲಾ ಏನೆಂದು ನನಗೆ ಗೊತ್ತಿಲ್ಲ ಮಗು” ಎಂದು ಆಶ್ಚರ್ಯಚಕಿತಳಾಗಿ ಹೇಳಿದಳು. “ಇದೀಗ ತಾನೇ ಇಲ್ಲಿಂದ ಹೋದ ತಿಳಿ ಹಸಿರು ಉಡುಗೆ ತೊಟ್ಟಿದ್ದ ಆ ಯುವತಿ ಈ ಗುಲಾಬಿಯನ್ನು ತೊಡುವಂತೆ ವಿನಂತಿಸಿದಳು. ಒಂದುವೇಳೆ ನೀವೇನಾದರೂ ನನ್ನನ್ನು ಊಟಕ್ಕೆ ಕರೆದರೆ ಅವಳು ನಿಮಗಾಗಿ ಮುಂದಿನ ರಸ್ತೆಯಲ್ಲಿರುವ ಹೋಟೆಲ್‍ನಲ್ಲಿ ಕಾಯುತ್ತಿರುತ್ತಾಳೆಂದು ಹೇಳಬೇಕೆಂದಳು. ನಾನು ಒಪ್ಪಿದೆ. ಇದೊಂದು ರೀತಿಯ ಪರೀಕ್ಷೆ........ಪ್ರೇಮಪರೀಕ್ಷೆಯೆಂದೂ ಹೇಳಿದಳು. ನನಗೀಗಾಗಲೇ ನಿನ್ನಷ್ಟೆತ್ತರ ಬೆಳೆದಿರುವ ಇಬ್ಬರು ಗಂಡು ಮಕ್ಕಳಿದ್ದಾರೆ. ಅದಕ್ಕೇ ನಾನೂ ಆ ಯುವತಿಯ ಮಾತಿಗೆ ಸಮ್ಮತಿಸಿದೆ.” ಎಂದು ನಗುತ್ತಾ ಅಲ್ಲಿಂದ ತೆರಳಿದಳು.

    ಲೆಫ್ಟಿನೆಂಟ್ ಬ್ಲಾಂಡ್ಫೋರ್ಡ್ ಖುಶಿಯಿಂದ ಆ ಹೋಟೆಲ್‍ನತ್ತ ಹೆಜ್ಜೆ ಹಾಕತೊಡಗಿದ.
    ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್
    ಕನ್ನಡಕ್ಕೆ: ಉದಯ್ ಇಟಗಿ

    ಈ ಕಥೆ ಇವತ್ತಿನ ಅಂದರೆ ಅಕ್ಟೋಬರ್  14, 2012 ರ “ಉದಯವಾಣಿ” ಯಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ; http://www.udayavani.com/news/199761L15-ಈ-ಸ-ಜ--ಪ-ರ-ತ-ಯ-ಡನ-.html

    ಬೆಳಗಿನ ಹತ್ತು ಘಂಟೆ

  • ಬುಧವಾರ, ಜುಲೈ 25, 2012
  • ಬಿಸಿಲ ಹನಿ
  • ದಿನಾಲೂ ಬೆಳಿಗ್ಗೆ ಹತ್ತು ಘಂಟೆಗೆ
    ಅವವೇ ಸಂಗತಿಗಳು ಅವವೇ ವಿಷ್ಯಗಳು
    ಎಲ್ಲಕಡೆ ನಡೆಯುತ್ತಿರುತ್ತವೆ
    ಅದೇ ಜನ ಅದೇ ಕೆಲಸ
    ಅದೇ ರಸ್ತೆ ಅದೇ ನಿಲ್ದಾಣ
    ಅದೇ ಓಟ ಅದೇ ಟ್ರ‍ಾಫಿಕ್ ಜಾಮ್
    ಅದೇ ಗದ್ದಲ ಅದೇ ನೂಕುನುಗ್ಗಲು
    ಅದೇ ದಾವಂತ ಅದೇ ನಿಟ್ಟುಸಿರು!

    ದಿನಾಲೂ ಬೆಳಿಗ್ಗೆ ಹತ್ತು ಘಂಟೆಗೆ
    ತಮ್ಮ ಹೆಂಡತಿ-ಮಕ್ಕಳನ್ನು ಮನೆಯಲ್ಲಿ ಬಿಟ್ಟು
    ಕೆಲಸಕ್ಕೆ ಹೊರಹೋಗುವ ಗಂಡಸರು
    ಸಾಯಂಕಾಲದಷ್ಟೊತ್ತಿಗೆ ಸೋತು ಸುಣ್ಣವಾಗಿ
    ಬಾಡಿದ ಮುಖವನ್ಹೊತ್ತು ಮನೆಗೆ ಹಿಂದಿರುಗುತ್ತಾರೆ.
    ಆದರೂ ಅವರು ಹೇಳುತ್ತಾರೆ
    ಈ ಬದುಕೊಂದು ಕಲೆ
    ಇಲ್ಲಿ ಪ್ರತಿಯೊಬ್ಬ ಮನುಷ್ಯನೂ ಕಲೆಗಾರೆನೇ!
    ಆದರೆ ಅವರು ಬದುಕನ್ನು ಕಲೆಯಾಗಿಸಿ ಬದುಕುವದಿಲ್ಲ
    ಬದಲಿಗೆ ತಮಗೆ ತಿಳಿದಂತೆ ಬದುಕುತ್ತಾರೆ
    ಮತ್ತು ತಾವು ಬದುಕುವ ರೀತಿಗೆ
    ತಂತಮ್ಮದೇ ವ್ಯಾಖ್ಯಾನವನ್ನು ನೀಡುತ್ತಾರೆ.

    ಒಮ್ಮೊಮ್ಮೆ ಸಂಜೆಹೊತ್ತು
    ನಾನು ಮನೆಗೆ ಮರಳಿದಾಗ
    ಅಕರಾಳವಿಕರಾಳವಾಗಿ
    ಮಿಂಚುಗುಡುಗುಗಳಂತೆ ಆರ್ಭಟಿಸುತ್ತಾ
    ನನ್ನ ಹೃದಯವನ್ನು ನಾನೇ ಹಿಂಡಿಕೊಳ್ಳುತ್ತೇನೆ.
    ತಕ್ಷಣ ಕೆಲವು ಮನುಷ್ಯಾಕೃತಿಗಳು ನೆಲದಿಂದೆದ್ದು
    ತಮ್ಮಷ್ಟಕ್ಕೆ ತಾವೇ ಕೇಕೆಹಾಕಿ ಕುಣಿಯತೊಡಗುತ್ತವೆ.

    ಮೂಲ ಇಂಗ್ಲೀಷ್: ಕುನ್ವರ್ ನಾರಾಯಣ್
    ಭಾವಾನುವಾದ: ಉದಯ್ ಇಟಗಿ

    ಲಿಬಿಯಾದ ಚುನಾವಣೆಗಳೂ..........ನೇಪಥ್ಯಕ್ಕೆ ಸರಿದುಹೋದ ಗಡಾಫಿಯೂ.........

  • ಸೋಮವಾರ, ಜುಲೈ 16, 2012
  • ಬಿಸಿಲ ಹನಿ
  • ಲಿಬಿಯಾದಲ್ಲಿ ಕ್ರಾಂತಿಯೆದ್ದ ದಿನದಿಂದ ಹಿಡಿದು ಅದು ಮುಗಿದಾದ ಮೇಲೂ ನಾನು ಆಗಾಗ ನನ್ನ ಬ್ಲಾಗಿನಲ್ಲಿ ಗಡಾಫಿ ಬಗ್ಗೆ, ಆತ ಇಲ್ಲಿಯ ಜನಕ್ಕೆ ಕೊಟ್ಟ ಸೌಲತ್ತುಗಳ ಬಗ್ಗೆ, ಇಲ್ಲಿಯ ಕ್ರಾಂತಿಯ ಹಿಂದಿನ ಕೈವಾಡದ ಬಗ್ಗೆ, ಆತನ ದುರಂತ ಸಾವಿನ ಬಗ್ಗೆ, ಇಲ್ಲಿಯವರು ಆತನನ್ನು ಮಿಸ್ ಮಾಡಿಕೊಂಡಿರುವದರ ಬಗ್ಗೆ, ಆತನಿಲ್ಲದ ಲಿಬಿಯಾದ ಬಗ್ಗೆ ಹಾಗೂ ಇಲ್ಲಿನ ಸಣ್ಣಪುಟ್ಟ ಗಲಭೆಗಳ ಬಗ್ಗೆ ಕಾಲಕಾಲಕ್ಕೆ ನಾ ಪ್ರತ್ಯಕ್ಷ ಕಂಡಂತೆ ನಿಮಗೆ ವರದಿ ಮಾಡಿದ್ದೇನೆ. ಈಗ ಅಂಥದೇ ಮತ್ತೊಂದು ವಿಷಯವನ್ನು ಆದರೆ ಈ ಮೇಲಿನ ವಿಷಯಗಳಿಗೆ ತದ್ವಿರುದ್ಧವಾದ ಸುದ್ದಿಯೊಂದನ್ನು ವರದಿ ಮಾಡಲು ಹೊರಟಿದ್ದೇನೆ. ಹೊಸನೀರು ಹರಿದು ಬಂದಂತೆ ಹಳೆನೀರು ಕೊಚ್ಚಿಹೋಗುವದು ಸಹಜ. ಅಂತೆಯೇ ಹಂಗಾಮಿ ಸರಕಾರದ “ದೈತ್ಯ ಶಕ್ತಿ”ಯ ಮುಂದೆ ಹಳೆ ಸರಕಾರದ ರೀತಿ ರಿವಾಜುಗಳು ಮತ್ತು ಬೆಂಬಲಿಗರು ಹೇಗೆ ತೆರೆಮರೆಯ ಹಿಂದೆ ಸರಿಯುತ್ತಿದ್ದಾರೆ ಹಾಗೂ ಮೊನ್ನೆ ಮೊನ್ನೆಯವರೆಗೂ ಗಡಾಫಿಯನ್ನು ಕೊಂಡಾಡುತ್ತಿದ್ದ ಜನ ಈಗ ಹೇಗೆ ಕ್ರಮೇಣ ಅವನನ್ನು ಮರೆತು ಹೊಸ ಬದುಕಿನತ್ತ ಮುಖ ಮಾಡುತ್ತಿದ್ದಾರೆ ಎನ್ನುವದನ್ನು ಹೇಳಲು ಹೊರಟಿದ್ದೇನೆ.

    ನಿಮಗೆಲ್ಲಾ ಗೊತ್ತಿರುವಂತೆ ಮೊನ್ನೆ ಅಂದರೆ ಜುಲೈ ೭ ರಂದು ಲಿಬಿಯಾದಲ್ಲಿ ಪ್ರಜಾಪ್ರಭುತ್ವ ರಾಜ್ಯ ಸ್ಥಾಪನೆಗಾಗಿ ಏಕಕಾಲಕ್ಕೆ ಎಲ್ಲ ಭಾಗದಲ್ಲಿ ಸಾಕಷ್ಟು ಗಲಾಟೆ, ಗದ್ದಲ, ಪ್ರತಿಭಟನೆ, ವಿರೋಧಗಳ ನಡುವೆಯೇ ಚುನಾವಣೆಗಳು ನಡೆದು ಹೊಸ ಇತಿಹಾಸ ಸೃಷ್ಟಿಸಿದವು. ಮಾತ್ರವಲ್ಲ ಸುಮಾರು ಐವತ್ತು ವರ್ಷಗಳ ನಂತರ ನಡೆದ ಚುನಾವಣೆ ಎಂಬ ಹೆಗ್ಗಳಿಕೆಗೂ ಪಾತ್ರವಾದವು. ಹಾಗೆ ನೋಡಿದರೆ ಇದು ಲಿಬಿಯಾದ ಎರಡನೆ ಚುನಾವಣೆ. ಮೊಟ್ಟ ಮೊದಲನೆಯ ಚುನಾವಣೆ ನಡೆದಿದ್ದು ಫ಼ೆಬ್ರುವರಿ ೧೯, ೧೯೫೨ರಂದು. ಲಿಬಿಯಾ ಆಗಷ್ಟೆ ಇಟ್ಯಾಲಿಯನ್ನರ ದಾಸ್ಯದಿಂದ ಬಿಡುಗಡೆಹೊಂದಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ಮೂಲಕ ಸ್ವಾತಂತ್ರ್ಯವನ್ನು ಗಳಿಸಿಕೊಂಡಿತ್ತು. ಅಷ್ಟೇ ಅಲ್ಲ ಯೂರೋಪಿಯನ್ನರ ದಾಸ್ಯದಿಂದ ಮುಕ್ತಿಹೊಂದಿದ ಆಫ್ರಿಕಾ ಖಂಡದ ಮೊಟ್ಟಮೊದಲ ದೇಶವೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆಗಿನ ದೊರೆ ಮೊದಲನೇ ಇದ್ರಿಸ್ ವಿಶ್ವಸಂಸ್ಥೆಯ ಜೊತೆ ಲಿಬಿಯಾದ ಸಂಧಾನುಕಾರನಾಗಿದ್ದುಕೊಂಡು ಆ ದೇಶಕ್ಕೆ ಸ್ವಾತಂತ್ರ್ಯವನ್ನು (ಡಿಸೆಂಬರ್ ೨೪, ೧೯೫೧ರಂದು) ದಕ್ಕಿಸಿಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ. ಹೀಗೆ ಪರಕೀಯರಿಂದ ಬಿಡುಗಡೆ ಹೊಂದಿದ ದೇಶಕ್ಕೆ ಹೊಸ ಸರಕಾರವೊಂದನ್ನು ಸ್ಥಾಪಿಸುವ ಹುಕಿಯಿತ್ತು. ಅದು ಪ್ರಜಾಪ್ರಭುತ್ವದ ರೀತಿಯಲ್ಲಿದ್ದರೆ ಸರಿಯೆಂದುಕೊಂಡು ಎಲ್ಲ ಸೇರಿ ದೇಶದ ತುಂಬಾ ಫೆಬ್ರುವರಿ ೧೯, ೧೯೫೨ರಂದು ಮೊದಲ ಸಾರ್ವತ್ರಿಕ ಚುನಾವಣೆ ನಡೆಸಿದರು. ಇಪ್ಪತ್ತೊಂದರ ಮೇಲ್ಪಟ್ಟ ಎಲ್ಲ ನಾಗರಿಕರಿಕೆ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿತ್ತು. ಆದರೆ ಕೆಲವು ನಗರ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಕಡೆ ರಹಸ್ಯ ಮತದಾನ ನಡೆಯಲಿಲ್ಲ. ನಗರ ಪ್ರದೇಶಗಳಲ್ಲಿ ಮತಪೆಟ್ಟಿಗೆಯಲ್ಲಿ ಮತವನ್ನು ಹಾಕಿದರೆ ಹಳ್ಳಿಗಳಲ್ಲಿ ಮತದಾರರು ಯಾರಿಗೆ ತಮ್ಮ ಬೆಂಬಲವನ್ನು ಸೂಚಿಸುತ್ತಾರೆ ಎನ್ನುವ ಹೇಳಿಕೆಯನ್ನು ಕಮಿಟಿಯ ಮುಂದೆ ಧ್ವನಿಮುದ್ರಿಸಲಾಯಿತು.

    ೧೯೫೨ರಲ್ಲಿ ನಡೆದ ಚುನಾವಣೆಯ ಒಂದು ಚಿತ್ರ
    ಆಗ ಅಲ್ಲಿ ಮುಖ್ಯವಾಗಿ ಎರಡು ಗುಂಪುಗಳಿದ್ದವು. ಒಂದು ಪ್ರಧಾನಮಂತ್ರಿ ಮೌಹಮ್ಮದ್ ಆಲ್ ಮುಂತಾಷಿರ್ ನನ್ನು ಬೆಂಬಲಿಸುವ ಗುಂಪು. ಇನ್ನೊಂದು ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಬಶಿರ್ ಬೇ ಸಾದವಿಯನ್ನು ಬೆಂಬಲಿಸುವ ಗುಂಪು. ಚುನಾವಣೆಯಲ್ಲಿ ಒಟ್ಟು ೧೪೧ ಅಬ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ ಹೆಚ್ಚಿನವರು ಸ್ವತಂತ್ರ ಅಬ್ಯರ್ಥಿಗಳು. ಫಲಿತಾಂಶ ಹೊರಬಂದಾಗ ಕಾಗ್ರೆಸ್ ಪಕ್ಷ ಟ್ರಿಪೋಲಿಯಲ್ಲಿ ಗೆದ್ದಿತ್ತು. ಆದರೆ ಬಹಳಷ್ಟು ಸೀಟುಗಳನ್ನು ಪ್ರಧಾನಮಂತ್ರಿ ಮೌಹಮ್ಮದ್ ಆಲ್ ಮುಂತಾಷಿರ್ ಬಾಚಿಕೊಂಡಿದ್ದ. ಅಲ್ಲಿಗೆ ಚುನಾವಣೆಯಲ್ಲಿ ಆಗಿನ ಪ್ರಧಾನಮಂತ್ರಿ ಅವ್ಯವಹಾರ ನಡೆಸಿದ್ದಾರೆ ಎಂದು ಆಪಾದಿಸಿ ವಿರೋಧ ಪಕ್ಷದ ಪಡೆ ಹೋರಾಟಕ್ಕೆ ಇಳಿಯಿತು. ನೋಡನೋಡುತ್ತಿದ್ದಂತೆ ಹೋರಾಟ ಹಿಂಸೆಗೆ ತಿರುಗಿ ಘಟನೆಯಲ್ಲಿ ಒಂದಿಬ್ಬರು ಸತ್ತು ಸಾಕಷ್ಟು ಜನ ಗಾಯಗೊಂಡರು. ಈ ಘಟನೆ ಇಡಿ ಚುನಾವಣೆ ಪ್ರಕ್ರಿಯೆಯ ಮೇಲೆ ಒಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿತು. ಈ ಕಾರಣಕ್ಕಾಗಿ ಆಗಷ್ಟೆ ಮುಗಿದ ಚುನಾವಣೆಯನ್ನು ರದ್ದುಪಡಿಸಿ ಎಲ್ಲ ರಾಜಕೀಯ ಪಕ್ಷಗಳನ್ನು ನಿಷೇಧಿಸಲಾಯಿತು. ಮುಂದೆ ಲಿಬಿಯಾಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ ಒಂದನೇಯ ಇದ್ರಿಸ್‍ನಿಗೆ ಅಧಿಕಾರವನ್ನು ವಹಿಸುವದರ ಮೂಲಕ ಅವನನ್ನು ಸ್ವತಂತ್ರ ಲಿಬಿಯಾದ ಮೊಟ್ಟಮೊದಲ ಅರಸನನ್ನಾಗಿ ಮಾಡಿದರು. ಆದರೆ 1969ರಲ್ಲಿ ಈತ ಚಿಕಿತ್ಸೆ ಪಡೆಯಲು ಟರ್ಕಿಗೆ ಹೋಗಿದ್ದಾಗ ಗಡಾಫಿ ಈ ರಾಜಕುಮಾರನನ್ನು ಅರಸೊತ್ತಿಗೆಯಿಂದ ಕಿತ್ತೆಸೆದು ಅದನ್ನು ತನ್ನ ಕೈವಶ ಮಾಡಿಕೊಂಡ. ಹೀಗೆ ಒಂದು ರಕ್ತರಹಿತ ಕ್ರಾಂತಿಯೊಂದರ ಮೂಲಕ ಲಿಬಿಯಾ ಸಪ್ಟೆಂಬರ್ ೧, ೧೯೬೯ರಂದು ಅರಸನೆಂದು ಹೇಳಿಕೊಳ್ಳದ ಮತ್ತೊಬ್ಬ ಅರಸ ಮೌಮರ್ ಗಡಾಫಿಯ ಕೈವಶವಾಯಿತು. ಆತ ಲಿಬಿಯಾದಲ್ಲಿ ನಲವತ್ತೆರೆಡು ವರ್ಷಗಳ ಕಾಲ ಆಳ್ವಿಕೆ ನಡೆಸಿ ಕೊನೆಗೆ ಹೇಳಹೆಸರಿಲ್ಲದಂತೆ ನಾಶವಾಗಿಹೋಗಿದ್ದು ಈಗ ಇತಿಹಾಸ.

    ಚುನಾವಣೆ ಅಂದ ಮೇಲೆ ಗದ್ದಲ, ಗಲಾಟೆಗಳಿರುವದು ಸರ್ವೇ ಸಾಮಾನ್ಯ. ಇನ್ನು ಲಿಬಿಯಾದ ಚುನುವಾಣೆಯ ಬಗ್ಗೆ ಕೇಳಬೇಕೆ? ಅಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆಯಲ್ಲಿ ಕೊನೆಯಾಗಿ ಎಲ್ಲ ತಣ್ಣಗಾಗಿದ್ದರೂ ಪರಿಸ್ಥಿತಿ ಮಾತ್ರ ಬೂದಿಮುಚ್ಚಿದ ಕೆಂಡದಂತಿತ್ತು. ಇಲ್ಲಿ ಗಡಾಫಿಗೆ ಸಾಕಷ್ಟುಜನ ಬೆಂಬಲಿಗರಿರುವದರಿಂದ ಅವರ ಮಧ್ಯ ಮತ್ತು ಹಂಗಾಮಿ ಸರಕಾರ NTC ಯ ಮಧ್ಯ ಆಗಾಗ ಘರ್ಷಣೆಗಳೇರ್ಪಡುತ್ತಿದ್ದವು. ಅವರನ್ನು ಹತ್ತಿಕ್ಕಲು ಸರಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೂ ಚುನಾವಣೆಯ ಹಿಂದಿನ ದಿನದವರೆಗೂ ಆಗಾಗ ಅಲ್ಲಲ್ಲಿ ಏನಾದರೊಂದು ಕೆಟ್ಟಘಟನೆ ಜರಗುತ್ತಲಿತ್ತು. ಇದಕ್ಕೆ ಬೇರೆಬೇರೆ ಕಾರಣಗಳಿದ್ದರೂ ಚುನಾವಣೆಗೆ ಸಂಬಂಧಪಟ್ಟಹಾಗೆ ಹೇಳಬೇಕೆಂದರೆ ಗಡಾಫಿ ಬೆಂಬಲಿಗರಿಗೆ ಮತ್ತು ಆತನ ಅಧಿಕಾರದ ಅವಧಿಯಲ್ಲಿದ್ದ ಅಧಿಕಾರಿಗಳಿಗೆ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡದೆ ಇದ್ದುದಕ್ಕಾಗಿ ಅವರೆಲ್ಲಾ ಬೀದಿಗಿಳಿದು ಪ್ರತಿಭಟಿಸಿದ್ದರು. ಇನ್ನು ಬೆಂಗಾಜಿಯ ಪೂರ್ವಭಾಗದ ಜನ ನಮ್ಮದು ದೊಡ್ಡ ಕ್ಷೇತ್ರವಾಗಿದ್ದರಿಂದ ಹೆಚ್ಚು ಟಿಕೇಟುಗಳನ್ನು ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಗಿಳಿದಿದ್ದರು. ಅವರು ಕೇಳಿದಷ್ಟು ಟಿಕೇಟುಗಳು ಸಿಗದೆ ಹೋದಾಗ ನೇರವಾಗಿ ಚುನಾವಣಾ ಕಮಿಷನರ್ ಕಛೇರಿಗೆ ದಾಳಿಯಿಟ್ಟು ಅಲ್ಲಿಯ ಸಾಮಗ್ರಿಗಳನ್ನು ಧ್ವಂಸಗೊಳಿಸಿದ್ದರು. ಇನ್ನು ಕೆಲವರು ಮೊದಲು ಸಂವಿಧಾನ ರಚನೆಯಾಗಲಿ ನಂತರ ಚುನಾವಣೆ ನಡೆಯಲಿ. ಸಂವಿಧಾನವೇ ಇಲ್ಲದ ಮೆಲೆ ಅದ್ಹೇಗೆ ಚುನಾವಣೆಗಳನ್ನು ನಡೆಸುತ್ತೀರಿ? ಎಂದು ವಿರೋಧ ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಬೆದರಿಕೆ ಹಾಕಿದರು. ಚುನಾವಣೆಯ ಹಿಂದಿನ ದಿವಸ ಪೂರ್ವ ಬೆಂಗಾಜಿಯಲ್ಲಿ ಚುನಾವಣಾ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಮೇಲೆ ದಾಳಿ ನಡೆದಿದೆ. ಆದರೆ ಘಟನೆಯಲ್ಲಿ ಯಾರಿಗೂ ಏನೂ ಆಗಲಿಲ್ಲ. ಇದಲ್ಲದೆ ಬೆಂಗಾಜಿಯ ಮೆಡಿಕಲ್ ಕಾಲೇಜಿನ ಮೇಲೆಯೂ ಸಹ ದಾಳಿ ನಡೆದಿದೆ. ಈ ಎಲ್ಲದರ ಮಧ್ಯ ಸಾಕಷ್ಟು ಬಿಗಿಭದ್ರತೆಗಳ ನಡುವೆ ಹಂಗಾಮಿ ಸರಕಾರ ಚುನಾವಣೆಗಳನ್ನು ಜುಲೈ ೭, ೨೦೧೨ರಂದು ಒಟ್ಟು ೭೨ ಕ್ಷೇತ್ರಗಳಲ್ಲಿ ನಡಿಸಿತು. ಆ ಪೈಕಿ ೧೨೦ ಸ್ವತಂತ್ರ ಅಬ್ಯರ್ಥಿಗಳು ಹಾಗೂ ೮೦ ಬೇರೆಬೇರೆ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದರು. ಮತದಾನ ನಡೆದಿದ್ದು ಬೆಳಿಗ್ಗೆ ೮ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ. ಇದಲ್ಲದೆ ಬಹಳಷ್ಟು ಲಿಬಿಯನ್ ನಾಗರಿಕರು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ, ಆಸ್ಟ್ರೇಲಿಯಾ, ಕೆನಡಾ, ಜೋರ್ಡಾನ್, ಬ್ರಿಟನ್‍ನಲ್ಲಿ ನೆಲಿಸಿದ್ದರಿಂದ ಅಲ್ಲೆಲ್ಲಾ ಮತಗಟ್ಟೆಗಳನ್ನು ಆರಂಭಿಸಿದ್ದರು. ಅವರಿಗೆಲ್ಲಾ ಒಂದು ವಾರದಷ್ಟು ಕಾಲದ ಗಡುವನ್ನು ಕೊಟ್ಟು ಬೆಳಿಗ್ಗೆ ೯ರಿಂದ ಸಂಜೆ ೫ರ ಒಳಗೆ ಒಂದು ವಾರದ ಅವಧಿಯಲ್ಲಿ ಯಾವಾಗಬೇಕಾದರು ಬಂದು ಮತಹಾಕಲು ಅನುಕೂಲಮಾಡಿಕೊಟ್ಟಿದ್ದರು.

    ಚುನಾವಣೆ ಸಿದ್ಧತೆಯ ಮುಂಚೆ ತೆಗೆದ ಮತಪೆಟ್ಟಿಗೆಯ ಚಿತ್ರ
    ಅಂದು ಸುಮಾರು ಅರ್ಧ ಶತಮಾನದ ನಂತರ ಲಿಬಿಯಾ ಚುನಾವಣೆಯನ್ನು ನಡೆಸಿ ಒಂದು ಹೊಸ ಇತಿಹಾಸವನ್ನು ಬರೆಯಿತು. ಬಹಳಷ್ಟು ಜನಕ್ಕೆ ಇದೇ ಮೊದಲ ಚುನಾವಣೆಯಾಗಿತ್ತು. ಮತಗಟ್ಟೆಯ ಒಳಕ್ಕೆ ಹೋಗುವ ಮುನ್ನ ಮತದಾರರನ್ನು ಸಾಕಷ್ಟು ಸೆಕ್ಯೂರಿಟಿ ತಪಾಸಣೆಗೆ ಒಳಪಡಿಸಿ ಒಳಗೆ ಕಳಿಸಲಾಗುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಪ್ರತಿ ಮತಗಟ್ಟೆಯಲ್ಲಿ ಸಾಕಷ್ಟು ಜನ ಪೋಲಿಷರನ್ನು ನೇಮಿಸಲಾಗಿತ್ತು. ಹೀಗಿದ್ದೂ ಮತದಾನ ಭಯ, ಆತಂಕಗಳ ನಡುವೆಯೇ ಆರಂಭವಾಯಿತು. ಕೆಲವರು ಉತ್ಸಾಹದಿಂದ ಭಾಗವಹಿಸಿದರೆ, ಇನ್ನು ಕೆಲವರು ಅರೆಮನಸ್ಸಿನಿಂದ ಭಾಗವಹಿಸಿದರು. ಮತ್ತೆ ಕೆಲವರು ಮೊಟ್ಟಮೊದಲಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವದಕ್ಕೋಸ್ಕರ ಭಾಗವಹಿಸಿದರು. ಇದೀಗ ಎಣಿಕೆಯೆಲ್ಲಾ ಮುಗಿದು ಫಲಿತಾಂಶ ಹೊರಬಂದಿದ್ದು National Forces Alliance (NFA) ಬಹುಮತಗಳಿಸಿರುವದು ಬಹುತೇಕ ಖಚಿತವಾಗಿದೆ. ಲಿಬಿಯಾ ಪ್ರಜಾಪ್ರಭುತ್ವ ಸರಕಾರ ರಚನೆಗಾಗಿ ಉತ್ಸಾಹದಿಂದ ಮುನ್ನುಗ್ಗುತ್ತಿದೆ.

    ಲಿಬಿಯಾದಲ್ಲಿ ಎದ್ದ ಕ್ರಾಂತಿ ತಣ್ಣಗಾದ ಮೇಲೆ ಈಗ್ಗೆ ಆರು ತಿಂಗಳ ಹಿಂದೆ ನಾನು ಮತ್ತೆ ನಮ್ಮ ವಿಶ್ವವಿದ್ಯಾನಿಲಯದ ಕರೆಯ ಮೇರೆಗೆ ನನ್ನ ಕೆಲಸಕ್ಕೆ ಬಂದು ಹಾಜರಾಗಿದ್ದೆ. ಆ ಪ್ರಕಾರ ನಾನಿಲ್ಲಿಗೆ ಬಂದಿಳಿದಾಗ ಒಬ್ಬ ಬಲಿಷ್ಠ ಸರ್ವಾಧಿಕಾರಿಯನ್ನು ಹೇಳಹೆಸರಿಲ್ಲದಂತೆ ನಾಶಮಾಡಿದ ಹೆಮ್ಮೆ ಈ ಜನರಲ್ಲಿರುತ್ತದೆ, ಹೊಸ ಗಾಳಿ ಬೀಸುತ್ತಿರುತ್ತದೆ. ಹೊಸ ಕನಸುಗಳು, ಹೊಸ ಚಿಂತನೆಗಳಿಗಾಗಿ ಜನರು ತುಡಿಯುತ್ತಿರುತ್ತಾರೆಂದುಕೊಂಡು ಬಂದೆ. ಆದರೆ ಇಲ್ಲಿಗೆ ಬಂದ ಮೇಲೆ ಈ ವಿಷಯದ ಕುರಿತಂತೆ ನಾನು ಒಮ್ಮೆ ಸುಮ್ಮನೆ ಇಲ್ಲಿಯವರನ್ನು ಮಾತನಾಡಿಸುತ್ತಾ ಹೋದೆ. ಆಗ ನನಗೆ ಸಿಕ್ಕ ಚಿತ್ರಣ ಅಚ್ಚರಿಯನ್ನು ಮೂಡಿಸಿತ್ತು. ಅವರು ಹೇಳಿದ್ದು ಹೀಗಿತ್ತು: “ಈ ಕ್ರಾಂತಿಯ ಹಿಂದೆ ಅಮೆರಿಕಾದವರ ಕೈವಾಡವಿದೆ. ಅವರಿಗೆ ಮುಂಚಿನಿಂದಲೂ ಗಡಾಫಿ ತಮಗೇ ಸೆಡ್ದು ಹೊಡೆದು ನಿಲ್ಲುತ್ತಾನೆ ಎಂಬ ಕಾರಣಕ್ಕೆ ಆತನ ಮೇಲೆ ತೀವ್ರವಾದ ದ್ವೇಷವಿತ್ತು ಮತ್ತು ಇಲ್ಲಿಯ ತೈಲಸಂಪತ್ತಿನ ಮೇಲೆ ಕೂಡ ಅವರ ಕಣ್ಣಿತ್ತು. ಹೀಗಾಗಿ ಅವನನ್ನು ಮುಗಿಸಿದರು. ಶೀಘ್ರದಲ್ಲಿಯೇ ಆತ ಜಾರಿಗೆ ತರಲಿದ್ದ ಆತನ ಕೆಲವು ಮಹತ್ತರ ಯೋಜನೆಗಳು ಅವರ ಆರ್ಥಿಕ ಸ್ಥಿತಿಗೆ ಮುಳುವಾಗಲಿದ್ದವು. ಮೇಲಾಗಿ ಗಡಾಫಿ ಇಡಿ ಆಫ್ರಿಕಾ ಖಂಡದ ರಾಷ್ಟ್ರಗಳನ್ನು ಒಗ್ಗೂಡಿಸಿ “ಯುನೈಟೆಡ್ ನೇಶನ್ಸ್ ಆಫ್ ಆಫ್ರಿಕಾ” ಆಗಿ ಪರಿವರ್ತಿಸುವ ಗುರಿಯನ್ನು ಹೊಂದಿದ್ದ. ಒಂದುವೇಳೆ ಆಫ್ರಿಕಾ ಖಂಡದ ಎಲ್ಲ ರಾಷ್ಟ್ರಗಳು ಒಗ್ಗೂಡಿದ್ದರೆ ಎಲ್ಲ ರೀತಿಯಿಂದ ಅಮೆರಿಕಾಕ್ಕೆ ಭಾರಿ ಹೊಡೆತ ಬೀಳುತ್ತಿತ್ತು. ಗಡಾಫಿ, ಟ್ರಿಪೋಲಿಯ ಹಡುಗು ನಿಲ್ದಾಣದ ಮೂಲಕ ವಿವಿಧ ವ್ಯಾಪಾರ-ಸರಕುಗಳನ್ನು ಹೊತ್ತು ಯೂರೋಪಿನ ಮಾರುಕಟ್ಟೆಯತ್ತ ಸಾಗುವ ಹಡುಗಗಳನ್ನು ಇಲ್ಲೇ ನಿಲ್ಲಿಸಿ ಆ ಎಲ್ಲ ಸರಕುಗಳು ತಾನು ಶೀಘ್ರವಾಗಿ ಸ್ಥಾಪಿಸಲಿದ್ದ ಟ್ರಿಪೋಲಿ ಮುಕ್ತ-ಮಾರುಕಟ್ಟೆಯಲ್ಲಿ ಮಾರಾಟವಾಗುವಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದ. ಇದರಿಂದ ಅಮೆರಿಕಾಕ್ಕೆ ಮತ್ತು ಐರೋಪ್ಯ ರಾಷ್ಟ್ರಗಳ ಆರ್ಥಿಕತೆಗೆ ಭಾರಿ ನಷ್ಟವುಂಟಾಗಲಿತ್ತು. ಇದು ಹೀಗೆಯೇ ಮುಂದುವರೆದಿದ್ದರೆ ಅಮೆರಿಕಾಕ್ಕೆ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಅವನೊಬ್ಬ ದೊಡ್ಡ ಥ್ರೆಟ್ ಆಗಿ ಉಳಿಯಲಿದ್ದ. ಹೀಗಾಗಿ ಅವನನ್ನು ಹೇಗಾದರು ಮಾಡಿ ಮುಗಿಸಿಬಿಟ್ಟರೆ ತಮಗಿನ್ನು ಯಾವ ಭಯವೂ ಇರುವದಿಲ್ಲವೆಂದು ನ್ಯಾಟೋ ಅವನನ್ನು ಮುಗಿಸಿಬಿಟ್ಟಿತು.” ಎಂದು ನಿಟ್ಟುಸಿರಿಟ್ಟಿದ್ದರು. “ಅಯ್ಯೋ, ನ್ಯಾಟೋದವರೆಲ್ಲಿ ಸಾಯಿಸಿದ್ದು? ನಿಮ್ಮವರೇ ತಾನೆ ಅವನನ್ನು ಅಟ್ಟಾಡಿಸಿಕೊಂಡು ಹೊಡೆದು ಸಾಯಿಸಿದ್ದು?” ಎಂದು ಕೇಳಿದ್ದೆ. ಅದಕ್ಕವರು ಹುಸಿನಗುತ್ತಾ “ಇದೆಲ್ಲಾ ಪೂರ್ವ ನಿಯೋಜಿತ. ನ್ಯಾಟೋಗೆ ಗಡಾಫಿ ತನ್ನ ಅಡಗುತಾಣಗಳನ್ನು ಬದಲಾಯಿಸುವದು ಗೊತ್ತಿತ್ತು. ಅವನು ಹೀಗೆ ಬದಲಾಯಿಸುತ್ತಿರಬೇಕಾದರೆ ನಾವು ಪತ್ತೆ ಹಚ್ಚಿ ಅವನನ್ನು ನಿಮ್ಮ ಕೈಗೆ ಒಪ್ಪಿಸುತ್ತೇವೆ. ಆಮೇಲೆ ನೀವೇ ಅವನನ್ನು ಸಾಯಿಸಿ ಎಂದು ಉಪಾಯ ಹೇಳಿಕೊಟ್ಟವರೇ ಅವರು. ಆ ಪ್ರಕಾರ ಗಡಾಫಿ ತನ್ನ ತವರು ಪಟ್ಟಣ ಸಿರ್ತ್‍ನಲ್ಲಿ ಅಡಗುತಾಣಗಳನ್ನು ಬದಲಾಯಿಸುತ್ತಿರಬೇಕಾದರೆ ಅವನು ಕುಳಿತಿದ್ದ ಕಾರಿನ ಮೇಲೆ ನ್ಯಾಟೋ ಸಣ್ಣದೊಂದು ಬಾಂಬ್‍ನ್ನು ಹಾಕಿದೆ. ಪ್ರಾಣಭೀತಿಯಿಂದ ಗಡಾಫಿ ಕಾರಿನ ಬಾಗಿಲು ತೆರೆದು ಓಡಿಹೋಗಿ ರಸ್ತೆ ಅಡಿಯ ಸಿಮೆಂಟ್ ಕೊಳವೆಯಲ್ಲಿ ಜೀವರಕ್ಷಣೆಗಾಗಿ ಅಡಗಿಕೊಂಡಿದ್ದಾನೆ. ಅಲ್ಲಿಂದ ಮುಂದೆ ಅವನನ್ನು ಬಂಡುಕೋರರಿಗೆ ಒಪ್ಪಿಸಿ ಸಾಯಿಸಿದರು. ಆ ಮೂಲಕ ಹೊರಜಗತ್ತಿಗೆ ಅವನ ಜನರೇ ಅವನನ್ನು ಹೊಡೆದು ಸಾಯಿಸಿದರು ಎಂಬ ಚಿತ್ರಣವನ್ನು ಕೊಟ್ಟರು. ಗಡಾಫಿ ತಾನು ಇರುವವರಿಗೂ ಲಿಬಿಯಾದ ತೈಲ ಸಂಪತ್ತನ್ನು ಭದ್ರವಾಗಿ ಕಾಯ್ದುಕೊಂಡು ಬಂದ. ಈಗ ಆ ಸಂಪತ್ತೆಲ್ಲಾ ಅಮೆರಿಕಾ ಮತ್ತು ಮಿತ್ರರಾಷ್ಟ್ರಗಳ ಪಾಲಾಗುತ್ತಿದೆ.” ಎಂದು ಕಣ್ಣೀರಿಟ್ಟಿದ್ದರು. ಅಂತೆಯೇ ನಮಗೆ ಗೊತ್ತಿರದ ಇನ್ನೊಂದು ಸತ್ಯವನ್ನು ಹೇಳಿ ಬೆಚ್ಚೆಬೀಳಿಸಿದ್ದರು. ಅದೇನೆಂದರೆ ಈ ಅಮೆರಿಕನ್ನರಿಗೆ ಮತ್ತು ಮಿತ್ರರಾಷ್ಟ್ರಗಳಿಗೆ ಆಫ್ರಿಕಾ ಖಂಡದ ಮೂರು ಬಲಿಷ್ಠ ಸರ್ವಾಧಿಕಾರಿಗಳು ಎಲ್ಲ ರೀತಿಯಿಂದ ಮುಳುವಾಗಿದ್ದರು. ಅವರನ್ನು ಹೇಗಾದರು ಮಾಡಿ ಕಿತ್ತೊಗೆಯಲೇಬೇಕೆಂದು ತೀರ್ಮಾನಿಸಿ ಒಬ್ಬೊಬ್ಬರನ್ನಾಗಿ ಮುಗಿಸುತ್ತ ಬಂದರು. ಅವರು ಯಾರೆಂದರೆ ಇರಾಕಿನ ಸದ್ದಾಂ ಹುಸೇನ್, ಲಿಬಿಯಾದ ಮೌಮರ್ ಗಡಾಫಿ, ಹಾಗೂ ಸಿರಿಯಾದ ಈಗಿನ ಅಧ್ಯಕ್ಷ ಬಷಾರ್ ಆಲ್-ಅಸಾದ್. ಮೊದಲಿಬ್ಬರನ್ನು ಹೊಡೆದು ಉರುಳಿಸುವಲ್ಲಿ ಯಶಸ್ವಿಯಾದರು. ಈಗ ಮೂರನೆಯವನನ್ನು ಬೇಟೆಯಾಡುತ್ತಿದ್ದಾರೆ. ಹಾಗೆಂದೇ ಅಲ್ಲಿ ಎದ್ದ ಕ್ರಾಂತಿ ಇನ್ನೂ ತಣ್ಣಗಾಗಿಲ್ಲ. ಈ ಮೂವರು ಅಮೆರಿಕಾದವರ ಮಾತಿಗ ಸೊಪ್ಪು ಹಾಕುವದಾಗಲಿ, ಜಗ್ಗುವದಾಗಲಿ ಮಾಡುತ್ತಿರಲಿಲ್ಲ ಹಾಗೂ ಅವರ ಕೆಲವು ಮಹತ್ತರ ಯೋಜನೆಗಳು ಅವರ ಆರ್ಥಿಕ ಅಭಿವೃದ್ಧಿಗೆ ಭಾರಿ ಹಿನ್ನೆಡೆಯುನ್ನುಂಟು ಮಾಡಲಿದ್ದವು. ಈ ಕಾರಣಕ್ಕಾಗಿ ಒಬ್ಬೊಬ್ಬರನ್ನೇ ತೆಗೆಯುತ್ತಾ ಬಂದರು ಎಂದು ಹೇಳುತ್ತಾ ಅಮೆರಿಕಾದವರ ಬಂಡವಾಳ ಬಯಲಿಗಿಟ್ಟಿದ್ದರು.

    ಘಾತ್ ಪ್ರಾಂತ್ಯದಿಂದ ಸ್ಪರ್ಧಿಸಿದ ಸ್ವತಂತ್ರ ಅಬ್ಯರ್ಥಿ
    ಈಗ ಅದೇ ಜನ ಬೇರೆ ದಾಟಯಲ್ಲಿ ಮಾತನಾಡುತ್ತಿದ್ದಾರೆ. ಹೋದವನು ಹೋದ ಇನ್ನು ಮುಂದಿನ ಬದುಕನ್ನು ನಾವು ಬದುಕಬೆಕಲ್ಲ. ಏನು ಮಾಡುವದು? ಸತ್ತವರಿಗಾಗಿ ಎಷ್ಟು ದಿನ ಅಂತಾ ಅಳುತ್ತಾ ಕೂರೋಕಾಗುತ್ತೆ ಎನ್ನುವ ವರಸೆಯಲ್ಲಿ ಮಾತನಾಡುತ್ತಿದ್ದಾರೆ. ವ್ಯಕ್ತಿಗಿಂತ ಬದುಕು ಮುಖ್ಯವಾಗುತ್ತದೆ ಎನ್ನುವದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಕೆಲವರು ಗಡಾಫಿಯ ಆಡಳಿತವನ್ನು ನೆನೆಯುತ್ತಾ ಅಂಥದೇ ಇನ್ನೊಂದು ಬರಲಿ ಎಂದು ಆಶಿಸುತ್ತಿದ್ದಾರೆ. ಇನ್ನು ಕೆಲವರು “Shit ಗಡಾಫಿ! ಅವನ ಕಾಲ ಮುಗಿಯಿತು. ಈಗೇನಿದ್ದರೂ ಹೊಸ ಸರಕಾರ, ಹೊಸ ಆಡಳಿತ, ಎಲ್ಲವೂ ಹೊಸತು” ಎಂದು ಹೇಳುತ್ತಾ ಹೊಸತನಕ್ಕೆ ಮುಖಮಾಡುತ್ತಿದ್ದಾರೆ. ನಾನು ಕ್ರಾಂತಿಯೆಲ್ಲ ಮುಗಿದ ಮೇಲೆ ಮತ್ತೆ ಇಲ್ಲಿಗೆ ಬಂದಿಳಿದ ಹೊಸತರಲ್ಲಿ ಇಲ್ಲಿಯ ಮುಕ್ಕಾಲು ಜನ ಈ ಹೊಸ ಸರಕಾರವನ್ನು ಮಾನಸಿಕವಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಆದರೆ ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ. ಏಕೆಂದರೆ ಅವರಲ್ಲಿ ಬಹುತೇಕರು ಗಡಾಫಿ ಬೆಂಬಲಿಗರಾಗಿದ್ದರು. ಗಡಾಫಿ ಬೆಂಬಲಿಗರೆಂದು ಗೊತ್ತಾದ ತಕ್ಷಣ ಅಂಥವರನ್ನು ಜೈಲಿಗೆ ಅಟ್ಟಲಾಗುತ್ತಿತ್ತು. ಸರಕಾರ ಜನರ ಮೆಲೆ ಒತ್ತಡದ ತಂತ್ರವನ್ನು ಹೇರುವದರ ಮೂಲಕ ಅವರನ್ನು ತನ್ನತ್ತ ಬಗ್ಗಿಸಿಕೊಂಡಿತ್ತು. ಮೊನ್ನೆ ಕೂಡ ಗಡಾಫಿ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿರುವ ಇಲ್ಲಿನ (ಘಾಟ್‍ನ) ಕಾಲೊನಿಯೊಂದಕ್ಕೆ ಎರಡ ತಿಂಗಳ ಕಾಲ ನೀರು ಪೂರೈಸದೆ ಇದ್ದುದರಿಂದ ಅವರೆಲ್ಲಾ ಬೀದಿಗಿಳಿದು ಪ್ರತಿಭಟಿಸಿದ್ದರು. ರಸ್ತೆಯಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಹಂಗಾಮಿ ಸರಕಾರ ಅವರನ್ನು ಹತ್ತಿಕ್ಕಿ ನೀರು ಬಿಡುತ್ತೇವೆ, ನಮ್ಮನ್ನು ಒಪ್ಪಿಕೊಳ್ಳಿ ಎಂದು ಹೆದರಿಸಿತ್ತು. ಇದೀಗ ಅವರು ಹಂಗಾಮಿ ಸರಕಾರಕ್ಕೆ ಜೈ ಹೇಳಿ ಎಲ್ಲವನ್ನೂ ಸುಲಭವಾಗಿಸಿಕೊಂಡಿದ್ದಾರೆ. ಮೊನ್ನೆ ಹಂಗಾಮಿ ಸರಕಾರ ದಕ್ಷಿಣ ಭಾಗದ ಎಲ್ಲ ಸರಕಾರಿ ಕಛೇರಿಗಳಿಗೆ ಗಡಾಫಿಯ ಹೆಸರನ್ನು ಎಲ್ಲೂ ಎತ್ತಕೂಡದು ಹಾಗೆ ಒಂದುವೇಳೆ ಉಪಯೋಗಿಸಿದರೆ ಅಂಥವರನ್ನು ಉಗ್ರವಾಗಿ ಶಿಕ್ಷಿಸಲಾಗುವದು ಎನ್ನುವ ಸುತ್ತೋಲೆಯನ್ನು ಹೊರಡಿಸುವದರ ಮೂಲಕ ಮತ್ತೊಮ್ಮೆ ಎಲ್ಲರನ್ನೂ ಎಚ್ಚರಿಸಿದ್ದರು. ಜೊತೆಗೆ ಚುನಾವಣೆಯ ನಂತರ ಲಿಬಿಯನ್ನರ ಸಂಬಳವನ್ನು ದ್ವಿಗುಣಗೊಳಿಸಲಾಗುತ್ತದೆ ಎನ್ನುವ ಭರವಸೆಯನ್ನೂ ನೀಡೀದ್ದಾರೆ.

    ಘಾತ್ ಪ್ರಾಂತ್ಯದಿಂದ ಸ್ಪರ್ಧಿಸಿದ ಮತ್ತೊಬ್ಬ ಸ್ವತಂತ್ರ ಅಬ್ಯರ್ಥಿ
    ಈಗ ಜನ ಯಾವ ಸರಕಾರ ಬಂದರೇನಂತೆ ನಮಗೆ ಒಳ್ಳೆಯದು ಮಾಡಿದರೆ ಸಾಕು ಎಂದು ನಿಟ್ಟುಸಿರಿಡುತ್ತಿದ್ದಾರೆ. ಅದು ಅವರ ಭಯವೋ? ಪ್ರೀತಿಯೋ? ಅಥವಾ ಬದಲಾವಣೆಯತ್ತ ಹೊಸಹೆಜ್ಜೆಯೋ? ಅಂತೂ ಲಿಬಿಯಾದ ಜನತೆ ಹೊಸತನವನ್ನು ಒಪ್ಪಿಕೊಳ್ಳುತ್ತಾ ಹೊಸದಿಕ್ಕಿನತ್ತ ಹೆಜ್ಜೆಹಾಕುತ್ತಿದ್ದಾರೆ. ಎಲ್ಲರೀತಿಯಿಂದ ಲಿಬಿಯಾಕ್ಕೆ ಹೊಸ ಭವಿಷ್ಯ ಸಿಗುವ ಸ್ಪಷ್ಟ ಚಿಹ್ನೆಗಳು ಗೋಚರಿಸುತ್ತಿವೆ. ಕಾಲಾಯ ತಸ್ಮೇ ನಮಃ!

    -ಉದಯ್ ಇಟಗಿ

    ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು- A hypocrite is a person who-but who isn't?

  • ಭಾನುವಾರ, ಜುಲೈ 01, 2012
  • ಬಿಸಿಲ ಹನಿ
  • “A hypocrite is a person who--but who isn't?” ಹಾಗಂತ ಖ್ಯಾತ ಇಂಗ್ಲೀಷ್ ಲೇಖಕ ಡಾನ್ ಮಾರ್ಕ್ವಿಜ್ ಒಂದು ಕಡೆ ಹೇಳುತ್ತಾನೆ. ಈ ಮಾತು ಪ್ರತಿಯೊಬ್ಬ ಮನುಷ್ಯನ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಅಂದರೆ ನಾವೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಆಷಾಡಭೂತಿಗಳೇ! ಸದಾ ನಮ್ಮ ಅನುಕೂಲಕ್ಕೆ, ನಮ್ಮ ಸೌಕರ್ಯಕ್ಕೆ ತಕ್ಕಂತೆ ಒಳಗೊಂದು ಹೊರಗೊಂದರಂತೆ ಬದುಕುವವರು! ಹೀಗಿದ್ದೂ ನಾವು ಆಗಾಗ ಸಭ್ಯರಂತೆ, ಪ್ರಾಮಾಣಿಕರಂತೆ, ಯೋಗ್ಯರಂತೆ ಮುಖವಾಡ ಹಾಕಿಕೊಳ್ಳಲು ಪ್ರಯತ್ನಿಸುತ್ತೆವೆ. ಆದರೆ ಬೇರೆಯವರನ್ನು ಮಾತ್ರ hypocrite ಅಂತ ಕರೆಯುತ್ತಲೇ ಇರುತ್ತೇವೆ.

    ಮೊನ್ನೆ ಏನಾಯಿತೆಂದರೆ ಸ್ನೇಹಿತನೊಬ್ಬ ನನ್ನ ಮನೆಗೆ ಬಂದಿದ್ದ. ಬರುವಾಗ ಆತ ಅರೆಬೆತ್ತಲೆ ಮಾಡೆಲ್‍ಗಳು ಇರುವ ಮಾಡೆಲಿಂಗ್ ಕ್ಯಾಲೆಂಡೆರೊಂದನ್ನು ನನಗೆ ತಂದುಕೊಟ್ಟ. ನಾವಿಬ್ಬರೂ ಕುಳಿತು ಬಿಕನಿ ತೊಟ್ಟ ಆ ಮಾಡೆಲ್‍ಗಳ ಫೋಟೋಗಳನ್ನೇ ಮತ್ತೆ ಮತ್ತೆ ನೋಡಿ ಖುಶಿಪಟ್ಟೆವು. ಅವರ ವಿವರಗಳನ್ನು ಕುರಿತು ಚರ್ಚಿಸಿದೆವು. ಅವರ ಜೊತೆ ವಿವಿಧ ಭಂಗಿಗಳಲ್ಲಿ ನಿಂತು ಪೋಸು ಕೊಟ್ಟ ಗಂಡು ಮಾಡೆಲ್‍ಗಳು ಕೂಡ ಇದ್ದರು. ಆಹಾ, ಎಂಥ ಅದೃಷ್ಟವಂತರು ಅವರು! ಎಂತೆಂಥ ಒಳ್ಳೊಳ್ಳೆ ಮಾಡೆಲ್‍ಗಳ ಜೊತೆ ನಿಂತೊ ಫೋಟೋ ತೆಗೆಸಿಕೊಳ್ಳುವ ಅವಕಾಶ ಲಭಿಸಿದೆ ಅವರಿಗೆಲ್ಲ! ಒಂದು ಕ್ಷಣ ಅವರ ಬಗ್ಗೆ ಈರ್ಷೆ ಕಾಡಿತು.

    ಮರುಕ್ಷಣ ಅನಿಸಿತು ನಾವಿಬ್ಬರೂ ಟ್ರೆಡಿಷನಲ್ ಕುಟುಂಬದಿಂದ ಬಂದವರು. ಈ ವಿಷಯದಲ್ಲಿ ಕನ್ಸರ್ವೇಟಿವ್ ಆಗಿ ಥಿಂಕ್ ಮಾಡುವವರು. ಈ ವೃತ್ತಿಯ ಬಗ್ಗೆ ಕಸಿವಿಸಿ ಬೆಳೆಸಿಕೊಂಡವರು. ನಮ್ಮ ಮನೆಯ ಹೆಣ್ಣುಮಕ್ಕಳೇನಾದರು ಈ ಮಾಡೆಲಿಂಗ್ ವೃತ್ತಿಗೆ ಹೋಗುತ್ತೇನೆಂದರೆ ವಿರೋಧಿಸುವವರು. ಕಮ್ಮಿ ಬಟ್ಟೆ ತೊಟ್ಟು ಮೈ ಪ್ರದರ್ಶಿಸುವದು ಎಷ್ಟೊಂದು ಅಸಹ್ಯ? ಎಂದು ಮೂಗು ಮುರಿಯುವವರು. ಆದರೆ ನಾವೀಗ ಇಲ್ಲಿ ಮಾಡುತ್ತಿರುವದೇನು? ಆ ಮಾಡೆಲ್‍ಗಳ ಫೋಟೋ ನೋಡುತ್ತಾ ಅವರ ವಿಷಯವನ್ನು ಚರ್ಚಿಸುತ್ತಾ ಅದನ್ನು ಪರೋಕ್ಷವಾಗಿ ಪ್ರೋತ್ಶಾಹಿಸುತ್ತಿಲ್ಲವೆ? ಅಂದರೆ ಏನು? ಯಾರದೋ ಮನೆಯ ಹೆಣ್ಣುಮಕ್ಕಳು ಹೇಗಾದರು ಕಾಣಿಸಲಿ; ನಮಗೇನೂ ಅನಿಸುವದಿಲ್ಲ. ಆದರೆ ನಮ್ಮ ಮನೆಯ ಹೆಣ್ಣುಮಕ್ಕಳು ಮಾತ್ರ ಹಾಗೆ ಅಗಬಾರದು. ಇದು ಹಿಪೊಕ್ರಸಿ ಅಲ್ಲದೆ ಮತ್ತೇನು?

    ಡಾನ್ ಮಾರ್ಕ್ವಿಜ್ ಹೇಳಿದ್ದು ಸರಿ: A hypocrite is a person who-but who isn't?

    ಬಿಡುಗಡೆ

  • ಭಾನುವಾರ, ಜೂನ್ 17, 2012
  • ಬಿಸಿಲ ಹನಿ

  • ನಾ ಕೇಳಿದ್ದು ಹಿಡಿ ಪ್ರೀತಿಯನ್ನಷ್ಟೆ
    ಆದರೆ ನೀ ಬೊಗಸೆ ತುಂಬಾ ತುಂಬಿ ಕೊಡಬೇಕೆಂದಿ.
    ಅದೇ ನಮ್ಮಿಬ್ಬರ ಬಿಡುಗಡೆಗೆ ಕಾರಣವಾಯಿತು!

    -ಉದಯ್ ಇಟಗಿ
    ಚಿತ್ರ ಕೃಪೆ: ಅಂತರ್ಜಾಲ

    ಸಹರಾ ಮರಭೂಮಿಯಲ್ಲೊಂದು ಬಹುಭಾಷಾ ಕವಿಗೋಷ್ಠಿ

  • ಶನಿವಾರ, ಜೂನ್ 09, 2012
  • ಬಿಸಿಲ ಹನಿ
  • ಮೊನ್ನೆ ನಮ್ಮ ಕಾಲೇಜಿನಲ್ಲೊಂದು ಬಹುಭಾಷಾ ಕವಿಗೋಷ್ಠಿ ನಡೆಯಿತು. ಹೆಸರಿಗಷ್ಟೇ ವಿವಿಧ ಭಾಷಾ ಕವಿಗೋಷ್ಠಿ. ಆದರೆ ಆ ಗೋಷ್ಠಿಯಲ್ಲಿ ಬಹಳಷ್ಟು ಜನ ಅರೇಬಿ ಭಾಷೆಯ ಕವಿಗಳೇ ತುಂಬಿಕೊಂಡಿದ್ದರು. ಇನ್ನುಳಿದಂತೆ ಆಫ್ರಿಕಾ ಖಂಡದ ಇತರೆ ಭಾಷೆಗಳಾದ ಹೌಸಾ, ಟರ್ಗಿ, ಫ್ರಾನ್ಸಾ (ಫ್ರೆಂಚ್), ತಿಗರಿ, ಯುರೊಬು, ಇಗ್ಬೊ, ಇಬಿಬೋ, ಭಾಷೆಯ ಕವಿಗಳು ಅಲ್ಲಿದ್ದರು. ಇವರೆಲ್ಲರ ಜೊತೆಗೆ ಇಟಲಿಯಿಂದ ಕವಯಿತ್ರಿಯೊಬ್ಬಳು ಇಟ್ಯಾಲಿಯನ್ ಭಾಷೆಯನ್ನು ಪ್ರತಿನಿಧಿಸಿ ಬಂದಿದ್ದಳು. ಆಕೆ ಇಡಿ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದಳು. ಮುಖ್ಯ ಆಕರ್ಷಣೆ ಯಾಕೆಂದರೆ ಅಲ್ಲಿದ್ದ ಬಹಳಷ್ಟು ಕಪ್ಪು ಜನರ ಮಧ್ಯ ಇವಳೊಬ್ಬಳು ಬಿಳಿ ಚರ್ಮದವಳಾಗಿದ್ದು ನೋಡಲು ಬಲು ಆಕರ್ಷಕವಾಗಿ ಕಾಣುತ್ತಿದ್ದಳು. ಅದಕ್ಕಿಂತ ಹೆಚ್ಚಾಗಿ ಮೊಣಕಾಲಿನವರೆಗಷ್ಟೇ ಇರುವ ಮಿನಿ ಸ್ಕರ್ಟೊಂದನ್ನು ಧರಿಸಿ ಕಾಲು ಮೇಲೆ ಕಾಲು ಹಾಕಿಕೊಂಡು ಎಲ್ಲರ ಮುಂದೆ ಬಿಡುಬೀಸಾಗಿ ಕುಳಿತಿದ್ದಳು. ಒಂದರ್ಥದಲ್ಲಿ ಅಲ್ಲಿರುವ ಎಲ್ಲ ’ಮುಚ್ಚಮ್ಮ’ಗಳ ಮಧ್ಯ ಇವಳೊಬ್ಬಳು ಮಾತ್ರ ‘ಅರ್ಧ ಬಿಚ್ಚಮ್ಮ’ಳಾಗಿ ಕಾಣಿಸುತ್ತಿದ್ದಳು. ಹಾಗಾಗಿಯೋ ಏನೋ ಎಲ್ಲರ ಗಮನ ಅವಳ ಮೇಲೆಯೇ ಇತ್ತು. ಅಷ್ಟೇ ಅಲ್ಲ ತೆಳ್ಳಗೆ, ಬೆಳ್ಳಗೆ ಇರುವ ತನ್ನ ಆಕರ್ಷಕ ಮೈಮಾಟದಿಂದ ತುಸು ಹೆಚ್ಚೇ ಎನಿಸುವಷ್ಟು ‘ಸೆಕ್ಷಿ’ಯಾಗಿ ಕಾಣುತ್ತಿದ್ದಳು. ಎಲ್ಲರೂ ಅವಳನ್ನೇ ಬಿಟ್ಟಗಣ್ಣು ಬಿಟ್ಟು ನೋಡುತ್ತಿದ್ದರು. ತನ್ನ ಸರದಿ ಬಂದಾಗ ಎಲ್ಲರ ಮುಂದೆ ಬಿಡುಬೀಸಾಗಿ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತೇ ತನ್ನ ಇಟ್ಯಾಲಿಯನ್ ಕವನವನ್ನು ಓದಿದಳು. ಓದಿಯಾದ ಮೇಲೆ ವೇದಿಕೆಯ ಪಕ್ಕಕ್ಕೆ ಹೋಗಿ ಎಲ್ಲರಿಗೂ ಕಾಣುವಂತೆ ಸಿಗರೇಟೊಂದನ್ನು ಸೇದಿ ಮತ್ತೆ ವಾಪಾಸ್ ಬಂದು ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತಳು. ಅಲ್ಲಿದ್ದ ಕೆಲವು ಗಂಡಸರು ಅವಳ ಈ ನಿರ್ಭಿಡೆಯ ವರ್ತನೆಯನ್ನು ಕಂಡು ಇದೇನಿದು ಅರಬ್ಬರ ನಾಡಿನಲ್ಲಿ ಈ ರೀತಿಯ ಬಿಚ್ಚು ಪ್ರದರ್ಶನ? ಎಂದು ಮೂಗು ಮುರಿದರು. ಆದರೆ ಅದನ್ನು ಆಕೆಗೆ ಹೇಳುವ ಧೈರ್ಯವನ್ನು ಯಾರೂ ಮಾಡಲಿಲ್ಲ. ತಮಾಷೆಯೆಂದರೆ ಮೊದಲು ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ ಜನರೇ ಆಮೇಲಾಮೇಲೆ ಅವಳ ಮೊಣಕಾಲುಗಳನ್ನೇ ನೋಡುತ್ತಾ ಅವಳೊಟ್ಟಿಗೆ ರತಿಸುಖ ಅನುಭವಿಸಿದಷ್ಟೇ ಆನಂದಪಡುತ್ತಾ ಕುಳಿತುಬಿಟ್ಟರು. ಕೆಲವು ಪಡ್ಡೆ ಹುಡುಗರಂತೂ ಅವರವರೇ ಕಣ್ಣಲ್ಲಿ ಅದೇನೇನೇನೋ ಪೋಲಿಪೋಲಿಯಾಗಿ ಹೇಳಿಕೊಂಡು ಕಿಸಿಕಿಸಿಯೆಂದು ನಕ್ಕರು. ಇನ್ನು ಹುಡುಗಿಯರಂತೂ ತಾವು ಕನಸಿನಲ್ಲಿ ಕೂಡ ಈ ರೀತಿಯ ದಿರಿಸನ್ನು ಧರಿಸುವದು ಅಪರಾಧ ಎಂಬಂತೆ ಕುಳಿತಿದ್ದರು. ಮತ್ತೆ ಕೆಲ ಹುಡುಗಿಯರು ಅವಳಿಗಿರುವ ಸ್ವಾತಂತ್ರ್ಯದ ಕಾಲುಭಾಗದಷ್ಟಾದರೂ ನಮಗೆ ಸಿಕ್ಕಿದ್ದರೆ? ಎಂದು ಅವಳ ಜಾಗದಲ್ಲಿ ತಮ್ಮನ್ನು ಊಹಿಸಿಕೊಳ್ಳುತ್ತಾ ಏನೇನೋ ಕಲ್ಪನೆ ಮಾಡಿಕೊಳ್ಳುತ್ತಿದ್ದರು.

    ಸರಿ. ಅಪರೂಪಕ್ಕೆಂಬಂತೆ ನಮ್ಮ ಕಾಲೇಜಿನಲ್ಲಿ ಒಂದು ಒಳ್ಳೆ ಕಾರ್ಯಕ್ರಮ ನಡೆದಿದೆ, ನೆನಪಿಗಿರಲಿ ಎಂದುಕೊಂಡು ನಾವೆಲ್ಲಾ ಈ ಕಾರ್ಯಕ್ರಮದ ಫೋಟೊವೊಂದನ್ನು ತೆಗೆದುಕೊಳ್ಳಲು ಕ್ಯಾಮರಾ ಹಿಡಿದು ಹೋದರೆ ಅಲ್ಲಿದ್ದ ಕೆಲವು ಮಡಿವಂತ ಜನ ನಮ್ಮನ್ನು ತಡೆದರು. ಫೋಟೊ ತೆಗೆಯುವದು ಬೇಡ ಎಂದರು. ಕಾರಣ ಕೇಳಿದರೆ ವೇದಿಕೆಯ ಮೇಲೆ ಏಳೆಂಟು ಜನ ಅರೇಬಿ ಹೆಂಗಸರು ಕುಳಿತಿದ್ದಾರೆ ಹಾಗೆಲ್ಲಾ ಅವರ ಫೋಟೊ ತೆಗೆಯುವದು ಚನ್ನಾಗಿರಲ್ಲ ಎಂದು ಹೇಳಿದರು. ಹೋಗಲಿ ಇಟ್ಯಾಲಿಯನ್ ಕವಯತ್ರಿಯದಾದರೂ ಒಂದು ಫೋಟೋ ತೆಗೆದುಕೊಳ್ಳುತ್ತೇವೆ. ಅದಕ್ಕಾದರೂ ಅವಕಾಶ ಮಾಡಿಕೊಡಿ ಎಂದು ಕೇಳಿದೆವು. ಊಹೂಂ, ಅದಕ್ಕೂ ಅಸ್ತು ಎನ್ನಲಿಲ್ಲ. ಅ ಅವಕಾಶ ಇದ್ದಿದ್ದು ಕಾರ್ಯಕ್ರಮದ ಸಂಘಟಿಕರು ಆಯೋಜಿಸಿದ್ದ ಕ್ಯಾಮರಾಮನ್ ಒಬ್ಬನಿಗೆ ಮಾತ್ರ. ಅವ ಮಾತ್ರ ತನಗೆ ಸಿಕ್ಕ ಈ ಅವಕಾಶ ಮತ್ತು ಸ್ವಾತಂತ್ರ್ಯಗಳೆರೆಡನ್ನು ತುಸು ಹೆಚ್ಚೇ ಬಳಸಿಕೊಂಡ. ಅದೇನು? ಹಿಂದೆಯೆಲ್ಲಾ ನಾವು ನಮ್ಮ ಕಾಲೇಜಿನ ಓಪನ್ ವೀಕ್ ಸೆಲೆಬ್ರೇಶನ್ ಸಮಯದಲ್ಲಿ ಹುಡುಗಿಯರು ಹಾಡು ಹಾಡುತ್ತಿರಬೇಕಾದರೆ, ಇಲ್ಲವೇ ಬೇರೆ ಮನರಂಜನಾ (ನೃತ್ಯವೊಂದನ್ನು ಹೊರತುಪಡಿಸಿ) ಕಾರ್ಯಕ್ರಮ ನೀಡುತ್ತಿರಬೇಕಾದರೆ ಧಾರಾಳವಾಗಿ ಫೋಟೊ ತೆಗೆಯುತ್ತಿದ್ದೆವು. ಆಗ ಯಾರೂ ಏನೂ ಅನ್ನದವರು ಈಗೇನು ಇಷ್ಟೊಂದು ವಿರೋಧ ನಿಮ್ಮದು? ಎಂದು ಕೇಳಿದರೆ ಕಾರ್ಯಕ್ರಮದ ಸಂಘಟಿಕರು ಹೊರಗಿನವರು ಯಾರೋ ಆಗಿದ್ದು ಅಲ್ಲಿ ನಮ್ಮ ಕಾಲೇಜಿನವರು ಕಾರ್ಯಕ್ರಮ ನಡೆಸಲು ಸ್ಥಳ ಮಾತ್ರ ಕೊಟ್ಟಿದ್ದರಿಂದ ಅವರಿಗೆ ಈ ವಿಷಯದಲ್ಲಿ ತಲೆಹಾಕಲು ಹೆಚ್ಚು ಸ್ವಾತಂತ್ರ್ಯವಿರಲಿಲ್ಲ ಎನ್ನುವ ಉತ್ತರ ಬಂತು.

    ಸರಿ. ಕವಿಗೋಷ್ಠಿ ಮುಗಿಯಿತು. ಮುಗಿದಾದ ಮೇಲೆ ಎಲ್ಲರೂ ಕವಿಗಳ ಮತ್ತು ಕವಯಿತ್ರಿಯರ ಕೈ ಕುಲುಕಿದ್ದೇ ಕುಲುಕಿದ್ದು. ಅದರಲ್ಲೂ ಆ ಇಟ್ಯಾಲಿಯನ್ ಕವಯಿತ್ರಿಯ ಕೈನ್ನು “ಮಜಬೂತ್, ಮಜಬೂತ್” ಎಂದು ಹೇಳುತ್ತಾ ತುಸು ಹೆಚ್ಚೇ ಕುಲಕಿದರು. ಅವರು ಹಾಗೆ ಕೈ ಕುಲುಕಿ “ಮಜಬೂತ್” (ಚನ್ನಾಗಿತ್ತು) ಎಂದು ಕಾಂಪ್ಲಿಮೆಂಟ್ ಕೊಟ್ಟಿದ್ದು ಅವಳ ಸೌಂದರ್ಯಕ್ಕೋ? ಅಥವಾ ಕವನಕ್ಕೋ? ಗೊತ್ತಾಗಲಿಲ್ಲ. ಬಹುಶಃ, ಅದು ಅವಳ ಸೌಂದರ್ಯದ ಬಗ್ಗೆಯೇ ಇರಬೇಕು. ಯಾಕೆಂದರೆ ಈ ಲಿಬಿಯನ್ನರಿಗೆ ಅದೂ ಘಾತ್ ಪ್ರಾಂತ್ಯದಲ್ಲಿರುವ ಜನರಿಗೆ ಇಂಗ್ಲೀಷ್, ಅರೇಬಿ, ಫ್ರಾನ್ಸಾ, ಹೌಸಾ, ಟರ್ಗಿ ಬಿಟ್ಟರೆ ಇಟ್ಯಾಲಿಯನ್ ಭಾಷೆ ಬರುವದು ನಾ ಕಾಣೆ. ಆಕೆ ಹೊರಡೋಣವೇಂದು ಸಭಾಂಗಣವನ್ನು ಬಿಟ್ಟು ಹೊರಗೆ ಬರುತ್ತಿದ್ದಂತೆ ಅವಳೊಟ್ಟಿಗೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂದು ಹಾತೊರೆಯುತ್ತಿದ್ದ ಕೆಲವು ಗಂಡಸರು ಹಲ್ಲು ಗಿಂಜುತ್ತಾ “ನಿಮ್ಮೊಂದಿಗೆ ಒಂದು ಫೋಟೋ ಪ್ಲೀಸ್!” ಎಂದು ಆಕೆಯನ್ನು ಮುತ್ತಿದರು. ಆಕೆ ತಕ್ಷಣ “ಅದೇನು, ನಿಮ್ಮ ಹೆಣ್ಣುಮಕ್ಕಳ ಫೋಟೋವನ್ನು ಮಾತ್ರ ಯಾರೂ ತೆಗೆದುಕೊಳ್ಳಬಾರದು? ನೀವು ಮಾತ್ರ ಬೇರೆ ಹೆಣ್ಣುಮಕ್ಕಳ ಫೋಟೋವನ್ನು ತೆಗೆದುಕೊಳ್ಳಬಹುದೇ? ಇದ್ಯಾವ ನ್ಯಾಯ?” ಎಂದು ಇಂಗ್ಲೀಷಿನಲ್ಲಿ ಮುಖಕ್ಕೆ ಹೊಡೆದ ಹಾಗೆ ಹೇಳಿ ಬಡಬಡನೆ ಕಾರು ಹತ್ತಿ ಹೋಗಿಯೇಬಿಟ್ಟಳು. ಆಕೆ ಕೇಳಿದ ಧಾಟಿ ಹೇಗಿತ್ತೆಂದರೆ ನೀವು ಮಾತ್ರ ಬೇರೆ ಮನೆಯವರ ಹೆಣ್ಣುಮಕ್ಕಳನ್ನು ಹಾಳುಮಾಡಬಹುದು. ಆದರೆ ನಿಮ್ಮ ಮನೆಯ ಹೆಣ್ಣುಮಕ್ಕಳು ಮಾತ್ರ ಸುರಕ್ಷಿತವಾಗಿರಬೇಕಾ? ಇದ್ಯಾವ ಸೀಮೆಯ ನ್ಯಾಯ? ಎಂದು ಕೇಳಿದಂತಿತ್ತು.

    ಅಂದಹಾಗೆ ಕವಿಗೋಷ್ಠಿಯ ವಿಷಯ “ಸ್ವಾತಂತ್ರ್ಯ”. ಲಿಬಿಯಾ ಈಗ ‘ಫ್ರೀ ಲಿಬಿಯಾ’ ಆದ ಹಿನ್ನೆಲೆಯಲ್ಲಿ ಈ ಕವಿಗೋಷ್ಠಿಯನ್ನು ಅಳವಾಡಿಸಲಾಗಿತ್ತೆಂದು ನಮಗೆ ಆಮೇಲೆ ಗೊತ್ತಾಯಿತು. ಅದೇನೆ ಇರಲಿ. ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟಹಾಗೆ ಅಲ್ಲಿಯ ಕವಿಗಳು ತಂತಮ್ಮ ಭಾಷೆಯಲ್ಲಿ ಕವಿತೆಗಳನ್ನು ಓದಿದರು. ನಾನಂತೂ ಹೌಸಾ, ಟರ್ಗಿ, ಫ್ರಾನ್ಸಾ, ಅರೇಬಿ ಭಾಷೆಗಳು ಬರುವ ನನ್ನ ವಿದ್ಯಾರ್ಥಿಯೊಬ್ಬನನ್ನು ಪಕ್ಕಕ್ಕೇ ಕುಳಿಸಿಕೊಂಡಿದ್ದೆ ಅನುವಾದದ ಸಹಾಯಕ್ಕಾಗಿ. ಅವರು ಕವನ ಓದಿ ಮುಗಿಸಿದ ತಕ್ಷಣ ಅವ ನನಗೆ ಅದರ ಸಾರಾಂಶವನ್ನಷ್ಟೇ ಬಡಬಡನೆ ಇಂಗ್ಲೀಷಿಗೆ ಅನುವಾದಿಸಿ ನನ್ನ ಕಿವಿಯಲ್ಲಿ ಪಿಸುಗುಡುತ್ತಿದ್ದ. ಒಬ್ಬ ಅರೇಬಿ ಕವಿ “ನಾವು ಸ್ವಾತಂತ್ರ್ಯ ಬಂದಿದೆ ಎಂದು ಹೆಳುತ್ತಿದ್ದೇವಲ್ಲವೆ? ಆದರೆ ನಾವು ನಿಜಕ್ಕೂ ಸ್ವತಂತ್ರರಾಗಿದ್ದೇವೆಯೇ?” ಎಂದು ಕೇಳಿದ. ಇನ್ನೊಬ್ಬ ಕವಿ “ಸ್ವಾತಂತ್ರ್ಯ ಸಿಕ್ಕಿತೆಂದು ನಾವು ಸಂಭ್ರಮಪಡುವ ಖುಷಿಯಲ್ಲಿ ನಿಧಾನವಾಗಿ ನಮಗೆ ಗೊತ್ತಿಲ್ಲದಂತೆ ಬೇರೆ ಇನ್ಯಾರಿಗೋ ಗುಲಾಮರಾಗಿ ಕೆಲಸ ಮಾಡುವಂತಾಗಬಾರದು” ಎಂದು ಕರೆ ಕೊಟ್ಟ. ಮತ್ತೊಬ್ಬ ಕವಿ “ಒಬ್ಬ ಮನುಷ್ಯನಿಗೆ ನಿಜವಾಗಿಯೂ ಸ್ವಾತಂತ್ರ್ಯ ಅನ್ನುವದು ಇದೆಯಾ? ಅದೇನಿದ್ದರೂ ಭ್ರಮೆ ಅಷ್ಟೆ. ಯಾಕೆಂದರೆ ಹುಟ್ಟುವಾಗಷ್ಟೆ ಅವನು ಸ್ವತಂತ್ರ. ಆಮೇಲೇನಿದ್ದರೂ ಅವನು ಒಂದಲ್ಲ ಒಂದು ಕಡೆ ಬಂಧಿಯಾಗಿರುತ್ತಾನೆ” ಎಂದು ಹೇಳಿದ. ಇದು ನನಗೆ ಪ್ರಖ್ಯಾತ ಫ್ರೆಂಚ್ ರಾಜಕೀಯ ತಜ್ಞ ರೂಸೋ ಹೇಳಿದ “A man is born to free. But everywhere else he is in chains” ಎನ್ನುವ ಮಾತನ್ನು ನೆನಪಿಸಿತು. ಟರ್ಗಿ ಕವಿಯೊಬ್ಬ “ಪ್ರಕೃತಿಯಲ್ಲಿನ ಹೂ, ಹಕ್ಕಿಗಳಿರುವಷ್ಟು ಸ್ವಾತಂತ್ರ್ಯ ನಮಗೇಕಿಲ್ಲ?” ಎಂದು ಪ್ರಶ್ನೆಸಿದ. ಫ್ರೆಂಚ್ ಭಾಷೆಯಲ್ಲಿ ಕವನ ಓದಿದ ಸ್ಥಳೀಯ ಕವಿಯೊಬ್ಬ “ನಮ್ಮೊಳಗೆ ನಾವೇ ಗುಲಾಮರಾಗಿರುವಾಗ ಹೊರಗಿನ ಸ್ವಾತಂತ್ರ್ಯ ತಗೊಂಡು ಏನ್ಮಾಡೋದು?” ಎಂದು ಪ್ರಶ್ನಿಸಿದ. ನಾನು ಮೊದಲು “ನಮ್ಮೊಳಗೆ ನಾವೇ ಗುಲಾಮರಾಗಿರುವದು” ಎಂದರೇನೆಂದು ಅರ್ಥವಾಗದೆ ತಲೆಕೆರೆದುಕೊಂಡೆ. ಆಮೇಲೆ ಓ, ಬಹುಶ: ಅದರ ಅರ್ಥ ಹೀಗಿರಬಹುದು, ಹಾಗಿರಬಹುದು ಎಂದು ನನ್ನಷ್ಟಕ್ಕೆ ನಾನೇ ಏನೇನೋ ಅರ್ಥೈಸಿಕೊಂಡು ಸಮಾಧಾನಪಟ್ಟೆ. ಇವರೆಲ್ಲರಿಗಿಂತ “ಹೌಸಾ” ಭಾಷೆಯಲ್ಲಿ ಓದಿದ ಕವಯಿತ್ರಿಯ ಕವನವೊಂದು ಮಾತ್ರ ಅಲ್ಲಿದ್ದ ಎಲ್ಲರ ಗಮನವನ್ನು ಸೆಳೆಯುವಲ್ಲಿ ಅತ್ಯಂತ ಯಶಸ್ವಿಯಾಯಿತು. ಆಕೆ “ಇವತ್ತು ನಾವು ಹೆಣ್ಣುಮಕ್ಕಳು ಸ್ವಾಂತಂತ್ರ್ಯದ ಹೆಸರಿನಲ್ಲಿ ಕುಟಂಬವನ್ನು ಕಡೆಗಣಿಸುತ್ತಾ ವಿಚ್ಛೇಧನಕ್ಕೆ ಮೊರೆಹೋಗುತ್ತಿದ್ದೇವೆ. ಗಂಡನನ್ನು ಬಿಟ್ಟರೆ ಸ್ವಾತಂತ್ರ್ಯ ಎಂದುಕೊಂಡಿದ್ದೇವೆ. ಆದರೆ ಗಂಡ ಇರುವದರಿಂದಲೇ ನಮಗೆ ಸಮಾಜದಲ್ಲಿ ಹೆಚ್ಚಿನ ಸ್ವಾತಂತ್ರ್ಯವಿದೆ, ಗೌರವವಿದೆ ಎನ್ನುವ ಸತ್ಯವನ್ನು ಅರಿಯುವಲ್ಲಿ ಸೋಲುತ್ತಿದ್ದೇವೆ.” ಎಂದು ಇವತ್ತು ಆಫ್ರಿಕಾದ ದೇಶಗಳಲ್ಲಿ ಸಹ ಹೆಚ್ಚುತ್ತಿರುವ ವಿಚ್ಛೇಧನಗಳ ಹಿನ್ನೆಲೆಯಲ್ಲಿ ಅಲ್ಲಿರುವ ಹೆಣ್ಣುಮಕ್ಕಳಿಗೆ ಕಿವಿಮಾತು ಹೇಳಿದ್ದಳು. ಈ ಮಾತಿಗೆ (ಕವನಕ್ಕೆ) ಅಲ್ಲಿದ್ದ ಗಂಡಸರಿಗಿಂತ ಹೆಚ್ಚಾಗಿ ಹೆಂಗಸರೇ ಚಪ್ಪಾಳೆ ಹೊಡೆದಿದ್ದು ಮಾತ್ರ ವಿಶೇಷವಾಗಿ ಕಾಣಿಸಿತು.

    ಇನ್ನುಳಿದವರು ಅದೇನು ಹೇಳಿದರೆಂದು ನನಗೆ ಮಾತ್ರ ಅಲ್ಲ ಅಲ್ಲಿದ್ದ ಬೇರೆಯವರಿಗೂ ಅರ್ಥವಾಗಲಿಲ್ಲ. ಏಕೆಂದರೆ ಅವರಿಗೆ ಆ ಭಾಷೆಗಳು ಅರ್ಥವಾದರೆ ತಾನೆ ಏನು ಹೇಳಿದರೆಂದು ಗೊತ್ತಾಗುವದು? ಈ ತೆರದ ವಿವಿಧ ಭಾಷಾ ಕವಿಗೋಷ್ಠಿಯನ್ನು ಯಾಕಾದರು ಹಮ್ಮಿಕೊಳ್ಳುತ್ತಾರೋ? ಹಮ್ಮಿಕೊಂಡರೂ ಅಲ್ಲಿ ಓದುವ ವಿವಿಧ ಭಾಷೆಯ ಕವನಗಳನ್ನು ಮೊದಲೇ ಇಂಗ್ಲೀಷಿಗೋ ಅಥವಾ ಸ್ಥಳೀಯ ಭಾಷೆಗೋ ಅನುವಾದಿಸಿ ಮೂಲ ಭಾಷೆಯ ಕವಿಗಳು ಓದಿದ ನಂತರ ಅದರ ಅನುವಾದವನ್ನು ಸ್ಥಳೀಯ ಭಾಷೆಯಲ್ಲಿ ಇಲ್ಲವೇ ಇಂಗ್ಲೀಷಿನಲ್ಲಿ ಓದಿದರೆ ಆ ಕಾರ್ಯಕ್ರಮಕ್ಕೊಂದು ಅರ್ಥವಾದರೂ ಬರುತ್ತದೆ, ಅದರ ಮೂಲ ಉದ್ದೇಶವಾದರೂ ಈಡೇರುತ್ತದೆ. ಅದು ಬಿಟ್ಟು ಬರೀ ಅವರವರದೇ ಭಾಷೆಯಲ್ಲಿ ಓದಿಸಿದರೆ ಅವು ಬೇರೆಯವರಿಗೆ ಅರ್ಥವಾಗುವದಾದರೂ ಹೇಗೆ ಮತ್ತು ಅದರ ಉದ್ದೇಶ ಈಡೇರುವದಾದರೂ ಹೇಗೆ?

    ಅಂದಹಾಗೆ ಈ ಕವಿಗೋಷ್ಠಿಯನ್ನು ಹೋಗಿ ಹೋಗಿ ಇಂಥ ಸಣ್ಣ ಹಳ್ಳಿಯಲ್ಲಿ ಯಾಕಿಟ್ಟರು? ಟ್ರಿಪೋಲಿಯಲ್ಲೋ, ಬೆಂಗಾಜಿಯಲ್ಲೋ, ಸೆಭಾದಲ್ಲೋ ಏರ್ಪಡಿಸಿದ್ದರೆ ಚನ್ನಾಗಿತ್ತು ಎಂದು ಕೆಲವರು ಲೊಚಗುಟ್ಟಿದರು. ಇನ್ನು ಕೆಲವರು ಇವತ್ತು ಸಾಹಿತ್ಯ ಪ್ರಜ್ಞೆ ಎನ್ನುವದು ಏನಾದರು ಉಳಿದಿದ್ದರೆ ಅದು ಹಳ್ಳಿಗಳಲ್ಲಿ ಮಾತ್ರ. ಹೀಗಾಗಿ ಇಲ್ಲಿ ನಡೆಸಿದ್ದೇ ಚೆನ್ನ ಆಯ್ತು ಎಂದರು.

    -ಉದಯ್ ಇಟಗಿ

    ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ಪ್ರೇಮ-ಕಾಮ ವಾಂಛೆಗಳು

  • ಸೋಮವಾರ, ಮೇ 21, 2012
  • ಬಿಸಿಲ ಹನಿ
  • ಇಲ್ಲಿ ಲಿಬಿಯಾದಲ್ಲಿ ಈಗಷ್ಟೆ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗಿದೆ. ನಾವು ಹೀಟರ್ ಗಳನ್ನು ಎತ್ತಿಟ್ಟು ಏಸಿ (ಏರ್ ಕಂಡಿಷ್‍ನರ್) ಗಳನ್ನು ಹಾಕಿಕೊಂಡು ಕುಳಿತಿದ್ದೇವೆ. ಮಳೆ ನಿಂತರೂ ಮರದ ಹನಿ ನಿಲ್ಲುವದಿಲ್ಲ ಎನ್ನುವಂತೆ ಇಲ್ಲಿ ಯುದ್ಧ ನಿಂತರೂ ಗುಂಡಿನ ಮೊರೆತ ಮಾತ್ರ ಇನ್ನೂ ನಿಂತೇ ಇಲ್ಲ. ಇನ್ನೂ ಆಗಾಗ ಅಲ್ಲಲ್ಲಿ ಸಣ್ಣ ಪುಟ್ಟ ಗಲಭೆಗಳು, ಗುಂಪು ಘರ್ಷಣೆಗಳು ಸಂಭವಿಸುತ್ತಲೇ ಇವೆ. ಮೊನ್ನೆಯಷ್ಟೆ ಘಾಟ್‍ನಲ್ಲಿರುವ ಗಡಾಫಿಯ ಮಾಜಿ ಅಂಗರಕ್ಷಕಿಯನ್ನು ಬಂಧಿಸಲು ಬಂದ ‘ಜಿಂತಾನ್’ ಮಿಲ್ಟ್ರಿ ಪಡೆಗಳು ಹಾಗೂ ಘಾಟ್‍ನ ಜನರ ನಡುವೆ ಗುಂಡಿನ ಚಕಮಕಿ ನಡೆದು ದೊಡ್ಡ ಗಲಾಟೆಯೇ ನಡೆದುಹೋಯಿತು. ಸಧ್ಯ, ಗಲಾಟೆಯಲ್ಲಿ ಯಾರಿಗೂ ಏನೂ ಆಗಲಿಲ್ಲ! ಈ ಘಟನೆಯ ನೆನಪು ಇನ್ನೂ ಹಸಿಹಸಿಯಾಗಿರುವಾಗಲೇ ಇನ್ನೊಂದು ಕೆಟ್ಟ ಸುದ್ಧಿ ಬಂದಿದೆ. ಇಲ್ಲಿಂದ ಆರನೂರು ಕಿಲೋಮೀಟರಿನಷ್ಟು ದೂರವಿರುವ ಸೆಭಾದಲ್ಲಿ ಎರಡು ಬೇರೆ ಬೇರೆ ಬುಡಕಟ್ಟು ಜನಾಂಗಗಳ ನಡುವೆ ತೀವ್ರ ಘರ್ಷಣೆ ನಡೆದು ಆ ಘಟನೆಯಲ್ಲಿ ಸುಮಾರು ಇನ್ನೂರು ಜನ ಸತ್ತು ಅನೇಕರು ಗಾಯಗೊಂಡಿದ್ದಾರೆ. ಈಗ ಅಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆಯಾದರೂ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.



    ಈ ಎಲ್ಲದರ ಮಧ್ಯ ಇಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಋತುಮಾನ ಬದಲಾವಣೆಗನುಗುಣವಾಗಿ ಒಂದೆರೆಡು ಬಿರುಗಾಳಿಗಳು ಬಂದುಹೋಗಿವೆ. ಈ ಸಾರಿ ಅವು ಹೇಳಿಕೊಳ್ಳುವಷ್ಟು ದೊಡ್ಡವಾಗಿರದಿದ್ದರೂ ಎಂದಿನಂತೆ ಸಹರಾದ ಉಸುಕಿನ ಕಣಗಳನ್ನೆಲ್ಲಾ ಬಾಚಿಕೊಂಡು ಬಂದು ಮನೆಯೊಳಗೆ ತಂದುಹಾಕಿದವು. ನಾವು ಈ ಬಿರುಗಾಳಿಯನ್ನು ಶಪಿಸುತ್ತಾ ಹಾಗೂ ನಾವಿರುವ ಪರಿಸ್ಥಿತಿಗೆ ನಾವೇ ಮರುಕಪಡುತ್ತಾ ಮೂಗು ಮುಚ್ಚಿಕೊಂಡು ಅವನ್ನೆಲ್ಲಾ ಎತ್ತಿ ಆಚೆ ಹಾಕಿದೆವು. ಚಳಿಗಾಲ ಮುಗಿದು ಬೇಸಿಗೆಕಾಲ ಕಾಲಿಡುವ ಸಂಕ್ರಮಣ ಕಾಲಘಟ್ಟದಲ್ಲಿಯೇ ಈ ಬಿರುಗಾಳಿಗಳು ಅದೆಲ್ಲಿರುತ್ತವೋ ಒಮ್ಮಿಂದೊಮ್ಮೆಲೆ ಧುತ್ತೆಂದು ಇಳಿದು ನಮ್ಮ ಪ್ರಾಣ ತೆಗೆಯುತ್ತವೆ. ಅವು ಒಮ್ಮೊಮ್ಮೆ ಎಷ್ಟೊಂದು ಭಯಂಕರವಾಗಿರುತ್ತವೆಂದರೆ ನಮ್ಮ ಪಕ್ಕದಲ್ಲಿಯೇ ಇರುವ ವ್ಯಕ್ತಿಯನ್ನು ನಮಗೆ ಕಾಣದಷ್ಟು ಧೂಳಿನ ಕಣಗಳಿಂದ ಮುಚ್ಚಿಹಾಕಿಬಿಡುತ್ತವೆ. ಜೊತೆಗೆ ನಮ್ಮ ಮೂಗಿನೊಳಕ್ಕೆ ಹೊಕ್ಕು ಉಸಿರಾಟಕ್ಕೂ ತೊಂದರೆಯುನ್ನುಂಟು ಮಾಡುತ್ತವೆ. ಆಗೆಲ್ಲಾ ನಾವು ಬೇಗಬೇಗನೆ ಮನೆಯೊಳಕ್ಕೆ ಸೇರಿಕೊಂಡು ಫ್ಯಾನು ಹಾಕಿಕೊಂಡು ಕುಳಿತುಬಿಡುತ್ತೇವ.



    ಈ ಬೇಸಿಗೆ ಯಾಕಾದರೂ ಬರುತ್ತದೋ? ಬರೀ ಬಿರುಗಾಳಿಗಳನ್ನೇ ಹೊತ್ತುತರುತ್ತದೆ! ಜೊತೆಗೆ ಉರಿ ಉರಿವ ಬಿಸಿಲು ಬೇರೆ! ಬೇಸಿಗೆಯನ್ನು ಜಗತ್ತಿನ ಯಾವ ಜನ ತಾನೇ ಇಷ್ಟಪಟ್ಟಾರು ಇಂಗ್ಲೆಂಡಿನವರನ್ನು ಹೊರತುಪಡಿಸಿ? ಅವರಿಗೋ ವರ್ಷಪೂರ್ತಿ ಚಳಿ! ಸುರಿವ ಹಿಮದ ನಡುವೆ ದಪ್ಪದಪ್ಪನೆಯ ಉಣ್ಣೆ ಸ್ವೆಟರ್ ಗಳನ್ನು ಹಾಕಿಕೊಂಡು, ತಲೆಗೆ ತರಾವರಿ ಟೋಪಿ ಧರಿಸಿ ಚಳಿಗೆ ನಡುಗುತ್ತಾ ಓಡಾಡುವದೆಂದರೆ ಅವರಿಗೆ ಎಲ್ಲಿಲ್ಲದ ಕಿರಿಕಿರಿ! ಜೊತೆಗೆ ಪ್ರಕೃತಿಯೆಲ್ಲಾ ಹಿಮದಿಂದ ಮುಚ್ಚಿಹೋಗಿ ಇಡಿ ವಾತಾವರಣ ಒಂಥರಾ ಖಿನ್ನತೆಗೊಳಗಾದದಂತೆ ಕಾಣುತ್ತಿರುತ್ತದೆ. ಹೀಗಾಗಿ ಅವರು ಬೇಸಿಗೆ ಬರುವದನ್ನೇ ಕಾಯುತ್ತಿರಿತ್ತಾರೆ. ಅದಕ್ಕಾಗಿ ಹಂಬಲಿಸುತ್ತಿರುತ್ತಾರೆ! ಬೇಸಿಗೆಯ ಬಿಸಿಲಿಗೆ ಹೆಪ್ಪುಗಟ್ಟಿದ ಹಿಮವೆಲ್ಲಾ ಕರಗಿಹೋಗಿ ಗಿಡಮರಗಳೆಲ್ಲಾ ಹಚ್ಚಹಸಿರಾಗಿ ಕಾಣಿಸುತ್ತವೆ. ಸತ್ತ ಪ್ರಕೃತಿಗೆ ಜೀವ ಮರಳಿಬರುತ್ತದೆ. ಇಡಿ ವಾತಾವರಣ ಆಹ್ಲಾದಕರತೆಯಿಂದ ಕಂಗೊಳಿಸತೊಡಗುತ್ತದೆ. ಈ ಸಮಯದಲ್ಲಿ ಜನ ಹುಚ್ಚೆದ್ದು ಕುಣಿಯುತ್ತಾರೆ. ಎಲ್ಲೆಡೆ ಹಾಡು, ಕುಣಿತ, ಕೇಕೆ, ಸಂತೋಷಗಳು ತುಂಬಿತುಳುಕುತ್ತವೆ. ನೋಡಲು ಎಲ್ಲವೂ ಆಪ್ಯಾಯಮಾನ. ಬಹುಶಃ, ಈ ಬೇಸಿಗೆಯೊಂದನ್ನು ಬಿಟ್ಟರೆ ಅಲ್ಲಿ ಬೇರೇನೂ ನೋಡಲು ಸುಂದರವಾಗಿ ಕಾಣುವದಿಲ್ಲ ಅಂತ ಕಾಣುತ್ತದೆ. ಅದಕ್ಕೇ ಇರಬೇಕು ಶೆಕ್ಷಪೀಯರ‍್ ತನ್ನ ಸ್ಪುರದ್ರೂಪಿ ಗೆಳೆಯ ಸೌಥ್‍ಆಂಪ್ಟನ್‍ನ್ನು ಬೇಸಿಗೆಯ ಒಂದು ದಿನಕ್ಕೆ ಹೋಲಿಸಿದ್ದು. ಬಹುಶಃ, ಅವನಿಗೆ ಇದಕ್ಕಿಂತ ಸುಂದರವಾದ ಬೇರೆ ಉಪಮೆಗಳು ಸಿಗಲಿಲ್ಲವೇನೋ! ಇಂಗ್ಲೆಂಡಿನವರೂ ಸೇರಿದಂತೆ ಜಗತ್ತಿನ ಕೆಲವೇ ಕೆಲವು ಜನ ಬೇಸಿಗೆಯನ್ನು ಇಷ್ಟಪಡುತ್ತಾರೆ. ಅದಕ್ಕಾಗಿ ಹಾತೊರೆಯುತ್ತಾರೆ. ಇನ್ನುಳಿದವರೆಲ್ಲಾ ಬೇಸಿಗೆಯನ್ನು ಶಪಿಸುವವರೇ! ಭಾರತೀಯರಿಗೂ ಬೇಸಿಗೆಯೆಂದರೆ ಅಷ್ಟಕ್ಕಷ್ಟೆ! ಒಂಥರಾ ಅಲರ್ಜಿ! ಉರಿಉರಿವ ಬಿಸಿಲು, ಕಿರಿಕಿರಿ ಎನಿಸುವ ಸೆಖೆ, ಗಾಳಿಯನ್ನೇ ಬೀಸದ ಮರಗಿಡಗಳು ಯಾರಿಗೆ ತಾನೆ ಇಷ್ಟವಾದೀತು? ಹೀಗಾಗಿ ನಮ್ಮಲ್ಲಿ ಕವಿಗಳು ಬೇಸಿಗೆಯ ಆರಂಭದ ಕಾಲವನ್ನು ಮಾತ್ರ ಸುಂದರ ಕಾವ್ಯವಾಗಿ ಚಿತ್ರಿಸಿದ್ದಾರೆ. ಆಮೇಲಿನಿದನ್ನು ಯಾರೂ ಬರೆಯುವ ಗೋಜಿಗೆ ಹೋಗಿಲ್ಲ. ಒಂದುವೇಳೆ ಬರೆದರೂ ಅದು ಬೆವರಿನ ಕಾಲ, ಸೊಳ್ಳೆಗಳ ಕಾಲ, ಕರೆಂಟು ಹೋಗುವ ಕಾಲ ಎಂದು ಬರೆಯಲ್ಪಡುತ್ತದೇನೋ!



    ಅದೆಲ್ಲಾ ಇರಲಿ. ಈ ಮರುಭೂಮಿಗೆ ಇರುವದು ಎರಡೇ ಎರಡು ಕಾಲ. ಒಂದು ಚಳಿಗಾಲ. ಮತ್ತೊಂದು ಬೇಸಿಗೆ. ಎರಡೂ ಎಕ್ಸ್ಟ್ರೀಮ್! ಇನ್ನು ಮರಭೂಮಿಯಲ್ಲಿ ಮಳೆಯ ಮಾತೆಲ್ಲಿ? ಅಂದಹಾಗೆ ಇಲ್ಲಿಯ ಜನ ಚಳಿಗಾಲ ಮತ್ತು ಬೇಸಿಗೆಕಾಲಗಳೆರೆಡನ್ನೂ ಸರಿ ಸಮನಾಗಿ ಸ್ವೀಕರಿಸುತ್ತಾರೆ. ನಮ್ಮಂತೆ ಚಳಿಗಾಲ ಬಂದಾಗ ಎಷ್ಟು ಚಳಿಯೆಂದು ಗೊಣಗುವದಾಗಲಿ, ಬೇಸಿಗೆ ಬಂದಾಗ ಅಯ್ಯೋ ಯಾಕಾದರು ಬಂತೋ ಈ ಕೆಟ್ಟಬಿಸಿಲು ಎಂದು ಶಪಿಸುವದಾಗಲಿ ಯಾವತ್ತೂ ಮಾಡುವದಿಲ್ಲ. ಯಾವುದಕ್ಕೂ ಹೆದರದೆ ಬಂದದ್ದನ್ನು ಬಂದಂತೆ ಸ್ವೀಕರಿಸುವ ಮನೋಭಾವನೆಯನ್ನು ಈ ಸಹರಾ ಮರಭೂಮಿ ಅವರಿಗೆ ಕಲಿಸಿಕೊಟ್ಟಿದೆ. ಚಳಿಗಾಲದಲ್ಲಿ ಬಿಸಿಬಿಸಿ ಗ್ರೀನ್ ಟೀ ಕುಡಿಯುತ್ತಾ, ಹುಕ್ಕಾಗಳನ್ನು ಸೇದುತ್ತಾ, ಅಲ್ಲಲ್ಲಿ ಬೆಂಕಿಕಾಯಿಸುತ್ತಾ, ಇಲ್ಲವೇ ಚೆಸ್ ಅಥವಾ ಸ್ನೂಕರ್ ಆಡುತ್ತಾ ಜಗತ್ತಿನ ಪರಿವೇ ಇಲ್ಲದಂತೆ ತಮ್ಮ ಪಾಡಿಗೆ ತಾವು ಸುಖಿಸುತ್ತಾರೆ. ಹಾಗೇಯೇ ಬೇಸಿಗೆಯಲ್ಲಿ ತಂಪುಪಾನೀಯಗಳನ್ನು ಹೀರುತ್ತಾ ಪಾರ್ಕುಗಳಲ್ಲೋ ಇಲ್ಲವೇ ಸಾರ್ವಜನಿಕ ಸ್ಥಳಗಳಲ್ಲೋ ಸರಿರಾತ್ರಿಯವರೆಗೂ ಕುಳಿತು ಹರಟೆಹೊಡೆಯುತ್ತಾರೆ. ಆದರೆ ನಮಗೆ ಇಲ್ಲಿನ ಸುಡುಸುಡು ಬಿಸಿಲಿಗಿಂತ ಗಡಗಡ ನಡುಗುವ ಚಳಿಯೇ ಚೆಂದ. ಜೊತೆಗೆ ಸಂಸಾರ ಒಟ್ಟಿಗೆ ಇದ್ದರಂತೂ ಮುಗಿದೇಹೋಯಿತು! ಪ್ರತಿವರ್ಷವೂ ಒಂದೊಂದು ಮಗು ಒಂದರ ಹಿಂದೊಂದರಂತೆ ಪುಂಖಾನುಪುಂಖವಾಗಿ ಹೊರಬರುತ್ತವೆ. ಹಾಗಂತ ನಾವು ನಾವೇ ಆಗಾಗ ತಮಾಷೆ ಮಾಡಿಕೊಳ್ಳುತ್ತಿರುತ್ತೇವೆ. ಒಮ್ಮೆ ನಮ್ಮ ಕಾಲೇಜಿನ ‘ಸುಡಾನಿ’ ಸಹದ್ಯೋಗಿಯೊಬ್ಬ ಈ ಚಳಿಗಾಲ ಮುಗಿದು ಮುಂದಿನ ಚಳಿಗಾಲ ಬರುವಷ್ಟೊತ್ತಿಗೆ ಏಕಕಾಲಕ್ಕೆ ಮೂರನ್ನು (Triplet) ಹಡೆದು ಅವನ್ನು ಸಂಬಾಳಿಸಲಾಗದೆ ಗೋಳಾಡುತ್ತಿದ್ದರೆ ನಾವೆಲ್ಲಾ ಬಿದ್ದುಬಿದ್ದು ನಗುತ್ತಿದ್ದೆವು. ಅವನೊಬ್ಬನೇ ಏನು? ಇಲ್ಲಿರುವ ಇತರೆ ಅರಬರು (ಜೋರ್ಡಾನಿಗಳು, ಇರಾಕಿಗಳು, ಈಜಿಪ್ಸಿಯನ್‍ಗಳು) ತಮ್ಮ ಸಂಸಾರದೊಟ್ಟಿಗೆ ನೆಮ್ಮದಿಯಿಂದಿದ್ದಾರೆ. ಅವರನ್ನು ನೋಡಿದಾಗಲೆಲ್ಲಾ ನಮ್ಮಲ್ಲಿ ಸಣ್ಣದೊಂದು ಹೊಟ್ಟೆಯುರಿ ಏಳುತ್ತದೆ. ಎಷ್ಟೊಂದು ಅದೃಷ್ಟವಂತರು ಇವರು! ಎಷ್ಟು ಸಲೀಸಾಗಿ ತಾವು ಹೋದಲ್ಲೆಲ್ಲಾ ತಮ್ಮ ಸಂಸಾರವನ್ನು ಹೊತ್ತೊಯ್ಯುತ್ತಾರೆ! ಈ ಅರಬರಿಗೆ ತಮ್ಮ ಮಕ್ಕಳ ಬಗ್ಗೆ ಅಂಥಾ ಉದಾತ್ತ ಕನಸುಗಳಾಗಲಿ, ಧ್ಯೇಯಗಳಾಗಲಿ ಇರುವದಿಲ್ಲ. ಅಥವಾ ‘ಇಂಗ್ಲೀಷ್ ಮೀಡಿಯಂ’ ಸ್ಕೂಲಿನಲ್ಲೇ ಓದಿಸಬೇಕೆಂಬ ಕಟ್ಟಾ ಇರಾದೆ ಅವರಿಗಿರುವದಿಲ್ಲ. ಅರೇಬಿ ಭಾಷೆಯೊಂದು ಗೊತ್ತಿದ್ದರೆ ಸಾಕು ಎಲ್ಲಿ ಬೇಕಾದರೂ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಮುಂದಾಗುತ್ತಾರೆ. ಮೇಲಾಗಿ ಅವರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ನಮ್ಮಷ್ಟು ಘನವಾಗಿ ಯೋಚಿಸುವದಿಲ್ಲ. ಹೀಗಾಗಿ ಅವರು ಹೋದಲ್ಲೆಲ್ಲಾ ಸಹಜವಾಗಿ ತಮ್ಮ ಸಂಸಾರವನ್ನು ಕರೆದೊಯ್ಯುತ್ತಾರೆ. ಹೆಂಡತಿಯೊಟ್ಟಿಗೆ ಆ ಕೊರೆವ ಚಳಿಯಲ್ಲೂ ಬಿಸಿಬಿಸಿಯಾಗಿರುತ್ತಾರೆ. ಆದರೆ ನಾವು ಹಾಗಲ್ಲ. ನಮ್ಮ ಮಕ್ಕಳು ಹುಟ್ಟುವ ಮುಂಚೆಯೇ ಅವು ಹೀಗೀಗೇ ಇರಬೇಕು, ಇಂತಿಂಥದೇ ಸ್ಕೂಲಿನಲ್ಲಿ ಓದಬೇಕು, ಇಂತಿಂಥದೇ ಆಗಬೇಕು ಎಂದು ಮೊದಲೇ ತೀರ್ಮಾನಿಸಿ ಅದಕ್ಕೆ ಎಲ್ಲ ತಯಾರಿಯನ್ನು ಮಾಡಿಟ್ಟುಕೊಳ್ಳುತ್ತೇವೆ. ಎಷ್ಟೇ ಆಗಲಿ ನಾವು ಭಾರತೀಯರಲ್ವಾ? ನಮ್ಮ ಸುಖಕ್ಕಿಂತ ನಮ್ಮ ಮಕ್ಕಳ ಸುಖಕ್ಕಾಗಿಯೇ ಹೆಣಗುವವರು! ಹೀಗಿರುವಾಗ ಇಲ್ಲಿ ಇಂಗ್ಲೀಷ್ ಮೀಡಿಯಂ ಶಾಲೆಗಳೇ ಇಲ್ಲದ, ಇದ್ದರೂ ಹೇಳಿಕೊಳ್ಳುವಂತ ಗುಣಮಟ್ಟವಿರದ ಸ್ಕೂಲುಗಳಲ್ಲಿ ಹೇಗೆ ತಾನೆ ನಾವು ನಮ್ಮ ಮಕ್ಕಳನ್ನು ಓದಿಸಲು ಮುಂದಾದೇವಿ? ಹೀಗಾಗಿ ಆ ಕೊರೆವ ಚಳಿಯಲ್ಲಿ ಉಕ್ಕುವ ನಮ್ಮ ಕಾಮನೆಗಳನ್ನು ಬಲವಂತವಾಗಿ ಹತ್ತಿಕ್ಕುತ್ತಾ, ನಮ್ಮ ಬಿಸಿಯುಸುರುಗಳಿಗೆ ನಾವೇ ಸಾಕ್ಷಿಯಾಗುತ್ತಾ ಹೀಟರ್ ಗಳ ಮುಂದೆ ಕುಳಿತುಕೊಂಡು ಮೈ ಬೆಚ್ಚಗಾಗಿಸಿಕೊಳ್ಳುವದರಲ್ಲಷ್ಟೇ ತೃಪ್ತಿ ಕಾಣುತ್ತೇವೆ. ಅತ್ತ ಅಲ್ಲಿಯೂ ಇರದ ಇತ್ತ ಇಲ್ಲಿಯೂ ಇರದ ಮನಸ್ಥಿತಿಯಲ್ಲಿ ಒಳಗೊಳಗೆ ಒದ್ದಾಡುತ್ತಾ, ಒಂಟಿತನ ಅನುಭವಿಸುತ್ತಾ, ನಮ್ಮ ಊರಿನ ಬಗೆಗೆ ಮೆಲುಕು ಹಾಕುತ್ತಾ ಬದುಕನ್ನು ಕಟ್ಟಿಕೊಳ್ಳಲು ನಾವಿಲ್ಲಿ ತಳವೂರುತ್ತೇವೆ. ಅಲ್ಲಿ ನಮ್ಮ ಹೆಂಡಿರು ನಮ್ಮ ಮಕ್ಕಳ ಭವಿಷ್ಯದ ಬಗೆಗೆ ಬಣ್ಣಬಣ್ಣದ ಕನಸುಗಳನ್ನು ಹೆಣೆಯುತ್ತಾ, ನಮ್ಮ ಗೈರುಹಾಜರಿಯಲ್ಲೂ ಸಂಸಾರವನ್ನು ಸರಿದೂಗಿಸುತ್ತಾ, ನಮ್ಮ ಬರುವಿಕೆಗಾಗಿ ಕಾಯುತ್ತಾ ನಿಟ್ಟುಸಿರುಬಿಡುತ್ತಿರುತ್ತಾರೆ. ಒಂದರ್ಥದಲ್ಲಿ ನಾವು ಲಕ್ಷ್ಮಣರು! ಅವರು ಊರ್ಮಿಳೆಯರು!! ಇಬ್ಬರೂ ಒಬ್ಬರಿಗೊಬ್ಬರು ವಿರಹವೇದನೆಯನ್ನನುಭವಿಸುತ್ತಾ ಬದುಕಿನ ಒಂದಷ್ಟು ವರ್ಷಗಳನ್ನು ವನವಾಸದಲ್ಲಿ ಕಳೆದುಬಿಡುತ್ತೇವೆ! ಹೀಗೆ ಕಳೆಯುವದರ ಬಗ್ಗೆ ನಮಗೆ ಜಿಜ್ಞಾಸೆಯಾಗಲಿ, ಬೇಜಾರಾಗಲಿ ಇರುವದಿಲ್ಲ! ಬದುಕನ್ನು ಕಟ್ಟಿಕೊಳ್ಳುವ ಭರಾಟೆ ಮತ್ತು ಪ್ರಪಂಚಕ್ಕೆ ಸಾಧಿಸಿ ತೋರಿಸುವ ಚಪಲ ನಮಗೆ. ಹೀಗಿರುವಾಗ ನಮಗೆ ಈ ತೆರದ ಬದುಕು ಅನಿವಾರ್ಯವಾಗುತ್ತದೆ.



    ನಾನು ಈ ಮೊದಲೇ ಹೇಳಿದಂತೆ ಇಲ್ಲಿ ಲಿಬಿಯಾದಲ್ಲಿ ಅಸಾಧ್ಯ ಚಳಿ! ಈ ಚಳಿಗೆ ಒಳಗೆ ಥರ್ಮಲ್ ವೇರ್ಸ್, ಮೇಲೊಂದು ದಪ್ಪನೆಯ ಸ್ವೆಟರ್, ಕೈಗಳಿಗೆ ಉಣ್ಣೆಯ ಗ್ಲೌಸುಗಳನ್ನು ಧರಿಸಿ ಹೀಟರ್ ಮುಂದೆ ಕುಳಿತುಕೊಂಡು, ಬಿಸಿಬಿಸಿ ಚಹಾ ಹೀರುವದೇ ಒಂದು ಸ್ವರ್ಗಸುಖ! ಜೊತೆಗೆ ಅವಳು ಇದ್ದಿದ್ದರೆ............? ಅಬ್ಬಾ, ಅದರ ಮಜಾನೇ ಬೇರೆ! ಖೋಡಿ ಮನಸ್ಸು ಮತ್ತೆ ಮತ್ತೆ ಇಲ್ಲದ್ದಕ್ಕಾಗಿ ಹಪಹಪಿಸುತ್ತದೆ! ಇದೇ ಹೊತ್ತಿನಲ್ಲಿ ನಮ್ಮ ಕೆಲಸದವನು ‘ಮೊರೆಟ್ಯಾನಿಯನ್’ ಹುಡುಗಿಯರ ಆಸೆ ತೋರಿಸುತ್ತಾನೆ. ಇವರ ಹೆಸರು ಕೇಳುತ್ತಿದ್ದಂತೆ ಕಿಬ್ಬೊಟ್ಟೆಯೊಳಗಿಂದ ಆಸೆಯೊಂದು ಛಳ್ಳೆಂದು ಸಿಡಿದು ಇಡಿ ಮೈಯನ್ನೆಲ್ಲಾ ವ್ಯಾಪಿಸಿಬಿಡುತ್ತದೆ. ಈ ಹುಡುಗಿಯರು ಲಿಬಿಯಾದ ಬಹಳಷ್ಟು ಹೋಟೆಲ್‍ಗಳಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಾರೆ. ಹೆಸರಿಗಷ್ಟೆ ವೇಟರ್ ಕೆಲಸ. ಆದರೆ ಅವಕಾಶ ಸಿಕ್ಕರೆ ಮೈ ಮಾರಿಕೊಳ್ಳಲು ತಯಾರಿರುತ್ತಾರೆ. ನೋಡಲು ಹೆಚ್ಚುಕಮ್ಮಿ ಯೂರೋಪಿಯನ್ನರಂತಿದ್ದು ಮೈಕೈ ತುಂಬಿಕೊಂಡು ಆಕರ್ಷಕವಾಗಿ ಕಾಣುತ್ತಾರೆ. ಸದಾ ಸ್ವಚ್ಛ ಸ್ವಚ್ಛ! ಇವರ ಮೈ ಘಮಲು ಮೂಗಿಗೆ ಬಡಿಯುತ್ತಿದ್ದಂತೆ ದೇಹ ತಾನೇ ತಾನಾಗಿ ಕಾವೇರುತ್ತದೆ. ಹೊರಟುಬಿಡೋಣ, ದೇಹದ ವಾಂಛೆಗಳನ್ನು ಒಮ್ಮೆ ತೀರಿಸಿಕೊಂಡುಬಿಡೋಣ. ಹತ್ತಿಟ್ಟ ಕಾಮನೆಗಳನ್ನು ಒಮ್ಮೆ ಹೊರಗೆಡವಿ ಸುಖದಸುಪ್ಪತಿಗೆಯಲ್ಲಿ ತೇಲೊಣ ಅನಿಸುತ್ತೆ. ಆದರೆ ಮರುಕ್ಷಣ ನಮ್ಮ ಹೆಂಡತಿಯರಿಗೆ ಮೋಸಮಾಡುತ್ತಿದ್ದೇವೇನೋ ಎಂಬ ಗಿಲ್ಟ್ ಕಾಡಲು ಶುರುವಾಗುತ್ತದೆ (ಅಂದರೆ ನಾವು ನಿಜವಾಗಿಯೂ ನಮ್ಮ ಹೆಂಡತಿಯರನ್ನು ಪ್ರೀತಿಸುತ್ತಿದ್ದೇವೆಂದರ್ಥ). ಜೊತೆಗೆ ಪರದೇಶದಲ್ಲಿ ಏನೇನು ರೀತಿರಿವಾಜುಗಳಿರುತ್ತವೋ? ಸಿಕ್ಕಿಹಾಕಿಕೊಂಡರೆ ಏನು ಮಾಡುವದು? ದೇಹ ಬೇಕೆನ್ನುತ್ತದೆ. ಆದರೆ ಮನಸ್ಸು ಬೇಡವೆನ್ನುತ್ತದೆ. ಮೇಲಾಗಿ ಇವರು, ನಮ್ಮ ಕೆಲಸದವನು ಹೇಳುವಷ್ಟು ಸುಲಭವಾಗಿ ಸಿಗುವದಿಲ್ಲ! ಬಲು ಚಾಲಾಕಿ ಹೆಂಗಸರು! ಇತ್ತ ಸೂಳೆಯರಿಗೆ ಸೂಳೆಯರೂ ಅಲ್ಲ. ಅತ್ತ ಗರತಿಯರಿಗೆ ಗರತಿಯರೂ ಅಲ್ಲ. ಹಾಗೆಲ್ಲಾ ಕರೆದ ತಕ್ಷಣ ಬರುವವರಲ್ಲ! ಮೊದಲು ಗಂಡಸರು ಇವರನ್ನು ಆಕರ್ಷಿಸಬೇಕು. ಕಣ್ಣಲ್ಲೇ ಕಾಮ ಸಂದೇಶಗಳನ್ನು ಕಳಿಸಬೇಕು. ರೋಮ್ಯಾಂಟಿಕ್ ಆಗಿ ಮಾತನಾಡುತ್ತಾ ಹತ್ತಿರವಾಗಬೇಕು, ಒಂದೆರೆಡು ಫ್ಲರ್ಟ್ ಮಾಡಬೇಕು. ಸುಳ್ಳೇಸುಳ್ಳು ಒಂದು ಲವ್ ಹುಟ್ಟಿಸಬೇಕು. ವ್ಯವಹಾರ ಕುದುರಿಸಬೇಕು. ಆಮೇಲಿನಿದ್ದರೂ ಮುಂದಿನದೆಲ್ಲಾ; ಅದೂ ಅವರು ಆ ಗಂಡಸರನ್ನು ಇಷ್ಟಪಟ್ಟರೆ ಮಾತ್ರ.

    ನಾವು ಮೊದಲು ಅವಕಾಶಕ್ಕಾಗಿ ಹಂಬಲಿಸುತ್ತೇವೆ. ಅದು ಸಿಕ್ಕಮೇಲೆ ಅಪರಾಧಿ ಪ್ರಜ್ಞೆ ಭಾವದಿಂದ ಹಿಂದೇಟು ಹಾಕುತ್ತೇವೆ. ಕೊನೆಗೆ ಇದ್ಯಾವುದೂ ಬೇಡ ಎಂದು ನಾವು ನಾವೇ ಸಾಯಂಕಾಲದ ಹೊತ್ತು ಆ ಚಳಿಯಲ್ಲಿ ಇದ್ದಿಲು ಒಲೆಗಳನ್ನು ಇಟ್ಟುಕೊಂಡು ಸಹರಾ ಮರಭೂಮಿಯತ್ತ ಹೊರಟುಬಿಡುತ್ತೆವೆ. ಅಲ್ಲಿ ಒಂದಷ್ಟು ಒಣಗಿದ ಕುರುಚಲು ಟೊಂಗೆಗಳನ್ನು ಹುಡುಕಿ ತಂದು, ಗುಡ್ಡೆಹಾಕಿ, ಬೆಂಕಿಹಚ್ಚಿ, ಟೀ ಕಾಯಿಸಿಕೊಂಡು ಮೈ ಕಾಯಿಸುತ್ತಾ ಕುಳಿತುಬಿಡುತ್ತೇವೆ. ಸಿಗರೇಟು ಸೇದುವವರು ಸಿಗರೇಟು ಸೆದುತ್ತಾರೆ. ಒಂದಷ್ಟು ಪೋಲಿ ಜೋಕುಗಳನ್ನು ಹೇಳುವವರು ಪೋಲಿ ಜೋಕು ಹೇಳುತ್ತಾರೆ. ರಾಜಕೀಯದ ಬಗ್ಗೆ ಮಾತನಾಡುವವರು ರಾಜಕೀಯದ ಬಗ್ಗೆ ಮಾತನಾಡುತ್ತಾರೆ. ಜೊತೆಗೆ ಇವತ್ತು ಕಾಲೇಜಿನಲ್ಲಿ ಏನಾಯಿತು? ಮೀಟಿಂಗ್‍ನಲ್ಲಿ ಏನು ನಡೆಯಿತು? ಯಾವ ಹುಡುಗಿ ಯಾವ ಹುಡುಗನ ಜೊತೆ ಓಡಾಡುತ್ತಿದ್ದಾಳೆ? ನಿನ್ನೆ ರಾತ್ರಿ ಹಾಟ್ ಬರ್ಡ್ ಚಾನೆಲ್‍ನಲ್ಲಿ ಯಾವ್ಯಾವ ಹಾಟ್ ಮೂವಿಗಳನ್ನು ನೋಡಿದೆವು? ಮುಂದಿನವರ್ಷ ಎಷ್ಟು ಇನ್‍ಕ್ರೀಮೆಂಟು ಕೊಡುತ್ತಾರೆ? ಇತ್ಯಾದಿ ವಿಷಯಗಳ ಬಗ್ಗೆ ಸಣ್ಣದೊಂದು ಗಾಸಿಪ್ ಮಾಡುತ್ತೇವೆ. ಆನಂತರ ನಮ್ಮ ಮಾತು ಅವಳ ಕಡೆ ಹೊರಳುತ್ತದೆ. ಅವಳು ಎಂದರೆ ರೀಮ್; ನನ್ನ ವಿದ್ಯಾರ್ಥಿನಿ. ಇವಳು ಓದುತ್ತಿರುವದು ನಮ್ಮ ಡಿಪಾರ್ಟ್‍ಮೆಂಟಿನಲ್ಲಿ. ನೋಡಲು ತುಂಬಾ ಚನ್ನಾಗಿದ್ದಾಳೆ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವಷ್ಟು ರೂಪವತಿ. ಅವಳ ಇಂಗ್ಲೀಷು ಅಷ್ಟೇ ಸುಸ್ಪಷ್ಟ ಮತ್ತು ನಿರರ್ಗಳ. ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಮಾತನಾಡುತ್ತಾಳೆ; ಅದೂ ಬ್ರಿಟಿಷ್ accentನಲ್ಲಿ! ಜೊತೆಗೆ ಬುದ್ಧಿವಂತೆ. ಪ್ರತಿ ಸಾರಿ ಓದುವದರಲ್ಲಿ ಯಾರಿಗೂ ಮೊದಲ ಸ್ಥಾನವನ್ನು ಬಿಟ್ಟುಕೊಡುವದಿಲ್ಲ. ಈ ಕಾರಣಕ್ಕೇನೋ ಎಲ್ಲರ ಮಚ್ಚುಗೆಗೆ ಪಾತ್ರವಾಗಿದ್ದಾಳೆ. ಇವಳನ್ನು ಕೆಲವರು “Queen Cleopatra of Ghat College” ಎಂತಲೂ ಇನ್ನು ಕೆಲವರು “an apple of everyone’s eyes” ಎಂತಲೂ ಕರೆಯುತ್ತಾರೆ. ಹುಡಗರಂತೂ ಒಂದಲ್ಲ ಒಂದು ಕಾರಣ ಹುಡುಕಿ ಅವಳನ್ನು ಮಾತನಾಡಿಸಲು ಹಾತೊರೆಯುತ್ತಿರುತ್ತಾರೆ.



    ಲೆಕ್ಚರರ್ಸ್ ಕೂಡ ಇದಕ್ಕೆ ಹೊರತಾಗಿಲ್ಲ. ವಿನಾಕಾರಣ ಇವಳನ್ನು ಹುಡುಕಿಕೊಂಡು ಹೋಗುತ್ತಾರೆ. ಏನಾದರೊಂದು ನೆಪ ಹುಡುಕಿ ಇವಳೊಟ್ಟಿಗೆ ಮಾತನಾಡಲು ನೋಡುತ್ತಾರೆ. ಅವಳಿಗೆ ಏನಾದರು ಫೇವರ್ ಮಾಡಬಹುದಾ ನೋಡುತ್ತಾರೆ. ಹಾಗೆ ನೋಡಿದರೆ ಇವಳು ನಮ್ಮ ಇಡಿ ಡಿಪಾರ್ಟ್‍ಮೆಂಟಿನಲ್ಲಿ ನನ್ನೊಟ್ಟಿಗೆ ಮತ್ತು ನಮ್ಮ ಎಚ್.ಒ.ಡಿ. ಜೊತೆಗಷ್ಟೇ ಚನ್ನಾಗಿ ಮಾತನಾಡುವದು. ಬಾಕಿಯವರ ಜೊತೆ ಅಷ್ಟಕ್ಕಷ್ಟೆ. ಹೀಗಾಗಿ ನನ್ನ ಸಹೋದ್ಯೋಗಿಗಳೆಲ್ಲಾ ನನ್ನನ್ನು ಆಗಾಗ ಅವಳ ಹೆಸರು ಹೇಳಿ ರೇಗಿಸುವದುಂಟು. ಅವರು ಹಾಗೆ ರೇಗಿಸುವಾಗಲೆಲ್ಲಾ ಖುಶಿಯಾಗುತ್ತದೆ. ಇಲ್ಲದ ಆಸೆಗಳು ಮನದಲ್ಲಿ ಹುಟ್ಟಿಕೊಳ್ಳುತ್ತವೆ. ಹೀಗೆ ಒಂದು ಸಾರಿ ಅವಳೊಟ್ಟಿಗೆ ಮಾತನಾಡುವಾಗ ಕೇಳಿದ್ದೆ “ರೀಮ್, ಅರೇಬಿಕ್ ಭಾಷೆಯಲ್ಲಿ ನಿನ್ನ ಹೆಸರಿನ ಅರ್ಥವೇನು?” ಅವಳು ಕಿಲಕಿಲ ನಗುತ್ತಾ, ಹುಬ್ಬುಹಾರಿಸುತ್ತಾ “deer (ಜಿಂಕೆ)” ಎಂದು ಹೇಳಿದ್ದಳು. ಜೊತೆಗೆ ನನ್ನ ಹೆಸರಿನರ್ಥ ಚನ್ನಾಗಿದೆ ಅಲ್ವ? ಎಂದು ಹೆಮ್ಮೆಯಿಂದ ಬೀಗಿದ್ದಳು. ನಿಜ, ಅವಳು ನಿಜವಾಗಲೂ ಜಿಂಕೆಯಂತೆ ಇದ್ದಾಳೆ. ನಿಂತಲ್ಲಿ ನಿಲ್ಲಲಾರಳು. ಕುಂತಲ್ಲಿ ಕೂರಲಾರಳು. ಪಾದರಸದಂತೆ ಅತ್ತ ಇತ್ತ ಓಡಾಡುತ್ತಲೇ ಇರುತ್ತಳೆ. ಅವಳದು ತುಂಟ ಕಂಗಳು, ಹರಿವ ತೊರೆಯ ಝುಳುಝುಳು ನಿನಾದದ ದನಿ. ಬಳಕುವ ನಡು! ಅಬ್ಬಾ ಎಂಥವನಾದರು ಅವಳನ್ನು ನೋಡಿ ಹುಚ್ಚನಾಗುತ್ತಾನೆ. ಹೀಗೆ ಒಮ್ಮೆ ನನ್ನ ಭಾರತೀಯ ಸಹೋದ್ಯೋಗಿಯೊಬ್ಬ ಅವಳ ಬಗ್ಗೆ ಸುಖಾಸುಮ್ಮನೆ ಪ್ರೀತಿಯ ಮಧುರ ಭಾವನೆಯೊಂದು ಬೆಳೆಸಿಕೊಂಡು ಹುಚ್ಚನಾಗಿಬಿಟ್ಟಿದ್ದ. ಎಷ್ಟು ಹುಚ್ಚನೆಂದರೆ ಅವಳಿಗೋಸ್ಕರ ಈಗಾಗಲೇ ಮದುವೆಯಾಗಿ ಇಂಡಿಯಾದಲ್ಲಿ ಬಿಟ್ಟಿರುವ ತನ್ನ ಹೆಂಡತಿಯನ್ನು ಬೇಕಾದರು ಬಿಡಲು ತಯಾರಾಗಿದ್ದ. ಆದರೆ ಅವಳು ಇವನ ಪ್ರೀತಿಯ ಬೇಡಿಕೆಯನ್ನು ಅತ್ಯಂತ ನಾಜೂಕಾಗಿ ನಿರಾಕರಿಸಿ ಅವನನ್ನು ಮತ್ತಷ್ಟು ಹುಚ್ಚಳನ್ನಾಗಿ ಮಾಡಿದ್ದಳು.

    ಒಂದುವೇಳೆ ಅವಳು “ಹೂಂ” ಎಂದಿದ್ದರೆ ಏನಾಗುತ್ತಿತ್ತು? ಅವಳೊಟ್ಟಿಗೆ ಅವನ ಮದುವೆಯಾಗುತ್ತಿತ್ತು. ಅವಳು ಇವನ ಮೇಡಮ್ (ಅರೇಬಿ ಭಾಷೆಯಲ್ಲಿ “ಮೇಡಮ್” ಅಂದರೆ ಹೆಂಡತಿ ಎಂದರ್ಥ) ಆಗುತ್ತಿದ್ದಳು. ಆಮೇಲೆ ಅವನಿಗೆ ಇಲ್ಲಿಯ ಗ್ರೀನ್ ಕಾರ್ಡ್, ಸಿಟಿಜನ್‍ಶಿಪ್ ಸಿಗುತ್ತಿತ್ತು. ಮಾತ್ರವಲ್ಲ ಅಮೆರಿಕದಲ್ಲೋ, ಬ್ರಿಟನ್‍ನಲ್ಲೋ ಹೆಚ್ಚಿನ ವಿಧ್ಯಾಭ್ಯಾಸ ಮಾಡಲು ಸರಕಾರದಿಂದ ಸ್ಕಾಲರ್ಶಿಪ್ ಸಹ ಸಿಗುತ್ತಿತ್ತು, ಇದೆಲ್ಲಾ ಮುಗಿಸಿದ ಬಳಿಕ ಇಲ್ಲಿ ಆತ ಬಹಳ ಬೇಗನೆ ಉನ್ನತ ಹುದ್ದೆಯನ್ನೂ ಅಲಂಕರಿಸಬಹುದಿತ್ತು. ಇದೆಲ್ಲವೂ ಆತನಿಗೆ ಕೇವಲ ಒಂದು ಹುಡುಗಿಯನ್ನು ಮದುವೆಯಾಗುವದರಿಂದ ಸಿಕ್ಕುಬಿಡುತ್ತಿತ್ತು. ಆದರೆ ಆತ ಇಸ್ಲಾಂಗೆ ಮತಾಂತರ ಹೊಂದಬೇಕು, ಮೊದಲೆರೆಡು ವರ್ಷ ಭಾರತಕ್ಕೆ ಹೋಗದೇ ಇರಬೇಕು, ಭಾರತದೊಂದಿಗಿನ ತನ್ನ ತಂತುಗಳನ್ನು ಕ್ರಮೇಣ ಕಡಿದುಕೊಳ್ಳುತ್ತಾ ಬರಬೇಕು. ನಿಧಾನಕ್ಕೆ ಇಲ್ಲಿ ಬೇರಿಳಿಸುತ್ತಾ ಹೊಸ ಬದುಕು, ಹೊಸ ನೆನಪುಗಳನ್ನು ಕಟ್ಟಿಕೊಳ್ಳಬೇಕು. ಒಂದುವೇಳೆ ಅವನು ಭಾರತಕ್ಕೆ ವಾಪಾಸು ಹೋದರೂ ಇಷ್ಟೆಲ್ಲಾ ಗೊತ್ತಿದ್ದ ಅವನನ್ನು ಅವರ ಮನೆಯವರು ಹೃದಯಪೂರ್ವಕವಾಗಿ ಸ್ವೀಕರಿಸುತ್ತಾರೆಯೇ? ಒಂದು ರಿತಿಯಲ್ಲಿ ಅವಳು ಅವನನ್ನು ನಿರಾಕರಿಸಿದ್ದು ಒಳ್ಳೆಯದೇ ಆಯಿತು. ಇಲ್ಲವಾದರೆ ಅವನ ಊರಿನಲ್ಲಿ ಅವನನ್ನೇ ನಂಬಿಕೊಂಡು ಬದುಕುತ್ತಿರುವ ಜೀವಗಳ ಕತೆ ಏನಾಗಿರುತ್ತಿತ್ತು? ಆದರೆ ಇಲ್ಲಿ ನಾಲ್ಕೈದು ಜನ ಭಾರತೀಯರು ಭಾರತದೊಟ್ಟಿಗಿನ ತಮ್ಮ ಸಂಬಂಧಗಳನ್ನು, ತಂತುಗಳನ್ನು ಕಡಿದುಕೊಂಡು ಇಲ್ಲಿಯ ಹುಡುಗಿಯರೊಟ್ಟಿಗೆ ಮದುವೆಮಾಡಿಕೊಂಡು ಹಾಯಾಗಿದ್ದಾರೆ. ಅವರಿಗೆ ಈ ಕುರಿತು ಯಾವುದೇ ಗಿಲ್ಟ್ ಆಗಲಿ, ತಪ್ಪಿನ ಅರಿವಾಗಲಿ ಇಲ್ಲ. ಕೇಳಿದರೆ ಅದೆಲ್ಲಾ ‘ಅಲ್ಲಾ’ಹುನ ಇಚ್ಛೆಯಾಗಿತ್ತು ಎಂದು ಹೇಳುತ್ತಾರೆ. ನಾವೆಲ್ಲಾ ಅವರನ್ನು ‘ಖರ್ಜೂರ ಬೆಳೆವ ಹೊಲದಲ್ಲಿ ಮಲ್ಲಿಗೆ ಬಳ್ಳಿಯನ್ನು ನೆಟ್ಟವರು’ ಎಂದು ತಮಾಷೆ ಮಾಡುತ್ತಿರುತ್ತೇವೆ.

    ಇಲ್ಲಿಯ ಹುಡುಗಿಯರನ್ನು ಪ್ರೀತಿಸಬಾರದು. ಪ್ರೀತಿಸಿದ ಮೇಲೆ ಅದಕ್ಕೆ ಬದ್ಧವಾಗಿರಬೇಕು. ಇಲ್ಲವಾದರೆ ಸುಮ್ಮನೆ ಬಿಟ್ಟಾರೆಯೇ ಈ ಅರಬ್ಬರು? ಈ ಹಿಂದೆ ಈಜಿಪ್ಟ್ ಮೂಲದ ಕ್ರಿಶ್ಚನ್ ಡಾಕ್ಟರನೊಬ್ಬನ ಮನೆಗೆ ಇಲ್ಲಿನ ಕಾಲೇಜು ಹುಡುಗಿಯೊಬ್ಬಳು ದಿನಾಲೂ ಮಧ್ಯಾಹ್ನದ ಹೊತ್ತು ಹೋಗಿ ಬಂದು ಮಾಡುತ್ತಿದ್ದಾಳೆ ಎನ್ನುವದೇ ಭಾರೀ ಸುದ್ಧಿಯಾಗಿ ಅವನನ್ನು ಸಾಯಿಸಲು ಹೋಗಿದ್ದರು. ಕೊನೆಗೆ ಇಸ್ಲಾಂಗೆ ಮತಾಂತರ ಹೊಂದಿ ಅವಳನ್ನು ಮದುವೆಯಾಗು ಇಲ್ಲ ದೇಶ ಬಿಡು ಎಂಬ ಒತ್ತಡ ಹೇರಿದರು. ಅವನು ಸುಮ್ಮನೆ ದೇಶ ಬಿಟ್ಟುಹೋದ. ಇನ್ನೊಂದು ಸಾರಿ ಇನ್ನೊಬ್ಬ ವಿದೇಶಿ ಡಾಕ್ಟರು ತನ್ನ ತಪಾಸಣಾ ಕೋಣೆಯಲ್ಲಿ ನನ್ನ ವಿದ್ಯಾರ್ಥಿಯೊಬ್ಬಳನ್ನು ತಪಾಸಣೆಯ ನೆಪದಲ್ಲಿ ಅನವಶ್ಯಕವಾಗಿ ಅವಳ ಅಂಗಾಂಗಗಳನ್ನು ಮುಟ್ಟಿ ಲೈಂಗಿಕವಾಗಿ ಹಿಂಸಿಸಿದ ಎಂಬ ಕಾರಣಕ್ಕೆ ಅವನನ್ನು ಗಡಿಪಾರು ಮಾಡಲಾಯಿತು. ಈ ಎರಡು ಘಟನೆಗಳು ಬೇರೆಯವರನ್ನು ಎಚ್ಚರದಲ್ಲಿಟ್ಟಿವೆ. ಇವೆರೆಡು ಕಾಮದ ಕಥೆಗಳು. ಆದರೆ ಪ್ರೇಮಕ್ಕೆ ಸಂಬಂಧ ಪಟ್ಟ ಅನೇಕ ಕಥೆಗಳು ಆಗಾಗ ಹುಟ್ಟಿ ಸಾಯುತ್ತಿರುತ್ತವೆ. ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ ನಮ್ಮ ಓರಿಸ್ಸಾದ ಡಾಕ್ಟರೊಬ್ಬರು ತಮ್ಮ ಕೋರಿಯನ್ ನರ್ಸ್ ಒಬ್ಬಳ ಪ್ರೇಮಪಾಶಕ್ಕೆ ಸಿಲುಕಿದ್ದರು. ಅವರ ಪ್ರೀತಿ ಅದ್ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಆ ಪುಣ್ಯಾತ್ಮ ಈಗಾಗಲೇ ಪ್ರೀತಿಸಿ ಮದುವೆಯಾದ ತನ್ನ ಡಾಕ್ಟರ್ ಹೆಂಡತಿಯನ್ನು ಹಾಗೂ ಎದೆಮಟ್ಟ ಬೆಳೆದುನಿಂತ ತನ್ನ ಇಬ್ಬರು ಗಂಡು ಮಕ್ಕಳನ್ನು ಬಿಡಲು ತಯಾರಾಗಿದ್ದ. ಸಾಲದ್ದಕ್ಕೆ ಅವರು ಪ್ರೀತಿಸುವ ಸಮಯದಲ್ಲೇ ಆತ ಭಾರತಕ್ಕೆ ಬಂದಾಗ ಆತನ ಪ್ರೇಯಸಿ ಕೇಳಿದಳೆಂದು ಅಲ್ಲಿಂದ ಎಳೆನೀರನ್ನು ತಂದುಕೊಟ್ಟಿದ್ದರು. ಅದಕ್ಕೋಸ್ಕರ ಚೆಕಿನ್ ಸಮಯದಲ್ಲಿ ಎಕ್ಸೆಸ್ ಲಗೇಜ್ ಫೀಸು ಎಂದು ಸಾವಿರಗಟ್ಟಲೆ ದಂಡ ತೆತ್ತಿದ್ದರು. ಅವಳೋ ಒಂದೇ ಗುಟಿಕಿನಲ್ಲಿ ಅವೆಲ್ಲವನ್ನೂ ಕುಡಿದು ಬೀಸಾಡಿದ್ದಳು. ಇವರೋ ಸೋಮರ್ಸೆಟ್ ಮೌಮ್‍ನ “ದಿ ಲಂಚಾನ್” ಕಥೆಯಲ್ಲಿನ ನಾಯಕ ಹೀಗೆ ಪರಿಚಯವಾದ ಹುಡುಗಿಯೊಬ್ಬಳಿಗೆ ತನ್ನ ಬಳಿ ಇರುವ ಹಣವನ್ನೆಲ್ಲಾ ಖರ್ಚುಮಾಡಿ ಒಂದು ಲಂಚ್ ಕೊಡಿಸಿ ತೃಪ್ತಿಪಡುವಷ್ಟೇ ತೃಪ್ತಿಪಟ್ಟಿದ್ದರು. ಅವರು ಇನ್ನೇನು ಮದುವೆಯಾಗುತ್ತಾರೆ ಎನ್ನುವಷ್ಟರಲ್ಲಿ ಅವರ ಕೆಲವು ಸಹೋದ್ಯೋಗಿಗಳು ಅವರಿಗೊಂದಿಷ್ಟು ಬುದ್ಧಿವಾದ ಹೇಳಿ ಈ ಮದುವೆಯನ್ನು ಅದ್ಹೇಗೋ ತಪ್ಪಿಸಿದ್ದರು. ಮುಂದೆ ಸ್ವಲ್ಪ ದಿನದಲ್ಲಿಯೇ ಆ ನರ್ಸ್ ತನ್ನ ದೇಶಕ್ಕೆ ವಾಪಾಸ್ ಹೋದಳು. ಇವರು ಸ್ವಲ್ಪ ದಿವಸ ದೇವದಾಸ್‍ನಂತೆ ಇದ್ದು ಕ್ರಮೇಣ ಸಹಜ ಸ್ಥಿತಿಗೆ ಮರಳಿದ್ದರು.

    ಹೀಗೆ ಸ್ನೇಹಿತರನ್ನು, ಬಂಧುಗಳನ್ನು, ಸಂಸಾರವನ್ನು ಬಿಟ್ಟು ಕೆಲಸ ಹುಡುಕಿ ಬಂದ ನಮ್ಮಂತವರದು ಒಂಥರಾ ಸತ್ತ ಬದುಕು. ಅತ್ತ ಅಲ್ಲಿಯೂ ಇರದ ಇತ್ತ ಇಲ್ಲಿಯೂ ಇರದ ಮಾನಸಿಕ ಸಂಘರ್ಷಗಳ ನಡುವೆ ಜರ್ಜರಿತರಾಗುತ್ತಾ ನಾವು ಒದೊಂದು ಸಾರಿ ಸಂಪೂರ್ಣವಾಗಿ ಕುಗ್ಗಿಹೋಗುತ್ತೇವೆ. ದೈಹಿಕವಾಗಿ ಮಾತ್ರ ಇಲ್ಲಿರುತ್ತೇವೆ. ಆದರೆ ಮನಸ್ಸೆಲ್ಲಾ ಪೂರ್ತಿ ನಮ್ಮನಮ್ಮ ಊರುಗಳಲ್ಲಿರುತ್ತದೆ. ಆದರೆ ಪ್ರತಿವರ್ಷ ಎರಡು ತಿಂಗಳಗಳ ಕಾಲ ರಜೆಗೆಂದು ಅಲ್ಲಿಗೆ ಹೋದಾಗ ಕಟ್ಟಿಕೊಂಡುಬಂದ ನೆನಪುಗಳು ಹಾಗೂ ಇಲ್ಲಿ ಕುಳಿತು ಭವಿಷ್ಯದ ಬಗೆಗೆ ಹೆಣೆಯುವ ಕನಸುಗಳು ಮಾತ್ರ ನಮ್ಮನ್ನು ಜೀವಂತವಾಗಿಡುತ್ತವೆ. ನಾವೇನೋ ದೊಡ್ಡ ಹುದ್ದೆಯಲ್ಲಿ ಇರುವವರು, ಒಳ್ಳೆ ಸಂಬಳ ಎಣಿಸುವವರು. ನಮ್ಮ ಹತ್ತಿರ ಮತ್ತು ನಮ್ಮ ಕುಟಂಬದವರ ಹತ್ತಿರ ಲ್ಯಾಪ್‍ಟಾಪ್ ಮತ್ತು ಇಂಟರ್ನೆಟ್ ಸೌಲಭ್ಯ ಇದ್ದೇ ಇರುತ್ತದೆ. ಹೀಗಾಗಿ ನಾವು ನಮ್ಮ ಮನೆಯವರ ಜೊತೆ ಬೇಕೆಂದಾಗ ಮಾತಾಡಿ ಒಂದಷ್ಟು ಮನಸ್ಸು ಹಗುರ ಮಾಡಿಕೊಳ್ಳುತ್ತೇವೆ. ಅಂತೆಯೇ ತೀರ ಇಂಟರ್ನೆಟ್ ಇಲ್ಲದ ಬಂಧುಗಳನ್ನು ಫೋನಿನ ಮೂಲಕ ಸಂಪರ್ಕಿಸಿ ಖುಶಿಯಾಗಿರುತ್ತೇವೆ. ಆದರೆ ಕೇವಲ ಮೂವತ್ತು ಸಾವಿರ ರೂಪಾಯಿಗೋಸ್ಕರ (ಊಟ ಮತ್ತು ಸಾಮೂಹಿಕ ವಸತಿ ಉಚಿತ) ಇಲ್ಲಿಗೆ ದುಡಿಯಲು ಬಂದ ಮೇಸ್ತ್ರಿಗಳು, ಪ್ಲಂಬರ್ ಗಳು, ಎಲೆಕ್ಟ್ರೀಶಿಯನ್‍ಗಳ ಕಥೆ ಕೇಳುವದಂತೂ ಬೇಡವೇ ಬೇಡ. ಅವರಿಗೆ ಲ್ಯಾಪ್‍ಟಾಪ್, ಇಂಟರ್ನೆಟ್ ಕನಸಿನ ಮಾತು. ಹೋಗಲಿ ಫೋನು ಆದರೂ ಮಾಡಿ ಮಾತಾಡೋಣವೆಂದರೆ ಭಾರಿ ಮೊತ್ತವನ್ನು ತೆರಬೇಕಾಗುತ್ತದೆಂದು ಸುಮ್ಮನಿದ್ದುಡುತ್ತಾರೆ. ಮಾಡಿದರೂ ಹತ್ತೋ ಹದಿನೈದು ದಿವಸಗಳಿಗೊಂದು ಸಾರಿ ಮಾಡುತ್ತಾರೆ. ಮಾತನಾಡುವದನ್ನೆಲ್ಲಾ ಒಂದು ಹಾಳೆಯಲ್ಲಿ ಬರೆದುಕೊಂಡು ಬಡಬಡನೆ ಮಾತನಾಡಿ ಮುಗಿಸುತ್ತಾರೆ. ಅದೂ ಕೇವಲ ಐದಾರು ನಿಮಿಷಗಳಷ್ಟು ಮಾತ್ರ. ಇಂಥವರು ತಮ್ಮ ಕಾಮನೆಗಳನ್ನಷ್ಟೇ ಅಲ್ಲ ಭಾವನೆಗಳನ್ನು ಕೂಡ ಹತ್ತಿಕ್ಕಿ ಬದುಕುತ್ತಾರೆ. ನಾವು ವರ್ಷಕ್ಕೆ ಎರಡು ಸಾರಿ ನಮ್ಮ ಊರಿಗೆ ಹೋಗಿಬರುತ್ತೇವೆ. ಅವರೋ ಎರಡು ವರ್ಷಕ್ಕೋ ಮೂರು ವರ್ಷಕ್ಕೋ ಒಂದು ಸಾರಿ ಹೋಗಬೇಕು; ಅದೂ ಅವರ ಕಾಂಟ್ರ್ಯಾಕ್ಟರ್ ವಿಮಾನದ ಟಿಕೇಟ್‍ಗಳನ್ನು ತೆಗೆದುಕೊಟ್ಟರೆ ಮಾತ್ರ. ಇನ್ನು ಯಾರದಾದರೂ ಸಾವಿನ ಸುದ್ದಿ ಬಂದರೆ ಅವರ ಅಂತ್ಯಸಂಸ್ಕಾರಕ್ಕೆ ಹೋಗಲಾರದೆ ಸತ್ತವರನ್ನು ನನಪುಗಳಲ್ಲಿ ಬದುಕಿಸಿಕೊಂಡು ರೂಮಲ್ಲಿ ಒಬ್ಬರೇ ಕುಳಿತು ಅಳುತ್ತಾರೆ. ಮಾರನೆಯ ದಿನ ಮತ್ತೆ ಎಂದಿನಂತೆ ಕೆಲಸಕ್ಕೆ ಹೋಗುತ್ತಾರೆ. “ಸಾಕು ಇಲ್ಲಿಯ ಪರದೇಶಿ ಬದುಕು. ಮತ್ತೆ ಬರುವದು ಬೇಡ” ಎಂದು ಪ್ರತಿಸಾರಿ ಅಂದುಕೊಂಡು ಹೋಗುತ್ತೇವೆ. ಆದರೆ ನಮಗಾಗಿ ಊರುಗಳಲ್ಲಿ ನಮ್ಮನ್ನು ವಾಪಸ್ ವಿಮಾನ ಹತ್ತಿಸಲು ಹೊಸ ಸಮಸ್ಯೆಗಳು ಕಾಯುತ್ತಿರುತ್ತವೆ. ಮಕ್ಕಳ ವಿದ್ಯಾಭ್ಯಾಸವೊ, ಮನೆಯ ಕಷ್ಟವೊ, ತಂಗಿತಮ್ಮರ ಮದುವೆಯೊ ನಮ್ಮನ್ನು ಹಿಮ್ಮೆಟ್ಟಿಸುತ್ತವೆ. ಹೋಗಲಿ ಇಲ್ಲೇ (ಭಾರತದಲ್ಲಿ) ಇದ್ದುಕೊಂಡು ಕೆಲಸ ಮಾಡೋಣವೆಂದರೆ ಇಲ್ಲಿ ಕೊಡುವ ಸಂಬಳ ಅಲ್ಲಿಗಲ್ಲಿಗೆ ಸರಿಹೋಗುತ್ತದೆ. ಮೇಲಾಗಿ ನಾವು ದೊಡ್ಡ ಮೊತ್ತದ ಸಂಬಳ ಎಣಿಸಿದವರು ಸಣ್ಣ ಸಂಬಳಕ್ಕೆ ಕೆಲಸಮಾಡಲು ನಮ್ಮ ಮನಸ್ಸು ಒಗ್ಗಿಕೊಳ್ಳುವದಿಲ್ಲ. ಬಹುಶಃ, ನಮ್ಮೆಲ್ಲಾ ಕಮಿಟ್‍ಮೆಂಟ್‍ಗಳು ಮುಗಿದು, ಮನೆಯೊಂದನನ್ನು ಕಟ್ಟಿ, ಒಂದಷ್ಟು ಬ್ಯಾಂಕ್ ಬ್ಯಾಲೆನ್ಸ್ ಅಂತಾದ ಮೇಲೆಯಷ್ಟೇ ನಾವಿಲ್ಲಿ ಕೆಲಸ ಮಾಡಲು ಅಣಿಯಾಗುತ್ತದೇನೋ? ಈ ಎಲ್ಲ ಕಾರಣಕ್ಕಾಗಿ ನಾವು ಎಂದಿನಂತೆ ಅಲ್ಲಿಯ ನೆನಪುಗಳೊಂದಿಗೆ ಹಾರಿಬಂದು ಇಲ್ಲಿ ಕುಳಿತು ಹೊಸಹೊಸ ಕನಸುಗಳನ್ನು ಹೆಣೆಯುತ್ತಾ ಮತ್ತೆ ನಮ್ಮ ಕೆಲಸದಲ್ಲಿ ಮಗ್ನರಾಗುತ್ತೇವೆ.

    ಖ್ಯಾತ ಇಂಗ್ಲೀಷ್ ಲೇಖಕಿ ಶೋಭಾ ಡೇ ಹೇಳುತ್ತಾರೆ; Money is sexier than sex. ಈ ಮಾತು ಅಪ್ಪಟ ಸತ್ಯ ಅಲ್ಲವೇ?


    -ಉದಯ್ ಇಟಗಿ

    ಈ ಲೇಖನ ‘’ಅವಧಿ”ಯಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ: http://avadhimag.com/?p=54037

    ಆ ಕಂಗಳು.........

  • ಮಂಗಳವಾರ, ಮೇ 15, 2012
  • ಬಿಸಿಲ ಹನಿ
  • ರೋಹನಾ ತಲುಪುವವರೆಗೂ ಆ ಇಡಿ ಕಂಪಾರ್ಟ್‍ಮೆಂಟು ನನ್ನೊಬ್ಬನದೇ ಆಗಿತ್ತು. ಬಳಿಕ ಹುಡುಗಿಯೊಬ್ಬಳು ನನ್ನನ್ನು ಸೇರಿಕೊಂಡಳು. ಅವಳನ್ನು ಬೀಳ್ಕೊಡಲು ದಂಪತಿಗಳಿಬ್ಬರು ಬಂದಿದ್ದರು. ಬಹುಶಃ, ಅವರು ಆಕೆಯ ತಂದೆ-ತಾಯಂದಿರರಬೇಕು. ಅವಳ ಸುರಕ್ಷತೆಯ ಬಗ್ಗೆ ಅವರು ತುಸು ಹೆಚ್ಚೇ ಕಳವಳಗೊಂಡಂತೆ ಕಾಣುತ್ತಿತ್ತು. ಆ ಹೆಂಗಸು ಸಾಮಾನುಗಳನ್ನು ಎಲ್ಲಿಡಬೇಕು, ಕಿಟಕಿಯಿಂದಾಚೆ ಯಾವಾಗ ತಲೆಹಾಕಬಾರದು, ಹಾಗು ಅಪರಿಚಿತರೊಂದಿಗೆ ಮಾತನಾಡುವದನ್ನು ಹೇಗೆ ತಳ್ಳಿಹಾಕಬೇಕೆಂಬುದರ ಬಗ್ಗೆಯೆಲ್ಲಾ ಸಲಹೆ ಸೂಚನೆಗಳನ್ನು ಕೊಟ್ಟಳು.

    ಅವರು ವಿದಾಯ ಹೇಳಿದರು. ರೈಲು ನಿಲ್ದಾಣದಿಂದ ಹೊರಟಿತು. ನಾನಾಗ ಸಂಪೂರ್ಣ ಕುರುಡನಾಗಿದ್ದೆ. ನನ್ನ ಕಂಗಳು ಕತ್ತಲೆ ಮತ್ತು ಬೆಳಕಿಗೆ ಮಾತ್ರ ಸ್ಪಂದಿಸುತ್ತಿದ್ದವು. ಹೀಗಾಗಿ ಆ ಹುಡುಗಿ ನೋಡಲು ಹೇಗೆ ಕಾಣುತ್ತಿದ್ದಳು ಎಂಬುದನ್ನು ಹೇಳಲು ಅಸಮರ್ಥನಾಗಿದ್ದೆ. ಆದರೆ ಅವಳು ನಡೆಯುವಾಗ ಅವಳ ಹಿಮ್ಮಡಿಗೆ ಬಡಿಯುತ್ತಿದ್ದ ಸಪ್ಪಳದಿಂದ ಆಕೆ ಚಪ್ಪಲಿ ಹಾಕಿದ್ದಳೆಂದು ಗೊತ್ತಾಯಿತು.




    ಅವಳು ನೋಡಲು ಹೇಗಿದ್ದಾಳೆಂದು ತಿಳಿಯಲು ನನಗೆ ಸ್ವಲ್ಪ ಸಮಯ ಹಿಡಿಯಬಹುದು. ಅಥವಾ ಬಹುಶಃ, ಅದು ಸಾಧ್ಯವಾಗದೆಯೂ ಹೋಗಬಹುದು! ಆದರೆ ಅವಳ ಧ್ವನಿ ನಂಗೆ ತುಂಬಾ ಹಿಡಿಸಿತು. ಮಾತ್ರವಲ್ಲ ಅವಳ ಚಪ್ಪಲಿಯ ಸದ್ದು ಕೂಡ ಇಷ್ಟವಾಯಿತು.

    “ನೀವು ಡೆಹರಾಗೆ ಹೋಗುತ್ತಿದ್ದೀರಾ?” ನಾನು ಕೇಳಿದೆ.

    ಬಹುಶಃ, ನಾನು ಕತ್ತಲ ಮೂಲೆಯಲ್ಲಿ ಕುಳಿತಿರಬೇಕು. ಅವಳು ನನ್ನ ದನಿ ಕೇಳಿ ಬೆಚ್ಚಿಬಿದ್ದಳು. ಅವಳು ಸ್ವಲ್ಪ ಆಶ್ಚರ್ಯಚಕಿತಳಾಗಿ “ಓ! ಇಲ್ಲಿ ಯಾರಾದರು ಇದ್ದಾರೆಂದು ನನಗೆ ಗೊತ್ತಾಗಲಿಲ್ಲ” ಎಂದು ಉದ್ಗರಿಸಿದಳು.

    ಕೆಲವೊಮ್ಮೆ ಹಾಗಾಗುತ್ತದೆ. ದೃಷ್ಟಿ ಚನ್ನಾಗಿರುವವರು ಕೂಡ ಒಮ್ಮೊಮ್ಮೆ ತಮ್ಮ ಮುಂದಿರುವದನ್ನು ಸರಿಯಾಗಿ ಗಮನಿಸುವದಿಲ್ಲ. ಅವರಿಗೆ ನೋಡಲು ಬಹಳಷ್ಟಿರುತ್ತದೆ. ಆದರೆ ಸರಿಯಾಗಿ ನೋಡುವದಿಲ್ಲ. ದೃಷ್ಟಿಹೀನರು (ಅಥವಾ ಮಂದ ದೃಷ್ಟಿಯುಳ್ಳವರು) ಹಾಗಲ್ಲ. ತಮ್ಮ ಇತರೆ ಇಂದ್ರಿಯಾನುಭವಗಳ ಮೂಲಕ ಬರೀ ಅಗತ್ಯವಿರುವದನ್ನಷ್ಟೇ ಗಮನಿಸಿದರೆ ಸಾಕು. ಆದರೆ ಅವರು ಅದಕ್ಕಿಂತ ಹೆಚ್ಚಾಗಿ ಗ್ರಹಿಸಿರುತ್ತಾರೆ.

    “ನಾನು ಕೂಡ ನಿಮ್ಮನ್ನು ನೋಡಲಿಲ್ಲ” ನಾನು ಹೇಳಿದೆ, “ಆದರೆ ನೀವು ಒಳಬರುವದು ಕೇಳಿಸಿತು.”

    ನಾನು ಕುರುಡ ಎಂಬುದನ್ನು ಅವಳಿಂದ ಮುಚ್ಚಿಡಲು ಇನ್ನಿಲ್ಲದ ಪ್ರಯತ್ನಮಾಡುತ್ತಿದ್ದೆ. ಅವಳಿಗೆ ಗೊತ್ತಾಗಬಾರದೆಂದು ಸೀಟಿಗೆ ಅಂಟಿಕೊಂಡೇ ಕುಳಿತೆ. ಹಾಗೆ ಕುಳಿತುಕೊಳ್ಳುವದು ನಂಗೇನೂ ಕಷ್ಟವಾಗಲಿಲ್ಲ.

    “ನಾನು ಸಹರಾನಪುರದಲ್ಲಿ ಇಳಿಯುತ್ತೇನೆ. ಅಲ್ಲಿಗೆ ನನ್ನ ಆಂಟಿ ಬರುತ್ತಾರೆ ನನ್ನ ಕರೆದೊಯ್ಯಲು” ಹುಡುಗಿ ಹೇಳಿದಳು.

    “ಹಾಗಿದ್ದರೆ ನಾನು ನಿಮ್ಮೊಂದಿಗೆ ಇಷ್ಟೊಂದು ಸಲಿಗೆಯಿಂದ ಇರಬಾರದಿತ್ತು”, ನಾನು ಹೇಳಿದೆ, “ಸಾಮಾನ್ಯವಾಗಿ ಈ ಆಂಟಿಯರೆಂದರೆ ಒಂಥರಾ ಭಯ ಹುಟ್ಟಿಸುವ ಪ್ರಾಣಿಗಳು.”

    “ನೀವೆಲ್ಲಿಗೆ ಹೋಗುತ್ತಿದ್ದೀರಾ?” ಅವಳು ಕೇಳಿದಳು.

    “ಡೆಹರಾಗೆ, ಅಲ್ಲಿಂದ ಮಸ್ಸೂರಿಗೆ”

    “ಓ, ಹೌ ಲಕ್ಕಿ ಯು ಅರ್! ನಾನೂ ಮಸ್ಸೂರಿಗೆ ಹೋಗಬೇಕಿತ್ತು. ಅಲ್ಲಿಯ ಬೆಟ್ಟಗುಡ್ಡಗಳೆಂದರೆ ನಂಗೆ ತುಂಬಾ ಇಷ್ಟ. ಅದರಲ್ಲೂ ವಿಶೇಷವಾಗಿ ಅಕ್ಟೋಬರ್ ತಿಂಗಳಿನ ಬೆಟ್ಟಗುಡ್ಡಗಳೆಂದರೆ ಪಂಚಪ್ರಾಣ.”

    “ಹೌದು, ಇದು ಪ್ರಶಸ್ತ ಸಮಯ.” ಎಲ್ಲವನ್ನು ನೆನಪಿಗೆ ತಂದುಕೊಳ್ಳುತ್ತಾ ಹೇಳಿದೆ. “ಈ ಸಮಯದಲ್ಲಿ ಗುಡ್ಡಗಳೆಲ್ಲಾ ಡೇರಾ ಹೂಗಳಿಂದ ಕಂಗೊಳಿಸುತ್ತಿರುತ್ತವೆ, ಸೂರ್ಯ ಆಹ್ಲಾದಕರವಾಗಿರುತ್ತಾನೆ, ಮತ್ತು ರಾತ್ರಿ ಹೊತ್ತು ಬೆಂಕಿಕಾಯಿಸುತ್ತಾ ಸ್ವಲ್ಪ ಬ್ರ್ಯಾಂಡಿ ಬೇಕಾದರೆ ಕುಡಿಬಹುದು. ಈ ಸಮಯದಲ್ಲಿ ಎಲ್ಲ ಪ್ರವಾಸಿಗರು ಹೊರಟುಹೋಗಿರುತ್ತಾರೆ, ರಸ್ತೆಗಳು ನಿರ್ಜನವಾಗಿರುತ್ತವೆ, ಹಾಗು ಇಡಿ ವಾತಾವರಣ ಪ್ರಶಾಂತತೆಯಿಂದ ಕೂಡಿರುತ್ತದೆ. ಹೌದು, ಅಕ್ಟೋಬರ್ ತಿಂಗಳು ಪ್ರಶಸ್ತ ಸಮಯ!”




    ಅವಳು ಸುಮ್ಮನಿದ್ದಳು. ಬಹುಶಃ, ನನ್ನ ಮಾತುಗಳು ಅವಳನ್ನು ತಾಗಿರಬೇಕು. ಅಥವಾ ಅವಳು ನನ್ನನ್ನು ಒಬ್ಬ ‘ರೊಮ್ಯಾಂಟಿಕ್ ಫೂಲ್’ ಎಂದು ಭಾವಿಸಿದಳೇನೋ! ಆಗ ಇದ್ದಕ್ಕಿದ್ದಂತೆ ನಾನೊಂದು ತಪ್ಪು ಮಾಡಿದೆ.

    “ಹೊರಗೆ ಏನು ಕಾಣ್ತಾ ಇದೆ?” ಎಂದು ಕೇಳಿದೆ.

    ಅವಳು ನನ್ನ ಪ್ರಶ್ನೆಯೊಳಗಿನ ಅಸಹಜತೆಯನ್ನು ಗಮನಿಸಿದಂತೆ ಕಾಣಲಿಲ್ಲ. ಹಾಗಾದರೆ ನಾನು ಕುರುಡ ಎಂಬುದು ಅವಳಿಗೆ ಅದಾಗಲೇ ಗೊತ್ತಾಗಿಹೋಗಿದೆಯೇ? ಆದರೆ ಅವಳ ಮುಂದಿನ ಪ್ರಶ್ನೆ ನನ್ನ ಅನುಮಾನವನ್ನು ತೊಡೆದುಹಾಕಿತು.

    “ನೀವೇ ಏಕೆ ಕಿಟಕಿಯಿಂದ ನೋಡಬಾರದು?” ಅವಳು ಕೇಳಿದಳು.

    ನಾನು ಸಲೀಸಾಗಿ ಬರ್ತ್‍ಗುಂಟ ಸರಿಯುತ್ತಾ ಕಿಟಕಿಯ ಪಕ್ಕ ಬಂದು ಕುಳಿತೆ. ಕಿಟಕಿ ತೆರದೇ ಇತ್ತು. ಅದಕ್ಕೆ ಮುಖಮಾಡಿ ಹೊರಗಿನ ದೃಶ್ಯಗಳನ್ನು ನೋಡುತ್ತಿರುವವನಂತೆ ನಟಿಸುತ್ತಾ ಕುಳಿತೆ.

    ಎಂಜಿನ್ ಹೊಗೆ ಉಗುಳುತ್ತಾ ಚುಕುಬುಕು ಎಂದು ಸದ್ದುಮಾಡುತ್ತಾ ರಭಸವಾಗಿ ಸಾಗುತ್ತಿತ್ತು, ಗಾಲಿಗಳು ದಡಲ್ ಬಡಲ್ ಎಂದು ಒಂದೇ ಗತಿಯಲ್ಲಿ ಲಯಬದ್ಧವಾಗಿ ಓಡುತ್ತಿದ್ದವು. ನನ್ನ ಒಳಗಣ್ಣಿಗೆ ಹೊರಗಿನ ಟೆಲಿಗ್ರಾಫ್ ಕಂಬಗಳು ಅತಿವೇಗದಲ್ಲಿ ಒಂದೊಂದಾಗಿ ಸರಿದುಹೋಗುತ್ತಿರುವಂತೆ ಭಾಸವಾಯಿತು.

    “ನೀವು ಗಮನಿಸಿದ್ದೀರಾ” ನಾನು ನನ್ನ ಅಭಿಪ್ರಾಯವನ್ನು ಮುಂದಿಡುತ್ತಾ ಕೇಳಿದೆ, “ನಾವು ನಿಂತಿರುವಂತೆ, ಮರಗಳು ಓಡುತ್ತಿರುವಂತೆ ಕಾಣುತ್ತದಲ್ಲವೆ?”

    “ಹೌದು, ಅದು ಸಾಮಾನ್ಯವಾಗಿ ಹಾಗೆ ಕಾಣುತ್ತೆ.” ಅವಳು ಹೇಳಿದಳು. “ಅಲ್ಲಿ ಯಾವುದಾದ್ರು ಪ್ರಾಣಿಗಳನ್ನು ನೋಡಿದ್ರಾ?”

    “ಇಲ್ಲ” ನಾನು ಅತ್ಯಂತ ಖಚಿತವಾಗಿ ಹೇಳಿದೆ. ಡೆಹರಾದ ಕಾಡುಗಳಲ್ಲೀಗ ಯಾವುದೇ ಪ್ರಾಣಿಗಳಿಲ್ಲ ಎಂಬುದು ನಂಗೆ ಚನ್ನಾಗಿ ಗೊತ್ತಿತ್ತು.

    ಈಗ ನಾನು ಕಿಟಕಿಯಿಂದ ತಿರುಗಿ ಆ ಹುಡುಗಿಗೆ ಮುಖಮಾಡಿ ಕುಳಿತೆ. ನಮ್ಮಿಬ್ಬರ ಮಧ್ಯ ಕ್ಷಣಹೊತ್ತು ಮೌನ ಆವರಿಸಿತು.

    “ನಿಮ್ಮದು ಸುಂದರವಾದ ಮುಖ” ನಾನು ಅವಳ ಗಮನಸೆಳೆಯುತ್ತಾ ಹೇಳಿದೆ. ನಾನು ಕೊಂಚ ಸಲಿಗೆ ತೆಗೆದುಕೊಳ್ಳುತ್ತಾ ಧೈರ್ಯಮಾಡಿ ಹೇಳಿದೆ. ಆದರದು ಅಪಾಯರಹಿತ ಹೇಳಿಕೆಯಾಗಿದ್ದರಿಂದ ಅವಳು ಏನೂ ಅಂದುಕೊಳ್ಳಲಿಲ್ಲ. ಮೇಲಾಗಿ ಹೊಗಳಿಕೆಯನ್ನು ಯಾವ ಹುಡುಗಿ ತಾನೇ ಇಷ್ಟಪಡುವದಿಲ್ಲ?

    ಅವಳು ನಕ್ಕಳು, ಆಪ್ಯಾಯಮಾನವಾಗಿ ನಕ್ಕಳು. ಕಿವಿಯಲ್ಲಿ ಮತ್ತೆ ಮತ್ತೆ ರಿಂಗಣಿಸುವ ತುಂಬುನಾದದ ನಗು ಅದು.

    “ಥ್ಯಾಂಕ್ಸ್, ಆದರೆ ಇಷ್ಟು ದಿನ ಜನ ನನ್ನದು ಮುದ್ದು ಮುಖವೆಂದು ಹೇಳುತ್ತಿದ್ದುದನ್ನು ಕೇಳಿ ಕೇಳಿ ಸಾಕಾಗಿಹೋಗಿತ್ತು”

    ಓ, ಹಾಗಾದರೆ ನಿನಗೆ ಮುದ್ದು ಮುಖವೂ ಇದೆಯೇ? ಪರ್ವಾಗಿಲ್ಲ ಎಂದು ನನ್ನಷ್ಟಕ್ಕೆ ನಾನೇ ಯೋಚಿಸುತ್ತಾ ಜೋರಾಗಿ ಹೇಳಿದೆ, “ವೆಲ್, ಸುಂದರವಾದ ಮುಖ ಮುದ್ದು ಮುಖವೂ ಆಗಬಲ್ಲದು.”

    “ನೀವು ಭಾರಿ ರಸಿಕರು!” ಅವಳು ನಕ್ಕಳು.

    ಆದರೆ ನಾನು ನಗಲಿಲ್ಲ. ಏನೊಂದು ಪ್ರತಿಕ್ರಿಯೆಯನ್ನು ತೋರದೆ ಸುಮ್ಮನೆ ಕುಳಿತಿದ್ದೆ.

    “ಇಷ್ಟೊಂದು ಗಂಭೀರವಾಗಿ ಯಾಕೆ ಕುಳಿತಿದ್ದೀರಿ?” ಅವಳು ಕೇಳಿದಳು.

    ನನಗಾಗ ಅವಳಿಗೋಸ್ಕರನಾದರೂ ನಗಲೇಬೇಕನಿಸಿತು. ಆದರೆ ಹಾಗೆ ನಗಬೇಕೆಂಬ ವಿಚಾರವೇ ಒಂದುಕ್ಷಣ ನನ್ನ ಮನವನ್ನು ಕಲುಕಿತು, ಒಂಟಿತನ ಕಾಡುವಂತೆ ಮಾಡಿತು.

    “ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೇ ನಿಮ್ಮ ನಿಲ್ದಾಣದಲ್ಲಿರುತ್ತೇವೆ.” ನಾನು ಹೇಳಿದೆ.

    “ಥ್ಯಾಂಕ್ ಗುಡ್‍ನೆಸ್, ಇದು ಅಲ್ಪಾವಧಿಯ ಪ್ರಯಾಣ! ನಾನು ರೈಲಿನಲ್ಲಿ ಎರಡ್ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳಲಾರೆ.”

    ಆದರೆ ನಾನು ಅಲ್ಲಿ ಎಷ್ಟು ಹೊತ್ತು ಬೇಕಾದರು ಕೂರಲು ಸಿದ್ಧನಿದ್ದೆ ಕೇವಲ ಅವಳ ಮಾತುಗಳನ್ನು ಕೇಳಲು. ಅವಳ ಧ್ವನಿ ಅಷ್ಟೊಂದು ಇಂಪಾಗಿತ್ತು. ಹರಿವ ತೊರೆಯ ಝುಳುಝುಳು ನಿನಾದದ ಇಂಪು ಅದು. ಬಹುಶಃ, ಅವಳು ರೈಲಿನಿಂದ ಇಳಿಯುತ್ತಿದ್ದಂತೆ ನಮ್ಮಿಬ್ಬರ ಅಲ್ಪಾವಧಿಯ ಭೇಟಿಯನ್ನು ಮರೆಯಬಹುದು. ಆದರೆ ನಂಗೆ ಅವಳ ನೆನಪು ನನ್ನ ಪ್ರಯಾಣದ ಕಡೆತನಕವೂ ಹಾಗು ಅದರಾಚೆ ಸ್ವಲ್ಪ ದಿನಗಳವರೆಗೆಯಾದರೂ ಕಾಡುತ್ತಿರುತ್ತದೆ.

    ಎಂಜಿನು ಕೀರಲು ದನಿಯಲ್ಲಿ ಸಿಳ್ಳು ಹಾಕಿತು, ಗಾಲಿಗಳು ತಮ್ಮ ವೇಗವನ್ನು ಕಡಿಮೆಗೊಳಿಸುತ್ತಾ ಲಯವನ್ನು ಬದಲಾಯಿಸಿದವು. ಹುಡುಗಿ ಎದ್ದುನಿಂತಳು. ಒಂದೊಂದಾಗಿ ತನ್ನ ಸಾಮಾನುಗಳನ್ನು ತೆಗೆದಿರಿಸಿದಳು. ನನಗೆ ಇದ್ದಕ್ಕಿದ್ದಂತೆ ಆ ಹುಡುಗಿಯ ಕೂದಲಿನ ಬಗ್ಗೆ ಕುತೂಹಲ ಹುಟ್ಟಿತು. ಆಕೆ ತನ್ನ ಕೂದಲನ್ನು ತುರುಬುಹಾಕಿ ಗಂಟುಕಟ್ಟಿದ್ದಾಳೆಯೆ? ಅಥವಾ ಅವನ್ನೆಲ್ಲಾ ಸೇರಿಸಿ ಜಡೆ ಹೆಣೆದಿದ್ದಾಳೆಯೆ? ಅಥವಾ ತನ್ನ ಭುಜದ ಮೇಲೆ ಹಾಗೆ ಇಳಿಬಿಟ್ಟಿದ್ದಾಳೆಯೆ? ಅಥವಾ ಸಣ್ಣದಾಗಿ ಕತ್ತರಿಸಿಕೊಂಡಿದ್ದಾಳೆಯೇ? ತಿಳಿದುಕೊಳ್ಳಬೇಕೆಂಬ ಹಂಬಲವುಂಟಾಯಿತು.

    ರೈಲು ನಿಧಾನವಾಗಿ ನಿಲ್ದಾಣದಲ್ಲಿ ಬಂದುನಿಂತಿತು. ಹೊರಗಡೆ ಕೂಲಿಗಳು ಹಾಗು ಹೊತ್ತುಮಾರುವವರ ಕೂಗುಗಳು ಒಂದೇಸಮನೆ ಕೇಳುತ್ತಿದ್ದವು. ಇವರೆಲ್ಲರ ಮಧ್ಯ ಹೆಂಗಸೊಬ್ಬಳ ಏರುದನಿಯೊಂದು ನಮ್ಮ ಡಬ್ಬಿಯ ಬಾಗಿಲದ ಹತ್ತಿರ ಕೇಳಿಸುತ್ತಿತ್ತು. ಬಹುಶಃ, ಅದು ಆ ಹುಡುಗಿಯ ಆಂಟಿಯ ದನಿಯಾಗಿರಬಹುದು!

    “ಗುಡ್‍ಬೈ” ಆ ಹುಡುಗಿ ವಿದಾಯ ಹೇಳಿದಳು.

    ಅವಳು ನನಗೆ ತುಂಬಾ ಹತ್ತಿರದಲ್ಲಿ ನಿಂತಿದ್ದಳು; ಎಷ್ಟು ಹತ್ತಿರವೆಂದರೆ ಅವಳ ಕೂದಲಿಗೆ ಹಚ್ಚಿದ್ದ ಸುಗಂಧ ತೈಲದ ಘಮಲು ನನ್ನ ಮೂಗಿಗೆ ಬಡಿದು ನನ್ನಲ್ಲಿ ಆಸೆ ಹುಟ್ಟಿಸಿತು. ನನ್ನ ಕೈಯನ್ನೆತ್ತಿ ಒಮ್ಮೆ ಅವಳ ಕೂದಲನ್ನು ಮುಟ್ಟಬೇಕೆನಿಸಿತು. ಅಷ್ಟರಲ್ಲಿ ಅವಳು ಮುಂದೆ ಸರಿದಳು. ಆದರೆ ಅವಳ ಅತ್ತರಿನ ಘಮಲು ಇನ್ನೂ ಅಲ್ಲೇ ಸುಳಿದಾಡುತ್ತಿತ್ತು.

    ಅವಳು ಬಾಗಿಲ ಬಳಿ ಹೋಗುತ್ತಿದ್ದಂತೆ ಅಲ್ಲಿ ಏನೋ ಗೊಂದಲವುಂಟಾಯಿತು. ಬಹುಶಃ, ಯಾತ್ರಿಕನೊಬ್ಬ ಒಳಬರುವ ಆತುರದಲ್ಲಿ ಅವಳಿಗೆ ಡಿಕ್ಕಿ ಹೊಡೆದಿರಬೇಕು. ಅವನು ಅವಳ ಹತ್ತಿರ ಕ್ಷಮೆ ಕೇಳಿದ. ಬಾಗಿಲು ಮುಚ್ಚಿತು. ನಂಗೆ ಜಗತ್ತಿನ ಬಾಗಿಲೇ ಮುಚ್ಚಿದಹಾಗಾಯಿತು. ನಾನು ನನ್ನ ಸೀಟಿಗೆ (ಬರ್ತ್‍ಗೆ) ವಾಪಾಸಾದೆ. ಗಾರ್ಡು ಸೀಟಿ ಊದಿದ. ರೈಲು ಹೊರಟಿತು. ಮತ್ತೊಮ್ಮೆ ನಾನು ಹೊಸ ಯಾತ್ರಿಕನೊಂದಿಗೆ ಆಟವೊಂದನ್ನು ಆಡಬೇಕಿತ್ತು.

    ರೈಲು ನಿಧಾನಕ್ಕೆ ತನ್ನ ವೇಗವನ್ನು ಹೆಚ್ಚಿಸಿಕೊಂಡಿತು. ಗಾಲಿಗಳು ಎಂದಿನಂತೆ ಲಯಬದ್ಧವಾಗಿ ಹಾಡತೊಡಗಿದವು. ನಮ್ಮ ಡಬ್ಬಿ ಕುಲುಕುತ್ತಾ ಮುಲುಗುತ್ತಾ ಮುಂದೆ ಹೊರಟಿತು. ನಾನು ಕಿಟಕಿಯನ್ನು ಹುಡುಕಿ ಅದಕ್ಕೆ ಮುಖಮಾಡಿ ಕುಳಿತುಕೊಂಡು ನನ್ನ ಪಾಲಿಗೆ ಕತ್ತಲಿನಂತಿರುವ ಹೊರಗಿನ ಹಗಲ ಬೆಳಕನ್ನು ದಿಟ್ಟಿಸತೊಡಗಿದೆ.

    ಕಿಟಕಿಯಾಚೆ ಬಹಳಷ್ಟು ಸಂಗತಿಗಳು ಸಂಭವಿಸುತ್ತಿದ್ದವು. ಅವು ಏನಿರಬಹುದೆಂದು ಊಹಿಸಿಕೊಳ್ಳುವದೇ ನಂಗೆ ಒಂದು ಮೋಜಿನ ಆಟವಾಗಿತ್ತು.

    ನನ್ನ ಡಬ್ಬಿಯೊಳಕ್ಕೆ ಬಂದ ಹೊಸ ಪ್ರಯಾಣಿಕ ನನ್ನನ್ನು ವಾಸ್ತವಕ್ಕೆ ಎಳೆದು ತಂದ.

    “ದಯವಿಟ್ಟು ಕ್ಷಮಿಸಿ. ನಿಮಗೆ ನನ್ನಿಂದ ನಿರಾಶೆಯಾಗಿರಬಹುದು,” ಅವನು ಹೇಳಿದ, “ನಾನು, ಈಗಷ್ಟೆ ನಿಮ್ಮನ್ನು ಬಿಟ್ಟುಹೋದ ಆ ಸಹಪ್ರಯಾಣಿಕಳಷ್ಟು ಆಕರ್ಷಕವೆನಿಸದಿರಬಹುದು..........”

    “ಶೀ ವಾಜ್ ಯ್ಯಾನ್ ಇಂಟರೆಸ್ಟಿಂಗ್ ಗರ್ಲ್,” ನಾನು ಹೇಳಿದೆ. “ಅವಳು ತನ್ನ ಕೂದಲನ್ನು ಹೇಗೆ ಬಿಟ್ಟಿದ್ದಳು ಎಂದು ಹೇಳುವಿರಾ, ಪ್ಲೀಸ್? ಉದ್ದವಾಗಿ ಬಿಟ್ಟಿದ್ದಳೆ? ಇಲ್ಲ ಮೋಟಾಗಿ ಕತ್ತರಿಸಿದ್ದಳೆ?”

    “ಕ್ಷಮಿಸಿ.ನಂಗೆ ಸರಿಯಾಗಿ ನೆನಪಿಲ್ಲ,” ಅವನು ತಬ್ಬಿಬ್ಬಾಗಿದ್ದಂತೆ ಕಂಡಿತು. “ನಾನು ಅವಳ ಕಂಗಳನ್ನಷ್ಟೇ ಗಮನಿಸಿದೆ, ಕೂದಲನ್ನಲ್ಲ. ಅವಳಿಗೆ ಸುಂದರವಾದ ಕಂಗಳಿದ್ದವು. ಆದರೆ ಏನು ಪ್ರಯೋಜನ? ಅವಳು ಪೂರಾ ಕುರುಡಿಯಾಗಿದ್ದಳು. ನೀವಿದನ್ನು ಗಮನಿಸಲಿಲ್ಲವೇ?”

    ಮೂಲ ಇಂಗ್ಲೀಷ್: ರಸ್ಕಿನ್ ಬಾಂಡ್
    ಕನ್ನಡಕ್ಕೆ: ಉದಯ್ ಇಟಗಿ


    ದಿನಾಂಕ 20-3-2012 ರಂದು ಉದಯವಾಣಿಯಲ್ಲಿ ಪ್ರಕಟವಾದ ಕಥೆ. ಅದರ ಲಿಂಕ್ ಇಲ್ಲಿದೆ. http://www.udayavani.com/news/148469L15-%E0%B2%86-%E0%B2%95-%E0%B2%97%E0%B2%B3----.html

    ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು-ನಾನೀಗ ಪಕ್ಕಾ ವ್ಯವಹಾರಸ್ಥನಾಗಿದ್ದೇನೆ!

  • ಗುರುವಾರ, ಏಪ್ರಿಲ್ 26, 2012
  • ಬಿಸಿಲ ಹನಿ
  • ಹೌದು, ನಾನೀಗ ಪಕ್ಕಾ ವ್ಯವಹಾರಸ್ಥನಾಗಿದ್ದೇನೆ! ಹಾಗಂತ ಹೇಳಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ. ಹೆಮ್ಮೆ ಯಾಕೆಂದರೆ ನನಗೆ ದುಡ್ಡಿನ ಬೆಲೆ ಚನ್ನಾಗಿ ಅರ್ಥವಾಗಿದೆಯೆಂದರ್ಥ. ಅದಕ್ಕೆ ಹೇಗೆ ಮರ್ಯಾದೆ, ಗೌರವಗಳನ್ನು ಕೊಡಬೇಕೆಂದು ಚನ್ನಾಗಿ ಮನನವಾಗಿದೆಯೆಂದರ್ಥ. ಮೊದಲು ನನಗೆ ದುಡ್ಡಿನ ಬೆಲೆ ಗೊತ್ತಿರಲಿಲ್ಲವೆಂದಲ್ಲ. ಆದರೆ ಅಷ್ಟಾಗಿ ಗೊತ್ತಿರಲಿಲ್ಲ. ಹೀಗಾಗಿ ಅವರಿವರಿಗೆ ಕೊಟ್ಟು ಕಳೆದುಕೊಂಡೆ. ಅನೇಕ ಕಡೆ ಕೈ ಸುಟ್ಟುಕೊಂಡೆ. ಮೊದಲು ದುಡ್ಡಿನ ವಿಷಯದಲ್ಲಿ ಭಾವುಕನಾಗಿ ಯೋಚನೆ ಮಾಡುತ್ತಿದ್ದೆ. ಆದರೆ ಈಗ ಪಕ್ಕಾ ವ್ಯವಹಾರಸ್ಥನಾಗಿ ಬದಲಾಗಿದ್ದೇನೆ. ಮೊದಲೆಲ್ಲಾ ಸ್ನೇಹಿತರಿಗೆ, ಬಂಧುಗಳಿಗೆ ಸುಲಭವಾಗಿ ಹಣ ಕೊಡುತ್ತಿದ್ದೆ. ಕೊಟ್ಟಮೇಲೆ ಅದನ್ನು ವಾಪಾಸು ಕೇಳಲು ಹಿಂದೆಮುಂದೆ ನೋಡುತ್ತಿದ್ದೆ. ಒಂದುವೇಳೆ ಕೊಡದಿದ್ದರೂ ಸುಮ್ಮನಾಗುತ್ತಿದ್ದೆ. ಆದರೆ ಈಗ ಹಾಗಲ್ಲ. ಇದಕ್ಕೆ ತದ್ವಿರುದ್ಧವಾಗಿ ಬದಲಾಗಿದ್ದೇನೆ. ಬಹಳಷ್ಟು ಬದಲಾಗಿದ್ದೇನೆ.

    ಇದೀಗ ಯಾರಾದರೂ ಹಣ ಕೇಳಲು ಬಂದರೆ ಮೊದಲು “ಇಲ್ಲ” ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತೇನೆ. ನಾನು ಕೊಡದಿದ್ದರೆ ಅವನೇನೆಂದುಕೊಳ್ಳುತ್ತಾನೋ? ಎಲ್ಲಿ ದೂರವಾಗುತ್ತಾನೋ? ಎಂದು ಭಯಪಡುವದಿಲ್ಲ. ಸಂಬಂಧಗಳಲ್ಲಿ, ಹತ್ತಿರದವರಲ್ಲಂತೂ ಯಾವುದೇ ವ್ಯವಹಾರವನ್ನು ಇಟ್ಟುಕೊಳ್ಳುವದಿಲ್ಲ. ಏಕೆಂದರೆ ಒಂದುವೇಳೆ ಅವರು ವಾಪಾಸು ಕೊಡದೇಹೋದಾಗ ತೀರಾ ನಿಕೃಷ್ಟವಾಗಿ ಕೊಡಿ ಎಂದು ಕೇಳಲಾಗದು. ಹೋಗಲಿ ಅವರ ಸಂಬಂಧವನ್ನಾದರು ಹರಿದುಕೊಳ್ಳೋಣವೆಂದರೆ ಅದೂ ಸಾಧ್ಯವಾಗದು. ಮೇಲಾಗಿ ಆಗಾಗ ಅವರ ಮುಖವನ್ನು ನೋಡಬೇಕಾಗುವದು ಮತ್ತು ನೋಡಿದಾಗಲೆಲ್ಲಾ ಅವರು ಮಾಡಿದ ಮೋಸ ನೆನಪಾಗಿ ಮನಸ್ಸಿಗೆ ಒಂಥರಾ ಹಿಂಸೆ ಅನಿಸುತ್ತದೆ. ಅದೇ ದೂರದವರಾದರೆ ವಾಪಾಸು ಕೊಡದಿದ್ದರೂ ಪರ್ವಾಗಿಲ್ಲ ಪೀಡೆ ಹೋಯ್ತು ಎಂದು ಸುಮ್ಮನಿರಬಹುದು.

    ಹಾಗೆ ಒಂದುವೇಳೆ ಕೊಡಲೇಬೇಕಿನಿಸಿದರೆ ಮೊದಲು ಹಣ ತೆಗೆದುಕೊಳ್ಳುವವನ ಹಿನ್ನೆಲೆ ವಿಚಾರಿಸುತ್ತೇನೆ. ಏನು ಕೆಲಸದಲ್ಲಿದ್ದಾನೆ? ಎಷ್ಟು ಸಂಬಳ ಇದೆ? ಆ ಸಂಬಳದಲ್ಲಿ ಅವನು ತನ್ನ ಮನೆಗೆ ಅಂತಾ ಖರ್ಚುಮಾಡಿ ಅದರಲ್ಲಿ ಎಷ್ಟು ಉಳಿಸುತ್ತಾನೆ? ಉಳಿಸುವ ಹಣದಿಂದ ಅವನಿಗೆ ಹಿಂತಿರುಗಿಸುವ ಸಾಮರ್ಥ್ಯ ಇದೆಯಾ? ಇಲ್ವಾ? ಎಂದೆಲ್ಲಾ ಮುಲಾಜಿಲ್ಲದೆ ಬ್ಯಾಂಕುಗಳಲ್ಲಿ ಸಾಲ ಕೊಡುವ ಮುನ್ನ ಹೇಗೆ ಎಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಾರೋ ಹಾಗೆ ನಾನು ಸಹ ಕೇಳಿ ತಿಳಿದುಕೊಳ್ಳುತ್ತೇನೆ. ಇಷ್ಟಕ್ಕೂ ಅವನ ಉತ್ತರಗಳಿಂದ ಸಂತೃಪ್ತನಾದರೆ ಮಾತ್ರ ಕೊಡುತ್ತೇನೆ. ಇಲ್ಲವಾದರೆ ಇಲ್ಲ ಎಂದು ಮುಖಕ್ಕೆ ಹೊಡೆದಹಾಗೆ ಹೇಳಿಬಿಡುತ್ತೇನೆ.

    ಹಾಗೇನೆ, ನಾನು ಹಣವಿದೆ ಎಂದು ಸಿಕ್ಕ ಸಿಕ್ಕಹಾಗೆ ಖರ್ಚು ಮಾಡುವದಿಲ್ಲ. ತೀರಾ ಅನಿವಾರ್ಯ, ಅಗತ್ಯ ಮತ್ತು ಅವಶ್ಯಕತೆ ಎನಿಸಿದರೆ ಮಾತ್ರ ಖರ್ಚು ಮಾಡುತ್ತೇನೆ. ನಾನು ಏನಾದರು ಕೊಂಡುಕೊಳ್ಳಬೇಕಾದರೆ ಧಿಡೀರೆಂದು ಸುಮ್ಮನೆ ಹಾಗೆ ಹೋಗಿ ಕೊಳ್ಳುವದಿಲ್ಲ. ಮೊದಲು ಆ ವಸ್ತುಗಳ ಬೆಲೆಯನ್ನು ಇಂಟರ್ನೆಟ್‍ನಲ್ಲಿ ಹುಡುಕಿ ತಿಳಿದುಕೊಳ್ಳುತ್ತೇನೆ. ಆನಂತರ ನಾಲ್ಕೈದು ಕಡೆ ವಿಚಾರಿಸಿ ಎಲ್ಲಿ ಕಡಿಮೆಯಿರುತ್ತದೋ ಅಲ್ಲಿ ತೆಗೆದುಕೊಳ್ಳುತ್ತೇನೆ. ಹಾಗೇನೆ, ನಾನು ಐಷಾರಾಮಿ ಹೋಟೆಲ್‍ಗಳಿಗೆ ಹೋಗುವದಾಗಲಿ, ಅಲ್ಲಿ ತಂಗುವದಾಗಲಿ ಯಾವತ್ತೂ ಮಾಡಿಲ್ಲ. ಅಷ್ಟೊಂದು ಐಷಾರಾಮಿ ಮನಸಿಗೆ ಹಿಡಿಸದು ಹಾಗೂ ಒಗ್ಗದು. ಸಾಧ್ಯವಾದಷ್ಟು ಖರ್ಚನ್ನು ಕಡಿಮೆ ಮಾಡಲು ನೋಡುತ್ತೇನೆ. ಈ ವಿಷಯದಲ್ಲಿ ಬೇರೆಯವರು ನನ್ನನ್ನು “ಜುಗ್ಗ” ಎಂದರೂ ಪರ್ವಾಗಿಲ್ಲ. ನಾನದನ್ನು ತಲೆಗೆ ಹಚ್ಚಿಕೊಳ್ಳುವದಿಲ್ಲ.

    ಅಂದಹಾಗೆ ನನ್ನ ಇಷ್ಟು ವರ್ಷದ ಜೀವಿತಾವಧಿಯಲ್ಲಿ ಹಣದ ವಿಷಯದಲ್ಲಿ ನನಗೆ ಎರಡು ಸತ್ಯಗಳು ಗೊತ್ತಾಗಿವೆ:
    1. ನಾವು ಗಳಿಸಿದ ಹಣಕ್ಕಿಂತ ಉಳಿಸಿದ ಹಣ ಹೆಚ್ಚುಕಾಲ ಬರುತ್ತದೆ.
    2. ನಮ್ಮಲ್ಲಿರುವ ಹಣದಿಂದ ನಾವು ಶ್ರೀಮಂತರಾಗುವದಿಲ್ಲ. ಆದರೆ ನಾವು ಅದಕ್ಕೆ ಕೊಡುವ ಮರ್ಯಾದೆ ಮತ್ತು ಗೌರವಗಳಿಂದ ಶ್ರೀಮಂತರಾಗುತ್ತೇವೆ.