Demo image Demo image Demo image Demo image Demo image Demo image Demo image Demo image

ಸತ್ಯವೋ? ಮಿಥ್ಯವೋ?

  • ಮಂಗಳವಾರ, ಮಾರ್ಚ್ 31, 2009
  • ಬಿಸಿಲ ಹನಿ
  • ಜನರ ಮೂಢನಂಬಿಕೆಗೆ ಕಾರಣವಾಗಲಿ ತರ್ಕವಾಗಲಿ ಇಲ್ಲ. ಈ ನಂಬಿಕೆಗಳು ನಮಗೆ ಗೊತ್ತಿರುವಂತೆ ಬಹಳಷ್ಟು ಸಾರಿ ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿವೆ. ಮೂಢನಂಬಿಕೆಯ ಜನರು ಒಳ್ಳೆಯದಾಗಲೆಂದು ಅಥವಾ ಕೆಟ್ಟದ್ದು ಆಗದಿರಲೆಂದು ಅಥವಾ ಮುಂದೆ ಆಗುವ ಅವಘಡಗಳನ್ನು ತಪ್ಪಿಸಲೆಂದು ಈ ಆಚರಣೆಗಳನ್ನು ಪರಿಪಾಲಿಸುತ್ತಾ ಬಂದಿದ್ದಾರೆ. ಉದಾಹರಣೆಗೆ ಉಪ್ಪು ಚೆಲ್ಲಿದಾಗ ಮುಂದೆ ಕೆಡಕು ಆಗದಿರಲೆಂದು ಸ್ವಲ್ಪ ಉಪ್ಪನ್ನು ತೆಗೆದು ತಮ್ಮ ಎಡಭುಜದ ಮೇಲಿಂದ ಎಸೆಯುತ್ತಾರೆ.

    ಈ ಮೂಢನಂಬಿಕೆಗಳು ಹೇಗೆ ಪ್ರಚಲಿತವಾದವು? ಜನ ಅವುಗಳನ್ನು ಹೇಗೆ ಪಾಲಿಸುತ್ತಾ ಬಂದರು? ಅವು ಹೇಗೆ ತಮ್ಮ ಅದೃಷ್ಟವನ್ನು ನಿರ್ಧರಿಸಬಲ್ಲವು ಎಂದುಕೊಂಡರು?

    ಪ್ರಾಚೀನ ಕಾಲದಲ್ಲಿ ರೋಮ್, ಗ್ರೀಸ್ ಮತ್ತು ಸ್ಕ್ಯಾಂಡಿನ್ಯಾವಿಯಾದ ಜನರು ತಮ್ಮ ಬದುಕನ್ನು ಮತ್ತು ಇಡಿ ಪ್ರಕೃತಿಯನ್ನು ದೇವರು ನಿಯಂತ್ರಿಸುತ್ತಿದ್ದಾನೆ ಎಂದುಕೊಂಡಿದ್ದರು. ಹೀಗಾಗಿ ಅವರು ಕಾಣಿಕೆಗಳನ್ನು ಅರ್ಪಿಸುವದರ ಮೂಲಕ ಆದಷ್ಟು ತಮ್ಮ ದೇವರುಗಳನ್ನು ಖುಶಿಯಾಗಿಡಲು ಪ್ರಯತ್ನಿಸಿದರು. ಏನಾದರು ಪ್ರಕೃತಿ ವಿಕೋಪಗಳೆದ್ದಾಗ ಜನರು ತಮ್ಮ ಮೇಲೆ ಕೋಪಗೊಂಡಿದ್ದಾನೆ ಎಂದು ತಿಳಿದು ಪುನಃ ಅವನನ್ನು ಹರಕೆಗಳನ್ನು ತೀರಿಸುವದರ ಮೂಲಕ ತೃಪ್ತಿಪಡಿಸಲು ಪ್ರಯತ್ನಿಸಿದರು. ಹೀಗೆ ಕೆಲವು ಆಚರಣೆಗಳನ್ನು ಪಾಲಿಸುವದರಿಂದ ತಮ್ಮ ಹಣೆಬರಹವನ್ನು ಬದಲಾಯಿಸಬಹುದೆಂದು ನಂಬಿದ್ದರು.

    ಶತಮಾನದಿಂದಲೂ ಬಹಳಷ್ಟು ಮೂಡನಂಬಿಕೆಗಳು ಜಾರಿಯಲ್ಲಿವೆ. ಆದರೆ ಇಂದು ಜಗತ್ತಿನ ಅನೇಕ ಕಡೆ ಜನರು ದೇವರು ಇಲ್ಲವೆಂದು ವಾದಿಸುವಾಗ ಈ ಆಚರಣೆಗಳ ಪಾಲನೆ ದಿನೆದಿನೆ ಕಡಿಮೆಯಾಗುತ್ತಿದೆ. ದೇವರನ್ನು ಕಾಣಿಕೆ ಕೊಡುವದರ ಮೂಲಕ ತ್ರುಪ್ತಿಪಡಿಸುವ ಕಾರ್ಯ ಸಹ ನಿಲ್ಲುತ್ತಿದೆ. ಆದಾಗ್ಯೂ ಈ ನಂಬಿಕೆಗಳು, ಆಚರಣೆಗಳು ಇನ್ನೂ ನಮ್ಮೊಂದಿಗೆ ಮುಂದುವರಿಯುತ್ತಲೇ ಇವೆ.

    ಪುರಾತನ ಕಾಲದಲ್ಲಿ ಜನರು ದೆವರು ಬೆಟ್ಟ ಗುಡ್ದಗಳ ಮೇಲೆ ಇದ್ದಾನೆ, ತಮಗಿಂತ ಎತ್ತರದಲ್ಲಿರುವದೆಲ್ಲ ದೇವರಿಗೆ ಸುಲಭವಾಗಿ ಸಿಗುತ್ತದೆ ಎಂದುಕೊಂಡಿದ್ದರು. ಪಕ್ಷಿಗಳ ಬಗ್ಗೆಯೂ ಸಾಕಷ್ಟು ನಂಬಿಕೆಗಳಿದ್ದವು. ಪಕ್ಷಿಗಳು ದೇವರ ದೂತ, ತಾವು ಸತ್ತ ಮೇಲೆ ತಮ್ಮ ಆತ್ಮವನ್ನು ದೇವರೆಡೆಗೆ ಒಯ್ಯಬಲ್ಲಂಥ ಸಾಧನಗಳು ಎಂದು ಭಾವಿಸಿದ್ದರು. ಅಷ್ಟೇ ಅಲ್ಲದೆ ಕೆಲವು ಜನರು ಪಕ್ಷಿಗಳನ್ನು ಕೊಲ್ಲುವದು ದೇವರ ಇಚ್ಚೆಗೆ ವಿರುದ್ಧವಾಗಿದ್ದು ಅದು ತಮಗೆ ದುರಾದೃಷ್ಟವನ್ನು ತರುವದೆಂದು ತಿಳಿದಿದ್ದರು. ಅಮೆರಿಕಾದ ಕೆಲವು ಭಾಗಗಳಲ್ಲಿ ಈಗಲೂ ಜನ ಗೂಬೆಯೇನಾದರು ಸಾಯಂಕಾಲದ ಹೊತ್ತು ಕೂಗುವದನ್ನ್ನು ಕೇಳಿದರೆ ಅದು ಸಾವು ತರುವ ಸಂಕೇತವೆಂದು ನಂಬುತ್ತಾರೆ. ಇಂಥ ನಂಬಿಕೆಗಳಿಂದಲೇ “ಪಕ್ಷಿಯೊಂದು ಹೇಳಿತು” ಎನ್ನುವ ಇಂಗ್ಲೀಷ ಗಾದೆಯೊಂದು ಹುಟ್ಟಿಕೊಂಡಿದೆ. ಈಗೀಗ ಜನ ಪಕ್ಷಿಗಳನ್ನು ದೇವರ ದೂತ ಎಂದು ನಂಬದಿದ್ದರೂ ಯಾವುದಾದರೊಬ್ಬ ವ್ಯಕ್ತಿಯ ಗುಪ್ತಸಮಾಚಾರವನ್ನು ಕೇಳಿ ತಿಳಿದುಕೊಂಡಾಗ ಅದು ಹೇಗೆ ನಿಮಗೆ ಗೊತ್ತಾಯಿತು ಎಂದು ಅವರನ್ನು ಕೇಳಿದರೆ ಅವರು “ಪಕ್ಷಿಯೊಂದು ಹೇಳಿತು” ಎಂದು ಉಸುರುತ್ತಾರೆ.

    ನಮಗೆ ಪಕ್ಷಿಗಳು ಮಾತನಾಡುವದಿಲ್ಲವೆಂದೂ, ಗೂಬೆಗಳು ಸಾವನ್ನು ತರುವದಿಲ್ಲವೆಂದೂ ಗೊತ್ತಿದ್ದರೂ ಇಂಥ ನಂಬಿಕೆಗಳು ಇನ್ನೂ ನಮ್ಮಲ್ಲಿ ಹಾಗೆಯೇ ಉಳಿದಿವೆ. ಬಹಳಷ್ಟು ಸಮುದ್ರ ಯಾತ್ರಿಕರು ಮಾರ್ಗ ಮಧ್ಯದಲ್ಲಿ ಕಡಲ ಕೋಳಿಯನ್ನೇನಾದರು ನೋಡಿದರೆ ತಮ್ಮ ಹಡಗಿಗೆ ಏನೋ ಅಪಶಕುನ ಕಾದಿದೆ ಎಂದುಕೊಳ್ಳುತ್ತಾರೆ. ಜಗತ್ತಿನ ಅನೇಕ ಕಡೆ ಜನರು ಪಾರಿವಾಳವನ್ನು ಶಾಂತಿಯ ಸಂಕೇತವೆಂದೂ ಹಾಗೂ ಉತ್ತರ ಅಮೆರಿಕಾದ ನಿವಾಸಿಗಳು ಹದ್ದನ್ನು ಸ್ವಾತಂತ್ರ್ಯದ ಸಂಕೇತವೆಂದು ಬಣ್ಣಿಸುತ್ತಾರೆ.

    ಪುರಾತನ ಕಾಲದ ಜನರ ಮತ್ತೊಂದು ನಂಬಿಕೆ ಬೆಕ್ಕು. ಹಿಂದೆ ಈಜಿಪ್ಟಿನ ಜನರು ಬೆಕ್ಕುಗಳನ್ನು ಅವು ಬಹಳ ಜಾಣ ಮತ್ತು ವಿಶೇಷ ಶಕ್ತಿಯುಳ್ಳ ಪ್ರಾಣಿಗಳೆಂಬ ಕಾರಣಕ್ಕಾಗಿ ಪೂಜಿಸುತ್ತಿದ್ದರು. ಆದರೆ ಇಂದು ಬೆಕ್ಕುಗಳು ಮನುಷ್ಯರಿಗಿಂತ ಹೆಚ್ಚು ಸ್ವತಂತ್ರವಾಗಿರುವದರಿಂದ ಜನರ ತಿರಸ್ಕಾರಕ್ಕೆ ಗುರಿಯಾಗಿವಲ್ಲದೇ ಅವುಗಳ ಬಗ್ಗೆ ಕೆಲವು ಕುರುಡು ನಂಬಿಕೆಗಳು ಪ್ರಚಲಿತದಲ್ಲಿವೆ. ತುಂಬಾ ಜನರು ಕರಿಬೆಕ್ಕು ತಮ್ಮ ದಾರಿಗೆ ಅಡ್ದ ಹೋದರೆ ಅದು ಆ ದಿನದ ಅಶುಭದ ಲಕ್ಷಣ ಎಂದುಕೊಳ್ಳುತ್ತಾರೆ. ಆದರೆ ಇಂಗ್ಲೆಂಡ್‍ನಲ್ಲಿ ಕರಿಬೆಕ್ಕು ವ್ಯಕ್ತಿಯ ಕಡೆಗೇನಾದರೂ ಹೋದರೆ ಅವರಿಗದು ಶುಭದ ಸಂಕೇತ. ಕರಿಬೆಕ್ಕುಗಳು ಅದೃಷ್ಟವನ್ನು ತರತ್ತವೆಯೆಂಬ ಕಾರಣಕ್ಕಾಗಿ ಇಂಗ್ಲೀಷರು ಅವುಗಳನ್ನು ಸಾಕುತ್ತಾರೆ.

    ಪುರಾತನ ಕಾಲದಲ್ಲಿ ಜನರು ಚಂದ್ರನನ್ನು ಒಬ್ಬ ಮನುಷ್ಯನೆಂದು ತಿಳಿದಿದ್ದರು. ಅವನು ತನ್ನ ಆಕಾರದಲ್ಲಿ ಬದಲಾಗುವದನ್ನು ಕಂಡಿದ್ದರು. ಕಪ್ಪು ಆಗಸದಲ್ಲಿ ಚಂದ್ರ ಹೊಳೆಯುವ ವಸ್ತು ಆಗಿದ್ದರಿಂದ ಆತನನ್ನು “ಕಪ್ಪು ಆಗಸದ ರಾಣಿ” ಎಂದು ಕರೆದರು. ಚಂದ್ರನಿಗೆ ಮನಸ್ಸು ಇದೆಯೇ? ಇದ್ದರೆ ಅದು ಎಲ್ಲಿ ಹೋಯಿತು ಎಂದೆಲ್ಲಾ ಅಚ್ಚರಿಪಟ್ಟರು. ಜನರು ಕತ್ತಲಿನ ಬಗ್ಗೆ ಭಯವನ್ನು ಬೆಳೆಸಿಕೊಂಡಿದ್ದರಿಂದ ಚಂದ್ರನ ಪ್ರಕಾಶಮಾನ ಬೆಳಕು ಸ್ವಾಗತಾರ್ಹ ಮತ್ತು ಕುತೂಹಲಕಾರಿಯಾಗಿತ್ತು.

    ಇಂದಿಗೂ ಸಹ ಚಂದ್ರನ ಬಗ್ಗೆ ಭಯ ಮತ್ತು ಕುತೂಹಲಗಳು ನಮ್ಮಲ್ಲಿವೆ. ಇಂಥ ಭಾವನೆಗಳೇ ಚಂದ್ರನ ಜೀವಂತಿಕೆಯ ಬಗ್ಗೆ ಕುರುಹುಗಳಾಗಿ ಉಳಿದಿವೆ. ಮನೆ ಕಟ್ಟುವಾಗ, ಬೆಳೆಗಳನ್ನು ಬೆಳೆಯುವಾಗ, ಮದುವೆ ಮಾಡುವಾಗ ಜನರು ಚಂದ್ರನ ಸ್ಥಾನಬಲವನ್ನು ನೋಡಿಯೇ ಮಾಡುತ್ತಾರೆ. ಚಂದ್ರ ನಮ್ಮನ್ನು ಮೂರ್ಖನನ್ನಾಗಿ ಮಾಡಬಲ್ಲ ಎಂಬ ನಂಬಿಕೆಯಿತ್ತು. ಏಕೆಂದರೆ ಲ್ಯ್ಯಾಟಿನ್ ಭಾಷೆಯಲ್ಲಿ ಚಂದ್ರನಿಗೆ “ಲೂನಾ” ಎಂಬ ಶಬ್ಧವಿದೆ. ಅಂದರೆ “ಹುಚ್ಚ” ಅಥವಾ “ತಲೆಕೆಟ್ಟವ” ಎಂಬ ಅರ್ಥವಿದೆ. ಇಂದಿಗೂ ಸಹ ಕೆಲವು ಕಡೆ ಚಂದ್ರನ ಕೆಳಗೆ ಮಲಗಿದವರು ಬುದ್ಧಿವಿಕಲ್ಪಿತರಾಗುತ್ತಾರೆ ಎಂಬ ನಂಬಿಕೆಯಿದೆ.

    ಬಣ್ಣಗಳು ಮತ್ತು ಸಂಖ್ಯೆಗಳು ಸಹ ಮೂಢನಂಬಿಕೆಗಳ ಒಂದು ದೊಡ್ಡ ಭಾಗವಾಗಿವೆ. ಮಾಟಗಾತಿಯರ ಕಾಟದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೂ ತಮ್ಮ ಕನಸಗಳನ್ನು ನನಸಾಗಿಸಿಕೊಳ್ಳಲು ಜನರು ನೀಲಿಬಣ್ಣವನ್ನು ಉಪಯೋಗಿಸುವರು. ಕೆಂಪು ಬಣ್ಣವು ಕಾಯಿಲೆಯಿಂದ ಕಾಪಾಡುವ, ದುರಾದೃಷ್ಟವನ್ನು ಹೊಡೆದೋಡಿಸುವ ಬಣ್ಣವಾಗಿದೆ. ಹಸಿರು ಬಣ್ಣವು ಕೆಲವು ಸಾರಿ ದುರಾದೃಷ್ಟದ ಬಣ್ಣವಾಗಿದೆ. ಅದಕೆಂದೇ ನಟರು ನಾಟಕದಲ್ಲಿ ಹಸಿರು ಬಣ್ಣದ ಉಡುಪುಗಳನ್ನು ಧರಿಸುವದಿಲ್ಲ.

    ಇನ್ನು ಸಂಖ್ಯೆಗಳ ವಿಷಯದಲ್ಲಿ ಸರಿ ಸಂಖ್ಯೆಗಳಿಗಿಂತ ಬೆಸ ಸಂಖ್ಯೆಗಳು ಅದೃಷ್ಟವನ್ನು ತರುವ ಸಂಖ್ಯೆಗಳಾಗಿವೆ. ಮೂರು, ಏಳು, ಒಂಬತ್ತು ಸಂಖ್ಯೆಗಳನ್ನು ಅದೃಷ್ಟದ ಸಂಖ್ಯೆಗಳೆಂದು ಭಾವಿಸುತ್ತಾರೆ. ಆದರೆ ಹದಿಮೂರ ದುರಾದೃಷ್ಟದ ಸಂಖ್ಯೆಯಾಗಿದೆ. ಈ ಕಾರಣಕ್ಕಾಗಿ ಬಹಳಷ್ಟು ಕಡೆ ಹದಿಮೂರನೆ ಮಹಡಿಯಿರುವದಿಲ್ಲ.

    ಮೂಢನಂಬಿಕೆಗಳಲ್ಲಿ ನಂಬಿಕೆಯಿರದವರು ಸಹ ಅವುಗಳನ್ನು ತಮಗೆ ಗೊತ್ತಿಲ್ಲದಂತೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಯಾರಾದರು “ಈ ಚಳಿಗಾಲ ಪೂರ್ತಿ ನನಗೆ ಶೀತವೇ ಇರಲಿಲ್ಲ” ಎಂದು ಹೇಳಿದರೆ ತಕ್ಷಣ ಆ ವ್ಯಕ್ತಿ “ಅಯ್ಯೋ, ಹೋಯಿತು ಅನ್ನು” ಎಂದು ಕಟ್ಟಿಗೆಯಿಂದ ಮಾಡಿರುವ ವಸ್ತುವನ್ನು ಮುಟ್ಟಬಹುದು. ಮುಂದೆ ಆಗುವ ದುರ್ಘಟನೆಯನ್ನು ಊಹಿಸಿ ಮಾತನಾಡುವಾಗಲು ಸಹ ಆ ಘಟನೆ ಸಂಭವಿಸದಿರಲಿ ಎಂದು ಕಟ್ಟಿಗೆಯಿಂದ ಮಾಡಿರುವ ವಸ್ತುಗಳನ್ನು ಮುಟ್ಟುವ ವಾಡಿಕೆಯಿದೆ. ಈ ನಂಬಿಕೆ ಹೇಗೆ ಬಂದೆಂತೆಂದರೆ ಅನಾದಿಕಾಲದಿಂದಲೂ ಒಳ್ಳೆಯ ಪ್ರೇತಾತ್ಮಗಳು ಮರದಲ್ಲಿವೆ ಹಾಗೂ ಅವು ದುರ್ಘಟನೆಗಳನ್ನು ನಿಗ್ರಹಿಸಬಲ್ಲವು ಎಂದು ನಂಬಿದ್ದರಿಂದ ಮರವನ್ನು ಅಥವಾ ಮರದಿಂದ ಮಾಡಿದ ವಸ್ತುಗಳನ್ನು ಮುಟ್ಟುವ ಸಂಪ್ರದಾಯ ಬಂದಿತು.

    ಅದೇ ತರ ಮೂಢನಂಬಿಕೆಗಳಲ್ಲಿ ನಂಬಿಕೆಯಿರದ ಜನ ತ್ರಿಕೋನಗಳು ವಿಶೇಷ ಶಕ್ತಿಯುಳ್ಳ ವಸ್ತುಗಳೆಂದು ಅದರ ಬಾಹುಗಳನ್ನು ಬೇಧಿಸಲು ಹೆದರುತ್ತಾರೆ. ಏಣಿಯೇನಾದರು ಗೋಡೆಗೆ ಬಾಗಿಕೊಂಡಿದ್ದರೆ ಜನ ಅದರ ಕೆಳಗೆ ಓಡಾಡುವದಿಲ್ಲ. ಏಕೆಂದರೆ ಅದು ತ್ರಿಕೋನವನ್ನು ಮುರಿಯುತ್ತದೆ ಎಂಬ ಬಲವಾದ ನಂಬಿಕೆಯಿದೆ.

    ಏನೇ ಆಗಲಿ ನಾವೆಲ್ಲರೂ ಒಂದಲ್ಲ ಒಂದು ರೀತಿ ಮೂಢನಂಬಿಕೆಗಳನ್ನು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಪಾಲಿಸುತ್ತಾ ಬಂದಿರುವರು. ನಾವು ಎಷ್ಟೇ ವೈಜ್ಞಾನಿಕವಾಗಿ ಮುಂದುವರೆದಿದ್ದರೂ ನಮಗೆಲ್ಲರಿಗೂ ಮುಂದೆ ಏನಾಗಬಹುದೆಂದು ತಿಳಿಯುವ ಕುತೂಹಲ ಇದ್ದೇ ಇರುವದರಿಂದ ನಮಗರಿವಿಲ್ಲದಂತೆ ಈ ಆಚರಣೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವರು. ನಾವೆಲ್ಲಾ ೨೧ನೇ ಶತಮಾನದಲ್ಲಿರುವಾಗ, ಜಗತ್ತು ವಿಜ್ಞಾನಮಯವಾಗಿರುವಾಗ ಇನ್ನೂ ಏಕೆ ಈ ಪುರಾತನ ಕಾಲದ ನಂಬಿಕೆಗಳಿಗೆ ಅಂಟಿಕೊಂಡಿದ್ದೇವೆ? ಅದಕ್ಕೆ ಏನು ಕಾರಣ? ಈ ನಂಬಿಕೆಗಳೆಲ್ಲ ನಿಜವೆ? ಅವುಗಳಿಗೆ ಏನಾದರು ಆಧಾರವಿದೆಯೇ? ಈಗಲೂ ನಡೆಯುತ್ತವೆಯೇ? ಇಲ್ಲ ಇಲ್ಲ............. ಹಾಗಂತ ನಮಗೆ ಖಾತ್ರಿಯಿದೆಯೇ?

    ಇಂಗ್ಲೀಷನಿಂದ: ಚಾರ್ಲೋಟ್ ವಾರ್ಮನ್
    ಕನ್ನಡಕ್ಕೆ: ಉದಯ ಇಟಗಿ

    You are just not a ‘sex’

  • ಶನಿವಾರ, ಮಾರ್ಚ್ 28, 2009
  • ಬಿಸಿಲ ಹನಿ
  • Dreams will wait for none
    as they just go off by themselves with the end of sleep.
    Memories will never hold us back
    as they just fly away by themseves with our oblivious.
    Worries will never stay with us
    as they just squeeze and move on by themselves.
    Yesterdays will never wait for tomorrows arrival
    as they just disappear by themselves with days mornings.
    But I’ll always wait and wait by myself
    as I always crave for you.
    That’s why you’ll never vanish
    nor disappear from my heart
    as you are just not a ‘sex’ for me.

    From Kannada: K. Ganesh Kodur
    To English: Uday Itagi

    ನಾನು ಪ್ರೀತಿಸಿದರೆ..........

  • ಬಿಸಿಲ ಹನಿ
  • ನಾನು ಪ್ರೀತಿಸಿದರೆ...........
    ನಾನೇ ಕಾಲದ ಚಕ್ರಾಧಿಪತಿಯಾಗುವೆ
    ಇಡೀ ಭೂಮಂಡಲವೆಲ್ಲ ನನ್ನ ವಶವಾಗುತ್ತದೆ
    ಆಗ ಹೆಮ್ಮೆಯಿಂದ ಬೀಗುತ್ತಾ ಕುದರೆಯ ಮೇಲೆ
    ಸೂರ್ಯನೆಡೆಗೆ ಸವಾರಿ ಹೊರುಡುತ್ತೇನೆ.

    ನಾನು ಪ್ರೀತಿಸಿದರೆ...........
    ಉದಯಗಳ ಊರೇ ನಾನಾಗಿ
    ಜಗಕೆಲ್ಲ ಬೆಳಕನ್ನಿಡುವೆ
    ನನ್ನ ಕಿರು ಹೊತ್ತಿಗೆಯಲ್ಲಿ
    ಕವನಗಳಾಗಿ ಹಾಡುತ್ತಾ
    ಉನ್ಮಾದದ ಹೂದೋಟವಾಗುತ್ತೇನೆ.

    ನಾನು ಪ್ರೀತಿಸಿದರೆ........
    ಮಳೆ ಧೋ ಧೋ ಎಂದು ಸುರಿದು
    ನೀರು ಭೋರ್ಗರೆದು ಹರಿಯುತ್ತದೆ
    ಹುಲ್ಲು ಹುಲುಸಾಗಿ ಬೆಳೆಯುತ್ತದೆ.

    ನಾನು ಪ್ರೀತಿಸಿದರೆ..........
    ಗಿಡ ಮರಗಳೆದ್ದು ನನ್ನೆಡೆಗೆ ಬರುತ್ತವೆ
    ನಾನು ಕಾಲದಾಚೆಯ
    ಕಾಲವಾಗಿ ಕುಣಿಯುತ್ತೇನೆ.

    ಅರೇಬಿ ಮೂಲ: ನಿಜಾರ್ ಖಬ್ಬಾನಿ
    ಕನ್ನಡಕ್ಕೆ: ಉದಯ ಇಟಗಿ

    Nuances of Love

  • ಗುರುವಾರ, ಮಾರ್ಚ್ 26, 2009
  • ಬಿಸಿಲ ಹನಿ
  • Many days before our meeting
    I wish to come to you
    with many things to express.
    But actually when I meet you,
    I’ll really forget for what I’ve come
    and I’ll simply sit over there
    for hours together
    just with my dreams and a dazed mind
    witout telling anything to you.
    The hours pass on,
    the sun sets,
    and the day moves out.
    As usual you’ll also get back from me
    without reading my desires
    that glow in my eyes.
    At last
    the unasked questions,
    the unntold words ,
    and the unexpressed feelings
    all, all will stay with me only.
    And once again it will be
    set off to tomorrow.

    From Kannada: D. Kanakaraju
    To English: Uday Itagi

    ಹುಳು, ಹಕ್ಕಿಗಳನ್ನು ಬೆನ್ನಟ್ಟಿಹೋದವರಿಗೆ ಹೊನ್ನ ಕಿರೀಟದಂಥ ಪ್ರಶಸ್ತಿಗಳು ಬೆನ್ನಟ್ಟಿ ಬಂದವು!

  • ಭಾನುವಾರ, ಮಾರ್ಚ್ 22, 2009
  • ಬಿಸಿಲ ಹನಿ
  • ಲೇಬಲ್‌ಗಳು:
  • ಈಗ್ಗೆ ಒಂದು ತಿಂಗಳ ಹಿಂದೆಯಷ್ಟೇ ಒಬ್ಬರು ನನ್ನ ಬ್ಲಾಗಿಗೆ ಹೊಸದಾಗಿ ಭೇಟಿಕೊಟ್ಟು ಅಲ್ಲಿ ನಾನು ಪ್ರಕಟಿಸಿದ ಕವನವೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ “ಹೀಗೆ ಹಾರಾಡುತ್ತಾ ನಿಮ್ಮ ಬ್ಲಾಗಲ್ಲಿ ಬಿದ್ದೆ. ರವೀಂದ್ರನಾಥ ಟ್ಯಾಗೋರ್‌ರವರ ಕವನವನ್ನು ತುಂಬಾ ಚೆನ್ನಾಗಿ ಅನುವಾದಿಸಿದ್ದೀರಿ. ನನ್ನ ಬ್ಲಾಗಿಗೊಮ್ಮೆ ಬೇಟಿಕೊಡಿ. ಅಲ್ಲಿ ಒಂದಷ್ಟು ಚೆಂದದ ಫೋಟೊಗಳಿವೆ, ಲೇಖನಗಳಿವೆ. ಭೂಪಟಗಳಿವೆ, ಪುಟ್ಟ ಪುಟ್ಟ ಕತೆಗಳಿವೆ” ಎಂದು ಹೇಳಿದ್ದರು. ನಾನು ಎಂದಿನಂತೆ ಸಹಬ್ಲಾಗಿಗರು ಪ್ರತಿಕ್ರಿಯಿಸಿದಾಗ ಅವರಿಗೊಂದು ಧನ್ಯವಾದ ಹೇಳಿ ಸುಮ್ಮನಾಗುವಂತೆ ಸುಮ್ಮನಾಗುವದಾಗಲಿ, ಅಥವಾ ಅವರು ತಮ್ಮ ಬ್ಲಾಗನ್ನು ನೋಡಲು ಹೇಳಿದಾಗ ವಿಳಂಬಮಾಡುವಂತೆ ವಿಳಂಬ ಮಾಡುವದನ್ನಾಗಲಿ ಇವರ ವಿಷಯದಲ್ಲಿ ಮಾಡಲಿಲ್ಲ. ತಕ್ಷಣ ಅವರ ಬ್ಲಾಗಿಗೆ ಭೇಟಿಕೊಟ್ಟೆ. ಅದಕ್ಕೆ ಕಾರಣ- ಅದರಲ್ಲಿರುವ ಒಂದಷ್ಟು “ಚೆಂದನೆಯ ಫೋಟೋಗಳು”! ಹಾಗೂ ನನಗೂ ಫೋಟೊಗ್ರಾಫಿಯಲ್ಲಿ ಮೊದಲಿನಿಂದಲೂ ಅಲ್ಪ ಸ್ವಲ್ಪ ಆಸಕ್ತಿ ಇತ್ತಲ್ಲ? ಒಮ್ಮೆ ನೋಡೇ ಬಿಡುವಾ ಎಂದುಕೊಂಡು ಅವರ ಬ್ಲಾಗಿನೊಳಕ್ಕೆ ಇಣುಕಿದೆ. ಒಂದಷ್ಟು ತಮಾಷೆಯ ಲೇಖನಗಳನ್ನು ಓದುತ್ತಾ ಹೊಟ್ಟೆ ಹುಣ್ಣಾಗುವಷ್ಟು ನಗುವದರೊಂದಿಗೆ ಅಲ್ಲಿರುವ ಫೋಟೋಗಳನ್ನು ನೋಡಿ ನಿಬ್ಬೆರಗಾಗಿ ಹೋದೆ! ಅದ್ಭುತ ಪ್ರತಿಭೆಯೆಂದುಕೊಂಡೆ!

    ಈ ಮಧ್ಯ ನಾನು ಸುಮಾರು ಹದಿನೈದು ದಿವಸಗಳ ಕಾಲ ನನ್ನ ಫ್ಯಾಮಿಲಿ ವೀಸಾ ಕೆಲಸದ ನಿಮಿತ್ತ ನಾನಿರುವ ಜಾಗದಿಂದ ೬೫೦ ಕಿ.ಮೀ. ದೂರದಲ್ಲಿರುವ ಮೇನ್ ಕ್ಯಾಂಪಸ್ಗೆ ಹೋಗಬೇಕಾಗಿ ಬಂದಿದ್ದರಿಂದ ನನ್ನ ಬ್ಲಾಗಿನಲ್ಲಿ ಹೊಸತೇನನ್ನೂ ಬರೆದಿರಲಿಲ್ಲ. ಇದು ಒಂದು ನೆಪವಷ್ಟೆ! ಅದಕ್ಕೆ ನನ್ನ ಸೋಮಾರಿತನವೂ ಕಾರಣವಾಗಿತ್ತು ಎನ್ನಿ! ಹೀಗಾಗಿ ನನ್ನ ಬ್ಲಾಗ್ ಹಳೆಯದರಲ್ಲಿಯೇ ಕೊಳೆಯುತ್ತಾ ಬಿದ್ದಿತ್ತು! ಇದೇ ಸಂದರ್ಭದಲ್ಲಿ ಮತ್ತದೇ ವ್ಯಕ್ತಿ ನನ್ನ ಬ್ಲಾಗಿಗೆ ಭೇಟಿಕೊಟ್ಟು “ಹೊಸತೇನಾದರು ಇದೆ ಎಂದು ನಿಮ್ಮ ಬ್ಲಾಗಿಗೆ ಬಂದೆ. ಇರಲಿಲ್ಲ. ಬಹುಶಃ ಕೆಲಸದಲ್ಲಿ ಬ್ಯುಸಿ ಆಗಿರಬೇಕು. ಬಿಡುವು ಮಾಡಿಕೊಂಡು ಬರೆಯಿರಿ” ಎಂದು ಮತ್ತೊಂದು ಸಣ್ಣ ಕಾಮೆಂಟನ್ನು ಬಿಟ್ಟಿದ್ದರು. ನಾನು ವಾಪಾಸಾದ ಮೇಲೆ ಇವರ ಕಾಮೆಂಟನ್ನು ನೋಡಿ ಮೊಟ್ಟ ಮೊದಲಿಗೆ ಮಾಡಿದ ಕೆಲಸ ಬರೆಯಲು ಮುಂದಾದದ್ದು. ಒಂದೇ ವಾರದಲ್ಲಿ ಎರಡು ಲೇಖನಗಳನ್ನು ಹಾಗೂ ಎರಡು ಪದ್ಯಗಳನ್ನು ಅನುವಾದಿಸಿ ಪ್ರಕಟಿಸಿದೆ. ಅವತ್ತೇ ಇನ್ನುಮುಂದೆ ನಾನು ಬರವಣಿಗೆಯಲ್ಲಿ ಸದಾ ಕಾರ್ಯೋನ್ಮುಖನಾಗಿರಬೇಕೆಂದು ನಿರ್ಧರಿಸಿದೆ. ಒಂದು ಕ್ರಿಯಾಶೀಲ ಮನಸ್ಸು ಇನ್ನೊಂದು ಜೀವವನ್ನು ಕ್ರಿಯಾಶಿಲನನ್ನಾಗಿಸುವದೆಂದರೆ ಹೀಗೇನೇ! ಇಂಥ ಕ್ರಿಯಾಶಿಲ ಜೀವಗಳು ಪ್ರಶಸ್ತಿಗಳನ್ನು ಯಾವತ್ತಿಗೂ ಹುಡುಕಿಕೊಂಡು ಹೋಗುವದಿಲ್ಲ. ಅವು ತಾವೇ ತಾವಾಗಿ ಇವರನ್ನು ಹುಡುಕಿಕೊಂಡು ಬರುತ್ತವೆ. ಇದೀಗ ಆ ಪಟ್ಟಿಗೆ ಸೇರಿದ ಆ ಕ್ರಿಯಾಶೀಲ ಜೀವವೇ “ಛಾಯಾಕನ್ನಡಿ” ಬ್ಲಾಗಿನ ಒಡೆಯ, ಛಾಯಾಗ್ರಾಹಕ ಹಾಗೂ ಈ ಬಾರಿಯ ಲಂಡನ್ನಿನ ದಿ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯ ಅಂತರಾಷ್ಟ್ರೀಯ ಮಟ್ಟದ ಪುರಸ್ಕಾರವನ್ನು ತಮ್ಮದಾಗಿಸಿಕೊಂಡ ಬೆಂಗಳೂರಿನ ಕೆ.ಶಿವು. ಇವರೊಂದಿಗೆ ಇದೇ ಪ್ರಶಸ್ತಿಯನ್ನು ಹಂಚಿಕೊಡಿರುವ ಮತ್ತೊಬ್ಬ ಕನ್ನಡಿಗ, ಬ್ಲಾಗಿಗ, ಶಿಡ್ಲಘಟ್ಟದವರಾದ ಮಲ್ಲಿಕಾರ್ಜುನ ಡಿ.ಜಿ. ಯವರು.

    ಶಿವು ಕೆ ಮತ್ತು ಮಲ್ಲಿಕಾರ್ಜುನ ಡಿ.ಜಿ ಈ ಬಾರಿಯ ಲಡನ್ನಿನ ಪ್ರತಿಷ್ಟಿತ ದಿ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ (Associate) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಯಲ್ ಫೋಟೋಗ್ರಫಿ ಸೊಸೈಟಿಯ ಮನ್ನಣೆಗೆ ಪಾತ್ರರಾಗುವುದು ಹೆಮ್ಮೆಯ ಸಂಗತಿ.

    ಶಿವು ಪಿಕ್ಟೋರಿಯಲ್ ವಿಭಾಗದಲ್ಲಿ ಪಡೆದಿದ್ದರೆ, ಮಲ್ಲಿಕಾರ್ಜುನ ನೇಚರ್ ವಿಭಾಗದಲ್ಲಿ ಪಡೆದಿರುವರು.

    ಈ ಗೌರವಕ್ಕೆ ಪಾತ್ರರಾಗಲು ಬೇಕಾದ ಅಹ್ರತೆಗಳು:

    ಪಿಕ್ಟೋರಿಯಲ್ ಅಥವಾ ನೇಚರ್ ಈ ರೀತಿ ಒಂದೇ ವಿಷಯದ ಬೆನ್ನು ಬಿದ್ದು, ಹಲವು ವರ್ಷಗಳ ಸಾಧನೆ, ಪರಿಶ್ರಮವನ್ನು ತಮಗೆ ಬಂದಿರುವ ಅಂತರಾಷ್ಟ್ರೀಯ ಪ್ರಶಸ್ತಿಗಳ ಮೂಲಕ ನಿರೂಪಿಸಲು ಕನಿಷ್ಟ ಐದು ದೇಶಗಳಲ್ಲಿ ಛಾಯಾಚಿತ್ರಗಳು ಬಹುಮಾನ ಪಡೆದಿರಬೇಕು ಅಥವಾ ಪ್ರದರ್ಶನಗೊಂಡಿರಬೇಕು.

    ತಮ್ಮ ಹದಿನೈದು ಉತ್ತಮ ಚಿತ್ರಗಳನ್ನು ರಾಯಲ್ ಫೋಟೋಗ್ರಫಿ ಸೊಸೈಟಿಯವರಿಗೆ ಕಳಿಸಬೇಕು. ಅವನ್ನು ಅವರ ಕಮಿಟಿಯವ್ರು ಪರಿಶೀಲಿಸಿ ಅತ್ಯುತ್ತಮವಾಗಿದ್ದರೆ ಮಾತ್ರ ಈ ಗೌರವವನ್ನು ಪ್ರಧಾನ ಮಾಡುವರು.

    ೧೮೫೩ರಲ್ಲಿ ರಾಯಲ್ ಸೊಸೈಟಿಯಿಂದ ಇದುವರೆಗೂ ೧೩೨ ಭಾರತೀಯರು ಈ ಗೌರವಕ್ಕೆ ಪಾತ್ರರಗಿದ್ದಾರೆ. ಈ ವರ್ಷ ವಿಶ್ವದಾದ್ಯಂತ ಈ ಮನ್ನಣೆ ೨೯ ಜನ ಛಾಯಾಗ್ರಾಹಕರಿಗೆ ಸಿಕ್ಕಿದೆ. ಅದರಲ್ಲಿ ಭಾರತೀಯರು ಇವರಿಬ್ಬರು ಮಾತ್ರ.

    ಬೆಂಗಳೂರಿನಲ್ಲಿ ನ್ಯೂಸ್ ಪೇಪರ್ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಶಿವು ಫೋಟೋಗ್ರಾಫಿಯಲ್ಲಿ ಸಾಕಷ್ಟು ರಾಷ್ಟ್ರೀಯ ಪುರಸ್ಕಾರಗಳನ್ನು ಗೆದ್ದು ಇದೀಗ ಅಂತರಾಷ್ಟ್ರೀಯ ಪ್ರಶಸ್ತಿಯ ಗರಿಯನ್ನು ತಮ್ಮ ಮುಡಿಯಲ್ಲಿ ಸಿಕ್ಕಿಸಿಕೊಂಡಿದ್ದಾರೆ. ನಾನು ಅವರನ್ನು ಕಣ್ಣಾರೆ ಕಂಡಿಲ್ಲ, ಮಾತನಾಡಿಸಿಲ್ಲ. ದೂರದ ಲಿಬಿಯಾದಲ್ಲಿರುವ ನನಗೆ ಒಂದು ತಿಂಗಳ ಹಿಂದೆಯಷ್ಟೇ ಬ್ಲಾಗ್ ಲೋಕದ ಮೂಲಕ ಪರಿಚಯವಾದವರು. ಇಂದು ಬೆಳಿಗ್ಗೆ ಇವರಿಗೆ ಪ್ರಶಸ್ತಿ ಬಂದಿದ್ದನ್ನು ದಿನಪತ್ರಿಕೆಗಳಲ್ಲಿ ಓದಿ ಖುಶಿಯಾಗಿ ಇವರ ಮೇಲೆ ಒಂದು ಲೇಖನವನ್ನು ಬರೆಯೋಣವೆಂದುಕೊಂಡು ಬರೆಯತೊಡಗಿದೆ. ಯಾಕೋ ಇವರ ಬಗ್ಗೆ ಇರುವ ಮಾಹಿತಿ ಸಾಕೆನಿಸಲಿಲ್ಲ. ಸರಿ ಬ್ಲಾಗಲ್ಲಾದರೂ ಇವರ ಪರಿಚಯ ಸಿಗುತ್ತದಾ? ಎಂದು ನೋಡಿದರೆ ಅಲ್ಲಿ ಬರಿ ಶಿವು, ಬೆಂಗಳೂರು ಎಂದು ಮಾತ್ರ ಇತ್ತು. ಅವರನ್ನೇ ನೇರವಾಗಿ ಸಂಪರ್ಕಿಸಲು ನನ್ನ ಬಳಿ ಅವರ ಈಮೇಲ್ ಆಗಲಿ ಫೋನ್ ನಂಬರ್ ಆಗಲಿ ಇರಲಿಲ್ಲ. ಅವರ ಬ್ಲಾಗಿನೊಳಕ್ಕೆ ನುಗ್ಗಿ ಕಾಮೆಂಟು ಬಿಡುವ ಜಾಗದಲ್ಲಿ ನನ್ನ ಈಮೇಲ್ಗೆ ನಿಮ್ಮ ಬಗ್ಗೆ ಡಿಟೇಲ್ಸ್ ಕಳಿಸಿ ಎಂದಿದ್ದರೆ ಕಳಿಸುತ್ತಿದ್ದರೇನೋ. ಆದರೆ ನಾವು ಬರೆಯುವ ವ್ಯಕ್ತಿಯ ಬಗ್ಗೆ, ಅವರ ಸಾಧನೆಗಳ ಬಗ್ಗೆ ನಾವೇ ಖುದ್ದಾಗಿ ಬೇರೆ ಮೂಲಗಳಿಂದ ತಿಳಿದುಕೊಂಡು ಬರೆದರೆ ಚನ್ನಾಗಿರುತ್ತದೆ. ಅದು ಬಿಟ್ಟು “ನೀವೇನು ಮಾಡಿದ್ದೀರಿ? ಏನು ಸಾಧಿಸಿದ್ದೀರಿ?” ಎಂದು ಅವರನ್ನೇ ಕೇಳಿ ಅವರ ಬಗ್ಗೆ ಬರೆಯುವದು ನಮಗೆ ಅಭಾಸವೆನಿಸುತ್ತದೆ ಹಾಗೂ ಅವರಿಗೆ ಮುಜುಗುರವಾಗುತ್ತದೆ. ಹೀಗಾಗಿ ಆ ಯೋಚನೆಯನ್ನು ಕೈ ಬಿಟ್ಟು ಅವರ ಬ್ಲಾಗಲ್ಲಿ ಪ್ರಕಟವಾದ ಅವರ ಬರಹಗಳ ಆಧಾರದ ಮೇಲೆ ಅವರು ಎಂಥವರು ಎಂದು ಊಹಿಸುತ್ತಾ (ತಪ್ಪಿದ್ದರೆ ಅವರ ಕ್ಷಮೆ ಕೋರುತ್ತಾ) ಬರೆಯಬಲ್ಲೆ ಎಂದುಕೊಂಡೆ. ಎಷ್ಟೇ ಆಗಲಿ ನಮ್ಮ ಬರಹಗಳು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತವಲ್ಲವೆ?

    ಶಿವು ಒಬ್ಬ ಸ್ನೇಹ ಜೀವಿ. ಅದಕ್ಕೆ ಸಾಕ್ಷಿ ಅವರ ಬ್ಲಾಗಿನಲ್ಲಿ ಬರುವ ಕಾಮೆಂಟುಗಳ ಸಂಖ್ಯೆ. ಒಂದೊಂದು ಸಾರಿ ಅದು ನೂರನ್ನೂ ದಾಟುತ್ತದೆ. ಅಷ್ಟೂ ಜನಕ್ಕೆ ತಾಳ್ಮೆಯಿಂದ ಉತ್ತರಿಸುತ್ತಾರೆ. ಅಷ್ಟೇ ಅಲ್ಲದೆ ಅವರು ನಿರ್ವಹಿಸುವ ಬ್ಲಾಗುಗಳ ಸಂಖ್ಯೆಯೂ ದೊಡ್ಡದಿದೆ. ಅವರೆಲ್ಲರ ಬ್ಲಾಗಿನೊಳಕ್ಕೆ ನುಗ್ಗಿ ಅಲ್ಲೊಂದು ಕಾಮೆಂಟು ಬರೆಯುತ್ತಾರೆ. ಬರೆಯದೇ ಇದ್ದರೆ ಏಕೆ ಬರೆದಿಲ್ಲವೆಂದು ಕೇಳುತ್ತಾರೆ? ಬರೆಯುವಂತೆ ಹುರಿದುಂಬಿಸುತ್ತಾರೆ.

    ಇದೆಲ್ಲದರ ಜೊತೆಗೆ ತಮ್ಮ ಕೆಲಸದ ನಡುವೆಯೂ ತಮ್ಮ ಫೋಟೋಗ್ರಫಿಗೆ ಯಾವ ವಸ್ತು ಸಿಗಬಹುದೆಂದು ಹುಡುಕಿ ಹೊರಡುತ್ತಾರೆ. ಅದು ಹೇಗಿರುತ್ತದೆಂದು ಅವರ ಮಾತಲ್ಲೇ ಕೇಳಿ....

    “ನನ್ನ ಕೈಯಲ್ಲಿರುವ ಪೆನ್ನು "ಕನ್ನಡಪ್ರಭ” ದಿನಪತ್ರಿಕೆಯ ಮೊತ್ತವನ್ನು ಪೇಪರ್ ಬಿಲ್ಲಿನಲ್ಲಿ ಬರೆಯುತ್ತಿದ್ದರೂ ನನ್ನ ಕಣ್ಣು ಮಾತ್ರ ಆ ಗಿಡದ ಕಡೆಗಿತ್ತು. ಮತ್ತೇನಿಲ್ಲಾ ಸುಮ್ಮನೇ ಕುತೂಹಲ! ನಾನು ಯಾವುದೆ ಮನೆಯ ಬಾಗಿಲಿನ ಮುಂದೆ ನಿಂತರೂ ಅವರು ಮನೆಯ ಮುಂದೆ ವರಾಂಡದಲ್ಲಿ, ಕುಂಡಗಳಲ್ಲಿ ಹಾಕಿರುವ ಹೂವಿನ ಗಿಡಗಳ ಕಡೆ ಕಣ್ಣು ವಾಲಿರುತ್ತದೆ.
    ಗಿಡಗಳಲ್ಲಿರುವ ಹೂಗಳಿಗಿಂತ ಅದರ ಎಲೆಗಳು ನನ್ನನ್ನೂ ಹೆಚ್ಚಾಗಿ ಸೆಳೆಯುತ್ತವೆ. ಅದರಲ್ಲೂ ಅಂಗವಿಕಲ ಎಲೆಗಳು!! ಒಂದೆರಡು ಎಲೆಗಳು ಈ ರೀತಿ ಯಾವುದೇ ಗಿಡದಲ್ಲಿದ್ದರೂ ನನ್ನ ಕುತೂಹಲ ಬೆರಗಿನಿಂದ ಹೆಚ್ಚಾಗುತ್ತದೆ. ಹತ್ತಿರ ಹೋಗಿ ಎಲೆಯ ಕೆಳಬಾಗದಲ್ಲಿ ನೋಡಿದರೆ ಯಾವುದಾದರೂ ಒಂದು ಹುಳು [ಕ್ಯಾಟರ್‌ಪಿಲ್ಲರ್] ಅದೇ ಎಲೆಯನ್ನೇ ತಿನ್ನುತ್ತಿರುತ್ತದೆ.ಇಷ್ಟಾದರೇ ಸಾಕು.....ಅಲ್ಲಿಂದ ಶುರುವಾಗುತ್ತದೆ ನನ್ನ ಹೊಸ ಅಸೈನ್ಮೆಂಟ್! ಮನೆಗೆ ಬಂದು ನನ್ನ ಬಳಿ ಇರುವ ಹುಳುಗಳ ಪುಸ್ತಕಗಳಿಂದ ಗಿಡದ ಹೆಸರು, ಹುಳುವಿನ ಬಣ್ಣ ಆಕಾರ ನೋಡಿ ತಿಳಿದ ಮಾಹಿತಿಯಿಂದ ನನ್ನ ಕ್ಯಾಮೆರಾ ಜಾಗ್ರುತವಾಗುತ್ತದೆ.”

    ಇನ್ನು ಅವರ ಕೆಲಸದ ಶ್ರದ್ಧೆ ಹೇಗಿದೆ ಎಂದು ಒಮ್ಮೆ ನೋಡಿ...........

    “ಹೀಗೆ ಗಮನ ಸೆಳೆದ ಆ ಮನೆಯ ಕಾಂಪೌಂಡಿನಲ್ಲೇ ಬೆಳೆದಿದ್ದ ನುಗ್ಗೆ ಎಲೆಯಷ್ಟೆ ಚಿಕ್ಕದಾದ ಹಸಿರೆಲೆಗಳನ್ನು ತನ್ನ ಕಾಂಡಗಳ ತುಂಬಾ ತುಂಬಿಕೊಂಡಿದ್ದ ಆ ಮನೆಯವರು ನನ್ನ ಕೈಯಿಂದ ರಸೀತಿ ಪಡೆಯುವಾಗ ನನ್ನ ಗಮನ ಸೆಳೆದಿತ್ತು ಆ ಮುಳ್ಳಿನ ಗಿಡ. ಹಣ ತರಲು ಒಳಹೋದ ಮೇಲೆ ನಾನು ಕೆಳಗೆ ಕುಳಿತು ನಿಧಾನವಾಗಿ ನೋಡಿದರೆ ಹಸಿರು ಬಣ್ಣದ ಹತ್ತಾರು ಹುಳುಗಳು ಗಿಡದ ಎಲೆಗಳ ಮೇಲೆ ಕೆಳಗೆ ಬಸವನ ಹುಳುವಿನ ವೇಗದಲ್ಲಿ ಹರಿದಾಡುತ್ತಾ ಅದೇ ಎಲೆಗಳನ್ನೇ ತಿನ್ನುತ್ತಿವೆ. ತಕ್ಷಣ ನೋಡಿದರೆ ಎಲೆಯಾವುದು ಹುಳುಯಾವುದು ಎಂದು ಗೊತ್ತಾಗದ ಹಾಗೆ ಎಲೆಗಳ ಜೊತೆಗೆ ಕೋಮೊಪ್ಲೇಜ್ ಆಗಿವೆ. ಇದು ಅವುಗಳ ಪ್ರೆಡೇಟರುಗಳಾದ, ಜೇಡ, ಪ್ರೈಯಿಂಗ್ ಮ್ಯಾಂಟಿಸ್, ದುಂಬಿಗಳು, ಮತ್ತು ಇತರ ಪಕ್ಷಿಗಳಿಂದ ರಕ್ಷಿಸಿಕೊಳ್ಳಲು ದೇವರ ಸಹಜ ಸೃಷ್ಟಿ!!”

    ಸ್ರಜನಶೀಲ ಕೆಲಸವೆಂದರೆ ಇದೇ ಅಲ್ಲವೆ? ಅವರು ಅದನ್ನು ಸ್ರಜನಶೀಲವನ್ನಾಗಿಸಲು ಎಷ್ಟೊಂದು ಕಷ್ಟಪಡುತ್ತಾರಲ್ಲವೆ? ಹಾಗೆಂದೇ ಅವರನ್ನು ಪ್ರಶಸ್ತಿಗಳು ಬೆನ್ನಟ್ಟಿ ಬರುತ್ತವೆ. ಮತ್ತಷ್ಟು ತಿಳಿಯಲು ಹಾಗೂ ಅವರ ಕ್ಯಾಮರಾ ಕಣ್ಣಲ್ಲಿ ಸೆರೆ ಸಿಕ್ಕ ಅತಿ ಸುಂದರ ಚಿತ್ರಗಳನ್ನು ನೋಡಲು ಅವರ ಬ್ಲಾಗಿಗೊಮ್ಮೆ http://chaayakannadi.blogspot.com/ ಭೇಟಿ ಕೊಡಿ.

    ಸಮಾನ ವಯಸ್ಸಿನವರು, ಸಮಾನ ಮನಸ್ಕಿನವರು ಕೂಡಿದರೆ ಏನೆಲ್ಲ ಸಾಧಿಸಬಹುದು ಎನ್ನುವದಕ್ಕೆ ಶಿವು, ಮತ್ತವರ ಆಪ್ತ ಸ್ನೇಹಿತ ಮಲ್ಲಿಕಾರ್ಜುನವರೇ ಸಾಕ್ಷಿ! ಶಿವು ಒಟ್ಟಿಗೆ ಮಲ್ಲಿಕಾರ್ಜುನವರು ಸಹ ಈ ಬಾರಿಯ ಲಡನ್ನಿನ ಪ್ರತಿಷ್ಟಿತ ದಿ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ (Associate) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇಬ್ಬರು ಸ್ನೇಹಿತರು ಒಟ್ಟಿಗೇ ಪ್ರಶಸ್ತಿ ಪಡೆಯುವದು ತುಂಬಾ ವಿರಳ. ಆದರೆ ಇವರಿಬ್ಬರ ವಿಷಯದಲ್ಲಿ ಅದು ಸತ್ಯವಾಗಿದೆ! ಚಿಕ್ಕಬಳ್ಳಾಪೂರದ ಶಿಡ್ಲಘಟ್ಟದವರಾದ ಮಲ್ಲಿಕಾರ್ಜುನವರಿಗೆ ಮೊದಲಿನಿಂದಲೂ ಫೋಟೋಗ್ರಾಫಿಯತ್ತ ಒಲವು. ಹಕ್ಕಿಗಳ ಬದುಕಿನ ರೀತಿ, ಅವುಗಳ ಪ್ರೇಮಸಲ್ಲಾಪವನ್ನು ಗಂಟೆಗಟ್ಟಲೆ ತಾಳ್ಮೆಯಿಂದ ಕಾಯ್ದು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಅವುಗಳೆಲ್ಲವನ್ನು ಅವರ ಬ್ಲಾಗಿನಲ್ಲಿ http://dgmalliphotos.blogspot.com/ ನೋಡಬಹುದು.

    ಶಿವು ಅವರಂತೆ ಇವರಿಗೂ ತಮ್ಮ ಕೆಲಸದಲ್ಲಿ ವಿಶೇಷ ಆಸಕ್ತಿ ಶ್ರದ್ಧೆ ಇದೆ. ತಮ್ಮ ದಿನನಿತ್ಯದ ಜಂಜಾಟಗಳ ನಡುವೆಯೂ ಹಕ್ಕಿಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಲು ಬೆನ್ನಟ್ಟಿ ಹೋಗುತ್ತಾರೆ. ಈ ಅನುಭವಗಳನ್ನು ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ. ಒಮ್ಮೆ ಓದಿ......

    “ದೊಡ್ಡಬಳ್ಳಾಪೂರ ಹತ್ತಿರವಾಗುತ್ತಿತ್ತು. ಕಿರ್ ಕಿರ್ರೋ ಎಂದು ಶಬ್ದ ಮಾಡುತ್ತಾ ಹಕ್ಕಿಗಳು ಹಾರಿ ರಸ್ತೆಯ ಎಡದ ಮರದಿಂದ ಬಲದ ಮರಕ್ಕೆ ಹಾರಿದ್ದು ಕಾಣಿಸಿತು. ತಕ್ಷಣ ಕಾರನ್ನು ರಸ್ತೆ ಬದಿ ನಿಲ್ಲಿಸಿದೆ. ನೋಡಿದರೆ ಮರದ ಮೇಲೆ ಜೋಡಿ ಹಕ್ಕಿಗಳು ಕೂತಿವೆ..............
    ಫೋಟೊ ತೆಗೆದು ದೇವಸ್ಥಾನದ ಬಾಗಿಲು ಹಾಕಿದರೆ ಕಷ್ಟ ಎಂದುಕೊಂದು ಹೊರಟೆವು”

    ಇದಲ್ಲದೆ ಇವರಿಗೆ ಸಾಹಿತ್ಯದಲ್ಲೂ ವಿಶೇಷ ಆಸಕ್ತಿ! ಪ್ರಸಿದ್ಧ ಸಾಹಿತಗಳ ಫೋಟೊಗಳನ್ನು ತೆಗೆದು ಅವರ ಹಸ್ತಾಕ್ಷರ ಸಮೇತ ಅವುಗಳನ್ನು ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಾರೆ.

    ಕ್ರಪಾಕರ ಸೇನಾನಿಯ ನಂತರ ಈ ಜೋಡಿಗಳನ್ನು ಫೋಟೋಗ್ರಾಫಿಯ “ಹಕ್ಕ ಬುಕ್ಕ” ರೆಂದೇ ಕರೆಯುತ್ತಾರೆ. ಈ ಹಕ್ಕ ಬುಕ್ಕರನ್ನು ಮತ್ತಷ್ಟು ಪ್ರಶಸ್ತಿಗಳು ಹುಡುಕಿಕೊಂಡು ಬರಲಿ, ಹಾಗೂ ಅವರ ಸಾಧನೆ ಹೀಗೆ ಮುಂದುವರೆಯಲಿ ಎಂದು ಹಾರೈಸುತ್ತಾ ಅವರಿಗೆ ಎಲ್ಲ ಬ್ಲಾಗಿಗರ ಪರವಾಗಿ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

    -ಉದಯ ಇಟಗಿ
    ಕ್ರುಪೆ: 1) http://avadhi.wordpress.com/
    2) http://chaayakannadi.blogspot.com/
    3) http://dgmalliphotos.blogspot.com/

    ದೋಣಿಯಾಟ

  • ಶುಕ್ರವಾರ, ಮಾರ್ಚ್ 20, 2009
  • ಬಿಸಿಲ ಹನಿ
  • ಲೇಬಲ್‌ಗಳು:
  • ನಾನು ಮೊನ್ನೆಯಷ್ಟೇ ರಬಿಂದ್ರನಾಥ್ ಟ್ಯಾಗೋರರ “ಆಟಿಕೆಗಳು” ಕವನವನ್ನು ಅನುವಾದಿಸಿ ನನ್ನ ಬ್ಲಾಗಲ್ಲಿ ಪ್ರಕಟಿಸಿದ್ದೆ ಕೂಡ. ಈಗ ಅವರದೇ ಇನ್ನೊಂದು ಕವನ “ಕಾಗದದ ದೋಣಿಗಳು” ನ್ನು ಅನುವಾದಿಸಲು ಕೈಗೆತ್ತಿಕೊಂಡಂತೆ ಕವನದೊಂದಿಗೆ ನನ್ನ ಬಾಲ್ಯದ ನೆನಪುಗಳು ಮೆಲ್ಲಮೆಲ್ಲಗೆ ಹೊರಬಂದು ಗರಿ ಬಿಚ್ಚಿ ಕುಣಿಯತೊಡಗಿದವು. ಕವನದ ಒಳಸತ್ವವನ್ನು ಹೀರಿ ಅನುವಾದಿಸಲು ಮತ್ತೆ ಮತ್ತೆ ಓದುತ್ತಾಹೋದಂತೆ “ಅರೆ, ಹೌದಲ್ಲ! ಇದು ನಾನೇ. ನನ್ನದೇ ಆಟ. ನಾನೂ ಹೀಗೆ ಆಡುತ್ತಿದ್ದೆನಲ್ಲ?” ಎಂದೆನಿಸತೊಡಗಿತು. ಕವಿಯ ಬಾಲ್ಯದ ನೆನಪುಗಳಿಗೂ, ನನ್ನ ಬಾಲ್ಯದ ನೆನಪುಗಳಿಗೂ ಎಷ್ಟೊಂದು ಸಾಮ್ಯ! ನನಗೊಬ್ಬನಿಗೆ ಏನು? ನನ್ನಂತೆ ಹಳ್ಳಿಗಾಡಿನಲ್ಲಿ ಬೆಳೆದ ಬಹಳಷ್ಟು ಜನಕ್ಕೆ ಇದೆ ತರದ ಅನುಭವಗಳು, ನೆನಪುಗಳು ಇರಲಿಕ್ಕುಂಟು! ಈ ಮಳೆ, ಕಾಗದದ ದೋಣಿ, ನದಿಗಳೊಂದಿಗೆ ತೆರೆದುಕೊಳ್ಳುವ ನೆನಪುಗಳನ್ನು ಸುಮ್ಮನೆ ಬೆನ್ನಟ್ಟಿಹೋದೆ. ಅಲ್ಲಿ ಏನೇನೆಲ್ಲ ಇತ್ತು? ಒಂದಷ್ಟು ಹುಡುಗು ಮನಸ್ಸಿನ ಮಧುರ ಕಲ್ಪನೆಗಳಿದ್ದವು, ಕನಸುಗಳಿದ್ದವು ಹಾಗೂ ಸಮುದ್ರವನ್ನು ಹೋಗಿ ಸೇರಲೇಬೇಕೆಂಬ ವಾಸ್ತವ ಭ್ರಮೆಯ ಗುರಿಯಿತ್ತು. ಇದರ ಬೆನ್ನಹಿಂದೆಯೇ ವಿವಿಧ ರೂಪಗಳಲ್ಲಿ ಬಂದೆರಗುವ ನಿರಾಶೆಗಳಿದ್ದವು, ನುಚ್ಚುನೂರಾದ ಕನಸುಗಳಿದ್ದವು, ಸೋಲಿನ ವಿಷಾದವಿತ್ತು ಹಾಗೂ ಇದೆಲ್ಲವನ್ನು ತೆಕ್ಕೆಗೆ ತೆಗೆದುಕೊಂಡು ಮತ್ತದೇ ಕನಸುಗಳನ್ನು ಬೆನ್ನಟ್ಟಿ ಗೆದ್ದೇತೀರುತ್ತೇನೆಂಬ ಛಲವಿತ್ತು.

    ಕವಿಯು ಪ್ರತಿದಿನವೂ ಕಾಗದದ ದೋಣಿಗಳನ್ನು ಮಾಡಿ ಅವುಗಳ ಮೇಲೆ ತನ್ನ ಹೆಸರು ಮತ್ತು ತಾನಿರುವ ಊರಿನ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಬರೆದು ಹರಿವ ಹೊಳೆಯಲ್ಲಿ ತೇಲಿಬಿಡುತ್ತಾನೆ. ತನ್ನ ಹೆಸರು ಮತ್ತು ತಾನಿರುವ ಊರಿನ ಹೆಸರನ್ನು ಬರೆಯುವದೇಕೆಂದರೆ ಅದು ದೂರದ ನಾಡಿನವರಿಗೆ ಯಾರಿಗಾದರೂ ಸಿಕ್ಕಿ ಅವರಿಗೆ ತಾನಾರೆಂದು ಗೊತ್ತಾಗಲಿ ಎನ್ನುವ ದೂರದ ಆಸೆ. ಆ ಮೂಲಕ ತನ್ನತನವನ್ನು, ತನ್ನ ಅಸ್ಥಿತ್ವವನ್ನು ಖಾತ್ರಿಪಡಿಸುವ ಅಥವಾ ಭದ್ರವಾಗಿ ನೆಲೆಯೂರಿಸುವಾಸೆ. ಹೀಗೆ ಸಣ್ಣದಾಗಿ ಆರಂಭವಾಗುವ “Identity Crisis” ಮುಂದೊಂದು ದಿನ ಎಷ್ಟೊಂದು ದೊಡ್ಡದಾಗಿ ಬೆಳೆದುಬಿಡತ್ತದಲ್ಲ ಎಂದು ನಾನು ಅಚ್ಚರಿಪಟ್ಟಿದ್ದಿದೆ. ಹೀಗೆ ತೇಲೆಬಿಟ್ಟ ದೋಣಿಯನ್ನು ಸುಮ್ಮನೆ ಕಳಿಸಿಕೊಡಲಾದೀತೆ? ಅದನ್ನು ಒಂದಿಷ್ಟು ಅಂದವಾಗಿ ಚೆಂದವಾಗಿ ಕಳಿಸಿಕೊಡಬೇಡವೆ? ಹಾಗಾಗಿ ಅದರಲ್ಲೊಂದಿಷ್ಟು ಮನೆಯ ತೋಟದಲ್ಲಿ ಬೆಳೆದ ಪಾರಿಜಾತದ ಹೂಗಳನ್ನು ತುಂಬಿ ಸುರಕ್ಷಿತವಾಗಿ ಕಳಿಸಿಕೊಡುತ್ತಾನೆ. ತೇಲಿಬಿಟ್ಟ ನಂತರ ಆಕಾಶದೆಡೆಗೆ ನೋಡುತ್ತಾನೆ. ಮೋಡಗಳದಾಗಲೇ ದೋಣಿಗಳೊಂದಿಗೆ ವಿಹರಿಸಲು ತಯಾರಿ ನಡೆಸುತ್ತಿವೆ. ಕವಿಯ ಖುಶಿ ಇಮ್ಮುಡಿಯಾಗುತ್ತದೆ. ಕತ್ತಲಾಗುತ್ತಿದ್ದಂತೆ ತನ್ನ ಬಾಹುಗಳಲ್ಲಿ ಮುಖವನ್ನು ಹುದುಗಿಸಿ ದೋಣಿಗಳು ಯಕ್ಷಿಣಿಯರನ್ನು ಹಾಗೂ ಅವರ ಕನಸ ಬುಟ್ಟಿಗಳನ್ನು ಹೊತ್ತು ದೂರ ದೂರ ಸಾಗುತ್ತಿರುವಂತೆ ಕನಸು ಕಾಣುತ್ತಾನೆ. ಅಲ್ಲಿಗೆ ಕವನ ಮುಗಿಯುತ್ತದೆ. ಇದು ನಮ್ಮಂಥ ದೊಡ್ಡವರಿಗೆ ತೀರ ಬಾಲಿಶ ಎನಿಸಬಹುದಾದರೂ ಮಕ್ಕಳಿಗೆ ಇಷ್ಟವಾಗುವ ಪದ್ಯ. ಕನಸುಗಳನ್ನು ತಂದುಕೊಡುವ ಆಟಗಳು ಹಾಗೂ ಆ ತರದ ಪದ್ಯಗಳು ಯಾವ ಮಕ್ಕಳಿಗೆ ತಾನೆ ಇಷ್ಟವಾಗುವದಿಲ್ಲ?

    ಟ್ಯಾಗೋರರು ಇದನ್ನು ಬರೆದು ಕೆಲವು ವರ್ಷಗಳ ನಂತರ “ಕಾಗದದ ದೋಣಿ” ಎನ್ನುವ ಮತ್ತೊಂದು ಗಂಭೀರ ಪದ್ಯವನ್ನು ಬರೆದರು. ಇದನ್ನು ಬರೆಯುವಾಗ ಜೀವನದಲ್ಲಿ ಅವರು ಸಾಕಷ್ಟು ಮಳೆ, ಗಾಳಿ, ಬಿಸಿಲುಗಳನ್ನು ಉಂಡಿದ್ದರು. ಇಂಥ ಎಲ್ಲ ಅನುಭವಗಳ ಪಕ್ವದ ಹಿನ್ನೆಲೆಯಲ್ಲಿಯೇ ಈ ಕವನ ಹೊರಬಂದಿದ್ದು.

    ಕವನ ಆರಂಭವಾಗುವದೇ ಕವಿಯ ಬಾಲ್ಯದ ದೋಣಿಯಾಟದ ನೆನಪುಗಳೊಂದಿಗೆ. ಒಂದು ಮಳೆಗಾಲದ ದಿನ ರಾಡಿ ನೀರಲ್ಲಿ ಕಾಗದದ ದೋಣಿಗಳನ್ನು ಮಾಡಿ ತೇಲಿಬಿಡುತ್ತಿದ್ದಾನೆ. ಅವು ತೇಲುತ್ತಾ ತೇಲುತ್ತಾ ದೂರ ದೂರ ಸಾಗುವದನ್ನು ನೋಡಿ ಮನದಣಿಯುತ್ತಾನೆ. ಸೇರಬೇಕಾದವರನ್ನು ಸೇರುತ್ತವೆ ಎಂದು ನಿರೀಕ್ಷಿಸುತ್ತಾನೆ. ಆದರೆ ಈ ಖುಶಿ ನಾಶವಾಗಲು ಎಷ್ಟು ಹೊತ್ತು? ಇದ್ದಕ್ಕಿದ್ದಂತೆ ಆಗಸದಲ್ಲಿ ಮೋಡಗಳು ದಟೈಸಿ ಮಳೆ ಧಾರಾಕಾರವಾಗಿ ಸುರಿದು ದೋಣಿಯನ್ನು ಮುಳುಗಿಸಿಬಿಡುತ್ತದೆ. ಕವಿಯ ಕಲ್ಪನೆ, ಕನಸುಗಳೆಲ್ಲವೂ ನುಚ್ಚುನೂರಾಗುತ್ತವೆ. ಕವಿಗೆ ಕೋಪ, ಹತಾಶೆ, ದುಃಖ ಒಟ್ಟಿಗೆ ಆವರಿಸುತ್ತವೆ. ಮಳೆಗೆ ಹಿಡಿಶಾಪ ಹಾಕುತ್ತಾನೆ. ತನ್ನ ಸಂತೋಷವನ್ನೆಲ್ಲ ಕಿತ್ತುಕೊಂಡ ಪಾಪಿ ಎಂದು ಜರೆಯುತ್ತಾನೆ. ಈ ಮಳೆಯು ತಾನು ಖುಶಿಯಾಗಿ ಆಡುತ್ತಿರುವದನ್ನು ಕಂಡು ಹೊಟ್ಟೆಕಿಚ್ಚಿನಿಂದ ಇಡಿ ಭೂಮಿಯ ಮೇಲಿನ ಸೇಡನ್ನು ತನ್ನೊಬ್ಬನ ವಿರುದ್ಧ ಮಾತ್ರವೇ ತೀರಿಸಿಕೊಳ್ಳಲು ಬಂದ ದುಷ್ಟಶಕ್ತಿಯೆಂದು ಭಾವಿಸುತ್ತಾನೆ. ಒಬ್ಬನೇ ಕುಳಿತು ರೋಧಿಸುತ್ತಾನೆ.

    ಇದೀಗ ಕವಿ ಬೆಳೆದು ದೊಡ್ದವನಾಗಿದ್ದಾನೆ. ಜುಲೈ ತಿಂಗಳಿನ ಒಂದು ಮಳೆಗಾಲದ ದಿನ ಕವಿ ಹೊರಗಡೆ ಕುಳಿತುಕೊಡಿದ್ದಾನೆ. ಮಳೆ ಬೀಳತೊಡಗುತ್ತದೆ. ಆ ಮಳೆಯ ಹನಿಗಳೊಂದಿಗೆ ಅವನ ನೆನಪಿನ ಹನಿಗಳೂ ಬೀಳತೊಡಗುತ್ತವೆ. ಮತ್ತೆ ಅವನ ದೋಣಿಯಾಟ ನೆನಪಾಗುತ್ತದೆ. ಅಂದು ಯಾವುದನ್ನು ಹುಡುಗುತನದಲ್ಲಿ ಪಾಪಿ, ದುಷ್ಟಶಕ್ತಿಯೆಂದು ಕರೆದಿದ್ದನೋ ಇಂದು ಅದನ್ನು ತನ್ನ ಪಕ್ವಗೊಂಡ ಬೌದ್ಧಿಕ ನೆಲೆಯಲ್ಲಿ ತೂಗಿ ನೋಡುತ್ತಾನೆ. ಜೀವನದಲ್ಲಿ ಇಂಥ ಹೊಡೆತಗಳು ಸರ್ವೇಸಾಮಾನ್ಯ ಅವುಗಳನ್ನು ಬಂದಂತೆ ಬಂದಹಾಗೆ ಸ್ವೀಕರಿಸುತ್ತಾ ಹೋಗಬೇಕೆಂಬ ನಿರ್ಣಯವನ್ನು ತಳೆಯುತ್ತಾನೆ. ಮುಂದೆ ಎಂದೋ ಬರುವ ಜೀವನದ ಹೊಡೆತಗಳನ್ನು, ಸೋಲುಗಳನ್ನು ಸ್ವೀಕರಿಸಲು ಬಾಲ್ಯದಿಂದಲೇ ಒಂದು ರೀತಿಯ ಮಾನಸಿಕ ತಯಾರಿಯನ್ನು ನಡೆಸಲು ಹೇಳಿಕೊಟ್ಟ ಈ ದೋಣಿಯಾಟಕ್ಕೆ ಥ್ಯಾಂಕ್ಸ್ ಹೇಳುತ್ತಾನೆ.

    ನನ್ನ ಬಾಲ್ಯವೂ ಹೀಗೆ ಇತ್ತಲ್ಲವೆ? ಆಗ ತಾನೆ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಗಿರುತ್ತಿತ್ತು. ರಜೆಯಲ್ಲಿ ಒಂದೊಂದೇ ಆಟಗಳನ್ನು ಆಡಿ ಮುಗಿಸುತ್ತಿದ್ದಂತೆ ಮುಂಗಾರು ಮಳೆ ಕಾಲಿಟ್ಟಿರುತ್ತಿತ್ತು. ಆಗೊಮ್ಮೆ ಈಗೊಮ್ಮೆ ಬರುವ ಮುಂಗಾರು ಮಳೆಯ ಮುನ್ಸೂಚನೆಯೆಂದರೆ ಆಗಸದಲ್ಲಿ ಮೋಡಗಳು ಕಪ್ಪಾಗುವದು. ಹೀಗೆ ಕಪ್ಪಾಗುವದನ್ನೇ ಕಾಯುತ್ತಿದ್ದ ನಾವು ಕಾಗದದ ದೋಣಿಗಳನ್ನು ಮಾಡಿಟ್ಟುಕೊಂಡು ಸಜ್ಜಾಗಿರುತ್ತಿದ್ದೆವು. ಅವುಗಳ ಮೇಲೆ ನಮ್ಮ ಹೆಸರನ್ನು ಬರೆಯುವದನ್ನು ಎಂದಿಗೂ ಮರೆಯುತ್ತಿರಲಿಲ್ಲ. ಮಳೆ ಹನಿದು ನಿಂತ ಮೇಲೆ ಅಥವಾ ಒಂದೊಂದು ಸಾರಿ ಜಿಟಿ ಜಿಟಿ ಮಳೆಯಲ್ಲಿಯೇ ಅಂಗಳಕ್ಕೆ ಜಿಗಿಯುತ್ತಿದ್ದೆವು. ದೊಡ್ಡಮ್ಮ “ಮಳೆಯಲ್ಲಿ ನೆನೆಯಬೇಡ್ವೋ. ಶಿತ ಆಗುತ್ತೆ” ಅಂತ ಹೇಳಿದರೂ ಕೇಳದೆ ಆಗಷ್ಟೆ ಹನಿದು ಮನೆಯ ಮುಂದೆ ಹರಿಯುತ್ತಿರುವ ರಾಡಿ ನೀರಲ್ಲಿ ದೋಣಿಗಳನ್ನು ಬಿಡಲು ಮುಂದಾಗುತ್ತಿದ್ದೆ. ಆ ಆಟದ ಹುರುಪೇ ಹಾಗಿತ್ತು! ಹೀಗೆ ತೇಲಿಬಿಟ್ಟು ಹರಿವ ನೀರಿನ ಗುಂಟ ಹೋಗಿ ನದಿ ಸೇರುವದನ್ನು ನೋಡುತ್ತಿದ್ದೆವು. ಅದೇನಾದರೂ ನದಿಯನ್ನು ಸೇರಿಬಿಟ್ಟರೆ ನೆಮ್ಮದಿಯಿಂದ ಮನೆಗೆ ವಾಪಾಸಾಗುತ್ತಿದ್ದೆವು. ರಾತ್ರಿಯೆಲ್ಲಾ ದೋಣಿಯದೇ ಕನಸು! ದೋಣಿ ನದಿ ಸೇರಿದೆ, ಅಲ್ಲಿಂದ ನಿಧಾನವಾಗಿ ದೂರ ದೂರ ಸಾಗುತ್ತಾ ಹೋಗುತ್ತದೆ, ಅದರಲ್ಲೊಂದಿಷ್ಟು ಪ್ರಯಾಣಿಕರು ತುಂಬಿಕೊಳ್ಳುತ್ತಾರೆ, ದೇವಕನ್ನಿಕೆಯರು ಪ್ರತ್ಯಕ್ಷರಾಗುತ್ತಾರೆ, ಅವರನ್ನೆಲ್ಲಾ ಹೊತ್ತು ತಂದ ನನ್ನ ದೋಣಿಯನ್ನು ಸಮುದ್ರರಾಜ ಭವ್ಯವಾಗಿ ಸ್ವಾಗತಿಸಿ ಅಭಿನಂದಿಸುತ್ತಾನೆ. ಅಬ್ಬಾ! ಒಂದೇ, ಎರಡೇ...... ಇಂಥ ನೂರಾರು ಚಿತ್ರಣಗಳನ್ನು ನೀಡುವ ನೂರು ನೂರು ಕನಸುಗಳು ಸಾಲುಗಟ್ಟಿ ಬರುತ್ತಿದ್ದವು. ನಾನು ಕನಸು ಕಾಣಲು ಕಲಿತಿದ್ದು ಬಹುಶಃ ಇದೇ ಆಟದಿಂದೇನೇ? ನನಗೆ ಸರಿಯಾಗಿ ನೆನಪಿಲ್ಲ. ಇದ್ದರೂ ಇರಬಹುದು!

    ಒಂದೊಂದು ಸಾರಿ ದೋಣಿ ಅರ್ಧದಾರಿಯಲ್ಲಿ ಆಯತಪ್ಪಿ ಮುಗ್ಗುರಿಸಿಬಿಟ್ಟರೆ ಅಥವಾ ನೀರಲ್ಲಿ ನೆನೆದು ಹಾಳಾಗಿ ಹೋದರೆ ಅಥವಾ ಗಾಳಿಯ ಹೊಡೆತಕ್ಕೆ ಸಿಕ್ಕು ನಲುಗಿದರೆ ಇನ್ನಿಲ್ಲದ ನಿರಾಶೆಯಾಗುತ್ತಿತ್ತು. ದೋಣಿಯ ಮೂಲಕ ಸಮುದ್ರರಾಜನನ್ನು ಸೇರುವ ನಮ್ಮ ಕನಸು ಒಡೆದು ಚೂರುಚೂರಾಗಿರುತ್ತಿತ್ತು. ಆಗ ನಾನು ಜೋರಾಗಿ ಅತ್ತುಕೊಂಡು ದೊಡ್ದಮ್ಮನ ಬಳಿ ಹೋಗಿ ನಡೆದಿದ್ದೆಲ್ಲವನ್ನು ಹೇಳುತ್ತಿದ್ದೆ. “ಹೋಗಲಿಬಿಡು, ಅದಕ್ಯಾಕೆ ಅಳತಿ. ನಾಳೆ ಮತ್ತೆ ಮಳೆ ಬರುತ್ತದೆ. ಆಗ ಗಟ್ಟಿಯಾದ ದೋಣಿಯನ್ನು ಮಾಡಿಬಿಡು. ಹೋಗಿ ತಲುಪುತ್ತದೆ” ಎಂದು ಭರವಸೆಯನ್ನು ನೀಡುತ್ತಿದ್ದಳು. ಎಷ್ಟೇ ಆದರೂ ವಯಸ್ಸಿನಲ್ಲಿ, ಅನುಭವದಲ್ಲಿ ನನಗಿಂತ ದೊಡ್ದವಳಲ್ಲವೆ? ಜೀವನದಲ್ಲಿ ಇಂಥ ಅದೆಷ್ಟು ದೋಣಿಯಾಟಗಳನ್ನು ಆಡಿದ್ದಳೊ! ಅದೆಷ್ಟು ಮಳೆ, ಬಿಸಿಲು, ಗಾಳಿಗಳ ಹೊಡೆತಗಳನ್ನು ತಾಳಿಕೊಂಡು ಬಂದಿದ್ದಳೋ!

    ಮಾರನೆ ದಿನ ಮತ್ತೆ ಮಳೆ ಹುಯ್ಯುತ್ತಿತ್ತು. ನಾನು ಮತ್ತೆ ಹಿಂದಿನದೆಲ್ಲವನ್ನು ಮರೆತು ಎಂದಿನ ಉತ್ಸಾಹದೊಂದಿಗೆ ಕಾಗದದ ದೋಣಿಗಳನ್ನು ಹೊತ್ತು ಅಂಗಳಕ್ಕೆ ಜಿಗಿಯುತ್ತಿದ್ದೆ. ಆಟದಲ್ಲಿ ಮಳೆ, ಗಾಳಿಗಳ ಹೊಡೆತಗಳನ್ನು ತಿನ್ನುತ್ತಾ, ನೋಯುತ್ತಾ, ಸೋಲುತ್ತಾ, ಗೆಲ್ಲುತ್ತಾ ಜೀವನದ ದೋಣಿಯಾಟವಾಡಲು ತಯಾರಾಗುತ್ತಿದ್ದೆ. ಬದುಕೆಂದರೆ ಇದೇ ಅಲ್ಲವೆ?

    -ಉದಯ ಇಟಗಿ
    ಚಿತ್ರ: ಧಾರವಾಡದ ಪಲ್ಲವಿಯವರ ಬ್ಲಾಗಿನಿಂದ ಎತ್ತಿಹಾಕಿಕೊಂಡಿದ್ದು.

    ಶಾಕುಂತಳೆಯ ಸ್ವಗತಗಳು

  • ಮಂಗಳವಾರ, ಮಾರ್ಚ್ 17, 2009
  • ಬಿಸಿಲ ಹನಿ
  • ಲೇಬಲ್‌ಗಳು:
  • ಎಲ್ಲ ಪ್ರಿಯತಮರು ಶಾಪಗ್ರಸ್ತರೇ!
    ಕಡೆಪಕ್ಷ ಏನಿಲ್ಲವೆಂದರೂ
    ತಂತಮ್ಮ ಪ್ರಿಯತಮೆಯನ್ನು
    ಒಂದಷ್ಟು ದಿವಸ ಮರೆತು
    ಹಾಯಾಗಿ ಇದ್ದುಬಿಡುವ ಶಾಪಗ್ರಸ್ತರು!
    ಪಾಪ ಅವರು ತಾನೆ ಏನು ಮಾಡಿಯಾರು
    ಅವರ ಪ್ರೀತಿ ಮರೆವಿನ ಹೊಳೆಗೆ ಸಿಕ್ಕು ಕೊಚ್ಚಿಹೋಗಿಬಿಟ್ಟರೆ?

    ಎಲ್ಲ ಪ್ರಿಯತಮೆಯರು ಶಾಪಗ್ರಸ್ತರೇ!
    ತನ್ನ ಪ್ರಿಯತಮನ ಸ್ಮರಣೆಯಿಂದಲೇ
    ಮರೆತು ಹೋಗುವಷ್ಟು ಶಾಪಗ್ರಸ್ತರು!
    ಅವರು ಕಾಯುತ್ತಲೇ ಇರಬೇಕು
    ತಮ್ಮ ಗುಟ್ಟು ಅವನ ನೆನಪಿನ
    ಬಲೆಯಲ್ಲಿ ಸಿಕ್ಕು ರಟ್ಟಾಗುವವರಿಗೂ!

    ಪ್ರತಿ ಮಗುವೂ ಶಾಪಗ್ರಸ್ತನೇ!
    ತಂದೆಯಿಲ್ಲದೆ ಬೆಳೆಯುವ
    ಸದಾ ಸಿಂಹದ ಬಾಯಿಯಲ್ಲಿಯೇ ಕೈಯಿಟ್ಟುಕೊಂಡು
    ಆಟವಾಡುವ ಶಾಪಗ್ರಸ್ತ!

    ಮಲಯಾಳಂ ಮೂಲ: ಕೆ. ಸತ್ಚಿದಾನಂದ
    ಇಂಗ್ಲೀಷಗೆ: ಕೆ. ಸತ್ಚಿದಾನಂದ
    ಕನ್ನಡಕ್ಕೆ: ಉದಯ ಇಟಗಿ

    ಚಿತ್ರ ಕೃಪೆ: ತೇಜಸ್ವಿನಿ ಹೆಗಡೆಯವರ "ಮಾನಸ" ಬ್ಲಾಗ್

    ಕೇವಲ ಬೂದಿ

  • ಬಿಸಿಲ ಹನಿ
  • ನಿನಗನ್ನಿಸುವದಿಲ್ಲವೆ
    ನಾವಿಬ್ಬರು ಬಹಳಷ್ಟನ್ನು ಕಳೆದುಕೊಂಡಿದ್ದೇವೆಯೆಂದು?
    ಈಗ ಬರಿ ಮಾತುಗಳಲ್ಲಿ ಮಡುಗಟ್ಟಿಹೋದ
    ನಮ್ಮಿಬ್ಬರ ನಡುವಿನ “ಅಗಾಧ” ಪ್ರೀತಿಯನ್ನು?
    ಒಬ್ಬರೊನ್ನೊಬ್ಬರು ನೋಡುವ ಆತುರ ಕಾತುರಗಳನ್ನು
    ಭೇಟಿಯ ಸಂಭ್ರಮ ಸಡಗರಗಳನ್ನು?

    ನಿನಗನ್ನಿಸುವದಿಲ್ಲವೆ
    ನಮ್ಮಿಬ್ಬರ ಚುಂಬನಗಳು ಕಾವು ಕಳೆದುಕೊಂಡು
    ಸಾಮಿಪ್ಯದ ಬಿಸುಪು ಆರಿಹೋಗಿ
    ಭೇಟಿಗಳೆಲ್ಲ ಹೆಪ್ಪುಗಟ್ಟಿದ ಹಿಮಗಡ್ಡೆಗಳಂತಾಗಿವೆಯೆಂದು?
    ಪ್ರೀತಿ ಮಾತುಗಳೆಲ್ಲ ಈಗ
    ಬರಿ ಉಪಚಾರದ ಮಾತುಗಳಾಗಿ
    ಭೇಟಿ ಮಾಡಲು ಸಹ ಮರೆತುಹೋಗಿ
    ಸುಳ್ಳು ಸುಳ್ಳು ನೆಪಹೇಳಿ ಜಾರಿಕೊಳ್ಳುತ್ತಿದ್ದೇವೆಯೆಂದು?

    ನಿನಗನ್ನಿಸುವದಿಲ್ಲವೆ
    ನಾವು ಬರೆಯುವ ಅವಸರದ ಸಣ್ಣ ಸಣ್ಣ ಪತ್ರಗಳಲ್ಲಿ
    ಭಾವನೆಗಳಾಗಲಿ ಉತ್ಸಾಹವಾಗಲಿ
    ಹ್ರದಯದ ಪಿಸುಮಾತುಗಳಾಗಲಿ ಪ್ರೀತಿಯ ಹೊಂಗನಸುಗಳಾಗಲಿಲ್ಲವೆಂದು?
    ಉತ್ತರಿಸುವದು ಹೊರೆಯಾಗಿ
    ಪ್ರತಿಕ್ರಿಯಿಸುವದು ನಿಧಾನವಾಗಿದೆಯೆಂದು?

    ನಿನಗನ್ನಿಸುವದಿಲ್ಲವೆ
    ನಮ್ಮಿಬ್ಬರ ನಡುವಿದ್ದ ಜಗವು ಮುರಿದುಬಿದ್ದು
    ಹೊಸದೊಂದು ಹುಟ್ಟಿದೆಯೆಂದು?
    ನಮ್ಮ ಅಂತ್ಯ ಕಹಿಯಾಗಿ ಘೋರವಾಗಿ
    ಕೇವಲ ಬೂದಿಯಾಗಿ ಉಳಿಯುತ್ತದೆಂದು?
    ಏಕೆಂದರೆ ಇದು ಧುತ್ತೆಂದು ನಮ್ಮ ಮೇಲೆ ಎರಗಿದ್ದಲ್ಲ
    ತಾನೇ ತಾನಾಗಿ ನಮ್ಮೊಳಗಿಂದ ನಿಧಾನವಾಗೆದ್ದು ಬಂದದ್ದು!

    ಅರೇಬಿ ಮೂಲ: ಸಮೀಹ ಆಲ್ ಕಾಶಿ
    ಭಾವಾನುವಾದ: ಉದಯ ಇಟಗಿ

    ಹೀಗೆ ಸುಮ್ಮನೆ

  • ಗುರುವಾರ, ಮಾರ್ಚ್ 12, 2009
  • ಬಿಸಿಲ ಹನಿ
  • ಮೊದಲೇ ಹೇಳಿಬಿಡುತ್ತೇನೆ. ಬರೆಯಲು ಏನೂ ಇಲ್ಲ ಎಂದು ಹೀಗೆ ಸುಮ್ಮನೆ ಏನೇನೋ ಬರೆಯುತ್ತಿದ್ದೇನೆ ಎಂದು ಕೊಳ್ಳಬೇಡಿ. ನಾನು ಬರೆಯುವದು ಬಹಳಷ್ಟಿದೆ;ಶೇಕ್ಷಪೀಯರ್‍ನ ಮೇಲೆ, ಅವನ ಸುನಿತಗಳ ಮೇಲೆ, ಹ್ಯಾಮ್ಲೆಟ್ ಪಾತ್ರದ ಮೇಲೆ, ಟ್ಯಾಗೋರ್ ಪದ್ಯಗಳ ಮೇಲೆ, ಹೀಗೆ ಪಟ್ಟಿ ಮಾಡುತ್ತಾ ಹೋದರೆ ಉದ್ದನೆಯ ಬಾಲವಾದೀತು! ಜೊತೆಗೆ ಅನುವಾದಿಸಲು ಒಂದಷ್ಟು ಚೆಂದನೆಯ ಅರೇಬಿ ಕವನಗಳು ಹಾಗೂ ರಸ್ಕಿನ್ ಬಾಂಡ್‍ನ ಮತ್ತು ಚೀನು ಅಚೆಬೆಯ ಅದ್ಭುತ ಕಥೆಗಳಿವೆ. ಇದೆಲ್ಲದರ ನಡುವೆ ನಾನು ಜೀವನದಲ್ಲಿ ಏನೆಲ್ಲ ಎಡರು ತೊಡರುಗಳನ್ನು ಎದುರಿಸಿ ಈ ಘಟ್ಟಕ್ಕೆ ಬಂದು ತಲುಪಿದ್ದು ಹೇಗೆ ಎನ್ನುವದಷ್ಟನ್ನೆ ವಿವರಿಸುವ ಸಣ್ಣದೊಂದು ಆತ್ಮ ನಿವೇದನೆ ಅರ್ಧ ದಾರಿ ಕ್ರಮಿಸಿ ಅಲ್ಲೇ ನಿಂತು ಬಿಟ್ಟಿದೆ. ಏಕೋ ಮುಂದಕ್ಕೆ ಹೋಗಲೊಲ್ಲೆ ಎನ್ನುತ್ತಿದೆ. ಆತ್ಮ ನಿವೇದನೆಯ ಹಾದಿಯೇ ಹಾಗೆ! ಅದು ಅಷ್ಟು ಸುಲಭವಾಗಿ ಸವೆಯುವಂಥದಲ್ಲ! ಇದನ್ನು ಬರೆಯಬೇಕೋ ಬೇಡವೋ ಎನ್ನುವ ದ್ವಂದದಲ್ಲಿಯೇ ಅರ್ಧ ಸಮಯವನ್ನು ಕಳೆದುಬಿಟ್ಟಿರುತ್ತೇವೆ. ಒಮ್ಮೊಮ್ಮೆ ನಾವೇ ಬಲವಾಗಿ ತಳ್ಳುತ್ತಾ ಹೋಗಬೇಕು. ಅಂತೆಯೇ ನಾನು ಸಹ ತಳ್ಳುತ್ತಿದ್ದೇನೆ. ಪರಿಣಾಮವಾಗಿ ಶೀಘ್ರದಲ್ಲಿ ನನ್ನ ಈ ಆತ್ಮನಿವೇದನೆಯನ್ನು ಹೊತ್ತು ನನ್ನ ಬ್ಲಾಗ್‍ಲ್ಲಿ ಹಾಜರಾಗುವೆ. ಇನ್ನು ಬೇರೆ ಲೇಖನಗಳಿಗೆ ಬೇಕಾದ ಪೂರ್ವಸಿದ್ಧತೆ, ಮಾಹಿತಿ ಸಂಗ್ರಹಣೆ, ಆಕರ ಸಾಮಗ್ರಿಗಳನ್ನೆಲ್ಲ ಒಂದೆಡೆ ಕಲೆ ಹಾಕಿ ಇಟ್ಟಿದ್ದೇನೆ. ನನ್ನ ಅಧ್ಯಾಪನ ಕೆಲಸದ ಜೊತೆಗೆ ಬರೆಯುತ್ತಾ ಹೋಗಬೇಕು. ಬರೆದು ಒಮ್ಮೆ ಹಗುರಾಗಬೇಕು. ಬರಹಗಾರನ ತುಡಿತಗಳೇ ಹಾಗೆ. ಬರೆಯುವವರಿಗೆ ಕಾಯುವದಿಲ್ಲ ಎನ್ನುತ್ತವೆ!

    ಮೊನ್ನೆ ಬ್ಲಾಗ್ ಮಿತ್ರ ಶಿವು "ಯಾಕೆ ಏನೂ ಹೊಸದನ್ನು ಬರೆದಿಲ್ಲ? ಬಹುಶಃ ಕೆಲಸದಲ್ಲಿ ಬ್ಯುಸಿ ಆಗಿರಬೇಕು. ಬಿಡುವು ಮಾಡಿಕೊಂಡು ಬರೆಯಿರಿ" ಎನ್ನುವ ಸಣ್ಣ ಒತ್ತಾಸೆಯೊಂದಿಗೆ ಆದೇಶವನ್ನಿತ್ತಿದ್ದಾರೆ. ಅವರ ಆದೇಶಕ್ಕೆ ತಲೆಬಾಗಿ ಲೇಖನಿಯನ್ನು ಮತ್ತೆ ಕೈಗೆತ್ತಿಕೊಂಡಿದ್ದೇನೆ. ಅಂತೆಯೇ ಅವರ ಕಳಕಳಿಗೆ ಆಭಾರಿಯಾಗಿದ್ದೇನೆ. ಫೆಬ್ರುವರಿ ತಿಂಗಳ ಕೊನೆ ವಾರದಲ್ಲಿ ಮೊದಲ ಸೆಮೆಸ್ಟರ್ ಪರೀಕ್ಷೆ, ಮೌಲ್ಯಮಾಪನ ಅಂತೆಲ್ಲ ಮುಗಿದು ಹದಿನೈದು ದಿವಸಗಳ ರಜೆ ಸಿಕ್ಕಿತು. ಈ ರಜೆಯಲ್ಲಿ ಸಿದ್ಧತೆ ಮಾಡಿಟ್ಟುಕೊಂಡಿದ್ದ ಎಲ್ಲವನ್ನೂ ಬರೆದು ಮುಗಿಸಿಬಿಡಬೇಕು ಎಂದುಕೊಂಡಿದ್ದೆ. ಆದರೆ ನಮಗೆಲ್ಲಾ ದಿಢಿರಂತ ರೆಸಿಡೆನ್ಸ್ ವೀಸಾ ಸಿಕ್ಕು ಹೆಂದತಿ ಮಕ್ಕಳನ್ನು ಇಲ್ಲಿಗೆ ಕರೆತರಲು ಡಿಪೆಂಡೆಂಟ್ ವೀಸಾ ಅಪ್ಲೈ ಮಾಡುವದಕ್ಕೋಸ್ಕರ ನಾವಿದ್ದ ಜಾಗದಿಂದ ಆರನೂರು ಕಿ.ಮೀ. ದೂರದಲ್ಲಿರುವ ನಮ್ಮ ಮೇನ್ ಕ್ಯಾಂಪಸ್‍ಗೆ ಹೋಗಬೇಕಾಗಿ ಬಂತು. ಕಳೆದ ಸಾರಿ ಕೆಲವು ಆಂತರಿಕ ತೊಂದರೆಗಳಿಂದಾಗಿ ಫ್ಯಾಮಿಲಿ ವೀಸಾ ಸಿಗದೆ ನಮ್ಮ ಕುಟುಂಬವನ್ನು ಕರೆತರಲಾಗಿರಲಿಲ್ಲ. ಈ ಬಗ್ಗೆ ಕೇಳಿದ್ದಾಗ ಈ ವರ್ಷ ನಮ್ಮ ಕಾಂಟ್ರಾಕ್ಟ ರಿನ್ಯೂ ಆಗಿ ಭಾರತದಲ್ಲಿ ಎರಡು ತಿಂಗಳು ರಜೆ ಕಳೆದು ಹಿಂತಿರುಗಿದ ಆರು ತಿಂಗಳೊಳಗಾಗಿ ಡಿಪೆಂಡೆಂಟ್ ವೀಸಾ ಕೊಡುತ್ತೇವೆ ಎಂದು ಹೇಳಿದ್ದರು. ಅದರಂತೆ ನಡೆದುಕೊಂಡಿದ್ದರು ಕೂದ. ಹೀಗಾಗಿ ಆ ಕೆಲಸದ ನಿಮಿತ್ತ ಸೆಭಾಗೆ ಹೊರಟೆವು. ಅಲ್ಲಿ ಎಲ್ಲ ಕೆಲಸ ಮುಗಿಸಿ ಭಾರತಕ್ಕೆ ದುಡ್ದನ್ನು ಕಳಿಸಲು ಟ್ರಿಪೋಲಿಗೆ ಹೋಗಬೇಕಾಗಿತ್ತು. ನಾನಿರುವ ಕಡೆಯಲ್ಲಾಗಲಿ ಹಾಗೂ ಸೆಭಾದಲ್ಲಾಗಲಿ Western Union ಇಲ್ಲದ ಕಾರಣ ಮತ್ತು ನಮ್ಮ ಬ್ಯಾಂಕ್‍ಗಳಿಂದ Swift Code ಮುಖಾಂತರ ಕಳಿಸುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರಿಂದ ಟ್ರಿಪೋಲಿಗೆ ಹೋಗುವ ಅನಿವಾರ್ಯತೆಯಿತ್ತು. ಸೆಭಾದಲ್ಲಿ ಕೆಲಸ ಮಾಡುತ್ತಿರುವ ನನ್ನ ಸಹೋದ್ಯೋಗಿ ಮಿತ್ರರಾದ ಡಾ.ಹನಾ ಪದ್ಮಾ ಮತ್ತು ನಾನು ವಿಮಾನದಲ್ಲಿ ಹೋಗುವದೆಂದು ನಿರ್ಧರಿಸಿ ಟಿಕೇಟ್ ಪಡೆದಿದ್ದಾಯಿತು. ರಾತ್ರಿ ಹತ್ತು ಗಂಟೆಗೆ ಹೊರಡಬೇಕಿದ್ದ ವಿಮಾನ ಹನ್ನೆರೆಡು ಗಂಟೆಗೆ ಹೊರಟಿತು. ವಿಮಾನ ಪ್ರಯಾಣದಲ್ಲಿ ಈ ತರದ ಪ್ರಯಾಣ ವಿಳಂಬತೆ ಮತ್ತು ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವದಕ್ಕೆ ಮೊದಮೊದಲು ಬೇಸರವಾಗುತ್ತಿತ್ತಾದರೂ ಈಗ ಅದೊಂದು ತರ ಅಭ್ಯಾಸವಾಗಿಬಿಟ್ಟಿದೆ. ಟ್ರಿಪೋಲಿ ಸಮೀಪಿಸುತ್ತಿದ್ದಂತೆ ಹವಾಮಾನದಲ್ಲಿ ವ್ಯತ್ಯಾಸವಾಗಿ ಗಾಳಿ ಜೋರಾಗಿ ಬೀಸತೊಡಗಿದ್ದರಿಂದ ನಾವಿರುವ ವಿಮಾನ ಡೋಲಾಯಮಾನವಾಗಿ ಅತ್ತ ಇತ್ತ ಓಲಾಡತೊಡಗಿತು. ಒಂದು ಹಂತದಲ್ಲಿ ವಿಮಾನ ಬಿದ್ದೇ ಹೋಗುತ್ತಿದೆ ಎಂದು ಭಾಸವಾಗಿ ಇದು ನಮ್ಮ ಅಂತಿಮ ಯಾತ್ರೆ ಎಂದುಕೊಂಡೆವು. ಆದರೆ ಸ್ವಲ್ಪ ಹೊತ್ತಿನ ನಂತರ ಯಥಾಸ್ಥಿತಿಗೆ ಮರಳಿ ಕೊನೆಗೆ ವಿಪರೀತವಾಗಿ ಬೀಸುವ ಗಾಳಿಯ ನಡುವೆಯೇ ಟ್ರಿಪೋಲಿ ಏರ್‍ಪೋರ್ಟನಲ್ಲಿ ಸುರಕ್ಷಿತವಾಗಿ ಲ್ಯಾಂಡಿನ್ ಆದಾಗ ನಾವೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟೆವು. ಅಲ್ಲಿಂದ ಲಗೇಜ್ ತೆಗೆದುಕೊಂಡು ಟ್ಯಾಕ್ಷಿ ಹಿಡಿದು ಸ್ನೇಹಿತನ ಮನೆ ಸೇರುವಷ್ಟರಲ್ಲಿ ರಾತ್ರಿ ಮೂರು ಗಂಟೆಯಾಗಿತ್ತು. ಮೂರು ದಿವಸದಿಂದ ಹೋಟೆಲ್‍ನಲ್ಲಿ ಬರಿ ಬ್ರೆಡ್ ಜಾಮ್ ತಿಂದು ನಾಲಗೆ ಕೆಟ್ಟು ಹೋಗಿದ್ದರಿಂದ ಸ್ನೇಹಿತ ಮಾಡಿದ ಬಿಸಿ ಬಿಸಿ ಅನ್ನ ಸಾಂಬಾರು ತಿಂದು ನೆಮ್ಮದಿಯ ನಿದ್ರೆ ಹೋದೆ. ಮರುದಿವಸ ದುಡ್ಡು ಕಳಿಸಿ ಒಂದಷ್ಟು ಸಾಮಾನುಗಳನ್ನು ಹಾಗೂ ಮಗಳು ಭೂಮಿಗೆ ಚೆಂದನೆಯ ಡ್ರೆಸ್‍ಗಳನ್ನು ಖರಿದಿಸಿ ಮಾರನೆ ದಿನ ಸಂಜೆ ಘಾಟ್‍ಗೆ ನೇರವಾಗಿ ಹೊರಡುವ ಫ್ಲೈಟ್‍ಗೆ ಟಿಕೆಟ್ ಬುಕ್ ಮಾಡಿದೆ.

    ಮರುದಿವಸ ನಾನು ಮತ್ತು ಗೆಳೆಯ ಸುರೇಂದ್ರ ಸಬ್ರತಾದಲ್ಲಿ ಸುತ್ತಾಡಿ ಮತ್ತೊಂದಿಷ್ಟು ಸಾಮಾನುಗಳನ್ನು ಖರಿದಿಸಿ ಹನ್ನೆರಡು ಗಂಟೆಗೆ ಟ್ಯಾಕ್ಷಿ ಹಿಡಿದು ಏರ್ ಪೋರ್‍ಟ್ಗೆ ಬಂದೆ. ತಲುಪಿದ ಕೆಲವೇ ನಿಮಿಷಗಳ ನಂತರ ಚೆಕಿನ್ ಆರಂಭವಾಯಿತು. ನನ್ನ್ ಲಗೆಜ್ ಚೆಕಿನ್ ಮಾಡಿ ವೇಟಿಂಗ್ ಲಾಂಜ್‍ನಲ್ಲಿ ಕಾಯುತ್ತಾ ಕುಳಿತೆ. ಅಷ್ಟರಲ್ಲಿ ಘಾಟ್‍ನಲ್ಲಿ ಹವಾಮಾನ ವ್ಯತ್ಯಾಸವಾದ ಕಾರಣ ಅಲ್ಲಿಗೆ ಹೊರಡುವ ಫ್ಲೈಟ್ ಕ್ಯಾನ್ಸಲ್ ಆಗಿದೆ ಎನ್ನುವ ಅನೌನ್ಸಮೆಂಟ್ ಹೊರಬಿತ್ತು. ತುಂಬಾ ನಿರಾಶನಾಗಿ ಈಗಾಗಲೆ ಚಿಕಿನ್ ಮಾಡಿದ ಲಗೇಜನ್ನು ಮರಳಿ ಪಡೆದು ಲಿಬಿಯಾನ್ ಏರಲೈನ್ಸ್ ಆಫಿಸಿನತ್ತ ಧಾವಿಸಿದೆ. ಅಲ್ಲಿ ಅವರು ಮುಂದಿನ ವಾರದವರೆಗೂ ಘಾಟ್‍ಗೆ ಯಾವುದೇ ಫ್ಲೈಟ್ ಬಿಡುವದಿಲ್ಲವೆಂದು ಹಾಗೂ ಸೆಭಾಗೆ ಬೇರೆ ಫ್ಲೈಟ್‍ನಲ್ಲಿ ಹೋಗಬಹುದೆಂದು ಹೇಳಿದರು. ಸರಿ ಸೆಭಾದಿಂದ ಟ್ಯಾಕ್ಷಿ ಹಿಡಿದು ಘಾಟ್‍ಗೆ ಹೋದರಾಯಿತು ಎಂದುಕೊಂಡು ಅಂದೇ ರಾತ್ರಿ ಸೆಭಾಗೆ ಹೊರಡುವ ಫ್ಲೈಟ್‍ಗೆ ಟಿಕೇಟ್‍ನ್ನು ಬದಲಾಯಿಸಲು ಹೇಳಿದೆ. ಟ್ರಿಪೋಲಿಯಿಂದ ಘಾಟ್‍ಗೆ ವಾರಕ್ಕೊಂದು ಸಾರಿ ಇರುವದು ಒಂದೇ ಒಂದು ಫ್ಲೈಟ್! ಅದಕ್ಕೂ ಖೋತಾ ಎಂದು ಮನಸಾರೆ ಬದಲಾದ ಹವಮಾನವನ್ನು ಶಪಿಸಿದೆ. ಆ ಪ್ರಕಾರ ನನ್ನ ಟಿಕೇಟನ್ನು ಬದಲಾಯಿಸಿ ಕೊಡಲಾಯಿತು. ನೋಡಿದರೆ ಅದು ಓಪನ್ ಟಿಕೆಟ್ ಆಗಿತ್ತು. ನನಗೆ Confirm ಟಿಕೇಟ್ ಇದ್ದರೆ ಮಾತ್ರ ಕೊಡಿ ಇಲ್ಲವಾದರೆ ಬೇಡವೆಂದೆ. ಘಾಟ್ ಫ್ಲೈಟ್ ರದ್ದಾಗಿದ್ದರಿಂದ ಅಲ್ಲಿಗೆ ಹೋಗುವ ಬಹಳಷ್ಟು ಜನಕ್ಕೆ ಅಂದೇ ರಾತ್ರಿ ಸೆಭಾಗೆ ಹೊರಡುವ ಫ್ಲೈಟ್ಗೆ ಇದೆ ತರ ಟಿಕೇಟ್ ಕೊಡಲಾಗಿದೆ ನೀವು ಹೋಗಬಹುದು ಎಂಬ ಉತ್ತರ ಬಂತು.

    ಫ್ಲೈಟ್ ಇದ್ದುದು ರಾತ್ರಿ ಎಂಟು ಗಂಟೆಗೆ. ಆದರೆ ಚಿಕಿನ್ ಅರಂಭವಾಗಿದ್ದು ರಾತ್ರಿ ಹತ್ತು ಗಂಟೆಗೆ. ನಾಲ್ಕು ಗಂಟೆಗಳ ಕಾಲ ಮತ್ತೆ ವಿಳಂಬ. ಬೇಸತ್ತುಹೋಗಿದ್ದೆ. ಆದರೆ ನಾವಿನ್ನೂ ಇಪ್ಪತ್ತು ಜನ ಚಿಕಿನ್ ಕ್ಯೂನಲ್ಲಿ ಇರುವಾಗಲೇ ಚಿಕಿನ್ ನಿಲ್ಲಿಸಲಾಯಿತು. ಅರೆ, ಇದೇನಿದು? ಹೀಗೇಕಾಯಿತು? ಎಂದು ವಿಚಾರಿಸಿದರೆ ಇಪ್ಪತ್ತು ಟಿಕೆಟ್‍್ಗಳನ್ನು ಹೆಚ್ಚಾಗಿ ಇಶ್ಯೂ ಮಾಡಿದ್ದು ಗೊತ್ತಾಯಿತು. ಎಲ್ಲಾದರು ವಿಮಾನ ಪ್ರಯಾಣದಲ್ಲಿ ಟಿಕೆಟ್ಸ್‍ನ್ನು ಹೀಗೆ ಹೆಚ್ಚಿಗೆ ಇಶ್ಯೂ ಮಾಡುವದುಂಟಾ? ಆಶ್ಚರ್ಯವೆನಿಸಿದರೂ ನಂಬಲೇಬೇಕಿತ್ತು. ನಂಬಲಸಾಧ್ಯವಾದರು ನಡೆದಿದ್ದನ್ನು ಅರಗಿಸಿಕೊಳ್ಳಲೇಬೇಕಿತ್ತು. ಏರಲೈನ್ಸ್ ಆಫೀಸ್ ಮುಂದೆ ಪ್ರಯಾಣಿಕರೆಲ್ಲ ಜಮಾಯಿಸಿದರು. ವಾದ, ವಿವಾದ, ಜಗಳ ಶುರುವಾಗಿ ನಾನು ಯಾವುದೋ ಬಸ್ ಸ್ತ್ಯಾಂಡಿನಲ್ಲಿ ಇರುವಂತೆ ಭಾಸವಾಯಿತು. ಮೇಲಾಧಿಕಾರಿಗಳು ಅಡ್ಜೆಸ್ಟ್ ಮಾಡಲು ಹರಸಾಹಸ ಮಾಡುತ್ತಿದ್ದರು. ಕೊನೆಗೆ ಹತ್ತು ಜನಕ್ಕೆ ಮಾತ್ರ ಅಡ್ಜೆಸ್ಟ್ ಮಾಡಿ ಉಳಿದವರಿಗೆ ಇಲ್ಲ ಎಂದು ಹೇಳಿದರು. ಆ ನತದೃಷ್ಟರಲ್ಲಿ ನಾನೂ ಒಬ್ಬನಾಗಿದ್ದೆ. ಅದ್ಹೇಗೆ ಅಡ್ಜೆಸ್ಟ್ ಮಾಡಿದರೋ ಅವರಿಗೆ ಮಾತ್ರ ಗೊತ್ತು. ಸರಿ ಬಂದ ದಾರಿಗೆ ಸುಂಖವಿಲ್ಲವೆಂದುಕೊಂಡು ಲಿಬಿಯನ್ನರ ಮೂರ್ಖತನವನ್ನು ಹಾಗೂ ಅವರ ಅದಕ್ಷತೆಯನ್ನು ಶಪಿಸುತ್ತಾ ಟ್ಯಾಕ್ಷಿ ಹಿಡಿದು ಹೊಟೆಲ್‍ಗೆ ಹೋದೆ. ಅಲ್ಲಿ ರಾತ್ರಿ ಇದ್ದು ಮರುದಿವಸ ಟ್ಯಾಕ್ಷಿ ಹಿಡಿದು ಘಾಟ್‍ಗೆ ಹೊರಟು ಬಂದೆ. ಲಿಬಿಯಾದಲ್ಲಿ ಎಲ್ಲ ಟ್ಯಾಕ್ಷಿಗಳು ಗಂಟೆಗೆ ೧೦೦ ಕಿ.ಮೀ. ವೇಗದಲ್ಲಿ ಓಡುತ್ತವೆಯಾದ್ದರಿಂದ ೧೪೦೦ ಕಿ.ಮೀ. ದೂರವನ್ನು ಕೇವಲ ೧೪ ಗಂಟೆಗಳಲ್ಲಿ ಕ್ರಮಿಸಿದ್ದೆ. ಬಂದ ನಂತರ ಎರಡು ದಿವಸ ಸುಧಾರಿಸಿಕೊಂಡು ಈಗಷ್ಟೆ ಬರೆಯಲು ಹಿಂತಿರುಗಿದ್ದೇನೆ.

    ನಾಳೆ ಮಗಳು ಭೂಮಿಯ ಎರಡನೇ ವರ್ಷದ ಹುಟ್ಟುಹಬ್ಬ. ದೂರದ ಲಿಬಿಯಾದಿಂದ ಹೋಗಲಾಗುವದಿಲ್ಲವಾದ್ದರಿಂದ ರೇಖಾಳಿಗೆ ನೆಹ್ರೂ ಬರೆದಿರುವ "Letters to Indira Priyadarshini" ಪುಸ್ತಕವನ್ನು ಉಡುಗೊರೆಯಾಗಿ ಕೊಡಲು ಹೇಳಿದ್ದೇನೆ. ಜೊತೆಗೆ ಕೆಲವು ಕನ್ನಡ ಕಾಮಿಕ್ಷ್ ಹಾಗೂ ಅನುಪಮಾ ನಿರಂಜನರ "ದಿನಕ್ಕೊಂದು ಕತೆ" ಕೊಡಲು ಹೇಳಿದ್ದೇನೆ. ಅವಳು ಈಗ ಏನನ್ನೂ ಓದಲಾರಳು ಎಂದು ಗೊತ್ತು. ಆದರೆ ಅವಳ ಪ್ರತಿ ಹುಟ್ಟುಹಬ್ಬಕ್ಕೆ ಹೀಗೆ ಪುಸ್ತಕಗಳನ್ನು ಕೊಡುತ್ತ ಹೋದರೆ ಬೆಳೆದು ದೊಡ್ಡವಳಾದ ಮೇಲೆ ಓದಲು ಅವಳ ಬಳಿ ಒಂದಷ್ಟು ಪುಸ್ತಕಗಳಿರುತ್ತವೆ ಎಂಬುದು ನನ್ನಾಸೆ. ಸಾಲದೆಂಬಂತೆ ಅವಳ ಹೆಸರಲ್ಲಿ ನಾನೇ ಓಪನ್ ಮಾಡಿರುವ ಅವಳ ಈಮೇಲ್‍ಗೆ ಮುದ್ದಾದ ಈ-ಗ್ರೀಟಿಂಗ್ ಕಾರ್ಡೊಂದನ್ನು ಕಳಿಸಿದ್ದೇನೆ. ನಾನೇ ಖುದ್ದಾಗಿ ಇಂಟರ್ನೆಟ್‍ನಲ್ಲಿ ತಡಕಾಡಿ ಅವಳಿಗೋಸ್ಕರ ಒಂದಷ್ಟು ಕನ್ನಡ ರೈಮ್ಸ್ ಹಾಗೂ ಕಾರ್ಟೂನ್ ಚಿತ್ರಗಳನ್ನು ಸಂಗರಹಿಸಿಟ್ಟಿದ್ದೇನೆ. ಅಕ್ಷರಗಳನ್ನು ಬೋಧಿಸುವ ಅಪ್ಪ ಅಕ್ಷರಗಳ ಅರಮನೆಯನ್ನು ಬಿಟ್ಟರೆ ಬೇರೆ ಏನು ತಾನೆ ಕೊಡಲು ಸಾಧ್ಯ? ನಾಳೆ ಬೆಳೆದು ದೊಡ್ದವಳಾದ ಮೇಲೆ ಉಡುಗೊರೆಗಳನ್ನು ನೋಡಿ ಹೆಮ್ಮೆಪಡುತ್ತಾಳೋ ಇಲ್ಲ ತಿರಸ್ಕರಿಸುತ್ತಾಳೋ ಗೊತ್ತಿಲ್ಲ. ಎಲ್ಲ ಅವಳ ಅಬಿರುಚಿ, ಇಚ್ಛೆಯ ಮೇಲೆ ಅವಲಂಬನೆಯಾಗಿದೆ. ಅಪ್ಪ ಅಮ್ಮಂದಿರಾಗಿ ಮಕ್ಕಳಿಗೆ ಕನಸುಗಳನ್ನು ಕಟ್ಟಿಕೊಡುವ, ಕೊಂಡುಕೊಡುವ ಕೆಲಸವನ್ನಷ್ಟೆ ಮಾದಬಹುದು. ಆದರೆ ಅವುಗಳನ್ನು ಅವರ ಮೇಲೆ ಹೇರಲಾದೀತೆ? ಹೇರಲೂಬಾರದು. ನನಗೆ ಇಲ್ಲಿ ಖಲೀಲ್ ಗಿಬ್ರಾನ್‍ನ ಸಾಲುಗಳು ನೆನಪಾಗುತ್ತವೆ-

    Your children are not your children.
    They are the sons and daughters of Life's longing for itself.
    They come through you but not from you,
    And though they are with you yet they belong not to you.
    You may give them your love but not your thoughts,
    For they have their own thoughts.
    You may house their bodies but not their souls,
    For their souls dwell in the house of tomorrow,which you cannot visit, not even in your dreams.
    You may strive to be like them,but seek not to make them like you.
    For life goes not backward nor tarries with yesterday.

    -ಉದಯ ಇಟಗಿ
    ಚಿತ್ರ: ಮಗಳು ಭೂಮಿ