
(೧)
‘ಮತ್ತೆ ಅದೇ ಹಳೆಯ ಕಣಿ ಕೇಳಬೇಡ
ಬಾಲಕರಿಲ್ಲದ ಬಾಲೆ ಆಯ್ಕೆ ಹೊರತು ಅನಿವಾರ್ಯವಲ್ಲ
ಹಾಸುಂಡು ಬೀಸಿ ಒಗೆದ ಬಾಳು ನನ್ನದಲ್ಲ ನಿನ್ನದು
ಗಾಣಕ್ಕೆ ಬಾಡಿಗೆ ಎತ್ತು ನಾನಂತೂ ಆಗುವುದಿಲ್ಲ’
(೨)
‘ಎರಡು ವಿಷಯ ಹೇಳುತ್ತೇನೆ
ಗಂಟು ಹಾಕಿ ನೆನಪಿಟ್ಟುಕೊಳ್ಳಿ
ನನ್ನ ಶವ ಯಾತ್ರೆಯಲ್ಲಿ
ಸೂಫಿ ಗಜಲ್ ಹಾಡಿ
ತಿಥಿಗೆ ಆ ಸಾಬಿಯನ್ನು ಕರೆಯಿರಿ
ಆಮೇಲೆ ನೀವೆಲ್ಲಾ ಬಡಿದಾಡಿಕೊಂಡು ಸಾಯಿರಿ!’
(೩)
‘ನಡುರಾತ್ರಿಯಲ್ಲಿ ಹೊರಳಿ ಕೈಚಾಚಿ ಹುಡುಕಿ
ಸ್ನಾನದ ನಂತರ ಸೀರೆ ಉಟ್ಟು
ಮಣಿ ಸರಕ್ಕೆ ಕೈಚಾಚಿ
ಅದಿನ್ನೂ ಅಲ್ಲೆ ಹಾಸಿಗೆಯಲ್ಲಿ
ದಿಂಬಿನ ಕೆಳಗಿರಬೇಕೆಂದು ತಡಕಿ
ಬಾಗಿಲ ಬೆಲ್ ಸದ್ದಿಗೆ ಮರೆತು ಹೊರಟು
ಎರಡು ಲೀಟರ್ ಹಾಲು ಕೇಳಿ ತಲೆ ಚಚ್ಚಿಕೊಂಡು
ಯಾರು ನೆನೆಸಿಟ್ಟರು ದೋಸೆಗೆ ರುಬ್ಬಲು
ಒಂದು ಕೇಜಿ ಅಕ್ಕಿ?
ಅಭ್ಯಾಸ ಬಲ, ಮರೆತೇ ಹೋಗುತ್ತದೆ
ಎಷ್ಟು ವರ್ಷವಾದವು
ಅವನು ಮನೆ ಬಿಟ್ಟು?
(೪)
ಅವಳು ಕುಡಿಯಬಹುದು, ಕುಣಿಯಬಹುದು, ಕೇಳಿಯಲ್ಲಿ ಮುಳುಗಿ ತೇಲಬಹುದು
ಹಿಡಿಯಲಾರಿರಿ ನೀವು ಅವಳನ್ನು ಪಬ್ಬುಗಳಲ್ಲಿ
ಹೊಡೆದು ಕೆಡವಿ ದಕ್ಕಿಸಿಕೊಳ್ಳಲಾರಿರಿ
ಮಬ್ಬು ಬೆಳಕಲ್ಲಿ ಕಾಣಲಾರಿರಿ ನಿಮ್ಮ ಮಂಜುಕಣ್ಣುಗಳಲ್ಲಿ
ಎದ್ದು ಬರುತ್ತಾಳೆ ನೂರು ನಾಲಿಗೆ ಚಾಚಿ ರಕ್ತ ಹೀರುತ್ತ
ಹೀಗೆ ಒಮ್ಮೊಮ್ಮೆ ಅಬ್ಬರಿಸುತ್ತಾ, ಒಮ್ಮೊಮ್ಮೆ ತಮಾಷೆ ಮಾಡುತ್ತಾ. ಒಮ್ಮೊಮ್ಮೆ ಕನವರಿಸುತ್ತಾ, ಒಮ್ಮೊಮ್ಮೆ ಲೇವಡಿ ಮಾಡುತ್ತಾ ಬರೆಯುತ್ತಲೇ ಬಂದಿರುವ ಪ್ರತಿಭಾ ನಂದಕುಮಾರವರದು ಕನ್ನಡದ ಲೇಖಕಿಯರಲ್ಲಿ ಎದ್ದು ಕಾಣುವ ಹೆಸರು. ಅವರನ್ನು ಲೇಖಕಿ ಎನ್ನುವದಕ್ಕಿಂತ ಕವಯಿತ್ರಿ ಎನ್ನುವದೇ ಸೂಕ್ತ! ಏಕೆಂದರೆ ಅವರು ಕತೆ, ಕಾದಂಬರಿ, ಲೇಖನಗಳಿಗಿಂತ ಹೆಚ್ಚಾಗಿ ಬರೆದಿದ್ದು ಕಾವ್ಯವನ್ನೇ! ಅಲ್ಲದೇ ಸ್ವತಃ ಪ್ರತಿಭಾ “ನಾನು ನನ್ನನ್ನು ಲೇಖಕಿ ಎಂದು ಗುರುತಿಸಿಕೊಳ್ಳುವದಕ್ಕಿಂತ ಕವಯಿತ್ರಿ ಎಂದು ಗುರುತಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತೇನೆ” ಎಂದು ಹೇಳುತ್ತಾರೆ.
‘ನಾವು ಹುಡುಗೀಯರೇ ಹೀಗೆ’ (೧೯೮೩) ಎನ್ನುವ ತಮ್ಮ ಮೊದಲ ಕವನ ಸಂಕಲನದ ಮೂಲಕ ಕನ್ನಡ ಕಾವ್ಯ ಕ್ಷೇತ್ರಕ್ಕೆ ಕಾಲಿಟ್ಟ ಪ್ರತಿಭಾ ನಂದಕುಮಾರ್ ಕನ್ನಡ ಕಾವ್ಯ ಪ್ರಪಂಚಕ್ಕೆ ಒಂದು ಹೊಸ ಆಯಾಮವನ್ನೇ ತಂದುಕೊಟ್ಟರು. ಒಂದು ಕಡೆ ತಮ್ಮ ಕವನಗಳ ಮೂಲಕ ಕನ್ನಡಿಗರನ್ನು ಬೆಚ್ಚಿಬೀಳಿಸುತ್ತಲೇ ಇನ್ನೊಂದೆಡೆ ಅವರನ್ನು ಮೆಚ್ಚಿಸಿದವರೂ ಹೌದು! ಅವರ ಯಾವದಾದರೊಂದು ಕವನವನ್ನು ಯಾರಿಗಾದರು (ಕಾವ್ಯಾಸಕ್ತರಿಗೆ) ತೋರಿಸಿ ಇದನ್ನು ಯಾರು ಬರೆದಿದ್ದು ಹೇಳಿ? ಎಂದು ಕೇಳಿದರೆ ತಟ್ಟನೆ ಪ್ರತಿಭಾ ನಂದಕುಮಾರ ಎಂದು ಹೇಳುತ್ತಾರೆ. ಅಷ್ಟರಮಟ್ಟಿಗೆ ಪ್ರತಿಭಾ ತಮ್ಮ ವಿಶಿಷ್ಟ ಪ್ರಯೋಗ ಶೈಲಿಯೊಂದಿಗೆ ತಮ್ಮ ಕವನಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
(೧)
ಹೌದು ಕಣೆ ಉಷಾ
ನಾವು ಹುಡುಗಿಯರೇ ಹೀಗೆ.........
ಏನೇನೋ ವಟಗುಟ್ಟಿದರೂ
ಹೇಳಲೇಬೇಕಾದ್ದನ್ನು ಹೇಳದೆ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
ಜುಮ್ಮೆನ್ನಿಸುವ ಆಲೋಚನೆಗಳನೆಲ್ಲಾ
ಹಾಗೆ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.
ಹೇಳಲೇಬೇಕು ಎನಿಸಿದ್ದನ್ನು
ಹೇಳಹೋಗಿ ಹೆದರೆ ಏನೇನೋ ತೊದಲುತ್ತೇವೆ
‘ಐ ಲವ್ ಯೂ’ ಅಂತ ಹೇಳಲು ಕಷ್ಟಪಟ್ಟು
ಬೇರೆ ಏನೇನೊ ದಾರಿ ಹುಡುಕಿ
ಸಂದೇಶ ಮುಟ್ಟಿಸಲು ಹೆಣಗುತ್ತೇವೆ
ಅದನ್ನು ಅರ್ಥ ಮಾಡಿಕೊಳ್ಳಲಾರದೆ
ಹುಡುಗರು ಕೈ ತಪ್ಪಿದಾಗ ಮುಸು ಮುಸು ಅಳುತ್ತೇವೆ
ಕೊನೆಗೆ ಬೇರೆ ಯಾರನ್ನೋ ಮದುವೆಯಾಗಬೇಕಾದಾಗ
ನಾವೇ ದುರಂತ ನಾಯಕಿಯರೆಂದು
ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೆವೆ
ಗಂಡನಲ್ಲಿ ‘ಅವನನ್ನು’ ಹುಡುಕುತ್ತೇವೆ
ಗಂಡನಿಗೆ ಮಾತ್ರ ಅದರ ಸುಳಿವೂ ಸಿಗದಂತೆ ನಟಿಸುತ್ತೇವೆ
ಅಷ್ಟರಲ್ಲಿ ಒತ್ತಿಟ್ಟ ಭಾವನೆಗಳೆಲ್ಲ ಹರಳಾಗಿಬಿಟ್ಟಿರುತ್ತವೆ
ಅರಳುವದೇ ಇಲ್ಲ ಉಷಾ.......
(೨)
ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ
ಕೈಗೊಂದು ಕಾಲಿಗೊಂದು ಮಕ್ಕಳಾಗಿ
ಏದುಸಿರು ಬಿಡುತ್ತಾ ತರಕಾರಿ ಕೊಳ್ಳುವಾಗ ‘ಅವನು’ ಸಿಗುತ್ತಾನೆ
ನಮ್ಮ ಇಂದಿನ ಅವಸ್ಥೆಗೆ ಇವನೇ ಕಾರಣ ಅಂತ ರೋಷ ತಾಳುತ್ತೇವೆ
ಆದರೆ ಮೇಲೆ ನಗು ನಗುತ್ತಾ ‘ಅವನ’ ಹೆಂಡತಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತೇವೆ
ಯಾಕೆಂದರೆ ಅವಳದೂ ಅದೇ ಕಥೆಯಲ್ಲವೆ?
ನಾವು ಹುಡುಗಿಯರೇ ಹೀಗೆ...........
ಹೀಗೆ ಹುಡುಗಿಯರ ಬಗ್ಗೆ ಬರೆಯುವದರ ಮೂಲಕ ಪ್ರತಿಭಾ ಎಂಬತ್ತರ ದಶಕದ ಹುಡುಗಿಯರ (ಆದರೆ ಈ ದಶಕದ ಹುಡುಗಿಯರು ಹಾಗಿಲ್ಲ ಬಿಡಿ) ಆರಾಧ್ಯ ದೇವತೆಯಾದರು. ಈ ಕವನವನ್ನು ಆ ದಶಕದ ಎಷ್ಟೋ ಹುಡುಗಿಯರು ತಮ್ಮ ಅಂತರಂಗದ ಪಿಸುಮಾತೆಂಬಂತೆ ಡೈರಿಯಲ್ಲೋ ಅಥವಾ ನೋಟ್ ಪುಸ್ತಕದ ಕೊನೆಯಲ್ಲೆಲ್ಲೋ ಬರೆದಿಟ್ಟುಕೊಂಡು ಆಗಾಗ ತಮ್ಮಷ್ಟಕ್ಕೆ ತಾವೇ ಹಾಡಿಕೊಳ್ಳುತ್ತಾ ತಮ್ಮ ಅವಸ್ಥೆಗೆ ತಾವೇ ಮರುಕಪಟ್ಟರು. ಹಾಗೆಯೇ ತಮ್ಮ ಅಂತರಂಗದ ವಿಷಾದವನ್ನು ಹಾಡಾಗಿಸಿದ್ದಕ್ಕೆ ಪ್ರತಿಭಾರವರಿಗೆ ಒಂದು ಥ್ಯಾಂಕ್ಸ್ ಕೂಡ ಹೇಳಿದ್ದರು. ಯಾರೊಂದಿಗೂ ಹಂಚಿಕೊಳ್ಳಲಾಗದೆ ಒಳಗೊಳಗೆ ಉಳಿದು ಅಳಿಯುವ ಹುಡುಗಿಯರ ಒಳತೋಟಿಯನ್ನು ಬಿಚ್ಚಿಡುತ್ತಲೆ ‘ನಾವು ಹುಡುಗಿಯರೇ ಹೀಗೆ’ ಎಂಬ ಸತ್ಯವನ್ನು ಬಹಿರಂಗಪಡಿಸುವದರ ಮೂಲಕ ಮಡಿವಂತಿಕೆಯ ಸಮಾಜದಲ್ಲೂ ಅವರ ಮೇಲೆ ಅಗಾಧ ಮರುಕವೊಂದನ್ನು ಸೃಷ್ಟಿಸಿಬಿಟ್ಟರು ಪ್ರತಿಭಾ. ಇದು ಪ್ರತಿಭಾರವರಲ್ಲಿ ಅಡಕವಾಗಿರುವ ಕಾವ್ಯ ಪ್ರತಿಭೆಗೆ ಒಂದು ಉದಾಹರಣೆಯಷ್ಟೆ! ಕವನ ಕಟ್ಟಲು ಬೇಕಾಗುವ ಜಾಣ್ಮೆ, ತಾಳ್ಮೆ ಹಾಗೂ ಶ್ರದ್ಧೆಗಳೆಲ್ಲವೂ ಅವರಲ್ಲಿ ಮೊದಲಿನಿಂದಲೂ ಮನೆಮಾಡಿವೆ. ಹಾಗೆಂದೇ ಅವರ ಕವನಗಳು ಯಾವಾಗಲೂ ಪರಿಪಕ್ವಗೊಂಡ ಕವನಗಳಂತೆ ಕಾಣುತ್ತವೆ. ಆದರೆ ಇವರಿಗೆ ಕಾವ್ಯ ಸುಲಭವಾಗಿ ಒಲಿದಂತೆ ಅನುವಾದ ಅಷ್ಟಾಗಿ ಒಲಿದಿಲ್ಲವೆಂದು ಕಾಣುತ್ತದೆ. ಅದಕ್ಕೆ ಇತ್ತೀಚಿಗೆ ‘ಕೆಂಡ ಸಂಪಿಗೆ’ಯಲ್ಲಿ ಬಂದ ಅವರ ರಸಹೀನ ಅನುವಾದಗಳೇ ಸಾಕ್ಷಿ. ಬರಿ ಪದ್ಯದ ಸಾಲು ಸಾಲುಗಳನ್ನು ತರ್ಜುಮೆ ಮಾಡುವದನ್ನು ಬಿಟ್ಟು ಪದ್ಯವನ್ನು ಇಡಿಯಾಗಿ ಅನುಭವಿಸಿ ಕನ್ನಡಕ್ಕೆ ಹತ್ತಿರವಾಗುವಂತೆ ಕನ್ನಡಿಕರಿಸಿದರೆ ಕನ್ನಡದಲ್ಲಿ ಅವರೊಬ್ಬ ಉತ್ತಮ ಅನುವಾದಕಿಯಾಗುವದರಲ್ಲಿ ಎರಡು ಮಾತಿಲ್ಲ. ಆಶ್ಚರ್ಯವೆಂದರೆ ಅವರ ಇಂಗ್ಲೀಷ ಅನುವಾದಗಳು (ತಾವೇ ಅನುವಾದಿಸಿರುವ ತಮ್ಮ ಕನ್ನಡ ಕವನಗಳ ಇಂಗ್ಲೀಷ ಅನುವಾದಗಳು) ಕನ್ನಡ ಅನುವಾದಕ್ಕಿಂತ ಉತ್ತಮವಾಗಿವೆ. She seems to be a better translator in English than in Kannada.
ಪ್ರತಿಭಾ ಕೇವಲ ತಮ್ಮ ವೈಯಕ್ತಿಕ ಕಷ್ಟನಷ್ಟದ ಬಗ್ಗೆಯೇ ಬರೆದುಕೊಂಡವರಲ್ಲ. ಕಾಲಕಾಲಕ್ಕೆ ಸಮಕಾಲೀನ ಸಾಮಾಜಿಕ ಘಟನೆಗಳಿಗೆ ಸ್ಪಂದಿಸುತ್ತ ಬಂದಿದ್ದಾರೆ; ವಿಶೇಷವಾಗಿ ಹೆಣ್ಣು ಮತ್ತು ಅವಳ ಶೋಷಣೆಯ ಸುತ್ತಮುತ್ತಲ ವಿಷಯಗಳಿಗೆ. ಅದಕ್ಕೊಂದು ಉತ್ತಮ ಉದಾಹರಣೆ ಇತ್ತೀಚಿಗೆ ಮಂಗಳೂರಿನ ಪಬ್ವೊಂದರಲ್ಲಿ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆದಾಗ ‘ದೇವಿ’ ಎನ್ನುವ ಕವನವನ್ನು ಬರೆಯುವದರ ಮೂಲಕ ತಾವು ಪೂಜಿಸುವ ದೇವತೆಗಳೇ ಕುಡಿದು ಕುಣಿದು ಕುಪ್ಪಳಿಸುವಾಗ ಮಂಗಳೂರಿನ ಹೆಣ್ಣುಮಕ್ಕಳು ಯಾವ ಲೆಕ್ಕ ಎಂದು ಸಂಪ್ರದಾಯವಾದಿಗಳನ್ನು ಕೇಳಿ ವಸ್ತು ಸ್ಥಿತಿಯ ಲೇವಡಿ ಮಾಡಿದರು.
‘ಅವಳು ಕುಡಿಯಬಹುದು, ಕುಣಿಯಬಹುದು, ಕೇಳಿಯಲ್ಲಿ ಮುಳುಗಿ ತೇಲಬಹುದು
ಹಿಡಿಯಲಾರಿರಿ ನೀವು ಅವಳನ್ನು ಪಬ್ಬುಗಳಲ್ಲಿ
ಹೊಡೆದು ಕೆಡವಿ ದಕ್ಕಿಸಿಕೊಳ್ಳಲಾರಿರಿ
ಮಬ್ಬು ಬೆಳಕಲ್ಲಿ ಕಾಣಲಾರಿರಿ ನಿಮ್ಮ ಮಂಜುಕಣ್ಣುಗಳಲ್ಲಿ
ಎದ್ದುಬರುತ್ತಾಳೆ ನೂರು ನಾಲಿಗೆ ಚಾಚಿ ರಕ್ತ ಹೀರುತ್ತ’
ಇವೆಲ್ಲವುಗಳ ಮಧ್ಯ ಬಹುಶಃ ಇವತ್ತಿನ ಬಹಳಷ್ಟು ಹೆಂಗಸರು ಮುಖ ಸಿಂಡರಿಸುತ್ತಾ ಅಡಿಗೆ ಮಾಡುವದೆಂದರೆ ಅಲರ್ಜಿ ಎನ್ನುವ ಹೊತ್ತಿನಲ್ಲಿಯೇ ಪ್ರತಿಭಾ “ನನಗೆ ಅಡಿಗೆ ಮಾಡುವದೆಂದರೆ ಬಲು ಇಷ್ಟ” ಎಂದು ಹೇಳುತ್ತಾರೆ. ಅದಕ್ಕೆ ಕಾರಣವನ್ನೂ ಅವರೇ ಕೊಡುತ್ತಾರೆ ನೋಡಿ:
‘ಅಡುಗೆ ಮಾಡುವುದೆಂದರೆಬಹಳ ಇಷ್ಟ ನನಗೆ
ಹೊರದಾರಿ ಅದು ನನ್ನೆಲ್ಲ ಆಕ್ರೋಶಗಳಿಗೆ
ತೊಳೆದು ಸಿಪ್ಪೆ ಸುಲಿದು ಕತ್ತರಿಸಿ ಜಜ್ಜಿ ಕುಟ್ಟಿ
ಹುರಿದು ಅರೆದು ರುಬ್ಬಿ ನುರಿದು ಬಾಡಿಸಿ ಬೇಯಿಸಿ
ಕೊಟ್ಟಿ ಕಲೆಸಿ ಹಿಚುಕಿ ಮಸೆದು ಗಸಗಸನೆ ಕಡೆದು
ಎತ್ತಿ ಹಾಕಿದರೆ ತಟ್ಟೆಗೆ ರುಚಿ ರುಚಿ ಅಂತ ತಿನ್ನುತ್ತಾರೆ’
ಎಂದು ಬರೆದು ಪರೋಕ್ಷವಾಗಿ ತಮ್ಮ ಮೇಲೆ ದಬ್ಬಾಳಿಕೆ ನಡೆಸಿದವರ ವಿರುದ್ಧ ವ್ಯವಸ್ಥಿತವಾದ ಸೇಡೊಂದನ್ನು ತೀರಿಸಿಕೊಳ್ಳುತ್ತಾರೆ. ಬಹುಶಃ ಇದೇ ಕಾರಣಕ್ಕೇ ಇರಬೇಕು ಸಾಮಾನ್ಯವಾಗಿ ಹೆಂಗಸರು ಅಡಿಗೆ ಮಾಡುವಾಗ ಯಾಕೆ ಯಾವ ಗಂಡಸೂ ಅಡಿಗೆ ಮನೆಗೆ ಹೋಗುವದಿಲ್ಲವೆಂದು.
ಪ್ರತಿಭಾ ಕೇವಲ ಇಂಥ ವಿಷಯಗಳಿಗೆ ಮಾತ್ರ ಅಂಟಿಕೊಳ್ಳದೆ ಬದುಕಿನ ಬೇರೆ ಬೇರೆ ಸ್ತರಗಳ ಬಗ್ಗೆಯೂ ಬರೆಯುತ್ತಾರೆ. ಪ್ರೀತಿಯ ಬಗ್ಗೆ ಮಾತನ್ನಾಡುತ್ತಾ ‘ಪ್ರೀತಿಯೊಂದೇ ನಿಶ್ಚಲ ಅದೇ ಜೀವನ ಆದರೂ ಅವರು ಕೇಳುತ್ತಾರೆ ಪುರಾವೆಗಳನ್ನ’ ಎಂದು ಆಕ್ರೋಶಪಡುತ್ತಾರೆ. ಆಧುನಿಕ ಬದುಕಿನ ಬಿಕ್ಕಟ್ಟನ್ನು ಕೆಳಗಿನ ಸಾಲುಗಳಲ್ಲಿ ಬಿಡಿಸಿಡುತ್ತಾ ಹೇಗೆ ಕಳವಳಪಡುತ್ತಾರೆ ನೋಡಿ.
‘ದೊಡ್ಡ ದೊಡ್ಡ ಮನೆಗಳಲ್ಲಿ
ಚಿಕ್ಕ ಚಿಕ್ಕ ಕುಟುಂಬಗಳು
ದೂರ ದೂರದ ಮೊಬೈಲ್ಗಳಲ್ಲಿ
ಹತ್ತಿರವಾಗದ ಸಂದೇಶಗಳು
ಊರ ತುಂಬಾ ಫಾಸ್ಟ್ ಫುಡ್ಗಳು
ಚಡಪಡಿಸುವ ಸ್ಲೋ ಜೀರ್ಣಾಂಗಗಳು’
ಇಂಥ ವಿಷಯಗಳಿಂದಲೇ ಪ್ರತಿಭಾ ಕಾವ್ಯಾಸಕ್ತರ ಕುತೂಹಲವನ್ನು ಕೆರಳಿಸುತ್ತಾರೆ ಮತ್ತು ಅವರನ್ನು ಆಕರ್ಷಿಸುವದರಲ್ಲಿ ಯಶಸ್ವಿಯಾಗುತ್ತಾರೆ.
“ಇಂದಿನ ಕನ್ನಡ ಕಾವ್ಯದಲ್ಲಿ ಹೊಸದೇನಾದರು ಆಗುತ್ತಿದೆಯೇ?” ಎಂದು ಅವರನ್ನು ಕೇಳಿದರೆ ತಟ್ಟನೆ “ಖಂಡಿತ ಆಗುತ್ತಿದೆ. ಹಾಗೇನಾದರು ಆಗುತ್ತಿದ್ದರೆ ಅದು ಮಹಿಳೆಯರಿಂದಲೇ” ಎಂದು ಹೆಮ್ಮೆಯಿಂದ ಉತ್ತರಿಸುತ್ತಾರೆ. ಅವರ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದೆ ಕೂಡ.
ಪ್ರತಿಭಾ ಒಬ್ಬ ಸ್ತ್ರೀವಾದಿ ಕವಯಿತ್ರಿ. ಅದಕ್ಕೆ ಅವರ ಕೃತಿಗಳೇ ಸಾಕ್ಷಿ. ಆದರೆ ಹಾಗಂತ ಹೇಳಿದರೆ ಅವರಿಗೆ ಕೋಪ ಬರುತ್ತದೆ. ಮಹಿಳೆಯರ ಕೃತಿಗಳನ್ನು feminine, female and femininity ಅಂತೆಲ್ಲಾ ವಿಂಗಡಿಸಬೇಡಿ. ಏಕೆಂದರೆ ನಿಮಗೆ ಗಂಡಸರಿಗೆ ಹೆಂಗಸರ ಕೃತಿಗಳನ್ನು ಹೇಗೆ ಓದಬೇಕೆಂಬುದು ಗೊತ್ತಿಲ್ಲ ಎಂದು ಅವರ ಮೇಲೆ ಹರಿಹಾಯುತ್ತಾರೆ. “ಏನ್ ಮೇಡಂ ನಿಮ್ಮ ಕವನ, ಲೇಖನಗಳೆಲ್ಲ ಸ್ತ್ರೀ ಸಂವೇದನೆಗಳಿಂದ ತುಂಬಿಹೋಗಿವೆ. ಸ್ತ್ರೀವಾದದ ಹಿನ್ನೆಲೆಯಲ್ಲಿ ರಚಿತವಾಗಿವೆ. ಹೀಗಿದ್ದೂ ನಿಮ್ಮನ್ನು ಸ್ತ್ರೀವಾದಿ ಎಂದು ಕರೆಯದಿರಲು ಹೇಗೆ ಸಾಧ್ಯ?” ಎಂದು ಕೇಳಿದರೆ “ನಿಮಗೆ ಬೇಕಾದರೆ ಕರೆದುಕೊಳ್ಳಿ, ನಂಗೇನೂ ಬೇಜಾರಿಲ್ಲ. ಆದರೆ ನಮಗೆಲ್ಲಾ ಯಾವಾಗಲೂ ಒಂದೇ ‘ಇಸಂ’ (ism) ನಡಿ ಬರೆಯುವದು ಕಷ್ಟವಾಗುತ್ತದೆ. ಏಕೆಂದರೆ ದಿನದ ಕೊನೆಯಲ್ಲಿ ನಾನೂ ಒಬ್ಬ ಮನುಷ್ಯಳು ಅದಕ್ಕಿಂತ ಹೆಚ್ಚಾಗಿ ಒಂದು ಹೆಣ್ಣು” ಎಂದು ಹೇಳಿ ಪ್ರತಿಭಾ ಕೇವಲ ಬರೆಯುವದರಲ್ಲಿ ಜಾಣೆಯಲ್ಲ ಮಾತನಾಡುವದರಲ್ಲೂ ಜಾಣೆ ಎಂದು ತೋರಿಸುತ್ತಾರೆ.
ಅದೇನೇ ಇರಲಿ ಪ್ರತಿಭಾ ಕನ್ನಡದ ಒಬ್ಬ ಅಪರೂಪದ ಕವಿಯಿತ್ರಿ ಎನ್ನುವದರಲ್ಲಿ ಎರಡು ಮಾತಿಲ್ಲ. ಅವರ ಹಾಗೆ ಕವನ ಕಟ್ಟವ, ಇದ್ದದ್ದನ್ನು ಇದ್ದಕ್ಕಿದ್ದಂತೆ ಸೀದಾ ಸೀದಾ ಹೇಳುವ ಮತ್ತೊಬ್ಬ ಕವಯಿತ್ರಿ ಕನ್ನಡದಲ್ಲಿಲ್ಲ. ಪ್ರತಿಭಾ ಹೇಳುತ್ತಾರೆ ”ಬರೆಯಬೇಕು ಆ ಒಳಗಿನಿಂದ ಗುದ್ದಿಬರುವ ಒದ್ದೆ ಹಾಡಿನ ಬಗ್ಗೆ/ಒಂಟಿ ನಿಂತರೂ ಗುಂಪೆನ್ನಿಸುವ, ಗುಂಪಿನಲ್ಲಿ ಒಂಟಿ ಎನ್ನಿಸುವ ಬಗ್ಗೆ.” ಪ್ರತಿಭಾ ತಮ್ಮ ಬದುಕಿನುದ್ದಕ್ಕೂ ಹೀಗೆ ತಮ್ಮ ಒದ್ದೆ ಹಾಡುಗಳ ಬಗ್ಗೆ ಬರೆಯುತ್ತಾ ಸಾಗಲಿ. ನಾವು ಅವನ್ನು ಓದುತ್ತಾ ಓದುತ್ತಾ ತೊಯ್ದು ಹೋಗುವಂತಾಗಲಿ.
-ಉದಯ ಇಟಗಿ.