Demo image Demo image Demo image Demo image Demo image Demo image Demo image Demo image

ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು-ನಾನೀಗ ಪಕ್ಕಾ ವ್ಯವಹಾರಸ್ಥನಾಗಿದ್ದೇನೆ!

  • ಗುರುವಾರ, ಏಪ್ರಿಲ್ 26, 2012
  • ಬಿಸಿಲ ಹನಿ
  • ಹೌದು, ನಾನೀಗ ಪಕ್ಕಾ ವ್ಯವಹಾರಸ್ಥನಾಗಿದ್ದೇನೆ! ಹಾಗಂತ ಹೇಳಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ. ಹೆಮ್ಮೆ ಯಾಕೆಂದರೆ ನನಗೆ ದುಡ್ಡಿನ ಬೆಲೆ ಚನ್ನಾಗಿ ಅರ್ಥವಾಗಿದೆಯೆಂದರ್ಥ. ಅದಕ್ಕೆ ಹೇಗೆ ಮರ್ಯಾದೆ, ಗೌರವಗಳನ್ನು ಕೊಡಬೇಕೆಂದು ಚನ್ನಾಗಿ ಮನನವಾಗಿದೆಯೆಂದರ್ಥ. ಮೊದಲು ನನಗೆ ದುಡ್ಡಿನ ಬೆಲೆ ಗೊತ್ತಿರಲಿಲ್ಲವೆಂದಲ್ಲ. ಆದರೆ ಅಷ್ಟಾಗಿ ಗೊತ್ತಿರಲಿಲ್ಲ. ಹೀಗಾಗಿ ಅವರಿವರಿಗೆ ಕೊಟ್ಟು ಕಳೆದುಕೊಂಡೆ. ಅನೇಕ ಕಡೆ ಕೈ ಸುಟ್ಟುಕೊಂಡೆ. ಮೊದಲು ದುಡ್ಡಿನ ವಿಷಯದಲ್ಲಿ ಭಾವುಕನಾಗಿ ಯೋಚನೆ ಮಾಡುತ್ತಿದ್ದೆ. ಆದರೆ ಈಗ ಪಕ್ಕಾ ವ್ಯವಹಾರಸ್ಥನಾಗಿ ಬದಲಾಗಿದ್ದೇನೆ. ಮೊದಲೆಲ್ಲಾ ಸ್ನೇಹಿತರಿಗೆ, ಬಂಧುಗಳಿಗೆ ಸುಲಭವಾಗಿ ಹಣ ಕೊಡುತ್ತಿದ್ದೆ. ಕೊಟ್ಟಮೇಲೆ ಅದನ್ನು ವಾಪಾಸು ಕೇಳಲು ಹಿಂದೆಮುಂದೆ ನೋಡುತ್ತಿದ್ದೆ. ಒಂದುವೇಳೆ ಕೊಡದಿದ್ದರೂ ಸುಮ್ಮನಾಗುತ್ತಿದ್ದೆ. ಆದರೆ ಈಗ ಹಾಗಲ್ಲ. ಇದಕ್ಕೆ ತದ್ವಿರುದ್ಧವಾಗಿ ಬದಲಾಗಿದ್ದೇನೆ. ಬಹಳಷ್ಟು ಬದಲಾಗಿದ್ದೇನೆ.

    ಇದೀಗ ಯಾರಾದರೂ ಹಣ ಕೇಳಲು ಬಂದರೆ ಮೊದಲು “ಇಲ್ಲ” ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತೇನೆ. ನಾನು ಕೊಡದಿದ್ದರೆ ಅವನೇನೆಂದುಕೊಳ್ಳುತ್ತಾನೋ? ಎಲ್ಲಿ ದೂರವಾಗುತ್ತಾನೋ? ಎಂದು ಭಯಪಡುವದಿಲ್ಲ. ಸಂಬಂಧಗಳಲ್ಲಿ, ಹತ್ತಿರದವರಲ್ಲಂತೂ ಯಾವುದೇ ವ್ಯವಹಾರವನ್ನು ಇಟ್ಟುಕೊಳ್ಳುವದಿಲ್ಲ. ಏಕೆಂದರೆ ಒಂದುವೇಳೆ ಅವರು ವಾಪಾಸು ಕೊಡದೇಹೋದಾಗ ತೀರಾ ನಿಕೃಷ್ಟವಾಗಿ ಕೊಡಿ ಎಂದು ಕೇಳಲಾಗದು. ಹೋಗಲಿ ಅವರ ಸಂಬಂಧವನ್ನಾದರು ಹರಿದುಕೊಳ್ಳೋಣವೆಂದರೆ ಅದೂ ಸಾಧ್ಯವಾಗದು. ಮೇಲಾಗಿ ಆಗಾಗ ಅವರ ಮುಖವನ್ನು ನೋಡಬೇಕಾಗುವದು ಮತ್ತು ನೋಡಿದಾಗಲೆಲ್ಲಾ ಅವರು ಮಾಡಿದ ಮೋಸ ನೆನಪಾಗಿ ಮನಸ್ಸಿಗೆ ಒಂಥರಾ ಹಿಂಸೆ ಅನಿಸುತ್ತದೆ. ಅದೇ ದೂರದವರಾದರೆ ವಾಪಾಸು ಕೊಡದಿದ್ದರೂ ಪರ್ವಾಗಿಲ್ಲ ಪೀಡೆ ಹೋಯ್ತು ಎಂದು ಸುಮ್ಮನಿರಬಹುದು.

    ಹಾಗೆ ಒಂದುವೇಳೆ ಕೊಡಲೇಬೇಕಿನಿಸಿದರೆ ಮೊದಲು ಹಣ ತೆಗೆದುಕೊಳ್ಳುವವನ ಹಿನ್ನೆಲೆ ವಿಚಾರಿಸುತ್ತೇನೆ. ಏನು ಕೆಲಸದಲ್ಲಿದ್ದಾನೆ? ಎಷ್ಟು ಸಂಬಳ ಇದೆ? ಆ ಸಂಬಳದಲ್ಲಿ ಅವನು ತನ್ನ ಮನೆಗೆ ಅಂತಾ ಖರ್ಚುಮಾಡಿ ಅದರಲ್ಲಿ ಎಷ್ಟು ಉಳಿಸುತ್ತಾನೆ? ಉಳಿಸುವ ಹಣದಿಂದ ಅವನಿಗೆ ಹಿಂತಿರುಗಿಸುವ ಸಾಮರ್ಥ್ಯ ಇದೆಯಾ? ಇಲ್ವಾ? ಎಂದೆಲ್ಲಾ ಮುಲಾಜಿಲ್ಲದೆ ಬ್ಯಾಂಕುಗಳಲ್ಲಿ ಸಾಲ ಕೊಡುವ ಮುನ್ನ ಹೇಗೆ ಎಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಾರೋ ಹಾಗೆ ನಾನು ಸಹ ಕೇಳಿ ತಿಳಿದುಕೊಳ್ಳುತ್ತೇನೆ. ಇಷ್ಟಕ್ಕೂ ಅವನ ಉತ್ತರಗಳಿಂದ ಸಂತೃಪ್ತನಾದರೆ ಮಾತ್ರ ಕೊಡುತ್ತೇನೆ. ಇಲ್ಲವಾದರೆ ಇಲ್ಲ ಎಂದು ಮುಖಕ್ಕೆ ಹೊಡೆದಹಾಗೆ ಹೇಳಿಬಿಡುತ್ತೇನೆ.

    ಹಾಗೇನೆ, ನಾನು ಹಣವಿದೆ ಎಂದು ಸಿಕ್ಕ ಸಿಕ್ಕಹಾಗೆ ಖರ್ಚು ಮಾಡುವದಿಲ್ಲ. ತೀರಾ ಅನಿವಾರ್ಯ, ಅಗತ್ಯ ಮತ್ತು ಅವಶ್ಯಕತೆ ಎನಿಸಿದರೆ ಮಾತ್ರ ಖರ್ಚು ಮಾಡುತ್ತೇನೆ. ನಾನು ಏನಾದರು ಕೊಂಡುಕೊಳ್ಳಬೇಕಾದರೆ ಧಿಡೀರೆಂದು ಸುಮ್ಮನೆ ಹಾಗೆ ಹೋಗಿ ಕೊಳ್ಳುವದಿಲ್ಲ. ಮೊದಲು ಆ ವಸ್ತುಗಳ ಬೆಲೆಯನ್ನು ಇಂಟರ್ನೆಟ್‍ನಲ್ಲಿ ಹುಡುಕಿ ತಿಳಿದುಕೊಳ್ಳುತ್ತೇನೆ. ಆನಂತರ ನಾಲ್ಕೈದು ಕಡೆ ವಿಚಾರಿಸಿ ಎಲ್ಲಿ ಕಡಿಮೆಯಿರುತ್ತದೋ ಅಲ್ಲಿ ತೆಗೆದುಕೊಳ್ಳುತ್ತೇನೆ. ಹಾಗೇನೆ, ನಾನು ಐಷಾರಾಮಿ ಹೋಟೆಲ್‍ಗಳಿಗೆ ಹೋಗುವದಾಗಲಿ, ಅಲ್ಲಿ ತಂಗುವದಾಗಲಿ ಯಾವತ್ತೂ ಮಾಡಿಲ್ಲ. ಅಷ್ಟೊಂದು ಐಷಾರಾಮಿ ಮನಸಿಗೆ ಹಿಡಿಸದು ಹಾಗೂ ಒಗ್ಗದು. ಸಾಧ್ಯವಾದಷ್ಟು ಖರ್ಚನ್ನು ಕಡಿಮೆ ಮಾಡಲು ನೋಡುತ್ತೇನೆ. ಈ ವಿಷಯದಲ್ಲಿ ಬೇರೆಯವರು ನನ್ನನ್ನು “ಜುಗ್ಗ” ಎಂದರೂ ಪರ್ವಾಗಿಲ್ಲ. ನಾನದನ್ನು ತಲೆಗೆ ಹಚ್ಚಿಕೊಳ್ಳುವದಿಲ್ಲ.

    ಅಂದಹಾಗೆ ನನ್ನ ಇಷ್ಟು ವರ್ಷದ ಜೀವಿತಾವಧಿಯಲ್ಲಿ ಹಣದ ವಿಷಯದಲ್ಲಿ ನನಗೆ ಎರಡು ಸತ್ಯಗಳು ಗೊತ್ತಾಗಿವೆ:
    1. ನಾವು ಗಳಿಸಿದ ಹಣಕ್ಕಿಂತ ಉಳಿಸಿದ ಹಣ ಹೆಚ್ಚುಕಾಲ ಬರುತ್ತದೆ.
    2. ನಮ್ಮಲ್ಲಿರುವ ಹಣದಿಂದ ನಾವು ಶ್ರೀಮಂತರಾಗುವದಿಲ್ಲ. ಆದರೆ ನಾವು ಅದಕ್ಕೆ ಕೊಡುವ ಮರ್ಯಾದೆ ಮತ್ತು ಗೌರವಗಳಿಂದ ಶ್ರೀಮಂತರಾಗುತ್ತೇವೆ.

    ಕಾಡಿಗೆ ಎದುರಾಗಿ ನಿಂತ ಹುಡುಗಿ (ಕೊನೆಯ ಭಾಗ)

  • ಶುಕ್ರವಾರ, ಏಪ್ರಿಲ್ 06, 2012
  • ಬಿಸಿಲ ಹನಿ
  • ಅಲ್ಲಿ ದೋಣಿಯಿದ್ದ ಮೇಲೆ ಹತ್ತಿರದಲ್ಲೆಲ್ಲೋ ಮನುಷ್ಯರು ಇರಲೇಬೇಕೆಂದು ಖಾತ್ರಿಯಾಯಿತು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ! ಕುಣಿದು ಕುಪ್ಪಳಿಸಿದೆ!

    ಆ ದೋಣಿಯನ್ನು ನದಿ ದಂಡೆಯ ಮೇಲೆ ಹಗ್ಗದಿಂದ ಕಟ್ಟಲಾಗಿತ್ತು. ಅದರ ಪಕ್ಕದಲ್ಲಿಯೇ ಒಂದು ಸಣ್ಣ ಕಾಲ್ದಾರಿ ಹೋಗಿರುವದು ಕಾಣಿಸಿತು. ನಾನು ಆ ದಾರಿಯಗುಂಟ ಸುಮ್ಮನೆ ಒಮ್ಮೆ ಕಣ್ಣು ಹಾಯಿಸಿದೆ. ಸಮೀಪದಲ್ಲಿ ತಾಳೆ ಗರಿಗಳಿಂದ ಕಟ್ಟಿದ ಗುಡಿಸಲೊಂದು ಇರುವದು ಕಾಣಿಸಿತು. ಹತ್ತಿರ ಹೋಗಿ ನೋಡಿದೆ. ಅದನ್ನು ಹೊಸದಾಗಿ ನಿರ್ಮಿಸಿದ್ದಂತೆ ಕಂಡಿತು.ಅದರ ಒಳಗಡೆ ಒಂದು ಪ್ಲಾಸ್ಟಿಕ್ ಹಾಳೆಯಿತ್ತು. ಅದರ ಕೆಳಗಡೆ ಒಂದು ಪೆಟ್ರೋಲ್ ತುಂಬಿದ ಕ್ಯಾನು ಹಾಗೂ ಒಂದು ಔಟ್‍ಬೋರ್ಡ್ ಮೋಟಾರು ಇತ್ತು.

    ಆ ಗುಡಿಲದ ನೆಲ ಒರಟೊರಟಾಗಿತ್ತು. ಕತ್ತಲಾದ ಮೇಲೆ ನಾನು ಅಲ್ಲೇ ಮಲಗಿದೆ. ಈ ಒಂಬತ್ತು ದಿನಗಳಲ್ಲಿ ಮೊಟ್ಟಮೊದಲ ಬಾರಿಗೆ ನನಗೊಂದು ಚಾವಣಿ ಸಿಕ್ಕಿತ್ತು. ಆದರೆ ಅಲ್ಲಿ ತುಂಬಾ ಸೊಳ್ಳೆಗಳಿದ್ದುದರಿಂದ ಸರಿಯಾಗಿ ನಿದ್ರೆ ಹತ್ತಲಿಲ್ಲ. ಮೇಲಾಗಿ ಆ ಕಾಡಿನ ಮಧ್ಯದಿಂದ ಯಾವುದದರೂ ಮಾನವ ದನಿಗಳು ತೇಲಿಬರುತ್ತಾವೇನೋ ಎಂಬ ದೂರದ ಆಸೆಯಿಂದ ರಾತ್ರಿಯೆಲ್ಲಾ ಕಿವಿ ತೆರೆದು ಕುಳಿತೆ. ಹಾಗೆ ಕಾಯುವದು ದಡ್ಡತನವೆಂದು ನನಗೆ ಗೊತ್ತಿತ್ತು. ಆದರೂ ಕಾಯ್ದೆ; ಯಾರಾದರೂ ಬಂದಾರೆಂಬ ನಿರೀಕ್ಷೆಯಲ್ಲಿ! ಅಂಥ ದಟ್ಟ ಕಾಡಿನಲ್ಲಿ ಅದೂ ಅಂಥ ಅಪರಾತ್ರಿಯಲ್ಲಿ ಯಾರು ತಾನೆ ಓಡಾಡಿಯಾರು?

    ಮರುದಿವಸ ಮುಂಜಾನೆ ಯಾರಾದರೂ ದೋಣಿಯನ್ನು ತೆಗೆದುಕೊಂಡು ಹೋಗಲು ಬಂದೇ ಬರುತ್ತಾರೆಂಬ ಒಂದು ಸಣ್ಣ ಆಸೆಯಿತ್ತು. ಅವರಿಗಾಗಿ ಕಾಯುತ್ತಾ ಕುಳಿತೆ. ಅವರು ಈಗಲೇ ಬರುತ್ತಾರೋ? ಇವತ್ತೇ ಬರುತ್ತಾರೋ? ಇನ್ನೆರೆಡು ದಿನ ಬಿಟ್ಟು ಬರುತ್ತಾರೋ? ಅಥವಾ ವಾರ ಬಿಟ್ಟು ಬರುತ್ತಾರೋ? ಒಂದೂ ಗೊತ್ತಿರಲಿಲ್ಲ. ಅಥವಾ ಬರದೇನೂ ಇರಬಹುದು! ಯಾರಿಗೆ ಗೊತ್ತು? ಕಾಡು ಅವರನ್ನು ನುಂಗಿಹಾಕಿದ್ದರು ಹಾಕಿರಬಹುದು!

    ನನಗೆ ಅವರು ತಕ್ಷಣಕ್ಕೆ ಬರುತ್ತಾರೆಂಬ ನಂಬಿಕೆ ಇರಲಿಲ್ಲ. ಅವರಿಗಾಗಿ ಕಾಯುತ್ತಾ ಕುಳಿತುಕೊಳ್ಳುವದು ಮೂರ್ಖತನ ಎನಿಸಿತು. ನಾನು ನನ್ನ ಪ್ರಯಾಣವನ್ನು ಮುಂದುವರಿಸಲೇಬೇಕಿತ್ತು. ಆ ದೋಣಿಯನ್ನು ತೆಗೆದುಕೊಂಡು ಹೊರಡಲೇ? ಎಂದು ಒಂದು ಕ್ಷಣ ಯೋಚಿಸಿದೆ. ಆದರದನ್ನು ನಡೆಸುವದು ಹೇಗೆಂದು ನನಗೆ ಸರಿಯಾಗಿ ಗೊತ್ತಿರಲಿಲ್ಲವಾದ್ದರಿಂದ ಆ ಯೋಚನೆಯನ್ನು ಕೈ ಬಿಟ್ಟೆ. ಮೇಲಾಗಿ ಕಳ್ಳತನ ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ. ಈ ಮೊದಲಿನಂತೆ ನಡೆಯುತ್ತಾ ಈಜುತ್ತಾ ಹೋಗುವದೇ ವಾಸಿ ಎನಿಸಿತು!

    ಮಳೆ ಜೋರಾಗಿ ಸುರಿಯತ್ತಿತ್ತು. ನದಿ ಉಕ್ಕೇರುತ್ತಿತ್ತು. ಈ ಜೋರು ಮಳೆ ನನ್ನ ಮೈಗೆ ಅಂಟಿಕೊಂಡಿದ್ದ ಸಣ್ಣ ಸಣ್ಣ ಕ್ರಿಮಿಗಳನ್ನೆಲ್ಲಾ ಸಂಪೂರ್ಣವಾಗಿ ಕೊಚ್ಚಿಹಾಕಿತ್ತು. ಸಧ್ಯ, ನಾನು ಬದುಕಿಕೊಂಡೆ!

    ಆ ಗುಡಿಸಲಲ್ಲಿ ಒಂದು ವ್ಯಾಸಲೀನ್ ಟ್ಯೂಬು ಇತ್ತು. ಅದರಿಂದ ಸೊಳ್ಳೆಗಳನ್ನು ದೂರವಿಡಬಹುದೆಂದು ಯೋಚಿಸಿ ಅದನ್ನು ಮೈಗೆ ಹಚ್ಚಿಕೊಂಡೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಮೈಗೆ ಸಾಕಷ್ಟು ಮ್ಯಾಗಟ್‍ಗಳು* ಬೇರೆ ಅಂಟಿಕೊಂಡಿದ್ದವು. ಅಲ್ಲೇ ಇದ್ದ ತಾಳೆ ಗರಿಯೊಂದರಿಂದ ಚೂಪಾದ ಕಡ್ಡಿಯೊಂದನ್ನು ಮಾಡಿ ಮೈಗೆ ಅಂಟಿಕೊಂಡಿದ್ದ ಮ್ಯಾಗಟ್‍ಗಳನ್ನು ಕಿತ್ತುಹಾಕಿದೆ. ಹೀಗೆ ಸುಮಾರು 25 ಮ್ಯಾಗಟ್ಗಳನ್ನು ಕಿತ್ತುಹಾಕಿದೆ. ಇನ್ನು ಕೆಲವನ್ನು ಹಲ್ಲಿನಿಂದ ಕಿತ್ತೆಸೆದೆ.

    ನನ್ನ ಬಲಗೈ ತೋಳಲ್ಲಿ ಸಣ್ಣದಾಗಿ ಆರಂಭವಾಗಿದ್ದ ನೋವು ಇದೀಗ ಹೆಚ್ಚಿತ್ತು. ಅದನ್ನು ಕತ್ತರಿಸಿ ಹಾಕಿಬಿಡಲೋ ಎನ್ನುವಷ್ಟರ ಮಟ್ಟಿಗೆ ನೋವು ಹೆಚ್ಚಾಗಿತ್ತು.

    ಅಷ್ಟರಲ್ಲಿ ಇದ್ದಕ್ಕಿದ್ದಂತೆ ಆ ಕಾಡಿನಲ್ಲಿ ಮನುಷ್ಯರು ಮಾತನಾಡುವದು ಕೇಳಿಸಿತು. ಅವರು ನಾನಿರುವ ಗುಡಿಸಲಿನತ್ತಲೇ ಬರುತ್ತಿದ್ದರು. ಅವರು ಒಟ್ಟು ಮೂರು ಜನ. ಚಡ್ಡಿ ಹಾಕಿದ್ದರು, ಬರಿಗಾಲಲ್ಲಿದ್ದರು, ಸ್ಪ್ಯಾನಿಷ್‍ನಲ್ಲಿ ಮಾತಾಡುತ್ತಿದ್ದರು. ಅವರಲ್ಲೊಬ್ಬ ನನ್ನ ನೋಡಿದವನೆ “ಹೇ, ಯಾರಲ್ಲಿ? ಇಲ್ಲೇನು ಮಾಡುತ್ತಿರುವೆ?” ಎಂದು ಕೇಳಿದ. ವಿಮಾನ ಅಪಘಾತಕ್ಕೀಡಾಗಿ ಹತ್ತೂವರೆ ದಿವಸಗಳ ಮೇಲೆ ಮೊಟ್ಟಮೊದಲಬಾರಿಗೆ ಮನುಷ್ಯರ ದನಿಯನ್ನು ಕೇಳಿದ್ದೆ.

    ಅಲ್ಲಿಯವರೆಗೂ ನಾನೊಬ್ಬಳೇ ಕಾಡಿಗೆ ಎದುರಾಗಿ ನಿಂತಿದ್ದೆ ಒಂಟಿಯಾಗಿ. ಆದರೆ ಇದೀಗ ಒಂಟಿ ಎನಿಸಲಿಲ್ಲ. ನನ್ನ ಜೊತೆಗೆ ಈ ಮೂವರಿದ್ದರು ಭರವಸೆಯ ಬೆಳಕಾಗಿ, ಸಹಾಯ ನೀಡುವ ಹಸ್ತವಾಗಿ, ದಾರಿ ತೋರುವ ಕೈಮರವಾಗಿ.

    ನಾನು ಅದೃಷ್ಟ ಮಾಡಿದ್ದೆ; ಒಂದಲ್ಲ, ಎರಡೆರೆಡು ಸಾರಿ! ಮೊದಲನೆಯದಾಗಿ ನಾನು ಈ ಜಾಗದಲ್ಲಿ ದೋಣಿಯನ್ನು ನೋಡಿದ ಮೇಲೂ ಅದರ ಹತ್ತಿರ ಬಾರದೆ ಹಾಗೆ ಹೊರಟು ಹೋಗಿದ್ದರೆ ಅದಕ್ಕಂಟಿಕೊಂಡಿರುವ ಗುಡಿಸಲನ್ನು ಸಹ ನೋಡುವ ಅದೃಷ್ಟ ಸಿಗುತ್ತಿರಲಿಲ್ಲವೇನೋ! ಅಥವಾ ಒಂದುವೇಳೆ ಅಕಸ್ಮಾತ್ ನಾನು ಈಜಿಕೊಂಡು ಹೋಗಿದ್ದರೆ ಆ ಗುಡಿಸಲನ್ನು ನೋಡದೆ ಹಾಗೆ ಹೊರಟು ಹೋಗುತ್ತಿದ್ದನೇನೋ!

    ಎರಡನೆಯದಾಗಿ ಈ ಮೂರು ಜನ ಈ ಗುಡಿಸಲಿಗೆ ವಾರಕ್ಕೊಂದು ಸಾರಿ ಮಾತ್ರ ಬಂದು ಒಂದು ರಾತ್ರಿ ಕಳೆದು ಹೋಗುತ್ತಿದ್ದರು. ಅಕಸ್ಮಾತಾಗಿ ನಾನು ಈ ಸ್ಥಳಕ್ಕೆ ಒಂದು ದಿನ ತಡವಾಗಿ ಬಂದಿದ್ದರೂ ನನಗೆ ಅವರು ಸಿಗುತ್ತಿರಲಿಲ್ಲ. ಏಕೆಂದರೆ ಮಾರನೆಯ ದಿನ ಬೆಳಿಗ್ಗೆ ಅವರು ಇಲ್ಲಿಂದ ಅದಾಗಲೇ ಹೋಗುವವರಿದ್ದರು!

    *ನಮ್ಮಲ್ಲಿನ ಜಿಗಣೆ ತರದ ಒಂದು ಜಾತಿಯ ಕೀಟ.

    ಮೂಲ ಇಂಗ್ಲೀಷ್: ಜ್ಯೂಲಿಯನ್ ಕೆಫ್ಕೆ
    ಕನ್ನಡಕ್ಕೆ: ಉದಯ್ ಇಟಗಿ
    ಭಾಗ-೧ http://bisilahani.blogspot.com/2011/10/1.html
    ಭಾಗ -೨ http://bisilahani.blogspot.com/2011/10/2.html