Demo image Demo image Demo image Demo image Demo image Demo image Demo image Demo image

ಬಿಟ್ಟೆನೆಂದರೂ ಬಿಡದೀ ಮಾಯೆ..........

  • ಶನಿವಾರ, ಫೆಬ್ರವರಿ 02, 2013
  • ಬಿಸಿಲ ಹನಿ
  • ಇಲ್ಲಿ ಈಗ ಭರ್ತಿ ಚಳಿ. ಅಂದರೆ ಇಲ್ಲೀಗ ಚಳಿಗಾಲದ ಪರ್ವಕಾಲ. ಅಬ್ಬಾ! ಅದ್ಯಾವ ಪರಿ ಚಳಿ ಎಂದರೆ ಒಳಗೆ ಥರ್ಮಲ್ ವೇರ್ಸ್, ಮೇಲೆ ದಪ್ಪದಪ್ಪನೆ ಉಣ್ಣೆ ಅಂಗಿ, ಕೈಗೆ ಗ್ಲೌಸುಗಳನ್ನು ಹಾಕಿಕೊಂಡು ಕುಳಿತರೂ ಗಡಗಡ ನಡುಗಿಸುವ ಈ ಚಳಿ ನಮ್ಮ ಮೈ ಮನಸ್ಸುಗಳನ್ನು ಮರಗಟ್ಟಿಸಿಬಿಡುತ್ತದೆ. ಎಲ್ಲಿ ಹೋದರೂ ಬಿಡದ ಈ ಚಳಿ ನಮ್ಮನ್ನು ಬಲವಂತವಾಗಿ ಹೀಟರ್ ಗಳ ಮುಂದೆ ಎಳೆದು ತಂದು ಕೂರಿಸಿಸಿಬಿಡುತ್ತದೆ. ಹೀಗೆ ಹೀಟರ್ ಮುಂದೆ ಕುಳಿತುಕೊಂಡು ಮೈ ಕಾಯಿಸಿಕೊಳ್ಳುತ್ತಿದ್ದಂತೆ ಮರಗಟ್ಟಿದ ಮೈ ನಿಧಾನವಾಗಿ ಸಡಿಲವಾಗತೊಡಗುತ್ತದೆ. ಮೈ ಬೆಚ್ಚಗಾಗುತ್ತಿದ್ದಂತೆ ಮನಸ್ಸು ಕೂಡಾ ತಾನೇ ತಾನಾಗಿ ಅದೆಂಥದೋ ಬೆಚ್ಚಗಿನ ಭಾವಕ್ಕೆ ಒಳಗಾಗಿ ಬಿಡುತ್ತದೆ. ಸ್ವಲ್ಪ ಹೊತ್ತು ಮೈ ಕಾಯಿಸಿಕೊಳ್ಳುವದು, ಮತ್ತೆ ಹೀಟರ್ ನಿಂದ ಹಿಂದೆ ಸರಿಯೋದು. ಮೈ ಕಾಯಿಸಿಕೊಳ್ಳುವದು, ಮತ್ತೆ ಹೀಟರ್ ನಿಂದ ಹಿಂದೆ ಸರಿಯೋದು. ಹೀಗೆ ಸಾಗುತ್ತಲೇ ಇರುತ್ತದೆ. ಹೀಟರ್ ಮುಂದೆ ಮೈ ಕಾಯಿಸುತ್ತಾ ಕುಳಿತಂತೆ ಅದೆಂಥದೋ ಸುಖ ನಮ್ಮನ್ನು ತನ್ನೊಳಗೆ ಎಳೆದುಕೊಂಡುಬಿಡುತ್ತದೆ. ಹೀಟರ್ ಬಿಟ್ಟೇಳಬೇಕು. ಆದರೆ ಬಿಟ್ಟೇಳದಂತೆ ಮಾಡಿಬಿಡುತ್ತದೆ. ಬಿಟ್ಟೆನೆಂದರೂ ಬಿಡದೀ ಮಾಯೆ!
    ಅಂದಹಾಗೆ ಈ ಸಾರಿ ಚಳಿಗಾಲಕ್ಕೆ ಲಿಬಿಯಾದ ಎಲ್ಲ ಕಛೇರಿಗಳ ಕೆಲಸದ ಸಮಯವನ್ನು ಬದಲು ಮಾಡಿದ್ದಾರೆ. ಅಲ್ಲಲ್ಲ ದಿನದ ಸಮಯವನ್ನೇ ಒಂದು ಘಂಟೆಯಷ್ಟು ಹಿಂದೆ ತಳ್ಳಿದ್ದಾರೆ. ಅಂದರೆ ಈ ಹಿಂದೆ ದಿನದ ಅವಧಿಯ ಪ್ರಕಾರ ಎಂಟು ಘಂಟೆಗೆ ಆರಂಭವಾಗಬೇಕಿದ್ದ ನಮ್ಮ ಕಾಲೇಜು ಈಗ ಒಂಬತ್ತು ಘಂಟೆಗೆ ಆರಂಭವಾಗುತ್ತದೆ. ಆದರೆ ಅವರು ಅದನ್ನೇ ಎಂಟು ಘಂಟೆ ಎಂದು ಕರೆಯುತ್ತಾರೆ. ಹಿಂದಿನ ಅವಧಿಯ ಪ್ರಕಾರ ಇಲ್ಲಿ ಬೆಳಗಿನ ಎಂಟು ಘಂಟೆಗೆ ಇನ್ನೂ ಸ್ವಲ್ಪ ಕತ್ತಲಿರುವದರಿಂದ ಕಛೇರಿಗಳಿಗೆ ಹೋಗಲು ತೊಂದರೆಯಾಗುತ್ತದೆಂದು ಈಗ ಒಂದು ಘಂಟೆಯಷ್ಟು ಸಮಯವನ್ನು ಕಡಿತಗೊಳಿಸಿದ್ದಾರೆಂದೂ ಹಾಗೂ ಹಿಂದಿನ ಒಂಬತ್ತು ಘಂಟೆಯನ್ನೇ ಈಗ ಅವರು ಎಂಟು ಘಂಟೆಯೆಂದು ಹೇಳಲು ಸರಕಾರವೇ ಆದೇಶ ಹೊರಡಿಸಿದೆಯೆಂದೂ ಹೇಳಿದರು. ಅಂದರೆ ಒಂದು ಘಂಟೆಯಷ್ಟು ಸಮಯವನ್ನು ಹಿಂದೆ ಸರಿಸಿದ್ದಾರೆ. ಈ ನಿಯಮವನ್ನು ಗಡಾಫಿ ಇರಬೇಕಾದರೆ ಒಂದೆರೆಡು ವರ್ಷ ಜಾರಿಗೆ ತಂದು ಆಮೇಲೆ ನಿಲ್ಲಿಸಿಬಿಟ್ಟನಂತೆ. ಆದರೆ ಈಗ ಹೊಸ ಸರಕಾರ ಮತ್ತೆ ಅದನ್ನೇ ಜಾರಿಗೆ ತಂದಿದೆ. ಅಂದಹಾಗೆ ಈ ತರ ಒಂದು ಘಂಟೆಯಷ್ಟು ಸಮಯವನ್ನು ಹಿಂದೆ ತಳ್ಳುವದು ಯಾಕೆ? ಬದಲಾಗಿ ಎಂಟು ಘಂಟೆಗೆ ಆರಂಭಿಸಿ ಎರಡು ಘಂಟೆಗೆ ಮುಗಿಸುವ ಬದಲು ಒಂಬತ್ತು ಘಂಟೆಗೆ ಆರಂಭಿಸಿ ಮೂರು ಘಂಟೆಗೆ ಮುಗಿಸಬಹುದಲ್ಲ? ಅದ್ಯಾಕೆ ಸುಖಾಸುಮ್ಮನೆ ಸಮಯವನ್ನು ಬದಲಾಯಿಸುತ್ತಿರಿ? ಎಂದು ನಾನು ನನ್ನದೇ ತಾರ್ಕಿಕ ನೆಲೆಗಟ್ಟಿನಲ್ಲಿ ಇಲ್ಲಿಯವರನ್ನು ಕೇಳಿದ್ದೆ. ಅವರು ಮೊದಲು ನನ್ನ ತರ್ಕವನ್ನು ಅರ್ಥಮಾಡಿಕೊಳ್ಳದೇ ಪಿಳಿಪಿಳಿ ಕಣ್ಣು ಬಿಟ್ಟರೆ ನಂತರ ಎಲ್ಲವೂ ಒಂದೇ ಎಂದು ನಕ್ಕಿದ್ದರು. ಸಮಯವನ್ನೇ ಬದಲಾಯಿಸುವ ಇವರು ಇನ್ನೇನನ್ನು ಬದಲಾಯಿಸಬಲ್ಲರು? ಎಂದು ಸುಮ್ಮನೆ ನನ್ನಷ್ಟಕ್ಕೆ ನಾನೇ ಏನೇನೋ ಕಲ್ಪಿಸಿಕೊಂಡು ನಗುತ್ತಿರಬೇಕಾದರೆ ನನ್ನ ಜೋರ್ಡಾನಿ ಸಹೋದ್ಯೋಗಿಯೊಬ್ಬ ತಮ್ಮ ದೇಶದಲ್ಲೂ ಚಳಿಗಾಲದಲ್ಲಿ ಒಂದು ಘಂಟೆಯಷ್ಟು ಸಮಯವನ್ನು ಕಡಿತಗೊಳಿಸುತ್ತಾರೆಂದೂ ಅದರಲ್ಲಿ ನಗುವಂಥದ್ದೇನಿದೆಯೆಂದೂ ನನ್ನ ಹುಸಿಮುನಿಸಿನಿಂದ ನೋಡಿದ್ದ. ನಾನು ಎಷ್ಟೇ ಆಗಲಿ ನೀವು ಅರಬ್‍ರೆಲ್ಲಾ ಒಂದೇ ತಳಿ ಅಲ್ವಾ ಎಂದು ಅವನೆದುರಿಗೇ ಮತ್ತಷ್ಟು ಜೋರಾಗಿ ನಕ್ಕಿದ್ದೆ.

    ನಾವು ಲಿಬಿಯಾಕ್ಕೆ ಬರುವ ಮುನ್ನ ನಮ್ಮ ಕನ್ಸಲ್ಟಂಟ್ ಇಲ್ಲಿಯ ಚಳಿಯ ಬಗ್ಗೆ ಸಾಕಷ್ಟು ಹೇಳಿದ್ದರೂ ಅಷ್ಟೇನೂ ಇರಲಿಕ್ಕಿಲ್ಲ ಎಂದು ಉದಾಸೀನ ಮಾಡಿದ್ದೆವು. ಆದರೆ ಇಲ್ಲಿ ಯಾವಾಗ ಚಳಿಗಾಲ ಶುರುವಾಯಿತೋ ನಮ್ಮ ಕನ್ಸಲ್ಟಂಟ್ ಹೇಳಿದ್ದು ವಾಸ್ತವದಲ್ಲಿ ಅರಿವಾಗತೊಡಗಿತ್ತು. ಇಂಡಿಯಾದಿಂದ ತಂದ ಉಣ್ಣೆ ಬಟ್ಟೆಗಳು ಸಾಕಾಗದೆ ಇಲ್ಲಿಯ ಸೂಕಿ(ಸಂತೆ)ನಲ್ಲಿ ವಿಶೇಷವಾಗಿ ಚಳಿಗಾಲಕ್ಕೆಂದೇ ತಯಾರಿಸಿದ ಮತ್ತಷ್ಟು ಬಟ್ಟೆಗಳನ್ನು ಖರೀದಿಸಿದ್ದೆವು. ಬಂದ ಹೊಸತರಲ್ಲಿ ಇಲ್ಲಿಯ ಚಳಿಗೆ ನಮ್ಮ ದೇಹ ಹೊಂದಿಕೊಳ್ಳದೆ ಸಾಕಷ್ಟು ಪಾಡು ಪಡಬೇಕಾಯಿತು. ನಿಧಾನವಾಗಿ ನಮ್ಮ ದೇಹ ಇಲ್ಲಿಯ ಚಳಿಗೆ ಅಲರ್ಜಿಕ್ ಆಗಿ ನವೆ ಶುರುವಾಯಿತು. ಯಾವಾಗೆಂದರೆ ಅವಾಗ ಎಲ್ಲೆಂದರಲ್ಲಿ ನಮ್ಮ ಮೈಯನ್ನು ಕೆರೆದು ಕೆರೆದು ಸಾಕಾಗಿಹೋಯಿತು. ನಿದ್ರೆಯಿಲ್ಲದೆ ಹೊರಳಾಡಿದೆವು. ಎಷ್ಟೋ ಸಾರಿ ಈ ಪರಿಯ ನವೆಯನ್ನು ತಡೆದುಕೊಳ್ಳಲಾಗದೆ ನಮ್ಮ ಕೆಲಸದ ಕಾಂಟ್ರ್ಯಾಕ್ಟ್‍ನ್ನು ಅರ್ಧದಲ್ಲಿ ಮೊಟಕುಗೊಳಸಿ ಹೋಗಿಬಿಡೋಣ ಎನಿಸಿದ್ದಿದೆ. ಆದರೆ ನಮಗೆ ಸಿಗುತ್ತಿದ್ದ ದೊಡ್ಡ ಮೊತ್ತದ ಸಂಬಳ ‘ಇವತ್ತಲ್ಲ ನಾಳೆ ಸರಿಹೋಗಬಹುದು, ಇರು’ ಎಂದು ಹಿಡಿದು ನಿಲ್ಲಿಸಿತ್ತು. ತದನಂತರದಲ್ಲಿ ಇಲ್ಲಿಯ ಆಸ್ಪತ್ರೆಗಳಲ್ಲಿ ನಮ್ಮ ಇಂಡಿಯನ್ ಡಾಕ್ಟರುಗಳು ಇಂಟ್ರ‍ಾ ಮ್ಯಾಸ್ಕುಲರ್ ಇಂಜೆಕ್ಷನ್ ಕೊಟ್ಟು ಕಡಿಮೆ ಮಾಡಿದ್ದರು. ಕ್ರಮೇಣ ನಮ್ಮ ದೇಹ ಇಲ್ಲಿಯ ಚಳಿಗೆ ಹೊಂದಿಕೊಳ್ಳತೊಡಗಿತು.
    ಒಂದೊಂದು ಸಾರಿ ಇಷ್ಟೊಂದು ಚಳಿ ಅಭ್ಯಾಸವಿರದ ನಮಗೆ ಈ ಬದುಕು ಬೇಕಾ? ಸಾಕಿನ್ನು ಹೊರಟುಬಿಡೋಣ ಅಂತೆಲ್ಲಾ ಅನಿಸುತ್ತದೆ. ಆದರೆ ಒಂದಾದ ಮೇಲೊಂದರಂತೆ ಉದ್ಭವಿಸುವ ನಮ್ಮ ಬದುಕಿನ ಕಮಿಟ್‍ಮೆಂಟ್‍ಗಳು ಮತ್ತು ನಮ್ಮ ಒಂದಷ್ಟು ಆಸೆಗಳು ನಮ್ಮನ್ನು ಇಲ್ಲಿಯೇ ಜೋತು ಬೀಳುವಂತೆ ಮಾಡುತ್ತವೆ. ಜೊತೆಗೆ ನಮ್ಮ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರ ಸಣ್ಣ ಪುಟ್ಟ ಕಮಿಟ್‍ಮೆಂಟಗಳು ಕೂಡ ನಮ್ಮ ಹೆಗಲೇರಿ ನಮ್ಮನ್ನು ಹೋಗದಂತೆ ತಡೇಹಿಡಿಯುತ್ತವೆ. ಹಾಗೆ ನೋಡಿದರೆ ಹೊರದೇಶದಲ್ಲಿ ದುಡಿಯುತ್ತಿರುವ ನಮ್ಮಂಥವರು ಇಲ್ಲಿಗೆ ಬರುವ ಮುನ್ನ ಈ ದುಡಿಮೆಯಿಂದ ಇದ್ದ ಬಿದ್ದ ಒಂದಷ್ಟು ಸಾಲಗಳನ್ನು ತೀರಿಸಿ ಮತ್ತೆ ಇಂಡಿಯಾಕ್ಕೆ ವಾಪಾಸಾಗಿ ನಮ್ಮ ಎಂದಿನ ಕೆಲಸವನ್ನು ಮುಂದುವರಿಸದರಾಯಿತು ಎಂದುಕೊಂಡು ಬರುತ್ತೇವೆ. ಆದರೆ ಕ್ರಮೇಣ ಮಕ್ಕಳನ್ನು ಒಳ್ಳೆ ಸ್ಕೂಲಿಗೆ ಸೇರಿಸಲು ಹಣ ಬೇಕು. ಅದಕ್ಕೆ ಇನ್ನೊಂದು ವರ್ಷ ದುಡಿದುಕೊಂಡು ಹೋದರಾಯಿತು ಎಂದು ಇನ್ನೊಂದು ವರ್ಷ ಮುಂದುವರೆಸುತ್ತೇವೆ. ಅದು ಮುಗಿಯುತ್ತಿದ್ದಂತೆ ವಾರಿಗೆಯವರು, ಸ್ನೇಹಿತರು ಒಂದು ಸೈಟ್ ತೆಗೆದುಕೊಂಡಿದ್ದಾರೆ. ನಾನೂ ಒಂದು ತೆಗೆದುಕೊಳ್ಳಬೇಕು. ಮತ್ತೆ ಅದಕ್ಕೋಸ್ಕರ ಇನ್ನೊಂದೆರೆಡು ವರ್ಷ ಉಳಿಯುತ್ತೇವೆ. ಅದರ ಕಮಿಟ್‍ಮೆಂಟ್ ಮುಗಿಯುತ್ತಿದ್ದಂತೆ ಇನ್ನೊಂದು ಸೈಟ್ ತೆಗೆದುಬಿಡೋಣ ಕಷ್ಟಕಾಲಕ್ಕೆ ಆಗಬಹುದು ಎನ್ನುವ ದೂರದ ಆಸೆ. ಅದಕ್ಕೋಸ್ಕರ ಮತ್ತೊಂದೆರೆಡು ವರ್ಷ. ಅದರ ಸಾಲ ಎಲ್ಲಾ ತೀರುತ್ತಿದ್ದಂತೆ ಹೇಗೂ ಒಳ್ಳೆ ಸಂಬಳ ಇದೆ. ನಮ್ಮದೇ ಒಂದು ಸೂರನ್ನು ಯಾಕೆ ಮಾಡಿಕೊಳ್ಳಬಾರದು ಎನಿಸಿ ಮತ್ತೆ ಅದಕ್ಕಾಗಿ ಇನ್ನೊಂದೆರೆಡು ವರ್ಷ ಉಳಿಯುತ್ತೇವೆ. ಅದೆಲ್ಲಾ ಮುಗಿಯುತ್ತಿದ್ದಂತೆ ಇಷ್ಟೊಂದು ದೊಡ್ಡ ಮೊತ್ತದ ಸಂಬಳಕ್ಕೆ ಕೆಲಸಮಾಡಿ ಒಗ್ಗಿಹೋದ ಮನಸ್ಸು ಇಂಡಿಯಾದಲ್ಲಿ ಸಿಗುವ ಸಣ್ಣ ಮೊತ್ತದ ಸಂಬಳಕ್ಕೆ ಕೆಲಸಮಾಡಲು ಅಣಿಯಾಗುತ್ತದೆಯೇ? ಹೀಗಾಗಿ ಮತ್ತೆ ಇನ್ನೊಂದೆರೆಡು ವರ್ಷ ದುಡಿದುಕೊಂಡು ಬಂದ ಹಣವನ್ನು ಬ್ಯಾಂಕಿನಲ್ಲಿಟ್ಟುಕೊಂಡು ನೆಮ್ಮದಿಯ ಜೀವನ ನಡೆಸದರಾಯಿತು ಎಂದುಕೊಂಡು ಮತ್ತೆ ಒಂದೆರೆಡು ವರ್ಷ ಮುಂದೂಡುತ್ತೇವೆ. ಹೀಗೆ ಹೋಗಬೇಕೆಂದುಕೊಳ್ಳುವದು....... ಮತ್ತೆ ಮುಂದೂಡುವದು ..... ಹೋಗಬೇಕೆಂದುಕೊಳ್ಳುವದು....... ಮತ್ತೆ ಮುಂದೂಡುವದು .....ನಡೆಯುತ್ತಲೇ ಇರುತ್ತದೆ. ಮನುಷ್ಯನ ಆಸೆಗಳಿಗೆ ಕೊನೆ ಎಲ್ಲಿ? ಹೀಗೆ ಒಂದಾದ ಮೇಲೊಂದು ಆಸೆಗಳನ್ನು ತೀರಿಸಿಕೊಳ್ಳುವಷ್ಟೊತ್ತಿಗೆ ನಮ್ಮ ಬದುಕಿನ ಎಂಟತ್ತು ವರ್ಷಗಳನ್ನು ನಿಜವಾದ ಆಪ್ಯಾಯನಗಳಿಲ್ಲದೆ ಕಳೆದುಬಿಟ್ಟಿರುತ್ತೇವೆ.

    ಎಷ್ಟೋ ಸಾರಿ ಇರುವಲ್ಲೇ, ಇದ್ದಿದ್ದರಲ್ಲೇ, ಇರುವಂತೆಯೇ ಬದುಕೋಣ. ಇಲ್ಲಿ ಸುಖಾಸುಮ್ಮನೆ ಸತ್ತು ಬದುಕುವದೇಕೆ? ಎಂದುಕೊಳ್ಳುತ್ತೇವೆ. ಊಹೂಂ ಮನಸ್ಸು ಕೇಳುವದೇ ಇಲ್ಲ. ನಮಗೆ ದಿನಾರಿನಲ್ಲಿ ಬರುವ ಸಂಬಳವನ್ನು ಪ್ರತಿ ತಿಂಗಳು ಖರ್ಚು ಕಳೆದು ಎಷ್ಟು ಉಳಿಯಿತು ಎನ್ನುವದನ್ನು ಡಾಲರ್ ನಿಂದ (ಅಂದರೆ ಡಾಲರ್ ನಿಂದ ದಿನಾರಿಗೆ ಇರುವ ಎಕ್ಸ್ಚೆಂಚ್ ರೇಟ್‍ನಿಂದ) ದಿನಾರಿಗೆ ಭಾಗಿಸುತ್ತಾ ಮತ್ತೆ ಅದನ್ನು ಐವತೈದರಿಂದ ರೂಪಾಯಿಗಳಿಗೆ ಗುಣಿಸಿ, ಈ ತಿಂಗಳು ಇಷ್ಟು ಉಳಿಸಿದ್ದೇವೆ ಎಂದು ಹೆಮ್ಮೆಯಿಂದ ಬೀಗುತ್ತೇವೆ. ವರ್ಷದ ಕೊನೆಯಲ್ಲಿ ಅಬ್ಬಾ ಈ ಸಾರಿಯ ಗಳಿಕೆ ಇಷ್ಟು ಆಯ್ತಲ್ಲ ಎಂದು ಖುಷಿಯಿಂದ ಮುಖವರಳಿದರೆ ಮನಸ್ಸು ಇನ್ನೊಂದು ವರ್ಷ ದುಡಿದುಕೊಂಡು ಹೋದರಾಯಿತು ಎಂದು ಲೆಕ್ಕ ಹಾಕುತ್ತದೆ. ಅದು ಕಳೆಯುತ್ತಿದ್ದಂತೆ ಮತ್ತೆ ಮುಂದಿನ ವರ್ಷಕ್ಕೆ ಮುಂದೂಡಿರುತ್ತೇವೆ. ಹೀಗೆ ಭಾಗಾಕಾರ, ಗುಣಾಕಾರ, ಸಂಕಲನದಲ್ಲಿಯೇ ಲೆಕ್ಕ ಹಾಕುವ ನಾವು ನಮ್ಮ ಬದುಕಿನಲ್ಲಿ ಕಳೆದುಕೊಂಡಿದ್ದೇನು ಎನ್ನುವದನ್ನು ನಾವು ಲೆಕ್ಕ ಹಾಕುವದೇ ಇಲ್ಲ. ನಾವು ಹೋಗಲಿ ಹೊರಜಗತ್ತು ಕೂಡಾ ಲೆಕ್ಕಹಾಕುವದಿಲ್ಲ.

    ಹಾಗೆ ನೋಡಿದರೆ ಹೊರಜಗತ್ತು ನಮ್ಮಂಥ ಎನ್‍ಆರ್‍ಐಗಳ ಬಗ್ಗೆ ಮತ್ತು ನಮ್ಮ ಬದುಕಿನ ಬಗ್ಗೆ ಅನೇಕ ಫ್ಯಾಂಟಸಿಗಳನ್ನು ಕಟ್ಟಿಕೊಂಡಿರುತ್ತದೆ. ದೊಡ್ದ ಮೊತ್ತದ ಸಂಬಳ ತರುವ ನಾವು ಅವರ ಕಣ್ಣಲ್ಲಿ ಸ್ವರ್ಗ-ಸುಖಿಗಳಾಗಿ ಕಾಣುತ್ತೇವೆ. ಅಸಲಿಗೆ ನಾವು ಎಂತೆಂಥ ಸ್ವರ್ಗ-ಸುಖಗಳಿಂದ ವಂಚಿತರಾಗಿದ್ದೇವೆ ಎನ್ನುವದು ಅವರ ಗಮನಕ್ಕೆ ಬರುವದೇ ಇಲ್ಲ. ನಮ್ಮ ನೋವುಗಳು, ನಮ್ಮ ಬಾಧೆಗಳು, ನಮ್ಮ ತಳಮಳಗಳು, ತವಕ-ತಲ್ಲಣಗಳು ಯಾರಿಗೂ ಅರ್ಥವಾಗುವದೇ ಇಲ್ಲ. ಹೊರಗಿನವರು ಹೋಗಲಿ ನಮ್ಮ ಹತ್ತಿರದವರಾದ ನಮ್ಮ ನೆಂಟರು, ಸ್ನೇಹಿತರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಯಾರೂ ಅರ್ಥಮಾಡಿಕೊಳ್ಳುವದಿಲ್ಲ. ಅವರೇನಪ್ಪಾ ಎನ್‍ಆರ್‍ಐಗಳು. ಅಷ್ಟು ಸಂಬಳ ತರುತ್ತಾರೆ, ಅವರಿಗೇನು ಕಮ್ಮಿ, ಸುಖವಾಗಿದ್ದಾರೆ ಎಂಬ ಭಾವದಲ್ಲೇ ನಮ್ಮನ್ನು ನೋಡುತ್ತಾರೆ. ಆದರೆ ಬದುಕನ್ನು ಕಟ್ಟಿಕೊಳ್ಳಲು ಸಾವಿರ ಸಾವಿರ ಮೈಲಿ ದೂರದಲ್ಲಿ ಬಂದು ಕುಳಿತ ನಮ್ಮಂಥವರ ನೋವುಗಳು, ಸಂಕಷ್ಟಗಳು, ತಳಮಳಗಳು, ವ್ಯಥೆಗಳು. ನಮಗಷ್ಟೇ ಗೊತ್ತಿರುತ್ತೇವೆ.

    ಹೀಗೆ ಕೆಲಸ ಅರಸಿಕೊಂಡು ದೂರದ ದೇಶದಲ್ಲಿ ಬಂದು ಕುಳಿತಿರುವ ನಾವು ಮೊದಲಿಗೆ ಒಂದು ಸಾಮಾಜಿಕ ಬದುಕಿಗಾಗಿ ತಡಕಾಡುತ್ತೇವೆ. ಅದೇನೂ ಕಷ್ಟವಾಗುವದಿಲ್ಲ. ಎಲ್ಲೆಲ್ಲೂ ಮನುಷ್ಯರೇ ಇರುವದರಿಂದ ಮನುಷ್ಯ ಇತರ ಮನುಷ್ಯರೊಟ್ಟಿಗೆ ಬಹಳ ಬೇಗನೆ ಸಂಪರ್ಕ ಬೆಳೆಸುತ್ತಾನೆ. ಬಣ್ಣ ಬೇರೆ ಇರಬಹುದು, ಭಾಷೆ ಬೇರೆ ಇರಬಹುದು, ನಡಾವಳಿಗಳು ಬೇರೆ ಇರಬಹುದು. ಆದರೆ ಭಾವನೆಗಳು ಒಂದೇ ಅಲ್ವೇ? ನಿಧಾನಕ್ಕೆ ನಮ್ಮ ಭಾವನೆಗಳಿಗೆ ಸರಿಹೊಂದುವವರನ್ನು ಆರಿಸಿ ಅವರೊಟ್ಟಿಗೆ ಭಾವನಾತ್ಮಕ ಸಂಬಂಧ ಬೆಸೆಯುತ್ತೇವೆ. ಹೊಸ ಹೊಸ ನೆನಪುಗಳನ್ನು ಕಟ್ಟಿಕೊಳ್ಳತೊಡಗುತ್ತೆವೆ. ಆದರೆ ಇದರ ಜೊತೆಗೆ ದೂರದ ಇಂಡಿಯಾದಲ್ಲಿರುವ ನಮ್ಮ ಅಕ್ಕ-ತಂಗಿಯರ, ಅಣ್ಣ-ತಮ್ಮಂದಿರ, ಸ್ನೇಹಿತರ, ಹಾಗೂ ಬಂಧುಗಳ ನೆನಪುಗಳು ಇನ್ನಿಲ್ಲದಂತೆ ಕಾಡುತ್ತವೆ. ಜೊತೆಗೆ ನಾವಿಲ್ಲಿರುವಾಗ ಅಲ್ಲಿ ನಡೆಯುವ ನಮ್ಮ ಹತ್ತಿರದ ಬಂಧು-ಬಳಗದವರ ಮದುವೆ-ಮುಂಜಿಯಂಥ ಸಭೆ ಸಮಾರಂಭಗಳನ್ನು ಮಿಸ್ ಮಾಡಿಕೊಳ್ಳುವದು ಮನಸ್ಸಿಗೆ ಖೇದವೆನಿಸುತ್ತದೆ. ಮಾತ್ರವಲ್ಲ ನಮ್ಮ ಮೆಚ್ಚಿನ ಬರಹಗಾರರ ಬಿಡುಗಡೆಗೊಂಡ ಪುಸ್ತಕಗಳನ್ನು ತಕ್ಷಣ ಓದಲಾರದ್ದಕ್ಕೆ ಒದ್ದಾಡುತ್ತೇವೆ. ಜೊತೆಗೆ ಹೊಸ ಹೊಸ ನಾಟಕ, ಸಿನಿಮಾಗಳನ್ನು ತಕ್ಷಣ ನೋಡದ್ದಕ್ಕಾಗಿ ಹಪಹಪಿಸುತ್ತೇವೆ. ನಮಗಿಷ್ಟವಾದ ಪಾನಿಪೂರಿ........ ಎಮ್.ಟಿ.ಆರ್ ಮಸಾಲೆ ದೋಸೆ....... ಮೈಯಾಸ್‍ನ ಊಟ........ ಗಾಂಧಿ ಬಜಾರಿನ ಒಬ್ಬಟ್ಟು,...... ಫೋರ್ತ್ ಬ್ಲಾಕಿನಲ್ಲಿ ಸಣ್ಣದೊಂದು ಶಾಪಿಂಗ್.......ಎಂ.ಜಿ. ರೋಡಿನಲ್ಲಿ ಸುಮ್ಮನೆ ಒಂದು ಸುತ್ತಾಟ........ ಸ್ನೇಹಿತರೊಟ್ಟಿಗೆ ಗುಂಡು ಪಾರ್ಟಿ........ಸಿಗ್ನಲ್‍ನಲ್ಲಿ ಮೈ ಮನಗಳನ್ನು ಪುಳಕಗೊಳಿಸುವ ಸ್ಕೂಟಿ ಹುಡುಗಿಯರ ಕುಡಿನೋಟಗಳು.........ಅಬಬ್ಬಾ ಒಂದೇ.... ಎರಡೇ......ಎಷ್ಟೊಂದು ಆಪ್ಯಾಯಮಾನವೆನಿಸುವಂಥ ಸಂಗತಿಗಳಿಂದ ವಂಚಿತರಾಗುತ್ತೇವೆ.

    ಇಲ್ಲಿ ಲಿಬಿಯಾದಲ್ಲಿ ಇಂಗ್ಲೀಷ್ ಮೀಡಿಯಂ ಶಾಲೆಗಳಿಲ್ಲ. ಇದ್ದರೂ ಹೇಳಿಕೊಳ್ಳುವಂತ ಗುಣಮಟ್ಟವಿರದ ಸ್ಕೂಲುಗಳವು. ಹೀಗಿರುವಾಗ ಹೇಗೆ ತಾನೆ ನಾವು ನಮ್ಮ ಮಕ್ಕಳನ್ನು ಇಲ್ಲಿ ಓದಿಸಲು ಮುಂದಾಗುತ್ತೇವಿ? ಹೀಗಾಗಿ ನಮಗೆ ದೂರದ ಭಾರತದಲ್ಲಿ ನಮ್ಮ ಕುಟುಂಬ ಬಿಟ್ಟಿರುವದು ಅನಿವಾರ್ಯವಾಗುತ್ತದೆ. ಇಂಥ ಸಂದರ್ಭಗಳಲ್ಲಿಯೇ ನಾವು ಕೆಲಸದ ಮೇಲೆ ಇಂಡಿಯಾದಿಂದ ಇಷ್ಟು ದೂರವಿದ್ದರೂ ನಮ್ಮ ಬಗ್ಗೆ ಅಲ್ಲಿ ಏನೇನೋ ಸುದ್ಧಿಗಳು ಹರಡುವದಲ್ಲೆದೇ ನಮ್ಮ ಕುಟುಂಬದವರ ಬಗ್ಗೆಯೂ ಸಹ ಇಲ್ಲ ಸಲ್ಲದ ಕಥೆಗಳು ಹುಟ್ಟಿ ಇಲ್ಲಿಯವರೆಗೂ ರವಾನೆಯಾಗಿಬಿಡುತ್ತವೆ. ಕೆಟ್ಟವರ ಬಗೆಗಿನ ಒಳ್ಳೆ ಸುದ್ದಿ ಕೇಳುವದಕ್ಕಿಂತ ಒಳ್ಳೆಯವರ ಬಗೆಗಿನ ಕೆಟ್ಟ ಸುದ್ಧಿಗಳನ್ನು ಕೇಳಲು ಜಗತ್ತು ಹೆಚ್ಚು ಕಾತರಿಸುತ್ತಿರುತ್ತದೆ. ಅದೇನೇ ಬಂದರೂ ನಮ್ಮ ಮತ್ತು ನಮ್ಮ ಕುಟುಂಬದವರ ಮಧ್ಯ ಇರುವ ಅಪಾರ ನಂಬಿಕೆ ನಮ್ಮನ್ನು ಇಲ್ಲಿ ಗಟ್ಟಿಯಾಗಿ ತಳವೂರುವಂತೆ ಮಾಡುತ್ತದೆ ಮತ್ತು ಒಮ್ಮೊಮ್ಮೆ ನಾವವನ್ನು ತಮಾಷೆಯಾಗಿ ತೆಗೆದುಕೊಳ್ಳುತ್ತಾ ಸಾಕಷ್ಟು ಎಂಜಾಯ್ ಮಾಡುತ್ತೇವೆ. ಆದರೆ ಹೀಗೆ ಹರಡುವ ಸುದ್ದಿಗಳು ಒಮ್ಮೊಮ್ಮೆ ನಿಜವಿದ್ದರೂ ಇರಬಹುದೇ ಎನ್ನುವ ಗುಮಾನಿಯನ್ನು ಹುಟ್ಟು ಹಾಕಿ ಮನಸ್ಸನ್ನು ಕಲಕಿಬಿಡುತ್ತವೆ.

    ಮೊನ್ನೆ ಏನಾಯಿತೆಂದರೆ ಇಲ್ಲಿ ಕೆಲಸ ಮಾಡುವ ನಮ್ಮ ಉತ್ತರ ಪ್ರದೇಶದ ಡಾಕ್ಟರೊಬ್ಬರ ಹೆಂಡತಿಯ ಹಳೆ ಗೆಳತಿಯೊಬ್ಬಳು ಇಂಡಿಯಾದಲ್ಲಿ ಬಹಳ ದಿನಗಳ ನಂತರ ಆಕೆಯನ್ನು ನೋಡಲು ಅವರ ಮನೆಗೆ ಹೋದಾಗ “ಏನೇ, ನಿನ್ನ ಗಂಡ ಅಲ್ಲಿ ಬೇರೆ ಯಾರನ್ನೋ ಮದುವೆಯಾಗಿದ್ದಾನಂತೆ. ನೀನು ನೋಡಿದರೆ ಹಾಗೇ ಇದ್ದೀಯಾ. ನೀನು ಯಾಕೆ ಇನ್ನೊಂದು ಮದುವೆ ಆಗಬಾರದು?” ಎಂದು ಎರಡು ಮಕ್ಕಳ ತಾಯಿಯಾಗಿರುವ ಆಕೆಗೆ ಬಿಟ್ಟಿ ಉಪದೇಶ ಕೊಟ್ಟು ಹೋಗಿದ್ದಲ್ಲದೆ ಅವರಿಬ್ಬರ ಮಧ್ಯ ತಂದಿಟ್ಟಿದ್ದಳು. ಆಕೆ ಮೊದಲು ಇದನ್ನು ನಂಬಿರಲಿಲ್ಲವಾದರೂ “ಯಾವುದಕ್ಕೂ ಈ ಗಂಡಸರನ್ನು ನಂಬೋದಿಕ್ಕಾಗುವದಿಲ್ಲ” ಎಂದು ಆಕೆ ಮೊದಲು ಗಂಡನಿಗೆ ಫೋನ್ ಮಾಡಿ ಆತ ಇನ್ನೊಂದು ಮದುವೆಯಾಗಿಲ್ಲ ಎನ್ನುವದನ್ನು ಖಾತ್ರಿಪಡಿಸಿಕೊಂಡಿದ್ದಳು. ಸಾಲದ್ದಕ್ಕೆ ಇಲ್ಲಿರುವ ಆತನ ಸಹೋದ್ಯೋಗಿಗಳಿಗೆ ಮತ್ತೆ ಮತ್ತೆ ಫೋನ್ ಮಾಡಿ “ನನ್ನ ಗಂಡ ಇನ್ನೊಂದು ಮದುವೆಯಾಗಿಲ್ಲ ತಾನೆ?” ಎಂದು ಮತ್ತೆ ಮತ್ತೆ ಕೇಳಿ ಖಾತ್ರಿಪಡಿಸಿಕೊಂಡಿದ್ದಳು.

    ಇನ್ನೊಂದು ಸಾರಿ ಇಲ್ಲಿ ನನ್ನೊಟ್ಟಿಗೆ ಕೆಲಸ ಮಾಡುವ ಲೆಕ್ಚರರೊಬ್ಬರ ಹೆಂಡತಿಯ ಬಗ್ಗೆ ಏನೇನೋ ಸುದ್ದಿ ಹಬ್ಬಿಸಿ ಅದು ಆಕೆಯ ಗಂಡನ ಮನೆಯವರ ಕಿವಿಯನ್ನು ತಲುಪವಂತೆ ಮಾಡಿಬಿಟ್ಟಿದ್ದರು. ಆಕೆ ದೂರದ ವಿಜಯವಾಡದಲ್ಲಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲು ಕ್ಯಾಷಿಯರ್ ಆಗಿದ್ದರು. ಈಗ ಅವರನ್ನು ಹೌಸಿಂಗ್ ಲೋನ್ ಸೆಕ್ಷನ್‍ಗೆ ಹಾಕಲಾಗಿದೆ. ಲೋನ್ ಸ್ಯಾಂಕ್ಷನ್ ಮಾಡುವ ಮೊದಲು ಆಕೆ ತನ್ನ ಒಬ್ಬ ಪುರುಷ ಸಹೋದ್ಯೋಗಿಯೊಂದಿಗೆ ಇಲ್ಲವೇ ತನ್ನ ಮ್ಯಾನೇಜರ‍್ ನೊಂದಿಗೆ ಸೈಟ್ ಹತ್ತಿರ ಹೋಗಿ ಎಲ್ಲವನ್ನೂ ಪರಿಶೀಲಿಸಬೇಕಾಗುತ್ತದೆ. ಹೀಗೆ ಒಂದೆರೆಡು ಸಾರಿ ಆಕೆ ತನ್ನ ಸಹದ್ಯೋಗಿಯೊಂದಿಗೆ ಸ್ಕೂಟರ್‍ನಲ್ಲೋ, ಆಟೋದಲ್ಲೋ ಹೋಗುವದನ್ನು ಆಕೆಯ ಮನೆಯ ಪಕ್ಕದವನೊಬ್ಬ ನೋಡಿ ಹತ್ತಿರದಲ್ಲಿರುವ ಆಕೆಯ ಗಂಡನ (ಅಂದರೆ ನನ್ನ ಸಹೋದ್ಯೋಗಿಯ) ಊರಿನವರಿಗೆ “ನಿಮ್ಮ ಸೊಸೆ ಯಾರ್ಯಾರದೋ ಜೊತೆ ಓಡಾಡುತ್ತಿದ್ದಾಳೆ” ಎಂದೆಲ್ಲಾ ಏನೇನೋ ಕಥೆ ಕಟ್ಟಿ ಹೇಳಿ ಅವರ ಮನಸ್ಸನ್ನು ಕೆಡಿಸಿದ್ದ. ಅವರು ನೇರವಾಗಿ ನನ್ನ ಸಹೋದ್ಯೋಗಿಗೆ ವಿಷಯ ಹೀಗೀಗೆ ಅಂತಾ ಫೋನ್ ಮಾಡಿ ಹೇಳಿದಾಗ ಅವನು ಬಿದ್ದು ಬಿದ್ದು ನಕ್ಕಿದ್ದಲ್ಲದೆ ಅವನ ಮನೆಯವರಿಗೆ ತನ್ನ ಹೆಂಡತಿಯ ಕೆಲಸದ ವೈಖರಿಯ ಬಗ್ಗೆ ಮತ್ತು ಹಾಗೆ ಆಕೆ ತನ್ನ ಕೆಲಸದ ಮೇಲೆ ತನ್ನ ಪುರುಷ ಸಹೋದ್ಯೋಗಿಗಳೊಟ್ಟಿಗೆ ಹೋಗುವದು ಅನಿವಾರ್ಯವಾಗಿರುತ್ತದೆಂದು ಸಮಜಾಯಿಸಿ ನೀಡುವದರಲ್ಲಿ ಸಾಕುಸಾಕಾಗಿ ಹೋಗಿದ್ದ. ಇನ್ನೊಂದು ಸಾರಿ ಲಕ್ನೋದ ನನ್ನ ಸಹೋದ್ಯೋಗಿಯ ಹೆಂಡತಿ ಒಮ್ಮೆ ತನ್ನ ಗಂಡನ ಗೆಳೆಯನೊಟ್ಟಿಗೆ ಸಿನಿಮಾಕ್ಕೆ ಹೋಗಿದ್ದನ್ನೇ ದೊಡ್ಡ ಗುಲ್ಲು ಮಾಡಿದ್ದರು. ನಾವು ಇಂಥ ವಿಷಯಗಳನ್ನು ತುಂಬಾ ತಮಾಷೆಯಾಗಿ ತೆಗೆದುಕೊಂಡು ಆಗಾಗ ಲೇವಡಿ ಮಾಡುತ್ತಾ ನಗುತ್ತಿರುತ್ತೇವೆ.

    ಇನ್ನು ಇಲ್ಲಿಯ ಅನಿವಾಸಿ ಭಾರತೀಯರ ಸೆಕ್ಸ್ ವಿಷಯಕ್ಕೆ ಸಂಬಂಧಪಟ್ಟ ಹಾಗೆ ನಾನು ನಿಮಗೆ ಹೇಳಲೇಬೇಕು. ತಂತಮ್ಮ ಕುಟುಂಬದಿಂದ ದೂರವಿರುವ ಎಷ್ಟೋ ಎನ್.ಆರ್.ಐಗಳು ಸ್ಪರ್ಷಸುಖವೇನುಂಬುದನ್ನೇ ಮರೆತಿರುತ್ತಾರೆ. ನಾವು ಬಿಡಿ ದೊಡ್ಡ ಕೆಲಸದಲ್ಲಿರುವವರು ವರ್ಷಕ್ಕೆ ಎರಡೊ ಮೂರೋ ಸಾರಿ ನಮ್ಮನಮ್ಮ ಊರಿಗೆ ಹೋಗಿ ಎರಡೆರೆಡು ತಿಂಗಳು ಇದ್ದು ಬರುತ್ತೇವೆ. ಈ ಮಧ್ಯ ನಮ್ಮ ಹೆಂಡಿರು ಮತ್ತು ಮಕ್ಕಳು ರಜೆಯಿದ್ದಾಗ ಬಂದು ಇಲ್ಲಿ ಎರಡು ತಿಂಗಳಮಟ್ಟಿಗೆ ಇದ್ದು ಹೋಗುತ್ತಾರೆ. ಆದರೆ ಕೇವಲ ಮೂವತ್ತು ಸಾವಿರ ರೂಪಾಯಿಗೋಸ್ಕರ (ಊಟ ಮತ್ತು ಸಾಮೂಹಿಕ ವಸತಿ ಉಚಿತ) ಇಲ್ಲಿಗೆ ದುಡಿಯಲು ಬಂದ ಮೇಸ್ತ್ರಿಗಳು, ಪ್ಲಂಬರ್ ಗಳು, ಎಲೆಕ್ಟ್ರೀಶಿಯನ್‍ಗಳ ಕಥೆ ಕೇಳುವದಂತೂ ಬೇಡವೇ ಬೇಡ. ಇವರು ಎರಡು ವರ್ಷಕ್ಕೋ ಮೂರು ವರ್ಷಕ್ಕೋ ಒಂದು ಸಾರಿ ತಮ್ಮ ಊರಿಗೆ ಹೋಗಬೇಕು; ಅದೂ ಅವರ ಕಾಂಟ್ರ್ಯಾಕ್ಟರ್ ವಿಮಾನದ ಟಿಕೇಟ್‍ಗಳನ್ನು ತೆಗೆದುಕೊಟ್ಟರೆ ಮಾತ್ರ. ಹೀಗಾಗಿ ಅವರ ಮೈ ರತಿಸುಖವನ್ನು ಅನುಭವಿಸುವ ರೋಮಾಂಚನವನ್ನೇ ಕಳೆದುಕೊಂಡಿರುತ್ತದೆ. ಹಾಗೆ ಬಿಟ್ಟರೆ ಮರೆತೇಹೋಗಬಹುದೆಂದು ಇಲ್ಲಿಯ ವಿವಿಧ ಸ್ಯಾಟ್ಲೈಟ್‍ಗಳಲ್ಲಿ ಬರುವ ಹಾಟ್ ಮೂವಿಗಳನ್ನು ನೋಡುತ್ತಾ ತಮ್ಮಷ್ಟಕ್ಕೆ ತಾವೇ ರತಿಸುಖ ಅನುಭವಿಸುತ್ತಾರೆ ಹಾಗೂ ಅವನ್ನು ರೆಕಾರ್ಡ (ಕಾಪಿ) ಮಾಡಿಕೊಳ್ಳುತ್ತಾರೆ. ಇಲ್ಲಿಂದ ಎರಡು ವರ್ಷಗಳ ನಂತರವೋ, ಮೂರುವರ್ಷಗಳ ನಂತರವೋ ಭಾರತಕ್ಕೆ ಹೋಗುವಾಗ ಇಲ್ಲಿ ಯಥೇಚ್ಛವಾಗಿ ದೊರೆಯುವ ರತಿಸುಖವನ್ನು ಕೆರಳಿಸುವಂಥ ವಿವಿಧ ಮಾತ್ರೆಗಳನ್ನು ಹಾಗೂ ಜೆಲ್‍ಗಳನ್ನು ಹೊತ್ತೊಯ್ಯುತ್ತಾರೆ. ಮಾತ್ರವಲ್ಲ ಇಂಥವರು ಯಾವಾಗಲೋ ಒಮ್ಮೆ ತಮ್ಮ ಊರಿಗೆ ಹೋಗುವದರಿಂದ ಮಕ್ಕಳಿಗೆ ತಂದೆ ಅಂದರೆ ಯಾರು ಅಂತಾನೆ ಗೊತ್ತಿರುವದಿಲ್ಲ. ಇವರು ಪ್ರೀತಿಯಿಂದ ಅವನ್ನು ಅಪ್ಪಿಕೊಳ್ಳಲು ಹೋದರೆ ಅವು ಅಮ್ಮಂದಿರ ಸೆರಗಿನಲ್ಲಿ ಬಚ್ಚಿಟ್ಟುಕೊಳ್ಳುತ್ತವೆ ಇಲ್ಲವೇ ಇವರನ್ನು ನೋಡಿ ಅಳುತ್ತವೆ. ಹಾಗಂತ ಅವರು ಬಂದು ನಮ್ಮ ಮುಂದೆ ಹೇಳುವಾಗ ಕಣ್ಣೀರಾಗುತ್ತಾರೆ. ಅವರ ಕಣ್ಣೀರು ನೋಡಿ ಒಂದು ಲ್ಯಾಪ್‍ಟಾಪ್ ಹಾಗೂ ಇಂಟರ್ನೆಟ್ ತೆಗೆದುಕೊಂಡು ನಿಮ್ಮ ಕುಟುಂಬದವರ ಜೊತೆ ಸಂಪರ್ಕದಲ್ಲಿದ್ದರೆ ನಿಮ್ಮ ಮಕ್ಕಳು ಭಾವನಾತ್ಮಾಕವಾಗಿ ಹತ್ತಿರವಾಗಬಹುದು ಎಂದೇನೋ ಹೇಳೋಣ ಅಂತಾ ನಾಲಗೆ ತುದಿಯ ಮೇಲೆ ಬರುತ್ತದೆ. ಆದರೆ ತಕ್ಷಣ ಅವರ ಸಣ್ಣಮೊತ್ತದ ಸಂಬಳಕ್ಕೆ ಅವನ್ನೆಲ್ಲಾ ಭರಿಸಲಾಗದು ಎಂದು ಯೋಚಿಸಿ ಸುಮ್ಮನಾಗಿಬಿಡುತ್ತೇವೆ. ಆದರೆ ಅವರ ಬದುಕು ಎಂದಿನಂತೆ ಮತ್ತದೇ ಮೋಹನ ಮುರುಳಿಯ ನಿನಾದವನ್ನು ಬೆನ್ಹತ್ತಿ ಹೋಗುತ್ತದೆ.

    ಹೀಗಿದ್ದೂ ಇಲ್ಲಿ ಕೆಲವರು ಇಪ್ಪತೈದು, ಮೂವತ್ತು ವರ್ಷಗಳನ್ನು ಕಳೆದಿದ್ದಾರೆ. ಇಲ್ಲಿದ್ದುಕೊಂಡೇ ಮಕ್ಕಳನ್ನು ಚನ್ನಾಗಿ ಓದಿಸಿ ಒಳ್ಳೆ ಕೆಲಸಕ್ಕೆ ಸೇರಿಸಿದ್ದಾರೆ. ಸ್ವಂತಕ್ಕೆ ಮನೆಯೊಂದನ್ನು ಕಟ್ಟಿಕೊಂಡಿದ್ದಾರೆ. ಒಂದಷ್ಟು ಬ್ಯಾಂಕ್ ಬ್ಯಾಲೆನ್ಸ್, ಎಫ್.ಡಿಗಳನ್ನು ಮಾಡಿಟ್ಟಿದ್ದಾರೆ. ಹೆಂಡತಿ-ಮಕ್ಕಳಿಗೆ ಚಿನ್ನ ತೆಗೆದಿಟ್ಟಿದ್ದಾರೆ. ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಮಾಡಬೇಕಾದ ಕರ್ತವ್ಯಗಳನ್ನೆಲ್ಲಾ ಮಾಡಿ ಮುಗಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಇಳಿಗಾಲದಲ್ಲೂ ಮನೆ ಕಟ್ಟಿಸಿದ ಸಾಲವನ್ನು ತೀರಿಸಲೋ, ಅಥವಾ ಮಕ್ಕಳ ಮದುವೆಯನ್ನು ಮಾಡಲೋ ಇಲ್ಲಿಗೆ ಕೆಲಸ ಹುಡುಕಿಕೊಂಡು ಬರುತ್ತಾರೆ. ತಮ್ಮ ಐವತ್ತೇಳನೇ ವಯಸ್ಸಿಗೆ ಇಲ್ಲಿಗೆ ಬಂದ ನನ್ನ ಸಹೋದ್ಯೋಗಿ ಡಾ. ಬಾಸ್ಕರ‍್ ಅವರು ಇದೀಗ ಮೂರು ವರ್ಷಗಳನ್ನು ಪೂರೈಸಿದ್ದಾರೆ. ಡಾ. ಶಂಕರ್ ಅವರು ಇಲ್ಲಿ ಮೂವತ್ತು ವರ್ಷಗಳಷ್ಟು ಕೆಲಸ ಮಾಡಿ ಮಕ್ಕಳನ್ನು ಒಳ್ಳೆ ಕೆಲಸಕ್ಕೆ ಸೇರಿಸಿದ್ದಾರೆ. ಅವರು ಈಗ್ಗೆ ಎರಡು ವರ್ಷಗಳ ಹಿಂದೆಯಷ್ಟೇ ಇಂಡಿಯಾಕ್ಕೆ ವಾಪಾಸಾಗಿದ್ದಾರೆ. ಡಾಕ್ಟರ್ ಸಾಹು ಇಲ್ಲಿ ಹದಿನಾರು ವರ್ಷಗಳನ್ನು ಕಳೆದು ಮೊನ್ನೆಯಷ್ಟೇ ಇಂಡಿಯಾಕ್ಕೆ ಹಿಂದಿರುಗಿದ್ದಾರೆ. ಒಮ್ಮೆ ನಾನವರನ್ನು “ನೀವು ಪಡೆದುಕೊಂಡಿದ್ದಕ್ಕಿಂತ ಕಳಕೊಂಡಿದ್ದೇ ಹೆಚ್ಚು ಅಲ್ಲವೇ?” ಎಂದು ಕೇಳಿದ್ದೆ. ಅದಕ್ಕೆ ಅವರೆಲ್ಲಾ ಹೇಳಿದ್ದೊಂದೇ “ನಾವು ಕೆಲಸದ ನಿಮಿತ್ತ ಹೊರದೇಶಗಳಲ್ಲಿ ಉಳಿದಾಗ ಪಡೆದುಕೊಂಡಷ್ಟೇ ಕಳೆದುಕೊಂಡಿದ್ದೂ ಇದೆ. ಆದರೆ ನಮಗೆ ಈ ಬಗ್ಗೆ ಬೇಜಾರಿಲ್ಲ. ಏಕೆಂದರೆ ನಾವು ನಮಗಾಗಿ ಮಾತ್ರ ಬದುಕಲಿಲ್ಲ. ಇತರರಿಗಾಗಿಯೂ ಬದುಕಿದ್ದೇವೆ. ಮಾಡಬೇಕಾದ ಕರ್ತವ್ಯಗಳನ್ನು ಮಾಡಿ ಮುಗಿಸಿದ ತೃಪ್ತಿ ಇದೆ. ಇಷ್ಟಕ್ಕೂ ಜೀವನದಲ್ಲಿ ಒಂದನ್ನು ಪಡೆದುಕೊಳ್ಳಲು ಇನ್ನೊಂದನ್ನು ಕಳೆದುಕೊಳ್ಳಲೇಬೇಕಾಗುತ್ತದೆ. ಅದು ಬದುಕಿನ ನಿಯಮ. ಅದನ್ನು ಯಾರಿಂದಲೂ ಮೀರಲು ಸಾಧ್ಯವಿಲ್ಲ.”

    ಬದುಕು ಎಷ್ಟೊಂದು ವಿಚಿತ್ರ? ಎಲ್ಲೋ ಹುಟ್ಟುತ್ತೇವೆ, ಎಲ್ಲೋ ಬೆಳೆಯುತ್ತೇವೆ, ಇನ್ನೆಲ್ಲೋ ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇವೆ. ಹಾಗೆಯೇ ಬದುಕು ಎಷ್ಟೊಂದು ನಿಷ್ಠುರ ಅಸಹನೀಯ! ಎಲ್ಲೋ ಏನೋ ಮಾಡಿಕೊಂಡಿರುತ್ತೇವೆ. ಇದ್ದಕ್ಕಿದ್ದಂತೆ ಇನ್ನೆಲ್ಲಿಗೋ ಎಳೆದು ತಂದುಬಿಡುತ್ತದೆ. ನಾವು ಹೋಗಲು ತಯಾರಿರದಿದ್ದರೂ ಹೋಗಲೇಬೇಕಾದ ತುರ್ತು ಮತ್ತು ಅನಿವಾರ್ಯತೆಗಳನ್ನು ನಮ್ಮ ಮುಂದೆ ಹರಡಿ ಮುಂದೇನು ಮಾಡುವೆ? ಎಂದು ಕೇಳಿ ನಮ್ಮ ಉತ್ತರಕ್ಕೂ ಕಾಯದೆ ಅಲ್ಲಿಗೆ ನೊಗ ಕಟ್ಟಿಕೊಂಡು ಹೋಗುವಂತೆ ಮಾಡಿಬಿಡುತ್ತದೆ. ಈ ಕಾರಣಕ್ಕಾಗಿಯೇ ನಾನು ಸಹ ಇರುವದನ್ನು ಬಿಟ್ಟು ಇಲ್ಲದ್ದನ್ನು ಹುಡುಕಿಕೊಂಡು ಬದುಕು ಕಟ್ಟಿಕೊಳ್ಳಲು ಇಷ್ಟು ದೂರ ಬಂದುಬಿಟ್ಟೆ. ನಿಜಕ್ಕೂ ಇಲ್ಲಿಗೆ ಬರುವ ಅನಿವಾರ್ಯತೆಯಿತ್ತೆ? ಎಂದು ಕೇಳಿಕೊಳ್ಳುವಾಗಲೆಲ್ಲಾ ನನ್ನ ಕೆಲಸ ಮತ್ತು ಅದರ ಹಿಂದಿನ ದೊಡ್ಡ ಮೊತ್ತದ ಸಂಬಳಗಳ ಮುಂದೆ ಈ ಎಲ್ಲ ವಿಷಯಗಳು ಗೌಣ ಎನಿಸಿಬಿಡುತ್ತವೆ. ಹಾಗೆ ಅನಿಸಬಾರದು. ಆದರೆ ಅನಿಸಿಬಿಡುತ್ತದೆ.

    ಈ ಸಂದರ್ಭದಲ್ಲಿ ಕವಿ ಶಿಕಾರಿಪುರ ಹರಿಹರೇಶ್ವರರ ಸಾಲುಗಳು ನೆನಪಾಗುತ್ತವೆ.

    ತಾವು ಕಾಣದ ತಾಣ

    ಕೇಳಿ ತಿಳಿಯದ ದೇಶ

    ಇತ್ತ ಬಂದದ್ದೇ ಅರಾಮವಾಗಿರಲಿಕ್ಕೆ;

    ರೆಕ್ಕೆ ಸುಡದೆ ಸಾಧ್ಯವಾದಷ್ಟು

    ಗಳಿಸಿ ಉಳಿಸಲಿಕ್ಕೆ.

    ಇನ್ನು ಊರಿಗೆ ಹಿಂದಿರುಗುವದೇನಿದ್ದರೂ

    ಮಳೆಗಾಲಕ್ಕೆ ಮಾತ್ರ.



    -ಉದಯ್ ಇಟಗಿ