Demo image Demo image Demo image Demo image Demo image Demo image Demo image Demo image

ಮತ್ತೆ ಬೆಂಗಳೂರಿಗೆ ಬರುತ್ತಿದ್ದೇನೆ......

  • ಮಂಗಳವಾರ, ಜುಲೈ 20, 2010
  • ಬಿಸಿಲ ಹನಿ
  • ಪ್ರತಿ ವರ್ಷದಂತೆ ಈ ವರ್ಷವೂ ಒಂದು ತಿಂಗಳ ವಾರ್ಷಿಕ ರಜೆಯ ಮೇಲೆ ಭಾರತಕ್ಕೆ ಬರುತ್ತಿದ್ದೇನೆ. ಕಳೆದ ಫೆಬ್ರುವರಿಯಲ್ಲಿ ಅಮ್ಮನ ಆರೋಗ್ಯ ಸರಿಯಿರಲಿಲ್ಲವಾದ್ದರಿಂದ ಆಕೆಯನ್ನು ನೋಡಲು ಎಂಟು ದಿನದ ಮಟ್ಟಿಗೆ ಬೆಂಗಳೂರಿಗೆ ಬಂದಿದ್ದೆನಾದರೂ ಆಗ ನನ್ನ ಬ್ಲಾಗ್ ಗೆಳೆಯರನ್ನು ಭೇಟಿಯಾಗಲು ಆಗಲಿಲ್ಲ. ಬಹಳಷ್ಟು ಸಮಯ ಅಲ್ಲಿ ಇಲ್ಲಿ ಕಳೆದು ಹೋಯಿತು. ಒಂದು ಫೋನ್ ಕೂಡ ಮಾಡಲಿಕ್ಕಾಗಲಿಲ್ಲ. ಮಾಡಿದ್ದರೆ ಗೆಳೆಯರಿಗೆ ಸಿಗಲೇಬೇಕಾಗುತ್ತಿತ್ತು. ಆದರೆ ನಾನಿರುವಷ್ಟು ದಿನಗಳನ್ನು ಹೆಂಡತಿ, ಮಗಳೊಂದಿಗೆ ಹಾಗೂ ಜೀವದ ಗೆಳೆಯ ಮಂಜುವಿನೊಂದಿಗೆ ಕಳೆಯಲು ನಿರ್ಧರಿಸಿದ್ದರಿಂದ ನಿಮಗ್ಯಾರಿಗೂ ಸಿಗಲಿಲ್ಲ ಹಾಗೂ ಫೋನ್ ಮಾಡಲಿಲ್ಲ. ಅದಕ್ಕಾಗಿ ಕ್ಷಮಿಸಿ.

    ನಾನು ನಿಮ್ಮನ್ನು ಭೇಟಿಯಾಗಿ ಅದಾಗಲೇ ಒಂದು ವರ್ಷ ಕಳೆಯಿತಲ್ಲವೆ? ಅಬ್ಬಾ, ಸಮಯ ಎಷ್ಟು ಬೇಗನೆ ಸರ ಸರನೆ ಸರಿದು ಹೋಯಿತು! ಒಂದು ವರ್ಷದಲ್ಲಿ ಎಷ್ಟೊಂದು ಬದಲಾವಣೆಗಳು ನನ್ನ ಬೆಂಗಳೂರಿನಲ್ಲಿ ಹಾಗೂ ನನಗೆ ಬೇಕಾದವರ ಜೀವನದಲ್ಲಿ! ಈ ಬದಲಾದದ್ದನ್ನು, ಬದಲಾದವರನ್ನು ಸ್ವೀಕರಿಸಲು ಸಾಕಷ್ಟು ಮಾನಸಿಕ ತಯಾರಿ ನಡೆಸಿಕೊಂಡೇ ಈಗ ಮತ್ತೆ ಬರುತ್ತಿದ್ದೇನೆ ಬೆಂಗಳೂರಿಗೆ. ಈ ಸಾರಿ ಬಂದಾಗ ಮಾಡಲು ಅಂಥ ಮುಖ್ಯವಾದ ಕೆಲಸವೇನಿಲ್ಲವಾದರೂ ನಾನು, ನನ್ನ ಹೆಂಡತಿ ಹಾಗೂ ಮಗಳು ಸೇರಿ ನಾಲ್ಕು ದಿನದ ಮಟ್ಟಿಗೆ ಸಿಂಗಾಪೂರ್ ಟ್ರಿಪ್ ಹೋಗಬೇಕಿದೆ. ಮಗಳನ್ನು ಒಳ್ಳೆ ಪ್ರೀ ನರ್ಸರಿ ಸ್ಕೂಲಿಗೆ ಹಾಕಬೇಕಿದೆ. ಮನೆ ಕಟ್ಟಲು ಅದರ ಖರ್ಚು ವೆಚ್ಚದ ಬಗ್ಗೆ ವಿಚಾರಿಸಬೇಕಿದೆ. Regional Institute of English Language, Bangalore ಇಲ್ಲಿಂದ ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿರುವ ಯಾವದಾದಾರೊಂದು ಒಳ್ಳೆ ಡಿಸ್ಟನ್ಸ್ ಮೋಡ್ ಕೋರ್ಷಿಗೆ ಸೇರಿಕೊಳ್ಳಬೇಕಾಗಿದೆ ಹಾಗೂ ಅದಕ್ಕೆ ಸಂಬಂಧಪಟ್ಟ ಹಾಗೆ ಒಂದಿಷ್ಟು ಪುಸ್ತಕಗಳನ್ನು ಕೊಳ್ಳಬೇಕಾಗಿದೆ. ಭವಿಷ್ಯದಲ್ಲಿ ಒಂದು ಫಾರ್ಮ್ ಹೌಸ್ ತೆಗೆಯಲು ಅದರ ಬಗ್ಗೆ ಮಾಹಿತಿ ಕಲೆಹಾಕಬೇಕಾಗಿದೆ. ಮನೆಗೆ ಹತ್ತಿರದ ರಂಗಶಂಕರದಲ್ಲಿ ಒಂದಿಷ್ಟು ಒಳ್ಳೆ ನಾಟಕಗಳನ್ನು ನೋಡಬೇಕಿದೆ. ವೀಕ್ಷಕರ ಮೆಚ್ಚುಗೆಗೆ ಪಾತ್ರವಾದ “ನಾನು ನನ್ನ ಕನಸು” ಸಿನಿಮಾ ವೀಕ್ಷಿಸಬೇಕಿದೆ. ಒಂದಷ್ಟು ಹೊಸ ಭಾವಗೀತೆಗಳ ಹಾಗೂ ಸಿನಿಮಾಗಳ ಸೀಡಿಗಳನ್ನು ಕೊಳ್ಳಬೇಕಿದೆ. ನಾವು ಮೂರು ಜನ (ರಾಘು, ಮಂಜು ಮತ್ತು ನಾನು) ಗೆಳೆಯರು ಕುಳಿತುಕೊಂಡು ಹರಟೆ ಹೊಡೆಯಬೇಕಿದೆ, ಹಳೆಯ ನೆನಪುಗಳನ್ನು ಆಡಲು ಬಿಡಬೇಕಿದೆ. ಮದುವೆನೇ ಆಗುವದಿಲ್ಲ ಎನ್ನುತ್ತಿದ್ದ ಗೆಳೆಯ ಮಂಜು ಮದುವೆಯಾಗಿದ್ದರಿಂದ ಅವನನ್ನು ರೇಗಿಸಬೇಕಿದೆ, ಒಂದಿಷ್ಟು ಕಾಲೆಳೆಯಬೇಕಾಗಿದೆ, ಚನ್ನಾಗಿ ಗೋಳು ಹೊಯ್ದುಕೊಳ್ಳಬೇಕಿದೆ ಹಾಗೂ ಅವನಿಂದ ಒಂದೆರಡು ಲ್ಯಾವಿಶ್ ಪಾರ್ಟಿ ತೆಗೆದುಕೊಳ್ಳಬೇಕಿದೆ. ಹಾಗೆಯೇ ಅವನೊಂದಿಗೆ ಒಂದಿಷ್ಟು ಜಗಳವಾಡುತ್ತಾ ಆತ ಮಾಡಿದ ಕೆಲವು ತಪ್ಪುಗಳಿಗೆ ಆತನನ್ನು ಬಯ್ಯಬೇಕಿದೆ, ತರಾಟೆಗೆ ತೆಗೆದುಕೊಳ್ಳಬೇಕಿದೆ. ಅವನೊಂದಿಗೆ ಆಡದೆ ಉಳಿದ ಮಾತುಗಳು ನನ್ನ ಎದೆಯೊಳಗೆ ಉಳಿದು ಹಿಂಸೆಯ ರೂಪವನ್ನು ತಾಳುವ ಮೊದಲೇ ಅವನ ಮೇಲೆ ಸ್ಪೋಟಿಸಿ ಹಗುರಾಗಬೇಕಿದೆ. ಅವನ ಹುಂಬುತನ, ನಿರ್ಲಕ್ಷತನ, ಉಡಾಫೆತನಕ್ಕೆ ಒಮ್ಮೆ ಆತನೊಂದಿಗೆ ಕುಳಿತು ಅವನ ಮೇಲಿನ ಸಿಟ್ಟು, ರೋಷ, ಕೋಪ, ತಾಪ ಎಲ್ಲವನ್ನೂ ಹೇಳಿಕೊಳ್ಳಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ತನ್ನೊಟ್ಟಿಗೆ ಕೆಲಸ ಮಾಡುತ್ತಿದ್ದ ಹುಡುಗಿಯನ್ನೇ ಮದುವೆಯಾಗುತ್ತಿದ್ದೇನೆ ಎನ್ನುವ ವಿಷಯವನ್ನು ನನ್ನಿಂದ ಏಕೆ ಮುಚ್ಚಿಟ್ಟೆ ಎಂದು ಕೇಳಬೇಕಿದೆ. ಆ ನಿಟ್ಟಿನಲ್ಲಿ ನಿನ್ನ ಮನಸ್ಸಿನಲ್ಲಿ ನನಗೆ ಕೊಟ್ಟಿರುವ ಸ್ಥಾನ ಇಷ್ಟೇನಾ? ಈ ವಿಷಯದಲ್ಲಿ ನನ್ನ ಅಭಿಪ್ರಾಯವನ್ನು ಕೇಳಬೇಕೆನಿಸಲಿಲ್ಲವೆ?” ಎಂದು ಕೇಳುತ್ತಾ ಕಟಕಟೆಯಲ್ಲಿ ನಿಲ್ಲಿಸಬೇಕಿದೆ

    .


    ಆತ ಅವನೊಟ್ಟಿಗೆ ಕೆಲಸ ಮಾಡುವ ಹುಡುಗಿಯನ್ನು ಮದುವೆಯಾಗಿದ್ದು ಖಂಡಿತ ನನಗೆ ಬೇಜಾರಿಲ್ಲ. ಅದು ಅವನ ವ್ಯಯಕ್ತಿಕ ವಿಷಯ. ಅವನಿಗಿಷ್ಟವಾದ ಹುಡುಗಿಯನ್ನೇ ಮದುವೆಯಾಗಿದ್ದಕ್ಕೆ ನನಗೆ ತುಂಬಾ ಖುಶಿಯಿದೆ. ಆದರೆ ಈ ವಿಷಯವನ್ನು ನನಗೂ ಹೇಳದೆ ಮದುವೆಯಾಗಿದ್ದು ಮಾತ್ರ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ನಾನು ಮೊನ್ನೆ ಬೆಂಗಳೂರಿಗೆ ಬಂದಾಗ “ಉದಯ್, ಮನೆಯಲ್ಲಿ ಅಮ್ಮನಿಗೆ ಮಾಡಲಾಗುತ್ತಿಲ್ಲವಾದ್ದರಿಂದ ಹಾಗೂ ನನಗೂ ಒಂಟಿತನ ಕಾಡುತ್ತಿರುವದರಿಂದ ಮದುವೆಯಾಗಬೇಕೆಂದುಕೊಂಡಿರುವೆ” ಎಂದು ಹೇಳಿದಾಗ ನನಗೆ ಖುಶಿಯಾಗಿತ್ತು ಪರ್ವಾಗಿಲ್ಲ ಈಗಲಾದರೂ ಮನಸ್ಸು ಬದಲಾಯಿಸಿದನಲ್ಲ ಎಂದು. ಈ ಮೊದಲು ನಾನು ಲಿಬಿಯಾದಿಂದ ಅವನಿಗೆ ಫೋನ್ ಮಾಡಿದಾಗಲೆಲ್ಲಾ ಅವನು ತನ್ನ ಮದುವೆ ಬಗ್ಗೆ ಹಿಂಟ್ ಕೊಟ್ಟಿದ್ದನಾದರೂ ಇಷ್ಟೊಂದು ಸೀರಿಯಸ್ ಆಗಿದ್ದಾನೆಂದುಕೊಂಡಿರಲಿಲ್ಲ. ಏನಾದರಾಗಲಿ ಮದುವೆಯಾಗಲು ನಿರ್ಧರಿಸಿದ್ದಾನಲ್ಲ ಅಷ್ಟೇ ಸಾಕು ಎಂದು ಖುಶಿಪಟ್ಟಿದ್ದೆ. ನಾನು ಆಲ್ ದಿ ಬೆಸ್ಟ್ ಹೇಳುತ್ತಾ “ಹುಡುಗಿ ಹುಡುಕಬೇಕಾ?” ಎಂದು ಕೇಳಿದ್ದೆ. “ಹಾ, ಹೌದು ನಮ್ಮ ಮನೆಯಲ್ಲಿ ಹುಡುಕುತ್ತಿದ್ದಾರೆ” ಎಂದು ಹೇಳಿದ್ದ. ತದನಂತರ ಕೇವಲ ಎರಡೇ ತಿಂಗಳ ಅಂತರದಲ್ಲಿ ಕೆಲವೇ ಕೆಲವು ಬಂಧುಗಳ ಸಮ್ಮುಖದಲ್ಲಿ ಧರ್ಮಸ್ಥಳದಲ್ಲಿ ಸರಳ ವಿವಾಹವಾಗಿದ್ದ. ಆಗೆಲ್ಲಾ ಆತ ನನ್ನನ್ನು ಈಗಷ್ಟೆ ಹೊಸದಾಗಿ ಹುಡುಗಿಯನ್ನು ನೋಡಿ ಮದುವೆಯಾಗುತ್ತಿದ್ದೇನೆ ಎಂದು ನಂಬಿಸಿದ್ದ. ಆದರೆ ಮದುವೆಯಾಗಿ ಎಂಟು ದಿವಸದ ಮೇಲೆ ಇನ್ನೊಬ್ಬ ಗೆಳೆಯ ರಾಘು, ಮಂಜುವಿನ ಮದುವೆ ಫೋಟೋಗಳನ್ನು ಈ ಮೇಲ್ ಮೂಲಕ ಕಳಿಸಿದಾಗ ಈ ಹುಡುಗಿಯನ್ನು ಎಲ್ಲೋ ನೋಡಿದ್ದೇನಲ್ಲ ಎನಿಸಿ ನನ್ನ ಹಾರ್ಡ್ ಡಿಸ್ಕಿನಲ್ಲಿರುವ “ಮಂಜು ಫೋಟೋಸ್” ಫೋಲ್ಡರಿಗೆ ಹಾಕಬೇಕಾದರೆ ಆತನ ಹಳೆಯ ಫೋಟೊಗಳಲ್ಲಿ ಅಂದರೆ ಆತನ ಯಾವುದೋ ಟ್ರೇನಿಂಗ್ ಫೋಟೋಗಳಲ್ಲಿ ಅಕಸ್ಮಾತಾಗಿ ಈ ಹುಡುಗಿಯ ಫೋಟೋ ಕಣ್ಣಿಗೆ ಬಿತ್ತು. ಅರೆ, ಇವಳೇನಾ ಮಂಜುವಿನ ಹೆಂಡತಿ? ಇರಲಿಕ್ಕಿಲ್ಲ ಎಂದುಕೊಂಡು ಮತ್ತೆ ಮತ್ತೆ zoom ಮಾಡಿ ನೋಡಿದೆ. ಅನುಮಾನವೇ ಇಲ್ಲ. ಅದೇ ಹುಡುಗಿಯೇ! ನನಗೆ ಆಘಾತಕ್ಕಿಂತ ಹೆಚ್ಚಾಗಿ ಅಚ್ಚರಿಯಾಗಿತ್ತು. ನಾನು ಎದೆ ತಟ್ಟಿ ಹೇಳಿಕೊಳ್ಳುವ ಗೆಳೆಯ ತನ್ನ ಜೀವನದ ಅತ್ಯಂತ ಖುಶಿಯ ವಿಚಾರವನ್ನು ನನ್ನೊಂದಿಗೆ ಹಂಚಿಕೊಳ್ಳಲಾರದೆ ಉಳಿದನೆ? ಹಾಗೆ ಹಂಚಿಕೊಳ್ಳಲಾರದಂತೆ ತಡೆಹಿಡಿದಿದ್ದಾದರೂ ಏನು? ಅಥವಾ ನನ್ನೊಂದಿಗೆ ಹಂಚಿಕೊಳ್ಳುದಷ್ಟು ಅಳುಕು, ಮುಜುಗುರ ಅವನಲ್ಲಿ ಇನ್ನೂ ಇದೆಯಾ? ಹಿಂದೆ ತನಗೆ ತಕ್ಷಣ ಏನಾದರು ಆದರೆ ಅದನ್ನು ಮೊದಲು ಬಂದು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದ ಮಂಜು ಇವನೇನಾ? ತೀರ ಹಿಂದೆ ಬೇಡ, ಮೊನ್ನೆ ಮೊನ್ನೆ ನಾನು ಬೆಂಗಳೂರಿಗೆ ಬಂದಾಗ ಬೇರೆಲ್ಲವನ್ನು ಹಂಚಿಕೊಂಡವನು ಈ ವಿಷಯವನ್ನು ಏಕೆ ಮುಚ್ಚಿಟ್ಟ? ನಾವಾದರೆ ಎಲ್ಲದಕ್ಕೂ ಅವನ ಅಭಿಪ್ರಾಯ ತೆಗೆದುಕೊಳ್ಳುತ್ತೇವೆ. ಆದರೆ ಅವನೇಕೆ ಹೀಗೆ ಮಾಡಿದ? ಈ ವಿಷಯ ನನ್ನ ತಲೆಯಲ್ಲಿ ಕೊರೆಯತೊಡಗಿತ್ತು. ಬೆಂಗಳೂರಿಗೆ ಹೋದ ಮೇಲೆ ಕೇಳೋಣವೆಂದುಕೊಂಡಿದ್ದೆ. ಆದರೆ ತಡೆಯಲಾಗಲಿಲ್ಲ. ತಕ್ಷಣ ಫೋನ್ ಮಾಡಿ ಕೇಳಿಯೇಬಿಟ್ಟೆ. ಆಗವನು ಹಿಂದೆ ಹುಡುಗಿಯೋರ್ವಳನ್ನು ಪ್ರೀತಿಸಿದ್ದು, ಆ ವಿಷಯದಲ್ಲಿ ನನ್ನ ಸಹಾಯ ಕೇಳಿದ್ದು, ಕಾರಣಾಂತರಗಳಿಂದ ಅದು ತಪ್ಪಿ ಹೋದದ್ದು, ಆಮೇಲೆ ಅವಾಗವಾಗ ನಾವು ಅವನನ್ನು ರೇಗಿಸುತ್ತಿದ್ದುದು, ತಮಾಷೆ ಮಾಡುತ್ತಿದ್ದುದು ಎಲ್ಲವನ್ನು ಹೇಳುತ್ತಾ ಈ ಕಾರಣಕ್ಕಾಗಿ ಎಲ್ಲ ಆದ ಮೇಲೆ ಹೇಳಬೇಕೆಂದುಕೊಂಡಿದ್ದೆ ಎಂದು ಹೇಳಿದ. ನಾನೇಕೋ ಅವನು ಕೊಟ್ಟ ಉತ್ತರದಿಂದ ಕನ್ವಿನ್ಸ್ ಆಗಲಿಲ್ಲ. ಅಸಲಿಗೆ ನಾವು ಒಬ್ಬರೊನ್ನಬ್ಬರನ್ನು ಎಷ್ಟು ಸಲ ರೇಗಿಸಿಲ್ಲ! ಅವನ ಕೊಟ್ಟ ಉತ್ತರ ತೀರ ಉಡಾಫೆಯದು ಅನಿಸಿತು. ಈಗ ಆ ವಿಷಯವನ್ನು ಕೆದಕಬೇಕಿದೆ. ಜೀವದ ಗೆಳೆಯ ಎಂಬ ಹಕ್ಕಿನಿಂದ ಕೇಳಬೇಕಾದ್ದನ್ನೆಲ್ಲಾ ಕೇಳಬೇಕಿದೆ ಹೇಳಬೇಕಾದ್ದನ್ನೆಲ್ಲಾ ಹೇಳಬೇಕಿದೆ. ಮೂರು ತಿಂಗಳಿನಿಂದ ಸ್ವಗತವಾಗಿಯೇ ಉಳಿದ ಮನದ ಮಾತುಗಳನ್ನು ಆತನ ಮುಂದೆ ಸಂವಾದಕ್ಕಿಡಬೇಕಿದೆ. ಫಲಿತಾಂಶ ಏನಾಗಬಹುದು? ಗೊತ್ತಿಲ್ಲ.

    ಇನ್ನುಳಿದಂತೆ ಬ್ಲಾಗ್ ಗೆಳೆಯರನ್ನು ಭೇಟಿಯಾಗಬೇಕಿದೆ. ಮಿಡಿಯಾ ಫ್ಲಾವರ್ ಮೋಹನ್ ಸರ್ನ್ನು ಮೀಟ್ ಮಾಡಬೇಕಿದೆ. ಬ್ಲಾಗ್ ಗೆಳೆಯ ಶಿವು ಹಾಗೂ ಪ್ರಕಾಶ್ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಬೇಕಿದೆ. ನನಗೆ ಬದುಕನಿತ್ತ ಬೆಂಗಳೂರಿನಲ್ಲಿ ಚನ್ನಾಗಿ ಸುತ್ತಾಡಬೇಕಿದೆ. ಎಂದಿನಂತೆ ಯಡಿಯೂರಿನಲ್ಲಿ ನನಗಿಷ್ಟವಾದ ಪಾನಿಪೂರಿ ತಿನ್ನಬೇಕಿದೆ. ಅಮ್ಮನ ಆರೋಗ್ಯ ವಿಚಾರಿಸಬೇಕಿದೆ. ನನ್ನ ಹೈಸ್ಕೂಲ್ ಗೆಳೆಯ ಜಗದೀಶ್ ಅಣ್ಣಿಗೇರಿ ನಾಲ್ಕೈದು ವರ್ಷಗಳಿಂದ ಟಚ್ಲ್ಲೇನ ಇಲ್ಲ. ಆತ ಮೊದಲು ಲಂಡನ್ನಗಲ್ಲಿರುವಾಗ ಆಗಾಗ ಫೋನ್ ಮಾಡುತ್ತಿದ್ದ. ಆನಂತರ ನನ್ನ ಫೋನ್ ನಂಬರ್ ಬದಲಾಯಿತು. ಆಗ ನನ್ನ ಬಳಿ ಈಮೇಲ್ ಇರಲಿಲ್ಲ. ಅವನದನ್ನೂ ತೆಗೆದುಕೊಂಡಿರಲಿಲ್ಲ. ಹೀಗಾಗಿ ಇಬ್ಬರ ಮಧ್ಯ ಸಂಪರ್ಕವೇ ಇಲ್ಲ. ಈಗ ಬೆಂಗಳೂರಿನಲ್ಲಿಯೇ ಇದ್ದಾನೆಂದು ಕೇಳಿಪಟ್ಟೆ. ಖುಶಿಯಾಯಿತು. ಹುಡುಕುವದು ಅಂಥಾ ಕಷ್ಟವೇನೂ ಆಗುವದಿಲ್ಲ. ಕಾಲೇಜು ಗೆಳೆಯರನ್ನು ನೋಡಿಕೊಂಡು ಬರಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಇನ್ನೊಬ್ಬ ಗೆಳೆಯ ರಾಘುವಿನೊಂದಿಗೆ ಒಂದಿಷ್ಟು ಕುಳಿತು ಮಾತನಾಡಬೇಕಿದೆ. ಎಷ್ಟೆಲ್ಲಾ ಇದೆ. ಇವನ್ನೆಲ್ಲಾ ಕೇವಲ ಒಂದೂವರಿ ತಿಂಗಳಲ್ಲಿ ಮಾಡಿ ಮುಗಿಸುತ್ತೇನೆಯೆ? ಗೊತ್ತಿಲ್ಲ.

    ನಾಳೆ ಅಂದರೆ ಜುಲೈ 20ರಂದು ಟ್ರಿಪೋಲಿಯಿಂದ ಹೊರಟು ಜುಲೈ 21ರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನಲ್ಲಿರುತ್ತೇನೆ. ನನ್ನ ಫೋನ್ ನಂಬರ್ - 9844549386. See you soon. Until then bye……..

    -ಉದಯ್ ಇಟಗಿ