Demo image Demo image Demo image Demo image Demo image Demo image Demo image Demo image

ಮುಸ್ಲಿಂ ಅರಸರೂ ಮತ್ತವರ ಗೋರಿಗಳೂ……………. ಷಹಜಾನ್-ಮಮ್ತಾಜ್‍ರೂ ಮತ್ತವರ ತಾಜ್ ಮಹಲೂ............

  • ಶುಕ್ರವಾರ, ಮಾರ್ಚ್ 23, 2012
  • ಬಿಸಿಲ ಹನಿ
  • ಕಳೆದ ಮೇ ತಿಂಗಳಲ್ಲಿ ನಾನು ಇಂಟ್ರ್ಯೂವೊಂದನ್ನು ಅಟೆಂಡ್ ಮಾಡಲು ದೆಹಲಿಗೆ ಹೋಗಬೇಕಾಗಿ ಬಂತು. ಅದೇನೋ ನನಗೆ ದುರಾಸೆಯೋ? ವಿದೇಶಗಳ ಹುಚ್ಚೋ? ಹಣದ ಮೇಲಿನ ವ್ಯಾಮೋಹವೋ? ಅಥವಾ ಬದುಕಿನ ಅನಿವಾರ್ಯತೆಯೋ? ಅಥವಾ ನನ್ನ ಅಸಂಖ್ಯ ಕನಸುಗಳ ಒತ್ತಡವೋ? ಒಂದೂ ತಿಳಿಯದು. ಅಂತೂ ನಾನು ಮತ್ತೆ ವಿದೇಶವೊಂದಕ್ಕೆ ಹಾರಿ, ಅಲ್ಲಿ ಕೆಲಸ ಮಾಡಿ, ಒಂದಷ್ಟು ದುಡ್ದನ್ನು ದುಡಿದುಕೊಂಡು, ಬೆಂಗಳೂರಿಗೆ ವಾಪಾಸಾಗಿ ನೆಮ್ಮದಿಯ ಜೀವನ ನಡೆಸಬೇಕೆಂಬುದು ನನಗೆ ಮೊದಲಿನಿಂದಲೂ ಇದ್ದ ಇರಾದೆ. ಲಿಬಿಯಾದಲ್ಲಿ ಎದ್ದ ಕ್ರಾಂತಿಯಿಂದಾಗಿ ಬೆಂಗಳೂರಿಗೆ ಬಂದ ಮೇಲೆ ಆ ಆಸೆ ಇನ್ನೂ ದಟ್ಟವಾಗಿತ್ತು. ಹಾಗೆಂದೇ ನಾನು ಮತ್ತೆ ವಿದೇಶವೊಂದಕ್ಕೆ ಹೋಗಬೇಕಿತ್ತು-ಮೋಹನ ಮುರಳಿಯ ನಿನಾದವೊಂದವನ್ನು ಹುಡುಕಿಕೊಂಡು. ಹೋಗುವಾಗ ದೂರದ ದೆಹಲಿಗೆ ಫ್ಲೈಟಿನಲ್ಲಿ ಹೋಗುವದೋ, ಟ್ರೈನಿನಲ್ಲಿ ಹೋಗುವದೋ ಎಂಬ ಸಂದಿಗ್ದತೆಯಲ್ಲೇ ಹೆಚ್ಚು ಕಾಲ ಕಳೆದೆ. ಫ್ಲೈಟಿನಲ್ಲಿ ಹೋಗುವಷ್ಟು ದುಡ್ಡು ಇರಲಿಲ್ಲವೆಂದಲ್ಲ. ಆದರೆ ಅದೇಕೋ ದುಡ್ಡು ಬಂದರೂ ನನ್ನ ಮನಸ್ಸು ಅಷ್ಟೊಂದು ಐಷಾರಾಮಿ ಜೀವನಕ್ಕೆ ಇನ್ನೂ ಒಗ್ಗಿಕೊಂಡಿಲ್ಲ. ಬಹುಶಃ, ಅದಿನ್ನೂ ಮಿಡಲ್ ಕ್ಲಾಸ್ ಜಿವನದ ಇತಿಮಿತಿಗಳ ಪರಿಧಿಯಲ್ಲೇ ಒದ್ದಾಡುತ್ತಿದೆ ಅಂತಾ ಕಾಣುತ್ತದೆ. ಮೇಲಾಗಿ ನನಗೆ ವಿನಾಕಾರಣ ಹಣ ಖರ್ಚು ಮಾಡುವದು ಮನಸ್ಸಿಗೆ ಒಂಥರಾ ಹಿಂಸೆ ಎನಿಸುತ್ತದೆ. ಹೀಗಾಗಿ ಟ್ರೈನಿನಲ್ಲೇ ಹೊರಟೆ. ಎರಡು ದಿನಗಳ ರೈಲು ಪ್ರಯಾಣ ನನ್ನನ್ನು ಬದುಕಿನ ಬೇರೆ ಬೇರೆ ಅನುಭವಗಳಿಗೆ ತೆರೆದುಕೊಳ್ಳುವಂತೆ ಮಾಡಿತ್ತು. ಮಾತ್ರವಲ್ಲ ಬರೆಯಲು ಒಂದಷ್ಟು ಸರಕನ್ನು ಸಹ ಒದಗಿಸಿತ್ತು.

    ಇಂಟ್ರ್ಯೂ ಮುಗಿದ ಮೇಲೆ ನನಗೆ ಬೆಂಗಳೂರಿಗೆ ವಾಪಸಾಗಲು ಇನ್ನೂ ಎರಡು ದಿನ ಬಾಕಿಯಿತ್ತು. ಮೊದಲ ದಿನ ದೆಹಲಿಯೆಲ್ಲಾ ಸುತ್ತಾಡಿ ಲಜಪತ್ ನಗರದಲ್ಲಿ ಒಂದಷ್ಟು ಶಾಪಿಂಗ್ ಮಾಡಿದೆ. ಮಾರನೆಯ ದಿನ ಇಡಿ ಉತ್ತರ ಭಾರತದ ಮುಖ್ಯ ಆಕರ್ಷಣೆ ಎನಿಸಿದ ಹಾಗೂ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲನ್ನು ನೋಡಲು ಹೊರಟೆ.

    ತಾಜ್ ಮಹಲನ್ನು ಮೊಟ್ಟ ಮೊದಲ ಸಾರಿ ನೋಡುವವರು ಯಾರೂ‘ವಾ! ವಾರೆ ವಾ!’ ಎಂದು ಉದ್ಗರಿಸದೇ ಇರಲಾರರು. ಅಂಥ ಅಪ್ರತಿಮ ಸೌಂದರ್ಯ, ಕಲಾತ್ಮಕತೆ ಹಾಗೂ ಅಚ್ಚರಿಯನ್ನು ಅದು ಒಳಗೊಂಡಿರುವದು ಖಂಡಿತ ಸತ್ಯ. ತಾಜ್ ಮಹಲನ್ನು ನೋಡಲು ಹೋಗುವವರಿಗೆ ಸಾಮಾನ್ಯವಾಗಿ ಅದರ ಹಿಂದಿನ ಕಥೆ ಗೊತ್ತಿದ್ದೇ ಇರುತ್ತದೆ. ಆದರೂ ಈ ಗೈಡ್‍ಗಳು ಬಿಡದೆ ಷಹಜಾನ್‍ ಮತ್ತು ಮಮ್ತಾಜ್ ಮಹಲ್‍ರ ಅಮರ ಪ್ರೇಮಕಥೆಯನ್ನು ಹೇಳತೊಡಗುತ್ತಾರೆ. ಅವರದು ನಿಜಕ್ಕೂ ‘ಅಮರ’ ಪ್ರೇಮಕಥೆಯಾಗಿತ್ತೋ ಗೊತ್ತಿಲ್ಲ. ಆದರೆ ಇವರಂತೂ ಅದನ್ನು ಕಟ್ಟಿದಾಗಿನಿಂದ ಹೇಳಿದ್ದನ್ನೇ ಹೇಳಿ ಹೇಳಿ ಅದನ್ನೊಂದು ಅಮರ ಕಥೆಯನ್ನಾಗಿಸಿದ್ದಾರೆ. ನಮ್ಮ ಗೈಡ್ ಕೂಡ ಒಂದೇ ಸಮನೆ ಬಾಯಿಪಾಠ ಮಾಡಿದವನಂತೆ ಅವರ ಪ್ರೇಮಕಥೆಯ ಬಗ್ಗೆ ಹೇಳುತ್ತಲೇ ಇದ್ದ. ನನಗೇಕೋ ಅವನನ್ನು ಒಂದು ನಿಮಿಷ ರೇಗಿಸಬೇಕೆನ್ನಿಸಿತು. ಕೇಳಿದೆ “ಷಹಜಾನ್ ಈ ತಾಜ್ ಮಹಲ್‍ನ್ನು ನಿಜಕ್ಕೂ ಮಮ್ತಾಜ್‍ಳ ಮೇಲಿನ ಪ್ರೀತಿಯಿಂದ ಕಟ್ಟಿಸಿದನೋ ಅಥವಾ ಅವಳು ಸತ್ತ ಖುಶಿಗಾಗಿ ಕಟ್ಟಿಸಿದನೋ?” ಎಂದು. ಅವನು ನನ್ನ ಮಾತಿನಿಂದ ಮೊದಲು ಕಕ್ಕಾಬಿಕ್ಕಿಯಾದ. ಮರುಕ್ಷಣ ಸಾವರಿಸಿಕೊಂಡು “ಇದ್ದರೂ ಇರಬಹುದು” ಎಂದು ಹೇಳಿ ನನ್ನೊಂದಿಗೆ ಬಿದ್ದು ಬಿದ್ದು ನಕ್ಕ. ಜೊತೆಗೆ “ಇತಿಹಾಸದಲ್ಲಿ ಇದೆಲ್ಲಾ ರೆಕಾರ್ಡ್ ಆಗಿಲ್ಲ.” ಎಂದೂ ಸೇರಿಸಿದ. ನಾನು “ಇತಿಹಾಸದಲ್ಲಿ ಬಹಳಷ್ಟು ವಿಷಯಗಳು ರೆಕಾರ್ಡ್ ಆಗೇ ಇಲ್ಲ” ಎಂದೆ. ಅವ ಮತ್ತೆ ನಕ್ಕ.

    ಈ ಮುಸ್ಲಿಂ ಅರಸರಿಗೆ ತಾವು ಸಾಯುವ ಮುನ್ನವೇ ತಮ್ಮ ಗೋರಿಗಳನ್ನು ಕಟ್ಟಿಕೊಂಡು ಖುಶಿಪಡುವ ಒಂದು ವಿಲಕ್ಷಣ ಖಯಾಲಿ ಇತ್ತು. ಅದರಲ್ಲೂ ದೆಹಲಿಯನ್ನು ಆಳಿದ ಮುಸ್ಲಿಂ ಅರಸರಿಗೆ ಆ ಖಯಾಲಿ ಸ್ವಲ್ಪ ಜಾಸ್ತಿಯೇ ಇತ್ತು. ಇವರುಗಳಿಗೆ ಜೀವನದ ಮೇಲಿನ ಪ್ರೀತಿಗಿಂತ ಸಾವಿನ ಮೇಲಿನ ಮೋಹವೇ ಹೆಚ್ಚಾಗಿತ್ತೆಂದು ಕಾಣುತ್ತದೆ. ಆ ಕಾರಣಕ್ಕೇನೋ ಇವರುಗಳು ಜೀವನದಲ್ಲಿ ಬೇರೇನನ್ನೂ ಬಿಟ್ಟುಹೋಗದಿದ್ದರೂ ತಮ್ಮ ಗೋರಿಗಳನ್ನು ಮಾತ್ರ ಶಾಶ್ವತವಾಗಿ ಬಿಟ್ಟುಹೋಗಿದ್ದಾರೆ. ದೆಹಲಿಯಲ್ಲಿ ಅಂಥವರ ಗೋರಿಗಳು ಸಾಲು ಸಾಲಾಗಿ ಸಿಗುತ್ತವೆ; ಬಾಬರ್, ಹುಮಾಯನ್, ಇಲ್ತಮಿಷ್, ತೈಮೂರ್, ಐಬಕ್, ಅಲ್ಲಾ-ಉದ್ದಿನ್-ಖಿಲ್ಜಿ ಇನ್ನೂ ಮುಂತಾದವರವು.

    ಅದೆಲ್ಲಾ ಇರಲಿ. ಮತ್ತೆ ಈ ತಾಜ್ ಮಹಲ್ ವಿಷಯಕ್ಕೆ ಬರುವದಾದರೆ, ಈ ತಾಜ್ ಮಹಲ್ ಕೂಡ ಒಂದು ಸಮಾಧಿಯೇ! ತನ್ನ ಪ್ರೀತಿಯ ಮಡದಿ ಸತ್ತಮೇಲೆ ಅವಳ ನೆನಪಿಗಾಗಿ ಇರಲಿ ಎಂದು ಷಹಜಾನ್ ಇದನ್ನು ಕಟ್ಟಿಸಿದನಂತೆ! ಅವನಿಗೆ ಅಷ್ಟೊಂದು ಪ್ರೀತಿ ಅವಳ ಮೇಲೆ! ಷಹಜಾನ್ ಅವಳನ್ನು ಎಷ್ಟೊಂದು ಪ್ರೀತಿಸುತ್ತಿದ್ದನೆಂದರೆ ಅವನು ತಾನು ಹೋದಲ್ಲೆಲ್ಲಾ ಅವಳನ್ನು ಕರೆದೊಯ್ಯುತ್ತಿದ್ದನಂತೆ! ಮಮ್ತಾಜ್‍ಳು ಸತ್ತಾಗ ಷಹಜಾನ್ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡವನಂತೆ ಎರಡು ವರ್ಷಗಳ ಕಾಲ ದಂಗುಬಡಿದವನ ತರ ಇದ್ದನಂತೆ. ಇದು ನಮಗೆ ಅವರಿಬ್ಬರ ಬಗ್ಗೆ ಗೊತ್ತಿರುವ ಕಥೆ. ಆದರೆ ಸುಮ್ಮನೆ ಒಮ್ಮೆ ಈ ಧಾಟಿಯಲ್ಲಿ ಯೋಚಿಸಿ ನೋಡಿ........ ಷಹಜಾನ್ ನಿಜಕ್ಕೂ ತನ್ನ ಹೆಂಡತಿಯನ್ನು ಅಷ್ಟೊಂದು ಪ್ರೀತಿಸುತ್ತಿದ್ದನೆ? ಒಂದುವೇಳೆ ಅಷ್ಟೊಂದು ಪ್ರೀತಿಸಿದವನಾಗಿದ್ದರೆ ಅವಳಿರುವಾಗಲೇ ಅವಳಿಗೋಸ್ಕರ ಒಂದು ಅರಮನೆಯನ್ನು ಕಟ್ಟಿಸುವ ಬದಲು ಅವಳು ಸತ್ತ ಮೇಲೆ ಗೋರಿಯನ್ನೇಕೆ ಕಟ್ಟಿಸಿದ? ನಿಜಕ್ಕೂ ಅವರಿಬ್ಬರೂ ಅಷ್ಟೊಂದು ಗಾಢವಾಗಿ ಪ್ರೀತಿಸುತ್ತಿದ್ದರೆ? ಅವರು ಯಾವತ್ತೂ ಒಬ್ಬರೊನ್ನೊಬ್ಬರು ಬಿಟ್ಟಿರುತ್ತಿರಲಿಲ್ಲವೆ? ಅವರ ಪ್ರೀತಿ ಆ ಮಟ್ಟದ ಪರಾಕಾಷ್ಠತೆಯನ್ನು ಮುಟ್ಟಿತ್ತೆ? ಷಹಜಾನ್‍ನಿಗೆ ಅವಳ ಉತ್ಕಟ ಪ್ರೀತಿ ಯಾವುತ್ತೂ ಕಿರಿಕಿರಿಯೆನಿಸಲಿಲ್ಲವೆ? ಅವನ ಪ್ರೇಮ ಕಾಮಗಳು ಅವಳೊಬ್ಬಳಿಗೆ ಮಾತ್ರ ಮೀಸಲಾಗಿದ್ದವೆ? ಇವಳನ್ನು ಬಿಟ್ಟು ಆತ ಬೇರೆ ಯಾರೊಂದಿಗೂ ದೈಹಿಕ ಸಂಪರ್ಕ ಬೆಳೆಸಲಿಲ್ಲವೆ? ಹೀಗೆ ನಮ್ಮಷ್ಟಕ್ಕೆ ನಾವೇ ಕೇಳುತ್ತಾ ಹೋದರೆ ನಮಗೆ ತಾಜ್ ಮಹಲ್‍ ಬಗ್ಗೆ ಇರುವ ಒಂದು ಸುಂದರ ಇಮೇಜ್ ಹಾಳಾಗುತ್ತದೆ. ಅದರ ಹಿಂದಿನ ಕಥೆಗೆ ಧಕ್ಕೆ ಬರುತ್ತದೆ. ತಾಜ್ ಮಹಲ್‍ನ ಬುಡಕ್ಕೆ ಕೈ ಹಾಕಿ ಅಲ್ಲಾಡಿಸದಂತೆ ಭಾಸವಾಗುತ್ತದೆ. ಹೀಗೆ ನಾವು ಯೋಚಿಸಲೂ ಬಾರದು, ಕೇಳಲೂ ಬಾರದು. ಏಕೆಂದರೆ ತಾಜ್ ಮಹಲ್‍ನ ಅಸ್ಥಿತ್ವ ನಿಂತಿರುವದೇ ಷಹಜಾನ್ ಮತ್ತು ಮಮ್ತಾಜ್‍ರ ಪ್ರೇಮಕಥೆಯ ಮೇಲೆ! ಆ ಕಥೆಯೇ ಇಲ್ಲವಾದ ಮೇಲೆ ತಾಜ್ ಮಹಲ್ ಹುಟ್ಟುತ್ತಿತ್ತಾದರೂ ಹೇಗೆ? ಮತ್ತದು ಜಗತ್ತಿನ ಅದ್ಭುತ ಸ್ಮಾರಕಗಳಲ್ಲಿ ಒಂದಾಗುತ್ತಿತ್ತಾದರೂ ಹೇಗೆ? ಕೆಲವು ವಿಷಯಗಳನ್ನು ಅವು ಸುಳ್ಳೋ? ನಿಜವೋ? ಎಂದು ಪರೀಕ್ಷಿಸಲು ಹೋಗದೆ ಅವಿರುವಂತೆ ಅವನ್ನು ಸ್ವೀಕರಿಸಬೇಕು. ಅದುಬಿಟ್ಟು ಅದರ ಆಚೆ ಈಚೆ ಇಣುಕಲು ಹೋದರೆ ಎಲ್ಲವೂ ರಾಡಿಯಾಗಿಬಿಡುತ್ತದೆ!

    ಈ ಹಿಂದೆ ಅಂದರೆ ಎಂಬತ್ತರ ದಶಕದ ಆರಂಭದಲ್ಲಿ ಪ್ರೋಫೆಸರ್ ಓಕ್ ಎನ್ನುವವರು “ತಾಜ್ ಮಹಲ್” ಎನ್ನುವ ಹೆಸರು “ತೇಜೋ ಮಹಾಲಯ” ಎಂಬ ಶಿವನ ದೇವಸ್ಥಾನದಿಂದ ಬಂದಿದ್ದು ಎಂದು ವಾದಿಸಿದ್ದರು. ಒಂದು ವೇಳೆ ಷಹಜಾನ್ ಮಮ್ತಾಜ್‍ಗೋಸ್ಕರ ಈ ಕಟ್ಟಡವನ್ನು ಕಟ್ಟಿಸಿದ್ದರೆ ಅದು “ಮಮ್ತಾಜ್ ಮಹಲ್” ಎಂದಾಗಬೇಕಿತ್ತು, ಅದುಬಿಟ್ಟು ಬರೀ “ತಾಜ್ ಮಹಲ್” ಆಗಿ ಉಳಿದಿದ್ದೇಕೆ? ಒಂದುವೇಳೆ “ಮಮ್ತಾಜ್ ಮಹಲ್” ಎಂದು ಇಟ್ಟಿದ್ದರೂ ತದನಂತರದಲ್ಲಿ ಅದರಲ್ಲಿನ “ಮಮ್” ಬಿಟ್ಟು ಹೋಗಿದ್ದೇಕೆ? ಎಂದು ಪ್ರಶ್ನೆಸಿಸುತ್ತಾರೆ. ಇದು ನಿಜವಿದ್ದರೂ ಇರಬಹುದೇನೋ! ಆ ಜಾಗದಲ್ಲಿ ಹಿಂದೆ ಹಿಂದು ದೇವಾಲಯವಿತ್ತೇನೋ! ಆದರೆ ಅಮೃತ ಶಿಲೆಯ ಆ ಶುಭ್ರ ಬಿಳಿಯ ಕಟ್ಟಡದ ಮುಂದೆ ನಿಂತಾಗ ಷಹಜಾನ್ ಯಾವ ಧರ್ಮದ ಯಾವ ಜಾತಿಯ ಪ್ರತಿನಿಧಿಯಾಗಿಯೂ ನೆನಪಿಗೆ ಬರುವದಿಲ್ಲ. ಆತನೊಬ್ಬ ಪ್ರೇಮಿ ಮಾತ್ರ ಎನ್ನುವದು ಪದೆ ಪದೆ ಮನಸ್ಸಿನಲ್ಲಿ ಅನುರಣಿಸುತ್ತದೆ. ಅವನೊಬ್ಬ ಪ್ರೀತಿಯ ಸಹಜ ಪ್ರತಿನಿಧಿಯಾಗಿ ಕಾಣಿಸುತ್ತಾನೆ. ಆದರೆ ಕೊನೆಗಾಲದಲ್ಲಿ ಆತನ ಮಗ ಔರಂಗಜೇಬ್‍ನಿಂದ ಬಂಧನಕ್ಕೊಳಗಾಗಿ ಚಿತ್ರಹಿಂಸೆ ಅನುಭವಿಸುತ್ತಾನೆ. ಅಲ್ಲಾ, ಅಷ್ಟೊಂದು ಪ್ರಿತಿಸುವ ಷಹಜಾನ್-ಮಮ್ತಾಜ್‍ರ ಹೊಟ್ಟೆಯಲ್ಲಿ ಅಂಥ ಕ್ರೂರ ಮಗ ಹುಟ್ಟಿದನೆ? ಪ್ರೀತಿಸುವವರ ಹೊಟ್ಟೆಯಲ್ಲಿ ಪ್ರೀತಿಸುವವನೇ ಹುಟ್ಟಬೇಕಿತ್ತಲ್ಲ? ಅದು ಬಿಟ್ಟು ಇಂಥ ಕ್ರೂರಿ ಮಗ ಹೇಗೆ ಹುಟ್ಟಿದ? ಅಥವಾ ಅಧಿಕಾರ ಸಿಗುವವರೆಗೂ ಆತ ತನ್ನ ಅಪ್ಪ- ಅಮ್ಮಂದಿರಿಗೆ ಪ್ರೀತಿಸುವ ಮಗನಾಗಿಯೇ ಇದ್ದು ಅಧಿಕಾರ ಸಿಕ್ಕ ಮೇಲೆ ಬದಲಾದನೆ? ಹಣ ಮತ್ತು ಅಧಿಕಾರದ ಮುಂದೆ ಯಾವ ಪ್ರೀತಿಯೂ ಶಾಶ್ವತವಲ್ಲ ಎಂದು ಅವರಪ್ಪನಿಗೆ ಸಾಬೀತು ಪಡಿಸಲು ಹೊರಟನೆ? ಇವೆಲ್ಲಾ ತರ್ಕಕ್ಕೆ ಸಿಗದ ಪ್ರಶ್ನೆಗಳು.

    ಅಂದಹಾಗೆ ಷಹಜಾನ್ ತಾಜ್ ಮಹಲ್‍ನ್ನು ಕಟ್ಟಿಸಿದ ಮೇಲೆ ಅದರ ಅಷ್ಟೂ ಕೆಲಸಗಾರರ ಕೈಗಳನ್ನು ಕತ್ತರಿಸಿಹಾಕಿದನಂತೆ. ಕಾರಣ ಇಂಥದೇ ಇನ್ನೊಂದು ಸ್ಮಾರಕವನ್ನು ಅವರು ಬೇರೆಲ್ಲೂ ನಿರ್ಮಿಸಬಾರದೆಂಬುದು ಅವನ ಉದ್ದೇಶವಾಗಿತ್ತು. ಅಬ್ಬಾ, ಅವನ ಪ್ರೀತಿಯ ಹಿಂದೆ ಅಂಥದೊಂದು ಕ್ರೌರ್ಯವಿತ್ತು ಎಂದು ನಂಬುವದಾದರೂ ಹೇಗೆ?

    ಪ್ರೀತಿ ಒಮ್ಮೊಮ್ಮೆ ನೀನು ಇಷ್ಟೊಂದು ಕ್ರೂರಿಯಾಗಬಲ್ಲೆಯಾ?


    -ಉದಯ್ ಇಟಗಿ

    ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು-ಮಹಿಳಾ ದಿನಾಚಾರಣೆ, ಲಿಂಗತಾರತಮ್ಯ, ಶೋಷಣೆ ಇತ್ಯಾದಿ ಇತ್ಯಾದಿ.........

  • ಗುರುವಾರ, ಮಾರ್ಚ್ 08, 2012
  • ಬಿಸಿಲ ಹನಿ
  • “ಇಂದು ಮಹಿಳಾ ದಿನಾಚಾರಣೆ. ಹಾಗಂದರೇನು?” ಅಂತಾ ನಮ್ಮ ಪಕ್ಕದ ಮನೆಯ ಆರನೇ ಕ್ಲಾಸಿನ ಹುಡುಗನೊಬ್ಬ ನನ್ನ ಕೇಳುತ್ತಾನೆ. ನಾನು “ಮಹಿಳೆಯರು, ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ಆಚರಿಸುವ ದಿನಾಚಾರಣೆ” ಎಂದು ಹೇಳುತ್ತೇನೆ. ಅವನು ಇದೇನೋ ಪ್ರಜಾಪ್ರಭುತ್ವದ ಡೆಫಿನೇಶನ್ ಇದ್ದಹಾಗೆ ಇದೆಯಲ್ಲಾ ಎಂದು ಪಿಳಿಪಿಳಿ ಕಣ್ಣುಬಿಡುತ್ತಾ ಜೋರಾಗಿ ನಗುತ್ತಾನೆ. ಅವನೊಟ್ಟಿಗೆ ನಾನೂ ನಗುತ್ತೇನೆ. ತಕ್ಷಣ ನನ್ನ ಹೆಂಡತಿ “ನಿಮಗೆ ಗಂಡಸರಿಗೆ ಎಲ್ಲವೂ ತಮಾಷೆಯಾಗಿಯೇ ಕಾಣಿಸುತ್ತದೆ” ಎಂದು ಸಿಡುಕುತ್ತಾಳೆ. ನಾನು “ತಮಾಷೆ ಅಲ್ವೇ. ಬೇಸರ” ಎನ್ನುತ್ತನೆ. “ಬೇಸರನಾ? ಯಾಕೆ?” ಎಂದು ಕೇಳುತ್ತಾಳೆ. ನಾನು ಮೆಲ್ಲಗೆ ತಕರಾರು ತೆಗೆಯುತ್ತೇನೆ; “ಅಲ್ಲಾ, ನಿಮಗೆ ಹೆಂಗಸರಿಗೆ “ಮಹಿಳಾ ದಿನಾಚಾರಣೆ”ಯಿರುವಂತೆ ನಮಗೆ ಗಂಡಸರಿಗೆ “ಪುರುಷ ದಿನಾಚಾರಣೆ” ಅಂತಾ ಯಾಕಿಲ್ಲ? ಏಕೀ ಲಿಂಗ ತಾರತಮ್ಯ?” ಎಂದು ಸದಾ ಲಿಂಗ ತಾರತಮ್ಯತೆಯ ಬಗ್ಗೆ ಮಾತನಾಡುವ ನನ್ನ ಹೆಂಡತಿಯನ್ನು ಕೇಳುತ್ತೇನೆ. ಅವಳೋ “ಎಲ್ಲಾ ದಿನಗಳು ನಿಮ್ಮ ದಿನಗಳಾಗಿರುವದರಿಂದ ಪ್ರತ್ಯೇಕವಾಗಿ ನಿಮಗೆ ಅಂತಾ ಇನ್ನೊಂದು ‘ಪುರುಷ ದಿನಾಚಾರಣೆ’ಯ ಅವಶ್ಯಕತೆಯಿಲ್ಲ” ಎಂದು ಮಹಿಳೆಯರ ಪರವಾಗಿಯೇ ಉತ್ತರ ಕೊಡುತ್ತಾಳೆ. “ಎಷ್ಟೇ ಆಗಲಿ ನೀವು ಮಹಿಳೆಯರು ಶತ ಶತಮಾನಗಳಿಂದ ನಾವು ಶೋಷಣೆಗೊಳಗಾದವರು ಎಂಬ ಸಿದ್ಧ ಮಾದರಿಯ ಕಲ್ಪನೆಯಲ್ಲೇ ಬಂದರಲ್ಲವೆ? ಎಲ್ಲಿ ಬಿಟ್ಟುಕೊಡುತ್ತಿರಿ ನಿಮ್ಮ ಜಾಯಮಾನವನ್ನು?” ಎಂದು ಕಟುಕುತ್ತೇನೆ. ಅದಕ್ಕವಳು “ಸರಿ ಸರಿ. ಈ ಪುರಾಣ ಎಲ್ಲಾ ಬಿಟ್ಟು ಇವತ್ತು ನೀವು ಅಡಿಗೆ ಮಾಡಿ. ನಾನು ರೆಸ್ಟ್ ತಗೊಳ್ಳತೇನೆ. ಇವತ್ತು ಮಹಿಳಾ ದಿನಾಚಾರಣೆಯಲ್ಲವೆ?” ಎನ್ನುತ್ತಾಳೆ. ನಾನು “ಆಯ್ತು.” ಎಂದು ಅಡಿಗೆ ಮನೆಗೆ ಹೋಗಿ ತರಕಾರಿಯನ್ನು ಸಿದ್ಧಮಾಡಿಕೊಂಡು ಹೆಚ್ಚಲು ಕುಳಿತರೆ ನನ್ನವಳು “ಅಯ್ಯೋ! ಹೀಗಾ ಹೆಚ್ಚೋದು? ಹಿಂಗಾದ್ರೆ ನೀವು ಅಡಿಗೆ ಮಾಡಿದಂಗೆ. ಕೊಡಿಲ್ಲಿ. ನಾನು ಮಾಡುತ್ತೆನೆ. ಎಷ್ಟೇ ಆಗಲಿ. ಹೆಂಗಸರು, ಹೆಂಗಸರೇ! ನಿಮಗೆ ಗಂಡಸರಿಗೆ ಮಾಡಿಹಾಕಿದ್ದನ್ನು ತಿನ್ನುವದೊಂದು ಗೊತ್ತು” ಎಂದು ಗೊಣಗುತ್ತಾ ಅವಳೇ ತರಕಾರಿ ಕತ್ತರಿಸುತ್ತಾಳೆ. ನಾನು ಇಲ್ಲಿ ಲಿಂಗತಾರತಮ್ಯಕ್ಕೆ ಅವಕಾಶ ಮಾಕೊಡುತ್ತಿರುವರು ಯಾರು? ಎಂದು ಒಳಗೊಳಗೆ ನಗುತ್ತೇನೆ.

    ಅದೆಲ್ಲಾ ಇರಲಿ. ನಾನು ಮೊನ್ನೆ ಯುವ ಕವಯಿತ್ರಿಯೊಬ್ಬರ ಪುಸ್ತಕ ಬಿಡುಗಡೆಯ ಸಮಾರಂಭವೊಂದಕ್ಕೆ ಹೋಗಿದ್ದೆ. ಅಲ್ಲಿ ಆಕೆ ಪ್ರಾಸ್ತವಿಕ ನುಡಿಗಳನ್ನಾಡುತ್ತಾ “ನಾನು ಚಿಕ್ಕ ವಯಸ್ಸಿಗೆ ಗಂಡನನ್ನು ಕಳೆದುಕೊಂಡೆ. ನಿಮಗೆ ಗೊತ್ತಲ್ಲ ಗಂಡನಿಲ್ಲದ ಹೆಂಡತಿಯನ್ನು ಈ ಸಮಾಜ ಹೇಗೆ ಕಾಣುತ್ತದೆ ಎಂದು? ಪುರುಷ ಪ್ರಧಾನ ಸಮಾಜದ ವಿವಿಧ ರೀತಿಯ ಶೋಷಣೆಗಳನ್ನು ಎದುರಿಸಿ ಬರಬೇಕಾದರೆ ಸಾಕುಸಾಕಾಯಿತು ನನಗೆ. ಈ ಶೋಷಣೆಯನ್ನು ನಿಲ್ಲಿಸಬೇಕಿದೆ. ಹೆಣ್ಣು, ಗಂಡಸಿನ ಸರಿಸಮಾನವಾಗಿ ಬದುಕಬೇಕಿದೆ” ಎಂದು ಅಲವತ್ತುಕೊಳ್ಳುತ್ತಿದ್ದರು. ಆದರೆ ಅ ಶೋಷಣೆಯನ್ನು ಹೋಗಲಾಡಿಸುವದಕ್ಕೆ ತಾವು ಏನು ಮಾಡಿದ್ದಾರೆ? ಯಾವ ರೀತಿಯ ಕೊಡುಗೆಯನ್ನು ನೀಡಿದ್ದಾರೆ? ಎಂಬುದರ ಬಗ್ಗೆ ಅವರು ಏನೂ ಹೇಳಲೇ ಇಲ್ಲ. ಇವತ್ತಿನ ಹೆಣ್ಣುಮಕ್ಕಳು ಎಲ್ಲ ರಂಗದಲ್ಲೂ ಮಿಂಚುತ್ತಿದ್ದಾರೆ. ಬಹಳಷ್ಟು ಕಾನೂನುಗಳು ಸಹ ಅವರ ಪರವಾಗಿವೆ. ಅವುಗಳ ದುರ್ಬಳೆಕೆಯೂ ಆಗುತ್ತಿದೆ. ಆದರೂ ಇದ್ಯಾವುದು ತಮಗೆ ಅರಿವೇ ಇಲ್ಲವೆನ್ನುವಂತೆ ಇಪ್ಪತ್ತೊಂದನೆ ಶತಮಾನದ ಈ `ಯುವ ಕವಯಿತ್ರ' ಮಾತ್ರ ಇನ್ನೂ ಶೋಷಣೆ, ಸಮಾನತೆ ಎಂದು ಬಡಬಡಿಸುತ್ತಲೇ ಇದ್ದುದು ಮಾತ್ರ ನನಗೆ ಆಶ್ಚರ್ಯ ತಂದಿತ್ತು.

    ನಾನು ಹಿಂದೊಮ್ಮೆ ನನ್ನ ಸ್ನೇಹಿತನನ್ನು ನೋಡಲು ಆಂಧ್ರಪ್ರದೇಶದ ಗುಂಟೂರು ಸಾರ್ವಜನಿಕ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ನಾವು ಹೊರಗಡೆ ಬೆಂಚಿನ ಮೇಲೆ ವೈದ್ಯರಿಗಾಗಿ ಕಾಯುತ್ತಾ ಕುಳಿತಂತೆ ಒಬ್ಬ ಹೆಣ್ಣುಮಗಳು ತನ್ನ ಗಂಡನನ್ನು ಹೆಗಲ ಮೇಲೆ ಕೂರಿಸಿಕೊಂಡು ಬಂದದ್ದನ್ನು ನೋಡಿ ನನಗೆ ಅಳುವೇ ಬಂದುಬಿಟ್ಟಿತು. ಆಕೆ ಕ್ಯಾನ್ಸರ್ ಪೀಡಿತ ತನ್ನ ಗಂಡನನ್ನು ಆಸ್ಪತ್ರೆಯೊಳಗೆ ಹೊತ್ತು ತಂದಿದ್ದಳು. ಆಕೆ ಅನಕ್ಷರಸ್ಥೆ. ಹಳ್ಳಿಗಾಡಿನ ಹೆಣ್ಣುಮಗಳು. ಶೋಷಣೆ, ಲಿಂಗತಾರತಮ್ಯ, ಸ್ತ್ರೀವಾದ ಈ ಯಾವ ಪದಗಳನ್ನೂ ಕೇಳದಾಕೆ. ನಾವು ಅವಳನ್ನು ಮಾತನಾಡಿಸಿದಾಗ “ಯಪ್ಪಾ, ಗಂಡಗ ಕ್ಯಾನ್ಸರ್ ಅಂತರೀ. ಅವಂಗ ನಡೆಯಾಕ ಆಗಂಗಿಲ್ಲ. ಅದಕ ಹೊತ್ಗೊಂಡು ಬಂದೆ. ಏನು ಮಾಡೋದು? ಅವಂಗ ನಾನು, ನಾನು ಅವಂಗ ಆಗಬೇಕಲ್ರಿ?” ಎಂದು ಅ ನೋವಿನಲ್ಲೂ ನಗಲು ನೋಡಿದಾಗ ಬಹುಶಃ, ಬದುಕು ಎಂದರೇನು ಎಂದು ಸರಿಯಾಗಿ ಅರ್ಥ ಮಾಡಿಕೊಂಡಾಕಿ ಇರಬೇಕು ಎಂದುಕೊಂಡೆ. ಒಂದುವೇಳೆ ಆಕೆ ವಿದ್ಯಾವಂತೆಯಾಗಿದ್ದು ಸಮಾನತೆ, ಶೋಷಣೆ, ಸ್ತ್ರೀವಾದ, ಆ ವಾದ, ಈ ವಾದ ಅಂತೆಲ್ಲಾ ಗೊತ್ತಿದ್ದಿದ್ದರೆ ಈ ರೀತಿ ಅವಳು ತನ್ನ ಗಂಡನ ಸೇವೆಯನ್ನು ಮಾಡುತ್ತಿದ್ದಳಾ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.

    ಗಡಾಫಿಯ ಮಾಜಿ ಅಂಗರಕ್ಷಕಿಯೂ..........ಘಾಟ್‍ನ ಒಂದು ಸಣ್ಣ ಗಲಾಟೆಯೂ............

  • ಮಂಗಳವಾರ, ಮಾರ್ಚ್ 06, 2012
  • ಬಿಸಿಲ ಹನಿ
  • ಇದೀಗ ನೀವು ಲಿಬಿಯಾದ ಯಾವುದೇ ರಸ್ತೆಗಳಲ್ಲಿ ಸುಮ್ಮನೆ ಒಂದು ಸುತ್ತುಹಾಕಿ ಬಂದರೆ ಸಾಕು ನಿಮಗೆ ಅಲ್ಲಲ್ಲಿ ಬುಲೆಟ್‍ಗಳು ಬಿದ್ದಿರುವದು ಕಾಣಿಸುತ್ತದೆ. ಅವು ಯುದ್ಧದ ಸಮಯದಲ್ಲಿ ಬಿದ್ದ ಬುಲೆಟ್‍ಗಳಿರಬೇಕು ಎಂದು ನೀವು ಊಹಿಸಿದರೆ ನಿಮ್ಮ ಊಹೆ ತಪ್ಪಾಗುತ್ತದೆ. ಮಳೆ ನಿಂತರೂ ಮರದ ಹನಿ ನಿಲ್ಲುವದಿಲ್ಲ ಎನ್ನುವಂತೆ ಯುದ್ಧ ನಿಂತರೂ ಇಲ್ಲಿ ಗುಂಡಿನ ಮೊರೆತ ಮಾತ್ರ ಇನ್ನೂ ನಿಂತೇ ಇಲ್ಲ. ಇಲ್ಲಿ ಆಗಾಗ ಗುಂಪು ಘರ್ಷಣೆಗಳೂ ಹಾಗೂ ಸಣ್ಣಪುಟ್ಟ ಗಲಭೆಗಳೂ ಇನ್ನೂ ಸಂಭವಿಸುತ್ತಲೇ ಇವೆ. ಅಂಥ ಸಂದರ್ಭಗಳಲ್ಲಿ ಈ ಗುಂಡಿನ ಮೊರೆತದ ಸದ್ದು ಕೇಳಿಸುವದು ಸರ್ವೇಸಾಮಾನ್ಯ. ಆದರೆ ಈ ಸದ್ದು ಬೆಂಗಾಜಿಯಲ್ಲಿ ಕಡಿಮೆಯಾಗಿದ್ದು ಇನ್ನೂ ಟ್ರಿಪೋಲಿ, ಮಿಸ್ರತಾ, ಸಿರ್ತ್, ಸೆಭಾಗಳಲ್ಲಿ ಆಗಾಗ ಕೇಳಿಬರುತ್ತಲೇ ಇದೆ. ಇದಕ್ಕೆ ನಾನಿರುವ ಸ್ಥಳ ಘಾಟ್ ಕೂಡ ಹೊರತಾಗಿಲ್ಲ.




    ಯುದ್ಧದ ಸಮಯದಲ್ಲಿ ಗಡಾಫಿ, ಸೇನಾ ತರಬೇತಿ ಹೊಂದಿದ ಇಲ್ಲಿನ ಯುವಕರೆಲ್ಲರಿಗೂ ತನ್ನ ಪರವಾಗಿ ಹೋರಾಡಲು ಬುಲಾವ್ ಕಳಿಸಿದ. ಆ ಪ್ರಕಾರ ಈ ಭಾಗದ ಬಹಳಷ್ಟು ಜನ ಗಡಾಫಿ ಬೆಂಬಲಿಗರಾಗಿದ್ದರಿಂದ ಅವರೆಲ್ಲಾ ಯುದ್ಧದಲ್ಲಿ ಭಾಗವಹಿಸಿದರು. (ನಿಮಗೆ ಗೊತ್ತಿರಲಿ. ಗಡಾಫಿ, ಇಲ್ಲಿನ ಯುವಕರಿಗೆ ಸೇನಾ ತರಬೇತಿಯನ್ನು ಖಡ್ಡಾಯಗೊಳಿಸಿದ್ದ. ಅವರು ಕಾಲೇಜು ಓದುವಾಗ ಇಲ್ಲವೇ ಕಾಲೇಜು ಓದು ಮುಗಿದಾದ ಮೇಲೆ ಖಡ್ಡಾಯವಾಗಿ ಆರು ತಿಂಗಳ ಕಾಲ ಸೇನಾ ತರಬೇತಿಗೆ ಹಾಜರಾಗಲೇಬೇಕಿತ್ತು. ಇಲ್ಲವಾದಲ್ಲಿ ವಿದೇಶಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ನಿಗದಿಪಡಿಸಿದ ಸ್ಕಾಲರ್ಶಿಪ್‍ನ್ನು ಪಡೆಯಲು ಅರ್ಹರಾಗುತ್ತಿರಲಿಲ್ಲ.) ಸರಿ, ಯುದ್ಧ ಮುಗಿಯಿತು. ಗಡಾಫಿಯ ಹತ್ಯೆಯೂ ಆಯಿತು. ಆದರೆ ಯುದ್ಧದಲ್ಲಿ ಗಡಾಫಿ ಸೋತ ಮೇಲೆ ಆತನ ಪರವಾಗಿ ಹೋರಾಡಿದವರು ಬಂದೂಕಗಳನ್ನು ಹಿಂತಿರುಗಿಸುವದಾದರು ಯಾರಿಗೆ? ಹೀಗಾಗಿ ಅವನ್ನು ತಮ್ಮೊಟ್ಟಿಗೆ ಹೊತ್ತು ತಂದರು. ಇನ್ನು ಕೆಲವರಿಗೆ ಅದ್ಹೇಗೋ ಗನ್ನುಗಳು ಸಿಕ್ಕುಬಿಟ್ಟವು. ದುರಂತವೆಂದರೆ ಈಗಿನ ಸರಕಾರ ಈ ಗನ್ನುಗಳನ್ನು ಲೈಸನ್ಸ್ ಇಲ್ಲದೇ ಬಳಸಕೂಡದೆಂದು ಫರ್ಮಾನು ಹೊರಡಿಸಿದ್ದರೂ ಇಲ್ಲಿನವರು ಅವನ್ನು ಹಿಂತಿರುಗಿಸಲು ಹೋಗಿಲ್ಲ. ಅದಕ್ಕೆ ಒಂದು ಬಲವಾದ ಕಾರಣವೂ ಇದೆ. ಅದೇನೆಂದರೆ ಗಡಾಫಿ ಪರವಾಗಿ ಹೋರಾಡಿದ ಸೈನಿಕರಿಗೆ ತಾತ್ಕಾಲಿಕವಾಗಿ ಕೆಲವು ನಿಷೇಧಗಳನ್ನು ಹೇರಲಾಗಿದ್ದು ಅವರು ಮುಂದೆ ಹೇಗೋ ಏನೋ ಎಂದು ಭಯಭೀತರಾಗಿದ್ದಾರೆ. ಆದ ಕಾರಣ ಅವರು ಯಾವುದಕ್ಕೂ ತಮ್ಮ ಆತ್ಮರಕ್ಷಣೆಗೆ ಇರಲಿ ಅಂತಾ ತಮ್ಮೊಂದಿಗೆ ಆ ಗನ್ನುಗಳನ್ನು ಹಾಗೆ ಇಟ್ಟುಕೊಂಡಿದ್ದಾರೆ.

    ಹೀಗಾಗಿ ಇಲ್ಲಿ ಪ್ರತಿ ಮನೆಯಲ್ಲಿ ಏನಿಲ್ಲವೆಂದರೂ ಮೂರ್ನಾಲ್ಕು ಗನ್ನುಗಳಿವೆ. ಪರಿಣಾಮವಾಗಿ ಹೊತ್ತುಗೊತ್ತಿಲ್ಲದೇ ಇಲ್ಲಿ ಯಾವಾಗಂದರೆ ಅವಾಗ “ಫಡ್ ಫಡ್” ಎಂದು ಫೈರಿಂಗ್ ಸದ್ದು ಕೇಳಿಸುತ್ತದೆ. ನಾವು ಮೊದಲು ಯಾರೋ ಪಟಾಕಿ ಹೊಡೆಯುತ್ತಿರಬೇಕು ಎಂದುಕೊಳ್ಳುತ್ತಿದ್ದೆವು. ಆದರೆ ಆಮೇಲೆ ಗೊತ್ತಾಯಿತು ಅವರೆಲ್ಲಾ ಮೋಜಿಗಾಗಿಯೋ ಇಲ್ಲವೇ ಖುಶಿಗಾಗಿಯೋ ಆಗಾಗ ಆಕಾಶದತ್ತ ಗುಂಡು ಹಾರಿಸುತ್ತಿರುತ್ತಾರೆಂದು. ನಮಗೆ ಒಂದೊಂದು ಸಾರಿ ಈ ತೆರದ ಗುಂಡಿನ ಸದ್ದು ಕೇಳಿಸಿದಾಗ ನಿಜಕ್ಕೂ ಅಲ್ಲಿ ಗಲಾಟೆ ನಡೆಯುತ್ತಿದೆಯೋ? ಅಥವಾ ಇದು ಕೇವಲ ಮೋಜಿಗಾಗಿಯೋ ಎಂದು ಗೊತ್ತಾಗುವದೇ ಇಲ್ಲ. ಇಲ್ಲಿನ ಪೋಲಿಸರು ಸಹ ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಮೊದಮೊದಲು ಈ ಫೈರಿಂಗ್ ಸದ್ದಿಗೆ ನಾವು ಬೆಚ್ಚಿಬೀಳುತ್ತಿದ್ದೆವು. ಆದರೀಗ ಅದು ಅಭ್ಯಾಸವಾಗಿಬಿಟ್ಟಿದೆ!

    ಮೊನ್ನೆ ಅಂದರೆ ಈಗ್ಗೆ ಒಂದು ವಾರದ ಹಿಂದೆ ರಾತ್ರಿ ಹತ್ತು ಗಂಟೆಗೆ ಇಂಥದೇ ಗುಂಡಿನ ಸದ್ದು ನಮ್ಮ ಕಾಲೇಜು ಪಕ್ಕದಲ್ಲಿಯೇ ಕೇಳಿಸಿತು. ನಾವು ಇನ್ನೇನು ಊಟಮಾಡಿ ಮಲಗಲಿದ್ದೆವು. ಅಷ್ಟರಲ್ಲಿ ಈ ಸದ್ದು. ನಾವು ಮೊದಲು ಮಾಮೂಲಿನಂತೆ ಯಾರೋ ಮೋಜಿಗಾಗಿ ಗುಂಡು ಹಾರಿಸತ್ತಿರಬಹುದೆಂದುಕೊಂಡೆವು. ಆದರೆ ಅದರ ತೀವ್ರತೆ ಮತ್ತು ರಭಸತೆ ಹೆಚ್ಚುತ್ತಾ ಹೋದಂತೆ ನಮಗೆ ನಮ್ಮ ಕಾಲೇಜು ಕೌಂಪೊಂಡಿನಾಚೆ ಏನೋ ಆಗುತ್ತಿದೆ ಎಂದನಿಸಿತು. ಕಾಲೇಜು ಒಳಗಡೆ ನಮಗೆ ಸಾಕಷ್ಟು ರಕ್ಷಣೆಯಿದ್ದರೂ ಭಯಭೀತರಾಗಿ ನಾವು ನಮ್ಮ ಮನೆಯ ಬಾಗಿಲಗಳನ್ನು ಭದ್ರವಾಗಿ ಹಾಕಿಕೊಂಡು ಮಲಗಿದೆವು. ಗುಂಡಿನ ಸದ್ದು ಬೆಳಿಗ್ಗೆ ನಾಲ್ಕು ಗಂಟೆಯವರೆಗೆ ಕೇಳಿಸುತ್ತಲೇ ಹೋಯಿತು. ಮಾರನೇ ದಿವಸ ಗೊತ್ತಾದ ವಿಷಯವೇನೆಂದರೆ ಘಾಟ್‍ನಲ್ಲಿ ಗಡಾಫಿಯ ಮಾಜಿ ಅಂಗರಕ್ಷಕಿಯೊಬ್ಬಳಿದ್ದಾಳೆ. ಅವಳನ್ನು ಬಂಧಿಸಲು ಜನ ಬೆಂಗಾಜಿಯಿಂದ ಬಂದಿದ್ದರು. ಹೀಗಾಗಿ ಅವಳನ್ನು ಉಳಿಸಿಕೊಳ್ಳಲು ಇಲ್ಲಿನವರು ಅವರೊಟ್ಟಿಗೆ ಹೋರಾಟ ನಡೆಸಿ ಯಶಸ್ವಿಯಾದರೆಂದು.

    ಗಡಾಫಿ ಮಹಿಳಾಪರ ಧೋರಣೆಯನ್ನು ಹೊಂದಿದವನಾಗಿದ್ದು ಮಹಿಳೆಯರಿಗೆ ಎಷ್ಟು ಸ್ವಾತಂತ್ರ್ಯ ಕೊಟ್ಟಿದ್ದನೆಂದರೆ ತನ್ನ ಅಂಗರಕ್ಷಣೆಗೂ ಬರೀ ಮಹಿಳಾ ಸೈನಿಕರನ್ನೇ ನೇಮಿಸಿಕೊಂಡಿದ್ದ. ಇದಕ್ಕೆ ಕಾರಣ ಮಹಿಳೆಯರ ಕಾರ್ಯದಕ್ಷತೆ ಬಗ್ಗೆ ಅವನಿಗೆ ಅಷ್ಟೊಂದು ಭರವಸೆ ಇತ್ತು! ಮತ್ತು ಹೊರಜಗತ್ತಿಗೆ ಹೆಂಗಸರು ಗಂಡಸರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ತೋರಿಸುವ ಉದ್ದೇಶವಾಗಿತ್ತು. ಜೊತೆಗೆ ಹೆಂಗಸರಿಗೆ ಸೇನಾತರಬೇತಿ ನೀಡಿದರೆ ಅವರು ಆಪತ್ಕಾಲದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರು ಎನ್ನುವದು ಅವನ ಅಭಿಪ್ರಾಯವಾಗಿತ್ತೆಂದು ಇಲ್ಲಿಯವರು ಹೇಳುತ್ತಾರೆ. ಅವರ ಸಂಖ್ಯೆ ಸುಮಾರು 300-400 ರಷ್ಟಿತ್ತು. ಆತನ ಅಂಗರಕ್ಷಕರಾಗಲು ಇಲ್ಲಿನ ಹುಡುಗಿಯರು ಅನೇಕ ಸುತ್ತುಗಳ ಪರೀಕ್ಷೆಗಳನ್ನು ಎದುರಿಸಬೇಕಾಗಿತ್ತು. ಆದರೆ ಕೊನೆಯ ಸುತ್ತಿನ ಆಯ್ಕೆಯನ್ನು ಇವನೇ ಮಾಡುತ್ತಿದ್ದ. ಆದರೆ ಅವರೆಲ್ಲಾ ಕನ್ಯೆಯರೇ ಆಗಿರಬೇಕೆಂದು ಬಯಸುತ್ತಿದ್ದ. ಕನ್ಯೆಯರೇ ಯಾಕೆ? ಎಂದರೆ ವಿಕ್ಷಿಪ್ತ ವ್ಯಕ್ತಿತ್ವದ ಗಡಾಫಿ ಅವರ ಮೀಸಲು ಮುರಿಯುವದರಲ್ಲಿ ಏನೋ ಒಂದು ವಿಲಕ್ಷಣ ತೃಪ್ತಿಯನ್ನು ಕಾಣುತ್ತಿದ್ದನಲ್ಲದೆ ಅವರನ್ನು ಲೈಂಗಿಕವಾಗಿ ಆಗಾಗ ಶೋಷಿಸುತ್ತಿದ್ದ ಎಂದು ಬಿ.ಬಿ.ಸಿ,, ಆಲ್ಜೇಜಿರಾ, ಇನ್ನೂ ಮುಂತಾದ ವಿದೇಶಿ ಟೀವಿ ಚಾನೆಲ್‍ಗಳು ಹೇಳಿವೆ. ಆದರೆ ಸ್ಥಳೀಯರ ಪ್ರಕಾರ ಈ ಮಾಧ್ಯಮಗಳು ಹೇಳುವದೆಲ್ಲಾ ಸುಳ್ಳು. ಗಡಾಫಿ ಕನ್ಯೆಯರನ್ನೇ ಯಾಕೆ ತನ್ನ ಅಂಗರಕ್ಷಕಿಯರನ್ನಾಗಿ ಇಟ್ಟುಕೊಳ್ಳುತ್ತಿದ್ದನೆಂದರೆ ಪ್ರಾಚೀನ ಕಾಲದಲ್ಲಿ ಒಂದು ನಂಬಿಕೆಯಿತ್ತು; ಕನ್ಯೆಯರಾದವರಿಗೆ ತಮ್ಮ ಕೆಲಸದಲ್ಲಿ ಹೆಚ್ಚು ಏಕಾಗ್ರತೆ ಹಾಗೂ ಗಮನವಿರುತ್ತದೆಂದು. ಇದನ್ನು ಗಡಾಫಿ ಕೂಡ ಬಲವಾಗಿ ಬಲವಾಗಿ ನಂಬಿದ್ದ. ಹೀಗಾಗಿ ಅವರನ್ನು ತನ್ನ ಅಂಗರಕ್ಷಕಿಯರನ್ನಾಗಿ ನೇಮಿಸಿಕೊಂಡಿದ್ದ. ಮಾತ್ರವಲ್ಲ ಆತ ಸದಾ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುತ್ತಿದ್ದು ಅವರ ಸಾಮಾಜಿಕ ಸ್ಥಾನಮಾನಗಳಿಗಾಗಿ ಆತ ಬಹಳಷ್ಟು ಶ್ರಮಿಸಿದ್ದಾನೆ ಎಂದು ಹೇಳುತ್ತಾರೆ. ಇದು ಸುಳ್ಳೋ? ನಿಜವೋ? ಎಂದು ತಿಳಿದುಕೊಳ್ಳಲು ನಾನು ಖುದ್ದಾಗಿ ಘಾಟ್‍ನಲ್ಲಿರುವ ಆತನ ಮಾಜಿ ಅಂಗರಕ್ಷಕಿಯನ್ನು ಭೇಟಿಯಾಗಲು ಅವರ ಮನೆಗೆ ಎರಡು ಮೂರು ಸಾರಿ ಹೋದೆ. ಆದರೆ ಆಕೆ ಬಾಗಿಲನ್ನು ತೆರೆಯದೇ ನಿರಾಶೆಗೊಳಿಸಿದಳು.




    ಅಂದಹಾಗೆ ಗಡಾಫಿಯ ಅಷ್ಟು ಜನ ಅಂಗರಕ್ಷಕಿಯರು ಏನಾದರು? ಕೆಲವರು ಬಂಧಿತರಾದರು, ಕೆಲವರು ನ್ಯಾಟೋ ದಾಳಿಯಲ್ಲಿ ಸತ್ತುಹೋದರು. ಇನ್ನು ಕೆಲವರು ಬೇರೆ ಬೇರೆ ದೇಶಗಳಲ್ಲಿ ತಲೆತಪ್ಪಿಸಿಕೊಂಡರು. ಯಾವಾಗ ಟ್ರಿಪೋಲಿ ಗಡಾಫಿಯ ಹಿಡಿತದಿಂದ ತಪ್ಪಿಹೋಯಿತೋ ಆಗ ತನ್ನ ಉಳಿದ ಅಷ್ಟು ಜನ ಅಂಗರಕ್ಷಕಿಯರಿಗೆ ಆತ “ಇನ್ನು ನನ್ನನ್ನು ಬಿಟ್ಟುಬಿಡಿ. ನೀವು ಎಲ್ಲಾದರೂ ಪಾರಾಗಿ” ಎಂದು ಹೇಳಿದನಂತೆ. ಆ ಪ್ರಕಾರ ಪಾರಾಗುವ ಸಂದರ್ಭದಲ್ಲಿ ಕೆಲವರು ಸಿಕ್ಕಿಬಿದ್ದರು. ಕೆಲವರು ಸತ್ತುಹೋದರು. ಇನ್ನು ಕೆಲವರು ಬೇರೆ ಬೆರೆ ದೇಶಗಳಿಗೆ ಓಡಿಹೋದರು. ಹಾಗೆ ಓಡಿಹೋದ ಅಂಗರಕ್ಷಕಿಯರಲ್ಲಿ ಘಾಟ್‍ನ ಈ ಹುಡುಗಿಯೂ ಸೇರಿಕೊಂಡಿದ್ದಾಳೆ. ಅವಳು ಇಷ್ಟು ದಿನ ಅಲ್ಜೀರಿಯಾದಲ್ಲಿ ಅಡಗಿಕೊಂಡಿದ್ದಳು. ಆದರೆ ಇಲ್ಲಿ ಈ ಗಲಾಟೆಯೆಲ್ಲಾ ಕಡಿಮೆಯಾದ ಮೇಲೆ ಅವಳು ತನ್ನ ಸ್ವಂತ ಊರು ಘಾಟ್‍ಗೆ ಮೊನ್ನೆಯಷ್ಟೇ ಮರಳಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯ ಪೋಲಿಷ್‍ನೊಬ್ಬ ಈಗಿನ ಸರಕಾರಕ್ಕೆ ಸುದ್ಧಿ ಮುಟ್ಟಿಸಿದ್ದಾನೆ. ಅವರು ಇವಳನ್ನು ಬಂಧಿಸಲು ಬೆಂಗಾಜಿ ಮತ್ತು ಜಿಂದಾನ್‍ನಿಂದ ಹೆಚ್ಚುವರಿ ಪೋಲೀಷ್‍ನವರನ್ನು ಕಳಿಸಿದ್ದಾರೆ. ಆದರೆ ಇಲ್ಲಿ ಇನ್ನೂ ಗಡಾಫಿಯ ಬೆಂಬಲಿಗರೇ ಇರುವದರಿಂದ ಅವರೆಲ್ಲಾ ಒಗ್ಗಟ್ಟಾಗಿ ಇಲ್ಲಿಂದ ಅವರನ್ನೆಲ್ಲಾ ಹೊಡೆದೋಡಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಆ ಹುಡುಗಿಯನ್ನು ಸಧ್ಯದ ಮಟ್ಟಿಗೆ ಬಚಾವ್ ಮಾಡಿದ್ದಾರೆ. ಹೀಗಾಗಿ ಮೊನ್ನೆ ಇಲ್ಲಿ ಈ ಗಲಾಟೆ, ರಾದ್ದಾಂತವೆಲ್ಲಾ ನಡೆದು ಸಾಕಷ್ಟು ಗುಂಡಿನ ಮೊರೆತ ಕೇಳಿಸಿತು.

    ಈಗಿನ ಹೊಸ ಹಂಗಾಮಿ ಸರಕಾರ ಗಡಾಫಿಗೆ ಮತ್ತು ಆತನ ಮಕ್ಕಳಿಗೆ ಏನಾದರು ಮಾಡಲಿ. ಆದರೆ ಈ ಹುಡುಗಿಯರು ಕೇವಲ ಅವನ ಅಂಗರಕ್ಷಕಿಯರಾಗಿದ್ದರೆಂಬ ಕಾರಣಕ್ಕೆ ಅವರನ್ನು ಹಿಡಿದು ಜೈಲಿಗಟ್ಟುವದು ಯಾವ ನ್ಯಾಯ? ಇದು ಕೂಡ ಒಂದು ರೀತಿಯ ಸರ್ವಾಧಿಕಾರದ ಧೋರಣೆಯಾಗಿ ಕಾಣುತ್ತದೆ. ಇನ್ನುಮುಂದೆಯಾದರೂ ಹೊಸ ಸರಕಾರ ಇಂಥ ಅರ್ಥಹೀನ ನಡವಳಿಕೆಗಳನ್ನು ನಿಲ್ಲಿಸಿ ಇಡಿ ಲಿಬಿಯಾದ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಆಡಳಿತವನ್ನು ನಡೆಸುವಂತಾಗಲಿ ಎಂದು ಆಸಿಸುತ್ತೇನೆ.

    ಉದಯ್ ಇಟಗಿ

    ಮೊದಲೆರೆಡು ಚಿತ್ರಗಳು ನನ್ನವು
    ಇನ್ನೆರೆಡು ಚಿತ್ರಗಳು ಅಂತರ್ಜಾಲ ಕೃಪೆ

    ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು-ನಾನು ನಾನಾಗಿರುವದು ಎಷ್ಟೊಂದು ಕಷ್ಟ!

  • ಗುರುವಾರ, ಮಾರ್ಚ್ 01, 2012
  • ಬಿಸಿಲ ಹನಿ
  • ಇತ್ತೀಚಿಗೆ ನಾನು ನಾನಾಗಿರಲು ಸಾಧ್ಯವಾಗುತ್ತಿಲ್ಲ; ಬೇರೆ ಇನ್ನೇನೋ ಆಗುತ್ತಿದ್ದೇನೆ. ಅಥವಾ ನನ್ನ ಸುತ್ತಲಿನ ಸಮಾಜ, ಪರಿಸರ ಹಾಗೂ ಮನುಷ್ಯರು ನನ್ನನ್ನು ನಾನಾಗಿರಲು ಬಿಡುತ್ತಿಲ್ಲ. ಹಾಗಂತ ನನಗೆ ಬಲವಾಗಿ ಅನ್ನಿಸತೊಡಗಿದೆ. ನನಗೆ ಮಾತ್ರವಲ್ಲ. ಬಹುಶಃ, ನಿಮಗೂ ಒಮ್ಮೆಯಾದರೂ ಹಾಗೆ ಅನಿಸಿರುತ್ತೆ. ಮನುಷ್ಯ ಬೆಳೆಯುತ್ತಾ ಬೆಳೆಯುತ್ತಾ ಬಹಳಷ್ಟು ಬದಲಾಗಿಬಿಡುತ್ತಾನೆ. ಜೀವನದ ಸಂದರ್ಭಗಳೇ ಹಾಗೆ! ಅವು ಎಂಥವನನ್ನು ಕೂಡ ಬದಲಾಯಿಸಿಬಿಡುತ್ತವೆ. ಆದರೆ ಇಲ್ಲಿ ನನಗೆ ಒಂದೊಂದು ಸಾರಿ ಗೊಂದಲ ಉಂಟಾಗುತ್ತೆ- ಮನುಷ್ಯ ಸಂದರ್ಭಗಳಿಗೆ ತಕ್ಕಂತೆ ಬದಲಾಗುತ್ತಾನೋ? ಅಥವಾ ಸಂದರ್ಭಗಳೇ ನಿಜವಾಗಿ ಮನುಷ್ಯನನ್ನು ಬದಲಾಯಿಸುತ್ತವೆಯೋ? ಎಂದು. ನನ್ನ ಗೊಂದಲಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಬಹುಶಃ, ಸಿಗುವದಿಲ್ಲವೇನೋ?! ಏಕೆಂದರೆ ಕೆಲವು ಗೊಂದಲಗಳಿಗೆ ಪರಿಹಾರವಿಲ್ಲ ಮತ್ತು ಒಂದುವೇಳೆ ಪರಿಹಾವಿದ್ದರೂ ನಾವು ಇಂಥ ಅಸಂಖ್ಯ ಗೊಂದಲಗಳ ನಡುವೆಯೇ ಬದುಕುವದನ್ನು ಅಭ್ಯಾಸ ಮಾಡಿಕೊಂಡಿರುವದರಿಂದ ಅದು ನಮಗೆ ಕಾಣುವದಿಲ್ಲ.

    ಹಾಗಿದ್ದರೆ ನಾನು ನಾನಾಗಿರಲು ಯಾವಾಗ ಸಾಧ್ಯ? ಬಹುಶಃ, ನಾನೊಬ್ಬಂಟಿಯಾಗಿದ್ದಾಗ ಮಾತ್ರ ಅನಿಸುತ್ತೆ. ಆದರೆ ಈ ವಿಶಾಲ ಜಗತ್ತಿನಲ್ಲಿ ಒಬ್ಬಂಟಿಯಿರುವದಾದರೂ ಹೇಗೆ? ನಾವು ಇತರರೊಟ್ಟಿಗೆ ಇರುವಾಗ ಇನ್ನೆಲ್ಲೋ ಕಳೆದುಹೋಗುತ್ತೇವೆ. ಇನ್ನೇನೋ ಆಗುತ್ತೇವೆ. ಯಾರ್ಯಾರದೋ ಪ್ರಭಾವಕ್ಕೊಳಗಾಗುತ್ತೇವೆ. ಯಾರ್ಯಾರನ್ನೋ ಅನುಕರಿಸುತ್ತೇವೆ. ಒಟ್ಟಿನಲ್ಲಿ ನಾವು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಪಾತ್ರಗಳಾಗುತ್ತೇವೆ. ಒಮ್ಮೆ ರೋಮಿಯೋ, ಒಮ್ಮೆ ಹ್ಯಾಮ್ಲೆಟ್, ಒಮ್ಮೆ ಒಥೆಲೋ, ಒಮ್ಮೆ ಇಯಾಗೋ, ಒಮ್ಮೆ ಆಂಟನಿ, ಒಮ್ಮೆ ಪ್ರಾಣೇಶಾಚಾರ್ಯ, ಹೀಗೆ ಇನ್ನೂ ಏನೇನೋ ಅಗುತ್ತೆವೆ. ಕೊನೆಗೆ ನಾನು ಏನೂ ಆಗಲಿಲ್ಲ. ನಾನು ನಾನಾಗಿಯೇ ಉಳಿದೆ ಅನಿಸುತ್ತೆ. ಆದರೂ ನಮಗೆ ಗೊತ್ತಿಲ್ಲದಂತೆ ಇನ್ನೇನೋ ಆಗಿಬಿಟ್ಟಿರುತ್ತೇವೆ.

    ಅಬ್ಬಾ, ನಾನು ನಾನಾಗಿರುವದು ಎಷ್ಟೊಂದು ಕಷ್ಟ! ಹಾಗಾದರೆ ನಾನೇಕೆ ಇನ್ನೂ ನಾನು ನಾನಾಗಿಯೇ ಬದುಕಬೇಕೆಂಬ ಹಟವನ್ನಿಟ್ಟುಕೊಂಡಿದ್ದೇನೆ. ಅದನ್ನೇಕೆ ಕೈ ಬಿಡಬಾರದು? ಒಂದೊಂದು ಸಾರಿ ಅನಿಸುತ್ತೆ; ನಾನು ನಾನಾಗದೆ ಬದುಕುವದರಲ್ಲಿಯೇ ಎಷ್ಟೊಂದು ಖುಶಿ, ಎಷ್ಟೊಂದು ನೆಮ್ಮದಿಯಿದೆಯೆಂದು!