Demo image Demo image Demo image Demo image Demo image Demo image Demo image Demo image

ಶಿಕ್ಷಣದ ಸಂತೆಯಲ್ಲೊಬ್ಬ ಸಂತ

  • ಸೋಮವಾರ, ಸೆಪ್ಟೆಂಬರ್ 05, 2011
  • ಬಿಸಿಲ ಹನಿ

  • ಕಳೆದ ವರ್ಷ ಶ್ರಾವಣದ ಒಂದು ದಿನ ಗದುಗಿನ ಕಾಟನ್ ಮಾರ್ಕೆಟ್ ರೋಡಿನಲ್ಲಿರುವ ಅಣ್ಣಿಗೇರಿ ಮಾಸ್ತರರ ಆಶ್ರಮ ಹೊಕ್ಕಾಗ ಬೆಳಿಗ್ಗೆ 11.45 ರ ಸಮಯ. ಅದಾಗಲೇ ಹುಡುಗರೆಲ್ಲಾ ಸಾಲಿಗೆ ಹೋಗಿದ್ದರಿಂದ ಎಲ್ಲೆಡೆ ನೀರವ ಮೌನ ಆವರಿಸಿತ್ತು. ಆದರೆ ಆ ಆಶ್ರಮದ ಮರದಲ್ಲಿರುವ ಪಕ್ಷಿಗಳು ಆಗೊಮ್ಮೆ ಈಗೊಮ್ಮೆ ಕೂಗು ಹಾಕುತ್ತಾ ಅಲ್ಲಿ ಆವರಿಸಿದ್ದ ಮೌನವನ್ನು ಮುರಿಯಲು ಪ್ರಯತ್ನಿಸುತ್ತಿದ್ದವು. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಕಣ್ಣಾಮುಚ್ಚಾಲೆಯಾಡುವ ಸೂರ್ಯ ಅಂದು ಅದೇನೋ ಬೆಳಿಗ್ಗಿನಿಂದಲೇ ಪ್ರಖರವಾಗಿ ಬೆಳಗುತ್ತಿದ್ದ. ನಾವು ಅವರ ಹತ್ತಿರ ಅಪಾಯಿಂಟ್ಮೆಂಟ್ ತೆಗೆದುಕೊಂಡಿರಲಿಲ್ಲ. ಅದರ ಅವಶ್ಯಕತೆಯೂ ಇರಲಿಲ್ಲ. ನೇರವಾಗಿ ಭೇಟಿಯಾಗಬಹುದಿತ್ತು. ಹೀಗಾಗಿ ಕೇಳಬೇಕಾದ್ದನ್ನು ಒಂದಷ್ಟು ಮನಸ್ಸಲ್ಲೇ ಯೋಚಿಸಿಕೊಂಡು ಹೊರಟೆ.




    ನಾವು ಗೇಟ್ ತೆರೆದು ಒಳಗೆ ಹೋಗುತ್ತಿದ್ದಂತೆ ಆಶ್ರಮದ ಕೋಣೆಯೊಂದರ ಮುಂದೆ ಖುರ್ಚಿ ಹಾಕಿಕೊಂಡು ತಾವೇ ಬೆಳೆಸಿದ ಹೂದೋಟದತ್ತ ದೃಷ್ಟಿ ನೆಟ್ಟು ಕುಳಿತಿದ್ದ ಅಣ್ಣಿಗೇರಿ ಮಾಸ್ತರರು ನಮ್ಮನ್ನು ನೋಡಿದವರೆ ಎದ್ದು ನಿಂತು ಹಣೆಗೆ ಕೈ ಹಚ್ಚಿ ತಮ್ಮ ಕನ್ನಡಕದೊಳಗಿಂದ ನಮ್ಮನ್ನು ನೋಡತೊಡಗಿದರು. ನಾವು ಅವರಿಗೆ ಗೊತ್ತು ಸಿಗದೇ ಹೋದರೂ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಕಡೆ “ಬರ್ರೀ,... ಬರ್ರೀ..... ಒಳಗ ಬರ್ರೀ.” ಎಂದು ಮನೆಗೆ ಬಂದ ಅತಿಥಿಗಳನ್ನು ಸ್ವಾಗತಿಸುವಂತೆ ನಮ್ಮನ್ನು ಸಹ ಆತ್ಮೀಯವಾಗಿ ಸ್ವಾಗತಿಸಿದರು. ಬೆನ್ನಹಿಂದೆಯೇ “ಲೇ ತಮ್ಮಾ, ಅಲ್ಲೊಂದೆರೆಡು ಖುರ್ಚಿ ತಗೊಂಬಾರೋ” ಎಂದು ಅಲ್ಲೇ ಇದ್ದ ಶಿಷ್ಯನಿಗೆ ಆಜ್ಞೆಯಿತ್ತರು. ಆ ಶಿಷ್ಯ ಓಡಿಹೋದವನೆ ಮಾಸ್ತರರ ಪಕ್ಕದಲ್ಲಿ ಒಂದೆರೆಡು ಖುರ್ಚಿಯನ್ನು ತಂದುಹಾಕಿದ. ಅಂದು ಆ ಹುಡುಗ ಮೈಯಲ್ಲಿ ಹುಶಾರಿಲ್ಲದ ಕಾರಣ ಸಾಲಿಗೆ ಹೋಗದೆ ಆಶ್ರಮದಲ್ಲೇ ಉಳಿದಿದ್ದ. ಆಗಷ್ಟೆ ಚೇತರಿಸಿಕೊಂಡು ತಕ್ಕಮಟ್ಟಿಗೆ ಓಡಾಡುತ್ತಿದ್ದ.




    ಆಗ ತಾನೆ ವಿದ್ಯಾರ್ಥಿಗಳನ್ನು ಕಳಿಸಿ ಹೊರಗೆ ಖುರ್ಚಿಯ ಮೆಲೆ ಬಿಳಿ ನೆಹರೂ ಶರ್ಟ್, ಬಿಳಿ ಪಂಚೆಯನ್ನು ಹಾಕಿಕೊಂಡು ಕುಳಿತಿದ್ದ ಮಾಸ್ತರರು ಥೇಟ್ ಗಾಂಧಿವಾದಿಯಂತೆ ಕಂಡರು. ಅವರಿಗೆ 82 ವರ್ಷ ವಯಸ್ಸಾಗಿದೆ ಎಂದು ಹೇಳಿದರೆ ನಮಗೆ ನಂಬಲಸಾಧ್ಯವಾಗಿತ್ತು. ಏಕೆಂದರೆ ನಾನು ಎರಡು ದಶಕಗಳ ಹಿಂದೆ ಅವರ ಕೈಲಿ ಓದುವಾಗ ಅವರ ಕಂಗಳಲ್ಲಿ ಯಾವ ಹೊಳಪು ಇತ್ತೋ ಅದೇ ಹೊಳಪು ಇನ್ನೂ ಹಾಗೆ ಇತ್ತು. ಮುಖದಲ್ಲಿ ಎಂದಿನಂತೆ ಅದೇ ಲವಲವಿಕೆ, ಉತ್ಸಾಹ, ಚೈತನ್ಯ ಎಲ್ಲವೂ ಹಾಗೆ ಇದ್ದವು. ನಾನು ಅವರನ್ನು ನೋಡಿದವನೆ ಅವರ ಪಾದಗಳಿಗೆ ನಮಸ್ಕರಿಸಿ “ನಾನು ಉದಯ್ ಇಟಗಿ ಅಂತಾ-ನಿಮ್ಮ ಹಳೆಯ ವಿದ್ಯಾರ್ಥಿ. 88 ರಿಂದ 91 ರವರೆಗೆ ನಿಮ್ಮ ಕೈಯಲ್ಲಿ ಕಲಿತವನು. ಈಗ ನಾನು ಇಂಗ್ಲೀಷ್ ಉಪನ್ಯಾಸಕನಾಗಿ ಲಿಬಿಯಾದಲ್ಲಿ ಕೆಲಸ ಮಾಡುತ್ತಿದ್ದೇನೆ” ಎಂದು ನನ್ನನ್ನು ನಾನು ಪರಿಚಯಿಸಿಕೊಂಡೆ. ಸಾವಿರ ಸಾವಿರ ಶಿಷ್ಯ ಬಳಗವನ್ನು ಹೊಂದಿರುವ ಮಾಸ್ತರರು ನನ್ನನ್ನು ಹೇಗೆ ತಾನೆ ಗುರುತು ಹಿಡಿದಾರು? ಆದರೂ “ಗುಡ್, ವೇರಿಗುಡ್” ಎಂದು ಹೆಮ್ಮೆಯಿಂದ ಬೀಗುತ್ತಾ ನನ್ನ ಬೆನ್ನು ಚಪ್ಪರಿಸಿದರು. ಮುಂದುವರೆದು “ಬಾಳ ಜನ ಹುಡುಗ್ರು ನೋಡ್ರಿ. ಗೊತ್ತು ಹತ್ತಂಗಿಲ್ಲ. ನೀವs ಗೊತ್ತುಪಡಿಸ್ಕೋಬೇಕ್ರಿ. ನಿಮ್ಮನ್ನ ಗೊತ್ತುಹಿಡಿದಿದ್ದಕ ಮನಸ್ಸಿಗೆ ಕೆಟ್ಟ ಮಾಡ್ಕೋಬ್ಯಾಡ್ರಿ.” ಎಂದು ಕ್ಷಮೆ ಯಾಚಿಸುವ ದನಿಯಲ್ಲಿ ಹೇಳಿದರು.




    ನಾನು “ಇರ್ಲಿ ಸರ್. ನಿಮಗಾದ್ರು ಹೆಂಗ ಗೊತ್ತು ಹಿಡಿಲಿಕ್ಕಾದಾತು? ಎಲ್ಲಾ ಶಿಕ್ಷಕರು ತಮ್ಮ ಎಲ್ಲಾ ಶಿಷ್ಯರನ್ನು ನೆನಪಿನಲ್ಲಿಟ್ಕೋಳಿದಿಕ್ಕೆ ಆಗೋದಿಲ್ರಿ. ಬಾಳ ಕಷ್ಟ ಐತಿ” ಎಂದು ನಕ್ಕೆ. “ನೀವೂ ಮಾಸ್ತರ ಅಲ್ರಿ ಮತ್ತ? ನಮ್ಮದು ನಿಮ್ಮದು ಒಂದ ಅನುಭವ! ಇದರ ಮ್ಯಾಲೆ ಹೆಚ್ಚಿಂದು ಹೇಳೋದರ ಏನ ಐತಿ. ಎಲ್ಲಾನೂ ಅರ್ಥ ಮಾಡ್ಕೋತಿರಿ” ಎಂದು ಅವರೂ ನಕ್ಕರು. ಆ ನಗೆಯಲ್ಲಿ ಅದಮ್ಯ ಜೀವನೋತ್ಸಾಹ ಪುಟಿಯುತ್ತಿತ್ತು. ನಾನು ಅವರನ್ನು ಎರಡು ದಶಕಗಳ ಹಿಂದೆ ನೋಡಿದ್ದಕ್ಕೂ, ಈಗ ನೋಡುವದಕ್ಕೂ ದೈಹಿಕವಾಗಿ ಒಂಚೂರು ವ್ಯತ್ಯಾಸ ಕಾಣಿಸಲಿಲ್ಲ. ಅದೇ ಸದೃಢ ದೇಹ. ಅದೇ ಹೊಳೆಯುವ ಕಂಗಳು. ಅದೇ ಕಂಠ, ಅದೇ ಮಾತು, ಅದೆ ಹಾಸ್ಯಪ್ರಜ್ಞೆ, ಅದೇ ಚೈತನ್ಯ ಎಲ್ಲವೂ ಇನ್ನೂ ಹಾಗೇ ಇದ್ದವು.



    ಮಾಸ್ತರರು ಪ್ರಚಾರಪ್ರಿಯರಲ್ಲ. ಮೊದಲಿನಿಂದಲೂ ಸದ್ದಿಲ್ಲದೆ ಕೆಲಸ ಮಾಡುತ್ತಾ ಬಂದವರು. ಮೀಡಿಯಾ, ಪತ್ರಿಕೆಯವರು, ಫೋಟೋ ಎಂದರೆ ಅವರಿಗೆ ಅಲರ್ಜಿ ಎನ್ನುವದು ನನಗೆ ಚನ್ನಾಗಿ ಗೊತ್ತಿತ್ತು. ಹೀಗಾಗಿ ನಾನೇ ಸಂಕೋಚದಿಂದ “ಸರ್, ದಿನಪತ್ರಿಕೆಯೊಂದಕ್ಕೆ ನಿಮ್ಮ ಮೇಲೆ ಒಂದು ಲೇಖನ ಬರಿಬೇಕಂತ ಮಾಡೇನ್ರಿ. ಹಿಂಗಾಗಿ ನಿಮ್ಮಕೂಡ ಒಂದಷ್ಟು ಮಾತಾಡಿ ವಿಷಯ ಸಂಗ್ರಹಣೆ ಮಾಡಿ ಬರಿತೇನ್ರಿ. ಅದಕ ಅವಕಾಶ ಮಾಡಿಕೊಡ್ರಿ” ಎಂದು ಅತ್ಯಂತ ವಿನಮ್ರತೆಯಿಂದ ಕೇಳಲೋ ಬೇಡ್ವೋ ಎಂಬಂತೆ ಕೇಳಿದೆ. ನಾನು ಅಷ್ಟು ಕೇಳಿದ್ದೇ ತಡ “ಹುಚ್ಚರು ಅದೀರಿ ನೀವು. ಅಲ್ರಿ, ನಾ ಏನ್ ಮಾಡೇನಿ ಅಂತಾ ನನ್ನ ಮೇಲೆ ಲೇಖನ ಬರಿಯೋಕೆ ಹೊಂಟೀರಿ ನೀವು? ಎಷ್ಟೊಂದು ಜನ ಎಷ್ಟೊಂದು ಮಾಡ್ಯಾರ? ಎಷ್ಟೊಂದು ಸಾಧಿಸ್ಯಾರ? ಅವರ ಬಗ್ಗೆ ಬರೀರಿ. ಅವರಿಗೆ ಇನ್ನೂ ಹುರುಪು ಬರ್ತದ. ನಾ ಏನ್ ಸಾಧಿಸೀನಿ ಅಂತಾ ಬರಿತೀರಿ? I am just an ordinary man. What is there to write about me? ಸುಮ್ಮನೆ ಕೂತ್ಕೊಂಡು ಮಾತಾಡಂಗ ಇದ್ರ ಮಾತಾಡ್ರಿ” ಎಂದು ಗದರಿದರು. ನನಗೆ ಮೊದಲೇ ಇವರನ್ನು ಈ ವಿಷ್ಯದಲ್ಲಿ ಒಪ್ಪಿಸುವದು ಕಷ್ಟ ಎಂದು ಚನ್ನಾಗಿ ಗೊತ್ತಿದ್ದರಿಂದ ಪಟ್ಟು ಬಿಡದೇ ಕೊನೆಪಕ್ಷ ನನ್ನ ಬ್ಲಾಗಿನಲ್ಲಾದರೂ ಬರೆಯಲು ಅವಕಾಶ ಮಾಡಿಕೊಡಿ ಎಂದು ಅಂಗಲಾಚಿದೆ. ನಾನು ಬೇಡಿಕೊಳ್ಳುವ ರೀತಿಯನ್ನು ನೋಡಿ ಮಾಸ್ತರರು ಕೊನೆಗೂ ಕರಗಿದರು, ಒಪ್ಪಿಕೊಂಡರು. “ಅಲ್ರೀ, ನನ್ನ ಬಗ್ಗೆ ಬರಿತೇನಿ ಅಂತೀರಿ. ಬರೆಯೋದಾದ್ರ ಬರೆ ಒಳ್ಳೇದ ಬರಿಬ್ಯಾಡ್ರಿ. ಕೆಟ್ಟದ್ದೂ ಬರೀರಿ. ನಾನೂ ಮನುಷ್ಯಾ ಅದೀನಿ. ನಂದರಾಗು ಒಳ್ಳೇದು ಕೆಟ್ಟದ್ದೂ ಎರಡೂ ಅದವು. ಹೌದಲ್ರಿ?” ಎಂದು ಕೇಳಿದರು.

    ನಾನು “ನೀವು ಹೇಳೋದು ಖರೆ ಐತ್ರಿ ಸರ್. ಆದ್ರ ನಾನು ಇಷ್ಟು ದಿವಸ ನಿಮ್ಮನ್ನು ಗುರಗಳನ್ನಾಗಿಯೇ ನೋಡಿದ್ರಿಂದ ನಂಗ ಇದವರೆಗೂ ನಿಮ್ಮಲ್ಲಿ ಯಾವ್ದೂ ಕೆಟ್ಟದ್ದು ಕಂಡಿಲ್ರಿ. ಮೇಲಾಗಿ, ನಿಮ್ಮ ಕೆಟ್ಟತನದ ಬಗ್ಗೆ ತಿಳ್ಕೊಬೇಕಂದ್ರ ನಾನು ನಿಮ್ಮ ಹತ್ತಿರದ ಒಡನಾಡಿಯಾಗಿರಬೇಕು, ಇಲ್ಲ ಗೆಳೆಯನಾಗಿರಬೇಕು. ಆದ್ರ ನಾನು ಇವೆರೆಡೂ ಅಲ್ಲಲ್ರಿ?” ಎಂದು ನಕ್ಕೆ. ಜೊತೆಗೆ ಅವರೂ ನಕ್ಕರು. ನಾನು ಮುಂದುವರೆದು “ಕೆಟ್ಟದ್ದು ಬರೆಯುವಂಥದ್ದು ಕೆಟ್ಟದೇನು ಮಾಡೀರಿ ನೀವು? ನೀವು ಮಾಸ್ತರಾದಾಗಿಂದ ನಿಮ್ಮ ಜೀವನಾನ ವಿದ್ಯಾರ್ಥಿಗಳಿಗೋಸ್ಕರ ತೇದಿರಿ. ನಮ್ಮಂತ ವಿದ್ಯಾರ್ಥಿಗಳನ್ನು ರೂಪಿಸಿದ್ದೀರಿ. ನಿಮ್ಮ ಬಗ್ಗೆ ಕೆಟ್ಟದ್ದು ಬರದ್ರ ನನಗ ಕೆಟ್ಟಾಕೈತ್ರೀ” ಎಂದು ತರ್ಕದ ಮಾತನಾಡಿ ಮಾಸ್ತರರ ಬಾಯಿ ಕಟ್ಟಿಬಿಟ್ಟೆ.

    ಮುಂದೆ ಮಾಸ್ತರರು ಹೆಚ್ಚಿಗೇನೂ ಮಾತನಡದೆ ನಾನು ಮಾಡುವ ಕೆಲಸಕ್ಕೆ ಮೌನ ಸಮ್ಮತಿಯನ್ನು ಕೊಟ್ಟರು. ನಾನು ನನ್ನ ಕ್ಯಾಮರಾವನ್ನು ನನ್ನ ಅಕ್ಕನ ಮಗನ ಕೈಗಿಡುತ್ತಾ ಆಶ್ರಮದ ಒಂದಿಷ್ಟು ಫೋಟೋಗಳನ್ನು ಹಾಗೂ ನಾವು ಮಾತನಾಡುವದನ್ನು ಮಾಸ್ತರರಿಗೆ ಗೊತ್ತಾಗದಂತೆ ಕ್ಲಿಕ್ಕಿಸು ಎಂದು ಸೂಚನೆಯನ್ನು ಕೊಟ್ಟು ಮಾಸ್ತರರೊಂದಿಗೆ ಮಾತಿಗಿಳಿದೆ. ಆದರೆ ಅವನು ಒಂದಷ್ಟು ಫೋಟೋಗಳನ್ನು ತೆಗೆದಿರಲಿಕ್ಕಿಲ್ಲ, ಆಗಲೇ ಮಾಸ್ತರರಿಗೆ ಅವನು ಕದ್ದು ಫೋಟೋ ತೆಗೆಯುವದು ಗೊತ್ತಾಗಿಹೋಯಿತು. “ಏಯ್, ಬ್ಯಾಡ್ರಿ, ಫೋಟೋ, ಗೀಟೋ ಏನು ಬ್ಯಾಡ್ರಿ. ಹಿಂಗಾದ್ರ ನಾನು ನಿಮ್ಮ ಕೂಡ ಮಾತಾಡಂಗಿಲ್ಲ ನೋಡ್ರಿ” ಎಂದು ಮನಿಸಿಕೊಂಡರು. ನಾನು ಅವರನ್ನು ಮತ್ತೆ ಪರಿಪರಿಯಾಗಿ ಓಲೈಸುತ್ತಾ at least ನಾವು ಮಾತನಾಡುವದನ್ನಾದರೂ ವಿಡಿಯೋ ತೆಗೆದುಕೊಳ್ಳಲು ಅನುಮತಿ ಕೊಡಬೇಕು ಎಂದು ಕೇಳಿಕೊಂಡೆ. ನಾನು ನನ್ನ ಅಕ್ಕನ ಮಗನಿಗೆ ವಿಡಿಯೋ ತೆಗೆಯಲು ಹೇಳಿ ನಾನು ಮಾಸ್ತರರೊಂದಿಗೆ ಮಾತಿಗಿಳಿದೆ. ಕಾಲು ಗಂಟೆ ಅವನು ವಿಡಿಯೋ ತೆಗೆದಿರಲಿಕ್ಕಿಲ್ಲ ಆಗಲೇ ಮಾಸ್ತರರು “ಸಾಕು ಬಿಡ್ರಿ, ಸಾಕು. ಎಷ್ಟು ತೆಗಿತೀರಿ? ಕ್ಯಾಮರಾ ಬಂದ್ ಮಾಡಬಿಡ್ರಿ” ಎಂದು ಹೇಳಿದರು. ನಾನು “ದಯವಿಟ್ಟು ನಮ್ಮ ಮಾತುಕತೆ ಮುಗಿಯುವರೆಗೂ ರೆಕಾರ್ಡ್ ಆಗಲಿ. ಇದು ಲೇಖನ ಬರೆಯುವದಕ್ಕೆ ಸಹಾಯವಾಗುತ್ತೆ” ಎಂದೆ. ಅವರು ಮನಸ್ಸಿಲ್ಲದೆ ಒಪ್ಪಿಕೊಂಡರು.

    ಶಿಕ್ಷಣ ಎಂಬುದು ವ್ಯಾಪಾರೀಕರಣಗೊಂಡು ಉದ್ಯಮದ ರೂಪ ಪಡೆದ ಈ ಹೊತ್ತಿನಲ್ಲಿ ಹಾಗೂ ಟೂಷನ್ ಎಂಬ ಮಹಾಮಾರಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ದಂಧೆಯಾಗಿ ನಡೆಯುತ್ತಿರುವ ಇವತ್ತಿನ ದಿನಗಳಲ್ಲಿ ಇಲ್ಲೊಬ್ಬ ನಿವೃತ್ತ ಶಿಕ್ಷಕರು ಮಕ್ಕಳಿಗೋಸ್ಕರ ಉಚಿತ ಅಕ್ಷರ ದಾಸೋಹ ನಡೆಸುತ್ತಾರೆ. ಅವರೇ ಶ್ರೀಯುತ ಬಿ.ಜಿ. ಅಣ್ಣಿಗೇರಿಯವರು. ಶಿಕ್ಷಣದ ಸಂತೆಯಲ್ಲೊಬ್ಬ ಸಂತನಂತಿರುವ ಈ ಶಿಕ್ಷಕ ಗದುಗಿನ ತುಂಬಾ ಅಣ್ಣಿಗೇರಿ ಸರ್, ಅಣ್ಣಿಗೇರಿ ಮಾಸ್ತರ್ ಎಂದೇ ಹೆಸರಾದವರು. ನಿರಂತರವಾಗಿ 56 ವರ್ಷಗಳಿಂದ ಉಚಿತ ಶಿಕ್ಷಣ ದಾಸೋಹ ನಡೆಸುತ್ತಿರುವ ಇವರು ಮೊದಲಿನಿಂದಲೂ ಸದ್ದುಗದ್ದಲವಿಲ್ಲದೇ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಬಂದವರು. ಈ ಕಾರಣಕ್ಕಾಗಿಯೇ ಅವರು ಈ ಭಾಗದ ಬಡ ವಿದ್ಯಾರ್ಥಿಗಳ ಪಾಲಿಗೆ ಆರಾಧ್ಯ ದೈವವಾಗಿದ್ದಾರೆ. ಜೀವನ ಪರ್ಯಂತ ಬ್ರಹ್ಮಚಾರಿಯಾಗಿದ್ದುಕೊಂಡೇ ವಿದ್ಯಾರ್ಥಿಗಳ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆಶ್ರಮದ ಮಕ್ಕಳೇ ತಮ್ಮ ಮಕ್ಕಳೆಂದು ಭಾವಿಸಿ ಸತತ 56ವರ್ಷಗಳಿಂದ ಆ ಮಕ್ಕಳಿಗೆ ತಮ್ಮದೆಲ್ಲವನ್ನೂ ಧಾರೆಯೆರೆದಿದ್ದಾರೆ. ಮದುವೆ ಯಾಕೆ ಆಗಲಿಲ್ಲ ಎಂದು ಕೇಳಿದರೆ ಮೊದಲಿನಿಂದಲೂ ಬಡತನದಲ್ಲಿಯೇ ಬೆಂದೆದ್ದು ಬಂದಿದ್ದರಿಂದ ಮದುವೆಯ ಬಗೆಗಿನ ಮಧುರ ಕಲ್ಪನೆಗಳು ನನ್ನಲ್ಲಿ ಹುಟ್ಟಲೇ ಇಲ್ಲ ಎಂದು ಹೇಳುತ್ತಾರೆ. ತಮ್ಮ 33ನೇ ವಯಸ್ಸಿನಲ್ಲಿ ಒಮ್ಮೆ ಮದುವೆಯ ಯೋಚನೆ ಬಂತಂತೆ. ಆದರೆ ಅವರು ನಡೆಸುತ್ತಿದ್ದ ವಿಶೇಷ ತರಗತಿಗಳಿಂದಾಗಿ ಮದುವೆಯ ಬಗ್ಗೆ ಚಿಂತಿಸಲು ಅವಕಾಶ ಸಿಗಲಿಲ್ಲ ಎಂದು ನಗುತ್ತಾ ಹೇಳುತ್ತಾರೆ.
    ಶ್ರೀಯುತ ಅಣ್ಣಿಗೇರಿಯವರು ಗದಗ್ ಜಿಲ್ಲೆಯ ರೋಣ ತಾಲೂಕಿನ ಮುದೇನಗೂಡಿಯಲ್ಲಿ ಜೂನ್ 3, 1930ರಲ್ಲಿ ಬಡ ಕುಟುಂಬವೊಂದರಲ್ಲಿ ಹುಟ್ಟಿದರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗ್ರಾಮಸ್ಥರ ಹಣಕಾಸಿನ ಸಹಾಯದಿಂದ ಮುದೇನಗೂಡಿಯಲ್ಲಿ ಮುಗಿಸಿದರು. ಮುಂದೆ ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ರೋಣಕ್ಕೆ ಹೋದರು. ಅಲ್ಲಿ ವಾರಾನ್ನ ತಿಂದುಕೊಂಡು ಓದಿದರು. 1954 ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬಿ.ಎ. ಬಿ. ಇಡ್ ಪದವಿ ಪದವಿ ಪಡೆದುಕೊಂಡು ಅದೇ ವರ್ಷ ಗದುಗಿನ ಮಾಡೆಲ್ ಹೈಸ್ಕೂಲಿನಲ್ಲಿ (ಈಗಿನ ಸಿ.ಎಸ್.ಪಾಟೀಲ್ ಹೈಸ್ಕೂಲಿನಲ್ಲಿ) ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು. ಮುಂದೆ ಅದೇ ಹೈಸ್ಕೂಲಿನ ಹೆಡ್ಮಾಸ್ಟರ್ ಆಗಿ 1988 ರಲ್ಲಿ ನಿವೃತ್ತರಾದವರು. ಅವರ ಕಾಲದಲ್ಲಿ ಮಾಡೆಲ್ ಹೈಸ್ಕೂಲ್ ಕೀರ್ತಿಯು ಉತ್ತುಂಗ ಶಿಖರವನ್ನು ಮುಟ್ಟಿತ್ತು.



    ಅವರು ಗದುಗಿಗೆ ಬಂದ ವರ್ಷವೇ ಅಲ್ಲಿಯ ದಲಾಲರ ಸಹಾಯದಿಂದ ಕಾಟನ್ ಮಾರ್ಕೆಟ್ ರೋಡಿನಲ್ಲಿರುವ ಒಂದು ವಕಾರದಲ್ಲಿ ಸಣ್ಣದೊಂದು ಕೋಲಿ ಹಿಡಿದು, ದೂರದ ಊರಿಂದ ಗದುಗಿಗೆ ಓದಲು ಬರುವ ಹುಡುಗರನ್ನು ತಮ್ಮಲ್ಲಿರಿಸಿಕೊಂಡು ಓದಿಸತೊಡಗಿದರು. ಮುಂದೆ ಅದು ಒಂದು ಪರಿಪಾಠವಾಗಿ ಬೆಳೆದು ಇವತ್ತು ಒಂದು ಸಣ್ಣ ಆಶ್ರಮವಾಗಿ ನಿಂತಿದೆ. ಇಲ್ಲಿ 80ಕ್ಕೂ ಹೆಚ್ಚು ಜನರು ತಂತಮ್ಮ ಊರಿನಿಂದ ಬುತ್ತಿ ತರಿಸಿಕೊಂಡು ಬೆಳಿಗ್ಗೆ ಊಟ ಮಾಡುತ್ತಾರೆ. ಮಧ್ಯಾಹ್ನಕ್ಕೆ ಸಾಲಿಯಲ್ಲಿ ಕೊಡುವ ಬಿಸಿಯೂಟ ಮಾಡುತ್ತಾರೆ. ರಾತ್ರಿ ಹಳೆ ವಿದ್ಯಾರ್ಥಿಯೊಬ್ಬರು ಕೊಡಿಸಿದ ಅಕ್ಕಿಯಿಂದ ಅನ್ನ ತಯಾರಿಸಿ, ತೋಂಟದಾರ್ಯ ಮಠದಿಂದ ಸಾರು ತಂದು ಊಟ ಮಾಡುತ್ತಾರೆ.

    ಅಣ್ಣಿಗೇರಿ ಮಾಸ್ತರರದು ಶಿಸ್ತುಬದ್ಧ ಜೀವನ. ಆ ಇಳಿ ವಯಸ್ಸಿನಲ್ಲೂ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಐದಾರು ಕಿಲೊಮೀಟರಿನಷ್ಟು ವಾಕ್ ಹೋಗುತ್ತಾರೆ. ನಂತರ ಸ್ನಾನ, ಪ್ರಾರ್ಥನೆ ಮಾಡುತ್ತಾರೆ, ಪ್ರಾರ್ಥನೆಯಲ್ಲಿ ಆಶ್ರಮದ ಮಕ್ಕಳು ಸಹ ಭಾಗಿಯಾಗುತ್ತಾರೆ. ಇದಾದ ಬಳಿಕ ಏಳು ಗಂಟೆಯಿಂದ ಹತ್ತು ಗಂಟೆಯವರೆಗೆ ತರಗತಿಗಳಿಗೆ ಹೋಗುತ್ತಾರೆ. ಆನಂತರ ಲಘು ಉಪಾಹಾರ, ಒಂದಷ್ಟು ಅಧ್ಯಯನ, ಮಧ್ಯಾಹ್ನ ಮಿತವಾದ ಆಹಾರ ಸೇವನ, ಬಳಿಕ ವಿಶ್ರಾಂತಿ, ನಂತರ ಸುಮಾರು ಎರಡು ಗಂಟೆಗಳಷ್ಟು ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ಅಷ್ಟೊತ್ತಿಗೆ ಸಾಯಂಕಾಲದ ಪಾಠಕ್ಕಾಗಿ ಮಕ್ಕಳು ಬಂದಿರುತ್ತಾರೆ. ಮತ್ತೆ ಅವರಿಗೆ ಸಂಜೆ ಆರರಿಂದ ಏಳು ಗಂಟೆಯವರೆಗೆ ಪಾಠ ತೆಗೆದುಕೊಳ್ಳುತ್ತಾರೆ. ಆನಂತರ ತಮ್ಮ ಆಶ್ರಮದಲ್ಲಿ ವಸತಿಯಿರುವ ಮಕ್ಕಳೊಂದಿಗೆ ಸಮಾಲೋಚನೆ ನಡೆಸುತ್ತಾ, ಅವರ ಕುಂದುಕೊರತೆಗಳನ್ನು ಗಮನಿಸುತ್ತಾ, ಅವರ ವಿಧ್ಯಾಭ್ಯಾಸದ ಪ್ರಗತಿಯ ಬಗ್ಗೆ ವಿಚಾರಿಸುತ್ತಾ, ಅವರಿಗೆ ಬುದ್ಧಿವಾದ ಹೇಳುತ್ತಾ, ತಪ್ಪಿದ್ದರೆ ಬಯ್ಯುತ್ತಾ, ಅವರನ್ನು ತಿದ್ದುತ್ತಾ, ಓದುವದಕ್ಕೆ ಹುರಿದುಂಬಿಸುತ್ತಾ ತಮ್ಮ ಸಮಯ ಕಳೆಯತ್ತಾರೆ. ಈ ತರದ ಜೀವನಕ್ರಮವನ್ನು ಕಟ್ಟುನಿಟ್ಟಾಗಿ ಚಾಚೂತಪ್ಪದೇ ಪಾಲಿಸುತ್ತಾರೆ.

    ಮೊದಲೆಲ್ಲಾ ಇವರೊಟ್ಟಿಗೆ ಹುಣಶಿಮರದ ಸರ್, ಗಾಣಿಗೇರ ಸರ್ ಅವರು ಇಲ್ಲಿಗೆ ಬಂದು ಉಚಿತವಾಗಿ ವಿಜ್ಞಾನ ಮತ್ತು ಗಣಿತದ ಪಾಠಗಳನ್ನು ಹೇಳಿ ಹೋಗುತ್ತಿದ್ದರು. ಆದರೆ ಅವರೆಲ್ಲಾ ಈಗ ಬರುವದನ್ನು ನಿಲ್ಲಿಸಿದ್ದಾರೆ. ಯಾಕೆಂದು ಕೇಳಿದರೆ “ಅಲ್ರಿ ಅವರೂ exist ಆಗಬೇಕಲ್ರಿ. ಅವರಿಗೂ ಮದುವೆಯಾಯಿತು. ಹೆಂಡತಿ ಮಕ್ಕಳಿರೋರು. ಬರೇ ಪುಗಸೆಟ್ಟಿ ಪಾಠ ಮಾಡು ಅಂದ್ರ ಎಷ್ಟು ದಿವಸ ಮಾಡ್ತಾರ?” ಎಂದು ನಗುತ್ತಾ ನಮಗೇ ಮರುಪ್ರಶ್ನೆ ಹಾಕುತ್ತಾರೆ ಮಾಸ್ತರರು.

    ಹೀಗಾಗಿ ಈಗ ಬರೀ ಅಣ್ಣಿಗೇರಿ ಮಾಸ್ತರ್ ಒಬ್ಬರೇ ಎಲ್ಲ ತರಗತಿಗಳಿಗೆ ಇಂಗ್ಲೀಷ್ ಮತ್ತು ಗಣಿತದ ಪಾಠ ಹೇಳುತ್ತಾರೆ. ಆದರೆ ಸಮಾಯಾಭಾವ ಹಾಗೂ ಒಬ್ಬರೇ ಎಲ್ಲವನ್ನೂ ನಿಭಾಯಿಸಬೇಕಿದ್ದರಿಂದ ಈಗ ಬರೀ 9 ಮತ್ತು 10ನೇ ತರಗತಿಗಳಿಗೆ ಮಾತ್ರ ಪಾಠ ಮಾಡುತ್ತಾರೆ. ಅಣ್ಣಿಗೇರಿ ಸರ್ ಅವರದು ಗಣಿತ ಮತ್ತು ಇಂಗ್ಲೀಷ್ ಹೇಳುವದರಲ್ಲಿ ಎತ್ತಿದ ಕೈ. ಇವರು ಪಾಠ ಮಾಡುವ ರೀತಿ ಹೇಗಿರುತ್ತದೆಂದರೆ ಎಲ್ಲವನ್ನೂ ಬುನಾದಿಯಿಂದಲೇ ಆರಂಭಿಸುತ್ತಾರೆ. ಉದಾಹರಣೆಗೆ ಲಂಭಕೋನ ತ್ರಿಭುಜಕ್ಕೆ ಸಂಬಂಧಪಟ್ಟಹಾಗೆ ಪೈಥಾಗೋರಸ್ ನ ಪ್ರಮೇಯವನ್ನು ಬೇರೆಯವರ ಹಾಗೆ ನೇರವಾಗಿ ಆರಂಭಿಸುವ ಮೊದಲು ಲಂಭಕೋನ ತ್ರಿಭುಜ ಎಂದರೇನು? ಅದರ ಲಕ್ಷಣಗಳೇನು? ಹಾಗೂ ಹೇಗೆ ಲಂಭಕೋನ ತ್ರಿಭುಜದಲ್ಲಿ ವಿಕರ್ಣದ ವರ್ಗವು ಉಳಿದೆರೆಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ ಎನ್ನುವದನ್ನು ಅನೇಕ ಉದಾಹರಣೆಗಳ ಮೂಲಕ ವಿವರಿಸುತ್ತಾ ಪೈಥಾಗೋರಸ್ ನ ಪ್ರಮೇಯದೊಳಕ್ಕೆ ಇಳಿಯುತ್ತಾರೆ. ಪ್ರಮೇಯ ಹೇಳಿಕೊಟ್ಟ ಮಲೆ ಅಷ್ಟಕ್ಕೆ ಸುಮ್ಮನಾಗುವದಿಲ್ಲ. ಅದನ್ನು ಮತ್ತೆ ಮತ್ತೆ ಹೇಳುತ್ತಾ, ವಿದ್ಯಾರ್ಥಿಗಳ ಕೈಲಿ ಹೇಳಿಸುತ್ತಾ ವಿದ್ಯಾರ್ಥಿಗಳಿಗೆ ಮನದಟ್ಟುಮಾಡಿಕೊಡುವದರ ಮೂಲಕ ಎಂಥ ದಡ್ಡನನ್ನೂ ಅರ್ಥ ಮಾಡಿಸುತ್ತಾರೆ. ಇಂಗ್ಲೀಷನ್ನೂ ಅವರು ಹೆಚ್ಚು ಕಮ್ಮಿ ಇದೇ ರೀತಿ ಹೇಳಿಕೊಡುತ್ತಾರೆ, ಇಂಗ್ಲೀಷ್ ಗ್ರಾಮೀಣ ಭಾಗದ ಮಕ್ಕಳಿಗೆ ಕಬ್ಬಿಣದ ಕಡಲೆಯಿದ್ದಂತೆ. ಆದರೆ ಅಣ್ಣಿಗೇರಿ ಮಾಸ್ತರರು ಅದನ್ನು ಸರಳವಾಗಿಸುತ್ತಾ, ಇಂಗ್ಲೀಷಿನ ಸಣ್ಣ ಸಣ್ಣ ವಾಕ್ಯಗಳಲ್ಲಿ ಹೇಳುತ್ತಾ ಅರ್ಥ ಮಾಡಿಸುತ್ತಾರೆ. ಮಾತ್ರವಲ್ಲ, ಮದ್ಯ ಮಧ್ಯ ವಿದ್ಯಾರ್ಥಿಗಳನ್ನು ನಗಿಸುತ್ತಾ, ತಾವು ಅವರೊಂದಿಗೆ ಮಕ್ಕಳಾಗಿ ಎಲ್ಲೂ ಬೋರಾಗದಂತೆ ಪಾಠ ಹೇಳಿಕೊಡುತ್ತಾರೆ. ಇದು ಅವರು ಪಾಠ ಮಾಡುವ ವೈಖರಿ.



    ಈ ತರದ ಕ್ಲಾಸುಗಳು ಬರಿ ಆಶ್ರಮದಲ್ಲಿರುವವರಿಗೆ ಮಾತ್ರ ಸೀಮಿತವಾಗಿರುವದಿಲ್ಲ. ಹಳ್ಳಿಯ ಬಡಮಕ್ಕಳು ಸೇರಿದಂತೆ ಗದಗ-ಬೇಟಗೇರಿಯ ಶ್ರೀಮಂತರ ಮಕ್ಕಳೂ ಸಹ ಅವರ ಬಳಿ 100ಕ್ಕೂ ಹೆಚ್ಚು ಜನ ಟೂಷನ್ ಗೆ ಬರುತ್ತಾರೆ. ನಾನು ಅವರ ಬಳಿ ಪಾಠಕ್ಕೆ ಹೋಗುವಾಗ (ಅಂದರೆ 1990 ರಲ್ಲಿ) ಒಂದೊಂದು ತರಗತಿಯಲ್ಲಿ ಇನ್ನೂರು ವಿದ್ಯಾರ್ಥಿಗಳು ಇರುತ್ತಿದ್ದರು. ಒಂದೊಂದು ಸಾರಿ ಕೋಣೆ ಹಿಡಿಸದೆ ಇದ್ದಾಗ ಬಯಲಲ್ಲಿರುವ ಮರದ ಕೆಳಗೆ ತರಗತಿಗಳು ನಡೆಯುತ್ತಿದ್ದವು. ಆಗ ಅವು ನಮಗೆಲ್ಲಾ ಗುರುಕುಲ ಪದ್ಧತಿಯನ್ನು ಜ್ಞಾಪಿಸುತ್ತಿದ್ದವು. ಆದರೆ ಈಗ ಕ್ಲಾಸಿಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕಾರಣ ಕೇಳಿದರೆ ಮಾಸ್ತರರು ಹಸನ್ಮುಖಿಯಾಗಿ “ಅಲ್ರೀ, ಈಗಿನ ಸ್ಟೂಡೆಂಟ್ಸ್ ಗೆ ಆಗಿನ ಸ್ಟೂಡೆಂಟ್ಸ್ ಗೆ ಬಾಳ ಫರಕ್ ಐತ್ರಿ. ಈಗಿನ ಹುಡುಗರು ’ಅಣ್ಣಿಗೇರಿ ಮಾಸ್ತರಗ ವಯಸ್ಸಾಗೇತಿ. ಅವ ಏನ್ ಪಾಠ ಮಾಡ್ತಾನ?’ ಅಂತಾರ್ರಿ. ಇನ್ನು ಅವರ ಪೇರೆಂಟ್ಸ್ ’ಅಣ್ಣಿಗೇರಿ ಮಾಸ್ತರ್ ರೊಕ್ಕಾನ ತಗೊಳಲ್ಲ. ರೊಕ್ಕ ತಗೊಳ್ಳದಾಂವ ಅದೇನು ಪಾಠ ಮಾಡ್ತಾನ? ಸುಮ್ನ ಬೇರೆ ಕಡೆ ಪಾಠಕ್ಕ ಹೊಗಿ ಉದ್ಧಾರ ಆಗ್ರಿ’ ಅಂತಾ ಹೇಳ್ತಾರಂತರೀ” ಎಂದು ಈಗಿನ ವಿದ್ಯಾರ್ಥಿಗಳು ಹಾಗೂ ಅವರ ತಂದೆತಾಯಿಗಳ ಮನೋಸ್ಥಿತಿಯ ಬಗ್ಗೆ ವಿಷಾದ ಮಿಶ್ರಿತ ತಿಳಿಹಾಸ್ಯದಲ್ಲಿ ಹೇಳುತ್ತಾರೆ.

    ಇವತ್ತು ಅವರ ಕೈಯಲ್ಲಿ ಕಲಿತವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಅವರೆಲ್ಲಾ ಸೇರಿ ಆಶ್ರಮವನ್ನು ನವೀಕರಿಸಿ ಕೊಟ್ಟಿದ್ದಾರೆ. ಆದರೆ ಈಗ್ಗೆ ಕೆಲವು ವರ್ಷಗಳಿಂದ ಅವರನ್ನು ಅವರಿದ್ದ ಜಾಗದಿಂದ ಒಕ್ಕಲೆಬ್ಬಿಸುವ ಸಂಚು ನಡೆಯಿತು. ಈ ಸಂದರ್ಭದಲ್ಲಿ ಗದುಗಿನ ಪ್ರಸಿದ್ಧ ದಲಾಲಿ ವ್ಯಾಪಾರಿ ದಿವಂಗತ ಮಲ್ಲೇಶಪ್ಪ ಗೌರಿಪೂರವರು ಅವರ ಸಹಾಯಕ್ಕೆ ಬಂದು ಅವರಿರುವ ಜಾಗವನ್ನು ಅವರ ಹೆಸರಿಗೆ ಮಾಡಿಸಿಕೊಟ್ಟರು. ಅವರ ಈ ಸಹಾಯವನ್ನು ಮಾಸ್ತರರು ವಿಶೇಷ ಕೃತಜ್ಞತೆಯಿಂದ ನೆನೆಯುತ್ತಾರೆ.

    33 ವರ್ಷ ಸರ್ಕಾರಿ ಶಿಕ್ಷಕರಾಗಿದ್ದರೂ ಮಾಸ್ತರರು ತಮಗೇ ಅಂತಾ ಆಸ್ತಿ ಮಾಡಿಕೊಳ್ಳಲಿಲ್ಲ, ಹಣ ಗಳಿಸಲಿಲ್ಲ, ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗಲಿಲ್ಲ. ಮುಂಚಿನಿಂದಲೂ ಏನನ್ನೂ ಅಪೇಕ್ಷಿಸದೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡವರು. ಆದರೆ ಇವರ ಈ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರ ಅವರಿಗೆ 2003 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಇವರು ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಲು ಬೆಂಗಳೂರಿಗೆ ಬಂದಾಗ ಪತ್ರಕರ್ತನೊಬ್ಬ “ಪ್ರಶಸ್ತಿ ಸ್ವೀಕರಿಸುವದಕ್ಕೆ ಗದುಗಿನಿಂದ ಬೆಂಗಳೂರಿಗೆ ಬಂದಿದ್ದೀರಿ. ನಿಮಗೇನನಿಸುತ್ತೆ?” ಅಂತಾ ಕೇಳಿದ್ದ. ಅದಕ್ಕೆ ಮಾಸ್ತರರು “ನಂಗ ಬಾಳ ತ್ರಾಸು ಅನಸಾಕ ಹತೈತ್ರಿ. ಯಾಕಂದ್ರ ಎರಡು ದಿವಸ ಆತು ಮಕ್ಕಳನ್ನ ಅಷ್ಟ ಆಶ್ರಮದಾಗ ಬಿಟ್ಟು ಬಂದಿದೇನ್ರಿ. ಪಾಪ, ಅವರು ಹೆಂಗ ಇರ್ತಾರ ಏನ? ಈ ಕಾರ್ಯಕ್ರಮ ಮುಗಿದ ತಕ್ಷಣ ಇವತ್ತ ರಾತ್ರಿನ ಗದಿಗ್ಗೆ ಬಸ್ ಹತ್ತತೇನ್ರಿ.” ಎಂದಾಗ ಆ ಪತ್ರಕರ್ತ ’ಸಾಮಾನ್ಯವಾಗಿ ಎಲ್ಲರೂ ಈ ಸಂದರ್ಭದಲ್ಲಿ ತಾವು ಮಾಡಿದ್ದನ್ನು ಹಾಡಿ ಹೊಗಳುತ್ತಾ ಪ್ರಶಸ್ತಿ ಬಂದಿದ್ದಕ್ಕೆ ಖುಶಿಯಾಯಿತು. ಹಾಗೆ ಹೀಗೆ” ಅಂತಾ ಹೇಳ್ತಾರೆ ಆದರೆ ಅದರ ಬದಲು ಆ ಸಮಯದಲ್ಲೂ ತಮ್ಮ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದನ್ನು ಕೇಳಿ ಬೆರಗಾಗಿದ್ದ.

    ಇಂಥವರು ನನ್ನ ಗುರುಗಳಾಗಿದ್ದೇ ನನ್ನ ಅದೃಷ್ಟ. ಇವರ ಕೈಲಿ ಮೂರು ವರ್ಷ ವಿದ್ಯಾರ್ಥಿಯಾಗಿ ಕಲಿತಿದ್ದೆನಾದರೂ ಈಗ ಮತ್ತೆ ಅವರೊಂದಿಗೆ ಮಾತನಾಡುವದೇ ಒಂದು ಸೌಭಾಗ್ಯ ಎಂದು ಭಾವಿಸಿ ಮಾತಿಗಿಳಿದೆ. ಮಾತನಾಡುತ್ತಾ ಮಾಸ್ತರರು ಐದು ದಶಕಗಳ ಹಿಂದಿನಿಂದ ಇದುವರೆಗೂ ತಮ್ಮ ವೃತ್ತಿ ಜೀವನದಲ್ಲಿ ಏನೇನು ನಡೆಯಿತು ಎನ್ನುವದನ್ನೆಲ್ಲಾ ಕಟ್ಟಿಕೊಟ್ಟರು. ಮೂರು ಗಂಟೆ ಕಳೆದಿದ್ದೇ ಗೊತ್ತಾಗಲಿಲ್ಲ. ಈ ಮಧ್ಯ ಮಾಸ್ತರರು “ಲೇ ತಮ್ಮಾ, ಸಾಹೇಬರಿಗೆ ಒಂದೆರೆಡು ಚಹಾ ತಗೊಂಬಾರೋ” ಎಂದು ತಮ್ಮ ಶಿಷ್ಯನಿಗೆ ಆಜ್ಞೆಯಿತ್ತರು. ನಾನು ಬೇಡವೆಂದೆ. ಮಾಸ್ತರರು ಕೇಳಲಿಲ್ಲ. ಒತ್ತಾಯ ಮಾಡಿ “ಏಯ್, ತಗೊಂಬಾ ಹೋಗೋ” ಎಂದು ಮತ್ತೊಮ್ಮೆ ಶಿಷ್ಯನಿಗೆ ಹೇಳಿದರು. ಶಿಷ್ಯ ಚಹಾ ತರಲು ರೆಡಿಯಾದ. ನಾನಾಗ “ಒಂದು ಶುಗರ್ ಲೆಸ್ ಇರಲಿ” ಎಂದೆ. ಮಾಸ್ತರರು ಅಚ್ಚರಿಯಿಂದ ನನ್ನತ್ತ ನೋಡಿದರು. ನಾನು “ಹೌದು, ಕಳೆದ ಒಂದು ವರ್ಷದಿಂದ ನಾನು ಡಯಾಬಿಟಿಕ್ ಆಗಿದ್ದೇನೆ” ಎಂದೆ. ಆಗ ಮಾಸ್ತರರು ಕಳಕಳಿಯಿಂದ “ಏಯ್. ಏನ್ರೀ ಇದು? ಇಷ್ಟ ಸಣ್ಣ ವಯಸ್ಸಿಗೆ ಡಯಾಬಿಟಿಸ್ ಬಂದಿದೆಯಾ? ಹುಷಾರ್ರೀ, ಆರೋಗ್ಯದ ಬಗ್ಗೆ ಕಾಳಜಿ ತಗೊಳ್ರೀ. ನೀವಿನ್ನೂ ಬಾಳ ದಿವಸ ಬದುಕಿ ಬಾಳಬೇಕಾದವರು” ಎಂದು ಪ್ರೀತಿಯ ಸಲಹೆಯನ್ನಿತ್ತರು. ನಾನು ಅವರಿಗೆ ಕಣ್ಣಲ್ಲೇ ಥ್ಯಾಂಕ್ಸ್ ಹೇಳಿ ಸಂದರ್ಶಿಸತೊಡಗಿದೆ.



    • ನಿಮ್ಮ ದೃಷ್ಟಿಯಲ್ಲಿ ಗುರು ಎಂದರೆ ಯಾರು? ಅವನು ಹೇಗಿರಬೇಕು?
    ಅಲ್ರಿ, ಗುರು ಅನ್ನಂವಗ ಅಸ್ಥಿತ್ವ ಬರೋದ ವಿದ್ಯಾರ್ಥಿಗಳಿಂದ! ವಿದ್ಯಾರ್ಥಿಗಳ ಇಲ್ಲದ ಮೇಲೆ ಗುರು ಎಲ್ಲಿರತಾನ? ಹಿಂಗಾಗಿ ಮೊದ್ಲು ಶಿಷ್ಯರು ಹುಟ್ತಾರ. ಆಮೇಲೆ ಗುರುಗಳು ಹುಟ್ತಾರ. ಈ ವಿಷ್ಯಕ್ಕೆ ಎಲ್ಲಾ ಗುರುಗಳು ತಮ್ಮ ಶಿಷ್ಯರ ಬಗ್ಗೆ ಋಣಿಯಾಗಿರಲೇಬೇಕು. ಯಾಕಂದ್ರ ಒಬ್ಬ ಗುರು ದೊಡ್ಡವನಾಗೋದು ಅವನ ಶಿಷ್ಯರಿಂದ. ಅವರು ಮಾಡಿದ ಸಾಧನೆಯಿಂದ. ದ್ರೋಣಾಚಾರ್ಯ ಒಬ್ಬ ಗುರು ಅಂತಾ ಜಗತ್ತಿಗೆ ಗೊತ್ತಾಗಿದ್ದು ಏಕಲವ್ಯನಂಥ ಶಿಷ್ಯನಿಂದ. ಅರಿಸ್ಟಾಟಲ್ ಬೆಳಕಿಗೆ ಬಂದಿದ್ದು ಅವನ ಶಿಷ್ಯ ಸಾಕ್ರೇಟಿಸ್ ನಿಂದ. ಈಗ ನಾನೂ ಒಬ್ಬ ಗುರು ಅಂತಾ ಗೊತ್ತಾಗಿದ್ದು ಕೂಡ ನಿಮ್ಮಂತ ವಿದ್ಯಾರ್ಥಿಗಳಿಂದ. ಹಾಗೆ ನೋಡಿದ್ರ ಗುರುಗಳದು ಹೇಳಿಕೊಳ್ಳುವಂಥ ರೋಲ್ ಏನೂ ಇರಲ್ರಿ. He is just a guide. ಆದರೆ ಸತತ ಪರಿಶ್ರಮದಿಂದ ಒಬ್ಬ ವಿದ್ಯಾರ್ಥಿ ಮುಂದೆ ಬರ್ತಾನಲ್ಲ ಅವನಿಗೆ ನಾವು ಮೊದಲು ಕೃತಜ್ಞತೆ ಸಲ್ಲಿಸಬೇಕು.

    ಗುರು ಆದವನು ಹಿಂಗಿಂಗ ಇರಬೇಕು ಅಂತಾ ಹೇಳಾಕ ನಾನ್ಯಾರ್ರಿ?

    • ಇವತ್ತಿನ ವಿದ್ಯಾರ್ಥಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?

    ಈಗೀಗ ವಿದ್ಯಾರ್ಥಿಗಳಲ್ಲಿ ಶಿಕ್ಷಕರ ಬಗ್ಗೆ ಸ್ವಲ್ಪ ಗೌರವ ಕಮ್ಮಿಯಾಗಿದೆ ಅನ್ನೋದು ನಿಜ. ಹಿಂದೆ ವಿದ್ಯಾರ್ಥಿಗಳು ವಿಧೇಯಕರಾಗಿರುತ್ತಿದ್ದರು. ಹೇಳಿದ ಮಾತು ಕೇಳೋರು. ಹೇಳಿದ ಕೆಲಸ ಮಾಡೋರು. ಆದ್ರ ಈಗ ಏನರ ಹೇಳಾಕ ಹೋದ್ರ “ನೀ ಯಾರು ನಂಗ ಹೇಳಾಂವ?” ಅಂತಾ ನಮ್ಮನ್ನ ಕೇಳ್ತಾರ.
    ಮೊನ್ನೆ ನಮ್ಮ ಆಶ್ರಮದಾಗ ಒಬ್ಬ ಹುಡುಗ ಊಟದ ತಾಟು ತಿಪ್ಯಾಗ ಒಗದಿದ್ದ. ಕಾಲಾಗ ಹಾಕ್ಕೊಳ್ಳೋ ಬೂಟನ್ನು ಕೋಲ್ಯಾಗ ಇಟ್ಟು ಅದರ ಮ್ಯಾಲೆ ಚಾದರ ಹೊಚ್ಚಿ ಭದ್ರವಾಗಿ ಇಟ್ಟಿದ್ದ. ಇದನ್ನ ನೋಡಿ ನಂಗ ಬಾಳ ಕೆಟ್ಟ ಅನಿಸ್ತು. ಸಿಟ್ಟು ಬಂತು. ಸಿಟ್ಟಿನ್ಯಾಗ ಒಂದು ನಾಲ್ಕ ಹೊಡೆದೆ. ಊಟ ಮಾಡೋ ತಾಟು ತಿಪ್ಯಾಗ ಒಗಿಬ್ಯಾಡ ಅಂತಾ ಹೇಳಿದೆ. ಆಗ ಆ ಹುಡುಗ ನನ್ನ ಮುಂದ ಏನೂ ಮಾತಾಡಲಿಲ್ಲ. ಆದ್ರ ಮಾಳೆ ಮರುದಿವಸ ಎಲ್ಲಾರ ಮುಂದ “ನಮ್ಮ ಅಪ್ಪಗ ಬುದ್ಧಿ ಇಲ್ಲ. ಅಂವಾ ಇಲ್ಲಿ ನನ್ನ ಸಾಲಿ ಕಲಿಯಾಕ ಬಿಟ್ಟಾನ. ಅಣ್ಣಿಗೇರಿ ಮಾಸ್ತರಗ ಬುದ್ಧಿ ಇಲ್ಲ, ಅಂವಾ ಅದನ್ನ ಮಾಡಬ್ಯಾಡ, ಇದನ್ನ ಮಾಡಬ್ಯಾಡ ಅಂತಾ ಹೇಳ್ತಾನ” ಇಂಥದಕ್ಕ ಏನು ಹೇಳೋದು?

    • ಈ ರೀತಿ ವಿಧ್ಯಾರ್ಥಿಗಳು ಆಗೋದಕ್ಕ ಯಾರು ಕಾರಣ? ತಂದೆ-ತಾಯಿಗಳೋ? ಶಿಕ್ಷಕರೋ?

    ಇಬ್ಬರೂ ಅಲ್ರೀ. ಯಾಕಂದ್ರ ಯಾವ ತಂದ–ತಾಯಿನೂ ಮಕ್ಕಳಿಗೆ ಉಡಾಳಾಗು ಅಂತಾ ಹೇಳಲ್ರೀ. ಹಂಗs ಯಾವ ಶಿಕ್ಷಕನೂ ಹೇಳಂಗಿಲ್ರೀ. ನನಗನಿಸ್ತದ ಇವತ್ತಿನ ದುನಿಯಾದಾಗ ಮಕ್ಕಳನ್ನು ಬೆಳಿಸೋದರಲ್ಲಿ ಎಲ್ಲೋ ಏನೋ ಮಿಸ್ ಆಗಾಕಹತೈತಿ. ಅದು ಏನೂ ಅಂತಾ ಇನ್ನೂ ಹುಡಕೋದರಾಗ ಅದೇವಿ.

    • ಹಾಗಾದ್ರೆ ಇವತ್ತಿನ ಶಿಕ್ಷಣ ಪದ್ಧತಿ ಕಾರಣ ಅಂತಿರೇನು?

    ಹಂಗೂ ಅಲ್ರೀ. ಯಾಕಂದ್ರ ಎಲ್ಲಾ ಮಕ್ಕಳು ತಮ್ಮ ಸಾಲ್ಯಾಗ ’ಮಾರಲ್ ಎಜುಕೇಶನ್’ ಅನೋ ಪಿರಿಯಡ್ನ್ಯಾಗ ಮೊದಲಿನಿಂದಲೂ ನೀತಿಕಥೆ ಕಲ್ಕೋತ ಬಂದಿರ್ತಾರ್ರೀ. ಆದ್ರ ನೀತಿಕಥೆಗಳು ಎಲ್ಲಾ ಮಕ್ಕಳ ಮೇಲೆ ಪರಿಣಾಮ ಬೀರ್ತವ ಅಂತಾ ಹೇಳಾಕ ಬರಂಗಿಲ್ಲ ನೋಡ್ರಿ. ಹಿಂಗಾಗಿ ನೀತಿಕಥೆಗಳು ನೀತಿಕಥೆಗಳಾಗಿಯೇ ಉಳಿದುಬಿಡ್ತವ. ಎಲ್ಲೋ ಒಂದಿಬ್ಬರು ಇವನ್ನ ಅಳವಡಿಸಿಕೊಂಡು ಒಳ್ಳೆಯವರಾಗ್ತಾರ.

    • ನಿಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿ ಯಾರಾದರೂ ಇದ್ದಾರಾ?

    ನಾನು ಎಂಟನೇ ಕ್ಲಾಸಿನಲ್ಲಿರಬೇಕಾದ್ರ ಭಯಂಕರ ಜ್ವರ ಬಂದು ನನ್ನ ಸೊಂಟ ಪೂರ್ತಿ ಸ್ವಾದೀನ ಕಳಕೊಂಡು ನಡ್ಯಾಕ ಬರಲಾರದಂಗಾತು. ಸ್ವಲ್ಪ ದಿವಸ ಆದ ಮೇಲೆ ಜ್ವರ ಬಿಟ್ಟಿತು. ಆದ್ರ ಸೊಂಟದ ನೋವು ಇನ್ನೂ ಹಂಗ ಇತ್ತು. ಸಾಲಿಗೆ ಹೋಗಲಾರದಂಗಾತು. ಆಗ ನಮ್ಮ ಮನ್ಯಾಗಿನಿವರು ’ಇವ ಸಾಲಿಗೆ ಹೋಗೋದು ಹತೈತಿ ಅಂತಾ ಹೇಳಿ ಹಿಂಗ ನಾಟ್ಕ ಮಾಡಾಕ ಹತ್ಯಾನ’ ಅಂತಾ ಆಡಿಕೊಂಡ್ರು. ಆಗ ನನಗೆ ರೋಣದ ಹೈಸ್ಕೂಲಿನ ಹೆಡ್ಮಾಸ್ಟರ್ ಜಿ.ವಿ.ಕುಲಕರ್ಣಿಯವರ ಕಡಿಂದ ಬುದ್ಧಿ ಹೇಳಸಲಿಕ್ಕೆ ನಮ್ಮ ಅಪ್ಪ ಮತ್ತು ನನ್ನ ಪ್ರೈಮರಿ ಸ್ಕೂಲ್ ಟೀಚರ್ ಒಬ್ಬರು ಕರಕೊಂಡು ಹೋದ್ರು. ಅವರು ನನ್ನ ಅಪ್ಪನ್ನ ನೋಡಿ ನೀವೇನಾಗಬೇಕು ಇವಗ ಅಂತಾ ಕೇಳಿದರು. ನಮ್ಮ ಅಪ್ಪ ನಾನು ಈ ಹುಡುಗನ ತಂದಿರೀ ಅಂದ. ನಮ್ಮ ಮಾಸ್ತರನ್ನು ನೋಡಿ ನೀವೇನಾಗಬೇಕು ಇವಗ ಅಂತಾ ಕೇಳಿದರು. ಅವರು ನಾನು ಇವನ ಮಾಸ್ತರು ಅಂದ್ರು. ಅವರು ತಕ್ಷಣ ನನ್ನ ಮುಖವನ್ನು ನೋಡಿ ಕೈ ಬಿಡ್ರಿ ಅವನ್ನ ಅವ ಓದ್ತಾನ. ಓದಿ ಶಾಣ್ಯಾ ಆಗತಾನ. ನಾನು ಅವನ್ನ ಓದಿಸ್ತೇನೆ ಅಂದ್ರು. ತಕ್ಷಣ ನನಗೆ ಆ ವ್ಯಕ್ತಿಯ ಬಗ್ಗೆ ಎಲ್ಲಿಲ್ಲದ ಗೌರವ ಬಂತು. ನನ್ನ, ನನ್ನಪ್ಪ ನಂಬಲಿಲ್ಲ, ನನಗ ಕಲಿಸಿದ ಮಾಸ್ತರು ನಂಬಲಿಲ್ಲ. ಆದ್ರ ಗುರ್ತು ಪರಿಚಯ ಇಲ್ಲದ ಹೊರಗಿನವರು ನಂಬಿದರಲ್ಲಾ ಅಂತಾ ಬಾಳ ಖುಶಿಯಾಯಿತು. What a great man he is! ಅಂತಾ ಅನಿಸ್ತು. ನಾನಾಗ ವಾರಾನ್ನ ತಿಂದು ಓದ್ತಿದ್ದೆ. ವಾರಾನ್ನ ಬಿಡಿಸಿ ಮುಂದ ಅವರು ನನಗೋಸ್ಕರ ಅಂತಾನ ಒಂದು ಬೋರ್ಡಿಂಗ್ ತೆರೆದರು. ಅಲ್ಲಿ ಮೊದಲಿಗೆ ನಾನೂ ಸೇರಿ ಮೂರೇ ಮೂರು ವಿದ್ಯಾರ್ಥಿಗಳಿದ್ದೆವು. ಮುಂದ ಅದು ಬೆಳಕೊಂತ ಹೋತು. ಇವತ್ತು ಅದು ಬಸವೇಶ್ವರ ಬೋರ್ಡಿಂಗ್ ಆಗಿ ಇನ್ನೂ ಐತಿ. ಒಬ್ಬ ಶಿಕ್ಷಕನಲ್ಲಿರಬೇಕಾದ ನಿಜವಾದ ಗುಣ ಅಂದ್ರ ಇದು. ಇಂಥವರನ್ನು ಯಾವತ್ತಾದರೂ ಮರೆಯಲು ಸಾದ್ಯವೆ?

    • ನೀವು ಕಲಿಸುವದರ ಜೊತೆಗೆ ವಿದ್ಯಾರ್ಥಿಗಳಿಂದ ಏನಾದರು ಕಲಿತಿದ್ದಿದೆಯಾ?

    ಖಂಡಿತ ಐತ್ರಿ. ಒಬ್ಬ ಶಿಕ್ಷಕ ಕಲಿಸೋದಕ್ಕಿಂತ ತನ್ನ ವಿದ್ಯಾರ್ಥಿಗಳಿಂದ ಬಾಳ ಕಲಿತಾನ್ರಿ. ನಾನು ಅಂಥಾ ಎರಡು ಪ್ರಸಂಗ ಹೇಳತೇನಿ ಕೇಳ್ರಿ. ನನಗೊಬ್ಬ ಸುರೇಶ್ ಶಾಬಾದಿಮಠ ಅಂತಾ ಹೇಳಿ ಒಬ್ಬ ಸ್ಟೂಡೆಂಟ್ ಇದ್ದ. ಅವನು ಓದೋದರಲ್ಲಿ ಬಾಳ ಮುಂದ ಇದ್ದ ಮತ್ತು ಯಾವಾಗ್ಲೂ ನಂಬರ್ ಹಚ್ಚಿ ಪಾಸ್ ಆಗತಿದ್ದ. ಆದ್ರ ಅವನ ಜತಿ ಓದೋ ಇನ್ನೊಬ್ಬ ಹುಡುಗ ಇವನ್ನ ಓದೋದರಲ್ಲಿ ಹೆಂಗರಾ ಮಾಡಿ ಹಿಂದ ಒಗಿಬೇಕು ಅಂತಾ ಅವನೂ ಬಾಳ ಕಷ್ಟಪಟ್ಟು ಓದ್ತಾ ಇದ್ದ. ಆದ್ರ ಶಾಬಾದಿಮಠನ್ನ ಹಿಂದ ಒಗಿಲಿಕ್ಕೆ ಇವನ ಕೈಲಿಂದ ಆಗ್ತಾನ ಇರಲಿಲ್ಲ. ಇದೇ ಕಾರಣಕ್ಕ ಆ ಹುಡುಗ ಶಾಬಾದಿಮಠನ್ನ ದ್ವೇಷಿಸುತ್ತಿದ್ದ ಮತ್ತು ಆ ವಿಷಯ ಶಾಬಾದಿಮಠನಿಗೂ ಗೊತ್ತಿತ್ತು. ಮುಂದ ನಾವು ಶೈಕ್ಷಣಿಕ ಟೂರ್ ಇಟ್ಟಾಗ ಶಾಬಾದಿಮಠನ ವೈರಿಗೆ ಬರಾಕ ಆಗಲಿಲ್ಲ. ಯಾಕಂದ್ರ ಅವ ಬಾಳ ಬಡವ ಇದ್ದ. ಅದನ್ನು ತಿಳಿದ ಶಾಬಾದಿಮಠ ಖುದ್ದಾಗಿ ತಾನೇ ಕೈಯಿಂದ ರೊಕ್ಕಾ ಹಾಕಿ ಆ ಹುಡುಗನ್ನು ಕರಕೊಂಡು ಬಂದ. ನನಗ ಇದನ್ನು ನೋಡಿ ಬಾಳ ಆಶ್ಚರ್ಯ ಆಯ್ತು. ನಿಮ್ಮ ವೈರಿಗಳನ್ನೂ ಪ್ರೀತಿಸಿ ಎನ್ನುವ ವಿವೇಕಾನಂದರ ಮಾತನ್ನು ಆತ ಪ್ರ್ಯಾಕ್ಟಿಕಲಿ ಮಾಡಿ ತೋರಿಸಿದ್ದ. ನಾವಿನ್ನೂ ವಿವೇಕಾನಂದರ ಆ ಮಾತನ್ನು ಥೆಯರ್ಯಾಟಿಕಲಿ ಪಾಲಿಸ್ತಾ ಇದ್ರ ಅವ ಪ್ರ್ಯಾಕ್ಟಿಕಲಿ ಪಾಲಿಸಿ ತೋರಿಸಿದ್ದ.

    ಇನ್ನೊಬ್ಬಳು ವಿಜಯಲಕ್ಷ್ಮಿ ಅಂಗಡಿ ಅಂತಾ. ಅಕಿ ಗೆಳತಿಯೊಬ್ಬಳು ಹಿರೇಮಠ ಅಂತಾ ಬಾಳ ಬಡವಿ. ವಿಜಯಲಕ್ಷ್ಮಿ ತನ್ನ ಗೆಳತಿ ಪರಿಸ್ಥಿತಿ ನೋಡಿ ತನ್ನ ಅಪ್ಪನಿಗೆ ಹೇಳಿ ಆಕೆಯನ್ನು ತನ್ನ ಮನೆಯಲ್ಲಿಟ್ಟುಕೊಂಡು ಓದಿಸಿದಳು. ಇಂಥ ಔದಾರ್ಯ ಮೆರೆದ ಆ ಹುಡುಗಿಯನ್ನು ಮರೆಯುವದಾದರೂ ಹೇಗೆ? ಇಂಥ ಔನತ್ಯ ಎಷ್ಟು ಜನಕ್ಕೆ ಬರುತ್ತದೆ? ಮಾನವೀಯತೆಯ ಮೇಲೆ ನಾವು ಬರೇ ದೊಡ್ಡ ದೊಡ್ಡ ಭಾಷಣ ಬಿಗಿತೇವಿ, ದೊಡ್ಡ ದೊಡ್ಡ ಪುಸ್ತಕ ಬರಿತೇವಿ. ಆದ್ರ ಎಷ್ಟು ಜನ ನಾವು ಈ ಮಾನವೀಯತೆಯನ್ನು ಮೆರೆದಿದ್ದೇವೆ ಹೇಳ್ರಿ ನೋಡೋಣ? ಇದಕ್ಕಿಂತ ಹೆಚ್ಚಿಂದು ಒಬ್ಬ ಶಿಕ್ಷಕ ವಿದ್ಯಾರ್ಥಿಗಳಿಂದ ಕಲಿಯೋದಾದರು ಏನಿದೆ ಹೇಳ್ರಿ?
    ಈ ಮೇಲಿನ ವಿದ್ಯಾರ್ಥಿಗಳಿಬ್ಬರು ಸಾಮಾನ್ಯರು. ದೊಡ್ಡವರು ಮಾಡೋದು ದೊಡ್ಡದಲ್ಲ. ಸಣ್ಣವರು ಮಾಡೋದು ದೊಡ್ಡದಾಗುತ್ತೆ. ದೊಡ್ಡವರು ಮಾಡಿದ್ದನ್ನು ಹೈಲೈಟ್ ಮಾಡೋದು ಬಿಟ್ಟು ಸಣ್ಣವರ ಔದಾರ್ಯವನ್ನು ಹೈಲೈಟ್ ಮಾಡ್ರಿ. ಆಗ ನಮ್ಮ ದೇಶ ಮುಂದಕ ಬರತೈತಿ.

    • ನೀವು ಬಿ.ಎ. ಬಿ.ಇಡ್ ಅಂತೀರಿ. ಆದರೆ ಅದ್ಹೇಗೆ ಗಣಿತ ಕಲಿಸ್ತೀರಿ?

    ನಾನು ಈ ಆಶ್ರಮ ಶುರು ಮಾಡಿದಾಗ ಎಂಟು ಜನ ಇದ್ದರು. ಆಗ ನಾನು ಬರೀ ಇಂಗ್ಲೀಷ್ ಮತ್ತು ಸಮಾಜ ಹೇಳತಿದ್ದೆ. ಆದ್ರ ನಮ್ಮ ಹುಡುಗರು ಗಣಿತನೂ ಹೇಳು ಅಂದ್ರು. ನಾನು ನನಗ ಗಣಿತ ಬರಂಗಿಲ್ಲ. ಇನ್ನ ನಾ ಹೆಂಗ ನಿಮಗೆ ಹೇಳ್ಲೀ ಅಂದೆ. ಅವರು ಹೆಂಗಾರ ಮಾಡಿ ಹೇಳ್ರಿ ಅಂತಾ ಒತ್ತಾಯ ಮಾಡಾಕ ಶುರು ಮಾಡಿದರು. ಆಗ ನಮ್ಮ ಸಾಲ್ಯಾಗ ಎಸ್.ಪಿ.ಗಾರ್ಗಿ ಅಂತಾ ಒಬ್ಬರು ಗಣಿತ ಮಾಸ್ತರ್ ಇದ್ದರು. ಅವರು ಆಗಲೇ ರಿಟ್ರೈಡ್ ಆಗಿದ್ದರು. ನಾನು ದಿನಾ ಅವರ ಮನಿಗೆ ಹೋಗಿ ಗಣಿತ ಹೇಳಿಸ್ಕೊಂಡು ಬರ್ತಿದ್ದೆ. ಅದನ್ನ ಬಂದು ಹುಡುಗರಿಗೆ ಹೇಳತಿದ್ದೆ. ಹುಡುಗರಿಗೂ ಇಂಟ್ರೆಸ್ಟ್ ಬಂತು. ನಂಗೂ ಇಂಟ್ರೆಸ್ಟ್ ಬಂತು. ಹಿಂಗ ಹೇಳಕೋತ ಹೋದೆ. ಅದ ವರ್ಷsನಾ ನನ್ನ ಕೈಯಾಗ ಕಲಿತ ಒಂದು ಹುಡುಗ S.S.L.C. ಪರೀಕ್ಷೆಯಲ್ಲಿ 10ನೇ ರ್ಯಾಂಕ್ ಬಂದ. ನನಗ ಬಾಳ ಖುಶಿ ಆತು. ಮುಂದ 1981ರಾಗ Text Books ಚೇಂಜ್ ಆದವು. ಆಗ ಕಾಲೇಜು ಮಾಥ್ಸ್ ಇಟ್ರು. ನನಗ ಈ ಮ್ಯಾಥ್ಸ್ ಬರ್ತಾನ ಇರಲಿಲ್ಲ. ಆಗ ನನ್ನ ಕೈಯಾಗ ಕಲಿತ ಹುಡುಗನೊಬ್ಬ ಕಾಲೇಜಿನ್ಯಾಗ ಮ್ಯಾಥ್ಸ್ ಲೆಕ್ಚರರ್ ಆಗಿದ್ದ. ಅವನ್ನ ಕರಿಸಿ ನೀನು ಪಾಠ ಮಾಡು ನಾನು ಕೇಳ್ತೀನಿ ಅಂದೆ. ಅವ ಆ ರೀತಿ ಪಾಠ ಮಾಡ್ಕೋತ ಹೋದ. ನಾನು ಕೇಳ್ಕೋತ ಹೋದೆ. ಎಲ್ಲಾ ಕೇಳಕೊಂಡ ಮ್ಯಾಲೆ ನಾನು ಕಲಿಸೋಕ ಶುರು ಮಾಡಿದೆ. ಹಿಂಗ ನಾನೂ ಒಬ್ಬ ಗಣಿತದ ಮಾಸ್ತರ್ ಆದೆ.



    • ಈ ಸಂದರ್ಭದಲ್ಲಿ ನೀವು ಶಿಕ್ಷಕರಿಗೆ ಏನಾದ್ರೂ ಕಿಮಾತು ಹೇಳ್ತೀರಾ?

    ಅಯ್ಯಯ್ಯೊ! ನಾನು ಕಿವಿಮಾತು ಹೇಳುವಷ್ಟು ದೊಡ್ಡವನಲ್ರಿ. ಆದ್ರ ಒಂದ ಒಂದು ಮಾತು ಏನು ಹೇಳ್ತೀನಿ ಅಂದ್ರ ಪಾಠದ ವಿಷಯದಲ್ಲಿ ನಿಮ್ಮನ್ನು ನಂಬಿಕೊಂಡು ಬಂದ ಮಕ್ಕಳಿಗೆ ಮೋಸ ಮಾಡಬ್ಯಾಡ್ರಿ ಅಷ್ಟ.

    • ನಿಮ್ಮ ನಂತರ ಈ ಆಶ್ರಮದ ಉಸ್ತುವಾರಿ ಯಾರು ವಹಿಸಿಕೊಳ್ಳುತ್ತಾರೆ? ಈ ಪರಂಪರೆ ಹೀಗೆ ಮುಂದುವರಿಯುತ್ತಾ?

    God alone knows! ಮರಿಸ್ವಾಮಿ ಬಿಡಾಕ ನಾ ಏನ್ ಮಠ ಕಟ್ಟೇನೇನ್ರೀ? ನಂಗ ಮೊನ್ನೆ ಒಂದಷ್ಟು ಜನ ಬಂದು ನಿಮ್ಮ ಹಸರಿನ್ಯಾಗ ಒಂದು ಟ್ರಸ್ಟ್ ಮಾಡ್ತೀವಿ ಅಂತಾ ಹೇಳಿದ್ರು. ನಾನು ಬ್ಯಾಡ ಅಂದೆ. ಯಾಕಂದ್ರ ನನ್ನ ಹೆಸರಿನ್ಯಾಗ ಟ್ರಸ್ಟ್ ಮಾಡೋದು, ಸಂಸ್ಥೆ ಕಟ್ಟೋದು ನಂಗ ಇಷ್ಟ ಇಲ್ಲ. ಯಾಕಂದ್ರ ಒಂದು ಟ್ರಸ್ಟ್ ಆಂತಾದ್ರ ಮುಂದ ಅದಕ ಒಬ್ಬ ಪ್ರಸಿಡೆಂಟ್ ಅಂತಾ ಆಗಬೇಕು, ಸೆಕ್ರೇಟರಿ ಅಂತಾ ಆಗಬೇಕು. ಇನ್ನ ಆ ಅಧಿಕಾರಕ್ಕೆ ಜಗಳ ಶುರು ಆಕೈತಿ. ಹಣದ ದುರಪಯೋಗವೂ ಆಗಬಹುದು. ನನ್ನ ಹೆಸರಿನ್ಯಾಗ ಇದೆಲ್ಲಾ ನಡೆಯೋದು ನಂಗೆ ಒಂಚೂರು ಇಷ್ಟ ಇಲ್ಲ. ಹಿಂಗಾಗಿ ನನ್ನ ತರಾನ ಯೋಚ್ನೆ ಮಾಡೋರು ಯಾರದರೂ ಇದನ್ನು ನಡೆಸಿಕೊಂಡು ಹೋದ್ರೂ ಸಂತೋಷ. ಹೋಗದಿದ್ದರೂ ಸಂತೋಷ. (ನಗತೊಡಗಿದರು)


    ಅಣ್ಣಿಗೇರಿ ಮಾಸ್ತರರೊಂದಿಗೆ ಮಾತನಾಡುವದೆಲ್ಲಾ ಮುಗಿದ ಮೇಲೆ “ಸರ್, ನಿಮ್ಮ ಆಶ್ರಮಕ್ಕೆ ಏನಾದರೂ ಬೇಕಾದ್ರೆ ಹೇಳಿ. ಕೊಡಿಸಿ ಹೋಗ್ತೀನಿ. ಇಲ್ಲ ಅಂದ್ರ ದುಡ್ಡು ಕೊಡ್ತಿನಿ ನಿಮಗ ಹೆಂಗ ಬೇಕೋ ಹಂಗ ಉಪಯೋಗಿಸಿಕೊಳ್ಳಿ” ಎಂದು ಚೆಕ್ ಕೊಡಲು ಹೋದಾಗ ಅತ್ಯಂತ್ರ ವಿನಮ್ರರಾಗಿ ಏನೂ ಬೇಡ ಎಂದು ನಿರಾಕರಿಸಿದರು. ನಾನು ಮತ್ತೆ ಮತ್ತೆ ಒತ್ತಾಯಿಸಿದೆ. ಆದರೆ ಅವರು ಏನೂ ಮಾಡಿದರೂ ತೆಗೆದುಕೊಳ್ಳಲಿಲ್ಲ. ಸರ್, ನಿಮಗೆ ನಿಮ್ಮ ಪಿಂಚಣಿಯೊಂದರಿಂದಲೇ ಇಲ್ಲಿರುವ ಮಕ್ಕಳಿಗೆ ಊಟ ಹಾಕುವದು ಕಷ್ಟವಾಗಬಹುದು. ದಯವಿಟ್ಟು ತೆಗೆದುಕೊಳ್ಳಿ ಎಂದೆ. ಅವರು ಸಧ್ಯ ಈಗ ಎಲ್ಲ ಇದೆ. ಮುಂದೆ ಬೇಕಾದರೆ ಕೇಳುತ್ತೇನೆ ಎಂದರು. ನಾನು ನನ್ನ ಬೆಂಗಳೂರಿನ ವಿಳಾಸ ಹಾಗೂ ಫೋನ್ ನಂಬರ್ ಕೊಟ್ಟು ಬಂದೆ.

    ಬರುವಾಗ ತಲೆತುಂಬಾ ಮಾಸ್ತರರದೇ ಧ್ಯಾನ. ಎಂಥ ಅದ್ಭುತ ವ್ಯಕ್ತಿತ್ವ! ಎಂಥ ವಿಶಾಲ ಹೃದಯ! ಎಂಥ ಅದ್ಭುತ ಶಿಕ್ಷಕ! ಇವರ ನಡೆ ನುಡಿ ನಮಗೆಲ್ಲಾ ಮಾದರಿಯಾಗಲಿ, ಸ್ಪೂರ್ತಿಯಾಗಲಿ, ದಾರಿದೀಪವಾಗಲಿ. ಶಿಕ್ಷಕರ ದಿನಾಚಾರಣೆಯಂದು ನಾವು ನಮ್ಮ ಶಿಕ್ಷಕರಿಗೆ ವಿಶ್ ಮಾಡುವದರ ಜೊತೆಗೆ ಇಂಥವರನ್ನು ಹುಡುಕಿ ತೆಗೆದು ಅವರನ್ನು ಸನ್ಮಾನ ಮಾಡಿದರೆ ಆ ಆಚರಣೆಗೊಂದು ಅರ್ಥವಾದರೂ ಸಿಕ್ಕೀತು. ಅಲ್ಲವೇ?

    -ಉದಯ್ ಇಟಗಿ

    ಈ ಲೇಖನ ಸಪ್ಟಂಬರ್ 5, 2011 ರ ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ. http://kendasampige.com/article.php?id=4703

    ಫೋಟೋಗಳು: ಶಿವರಾಜ್ ಗೌರಿಪೂರು