Friday, February 05, 2010

ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು ಎಂದಿಗೂ ಉಚಿತವಲ್ಲ ಪುರುಷರೇ......


ವ್ಯಾನಿಟಿ ಬ್ಯಾಗ್ ಒಯ್ಯದೇ ಇರುವ ಹೆಂಗಸರು ಯಾರು ಇದ್ದಾರೆ? ಕಾಲೇಜು ಲಲನಾಂಗೆಯರಿಂದ ಹಿಡಿದು ಗೃಹಿಣಿ, ಉದ್ಯೊಗಸ್ಥ ಮಹಿಳೆ, ಮುದಕಿಯರು ಎಲ್ಲರೂ ಸಾಮಾನ್ಯವಾಗಿ ಹೊರಗೆ ಹೋಗುವಾಗಲೆಲ್ಲಾ ತಮ್ಮ ಬಗಲಿಗೆ ಈ ಚೀಲವನ್ನು ಸಿಕ್ಕಿಸಿಕೊಂಡು ಹೋಗುತ್ತಾರೆ. ಈ ವ್ಯಾನಿಟಿ ಬ್ಯಾಗ್ ಇರುವದರಿಂದಲೋ ಏನೋ ಸದಾ ಅವರ ಮುಖದಲ್ಲೊಂದು ಸುರಕ್ಷಿತ ಭಾವನೆ ಎದ್ದು ಕಾಣುತ್ತಿರುತ್ತದೆ ಹಾಗೂ ತಮ್ಮೆಲ್ಲ ರಹಸ್ಯಗಳನ್ನು ಅದರಲ್ಲಿ ಬಚ್ಚಿಟ್ಟುಕೊಂಡಿರುವದರಿಂದಲೋ ಏನೋ ಅವರ ಮುಖದ ಮೇಲೆ ಸಹಜವಾದ ಒಂದು ನಿರಾಳತೆ ಮೂಡಿರುತ್ತದೆ. ಈ ನಿರಾಳತೆಯನ್ನೇ ನಾವು ‘ವ್ಯಾನಿಟಿ’ ಎಂದುಕೊಂಡು, ಅದನ್ನು ಯಾವಾಗಲೂ ಅವರ ವ್ಯಾನಿಟಿ ಬ್ಯಾಗಿನ ಜೊತೆ ಸಮೀಕರಿಸಿ, ಈ ವ್ಯಾನಿಟಿ ಬ್ಯಾಗಿನಿಂದಲೇ ಅವರಿಗೆ ‘ವ್ಯಾನಿಟಿ’ ಬಂದಿದೆಯೇನೋ ಎಂಬಂತೆ ಮಾತನಾಡುತ್ತೇವೆಯೆ? ಗೊತ್ತಿಲ್ಲ!

ನನಗೆ ಚಿಕ್ಕಂದಿನಿಂದಲೂ ಹೆಂಗಸರ ವ್ಯಾನಿಟಿ ಬ್ಯಾಗ್ ನೋಡಿದಾಗಲೆಲ್ಲಾ ಏನೋ ಒಂದು ತರ ವಿಚಿತ್ರ ಕುತೂಹಲ ತಾನೆ ತಾನಾಗಿ ಮೂಡುತ್ತಿತ್ತು. ಯಾಕೆ ಹೆಂಗಸರು ಹೊರಗೆ ಹೋಗುವಾಗ ಯಾವಗಲೂ ತಮ್ಮ ಬಗಲಿಗೆ ವ್ಯಾನಿಟಿ ಬ್ಯಾಗ್ ಹಾಕಿಕೊಂಡು ಹೋಗ್ತಾರೆ ಮತ್ತು ಅದರಲ್ಲಿ ಅಂಥಾದ್ದೇನಿರುತ್ತದೆ ಎಂದು ತಿಳಿಯಬೇಕೆಂಬ ಕುತೂಹಲ. ಏಕೆಂದರೆ ನನ್ನ ಸಂಬಂಧಿಕರಲ್ಲಿ ಬಹಳಷ್ಟು ಹೆಂಗಸರು ಹೊರಗೆ ಹೋಗುವಾಗ ಇದನ್ನು ತಪ್ಪದೇ ಒಯ್ಯುತ್ತಿದ್ದರು ಮತ್ತು ಹೊರಗಿನಿಂದ ಬಂದ ತಕ್ಷಣ ಅದನ್ನು ಕಪಾಟಿನಲ್ಲೋ, ಬೀರುವಿನಲ್ಲೋ ಭದ್ರವಾಗಿ ಇಟ್ಟು ನಿರಾಳರಾಗುತ್ತಿದ್ದರು. ಇವರೇಕೆ ಅದನ್ನು ಒಯ್ಯುತ್ತಾರೆ? ಹೊರಗಿನಿಂದ ಬಂದ ತಕ್ಷಣ ಅದನ್ನು ಕಪಾಟಿನಲ್ಲೋ, ಬೀರುವಿನಲ್ಲೋ ಏಕೆ ಇಡುತ್ತಾರೆ? ಹೊರಗೇ ಇಡಲು ಏನು ಕಷ್ಟ? ಎಂದು ನನ್ನಷ್ಟಕ್ಕೆ ನಾನೆ ಕೇಳಿಕೊಳ್ಳುತ್ತಿದ್ದೆ. ಆದರೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಒಂದು ಸಾರಿ ಕುತೂಹಲ ತಡೆಯಲಾರದೆ ನನ್ನ ದೊಡ್ದಮ್ಮನನ್ನು ಕೇಳಿಯೂ ಬಿಟ್ಟೆ. ಅದಕ್ಕೆ ಆಕೆ ನಗುತ್ತಾ ನಿಮಗೆ ಗಂಡಸರಿಗಾದರೆ ಜೇಬುಗಳಿರುತ್ತವೆ ಅದರಲ್ಲಿ ಎಲ್ಲಾನೂ ಇಟ್ಕೊಳಿತೀರಿ. ಪಾಪ, ಹೆಂಗಸರಿಗಾದರೆ ಎಲ್ಲಿ ಜೇಬುಗಳಿರುತ್ತವೆ? ಅದ್ಕೆ ಅವರು ಹೊರಗೆ ಹೋಗುವಾಗ ವ್ಯಾನಿಟಿ ಬ್ಯಾಗ್ ಒಯ್ಯುತ್ತಾರೆ ಎಂದು ಉತ್ತರ ಕೊಟ್ಟಿದ್ದಳು. ನಾನಿನ್ನೂ ಚಿಕ್ಕವನಾಗಿದ್ದರಿಂದ ಮತ್ತು ಅಷ್ಟಾಗಿ ತಿಳುವಳಿಕೆ ಇಲ್ಲದ್ದರಿಂದ ಅವಳು ಹೇಳಿದ್ದು ಸರಿಯಿರಬಹುದೆಂದು ಸಮಾಧಾನ ಪಟ್ಟುಕೊಂಡಿದ್ದೆ. ಆದರೆ ಅದರ ಬಗ್ಗೆ ಇರುವ ಅಪಾರ ಕುತೂಹಲ ಮಾತ್ರ ತಣಿದಿರಲಿಲ್ಲ.
ನಾನು ಹೈಸ್ಕೂಲಿನಲ್ಲಿ ಓದುವಾಗ ಹುಡುಗಿಯರು ಯಾವತ್ತೂ ವ್ಯಾನಿಟಿ ಬ್ಯಾಗ್ ತಂದಿದ್ದನ್ನು ನೋಡಿರಲಿಲ್ಲ. ಏಕೆಂದರೆ ಅವರಿಗೆ ನಮ್ಮ ಹಾಗೆ ಸ್ಕೂಲ್ ಬ್ಯಾಗ್ ಇರುತ್ತಿತ್ತಾದ್ದರಿಂದ ವ್ಯಾನಿಟಿ ಬ್ಯಾಗ್ ತರುವ ಪ್ರಮೆಯವೇ ಇರಲಿಲ್ಲ. ಅಥವಾ ವ್ಯಾನಿಟಿ ಬ್ಯಾಗನ್ನು ಒಯ್ಯುವಷ್ಟು ‘ವ್ಯಾನಿಟಿ’ ಅವರಿಗಿನ್ನೂ ಬಂದಿರಲಿಲ್ಲ. ಬರು ಬರುತ್ತಾ ಅಂದರೆ ನಾನು ಕಾಲೇಜು ಮೆಟ್ಟಿಲು ಹತ್ತಿದಾಗ ಹುಡುಗಿಯರು ನಮ್ಮ ಮುಂದೆಯೇ ವ್ಯಾನಿಟಿ ಬ್ಯಾಗಿನಿಂದ ಬಾಚಣಿಗೆ ತೆಗೆದು ಬಾಚಿಕೊಳ್ಳುವಾಗ ಹಾಗೂ ಹಣೆಬೊಟ್ಟು ಇಟ್ಟುಕೊಳ್ಳುವಾಗಲೆಲ್ಲಾ ಓ ಇದೊಂದು ಮೇಕಪ್ ಕಿಟ್ ಇರಬೇಕೆಂದುಕೊಂಡಿದ್ದೆ. ಆದರೆ ದಿನ ಕಳೆದೆಂತೆಲ್ಲಾ ಹಂತ ಹಂತವಾಗಿ ಅದೊಂದು ಹೆಂಗಸರು ತಮ್ಮ ಖಾಸಗಿ ಜೀವನದ ರಹಸ್ಯ ಸಂಗತಿಗಳನ್ನು ಕಾಪಾಡುವ ಚೀಲ ಎಂದು ಗೊತ್ತಾಯಿತು.

ನನಗಿನ್ನೂ ಚನ್ನಾಗಿ ನೆನಪಿದೆ. ನಾನಾಗ ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಪಿ.ಯು.ಸಿ ಓದುತ್ತಿದ್ದೆ. ಆಗಷ್ಟೆ ಹರೆಯಕ್ಕೆ ಕಾಲಿಟ್ಟ ಹೊಸ ಹುರುಪು ನಮ್ಮಲ್ಲಿತ್ತು. ಕಾಲೇಜು ಎಂದ ಮೇಲೆ ಕೇಳುತ್ತಿರಾ ಹುಡುಗಿಯರನ್ನು ಬರಿ ಗೋಳು ಹೊಯ್ದುಕೊಳ್ಳುವದೇ ಕೆಲಸ. ನಮ್ಮ ಕ್ಲಾಸಿನಲ್ಲಿ ಒಂದು ತರ್ಲೆ ಗ್ಯಾಂಗ್ ಇತ್ತು. ತರ್ಲೆ ಗ್ಯಾಂಗ್ ಎಂದರೆ ಹುಡುಗಿಯರು ಏನೇನು ಮಾಡುತ್ತಾರೆಂಬುದನ್ನು ಪತ್ತೆ ಹಚ್ಚುವ ಕೆಲಸ. ಅವರು ಯಾವಾಗಲೂ ಯಾವ್ಯಾವ ಹುಡುಗಿ ಲೈಬ್ರೇರಿಯಲ್ಲಿ ಎಷ್ಟು ಹೊತ್ತು ಕಳೆಯುತ್ತಾಳೆ? ಕ್ಲಾಸ್ ರೂಮಿನಲ್ಲಿ ಎಷ್ಟು ಹೊತ್ತು ಇರುತ್ತಾಳೆ? ಕ್ಯಾಂಟಿನಿನಲ್ಲಿ ಎಷ್ಟು ಸಮಯ ಕಳೆಯುತ್ತಾಳೆ? ಯಾವ್ಯಾವ ಡ್ರೆಸ್ ಹಾಕುತ್ತಾಳೆ? ಯಾವ್ಯಾವ ಲೆಕ್ಚರರ್ ಜೊತೆ ಸಲಿಗೆಯಿಂದ ಇದ್ದಾಳೆ? ಬರಿ ಇಂಥವೇ ವಿಷಯಗಳ ಮೇಲೆ ಅವರ ನಿಗಾ ಇರುತ್ತಿತ್ತು. ಏಕೆಂದರೆ ಇಂಥ ವಿಷಯಗಳ ಆಧಾರದ ಮೇಲೆಯೇ ಹುಡುಗಿಯರು ಬೋಲ್ಡಾ ಇಲ್ಲಾ ಮೈಲ್ಡಾ ಎಂಬುದನ್ನು ಪತ್ತೆ ಹಚ್ಚುತ್ತಿದ್ದರು. ನಮ್ಮ ಕ್ಲಾಸಿನ ಹುಡುಗಿಯೊಬ್ಬಳು (ಅವಳ ಹೆಸರು ಗೊತ್ತಿಲ್ಲ. ಆದರೆ ಅವಳ ರೋಲ್ ನಂಬರ್ 86) ಪ್ರತಿದಿನವೂ ತನ್ನ ಡ್ರೆಸ್ಗೆನ ಮ್ಯಾಚ್ ಆಗುವಂಥ ಒಂದೊಂದು ವ್ಯಾನಿಟಿ ಬ್ಯಾಗನ್ನು ತರುತ್ತಿದ್ದಳು. ಇದನ್ನು ಗಮನಿಸಿದ ಹುಡುಗರು ಇವಳು ಶ್ರೀಮಂತನ ಮಗಳೇ ಇರಬೇಕು ಎಂದು ಲೆಕ್ಕಾಚಾರ ಹಾಕಿದ್ದರು. ಹೀಗಿರುವಾಗ ನಮ್ಮ ಕ್ಲಾಸ್ ಡೇ ಫಂಕ್ಷನ್ ಬಂತು. ಅಂದು ಎಲ್ಲ ಕಾರ್ಯಕ್ರಮಗಳ ಜೊತೆಗೆ ‘ಫಿಶ್ ಪಾಂಡ್’ ಕಾರ್ಯಕ್ರಮವೂ ಇತ್ತು. ಈ ಕಾರ್ಯಕ್ರಮದಲ್ಲಿ ಯಾರು ಯಾರಿಗೆ ಬೇಕಾದರೂ ವ್ಯಯಕ್ತಿಕ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಪ್ರಶ್ನೆಗಳನ್ನು ಕೇಳಬಹುದಿತ್ತು. ಆದರೆ ಸಭ್ಯತೆಯ ಎಲ್ಲೆಯನ್ನು ಮೀರುವಂತಿರಲಿಲ್ಲ. ಸರಿ, ಈ ರೋಲ್ ನಂಬರ್ 86 ಗೆ ಒಂದು ಪ್ರಶ್ನೆಯನ್ನು ಕೇಳಿಯೇ ಬಿಡೋಣ ಎಂದು “ನೀವು ಸದಾ ನಿಮ್ಮ ಡ್ರೆಸ್ಗೆ. ಮ್ಯಾಚ್ ಆಗುವಂಥ ವ್ಯಾನಿಟಿ ಬ್ಯಾಗನ್ನು ತರುತ್ತೀರಲ್ಲ, ಆ ವ್ಯಾನಿಟಿ ಬ್ಯಾಗಲ್ಲಿ ಎಷ್ಟು ದುಡ್ಡಿರಬಹುದು?” ಎಂದು ಕೇಳಿದ್ದರು. ಅದಕ್ಕ ಆಕೆ ಒಂಚೂರು ಅಧೀರಳಾಗದೆ “ನಿಮ್ಮನ್ನೆಲ್ಲಾ ಕೊಂಡುಕೊಳ್ಳುವಷ್ಟು” ಎಂದು ಉತ್ತರವನ್ನು ನೀಡಿ ಅವರನ್ನೆಲ್ಲಾ ಮಂಗ್ಯಾನ್ನ ಮಾಡಿದ್ದಳು.

ನಾನು ಮಂಡ್ಯದ ಪಿ. ಇ. ಎಸ್. ಕಾಲೇಜಿನಲ್ಲಿ ಓದುತ್ತಿರಬೇಕಾದರೆ ನನ್ನನ್ನೂ ಸೇರಿದಂತೆ ಮೂರ್ನಾಲ್ಕು ಸ್ನೇಹಿತರಿಗೆ ಒಂದು ಕೆಟ್ಟ ಚಾಳಿಯಿತ್ತು. ಹುಡುಗಿಯರ ವ್ಯಾನಿಟಿ ಬ್ಯಾಗನ್ನು ಚೆಕ್ ಮಾಡುವದು. ಚೆಕ್ ಮಾಡುವದೆಂದರೆ ಕೆಟ್ಟ ಉದ್ದೇಶದಿಂದ ಚೆಕ್ ಮಾಡುವದಲ್ಲ. ತಿನ್ನಲು ಏನಾದರು ಸಿಗುತ್ತದೆಯೆ? ಎಂದು. ಏಕೆಂದರೆ ಹುಡುಗಿಯರು ಸಾಮಾನ್ಯವಾಗಿ ಲೀಸರ್ ಅವರ್ನುಲ್ಲಿ ಬಿಸ್ಕಿಟ್ ಇಲ್ಲವೆ ಚಾಕ್ಲೋಟ್ಸನ್ನು ವ್ಯಾನಿಟಿ ಬ್ಯಾಗಿನಿಂದ ತೆಗೆದು ತಿನ್ನುವದನ್ನು ನೋಡಿದ್ದೆವು. ಮೊದಮೊದಲು ಹುಡುಗಿಯರು ತಾವು ಹೋದಲ್ಲಿಗೆ ಜೊತೆಯಲ್ಲಿಯೇ ಬ್ಯಾಗನ್ನು ಒಯ್ಯುತ್ತಿದ್ದರಿಂದ ನಮಗೆ ತಿಂಡಿ ತಿನಿಸುಗಳನ್ನು ಕದ್ದು ತಿನ್ನುವ ಪ್ರಮೆಯವೇ ಬಂದಿರಲಿಲ್ಲ. ಆದರೆ ಅದ್ಯಾವ ಧೈರ್ಯದ ಮೇಲೆಯೋ ನಾ ಕಾಣೆ, ಆನಂತರ ಅವರು ತಮ್ಮ ವ್ಯಾನಿಟಿ ಬ್ಯಾಗಗಳನ್ನು ಕ್ಲಾಸ್ ರೂಮಿನಲ್ಲಿಯೇ ಬಿಟ್ಟು ಒಟ್ಟಾಗಿ ಕ್ಯಾಂಟೀನಿಗೆ ಹೋಗತೊಡಗಿದರು. ನಾವು ಇದೇ ಸಮಯವೆಂದು ಮೆಲ್ಲಗೆ ಹುಡುಗಿಯರ ವ್ಯಾನಿಟಿ ಬ್ಯಾಗುಗಳಿಗೆ ಕೈ ಹಾಕಿ ತಿಂಡಿ ತಿಂದು ಹುಡುಗಿಯರು ವಾಪಾಸ್ ಬರುವಷ್ಟರಲ್ಲಿಯೇ ಅದು ಹೇಗಿತ್ತೋ ಹಾಗೆ ಇಟ್ಟು ಏನೂ ಆಗಿಲ್ಲವೆಂಬಂತೆ ತೆಪ್ಪಗೆ ಕುಳಿತುಬಿಡುತ್ತಿದ್ದೆವು. ಒಮ್ಮೊಮ್ಮೆ Little Heart ಬಿಸ್ಕಿಟ್ಸ್ ಇರುತ್ತಿದ್ದವು. ಅವನ್ನು ಹೆಚ್ಚಾಗಿ ಉಷಾರಾಣಿ ಎಂಬ ಹುಡುಗಿ ಇಡುತ್ತಿದ್ದಳು. ನೋಡಲು ಸುಂದರವಾಗಿದ್ದ ಈ ಹುಡುಗಿಯ ಬ್ಯಾಗ್ ಮೇಲೆ ನಮಗೆಲ್ಲಾ ಕಣ್ಣು. ಈ Little Heart ಬಿಸ್ಕಿಟ್ಸ್ ಹೆಸರಿಗೆ ತಕ್ಕಂತೆ ಹೃದಯದಾಕಾರದಲ್ಲಿದ್ದು ನೋಡಲು ಆಕರ್ಷಕವಾಗಿಯೂ ಹಾಗೂ ತಿನ್ನಲು ರುಚಿಕರವಾಗಿರುತ್ತಿದ್ದವು. ಒಂದೊಂದು ಸಾರಿ ಪ್ಯಾಕೆಟಿನೊಳಗಿಂದ ಅಕಸ್ಮಾತ್ ಮುರಿದ Little Heart ಬಿಸ್ಕಿಟ್ಸ್ ಏನಾದರು ಸಿಕ್ಕದರೆ, ‘ಬ್ರೋಕನ್ ಹಾರ್ಟ್ ಎಲ್ಲ ನನಗೆ ಬೇಡಪ್ಪಾ, ನೀನೆ ಇಟ್ಕೊ’ ಎಂದು ತೆಗೆದುಕೊಡುವವನಿಗೆ ಹೇಳುತ್ತಾ ನಾವು ಮುರಿದಿರದ ಬಿಸ್ಕಿಟೊಂದನ್ನು ತೆಗೆದು ತಿನ್ನುತಾ ಅದೇನೋ ಒಂದು ತರದ ರೋಮಾಂಚನವನ್ನು ಅನುಭವಿಸತ್ತಿದ್ದವು. ಹೀಗೆಯೇ ಎಷ್ಟು ದಿನಾಂತ ಮಾಡೋಕಾಗುತ್ತೆ? ಕೊನೆಗೊಂದು ದಿನ ಹುಡುಗಿಯರಿಗೆ ಅದು ನಾವೇ ನಾಲ್ಕು ಜನ ಎಂದು ಗೊತ್ತಾಯಿತು. ಆದರೂ ಅವರು ಕೇಳುವ ಧೈರ್ಯ ಮಾಡಲಿಲ್ಲ ಹಾಗೂ ವಿಷಯ ಗೊತ್ತಾದ ಮೇಲೂ ಅವರು ಬ್ಯಾಗನ್ನು ಕ್ಲಾಸ್ ರೂಮಿನಲ್ಲಿಯೇ ಬಿಟ್ಟು ಹೋಗುವದನ್ನು ನಿಲ್ಲಿಸಲಿಲ್ಲ. ನಾವೂ ಕೂಡ ನಮ್ಮ ತರ್ಲೆಗಳನ್ನು ನಿಲ್ಲಿಸಲಿಲ್ಲ. ಮೊದಲು ಬರಿ ತಿಂಡಿಗಳನ್ನು ಮಾತ್ರ ಹುಡುಕಿ ತಿನ್ನುತ್ತಿದ್ದ ನಾವು ನಿಧಾನಕ್ಕೆ ಅದರಲ್ಲಿ ಏನೆಲ್ಲಾ ಇರಬಹುದೆಂದು ತಲೆ ಕೆಡಿಸಿಕೊಳ್ಳುತ್ತಿದ್ದೆವು. ಒಂದಷ್ಟು ಹೇರ್ ಪಿನ್ಸ್, ಕ್ಲಿಪ್, ಲಿಪ್ ಸ್ಟಿಕ್, ನವಿಲು ಗರಿ, ಅವರಿಗಷ್ಟೇ ಅರ್ಥವಾಗುವ ಹಾಗೆ ಕೋಡ್ ಲಾಂಗ್ವೇಜಿನಲ್ಲಿ ಬರೆದಿಟ್ಟ ಕೆಲವು ಚೀಟಿಗಳು, ಕೆಲವು ಗ್ರೀಟಿಂಗ್ ಕಾರ್ಡುಗಳು ಹೀಗೆ ಇನ್ನೂ ಏನೇನೋ ಇರುತ್ತಿದ್ದವು. ಬರುಬರುತ್ತಾ ಸಣ್ಣ ಸಣ್ಣ ಸಂದೇಶಗಳನ್ನು ಹೊತ್ತ ಚೀಟಿಗಳು ಅದರಲ್ಲಿ ಸಿಗತೊಡಗಿದವು. ಅವೆಲ್ಲಾ ಅವರಂದುಕೊಂಡಂತೆ ನಮ್ಮ ನಾಲ್ಕೂ ಜನ ಹುಡುಗರನ್ನು ಬೇಕಂತಲೇ ಕೀಟಲೆ ಮಾಡಲೆಂದು ಬರೆದಿರುತ್ತಿದ್ದವು. ಅದರಲ್ಲಿ ನನ್ನ ಸ್ನೇಹಿತ ರಾಜೀವನನ್ನು ಕುರಿತು ಹೀಗೆ ಬರೆಯಲಾಗಿತ್ತು. “Rajeev looks what he is not”. ನನ್ನನ್ನು ಕುರಿತು “Uday is good but appears to be a flirt”, ಮಧು ಎನ್ನುವ ಇನ್ನೊಬ್ಬ ಸ್ನೇಹಿತನನ್ನು ಕುರಿತು ‘ಬಾಲವಿಲ್ಲದ ಕೋತಿ’ ಎಂದು ಕರೆದರೆ ಶರತ್ನ ನ್ನು ಕುರಿತು ‘ಹುಡುಗಿಯರ ಹೃದಯವನ್ನು ಹೇಗೆ ಕದಿಯಬೇಕೆಂದು ಗೊತ್ತಿಲ್ಲದವ ಅವರ ವ್ಯಾನಿಟಿ ಬ್ಯಾಗಿನಲ್ಲಿರುವ ಬಿಸ್ಕಿಟುಗಳನ್ನು ಕದ್ದು ತಿನ್ನುವ ಚೆಲುವ’ ಎಂದು ಕರೆದಿದ್ದರು. ಇವನ್ನೆಲ್ಲ ಓದಿದ ನಮಗೆ ಕಿರಿಕಿರಿಯ ಜೊತೆಗೆ ತಮಾಷೆಯೆನಿಸಿದರೂ ಮುಂದೆ ಇಂಥ ವಿಷಯಗಳೇ ನಮ್ಮ ಮತ್ತು ಹುಡುಗಿಯರ ಗಟ್ಟಿ ಸ್ನೇಹಕ್ಕೆ ಕಾರಣವಾಯಿತು. ಹೀಗಾಗಿ ಹುಡುಗಿಯರ ಸ್ನೇಹಕ್ಕೆ ಕಾರಣವಾದ ಈ ವ್ಯಾನಿಟಿ ಬ್ಯಾಗಿಗೆ ನಾನೊಂದು ಥ್ಯಾಂಕ್ಸ್ ಹೇಳಲೇಬೇಕು.

ನನ್ನ ಭಾವಮೈದುನನಿಗೆ ಒಂದು ಕೆಟ್ಟ ಚಾಳಿಯಿತ್ತು. ಯಾವಾಗಲೂ ಅವರ ತಂಗಿಯರ ವ್ಯಾನಿಟಿ ಬ್ಯಾಗನ್ನು ನೋಡುವದು. ಆ ಸಲಿಗೆಯನ್ನು ಅವರೇ ತೆಗೆದುಕೊಂಡಿದ್ದರೋ ಅಥವಾ ಅವರ ತಂಗಿಯರೇ ಕೊಟ್ಟಿದ್ದರೋ ಗೊತ್ತಿಲ್ಲ. ಆಗಾಗ ಅವರ ಬ್ಯಾಗನ್ನು ನೋಡಿ ಇಡುವದು. ಅಷ್ಟಕ್ಕೆ ಸುಮ್ಮನಿರದೆ “ಓಹೋ, ಇದೇನಿದು?” ಎಂದು ಮಧ್ಯ ಮಧ್ಯ ಯಾವದಾದರೊಂದು ವಸ್ತುವನ್ನು ಹೊರತೆಗೆದು ಕೇಳುತ್ತಿದ್ದರು. ಒಂದು ಸಾರಿ ಹೀಗೆ ಅವರ ತಂಗಿಯ ಬ್ಯಾಗನ್ನು ಚೆಕ್ ಮಾಡಿ ಯಾವುದೋ ಒಂದು ವಸ್ತುವನ್ನು ಹೊರತೆಗೆದು “ಓಹೋ, ಇದೇನು ಬನಿಯನ್ ಇದ್ದಂಗಿದೆ. ಇದ್ಯಾರಿಗೆ?” ಎಂದು ಕೇಳುತ್ತಾ ಅದನ್ನು ಸಂಪೂರ್ಣವಾಗಿ ಹೊರಗೆಳೆದಿದ್ದರು. ಆದರದು ಬನಿಯನ್ ಆಗಿರದೆ ಬ್ರಾ ಎಂದು ಗೊತ್ತಾಗಿ ಅಲ್ಲಿರವರೆಲ್ಲರೂ ನಕ್ಕಿದ್ದೇ ನಕ್ಕಿದ್ದು. ಆದರೆ ನಮ್ಮ ಭಾವ ಮೈದುನ ನಾಚಿ ನೀರಾಗಿದ್ದು ನಾವಿನ್ನೂ ಮರೆತಿಲ್ಲ.

ವಸುಧೇಂದ್ರವರ ಕಥೆಯೊಂದರಲ್ಲಿ ಒಂದು ಪ್ರಸಂಗ ಬರುತ್ತದೆ. ಆ ಕಥೆಯಲ್ಲಿ ಕಥಾನಾಯಕಿ ತನ್ನ ವ್ಯಾನಿಟಿ ಬ್ಯಾಗಿನ ಬಗ್ಗೆ ಎಷ್ಟು ಜಾಗೂರಕಳಾಗಿರುತ್ತಾಳೆಂಬುದನ್ನು ನೀವೇ ಗಮನಿಸಿ. “ಮಂಜಿ ಮನೆಗೆ ಬಂದಾಗ ರಾತ್ರಿ ಒಂಬತ್ತೂವರೆಯಾಗಿತ್ತು. ಪಡಸಾಲೆಯಲ್ಲಿ ಕುಳಿತಿದ್ದ ಅವರಮ್ಮನ ಕಡೆ ನೋಡದೆ, ಒಂದೂ ಮಾತನಾಡದೆ ಸೀದಾ ತನ್ನ ಕೋಣೆಗೆ ಹೋಗಿ, ಹಾಸಿಗೆ ಮೇಲೆ ತನ್ನ ವ್ಯಾನಿಟಿ ಬ್ಯಾಗನ್ನು ಒಗೆದು, ಪಡಸಾಲೆಗೆ ಬಂದಳು. ಕೃಷ್ಣವೇಣಮ್ಮನಿಗೆ ಇನ್ನು ತಡೆದುಕೊಳ್ಳಲಾಗಲಿಲ್ಲ. “ಊರೆಲ್ಲಾ ಮೆರೆದಿದ್ದು ಆಯ್ತೇನೆ?” ಅಂತ ಕೆಣಕಿದರು. ಮಂಜಿಗೆ ರೇಗಿ ಹೋಯ್ತು. “ಅಲ್ಲಿ ನನ್ನ ಮಿಂಡ ಕಾಯ್ಕೊಂಡು ಕೂತಿದ್ದ. ಇಷ್ಟೊತ್ತು ಚಕ್ಕಂದ ಹೊಡೆದು ಬಂದೆ” ಅಂತ ಛಟೀರೆಂದು ಉತ್ತರಿಸಿ ಬಚ್ಚಲು ಮನೆಗೆ ಕಾಲು ತೊಳೆಯಲು ಹೋದಳು. ಬಚ್ಚಲು ಬಾಗಿಲು ಹಾಕಿ, ಚಿಲಕ ಹಾಕಿಕೊಂಡು, ತಂಬಿಗೆಯಲ್ಲಿ ನೀರಿ ತ್ಬಿಸಿಕೊಂಡರೂ ಅಮ್ಮನಿಂದ ಯಾವುದೇ ಮಾತು ಕೇಳಿ ಬರಲಿಲ್ಲ. ತಕ್ಷಣ ಅನುಮಾನವಾಯ್ತು. ಬಾಗಿಲು ತೆಗೆದು ಹೊರಗೋಡಿ ಬಂದಳು. ಅವಳ ಅನುಮಾನ ನಿಜವಾಯ್ತು. ಕೃಷ್ಣವೇಣಮ್ಮ ಕೋಣೆಗೆ ನುಗ್ಗಿ ಅವಳ ವ್ಯಾನಿಟಿ ಬ್ಯಾಗಿಗೆ ಹಾಕಿದ್ದರು. ಹುಲಿಯಂತೆ ಅವರಮ್ಮನ ಮೇಲೆ ಎಗರಿ ಬ್ಯಾಗನ್ನು ಕಸಿದುಕೊಂಡಳು. ಅವರಮ್ಮ ಬಿಡಲಿಲ್ಲ. ತಾನೂ ಕೈ ಹಾಕಿ ಬ್ಯಾಗನ್ನು ಜಗ್ಗಲಾರಂಭಿಸಿದಳು. ಇಬ್ಬರ ಜಗ್ಗಾಟದಲ್ಲಿ ಬ್ಯಾಗಿನ ಹೆಗಲದಾರಿ ಕಿತ್ತು ಹೋಗಿ, ಕೃಷ್ಣವೇಣಮ್ಮ ಹಾಸಿಗೆಯಲ್ಲಿ ದೊಪ್ಪನೆ ಕುಸಿದು ಬಿದ್ದರು. ಅಸಹಾಯಕತೆಯಿಂದ ಮಗಳೆಡೆಗೆ ನೋಡಲಾರಂಭಿಸಿದರು. ಮಂಜಿ ಬ್ಯಾಗನ್ನು ತೆಗೆದು, ಅದರಲ್ಲಿನ ಇನ್ಸುಲಿನ್ ಸೂಜಿಗಳನ್ನು ಹೊರತೆಗೆದು, ಅವರಮ್ಮನ ಕಡೆ ಎಸೆದು “ಚುಚ್ಚಿಗೊಂಡು ಸಾಯಿ” ಎಂದು ಹೇಳಿ, ಬ್ಯಾಗನ್ನು ಅಲಮಾರದಲ್ಲಿಟ್ಟು ಬೀಗ ಜಡಿದು, ಬಚ್ಚಲು ಮನೆಗೆ ಹೋದಳು.” ಮಂಜಿಯ ತಾಯಿ ತಾನೊಂದು ಹೆಣ್ಣಾಗಿದ್ದರೂ ಇನ್ನೊಂದು ಹೆಣ್ಣಾದ ತನ್ನ ಮಗಳ ಬ್ಯಾಗಲ್ಲಿ ಇಣುಕಿನೋಡಲಾಗಲಿಲ್ಲ. ಅದಕ್ಕೆ ಮಂಜಿ ಅವಕಾಶ ಮಾಡಿಕೊಡಲಿಲ್ಲ. ಏಕೆಂದರೆ ಅದರಲ್ಲಿ ಅವಳು ತನಗೆ ಮಾತ್ರ ಬೇಕಾಗುವ ಕೆಲವು ರಹಸ್ಯ ವಸ್ತುಗಳನ್ನು ಇಟ್ತಿದ್ದಳು. ಮೇಲಾಗಿ ಅದು ಅವಳ ಸ್ವಾತಂತ್ರ್ಯಕ್ಕೆ ಭಂಗವಾದಂತೆ ಎಂದು ಭಾವಿಸಿದ್ದಳು. ಅಂದ ಮೇಲೆ ಗಂಡಸರೇನಾದರು ಕೈ ಹಾಕಿದರೆ ಹೇಗಿರಬೇಡ?

ಒಂದು ಸಾರಿ ನನ್ನ ಅತ್ತಿಗೆ ಮನೆಗೆ ಬೇಕಾಗುವ ದಿನಸಿ ಸಾಮಾನುಗಳನ್ನು ತರಲು ಲಿಸ್ಟ್ ಮಾಡಲು ಹೇಳಿದರು. ಸರಿ ಎಂದು ಪೆನ್ನಿಗಾಗಿ ಹುಡಕಾಡತೊಡಗಿದೆ. ಎಲ್ಲೂ ಸಿಗಲಿಲ್ಲ. ಕೊನೆಗೆ ನನ್ನ ಅತ್ತಿಗೆ ಯಾವಾಗಲೂ ಒಂದು ಪೆನ್ನನ್ನು ತಮ್ಮ ವ್ಯಾನಿಟಿ ಬ್ಯಾಗಿನಲ್ಲಿಟ್ಟಿರುತ್ತಿದ್ದರು. ಅದು ತಕ್ಷಣ ನೆನಪಾಗಿ ಅವರ ವ್ಯಾನಿಟಿ ಬ್ಯಾಗನ್ನು ತೆಗೆದು ಹುಡುಕಾಡತೊಡಗಿದೆ. ಮೊದಲು ಮುಂದಿನ ಜಿಪ್ಪಿನಲ್ಲಿ ಹುಡುಕಿದೆ. ಅಲ್ಲಿ ಸಿಗದೇ ಹೋದಾಗ ಇನ್ನೊಂದು ಕಂಪಾರ್ಟ್ ಮೆಂಟಿನಲ್ಲಿ ಇದ್ದಿರಬಹುದೇನೋ ಎಂದುಕೊಂಡು ಅಲ್ಲಿ ಕೈ ಹಾಕಿ ಹುಡಕತೊಡಗಿದೆ. ಪೆನ್ನು ಸಿಗಲಿಲ್ಲ ಆದರೆ ರಟ್ಟಿನಂಥ ಪ್ಯಾಡ್ ಸಿಕ್ಕಿತು. ನಾನು ಕುತೂಹಲ ತಡೆಯಲಾರದೆ ಹೊರಗೆ ತೆಗೆದು ಅದೇನೆಂದು ಪರಿಶೀಲಿಸತೊಡಗಿದೆ. ಏನೂ ಗೊತ್ತಾಗಲಿಲ್ಲ. ಮತ್ತೆ ಕುತೂಹಲ ತಡೆಯಲಾರದೆ ನಮ್ಮ ಅತ್ತಿಗೆಯನ್ನು ಕೇಳೀಯೂ ಬಿಟ್ಟೆ. ಅದಕ್ಕವರು ಸ್ವಲ್ಪ ಹುಸಿಮುನಿಸಿನಿಂದ “ಹಾಗೆಲ್ಲ ಹೆಂಗಸರ ವ್ಯಾನಿಟಿ ಬ್ಯಾಗನ್ನು ಅವರ ಅನುಮತಿಯಿಲ್ಲದೆ ಮುಟ್ಟಬಾರದು. ಅದರಲ್ಲಿ ಏನೇನೋ ಇರುತ್ತವೆ. ನಿನಗೆ ಗೊತ್ತಿಲ್ಲ ಅಂದರೆ ವ್ಯಾನಿಟಿ ಬ್ಯಾಗಿನ ಮೇಲೆ ವೈದೇಹಿಯವರು ಬರೆದ ಪದ್ಯವೊಂದನ್ನು ಓದಿ ತಿಳ್ಕೊ” ಎಂದು ಹೇಳಿದಾಗ ಪೆಚ್ಚಾಗಿ ನಿಂತಿದ್ದೆ. ಅಂದಿನಿಂದ ಅವರ ವ್ಯಾನಿಟಿ ಬ್ಯಾಗನ್ನು ಮುಟ್ಟುತ್ತಿರಲಿಲ್ಲ. ಆದರೆ ಬೇರೆಯವರ ವ್ಯಾನಿಟಿ ಬ್ಯಾಗನ್ನು ಅವಾಗವಾಗ ನೋಡುತ್ತಿದ್ದೆ. ಏಕೆಂದರೆ ವೈದೇಹಿಯವರ ಕವನವನ್ನು ಓದಲು ನನಗಾಗ ಎಲ್ಲೂ ಸಿಕ್ಕಿರಲಿಲ್ಲ. ಸಿಕ್ಕಿದ್ದರೆ ಅವತ್ತಿನಿಂದಲೇ ಯಾರ ವ್ಯಾನಿಟಿ ಬ್ಯಾಗನ್ನು ಮುಟ್ತುತ್ತಿರಲಿಲ್ಲ. ಮುಂದೊಂದು ದಿನ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ಲಿನ ಲೈಬ್ರೇರಿಯೊಂದರಲ್ಲಿ ಈ ಕವನ ಓದಲು ಸಿಕ್ಕಿತು. ಕವನ ಓದಿದ ಮೇಲೆ ಅವತ್ತೇ ಇನ್ನುಮುಂದೆ ಯಾರ ವ್ಯಾನಿಟಿ ಬ್ಯಾಗನ್ನು ಮುಟ್ಟಬಾರದೆಂದು ನಿರ್ಧರಿಸಿದೆ. ಕವನ ಆರಂಭವಾಗುವದೇ

ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು
ಎಂದಿಗೂ ಉಚಿತವಲ್ಲ ಪುರುಷರೇ

ಎಂದು. ಮುಂದಿನದು ಎಲ್ಲರಿಗೂ ಅರ್ಥವಾಗುವಷ್ಟು ಸರಳವಾಗಿದೆ. ಓದಿದ ಮೇಲೆ ನಾನು ಸುಸ್ತೋ ಸುಸ್ತು! ಆ ಕವನವನ್ನು ಸಂಪೂರ್ಣವಾಗಿ ಓದಿದ ಮೇಲೆ ನಾಚಿಕೆಯಾಗಿ ಅಂದಿನಿಂದ ಹೆಂಗಸರ ವ್ಯಾನಿಟಿ ಬ್ಯಾಗಿನೊಳಗನ್ನು ನೋಡುವದುಬಿಟ್ಟೆ. ತಡವಾದರೂ ಈ ವಿಷಯದಲ್ಲಿ ನನ್ನ ಕಣ್ಣು ತೆರೆಸಿದ ವೈದೇಹಿಯವರಿಗೆ ಒಂದು ದೊಡ್ದ ಥ್ಯಾಂಕ್ಸ್ ಹೇಳಿದ್ದೇನೆ. ನಿಮ್ಮ ಅವಗಾಹನೆಗಾಗಿ ಆ ಪದ್ಯವನ್ನು ಕೆಳಗೆ ಕೊಡುತ್ತಿದ್ದೇನೆ. ಓದಿ ಆನಂದಿಸಿ. ಹಾಗೆಯೇ ನೀವೇನಾದರೂ ಹೆಂಗಸರ ವ್ಯಾನಿಟಿ ಬ್ಯಾಗಿನಲ್ಲಿ ಕೈ ಹಾಕಿ ನೋಡುತ್ತಿದ್ದರೆ ಇನ್ನುಮುಂದಾದರೂ ದಯವಿಟ್ಟು ನಿಲ್ಲಿಸಿ. ಒಂದು ವೇಳೆ ನೋಡಿದರೂ ಅದರಲ್ಲಿ ಸಿಗುವ ವಸ್ತುಗಳ ಬಗ್ಗೆ ತಲೆಕೆಡಿಸಿಕೊಳ್ಳಲೇಬೇಡಿ. ನಿಮಗೂ ಅದಕು ಸಂಬಂಧವಿಲ್ಲದಂತೆ ಇದ್ದು ಬಿಡಿ.

ನೋಡಬಾರದು ಚೀಲದೊಳಗನು

ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು
ಎಂದಿಗೂ ಉಚಿತವಲ್ಲ ಪುರುಷರೇ
ವ್ಯಾನಿಟಿ ಹೆಸರಲ್ಲಿ ಏನೆಲ್ಲ ಇರಬಹುದು
ಬಯಲು ಮಾಡುವೇ?
ಒಂದು ಕನ್ನಡಿ ಹಣೆಗೆ ಕಾಡಿಗೆ ಕರಡಿಗೆ
ಪೆನ್ನು ಪೌಡರು ಕ್ಲಿಪ್ಪು ಸೆಂಟು
ಬಿಳಿ ಹಾಳೆ ಮತ್ತು ನೂಲುಂಡೆ ಇರಬಹುದು
ಗುಂಡಿ, ಸೂಜಿ ಮತ್ತು ಅಡಿಕೆ ಹೋಳೂ.
ಇರಬಹುದು ಹುಣಸೆ ಬೀಜಗಳೂ!
ವ್ಯಾನಿಟಿ ಬ್ಯಾಗಿನಲಿ ಬಟಾಣಿಯೇ ಇರಬೇಕೆಂದು
ಉಂಟೇ ಯಾರ ರೂಲು?
ಇದ್ದೀತು ಶುಂಠಿ ಪೆಪ್ಪರಮಿಂಟೂ, ಕಂಫಿಟ್ಟೂ.
ಒಣಗಿ ರೂಹುಗಳಾದ ಎಲೆ- ಹೂಗಳಿರಬಹುದು
ಇರಬಹುದು ಯಾರದೋ ಮನೆ ದಾರಿ ನಕ್ಷೆ
ಮರದ ಮುಚ್ಚಿಗೆಯಡಿಯ ಕೆಂಪು ನೆಲದ ತಂಪು
ತೇದಷ್ಟೂ ಸವೆಯದಾ ನೆನಪು
ಟಿಕ್ಕಿ ಎಲೆ ಪರಿಮಳ
ಮರಿ ಇಡುವ ನವಿಲುಗರಿ
ಕಾಪಿಟ್ಟಿರಬಹುದು ಪುಟ್ಟ ದಿನಗಳನ್ನು
ಇರಬಹುದು ಎಲ್ಲಿನದೋ ಮರುಳು- ಮಣ್ಣು.
ಅರೆ ಬರೆದಿಟ್ಟ ಕವನ ತೆವಳುತ್ತಲಿರಬಹುದು
ಮುಗಿಯಲಾರದ ಕತ್ತಲಲ್ಲಿ
ಒಂದು ಬಿಸುಸುಯ್ಯಲು ಕರವಸ್ತ್ರದಲಿ ಅಡಗಿ
ಗುಸುಗುಟ್ಟುತಿರಬಹುದು ಗಂಟಲಲ್ಲೇ
ವಿಳಾಸ ಹೊತ್ತಿರುವ ಖಾಲಿ ಲಕೋಟೆಯಲಿ
ಕೆಂಪು ಸೂರ್ಯನ ಚಿತ್ರ ಮಾತ್ರವಿರಬಹುದು
ಬಂದ ಪತ್ರದ ಉಸಿರು ಒಗಟಾಗಿ ಇರಬಹುದು
ಚಂದದಕ್ಷರದ ಬಂಧದಲ್ಲಿ
ಚಂದದಕ್ಷರ ಸುತ್ತ ನತ್ತು ಮುತ್ತಿನ ಚಿತ್ತು
ಉತ್ಕಂಠ ರಾಗದ ಮುಟ್ಟು ಇರಬಹುದು
ಕರಿಮೀಸೆಯಡಿಯಲ್ಲಿ ಮಿರಿಮಿಂಚು ನಗೆಯಲ್ಲಿ
ಹೆಸರಿಲ್ಲದ ಫೋಟೋ ಕೂಡ ಇರಬಹುದು!
ಬಾಲ್ಯಯೌವನ ವೃದ್ಧಾಪ್ಯ ನೆರಳುಗಳು
ಸೇರಿಕೊಂಡಿರಬಹುದು ಆ ಕೋಶದಲ್ಲಿ
ಗೃಹಸ್ಥ ವೇಶ್ಯಾ ಅಭಿಸಾರ ವಾಸನೆಗಳು
ಧರ್ಮ ಲಕ್ಷಣ ಅವಸ್ಥಾಂತರ ವೇಷದಲ್ಲಿ
ಒಂದಕೊಂದಕೆ ಅರ್ಥಾರ್ಥವಿಲ್ಲದೆಯೂ
ಇಲ್ಲವೇ ಹಲವು ಜೊತೆಗಳು?
ಹಾಗೆಯೇ ಈ ಚೀಲದೊಳಗಿನ ಲೋಕಗಳು!
ಚೀಲದೊಳಗಿನ ಲೋಕ ಮತ್ತು ಮನಸಿನ ಲೋಕ
ಒಂದೇ ಎಂದೀಗ ತೂಗಿ ನೋಡುವಿರೇನು?
ಬೆಪ್ಪು ಕಾಪುರುಷರೇ
ವ್ಯರ್ಥ ಕೈ ನೋವೇಕೆ?
ತೂಗಲಾರಿರಿ ತಪ್ಪು ಸಮೀಕರಣವನು.
ಮನಸಿನೊಳಗಡೆ ಎಂದೂ
ಇಣುಕಲಾರಿರಿ ನೀವು, ಹುಡುಕಿ
ತೆಗೆಯಲಾರಿರಿ ಏನನೂ
ಇಣುಕಲಾದರೂ ಹಾಗೆ ಮಾಡಲಾಗದು ನೀವು
ಚೀಲದೊಳಗಿನ ತಿರುಳನು
ಹುಡುಕಿ ತೆಗೆಯಲಾದರೂ ಹಾಗೆ
ಮಾಡಲಾಗದು ನೀವು
ನೋಡಬಾರದು ಚೀಲದೊಳಗನು.

- ವೈದೇಹಿ

ಕವನ ಸಂಕಲನ - ಅಕ್ಷರ ಹೊಸ ಕಾವ್ಯ

ಕೃಪೆ: www.kannadalyrics.com

-ಉದಯ್ ಇಟಗಿ

(ಸಾಧ್ಯವಾದರೆ ಮುಂದಿನ ವಾರ ಒಂದು ವಾರದ ಮಟ್ಟಿಗೆ ಇಂಡಿಯಾಗೆ ಬರುವವನಿದ್ದೇನೆ. ಅದಿನ್ನೂ ಖಾತ್ರಿಯಾಗಿಲ್ಲ. ಬಂದಾಗ ನಿಮಗೆ ತೊಂದರೆಯಾಗದಿದ್ದರೆ ಫೋನ್ ಮಾಡುವೆ. ನಿಮ್ಮ ಹಳೆಯ ನಂಬರ್ ಏನಾದರು ಚೇಂಜ್ ಆಗಿದ್ದರೆ ನನ್ನ Emailಗೆ ನಿಮ್ಮ ಫೋನ್ ನಂಬರ್ ಕಳಿಸಿ. ಈ ಕಾರಣಕ್ಕಾಗಿ ನಿಮ್ಮ ಬ್ಲಾಗುಗಳಿಗೆ ಭೇಟಿಕೊಡಲಾಗುವದಿಲ್ಲ. ದಯವಿಟ್ಟು ಕ್ಷಮಿಸಿ)

Saturday, January 30, 2010

ದೂರದ ಬರ್ಲಿನ್‍ನಿಂದ ಮಿತ್ರ ಮಹೇಂದ್ರ ಕಳಿಸಿದ ಚಿತ್ರ ಸಂದೇಶಗಳು

ಆತ್ಮೀಯರೆ,
ದೂರದ ಬರ್ಲಿನ್‍ನಿಂದ ನನ್ನ ಈ ಮೇಲ್ ಮಿತ್ರ ಮಹೇಂದ್ರವರು ಒಂದಷ್ಟು ಸುಂದರ ಚಿತ್ರ ಸಂದೇಶಗಳನ್ನು ಕಳಿಸಿದ್ದಾರೆ. ಬದುಕಿನ ವಿವಿಧ ಮುಖಗಳ ಬಗ್ಗೆ ಪ್ರಖ್ಯಾತರು ಬರೆದ ಸಂದೇಶಗಳಿವು. ಇವು ಖಂಡಿತ ನಿಮಗೆ ಆಪ್ತವೆನಿಸುತ್ತವೆ ಎಂದುಕೊಂಡು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಅಂದಹಾಗೆ ಮಿತ್ರ ಮಹೇಂದ್ರವರು ನನಗೆ ಈಗ್ಗೆ ಮೂರ್ನಾಲ್ಕು ತಿಂಗಳಿನಿಂದ ಈ ಮೇಲ್ ಮಿತ್ರರಾಗಿದ್ದಾರೆ. ಅವರು ನನ್ನ ಬ್ಲಾಗಿನಲ್ಲಿರುವ ನನ್ನ ಪ್ರೊಫೈಲ್ ನೋಡಿ ತುಂಬಾ ಚೆಂದದ ಕನ್ನಡ ಎಂದು ಪ್ರಶಂಸಿಸಿ ಇಷ್ಟುದ್ದುದ ಪತ್ರ ಬರೆದಿದ್ದರು. ಅಂದಿನಿಂದ ತಮಗೆ ಇಷ್ಟವಾದದ್ದನ್ನೆಲ್ಲಾ ನನಗೆ ಈ ಮೇಲ್ ಮೂಲಕ ಕಳಿಸಿಕೊಡುತ್ತಾರೆ. ಇವರು ಇಪ್ಪತ್ತೈದು ವರ್ಷಗಳಿಂದ ದೂರದ ಜರ್ಮನಿಯಲ್ಲಿದ್ದರೂ ಕನ್ನಡದ ಮೇಲೆ ವಿಶೇಷ ಅಕ್ಕರೆ ಹಾಗೂ ಅಭಿಮಾನ ಬೆಳೆಸಿಕೊಂಡಿದ್ದಾರೆ. ಇಂಥ ಸುಂದರ ಚಿತ್ರ ಸಂದೇಶಗಳನ್ನು ಕಳಿಸಿದ ಮಹೇಂದ್ರವರಿಗೆ ವಿಶೇಷವಾದ ಕೃತಜ್ಞತೆಗಳನ್ನು ಹೇಳುತ್ತಾ ಅವನ್ನು ಈ ಕೆಳಗೆ ಕೊಡುತ್ತಿದ್ದೇನೆ. ನೋಡಿ ಆನಂದಿಸಿ.














Thursday, January 28, 2010

ನೆನಪಾಗಿ ಹಿಂಡದಿರು ಹುಳಿಮಾವಿನ ಮರವೇ...........


೧೯೯೮ ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಲಂಕೇಶ್ ಅವರನ್ನು ಕಂಡು ಒಮ್ಮೆ ಕೈ ಕುಲುಕಿದ್ದು ಬಿಟ್ಟರೆ ಮತ್ತೆ ನಾನು ಅವರನ್ನು ಯಾವತ್ತೂ ಹತ್ತಿರದಿಂದ ನೋಡುವದಾಗಲಿ, ಅಥವಾ ಅವರ ಒಡನಾಟಕ್ಕೆ, ಸಂಪರ್ಕಕ್ಕೆ ಬರುವದಾಗಲಿ ಎಂದೂ ಮಾಡಿದವನಲ್ಲ. ಆದರೂ ಅವರ ಬರಹಗಳಿಂದಲೇ ಅವರು ಎಂಥ ವ್ಯಕ್ತಿಯಾಗಿದ್ದರು ಎಂಬುದನ್ನು ಒಂದು ಅಂದಾಜು ಹಾಕಿದವನು ನಾನು.

ನನಗೆ ‘ಲಂಕೇಶ್ ಪತ್ರಿಕೆ’ ಪರಿಚಯವಾಗಿದ್ದೇ ನಾನು ಪಿ.ಯು.ಸಿ ಯಲ್ಲಿರುವಾಗ. ಅಲ್ಲಿಯವರೆಗೆ ಹೀಗೊಂದು ಪತ್ರಿಕೆ ಇದೆ ಅಂತ ಕೂಡ ಗೊತ್ತಿರಲಿಲ್ಲ ನನಗೆ. ಒಮ್ಮೆ ನನ್ನ ಅಣ್ಣನೊಬ್ಬ ‘ಲಂಕೇಶ್ ಪತ್ರಿಕೆ’ ಓದುವದನ್ನು ನೋಡಿ ನಾನು ಸಹ ಪ್ರೇರಿತನಾಗಿ ಒಮ್ಮೆ ಸುಮ್ಮನೆ ತಿರುವಿ ಹಾಕಿದ್ದೆ. ಅದೇಕೋ ನನಗೆ ಅಷ್ಟಾಗಿ ಹಿಡಿಸಲಿಲ್ಲ. ಬಹುಶಃ ನನಗಾಗ ರಾಜಕೀಯ ಸುದ್ದಿಯೆಂದರೆ ಅಷ್ಟಕ್ಕಷ್ಟೆ ಇದ್ದುದರಿಂದ ಹಾಗೂ ಆ ಪತ್ರಿಕೆಯ ಬಹಳಷ್ಟು ಪುಟಗಳು ಬರಿ ರಾಜಕೀಯ ವಿಷಯವನ್ನು ಒಳಗೊಂಡಿದ್ದರಿಂದ ನನಗೆ ಅಷ್ಟಾಗಿ ರುಚಿಸಲಿಲ್ಲ.

ಒಂದು ಸಾರಿ ಬೇಸಿಗೆ ರಜೆಗೆಂದು ನನ್ನ ದೊಡ್ಡಪ್ಪನ ಊರು ಅಳವಂಡಿಗೆ ಹೋಗಿದ್ದೆ. ಅಲ್ಲಿ ನಮ್ಮ ದೊಡ್ಡಪ್ಪ ವಾರ ವಾರವೂ ನಾಲ್ಕಾರು ಪತ್ರಿಕೆಗಳ ಜೊತೆಗೆ ‘ಲಂಕೇಶ್ ಪತ್ರಿಕೆ’ ಯನ್ನು ಸಹ ತರಿಸುತ್ತಿದ್ದರು. ನಮ್ಮ ಮನೆಯಲ್ಲಿ ಎಲ್ಲರೂ ಲಂಕೇಶ್ ಪತ್ರಿಕೆ ಬರುವದನ್ನೇ ಕಾಯುತ್ತಿದ್ದರು. ಕೇವಲ ನಮ್ಮ ಮನೆಯಲ್ಲಿ ಮಾತ್ರವಲ್ಲ ಆ ಸಣ್ಣ ಹಳ್ಳಿಯಲ್ಲಿ ಎಲ್ಲರೂ ಹೆಚ್ಚು ಕಮ್ಮಿ ಲಂಕೇಶ್ ಪತ್ರಿಕೆಯನ್ನು ಓದುತ್ತಿದ್ದರು. ಅಂಥಾದ್ದೇನಿದೆ ಅದರಲ್ಲಿ ಎಂದು ನಾನೂ ಸಣ್ಣಗೆ ಲಂಕೇಶ್ರಮನ್ನು ಓದಲು ಆರಂಭಿಸಿದೆ. ಊಹೂಂ, ಆಗಲೂ ನನಗೆ ಲಂಕೇಶ್ ಅಷ್ಟಾಗಿ ತಟ್ಟಲೇ ಇಲ್ಲ. ಬಹುಶಃ ಅವರನ್ನು ಅರ್ಥಮಾಡಿಕೊಳ್ಳುವಷ್ಟು ನನ್ನ ಬೌದ್ಧಿಕಮಟ್ಟ ಇನ್ನೂ ಅಷ್ಟಾಗಿ ಬೆಳೆದಿರಲಿಲ್ಲವೆಂದು ಕಾಣುತ್ತದೆ. ಅಥವಾ ಕೇವಲ ಜಾಣ ಜಾಣೆಯರಿಗೆ ಮಾತ್ರ ಮೀಸಲಾಗಿದ್ದ ಆ ಪತ್ರಿಕೆಯನ್ನು ಓದಿ ಅರ್ಥಮಾಡಿಕೊಳ್ಳುವಷ್ಟು ನಾನಿನ್ನೂ ಜಾಣನಾಗಿರಲಿಲ್ಲ. ಇದೇ ವಿಷಯವನ್ನು ಲಂಕೇಶ್ ಪತ್ರಿಕೆಯನ್ನು ನನಗೆ ಪರಿಚಯಿಸಿದ ನಮ್ಮ ಅಣ್ಣನ ಹತ್ತಿರ ಹೇಳಿದಾಗ “ಯಾವುದೇ ಲೇಖಕನನ್ನು ಸರಿಯಾಗಿ ಓದದೆ, ಅರ್ಥಮಾಡಿಕೊಳ್ಳದೇ ಈ ನಿರ್ಧಾರಕ್ಕೆ ಬರುವದು ತಪ್ಪು” ಎಂದು ಹೇಳಿದ್ದ. ಏಕೆಂದರೆ ಅವನು ಅದಾಗಲೇ ತನ್ನ ಪಿ.ಯು ದಿನಗಳಿಂದಲೇ (ಬಹುಶಃ, ಆಗಷ್ಟೆ ಪತ್ರಿಕೆ ಆರಂಭವಾಗಿತ್ತೆಂದು ಕಾಣುತ್ತದೆ) ಲಂಕೇಶ್ ಅವರನ್ನು ಓದಲು ಆರಂಭಿಸಿ ಅವರ ಬರವಣಿಗೆಯ ಮೋಡಿಗೊಳಗಾಗಿ ಅವರ ಕಟ್ಟಾ ಅಭಿಮಾನಿಯಾಗಿದ್ದ. ಅವನು ಅದೆಂಥ ಅಭಿಮಾನಿಯಾಗಿದ್ದನೆಂದರೆ ಲಂಕೇಶ್ ಹೇಳಿದ್ದೇ ಸರಿ, ಅವರ ಪತ್ರಿಕೆಯಲ್ಲಿ ಬರೆಯುವವರೆಲ್ಲರೂ ಶ್ರೇಷ್ಟ ಲೇಖಕರು, ಲಂಕೇಶ್ ಹೇಳಿದ ಮೇಲೆ ಮುಗಿಯಿತು ಅದೇ ಸತ್ಯ ಎನ್ನುವ ಧೋರಣೆಯನ್ನು ತಳೆದುಬಿಟ್ಟಿದ್ದ. ಅವನೊಬ್ಬನೇ ಮಾತ್ರವಲ್ಲ ಆ ಕಾಲದಲ್ಲಿ ಬಹಳಷ್ಟು ಜನ ಲಂಕೇಶ್ರನ ಪ್ರಭಾವಕ್ಕೊಳಗಾಗಿ ಅವರ ಅಭಿಮಾನಿಯಾಗಿರುವದೇ ಒಂದು ಹೆಮ್ಮೆಯ ವಿಷಯವೆನ್ನುವಂತೆ ಪರಿಗಣಿಸುತ್ತಿದ್ದರು. ಈಗಲೂ ಅಷ್ಟೆ ‘ಲಂಕೇಶ್ ಪತ್ರಿಕೆ’ ಓದಿರೋರು ಉಳಿದವರಂತಲ್ಲ, ಉಳಿದವರಿಗಿಂತ ಸ್ವಲ್ಪ ಭಿನ್ನವಾದ ಜನ ಎನ್ನುವ ಅಭಿಪ್ರಾಯವಿದೆ. ಆ ಕಾರಣಕ್ಕೇನೇ ಈಗಲೂ ಅವರನ್ನು ಒಂದು ದೊಡ್ದ ಐಕಾನ್ ಎಂಬಂತೆ ಟ್ರೀಟ್ ಮಾಡುವವರಿದ್ದಾರೆ.

ನಾನು ಲಂಕೇಶ್ರೇನ್ನು ಓದಲೇಬೇಕೆಂದು ನಿರ್ಧರಿಸಿದ್ದು ನಮ್ಮ ದ್ವಿತಿಯ ಪಿ.ಯು.ಸಿ ಕನ್ನಡ ಪಠ್ಯಪುಸ್ತಕದಲ್ಲಿದ್ದ ಅವರ ಲೇಖನ ‘ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’ ಎನ್ನುವ ಲೇಖನ ಓದಿದ ಮೇಲೆಯೇ. ಆಹಾ, ಎಷ್ಟು ಚೆಂದದ ಗದ್ಯವದು! ಲಂಕೇಶ್ ಅವರು ಬುದ್ಧನನ್ನು ಒಬ್ಬ ದೇವಮಾನವನೆಂದು ವೈಭವಿಕರಿಸದೆ ಅವನೊಬ್ಬ ಸಾಮಾನ್ಯ ಮನುಷ್ಯನಾಗಿದ್ದುಕೊಂಡೇ ಸಾಮಾನ್ಯರೊಡನೆ ಬೆರೆತು ಆದರೆ ಅಸಾಮಾನ್ಯ ಕೆಲಸಗಳನ್ನು ಮಾಡುತ್ತಾ ಹೇಗೆ ಜನರ ಪ್ರಿತಿಯಲ್ಲಿ ಬಂಧಿತನಾಗುತ್ತಾನೆ ಎಂದು ಅತ್ಯಂತ ಶ್ರೇಷ್ಟವಾಗಿ ಆದರೆ ಸರಳವಾಗಿ ನೇರವಾಗಿ ಮನ ಮುಟ್ಟುವಂತೆ ವಿವರಿಸಿದ್ದರು. ಅದೇಕೋ ಆ ಲೇಖನ ನನ್ನನ್ನು ಗಾಢವಾಗಿ ತಟ್ಟಿತು. ಅಂದಿನಿಂದಲೇ ಲಂಕೇಶ್ ಅವರನ್ನು ಓದಲು ಆರಂಭಿಸಿದೆ, ಐ ಮೀನ್ ಲಂಕೇಶ್ ಪತ್ರಿಕೆ ಓದಲು ಆರಂಭಿಸಿದೆ.

ಮೊದಮೊದಲು ಬರಿ ಸಾಹಿತ್ಯಿಕ ಪುಟಗಳನ್ನು ಮಾತ್ರ ಓದುತ್ತಿದ್ದವನು ಬರು ಬರುತ್ತಾ ಅವರ ರಾಜಕೀಯ ವಿಶ್ಲೇಷಾತ್ಮಕ ಲೇಖನಗಳನ್ನು ಓದತೊಡಗಿದೆ. ಮೊದಮೊದಲಿಗೆ ಲಂಕೇಶರನ್ನು ಅರ್ಥಮಾಡಿಕೊಳ್ಳುವದು ಬಹಳ ಕಷ್ಟವಿತ್ತು. ತದನಂತರದಲ್ಲಿ ಲಂಕೇಶ್ ನಿಧಾನವಾಗಿ ನನ್ನೊಳಗೆ ಇಳಿಯತೊಡಗಿದರು. ನನ್ನ ಬುದ್ಧಿ ಭಾವಗಳನ್ನು ತಟ್ಟತೊಡಗಿದರು. ಲಂಕೇಶ್ ನನಗೆ ಎಷ್ಟು ಇಷ್ಟವಾದರೆಂದರೆ ಮುಂದೆ ನಾನು ಡಿಗ್ರಿಗೆ ಬರುವಷ್ಟರಲ್ಲಿಯೇ ನನಗೊಂದು ರೀತಿ ಲಂಕೇಶ್ ನಶೆ ಏರಿಬಿಟ್ಟಿತ್ತು. ಕಾಲೇಜಿನಲ್ಲಿ, ಮನೆಯಲ್ಲಿ ಸದಾ ಅವರ ಬಗ್ಗೆ ಚರ್ಚೆ ಮಾಡತೊಡಗಿದೆ. ಯಾರಾದರು ಲಂಕೇಶ್ ವಿರುದ್ಧ ಮಾತನಾಡಿದರೆ ಸಾಕು ಅವರ ಮೇಲೆ ಸರಕ್ಕೆಂದು ಹರಿಹಾಯ್ದುಬಿಡುತ್ತಿದ್ದೆ. ಅವರು ಬರೆದಿದ್ದೇ ಸತ್ಯ. ಅವರು ಆಡಿದ್ದೇ ನಿಜ ಎನ್ನುವಷ್ಟರಮಟ್ಟಿಗೆ ಅವರ ಕಟ್ಟಾ ಅಭಿಮಾನಿಯಾದೆ. ಆದರೆ ನಾನು ಡಿಗ್ರಿ ಕೊನೆ ವರ್ಷಕ್ಕೆ ಬರುವಷ್ಟರಲ್ಲಿಯೇ ಅವರ ನಶೆ ಸಣ್ಣಗೆ ಇಳಿಯತೊಡಗಿತ್ತು. ಅದಕ್ಕೆ ಕಾರಣ ಅವರ ಬರಹಗಳು ನೇರ ನಿಷ್ಟುರ ನೆಪದಲ್ಲಿ ತೇಜೋವಧೆಯಿಂದ ಕೂಡಿವೆ ಎನಿಸತೊಡಗಿತು ಹಾಗೂ ಯಾವುದೋ ವ್ಯಯಕ್ತಿಕ ದ್ವೇಷದ ನೆಲೆಗಟ್ಟಿನಲ್ಲಿ ಮೂಡುತ್ತಿವೆ ಎನಿಸಿತು.

ಲಂಕೇಶ್ ಪತ್ರಿಕೆ ಆ ಕಾಲದಲ್ಲಿ ಗುಣಾತ್ಮಕ ದೃಷ್ಟಿಯಿಂದ ಬಹಳ ಹೆಸರು ಮಾಡಿದ ಪತ್ರಿಕೆ. ಯಾವುದೇ ಜಾಹಿರಾತಿಲ್ಲದೆ ಓದುಗರನ್ನು ಬಹುಕಾಲದವರೆಗೆ ಹಿಡಿದಿಟ್ಟ ಪತ್ರಿಕೆಯದು. ಅವರ ಮೊನಚಾದ ಬರಹ, ಹರಿತವಾದ ಭಾಷೆ ಓದುಗರನ್ನು ನೇರವಾಗಿ ತಟ್ಟುತ್ತಿತ್ತು. ಅವರು ಬಳಸುವ ಭಾಷೆ ಜನಸಾಮಾನ್ಯರ ಭಾಷೆಯಾಗಿದ್ದು ಅದರಲ್ಲಿ ಸದಾ ಒಂದು ವ್ಯಂಗ್ಯ, ಲೇವಡಿ, ಟಿಕೆ, ಗೇಲಿಯಿರುತ್ತಿದ್ದವು. ‘ಅನಂತನಾಗ್ ಅವಾಂತರಗಳು’, ‘ದೇವೇಗೌಡರ ಧಮಕಿ’ ‘ಪಟೇಲ್ರಾ ಪಲ್ಲಂಗ ಪುರಾಣ’ ಹೀಗೆ ಆಕರ್ಷಕ ಹೆಡ್ಡಿಂಗ್ಗತಳಿಂದಲೂ ಹಾಗೂ ವ್ಯಕ್ತಿಗಳನ್ನು ತಮ್ಮದೇ ಭಾಷೆಯಿಂದ ಗೇಲಿ ಮಾಡುತ್ತಿದ್ದುದೂ ನನಗೆ ತುಂಬಾ ಹಿಡಿಸಿತು. ಉದಾಹರಣೆಗೆ ದೇವೇಗೌಡರನ್ನು Son of Soil ಎಂದೂ ಜಿ.ಎಚ್ ಪಟೆಲರನ್ನು Son of Oil ಎಂದೂ ವಾಟಾಳ್ ನಾಗಾರಾಜರನ್ನು ‘ಕನ್ನಡದ ಉಟ್ಟು ಓರಾಟಗಾರ’ ಎಂದೂ ವ್ಯಂಗ್ಯವಾಡುತ್ತಿದ್ದರು. ಹೀಗೆ ಬರೆಯುವದನ್ನೇ ಮುಂದೆ ಅವರು ಪತ್ರಿಕೋದ್ಯಮದ ಭಾಷೆಯನ್ನಾಗಿ ಬೆಳೆಸಿದರು.

ಲಂಕೇಶರು ಕಟಕುವದಕ್ಕೆ ಹೆಸರುವಾಸಿಯಾಗಿದ್ದರು. ನನಗಿನ್ನೂ ಚನ್ನಾಗಿ ನೆನಪಿದೆ-ಡಾ. ಎಂ. ಎಂ. ಕಲಬುರ್ಗಿಯವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಆಗಷ್ಟೆ ನೇಮಕವಾಗಿದ್ದರು. ಆಗ ಅವರನ್ನು ಪತ್ರಕರ್ತರು ಕನ್ನಡ ವಿಶ್ವವಿದ್ಯಾನಿಲಯದ ಕೆಲಸವನ್ನು ಹೇಗೆ ಮಾಡುವಿರಿ? ನಿಮ್ಮ ಯೋಜನೆಗಳೇನು? ಎಂದು ಕೇಳಿದ್ದರು. ಅದಕ್ಕವರು “ನಂದೇನಿದೆ? ಎಲ್ಲ ಆ ಹಂಪಿಯ ವಿರುಪಾಕ್ಷ ಏನೇನು ಮಾಡಿಸುತ್ತಾನೋ ಅದನ್ನೆಲ್ಲ ಮಾಡುವೆ” ಎಂದು ಧಾರ್ಮಿಕ ನೆಲೆಗಟ್ಟಿನಲ್ಲಿ ಉಡಾಫೆಯ ಉತ್ತರವನ್ನು ಕೊಟ್ಟಿದ್ದರು. ಅದಕ್ಕೆ ಲಂಕೇಶ್ “ಹಿಂದೆ ಹಂಪಿ ಹಾಳಾಗುವಾಗ ವಿರುಪಾಕ್ಷ ಸುಮ್ಮನೆ ನೋಡುತ್ತಾ ಕುಳಿತಿದ್ದ. ಈಗಲೂ ಕನ್ನಡ ಹಾಳಾಗುವಾಗ ವಿರುಪಾಕ್ಷ ನೋಡುತ್ತಲೇ ಕುಳಿತಿದ್ದಾನೆ. ಅವನ ಕೈಲಿ ಆಗುವದಿಲ್ಲ ಎಂಬ ಕಾರಣಕ್ಕೇನೇ ನಿಮ್ಮನ್ನು ಇಲ್ಲಿಗೆ ಕಳಿಸಿರುವದು. ನೋಡಿ ಕೆಲಸ ಮಾಡಿ.” ಎಂದು ಕಟುಕಿದ್ದರು. ಹೀಗೆ ಯಾರ ಮೇಲಾದರು ಅವರು ಬರೆಯಬಲ್ಲವರಾಗಿದ್ದರು ಹಾಗೂ ಬರೆದಿದ್ದನ್ನು ದಕ್ಕಿಸಿಕೊಳ್ಳುವ ಒಂದು ಸಾತ್ವಿಕ ಶಕ್ತಿ ಕೂಡ ಅವರಲ್ಲಿತ್ತು. ಹಾಗೆಯೇ ಡಿ. ಆರ್. ನಾಗರಾಜ್ ವಿಮರ್ಶೆಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು ಹಾಗೂ ಅವರು ಆಗಾಗ ಅತಿಥಿ ಉಪನ್ಯಾಸಕನಾಗಿ ವಿದೇಶಕ್ಕೆ ಹಾರುತ್ತಿದ್ದರು. ಇಂಥ ಸಂದರ್ಭದಲ್ಲಿ ಅವರ ಬಗ್ಗೆ ಬರೆಯುತ್ತಾ ಇವರ ತಲೆ ಭುಜದ ಮೇಲಿರಲಿ, ಕಾಲುಗಳು ಸ್ವಂತ ನೆಲದ ಮೇಲೆ ಗಟ್ಟಿಯೂರಿ ನಿಲ್ಲಲಿ ಎಂದು ವ್ಯಂಗ್ಯವಾಡಿದ್ದರು. ಆದರೆ ಮುಂದೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಹುದ್ದೆಗೆ ನಾಗರಾಜರವರ ಹೆಸರನ್ನು ಸೂಚಿಸಿದ್ದರು. ಇವರಿಂದ ವಾಟಾಳ್ ನಾಗರಾಜರಷ್ಟು ಟೀಕೆಗೊಳಗಾಗದ ಮತ್ತೊಬ್ಬ ರಾಜಕಾರಣಿ ಇಲ್ಲ ಅನಿಸುತ್ತೆ. ಆದರೂ ಒಮ್ಮೆ ಕರ್ನಾಟಕದ ಗಡಿನಾಡಿನ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಬೇಕು ಎಂದು ಸರಕಾರ ಯೋಚಿಸುತ್ತಿದ್ದಾಗ ಸರಕಾರಕ್ಕೆ ಲಂಕೇಶರೇ ಖುದ್ದಾಗಿ ವಾಟಾಳ್ ನಾಗರಾಜರ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಇದು ಲಂಕೇಶ್! ಅವರು ಬಾಹ್ಯವಾಗಿ ವ್ಯಕ್ತಿಗಳೊಂದಿಗೆ ಜಗಳವಾಡುತ್ತಲೇ ಆಂತರಿಕವಾಗಿ ಅವರ ಬಗ್ಗೆ ಒಂದು ಗೌರವ, ಪ್ರೀತಿಯನ್ನು ಇಟ್ಟುಕೊಂಡಿದ್ದರು.

ಲಂಕೇಶ್ ಪತ್ರಿಕೆ ಕೆಟ್ಟವರಿಗೆ, ಭ್ರಷ್ಟರಿಗೆ ಅಹಂಕಾರಿಗಳಿಗೆ ದುಃಸಪ್ನವಾಗಿತ್ತು. ಪ್ರತಿ ವಾರ ಪತ್ರಿಕೆ ಹೊರಬರುವ ಮುನ್ನ ಲಂಕೇಶ್ ಈ ವಾರ ನನ್ನ ಬಗ್ಗೆ ಏನಾದರು ಬರೆದಿದ್ದಾರೆಯೋ ಎಂದು ಭ್ರಷ್ಟರು, ರಾಜಕಾರಿಣಿಗಳು ಹೆದರಿ ತರ ತರ ನಡುಗುತ್ತಿದ್ದರು. ಪತ್ರಿಕೆ ನೋಡಿದ ಮೇಲೆ ಸಧ್ಯ ಈ ವಾರ ಬಂದಿಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಂತೆ ಮುಂದಿನ ವಾರ ಹೇಗೋ ಏನೋ ಎಂಬ ಆತಂಕದಲ್ಲಿ ಕಾಲ ಕಳೆಯುತ್ತಿದ್ದರು. ಬರಿ ದೊಡ್ಡ ದೊಡ್ಡ ರಾಜಕಾರಿಣಿಗಳ ಬಗ್ಗೆಯಷ್ಟೇ ಬರೆಯದೆ ರಾಜ್ಯದ ಮೂಲೆ ಮೂಲೆಯಲ್ಲಿರುವ ಸಣ್ಣ ಸಣ್ಣ ಅಧಿಕಾರಿಗಳ ಹಗರಣಗಳನ್ನೂ ಬಯಲಿಗೆಳೆಯುತ್ತಿದ್ದರು. ಆ ಮಟ್ಟದ ಒಂದು ಹೆದರಿಕೆಯನ್ನು ಲಂಕೇಶ್ ಎಲ್ಲರಿಗೂ ಇಟ್ಟಿದ್ದರು. ಇದು ಮುಂದೆ ಸಾಹಿತಿಗಳಿಗೂ ವಿಸ್ತಾರವಾಯಿತು. ಪ್ರತಿವಾರವೂ ಒಬ್ಬೊಬ್ಬ ಸಾಹಿತಿಯನ್ನು ಮೈಮೇಲೆ ಕೆಡವಿಕೊಂಡವರ ತರ ಅವರ ಮೇಲೆ ಬರೆದರು. ಭೈರಪ್ಪ, ಕಂಬಾರ, ತೇಜಸ್ವಿ, ಅನಂತಮೂರ್ತಿ, ಚಂಪಾ ಅವರ ಮೇಲೆ ಇನ್ನಿಲ್ಲದಂತೆ ಬರೆದು ಅವರ ವ್ಯಯಕ್ತಿಕ ದ್ವೇಷವನ್ನೂ ಕಟ್ಟಿಕೊಂಡರು. ಇದೇ ವಿಷಯಕ್ಕೆ ಪೂರ್ಣಚಂದ್ರ ತೇಜಸ್ವಿಯವರಿಗೆ ಲಂಕೇಶ್ ಮೇಲೆ ಎಷ್ಟು ಸಿಟ್ಟಿತ್ತೆಂದರೆ ಅವರು ಲಂಕೇಶ ಸತ್ತಾಗ ಅವರ ಅಂತ್ಯಕ್ರಿಯೆಗೂ ಹೋಗಲಿಲ್ಲ. ಈ ನಿಟ್ಟಿನಲ್ಲಿ ಲಂಕೇಶ್ ನನಗೆ ಸಂಬಂಧಗಳನ್ನು ಸರಿಯಾಗಿ ನಿಭಾಯಿಸದ ಒಬ್ಬ ವಿಕ್ಷಿಪ್ತ ಮನಸ್ಸಿನ ವ್ಯಕ್ತಿಯಾಗಿ ಕಾಣಿಸುತ್ತಾರೆ.

ಪತ್ರಿಕೆಯಲ್ಲಿನ ಟೀಕೆ ಟಿಪ್ಪಣಿ ಮತ್ತು ಮರೆಯುವ ಮುನ್ನ ಪ್ರತಿವಾರದ ಸೆಳೆತವಾಗಿತ್ತು. ಇದರಲ್ಲಿ ಸಾಹಿತ್ಯ, ಕ್ರೀಡೆ, ರಾಜಕೀಯ, ಸಾಮಾನ್ಯ ಜನ, ದೊಡ್ಡ ದೊಡ್ಡ ವ್ಯಕ್ತಿಗಳು, ಇಂಗ್ಲೀಷ ಲೇಖಕರ ಬಗ್ಗೆ ಬರೆದರು. ಆದರೆ ಆಮೇಲಾಮೇಲೆ ಪ್ರತಿವಾರವೂ ಬರೆಯಲೇಬೇಕೆಂಬ ಅವಸರದ ಒತ್ತಡದಲ್ಲಿ ಬರೆದು ಮುಗಿಸಿದ ಅವರ ಅಂಕಣಗಳು ನೀರಸ ಎನಿಸತೊಡಗಿದವು. ಬಹಳಷ್ಟು ಸಾರಿ ತಮ್ಮ ಬೆಳಗಿನ ವಾಕ್, ಡಯಾಬಿಟಿಸ್ ಕಾಯಿಲೆ, ಮತ್ತು ತಮ್ಮ ಮಾಜಿ ಪ್ರೇಯಸಿಯರ ಬಗ್ಗೆ ಬರೆದು ಅಂಕಣಗಳನ್ನು ತುಂಬಿಸಿದರು. ಇವುಗಳ ಜೊತೆ ನೀಲು ಪದ್ಯಗಳು ಪತ್ರಿಕೆಗೆ ಒಂದು ಹೊಸ ಬೆರಗನ್ನು ತಂದುಕೊಟ್ಟವು. ಅವು ಚಿಕ್ಕದಾಗಿದ್ದರೂ ಅಗಾಧವಾದುದನ್ನೇನೋ ಹೇಳುತ್ತಿದ್ದವು ಎನಿಸುತ್ತಿತ್ತು. ಅವುಗಳಲ್ಲಿ ಸದಾ ಒಂದು ಜಾಣತನ, ಪೋಲಿತನ, ಇಲ್ಲವೇ ವಿಲಕ್ಷಣತೆಯಿರುತ್ತಿತ್ತು. ಬಹಳಷ್ಟು ಸಾರಿ ಅವು ಪ್ರೇಮ ಕಾಮದ ಸುತ್ತ ಸುತ್ತಿದರೂ ಆಗೊಮ್ಮೆ ಈಗೊಮ್ಮೆ ಬದುಕಿನ ಬೇರೆ ಸ್ತರಗಳ ಬಗ್ಗೆಯೂ ಇರುತ್ತಿದ್ದವು. ಪೋಲಿ ಓದುಗರ ಗುಂಪೊಂದನ್ನು ಹಿಡಿದಿಟ್ಟುಕೊಳ್ಳಲೆಂದೇ ಸೃಷ್ಟಿಸಿದ ಅವರ ‘ತುಂಟಾಟ’ವಂತೂ ಹದಿಹರೆಯದವರ ಮೈಮನಗಳಲ್ಲಿ ಕಿಚ್ಚು ಎಬ್ಬಿಸುತ್ತಿತ್ತು.

ಕೆಲವು ಸಾರಿ ಲಂಕೇಶ್ ಯಾವ ಮಟ್ಟಕ್ಕೆ ಟಿಕಿಸುತ್ತಿದ್ದರೆಂದರೆ ನಿಸಾರ್ ಅಹಮ್ದವವರನ್ನು, ಲಕ್ಷ್ಮಿನಾರಾಯಣ ಭಟ್ಟರನ್ನು ಕ್ಯಾಸೆಟ್ ಕವಿಯೆಂದು ಕುಹಕವಾಡುತ್ತಿದ್ದರು. ಆದರೆ ಆ ಕ್ಯಾಸೆಟ್‍ ಸಂಸ್ಕೃತಿಯಿಂದಲೇ ಆಧುನಿಕ ಕನ್ನಡ ಕಾವ್ಯ ಮನೆಮಾತಾಗಿದ್ದು ಅವರ ಕಣ್ಣಿಗೆ ಕಾಣಿಸುತ್ತಲೇ ಇರಲಿಲ್ಲ. ನರಸಿಂಹಸ್ವಾಮಿಯವರನ್ನು ಅವರೊಬ್ಬ ಕವಿಯೇ ಅಲ್ಲ ಅವರ ಮೇಲೆ ಖ್ಯಾತ ಇಂಗ್ಲೀಷ ಪ್ರೇಮ ಕವಿ ರಾಬರ್ಟ್ ಬರ್ನ್ಸನ ದಟ್ಟ ಪ್ರಭಾವವಿದೆ ಎನ್ನುವಷ್ಟರಮಟ್ಟಿಗೆ ಟೀಕಿಸುತ್ತಿದ್ದರು. ಭೈರಪ್ಪ ಬರಿ ಬ್ರಾಹ್ಮಣ ಸಂವೇದನೆಗಳ ಬಗ್ಗೆ ಬರಿತಾರೆ ಎಂದು ಹೀಯಾಳಿಸುತ್ತಿದ್ದರು. ದೊಡ್ದರಂಗೇಗೌಡರನ್ನು ಕನ್ನಡಿಗರ ಕರುಳನ್ನೇ ಬಗೆದು ಬರೆಯುವ ಕವಿಯೆಂದು ಲೇವಡಿಮಾಡುತ್ತಿದ್ದರು. ಹೀಗೆ ಅವರು ಬೇರೆಯವರನ್ನು ಯಾವಾಗಲೂ ಒಂದು proccupied mindನಿಂದ ನೋಡುತ್ತಿದ್ದರು. ಇದು ನಿಜಕ್ಕೂ ಅವರ ಅನಿಸಿಕೆಯೋ ಅಥವಾ ಅವರ ವಿಧ್ವಂಸಕ ಮನಸ್ಸೋ ಅಥವಾ ಇಂಟೆಲೆಕ್ಚುಯಲ್ ಜೇಲಸಿಯೋ ಗೊತ್ತಾಗುತ್ತಿರಲಿಲ್ಲ.
ಹೊಸಬರಿಗೆ ಆದರೆ ಗಟ್ಟಿ ಬರಹಗಾರರಿಗೆ ತಮ್ಮ ಪತ್ರಿಕೆಯಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟು ರೇಖಾರಾಣಿ, ತೇಜಸ್ವಿನಿ, ಬಿ.ಟಿ ಜಾಹ್ನವಿ, ಗಂಗಾಧರ್ ಮೊದಲಿಯಾರ್, ಸಾರಾ ಅಬೂಬ್ಕರ್, ಡಿ.ಬಿ ಚಂದ್ರೇಗೌಡ ಇನ್ನೂ ಮುಂತಾದವರನ್ನು ಬೆಳೆಸಿದರು. ಅವರು ಆಯ್ಕೆ ಮಾಡುತ್ತಿದ್ದುದೇ ಅಂಥ ಬರಹಗಾರರನ್ನು. ಆ ಬರಹಗಾರರ ಮೇಲೆ ನಮಗೆಲ್ಲ ಚನ್ನಾಗಿ ಬರೆಯುತ್ತಾರೆ ಎಂಬ ನಂಬಿಕೆಯಿತ್ತು. ಆದರೆ ಆಮೇಲಾಮೇಲೆ ಬಂದ ಲೇಖಕರ ಕಥೆ, ಲೇಖನಗಳನ್ನು ಓದಿದ ಮೇಲೆ ಅವರ ಆಯ್ಕೆಯ ಬಗ್ಗೆ ಅನುಮಾನಗಳು ಶುರುವಾದವು. ಅದಕ್ಕೊಂದು ಉತ್ತಮ ಉದಾಹರಣೆ ನಿಮ್ಮಿ ಕಾಲಂ. ಅಸ್ತಿತ್ವದಲ್ಲಿಯೇ ಇರದ ಗಂಜುಗಣ್ಣಿನ ಹುಡುಗಿಯ ಫೋಟೊವೊಂದನ್ನು ಹಾಕಿ ಅದಕ್ಕೆ ‘ನಿಮ್ಮಿ ಕಾಲಂ’ ಎಂದು ಹೆಸರಿಟ್ಟು ಯಾರದೋ (ಬಹುಶಃ ಅನಿತಾ ನಟರಾಜ್) ಕೈಲಿ ಬರೆಸಿದ್ದರು. ಆ ಕಾಲಂನಿನಲ್ಲಿ ಬರಿ ನಿಮ್ಮಿ ಮತ್ತು ಅವಳ ಪ್ರಿಯಕರ ಅಮರನ ವಿಷಯಗಳೇ ತುಂಬಿರುತ್ತಿದ್ದವು. ಅವರಿಬ್ಬರು ಈ ವಾರ ಎಲ್ಲಿ ಹೋದರು, ಏನು ಮಾಡಿದರು, ಅವರನ್ನು ನೋಡಲು ಯಾರು ಬಂದರು ಬರಿ ಇಂಥವೇ ಶುಷ್ಕ ವಿಷಯಗಳಿರುತ್ತಿದ್ದವೇ ಹೊರತು ಬೌದ್ಧಿಕತೆಯ ಮಟ್ಟದಲ್ಲಿ ಅತ್ಯಂತ ಕೆಳಮಟ್ಟದಲ್ಲಿದ್ದು ಅದು ಲಂಕೇಶ್ ಪತ್ರಿಕೆಯ ಗುಣಮಟ್ಟದಲ್ಲಿ ಒಂದು ಕಪ್ಪು ಚುಕ್ಕಿಯಾಗಿತ್ತೆಂದು ನನಗೆ ಆಗಾಗ ಅನಿಸುತ್ತಿತ್ತು. ಅಲ್ಲದೇ ಅವರು ಆಗಾಗ ಯುವ ಬರಹಗಾರರಿಗೆ ನೀನು ತೇಜಸ್ವಿ ತರ ಬರಿ, ಆಲನಹಳ್ಳಿ ತರ ಬರಿ, ಪ್ರತಿಭಾಳ ತರ ಬರಿ ಎಂದು ಉಪದೇಶಿಸುತ್ತಿದ್ದರು. ಆದರೆ ನನಗಿಲ್ಲಿ ಅಚ್ಚರಿಯಾಗೋದು ಯುವ ಬರಹಗಾರರು ಬೇರೆ ಬರಹಗಾರನ್ನು ಯಾಕೆ ಮಾದರಿಯಾಗಿಟ್ಟುಕೊಳ್ಳಬೇಕೆಂಬುದು? ಎಲ್ಲ ಬರಹಗಾರರಿಗೂ ಅವರದೇ ಆದಂಥ ಒಂದು ವಿಶಿಷ್ಟ ಶೈಲಿಯಿರುತ್ತದೆ ಮತ್ತು ಆ ಮೂಲಕ ಅವರು ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ಹೀಗಿರುವಾಗ ಅವರು ಯಾಕೆ ಬೇರೆಯವರ ತರ ಬರೆಯಬೇಕು? ಬರೆದರೆ ಅವರಿಗೂ ಇವರಿಗೂ ಏನು ವ್ಯತ್ಯಾಸ? ಏಕತಾನತೆ ಸೃಷ್ಟಿಯಾಗುವದಿಲ್ಲವೆ? ಇಂಥ ಸಣ್ಣ ವಿಷಯ ದೈತ್ಯ ಪ್ರತಿಭೆಯ ಬರಹಗಾರ ಲಂಕೇಶರಿಗೆ ತಿಳಿಯುತ್ತಿರಲಿಲ್ಲವೆ? ಗೊತ್ತಿಲ್ಲ.

ಡಿ. ಆರ್. ನಾಗರಾಜ್ ಹೇಳುವಂತೆ ಲಂಕೇಶ್ ಭಾರತದ ಹತ್ತು ಶ್ರೇಷ್ಟ ಬರಹಗಾರರಲ್ಲಿ ಒಬ್ಬರು ಎನ್ನುವದರಲ್ಲಿ ಎರಡು ಮಾತಿಲ್ಲ. ಅವರು ‘ಅವ್ವ’ನಂಥ ಶ್ರೇಷ್ಟ ಕವನಗಳನ್ನು ಕೊಟ್ಟಂತೆಯೇ ‘ಮುಟ್ಟಿಸಿಕೊಂಡವನು’, ‘ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ’ಯಂಥ ಕಥೆಗಳನ್ನೂ, ‘ಅಕ್ಕ’, ‘ಮುಸ್ಸಂಜೆಯ ಕಥಾಪ್ರಸಂಗ’ದಂಥ ಕಾದಂಬರಿಗಳನ್ನೂ ‘ಸಂಕ್ರಾಂತಿ’ಯಂಥ ಅದ್ಭುತ ನಾಟಕಗಳನ್ನೂ ಕೊಟ್ಟವರು. ಆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ಭಿನ್ನವಾಗಿ ಗುರುತಿಸಿಕೊಂಡವರು. ಆದರೆ ಲಂಕೇಶ್ ತಾವೊಬ್ಬರೇ ಶ್ರೇಷ್ಟ ಬರಹಗಾರ ಎನ್ನುವ ಅಹಂನೊಂದಿಗೆ ಬದುಕುತ್ತಿದ್ದರು. ಅದು ಯಾವಾಗಲೂ ಅವರ ಬರಹದಲ್ಲಿ ವ್ಯಕ್ತವಾಗುತ್ತಿತ್ತು. ತಾನು ಬರೆದಿದ್ದೇ ಶ್ರೇಷ್ಟ ಬೇರೆಯವರು (ತನ್ನ ಸಮಕಾಲೀನರು) ಬರೆದಿದ್ದೆಲ್ಲ ಕನಿಷ್ಟ ಎನ್ನುವ ನಿಲುವನ್ನು ತಾಳಿದ್ದರು. ಆದರೂ ಅಪರೂಪಕ್ಕೊಮ್ಮೆ ಇತರರನ್ನು ಮೆಚ್ಚಿಕೊಂಡು ಒಂದೆರಡು ಮಾತುಗಳನ್ನು ಕೂಡ ಬರೆಯುತ್ತಿದ್ದರು.

ಅದ್ಭುತ ಪ್ರತಿಭೆಯ ಬರಹಗಾರ ಲಂಕೇಶ್ ನನಗೆ ಸದಾ ಸಿಟ್ಟಿನ, ಸೊಕ್ಕಿನ ಆದರೆ ಎಚ್ಚರದಿಂದ ಕೆಲಸ ಮಾಡುವ ಮನುಷ್ಯನಂತೆ ಕಾಣುತ್ತಿದ್ದರು. ಅದು ಅವರ ಬರಹದಲ್ಲಿ ಕಾಣುತ್ತಿತ್ತು. ಅವರಲ್ಲಿ ಒಂದು ಮುಗ್ಧತೆ, ಅಸೂಯೆ, ಹಟಮಾರಿತನ, ಥಟ್ ಅಂತ ಹೇಳುವ ಸ್ವಭಾವ ಎಲ್ಲವನ್ನು ಗ್ರಹಿಸುವ ಸೂಕ್ಷ್ಮ ಮನಸ್ಸು ಹಾಗೂ ಚಿಕಿತ್ಸಿಕ ಬುದ್ಧಿಯಿತ್ತು. ಒಟ್ಟಾರೆಯಾಗಿ ಲಂಕೇಶರು ಹೀಗ್ಹೀಗೆ ಇದ್ದರು ಎಂದು ಹೇಳುವದು ಕಷ್ಟ. ಒಂದೇ ಹಿಡಿತಕ್ಕೆ ಸಿಗದ ವ್ಯಕ್ತಿತ್ವ ಅವರದು. ಇವತ್ತು ಲಂಕೇಶ್ ನೆನಪು ಮಾತ್ರ. ಅವರು ಸತ್ತು ಇಂದಿಗೆ ಹತ್ತು ವರ್ಷಗಳಾದವು. ಲಂಕೇಶ್ ಇಲ್ಲದೆ ಹತ್ತು ವರ್ಷಗಳನ್ನು ಕಳೆದುಬಿಟ್ಟೆವಾ? ನೆನೆಸಿಕೊಂಡರೆ ಅಚ್ಚರಿಯೊಂದಿಗೆ ವಿಷಾದವೊಂದು ಮನಸ್ಸನ್ನು ತಟ್ಟುತ್ತದೆ. ಹಾಗೆಂದೇ ಅವರನ್ನು ಮತ್ತೆ ಮತ್ತೆ ಕೇಳುತ್ತೇನೆ ‘ನೆನಪಾಗಿ ಹಿಂಡದಿರು ಹುಳಿಮಾವಿನ ಮರವೇ......’ ಎಂದು.

-ಉದಯ್ ಇಟಗಿ

Friday, January 22, 2010

ಬದುಕೇ, ನಿನ್ನಲ್ಲೆಂಥಾ ಮುನಿಸು ನನಗೆ?


ಡಿಸೆಂಬರ್ 31, 2009 ಇಡಿ ಜಗತ್ತೇ ಹೊಸವರ್ಷವನ್ನು ಎದುರುಗೊಳ್ಳುವ ಸಂಭ್ರಮ, ಖುಶಿಗಳಲ್ಲಿರಬೇಕಾದರೆ ನಾನು ಮಾತ್ರ ಖಿನ್ನತೆಗೊಳಗಾಗಿದ್ದೆ. ಇಡಿ ಆಕಾಶವೇ ಕಳಚಿ ತಲೆ ಮೇಲೆ ಬಿದ್ದವರ ತರ ಕುಳಿತಿದ್ದೆ. ಇನ್ನು ನನ್ನ ಬದುಕು ಮುಗಿದೇ ಹೋಯಿತು ಎನ್ನುವ ಆತಂಕ ಕಾಡುತ್ತಿತ್ತು. ಜೊತೆಗೆ ಅಂದು ನನ್ನನ್ನು ಇನ್ನಿಲ್ಲದ ಒಂದು ರೀತಿಯ ಶೂನ್ಯ, ದಿಗ್ಭ್ರಮೆಗಳು ಆವರಿಸಿಬಿಟ್ಟಿದ್ದವು. ಅದಕ್ಕೆ ಕಾರಣ ನನಗೆ ಅಂದೇ ಸಕ್ಕರೆ ಕಾಯಿಲೆಯಿದೆ ಎಂದು ಖಚಿತವಾಗಿತ್ತು.

ವರ್ಷದ ಕೊನೆಯಲ್ಲಿ ಪ್ರತಿವರ್ಷದಂತೆ ಈ ಸಲವೂ ರೆಸಿಡೆನ್ಸ್ ವೀಸಾ ತೆಗೆಸುವದಕ್ಕೋಸ್ಕರ ಮೆಡಿಕಲ್ ಟೆಸ್ಟ್ ಮಾಡಿಸಬೇಕಾಗಿತ್ತು. ಅದರಲ್ಲಿ ಮುಖ್ಯವಾಗಿ ಏಡ್ಸ್ ಮತ್ತು ಹೆಪಟೈಟೆಸ್ ಪರೀಕ್ಷೆ ಮಾಡಿಸಬೇಕು. ಅದರಲ್ಲಿ ಉತ್ತೀರ್ಣನಾದರೆ ಮಾತ್ರ ರೆಸಿಡೆನ್ಸ್ ವೀಸಾ. ಇಲ್ಲವಾದರೆ ನಮ್ಮನ್ನು ನಮ್ಮ ದೇಶಕ್ಕೆ ವಾಪಾಸ್ ಕಳಿಸಲು ಅಂದಿನಿಂದಲೇ ತಯಾರಿ ನಡೆಸುತ್ತಾರೆ. ಈ ವ್ಯವಸ್ಥೆ ನಮಗೆಲ್ಲಾ ಕೄರವಾಗಿ ಕಂಡರೂ ಈ ದೇಶದವರು ಪರಿಪಾಲಿಸುತ್ತ ಬಂದ ರೀತಿಯೇ ಹಾಗಿದೆ. ಇರಲಿ. ನಾನು ಈಗ್ಗೆ ಒಂದೆರೆಡು ತಿಂಗಳಿನಿಂದ ರಾತ್ರಿ ಅವಶ್ಯಕತೆಗಿಂತ ಜಾಸ್ತಿ ಎರೆಡೆರಡು ಸಾರಿ ಮೂತ್ರವಿಸರ್ಜನೆಗೆ ಹೋಗುತ್ತಿದ್ದೆ. ಮತ್ತು ಮೈ ಕೊರೆಯುವ ಚಳಿಯಲ್ಲೂ ಬಾಯಿ ಆಗಾಗ ಒಣಗುತ್ತಿತ್ತು. ಇದಕ್ಕೆ ಕಾರಣವೇನು ಎಂದು ನಮ್ಮೊಟ್ಟಿಗೆ ಇರುವ ಇಂಡಿಯನ್ ಡಾಕ್ಟರ್ ಡಾ. ಸಾಹು ಅವರನ್ನು ಕೇಳಿದಾಗ ಅವರು “ಏನೂ ಇಲ್ಲ ನೀನು ಮೊದಲಿನಿಂದಲೂ ನೀರನ್ನು ಜಾಸ್ತಿ ಕುಡಿಯುತ್ತೀಯ ಅದಕ್ಕೆ ಹಾಗಾಗುತ್ತೆ. ಅದರ ಬಗ್ಗೆ ಜಾಸ್ತಿ ಯೋಚಿಸುವ ಅಗತ್ಯವಿಲ್ಲ. ಒಂದು ವೇಳೆ ನಿನಗೆ ಅನುಮಾನವಿದ್ದರೆ ಹೇಗೂ ರೆಸಿಡೆನ್ಸ್ ವೀಸಾಗೋಸ್ಕರ ಮೆಡಿಕಲ್ ಟೆಸ್ಟ್ ಮಾಡಿಸಿತ್ತೀಯಲ್ಲ ಆಗ ಒಂದು ಸಾರಿ ಶುಗರ್ ಟೆಸ್ಟ್ ಮಾಡಿಸಬಿಡು ನೋಡೋಣ” ಎಂದು ಹೇಳಿದ್ದರು.

ನಾನು ಈ ಟೆಸ್ಟನ್ನು ಮಾಡಿಸುವದೋ ಬೇಡವೋ ಎಂಬ ಅರೆಮನಸ್ಸಿನಿಂದಲೇ ಯಾವುದಕ್ಕೂ ಇರಲಿ ಎಂದು ಡಿಸೆಂಬರ್ 30 ರಂದು ಶುಗರ್ ಟೆಸ್ಟ್ ಮಾಡಿಸಿದ್ದೆ. ಅದು 322mg/dL ಬಂದಿತ್ತು. ಅಂದೇ ತೂಕವನ್ನು ಚೆಕ್ ಮಾಡಿದಾಗ ಗಣನೀಯವಾದ ಇಳಿಕೆ ಕಂಡುಬಂದಿತ್ತು. ನಮ್ಮ ಡಾಕ್ಟರು ಒಳಗೊಳಗೆ ಸಕ್ಕರೆ ಕಾಯಿಲೆ ಇರಬಹುದೆಂದು ಖಾತ್ರಿಯಾದರೂ ಅದನ್ನು ಹೊರಗೆಡವದೇ “ಇದು ತಪ್ಪಿರಬಹುದು. ನಾಳೆಯೇ ಇನ್ನೊಂದು ಸಾರಿ ಮಾಡಿಸು. ಆದರೆ ಈ ಸಾರಿ ಬೇರೆ ಬೇರೆ ಕಡೆ ಮಾಡಿಸು, ಯಾವದಕ್ಕೂ ಒಂದು ಸೆಕೆಂಡ್ ಒಪಿನಿಯನ್ ಇರಲಿ” ಎಂದು ಹೇಳಿದ್ದರು. ಏಕೆಂದರೆ ಪದೆ ಪದೆ ಮೂತ್ರವಿಸರ್ಜನೆಗೆ ಹೋಗುವದು, ಬಾಯಿ ಒಣಗುವದು ಹಾಗೂ ತೂಕದಲ್ಲಿ ಇಳಿಕೆಯಾಗುವದು ಸಕ್ಕರೆ ಕಾಯಿಲೆಯ ಮುಖ್ಯ ಲಕ್ಷಣಗಳು.

ಮಾರನೆ ದಿವಸ ಅಂದರೆ ಡಿಸೆಂಬರ್ 31, 2009 ರಂದು ಬೆಳಿಗ್ಗೆ ಸ್ನಾನ ಮಾಡಿ ಬರಿ ಹೊಟ್ಟೆಯಲ್ಲಿ ಡಾ. ಸಾಹು ಕೆಲಸ ಮಾಡುತ್ತಿರುವ ಆಸ್ಪತ್ರೆಗೆ ಹೋಗಿ ರಕ್ತ ಮತ್ತು ಮೂತ್ರಗಳನ್ನು ಪರೀಕ್ಷೆಗೆ ಕೊಟ್ಟು ಬಂದೆ. ಹಾಗೆಯೇ ಹೊರಗೆ ಪ್ರೈವೇಟ್ ಲ್ಯಾಬರೋಟರಿಯೊಂದಲ್ಲಿ ರಕ್ತ ಮತ್ತು ಮೂತ್ರಗಳನ್ನು ಪರೀಕ್ಷೆಗೆ ಕೊಟ್ಟು ಬಂದೆ. ‘ಹನ್ನೆರಡು ಗಂಟೆಗೆ ಬಂದು ರಿಸಲ್ಟ್ ಶೀಟನ್ನು ತೆಗೆದುಕೊಂಡು ಹೋಗಿ’ ಎಂದು ಹೇಳಿದರು. ಸರಿ ಎಂದು ಮನೆಗೆ ಬಂದೆ. ಅಂದು ಕಾಲೇಜಿನಲ್ಲಿ ಖುಶಿ ಖುಶಿಯಾಗಿ ಓಡಾಡಿದೆ. ನನಗೇನಾಗಿದೆ? ಗುಂಡುಕಲ್ಲು ಇದ್ದ ಹಾಗೆ ಇದ್ದೇನೆ. ಯಾತರ ಕಾಯಿಲೆ? ಕಾಯಿಲೆಗಳು ನನ್ನನ್ನು ಕಂಡರೆ ಹೆದರಿ ಓಡಿಹೋಗುತ್ತವೆ. ನಾನು ಇನ್ನೂ ಕಡಿಮೆ ಕಡಿಮೆ ಎಂದರೂ ಐವತ್ತು ವರ್ಷ ಬದುಕಬಲ್ಲೆ ಎಂಬ ಆತ್ಮವಿಶ್ವಾಸದಲ್ಲಿದ್ದೆ. ಮೇಲಾಗಿ ನನ್ನ ಹೆಂಡತಿ ನನಗೆ ಆಗಾಗ “ನೀವು ಉತ್ತರ ಕರ್ನಾಟಕದವರು ರೊಟ್ಟಿ ತಿಂದ ಜಟ್ಟಿಗಳು, ನಿಮಗೆ ಯಾತರ ಕಾಯಿಲೆಯೂ ಬರುವದಿಲ್ಲ. ನೀವೆಲ್ಲ ದೀರ್ಘಾಯುಷಿಗಳು. ಕಾಯಿಲೆಗಳು ಬರುವದೇನಿದ್ದರೂ ನಮ್ಮಂಥ ಬೆಂಗಳೂರಿಗರಿಗೆ ಮಾತ್ರ ಬರುತ್ತವೆ.” ಎಂದು ತಮಾಷೆ ಮಾಡುತ್ತಿದ್ದಳು. ಹೌದಲ್ಲವೆ? ನನಗೇನಾಗಿದೆ? ನಾನು ನೆಲಕ್ಕೆ ಜಾಡಿಸಿ ಒದ್ದರೆ (ನೆಲದಿಂದ) ನೀರು ಬರುವ ಹಾಗೆ ಇದ್ದೇನೆ. ಹೀಗಿದ್ದ ಮೇಲೆ ಯಾವ ಸಕ್ಕರೆ ಕಾಯಿಲೆಯೂ ಇಲ್ಲ ಮತ್ಯಾವ ಕಾಯಿಲೆಯೂ ಇಲ್ಲ. ಎಲ್ಲವೂ ಸರಿಯಾಗಿದೆ. ಸರಿಯಾಗಿರುತ್ತದೆ ಕೂಡ. ಏನೂ ಆಗಿರುವದಿಲ್ಲ ಎಂಬ ಭಾವನೆಯಲ್ಲಿಯೇ ಇದ್ದೆ. ಆದರೆ ಹನ್ನೆರಡು ಗಂಟೆಗೆ ಬಂದ ಫಲಿತಾಂಶ ನನ್ನ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತ್ತು. ಎರಡೂ ಕಡೆಯಿಂದ ಬಂದ ಫಲಿತಾಂಶಗಳು ನನಗೆ ಸಕ್ಕರೆ ಕಾಯಿಲೆ ಇದೆ ಎಂದು ಖಚಿತಪಡಿಸಿದ್ದವು. ಬದುಕಿನ ಲೆಕ್ಕಾಚಾರಗಳೇ ಹಾಗೆ! ಎಲ್ಲ ಸರಿಯಾಗಿದೆ ಎಂದುಕೊಳ್ಳುವಾಗಲೇ ಎಲ್ಲೋ ಒಂದು ಕಡೆ ತಪ್ಪಿಹೋಗಿರುತ್ತದೆ.

ಡಾಕ್ಟರ್ ಸಾಹು ಅವರು ನಗು ನಗುತ್ತಾ “ಇವತ್ತಿನಿಂದ ನಮ್ಮ ಕಂಪನಿ ಸೇರಿದೆ. (ಏಕೆಂದರೆ ಅವರು ಸಹ ಒಬ್ಬ ಡಯಾಬಿಟಿಕ್) ಈ ಟ್ಯಾಬ್ಲೆಟ್ಸ್ ದಿನಾಲು ಬೆಳಿಗ್ಗೆ ತಗೊ. ಮತ್ತು ಪ್ರತಿನಿತ್ಯ ಒಂದು ತಾಸಿನಷ್ಟು ವಾಕ್ ಮಾಡು. ದಿನಕ್ಕೆ ಮೂರು ಸಾರಿ ತಿನ್ನುವ ಬದಲು ಐದು ಸಾರಿ ತಿನ್ನು. ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಶುಗರ್ ಲೆವೆಲ್ ನಾರ್ಮಲ್ ಲೆವೆಲ್ಗಿಂಾತ ಕಡಿಮೆ ಹೋಗದಂತೆ ನೋಡಿಕೊ. ಏಕೆಂದರೆ ಸ್ವಲ್ಪ ಹೆಚ್ಚಿದ್ದರೆ ಏನೂ ಆಗುವದಿಲ್ಲ. ಆದರೆ ನಾರ್ಮಲ್ ಲೆವೆಲ್ಗಿಂಿತ ಕಡಿಮೆ ಇರುವದು ಬಹಳ ಅಪಾಯಕಾರಿ.” ಎಂದು ಸಲಹೆ ನೀಡಿದರು.

ಅಯ್ಯೋ..., ಇದ್ದಕ್ಕಿದ್ದಂತೆ ಇದೇನಾಯ್ತು? ನಮ್ಮ ವಂಶದಲ್ಲಿಯೇ ಯಾರಿಗೂ ಇರದ ಈ ಕಾಯಿಲೆ ನನಗೇಕೇ ಬಂತು? ಎಲ್ಲಿ ಲೆಕ್ಕ ತಪ್ಪಿತು? ಹೀಗೇಕಾಯ್ತು? ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುವಾಗಲೇ ಮನಸ್ಸಿಗೆ ಒಂದು ರೀತಿಯ ಮಂಕು ಕವಿಯಿತು. ಇಲ್ಲಿ ದಿನಕ್ಕೆ ಬರಿ ಒಂದು ಗಂಟೆ ಪಾಠ ಮಾಡಿ ಮನೆಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುವದರಿಂದ ದೈಹಿಕ ಶ್ರಮದ ಕೊರತೆಯಿಂದ ಹೀಗಾಯ್ತೆ? ಅಂದರೆ ಸುಖ ಹೆಚ್ಚಾಗಿ ಈ ಕಾಯಿಲೆ ಬಂತೇ? ಅಥವಾ ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳದಿದ್ದಕ್ಕೆ ಹೀಗಾಯ್ತೆ? ಗೊತ್ತಿಲ್ಲ. ಬರಬಾರದಾಗಿತ್ತು. ಬಂದಾಗಿದೆ. ಬದುಕಲ್ಲಿ ಬಂದಿದ್ದನ್ನು ಅಪ್ಪಿ ಒಪ್ಪಿಕೊಂಡು ನಡೆಯಬೇಕು ಎನ್ನುವ ಮನೋಭಾವನೆಯನ್ನು ನಾನು ಮೊದಲಿನಿಂದಲೂ ಹೊಂದಿದ್ದರೂ ಮನದ ಮೂಲೆಯಲ್ಲೆಲ್ಲೋ ಇಂದಿನಿಂದ ನನ್ನ ಆಯುಷ್ಯ ಬೇಗ ಬೇಗ ಕ್ಷೀಣಿಸುತ್ತಾ ಹೋಗುತ್ತದಲ್ಲವೇ? ಸಾವಿನ ಸೆರಗನ್ನು ಸದಾ ಕೈಯಲ್ಲಿ ಹಿಡಿದುಕೊಂಡೇ ಬದುಕಬೇಕು ಎನ್ನುವ ಅತಂಕ. ಓ ಬದುಕೇ, ನೀನೆಷ್ಟೊಂದು ಕೄರಿ? ಇಷ್ಟು ದಿವಸ ಕಷ್ಟ ಪಟ್ಟು ಬದುಕಲ್ಲಿ ಮುಂದೆ ಬಂದೆ. ಇನ್ನು ಮುಂದೆ ಎಂಜಾಯ್ ಮಾಡೋಣ ಎನ್ನುವಷ್ಟರಲ್ಲಿ ಈ ಸ್ಥಿತಿಯನ್ನು ತಂದಿಟ್ಟೆಯಾ? ಎಷ್ಟೊಂದು ಕನಸುಗಳನ್ನು ಕಂಡಿದ್ದೇನಲ್ಲ? ಬೆಂಗಳೂರಿನಲ್ಲೊಂದು ಮನೆಯನ್ನು ಕಟ್ಟಬೇಕು, ನನ್ನದೇ ಆದಂಥ ಸಣ್ಣ ಫಾರ್ಮ್ ಹೌಸ್ನ್ನು ಆರಂಭಿಸಿ ಅಲ್ಲಿ ಸಾವಯವ ಬೇಸಾಯ ಪದ್ಧತಿಯ ಮೂಲಕ ಹೆಚ್ಚಿನ ಇಳುವರಿಯನ್ನು ತೆಗೆಯುವದು ಹೇಗೆ ಎಂದು ತೋರಿಸಬೇಕು, ಪತ್ರಿಕೆಯೊಂದನ್ನು ಆರಂಭಿಸಬೇಕು, ನಾಟಕದಲ್ಲಿ ಅಭಿನಯಿಸಬೇಕು, ಟೀವಿ ಮಾಧ್ಯಮದಲ್ಲಿ ಕೆಲಸ ಮಾಡಬೇಕು, ಸಾಧ್ಯವಾದರೆ ನಿರ್ದೇಶನವನ್ನು ಕಲಿತು ಚಲನ ಚಿತ್ರವೊಂದನ್ನು ನಿರ್ದೇಶಿಸಬೇಕು, ದೇಶ ವಿದೇಶಗಳನ್ನು ಸುತ್ತಬೇಕು, ಮಗಳನ್ನು ದೊಡ್ದಮಟ್ಟದ ಪತ್ರಕರ್ತೆಯನ್ನಾಗಿ ಮಾಡಬೇಕು, ಅಬ್ಬಬ್ಬ...... ಒಂದೇ.... ಎರಡೇ....? ನೂರಾರು ಕನಸುಗಳು! ಅವೆಲ್ಲ ಈಡೇರುತ್ತವೆಯೇ? ನಾನಿರುವದರೊಳಗಾಗಿ ಇವನ್ನೆಲ್ಲ ಮಾಡಿ ಮುಗಿಸಬಲ್ಲೆನೆ? ಸಾವಿನ ಸಮೀಪಕ್ಕೆ ಬಂದ ವ್ಯಕ್ತಿ ವರಾಗ್ಯ ಭಾವವನ್ನು ತಳೆಯುವದರ ಜೊತೆಗೆ ಹೆಚ್ಚು ಕರ್ತವ್ಯ ಪ್ರಜ್ಞೆಯುಳ್ಳವನಾಗುತ್ತಾನೆ. ತಾನು ಮಾಡಬೇಕಾದ ಕೆಲಸಗಳನ್ನು ಬೇಗ ಬೇಗನೆ ಮಾಡಿ ಮುಗಿಸುತ್ತಾನೆ. ಬಹುಶಃ ಈ ಕಾರಣಕ್ಕೇನೇ ಈ ಕಾಯಿಲೆ ನನಗೆ ವರವಾಗಿ ಬಂದಿರಬಹುದೆ? ಗೊತ್ತಿಲ್ಲ.

ಸಕ್ಕರೆ ಕಾಯಿಲೆ ದೊಡ್ಡ ಕಾಯಿಲೆಯೇನಲ್ಲ. ಭಾರತದಲ್ಲಿ ಶೇಕಡಾ 50 ರಷ್ಟು ಜನಕ್ಕೆ ಇದೆ. ಪ್ರಶ್ನೆ ಅದಲ್ಲ. ಬಹಳಷ್ಟು ಜನಕ್ಕೆ ಈ ಕಾಯಿಲೆ ಬರುವದು ಐವತ್ತೋ ಅರವತ್ತರ ನಂತರ. ಆದರೆ ನನಗಿನ್ನೂ 35. ಆಗಲೇ ಇದು ನನ್ನನ್ನು ಮುತ್ತಿಬಿಟ್ಟಿದ್ದರಿಂದ ಆಕಾಶವೇ ತಲೆ ಮೇಲೆ ಬಿದ್ದವರ ತರ ಕುಳಿತುಬಿಟ್ಟೆ. ಇಡೀ ಜೀವನೋತ್ಸಾಹವೇ ಬತ್ತಿ ಹೋದಂತ ಅನುಭವ. ಹಿಂದೆ ಗೆಳೆಯ ಮಂಜುವಿಗೆ ಇದೇ ಕಾಯಿಲೆ ಬಂದಾಗ “ಅಷ್ಟೆ ತಾನೆ? ಅದಕ್ಯಾಕೆ ಯೋಚನೆ ಮಾಡ್ತಿ ಮಾರಾಯ? ಅದೇನೂ ದೊಡ್ದ ಕಾಯಿಲೆಯಲ್ಲ. ಅರಾಮಾಗಿರು” ಎಂದು ಹೇಳಿದ್ದೆ. ಹೌದು, ಅದೇನೂ ದೊಡ್ಡ ಕಾಯಿಲೆಯಲ್ಲ. ಆದರೆ ಇಂದು ನನಗೆ ಅದೇ ಕಾಯಿಲೆ ದೊಡ್ಡದಾಗಿ ಕಾಣಿಸುತ್ತಿದೆ. ಬೇರೆಯವರು ತೊಂದರೆಯಲ್ಲಿರುವಾಗ ಅವರಿಗೆ ಏನೋ ಒಂದು ಸಮಾಧಾನ ಹೇಳಿ ಸುಮ್ಮನಾಗುತ್ತೇವೆ. ಆದರೆ ಅದೇ ತೊಂದರೆ, ಅನುಭವಗಳು ನಮಗೆ ಆದಾಗ ನಾವು ಪ್ರತಿಕ್ರಿಯಿಸುವ ರೀತಿಯೇ ಬೇರೆ. ಮೇಲಾಗಿ ಕೇವಲ ಒಂದೆರೆಡು ದಿವಸಗಳಲ್ಲಿ ನನ್ನ ಕಣ್ಣುಗಳು ಮಂಜಾಗತೊಡಗಿದವು. ತೀರ ಸಮೀಪವಿರುವ ಸಣ್ಣ ಸಣ್ಣ ವಸ್ತುಗಳು ಸಹ ಕಾಣದಾದವು. ಕಂಪ್ಯೂಟರ್ ಮುಂದೆ ಕುಳಿತರೆ ಅಕ್ಷರಗಳು ಕಾಣಿಸುತ್ತಿರಲಿಲ್ಲ. ಇದೇ ಕಾರಣಕ್ಕೆ ನಾನು ಬ್ಲಾಗ್ ಬರೆಯುವದನ್ನು ಹಾಗೂ ಕಾಮೆಂಟಿಸುವದನ್ನು ನಿಲ್ಲಿಸಿದೆ. ಒಮ್ಮಿಂದೊಮ್ಮೆಲೆ ಇದೇಕೆ ಹೀಗಾಯಿತು ಎಂದು ದಿಗಿಲಾಗಿ ಡಾಕ್ಟರ್ ಸಾಹು ಅವರನ್ನು ಕೇಳಿದಾಗ “ನಿನ್ನ ಶುಗರ್ ಲೆವೆಲ್ ಜಾಸ್ತಿ ಇರುವದರಿಂದ ಹೀಗಾಗುತ್ತದೆ. ಇದು ಹೀಗೆ ಇನ್ನೂ ಹದಿನೈದು ಇಪ್ಪತ್ತು ದಿವಸ ಇರುತ್ತದೆ. ಶುಗರ್ ಕಂಟ್ರೋಲ್ಗೆಕ ಬಂದ ತಕ್ಷಣ ಸರಿ ಹೋಗುತ್ತದೆ. ಅಲ್ಲಿಯವರೆಗೆ don’t strain yourself by blogging” ಎಂದು ಹೇಳಿದರು.
ನನಗೆ ಸಕ್ಕರೆ ಕಾಯಿಲೆ ಇದೆ ಎಂದು ಗೊತ್ತಾದಾಗಿನಿಂದ ಮಂಕಾಗಿ ನನ್ನೊಳಗೆ ನಾನು ಹೂತು ಹೋಗಿಬಿಟ್ಟೆ. ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಬೇಸರಗಳು ಒಮ್ಮೆಲೆ ಮೂಡಿ ಏನೂ ಮಾಡಲಾರದಂಥ ಸ್ಥಿತಿಗೆ ತಲುಪಿದೆ. ಥೂ! ಇದ್ಯಾತರ ಬದುಕು? ಇನ್ನು ಮುಂದೆ ಬದುಕಿ ಏನು ಪ್ರಯೋಜನ? ಈ ಕಾಯಿಲೆ ನನಗೆ ಬರಬೇಕಿತ್ತಾ? ಓ ಬದುಕೇ, ನೀನೆಷ್ಟೊಂದು ನಿಷ್ಕರುಣಿ? ಎಂದು ಸಿಟ್ಟು, ಅಸಹನೆಗಳಿಂದ ಕೂಗಿದೆ. ಈ ವಿಷಯವನ್ನು ದೂರದ ಇಂಡಿಯಾದಲ್ಲಿರುವ ಹೆಂಡತಿ ರೇಖಾಳಿಗೆ ನೋವಾಗದಂತೆ ಹೇಳುವದು ಹೇಗೆ? ಕೊನೆಗೂ ಗೆಳೆಯ ಮಂಜುವಿನ ಮೂಲಕ ಹೇಳಿದಾಗ ಒಂದಷ್ಟು ಅತ್ತಳು. ಸಾಕಿನ್ನು ಇಂಡಿಯಾಕ್ಕೆ ವಾಪಾಸು ಬಂದು ಬಿಡು ಎಂದು ಗೋಗರೆದಳು. ನಮಗೇ ಏಕೆ ಬರಬೇಕು? ಎಂದು ಕೇಳಿದಳು. ಉತ್ತರವಿರದ ಪ್ರಶ್ನೆ. ನಾವೆಲ್ಲ ಹಾಗೇನೇ.... ನಮಗೆ ಏನಾದರೊಂದು ಧುತ್ತನೆ ಎರಗಿ ಬಂದಾಗ ನಾವೆಲ್ಲಾ ಕೇಳಿಕೊಳ್ಳುವ ಪ್ರಶ್ನೆ ಒಂದೇ ‘ನಮಗೇ...... ಏಕೆ ಬರಬೇಕು? ನಮಗೇ..... ಏಕೆ ಬರಬೇಕು?’ ಇದು ತರ್ಕಕ್ಕೆ ಸಿಗದ್ದು.

ಎಷ್ಟು ದಿವಸಾಂತ ಇದೇ ಗುಂಗಿನಲ್ಲಿ ಕೂರುವದು? ದಿನನಿತ್ಯದ ಬದುಕಿನೊಂದಿಗೆ ಏಗಲೇಬೇಕಿತ್ತಲ್ಲ? ನಿಧಾನವಾಗಿ ನನ್ನ ಕವಚದೊಳಗಿಂದ ಹೊರಗೆ ಬಂದೆ. ಬಂದಿರುವ ಕಾಯಿಲೆಯನ್ನು ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಂಡೆ. ಮೆಲ್ಲಗೆ ನನಗೆ ಬಂದಿರುವ ಕಾಯಿಲೆಯ ವಿಷಯವನ್ನು ಬೇರೆಯವರೊಂದಿಗೆ ಹಂಚಿ ಹೊರಟೆ. ನನ್ನ ಇಂಡಿಯನ್ ಸಹದ್ಯೋಗಿಗಳೆಲ್ಲಾ “Don’t worry. Diabetes is a richmen’s disease. Feel proud that you have become a rich man” ಎಂದು ತಮಾಷೆ ಮಾಡುವದರ ಜೊತೆಗೆ “ಇಂಥ ಸಣ್ಣ ಕಾಯಿಲೆಗೆಲ್ಲಾ ಯಾಕಿಷ್ಟೊಂದು ಯೋಚನೆ ಮಾಡುತ್ತೀಯ” ಎಂದು ಒಂದಷ್ಟು ಸಾಂತ್ವನ ಹೇಳಿದರು. ನನ್ನ ಜೊತೆ ಕೆಲಸ ಮಾಡುತ್ತಿರುವ ಈಜಿಪ್ಸಿಯನ್ ಪ್ರೊಫೆಸರೊಬ್ಬರೊಂದಿಗೆ ಈ ವಿಷಯವನ್ನು ಹಂಚಿಕೊಂಡಾಗ “ನಿನಗೆ ಮೂವತೈದರಲ್ಲಿ ಬಂದಿದೆ. ನನಗೆ ಇಪ್ಪತೈದಕ್ಕೆ ಬಂತು. ನೀನು ಬರಿ ಟ್ಯಾಬ್ಲೆಟ್ಸ್ ತಗೊಳ್ಳತೀಯಾ. ಆದರೆ ನಾನು ಪ್ರತಿ ದಿವಸ ಇನ್ಸುಲಿನ್ ಇಂಜೆಕ್ಸನ್ ತೆಗೆದುಕೊಳ್ಳುತ್ತೇನೆ. Just start living with your disease without worrying much. So that it will live with you without causing much problems. Treat your disease as your close friend.” ಎಂದು ಹೇಳಿದಾಗ ಮನಸ್ಸಿಗೆ ಎಷ್ಟೋ ಸಮಾಧಾನವಾಗಿತ್ತು. ಇದೇ ವಿಷಯವನ್ನು ದೂರದ ಉಡುಪಿಯಲ್ಲಿರುವ ಗೆಳೆಯ ರಾಘುವಿನೊಂದಿಗೆ ಚಾಟ್ ಮಾಡುವಾಗ ಹಂಚಿಕೊಂಡಾಗ ಅವನು ಹಿಂದೆ ಕೆಲಸ ಮಾಡುತ್ತಿದ್ದ ಅಗ್ರಿಕಲ್ಚರ್ ಕಾಲೇಜಿನಲ್ಲಿ ಅವನ ಸ್ನೇಹಿತನೊಬ್ಬ ಇಪ್ಪತ್ತೊಂದಕ್ಕೆ ಡಯಾಬಿಟಿಸ್ ಪಡೆದು ಪ್ರತಿ ದಿವಸ ಇಂಜೆಕ್ಸನ್ ತೆಗೆದುಕೊಳ್ಳುತ್ತಿದ್ದರೂ ಅವನು ಈಗಷ್ಟೆ ಮದುವೆಯಾಗಿ ಒಂದು ಮಗುವಿನೊಂದಿಗೆ ಹಾಯಾಗಿರುವದು ತಿಳಿಯಿತು. ಇತ್ತೀಚಿಗೆ ಪತ್ರಿಕೆಯೊಂದನ್ನು ಓದುವಾಗ ಲಂಡನ್ನಿನ ವೈದ್ಯರೊಬ್ಬರು ತಮ್ಮ ಇಪ್ಪತ್ತೊಂದನೇ ವಯಸ್ಸಿಗೆ ಮಧುಮೇಹಕ್ಕೆ ತುತ್ತಾಗಿ ಶಿಸ್ತುಬದ್ಧ ಜೀವನದ ಮೂಲಕ ತೊಂಬತ್ತೆರೆಡು ವರ್ಷದವರೆಗೆ ಬದುಕಿದ್ದು ಗೊತ್ತಾಯಿತು. ಅರೆರೆ.. ನನಗಿಂತ ಬೇರೆಯವರು ಅದೇ ಕಾಯಿಲೆಯೊಂದಿಗೆ ದೊಡ್ದ ಸಮಸ್ಯೆಯೊಂದಿಗೆ ಏಗುತ್ತಾ ಇರುವವರು ಹಾಯಾಗಿದ್ದಾರೆ. ನಾನೇಕೆ ಹೀಗಿದ್ದೇನೆ? ನಾವು ನಮ್ಮ ಸಮಸ್ಯೆಗಳನ್ನೇ ದೊಡ್ದವೆಂದು ಪರಿಗಣಿಸಿ ಇಲ್ಲಿಗೆ ಬದುಕು ಮುಗಿದೇ ಹೋಯಿತು ಎಂದು ಕುಳಿತು ಬಿಟ್ಟಿರುತ್ತೇವೆ. ಆದರೆ ನಮ್ಮ ಸಮಸ್ಯೆಯನ್ನು ನಮ್ಮೊಳಗೆ ಬಚ್ಚಿಟ್ಟುಕೊಳ್ಳಲಾರದೆ ಬೇರೆಯವರೊಂದಿಗೆ ಹಂಚಿ ಹೊರಟಾಗ ಅವರ ಸಮಸ್ಯೆಗಳ ಮುಂದೆ ಅವರ ಅನುಭವಗಳ ಮುಂದೆ ನಮ್ಮದೇನೂ ಅಲ್ಲವೇ ಅಲ್ಲ ಎನಿಸುತ್ತದೆ.

ಇಂಥ ಸಂದರ್ಭದಲ್ಲಿಯೇ ದೇಹದ ಎಲ್ಲ ಅಂಗಗಳು ಸ್ವಾಸ್ಥ್ಯ ಕಳೆದುಕೊಂಡಿದ್ದರೂ ಬರಿ ಮೆದುಳೊಂದನ್ನು ಮುಂದಿಟ್ಟುಕೊಂಡು ಏನೆಲ್ಲ ಸಾಧಿಸಿದ ಸ್ಟಿಫನ್ ಹಾಕಿಂಗ್ ನೆನಪಾಗುತ್ತಾರೆ. ಒಳಗೆ ಬರಲೆ? ಎಂದ ಸಾವನ್ನು ತೊಲಗಾಚೆ ಎಂದು ಹೊಸ್ತಿಲಿನಿಂದ ಹೊರಹಾಕಿದ ನಿರಂಜನ ದಂಪತಿಗಳು ಕ್ಯಾನ್ಸರ್ ಹಾಗೂ ಪಾರ್ಶ್ವವಾಯುವನ್ನು ಬಗಲಲ್ಲಿಟ್ಟುಕೊಂಡೇ ಸಾಹಿತ್ಯ ಕ್ಷೇತ್ರದಲ್ಲಿ ಬಲು ದೊಡ್ದ ಹೆಸರು ಮಾಡಿದ್ದು ಕಣ್ಣಮುಂದೆ ಬರುತ್ತದೆ. ತನ್ನ ಮಧ್ಯ ವಯಸ್ಸಿನಲ್ಲಿ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡು “On His Blindness” ಎನ್ನುವ ಅದ್ಬುತ ಕವನವನ್ನು ಬರೆದ ಖ್ಯಾತ ಇಂಗ್ಲೀಷ್ ಕವಿ ಜಾನ್ ಮಿಲ್ಟನ್ನH ಸೃಜನಶೀಲತೆ ನೆನಪಾಗುತ್ತದೆ. ಇಂಥವರ ಸಾಧನೆಯ ಮುಂದೆ, ಕಾಯಿಲೆಯ ಮುಂದೆ ನಮ್ಮದೇನೂ ಅಲ್ಲ ಎನಿಸುತ್ತದೆ. ಇಂಥವರೇ ನಮಗೆ ಸ್ಪೂರ್ತಿಯಾಗುತ್ತರೆ, ಮಾದರಿಯಾಗುತ್ತಾರೆ. ಅಂಥವರ ಬದುಕು ನಮಗೊಂದಿಷ್ಟು ಪಾಠ ಕಲಿಸುವದರ ಮೂಲಕ ಚೇತೋಹಾರಿಯಾಗುತ್ತದೆ.

ಇತ್ತೀಚಿಗೆ ವಿಷ್ಣುವರ್ಧನ್ ಸಾವಿನ ನಂತರ ಅವರ ಸಕ್ಕರೆ ಕಾಯಿಲೆ ಬಗ್ಗೆ ಅವರ ಆಪ್ತ ಸ್ನೇಹಿತ ಅಂಬರೀಷ್ ಟೀವಿ ಚಾನೆಲ್ವೊಂನದರಲ್ಲಿ ಮಾತನಾಡುತ್ತ “ಡಯಾಬಿಟಿಸ್ ಒಳ್ಳೆ ಕಾಯಿಲೆ. ಏಕೆಂದರೆ ಅದು ನಮ್ಮ ಲೈಫ್ ಸ್ಟೈಲ್ನ್ನೇಅ ಬದಲಾಯಿಸುತ್ತದೆ. ಪ್ರತಿದಿವಸ ವಾಕಿಂಗ್, ಹಿತಮಿತವಾದ ಊಟ, ಸದಾ ಎಚ್ಚರಿಕೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವದರಿಂದ ನಾವು ಇನ್ನೂ ಹೆಚ್ಚಿನ ದಿವಸ ಬದುಕಬಲ್ಲೆವು” ಎಂದು ಹೇಳಿದ್ದನ್ನು ಕೇಳಿದ್ದೆ. ನಾನು ಕೂಡ ನನ್ನ ಲೈಫ್ ಸ್ಟೈಲ್ನ್ನುೆ ಬದಲಾಯಿಸಿಕೊಂಡಿದ್ದೇನೆ. ಪ್ರತಿನಿತ್ಯ ಹಿತಮಿತವಾದ ಊಟ, ಒಂದಷ್ಟು ವಾಕಿಂಗ್, ಯೋಗ ಎಲ್ಲವನ್ನೂ ಚಾಚೂ ತಪ್ಪದೇ ಮಾಡುತ್ತೇನೆ. ಇದೀಗ ನನ್ನ ಕಾಯಿಲೆ ನನ್ನ ಆತ್ಮೀಯ ಗೆಳೆಯನಾಗಿದೆ. ಬದುಕು ಯಥಾಸ್ಥಿತಿಗೆ ಮರಳಿದೆ, ಸಹ್ಯವಾಗಿದೆ, ಆಪ್ತವಾಗಿದೆ. ಒಂದಷ್ಟು ವಿಶ್ವಾಸ, ಗೆಲವು ಮೂಡಿದೆ. ಹೊಸ ಹೊಸ ಕನಸುಗಳು ರಂಗೇರುತ್ತಿವೆ. ಇದೀಗ ಮತ್ತೆ ಮತ್ತೆ ಕೇಳುತ್ತೇನೆ “ಬದುಕೇ, ನಿನ್ನಲ್ಲೆಂಥಾ ಮುನಿಸು ನನಗೆ? ನಿನ್ನಲ್ಲೆಂಥಾ ಮುನಿಸು ನನಗೆ?” ಎಂದು.

ವಿ.ಸೂ: ನನ್ನ ಕಣ್ಣುಗಳು ಇನ್ನೂ ಸ್ವಲ್ಪ ಮಂಜು ಮಂಜಾಗಿರುವದರಿಂದ ನಿಮ್ಮ ಬ್ಲಾಗುಗಳಿಗೆ ಬಣ್ದು ಕಾಮೆಂಟಿಸುವದು ಸಾಧ್ಯವಾಗುತ್ತಿಲ್ಲ. ಈ ಪೋಸ್ಟಿಂಗನ್ನು ಫಾಂಟ್ ಸೈಜ್ ದೊಡ್ಡದು ಮಾಡಿ ಬ್ಲಾಗಿಸಿರುವೆ. ಎಲ್ಲ ಸರಿ ಹೋದ ಮೇಲೆ ನಿಮ್ಮ ಬ್ಲಾಗುಗಳಿಗೆ ಭೇಟಿ ನೀಡುತ್ತೆನೆ. ಅಲ್ಲಿಯವರೆಗೆ ಕ್ಷಮೆಯಿರಲಿ.

-ಉದಯ್ ಇಟಗಿ

Thursday, December 31, 2009

ಹೊಸವರ್ಷಕ್ಕೆ ಪ್ರತಿಭಾ ನಂದಕುಮಾರವರ ಒಂದು ಹಳೆಯ ಪದ್ಯ

ನಾನು ಬಾಲ್ಯದಲ್ಲಿರಬೇಕಾದರೆ ಹೊಸವರ್ಷವೆಂದರೆ ಕೇವಲ ಗಡಿಯಾರದ ಮುಳ್ಳು ಸರಿಯುವದಷ್ಟೆ ಎಂದುಕೊಂಡಿದ್ದೆ. ನಾನು ಮಾತ್ರವಲ್ಲ ನನ್ನ ಓರಗೆಯವರು ಹಾಗೂ ದೊಡ್ಡವರೂ ಅದನ್ನೇ ಅಂದುಕೊಂಡಿದ್ದರು. ಏಕೆಂದರೆ ನಾನು ಬೆಳೆದಿದ್ದು ಒಂದು ಚಿಕ್ಕ ಹಳ್ಳಿ ಕಲಕೋಟಿಯಲ್ಲಿ. ಹೀಗಾಗಿ ಅಲ್ಲಿ ಹೊಸವರ್ಷವನ್ನು ಸ್ವಾಗತಿಸುವ ಸಡಗರ, ಸಂಭ್ರಮಗಳ ‘ನಾಗರಿಕತೆ’ ಆ ಊರಿಗೆ ಇನ್ನೂ ಕಾಲಿಟ್ಟಿರಲಿಲ್ಲ. ಹೀಗಾಗಿ ಹೊಸವರ್ಷದ ದಿನವೂ ಸಹ ಎಲ್ಲ ದಿನಗಳಂತೆ ಯಾವುದೇ ವಿಶೇಷವಿಲ್ಲದೆ ಕಳೆದು ಹೋಗುತ್ತಿತ್ತು. ಮುಂದೆ ನಾನು ಗದಗ್ಗೆು ಬಂದೆ. ಅದು ಆಗಿನ್ನೂ ತಾಲೂಕ ಕೇಂದ್ರವಾಗಿತ್ತು. ಅಲ್ಲಿ ಕೂಡ ಹೊಸವರ್ಷದ ದಿನದಂದು ಹೇಳಿಕೊಳ್ಳುವಂಥ ಆಚರಣೆಗಳು ನಡೆಯದಿದ್ದರೂ atleast ಪರಸ್ಪರ ಶುಭಾಷಯಗಳನ್ನು ಹೇಳುವ ಪದ್ದತಿಯಿತ್ತು. ಮುಂದೆ ಪಿ.ಯು.ಸಿಗೆ ಧಾರವಾಡಕ್ಕೆ ಬಂದಾಗಲೂ ನಾನು ಯಾವುದೇ ತರದ ಆಚರಣೆಗಳನ್ನು ಮಾಡಲಿಲ್ಲ. ಬಹುಶಃ ಅದಕ್ಕೆ ಹೇಳಿಕೊಳ್ಳುವಂಥ ಆತ್ಮೀಯ ಸ್ನೇಹಿತರ ಕೊರತೆ ಇದ್ದಿರಬಹುದು.


ಧಾರವಾಡದಿಂದ ನಾನು ಡಿಗ್ರಿ ಮಾಡಲು ಮಂಡ್ಯಕ್ಕೆ ಬಂದಾಗ ಅಲ್ಲಿ ಒಂದು ಸ್ನೇಹಿತರ ಗುಂಪಿಗೆ ಸೇರ್ಪಡೆಯಾದೆ. ಆ ಗುಂಪಿನವರಲ್ಲಿಯೇ ಇಬ್ಬರಾದ ಮಂಜು ಮತ್ತು ರಾಘು ಇಂದಿಗೂ ಕೂಡ ಜೀವದ ಗೆಳೆಯರಾಗಿ ಮುಂದುವರಿಯುತ್ತಿದ್ದಾರೆ. ಅವರೊಂದಿಗೆ ಒಂದು ವರ್ಷ ಸೇರಿ ಆಚರಿಸಿದ್ದೆ. ನನಗೆ ಅದು ಮೊಟ್ಟ ಮೊದಲ ಬಾರಿಗೆ ಒಂದು ಪಾರ್ಟಿಯೆಂದರೆ ಹೇಗಿರುತ್ತದೆ ಎನ್ನುವ ಅನುಭವವವನ್ನು ಕೊಟ್ಟಿದ್ದು ಬಿಟ್ಟರೆ ಹೇಳಿಕೊಳ್ಳುವಂಥ ಖುಶಿ ಕೊಟ್ಟಿರಲಿಲ್ಲ. ಡಿಗ್ರಿ ಮುಗಿದ ಮೇಲೆ ಬದುಕು ಹುಡುಕಿಕೊಂಡು ಬೆಂಗಳೂರಿಗೆ ಬಂದ ಹೊಸತರಲ್ಲಿ ನಾನು ಮತ್ತು ನನ್ನ ಆತ್ಮೀಯ ಸ್ನೇಹಿತ ಮಂಜು ಇಬ್ಬರೇ ಸೇರಿ ಆಚರಿಸಿದ್ದೆವು. ನಂತರ ಉದ್ಯೋಗದಲ್ಲಿ ಮುಂದುವರೆದು ಒಂದಷ್ಟು ದುಡ್ಡು ಕೈಯಲ್ಲಿ ಓಡಾಡತೊಡಗಿದಾಗ ಗೆಳೆಯರೆಲ್ಲ ಸೇರಿ ಬೇರೆ ಬೇರೆ ಕಡೆ ಹೋಗಿ ಪಾರ್ಟಿ ಮಾಡಿದ್ದಿದೆ. ಆದರೆ ನಾನು ಆ ಪಾರ್ಟಿಗಳಲ್ಲಿ ಪೂರ್ಣ ಮನಸ್ಸಿನಿಂದ ಭಾಗವಹಿಸುತ್ತಿರಲಿಲ್ಲ. ಏಕೆಂದರೆ ಹೊಸವರ್ಷ ನನಗೆ ಯಾವತ್ತೂ ವಿಶೇಷ ದಿನವಾಗಿ ಕಾಣಿಸಿಯೇ ಇಲ್ಲ. ಇದಕ್ಕೆ ಸರಿಯಾದ ಕಾರಣವೇನೆಂದು ಈವರೆಗೂ ತಿಳಿದಿಲ್ಲ. ಬರು ಬರುತ್ತಾ ನಾವು ಸ್ನೇಹಿತರು ಪಾರ್ಟಿ ಮಾಡುವದನ್ನು, ಗ್ರೀಟಿಂಗ್ಸ್ ಕಳಿಸುವದನ್ನೂ ನಿಲ್ಲಿಸಿಬಿಟ್ಟೆವು. ಹಾಗಂತ ನಮ್ಮ ನಡುವೆ ಇರುವ ಆತ್ಮೀಯತೆ ನಿಂತಿಲ್ಲ. ಅದು ದಿನದಿಂದ ದಿನಕ್ಕೆ ಬಲಗೊಳ್ಳುತ್ತಲೇ ಇದೆ. ಬಹುಶಃ ಹೊಸ ವರ್ಷವೆಂದರೆ ಕೇವಲ ಗಡಿಯಾರದ ಮುಳ್ಳು ಸರಿದು ಹೋಗುವದಷ್ಟೇ ಎನ್ನುವ ಸತ್ಯವನ್ನು ಕಂಡುಕೊಂಡೆವೆ? ಗೊತ್ತಿಲ್ಲ.

ಇದೇ ಭಾವವನ್ನು ಬಿಂಬಿಸುವ ಪ್ರತಿಭಾ ನಂದಕುಮಾರವರ ಒಂದು ಹಳೆಯ ಪದ್ಯ ‘ಹೊಸವರ್ಷ’ ಮೊನ್ನೆ ನನ್ನ ಹಳೆಯ ಡೈರಿಯಲ್ಲಿ ಸಿಕ್ಕಿತು. ಯಾಕೋ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದ್ದರಿಂದ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದು ನಿಮಗೆ ಇಷ್ಟವಾಗದಿರಬಹುದು.

ಹೊಸವರ್ಷ

ಹೊಸವರ್ಷ ಬರುತ್ತೆ ಹೊಸವರ್ಷ ಬರುತ್ತೆ

ಅಂತ ಬೆಳಗ್ಗಿನಿಂದ ನನ್ನ ನಾಲ್ಕು ವರ್ಷದ ಮಗಳು

ಹುಮ್ಮಸ್ಸಿನಿಂದ ಕಾದಳು.



ನೋಡೋಕೆ ಹೇಗಿರುತ್ತಮ್ಮ

ನೀನು ನೋಡಿದ್ದೀಯಾಮ್ಮಾ

ಮಕ್ಕಲನ್ನು ಹೆದರಿಸುತ್ತಾಮ್ಮ

ಬಚ್ಚಿಟ್ಟುಕೊಳ್ಳಲೇನಮ್ಮ

ಎಂದು ಆತಂಕದಲಿ ಚಡಪಡಿಸಿದಳು.



ರಾತ್ರಿ ಹನ್ನೆರಡಕ್ಕೆ ಬರುತ್ತೇ-

ಸುಮ್ನೆ ಇರು ಗಲಾಟೆ ಮಾಡ್ದೆ

ಊಟ ತಿಂಡಿ ಹಾಲು ಮುಗಿಸಿಬಿಡು ತೆಪ್ಗೆ

ಎಂದು ನಾನೂ ಸಂದರ್ಭ ಉಪಯೋಗಿಸಿಕೊಂಡೆ.



ವರ್ಷದ ಕೊನೆಯ ದಿನವಿಡೀ ಹಾರಾಡಿ

ಕೊನೆಗೆ ರಾತ್ರಿ ಟೀವಿಯ ಮುಂದೆ ಕೂತೆವು

ಆಕಳಿಸಿ ತೂಕಡಿಸಿ ಕಣ್ಣು ಮಿಟುಕಿಸುತ್ತ

ಪಿಳಪಿಳನೆ ಟೀವಿಯಲ್ಲಿ ಕಣ್ಣುನೆಟ್ಟು

ಹೊಸವಷಕ್ಕೆ ಕಾದೆವು

ನಿದ್ದೆ ತಡೆಯದ ಮಗಳು ಪವಡಿಸಿದಳು.



ಏನೇನೋ ಕಾಯಕ್ರಮಗಳ ನಂತರ

ನಡುರಾತ್ರಿ ಸರಿಯಾಗಿ

ಟೀವಿಯಲ್ಲೆಲ್ಲ ಗದ್ದಲ

ಹೊರಗೆ ಪಟಾಕಿ ಸಿಡಿಮದ್ದು

ಹೋಯೆಂದೆವು ನಾವೆಲ್ಲ

ಎಚ್ಚೆತ್ತ ಮಗಳು ಏನಮ್ಮ ಏನಮ್ಮ ಅಂದಳು.

ನೋಡು ಹನ್ನೆರಡಾಯಿತು

ಹಳೆವರ್ಷ ಸರಿದುಹೋಯಿತು

ಹೊಸವರ್ಸ ಕಾಲಿಟ್ಟಿತು ಎಂದೆ.



ಟೀವಿ ಪರದೆಯಲ್ಲಿ ನೋಡಿ

ಹೊಸವರ್ಷ ಅಂದರೆ ಗಡಿಯಾರ ಏನಮ್ಮ

ಅದು ಯಾವಾಗ್ಲೂ ಓಡುತ್ತಿರತ್ತಾಲ್ಲಾಮ್ಮಾ

ಎಂದು ಪೆಚ್ಚಾಗಿ ಪುನಃ ನಿದ್ದೆ ಹೋದಳು



ಮಾರನೆಯ ದಿನ

ಹೊಸವರ್ಷ ಅಂದರೆ ಏನಿಲ್ಲ ತಾತಾ

ಗಡಿಯಾರದ ಮುಳ್ಳು ತಿರುಗೋದು ಅಷ್ಟೇ

ಎಂದು ತಾತನಿಗೆ ಬೋಧಿಸುತ್ತಿದ್ದಳು.



ಅಷ್ಟೇಮ್ಮಾ ಅಷ್ಟೆ ಎಂದರು ಅವರು

ಬೊಚ್ಚು ಬಾಯಗಲಿಸಿ.



-ಪ್ರತಿಭಾ ನಂದಕುಮಾರ್

Wednesday, December 30, 2009

ಘರ್ಜನೆ ನಿಲ್ಲಿಸಿದ ಸಿಂಹ

ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಗರಬಡಿದಂತೆ ಕಾಣುತ್ತಿದೆ. ವರ್ಷಾಂತ್ಯದ ಕೊನೆಯಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಸಾಂಸ್ಕೃತಿಕ ಕೊಡುಗೆಯನ್ನು ನೀಡಿದ ಗಣ್ಯಾತಿಗಣ್ಯರನ್ನು ಕಳೆದುಕೊಳ್ಳುತ್ತಿದ್ದೇವೆ. ನಿನ್ನೆಯಷ್ಟೆ ಅಶ್ವತ್ಥ್ ಹೋದರು. ಇಂದು ಕನ್ನಡದ ಮೇರು ನಟ ವಿಷ್ಣುವರ್ಧನ. ಯಾಕೋ ಮಾತೇ ಹೊರಡುತ್ತಿಲ್ಲ. ಒಂದಾದ ಮೇಲೊಂದರಂತೆ ಬರಸಿಡಿಲು ಬಂದು ಬಡಿಯುತ್ತಿದ್ದರೆ ಮಾತು ಹೊರಡುವದಾದರು ಹೇಗೆ? ಹೆಪ್ಪುಗಟ್ಟಿದ ಎದೆಯೊಳಗಿನ ನೋವನ್ನು ಹೊರಹಾಕುವದಾದರೂ ಹೇಗೆ?


‘ವಂಶವೃಕ್ಷ’ದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ನಾಗರ ಹಾವಿನ ರಾಮಾಚಾರಿಯಾಗಿ ಮೆರೆದು, ಕನ್ನಡಿಗರ ಮನದ ಬಂಧನದಲ್ಲಿ ಸಿಲುಕಿ, ಮುತ್ತಿನಹಾರ ಹಾಕಿಕೊಂಡು ಕನ್ನಡ ಚಿತ್ರರಂಗದ ಯಜಮಾನನಾಗಿ, ಕನ್ನಡಿಗರ ಆಪ್ತಮಿತ್ರನಾಗಿ ಬೆಳೆದ ಈ ಕೋಟಿಗೊಬ್ಬನ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತೇನೆ.

ಓ ದೇವರೆ! ನಾಳೆ ಬೆಳಿಗ್ಗೆ ಮತ್ತೆ ಇಂಥದೇ ಕೆಟ್ಟ ಸುದ್ದಿಯನ್ನು ಕರುಣಿಸದಿರು.

Tuesday, December 29, 2009

ಗಿಳಿಯು ಪಂಜರದೊಳಿಲ್ಲ

ಪ್ರೀತಿಯ ಅಶ್ವತ್ಥ್ ಅವರೆ,


ನಿಮ್ಮ ಸಾವಿನ ಸುದ್ದಿ ನನ್ನ ಮೈ ಮನಸ್ಸುಗಳೆರಡನ್ನೂ ಶೂನ್ಯವಾಗಿಸಿಬಿಟ್ಟಿದೆ. ಮನದೊಳಗಿನ ನೋವು ಮುಖದಲ್ಲಿ ಎದ್ದು ಕಾಣುತ್ತಿದೆ. ಕಣ್ಣೀರು ಕಂಡೂ ಕಾಣದಂತೆ ತಾನೇ ತಾನಾಗಿ ಹರಿಯುತ್ತಿದೆ. ಇಲ್ಲಿ ಎಲ್ಲರೂ ಯಾಕೆ ಯಾಕೆ ಎಂದು ಕೇಳುತ್ತಿದ್ದಾರೆ. ಹೇಗೆ ಹೇಳಲಿ ಅವರಿಗೆ ನೀವಿಲ್ಲದೆ ಉಂಟಾದ ತಳಮಳವನ್ನು? ಹೇಗೆ ಹೇಳುವದು ಅವರಿಗೆ ನೀವಿಲ್ಲದೆ ಸ್ಮಶಾನವಾಗಿದೆ ಮನದಂಗಳ ಎಂದು. ಹೇಗೆ ಹೇಳಲಿ ಅವರಿಗೆ ನಮ್ಮ ನಾಡಿನ ಮುದ್ದಿನ ಗಿಳಿಯೊಂದು ಪಂಜರದೊಳಗಿಂದ ಹಾರಿ ಹೋಗಿದೆ ಎಂದು. ಏನ ಹೇಳಲಿ ಅವರಿಗೆ ನಿಮ್ಮ ಸಾಧನೆಯ ಬಗ್ಗೆ. ಹೇಗೆ ತಿಳಿಸಲಿ ಅವರಿಗೆ ನಿಮ್ಮ ಹಾಡುಗಳ ಬಗ್ಗೆ. ದೂರದ ಲಿಬಿಯಾದಲ್ಲಿ ಕುಳಿತು ಮನಸ್ಸು ಒಂದೇ ಸಮನೆ ನಿಡುಸೊಯ್ಯುತಿದೆ ನೀವಿಲ್ಲದ ಸುದ್ದಿ ಕೇಳಿ. ಛೇ, ನಾನು ಬೆಂಗಳೂರಿನಲ್ಲಿದ್ದಿದ್ದರೆ ನಿಮ್ಮ ಅಂತ್ಯಕ್ರಿಯೆಯಲ್ಲಾದರೂ ಪಾಲುಗೊಳ್ಳಬಹುದಿತ್ತಲ್ಲವೆ? ಅಂತಿಮ ದರ್ಶನವನ್ನಾದರು ಪಡೆಯಬಹುದಿತ್ತು. ಏನು ಮಾಡುವದು? ಟೀವಿ ಚಾನೆಲ್ಗಬಳಲ್ಲಿ ತೋರಿಸುವ ನಿಮ್ಮ ಅಂತ್ಯಕ್ರಿಯೆಯ ನೇರ ಪ್ರಸಾರವನ್ನು ನೋಡಿ ಇಲ್ಲಿಂದಲೇ ನಿಮಗೊಂದು ಕಂಬನಿ ಮಿಶ್ರಿತ ಅಂತಿಮ ವಿದಾಯವನ್ನು ಹೇಳಿದ್ದೇನೆ.

ಮೊನ್ನೆ ನವೆಂಬರ್ ೧ ರಂದು ಸುವರ್ಣ ಚಾನೆಲ್ನಹಲ್ಲಿ ಪ್ರಸಾರವಾದ ನಿಮ್ಮ ಸಂದರ್ಶನವೊಂದರದಲ್ಲಿ ಹಾಡುತ್ತಿರುವಾಗ ಏಕೋ ನಿಮ್ಮ ಧ್ವನಿ ನಡುಗುತ್ತಿರುವದನ್ನು ನೋಡಿ ಅಶ್ವತ್ಥ್ ಅವರಿಗೆ ವಯಸ್ಸಾಯಿತು. ಇನ್ಮುಂದೆ ಅಶ್ವತ್ಥ್ ಅವರು ಹಾಡುವದನ್ನು ನಿಲ್ಲಿಸಿದರೆ ಒಳಿತು ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡಿದ್ದೆ. ಛೇ, ಅದ್ಯಾವ ಗಳಿಗೆಯಲ್ಲಿ ಹಾಗೆಂದುಕೊಂಡೆನೋ ಕಾಕತಾಳಿಯವೆಂಬಂತೆ ನೀವು ಹಾಡುವದನ್ನು ನಿಲ್ಲಿಸಿ ಹೋಗಿ ಬಿಟ್ಟಿರಿ. ಆ ಗಿಲ್ಟ್ ನನ್ನನ್ನು ಬೆಳಿಗ್ಗೆಯಿಂದ ಕ್ಷಣ ಕ್ಷಣವೂ ಹಿಂಡಿಹಿಪ್ಪಿ ಮಾಡುತ್ತಿದೆ. ನಾನು ಹಾಗೆ ಅಂದುಕೊಂಡ ಕೇವಲ ಒಂದು ತಿಂಗಳ ಅಂತರದಲ್ಲಿಯೇ ಆಸ್ಪತ್ರೆಗೆ ದಾಖಲಾದಿರಿ. ಇದು ನಮಗೆಲ್ಲ ಅನಿರೀಕ್ಷೀತ ಆಘಾತವಾಗಿತ್ತು. ಆಸ್ಪತ್ರೆಗೆ ದಾಖಲಾದವರು ಬೇಗ ಗುಣಮುಖರಾಗುತ್ತೀರಿ, ಅಲ್ಲಿಂದ ಎದ್ದು ಬಂದು ರೇ.. ರೇ.. ರೇ.. ಎಂದು ಹಾಡುತ್ತಾ ಮತ್ತೆ ನಮ್ಮನ್ನೆಲ್ಲ ನಿಮ್ಮ ರಾಗಗಳೊಂದಿಗೆ ಕುಣಿಸಿತ್ತೀರಿ, ಇನ್ನಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡುತ್ತೀರಿ ಎಂದೆಲ್ಲಾ ನಿರೀಕ್ಷಿಸಿದ್ದೆವು. ಆದರೆ ನಮ್ಮನ್ನೆಲ್ಲ ನಿರಾಶೆಗೊಳಿಸಿ ನೇರವಾಗಿ ಸಾವಿನ ಮನೆಗೆ ನಡೆದುಬಿಟ್ಟಿರಿ. ಹೇಳಿ, ಹಾಡಿ ಹಾಡಿ ಬೇಸರವಾಗಿತ್ತೆ ನಿಮಗೆ? ಅಥವಾ ವಿಧಿ ನಿಮ್ಮ ಹಾಡು ಕೇಳಲು ನಿಮ್ಮನ್ನು ಬಲವಾಗಿ ಎಳೆದೊಯ್ಯಿತೇ? ಕಾರಣ ಹೇಳದೆ ಹೋಗಿಬಿಟ್ಟಿರಿ.

ಹಾಗೆ ನೋಡಿದರೆ ನಾನು ಸುಗಮ ಸಂಗೀತದೆಡೆಗೆ ಆಕರ್ಷಿತನಾಗಿದ್ದು ನಿಮ್ಮ ಧ್ವನಿಯಿಂದಲೇ! ನಿಮಗಿಂತ ಮೊದಲೇ ಇದ್ದ ಅನಂತಸ್ವಾಮಿಯವರ ಧ್ವನಿಯನ್ನು ನಾನು ಕೇಳಿದ್ದು ನಿಮ್ಮ ಧ್ವನಿಯನ್ನು ಕೇಳಿದ ಮೇಲೆ. ಅದೇಕೋ ಅನಂತಸ್ವಾಮಿಯವರಿಗಿಂತ ನಿಮ್ಮ ಧ್ವನಿಯೇ ತುಂಬಾ ಇಷ್ಟವಾಯಿತು. ನನಗೆ ಮಾತ್ರವಲ್ಲ ಬಹಳಷ್ಟು ಕನ್ನಡಿಗರಿಗೆ ಕೂಡ ನಿಮ್ಮ ಧ್ವನಿ ಇಷ್ಟವಾಯಿತು, ಏಕೆಂದರೆ ಅಂಥದೊಂದು ಮಾಂತ್ರಿಕ ಶಕ್ತಿ ನಿಮ್ಮ ಧ್ವನಿಗಿತ್ತು. ಅನಂತಸ್ವಾಮಿಯರ ಸಾವಿನೊಂದಿಗೆ ಸುಗಮ ಸಂಗೀತ ಕ್ಷೇತ್ರ ಬಡವಾಯಿತೆಂದುಕೊಂಡರೂ ಜನ, ಹೇಗೂ ಅಶ್ವಥ್ ಇದಾರಲ್ಲ! ಆ ಕೊರತೆಯನ್ನು ನೀಗಿಸುತ್ತಾರೆ ಎಂದುಕೊಂಡು ಸುಮ್ಮನಾದರು. ನೀವು ಖಂಡಿತವಾಗಿ ಆ ಕೊರತೆಯನ್ನು ನೀಗಿಸಿಬಿಟ್ಟಿರಿ. ಮಾತ್ರವಲ್ಲ ಮುಂದೆ ನೀವದನ್ನು ಹೊಸ ಹೊಸ ಪ್ರಯೋಗಗಳೊಂದಿಗೆ ಉಚ್ಛ್ರಾಯ ಸ್ಥಿತಿಗೆ ತಂದಿರಿ. ಆದರೆ ಈಗ ನಿಮ್ಮ ಸಾವಿನೊಂದಿಗೆ ಆ ಕೊರತೆ ದಟ್ಟವಾಗಿ ಎದ್ದು ಕಾಣುತ್ತಿದೆ. ನಿಮ್ಮ ನಂತರದ ಸುಗಮ ಸಂಗೀತ ಕ್ಷೇತ್ರದ ದಿಗ್ಗಜರು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಕನ್ನಡನಾಡಿನ ಶ್ರೇಷ್ಟ ಹಾಗೂ ಉದಯೋನ್ಮುಖ ಕವಿಗಳ ಕವಿತೆಗಳನ್ನು ಮನೆ ಮನೆಗೆ ತಲುಪಿಸುವದರ ಮೂಲಕ ನೀವು ಮನೆ ಮಾತಾಗಿಬಿಟ್ಟಿರಿ. ಬಹುಶಃ ನಿಮ್ಮ ಹಾಡುಗಳನ್ನು ಜನ ಕೇಳಿದ ಮೇಲೆಯೇ ಕವಿಗಳನ್ನು ಮುಗಿಬಿದ್ದು ಓದತೊಡಗಿದರು. ಮುಂದೆ ಎಂದೂ ಕೇಳಿರದ ಶಿಶುನಾಳ ಶರೀಫರ್ ತತ್ವ ಪದಗಳಿಗೆ ನಿಮ್ಮದೇ ಆದಂಥ ವಿಶಿಷ್ಟ ಶೈಲಿಯ ಸಂಗೀತವನ್ನು ಅಳವಡಿಸಿ ಹಾಡುವದರ ಮೂಲಕ ನಾಡಿನ ಜನಮನವನ್ನು ಗೆದ್ದುಬಿಟ್ಟಿರಿ. ನೇಗಿಲ ಯೋಗಿ ಹಾಡಿನ ಮೂಲಕ ಈ ನಾಡಿನ ರೈತರ ಕಣ್ಮಣಿಯಾಗಿಬಿಟ್ಟಿರಿ. ನೀವು ಹಾಡುತ್ತಾ ಹಾಡುತ್ತಾ ಇಡಿ ನಾಡಿನ ಜನಸಾಗರವನ್ನೇ ಸುಗಮ ಸಂಗೀತದಲ್ಲಿ ಮುಳುಗಿಸಿಬಿಟ್ಟಿರಿ, ಅದಕ್ಕೆ ಬೆಂಗಳೂರು ಮತ್ತು ನಾಡಿನ ಇತರ ಭಾಗಗಳಲ್ಲಿ ನಡೆಸಿದ ನಿಮ್ಮ ಸುಗಮ ಸಂಗೀತದ ಕಛೇರಿಗಳೇ ಸಾಕ್ಷಿ. ಕನ್ನಡದ ಗಂಧ ಗಾಳಿಯೂ ಗೊತ್ತಿಲ್ಲದ ಎಷ್ಟೊ ಸಾಫ್ಟವೇರ್ ಇಂಜಿನೀಯರಗಳು ಸಹ ನಿಮ್ಮ ಸಂಗೀತ ಕಛೇರಿಗಳಿಗೆ ಮುಗಿಬಿದ್ದು ಬರತೊಡಗಿದರು. ನಿಮ್ಮ ಹಾಡು ಕೇಳುತ್ತಾ ಕೇಳುತ್ತಾ ನಿಮ್ಮೊಂದಿಗೆ ತಾವು ಹಾಡುತ್ತಾ ಧನ್ಯರಾದರು. ನೀವು ‘ಕನ್ನಡ ಸತ್ಯವೇ’ ಹಾಡನ್ನು ಹಾಡುತ್ತಿದ್ದರೆ ಎಲ್ಲರಲ್ಲೂ ಕನ್ನಡದ ಕಿಚ್ಚು ತಾನೇ ತಾನಾಗಿ ಹೊತ್ತಿಕೊಳ್ಳುತ್ತಿತ್ತು. ಅದಲ್ಲದೇ ಶಿಶುನಾಳ್ ಶರೀಫ್ರಎ ‘ತರವಲ್ಲ ತೆಗಿ’ ಹಾಡಿನ ರೆರೇ... ರೇ... ಎಂಬ ಆಲಾಪನೆ ಎತ್ತಿಕೊಳ್ಳುತ್ತಿದ್ದಂತೆ ನೆರೆದ ಇಡಿ ಜನಸಾಗರವೇ ಯಾವುದೇ ಸಮ್ಮೋಹನಕ್ಕೊಳಗಾದಂತೆ ಹುಚ್ಚೆದ್ದು ಕುಣಿಯುತ್ತಿದ್ದರು.

ಅಶ್ವತ್ಥ್ ಅವರಿಗೆ ಅಶ್ವಥ್ರೇಣ ಸಾಟಿ ಎಂದು ಜನ ನಿಮ್ಮ ಬಗ್ಗೆ ಹೇಳುತ್ತಿದ್ದರೂ ನೀವೊಬ್ಬ ಮುಂಗೋಪಿ, ದುರಂಕಾರಿ, ಪ್ರಚಾರ ಪ್ರಿಯ, ಹಾಡಿದ್ದ ಹಾಡನ್ನು ಇನ್ನೊಮ್ಮೆ ಹಾಡುವಾಗ ಸ್ವಲ್ಪ ಬದಲಾಯಿಸಿ ಹಾಡುತ್ತಾರೆ, ಧಾರವಾಡ ಕನ್ನಡದ ಹಾಡುಗಳನ್ನು ಅದರ accentನ್ನು ಕೆಡಿಸಿ ಹಾಡುತ್ತಾರೆ ಎನ್ನುವ ಆಪಾದನೆಗಳು ನಿಮ್ಮ ಮೇಲೆ ಇದ್ದವು. ಆದರೆ ಅವೆಲ್ಲ ನಿಮ್ಮ ಕಂಚಿನ ಕಂಠದ ಮುಂದೆ ಹಾಗೂ ಸಾಧನೆಗಳ ಮುಂದೆ ಗೌಣವಾಗಿಬಿಟ್ಟವು. ನೀವು ಯಾವ ಶಿಷ್ಯರನ್ನೂ ಬೆಳೆಸಲಿಲ್ಲ. ಆದರೆ ಒಳ್ಳೊಳ್ಳೆ ಗಾಯಕ, ಗಾಯಕಿಯರನ್ನು ಬೆಳೆಸಿದಿರಿ. ಅವರಿಂದ ಲೈಫ್ ಟೈಮ್ ಹಾಡುಗಳನ್ನು ಹಾಡಿಸಿದಿರಿ. ಆದರೆ ಅವರೆಲ್ಲ ನೀವೇರಿದ ಎತ್ತರಕ್ಕೆ ಏರುತ್ತಾರೆಯೆ? ನಿಮ್ಮ ನಂತರದ ಸುಗಮ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆಯೆ? ಅವರಲ್ಲಿ ಯಾರಾದಾರೊಬ್ಬರು ಸುಗಮ ಸಂಗೀತದ ದಿಗ್ಗಜರಾಗುತ್ತಾರೆಯೇ? ಗೊತ್ತಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು.

ನೀವು ಕೊಟ್ಟ ಭಾವಗೀತೆಗಳು, ಸಿನಿಮಾ ಹಾಡುಗಳು ಒಂದೇ... ಎರಡೆ? ಆಕಾಶದ ನೀಲಿಯಲ್ಲಿ, ಎಲ್ಲೋ ಹುಡುಕಿದೆ ಇಲ್ಲದ ದೇವರು, ರಾಯರು ಬಂದರು ಮಾವನ ಮನೆಗೆ, ನಾಯಿ ತಲೆಮ್ಯಾಲಿನ ಬುತ್ತಿ, ಗಿಳಿಯು ಪಂಜರದೊಳಿಲ್ಲ, ಗೆದಿಯಬೇಕು ಮಗಳೆ, ಆಕಾಶ ಬಿಕ್ಕುತಿದೆ ಇನ್ನೂ ಮುಂತಾದ ಹಾಡುಗಳ ಮೂಲಕ ಲಕ್ಷಾಂತರ ಕನ್ನಡಿಗರ ಮನದಲ್ಲಿ ಎಂದೆಂದಿಗೂ ಚಿರಾಯುವಾಗಿರುತ್ತಿರಿ. ನಿಮ್ಮ ಸಾವಿನಿಂದ ಸುಗಮ ಸಂಗೀತದಲ್ಲಿ ಆವರಿಸಿರುವ ಶೂನ್ಯ ಬೇಗನೆ ಮಾಯವಾಗಿ ಮತ್ತೆ ಚೇತರಿಸಿಕೊಳ್ಳಲಿ, ನೀವೇ ಬೆಳೆಸಿರುವ ಪ್ರತಿಭೆಗಳು ನೀವೇರಿದ ಎತ್ತರಕ್ಕೆ ಏರುವಂತಾಗಲಿ. ಸಾಧ್ಯವಾದರೆ ಮತ್ತೊಮ್ಮೆ ಹುಟ್ಟಿ ಬನ್ನಿ ನಮ್ಮ ನಾಡಿನಲ್ಲಿ. ಏಕೆಂದರೆ ನಿಮ್ಮಂತವರೊಬ್ಬರು ನಮಗೆ ಬೇಕು ಹಾಡಲು...ಹಾಡಿಸಲು.........

ನಿಮ್ಮ ನೊಂದ ಅಭಿಮಾನಿ

ಉದಯ್ ಇಟಗಿ

Thursday, December 24, 2009

ಚೀನು ಅಚಿಬೆಯ “ಡೆಡ್ ಮೆನ್ಸ್ ಪಾಥ್”

ವಿಷಯ ಸೂಚನೆ: ಈ ಲೇಖನವನ್ನು ನನ್ನ ಬ್ಲಾಗಿನ ಒಂದು ವರುಷದ ಹುಟ್ಟುಹಬ್ಬದ ವಿಶೇಷತೆಗಾಗಿ ಸಿದ್ಧಪಡಿಸಿದ್ದೆ. ಆದರೆ ಹುಟ್ಟುಹಬ್ಬದ ಲೇಖನ ಮತ್ತು ಈ ಲೇಖನಗಳೆರಡೂ ಸೇರಿ ಓದಲು ತುಂಬಾ ದೊಡ್ಡದಾಗುತ್ತದೆಂದು ಇಂದು ಪ್ರತ್ಯೇಕವಾಗಿ ಕೊಡುತ್ತಿದ್ದೇನೆ. ಓದಿ ಅಭಿಪ್ರಾಯಿಸಿ.

ಚೀನು ಅಚಿಬೆ ಸಮಕಾಲಿನ ಜಗತ್ತು ಕಂಡ ದೈತ್ಯ ಪ್ರತಿಭೆಯ ಬರಹಗಾರ. ನೈಜೇರಿಯಾ ಮೂಲದ ಚೀನು ಹುಟ್ಟಿದ್ದು ನೈಜೇರಿಯಾದ ಓಗಿಡಿ ಎಂಬ ಹಳ್ಳಿಯಲ್ಲಿ. ಅದೇ ಊರಿನಲ್ಲಿ ಅವನ ತಂದೆ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದುದರಿಂದ ಅವನ ವಿಧ್ಯಾಭ್ಯಾಸ ಅಲ್ಲಿಯೇ ಮುಂದುವರಿಯಿತು. ಮುಂದೆ ಆತ ಯೂನಿವರ್ಷಿಟಿ ವಿಧ್ಯಾಭ್ಯಾಸಕ್ಕಾಗಿ ಇಂಗ್ಲೀಷ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ಇಬಾಡನ್ ಎಂಬಲ್ಲಿ ಮುಗಿಸಿದ. ಅಲ್ಲಿಯೇ ಆತ ಯೂರೋಪಿಯನ್ನರು ಆಫ್ರಿಕಾ ಖಂಡದ ಬಗ್ಗೆ ಬರೆದ ಬಹಳಷ್ಟು ಕಾದಂಬರಿಗಳನ್ನು ಓದಲು ಆರಂಭಿಸಿದ್ದು. ಹೀಗೆ ಓದುವಾಗ ಅವನಿಗೇನನ್ನಿಸಿತೋ ಏನೋ ಇನ್ಮುಂದೆ ನಮ್ಮ ಕಥೆಯನ್ನು ನಾವೇ ದಾಖಲಿಸಿದರೆ ಚೆನ್ನ ಎಂದುಕೊಂಡು ಬರಹಗಾರನಾಗಲು ನಿರ್ಧರಿಸಿದ. ಹಾಗೆಂದೇ ಆತ ಆಫ್ರಿಕಾ ಖಂಡದ ಮುಖ್ಯವಾಗಿ ನೈಜೇರಿಯಾದವರ ನೋವು ನಲಿವುಗಳನ್ನು ಎಲ್ಲೂ ಆವುಟಗೊಳಿಸದೆ ಅಬ್ಬರಗೊಳಿಸದೆ ಇದ್ದಕ್ಕಿದ್ದಂತೆ ದಾಖಲಿಸುತ್ತಾ ಹೋದ. ಪರಿಣಮವಾಗಿ ಬಹಳಷ್ಟು ಕಥೆ, ಕಾದಂಬರಿಗಳನ್ನು ಹೊರತಂದನು. ಅವನ ಮೊಟ್ಟ ಮೊದಲ ಕಾದಂಬರಿ “ಥಿಂಗ್ಸ್ ಫಾಲ್ ಅಪಾರ್ಟ್” ಇಂಗ್ಲೀಷ ಸಾಹಿತ್ಯವಲಯದಲ್ಲಿ ಬಹು ಚರ್ಚೆಗೊಳಗಾದ ಕಾದಂಬರಿ. ಮಾತ್ರವಲ್ಲ ಅವನಿಗೆ ಅಪಾರ ಕೀರ್ತಿ, ಯಶಸ್ಸುಗಳೆರಡನ್ನೂ ತಂದುಕೊಟ್ಟಿತು. ಮುಂದೆ ಇದೇ ಕಾದಂಬರಿಗೆ ನೋಬೆಲ್ ಪ್ರಶಸ್ತಿಯೂ ಸಹ ದೊರಕಿತು. ಮುಂದೆ ಈತ “No Longer at Ease” (1960), “Arrow of God” (1964), “A Man of the People” (1966) ಎನ್ನುವ ಕಾದಂಬರಿಗಳನ್ನು "Marriage Is A Private Affair" (1952), "Dead Men's Path" (1953), “The Sacrificial Egg and Other Stories” (1953) ಎನ್ನುವ ಕಥಾಸಂಕಲನಗಳನ್ನು ಹೊರತಂದನು.

ಚೀನು ಅಚಿಬೆಯು ಕಾದಂಬರಿಗಳನ್ನು ಬರೆಯುವದರಲ್ಲಿ ಪ್ರಸಿದ್ಧಿ ಪಡೆದಷ್ಟೆ ಸಣ್ಣ ಕಥೆಗಳನ್ನು ಬರೆಯುವದರಲ್ಲಿಯೂ ಸಹ ಎತ್ತಿದ ಕೈ. ಆತನ ಬಹಳಷ್ಟು ಕಥೆಗಳು ಗಾತ್ರ ಮತ್ತು ರಚನೆಯಲ್ಲಿ ಚಿಕ್ಕದಾಗಿದ್ದರೂ ಅಗಾಧವಾದದ್ದನ್ನೇನೋ ಹೇಳುತ್ತವೆ. ಅಂಥ ಕಥೆಗಳಲ್ಲಿ ಓದುಗರನ್ನು ಚಿಂತನೆಗೆ ಹಚ್ಚುವ ಮತ್ತು ಚರ್ಚಿಸುವಂತೆ ಮಾಡುವ ಕಥೆ “ಡೆಡ್ ಮೆನ್ಸ್ ಪಾಥ್”. ಘಟನೆಯಿಂದ ಘಟನೆಗೆ ಬಹಳಷ್ಟು ವಿವರಣೆಗಳಿಲ್ಲದೆ ಬೇಗ ಬೇಗನೆ ಸಾಗುವ ಈ ಕಥೆ ಕೊನೆಯಲ್ಲಿ ಓದುಗರನ್ನು ಬೆಚ್ಚಿಬೀಳಿಸುವಂತೆ ಮಾಡುತ್ತದೆ. ಈ ಕಥೆಯು ಆಧುನಿಕತೆ ಮತ್ತು ಸಾಂಪ್ರದಾಯಕತೆಯ ನಡುವಿನ ತಿಕ್ಕಾಟವನ್ನು ಹೇಳುತ್ತದೆ.

ಕಥೆ ಆರಂಭವಾಗುವದು ಆಫ್ರಿಕಾದ ಯಾವುದೋ ಒಂದು ಭಾಗದಲ್ಲಿ. ಅದರ ಕಥಾನಾಯಕ ಮೈಕೆಲ್ ಓಬಿ ಉನ್ನತ ವ್ಯಾಸಾಂಗವನ್ನು ಮುಗಿಸಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುತ್ತಾನೆ. ಅವನು ದಕ್ಷ ಹಾಗೂ ನಿಷ್ಟಾವಂತತನಕ್ಕೆ ಹೆಸರುವಾಸಿಯಾಗಿರುತ್ತಾನೆ. ಇದೇ ಕಾರಣಕ್ಕೆ ಅತ್ಯಂತ ಹಿಂದುಳಿದ ಶಾಲೆಯಾದ ಎನ್ಡುಮೆ ಸೆಂಟ್ರಲ್ ಶಾಲೆಯ ಮುಖ್ಯಸ್ತರು ಅದನ್ನು ಮುಂದೆ ತರಲು ಓಬಿ ಸೂಕ್ತವಾದ ವ್ಯಕ್ತಿಯೆಂದು ಪರಿಗಣಿಸಿ ಅವನನ್ನು ಅದರ ಹೆಡ್ ಮಾಸ್ಟರನ್ನಾಗಿ ನೇಮಿಸುತ್ತಾರೆ. ಅವನಲ್ಲಿ ಹೊಸ ಹೊಸ ವಿಚಾರಗಳಿದ್ದವು ಮತ್ತು ಅದಕ್ಕಿಂತ ಹೆಚ್ಚಾಗಿ ಒಂದು ಶಾಲೆಯನ್ನು ಹೇಗೆ ನಡೆಸಬೇಕೆಂಬ ದೂರದೃಷ್ಟಿ ಅವನಲ್ಲಿತ್ತು. ಇದೀಗ ಅವನ್ನೆಲ್ಲ ಕಾರ್ಯರೂಪಕ್ಕೆ ತರಲು ಓಬಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದರಿಂದ ಅತಿ ಉತ್ಸುಕತೆಯಿಂದ ಈ ಕೆಲಸವನ್ನು ಒಪ್ಪಿಕೊಳ್ಳುತ್ತಾನೆ. ಅವನಲ್ಲಿ ಎರಡು ಗುರಿಗಳಿದ್ದವು. ಮೊದಲನೆಯದು ತನ್ನ ಶಾಲೆಯಲ್ಲಿ ಅತಿ ಉನ್ನತ ಕಲಿಕಾ ವಿಧಾನಗಳನ್ನು ಪರಿಚಯಿಸುವದು. ಎರಡನೆಯದು ಇಡಿ ಶಾಲೆಯ ಕೌಂಪೊಂಡನ್ನು ಹೂದೋಟಗಳಿಂದ ಅಲಂಕರಿಸುವದು. ಆ ನಿಟ್ಟಿನಲ್ಲಿ ಅವನು ಕಾರ್ಯೋನ್ಮುಖನಾಗುತ್ತಾನೆ.

ಒಂದು ದಿವಸ ಹೂದೋಟಗಳನ್ನು ಪರಿಶೀಲಿಸುವಾಗ ಕೌಂಪೊಂಡಿನೊಳಗೆ ಹೆಂಗಸೊಬ್ಬಳು ನಡೆದುಹೋಗುತ್ತಾಳೆ. ಇವಳೇಕೆ ಕೌಂಪೊಂಡಿನೊಳಗೆ ನಡೆದುಹೊಗುತ್ತಿದ್ದಾಳೆ ಎಂದು ಹತ್ತಿರ ಹೋಗಿ ನೋಡುತ್ತಾನೆ. ಅಲ್ಲಿ ಆಗಲೇ ಬಳಸಿಬಿಟ್ಟ ಕಾಲುದಾರಿಯೊಂದು ನಿರ್ಮಾಣವಾಗಿದೆ. ನೀವೇಕೆ ಈ ಊರಿನವರನ್ನು ಇಲ್ಲಿ ಹಾದುಹೋಗಲು ಅಪ್ಪಣೆ ನೀಡಿದಿರಿ ಎಂದು ಅಲ್ಲಿ ಅದಾಗಲೇ ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯನ್ನು ಕೇಳುತ್ತಾನೆ. ಅದಕ್ಕವನು “ಹಿಂದೆ ನಾವು ಈ ದಾರಿಯನ್ನು ಮುಚ್ಚುಹಾಕಲು ಪ್ರಯತ್ನಿಸಿದಾಗ ನಮ್ಮ ಮತ್ತು ಊರಿನವರ ನಡುವೆ ದೊಡ್ದ ಜಗಳವೇ ಆಯಿತು. ಏಕೆಂದರೆ ಈ ಹಾದಿ ಊರಿನ ದೇವಸ್ಥಾನವನ್ನು ಮತ್ತು ಸ್ಮಶಾಣವನ್ನು ಒಂದುಗೂಡಿಸುವದರಿಂದ ಅವರಿಗೆ ಬಹಳ ಮುಖ್ಯವಾಗಿದೆ ” ಎಂದು ಹೇಳುತ್ತಾನೆ. “ಅದಕ್ಕೂ ಇದಕ್ಕೂ ಏನು ಸಂಬಂಧ? ಅದಲ್ಲದೆ ಇದು ನಡೆದಿದ್ದು ಹಿಂದೆ. ಈಗ ಹೀಗಾಗಲು ಸಾಧ್ಯವಿಲ್ಲ” ಎಂದು ಮಾರನೇ ದಿವಸವೇ ಆ ಹಾದಿಯನ್ನು ಮುಚ್ಚಿಹಾಕುತ್ತಾನೆ. ಈ ಘಟನೆಯ ಮಾರನೇ ದಿವಸವೇ ಆ ಊರಿನ ಪೂಜಾರಿ ಶಾಲೆಗೆ ಬಂದು ಓಬಿಯನ್ನು ಮತ್ತೆ ಆ ಹಾದಿಯನ್ನು ತೆರೆಯುವಂತೆ ಆಗ್ರಹಿಸುತ್ತಾನೆ. ಆದರೆ ಓಬಿ ಇದಕ್ಕೆ ಒಪ್ಪುವದಿಲ್ಲ. “ಈ ದಾರಿಯಿಂದಲೇ ನಮ್ಮ ಪೂರ್ವಿಕರು ನಮ್ಮನ್ನು ಭೇಟಿ ನೀಡುವದು. ಅದಲ್ಲದೆ ನಮ್ಮ ಮಕ್ಕಳು ಹುಟ್ಟಿ ಬರುವದು ಈ ದಾರಿಯಿಂದಲೇ.” ಎಂದು ಹೇಳಿ ಪೂಜಾರಿ, ಓಬಿಯ ಮನವೊಲಿಸಲು ನೋಡುತ್ತಾನೆ. ಆದರೆ ಓಬಿ ಅವನಿಗೆ “ಇಂಥ ಮೂಢನಂಬಿಕೆಗಳನ್ನು ನಾವು ನಂಬುವದಿಲ್ಲ. ಇಂಥ ಕಂದಾಚಾರಗಳನ್ನು ನಮ್ಮ ಶಾಲೆಯ ಮಕ್ಕಳು ನೋಡಿ ನಗುವಂತೆ ಮಾಡುವದೇ ನಮ್ಮ ಉದ್ದೇಶ. ಈ ಹಾದಿಯನ್ನು ಮತ್ತೆ ತೆರೆಯಲಾಗುವದಿಲ್ಲ. ಬೇಕಾದರೆ ಕೌಂಪೊಂಡಿನಿಂದಾಚೆ ಈ ದಾರಿಯನ್ನು ನಿರ್ಮಿಸಿಕೊಳ್ಳಿ” ಎಂದು ಹೇಳಿ ಅವನನ್ನು ಲೇವಡಿಮಾಡಿ ಕಳಿಸುತ್ತಾನೆ. ಸರಿಯೆಂದು ಊರಿನ ಪೂಜಾರಿ ಹೊರಟುಹೋಗುತ್ತಾನೆ. ಇದಾಗಿ ಎರಡು ದಿವಸಗಳ ನಂತರ ಆ ಊರಿನಲ್ಲಿ ಹೆಂಗಸೊಬ್ಬಳು ಹೆರಿಗೆ ಸಮಯದಲ್ಲಿ ಸಾಯುತ್ತಾಳೆ. ಇದಕ್ಕೆ ಕಾರಣವೇನಿರಬಹುದೆಂದು ಜೋತಿಸಿಯೊಬ್ಬರನ್ನು ಊರಿನವರು ಕೇಳಿದಾಗ ಪೂರ್ವಿಕರ ಹಾದಿಯನ್ನು ಮುಚ್ಚಿದ್ದರಿಂದ ಹೀಗಾಗಿದೆ ಎಂಬ ಉತ್ತರ ಬರುತ್ತದೆ. ಮಾರನೇ ದಿವಸ ಓಬಿ ಎದ್ದು ನೋಡುತ್ತಾನೆ ಶಾಲೆಯ ಅವಶೇಷಗಳು ಬಿದ್ದಿದ್ದವು. ಹಿಂದಿನ ರಾತ್ರಿ ಊರಿನ ಜನರು ಬಿದಿರಿನ ಕಡ್ದಿಗಳನ್ನು ಕಿತ್ತೆಸೆದು ಮತ್ತೆ ಆ ಹಾದಿಯನ್ನು ತೆರೆದಿದ್ದರು. ಅಲ್ಲದೇ ಹೂದೋಟಗಳನ್ನು ಹಾಳುಮಾಡಿದ್ದರು. ಶಾಲೆಯ ಕಟ್ಟಡವೊಂದನ್ನು ಸಹ ಕೆಡುವಿದ್ದರು. ಅದೇ ದಿವಸ ಸ್ಕೂಲ್ ಇನ್ಸ್ಪೆಕ್ಟರ್ ಶಾಲೆಯ ತಪಾಷಣೆಗಾಗಿ ಬರುತ್ತಾನೆ. ಸ್ಕೂಲ್ ಇನ್ಸ್ಪೆಕ್ಟರ್ ಅಲ್ಲಿರುವ ಕೆಟ್ಟ ಪರಿಸ್ಥಿತಿಯನ್ನು ನೋಡಿ ಶಾಲೆಯ ಬಗ್ಗೆ ಮಾತ್ರವಲ್ಲದೆ ಓಬಿಯು ಬುಡಕಟ್ಟು ಜನಾಂಗದವರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಇಡಿ ಹಳ್ಳಿಯಲ್ಲಿ ಅಶಾಂತಿ ನೆಲೆಸಲು ಕಾರಣನಾಗಿದ್ದಾನೆ ಎಂದು ಅವನ ಬಗ್ಗೆಯೂ ಸಹ ಕೆಟ್ಟ ವರದಿಯೊಂದನ್ನು ನೀಡುತ್ತಾನೆ. ಅಲ್ಲಿಗೆ ಕಥೆ ಮುಗಿಯುತ್ತದೆ. ಮೈಕೆಲ್ ಓಬಿಯ ಪರಿಸ್ಥಿತಿ ಹೇಗಿರಬೇಡ? ನೀವೇ ಊಹಿಸಿ.

ಇಲ್ಲಿ ಯಾವುದೇ ಬದಲಾವಣೆಯನ್ನು ಶಿಘ್ರದಲ್ಲಿ ತರಲಾಗುವದಿಲ್ಲ ಮತ್ತು ಅದನ್ನು ತರುವದಾದರೆ ಹಂತ ಹಂತವಾಗಿ ಜನರ ಭಾವನೆಗಳಿಗೆ ನೋವಾಗದಂತೆ ತಂದರೆ ಒಳ್ಳೆಯದು ಎನ್ನುವದನ್ನು ಕಥೆಯು ಸೂಚ್ಯವಾಗಿ ಹೇಳುತ್ತದೆ. ಈ ಮೂಲಕ ಮೈಕೆಲ್ ಓಬಿ ಮತ್ತು ಊರ ಜನರ ನಡುವಿನ ಸಾಂಸ್ಕೃತಿಕ ಸಂಘರ್ಷವನ್ನು ಚಿತ್ರಿಸುತ್ತದೆ. ಓಬಿ ಆಧುನಿಕತೆಯನ್ನು ಪ್ರತಿನಿಧಿಸಿದರೆ ಊರಿನ ಪೂಜಾರಿ ಸಾಂಪ್ರದಾಯಕತೆಯನ್ನು ಪ್ರತಿನಿಧಿಸುತ್ತಾನೆ. ಇವರಿಬ್ಬರ ನಡುವಿನ ತಿಕ್ಕಾಟವೇ ಕಥೆಯ ತಿರುಳು. ಮೈಕೆಲ್ ಓಬಿಯು ತಾನಂದುಕೊಂಡಿದ್ದನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದು ಹೊರಡುತ್ತಾನೆ ಮತ್ತು ಹಾಗೆ ಬದಲಾವಣೆಯನ್ನು ತರಬೇಕಾದರೆ ಆತ ತನ್ನ ಸಹಚರರ ಮೇಲೆ ಅದು ಯಾವ ಪರಿಣಾಮ ಬೀರಬಹುದು ಎಂದು ಯೋಚಿಸುವದೇ ಇಲ್ಲ. ಈ ನಿಟ್ಟಿನಲ್ಲಿ ತುಂಬಾ ಅವಸರವಸರವಾಗಿ ನಿರ್ಧಾರಗಳನ್ನು ತೆಗೆದುಕೊಂಡು ತನ್ನ ಸೋಲಿಗೆ ತಾನೇ ಕಾರಣನಾಗುತ್ತಾನೆ.

ಮೈಕೆಲ್ ಓಬಿಯನ್ನು ಗಿರೀಶ್ ಕಾರ್ನಾಡರ ಬಸವಣ್ಣ (ತಲೆದಂಡ) ಹಾಗೂ ಮೊಹಮ್‍ದ್ ಬೀನ್ ತುಘಲಕ್ (ತುಘಲಕ್) ನಿಗೆ ಹೋಲಿಸಬಹುದು. ನಾಟಕದಲ್ಲಿನ ಬಸವಣ್ಣ ಸಮಾಜದಲ್ಲಿ ಒಂದೊಂದೇ ಬದಲಾವಣೆಗಳನ್ನು ಅತ್ಯಂತ ತ್ವರಿತಗತಿಯಲ್ಲಿ ತರುವದರ ಮೂಲಕ ತನ್ನ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರುತ್ತಾ ಹೋಗುತ್ತಾನೆ. ಆದರೆ ಅದು ಅವನ ಅನುಯಾಯಿಗಳ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವದನ್ನು ಯೋಚಿಸುವದೇ ಇಲ್ಲ. ಈ ಅಸಮಾಧನದ ಹೊಗೆಯೊಂದಿಗೆ ಅವರು ಅವನ ಬದಲಾವಣೆಯನ್ನು ಸಹಿಸಿಕೊಳ್ಳುತ್ತಾರೆ. ಮುಂದೆ ಇದು ಒಬ್ಬರ ನಂತರ ಒಬ್ಬರ ಶರಣರ ತಲೆದಂಡಕ್ಕೆ ಕಾರಣವಾಗುತ್ತದೆ. ಕೊನೆಗೆ ರೊಚ್ಚಿಗೆದ್ದು ಅವನನ್ನೇ ಸಾಯಿಸುತ್ತಾರೆ. ಅದೇ ರೀತಿ ತುಘಲಕ್ ನಾಟಕದಲ್ಲಿ ಮೊಹಮ್‍ದ್ ಬೀನ್ ತುಘಲಕ್‍ನನ್ನು ಗಿರೀಶ್‍ರು ಒಬ್ಬ ದಕ್ಷ, ಚತುರ ಆಡಳಿತಗಾರನನ್ನಾಗಿ ಚಿತ್ರಿಸಿದ್ದಾರೆ. ಅವನು ಹಿಂದೂ- ಮುಸ್ಲಿಂರ ಏಕತೆಗಾಗಿ ಶ್ರಮಿಸುವದು, ದೆಹಲಿಯಿಂದ ದೇವಗಿರಿಗೆ, ದೇವಗಿರಿಯಿಂದ ದೆಹಲಿಗೆ ರಾಜಧಾನಿಯನ್ನು ಸ್ಥಳಾಂತರಿಸುವದು, ನಾಣ್ಯಗಳನ್ನು ಬದಲಾಯಿಸುವದು ಎಲ್ಲವನ್ನು ಪ್ರಜೆಗಳ ಒಳಿತಿಗಾಗಿ ಮಾಡುತ್ತಾನೆ. ಆದರೆ ಅವನ ಪ್ರಜೆಗಳು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದ್ದರಿಂದ ಅವನ ಕೆಲಸಗಳು ಅವನ ಅವನತಿಗೆ ಕಾರಣವಾಗುತ್ತವೆ. ಇದು ನಾಟಕದ ಕೊನೆಯಲ್ಲಿನ ಅವನ ಸ್ವಗತಗಳಲ್ಲಿ ವ್ಯಕ್ತವಾಗುತ್ತದೆ. ಇವರಿಬ್ಬರ ಶೀಘ್ರ ಬದಲಾವಣೆಗಳು ಅವರಿಗೇ ಮುಳುವಾಗುವಂತೆ ಓಬಿಯ ಶೀಘ್ರ ಬದಲಾವಣೆಗಳು ಸಹ ಅವನಿಗೇ ಮುಳುವಾಗುತ್ತವೆ.

ಹಾಗಿದ್ದರೆ ನಮಗೆಲ್ಲಾ ಬದಲಾವಣೆ ಬೇಡವಾ? ಖಂಡಿತ ಬೇಕು. ಆದರೆ ಅದು ಜನರ ಸಹಕಾರದೊಂದಿಗೆ ನಿಧಾನಗತಿಯಲ್ಲಿ ಆದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎನ್ನುವದನ್ನು ಕಥೆ ಒತ್ತಿ ಹೇಳುತ್ತದೆ.

(ಈ ಕಥೆಯ ಅನುವಾದವನ್ನು ಶೀಘ್ರದಲ್ಲಿಯೇ ನಿರೀಕ್ಷಿಸಿ)
-ಉದಯ್ ಇಟಗಿ

ಹ್ಯಾಪಿ ಬರ್ಥಡೆ ಟು ಯೂ “ಬಿಸಿಲ ಹನಿ”

ಮೊಟ್ಟ ಮೊದಲಿಗೆ ನಿಮಗೊಂದು ಸಂತಸದ ವಿಚಾರವನ್ನು ಹೇಳುತ್ತೇನೆ. ಇಂದಿಗೆ ಅಂದರೆ ಡಿಸೆಂಬರ್ 24 ಕ್ಕೆ ನಾನು ಬ್ಲಾಗ್ ಆರಂಭಿಸಿ ಒಂದು ವರ್ಷವಾಯಿತು. ಹ್ಯಾಪಿ ಬರ್ಥಡೇ ಟು ಯೂ ‘ಬಿಸಿಲ ಹನಿ’. ನೋಡ ನೋಡುತ್ತಿದ್ದಂತೆಯೇ ಒಂದು ವರ್ಷವಾಯಿತು. ಈ ಒಂದು ವರ್ಷದಲ್ಲಿ ನನಗೆ ಸಾಕಷ್ಟು ಬ್ಲಾಗ್ ಗೆಳೆಯರನ್ನು ಹಾಗೂ ನನ್ನದೇ ಆದಂಥ ಸಾಂಸ್ಕೃತಿಕ ವಲಯವೊಂದನ್ನು ತಂದುಕೊಟ್ಟಿದೆ.

ನಾನು ಈ ಮೊದಲು ಬ್ಲಾಗ್ ಬಗ್ಗೆ ಕೇಳಿದ್ದೆನಾದರು ಅದನ್ನು ಹೇಗೆ ಓಪನ್ ಮಾಡುವದೆಂದು ಗೊತ್ತಿರಲಿಲ್ಲ. ನಿಧಾನವಾಗಿ ಬ್ರೌಸ್ ಮಾಡುತ್ತಾ ಮಾಡುತ್ತಾ ಎಲ್ಲವನ್ನೂ ಕಲಿತುಕೊಂಡು ಡಿಸೆಂಬರ್ 24. 2008ರಂದು ನನ್ನದೇ ಒಂದು ಬ್ಲಾಗ್ ಓಪನ್ ಮಾಡಿದೆ. ಅಂದೇ ಜೀವದ ಗೆಳೆಯ ಮಂಜುವಿನ ಹುಟ್ಟು ಹಬ್ಬವಾಗಿದ್ದರಿಂದ ಈ ಹಿಂದೆ ಅವನ ಹುಟ್ಟು ಹಬ್ಬಕ್ಕೆಂದು ಉಡುಗೊರೆಯಾಗಿ ಕೊಟ್ಟ ಕವನವನ್ನೇ ಪ್ರಕಟಿಸುವದರ ಮೂಲಕ ಬ್ಲಾಗ್ ಲೋಕಕ್ಕೆ ಕಾಲಿಟ್ಟೆ. ಅದರಿಂದಾಚೆ ಬಹಳಷ್ಟು ಪದ್ಯಗಳನ್ನು ಬರೆಯುತ್ತಾ ಬಂದೆ. ಒಬ್ಬೊಬ್ಬರಾಗಿ ಬ್ಲಾಗ್ ಗೆಳೆಯರು ಪರಿಚಯವಾಯಿತು. ಅವರ ಬ್ಲಾಗಿಗೆ ಭೇಟಿ ಕೊಟ್ಟು ಅವರ ಲೇಖನಗಳನ್ನು ಓದಿದೆ. ಸ್ಪೂರ್ತಿಗೊಂಡು ನಾನೂ ಯಾಕೆ ಲೇಖನಗಳನ್ನು ಬರೆದು ನೋಡಬಾರದು ಎನಿಸಿ ಆರಂಭಿಸಿಯೇ ಬಿಟ್ಟೆ. ಅಲ್ಲಿಯವರೆಗೆ ಬರಿ ಕವನಕ್ಕಷ್ಟೆ ಸೀಮಿತವಾಗಿದ್ದ ನನ್ನ ಬರವಣಿಗೆ ನಿಧಾನವಾಗಿ ಲೇಖನಗಳಿಗೂ ವಿಸ್ತಾರಗೊಂಡಿತು.

ಯಾರ ಹಂಗಿಗೊಳಗಾಗದೆ, ಯಾವುದೇ ಮುಲಾಜಿಲ್ಲದೆ ನಮಗನಿಸಿದ್ದನ್ನು ಬರೆಯಲು ಹುಟ್ಟಿಕೊಂಡ ಬ್ಲಾಗಿಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು. ನಾನು ಈಗಾಗಲೆ ಹೇಳಿದಂತೆ ಅದು ನನ್ನೊಳಗಿನ ಬರಹಗಾರನನ್ನು ಬಡಿದೆಬ್ಬಿಸಿದೆ. ನನಗೆ ನನ್ನದೆ ಆದ ಬರಹಗಾರರ ವಲಯವನ್ನು ನಿರ್ಮಿಸಿಕೊಟ್ಟಿದೆ. ಸಮಾನ ಆಸಕ್ತರು, ಸಮಾನ ದುಃಖಿಗಳು, ಒಳ್ಳೊಳ್ಳೆ ಸ್ನೇಹಿತರನ್ನು ಕಟ್ಟಿಕೊಟ್ಟಿದೆ. ಇದೀಗ ಬರಹಕ್ಕೂ ನನಗೂ ಎಂಥ ಗಾಢ ಸಂಬಂಧ ಬೆಳೆದಿದೆಯೆಂದರೆ ಬರೆಯದೆ ಹೋದರೆ ನಾನಿಲ್ಲ, ನಾನಿಲ್ಲದೆ ಹೋದರೆ ಬರಹವಿಲ್ಲ ಎಂದೆನಿಸಿಬಿಟ್ಟಿದೆ. ಬರೆಯದೆ ಹೋದರೆ ಏನನ್ನೋ ಕಳೆದುಕೊಂಡಂಥ ಚಡಪಡಿಕೆ. ಈ ನಿಟ್ಟಿನಲ್ಲಿ ನಾನು ಇಷ್ಟರಮಟ್ಟಿಗೆ ಬೆಳೆಯಲು ಪ್ರೋತ್ಸಾಹಿಸಿದ ನನ್ನ ಸಹ ಬ್ಲಾಗಿಗರಿಗೆ, ಸ್ನೇಹಿತರಿಗೆ, ಹಾಗೂ ಹಿತೈಷಿಗಳಿಗೆ ನನ್ನ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ಹಾಗೆ ನೋಡಿದರೆ ನಾನು ಇದನ್ನು ಬರೆಯಬೇಕೋ ಬೇಡವೋ ಎನ್ನುವ ಗೊಂದಲದೊಳಗೆ ಅಂಥ ಗಟ್ಟಿಯಾದದ್ದೇನೂ ಬರೆದಿಲ್ಲ. ಇನ್ನು ಮುಂದೆ ಅನುವಾದದ ಜೊತೆಗೆ ಸ್ವಂತದ್ದೇನಾದರು ಬರೆಯಬೇಕೆಂದು ನಿರ್ಧರಿಸುವೆ. ಆದರೆ ಬರೆಯಬೇಕೋ ಬೇಡವೂ ಎನ್ನುವ ಗೊಂದಲ ಇದ್ದೇ ಇರುತ್ತದೆ. ಅದು ನನ್ನೊಬ್ಬನನ್ನು ಮಾತ್ರವಲ್ಲ ಎಲ್ಲ ಬರಹಗಾರರನ್ನು ಕಾಡುತ್ತಿರುತ್ತದೆ. ಏಕೆಂದರೆ ನಾವೆಲ್ಲರೂ ಒಂದಲ್ಲ ಒಂದು ಗೊಂದಲಗಳೊಂದಿಗೆ ಸದಾ ಬದುಕುತ್ತಲೇ ಇರುತ್ತೇವೆ. ಆ ಗೊಂದಲಗಳನ್ನು ಸೀಳಿಕೊಂಡು ನಮ್ಮ ಬರಹದಲ್ಲಿ ಸ್ಪಷ್ಟವಾಗುತ್ತಾ ಹೋಗಬೇಕು. ಹಾಗಾಗಲು ಸಾಧ್ಯವೇ? ಹಾಗಾಗುತ್ತೇನೆಯೇ? ಗೊತ್ತಿಲ್ಲ.

ನಿಮ್ಮೆಲ್ಲ ಪ್ರೀತಿ, ಪ್ರೋತ್ಸಾಹ ಹೀಗೆ ನಿರಂತರವಾಗಿರಲಿ ಎಂದು ಆಶಿಸುತ್ತಾ ನನ್ನ ಮುಂದಿನ ಬರಹದೊಂದಿಗೆ ನಿಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬೈ, ಬೈ.

-ಉದಯ್ ಇಟಗಿ

Wednesday, December 16, 2009

ಉಣ್ಣಿಕಥಾ

ಕಥಾ ಹಿನ್ನೆಲೆ: "ಉಣ್ಣಿಕಥಾ” ಮಲಯಾಳಂ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಗಿಟ್ಟಿಸಿಕೊಂಡು ಮನೆಮಾತಾಗಿದೆ. ಪೂರ್ವದ ಮೇಲೆ ಪಶ್ಚಿಮದ ಹೊಡೆತವನ್ನು ಕಥೆ ಧ್ವನಿಸುತ್ತದೆ. ಪೂರ್ವಾತ್ಯರಿಗೆ ಪಾಶ್ಚಿಮಾತ್ಯದ ವ್ಯಾಮೋಹ ಹಾಗೂ ಅದನ್ನೇ ಬಂಡವಾಳ ಮಾಡಿಕೊಂಡು ಪಾಶ್ಚಿಮಾತ್ಯರಿಂದ ಪೂರ್ವಾತ್ಯರ ಮೇಲೆ ಹಿಡಿತ ಸಾಧಿಸುವದನ್ನು ಕಥೆ ಸೂಚ್ಯವಾಗಿ ಹೇಳುತ್ತದೆ.



ಇಲ್ಲಿ ಎರಡು ವಿಶೇಷತೆಗಳಿವೆ. ಸಾಮಾನ್ಯವಾಗಿ ಅಜ್ಜಿಯರು ಮೊಮ್ಮಕ್ಕಳಿಗೆ ಕಥೆ ಹೇಳಿದರೆ ಇಲ್ಲಿ ಮೊಮ್ಮಗ ಅಜ್ಜಿಗೆ ಕಥೆ ಹೇಳುತ್ತಿದ್ದಾನೆ. ಎರಡನೆಯದಾಗಿ ಕಥೆಯಲ್ಲಿ ಸಿನಿಮಾಅಟೋಗ್ರಾಫಿಕ್ ಶೈಲಿಯಿದೆ. ಅಂದರೆ ಕಥೆಯನ್ನು ಹೇಳುವಾಗ ಪಾತ್ರಗಳು ಹಾಗೂ ಚಿತ್ರಣಗಳು ಗೋಡೆಯ ಮೇಲೆ ಮೂಡುತ್ತವೆ. ಅಲ್ಲದೇ ಕಥೆಯಲ್ಲಿ ಅಲ್ಲಲ್ಲಿ ಪಶ್ಚಿಮದ ದಾಳಿಯನ್ನು ಸಂಕೇತಗಳ ಮೂಲಕ ಹೇಳಲಾಗಿದೆ. ಅದನ್ನು ಓದುಗರು ಗುರುತಿಸಬಹುದು.

ಕಥೆಯ ಕೊನೆಯಲ್ಲಿ ಮುಠಾಶಿ ಕಥೆಯನ್ನು ಕೇಳುತ್ತಾ ಕೇಳುತ್ತಾ ನಿದ್ರೆ ಹೋಗುತ್ತಾಳೆ. ಆದರೆ ನಾವು ಓದುಗರು ಎಚ್ಚೆತ್ತುಕೊಳ್ಳುತ್ತೇವೆ. ಅಂದರೆ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.



“ಉಣ್ಣಿ, ಉಣ್ಣಿ ನಂಗೊಂದು ಕಥೆ ಹೇಳು ಬಾರೋ” ಮುಠಾಶಿ ಕರೆದಳು.


ಮುಠಾಶಿ ಆಗಷ್ಟೆ ತನ್ನ ರಾತ್ರಿಯ ಮಿತವಾದ ಗಂಜಿ ಊಟವನ್ನು ಮುಗಿಸಿ ಸಂತೃಪ್ತಿಯಿಂದ ಎಲೆ ಅಡಿಕೆಯನ್ನು ಜಗಿಯುತ್ತಾ ಅದರ ರಸಸ್ವಾದವನ್ನು ಹೀರುತ್ತಾ ಕುಳಿತಿದ್ದಳು. ಈಗ ಉಣ್ಣಿಗಾಗಿ ಕಾಯಹತ್ತಿದಳು. ಉಣ್ಣಿಯ ಕಥೆಯನ್ನು ಕೇಳದೇ ಮುಠಾಶಿಗೆ ನಿದ್ರೆಯೇ ಬರುತ್ತಿರಲಿಲ್ಲ. ಉಣ್ಣಿ ಬರುವ ಸೂಚನೆಗಳು ಕಾಣದೆ ಹೋದಾಗ ತೆರೆದಿಟ್ಟ ಬಾಗಿಲಿನೊಳಗೆ ಇಣುಕುತ್ತಾ ಮತ್ತೊಮ್ಮೆ ಅವನನ್ನು ಕೂಗಿದಳು “ಬಾ ಉಣ್ಣಿ”. ಅವಳು ಅವನ ಕಥೆ ಕೇಳುವದಕ್ಕೆ ಪರಿತಪಿಸುತ್ತಿದ್ದಳು.


“ಉಣ್ಣಿ ಹೋಂ ವರ್ಕ್ ಮಾಡ್ತಿದಾನೆ. ಶಾಲೆಯಲ್ಲಿ ಈಗಾಗಲೇ ಅವನ ಕ್ಲಾಸುಗಳು ಜೋರಾಗಿ ಸಾಗಿವೆ. ಅದಲ್ಲದೆ ಅವನದು ಈಗ ಎರಡನೇ ಕ್ಲಾಸು ಬೇರೆ.” ಅವನ ತಾಯಿ ಮುಠಾಶಿಯನ್ನು ಎಚ್ಚರಿಸಿದಳು.
“ಉಣ್ಣಿ, ಒಂದೇ ಒಂದು ಸಣ್ಣಕತಿ ಹೇಳು ಸಾಕು. ಅದೇ ಉಣ್ಣಿಕಥಾ!” ಮುಠಾಶಿ ಬೇಡಿದಳು. ಅವಳು ಗೋಡೆಗೊರಗಿ ಕಾಲುಚಾಚಿಕೊಂಡು ಮಂಚದ ಮೇಲೆ ಕುಳಿತಿದ್ದಳು. ಕೋಣೆಯಲ್ಲಿ ಕಡಿಮೆ ಪ್ರಕಾಶಮಾನವುಳ್ಳ ಬಲ್ಬ್ ಇದ್ದುದರಿಂದ ಅಲ್ಲಿ ಮಬ್ಬು ಮಬ್ಬಾದ ಬೇಳಕಿತ್ತು.


“ಅಮ್ಮಾ, ಉಣ್ಣಿ ಯಾವಾಗ್ಲೂ, ದಿನಾಲೂ ಹೇಗೆ ತಾನೆ ಕತಿ ಹೇಳ್ತಾನೆ? ಅವನೀಗ ಹೋಂ ವರ್ಕ್ ಮಾಡಬೇಕು”


“ಇದೇ ಕಡೇದ್ದು ಮಗಳೇ, ಇನ್ಮುಂದೆ ಕೇಳಲ್ಲ”
“ಅಮ್ಮಾ, ನಿನ್ನೆನೂ ನೀನು ಹೀಗೆ ಹೇಳಿರಲಿಲ್ವಾ?”


ಮುಠಾಶಿ ಅಪರಾಧಿ ಪ್ರಜ್ಞೆಯಿಂದ ತನ್ನ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಿದಳು. ಅವಳಿಗೆ ವಯಸ್ಸಾಗಿದ್ದರಿಂದ ಅವಳ ದೇಹವೆಲ್ಲಾ ಸುಕ್ಕುಗಟ್ಟಿ ಹೋಗಿತ್ತು. ಇದೀಗ ಚಿಕ್ಕ ಮಗುವಿನಂತೆ ಸಪ್ಪೆ ಮುಖ ಮಾಡಿ ಕುಳಿತಿದ್ದನ್ನು ನೋಡಿ ಉಣ್ಣಿಯ ಅಮ್ಮನ ಮನಸ್ಸು ಕರಗಿತು.


“ಉಣ್ಣಿ, ಹೋಗು ಮುಠಾಶಿಗೆ ಕಥೆ ಹೇಳು ಹೋಗು. ಅವಳನ್ನು ಮಲಗಿಸಿದ ಮೇಲೆ ನಿನ್ನ ಹೋಂ ವರ್ಕ್ ಮಾಡುವಂತಿ”


ತನ್ನ ಅಜ್ಜಿಗೆ ಬೇಗನೆ ನಿದ್ರೆ ಬರಲೆಂದು ಉಣ್ಣಿ ಮನದಲ್ಲಿಯೇ ಪ್ರಾರ್ಥಿಸಿದ. ಗಂಟೆ ಅದಾಗಲೇ 9.30 ಆಗಿತ್ತು.


ಈಗ ಉಣ್ಣಿ ಬಂದು ಮುಠಾಶಿಯ ಪಕ್ಕ ಕುಳಿತ. ಅವಳ ಮುಖ ಖುಶಿಯಿಂದ ಹೊಳೆಯತೊಡಗಿತು. ದಿನಾ ರಾತ್ರಿ ಮುಠಾಶಿ ಉಣ್ಣಿಯ ಕಥೆಯನ್ನು ಕೇಳದೇ ಮಲಗುವದಿಲ್ಲ. ಅದವಳಿಗದು ಒಂದು ರೀತಿಯ ಅಭ್ಯಾಸವಾಗಿದೆ. ಕೆಟ್ಟ ಅಭ್ಯಾಸ! ಅದನ್ನು ಬಿಡಬೇಕೆಂದರೂ ಅವಳ ಕೈಯಿಂದ ಇನ್ನೂ ಸಾಧ್ಯವಾಗಿಲ್ಲ.


“ನಿನಗೆ ಎಂಥಾ ಕತಿ ಬೇಕು, ಮುಠಾಶಿ?”


“ಚನ್ನಾಗಿರೋದು ಯಾವದೋ ಒಂದು, ನಂಗೆ ನಿದ್ರೆ ತರುವಂಥದ್ದು”


“ಹಾಗಾದರೆ, ಗಾಜಿನ ಮರದ ಕತೆ ಹೇಳಲೆ?”


“ಹೂಂ”


ಉಣ್ಣಿ ಮುಠಾಶಿಯ ಕಡೆ ಸರಿಯುತ್ತಾ ತದೇಕಚಿತ್ತದಿಂದ ತನ್ನ ಮುಂದಿರುವ ಗೋಡೆಯನ್ನೇ ನೋಡುತ್ತಾ ಕುಳಿತ. ಅದೊಂದು ಖಾಲಿ ಗೋಡೆ. ಅಲ್ಲಿ ಯಾವುದೇ ಫೋಟೊಗಳಾಗಲಿ, ಅಲಂಕಾರಿಕ ವಸ್ತುಗಳಾಗಲಿ ಇರಲಿಲ್ಲ. ಈಗ ಆ ಗೋಡೆಯ ಮೇಲೆ ಮೊಟ್ಟಮೊದಲಿಗೆ ಮೋಟುಮೋಟಾದ ಮನುಷ್ಯನ ಚಿತ್ರವೊಂದು ಮೂಡಿತು. ಆ ಮನುಷ್ಯನ ಕಿವಿಯಲ್ಲಿ ಚಿನ್ನದಿಂದ ಮಾಡಿದ ದಪ್ಪ ದಪ್ಪನಾದ ಓಲೆಗಳಿದ್ದವು. ಮಾತ್ರವಲ್ಲ ಅವನ ಮೋಟುಮೊಟಾದ ಬೆರಳುಗಳಲ್ಲೂ ಸಹ ಚಿನ್ನದ ಉಂಗುರಗಳಿದ್ದವು.


“ಮುಠಾಶಿ, ಅಗೋ ಅಲ್ಲಿ ನೋಡು. ಅದು ಕುರುಮಾನ್ ಪಣಿಕ್ಕನ್”


ಗೋಡೆಯ ಮೇಲೆ ಮೂಡಿರುವ ಮನುಷ್ಯನ ಚಿತ್ರವನ್ನು ಉದ್ದೇಶಿಸಿ ಉಣ್ಣಿ ಹೇಳಿದ. ಅಷ್ಟರಲ್ಲಿ ಪಲ್ಲಕ್ಕಿಯೊಂದು ಗೋಡೆಯ ಮೇಲೆ ಅಡ್ದಲಾಗಿ ಹೋಯಿತು. ಕೈಯಲ್ಲಿ ಬೀಸಣಿಗೆಯೊಂದನ್ನು ಹಿಡಿದುಕೊಂಡು ಕುರುಮಾನ್ ಆ ಪಲ್ಲಕಿಯಲ್ಲಿ ತುಸು ಗಂಭೀರವಾಗಿ ಕುಳಿತಿದ್ದಾನೆ. ಅದರ ಸುತ್ತಲೂ ಅವನ ಪರಿಚಾರಕರಿದ್ದಾರೆ. ಮುಂದೆ ಮುಂದೆ ಒಬ್ಬ ಪಂಜನ್ನು ಹಿಡಿದು ಬಂಗಾರದ ಬೆಳಕನ್ನು ಬೀರುತ್ತಾ ನಡೆಯುತ್ತಿದ್ದಾನೆ.


“ಉಣ್ಣಿ, ಕುರುಮಾನ್ ಪಣಿಕ್ಕನ್ ಎಲ್ಲಿಗೆ ಹೋಗುತ್ತಿದ್ದಾನೆ?”


“ಸಂಪಿಗೆ ಮರದ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗುತ್ತಿದ್ದಾನೆ”


ತಕ್ಷಣ ಆ ಬಿಳಿಗೋಡೆಯ ಮೇಲೆ ದೊಡ್ದದೊಂದು ಹಸಿರು ಹಸಿರಾದ ಸಂಪಿಗೆ ಮರ ಅರಳಿ ನಿಂತಿತು. ಆ ಮರವು ಸಂಪೂರ್ಣವಾಗಿ ಹೂಗಳಿಂದ ತುಂಬಿ ಹೋಗಿದ್ದರಿಂದ ಅವುಗಳ ಭಾರಕ್ಕೆ ಮರವು ತುಸು ಬಾಗಿದಂತೆ ಭಾಸವಾಯಿತು. ಆ ಸಂಪಿಗೆ ಮರದ ಹೂಗಳ ಸುಗಂಧ ಗಾಳಿಯಲ್ಲಿ ಸೇರಿಕೊಂಡು ಇಡಿ ವಾತಾವರಣ ಮತ್ತಷ್ಟು ಆಹ್ಲಾದಕರಗೊಂಡಿತ್ತು.


ಕುರುಮಾನ್‍ನ ಸೇವಕರು ಪಲ್ಲಕ್ಕಿಯನ್ನು ಮೆಲ್ಲಗೆ ಮರದ ಮುಂದೆ ಇರಿಸಿದರು. ಕುರುಮಾನ್ ಪಣಿಕ್ಕನ್ ತನ್ನ ಬಲಗಡೆಯಿಂದ ಕೆಳಗಿಳಿದ. ತಕ್ಷಣ ಒಬ್ಬ ಸೇವಕ ಓಡಿ ಬಂದು ಅವನ ಕೈಯಲ್ಲಿದ್ದ ಬೀಸಣಿಗೆಯನ್ನು ತೆಗೆದುಕೊಂಡು ಪಲ್ಲಕ್ಕಿಯಲ್ಲಿಟ್ಟ. ನಸುಕಿನ ತಂಗಾಳಿಗೆ ಮರದ ಎಲೆಗಳು ಅಲುಗಾಡಿದವು. ಕುರುಮಾನ್ ಎಲ್ಲಿಗಾದರು ಹೋಗಬೇಕಾದರೆ ಸದಾ ತನ್ನ ಜೊತೆಯಲ್ಲಿ ಬೀಸಣಿಗೆಯನ್ನು ಒಯ್ಯುತ್ತಿದ್ದ-ಅದು ಮಳೆಗಾಲವಾದರೂ ಸರಿಯೇ!


ಆ ಸಂಪಿಗೆ ಮರದ ಬುಡದಲ್ಲಿ ಸಣ್ಣದೊಂದು ಕಟ್ಟೆಯಿತ್ತು. ಆ ಕಟ್ಟೆಯ ಮೇಲೆ ಮೂರ್ತಿಯೊಂದನ್ನು ಇರಿಸಲಾಗಿತ್ತು. ಅದು ಎಣ್ಣೆಗಟ್ಟಿತ್ತು. ಕುರುಮಾನ್ ಪಣಿಕ್ಕನ್ ಪೂಜೆ ಸಲ್ಲಿಸಿದ ಮೇಲೆ ತನ್ನ ಎರಡೂ ಹಸ್ತಗಳನ್ನು ಜೋಡಿಸಿ ಕಾವಿಲಮ್ಮನಿಗೆ ನಮಸ್ಕರಿಸಿದ. ಕಾವಿಲಮ್ಮನ ಪಕ್ಕ ಯಾವುದೋ ಪುರಾತನ ಕಾಲದ ಪಣತಿಯೊಂದು ಉರಿಯುತ್ತಿತ್ತು. ಅದರ ಬೆಳಕು ಸ್ವಲ್ಪ ಹೆಚ್ಚೇ ಇತ್ತು.


“ಉಣ್ಣಿ, ಯಾರದು?”


ಚನ್ನಾಗಿರುವ ಉಡುಪಧಾರಿಯೊಬ್ಬ ಆ ಬಿಳಿ ಗೋಡೆಯ ಮೇಲೆ ಮೂಡಿದ. ಅವನು ಅಂಗಿ ಧರಿಸಿದ್ದ. ಕೂದಲನ್ನು ನೀಟಾಗಿ ಕತ್ತರಿಸಿ ಬಾಚಿದ್ದ. ಆದರೆ ಅಲ್ಲಿರುವರೆಲ್ಲರೂ ತಮ್ಮ ಕೂದಲನ್ನು ಬಾಚಿ ತುರುಬಿನಂತೆ ಗಂಟು ಕಟ್ಟಿದ್ದರಿಂದ ಅವರ ಮಧ್ಯ ಈ ವ್ಯಕ್ತಿ ಅಪರಿಚಿತನಂತೆ ಕಂಡ.


“ಅವನು ಮೆಲಕ್ಕೋರನ್. ಮಸಿದಿ ಮಂದಿರಗಳನ್ನು ಕಟ್ಟುವವ.” ಉಣ್ಣಿ ಹೇಳಿದ.
ಮೆಲಕ್ಕೋರನ್, ಕುರುಮಾನ್ ಪಣಿಕ್ಕನ್ ಇರುವಲ್ಲಿಗೆ ನಡೆದುಬಂದು ತಲೆ ಬಗ್ಗಿಸಿ ತನ್ನ ಎರಡೂ ಕೈಗಳನ್ನು ಜೋಡಿಸಿ ಅತ್ಯಂತ ಗೌರವದಿಂದ ನಮಸ್ಕರಿಸಿದ.


ಪೂರ್ವದ ದಿಗಂತ ಕಳೆಗುಂದುತ್ತಿತ್ತು.
“ಯಾರು ನೀನು?”


“ನಾನು ಪಶ್ಚಿಮ ದೇಶದವನು. ಒಬ್ಬ ಮೇಸ್ತ್ರಿ. ಮೆಲಕ್ಕೋರನ್ ನನ್ನ ಹೆಸರು”


“ನಿನಗೇನು ಬೇಕು?”


“ಕೆಲಸ”


ಪಣಿಕ್ಕನ್ ತನ್ನ ಆಪ್ತಸಲಹಾಗಾರನತ್ತ ನೋಡಿದ. ಆ ಪಂಜಿನ ಬೆಳಕಲ್ಲಿ ಅವನು ತನ್ನ ತಲೆ ಅಲ್ಲಾಡಿಸುತ್ತಿರುವದು ಕಾಣಿಸಿತು.
ಒಡನೆಯೇ ಸಂಪಿಗೆ ಮರದ ಎಲೆಗಳು ಚರಚರನೆ ಸದ್ದು ಮಾಡಿದವು. ಅದರಲ್ಲಿದ್ದ ಬಣ್ಣ ಬಣ್ಣದ ಪಕ್ಷಿಗಳು ತಮ್ಮ ನಿದ್ರೆಯಲ್ಲಿಯೇ ಒಮ್ಮೆ ಕದಲಿದವು. ಗೂಡಿನಲ್ಲಿದ್ದ ಮೊಟ್ಟೆಗಳು ಗಾಳಿಯಲ್ಲಿ ಏನನ್ನೋ ಪಿಸುಗುಟ್ಟಿದಂತೆ ಭಾಸವಾಯಿತು.


“ಮೆಲಕ್ಕೋರನ್, ನಿನಗಿಲ್ಲಿ ಕೆಲಸವಿಲ್ಲ. ಪಕ್ಕದ ರಾಜ್ಯಗಳಿಗೆ ಹೋಗಿ ಕೇಳು”


“ಇಲ್ಲ, ಇಲ್ಲಿಯೇ ನಿಮ್ಮ ಕಣ್ಣೆದುರಿಗೆ ಈಗಲೇ ಮಾಡುವಂಥ ಒಂದು ಕೆಲಸವಿದೆ” ಮೆಲಕ್ಕೋರನ್ ಹೇಳಿ ಪುನಃ ವಿನಮ್ರನಾಗಿ ತಲೆಬಾಗಿ ನಿಂತ.


ಪಣಿಕ್ಕನ್ ಆಶ್ಚರ್ಯಚಕಿತನಾಗಿ ಮತ್ತೊಮ್ಮೆ ತನ್ನ ಆಪ್ತಸಲಹಾಗಾರನತ್ತ ನೋಡಿದ.


“ಈ ಮರವನ್ನೇ ನೋಡಿ” ಮೆಲಕ್ಕೋರನ್ ಹೇಳುತ್ತಾ ಹೋದ “ತುಂಬಾ ಹಳೆಯದಾಗಿದೆ. ಗೆದ್ದಲು ಹಿಡಿದು ಈಗಲೋ ಆಗಲೋ ಬಿದ್ದುಹೋಗುವಂತಿದೆ. ಕಾವಿಲಮ್ಮನಿಗೆ ಹೆಚ್ಚು ದಿನ ನೆರಳು ಕೊಡಲಾರದು. ಇದನ್ನು ಕಿತ್ತೊಗೆದು ಹೊಸ ಮರವೊಂದನ್ನು ನೆಡೋಣ”


“ಹಾಗೆ ಮಾಡಲು ಸಾಧ್ಯವೇ?”
“ನಾನು, ಎಂದೆಂದಿಗೂ ಗೆದ್ದಲು ಹಿಡಿಯದ, ಎಲೆಗಳನ್ನು ಉದುರಿಸಲಾರದಂಥ ಮರವೊಂದನ್ನು ನೇಡುತ್ತೇನೆ.”


“ಅಂಥದ್ದೊಂದು ನಿಜಕ್ಕೂ ಇದೆಯೇ ಮೆಲಕ್ಕೋರನ್?”


“ಹಾ, ಹೌದು ಪಶ್ಚಿಮ ದೇಶದಲ್ಲಿದೆ”


“ಸರಿ, ಹಾಗಾದರೆ. ನಮಗೂ ಅಂಥದ್ದೊಂದು ಮರವೊಂದವಿರಲಿ. ಈ ಕೂಡಲೇ ನಿನ್ನ ಕೆಲಸವನ್ನು ಆರಂಭಿಸು.”


ಮೆಲಕ್ಕೋರನ್ ತನ್ನ ತಲೆ ನೆಲಕ್ಕೆ ತಾಗುವಂತೆ ಬಗ್ಗಿ ನಮಸ್ಕರಿಸಿ ಆ ಕತ್ತಲಲ್ಲಿ ಮಾಯವಾದ. ಕುರುಮಾನ್ ತನ್ನ ಪಲ್ಲಕ್ಕಿಯಲ್ಲಿ ಕುಳಿತ. ಸೇವಕನೊಬ್ಬ ಬೀಸಣಿಗೆಯನ್ನು ಅವನ ಕೈಗಿತ್ತ. ಮುಂದೆ ಮುಂದೆ ಪಂಜಿನ ಬೆಳಕು ಹಿಂದೆ ಹಿಂದೆ ಪಲ್ಲಕ್ಕಿ ಹೊರಟು ಕುರುಮಾನ್ ಪಣಿಕ್ಕನ್‍ನ ವಾಡೆಯನ್ನು ತಲುಪಿತು.


ಕತ್ತಲು ಕರಗುತ್ತಿತ್ತು. ಮರದ ಮೇಲ್ತುದಿಗಳು ಬಿಳಿಚಿಕೊಂಡಿದ್ದವು. ಪಣತಿಯಲ್ಲಿನ ಎಣ್ಣೆ ತೀರಿಹೋಗುತ್ತಿತ್ತು.


“ಉಣ್ಣಿ, ಆ ಸಂಪಿಗೆ ಮರವನ್ನು ಕತ್ತರಿಸುತ್ತಾರಾ?” ಮುಠಾಶಿ ಹತಾಶಳಾಗಿ ಕೇಳಿದಳು.


ಅಷ್ಟರಲ್ಲಿ ಮರ ಕತ್ತರಿಸಿದ ಸದ್ದು ಕೇಳಿಸಿತು. ಈ ಭೂಮಿಯಷ್ಟು ಹಳೆಯದಾದ ಮರವನ್ನು ಕತ್ತರಿಸಿದ ಮೇಲೆ ದಣಿವಾರಿಸಿಕೊಳ್ಳಲು ಮೆಲಕ್ಕೋರನ್ ಪಕ್ಕದಲ್ಲಿದ್ದ ಕಲ್ಲುಬಂಡೆಗೆ ಆತು ಕುಳಿತನು. ಆಹಾರವನ್ನು ಹುಡುಕಿಕೊಂಡು ಹೊರಗೆ ಹೋಗಿದ್ದ ಹಕ್ಕಿಗಳೆಲ್ಲಾ ಮರವನ್ನು ಕತ್ತರಿಸಿದ ಸದ್ದಿಗೆ ಹಾರುತ್ತಾ ವಾಪಾಸಾದವು. ತಮ್ಮ ಗೂಡುಗಳು, ಮೊಟ್ಟೆಗಳು ಕಾಣಿಸದೆ ಕಬ ಕಬ ಎಂದು ಚೀರುತ್ತಾ ಅಸಹಾಯಕವಾಗಿ ಅತ್ತಿಂದಿತ್ತ ವೃತ್ತಾಕಾರದಲ್ಲಿ ಹಾರಾಡತೊಡಗಿದವು. ಮೆಲಕ್ಕೋರನ್ ಅವುಗಳತ್ತ ಗರಸನ್ನು ಎಸೆದು ಓಡಿಸಲು ಪ್ರಯತ್ನಿಸಿದ. ಆದರವು ತಕ್ಷಣಕ್ಕೆ ಹಾರಿಹೋಗದೆ ಕತ್ತರಿಸಿದ ಮರದ ಬಳಿ ಸ್ವಲ್ಪ ಹೊತ್ತು ಸುಳಿದಾಡಿದವು.


“ಅಯ್ಯೋ! ಪಾಪ ಉಣ್ಣಿ, ಪಾಪ” ಮುಠಾಶಿ ಮರುಗಿದಳು.


ಉಣ್ಣಿ ಮುಂದುವರಿಸಿದ.


ಗೋಡೆಯ ಮೇಲೆ ಮತ್ತೆ ಮೆಲಕ್ಕೋರನ್‍ನ ಆಕೃತಿ ಮೂಡಿತು. ಅವನು ಹುಚ್ಚಿಗೆ ಬಿದ್ದವರ ತರ ಮರವನ್ನು ಕಟ್ಟುವದರಲ್ಲಿ ಮಗ್ನನಾಗಿದ್ದ. ಮಧ್ಯ ಮಧ್ಯ ತಂಪಾದ ಎಳೆನೀರನ್ನು ಕುಡಿಯುತ್ತಿದ್ದುದರಿಂದ ಅದರ ಸಿಪ್ಪೆಗಳೆಲ್ಲಾ ಅವನ ಸುತ್ತಲೂ ಬಿದ್ದಿದ್ದವು. ಆಗಾಗ ಕುರುಮಾನ್ ತನ್ನ ಪಲ್ಲಕ್ಕಿಯಲ್ಲಿ ಬಂದು ಮೆಲಕ್ಕೋರನ್ ಏನು ಮಾಡುತ್ತಿದ್ದಾನೆಂಬುದನ್ನು ನೋಡಿಹೋಗುತ್ತಿದ್ದ. ಅವನು ಗಾಜಿನ ದಿನ್ನೆಯನ್ನು ಸಲಿಸಾಗಿ ನಯವಾಗಿ ಕೆತ್ತುವದನ್ನು ನೋಡಿ ಆಶ್ಚರ್ಯಚಕಿತನಾದ. ಗಾಜಿನ ಚೂರುಗಳು ಕಾವಿಲಮ್ಮಳ ಮುಂದೆ ರಾಶಿ ರಾಶಿಯಾಗಿ ಬಿದ್ದಿದ್ದವು. ಕೆಲವು ತುಂಟ ಮಕ್ಕಳು ಮಿರುಗುವ ಗಾಜಿನ ಚೂರುಗಳೊಂದಿಗೆ ಆಡುತ್ತಾ ಆಡುತ್ತಾ ತಮ್ಮ ಬೆರಳುಗಳನ್ನು ಕತ್ತರಿಸಿಕೊಂಡರು.


“ಓ, ಉಣ್ಣಿ ಅವರಿಗೆ ರಕ್ತ ಬರ್ತಿದಿಯಾ?” ಮುಠಾಶಿ ಕೇಳಿದಳು


ಮೊದಲು ಮೆಲಕ್ಕೋರನ್ ಮರದ ಬೇರುಗಳನ್ನು ನಂತರ ರೆಂಬೆಕೊಂಬೆಗಳನ್ನು ಕೆತ್ತಿದ. ಉಳಿದಿದ್ದು ಹೂ, ಎಲೆಗಳು ಮಾತ್ರ.


ಎಲೆಗಳಿಗೆ ಹಸಿರು ಗಾಜು, ಹೂಗಳಿಗೆ ಬಿಳಿಗಾಜು ಬೇಕಾಗಿತ್ತು.


ಮುಠಾಶಿ ಆ ಬೋಳುಬೋಳಾದ ಮರದತ್ತ ಒಮ್ಮೆ ನೋಡಿದಳು.


“ಉಣ್ಣಿ, ಹೋಂ ವರ್ಕ್ ಮುಗಿಸೋದಿಲ್ವಾ? ಗಂಟೆ ಆಗಲೆ ಹತ್ತು ಮುಕ್ಕಾಲಾಗುತ್ತಾ ಬಂತು” ಉಣ್ಣಿಯ ಅಮ್ಮ ಕೇಳಿದಳು.


“ಇನ್ನೇನು ಮುಗಿತಾ ಬಂತು ಅಮ್ಮ”


“ಬೇಗ ಬೇಗ ಮುಗಿಸು”


ಮುಠಾಶಿಗೆ ಇನ್ನೇನು ಕಥೆ ಮುಗಿತಾ ಬಂತು ಎಂದು ಗೊತ್ತಾಗಿ ಬೇಸರವಾಯಿತು. ತನ್ನ ಮುಖವನ್ನು ಕೆಳಗೆ ಹಾಕಿದಳು. ನಿದ್ರೆ ಹತ್ತಿರ ಸುಳಿಯುತ್ತಿಲ್ಲ.


“ಉಣ್ಣಿ” ಅವನ ಕಿವಿಯಲ್ಲಿ ಪಿಸುಗುಟ್ಟಿದಳು “ಅವಸರದಿಂದ ಕತಿ ಮುಗಿಸಬೇಡ”
ಉಣ್ಣಿ ನಿಧಾನಿಸಿದ.


ಮೆಲಕ್ಕೋರನ್ ಎಲೆಗಳನ್ನು ಹಾಗೂ ಹೂಗಳನ್ನು ಕೆತ್ತಲು ಬಹಳ ದಿನಗಳನ್ನು ತೆಗೆದುಕೊಂಡ. ಪ್ರತಿಯೊಂದು ಹೂವನ್ನು, ಎಲೆಯನ್ನು ಅತ್ಯಂತ ನಾಜೂಕಾಗಿ ನಿರ್ಮಿಸಿದ.


ಮೆಲಕ್ಕೋರನ್‍ನ ಕೆಲಸ ನೋಡಲು ಕುರುಮಾನ್ ಆಗಾಗ ತನ್ನ ಪಲ್ಲಕಿಯಲ್ಲಿ ಬಂದುಹೋಗಿ ಮಾಡಿದ. ಕೆಲವು ತುಂಟ ಹುಡುಗರು ಗಾಜಿನ ಚೂರುಗಳ ರಾಶಿಯ ಸುತ್ತ ನೆರೆದು ಅವುಗಳೊಂದಿಗೆ ಆಟವಾಡುತ್ತ ಮತ್ತೆ ಮತ್ತೆ ತಮ್ಮ ಬೆರಳುಗಳಿಗೆ ಗಾಯವನ್ನು ಮಾಡಿಕೊಳ್ಳುತಿದ್ದರು.


“ಕೊನೆಗೂ ಒಂದೂವರೆ ವರ್ಷದ ನಂತರ ಮರದ ಕೆಲಸ ಮುಗಿಯಿತು” ಉಣ್ಣಿ ಹೇಳಿದ.


ಕುರುಮಾನ್ ಪಣಿಕ್ಕನ್ ಆ ಮನಮೋಹಕ ಗಾಜಿನ ಮರವನ್ನೊ ನೋಡಿ ಮೋಹಕ್ಕೊಳಗಾದನು. ಹಸಿರು ಗಾಜಿನ ಎಲೆಗಳು ಹಾಗೂ ಬಿಳಿ ಗಾಜಿನ ಎಲೆಗಳು ಸೂರ್ಯನ ಬೆಳಕಿಗೆ ಮಿಂಚುತ್ತಿದ್ದುದರಿಂದ ಆ ನಸುಗತ್ತಲಲ್ಲೂ ಅವುಗಳ ಪಾರದರ್ಶಕತೆ ಆ ಸೂರ್ಯನನ್ನೂ ನಾಚಿಸುವಂತಿತ್ತು.


ಈ ಅದ್ಭುತವಾದ ಮರವನ್ನು ನೋಡಲು ಜನ ಎಲ್ಲೆಂದರಲ್ಲಿಂದ ಬರತೊಡಗಿದರು. ಕುರುಮಾನ್‍ನಿಗೆ ಮಾತ್ರ ಇಂಥ ಮರವನ್ನು ಕಟ್ಟಿಸಲು ಸಾಧ್ಯ ಎಂದು ಜನ ಮಾತಾಡಿಕೊಂಡರು. ಕುರುಮಾನ್ ಹೆಮ್ಮೆಯಿಂದ ಬೀಗಿದ.


ಮೆಲಕ್ಕೋರನ್‍ನ ಕೆಲಸವನ್ನು ಮೆಚ್ಚಿಕೊಂಡು ಕುರುಮಾನ್ ಅವನಿಗೆ ಬೆಲೆಬಾಳುವ ಉಡುಗೂರೆಗಳನ್ನು ನೀಡಿ ಸತ್ಕರಿಸಿದ.
ಗಾಜಿನ ಮರವು ನೋಡಲು ಅದ್ಭುತವಾಗಿತ್ತು. ಸೌಂದರ್ಯದಖಣಿಯಂತಿತ್ತು. ಸೌಂದರ್ಯದಲ್ಲಿ ಅದನ್ನು ಸರಿಗಟ್ಟುವ ಮತ್ತಾವ ವಸ್ತುಗಳು ಅಲ್ಲಿರಲಿಲ್ಲ. ಆದರೇನು? ಅದರಲ್ಲಿ ಸುವಾಸನೆಯೇ ಇರಲಿಲ್ಲ. ಆ ಮರದ ಟೊಂಗೆಗಳಿಗೆ ರಮ್ಯವಾದ ಕೃತಕ ಗೂಡುಗಳನ್ನು ನೇತುಹಾಕಲಾಗಿತ್ತು. ಆದರೆ ಅಲ್ಲಿ ಬಣ್ಣಬಣ್ಣದ ಹಕ್ಕಿಗಳು ತಮ್ಮ ರೆಕ್ಕೆಗಳನ್ನು ಫಡಫಡಿಸುತ್ತಾ ಕುಳಿತಿರಲಿಲ್ಲ.


ಈಗ ಉಣ್ಣಿ ಕಥೆ ಹೇಳುವದನ್ನು ಮುಗಿಸಿ ಮುಠಾಶಿಯೆಡೆಗೆ ನೋಡಿದ. ಅವಳು ಅದಾಗಲೇ ಗೋಡೆಗೊರಗಿಕೊಂಡು ನಿದ್ರೆ ಹೋಗಿದ್ದಳು.


ಮಲಯಾಳಂ ಮೂಲ: ಎಮ್. ಮುಕುಂದನ್
ಇಂಗ್ಲೀಷಗೆ: ಕೆ,ಎಮ್.ಶರೀಫ್ ಮತ್ತು ನೀರದಾ ಸುರೇಶ್
ಕನ್ನಡಕ್ಕೆ: ಉದಯ್ ಇಟಗಿ

Sunday, November 29, 2009

ನಾವು ಹುಡುಗರೇ ಹೀಗೆ........

(1)
ಹೌದು ಕಣೋ ಮಂಜು
ನಾವು ಹುಡುಗರೇ ಹೀಗೆ.......
ಏನೇನೋ ವಟಗುಟ್ಟಲು ಹೋಗಿ
ಹೇಳಬೇಕಾದ್ದನ್ನೆಲ್ಲ ನೇರವಾಗಿ ಹೇಳಿ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
ಮೈ ಜುಮ್ಮೆನ್ನಿಸುವ ಆಲೋಚನೆಗಳನೆಲ್ಲಾ
ನಮ್ಮೊಳಗೆ ಹಿಡಿದಿಟ್ಟುಕೊಳ್ಳಲಾರದೆ
ಹಾಳೆಯ ಮೇಲೆ ಬರೆದು ರೆಡ್‍ಹ್ಯಾಂಡಾಗಿ ಸಿಕ್ಕಿಬೀಳುತ್ತೇವೆ
ಆಗಾಗ ಗುಲಾಬಿಯೊಂದನ್ನು ಹಿಡಿದು
ಹುಡುಗಿಯರ ಹಿಂದೆನೇ ಸುತ್ತಿ ಸುತ್ತಿ ಉಗಿಸಿಕೊಳ್ಳುತ್ತೇವೆ
ಇಲ್ಲವೇ ಒಮ್ಮೊಮ್ಮೆ ಸಿನೆಮಿಕ್ಕಾಗಿ
ರೋಡಲ್ಲಿಯೇ ‘ಐ ಲವ್ ಯು’ ಎಂದು ಕಿರುಚಿ ಹೇಳಿ
ಅವರನ್ನೂ ಪೇಚಿಗೆ ಸಿಲುಕಿಸಿ ನಾವೂ ಪೇಚಿಗೆ ಸಿಲಕುತ್ತೇವೆ
ಇನ್ನೂ ಏನೇನೊ ಬೇರೆ ದಾರಿ ಹುಡುಕಿ
ಹುಡುಗಿಯರನ್ನು ಒಲಿಸಿಕೊಳ್ಳಲು ಹೆಣಗುತ್ತೇವೆ
ಅದನ್ನು ಅರ್ಥ ಮಾಡಿಕೊಳ್ಳಲಾರದೆ
ಹುಡುಗಿಯರು ಕೈ ತಪ್ಪಿದಾಗ ನಿರಾಶರಾಗಿ
ಸ್ವಲ್ಪ ದಿವಸ ಗಡ್ದ ಬಿಡುತ್ತೇವೆ ಗುಂಡು ಹಾಕುತ್ತೇವೆ
ಆದರೆ ಮತ್ತೊಬ್ಬ ದೇವದಾಸನಾಗದಂತೆ ಎಚ್ಚರವಹಿಸುತ್ತೇವೆ
ಮುಂದೆ ಅಪ್ಪ ಅಮ್ಮ ಹುಡುಕಿದ ಹುಡುಗಿಯನ್ನೇ ಮದುವೆಯಾಗಿ
ಹೊಸ ಬದುಕಿಗೆ ಕಾಲಿಡುತ್ತೇವೆ
ಆಗಾಗ ಹೆಂಡತಿಯಲ್ಲಿ ಅವಳಿಗೆ ಗೊತ್ತಾಗದಂತೆ
‘ಅವಳನ್ನು’ ಹುಡುಕುತ್ತೇವೆ
ಆದರೆ ಅವಳ ಕೈಲಿ ಸಲೀಸಾಗಿ ಸಿಕ್ಕಿಬಿದ್ದು ಛೀ, ಥೂ ಅನಿಸಿಕೊಳ್ಳುತ್ತೇವೆ
ಅಷ್ಟರಲ್ಲಿ ಬಚ್ಚಿಟ್ಟ ಭಾವನೆಗಳನೆಲ್ಲಾ ಬಿಚ್ಚಿಟ್ಟು
ಹೆಂಡತಿಯ ಮುಂದೆ ಬಟಾಬಯಲಾಗಿಬಿಟ್ಟಿರುತ್ತೇವೆ
ಮುಂದಿನ ಬದುಕಲ್ಲಿ ಮಜವೇ ಇರುವದಿಲ್ಲ ಮಂಜು.......
(2)
ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ
ಎರಡೇ ಎರಡು ಮಕ್ಕಳ ತಂದೆಯಾಗಿ
ಏದುಸಿರುಬಿಡುತ್ತಾ ಮಕ್ಕಳಿಗೆ ಐಸ್ ಕ್ರೀಂ ಕೊಡಿಸುವಾಗ
‘ಅವಳು’ ಸಿಗುತ್ತಾಳೆ
ಕೂಲಾಗಿ ನಗುನಗುತ್ತಾ ಒಂದು ಹಾಯ್ ಹೇಳುತ್ತೇವೆ
ಆದರವಳು ‘ನೀನು ನನ್ನವನಾಗಿದ್ದರೆ ಎಷ್ಟು ಚನ್ನಾಗಿರುತ್ತಿತ್ತಲ್ವ?’
ಎಂದು ಕಣ್ಣಲ್ಲಿಯೇ ಹೇಳುತ್ತಾಳೆ
ನಾವು ಮಾತ್ರ ಅಸಹಾಯಕ ನಗೆ ನಗುತ್ತಾ
ಅವಳ ಗಂಡ ಮಕ್ಕಳ ಯೋಗಕ್ಷೇಮ ವಿಚಾರಿಸುವದೇ ಇಲ್ಲ
ಯಾಕೆಂದರೆ ಅವನದೂ ಅದೇ ಕಥೆಯಲ್ಲವೆ?
ಅದು ನಮಗೆ ಗೊತ್ತಿದ್ದದ್ದೇ ಅಲ್ಲವೇ?
ನಾವು ಹುಡುಗರೇ ಹೀಗೆ..........

-ಉದಯ್ ಇಟಗಿ

ವಿ.ಸೂ: ಈ ಕವನವನ್ನು ಪ್ರತಿಭಾ ನಂದಕುಮಾರವರ “ನಾವು ಹುಡುಗಿಯರೇ ಹೀಗೆ” ಎನ್ನುವ ಕವನದ ಧಾಟಿಯಲ್ಲಿ ಹುಡುಗರು ಹೇಗಿರಬಹುದು ಎಂದು ಯೋಚಿಸಿ ಒಂದಷ್ಟು ತಮಾಷೆ ಒಂದಷ್ಟು ವಿಷಾದ ಭಾವದೊಂದಿಗೆ ಬರೆದಿರುವದು. ಹುಡುಗರಿಗೆ ಇಷ್ಟವಾಗಬಹುದು.