Demo image Demo image Demo image Demo image Demo image Demo image Demo image Demo image

ಕನಸು ನನಸುಗಳ ನಡುವಿನ ನೆನಪು (ಭಾಗ-3)

  • ಶನಿವಾರ, ಜನವರಿ 22, 2011
  • ಬಿಸಿಲ ಹನಿ
  • ಈ ನಡುವೆ ನನ್ನ ಪಿ.ಯು.ಸಿ ಪರೀಕ್ಷೆಗೆ ಮತ್ತೆ ಕಟ್ಟಿದ್ದೆನಾದರೂ ಪರೀಕ್ಷೆ ತೆಗೆದುಕೊಳ್ಳಲು ಹೋಗಲಿಲ್ಲ. ಓದುವ, ಪರೀಕ್ಷೆ ತೆಗೆದುಕೊಳ್ಳುವ ಉತ್ಸಾಹವೇ ಇರಲಿಲ್ಲ. ಓದಿ ಪಾಸ್ ಮಾಡಿದರೆ ಮುಂದೆ ಓದಿಸುವವರು ಯಾರು? ಎಲ್ಲರಿಗೂ ಅವರವರ ಬದುಕು ಭಾರವಾಗಿತ್ತು. ಅಪ್ಪನಿಗೇ ಇಲ್ಲದ ಕಾಳಜಿ ಬೇರೆಯವರಿಗೆ ಎಲ್ಲಿಂದ ಬಂದೀತು? ಇದ್ದೊಬ್ಬ ಅಣ್ಣ ಬಿ.ಎ. ಮಾಡಿ ಟೀಚರ್ಸ್ ಟ್ರೇನಿಂಗ್ ಮುಗಿಸಿ ದೊಡ್ಡಪ್ಪನ ಊರಲ್ಲಿ ಅವರ ಹೊಲಗದ್ದೆಗಳನ್ನು ನೋಡಿಕೊಂಡಿದ್ದನು. ಏಕಾಏಕಿ ಆ ಹಂಗಿನಿಂದ ಹೊರಗೆ ಬಂದು ಆಚೆ ಕಡೆ ಏನಾದರೊಂದು ಕೆಲಸ ಮಾಡುವದು ಆ ಸಮಯದಲ್ಲಿ ಅವನಿಗೂ ಸಾಧ್ಯವಿರಲಿಲ್ಲ. ಮುಂದೆ ಸ್ವಲ್ಪ ದಿನ ನನ್ನ ತಾಯಿ ತವರು ಮನೆ ಸುಲ್ತಾನಪೂರದಲ್ಲಿ, ಸ್ವಲ್ಪ ದಿನ ನನ್ನ ದೊಡ್ಡಮ್ಮನ ಊರು ಕಲಕೋಟಿಯಲ್ಲಿ ಅವರ ಒಕ್ಕಲುತನದ ಕೆಲಸಗಳಲ್ಲಿ ಸಹಾಯಮಾಡುತ್ತಾ ಕಾಲ ಕಳೆದೆ. ಆಗೆಲ್ಲಾ ಅವರಿಗೆ ತುಂಬಾ ಭಾರವಾಗುತ್ತಿದ್ದೇನಲ್ಲ ಎಂದನಿಸಿ ಅತೀವ ಮುಜುಗರವಾಗುತ್ತಿತ್ತು. ಈ ನಡುವೆ ನನ್ನ ಅಕ್ಕ “ನೀನು ಓದಿ ಪಾಸ್ ಮಾಡಿದರೆ ತಾನೆ ಯಾರಾದರೂ ನಿನ್ನನ್ನು ಓದಿಸಲು ಯೋಚಿಸೋದು. ಮೊದಲು ಓದಿ ಪಾಸ್ ಮಾಡು. ಆಮೇಲೆ ನಾವ್ಯಾರಾದರು ಓದಿಸುತ್ತೇವೆ” ಎಂದು ಒಂದಿಷ್ಟು ಧೈರ್ಯ ಹೇಳಿ ಗದುಗಿಗೆ ಕರೆತಂದಳು. ಅಕ್ಕನ ಸಹಾಯದಿಂದ ಧಾರವಾಡಕ್ಕೆ ಹೋಗಿ ಮತ್ತೆ ಪರೀಕ್ಷೆ ಕಟ್ಟಿ ಬಂದೆ.

    ನನಗೆ ಅಲ್ಲಿಯೂ ಅವರಿಗೆ ಭಾರವಾಗಿರಲು ಇಷ್ಟವಿರಲಿಲ್ಲ. ನನ್ನ ಖರ್ಚಿಗಾಗುವಷ್ಟನ್ನಾದರೂ ನಾನು ಸಂಪಾದಿಸಬೇಕಿತ್ತು. ಹೀಗಾಗಿ ಗೆಳೆಯರಾದ ನೀಲಗುಂದ ಮತ್ತು ಭುಜರಿಯ ಸಹಾಯದಿಂದ ಗದುಗಿನ ಪ್ರತಿಷ್ಠಿತ ಫೋಟೋ ಸ್ಟುಡಿಯೊವೊಂದರಲ್ಲಿ ಕೆಲಸ ಹಿಡಿದೆ. ಸ್ಟುಡಿಯೋದಲ್ಲಿ ದೊಡ್ಡ ದೊಡ್ಡ ಡೆವಲಿಪ್ಪಿಂಗ್ ಮತ್ತು ಪ್ರಿಂಟಿಂಗ್ ಮಶಿನ್ ಗಳಿದ್ದವು. ನನಗೆ ಅವನ್ನು ಮುಟ್ಟಲು ಸಹ ಭಯವಾಗುತ್ತಿತ್ತು. ಏನೋ ಮಾಡಲು ಹೋಗಿ ಏನಾದರು ಆಗಿಬಿಟ್ಟರೆ? ಏನು ಮಾಡುವದು? ದುಡ್ಡು ಎಲ್ಲಿಂದ ತರುವದು? ಹೀಗಾಗಿ ಪ್ರಿಂಟಿಗ್ ಬಿಟ್ಟು ಡೆವಲಪ್ ಆದ ನೆಗಟಿವ್ ಗಳನ್ನು ಕವರ್ ನಲ್ಲಿ ಸೇರಿಸುವದು, ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ಕತ್ತರಿಸಿ ಕೊಡುವದು, ಪ್ರಿಂಟ್ ಹಾಕಿದ ಫೋಟೊಗಳನ್ನು ಡೆಲಿವರಿ ಡೆಸ್ಕಿಗೆ ಕಳಿಸುವದು, ಒಂದೊಂದು ಸಾರಿ ಆರ್ಡರ್ಸ್ ತೆಗೆದುಕೊಳ್ಳುವದು.... ಹೀಗೆ ಒಂದೊಂದಾಗಿ ಫೋಟೋಗ್ರಾಫಿಗೆ ಸಂಬಂಧಪಟ್ಟ ಕೆಲಸಗಳನ್ನು ಕಲಿಯುತ್ತಿದ್ದಂತೆ ನನಗೇ ಗೊತ್ತಿಲ್ಲದಂತೆ ನನ್ನೊಳಗೊಬ್ಬ ಫೋಟೊಗ್ರಾಫರ್ ಮೊಳಕೆಯೊಡೆದಿದ್ದ. ಎಷ್ಟೋ ಸಲ ಹೆಗಲಿಗೊಂದು ಕ್ಯಾಮೆರಾ ಏರಿಸಿ ಮದುವೆ, ಮುಂಜಿ ಮುಂತಾದ ಸಮಾರಂಭಗಳಲ್ಲಿ ಓಡಾಡಿ ಫೋಟೊ ತೆಗೆಯುವ ಕನಸನ್ನು ಕಂಡಿದ್ದಿದೆ. ಆದರೆ ತಿಂಗಳಾಗುವಷ್ಟೊತ್ತಿಗೆ ಮಾಲೀಕರು ಒಂದು ತಿಂಗಳ ಸಂಬಳವನ್ನು ಕೈಗಿತ್ತು ಕಾರಣ ಹೇಳದೆ ನಾಳೆಯಿಂದ ಬರಬೇಡ ಎಂದಷ್ಟೆ ಹೇಳಿ ಕಳುಹಿಸಿದರು. ಬಹುಶಃ, ಅವರು ನಾನು ಒಂದು ತಿಂಗಳಲ್ಲಿಯೇ ಎಲ್ಲ ಕೆಲಸವನ್ನು ಕಲಿತುಕೊಳ್ಳುತ್ತೇನೆ ಎಂದು ನಿರೀಕ್ಷಿಸಿದ್ದರೋ ಅಥವಾ ಅವರಿಗೆ ನನ್ನನ್ನು ಕೆಲಸದಿಂದ ತಗೆಯಬೇಕಿತ್ತೋ ಗೊತ್ತಿಲ್ಲ. ಅಂತೂ ಆ ಕೆಲಸಕ್ಕೆ ಇತಿಶ್ರೀ ಹಾಡಿದೆ. ಆ ಮೂಲಕ ನನ್ನೊಳಗೆ ಚಿಗುರೊಡೆದಿದ್ದ ಫೋಟೋಗ್ರಾಫರ್ ಸತ್ತು ಹೋದ. ಒಂದು ಕೆಲಸವನ್ನು ನಾವಾಗಿಯೇ ಬಿಡುವದಕ್ಕೂ ಅದಾಗಿಯೇ ಹೋಗುವದಕ್ಕೂ ತುಂಬಾ ವ್ಯತ್ಯಾಸವಿದೆ; ಮೊದಲನೆಯದು ಈ ಕೆಲಸ ನನ್ನ ಯೋಗ್ಯತೆಗೆ ತಕ್ಕದಾಗಿಲ್ಲ ಎನ್ನುವ ಅರ್ಥವನ್ನು ಕೊಟ್ಟರೆ ಎರಡನೆಯದು ಕಾರಣ ಏನೇ ಇದ್ದರೂ ನಾನು ಆ ಕೆಲಸಕ್ಕೆ ಯೋಗ್ಯನಲ್ಲ ಎನ್ನುವ ಸಂದೇಶವನ್ನು ಕೊಡುತ್ತದೆ. ಕೆಲಸ ಕಳೆದುಕೊಂಡ ಅವಮಾನ ನನ್ನನ್ನು ಮತ್ತಷ್ಟು ಜರ್ಝರಿತನನ್ನಾಗಿ ಮಾಡಿತು.

    ಸರಿ, ಮುಂದೆ ಏನು ಮಾಡುವದು? ಕಲಕೋಟಿಯಲ್ಲಿ ನನಗೆ ಕಲಿಸಿದ್ದ ನನ್ನ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಗದುಗಿಗೆ ಆಗಷ್ಟೆ ವರ್ಗವಾಗಿ ಬಂದಿದ್ದರು. ಮೊದಲಿನಿಂದಲೂ ಅವರಿಗೆ ನನ್ನ ಜಾಣತನದ ಬಗ್ಗೆ ಗೊತ್ತಿದ್ದರಿಂದ ಅವರು ತಮ್ಮ ಮನೆ ಹತ್ತಿರ ತೀರ ಸಣ್ಣ ಮಕ್ಕಳಿಗೆ ನಾನು ಯಾಕೆ ಟ್ಯೂಶನ್ ಮಾಡಬಾರದು ಎಂಬ ಸಲಹೆ ಕೊಟ್ಟರು. ‘ಪಿ.ಯು.ಸಿ ಫೇಲಾದವನೊಬ್ಬ ಯಾವ ತರದ ಟ್ಯೂಶನ್ ಮಾಡಿಯಾನು?’ ಎಂಬ ನನ್ನ ಆತಂಕವನ್ನು ಅವರ ಮುಂದಿಟ್ಟಾಗ “ನೀನು ಮೊದಲಿನಿಂದಲೂ ಜಾಣ ವಿದ್ಯಾರ್ಥಿ, ನಿನ್ನ ಇಂಗ್ಲೀಷ್ ಮತ್ತು ಗಣಿತ ಚನ್ನಾಗಿದೆ. ದೊಡ್ಡವರಿಗಲ್ಲದಿದ್ದರೂ ಸಣ್ಣ ಮಕ್ಕಳಿಗಿ ಪಾಠ ಹೇಳುವಷ್ಟು ಸಾಮರ್ಥ್ಯ ನಿನ್ನಲ್ಲಿದೆ. ನಿನ್ಯಾಕೆ ಪ್ರಯತ್ನಿಸಬಾರದು?” ಎಂದು ಧೈರ್ಯ ತುಂಬಿದರು. ಆ ಪ್ರಕಾರ ದಿನಾಲೂ ಅಕ್ಕನ ಮನೆಯಿಂದ ಅವರ ಮನೆಗೆ ಹೋಗಿ ಪಾಠ ಹೇಳಿ ಬರುತ್ತಿದ್ದೆ. ಪಾಠ ಮಾಡುತ್ತಾ ಮಾಡುತ್ತಾ ನಾನು ಬರೀ ಚಿಕ್ಕ ಮಕ್ಕಳಿಗೆ ಮಾತ್ರವಲ್ಲ SSLC ಮಕ್ಕಳಿಗೂ ಸಹ ಗಣಿತ ಮತ್ತು ಇಂಗ್ಲೀಷ್ ಹೇಳಿಕೊಡಬಲ್ಲೆ ಎನ್ನುವ ಆತ್ಮವಿಶ್ವಾಸ ಮೂಡಿತ್ತು. ಏಕೆಂದರೆ SSLC ಯಲ್ಲಿ ನಾನು ನನ್ನ ಗುರುಗಳಾದ ಅಣ್ಣಿಗೇರಿ ಮಾಸ್ತರರಿಂದ ಕಲಿತ ಗಣಿತ ಮತ್ತು ಇಂಗ್ಲೀಷ್ ನನ್ನ ತಲೆಯಲ್ಲಿ ಇನ್ನೂ ಹಾಗಾಗೆ ಉಳಿದಿದ್ದವು. ಹಾಗೆ ಮೆಲ್ಲಗೆ ನನ್ನೊಳಗೆ ಹುಟ್ಟಿದ ಶಿಕ್ಷಕನೊಬ್ಬ ಮುಂದೊಂದು ದಿನ ಬೃಹದಾಕಾರವಾಗಿ ನಿಲ್ಲುತ್ತಾನೆಂದು ನಾನೆಣಿಸಿರಲಿಲ್ಲ. ನನ್ನ ಹತ್ತಿರ ಟ್ಯೂಶನ್ ಬರುವ ಮಕ್ಕಳೆಲ್ಲಾ ಒಳ್ಳೆ ಅಂಕಗಳನ್ನು ತೆಗೆದುಕೊಂಡು ಪಾಸಾಗತೊಡಗಿದರು. ಇದರಿಂದ ಹೆಚ್ಚಿನ ಮಕ್ಕಳು ಬರತೊಡಗಿದರು. ನಾನು ನಿರೀಕ್ಷಿಸಿದ್ದಕ್ಕಿಂತ ದುಡ್ಡು ಕೂಡ ಚನ್ನಾಗಿ ಬರತೊಡಗಿತು. ಈಗಾಗಲೇ ಪಿ.ಯು.ಸಿ. ಪರೀಕ್ಷಿಗೆ ಕಟ್ಟಿಬಂದಿದ್ದರಿಂದ ನನ್ನ ಕೆಲಸದ ಜೊತೆಜೊತೆಗೆ ಪರೀಕ್ಷೆಗೆ ತಯಾರಾಗತೊಡಗಿದೆ.

    ಇದೇ ಸಂದರ್ಭದಲ್ಲಿ ಆಗಷ್ಟೇ ಮದುವೆಯಾಗಿದ್ದ ನನ್ನ ಅಣ್ಣ ಅಂದರೆ ನನ್ನ ದೊಡ್ಡಪ್ಪನ ಮಗ “ನೀನು ಪಿ.ಯು.ಸಿ. ಪಾಸ್ ಮಾಡಿದರೆ ಮುಂದೆ ನಮ್ಮ ಜೊತೆ ಇದ್ದುಕೊಂಡು ಓದಬಹುದು” ಎಂದು ಭರವಸೆ ಕೊಟ್ಟ. ನನಗೋ ಎಲ್ಲಿಲ್ಲದ ಖುಶಿ! ನಾನು ಓದಲಾರದೆ ಹಾಗೆ ಉಳಿದು ಬಿಡುತ್ತೆನೆ ಎಂದುಕೊಂಡವನಿಗೆ ಸ್ವರ್ಗ ಮೂರೇ ಗೇಣು! ಆ ವರ್ಷ 1995. ನನ್ನ ಟ್ಯೂಶನ್ ಕೆಲಸದ ಜೊತೆ ಕಷ್ಟಬಿದ್ದು ಓದಿದೆ. ಈ ವರ್ಷ ಓದಿ ಪಾಸ್ ಮಾಡದೇ ಹೋದರೆ ಸಿಕ್ಕ ಅವಕಾಶ ಎಲ್ಲಿ ಕೈತಪ್ಪಿ ಹೋಗುತ್ತದೋ ಎಂಬ ಭಯದಿಂದ ಹಟಕ್ಕೆ ಬಿದ್ದು ಓದಿದೆ. ಏಪ್ರಿಲ್ ತಿಂಗಳಲ್ಲಿ ಧಾರವಾಡಕ್ಕೆ ಹೋಗಿ ಪರೀಕ್ಷೆ ಬರೆದು ಬಂದೆ. ಪರೀಕ್ಷೆಯಲ್ಲಿ ಪಾಸಾಗುತ್ತೆನೆ ಎಂಬ ಅತ್ಮವಿಶ್ವಾಸವಿತ್ತು. ಅಕಸ್ಮಾತ್ ಫೇಲಾಗಿ ಬಿಟ್ಟರೆ? ಇದ್ದೇ ಇದೆಯಲ್ಲ ಟ್ಯೂಶನ್ ಮಾಡ್ಕೊಂಡು ಹೋಗೋದು ಎಂದು ಟ್ಯೂಶನ್ ನಡೆಸಲು ತಯಾರಿ ಮಾಡಿಕೊಳ್ಳತೊಡಗಿದೆ. ಜೂನ್ ಮೊದಲ ವಾರದಲ್ಲಿ ಪಿ.ಯು.ಸಿ. ಫಲಿತಾಂಶ ಹೊರಬಿತ್ತು. ನನಗೋ ಏನಾಗುತ್ತದೋ ಎಂಬ ಆತಂಕ! ಧಾರವಾಡಕ್ಕೆ ಹೋಗಿ ರಿಸಲ್ಟ್ ನೋಡಿದೆ. ನನ್ನ ಅದೃಷ್ಟಕ್ಕೆ ಪಾಸಾಗಿದ್ದೆ. ಕುಣಿದುಕುಪ್ಪಳಿಸಿಬಿಟ್ಟೆ. ಅದೇ ಖುಶಿಯಲ್ಲಿ ಧಾರವಾಡದ ವಿಜಯಾ ಥೇಟರ್ ನಲ್ಲಿ ಆಗಷ್ಟೆ ಬಿಡುಗಡೆಯಾದ ಉಪೇಂದ್ರನ “ಓಂ” ಸಿನಿಮಾ ನೋಡಿ ಗದುಗಿಗೆ ವಾಪಾಸಾಗಿದ್ದೆ.

    ನಾವು ಪ್ರೀತಿಸದೆ ಯಾರನ್ನೂ ದ್ವೇಷಿಸಲಾರೆವು!

  • ಶನಿವಾರ, ಜನವರಿ 15, 2011
  • ಬಿಸಿಲ ಹನಿ

  • ನಾವಿಬ್ಬರೂ ಚನ್ನಾಗಿಯೇ ಇರುತ್ತಿದ್ದೆವು; ಕಿಲಕಿಲ ನಗುತ್ತಾ, ರೇಗಿಸುತ್ತಾ, ತಮಾಷೆ ಮಾಡುತ್ತಾ ಜಗತ್ತಿನಲ್ಲಿ ನಾವಿಬ್ಬರೇ ಪ್ರೀತಿಸುತ್ತಿರುವಂತೆ ಒಬ್ಬರಿಗೊಬ್ಬರು ಸದಾ ಅಂಟಿಕೊಂಡೇ ಇರುತ್ತಿದ್ದೆವು. ಆದರೆ ಒಮ್ಮೊಮ್ಮೆ ಶರಂಪರ ಜಗಳಾಡಿ, ಕಿತ್ತಾಡಿಕೊಂಡು, ಮಾತುಬಿಟ್ಟು, ಮೌನವೃತ ಹಿಡಿದು ನಾನೊಂದು ದಿಕ್ಕು ನೀನೊಂದು ದಿಕ್ಕಾಗಿ ಕುಳಿತು ಬಿಡುತ್ತಿದ್ದೆವು. ಅಲ್ಲಿ ನೀನಿರುತ್ತಿದ್ದೆ, ನಾನಿರುತ್ತಿದ್ದೆ. ಅದರೂ ನಾವಿಲ್ಲವಾಗಿರುತ್ತಿದ್ದೆವು. ಅದೇನೋ ಗೊತ್ತಿಲ್ಲ ಒಮ್ಮೊಮ್ಮೆ ಇದ್ದಕ್ಕಿಂದ್ದಂತೆ ಈ ಜಗಳ ಇಬ್ಬರ ಮಧ್ಯ ಧುತ್ತೆಂದು ವಕ್ಕರಿಸಿಬಿಡುತ್ತಿತ್ತು. ಅಸಲಿಗೆ ಅದಕ್ಕೊಂದು ಕಾರಣಾಂತ ಇರುತ್ತಿರಲಿಲ್ಲ. ಒಂದೊಂದು ಸಲ ತಮಾಷೆಯೇ ಜಗಳಕ್ಕೆ ತಿರುಗಿಬಿಡೋದು. ಆಗೆಲ್ಲಾ ಒಬ್ಬರೊನ್ನೊಬ್ಬರು ಆಪಾದಿಸುತ್ತಾ, ಟೀಕಿಸುತ್ತಾ, ಶಪಿಸುತ್ತಾ, ಸಣ್ಣ ಸಣ್ಣ ತಪ್ಪುಗಳನ್ನು ದೊಡ್ಡದಾಗಿಸುತ್ತಾ ಇಬ್ಬರೂ ಒಬ್ಬರೊನ್ನೊಬ್ಬರು ಇನ್ನಿಲ್ಲದಂತೆ ದ್ವೇಷಿಸುತ್ತಿದ್ದೆವು. ಈ ದ್ವೇಷದಲ್ಲಿ ನಗು, ಮಾತು, ಎಲ್ಲವೂ ಮರೆತು ಹೋಗುತ್ತಿತ್ತು. ಸದಾ ಜೇನಹನಿಗಳಂತೆ ಸುರಿಯುತ್ತಿದ್ದ ನಮ್ಮ ಮಾತುಗಳು ವಿಷದ ಮುಳ್ಳುಗಳಾಗಿ ಚುಚ್ಚುತ್ತಿದ್ದವು. ಗಂಡ ಹೆಂಡಿರ ಜಗಳ ಹಾಸಿಗೆಯಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಆದರೆ ನಮ್ಮದು ಹಾಸಿಗೆಯಲ್ಲೂ ಭುಸುಗುಟ್ಟಿ ನಾನೊಂದು ಮಗ್ಗಲು, ನೀನೊಂದು ಮಗ್ಗಲಾಗಿ ಮಲಗುತ್ತಿದ್ದೆವು. ಈ ಜಗಳದಲ್ಲಿ ನಾವಿಬ್ಬರೂ ಎಷ್ಟು ಅಸಹ್ಯವಾಗಿ ವರ್ತಿಸುತ್ತಿದ್ದೆವೆಂದರೆ ನಾವು ಸುಸಂಸ್ಕೃತರು, ವಿದ್ಯಾವಂತರು ಎಂಬುದನ್ನು ಕೂಡ ಮರೆತು ಬಿಡುತ್ತಿದ್ದೆವು. ಸಭ್ಯತೆ, ನಾಗರಿಕತೆಯ ಮುಸುಕು ಹೊದ್ದ ನಮ್ಮಿಬ್ಬರೊಳಗೆ ಅದೆಂಥ ಅಸಹ್ಯದ ಭಾವಗಳಿರುತ್ತಿದ್ದವು!

    ಜಗಳದಲ್ಲಿ ವಾಗ್ವುದ್ಧ ಭರ್ಜರಿಯಾಗಿ ನಡೆಯುತ್ತಿತ್ತು. ಮಾತೆಲ್ಲ ಮುಗಿದ ಮೇಲೆ ಮತ್ತೆ ಒಂದಷ್ಟು ದಿವಸ ಮೌನ ಯುದ್ಧ ನಡೆಯುತ್ತಿತ್ತು. ಅದು ಮಾತಿನ ಯುದ್ಧಕ್ಕಿಂತ ಇನ್ನೂ ಭಯಂಕರವಾಗಿರುತ್ತಿತ್ತು. ಅದೂ ಮುಗಿದು ಇನ್ನೇನು ಮತ್ತೆ ಇಬ್ಬರೂ ಒಂದಾಗಬೇಕೆನ್ನುವಷ್ಟರಲ್ಲಿ ನಮ್ಮಿಬ್ಬರ ಅಹಂ ಅಡ್ದಿ ಬರುತ್ತಿತ್ತು. ನಾನು ಮೊದಲು ಮಾತಾಡಲಿಯೆಂದು ನೀನು....... ನೀನು ಮೊದಲು ಮಾತಾಡಲಿಯೆಂದು ನಾನು.......ಹೀಗೆ ನಾವಿಬ್ಬರೂ ನಮ್ಮ ನಮ್ಮ ಅಹಮ್ಮಿನ ಕೋಟೆಯೊಳಗೆ ಬಂಧಿಯಾಗಿ ಹತ್ತಿರವಿದ್ದೂ ದೂರ ದೂರ ಉಳಿಯುತ್ತಿದ್ದೆವು. ನಮ್ಮಿಬ್ಬರ ನಡುವಿನ ಮೌನ ಮಾತಾಡುವ ಘಳಿಗೆಗಳಿಗಾಗಿ ತವಕಿಸುತ್ತಿತ್ತು. ಸರಿ, ಆ ಮೌನ ಮುರಿಯುವರಾದರೂ ಯಾರು? ನೀವು ಹುಡುಗಿಯರು ಅಷ್ಟು ಬೇಗ ಸೋಲುವದಿಲ್ಲ ಎಂದು ಗೊತ್ತಿದ್ದರಿಂದ ನಾನೇ ಮಾತಾಡಲು ಮುಂದಾಗುತ್ತಿದ್ದೆ. ಆಗೆಲ್ಲಾ ನಾನು “ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬ ಪ್ರೀತಿ, ಈಗ ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ?” ಎಂದು ನನ್ನಷ್ಟಕ್ಕೆ ನಾನೆ ಹಾಡಿಕೊಳ್ಳುತ್ತಾ ನಿನಗೆ ಹತ್ತಿರವಾಗಲು ನೋಡುತ್ತಿದ್ದೆ. ಆದರೆ ನೀನು ಮತ್ತೆ ಕೆಕ್ಕರಿಸಿದ ಕಣ್ಣುಗಳಿಂದ ನನ್ನ ದೂರ ತಳ್ಳುತ್ತಿದ್ದೆ. ಅಸಲಿಗೆ ನಾನು ಆ ಹಾಡನ್ನು ನಮ್ಮಿಬ್ಬರ ನಡುವಿನ ಬಿಗಿಯಾದ ವಾತಾವರಣವನ್ನು ತಿಳಿಗೊಳಿಸಲು ಹಾಡುವದಕ್ಕಿಂತ ಹೆಚ್ಚಾಗಿ ನಿನ್ನನ್ನು ಚುಚ್ಚಲು, ಛೇಡಿಸಲು ಹಾಡುತ್ತಿದ್ದೆ ಎಂದು ನೆನೆಸಿಕೊಂಡರೆ ನನಗೀಗ ನಗು ಬರುತ್ತದೆ. ಇರಲಿ. ಎಲ್ಲದಕ್ಕೂ ಒಂದು ಕೊನೆಯಂತಾ ಇರಲೇಬೇಕಲ್ಲವೆ? ಹಾಗೆಯೇ ನಮ್ಮ ಜಗಳಕ್ಕೂ ಒಂದು ಕೊನೆಯಿರುತ್ತಿತ್ತು. ದಿನಕಳೆದಂತೆ ನಮ್ಮಿಬ್ಬರ ನಡುವೆ ಕಟ್ಟಿಕೊಂಡಿದ್ದ ಚೀನಾ ಗೋಡೆ ಕರಗಿ ಮೊದಲಿನಂತಾಗಿ ಮೆಲ್ಲನೆ ನಾವಿಬ್ಬರೂ ಮತ್ತೆ ಜಮುನೆ ಗಂಗೆಯರಂತೆ ಸಂಗಮಿಸಿ ಹರಿಯುತ್ತಿದ್ದೆವು.

    ನಮ್ಮಿಬ್ಬರ ಪ್ರೀತಿ ಮತ್ತೆ ಕೂಡಿಕೊಂಡು ತೋಳುಗಳು ತಬ್ಬಿಕೊಂಡ ಹೊತ್ತಿನಲ್ಲಿ ನೀನು ನನ್ನ ಕೇಳುತ್ತಿದ್ದೆ “ಯಾಕೆ ನನ್ನೊಂದಿಗೆ ಇಷ್ಟೊಂದು ಜಗಳವಾಡುತ್ತೀಯಾ? ಯಾಕೆ ನನ್ನ ಮೇಲೆ ಇಷ್ಟೊಂದು ಸಿಡಿಮಿಡಿಗುಟ್ಟುತ್ತೀಯಾ? ಯಾಕೆ ನನ್ನನ್ನು ಇಷ್ಟೊಂದು ದ್ವೇಷಿಸುತ್ತೀಯಾ? ಕಾರಣವೇನು?” ನಾನಾಗ ಮೆಲ್ಲಗೆ “ನಿನ್ನ ಪ್ರೀತಿಸುವದೇ ಈ ಎಲ್ಲ ದ್ವೇಷಕ್ಕೆ ಕಾರಣ.” ಎಂದು ಹೇಳುತ್ತಿದ್ದೆ. ನೀನು ಅರ್ಥವಾಗದೆ ನನ್ನನ್ನು ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದೆ. ನಾನು ನಿಧಾನಕ್ಕೆ ಎಲ್ಲವನ್ನೂ ಅರ್ಥಮಾಡಿಸುತ್ತಾ ಹೋಗುತ್ತಿದ್ದೆ.

    ಯಾರು ಹೆಚ್ಚು ಜಗಳಾಡ್ತಾ ಇರ್ತಾರೆ ಅವರು ಹೆಚ್ಚು ಪ್ರೀತಿಸ್ತಾರೆ. ಬಹಳ ಇಷ್ಟ ಇರೋವ್ರ ಜೊತೆನೇ ಅಲ್ವ ನಮ್ಮ ಜಗಳ? ನಾನು ನಿನ್ನನ್ನು ಹೆಚ್ಚು ಪ್ರಿತಿಸುತ್ತೇನೆ. ಅದಕ್ಕೇ ನಿನ್ನೊಂದಿಗೆ ಈ ಕೋಪ, ತಾಪ, ದ್ವೇಷ ಎಲ್ಲ! ಬರೀ ನಿನ್ನೊಂದಿಗೆ ಮಾತ್ರವಲ್ಲ ನನಗೆ ಹತ್ತಿರವಾದ ಎಲ್ಲರೊಂದಿಗೂ ಇದು ಇದ್ದದ್ದೇ. ಅದೇ ಜೀವನ! ಹಾಗೆ ನೋಡಿದರೆ ಪ್ರೀತಿಯ ಇನ್ನೊಂದು ಮುಖವೇ ದ್ವೇಷ. ಪ್ರೀತಿ ಎಲ್ಲಿರುತ್ತದೋ ಅಲ್ಲಿ ದ್ವೇಷ ಇರಲೇಬೇಕು! ನಾವು ದ್ವೇಷಿಸುವದು ಪರಸ್ಪರ ಪರಿಚಯವಿರುವವರನ್ನೇ, ಅಪರಿಚಿತರನ್ನಲ್ಲ! ನಮ್ಮಿಂದ ಪ್ರೀತಿಸಲ್ಪಟ್ಟ ವ್ಯಕ್ತಿಯೇ ದ್ವೇಷಕ್ಕೆ ತುತ್ತಾಗುವದು. ನಮ್ಮ ದ್ವೇಷಕ್ಕೆ ಬಲಿಯಾಗುವವನು ಪರಿಚಿತ ವ್ಯಕ್ತಿಯೇ! ಪರಿಚಯವು ಗಾಢವಾದಾಗಲೇ ವ್ಯಕ್ತಿಯ ಬಗೆಗೆ ಸಲಿಗೆ ಹೆಚ್ಚಾಗುತ್ತದೆ. ಆ ಸಲಿಗೆ ಸ್ನೇಹಕ್ಕೆ, ಸ್ನೇಹ ಪ್ರೀತಿಗೆ ತಿರುಗುತ್ತದೆ. ಆ ಪ್ರೀತಿ ಹೆಚ್ಚಾದಂತೆ ಅವನ ಮೇಲೆ ಅಧಿಕಾರ, ಹಕ್ಕು ಚಲಾಯಿಸಲು ನೋಡುತ್ತೇವೆ. ಆಗಲೇ ಈ ಜಗಳ ಶುರುವಾಗಿ ದ್ವೇಷಕ್ಕೆ ತಿರುಗೋದು. ಆ ದ್ವೇಷ ಜ್ವಾಲಾಗ್ನಿಯಾಗಿ ಉರಿಯೋದು. ಕಾಲ ಸರಿದಂತೆಲ್ಲಾ ಆ ಜ್ವಾಲಾಗ್ನಿ ಉರಿದು ಬೂದಿಯಾಗುತ್ತದೆ. ಕ್ರಮೆಣ ಪ್ರೀತಿಯ ಫಿನಿಕ್ಸ್ ಹಕ್ಕಿಯೊಂದು ಆ ಬೂದಿಯಿಂದಲೇ ಹುಟ್ಟಿಬರುತ್ತದೆ! ನಾವು ಮತ್ತೆ ಇನ್ನಿಲ್ಲದಂತೆ ಪ್ರೀತಿಸಲು ನೋಡುತ್ತೇವೆ.

    ಬದುಕೆಂದರೆ ಇದೇ ಅಲ್ಲವೆ?

    -ಉದಯ್ ಇಟಗಿ

    ಚಿತ್ರಕೃಪೆ: ಅವಧಿ

    ಕನಸು ನನಸುಗಳ ನಡುವಿನ ನೆನಪು ಭಾಗ-2

  • ಶುಕ್ರವಾರ, ಜನವರಿ 07, 2011
  • ಬಿಸಿಲ ಹನಿ
  • ನಾನು S.S.L.C. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ತೆಗೆದುಕೊಂಡು ಪಾಸಾಗಿದ್ದರಿಂದ ಧಾರವಾಡದಲ್ಲಿ ಆಗಲೇ ವಕೀಲ ವೃತ್ತಿಯನ್ನು ಮಾಡುತ್ತಿದ್ದ ನನ್ನ ಚಿಕ್ಕಪ್ಪ (ಜಗದೀಶ್ ಇಟಗಿ) ಇನ್ನುಮುಂದೆ ನಾನು ಓದಿಸುತ್ತೇನೆಂದು ಕರೆದುಕೊಂಡು ಬಂದನು. ನನಗೆ ಹೆಚ್ಚು ಅಂಕಗಳು ಬಂದಿದ್ದರಿಂದ ಸಹಜವಾಗಿ ಎಲ್ಲರ ಮನೆಯಲ್ಲೂ ಹೇಳುವಂತೆ ನಮ್ಮ ಮನೆಯಲ್ಲೂ ಸಾಯಿನ್ಸ್ ತೆಗೆದುಕೊಳ್ಳಲು ಹೇಳಿದರು. ನನಗೆ ಮೊದಲಿನಿಂದಲೂ ಕಥೆ ಕಾದಂಬರಿಗಳ ಹುಚ್ಚು ಇದ್ದುದರಿಂದ “ನಾನು ಆರ್ಟ್ಸ್ ತಗೋತಿನಿ. ನನಗೆ ಸಾಯಿನ್ಸ್ ಅಂದ್ರ ಅಷ್ಟಕ್ಕಷ್ಟ. ದಯವಿಟ್ಟು ಆರ್ಟ್ಸ್ ತಗೊಳ್ಳೋಕೆ ಬಿಡ್ರಿ” ಎಂದು ಗೋಗರೆದರೂ ನಮ್ಮ ಮನೆಯವರು “ಆರ್ಟ್ಸ್ ತಗೊಂಡು ಏನ್ಮಾಡ್ತಿ? ಮಣ್ಣು ತಿಂತಿಯಾ? ಸುಮ್ಕ ಸಾಯಿನ್ಸ್ ತಗೊಂಡು ಉದ್ದಾರ ಆಗು” ಎಂದು ಹೇಳಿದರು. ಅದರ ಹಿಂದೆ ಅವರ ಕಾಳಜಿಯಿತ್ತಾದರೂ ಆ ಕಾಳಜಿ ನನಗೆ ಹಿಂಸೆ ಎನಿಸಿದ್ದಂತೂ ಸತ್ಯ.

    ನನಗೋ ಅತ್ತ ಖಡಾಖಂಡಿತವಾಗಿ ಬೇಡ ಎಂದು ಹೇಳಲಾಗದೆ ಇತ್ತ ಒಪ್ಪಿಕೊಳ್ಳಲಾಗದ ಸಂದಿಗ್ಧತೆ ಹುಟ್ಟಿತು. ಒಟ್ಟಿನಲ್ಲಿ ನನಗೆ ಆ ಸಂದಿಗ್ಧತೆಯಿಂದ ಹೇಗಾದರು ಪಾರಾದರೆ ಸಾಕೆಂದು “ನನಗ ಫಿಜಿಕ್ಸ್, ಕೆಮಿಸ್ಟ್ರಿ ಅಂದ್ರ ಆಗಲ್ಲ. ನಾನು ಅರ್ಟ್ಸೇ ತಗೊಳ್ಳತೀನಿ” ಎಂದು ಬಚಾವಾಗಲು ನೋಡಿದೆ. ಆದರೆ ಅದಾಗಲೇ ಸಾಯಿನ್ಸ್ ತಗೊಂಡು ವೆಟರ್ನರಿ ಡಾಕ್ಟರ್ ಆಗಿದ್ದ ನನ್ನ ದೊಡ್ಡಪ್ಪನ ಮಗ “ನಿನಗೆ ಮ್ಯಾಥ್ಸ್ ನಲ್ಲಿ ಒಳ್ಳೆ ಮಾರ್ಕ್ಸ್ ಬಂದಿದೆ. ಮ್ಯಾಥ್ಸ್ ಬಂದ್ರ ಫಿಜಿಕ್ಸ್, ಕೆಮಿಸ್ಟ್ರಿ ಬಂದಂಗ” ಎಂದು ಅದ್ಯಾವ ತರ್ಕದ ಮೇಲೆ ಈ ಐಡಿಯಾ ಕೊಟ್ಟನೋ ಅಂತೂ ನಾನೂ ಕನ್ವಿನ್ಸ್ ಆಗಿ ಅವರಿಚ್ಛೆಯಂತೆ ನಡೆದುಕೊಂಡಿದ್ದಾಯಿತು. ಮೇಲಾಗಿ ನನಗೆ ಗಣಿತ ಅಚ್ಚುಮೆಚ್ಚಿನ ವಿಷಯವಾಗಿತ್ತು ಹಾಗೂ ನಾನು ಅತ್ಯಂತ ಪ್ರೀತಿಯಿಂದ, ಶ್ರದ್ಧೆಯಿಂದ ಲೆಕ್ಕಗಳನ್ನು ಅಚ್ಚುಕಟ್ಟಾಗಿ ಬಿಡಿಸುತ್ತಿದ್ದೆ. ಈಗಲೂ ಅಷ್ಟೆ ನನಗೆ ಗಣಿತವೆಂದರೆ ಪಂಚಪ್ರಾಣ! ಹೇಗೂ ಗಣಿತವಿರುತ್ತದಲ್ಲ? ಅದರ ಜೊತೆ ಇನ್ನುಳಿದಿದ್ದನ್ನು ಕಷ್ಟಪಟ್ಟು ಓದಿ ಪಾಸ್ ಮಾಡಿದರಾಯಿತು ಎಂದುಕೊಂಡು ಒಂದುತರದ ಹುಂಬತನದ ಮೇಲೆ ಸಾಯಿನ್ಸ್ ತಗೊಂಡಾಯ್ತು.

    ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ನಾನು ಅಟೆಂಡ್ ಮಾಡುತ್ತಿದ್ದುದು ಬರಿ ಮೂರೇ ಮೂರು ಕ್ಲಾಸು; ಕನ್ನಡ,ಇಂಗ್ಲೀಷ್ ಮತ್ತು ಗಣಿತ. ಉಳಿದವುಗಳನ್ನು ಬಲವಂತವಾಗಿ ಕಷ್ಟಪಟ್ಟು ಕೇಳಿಸಿಕೊಂಡರೂ ತಲೆಗೆ ಹೋಗದು. ಇಷ್ಟವೇ ಇಲ್ಲದ ಮೇಲೆ ಹೇಗೆ ತಾನೆ ತಲೆಗೆ ಹೋದೀತು? ನನ್ನ ಕಾಲೇಜಿನ ಅವಧಿಯನ್ನು ಬಹಳಷ್ಟು ಸಾರಿ ಕಾಲೇಜು ಲೈಬ್ರರಿಯಲ್ಲೋ ಇಲ್ಲ ವಿದ್ಯಾವರ್ಧಕ ಸಂಘದ ಲೈಬ್ರರಿಯಲ್ಲೋ ಕಳೆಯುತ್ತಿದ್ದೆ. ಪರಿಣಾಮ, ದ್ವಿತಿಯ ಪಿ.ಯು.ಸಿ.ಯಲ್ಲಿ ಫಿಜಿಕ್ಸ್ ಮತ್ತು ಕೆಮಿಸ್ಟ್ರಿ ವಿಷಯಗಳಲ್ಲಿ ಗೋತಾ ಹೊಡೆದೆ. ಇದರಿಂದ ನನ್ನ ಮೇಲೆ ಅಗಾಧ ನಿರೀಕ್ಷೆ ಇಟ್ಟುಕೊಂಡವರಿಗೆ ಬಲವಾದ ಪೆಟ್ಟುಬಿತ್ತು. ನಾನು ಫೇಲಾಗಿದ್ದು ಕೇಳಿ ನಮ್ಮ ಮನೆಯವರೆಲ್ಲರೂ ತುಚ್ಛವಾಗಿ ಕಂಡರು. ನನಗೆ ಆಶ್ರಯ ಕೊಟ್ಟಿದ್ದ ಚಿಕ್ಕಪ್ಪ “ನೀನು ಚನ್ನಾಗಿ ಓದುತ್ತೀಯೆಂದು ಕರೆದುಕೊಂಡುಬಂದೆ. ಇನ್ನು ನಿಂದು ನೀ ನೋಡ್ಕೋ” ಎಂದು ಹೇಳಿ ಕೈ ತೊಳೆದುಕೊಂಡರು.
    ಸರಿ, ಮುಂದೆ ಏನು ಮಾಡುವದು? ಎಲ್ಲಿಗೆ ಹೋಗುವದು? ಇನ್ಮುಂದೆ ನನ್ನ ಜವಾಬ್ದಾರಿ ತೆಗೆದುಕೊಳ್ಳೋರು ಯಾರು? ನನ್ನೂರಿಗೆ ಹೋಗುವದೆ? ಮೊದಲಿನಿಂದಲೂ ನನ್ನೂರಿನಲ್ಲಿ ಇದ್ದು ಅಭ್ಯಾಸವಿಲ್ಲದ್ದರಿಂದ ಅಲ್ಲಿಗೆ ಹೋಗಿ ಮಾಡುವದಾದರು ಏನನ್ನು? ಯಾರ ಹತ್ತಿರ ಇರಬೇಕು? ಹೀಗೆ ಹತ್ತಾರು ಪ್ರಶ್ನೆಗಳು ನನ್ನ ಕಾಡತೊಡಗಿದವು. ಬಣ್ಣಬಣ್ಣದ ಕನಸು ಕಾಣಬೇಕಾದ ಹದಿಹರೆಯದಲ್ಲಿ ಇನ್ನು ಮುಂದೆ ಹೇಗೆ ಬದುಕಬೇಕು ಎನ್ನುವದರ ಕುರಿತು ಸುದೀರ್ಘವಾಗಿ ಆಲೋಚಿಸುತ್ತಿದ್ದೆ. ಅಲ್ಲಿಂದ ನನ್ನ ಬದುಕು ಹಳಿ ತಪ್ಪುತ್ತಲೇ ಹೋಯಿತು.

    ಮುಂದೆ ಒಂದೆರೆಡು ತಿಂಗಳು ದೊಡ್ಡಮ್ಮನ ಊರು ಕಲಕೋಟಿ, ಹಾಗೂ ಅಕ್ಕನ ಬಳಿ ಗದುಗಿನಲ್ಲಿ ಕಳೆದೆ. ಒಂದೊಂದು ಸಾರಿ ನಾನು ಹುಟ್ಟಿ ಏನು ಪ್ರಯೋಜನ ಎಂದು ನನ್ನಷ್ಟಕ್ಕೆ ನಾನೇ ಒಬ್ಬನೇ ಕುಳಿತು ಬಿಕ್ಕುತ್ತಿದ್ದೆ. ಆ ಬಿಕ್ಕುಗಳಿಗೆ ಅಲ್ಲಿ ಆ ಕ್ಷಣದ ಸಾಂತ್ವನ ಮಾತ್ರವಿತ್ತು. ಈ ಸಮಯದಲ್ಲಾದರೂ ಅಪ್ಪನಾದವನು ಮುಂದೆ ಏನು ಮಾಡುತ್ತಿ? ಹೇಗೆ? ಏನು? ಎತ್ತ? ಎಂದು ಕೇಳುವ ವ್ಯವಧಾನವನ್ನು ಒಂಚೂರು ತೋರಲಿಲ್ಲ. ಮುಂಚಿನಿಂದಲೂ ಆತನ ಬಗ್ಗೆ ಗೊತ್ತಿದ್ದರಿಂದ ನಾನು ಕೂಡ ಆತನನ್ನು ‘ಮುಂದೆ ಹೇಗೆ?’ ಎಂದು ಕೇಳುವ ಗೊಡವೆಗೆ ಹೋಗಲಿಲ್ಲ. ಆದರೆ ನನ್ನ ಸಿಟ್ಟು, ಆಕ್ರೋಶಗಳು ಒಳಗೊಳಗೆ ಭುಸಗುಟ್ಟುತ್ತಲೇ ಇದ್ದವು.
    ಹೀಗಿರುವಾಗ ನನ್ನ ಸೋದರ ಮಾವ ಲಕ್ಷ್ಮೇಶ್ವರದ ದವಾಖಾನೆಯೊಂದರಲ್ಲಿ ಕೌಂಪೊಂಡರ್ ಕೆಲಸ ಹುಡುಕಿ ಅಲ್ಲಿಗೆ ನನ್ನ ಸೇರಿಸಿದರು. ಅದು ಅವರೂರು ಸುಲ್ತಾನಪೂರಕ್ಕೆ ಹತ್ತು ಕಿಲೊಮೀಟರ್ ದೂರದಲ್ಲಿತ್ತು. ನನ್ನ ಮಾವ ದಿನಾ ಬಸ್ಸಿಗೆ ಇಲ್ಲಿಂದಾನೆ ಓಡಾಡು ಎಂದರು. ಆ ಪ್ರಕಾರ ದಿನಾ ಬೆಳಿಗ್ಗೆ ಬುತ್ತಿಕಟ್ಟಿಕೊಂಡು ಎಂಟು ಗಂಟಗೆ ಹೋಗಿ ರಾತ್ರಿ ಎಂಟರ ಬಸ್ಸಿಗೆ ಇಲ್ಲವಾದರೆ ಒಮ್ಮೊಮ್ಮೆ ಹತ್ತರ ಬಸ್ಸಿಗೆ ವಾಪಾಸಾಗುತ್ತಿದ್ದೆ. ಅದು ನಾನು ಜೀವನದಲ್ಲಿ ಮೊಟ್ಟಮೊದಲಬಾರಿಗೆ ಹಿಡಿದ ಕೆಲಸವಾಗಿತ್ತು. ಆ ದವಾಖಾನೆ ಇಡಿ ಲಕ್ಷ್ಮೇಶ್ವರದಲ್ಲಿಯೇ ಪ್ರಸಿದ್ದಿ ಪಡೆದ ದವಾಖಾನೆಯಾಗಿತ್ತು. ಅಲ್ಲಿ ನನ್ನ ಜೊತೆ ಇನ್ನೊಬ್ಬ ಕೌಂಪೊಂಡರ ಈಗಾಗಲೇ ತುಂಬಾ ವರ್ಷದಿಂದ ಕೆಲಸ ಮಾಡುತ್ತಿದ್ದ. ಅವನಿಂದ ಡ್ರೆಸ್ಸಿಂಗ್ ಮಾಡುವದು, ಆಪರೇಶನ್ ಥೇಟರ್ ರೆಡಿ ಮಾಡುವದು, ಡಾಕ್ಟರ್ ಗಳಿಗೆ ಸಹಾಯ ಮಾಡುವದು, VRL ಮೂಲಕ ದೂರದ ಊರಿಂದ ಬರುವ ಔಷಧಿಗಳನ್ನು ಆಸ್ಪತ್ರೆಯ ಔಷಧಿ ಅಂಗಡಿಗೆ ತಂದುಹಾಕುವದು ಇವೆ ಮೊದಲಾದ ಕೆಲಸಗಳನ್ನು ಕಲಿತುಕೊಂಡೆ.

    ನಾನು ಮಾಡುವ ಕೆಲಸವನ್ನು ಅತ್ಯಂತ ಖುಶಿಯಿಂದಲೇ ಮಾಡುತ್ತಿದ್ದೆ. ನನಗೆ ಕೌಂಪೊಂಡರ್ ಕೆಲಸ ಕೀಳಾಗಿ ಕಾಣಲಿಲ್ಲ. ಇದು ಬಿಟ್ಟರೆ ಬೇರೆ ಅವಕಾಶಗಳು ಇರಲಿಲ್ಲ. ಪಿ.ಯು.ಸಿ ಫೇಲಾದವನಿಗೆ ಇದಕ್ಕಿಂತ ಬೇರೆ ಯಾವ ಕೆಲಸ ತಾನೆ ಸಿಕ್ಕೀತು? ಮೇಲಾಗಿ ಈ ಕೆಲಸ ಇಲ್ಲದಿದ್ದರೆ ಬೇರೆ ಎಲ್ಲ ರೀತಿಯಿಂದಲೂ ನಾನು ಇನ್ನೊಬ್ಬರ ಮೇಲೆ ಅವಲಂಬನೆಯಾಗಬೇಕಿತ್ತು. ಅದು ನನಗೆ ಇಷ್ಟವಿರಲಿಲ್ಲ. ಏನಾದರಾಗಲಿ ಸ್ವತಂತ್ರವಾಗಿ ಬದುಕಬೇಕು ಎಂದುಕೊಂಡು ಕೆಲಸವನ್ನು ಚನ್ನಾಗಿ ಕಲಿಯತೊಡಗಿದೆ. ಅವತ್ತು ಶುರುವಾದ ನನ್ನ ಸ್ವಾಲಂಬನೆಯ ಪ್ರಜ್ಞೆ ಮುಂದೆ ನನ್ನಲ್ಲಿ ಬಲಗೊಳ್ಳುತ್ತಲೇ ಹೋಯಿತು.

    ಮೊಟ್ಟಮೊದಲಬಾರಿಗೆ ಬದುಕನ್ನು ಕಟ್ಟಿಕೊಳ್ಳುವ ನೆಪದಲ್ಲಿ ಜಗತ್ತಿನೆದುರು ನಿಂತಿದ್ದೆ. ಅಲ್ಲಿ ಕ್ರಮೇಣ ಜಗತ್ತಿನ ಇನ್ನೊಂದು ಮುಖದ ಪರಿಚಯವಾಗತೊಡಗಿತು. ಅಲ್ಲಿಯವರೆಗೂ ಕಥೆ, ಕಾದಂಬರಿಗಳಂತೆ ಜೀವನವಿರುತ್ತದೆ ಎಂದು ಕಲ್ಪಿಸಿಕೊಂಡಿದ್ದವನಿಗೆ ವಾಸ್ತವದ ಕಹಿಸತ್ಯಗಳು ಬೇರೊಂದು ಸತ್ಯವನ್ನು ತೆರೆದಿಟ್ಟಿದ್ದವು. ಮೊಟ್ಟಮೊದಲಬಾರಿಗೆ ಕಲ್ಪನೆಗೂ ವಾಸ್ತವಕ್ಕೂ ಇರುವ ಅಂತರ ತಿಳಿದಿತ್ತು. ನನ್ನಿಂದ ನಾನು ಆಚೆ ನಿಂತು ಜಗತ್ತು ನೋಡಿದ್ದೆ. ಹುಚ್ಚಿಗೆ ಬಿದ್ದು ಕಥೆ, ಕಾದಂಬರಿಗಳನ್ನು ಓದಿ ಖುಶಿಪಡುತ್ತಿದ್ದವನಿಗೆ ವಾಸ್ತವದ ಬದುಕು ಭ್ರಮೆನಿರಸನಗೊಳಿಸಿತ್ತು. “ಕಥೆ, ಕಾದಂಬರಿಯಂತೆ ಜೀವನ ಇರೋದಿಲ್ಲಾ. ಅವನ್ನೋದಿ ಹಾಳಾಗಬೇಡ” ಎಂದು ನಮ್ಮ ಮನೆಯಲ್ಲಿ ದೊಡ್ಡವರು ಆಗಾಗ್ಗೆ ಹೇಳುತ್ತಿದ್ದುದು ಸ್ವಂತ ಅನುಭವಕ್ಕೆ ಬಂದಿತ್ತು. ದವಾಖಾನೆಯಲ್ಲಿ ಕಣ್ಣೆದುರಿಗೆ ನಡೆಯುವ ಮೋಸ, ವಂಚನೆ, ಸುಲಿಗೆಗಳನ್ನು ನೋಡಿ ಅಸಹಾಯಕನಾಗಿದ್ದೆ. ಮನಸ್ಸು ಆದರ್ಶ ಮತ್ತು ವಾಸ್ತವಗಳ ನಡುವೆ ತೂಗುತ್ತಿತ್ತು. ಇಂಥ ಕಡೆ ನಾನು ಕೆಲಸ ಮಾಡಬೇಕೆ? ಎಂಬ ಸಂದಿಗ್ಧತೆಯೂ ಆಗಾಗ ಎದುರಾಗುತ್ತಿತ್ತು. ಆದರೆ ಬೇರೆ ದಾರಿಯೇ ಇರಲಿಲ್ಲ! ಮೆಲ್ಲನೆ ಆದರ್ಶಗಳಿಗಿಂತ ಬದುಕು ದೊಡ್ಡದು ಎನಿಸತೊಡಗಿತು. ವಿಚಿತ್ರವೆಂದರೆ ಸಾಹಿತ್ಯ ಮತ್ತು ವಾಸ್ತವಬದುಕಿನ ನಡುವಿನ ಅಂತರ ತಿಳಿದ ಮೇಲೂ ನಾನು ಸಾಹಿತ್ಯ ಓದುವದನ್ನು ಕೈ ಬಿಡಲಿಲ್ಲ. ಅದು ಕೂಡ ಅಷ್ಟೆ; ನನ್ನನ್ನು ಯಾವತ್ತೂ ಕೈ ಬಿಡಲಿಲ್ಲ. ನಾನು ಸೋತಾಗ, ಹತಾಶಗೊಳಗಾದಾಗ, ಅವಮಾನಕ್ಕೀಡಾದಾಗ, ನೋವನ್ನುಂಡಾಗ..... ಹೀಗೆ ಬದುಕಿನ ಬೇರೆ ಬೇರೆ ಸಂದರ್ಭಗಳಲ್ಲಿ ನನ್ನ ಜೊತೆಗಿದ್ದುಕೊಂಡೇ ನನಗೊಂದಿಷ್ಟು ಸಮಾಧಾನ ಹೇಳಿದೆ.

    ಈ ಎಲ್ಲದರ ಮಧ್ಯ ಒಂದಿಷ್ಟು ಕನಸುಗಳು ಚಿಗುರತೊಡಗಿದ್ದವು. ಅವು ಕೌಂಪೊಂಡರ್ ಆಗುವ ಕನಸುಗಳು. ಅವನ್ನು ನನ್ನ ಕೆಲಸ ಹುಟ್ಟುಹಾಕಿದ್ದೋ ಇಲ್ಲ ಬೇರೆಯವರು ನನ್ನ ಕೌಂಪೊಂಡರ್ ಕೆಲಸ ನೋಡಿ ಅವನ್ನು ಮನದಲ್ಲಿ ಬಿತ್ತಿ ಬೆಳೆದರೋ ಗೊತ್ತಿಲ್ಲ. ಅಂತೂ ಕೌಂಪೊಂಡರ್ ಆಗುವ ಕನಸು ಕಾಣತೊಡಗಿದೆ. ಆಗ ನಮ್ಮ ಮನೆಯವರು “ಕೌಂಪೊಂಡರ್ ಆಗಿ ಒಳ್ಳೆ ಕೆಲಸ ಮಾಡಿದೆ. ಹಾಗೆ ಮುಂದುವರಿ. ನಿನಗೆ ಒಳ್ಳೆ ಭವಿಷ್ಯವಿದೆ. ಕೌಂಪೊಂಡರ್ ಆಗಿ ಕೆಲಸ ಕಲಿತ ಮೇಲೆ ನಾಲ್ಕಾರು ಹಳ್ಳಿ ಸುತ್ತಿ ಪೇಶೆಂಟ್ಸ್ ನೋಡಿ ಬಂದ್ರ ಒಳ್ಳೆ ದುಡ್ದು ಮಾಡಬಹುದು.” ಎಂದೆಲ್ಲಾ ಪ್ರೋತ್ಸಾಹಿಸುವಾಗ ನಾನು ಕೌಂಪೊಂಡರ್ ಆಗಿ ಕಾಸು ಎಣಿಸೋ ಕನಸು ಕಂಡಿದ್ದೇನೆ. ಆದರೆ ಆ ಕನಸು ಒಂದು ತಿಂಗಳು ಮುಗಿಯುವಷ್ಟೊತ್ತಿಗೆ ಮುರುಟಿಬಿತ್ತು. ಏಕೆಂದರೆ ಅಲ್ಲಿ ಕೆಲಸಕ್ಕೆ ಸೇರುವ ಮುನ್ನ ನನ್ನ ಸಂಬಳ ಇಷ್ಟಿಷ್ಟೇ ಅಂತ ನಿಗದಿಯಾಗಿರಲಿಲ್ಲ. ಕರುಣೆ ಆಧಾರದ ಮೇಲೆ ಕೆಲಸ ಕೊಡುವವರನ್ನು ಇಷ್ಟಿಷ್ಟೇ ಕೊಡಿ ಅಂತ ಕರಾರುವಕ್ಕಾಗಿ ಹೇಗೆ ಕೇಳೋದು? ತಿಂಗಳ ಕೊನೆಯಲ್ಲಿ ಆ ಡಾಕ್ಟರು ಕೊಟ್ಟಿದ್ದು ಬರೀ 200 ರೂಪಾಯಿ. ಆ ಸಂಬಳ ನಾನು ದಿನಾಲೂ ಹೋಗಿ ಬರುವ ಬಸ್ ಚಾರ್ಜಿಗೂ ಸಾಕಾಗುತ್ತಿರಲಿಲ್ಲವಾದ್ದರಿಂದ ಆ ಕೆಲಸಕ್ಕೆ ಎಳ್ಳು ನೀರು ಬಿಡಬೇಕಾಯಿತು. ಅಲ್ಲಿಂದ ನನ್ನ ಬದುಕು ಮತ್ತಷ್ಟು ಮೂರಾಬಟ್ಟೆಯಾಗುತ್ತಾ ಹೋಯಿತು.