Demo image Demo image Demo image Demo image Demo image Demo image Demo image Demo image

ಸತ್ತವರ ಹಾದಿ

  • ಮಂಗಳವಾರ, ಮಾರ್ಚ್ 30, 2010
  • ಬಿಸಿಲ ಹನಿ
  • ಲೇಬಲ್‌ಗಳು:


  • ಮೈಕೆಲ್ ಓಬಿಯ ಆಸೆಗಳೆಲ್ಲಾ ಅವನು ಅಂದುಕೊಂಡಿದ್ದಕ್ಕಿಂತ ಬಹಳಷ್ಟು ಮೊದಲೇ ಈಡೇರಿದ್ದವು. ಓಬಿ 1949 ಜನೇವರಿ ತಿಂಗಳಲ್ಲಿ ಎನ್ಡುಮೆ ಕೇಂದ್ರೀಯ ವಿದ್ಯಾಲಯದ ಮುಖ್ಯೋಪಾದ್ಯಯನಾಗಿ ನೇಮಕಗೊಂಡ. ಆ ಶಾಲೆ ಬಹಳ ದಿವಸಗಳಿಂದ ಹಿಂದುಳಿದ ಶಾಲೆಯಾಗಿಯೇ ಉಳಿದಿತ್ತು. ಹೀಗಾಗಿ ಅದರ ಮಿಶಿನ್ ಅಧಿಕಾರಿಗಳು ಅದನ್ನು ನಡೆಸಲು ಒಬ್ಬ ದಕ್ಷ, ಪ್ರಾಮಾಣಿಕ, ಶಿಸ್ತಿನ ತರುಣ ಶಿಕ್ಷಕನನ್ನು ಕಳಿಸಲು ನಿರ್ಧರಿಸಿದ್ದರು. ಓಬಿ ಅತ್ಯಂತ ಉತ್ಸಾಹದಿಂದ ಈ ಜವಾಬ್ದಾರಿಯನ್ನು ಒಪ್ಪಿಕೊಂಡ. ಅವನಲ್ಲಿ ಒಂದು ಶಾಲೆಯನ್ನು ನಡೆಸಲು ಬೇಕಾಗುವ ಎಲ್ಲ ಅರ್ಹತೆಗಳು ಇದ್ದವು. ಮೇಲಾಗಿ ಅವನು ತನ್ನ ದೂರದೃಷ್ಟಿ, ಚಾಣಾಕ್ಷತನ ಮತ್ತು ಕಾರ್ಯತಂತ್ರಗಳಿಗೆ ಹೆಸರುವಾಸಿಯಾಗಿದ್ದ. ಇದೀಗ ಅವನ್ನೆಲ್ಲ ಜಾರಿಗೆ ತರಲು ಒಂದು ಸುವರ್ಣಾವಕಾಶ ತಾನೇ ತಾನಾಗಿ ಒದಗಿ ಬಂದಿತ್ತು. ಓಬಿ ಉನ್ನತ ವ್ಯಾಸಾಂಗ ಮುಗಿಸಿ ಒಬ್ಬ ನುರಿತ ಶಿಕ್ಷಕನೆಂದು ಹೆಸರು ಮಾಡಿದ್ದ. ಆ ವಿಷಯ ಶಿಕ್ಷಣ ಇಲಾಖೆಯ ಕಡತಗಳಲ್ಲೂ ಸಹ ನಮೂದಿತವಾಗಿತ್ತು. ಈ ಕಾರಣಕ್ಕಾಗಿ ಅವನು ಮಿಶಿನ್ ಸಂಸ್ಥೆಯಲ್ಲಿ ಕೆಲಸ ಮಾಡುವ ಬೇರೆಲ್ಲ ಮುಖ್ಯೋಪಾದ್ಯಾಯರಿಗಿಂತ ತನ್ನನ್ನು ವಿಭಿನ್ನವಾಗಿ ಗುರುತಿಸಿಕೊಂಡಿದ್ದ. ಸದಾ ನೇರ, ನಿಷ್ಠುರ ನುಡಿಗೆ ಹೆಸರಾಗಿದ್ದ ಅವನು ಹಳೆಯ ಕಾಲದವರ ಕಂದಾಚಾರಗಳನ್ನು, ಮೂಢನಂಬಿಕೆಗಳನ್ನು ಹಾಗೂ ಅವರ ಅವೈಜ್ಞಾನಿಕ ವಿಚಾರಗಳನ್ನು ಬಲವಾಗಿ ಖಂಡಿಸುತ್ತಿದ್ದ.
    “ಈ ಅವಕಾಶವನ್ನು ನಾವು ಸದ್ಬಳಿಕೆ ಮಾಡಿಕೊಳ್ಳಬಹುದು.... ಅಲ್ಲವೇ?” ಮೊಟ್ಟಮೊದಲಿಗೆ ಅವನು ತನ್ನ ಬಡ್ತಿ ವಿಷಯವನ್ನು ತಿಳಿದಾಗ ಅತ್ಯಂತ ಸಂತೋಷದಿಂದ ತನ್ನ ನವತರುಣಿ ಹೆಂಡತಿಯನ್ನು ಹೀಗೆ ಕೇಳಿದ್ದ.
    “ಖಂಡಿತ, ನಮ್ಮ ಕೈಲಿ ಏನಾಗುತ್ತೋ ಅದನ್ನೆಲ್ಲಾ ಮಾಡೋಣ...... ಚನ್ನಾಗಿಯೇ ಮಾಡೋಣ” ಅವಳು ಉತ್ತರಿಸಿದಳು, “ನಮ್ಮ ಶಾಲೆಯನ್ನು ನವೀಕರಿಸೋಣ......ಅದರ ಸುತ್ತಲೂ ಅಂದ ಚೆಂದದ ಹೂ ಗಿಡಗಳನ್ನು ನೆಡೋಣ......ಹಾಗೂ ಎಲ್ಲದರಲ್ಲೂ ಹೊಸತನ ಮತ್ತು ಬದಲಾವಣೆಯನ್ನು ತರೋಣ.” ಕೇವಲ ಎರಡೇ ಎರಡು ವರ್ಷದ ದಾಂಪತ್ಯ ಜೀವನದಲ್ಲಿ ‘ಹೊಸತನ’ ಕುರಿತಂತೆ ಆಕೆ ತನ್ನ ಗಂಡನಿಂದ ಸಾಕಷ್ಟು ಪ್ರಭಾವಿತಳಾಗಿದ್ದಳು. ಮಾತ್ರವಲ್ಲ ಅವಳ ಗಂಡ ‘ಹಳೆಯ ಕಾಲದ ನಂಬಿಕೆಗಳಿಗೆ ಜೋತುಬಿದ್ದ ಈ ಮೂಢರು ಮಾರ್ಕೆಟಿನಲ್ಲಿ ವ್ಯಾಪಾರ ಮಾಡಿಕೊಂಡಿರುವದು ಬಿಟ್ಟು ಇಲ್ಲಿ ಕಲಿಸಲು ಬಂದಿದ್ದಾರೆ’ ಎಂದು ಆಗಾಗ್ಗೆ ಅಲ್ಲಿರುವ ಶಿಕ್ಷಕರನ್ನು ಕುರಿತು ಹೇಳುತ್ತಿದ್ದ. ಅದೇ ಧೋರಣೆಯನ್ನು ಅವಳೂ ಸಹ ತಾಳಿದ್ದಳು. ಆಕೆ ಅದಾಗಲೇ “ಇಂಥ ಹೆಡ್ಮಾಸ್ಟರನ ಹೆಂಡತಿಯಾಗಿದ್ದೇ ತನ್ನ ಸೌಭಾಗ್ಯ” ಎಂದುಕೊಂಡು ಇಡಿ ಶಾಲೆಯಲ್ಲಿ ರಾಣಿಯಂತೆ ಮೆರೆಯತೊಡಗಿದ್ದಳು.
    ಅಲ್ಲಿ ಬೇರೆ ಶಿಕ್ಷಕರ ಹೆಂಡತಿಯರು ಇದ್ದಿದ್ದರೆ ಅವಳ ಸ್ಥಾನಮಾನ ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದರೇನೋ? ಅವರಿಗೆಲ್ಲಾ ಈಕೆ ಎಲ್ಲದರಲ್ಲೂ ಮಾದರಿಯಾಗಿರುತ್ತಿದ್ದಳೇನೋ? ಆದರೆ ಅಲ್ಲಿ ಇವಳೊಬ್ಬಳನ್ನು ಬಿಟ್ಟರೆ ಬೇರೆ ಯಾವ ಹೆಂಗಸರೂ ಇದ್ದಂತೆ ಕಾಣಲಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಅವಳು ಸ್ವಲ್ಪ ಸಂದೇಹದಿಂದಲೇ ಕೊಂಚ ಅಳಕುತ್ತಾ ತನ್ನ ಗಂಡನನ್ನು ಕೇಳಿದಳು.
    “ನಿಮ್ಮ ಸಹೋದ್ಯೋಗಿಗಳೆಲ್ಲಾ ಅವಿವಾಹಿತ ತರುಣರೆ?” ಅವನದಕ್ಕೆ ಉತ್ಸಾಹದಿಂದ “ಹೌದು, ಅದೊಂದು ರೀತಿ ಒಳ್ಳೇದೇ!” ಎಂದು ಹೇಳಿದ. ಆದರೆ ಅವನ ಉತ್ಸಾಹದಲ್ಲಿ ಅವಳು ಭಾಗಿಯಾಗಲಿಲ್ಲ.
    “ಏಕೆ?”
    “ಏಕೆಂದರೆ, ಅವರು ತಮ್ಮ ಸಮಯ ಮತ್ತು ಶಕ್ತಿಯನ್ನೆಲ್ಲಾ ಶಾಲೆಯ ಅಭಿವೃದ್ಧಿಗಾಗಿ ಮೀಸಲಿಡಬಹುದು.”
    ನ್ಯಾನ್ಸಿ, ಕ್ಷಣಾರ್ಧದಲ್ಲಿ ನಿರಾಶೆಗೊಂಡಳು. ಅವಳ ಉತ್ಸಾಹವೆಲ್ಲಾ ಒಮ್ಮೆಲೆ ಜರ್ರೆಂದು ಇಳಿದುಹೋಯಿತು. ಈಗ್ಗೆ ಸ್ವಲ್ಪ ಸಮಯದ ಹಿಂದೆಯಷ್ಟೇ ಅವಳು ಹೊಸ ಶಾಲೆಯ ಕುರಿತಂತೆ ಬಹಳಷ್ಟನ್ನು ಕಲ್ಪಿಸಿಕೊಂಡಿದ್ದಳು. ಅವಳ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಆದರೆ ಅದು ಕೆಲವೇ ಕೆಲವು ಕ್ಷಣಗಳು ಮಾತ್ರ. ಎಲ್ಲವೂ ಮಂಜಿನಂತೆ ಕರಗಿಹೋಗಿತ್ತು. ಆದರೆ ಅವಳು ತನ್ನ ವ್ಯಯಕ್ತಿಕ ದುರಾದೃಷ್ಟಕ್ಕೆ ತನ್ನ ಗಂಡನ ಖುಶಿಯನ್ನು ಹಾಳುಮಾಡಲು ಇಷ್ಟಪಡಲಿಲ್ಲ. ಅವನು ಅರಾಮ ಖುರ್ಚಿಯಲ್ಲಿ ಒರಗಿ ಕುಳಿತಂತೆ, ನ್ಯಾನ್ಸಿ ಒಮ್ಮೆ ಅವನತ್ತ ನೋಡಿದಳು. ಅವನ ಬೆನ್ನು ಸ್ವಲ್ಪ ಗೂನವಾಗಿದ್ದರಿಂದ ಅಲ್ಪಾಯುಷಿ ತರ ಕಂಡ. ಆದರೆ ಅವನ ಜೀವನೋತ್ಸಾಹಕ್ಕೆ ಪಾರವೇ ಇರಲಿಲ್ಲ. ಸದಾ ಏನಾದರೊಂದು ಕೆಲಸ ಮಾಡುತ್ತಾ ಚಟುವಟಿಕೆಯಿಂದಿರುತ್ತಿದ್ದ. ಯಾವುದೇ ಕೆಲಸಕ್ಕಾದರೂ ಸೈ ಉತ್ಸಾಹದಿಂದ ಮುನ್ನುಗ್ಗುತ್ತಿದ್ದ. ಅವನ ಈ ಪರಿಯ ಉತ್ಸಾಹವನ್ನು ನೋಡಿ ಸುತ್ತುಮುತ್ತಲಿನ ಜನ ಚಕಿತಗೊಳ್ಳುತ್ತಿದ್ದರು. ಅವನೀಗ ಕುಳಿತಿರುವ ಭಂಗಿಯಿಂದಲೇ ಹೇಳಬಹುದಿತ್ತು ಅವನ ದೇಹದ ಶಕ್ತಿಯೆಲ್ಲಾ ಉಡುಗಿಹೋಗಿ, ಅದು ಅವನ ಗುಳಿಬಿದ್ದ ಕಂಗಳಲ್ಲಿ ಮನೆಮಾಡಿ ಅವನೊಬ್ಬ ಸೂಕ್ಷ್ಮಗ್ರಾಹಿ ತರ ಕಾಣಿಸುವಂತೆ ಮಾಡಿತ್ತು. ಅವನಿಗೀಗ ಕೇವಲ ಇಪ್ಪತ್ತಾರು ವರ್ಷ. ಆದರೆ ಮೂವತ್ತೋ, ಮೂವತ್ತೆರಡೋ ಆದವರ ತರ ಕಾಣುತ್ತಿದ್ದ. ಒಟ್ಟಾರೆಯಾಗಿ ಹೇಳುವದಾದರೆ ಅವನು ಅಂಥಾ ಆಕರ್ಷಕವಾಗಿ ಕಾಣದಿದ್ದರೂ ಕುರೂಪಿಯೇನೂ ಆಗಿರಲಿಲ್ಲ.
    “ಮೈಕ್, ನಿನ್ನ ಯೋಚನಾ ಲಹರಿಗೆ ಒಂದು ಪೆನ್ನಿ ಕೊಡಬೇಕು” ಯಾವುದೋ ಮಹಿಳಾ ಮಾಸಪತ್ರಿಕೆಯೊಂದನ್ನು ಓದುತ್ತಿದ್ದ ನ್ಯಾನ್ಸಿ ಸ್ವಲ್ಪ ಸಮಯದ ನಂತರ ಅದರಲ್ಲಿನ ವಾಕ್ಯವೊಂದನ್ನು ಅನುಕರಿಸುತ್ತಾ ಹೇಳಿದಳು.
    “ನಾನು, ಈ ಜನಕ್ಕೆ ಒಂದು ಶಾಲೆಯನ್ನು ಹೇಗೆ ನಡೆಸಬೇಕೆಂದು ತೋರಿಸಲು ನಮಗೆ ಕೊನೆಗೂ ಒಂದು ಒಳ್ಳೆ ಅವಕಾಶ ಸಿಕ್ಕಿತಲ್ಲವೆ? ಎಂದು ಯೋಚಿಸುತ್ತಿದ್ದೆ”
    ಎನ್ದುಮೆ ಶಾಲೆ ಅಕ್ಷರಶಃ ಹಿಂದುಳಿದ ಶಾಲೆಯಾಗಿತ್ತು. ಈ ಶಾಲೆಯನ್ನು ಮುಂದೆ ತರಲು ಓಬಿ ತನ್ನ ಜೀವನವನ್ನೇ ಮುಡಿಪಾಗಿಟ್ಟ. ಹಾಗೆಯೇ ಅವನ ಹೆಂಡತಿಯೂ ಸಹ. ಅವನಲ್ಲಿ ಎರಡು ಧ್ಯೇಯಗಳಿದ್ದವು. ಮೊದಲನೆಯದು ಶಾಲೆಯಲ್ಲಿ ಉನ್ನತ ಕಲಿಕಾ ವಿಧಾನಗಳನ್ನು ಅಳವಡಿಸುವದು. ಎರಡನೆಯದು ಶಾಲೆಯ ಕೌಂಪೊಂಡನ್ನು ಅಂದಚೆಂದಗೊಳಿಸುವದು. ಮುಂದಿನ ಮಳೆಗಾಲದಷ್ಟೊತ್ತಿಗೆ ನ್ಯಾನ್ಸಿಯ ಕನಸಿನ ತೋಟಗಳೆಲ್ಲಾ ಅರಳಿ ನಿಂತವು. ದಾಸವಾಳ ಮತ್ತು ಕಣಿಗೆಲೆ ಗಿಡಗಳನ್ನು ಶಾಲೆಯ ಕೌಂಪೊಂಡಿನ ಗೋಡೆಯನ್ನಾಗಿ ನಿರ್ಮಿಸಿದರೆ ಅವುಗಳ ಮಧ್ಯದಲ್ಲಿ ಕೆಂಪು ಮತ್ತು ಹಳದಿ ಬಣ್ಣಗಳ ಕುರುಚಲು ಗಿಡಗಳನ್ನು ಆ ತುದಿಯಿಂದ ಈ ತುದಿಯವರೆಗೆ ಅತ್ಯಂತ ಜಾಗೂರಕವಾಗಿ ಬೆಳೆಸಲಾಯಿತು.
    ಒಂದು ಸಂಜೆ ಓಬಿ ತನ್ನ ಕೆಲಸವನ್ನು ನೋಡಿ ತನ್ನಷ್ಟಕ್ಕೆ ತಾನೇ ಹೆಮ್ಮೆಯಿಂದ ಬೀಗುತ್ತಾ ನಿಂತಿದ್ದ. ಅಷ್ಟರಲ್ಲಿ ಒಬ್ಬ ಹೆಣ್ಣು ಮಗಳು ಶಾಲೆಯ ಕೌಂಪೊಂಡಿನ ಪೊದೆಗಳ ಸಂಧಿಯಿಂದ ನುಸುಳಿ, ಪಕ್ಕದಲ್ಲಿಯೇ ಇದ್ದ ಚೆಂಡು ಹೂವಿನ ಗಿಡಗಳನ್ನು ದಾಟಿಕೊಂಡು ಕುಂಟುತ್ತಾ ನಡೆದುಹೋಗುವದನ್ನು ನೋಡಿ ಓಬಿ ಕೆಂಡಾಮಂಡಲವಾದ. ಆ ಜಾಗದ ಹತ್ತಿರ ಬಂದು ಅದನ್ನು ಸೂಕ್ಷ್ಮವಾಗಿ ಗಮನಿಸಿದ. ಅಲ್ಲಿ ಅದಾಗಲೇ ಬಳಸಿ ಬಿಟ್ಟಿರುವ ಕಾಲುದಾರಿಯೊಂದು ಕೌಂಪೊಂಡಿನಾಚೆಯಿಂದ ಈ ತುದಿಯಲ್ಲಿರುವ ಕಂಟಿಗಳನ್ನು ಹಾಯ್ದುಕೊಂಡು ಹೋಗಿರುವದು ಕಾಣಿಸಿತು. ಓಬಿಯ ಮೈಯೆಲ್ಲಾ ಉರಿಯಿತು.
    “ನನಗೆ ಅಶ್ಚರ್ಯವಾಗ್ತಿದೆ” ಅಲ್ಲಿ ಮೂರುವರ್ಷದಿಂದ ಕೆಲಸ ಮಾಡುತ್ತಿದ್ದ ಶಿಕ್ಷಕನನ್ನು ಕೇಳಿದ “ನೀವು ಅದ್ಹೇಗೆ ಈ ಜಾಗವನ್ನು ಹಳ್ಳಿಯವರಿಗೆ ಕಾಲುದಾರಿಯನ್ನಾಗಿ ಬಳಸಲು ಬಿಟ್ಟಿರಿ? ಇದು ನಂಬಲಸಾಧ್ಯವಾದುದು” ಎಂದು ಅಸಹನೆಯಿಂದ ತನ್ನ ತಲೆಯನ್ನೊಮ್ಮೆ ಕೊಡವಿದ.
    “ಆ ದಾರಿ” ಕ್ಷಮೆಯಾಚಿಸುವ ರೀತಿಯಲ್ಲಿ ಕೊಂಚ ಅಳುಕತ್ತಲೇ ಆ ಶಿಕ್ಷಕ ಹೇಳಿದ “ಅವರಿಗೆ ತುಂಬಾ ಮಹತ್ವವಾದುದೆಂದು ಕಾಣುತ್ತದೆ. ಅದನ್ನು ಅಪರೂಪಕ್ಕೊಮ್ಮೆ ಬಳಸಿದರೂ, ಈ ದಾರಿ ಅವರ ಊರಿನ ದೇವಸ್ಥಾನ ಹಾಗೂ ಸ್ಮಶಾನವನ್ನು ಒಂದುಗೂಡಿಸುತ್ತದೆ”
    “ಅದಕ್ಕೂ, ಈ ಶಾಲೆಗೂ ಏನು ಸಂಬಂಧ?” ಹೆಡ್ಮಾಸ್ಟರು ಕೇಳಿದರು.
    “ಅದೆಲ್ಲಾ ನಂಗೊತ್ತಿಲ್ಲ” ಪಕ್ಕದಲ್ಲಿಯೇ ಇದ್ದ ಇನ್ನೊಬ್ಬ ಶಿಕ್ಷಕ ತನ್ನ ಭುಜ ಕುಣಿಸುತ್ತಾ ಹೇಳಿದ “ಆದರೆ ನಂಗಿನ್ನೂ ಚನ್ನಾಗಿ ನೆನಪಿದೆ. ಹಿಂದೆ ನಾವು ಈ ದಾರಿಯನ್ನು ಮುಚ್ಚಲು ಪ್ರಯತ್ನಿಸಿದಾಗ ದೊಡ್ದ ಗಲಾಟೆಯೇ ನಡೆಯಿತು.”
    “ಅದು ಹಿಂದೆ. ಆದರೆ ಈಗ ಅದನ್ನು ಉಪಯೋಗಿಸಲು ಬಿಡಬಾರದು. ಮುಂದಿನವಾರ ಶಿಕ್ಷಣ ಮೇಲಾಧಿಕಾರಿ ಈ ಶಾಲೆಯನ್ನು ತಪಾಸಣೆ ಮಾಡಲು ಬಂದಾಗ ಇದನ್ನೆಲ್ಲ ನೋಡಿ ಏನು ಅನ್ಕೊಳದಿಲ್ಲಾ? ಅದಲ್ಲದೆ ಅವರು ಬಂದಾಗಲೇ ಈ ಹಳ್ಳಿಯವರು ಅದನ್ನು ಬಳಸಿಬಿಟ್ಟರೆ ಏನು ಗತಿ?” ಎಂದು ಹೇಳುತ್ತಾ ಓಬಿ ನಡೆದುಹೋದ.
    ಆ ದಾರಿಗೆ ಅಡ್ದಲಾಗಿ ಎರಡೂ ಕಡೆಗೆ ಅಂದರೆ ಶಾಲೆಯ ಕೌಂಪೊಂಡಿನೊಳಗೆ ಶುರುವಾಗುವಿನಿಂದ ಹಿಡಿದು ಆ ತುದಿಯ ಕೌಂಪೊಂಡಿನ ಸರಹದ್ದಿಗೆ ಬರುವ ಕೊನೆಯವರೆಗೂ ದೊಡ್ಡ ದೊಡ್ಡ ಬಿದಿರಿನ ಕಡ್ದಿಗಳನ್ನು ನೆಡೆಲಾಯಿತು. ಅಲ್ಲದೆ ತಂತಿಯನ್ನು ಸಹ ಬಿಗಿದು ಭದ್ರಗೊಳಿಸಲಾಯಿತು.
    ಮೂರು ದಿನಗಳ ನಂತರ ಆ ಊರಿನ ಪೂಜಾರಿ ಯ್ಯಾನಿ ಹೆಡ್ಮಾಸ್ಟರನ್ನು ಕಾಣಲು ಬಂದ. ಅವನಿಗೆ ವಯಸ್ಸಾಗಿದ್ದರಿಂದ ಸ್ವಲ್ಪ ಬಗ್ಗಿಕೊಂಡು ನಡೆಯುತ್ತಿದ್ದ. ಅವನ ಕೈಯಲ್ಲೊಂದು ದಪ್ಪನಾದ ಊರುಗೋಲಿತ್ತು. ಅದನ್ನು ಪ್ರತಿಸಾರಿ ತನ್ನ ವಾದದಲ್ಲಿ ಹೊಸ ಹೊಸ ವಿಚಾರಗಳನ್ನು ಮಂಡಿಸುವಾಗ ಇತರರ ಗಮನ ಸೆಳೆಯಲು ಒಮ್ಮೆ ಅದನ್ನು ನೆಲಕ್ಕೆ ಕುಟ್ಟುತ್ತಿದ್ದ.
    “ಇತ್ತೀಚಿಗೆ......” ಅವನು ಎಂದಿನಂತೆ ಮಾಮೂಲಿ ಉಭಯಕುಶಲೋಪರಿಯೆಲ್ಲಾ ಮುಗಿದ ಮೇಲೆ ಹೇಳಿದ “ನಮ್ಮ ಪೂರ್ವಿಕರ ಕಾಲ್ದಾರಿ ಮುಚ್ಚಲ್ಪಟ್ಟಿದೆ ಅಂತ ಕೇಳಲ್ಪಟ್ಟೆ.......”
    “ಹೌದು.....” ಓಬಿ ಉತ್ತರಿಸುತ್ತಾ ನಿಷ್ಠುರವಾಗಿ ಹೇಳಿದ “ನಮ್ಮ ಶಾಲೆಯ ಕೌಂಪೊಂಡನ್ನು ಹೆದ್ದಾರಿಯನ್ನಾಗಿ ಬಳಸಲು ನಾವು ಅವಕಾಶ ಮಾಡಿಕೊಡುವದಿಲ್ಲ.”
    “ಇಲ್ನೋಡು ಮಗನೆ......” ತನ್ನ ಊರುಗೋಲನ್ನು ನೆಲಕ್ಕೆ ಕುಟ್ಟುತ್ತಾ ಪೂಜಾರಿ ಹೇಳಿದ “ಈ ಹಾದಿ ನೀ ಹುಟ್ಟುವದಕ್ಕಿಂತ, ನಿನ್ನ ತಂದೆ ಹುಟ್ಟುವದಕ್ಕಿಂತ ಮೊದಲೇ ಇಲ್ಲಿತ್ತು. ಇಡಿ ಹಳ್ಳಿ ಈ ದಾರಿಯನ್ನು ಆಶ್ರಯಿಸಿದೆ. ನಮ್ಮ ಸತ್ತ ಸಂಬಂಧಿಕರು ಈ ಹಾದಿಯಿಂದಲೇ ತೆರಳುತ್ತಾರೆ ಮತ್ತು ಈ ಹಾದಿಯಿಂದಲೇ ನಮ್ಮ ಪೂರ್ವಿಕರು ನಮ್ಮನ್ನು ಭೇಟಿ ಮಾಡುತ್ತಾರೆ. ಅದಕ್ಕಿಂತ ಹೆಚ್ಚಾಗಿ, ಮುಂದೆ ಹುಟ್ಟುವ ನಮ್ಮ ಮಕ್ಕಳೆಲ್ಲಾ ಈ ದಾರಿಯಿಂದಲೇ ಹುಟ್ಟಿ ಬರೋದು......”
    ಓಬಿ ಶುಷ್ಕ ನಗೆಯೊಂದನ್ನು ನಗುತ್ತಾ ಎಲ್ಲವನ್ನೂ ಕೇಳಿಸಿಕೊಂಡ.
    “ನಮ್ಮ ಇಡಿ ಶಾಲೆಯ ಉದ್ದೇಶ.....” ಅವನು ಕೊನೆಯದೆಂಬಂತೆ ಹೇಳಿದ “ಇಂಥ ಮೂಢನಂಬಿಕೆಗಳನ್ನು ಅಳಿಸುವದೇ ಆಗಿದೆ. ಸತ್ತವರಿಗೆ ಹಾದಿಗಳು ಬೇಕಾಗಿಲ್ಲ. ನಿಮ್ಮೀ ಯೋಚನೆಯೇ ಹಾಸ್ಯಾಸ್ಪದದಿಂದ ಕೂಡಿದೆ. ಇಂಥ ಮೂಢನಂಬಿಕೆಗಳನ್ನು ನೋಡಿ ನಮ್ಮ ಶಾಲೆಯ ಮಕ್ಕಳು ಅಪಹಾಸ್ಯ ಮಾಡುವಂತೆ ಮಾಡುವದೇ ನಮ್ಮ ಮೊದಲ ಕರ್ತವ್ಯವಾಗಿದೆ”
    “ನೀವು ಹೇಳುವದು ನಿಜವಿರಬಹುದು. ಆದರೆ ನಮ್ಮ ಪೂರ್ವಿಕರ ಕಾಲದಿಂದ ಈ ಆಚರಣೆಗಳನ್ನು ಪಾಲಿಸುತ್ತಾ ಬಂದಿದ್ದೇವೆ. ನೀವು ಈ ದಾರಿಯನ್ನು ಪುನಃ ಆರಂಭಿಸಿದರೆ, ನಿಮ್ಮೊಂದಿಗೆ ಹಗೆತನ ಕಟ್ಟಿಕೊಳ್ಳುವ ಪ್ರಸಂಗ ಬರುವದಿಲ್ಲ. ನಾನು ಹೇಳುವದಿಷ್ಟೆ: ಗಿಣಿಯೂ ಹಾರಾಡುತ್ತಿರಲಿ, ಗಿಡುಗವೂ ಹಾರಾಡುತ್ತಿರಲಿ.” ಎಂದು ಹೇಳುತ್ತಾ ಪೂಜಾರಿ ಹೊರಡಲು ಎದ್ದು ನಿಂತನು.
    “ದಯವಿಟ್ಟು ಕ್ಷಮಿಸಿ” ತರುಣ ಮುಖ್ಯೋಪಾದ್ಯಾಯ ಹೇಳಿದ “ನಮ್ಮ ಶಾಲೆಯ ಕೌಂಪೊಂಡನ್ನು ನಾವು ಹೆದ್ದಾರಿಯನ್ನಾಗಿ ಬಳಸಲು ಬಿಡುವದಿಲ್ಲ. ಅದು ನಮ್ಮ ನೀತಿ ನಿಯಮಗಳಿಗೆ ವಿರುದ್ಧವಾದುದು. ಬೇಕಾದರೆ ನಿಮಗೊಂದು ಸಲಹೆ ಕೊಡಬಲ್ಲೆ; ನಿಮಗೆ ಬೇಕೆನಿಸಿದರೆ ಕೌಂಪೊಂಡಿನಿಂದಾಚೆ ಅದರ ಉದ್ದಕ್ಕೂ ಇನ್ನೊಂದು ದಾರಿಯನ್ನು ನಿರ್ಮಿಸಿಕೊಳ್ಳಿ. ಅದನ್ನು ನಿರ್ಮಿಸಲು ಬೇಕಾದರೆ ನಮ್ಮ ಶಾಲೆಯ ಮಕ್ಕಳ ಸಹಾಯವನ್ನು ಸಹ ಕೊಡಬಲ್ಲೆ. ನಮ್ಮ ಪೂರ್ವಿಕರಿಗೆ ಆ ಬಳಸು ದಾರಿಯಲ್ಲಿ ನಡೆದುಬಂದರೆ ಅಂಥಾ ಕಷ್ಟವಾಗುತ್ತದೆಂದು ನನಗನಿಸುವದಿಲ್ಲ.”
    “ಇದಕ್ಕಿಂತ ಹೆಚ್ಚಿಗೆ ನಾನೇನೂ ಹೇಳಲಾರೆ.” ಎಂದು ಪೂಜಾರಿ ಅದಾಗಲೇ ಹೊರನಡೆದು ಹೇಳಿದ.
    ಎರಡು ದಿವಸಗಳ ನಂತರ ಆ ಹಳ್ಳಿಯಲ್ಲಿ ಹೆಂಗಸೊಬ್ಬಳು ಹೆರಿಗೆ ಸಮಯದಲ್ಲಿ ತೀರಿಕೊಂಡಳು. ಇದಕ್ಕೆ ಕಾರಣವೇನೆಂದು ತಿಳಿಯಲು ಜೋತಿಷಿಯ ಹತ್ತಿರ ವಿಚಾರಿಸಲಾಗಿ, ಪೂರ್ವಿಕರ ಹಾದಿಯನ್ನು ಮುಚ್ಚಿ ಅವರಿಗೆ ಅವಮಾನ ಮಾಡಿದ್ದೇ ಆ ಹೆಂಗಸಿನ ಬಲಿದಾನಕ್ಕೆ ಕಾರಣವಾಯಿತು ಹಾಗೂ ಮುಂದೆಯೂ ಸಹ ಇದೇ ರೀತಿ ಬಲಿದಾನ ನಡೆಯುತ್ತಾ ಹೋಗುತ್ತದೆ ಎಂಬ ಉತ್ತರ ಬಂತು.
    ಮರು ದಿವಸ ಮುಂಜಾನೆ ಓಬಿ ತಾನೇ ಕಟ್ಟಿ ಬೆಳೆಸಿದ ಶಾಲೆಯ ಅವಶೇಷಗಳೊಂದಿಗೆ ಎದ್ದನು. ಆ ಹಾದಿಯ ಅಂಚಿನಲ್ಲಿದ್ದ ಪೊದೆಗಳನ್ನೆಲ್ಲಾ ಕಿತ್ತೆಸೆದಿದ್ದರು. ಮಾತ್ರವಲ್ಲ ಶಾಲೆಯ ಸುತ್ತಮುತ್ತಲಿದ್ದ ಸುಂದರ ಗಿಡಗಂಟಿಗಳನ್ನೆಲ್ಲಾ ನಾಶಮಾಡಿದ್ದರು. ಹೂಗಳೆಲ್ಲಾ ಕಾಲ್ತುಳಿತಕ್ಕೊಳಗಾಗಿ ಸತ್ತುಹೋಗಿದ್ದವು. ಶಾಲೆಯ ಒಂದು ಕಟ್ಟಡವನ್ನು ಸಹ ಕೆಡುವಲಾಗಿತ್ತು........ ಅದೇ ದಿವಸ ಮೇಲಾಧಿಕಾರಿಗಳು ಶಾಲೆಯನ್ನು ವೀಕ್ಷಿಸಲು ಬಂದರು. ಅಲ್ಲಿ ಆಗಿರುವ ದುಸ್ಥಿತಿಯನ್ನು ನೋಡಿ ಕೆಟ್ಟ ವರದಿಯೊಂದನ್ನು ನೀಡಿದರು. ಆ ವರದಿಯಲ್ಲಿ ‘ಶಾಲೆಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು ಹೊಸ ಹೆಡ್ಮಾಸ್ಟರರು ಶಾಲೆಯನ್ನು ಅಭಿವೃದ್ಧಿಗೊಳಿಸುವ ನೆಪದಲ್ಲಿ ಸ್ಥಳೀಯರ ಧಾರ್ಮಿಕ ನಂಬಿಕೆಗಳನ್ನು ಅವಮಾನ ಮಾಡುವದರ ಮೂಲಕ ಶಾಲೆಯ ದುಸ್ಥಿತಿಗೆ ಕಾರಣವಾಗಿದ್ದಾರಲ್ಲದೆ ಇಡಿ ಹಳ್ಳಿಯಲ್ಲಿ ಅಶಾಂತಿ ನೆಲೆಸುವಂತೆ ಮಾಡಿದ್ದಾರೆ’ ಎಂದು ಹೇಳಲಾಗಿತ್ತು.
    ಮೂಲ ಇಂಗ್ಲೀಷ್: ಚೀನು ಅಚಿಬೆ
    ಕನ್ನಡಕ್ಕೆ: ಉದಯ್ ಇಟಗಿ

    ಈ ಕಥೆಯು 22-05-2011 ರ ಉದಯವಾಣಿಯಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಗಳು ಕೆಳಗಿವೆ.
    http://www.udayavani.com/news/70173L15-ಸತ-ತವರ-ಹ-ದ-.html
    http://epaper.udayavani.com/Display.aspx?Pg=H&Edn=MN&DispDate=5/22/2011 PDF Version


    ಈ ಕಥೆಯ ವಿಮರ್ಶೆ ಓದಲು ಇಲ್ಲಿ ಕ್ಲಿಕ್ಕಿಸಿ http://bisilahani.blogspot.com/2009/12/blog-post_24.html

    ಎಲ್ಲುಂಟು ಒಲವಿರದ ಜಾಗ?

  • ಶನಿವಾರ, ಮಾರ್ಚ್ 20, 2010
  • ಬಿಸಿಲ ಹನಿ
  • 2007 ರಲ್ಲಿ ಲಿಬಿಯಾದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಉಪನ್ಯಾಸಕನಾಗಿ ಆಯ್ಕೆಗೊಂಡು ಭಾರತ ಬಿಟ್ಟು ಸಾಗರದಾಚೆಯ ಸಾವಿರ ಸಾವಿರ ಮೈಲಿ ದೂರವಿರುವ ಲಿಬಿಯಾಗೆ ಬಂದಿದ್ದೆ. ಗೆಳೆಯರು, ಸಹೋದ್ಯೋಗಿಗಳು “ನಮ್ಮ ಸುಂದರ ದೇಶ ಬಿಟ್ಟು, ಹೋಗಿ ಹೋಗಿ ಆ ಆಫ್ರಿಕಾ ದೇಶಕ್ಕೆ ಹೋಗತೀರಲ್ರಿ? ಬುದ್ದಿಯಿಲ್ಲ ನಿಮಗೆ” ಎಂದು ನೆಗಾಡಿದ್ದರು. ದುಡ್ದಿಗೆ, ಬುದ್ಧಿಗೆ ಆಫ್ರಿಕಾ ದೇಶ, ಯೂರೋಪ್ ದೇಶ, ಅರಬ್ ದೇಶ ಅಂತೆಲ್ಲಾ ಇರುತ್ತದೆಯೆ? ಎಲ್ಲಿ ನನ್ನ ಬುದ್ಧಿ ಬೆಲೆಬಾಳುತ್ತದೋ ಅಲ್ಲಿಗೆ ಹೋಗುವವನು ನಾನು. ಬುದ್ಧಿಗೆ ಹಾಗೂ ಅದನ್ನು ಹಿಂಬಾಲಿಸಿಕೊಂಡು ಬರುವ ದುಡ್ದಿಗೆ ಜಾಗದ ಹಂಗಿಲ್ಲ. ಅಥವಾ ’ಕೆಲಸ ಮಾಡಿದರೆ ನಮ್ಮ ದೇಶದಲ್ಲಿಯೇ ಮಾಡಬೇಕು’ ಎನ್ನುವ ಭಯಂಕರ ಸ್ವಾಭಿಮಾನದ ಕಟ್ಟಿಗೆ ಬಿದ್ದು ಸಿಕ್ಕ ಅವಕಾಶವನ್ನು ಕಳೆದುಕೊಳ್ಳುವ ಕಟ್ಟಾ ದೇಶಾಭಿಮಾನಿಯಾಗಲಿ ಅಥವಾ ಸಿಗದೇ ಇರುವ ಅವಕಾಶವನ್ನು ದೇಶಾಭಿಮಾನದ ನೆಪವೊಡ್ಡಿ ಹೋಗಲಿಲ್ಲ ಎಂದು ಹೇಳುವ ಸೋಗಲಾಡಿ ಮನುಷ್ಯನೂ ನಾನಲ್ಲವಾದ್ದರಿಂದ ಅವರ ಮಾತಿಗೆ ನನ್ನ ನಿರ್ಲಕ್ಷ್ಯ ನಗೆಯೊಂದನ್ನು ಉತ್ತರವಾಗಿ ನೀಡುತ್ತಾ ವಿಮಾನ ಹತ್ತಿದ್ದೆ.

    ಹೋಗುವ ಮುನ್ನ ನೂರು ಜನ ನೂರು ಮಾತಾಡಿದ್ದರು. ನಾನು ಆಯ್ಕೆಯಾದ ಸಂತೋಷದ ವಿಷಯವನ್ನು ನನ್ನ ಸಹದ್ಯೋಗಿಗಳ ಹತ್ತಿರ ಹಂಚಿಕೊಂಡಾಗ ಬಹಳಷ್ಟು ಜನ encourage ಮಾಡಿದ್ದಕ್ಕಿಂತ discourage ಮಾಡಿದ್ದೇ ಹೆಚ್ಚು. “ಅಯ್ಯೋ ಆಫ್ರಿಕಾ ದೇಶಾನಾ? ಅಯ್ಯೋ ರಾಮಾ! ಮುಗಿದು ಹೋಯ್ತು ನಿಮ್ಮ ಕಥೆ! ಅದೊಂದು ಕೆಟ್ಟ ಖಂಡ! ಅಲ್ಲಿಗ್ಯಾಕ್ರಿ ಹೋಗ್ತೀರಾ?” ಎಂದು ನನ್ನ ಸಹದ್ಯೋಗಿಯೊಬ್ಬರು ಇಡೀ ಆಫ್ರಿಕಾ ಖಂಡವನ್ನೇ ಸುತ್ತಿ ಬಂದವರ ತರ ಮತ್ತು ಆ ಇಡಿ ಖಂಡವೇ ಕೆಟ್ಟದಾಗಿದೆ ಎನ್ನುವ ತರ ಅಧಿಕೃತವಾಗಿ ಘೋಷಿಸಿ ಬಿಟ್ಟರು. ಇನ್ನೊಬ್ಬರು “ಅಲ್ಲಿ ಯೆಲೋ ಫಿವರ್, ಏಡ್ಸ್ ತುಂಬಾ ಜಾಸ್ತೀರೀ. ಹುಷಾರು!” ಎಂದು ಎಚ್ಚರಿಸಿದ್ದರು. ಇನ್ನು ಕೆಲವರು “ಅಲ್ಲಿ ಕಳ್ಳತನ, ಕೊಲೆ ಎಲ್ಲಾ ತುಂಬಾ ಕಾಮನ್ ಅಂತೆ. ಯಾವುದಕ್ಕೂ ಹುಶರಾಗಿರಿ. ರಾತ್ರಿ ಹೊರಗೆ ಒಬ್ರೇ ಎಲ್ಲೂ ಓಡಾಡಬೇಡಿ” ಎಂದು ನನ್ನ ಬಗ್ಗೆ ಕಳಕಳಿ ವ್ಯಕ್ತಪಡಿಸುತ್ತಾ ಒಂದಷ್ಟು ಉಪದೇಶಿಸಿದ್ದರು. ಮತ್ತೆ ಕೆಲವರು “ಫಾರಿನ್ಗೆ ಹೋಗೋದಾದರೆ UK, USA ಗೆ ಮಾತ್ರ ಹೋಗಬೇಕು. ಬೇರೆ ದೇಶಗಳಿಗೆ ಹೋದ್ರೆ ಏನು ಸುಖ ಇದೆ?” ಅಂತ ತಮ್ಮ ವಾದ ಮಂಡಿಸಿದರು. ಹೀಗೆ ಒಬ್ಬೊಬ್ಬರು ಒಂದೊಂದಾಗಿ ಹೇಳುತ್ತಲೇ ಇದ್ದರು. ಅವರಲ್ಲಿ ನಿಜವಾಗಿ ನನ್ನ ಬಗ್ಗೆ ಕಾಳಜಿಯಿತ್ತೋ, ಅಥವಾ ಮತೇನಾದರು ಇತ್ತೋ ಗೊತ್ತಾಗಲಿಲ್ಲ. ಏನಾದರಾಗಲಿ, ಸಿಕ್ಕ ಅವಕಾಶವನ್ನು ಯಾರು ಕಳೆದುಕೊಳ್ಳುತ್ತಾರೆ? ಎಂದುಕೊಂಡು ನಾನು ಲಿಬಿಯಾಗೆ ಹೋಗಲು ಮಾನಸಿಕವಾಗಿ ತಯಾರಿ ನಡೆಸಿದೆ.


    ಇವರೆಲ್ಲರು ಹೀಗೆ ಹೇಳುವಾಗ ಒಂಚೂರು ಅಧೀರನಾಗದ ನಾನು ಹೋಗುವ ದಿನ ಹತ್ತಿರ ಬಂದಂತೆ ನನ್ನೊಳಗೆ ಸಣ್ಣದೊಂದು ಆತಂಕ ಶುರುವಾಯಿತು. ಕಾಣದ ದೇಶ, ಕಾಣದ ಜನ, ಕೇಳದ ಭಾಷೆ ಹೇಗೋ ಏನೋ? ಇವರೆಲ್ಲ ಹೇಳುವದು ನಿಜವಾಗಿ ಬಿಟ್ಟರೆ? ಅಮೆರಿಕಾ, ಲಂಡನ್, ಜರ್ಮನಿಯಾದರೆ ಹೇಗೋ ಬದುಕಿಬಿಡಬಹುದು. ಆದರೆ ಇಲ್ಲಿ? ಇಲ್ಲಿಯ ಜನ ಒರಟಾಗಿರುತ್ತಾರೋ? ಮೃದುವಾಗಿರುತ್ತಾರೋ? ಇದು ಆಫ್ರಿಕಾ ದೇಶವಾಗಿದ್ದರಿಂದ ವಿದ್ಯಾರ್ಥಿಗಳು ತುಂಬಾ ಡಲ್ ಇರುತ್ತಾರೆ ಎಂದು ಯಾರೋ ಹೇಳಿದ್ದರು. ಅದು ನಿಜವೆ? ಎನ್ನುವ ಪ್ರಶ್ನೆಗಳು ಕಾಡತೊಡಗಿದವು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಿ ಮೊಟ್ಟಮೊದಲಿಗೆ ಲಿಬಿಯಾ ದೇಶದ ಕುರಿತು ಇಂಟರ್ನೆಟ್ನಲ್ಲಿ ಒಂದಿಷ್ಟು ಮಾಹಿತಿ ಹೆಕ್ಕಿ ತೆಗೆದಿದ್ದೆ. ಬಂದ ಮಾಹಿತಿಯೆಲ್ಲ ಸಮಾಧಾನಕರವಾಗಿದ್ದರೂ ಮನಸ್ಸಿಗೇಕೋ ಸಮಾಧಾನವಿರಲಿಲ್ಲ. ಕಾಣದ ಊರಲ್ಲಿ ಏನಾದರು ಆಗಿಬಿಟ್ಟರೆ? ಎನ್ನುವ ಭಯ, ಆತಂಕ ಇದ್ದೇ ಇತ್ತು. ಈ ಭಯ, ಆತಂಕಗಳನ್ನು ಹೊತ್ತುಕೊಂಡೇ ಅಕ್ಟೊಬರ್ 27, 2007 ರಂದು ನನಗೆ ಪೋಸ್ಟಿಂಗ್ ಆದ ಸೆಭಾಗೆ ಬಂದಿಳಿದೆ. ಆದರೆ ಅಲ್ಲಿಂದ ನಮ್ಮೆಲ್ಲರನ್ನೂ ಸೆಭಾ ವಿಶ್ವವಿದ್ಯಾನಿಲಯಕ್ಕೆ affiliate ಆಗಿರುವ ದೂರದ ಬೇರೆ ಬೇರೆ ಕಾಲೇಜುಗಳಿಗೆ ಕಳಿಸಿದರು. ಆ ಪ್ರಕಾರ ನನಗೆ ಸಿಕ್ಕಿದ್ದು ಸೆಭಾದಿಂದ 650K.M ದೂರವಿರುವ ಘಾಟ್ Arts & Science ಕಾಲೇಜು.


    ಮಾರನೆ ದಿವಸ ಟ್ಯಾಕ್ಸಿ ಡ್ರೈವರ್ ನಾನುಳಿದುಕೊಂಡಿರುವ ಹೋಟೆಲ್ಗೆ ನನ್ನನ್ನು ಪಿಕ್ ಮಾಡಲು ಬಂದ. ಬೆಳಿಗೆ 11.30ಗೆ ಸೆಭಾ ಬಿಟ್ಟು ಘಾಟಿನತ್ತ ಹೊರಟೆ. ದಾರಿಯುದ್ದಕ್ಕೂ ಜಗತ್ತಿನ ಅತಿದೊಡ್ದ ಮರಭೂಮಿ ಸಹರಾ ಅಡ್ದಲಾಗಿ ಮಲಗಿತ್ತು. ಅಲ್ಲಲ್ಲಿ ಮರಳು ಗುಡ್ಡಗಳು. ಅದರ ನಡುವೆ ಕಣ್ಣಿಗೆ ಒಂದಷ್ಟು ಖುಶಿ ಕೊಡುವ ಹಸಿರು ಗಿಡಗಂಟೆಗಳು. ನನ್ನ ಬದುಕಿನ ಹಸಿರನ್ನು ಈ ಮರಭೂಮಿಯಲ್ಲಿ ಹುಡುಕಿ ಬಂದಿದ್ದೆ. ಘಾಟ್ ತಲುಪಿದಾಗ ಸಂಜೆ ಆರು ಗಂಟೆ. ದಾರಿಯುದ್ದಕ್ಕೂ ಇದೇನಪ್ಪ ಎಲ್ಲಿ ನೋಡಿದರಲ್ಲಿ ಮರಳುಗಾಡು. ಇಂಥ ಜಾಗದಲ್ಲಿ ನಾನೊಬ್ಬನೇ ಇರಬೇಕೆ? ಎಂದು ಕೇಳಿಕೊಳ್ಳುತ್ತ ಬಂದಿದ್ದೆ. ಘಾಟ್ನ್ನು ಪ್ರವೇಶಿಸುತ್ತಿದ್ದಂತೆ ಡ್ರೈವರ್ ’ಇದು ಘಾಟ್’ ಎಂದು ಅರೆಬಿಕ್ ಭಾಷೆಯಲ್ಲಿ ಹೇಳಿದ. ನಂತರ ಅಲ್ಲಿ ಇಲ್ಲಿ ಹೋಗಿ ನಾನು ಸೇರಬೇಕಾದ ಜಾಗಕ್ಕೆ ಸೇರಿಸಿದ. ಅಲ್ಲೊಂದಿಷ್ಟು ಇಂಡಿಯನ್ ಮುಖಗಳನ್ನು ನೋಡಿ ಎದೆಗೆ ಎಷ್ಟೋ ಸಮಾಧಾನವಾಗಿತ್ತು.


    ಅಕಾಕುಸ್ ಪರ್ವತ




    ಸಂಬಳ, ಕೆಲಸ ತೃಪ್ತಿಕೊಟ್ಟರೂ ಏಕೋ ಈ ಜಾಗ ನನಗೆ ಒಗ್ಗಿ ಬರಲಿಲ್ಲ. ಇತ್ತ ಹಳ್ಳಿಯೂ ಅಲ್ಲದ ಅತ್ತ ಪಟ್ಟಣವೂ ಅಲ್ಲದ ಈ ಜಾಗ ನನಗೆ ಬೇಸರವನ್ನು ತರಿಸುತ್ತಿತ್ತು. ನಾನು ಹಳ್ಳಿಯಿಂದ ಬಂದಿದ್ದರೂ ಈಗಾಗಲೇ 8 ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದಿದ್ದರಿಂದ ಹಳ್ಳಿಗೆ ಹೊಂದಿಕೊಳ್ಳುವ ಸ್ವಭಾವ ಹೊರಟುಹೋಗಿತ್ತು. ಬೆಂಗಳೂರಿನಂಥ ದೈತ್ಯ ನಗರದ ಮುಂದೆ ಈ ಜಾಗದ ಕೊರತೆಗಳು ಎದ್ದು ಕಾಣಿಸತೊಡಗಿದವು. ಎತ್ತಣ ಬೆಂಗಳೂರು? ಎತ್ತಣ ಘಾಟ್? ನನ್ನ ಮಾಜಿ ಸಹೋದ್ಯೋಗಿಗಳು ನಾನು ಬರುವ ಮುನ್ನ ಹೇಳಿದ ಒಂದೊಂದು ಮಾತುಗಳು ಸರಿ ಎನಿಸುತ್ತಿತ್ತು. ಯಾಕಾದ್ರು ಬಂದೆನೋ? ಇಲ್ಲಿ ಒಂದು ಸರಿಯಾದ ಸಿನೆಮಾ ಥೇಟರ್ ಇಲ್ಲ. ಸಾಯಂಕಾಲ ಸುತ್ತಾಡಿಕೊಂಡು ಬರಲು ಒಂದು ಪಾಶ್ ಏರಿಯಾ ಇಲ್ಲ. ಒಂದು ಪಾರ್ಕ್ ಇಲ್ಲ. ತಿನ್ನಲು ನಮಗೆ ಒಗ್ಗುವ ತಿಂಡಿ ತಿನಿಸುಗಳಿಲ್ಲ. ಇನ್ನು ಜನ ಒರಟೊರಟು. ದಿನಾಲೂ ಸ್ನಾನ ಮಾಡುವದಿಲ್ಲ. ಅದಕ್ಕೆ ಅವರು ಯಾವಾಗಲೂ ಸುಗಂಧ ದ್ರವ್ಯಗಳನ್ನು ಬಳಸುವದು ಎಂದೆಲ್ಲಾ ತಿಳಿದು ಅಸಹ್ಯವಾಯಿತು. ಇರುವ ಕೆಲವೇ ಕೆಲವು ಅಂಗಡಿ ಮುಗ್ಗಟ್ಟುಗಳಿಗೆ ಹೋದರೆ ಅಲ್ಲಿ ಬರಿ ಅರೇಬಿಕ್ ಭಾಷೆಯಲ್ಲಿ ಮಾತನಾಡುತ್ತಿದ್ದುದು, ನಾವು ಅವರನ್ನು ಇಂಗ್ಲೀಷನಲ್ಲಿ ಅರ್ಥ ಮಾಡಿಸಲು ಹೆಣಗಾಡುತ್ತಿದ್ದುದು ಎಲ್ಲವೂ ಬೇಸರವನ್ನು ತರಿಸುತ್ತಿತ್ತು. ಹೋಗಲಿ ನಿಸರ್ಗದಲ್ಲಿ ಒಂದಿಷ್ಟು ಹಸಿರನ್ನಾದರು ನೋಡಿ ಆನಂದ ಪಡೆಯೋಣವೆಂದರೆ ಅದೂ ಇಲ್ಲ. ಎತ್ತ ನೋಡಿದರತ್ತ ಬರಿ ನಿಸ್ತೇಜ ಮರಳು ಗುಡ್ದಗಳೇ! ನಾನು ಹೋದಾಗ ಆಗಷ್ಟೆ ಚಳಿಗಾಲ ಶುರುವಾದ್ದರಿಂದ ಇಲ್ಲಿಯ ಚಳಿ ಅಸಹನೀಯವಾಗಿತ್ತು. ಮನೆಯಲ್ಲಿ ಹೀಟರ್ಗಡಳನ್ನು ಆನ್ ಮಾಡಿದ್ದರೂ, ಸ್ವೆಟರ್ ಧರಿಸಿದ್ದರೂ ಒಂದೊಂದು ಸಾರಿ ಮನೆಯೊಳಗಿದ್ದರೂ ಸಹ ಚಳಿಗೆ ನಡುಗುತ್ತಿದ್ದೆವು. ಕ್ರಮೇಣ ಇಲ್ಲಿಯ ವಾತಾವರಣ ನನ್ನನ್ನು ಒಂದು ರೀತಿಯ ಡಿಪ್ರೆಶನ್ಗೆರ ತಳ್ಳಿತು. ಯಾಕಾದರು ಬಂದೆನೋ? ಎನಿಸುತ್ತಿತ್ತು. ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದರೂ ಏಕೋ ನಮ್ಮ ಹಳ್ಳಿ ಇಷ್ಟವಾದಂತೆ ಇಲ್ಲಿಗೆ ಹೊಂದಿಕೊಳ್ಳಲು ಹೆಣಗಾಡತೊಡಗಿದೆ. ಈ ಮಧ್ಯ ದೂರದ ಇಂಡಿಯಾದಲ್ಲಿರುವ ಹೆಂಡತಿ, ಮಗಳು, ಬಂಧುಗಳು, ಸ್ನೇಹಿತರ ನೆನಪು ಕಾಡತೊಡಗಿತು.
    ಎಲ್ಲ ಬೇಸರಗಳಿಗೂ, ತಿರಸ್ಕಾರಗಳಿಗೆ ಒಂದು ಅಂತ್ಯವಿದ್ದಂತೆ ನನ್ನ ಬೇಸರಕ್ಕೂ, ತಿರಸ್ಕಾರಗಳಿಗೂ ಒಂದು ಅಂತ್ಯವಿತ್ತು. ದಿನ ಕಳೆದಂತೆ ಈ ಎಲ್ಲ ಕೊರತೆಗಳೊಂದಿಗೆ ಬದುಕುವದು ಅಭ್ಯಾಸವಾಯಿತು. ಇಂಥ ಕಡೆ ಬಂದಾಗ ವಾತಾವರಣ, ವ್ಯವಸ್ಥೆ ನಮಗೋಸ್ಕರ ಬದಲಾಗುವದಿಲ್ಲ ನಾವು ಅದಕ್ಕೆ ತಕ್ಕಂತೆ ಬದಲಾಗಬೇಕು ಎನ್ನುವ ಸತ್ಯದ ಅರಿವಾಯಿತು. ಹಾಗಾಗಿ ಮೊದಲು ನನ್ನನ್ನು ನಾನು ಬದಲಾಯಿಸಿಕೊಂಡೆ. ಬದಲಾಯಿಸಿಕೊಂಡ ಮೇಲೆ ಸ್ವಲ್ಪ ಕಾಲದಲ್ಲೇ ಅದು ಕೂಡ ಅರಾಮವಿನಿಸತೊಡಗಿತು. ಮೊದಲು ಎಲ್ಲವನ್ನೂ ಬೆಂಗಳೂರಿಗೆ ಹೋಲಿಸಿ ನೋಡುವದನ್ನು ನಿಲ್ಲಿಸಿದೆ. ಈ ಜಾಗವನ್ನು ಅದಿರುವಂತೆ ಸ್ವೀಕರಿಸತೊಡಗಿದೆ. ತಟ್ಟನೆ ಇಲ್ಲಿ ಪ್ರತಿ ಹಳ್ಳಿಗೂ ಒಂದು ಬ್ಯಾಂಕ್, ಒಂದು ಹಾಸ್ಪಿಟೆಲ್, ಒಂದು ಪೋಸ್ಟ್ ಆಪೀಸ್ ಕಲ್ಪಿಸಿದ್ದನ್ನು ನೋಡಿ ಖುಶಿಯಾಯಿತು. ಹಾಗೆ ನೋಡಿದರೆ ಭಾರತದಲ್ಲಿ ಪ್ರತಿಯೊಂದು ಹಳ್ಳಿಗೂ ಈ ಸೌಲಭ್ಯಗಳನ್ನು ಇನ್ನೂ ಕಲ್ಪಿಸಲು ಸಾಧ್ಯವಾಗಿಲ್ಲ. ಇಂಥ ಮರಭೂಮಿಯಲ್ಲೂ ಕುಡಿಯುವ ನೀರು ಅದೆಷ್ಟು ಸಿಹಿಯಾಗಿರುತ್ತದೆ ಮತ್ತು ಅದ್ಹೇಗೆ ಇಪ್ಪತ್ನಾಲ್ಕು ಗಂಟೆ ಸಿಗುತ್ತದೆ ಎನ್ನುವದೇ ನನಗಿನ್ನೂ ಅಚ್ಚರಿಯ ಸಂಗತಿ. ಮೇಲಾಗಿ ಇಲ್ಲಿ ಬದುಕು ದುಬಾರಿಯಿರಲಿಲ್ಲ. ಹೀಗಾಗಿ ನಾವು ಗಳಿಸಿದ್ದರಲ್ಲಿ ಬಹಳಷ್ಟನ್ನು ಉಳಿಸಬಹುದಿತ್ತು.


    ಕ್ರಮೇಣ ನನ್ನೊಟ್ಟಿಗೆ ಕೆಲಸ ಮಾಡುವ ಇಜಿಪ್ಸಿಯನ್, ಇರಾಕಿ ಹಾಗೂ ಸುಡಾನಿ ಸಹೋದ್ಯೋಗಿಗಳೊಂದಿಗೆ ಬೆರೆಯುವದನ್ನು ಕಲಿತೆ. ಅವರ ಮಾತುಕತೆ, ಅವರ ಒಡನಾಟ, ಅವರ ಸ್ನೇಹ ಹಿತವೆನಿಸತೊಡಗಿತು. ಅವರೆಲ್ಲ ನನ್ನನ್ನು ನನ್ನ ಕವಚದೊಳಗಿಂದ ಹೊರಗೆಳೆದು ಒಂದಿಷ್ಟು ಸಾಂತ್ವನ ನೀಡಿದರು. ಇಲ್ಲಿಯ ವಿದ್ಯಾರ್ಥಿಗಳೆಲ್ಲ ದಡ್ದರೆಂದು ಪೂರ್ವಗ್ರಹಪೀಡಿತನಾಗಿ ಬಂದ ನನಗೆ ಇಲ್ಲೊಂದಿಷ್ಟು ಅತಿ ಜಾಣ ವಿದ್ಯಾರ್ಥಿಗಳು ಕಾಣಿಸಿದ್ದರು. ಅವರಿಗೆಲ್ಲ ಅವರ ಓದಿನ ವಿಷಯದಲ್ಲಿ ನನ್ನ ಸಲಹೆ, ಸಹಕಾರಗಳನ್ನು ಕೊಡುತ್ತಾ ಸಂತೋಷಪಡುವದನ್ನು ಕಲಿತೆ. ಇಲ್ಲಿ ಬೆಂಗಳೂರಿನ ಯಾವುದೇ ಟ್ರಾಫಿಕ್ ಇಲ್ಲವಾದ್ದರಿಂದ ಇಲ್ಲಿಯ ಸ್ವಚ್ಛ ಗಾಳಿ ಮನಸ್ಸಿಗೆ, ಮೈಯಿಗೆ ಹಿತವೆನಿಸತೊಡಗಿತು. ಮೆಲ್ಲನೆ ಹೊರಗಿನ ವ್ಯವಹಾರಕ್ಕೆ ಬೇಕಾಗುವ ಒಂದಿಷ್ಟು ಅರೇಬಿಕ್ ಭಾಷೆಯನ್ನು ಕಲಿತೆ. ಇದೀಗ ಅಂಗಡಿಯವರೊಂದಿಗೆ, ತರಕಾರಿ ಮಾರ್ಕೆಟಿನಲ್ಲಿ ಒಂದಿಷ್ಟು ಚೌಕಾಶಿ ಮಾಡುವದನ್ನು ಕಲಿತೆ. ಇಲ್ಲಿ ಬೇಸಿಗೆಯಲ್ಲಿ ಕತ್ತಲಾಗುವದೇ ರಾತ್ರಿ ಒಂಬತ್ತರ ಮೇಲೆ. ಇದು ಮೊದಮೊದಲು ನನಗೆ ವಿಚಿತ್ರವಾಗಿ ಕಂಡಿತ್ತು. ಆದರೆ ಅದೇ ಕತ್ತಲ ರಾತ್ರಿಯನ್ನು ಕಾಯುತ್ತಾ ಕುಳಿತುಕೊಳ್ಳತೊಡಗಿದೆ. ಏಕೆಂದರೆ ನಿಧಾನವಾಗಿ ಕತ್ತಲಾಗುತ್ತಿದ್ದಂತೆ ಆಗಸದಲ್ಲಿ ಸೂರ್ಯ ಒಂದು ಬಿಳಿಚೆಂಡಿನತೆ ಹಾಲೋಜಿನ್ ಬಲ್ಬ್ ಎಸೆದಂತೆ ಕಾಣುತ್ತಿದ್ದರಿಂದ ಅಲ್ಲಿ ಉಂಟಾಗುವ ಅಪೂರ್ವ ದೃಶ್ಯವನ್ನು ನೋಡಿ ಮನಸ್ಸು ಖುಶಿಯಾಗುತ್ತಿತ್ತು. ಬೆಂಗಳೂರಿನಲ್ಲಿ ಕಾಣಸಿಗದ ಬಣ್ಣ ಬಣ್ಣದ ನಕ್ಷತ್ರಗಳು ಇಲ್ಲಿ ಧಾರಾಳವಾಗಿ ಸಿಗುತ್ತಿದ್ದವು. ಹುಣ್ಣಿಮೆಯ ದಿನ ಚಂದ್ರ ’ಅಕಾಕುಸ್’ ಪರ್ವತದ ಹಿಂದೆ ಕಣ್ಣುಮುಚ್ಚಾಲೆಯಾಡುವದು ಮನಸ್ಸಿನಲ್ಲಿ ಸುನಿತ ಬಾವನೆಗಳನ್ನು ಕೆರಳಿಸತೊಡಗಿತು. ಯಾವ ಮರಭೂಮಿಯನ್ನು ಬೇಸರದಿಂದ ನೋಡುತ್ತಿದ್ದೆನೋ ಅದೇ ಮರಭೂಮಿ ತನ್ನ ವಿವಿಧ ಚಿತ್ತಾರದ ಆಕೃತಿಗಳೊಂದಿಗೆ ನಿಂತಿರುವದು ಹಾಗೂ ಅದರ ಮಧ್ಯ ಅಲ್ಲಲ್ಲಿ ಇರುವ ಹಸಿರು ಗಿಡಗಳು ಕಣ್ಣಿಗೆ, ಮನಸ್ಸಿಗೆ ಮುದನೀಡತೊಡಗಿದವು. ಆ ಮರಳು ಗುಡ್ಡಗಳ ಹಿಂದೆ ಸೂರ್ಯ ತನ್ನ ಕೆಂಬಣ್ಣ ಚೆಲ್ಲುತ್ತಾ ಅಸ್ತಮಿಸುತ್ತಿರುವದು ಭಿನ್ನ ಅನುಭವವನ್ನು ಕೊಡುತ್ತಿತ್ತು. ಆ ಮೂಲಕ ಆ ಗುಡ್ದಗಳಿಗೆ ಜೀವ ಬಂದಿತ್ತು.


    ಅಕಾಕುಸ್ ಪರ್ವತದ ಹಿಂದೆ ಒಂದು ಮುಂಜಾನೆಯ ಸೂರ್ಯ

    ಇಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಧಾರಾಳವಾದ ಸಮಯ ಸಿಗುತ್ತಿತ್ತು. ಈ ಸಮಯವನ್ನು ಬಳಸಿಕೊಂಡು ಅವಾಗವಾಗ ಬರೆಯುತ್ತಿದ್ದ ನಾನು ನನ್ನ ಬರವಣಿಗೆಯನ್ನು ಯಾಕೆ ಮುಂದುವರಿಸಬಾರದು ಎಂದುಕೊಂಡು ಬ್ಲಾಗ್ ತೆರೆದೆ. ಆ ಮೂಲಕ ಮೊದಲಿಗಿಂತ ಸ್ವಲ್ಪ ಹೆಚ್ಚೇ ಬರೆದೆ. ಬೆಂಗಳೂರಿನಲ್ಲಿರುವಾಗ ಈ ಹಾಳಾದ್ದು ಬೆಂಗಳೂರು ಬಿಟ್ಟು ಯಾವುದಾದರೊಂದು ಹಳ್ಳಿಗೆ ಹೋಗಿ ಬದುಕಿಬಿಡಬೇಕು ಎಂದುಕೊಳ್ಳುತ್ತಿದ್ದೆ. ಈಗ ಇದು ಒಂದು ಹಳ್ಳಿಯಲ್ಲವೆ? ಇಲ್ಲಿ ಉಳಿಯುವ ಅದೃಷ್ಟ ತಾನೇ ತಾನಾಗಿ ಬಂದಿರುವದರಿಂದ ಯಾಕೆ ಉಪಯೋಗಿಸಿಕೊಳ್ಳಬಾರದು ಎನಿಸತೊಡಗಿತು. ನಾನು ಕೂಡ ನಿಧಾನಕ್ಕೆ ಬೇರಿಳಿಸಿ ಅರಳುವ ಪರಿ ಕಲಿತೆ. ಒಂದಿಷ್ಟು ಗೆಲುವಾದೆ. ಬದುಕು ಸಹ್ಯವೆನಿಸತೊಡಗಿತು. ಜನ ಇಷ್ಟವಾಗತೊಡಗಿದರು.

    ಯಾವುದೇ ಮನುಷ್ಯ ಎಲ್ಲಿ ಬೇಕಾದರು ಬದುಕಬಲ್ಲ. ಆದರೆ ಆತನಿಗೆ ಅಲ್ಲಿ ಬದುಕುವ ಕಲೆ ತಿಳಿದಿರಬೇಕಷ್ಟೆ. ಎತ್ತೆಂದರತ್ತ ಎಸೆದಲ್ಲಿ ನಿಧಾನವಾಗಿ ಬೇರಿಳಿಸಿ ಅರಳುವ ಪರಿ ಗೊತ್ತಿರಬೇಕಷ್ಟೆ. ಆಗ ಅವನು ಇಷ್ಟಪಡದೆ ಇರುವ ಜಾಗ ಯಾವುದಿರುತ್ತದೆ ಹೇಳಿ?
    -ಉದಯ್ ಇಟಗಿ

    ಮರ ಕತ್ತರಿಸುವದು

  • ಸೋಮವಾರ, ಮಾರ್ಚ್ 15, 2010
  • ಬಿಸಿಲ ಹನಿ

  • ಸ್ನೇಹಿತರೆ,
    ಭಾರತೀಯ ಇಂಗ್ಲೀಷ್ ಕವಿ ಗೀವ್ ಪಟೇಲ್ ಅಂಥಾ ಹೇಳಿಕೊಳ್ಳುವಂತ ಕವಿಯಲ್ಲವಾದರೂ ಅವನ ಈ ಕವಿತೆ ಬಹು ಚರ್ಚಿತ ಕವನಗಳಲ್ಲೊಂದು. ಏಕೆಂದರೆ ಇಲ್ಲಿ ಮರ ಕತ್ತರಿಸುವದು ಬರೀ ಮರವನ್ನಷ್ಟೇ ಕತ್ತರಿಸುವದಲ್ಲದೆ ಬೇರೆ ಬೇರೆ ರೂಪಕಗಳೊಂದಿಗೆ ವ್ಯಕ್ತವಾಗುತ್ತದೆ, ನಾನಾರ್ಥಗಳನ್ನು ಹೊರಹೊಮ್ಮಿಸುತ್ತದೆ. ಅದು ಮನುಷ್ಯನ ಕಾಮ ಆಗಿರಬಹುದು, ಆತನ ಸೊಕ್ಕು ಆಗಿರಬಹುದು, ಅಹಂಕಾರ ಆಗಿರಬಹುದು ಅಥವಾ ನಮ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾದ ಭೃಷ್ಟಾಚಾರವಾಗಿರಬಹುದು. ಇವಲ್ಲದೆ ಇನ್ನೂ ಬೇರೇನೋ ಆಗಿರಬಹುದು. ಅದನ್ನು ಓದುಗರು ಕಂಡುಹಿಡಿಯಬಹುದು. ನಾನು ಮೊದಲು ಇದನ್ನು ಅನುವಾದ ಮಾಡಲು ಹೋದೆ. ಸಾಧ್ಯವಾಗದೆ ಹೋದಾಗ ಭಾವಾನುವಾದ ಮಾಡಿದೆ. ಇದೀಗ ನಿಮ್ಮ ಓದಿಗಾಗಿ ಇಲ್ಲಿ ಕೊಡುತ್ತಿದ್ದೇನೆ. ಓದಿ ಅಭಿಪ್ರಾಯಿಸಿ.

    ಮರವನ್ನು ಕತ್ತರಿಸುವದೆಂದರೆ ಚಾಕುವಿನಿಂದ
    ಕಚ ಕಚನೆ ಕತ್ತರಿಸಿ ಒಗೆದಷ್ಟು ಸುಲಭವಲ್ಲ,
    ಅದು ತುಂಬಾ ಸಮಯವನ್ನು ತೆಗೆದುಕೊಳ್ಳುವ ಕೆಲಸ.
    ನಿಧಾನವಾಗಿ ಮೊಳಕೆಯೊಡೆದು
    ಭೂಮಿಯ ಆಳಕ್ಕೆ ಬೇರಿಳಿಸಿ
    ಅದರ ಸತ್ವವನ್ನೆಲ್ಲ ಹೀರಿ
    ಎಷ್ಟೋ ವರುಷಗಳ ಕಾಲ ಬಿಸಿಲು, ಮಳೆ, ಗಾಳಿಯನ್ನೆಲ್ಲ ಹೀರಿ
    ತನ್ನ ದಪ್ಪ ಚರ್ಮದಿಂದ ಎಲೆಗಳನ್ನೂ ಚಿಗುರಿ
    ರೆಂಬೆ ಕೊಂಬೆಗಳೊಂದಿಗೆ
    ಅಷ್ಟೆತ್ತರಕ್ಕೆ ಬೆಳೆದು ನಿಲ್ಲುತ್ತದೆ.
    ಹಾಗಾಗಿ ಅದನ್ನು ಕಡಿಯುವದು ಅಷ್ಟು ಸುಲಭವಲ್ಲ.
    ಮರವನ್ನು ಕಡಿಯುವದಾದರೆ
    ಬರೀ ಕಡಿದರೆ, ಕೊಚ್ಚಿದರೆ ಮಾತ್ರ ಸಾಲದು
    ಹಾಗೆ ನೋಡಿದರೆ ಅದನ್ನು ಕತ್ತರಿಸಲು
    ಯಾವ ಶ್ರಮವೂ ಸಾಕಾಗದು.
    ಕತ್ತರಿಸಿದ ಗಾಯ ಮಾಯುತ್ತದೆ
    ನಿಧಾನವಾಗಿ ಅದೇ ಜಾಗದಿಂದ
    ಮತ್ತೆ ಮರ ಚಿಗುರೊಡೆಯುತ್ತದೆ
    ರೆಂಬೆ, ಕೊಂಬೆಗಳೂ ಉದ್ದಕ್ಕೂ ಚಾಚಿಕೊಳ್ಳುತ್ತವೆ
    ನೋಡನೋಡುತ್ತಿದ್ದಂತೆ ಮೊದಲಿನಷ್ಟೇ
    ಹೆಮ್ಮರವಾಗಿ ಬೆಳೆದು ನಿಲ್ಲುತ್ತದೆ.

    ಹಾಗೆ ಒಂದು ವೇಳೆ ಮರವನ್ನು ಕತ್ತರಿಸಲೇಬೇಕೆಂದರೆ
    ಅದಕ್ಕೆ ಹಗ್ಗ ಸುತ್ತಿ ಗಟ್ಟಿಯಾಗಿ ಬಿಗಿದು
    ಭೂಗರ್ಭದೊಳಗಿಂದ ಪೂರ್ತಿಯಾಗಿ
    ಬೇರು ಸಮೇತ ಕಿತ್ತೆಸೆಯಬೇಕು.
    ಆಗ ಎಷ್ಟೋ ವರುಷಗಳಿಂದ
    ಭೂಮಿಯೊಳಡಗಿದ್ದ ಅದರ ಸತ್ವವ್ವೆಲ್ಲಾ ಉಡುಗಿ ಹೋಗಿ
    ನಿತ್ರಾಣವಾಗುತ್ತಾ ಬರುತ್ತದೆ.
    ಅಷ್ಟಕ್ಕೆ ನಿಮ್ಮ ಕೆಲಸ ನಿಲ್ಲಿಸಿದರೆ ಸಾಲದು
    ಅದರ ರೆಂಬೆಕೊಂಬೆಗಳನ್ನು ಒಂಚೂರು ಬಿಡದಂತೆ
    ಕಡಿಯಬೇಕು, ಕೊಚ್ಚಬೇಕು
    ಉರಿಬಿಸಿಲಲ್ಲಿ ಅವನ್ನೆಲ್ಲ ಒಣಗಿಸಬೇಕು
    ಸುಟ್ಟು ಕರಕಲಾಗಿಸಬೇಕು
    ತಿರುತಿರುಗಿ ಸುಡಬೇಕು
    ಸುಟ್ಟು ಬೂದಿ ಮಾಡಬೇಕು
    ಅಂದಾಗಲೇ ಮರವನ್ನು ಕತ್ತರಿಸದಂತೆ!

    ಇಂಗ್ಲೀಷ್ ಮೂಲ: ಗೀವ್ ಪಟೇಲ್
    ಭಾವಾನುವಾದ: ಉದಯ್ ಇಟಗಿ

    ತಸ್ಲೀಮಾರ ಮೂರು ಅನುವಾದಿತ ಕವನಗಳು

  • ಗುರುವಾರ, ಮಾರ್ಚ್ 04, 2010
  • ಬಿಸಿಲ ಹನಿ
  • ಆತ್ಮೀಯರೆ,
    ನೀವು ನಂಬಲಿಕ್ಕಿಲ್ಲ. ಅತ್ತ ಕಳೆದ ಭಾನುವಾರ ತಸ್ಲೀಮಾ ಅವರ (ಪ್ರಚೋದನಾಕಾರಿ) ಲೇಖನವೊಂದು ಕನ್ನಡ ಪತ್ರಿಕೆಯೊಂದರಲ್ಲಿ ಪ್ರಕಟವಾಗಿ ಕರ್ನಾಟಕವು ಕೋಮು ಗಲಭೆಯಿಂದ ಹೊತ್ತಿ ಉರಿಯುತ್ತಿದ್ದರೆ, ಇತ್ತ ನಾನು ಇದ್ಯಾವುದರ ಪರಿವೇ ಇಲ್ಲದೆ ತಣ್ಣಗೆ ಕುಳಿತು ಕಾಕತಾಳೀಯವೆಂಬಂತೆ ಅವರ ಕವನಗಳನ್ನು ಬೆನ್ನಟ್ಟಿಹೋಗಿದ್ದೆ. ಅದರಲ್ಲಿ ಒಂದನ್ನು ಆಯ್ದು ಅನುವಾದಿಸಿ ನನ್ನ ಬ್ಲಾಗಿನಲ್ಲೂ ಹಾಕಿದ್ದೆ. ನನ್ನ ದಿನನಿತ್ಯದ ಕೆಲಸಗಳನ್ನು ಮುಗಿಸಿ ಎಂದಿನಂತೆ ಸಂಜೆ ಕನ್ನಡ ಟೀವಿ ಹಾಕಿದಾಗಲೆ ನನಗೆ ಈ ವಿಷಯ ಗೊತ್ತಾಗಿದ್ದು! ಆದ ಘಟನೆಗೆ ವಿಷಾದ ವ್ಯಕ್ತಪಡಿಸುತ್ತಾ ನನ್ನ ಅನುವಾದದ ಹಿಂದೆ ಯಾರನ್ನೂ ನೋಯಿಸುವ ಉದ್ದೇಶವಾಗಲಿ, ಅಥವಾ ಇನ್ಯಾವುದೇ ದುರುದ್ದೇಶವಾಗಲಿ ಇಲ್ಲವೆಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ.

    ತಸ್ಲೀಮಾರ ಕವನಗಳೇ ಹಾಗೆ! ಗುಂಡೇಟಿನಿಂದ ಹೊಡೆದ ಹಾಗಿರುತ್ತವೆ! ಅಬ್ಬರಿಸುತ್ತವೆ, ಸ್ತ್ರೀವಾದದ ಪರಕಾಷ್ಠೆಯನ್ನು ಮುಟ್ಟುತ್ತವೆ. ಆದರೂ ಅವರ ಕವನಗಳಲ್ಲಿನ ನೋವು, ವಿಷಾದ, ವ್ಯಂಗ್ಯ, ನೇರಾನೇರ ನುಡಿ ಎಲ್ಲವೂ ಕ್ಷಣಾರ್ಧದಲ್ಲಿ ನಮ್ಮನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡುಬಿಡುತ್ತವೆ. ತಸ್ಲೀಮಾಳನ್ನು ಯಾವುದೇ ಪೂರ್ವಗ್ರಹಗಳಿಲ್ಲದೆ ತಸ್ಲೀಮಾಳಂತೆ ಓದಿದರೆ ಮಾತ್ರ ನಮಗೆ ಆಪ್ತಳಾಗುತ್ತಾಳೆ, ಹತ್ತಿರವಾಗುತ್ತಾಳೆ. ಹಾಗೆಂದೇ ಅವಳ ಕವನಗಳನ್ನು ಅನುವಾದಿಸಿದ ಮಾತ್ರಕ್ಕೆ ನಾನು ಅವಳನ್ನು ಬೆಂಬಲಿಸುತ್ತಿದ್ದೇನೆಂದು ಅರ್ಥವಲ್ಲ. ನನಗಿಷ್ಟವಾದ ಅವಳ ಮೂರು ಕವನಗಳು ನಿಮಗೂ ಇಷ್ಟವಾಗಬಹುದೆಂದುಕೊಂಡು ಇಲ್ಲಿ ಕೊಡುತ್ತಿದ್ದೇನೆ. ಓದಿ ಆನಂದಿಸಿ.

    ಆಕ್ರಮಣ

    ಈ ಜನರು ಎಷ್ಟು ವಿಚಿತ್ರವೆಂದರೆ
    ನೀನು ಕುಳಿತುಕೊಂಡರೆ “ಬೇಡ, ಕುಳಿತುಕೊಳ್ಳಬೇಡ” ಎನ್ನುತ್ತಾರೆ
    ನಿಂತರೆ ಅದಕ್ಕೂ ಒಂದು ಹೇಳುತ್ತಾರೆ “ನಿಂತಿದ್ದೇಕೆ? ಓಡಾಡುವದಕ್ಕಾಗುವದಿಲ್ಲವೆ?”
    ಓಡಾಡಿದರೆ “ಯಾವಾಗಲೂ ಓಡಾಡಲು ನಾಚಿಕೆಯಾಗುವದಿಲ್ಲವೆ? ಕುಳಿತುಕೋ” ಎನ್ನುತ್ತಾರೆ

    ತುಂಬಾ ಹೊತ್ತು ಮಲಗಿದರೆ ಅವರು ಹೇಳುತ್ತಾರೆ ’ಸದಾ ಏನು ಮಲಗಿರುತ್ತಿ, ಎದ್ದೇಳು”
    ನೀನು ಮಲಗದೇ ಹೋದರೆ ಅದಕ್ಕೂ ಒಂದು ಹೇಳುತ್ತಾರೆ “ವಿಶ್ರಾಂತಿಯೇ ಇಲ್ಲ, ಮಲಗು”


    ಹೀಗೆ ನನ್ನ ದಿನಗಳನ್ನು ಬರಿ ಕುಳಿತುಕೊಳ್ಳುವದು ಮತ್ತು ಎದ್ದುನಿಲ್ಲುವದರಲ್ಲಿಯೇ ಕಳೆಯುತ್ತಿದ್ದೇನೆ
    ನಾನು ಈಗಿಂದೀಗಲೇ ಸಾಯಬೇಕೆಂದರೆ ಅವರು ಹೇಳುತ್ತಾರೆ
    “’ಏಕೆ ಸಾಯುತ್ತಿ? ನೀನಿನ್ನೂ ಬದುಕಿ ಬಾಳಬೇಕಾದವಳು. ಬದುಕಿಬಿಡು”
    ನಾನು ಬದುಕುವದನ್ನು ನೋಡಿ ಮತ್ತೆ ಅವರೇ ಹೇಳುತ್ತಾರೆ
    ”ನಾಚಿಕೆಯಾಗುವದಿಲ್ಲವೆ ನಿನಗೆ? ಇನ್ನೂ ಬದುಕಿದ್ದೀಯಲ್ಲ? ಸತ್ತುಬಿಡು”

    ಬಂಗಾಳಿ ಮೂಲ: ತಸ್ಲೀಮಾ ನಸ್ರೀನ್
    ಕನ್ನಡಕ್ಕೆ: ಉದಯ್ ಇಟಗಿ


    ಪರಿಚಯಸ್ಥ

    ನಾನಂದುಕೊಂಡಷ್ಟು ಅವನು ಗಂಡಸಾಗಿಲ್ಲ
    ಅರ್ಧ ನಪುಂಸಕ
    ಅರ್ಧ ಗಂಡಸು

    ಬದುಕು ಸವೆಯುತ್ತಾ ಹೋಗುತ್ತದೆ
    ನಾನು ಅದೇ ಗಂಡಸಿನೊಟ್ಟಿಗೆ
    ಕುಳಿತುಕೊಳ್ಳುತ್ತೇನೆ, ಮಲಗುತ್ತೇನೆ
    ಆದರೆ ನಿಜವಾಗಿ ಅವನೇನೆಂಬುದು ಗೊತ್ತೇ ಆಗುವದಿಲ್ಲ
    ನಾನು ಬಹಳ ದಿವಸಗಳಿಂದ ನೋಡಿದ ಮನುಷ್ಯ
    ‘ಅವನು’ ಅವನಲ್ಲ
    ನಿಜ ಹೇಳಬೇಕೆಂದರೆ ನನಗೆ ಗೊತ್ತಿರುವ ಮನುಷ್ಯ
    ಇವನಲ್ಲವೇ ಅಲ್ಲ!

    ನಾನಂದುಕೊಂಡಷ್ಟು ಅವನು ಮನುಷ್ಯನಾಗಿಲ್ಲ
    ಅರ್ಧ ಮೃಗ
    ಅರ್ಧ ಮನುಷ್ಯ

    ಬಂಗಾಳಿ ಮೂಲ: ತಸ್ಲೀಮಾ ನಸ್ರೀನ್
    ಕನ್ನಡಕ್ಕೆ: ಉದಯ್ ಇಟಗಿ

    ಸ್ವಿಟರ್ಜ್‍ರ್ಲ್ಯಾಂ ಡಿನ ಹುಡುಗಿ

    ರಾತ್ರಿಯ ಔತಣಕೂಟವೊಂದರಲ್ಲಿ
    ಎಲ್ಲರ ಕೈಯಲ್ಲೊಂದು ಶ್ಯಾಂಪೇನ್
    ಇಲ್ಲವೇ ಬಿಳಿ ಮಧ್ಯದ ಗ್ಲಾಸು.

    ಎಲ್ಲರೂ ಸಾಲು ಸಾಲಾಗಿ ನಿಂತಿದ್ದರು
    ಮೊದಲಿಗೆ ದೊಡ್ದವರು ನನ್ನ ಕೈ ಕುಲುಕಿ ಅಭಿನಂದಿಸಲು ಬಂದರು,
    ಕೆಲವರು ನನ್ನ ಅನುಭವಗಳನ್ನು ಹಂಚಿಕೊಳ್ಳಲು ಬಂದರು,
    ಕೆಲವರು ನಾನ್ಹೇಗೆ ಆ ನರವಾನರರ ಗುಹೆಯಿಂದ
    ಜೀವಂತವಾಗಿ ಹೊರಬಂದೆ ಎಂದು ಕೇಳಲು ಬಂದರು,
    ಕೆಲವರು ನನ್ನ ಆಟೋಗ್ರಾಫ್ ಪಡೆಯಲು ಬಂದರು,
    ಕೆಲವರು ನನ್ನ ನೋಡಿ ಕಣ್ಣರಳಿಸಿ ಮೆಚ್ಚುಗೆ ಸೂಚಿಸಲು ಬಂದರು,
    ಕೆಲವರು ಮುತ್ತನ್ನಿಡಲು ಬಂದರು,
    ಕೆಲವರು ಹೂಗುಚ್ಛಗಳನ್ನು ಕೊಡಲು ಬಂದರು.

    ಇವರೆಲ್ಲರ ಮಧ್ಯ ಬಂಗಾರಗೂದಲಿನ ಹುಡುಗಿಯೊಬ್ಬಳು ಬಂದಳು
    ನನ್ನ ಕೈ ಕುಲುಕಲಲ್ಲ, ಅಥವಾ ನನ್ನ ಕಣ್ಣೀರ ಕಥೆಗಳನ್ನು ಕೇಳಲಲ್ಲ
    ‘ನಾನು ನಿಮ್ಮೊಂದಿಗೆ ಸ್ವಲ್ಪ ಹೊತ್ತು ಅಳಲು ಬಂದಿದ್ದೇನೆ ಅಷ್ಟೇ’ ಎಂದು ಹೇಳಿದಳು
    ಅವಳು ಅಷ್ಟು ಹೇಳಿದ್ದೇ ತಡ ಇಡಿ ಬ್ರಹ್ಮಪುತ್ರೆ ನನ್ನ ಕಣ್ಣೊಳಗಿಂದ ಉಕ್ಕಿ ಹರಿದಳು
    ಹೃದಯ ಬಿರಿಯುವಂತೆ ಅತ್ತು ಬಿಟ್ಟೆ!

    ನಾನು ಪೂರ್ವದವಳು
    ಅವಳು ಪಶ್ಚಿಮದವಳು
    ಆದರೂ ನಾವಿಬ್ಬರು ಸಮಾನ ದುಃಖಿಗಳು
    ನಾನು ಕರಿಯಳು, ಅವಳು ಕೆಂಬಣ್ಣದವಳು
    ಆದರೆ ನಮ್ಮಿಬ್ಬರ ನೋವುಗಳು ಸರಿಸಮನಾಗಿ ನೀಲಿಗಟ್ಟಿದ್ದವು.
    ನಾವಿಬ್ಬರು ಅಳುವ ಮುನ್ನ ನಮ್ಮಿಬ್ಬರ ನೋವಿನ ಕಥೆಗಳನ್ನು
    ಒಬ್ಬರಿಗೊಬ್ಬರು ಹೇಳಿಕೊಳ್ಳಬೇಕಾಗಿರಲಿಲ್ಲ.
    ಏಕೆಂದರೆ ಅವೇನೆಂದು ನಮ್ಮಿಬ್ಬರಿಗೂ ಚನ್ನಾಗಿ ಗೊತ್ತಿದ್ದವು!


    ಬಂಗಾಳಿ ಮೂಲ: ತಸ್ಲೀಮಾ ನಸ್ರೀನ್
    ಕನ್ನಡಕ್ಕೆ: ಉದಯ್ ಇಟಗಿ