Demo image Demo image Demo image Demo image Demo image Demo image Demo image Demo image

ಹೊಸವರ್ಷಕ್ಕೆ ಪ್ರತಿಭಾ ನಂದಕುಮಾರವರ ಒಂದು ಹಳೆಯ ಪದ್ಯ

  • ಗುರುವಾರ, ಡಿಸೆಂಬರ್ 31, 2009
  • ಬಿಸಿಲ ಹನಿ
  • ನಾನು ಬಾಲ್ಯದಲ್ಲಿರಬೇಕಾದರೆ ಹೊಸವರ್ಷವೆಂದರೆ ಕೇವಲ ಗಡಿಯಾರದ ಮುಳ್ಳು ಸರಿಯುವದಷ್ಟೆ ಎಂದುಕೊಂಡಿದ್ದೆ. ನಾನು ಮಾತ್ರವಲ್ಲ ನನ್ನ ಓರಗೆಯವರು ಹಾಗೂ ದೊಡ್ಡವರೂ ಅದನ್ನೇ ಅಂದುಕೊಂಡಿದ್ದರು. ಏಕೆಂದರೆ ನಾನು ಬೆಳೆದಿದ್ದು ಒಂದು ಚಿಕ್ಕ ಹಳ್ಳಿ ಕಲಕೋಟಿಯಲ್ಲಿ. ಹೀಗಾಗಿ ಅಲ್ಲಿ ಹೊಸವರ್ಷವನ್ನು ಸ್ವಾಗತಿಸುವ ಸಡಗರ, ಸಂಭ್ರಮಗಳ ‘ನಾಗರಿಕತೆ’ ಆ ಊರಿಗೆ ಇನ್ನೂ ಕಾಲಿಟ್ಟಿರಲಿಲ್ಲ. ಹೀಗಾಗಿ ಹೊಸವರ್ಷದ ದಿನವೂ ಸಹ ಎಲ್ಲ ದಿನಗಳಂತೆ ಯಾವುದೇ ವಿಶೇಷವಿಲ್ಲದೆ ಕಳೆದು ಹೋಗುತ್ತಿತ್ತು. ಮುಂದೆ ನಾನು ಗದಗ್ಗೆು ಬಂದೆ. ಅದು ಆಗಿನ್ನೂ ತಾಲೂಕ ಕೇಂದ್ರವಾಗಿತ್ತು. ಅಲ್ಲಿ ಕೂಡ ಹೊಸವರ್ಷದ ದಿನದಂದು ಹೇಳಿಕೊಳ್ಳುವಂಥ ಆಚರಣೆಗಳು ನಡೆಯದಿದ್ದರೂ atleast ಪರಸ್ಪರ ಶುಭಾಷಯಗಳನ್ನು ಹೇಳುವ ಪದ್ದತಿಯಿತ್ತು. ಮುಂದೆ ಪಿ.ಯು.ಸಿಗೆ ಧಾರವಾಡಕ್ಕೆ ಬಂದಾಗಲೂ ನಾನು ಯಾವುದೇ ತರದ ಆಚರಣೆಗಳನ್ನು ಮಾಡಲಿಲ್ಲ. ಬಹುಶಃ ಅದಕ್ಕೆ ಹೇಳಿಕೊಳ್ಳುವಂಥ ಆತ್ಮೀಯ ಸ್ನೇಹಿತರ ಕೊರತೆ ಇದ್ದಿರಬಹುದು.


    ಧಾರವಾಡದಿಂದ ನಾನು ಡಿಗ್ರಿ ಮಾಡಲು ಮಂಡ್ಯಕ್ಕೆ ಬಂದಾಗ ಅಲ್ಲಿ ಒಂದು ಸ್ನೇಹಿತರ ಗುಂಪಿಗೆ ಸೇರ್ಪಡೆಯಾದೆ. ಆ ಗುಂಪಿನವರಲ್ಲಿಯೇ ಇಬ್ಬರಾದ ಮಂಜು ಮತ್ತು ರಾಘು ಇಂದಿಗೂ ಕೂಡ ಜೀವದ ಗೆಳೆಯರಾಗಿ ಮುಂದುವರಿಯುತ್ತಿದ್ದಾರೆ. ಅವರೊಂದಿಗೆ ಒಂದು ವರ್ಷ ಸೇರಿ ಆಚರಿಸಿದ್ದೆ. ನನಗೆ ಅದು ಮೊಟ್ಟ ಮೊದಲ ಬಾರಿಗೆ ಒಂದು ಪಾರ್ಟಿಯೆಂದರೆ ಹೇಗಿರುತ್ತದೆ ಎನ್ನುವ ಅನುಭವವವನ್ನು ಕೊಟ್ಟಿದ್ದು ಬಿಟ್ಟರೆ ಹೇಳಿಕೊಳ್ಳುವಂಥ ಖುಶಿ ಕೊಟ್ಟಿರಲಿಲ್ಲ. ಡಿಗ್ರಿ ಮುಗಿದ ಮೇಲೆ ಬದುಕು ಹುಡುಕಿಕೊಂಡು ಬೆಂಗಳೂರಿಗೆ ಬಂದ ಹೊಸತರಲ್ಲಿ ನಾನು ಮತ್ತು ನನ್ನ ಆತ್ಮೀಯ ಸ್ನೇಹಿತ ಮಂಜು ಇಬ್ಬರೇ ಸೇರಿ ಆಚರಿಸಿದ್ದೆವು. ನಂತರ ಉದ್ಯೋಗದಲ್ಲಿ ಮುಂದುವರೆದು ಒಂದಷ್ಟು ದುಡ್ಡು ಕೈಯಲ್ಲಿ ಓಡಾಡತೊಡಗಿದಾಗ ಗೆಳೆಯರೆಲ್ಲ ಸೇರಿ ಬೇರೆ ಬೇರೆ ಕಡೆ ಹೋಗಿ ಪಾರ್ಟಿ ಮಾಡಿದ್ದಿದೆ. ಆದರೆ ನಾನು ಆ ಪಾರ್ಟಿಗಳಲ್ಲಿ ಪೂರ್ಣ ಮನಸ್ಸಿನಿಂದ ಭಾಗವಹಿಸುತ್ತಿರಲಿಲ್ಲ. ಏಕೆಂದರೆ ಹೊಸವರ್ಷ ನನಗೆ ಯಾವತ್ತೂ ವಿಶೇಷ ದಿನವಾಗಿ ಕಾಣಿಸಿಯೇ ಇಲ್ಲ. ಇದಕ್ಕೆ ಸರಿಯಾದ ಕಾರಣವೇನೆಂದು ಈವರೆಗೂ ತಿಳಿದಿಲ್ಲ. ಬರು ಬರುತ್ತಾ ನಾವು ಸ್ನೇಹಿತರು ಪಾರ್ಟಿ ಮಾಡುವದನ್ನು, ಗ್ರೀಟಿಂಗ್ಸ್ ಕಳಿಸುವದನ್ನೂ ನಿಲ್ಲಿಸಿಬಿಟ್ಟೆವು. ಹಾಗಂತ ನಮ್ಮ ನಡುವೆ ಇರುವ ಆತ್ಮೀಯತೆ ನಿಂತಿಲ್ಲ. ಅದು ದಿನದಿಂದ ದಿನಕ್ಕೆ ಬಲಗೊಳ್ಳುತ್ತಲೇ ಇದೆ. ಬಹುಶಃ ಹೊಸ ವರ್ಷವೆಂದರೆ ಕೇವಲ ಗಡಿಯಾರದ ಮುಳ್ಳು ಸರಿದು ಹೋಗುವದಷ್ಟೇ ಎನ್ನುವ ಸತ್ಯವನ್ನು ಕಂಡುಕೊಂಡೆವೆ? ಗೊತ್ತಿಲ್ಲ.

    ಇದೇ ಭಾವವನ್ನು ಬಿಂಬಿಸುವ ಪ್ರತಿಭಾ ನಂದಕುಮಾರವರ ಒಂದು ಹಳೆಯ ಪದ್ಯ ‘ಹೊಸವರ್ಷ’ ಮೊನ್ನೆ ನನ್ನ ಹಳೆಯ ಡೈರಿಯಲ್ಲಿ ಸಿಕ್ಕಿತು. ಯಾಕೋ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದ್ದರಿಂದ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದು ನಿಮಗೆ ಇಷ್ಟವಾಗದಿರಬಹುದು.

    ಹೊಸವರ್ಷ

    ಹೊಸವರ್ಷ ಬರುತ್ತೆ ಹೊಸವರ್ಷ ಬರುತ್ತೆ

    ಅಂತ ಬೆಳಗ್ಗಿನಿಂದ ನನ್ನ ನಾಲ್ಕು ವರ್ಷದ ಮಗಳು

    ಹುಮ್ಮಸ್ಸಿನಿಂದ ಕಾದಳು.



    ನೋಡೋಕೆ ಹೇಗಿರುತ್ತಮ್ಮ

    ನೀನು ನೋಡಿದ್ದೀಯಾಮ್ಮಾ

    ಮಕ್ಕಲನ್ನು ಹೆದರಿಸುತ್ತಾಮ್ಮ

    ಬಚ್ಚಿಟ್ಟುಕೊಳ್ಳಲೇನಮ್ಮ

    ಎಂದು ಆತಂಕದಲಿ ಚಡಪಡಿಸಿದಳು.



    ರಾತ್ರಿ ಹನ್ನೆರಡಕ್ಕೆ ಬರುತ್ತೇ-

    ಸುಮ್ನೆ ಇರು ಗಲಾಟೆ ಮಾಡ್ದೆ

    ಊಟ ತಿಂಡಿ ಹಾಲು ಮುಗಿಸಿಬಿಡು ತೆಪ್ಗೆ

    ಎಂದು ನಾನೂ ಸಂದರ್ಭ ಉಪಯೋಗಿಸಿಕೊಂಡೆ.



    ವರ್ಷದ ಕೊನೆಯ ದಿನವಿಡೀ ಹಾರಾಡಿ

    ಕೊನೆಗೆ ರಾತ್ರಿ ಟೀವಿಯ ಮುಂದೆ ಕೂತೆವು

    ಆಕಳಿಸಿ ತೂಕಡಿಸಿ ಕಣ್ಣು ಮಿಟುಕಿಸುತ್ತ

    ಪಿಳಪಿಳನೆ ಟೀವಿಯಲ್ಲಿ ಕಣ್ಣುನೆಟ್ಟು

    ಹೊಸವಷಕ್ಕೆ ಕಾದೆವು

    ನಿದ್ದೆ ತಡೆಯದ ಮಗಳು ಪವಡಿಸಿದಳು.



    ಏನೇನೋ ಕಾಯಕ್ರಮಗಳ ನಂತರ

    ನಡುರಾತ್ರಿ ಸರಿಯಾಗಿ

    ಟೀವಿಯಲ್ಲೆಲ್ಲ ಗದ್ದಲ

    ಹೊರಗೆ ಪಟಾಕಿ ಸಿಡಿಮದ್ದು

    ಹೋಯೆಂದೆವು ನಾವೆಲ್ಲ

    ಎಚ್ಚೆತ್ತ ಮಗಳು ಏನಮ್ಮ ಏನಮ್ಮ ಅಂದಳು.

    ನೋಡು ಹನ್ನೆರಡಾಯಿತು

    ಹಳೆವರ್ಷ ಸರಿದುಹೋಯಿತು

    ಹೊಸವರ್ಸ ಕಾಲಿಟ್ಟಿತು ಎಂದೆ.



    ಟೀವಿ ಪರದೆಯಲ್ಲಿ ನೋಡಿ

    ಹೊಸವರ್ಷ ಅಂದರೆ ಗಡಿಯಾರ ಏನಮ್ಮ

    ಅದು ಯಾವಾಗ್ಲೂ ಓಡುತ್ತಿರತ್ತಾಲ್ಲಾಮ್ಮಾ

    ಎಂದು ಪೆಚ್ಚಾಗಿ ಪುನಃ ನಿದ್ದೆ ಹೋದಳು



    ಮಾರನೆಯ ದಿನ

    ಹೊಸವರ್ಷ ಅಂದರೆ ಏನಿಲ್ಲ ತಾತಾ

    ಗಡಿಯಾರದ ಮುಳ್ಳು ತಿರುಗೋದು ಅಷ್ಟೇ

    ಎಂದು ತಾತನಿಗೆ ಬೋಧಿಸುತ್ತಿದ್ದಳು.



    ಅಷ್ಟೇಮ್ಮಾ ಅಷ್ಟೆ ಎಂದರು ಅವರು

    ಬೊಚ್ಚು ಬಾಯಗಲಿಸಿ.



    -ಪ್ರತಿಭಾ ನಂದಕುಮಾರ್

    ಘರ್ಜನೆ ನಿಲ್ಲಿಸಿದ ಸಿಂಹ

  • ಬುಧವಾರ, ಡಿಸೆಂಬರ್ 30, 2009
  • ಬಿಸಿಲ ಹನಿ
  • ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಗರಬಡಿದಂತೆ ಕಾಣುತ್ತಿದೆ. ವರ್ಷಾಂತ್ಯದ ಕೊನೆಯಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಸಾಂಸ್ಕೃತಿಕ ಕೊಡುಗೆಯನ್ನು ನೀಡಿದ ಗಣ್ಯಾತಿಗಣ್ಯರನ್ನು ಕಳೆದುಕೊಳ್ಳುತ್ತಿದ್ದೇವೆ. ನಿನ್ನೆಯಷ್ಟೆ ಅಶ್ವತ್ಥ್ ಹೋದರು. ಇಂದು ಕನ್ನಡದ ಮೇರು ನಟ ವಿಷ್ಣುವರ್ಧನ. ಯಾಕೋ ಮಾತೇ ಹೊರಡುತ್ತಿಲ್ಲ. ಒಂದಾದ ಮೇಲೊಂದರಂತೆ ಬರಸಿಡಿಲು ಬಂದು ಬಡಿಯುತ್ತಿದ್ದರೆ ಮಾತು ಹೊರಡುವದಾದರು ಹೇಗೆ? ಹೆಪ್ಪುಗಟ್ಟಿದ ಎದೆಯೊಳಗಿನ ನೋವನ್ನು ಹೊರಹಾಕುವದಾದರೂ ಹೇಗೆ?


    ‘ವಂಶವೃಕ್ಷ’ದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ನಾಗರ ಹಾವಿನ ರಾಮಾಚಾರಿಯಾಗಿ ಮೆರೆದು, ಕನ್ನಡಿಗರ ಮನದ ಬಂಧನದಲ್ಲಿ ಸಿಲುಕಿ, ಮುತ್ತಿನಹಾರ ಹಾಕಿಕೊಂಡು ಕನ್ನಡ ಚಿತ್ರರಂಗದ ಯಜಮಾನನಾಗಿ, ಕನ್ನಡಿಗರ ಆಪ್ತಮಿತ್ರನಾಗಿ ಬೆಳೆದ ಈ ಕೋಟಿಗೊಬ್ಬನ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತೇನೆ.

    ಓ ದೇವರೆ! ನಾಳೆ ಬೆಳಿಗ್ಗೆ ಮತ್ತೆ ಇಂಥದೇ ಕೆಟ್ಟ ಸುದ್ದಿಯನ್ನು ಕರುಣಿಸದಿರು.

    ಗಿಳಿಯು ಪಂಜರದೊಳಿಲ್ಲ

  • ಮಂಗಳವಾರ, ಡಿಸೆಂಬರ್ 29, 2009
  • ಬಿಸಿಲ ಹನಿ
  • ಪ್ರೀತಿಯ ಅಶ್ವತ್ಥ್ ಅವರೆ,


    ನಿಮ್ಮ ಸಾವಿನ ಸುದ್ದಿ ನನ್ನ ಮೈ ಮನಸ್ಸುಗಳೆರಡನ್ನೂ ಶೂನ್ಯವಾಗಿಸಿಬಿಟ್ಟಿದೆ. ಮನದೊಳಗಿನ ನೋವು ಮುಖದಲ್ಲಿ ಎದ್ದು ಕಾಣುತ್ತಿದೆ. ಕಣ್ಣೀರು ಕಂಡೂ ಕಾಣದಂತೆ ತಾನೇ ತಾನಾಗಿ ಹರಿಯುತ್ತಿದೆ. ಇಲ್ಲಿ ಎಲ್ಲರೂ ಯಾಕೆ ಯಾಕೆ ಎಂದು ಕೇಳುತ್ತಿದ್ದಾರೆ. ಹೇಗೆ ಹೇಳಲಿ ಅವರಿಗೆ ನೀವಿಲ್ಲದೆ ಉಂಟಾದ ತಳಮಳವನ್ನು? ಹೇಗೆ ಹೇಳುವದು ಅವರಿಗೆ ನೀವಿಲ್ಲದೆ ಸ್ಮಶಾನವಾಗಿದೆ ಮನದಂಗಳ ಎಂದು. ಹೇಗೆ ಹೇಳಲಿ ಅವರಿಗೆ ನಮ್ಮ ನಾಡಿನ ಮುದ್ದಿನ ಗಿಳಿಯೊಂದು ಪಂಜರದೊಳಗಿಂದ ಹಾರಿ ಹೋಗಿದೆ ಎಂದು. ಏನ ಹೇಳಲಿ ಅವರಿಗೆ ನಿಮ್ಮ ಸಾಧನೆಯ ಬಗ್ಗೆ. ಹೇಗೆ ತಿಳಿಸಲಿ ಅವರಿಗೆ ನಿಮ್ಮ ಹಾಡುಗಳ ಬಗ್ಗೆ. ದೂರದ ಲಿಬಿಯಾದಲ್ಲಿ ಕುಳಿತು ಮನಸ್ಸು ಒಂದೇ ಸಮನೆ ನಿಡುಸೊಯ್ಯುತಿದೆ ನೀವಿಲ್ಲದ ಸುದ್ದಿ ಕೇಳಿ. ಛೇ, ನಾನು ಬೆಂಗಳೂರಿನಲ್ಲಿದ್ದಿದ್ದರೆ ನಿಮ್ಮ ಅಂತ್ಯಕ್ರಿಯೆಯಲ್ಲಾದರೂ ಪಾಲುಗೊಳ್ಳಬಹುದಿತ್ತಲ್ಲವೆ? ಅಂತಿಮ ದರ್ಶನವನ್ನಾದರು ಪಡೆಯಬಹುದಿತ್ತು. ಏನು ಮಾಡುವದು? ಟೀವಿ ಚಾನೆಲ್ಗಬಳಲ್ಲಿ ತೋರಿಸುವ ನಿಮ್ಮ ಅಂತ್ಯಕ್ರಿಯೆಯ ನೇರ ಪ್ರಸಾರವನ್ನು ನೋಡಿ ಇಲ್ಲಿಂದಲೇ ನಿಮಗೊಂದು ಕಂಬನಿ ಮಿಶ್ರಿತ ಅಂತಿಮ ವಿದಾಯವನ್ನು ಹೇಳಿದ್ದೇನೆ.

    ಮೊನ್ನೆ ನವೆಂಬರ್ ೧ ರಂದು ಸುವರ್ಣ ಚಾನೆಲ್ನಹಲ್ಲಿ ಪ್ರಸಾರವಾದ ನಿಮ್ಮ ಸಂದರ್ಶನವೊಂದರದಲ್ಲಿ ಹಾಡುತ್ತಿರುವಾಗ ಏಕೋ ನಿಮ್ಮ ಧ್ವನಿ ನಡುಗುತ್ತಿರುವದನ್ನು ನೋಡಿ ಅಶ್ವತ್ಥ್ ಅವರಿಗೆ ವಯಸ್ಸಾಯಿತು. ಇನ್ಮುಂದೆ ಅಶ್ವತ್ಥ್ ಅವರು ಹಾಡುವದನ್ನು ನಿಲ್ಲಿಸಿದರೆ ಒಳಿತು ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡಿದ್ದೆ. ಛೇ, ಅದ್ಯಾವ ಗಳಿಗೆಯಲ್ಲಿ ಹಾಗೆಂದುಕೊಂಡೆನೋ ಕಾಕತಾಳಿಯವೆಂಬಂತೆ ನೀವು ಹಾಡುವದನ್ನು ನಿಲ್ಲಿಸಿ ಹೋಗಿ ಬಿಟ್ಟಿರಿ. ಆ ಗಿಲ್ಟ್ ನನ್ನನ್ನು ಬೆಳಿಗ್ಗೆಯಿಂದ ಕ್ಷಣ ಕ್ಷಣವೂ ಹಿಂಡಿಹಿಪ್ಪಿ ಮಾಡುತ್ತಿದೆ. ನಾನು ಹಾಗೆ ಅಂದುಕೊಂಡ ಕೇವಲ ಒಂದು ತಿಂಗಳ ಅಂತರದಲ್ಲಿಯೇ ಆಸ್ಪತ್ರೆಗೆ ದಾಖಲಾದಿರಿ. ಇದು ನಮಗೆಲ್ಲ ಅನಿರೀಕ್ಷೀತ ಆಘಾತವಾಗಿತ್ತು. ಆಸ್ಪತ್ರೆಗೆ ದಾಖಲಾದವರು ಬೇಗ ಗುಣಮುಖರಾಗುತ್ತೀರಿ, ಅಲ್ಲಿಂದ ಎದ್ದು ಬಂದು ರೇ.. ರೇ.. ರೇ.. ಎಂದು ಹಾಡುತ್ತಾ ಮತ್ತೆ ನಮ್ಮನ್ನೆಲ್ಲ ನಿಮ್ಮ ರಾಗಗಳೊಂದಿಗೆ ಕುಣಿಸಿತ್ತೀರಿ, ಇನ್ನಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡುತ್ತೀರಿ ಎಂದೆಲ್ಲಾ ನಿರೀಕ್ಷಿಸಿದ್ದೆವು. ಆದರೆ ನಮ್ಮನ್ನೆಲ್ಲ ನಿರಾಶೆಗೊಳಿಸಿ ನೇರವಾಗಿ ಸಾವಿನ ಮನೆಗೆ ನಡೆದುಬಿಟ್ಟಿರಿ. ಹೇಳಿ, ಹಾಡಿ ಹಾಡಿ ಬೇಸರವಾಗಿತ್ತೆ ನಿಮಗೆ? ಅಥವಾ ವಿಧಿ ನಿಮ್ಮ ಹಾಡು ಕೇಳಲು ನಿಮ್ಮನ್ನು ಬಲವಾಗಿ ಎಳೆದೊಯ್ಯಿತೇ? ಕಾರಣ ಹೇಳದೆ ಹೋಗಿಬಿಟ್ಟಿರಿ.

    ಹಾಗೆ ನೋಡಿದರೆ ನಾನು ಸುಗಮ ಸಂಗೀತದೆಡೆಗೆ ಆಕರ್ಷಿತನಾಗಿದ್ದು ನಿಮ್ಮ ಧ್ವನಿಯಿಂದಲೇ! ನಿಮಗಿಂತ ಮೊದಲೇ ಇದ್ದ ಅನಂತಸ್ವಾಮಿಯವರ ಧ್ವನಿಯನ್ನು ನಾನು ಕೇಳಿದ್ದು ನಿಮ್ಮ ಧ್ವನಿಯನ್ನು ಕೇಳಿದ ಮೇಲೆ. ಅದೇಕೋ ಅನಂತಸ್ವಾಮಿಯವರಿಗಿಂತ ನಿಮ್ಮ ಧ್ವನಿಯೇ ತುಂಬಾ ಇಷ್ಟವಾಯಿತು. ನನಗೆ ಮಾತ್ರವಲ್ಲ ಬಹಳಷ್ಟು ಕನ್ನಡಿಗರಿಗೆ ಕೂಡ ನಿಮ್ಮ ಧ್ವನಿ ಇಷ್ಟವಾಯಿತು, ಏಕೆಂದರೆ ಅಂಥದೊಂದು ಮಾಂತ್ರಿಕ ಶಕ್ತಿ ನಿಮ್ಮ ಧ್ವನಿಗಿತ್ತು. ಅನಂತಸ್ವಾಮಿಯರ ಸಾವಿನೊಂದಿಗೆ ಸುಗಮ ಸಂಗೀತ ಕ್ಷೇತ್ರ ಬಡವಾಯಿತೆಂದುಕೊಂಡರೂ ಜನ, ಹೇಗೂ ಅಶ್ವಥ್ ಇದಾರಲ್ಲ! ಆ ಕೊರತೆಯನ್ನು ನೀಗಿಸುತ್ತಾರೆ ಎಂದುಕೊಂಡು ಸುಮ್ಮನಾದರು. ನೀವು ಖಂಡಿತವಾಗಿ ಆ ಕೊರತೆಯನ್ನು ನೀಗಿಸಿಬಿಟ್ಟಿರಿ. ಮಾತ್ರವಲ್ಲ ಮುಂದೆ ನೀವದನ್ನು ಹೊಸ ಹೊಸ ಪ್ರಯೋಗಗಳೊಂದಿಗೆ ಉಚ್ಛ್ರಾಯ ಸ್ಥಿತಿಗೆ ತಂದಿರಿ. ಆದರೆ ಈಗ ನಿಮ್ಮ ಸಾವಿನೊಂದಿಗೆ ಆ ಕೊರತೆ ದಟ್ಟವಾಗಿ ಎದ್ದು ಕಾಣುತ್ತಿದೆ. ನಿಮ್ಮ ನಂತರದ ಸುಗಮ ಸಂಗೀತ ಕ್ಷೇತ್ರದ ದಿಗ್ಗಜರು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

    ಕನ್ನಡನಾಡಿನ ಶ್ರೇಷ್ಟ ಹಾಗೂ ಉದಯೋನ್ಮುಖ ಕವಿಗಳ ಕವಿತೆಗಳನ್ನು ಮನೆ ಮನೆಗೆ ತಲುಪಿಸುವದರ ಮೂಲಕ ನೀವು ಮನೆ ಮಾತಾಗಿಬಿಟ್ಟಿರಿ. ಬಹುಶಃ ನಿಮ್ಮ ಹಾಡುಗಳನ್ನು ಜನ ಕೇಳಿದ ಮೇಲೆಯೇ ಕವಿಗಳನ್ನು ಮುಗಿಬಿದ್ದು ಓದತೊಡಗಿದರು. ಮುಂದೆ ಎಂದೂ ಕೇಳಿರದ ಶಿಶುನಾಳ ಶರೀಫರ್ ತತ್ವ ಪದಗಳಿಗೆ ನಿಮ್ಮದೇ ಆದಂಥ ವಿಶಿಷ್ಟ ಶೈಲಿಯ ಸಂಗೀತವನ್ನು ಅಳವಡಿಸಿ ಹಾಡುವದರ ಮೂಲಕ ನಾಡಿನ ಜನಮನವನ್ನು ಗೆದ್ದುಬಿಟ್ಟಿರಿ. ನೇಗಿಲ ಯೋಗಿ ಹಾಡಿನ ಮೂಲಕ ಈ ನಾಡಿನ ರೈತರ ಕಣ್ಮಣಿಯಾಗಿಬಿಟ್ಟಿರಿ. ನೀವು ಹಾಡುತ್ತಾ ಹಾಡುತ್ತಾ ಇಡಿ ನಾಡಿನ ಜನಸಾಗರವನ್ನೇ ಸುಗಮ ಸಂಗೀತದಲ್ಲಿ ಮುಳುಗಿಸಿಬಿಟ್ಟಿರಿ, ಅದಕ್ಕೆ ಬೆಂಗಳೂರು ಮತ್ತು ನಾಡಿನ ಇತರ ಭಾಗಗಳಲ್ಲಿ ನಡೆಸಿದ ನಿಮ್ಮ ಸುಗಮ ಸಂಗೀತದ ಕಛೇರಿಗಳೇ ಸಾಕ್ಷಿ. ಕನ್ನಡದ ಗಂಧ ಗಾಳಿಯೂ ಗೊತ್ತಿಲ್ಲದ ಎಷ್ಟೊ ಸಾಫ್ಟವೇರ್ ಇಂಜಿನೀಯರಗಳು ಸಹ ನಿಮ್ಮ ಸಂಗೀತ ಕಛೇರಿಗಳಿಗೆ ಮುಗಿಬಿದ್ದು ಬರತೊಡಗಿದರು. ನಿಮ್ಮ ಹಾಡು ಕೇಳುತ್ತಾ ಕೇಳುತ್ತಾ ನಿಮ್ಮೊಂದಿಗೆ ತಾವು ಹಾಡುತ್ತಾ ಧನ್ಯರಾದರು. ನೀವು ‘ಕನ್ನಡ ಸತ್ಯವೇ’ ಹಾಡನ್ನು ಹಾಡುತ್ತಿದ್ದರೆ ಎಲ್ಲರಲ್ಲೂ ಕನ್ನಡದ ಕಿಚ್ಚು ತಾನೇ ತಾನಾಗಿ ಹೊತ್ತಿಕೊಳ್ಳುತ್ತಿತ್ತು. ಅದಲ್ಲದೇ ಶಿಶುನಾಳ್ ಶರೀಫ್ರಎ ‘ತರವಲ್ಲ ತೆಗಿ’ ಹಾಡಿನ ರೆರೇ... ರೇ... ಎಂಬ ಆಲಾಪನೆ ಎತ್ತಿಕೊಳ್ಳುತ್ತಿದ್ದಂತೆ ನೆರೆದ ಇಡಿ ಜನಸಾಗರವೇ ಯಾವುದೇ ಸಮ್ಮೋಹನಕ್ಕೊಳಗಾದಂತೆ ಹುಚ್ಚೆದ್ದು ಕುಣಿಯುತ್ತಿದ್ದರು.

    ಅಶ್ವತ್ಥ್ ಅವರಿಗೆ ಅಶ್ವಥ್ರೇಣ ಸಾಟಿ ಎಂದು ಜನ ನಿಮ್ಮ ಬಗ್ಗೆ ಹೇಳುತ್ತಿದ್ದರೂ ನೀವೊಬ್ಬ ಮುಂಗೋಪಿ, ದುರಂಕಾರಿ, ಪ್ರಚಾರ ಪ್ರಿಯ, ಹಾಡಿದ್ದ ಹಾಡನ್ನು ಇನ್ನೊಮ್ಮೆ ಹಾಡುವಾಗ ಸ್ವಲ್ಪ ಬದಲಾಯಿಸಿ ಹಾಡುತ್ತಾರೆ, ಧಾರವಾಡ ಕನ್ನಡದ ಹಾಡುಗಳನ್ನು ಅದರ accentನ್ನು ಕೆಡಿಸಿ ಹಾಡುತ್ತಾರೆ ಎನ್ನುವ ಆಪಾದನೆಗಳು ನಿಮ್ಮ ಮೇಲೆ ಇದ್ದವು. ಆದರೆ ಅವೆಲ್ಲ ನಿಮ್ಮ ಕಂಚಿನ ಕಂಠದ ಮುಂದೆ ಹಾಗೂ ಸಾಧನೆಗಳ ಮುಂದೆ ಗೌಣವಾಗಿಬಿಟ್ಟವು. ನೀವು ಯಾವ ಶಿಷ್ಯರನ್ನೂ ಬೆಳೆಸಲಿಲ್ಲ. ಆದರೆ ಒಳ್ಳೊಳ್ಳೆ ಗಾಯಕ, ಗಾಯಕಿಯರನ್ನು ಬೆಳೆಸಿದಿರಿ. ಅವರಿಂದ ಲೈಫ್ ಟೈಮ್ ಹಾಡುಗಳನ್ನು ಹಾಡಿಸಿದಿರಿ. ಆದರೆ ಅವರೆಲ್ಲ ನೀವೇರಿದ ಎತ್ತರಕ್ಕೆ ಏರುತ್ತಾರೆಯೆ? ನಿಮ್ಮ ನಂತರದ ಸುಗಮ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆಯೆ? ಅವರಲ್ಲಿ ಯಾರಾದಾರೊಬ್ಬರು ಸುಗಮ ಸಂಗೀತದ ದಿಗ್ಗಜರಾಗುತ್ತಾರೆಯೇ? ಗೊತ್ತಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು.

    ನೀವು ಕೊಟ್ಟ ಭಾವಗೀತೆಗಳು, ಸಿನಿಮಾ ಹಾಡುಗಳು ಒಂದೇ... ಎರಡೆ? ಆಕಾಶದ ನೀಲಿಯಲ್ಲಿ, ಎಲ್ಲೋ ಹುಡುಕಿದೆ ಇಲ್ಲದ ದೇವರು, ರಾಯರು ಬಂದರು ಮಾವನ ಮನೆಗೆ, ನಾಯಿ ತಲೆಮ್ಯಾಲಿನ ಬುತ್ತಿ, ಗಿಳಿಯು ಪಂಜರದೊಳಿಲ್ಲ, ಗೆದಿಯಬೇಕು ಮಗಳೆ, ಆಕಾಶ ಬಿಕ್ಕುತಿದೆ ಇನ್ನೂ ಮುಂತಾದ ಹಾಡುಗಳ ಮೂಲಕ ಲಕ್ಷಾಂತರ ಕನ್ನಡಿಗರ ಮನದಲ್ಲಿ ಎಂದೆಂದಿಗೂ ಚಿರಾಯುವಾಗಿರುತ್ತಿರಿ. ನಿಮ್ಮ ಸಾವಿನಿಂದ ಸುಗಮ ಸಂಗೀತದಲ್ಲಿ ಆವರಿಸಿರುವ ಶೂನ್ಯ ಬೇಗನೆ ಮಾಯವಾಗಿ ಮತ್ತೆ ಚೇತರಿಸಿಕೊಳ್ಳಲಿ, ನೀವೇ ಬೆಳೆಸಿರುವ ಪ್ರತಿಭೆಗಳು ನೀವೇರಿದ ಎತ್ತರಕ್ಕೆ ಏರುವಂತಾಗಲಿ. ಸಾಧ್ಯವಾದರೆ ಮತ್ತೊಮ್ಮೆ ಹುಟ್ಟಿ ಬನ್ನಿ ನಮ್ಮ ನಾಡಿನಲ್ಲಿ. ಏಕೆಂದರೆ ನಿಮ್ಮಂತವರೊಬ್ಬರು ನಮಗೆ ಬೇಕು ಹಾಡಲು...ಹಾಡಿಸಲು.........

    ನಿಮ್ಮ ನೊಂದ ಅಭಿಮಾನಿ

    ಉದಯ್ ಇಟಗಿ

    ಚೀನು ಅಚಿಬೆಯ “ಡೆಡ್ ಮೆನ್ಸ್ ಪಾಥ್”

  • ಗುರುವಾರ, ಡಿಸೆಂಬರ್ 24, 2009
  • ಬಿಸಿಲ ಹನಿ
  • ವಿಷಯ ಸೂಚನೆ: ಈ ಲೇಖನವನ್ನು ನನ್ನ ಬ್ಲಾಗಿನ ಒಂದು ವರುಷದ ಹುಟ್ಟುಹಬ್ಬದ ವಿಶೇಷತೆಗಾಗಿ ಸಿದ್ಧಪಡಿಸಿದ್ದೆ. ಆದರೆ ಹುಟ್ಟುಹಬ್ಬದ ಲೇಖನ ಮತ್ತು ಈ ಲೇಖನಗಳೆರಡೂ ಸೇರಿ ಓದಲು ತುಂಬಾ ದೊಡ್ಡದಾಗುತ್ತದೆಂದು ಇಂದು ಪ್ರತ್ಯೇಕವಾಗಿ ಕೊಡುತ್ತಿದ್ದೇನೆ. ಓದಿ ಅಭಿಪ್ರಾಯಿಸಿ.

    ಚೀನು ಅಚಿಬೆ ಸಮಕಾಲಿನ ಜಗತ್ತು ಕಂಡ ದೈತ್ಯ ಪ್ರತಿಭೆಯ ಬರಹಗಾರ. ನೈಜೇರಿಯಾ ಮೂಲದ ಚೀನು ಹುಟ್ಟಿದ್ದು ನೈಜೇರಿಯಾದ ಓಗಿಡಿ ಎಂಬ ಹಳ್ಳಿಯಲ್ಲಿ. ಅದೇ ಊರಿನಲ್ಲಿ ಅವನ ತಂದೆ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದುದರಿಂದ ಅವನ ವಿಧ್ಯಾಭ್ಯಾಸ ಅಲ್ಲಿಯೇ ಮುಂದುವರಿಯಿತು. ಮುಂದೆ ಆತ ಯೂನಿವರ್ಷಿಟಿ ವಿಧ್ಯಾಭ್ಯಾಸಕ್ಕಾಗಿ ಇಂಗ್ಲೀಷ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ಇಬಾಡನ್ ಎಂಬಲ್ಲಿ ಮುಗಿಸಿದ. ಅಲ್ಲಿಯೇ ಆತ ಯೂರೋಪಿಯನ್ನರು ಆಫ್ರಿಕಾ ಖಂಡದ ಬಗ್ಗೆ ಬರೆದ ಬಹಳಷ್ಟು ಕಾದಂಬರಿಗಳನ್ನು ಓದಲು ಆರಂಭಿಸಿದ್ದು. ಹೀಗೆ ಓದುವಾಗ ಅವನಿಗೇನನ್ನಿಸಿತೋ ಏನೋ ಇನ್ಮುಂದೆ ನಮ್ಮ ಕಥೆಯನ್ನು ನಾವೇ ದಾಖಲಿಸಿದರೆ ಚೆನ್ನ ಎಂದುಕೊಂಡು ಬರಹಗಾರನಾಗಲು ನಿರ್ಧರಿಸಿದ. ಹಾಗೆಂದೇ ಆತ ಆಫ್ರಿಕಾ ಖಂಡದ ಮುಖ್ಯವಾಗಿ ನೈಜೇರಿಯಾದವರ ನೋವು ನಲಿವುಗಳನ್ನು ಎಲ್ಲೂ ಆವುಟಗೊಳಿಸದೆ ಅಬ್ಬರಗೊಳಿಸದೆ ಇದ್ದಕ್ಕಿದ್ದಂತೆ ದಾಖಲಿಸುತ್ತಾ ಹೋದ. ಪರಿಣಮವಾಗಿ ಬಹಳಷ್ಟು ಕಥೆ, ಕಾದಂಬರಿಗಳನ್ನು ಹೊರತಂದನು. ಅವನ ಮೊಟ್ಟ ಮೊದಲ ಕಾದಂಬರಿ “ಥಿಂಗ್ಸ್ ಫಾಲ್ ಅಪಾರ್ಟ್” ಇಂಗ್ಲೀಷ ಸಾಹಿತ್ಯವಲಯದಲ್ಲಿ ಬಹು ಚರ್ಚೆಗೊಳಗಾದ ಕಾದಂಬರಿ. ಮಾತ್ರವಲ್ಲ ಅವನಿಗೆ ಅಪಾರ ಕೀರ್ತಿ, ಯಶಸ್ಸುಗಳೆರಡನ್ನೂ ತಂದುಕೊಟ್ಟಿತು. ಮುಂದೆ ಇದೇ ಕಾದಂಬರಿಗೆ ನೋಬೆಲ್ ಪ್ರಶಸ್ತಿಯೂ ಸಹ ದೊರಕಿತು. ಮುಂದೆ ಈತ “No Longer at Ease” (1960), “Arrow of God” (1964), “A Man of the People” (1966) ಎನ್ನುವ ಕಾದಂಬರಿಗಳನ್ನು "Marriage Is A Private Affair" (1952), "Dead Men's Path" (1953), “The Sacrificial Egg and Other Stories” (1953) ಎನ್ನುವ ಕಥಾಸಂಕಲನಗಳನ್ನು ಹೊರತಂದನು.

    ಚೀನು ಅಚಿಬೆಯು ಕಾದಂಬರಿಗಳನ್ನು ಬರೆಯುವದರಲ್ಲಿ ಪ್ರಸಿದ್ಧಿ ಪಡೆದಷ್ಟೆ ಸಣ್ಣ ಕಥೆಗಳನ್ನು ಬರೆಯುವದರಲ್ಲಿಯೂ ಸಹ ಎತ್ತಿದ ಕೈ. ಆತನ ಬಹಳಷ್ಟು ಕಥೆಗಳು ಗಾತ್ರ ಮತ್ತು ರಚನೆಯಲ್ಲಿ ಚಿಕ್ಕದಾಗಿದ್ದರೂ ಅಗಾಧವಾದದ್ದನ್ನೇನೋ ಹೇಳುತ್ತವೆ. ಅಂಥ ಕಥೆಗಳಲ್ಲಿ ಓದುಗರನ್ನು ಚಿಂತನೆಗೆ ಹಚ್ಚುವ ಮತ್ತು ಚರ್ಚಿಸುವಂತೆ ಮಾಡುವ ಕಥೆ “ಡೆಡ್ ಮೆನ್ಸ್ ಪಾಥ್”. ಘಟನೆಯಿಂದ ಘಟನೆಗೆ ಬಹಳಷ್ಟು ವಿವರಣೆಗಳಿಲ್ಲದೆ ಬೇಗ ಬೇಗನೆ ಸಾಗುವ ಈ ಕಥೆ ಕೊನೆಯಲ್ಲಿ ಓದುಗರನ್ನು ಬೆಚ್ಚಿಬೀಳಿಸುವಂತೆ ಮಾಡುತ್ತದೆ. ಈ ಕಥೆಯು ಆಧುನಿಕತೆ ಮತ್ತು ಸಾಂಪ್ರದಾಯಕತೆಯ ನಡುವಿನ ತಿಕ್ಕಾಟವನ್ನು ಹೇಳುತ್ತದೆ.

    ಕಥೆ ಆರಂಭವಾಗುವದು ಆಫ್ರಿಕಾದ ಯಾವುದೋ ಒಂದು ಭಾಗದಲ್ಲಿ. ಅದರ ಕಥಾನಾಯಕ ಮೈಕೆಲ್ ಓಬಿ ಉನ್ನತ ವ್ಯಾಸಾಂಗವನ್ನು ಮುಗಿಸಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುತ್ತಾನೆ. ಅವನು ದಕ್ಷ ಹಾಗೂ ನಿಷ್ಟಾವಂತತನಕ್ಕೆ ಹೆಸರುವಾಸಿಯಾಗಿರುತ್ತಾನೆ. ಇದೇ ಕಾರಣಕ್ಕೆ ಅತ್ಯಂತ ಹಿಂದುಳಿದ ಶಾಲೆಯಾದ ಎನ್ಡುಮೆ ಸೆಂಟ್ರಲ್ ಶಾಲೆಯ ಮುಖ್ಯಸ್ತರು ಅದನ್ನು ಮುಂದೆ ತರಲು ಓಬಿ ಸೂಕ್ತವಾದ ವ್ಯಕ್ತಿಯೆಂದು ಪರಿಗಣಿಸಿ ಅವನನ್ನು ಅದರ ಹೆಡ್ ಮಾಸ್ಟರನ್ನಾಗಿ ನೇಮಿಸುತ್ತಾರೆ. ಅವನಲ್ಲಿ ಹೊಸ ಹೊಸ ವಿಚಾರಗಳಿದ್ದವು ಮತ್ತು ಅದಕ್ಕಿಂತ ಹೆಚ್ಚಾಗಿ ಒಂದು ಶಾಲೆಯನ್ನು ಹೇಗೆ ನಡೆಸಬೇಕೆಂಬ ದೂರದೃಷ್ಟಿ ಅವನಲ್ಲಿತ್ತು. ಇದೀಗ ಅವನ್ನೆಲ್ಲ ಕಾರ್ಯರೂಪಕ್ಕೆ ತರಲು ಓಬಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದರಿಂದ ಅತಿ ಉತ್ಸುಕತೆಯಿಂದ ಈ ಕೆಲಸವನ್ನು ಒಪ್ಪಿಕೊಳ್ಳುತ್ತಾನೆ. ಅವನಲ್ಲಿ ಎರಡು ಗುರಿಗಳಿದ್ದವು. ಮೊದಲನೆಯದು ತನ್ನ ಶಾಲೆಯಲ್ಲಿ ಅತಿ ಉನ್ನತ ಕಲಿಕಾ ವಿಧಾನಗಳನ್ನು ಪರಿಚಯಿಸುವದು. ಎರಡನೆಯದು ಇಡಿ ಶಾಲೆಯ ಕೌಂಪೊಂಡನ್ನು ಹೂದೋಟಗಳಿಂದ ಅಲಂಕರಿಸುವದು. ಆ ನಿಟ್ಟಿನಲ್ಲಿ ಅವನು ಕಾರ್ಯೋನ್ಮುಖನಾಗುತ್ತಾನೆ.

    ಒಂದು ದಿವಸ ಹೂದೋಟಗಳನ್ನು ಪರಿಶೀಲಿಸುವಾಗ ಕೌಂಪೊಂಡಿನೊಳಗೆ ಹೆಂಗಸೊಬ್ಬಳು ನಡೆದುಹೋಗುತ್ತಾಳೆ. ಇವಳೇಕೆ ಕೌಂಪೊಂಡಿನೊಳಗೆ ನಡೆದುಹೊಗುತ್ತಿದ್ದಾಳೆ ಎಂದು ಹತ್ತಿರ ಹೋಗಿ ನೋಡುತ್ತಾನೆ. ಅಲ್ಲಿ ಆಗಲೇ ಬಳಸಿಬಿಟ್ಟ ಕಾಲುದಾರಿಯೊಂದು ನಿರ್ಮಾಣವಾಗಿದೆ. ನೀವೇಕೆ ಈ ಊರಿನವರನ್ನು ಇಲ್ಲಿ ಹಾದುಹೋಗಲು ಅಪ್ಪಣೆ ನೀಡಿದಿರಿ ಎಂದು ಅಲ್ಲಿ ಅದಾಗಲೇ ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯನ್ನು ಕೇಳುತ್ತಾನೆ. ಅದಕ್ಕವನು “ಹಿಂದೆ ನಾವು ಈ ದಾರಿಯನ್ನು ಮುಚ್ಚುಹಾಕಲು ಪ್ರಯತ್ನಿಸಿದಾಗ ನಮ್ಮ ಮತ್ತು ಊರಿನವರ ನಡುವೆ ದೊಡ್ದ ಜಗಳವೇ ಆಯಿತು. ಏಕೆಂದರೆ ಈ ಹಾದಿ ಊರಿನ ದೇವಸ್ಥಾನವನ್ನು ಮತ್ತು ಸ್ಮಶಾಣವನ್ನು ಒಂದುಗೂಡಿಸುವದರಿಂದ ಅವರಿಗೆ ಬಹಳ ಮುಖ್ಯವಾಗಿದೆ ” ಎಂದು ಹೇಳುತ್ತಾನೆ. “ಅದಕ್ಕೂ ಇದಕ್ಕೂ ಏನು ಸಂಬಂಧ? ಅದಲ್ಲದೆ ಇದು ನಡೆದಿದ್ದು ಹಿಂದೆ. ಈಗ ಹೀಗಾಗಲು ಸಾಧ್ಯವಿಲ್ಲ” ಎಂದು ಮಾರನೇ ದಿವಸವೇ ಆ ಹಾದಿಯನ್ನು ಮುಚ್ಚಿಹಾಕುತ್ತಾನೆ. ಈ ಘಟನೆಯ ಮಾರನೇ ದಿವಸವೇ ಆ ಊರಿನ ಪೂಜಾರಿ ಶಾಲೆಗೆ ಬಂದು ಓಬಿಯನ್ನು ಮತ್ತೆ ಆ ಹಾದಿಯನ್ನು ತೆರೆಯುವಂತೆ ಆಗ್ರಹಿಸುತ್ತಾನೆ. ಆದರೆ ಓಬಿ ಇದಕ್ಕೆ ಒಪ್ಪುವದಿಲ್ಲ. “ಈ ದಾರಿಯಿಂದಲೇ ನಮ್ಮ ಪೂರ್ವಿಕರು ನಮ್ಮನ್ನು ಭೇಟಿ ನೀಡುವದು. ಅದಲ್ಲದೆ ನಮ್ಮ ಮಕ್ಕಳು ಹುಟ್ಟಿ ಬರುವದು ಈ ದಾರಿಯಿಂದಲೇ.” ಎಂದು ಹೇಳಿ ಪೂಜಾರಿ, ಓಬಿಯ ಮನವೊಲಿಸಲು ನೋಡುತ್ತಾನೆ. ಆದರೆ ಓಬಿ ಅವನಿಗೆ “ಇಂಥ ಮೂಢನಂಬಿಕೆಗಳನ್ನು ನಾವು ನಂಬುವದಿಲ್ಲ. ಇಂಥ ಕಂದಾಚಾರಗಳನ್ನು ನಮ್ಮ ಶಾಲೆಯ ಮಕ್ಕಳು ನೋಡಿ ನಗುವಂತೆ ಮಾಡುವದೇ ನಮ್ಮ ಉದ್ದೇಶ. ಈ ಹಾದಿಯನ್ನು ಮತ್ತೆ ತೆರೆಯಲಾಗುವದಿಲ್ಲ. ಬೇಕಾದರೆ ಕೌಂಪೊಂಡಿನಿಂದಾಚೆ ಈ ದಾರಿಯನ್ನು ನಿರ್ಮಿಸಿಕೊಳ್ಳಿ” ಎಂದು ಹೇಳಿ ಅವನನ್ನು ಲೇವಡಿಮಾಡಿ ಕಳಿಸುತ್ತಾನೆ. ಸರಿಯೆಂದು ಊರಿನ ಪೂಜಾರಿ ಹೊರಟುಹೋಗುತ್ತಾನೆ. ಇದಾಗಿ ಎರಡು ದಿವಸಗಳ ನಂತರ ಆ ಊರಿನಲ್ಲಿ ಹೆಂಗಸೊಬ್ಬಳು ಹೆರಿಗೆ ಸಮಯದಲ್ಲಿ ಸಾಯುತ್ತಾಳೆ. ಇದಕ್ಕೆ ಕಾರಣವೇನಿರಬಹುದೆಂದು ಜೋತಿಸಿಯೊಬ್ಬರನ್ನು ಊರಿನವರು ಕೇಳಿದಾಗ ಪೂರ್ವಿಕರ ಹಾದಿಯನ್ನು ಮುಚ್ಚಿದ್ದರಿಂದ ಹೀಗಾಗಿದೆ ಎಂಬ ಉತ್ತರ ಬರುತ್ತದೆ. ಮಾರನೇ ದಿವಸ ಓಬಿ ಎದ್ದು ನೋಡುತ್ತಾನೆ ಶಾಲೆಯ ಅವಶೇಷಗಳು ಬಿದ್ದಿದ್ದವು. ಹಿಂದಿನ ರಾತ್ರಿ ಊರಿನ ಜನರು ಬಿದಿರಿನ ಕಡ್ದಿಗಳನ್ನು ಕಿತ್ತೆಸೆದು ಮತ್ತೆ ಆ ಹಾದಿಯನ್ನು ತೆರೆದಿದ್ದರು. ಅಲ್ಲದೇ ಹೂದೋಟಗಳನ್ನು ಹಾಳುಮಾಡಿದ್ದರು. ಶಾಲೆಯ ಕಟ್ಟಡವೊಂದನ್ನು ಸಹ ಕೆಡುವಿದ್ದರು. ಅದೇ ದಿವಸ ಸ್ಕೂಲ್ ಇನ್ಸ್ಪೆಕ್ಟರ್ ಶಾಲೆಯ ತಪಾಷಣೆಗಾಗಿ ಬರುತ್ತಾನೆ. ಸ್ಕೂಲ್ ಇನ್ಸ್ಪೆಕ್ಟರ್ ಅಲ್ಲಿರುವ ಕೆಟ್ಟ ಪರಿಸ್ಥಿತಿಯನ್ನು ನೋಡಿ ಶಾಲೆಯ ಬಗ್ಗೆ ಮಾತ್ರವಲ್ಲದೆ ಓಬಿಯು ಬುಡಕಟ್ಟು ಜನಾಂಗದವರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಇಡಿ ಹಳ್ಳಿಯಲ್ಲಿ ಅಶಾಂತಿ ನೆಲೆಸಲು ಕಾರಣನಾಗಿದ್ದಾನೆ ಎಂದು ಅವನ ಬಗ್ಗೆಯೂ ಸಹ ಕೆಟ್ಟ ವರದಿಯೊಂದನ್ನು ನೀಡುತ್ತಾನೆ. ಅಲ್ಲಿಗೆ ಕಥೆ ಮುಗಿಯುತ್ತದೆ. ಮೈಕೆಲ್ ಓಬಿಯ ಪರಿಸ್ಥಿತಿ ಹೇಗಿರಬೇಡ? ನೀವೇ ಊಹಿಸಿ.

    ಇಲ್ಲಿ ಯಾವುದೇ ಬದಲಾವಣೆಯನ್ನು ಶಿಘ್ರದಲ್ಲಿ ತರಲಾಗುವದಿಲ್ಲ ಮತ್ತು ಅದನ್ನು ತರುವದಾದರೆ ಹಂತ ಹಂತವಾಗಿ ಜನರ ಭಾವನೆಗಳಿಗೆ ನೋವಾಗದಂತೆ ತಂದರೆ ಒಳ್ಳೆಯದು ಎನ್ನುವದನ್ನು ಕಥೆಯು ಸೂಚ್ಯವಾಗಿ ಹೇಳುತ್ತದೆ. ಈ ಮೂಲಕ ಮೈಕೆಲ್ ಓಬಿ ಮತ್ತು ಊರ ಜನರ ನಡುವಿನ ಸಾಂಸ್ಕೃತಿಕ ಸಂಘರ್ಷವನ್ನು ಚಿತ್ರಿಸುತ್ತದೆ. ಓಬಿ ಆಧುನಿಕತೆಯನ್ನು ಪ್ರತಿನಿಧಿಸಿದರೆ ಊರಿನ ಪೂಜಾರಿ ಸಾಂಪ್ರದಾಯಕತೆಯನ್ನು ಪ್ರತಿನಿಧಿಸುತ್ತಾನೆ. ಇವರಿಬ್ಬರ ನಡುವಿನ ತಿಕ್ಕಾಟವೇ ಕಥೆಯ ತಿರುಳು. ಮೈಕೆಲ್ ಓಬಿಯು ತಾನಂದುಕೊಂಡಿದ್ದನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದು ಹೊರಡುತ್ತಾನೆ ಮತ್ತು ಹಾಗೆ ಬದಲಾವಣೆಯನ್ನು ತರಬೇಕಾದರೆ ಆತ ತನ್ನ ಸಹಚರರ ಮೇಲೆ ಅದು ಯಾವ ಪರಿಣಾಮ ಬೀರಬಹುದು ಎಂದು ಯೋಚಿಸುವದೇ ಇಲ್ಲ. ಈ ನಿಟ್ಟಿನಲ್ಲಿ ತುಂಬಾ ಅವಸರವಸರವಾಗಿ ನಿರ್ಧಾರಗಳನ್ನು ತೆಗೆದುಕೊಂಡು ತನ್ನ ಸೋಲಿಗೆ ತಾನೇ ಕಾರಣನಾಗುತ್ತಾನೆ.

    ಮೈಕೆಲ್ ಓಬಿಯನ್ನು ಗಿರೀಶ್ ಕಾರ್ನಾಡರ ಬಸವಣ್ಣ (ತಲೆದಂಡ) ಹಾಗೂ ಮೊಹಮ್‍ದ್ ಬೀನ್ ತುಘಲಕ್ (ತುಘಲಕ್) ನಿಗೆ ಹೋಲಿಸಬಹುದು. ನಾಟಕದಲ್ಲಿನ ಬಸವಣ್ಣ ಸಮಾಜದಲ್ಲಿ ಒಂದೊಂದೇ ಬದಲಾವಣೆಗಳನ್ನು ಅತ್ಯಂತ ತ್ವರಿತಗತಿಯಲ್ಲಿ ತರುವದರ ಮೂಲಕ ತನ್ನ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರುತ್ತಾ ಹೋಗುತ್ತಾನೆ. ಆದರೆ ಅದು ಅವನ ಅನುಯಾಯಿಗಳ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವದನ್ನು ಯೋಚಿಸುವದೇ ಇಲ್ಲ. ಈ ಅಸಮಾಧನದ ಹೊಗೆಯೊಂದಿಗೆ ಅವರು ಅವನ ಬದಲಾವಣೆಯನ್ನು ಸಹಿಸಿಕೊಳ್ಳುತ್ತಾರೆ. ಮುಂದೆ ಇದು ಒಬ್ಬರ ನಂತರ ಒಬ್ಬರ ಶರಣರ ತಲೆದಂಡಕ್ಕೆ ಕಾರಣವಾಗುತ್ತದೆ. ಕೊನೆಗೆ ರೊಚ್ಚಿಗೆದ್ದು ಅವನನ್ನೇ ಸಾಯಿಸುತ್ತಾರೆ. ಅದೇ ರೀತಿ ತುಘಲಕ್ ನಾಟಕದಲ್ಲಿ ಮೊಹಮ್‍ದ್ ಬೀನ್ ತುಘಲಕ್‍ನನ್ನು ಗಿರೀಶ್‍ರು ಒಬ್ಬ ದಕ್ಷ, ಚತುರ ಆಡಳಿತಗಾರನನ್ನಾಗಿ ಚಿತ್ರಿಸಿದ್ದಾರೆ. ಅವನು ಹಿಂದೂ- ಮುಸ್ಲಿಂರ ಏಕತೆಗಾಗಿ ಶ್ರಮಿಸುವದು, ದೆಹಲಿಯಿಂದ ದೇವಗಿರಿಗೆ, ದೇವಗಿರಿಯಿಂದ ದೆಹಲಿಗೆ ರಾಜಧಾನಿಯನ್ನು ಸ್ಥಳಾಂತರಿಸುವದು, ನಾಣ್ಯಗಳನ್ನು ಬದಲಾಯಿಸುವದು ಎಲ್ಲವನ್ನು ಪ್ರಜೆಗಳ ಒಳಿತಿಗಾಗಿ ಮಾಡುತ್ತಾನೆ. ಆದರೆ ಅವನ ಪ್ರಜೆಗಳು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದ್ದರಿಂದ ಅವನ ಕೆಲಸಗಳು ಅವನ ಅವನತಿಗೆ ಕಾರಣವಾಗುತ್ತವೆ. ಇದು ನಾಟಕದ ಕೊನೆಯಲ್ಲಿನ ಅವನ ಸ್ವಗತಗಳಲ್ಲಿ ವ್ಯಕ್ತವಾಗುತ್ತದೆ. ಇವರಿಬ್ಬರ ಶೀಘ್ರ ಬದಲಾವಣೆಗಳು ಅವರಿಗೇ ಮುಳುವಾಗುವಂತೆ ಓಬಿಯ ಶೀಘ್ರ ಬದಲಾವಣೆಗಳು ಸಹ ಅವನಿಗೇ ಮುಳುವಾಗುತ್ತವೆ.

    ಹಾಗಿದ್ದರೆ ನಮಗೆಲ್ಲಾ ಬದಲಾವಣೆ ಬೇಡವಾ? ಖಂಡಿತ ಬೇಕು. ಆದರೆ ಅದು ಜನರ ಸಹಕಾರದೊಂದಿಗೆ ನಿಧಾನಗತಿಯಲ್ಲಿ ಆದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎನ್ನುವದನ್ನು ಕಥೆ ಒತ್ತಿ ಹೇಳುತ್ತದೆ.

    (ಈ ಕಥೆಯ ಅನುವಾದವನ್ನು ಶೀಘ್ರದಲ್ಲಿಯೇ ನಿರೀಕ್ಷಿಸಿ)
    -ಉದಯ್ ಇಟಗಿ

    ಹ್ಯಾಪಿ ಬರ್ಥಡೆ ಟು ಯೂ “ಬಿಸಿಲ ಹನಿ”

  • ಬಿಸಿಲ ಹನಿ
  • ಮೊಟ್ಟ ಮೊದಲಿಗೆ ನಿಮಗೊಂದು ಸಂತಸದ ವಿಚಾರವನ್ನು ಹೇಳುತ್ತೇನೆ. ಇಂದಿಗೆ ಅಂದರೆ ಡಿಸೆಂಬರ್ 24 ಕ್ಕೆ ನಾನು ಬ್ಲಾಗ್ ಆರಂಭಿಸಿ ಒಂದು ವರ್ಷವಾಯಿತು. ಹ್ಯಾಪಿ ಬರ್ಥಡೇ ಟು ಯೂ ‘ಬಿಸಿಲ ಹನಿ’. ನೋಡ ನೋಡುತ್ತಿದ್ದಂತೆಯೇ ಒಂದು ವರ್ಷವಾಯಿತು. ಈ ಒಂದು ವರ್ಷದಲ್ಲಿ ನನಗೆ ಸಾಕಷ್ಟು ಬ್ಲಾಗ್ ಗೆಳೆಯರನ್ನು ಹಾಗೂ ನನ್ನದೇ ಆದಂಥ ಸಾಂಸ್ಕೃತಿಕ ವಲಯವೊಂದನ್ನು ತಂದುಕೊಟ್ಟಿದೆ.

    ನಾನು ಈ ಮೊದಲು ಬ್ಲಾಗ್ ಬಗ್ಗೆ ಕೇಳಿದ್ದೆನಾದರು ಅದನ್ನು ಹೇಗೆ ಓಪನ್ ಮಾಡುವದೆಂದು ಗೊತ್ತಿರಲಿಲ್ಲ. ನಿಧಾನವಾಗಿ ಬ್ರೌಸ್ ಮಾಡುತ್ತಾ ಮಾಡುತ್ತಾ ಎಲ್ಲವನ್ನೂ ಕಲಿತುಕೊಂಡು ಡಿಸೆಂಬರ್ 24. 2008ರಂದು ನನ್ನದೇ ಒಂದು ಬ್ಲಾಗ್ ಓಪನ್ ಮಾಡಿದೆ. ಅಂದೇ ಜೀವದ ಗೆಳೆಯ ಮಂಜುವಿನ ಹುಟ್ಟು ಹಬ್ಬವಾಗಿದ್ದರಿಂದ ಈ ಹಿಂದೆ ಅವನ ಹುಟ್ಟು ಹಬ್ಬಕ್ಕೆಂದು ಉಡುಗೊರೆಯಾಗಿ ಕೊಟ್ಟ ಕವನವನ್ನೇ ಪ್ರಕಟಿಸುವದರ ಮೂಲಕ ಬ್ಲಾಗ್ ಲೋಕಕ್ಕೆ ಕಾಲಿಟ್ಟೆ. ಅದರಿಂದಾಚೆ ಬಹಳಷ್ಟು ಪದ್ಯಗಳನ್ನು ಬರೆಯುತ್ತಾ ಬಂದೆ. ಒಬ್ಬೊಬ್ಬರಾಗಿ ಬ್ಲಾಗ್ ಗೆಳೆಯರು ಪರಿಚಯವಾಯಿತು. ಅವರ ಬ್ಲಾಗಿಗೆ ಭೇಟಿ ಕೊಟ್ಟು ಅವರ ಲೇಖನಗಳನ್ನು ಓದಿದೆ. ಸ್ಪೂರ್ತಿಗೊಂಡು ನಾನೂ ಯಾಕೆ ಲೇಖನಗಳನ್ನು ಬರೆದು ನೋಡಬಾರದು ಎನಿಸಿ ಆರಂಭಿಸಿಯೇ ಬಿಟ್ಟೆ. ಅಲ್ಲಿಯವರೆಗೆ ಬರಿ ಕವನಕ್ಕಷ್ಟೆ ಸೀಮಿತವಾಗಿದ್ದ ನನ್ನ ಬರವಣಿಗೆ ನಿಧಾನವಾಗಿ ಲೇಖನಗಳಿಗೂ ವಿಸ್ತಾರಗೊಂಡಿತು.

    ಯಾರ ಹಂಗಿಗೊಳಗಾಗದೆ, ಯಾವುದೇ ಮುಲಾಜಿಲ್ಲದೆ ನಮಗನಿಸಿದ್ದನ್ನು ಬರೆಯಲು ಹುಟ್ಟಿಕೊಂಡ ಬ್ಲಾಗಿಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು. ನಾನು ಈಗಾಗಲೆ ಹೇಳಿದಂತೆ ಅದು ನನ್ನೊಳಗಿನ ಬರಹಗಾರನನ್ನು ಬಡಿದೆಬ್ಬಿಸಿದೆ. ನನಗೆ ನನ್ನದೆ ಆದ ಬರಹಗಾರರ ವಲಯವನ್ನು ನಿರ್ಮಿಸಿಕೊಟ್ಟಿದೆ. ಸಮಾನ ಆಸಕ್ತರು, ಸಮಾನ ದುಃಖಿಗಳು, ಒಳ್ಳೊಳ್ಳೆ ಸ್ನೇಹಿತರನ್ನು ಕಟ್ಟಿಕೊಟ್ಟಿದೆ. ಇದೀಗ ಬರಹಕ್ಕೂ ನನಗೂ ಎಂಥ ಗಾಢ ಸಂಬಂಧ ಬೆಳೆದಿದೆಯೆಂದರೆ ಬರೆಯದೆ ಹೋದರೆ ನಾನಿಲ್ಲ, ನಾನಿಲ್ಲದೆ ಹೋದರೆ ಬರಹವಿಲ್ಲ ಎಂದೆನಿಸಿಬಿಟ್ಟಿದೆ. ಬರೆಯದೆ ಹೋದರೆ ಏನನ್ನೋ ಕಳೆದುಕೊಂಡಂಥ ಚಡಪಡಿಕೆ. ಈ ನಿಟ್ಟಿನಲ್ಲಿ ನಾನು ಇಷ್ಟರಮಟ್ಟಿಗೆ ಬೆಳೆಯಲು ಪ್ರೋತ್ಸಾಹಿಸಿದ ನನ್ನ ಸಹ ಬ್ಲಾಗಿಗರಿಗೆ, ಸ್ನೇಹಿತರಿಗೆ, ಹಾಗೂ ಹಿತೈಷಿಗಳಿಗೆ ನನ್ನ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

    ಹಾಗೆ ನೋಡಿದರೆ ನಾನು ಇದನ್ನು ಬರೆಯಬೇಕೋ ಬೇಡವೋ ಎನ್ನುವ ಗೊಂದಲದೊಳಗೆ ಅಂಥ ಗಟ್ಟಿಯಾದದ್ದೇನೂ ಬರೆದಿಲ್ಲ. ಇನ್ನು ಮುಂದೆ ಅನುವಾದದ ಜೊತೆಗೆ ಸ್ವಂತದ್ದೇನಾದರು ಬರೆಯಬೇಕೆಂದು ನಿರ್ಧರಿಸುವೆ. ಆದರೆ ಬರೆಯಬೇಕೋ ಬೇಡವೂ ಎನ್ನುವ ಗೊಂದಲ ಇದ್ದೇ ಇರುತ್ತದೆ. ಅದು ನನ್ನೊಬ್ಬನನ್ನು ಮಾತ್ರವಲ್ಲ ಎಲ್ಲ ಬರಹಗಾರರನ್ನು ಕಾಡುತ್ತಿರುತ್ತದೆ. ಏಕೆಂದರೆ ನಾವೆಲ್ಲರೂ ಒಂದಲ್ಲ ಒಂದು ಗೊಂದಲಗಳೊಂದಿಗೆ ಸದಾ ಬದುಕುತ್ತಲೇ ಇರುತ್ತೇವೆ. ಆ ಗೊಂದಲಗಳನ್ನು ಸೀಳಿಕೊಂಡು ನಮ್ಮ ಬರಹದಲ್ಲಿ ಸ್ಪಷ್ಟವಾಗುತ್ತಾ ಹೋಗಬೇಕು. ಹಾಗಾಗಲು ಸಾಧ್ಯವೇ? ಹಾಗಾಗುತ್ತೇನೆಯೇ? ಗೊತ್ತಿಲ್ಲ.

    ನಿಮ್ಮೆಲ್ಲ ಪ್ರೀತಿ, ಪ್ರೋತ್ಸಾಹ ಹೀಗೆ ನಿರಂತರವಾಗಿರಲಿ ಎಂದು ಆಶಿಸುತ್ತಾ ನನ್ನ ಮುಂದಿನ ಬರಹದೊಂದಿಗೆ ನಿಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬೈ, ಬೈ.

    -ಉದಯ್ ಇಟಗಿ

    ಉಣ್ಣಿಕಥಾ

  • ಬುಧವಾರ, ಡಿಸೆಂಬರ್ 16, 2009
  • ಬಿಸಿಲ ಹನಿ
  • ಕಥಾ ಹಿನ್ನೆಲೆ: "ಉಣ್ಣಿಕಥಾ” ಮಲಯಾಳಂ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಗಿಟ್ಟಿಸಿಕೊಂಡು ಮನೆಮಾತಾಗಿದೆ. ಪೂರ್ವದ ಮೇಲೆ ಪಶ್ಚಿಮದ ಹೊಡೆತವನ್ನು ಕಥೆ ಧ್ವನಿಸುತ್ತದೆ. ಪೂರ್ವಾತ್ಯರಿಗೆ ಪಾಶ್ಚಿಮಾತ್ಯದ ವ್ಯಾಮೋಹ ಹಾಗೂ ಅದನ್ನೇ ಬಂಡವಾಳ ಮಾಡಿಕೊಂಡು ಪಾಶ್ಚಿಮಾತ್ಯರಿಂದ ಪೂರ್ವಾತ್ಯರ ಮೇಲೆ ಹಿಡಿತ ಸಾಧಿಸುವದನ್ನು ಕಥೆ ಸೂಚ್ಯವಾಗಿ ಹೇಳುತ್ತದೆ.



    ಇಲ್ಲಿ ಎರಡು ವಿಶೇಷತೆಗಳಿವೆ. ಸಾಮಾನ್ಯವಾಗಿ ಅಜ್ಜಿಯರು ಮೊಮ್ಮಕ್ಕಳಿಗೆ ಕಥೆ ಹೇಳಿದರೆ ಇಲ್ಲಿ ಮೊಮ್ಮಗ ಅಜ್ಜಿಗೆ ಕಥೆ ಹೇಳುತ್ತಿದ್ದಾನೆ. ಎರಡನೆಯದಾಗಿ ಕಥೆಯಲ್ಲಿ ಸಿನಿಮಾಅಟೋಗ್ರಾಫಿಕ್ ಶೈಲಿಯಿದೆ. ಅಂದರೆ ಕಥೆಯನ್ನು ಹೇಳುವಾಗ ಪಾತ್ರಗಳು ಹಾಗೂ ಚಿತ್ರಣಗಳು ಗೋಡೆಯ ಮೇಲೆ ಮೂಡುತ್ತವೆ. ಅಲ್ಲದೇ ಕಥೆಯಲ್ಲಿ ಅಲ್ಲಲ್ಲಿ ಪಶ್ಚಿಮದ ದಾಳಿಯನ್ನು ಸಂಕೇತಗಳ ಮೂಲಕ ಹೇಳಲಾಗಿದೆ. ಅದನ್ನು ಓದುಗರು ಗುರುತಿಸಬಹುದು.

    ಕಥೆಯ ಕೊನೆಯಲ್ಲಿ ಮುಠಾಶಿ ಕಥೆಯನ್ನು ಕೇಳುತ್ತಾ ಕೇಳುತ್ತಾ ನಿದ್ರೆ ಹೋಗುತ್ತಾಳೆ. ಆದರೆ ನಾವು ಓದುಗರು ಎಚ್ಚೆತ್ತುಕೊಳ್ಳುತ್ತೇವೆ. ಅಂದರೆ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.



    “ಉಣ್ಣಿ, ಉಣ್ಣಿ ನಂಗೊಂದು ಕಥೆ ಹೇಳು ಬಾರೋ” ಮುಠಾಶಿ ಕರೆದಳು.


    ಮುಠಾಶಿ ಆಗಷ್ಟೆ ತನ್ನ ರಾತ್ರಿಯ ಮಿತವಾದ ಗಂಜಿ ಊಟವನ್ನು ಮುಗಿಸಿ ಸಂತೃಪ್ತಿಯಿಂದ ಎಲೆ ಅಡಿಕೆಯನ್ನು ಜಗಿಯುತ್ತಾ ಅದರ ರಸಸ್ವಾದವನ್ನು ಹೀರುತ್ತಾ ಕುಳಿತಿದ್ದಳು. ಈಗ ಉಣ್ಣಿಗಾಗಿ ಕಾಯಹತ್ತಿದಳು. ಉಣ್ಣಿಯ ಕಥೆಯನ್ನು ಕೇಳದೇ ಮುಠಾಶಿಗೆ ನಿದ್ರೆಯೇ ಬರುತ್ತಿರಲಿಲ್ಲ. ಉಣ್ಣಿ ಬರುವ ಸೂಚನೆಗಳು ಕಾಣದೆ ಹೋದಾಗ ತೆರೆದಿಟ್ಟ ಬಾಗಿಲಿನೊಳಗೆ ಇಣುಕುತ್ತಾ ಮತ್ತೊಮ್ಮೆ ಅವನನ್ನು ಕೂಗಿದಳು “ಬಾ ಉಣ್ಣಿ”. ಅವಳು ಅವನ ಕಥೆ ಕೇಳುವದಕ್ಕೆ ಪರಿತಪಿಸುತ್ತಿದ್ದಳು.


    “ಉಣ್ಣಿ ಹೋಂ ವರ್ಕ್ ಮಾಡ್ತಿದಾನೆ. ಶಾಲೆಯಲ್ಲಿ ಈಗಾಗಲೇ ಅವನ ಕ್ಲಾಸುಗಳು ಜೋರಾಗಿ ಸಾಗಿವೆ. ಅದಲ್ಲದೆ ಅವನದು ಈಗ ಎರಡನೇ ಕ್ಲಾಸು ಬೇರೆ.” ಅವನ ತಾಯಿ ಮುಠಾಶಿಯನ್ನು ಎಚ್ಚರಿಸಿದಳು.
    “ಉಣ್ಣಿ, ಒಂದೇ ಒಂದು ಸಣ್ಣಕತಿ ಹೇಳು ಸಾಕು. ಅದೇ ಉಣ್ಣಿಕಥಾ!” ಮುಠಾಶಿ ಬೇಡಿದಳು. ಅವಳು ಗೋಡೆಗೊರಗಿ ಕಾಲುಚಾಚಿಕೊಂಡು ಮಂಚದ ಮೇಲೆ ಕುಳಿತಿದ್ದಳು. ಕೋಣೆಯಲ್ಲಿ ಕಡಿಮೆ ಪ್ರಕಾಶಮಾನವುಳ್ಳ ಬಲ್ಬ್ ಇದ್ದುದರಿಂದ ಅಲ್ಲಿ ಮಬ್ಬು ಮಬ್ಬಾದ ಬೇಳಕಿತ್ತು.


    “ಅಮ್ಮಾ, ಉಣ್ಣಿ ಯಾವಾಗ್ಲೂ, ದಿನಾಲೂ ಹೇಗೆ ತಾನೆ ಕತಿ ಹೇಳ್ತಾನೆ? ಅವನೀಗ ಹೋಂ ವರ್ಕ್ ಮಾಡಬೇಕು”


    “ಇದೇ ಕಡೇದ್ದು ಮಗಳೇ, ಇನ್ಮುಂದೆ ಕೇಳಲ್ಲ”
    “ಅಮ್ಮಾ, ನಿನ್ನೆನೂ ನೀನು ಹೀಗೆ ಹೇಳಿರಲಿಲ್ವಾ?”


    ಮುಠಾಶಿ ಅಪರಾಧಿ ಪ್ರಜ್ಞೆಯಿಂದ ತನ್ನ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಿದಳು. ಅವಳಿಗೆ ವಯಸ್ಸಾಗಿದ್ದರಿಂದ ಅವಳ ದೇಹವೆಲ್ಲಾ ಸುಕ್ಕುಗಟ್ಟಿ ಹೋಗಿತ್ತು. ಇದೀಗ ಚಿಕ್ಕ ಮಗುವಿನಂತೆ ಸಪ್ಪೆ ಮುಖ ಮಾಡಿ ಕುಳಿತಿದ್ದನ್ನು ನೋಡಿ ಉಣ್ಣಿಯ ಅಮ್ಮನ ಮನಸ್ಸು ಕರಗಿತು.


    “ಉಣ್ಣಿ, ಹೋಗು ಮುಠಾಶಿಗೆ ಕಥೆ ಹೇಳು ಹೋಗು. ಅವಳನ್ನು ಮಲಗಿಸಿದ ಮೇಲೆ ನಿನ್ನ ಹೋಂ ವರ್ಕ್ ಮಾಡುವಂತಿ”


    ತನ್ನ ಅಜ್ಜಿಗೆ ಬೇಗನೆ ನಿದ್ರೆ ಬರಲೆಂದು ಉಣ್ಣಿ ಮನದಲ್ಲಿಯೇ ಪ್ರಾರ್ಥಿಸಿದ. ಗಂಟೆ ಅದಾಗಲೇ 9.30 ಆಗಿತ್ತು.


    ಈಗ ಉಣ್ಣಿ ಬಂದು ಮುಠಾಶಿಯ ಪಕ್ಕ ಕುಳಿತ. ಅವಳ ಮುಖ ಖುಶಿಯಿಂದ ಹೊಳೆಯತೊಡಗಿತು. ದಿನಾ ರಾತ್ರಿ ಮುಠಾಶಿ ಉಣ್ಣಿಯ ಕಥೆಯನ್ನು ಕೇಳದೇ ಮಲಗುವದಿಲ್ಲ. ಅದವಳಿಗದು ಒಂದು ರೀತಿಯ ಅಭ್ಯಾಸವಾಗಿದೆ. ಕೆಟ್ಟ ಅಭ್ಯಾಸ! ಅದನ್ನು ಬಿಡಬೇಕೆಂದರೂ ಅವಳ ಕೈಯಿಂದ ಇನ್ನೂ ಸಾಧ್ಯವಾಗಿಲ್ಲ.


    “ನಿನಗೆ ಎಂಥಾ ಕತಿ ಬೇಕು, ಮುಠಾಶಿ?”


    “ಚನ್ನಾಗಿರೋದು ಯಾವದೋ ಒಂದು, ನಂಗೆ ನಿದ್ರೆ ತರುವಂಥದ್ದು”


    “ಹಾಗಾದರೆ, ಗಾಜಿನ ಮರದ ಕತೆ ಹೇಳಲೆ?”


    “ಹೂಂ”


    ಉಣ್ಣಿ ಮುಠಾಶಿಯ ಕಡೆ ಸರಿಯುತ್ತಾ ತದೇಕಚಿತ್ತದಿಂದ ತನ್ನ ಮುಂದಿರುವ ಗೋಡೆಯನ್ನೇ ನೋಡುತ್ತಾ ಕುಳಿತ. ಅದೊಂದು ಖಾಲಿ ಗೋಡೆ. ಅಲ್ಲಿ ಯಾವುದೇ ಫೋಟೊಗಳಾಗಲಿ, ಅಲಂಕಾರಿಕ ವಸ್ತುಗಳಾಗಲಿ ಇರಲಿಲ್ಲ. ಈಗ ಆ ಗೋಡೆಯ ಮೇಲೆ ಮೊಟ್ಟಮೊದಲಿಗೆ ಮೋಟುಮೋಟಾದ ಮನುಷ್ಯನ ಚಿತ್ರವೊಂದು ಮೂಡಿತು. ಆ ಮನುಷ್ಯನ ಕಿವಿಯಲ್ಲಿ ಚಿನ್ನದಿಂದ ಮಾಡಿದ ದಪ್ಪ ದಪ್ಪನಾದ ಓಲೆಗಳಿದ್ದವು. ಮಾತ್ರವಲ್ಲ ಅವನ ಮೋಟುಮೊಟಾದ ಬೆರಳುಗಳಲ್ಲೂ ಸಹ ಚಿನ್ನದ ಉಂಗುರಗಳಿದ್ದವು.


    “ಮುಠಾಶಿ, ಅಗೋ ಅಲ್ಲಿ ನೋಡು. ಅದು ಕುರುಮಾನ್ ಪಣಿಕ್ಕನ್”


    ಗೋಡೆಯ ಮೇಲೆ ಮೂಡಿರುವ ಮನುಷ್ಯನ ಚಿತ್ರವನ್ನು ಉದ್ದೇಶಿಸಿ ಉಣ್ಣಿ ಹೇಳಿದ. ಅಷ್ಟರಲ್ಲಿ ಪಲ್ಲಕ್ಕಿಯೊಂದು ಗೋಡೆಯ ಮೇಲೆ ಅಡ್ದಲಾಗಿ ಹೋಯಿತು. ಕೈಯಲ್ಲಿ ಬೀಸಣಿಗೆಯೊಂದನ್ನು ಹಿಡಿದುಕೊಂಡು ಕುರುಮಾನ್ ಆ ಪಲ್ಲಕಿಯಲ್ಲಿ ತುಸು ಗಂಭೀರವಾಗಿ ಕುಳಿತಿದ್ದಾನೆ. ಅದರ ಸುತ್ತಲೂ ಅವನ ಪರಿಚಾರಕರಿದ್ದಾರೆ. ಮುಂದೆ ಮುಂದೆ ಒಬ್ಬ ಪಂಜನ್ನು ಹಿಡಿದು ಬಂಗಾರದ ಬೆಳಕನ್ನು ಬೀರುತ್ತಾ ನಡೆಯುತ್ತಿದ್ದಾನೆ.


    “ಉಣ್ಣಿ, ಕುರುಮಾನ್ ಪಣಿಕ್ಕನ್ ಎಲ್ಲಿಗೆ ಹೋಗುತ್ತಿದ್ದಾನೆ?”


    “ಸಂಪಿಗೆ ಮರದ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗುತ್ತಿದ್ದಾನೆ”


    ತಕ್ಷಣ ಆ ಬಿಳಿಗೋಡೆಯ ಮೇಲೆ ದೊಡ್ದದೊಂದು ಹಸಿರು ಹಸಿರಾದ ಸಂಪಿಗೆ ಮರ ಅರಳಿ ನಿಂತಿತು. ಆ ಮರವು ಸಂಪೂರ್ಣವಾಗಿ ಹೂಗಳಿಂದ ತುಂಬಿ ಹೋಗಿದ್ದರಿಂದ ಅವುಗಳ ಭಾರಕ್ಕೆ ಮರವು ತುಸು ಬಾಗಿದಂತೆ ಭಾಸವಾಯಿತು. ಆ ಸಂಪಿಗೆ ಮರದ ಹೂಗಳ ಸುಗಂಧ ಗಾಳಿಯಲ್ಲಿ ಸೇರಿಕೊಂಡು ಇಡಿ ವಾತಾವರಣ ಮತ್ತಷ್ಟು ಆಹ್ಲಾದಕರಗೊಂಡಿತ್ತು.


    ಕುರುಮಾನ್‍ನ ಸೇವಕರು ಪಲ್ಲಕ್ಕಿಯನ್ನು ಮೆಲ್ಲಗೆ ಮರದ ಮುಂದೆ ಇರಿಸಿದರು. ಕುರುಮಾನ್ ಪಣಿಕ್ಕನ್ ತನ್ನ ಬಲಗಡೆಯಿಂದ ಕೆಳಗಿಳಿದ. ತಕ್ಷಣ ಒಬ್ಬ ಸೇವಕ ಓಡಿ ಬಂದು ಅವನ ಕೈಯಲ್ಲಿದ್ದ ಬೀಸಣಿಗೆಯನ್ನು ತೆಗೆದುಕೊಂಡು ಪಲ್ಲಕ್ಕಿಯಲ್ಲಿಟ್ಟ. ನಸುಕಿನ ತಂಗಾಳಿಗೆ ಮರದ ಎಲೆಗಳು ಅಲುಗಾಡಿದವು. ಕುರುಮಾನ್ ಎಲ್ಲಿಗಾದರು ಹೋಗಬೇಕಾದರೆ ಸದಾ ತನ್ನ ಜೊತೆಯಲ್ಲಿ ಬೀಸಣಿಗೆಯನ್ನು ಒಯ್ಯುತ್ತಿದ್ದ-ಅದು ಮಳೆಗಾಲವಾದರೂ ಸರಿಯೇ!


    ಆ ಸಂಪಿಗೆ ಮರದ ಬುಡದಲ್ಲಿ ಸಣ್ಣದೊಂದು ಕಟ್ಟೆಯಿತ್ತು. ಆ ಕಟ್ಟೆಯ ಮೇಲೆ ಮೂರ್ತಿಯೊಂದನ್ನು ಇರಿಸಲಾಗಿತ್ತು. ಅದು ಎಣ್ಣೆಗಟ್ಟಿತ್ತು. ಕುರುಮಾನ್ ಪಣಿಕ್ಕನ್ ಪೂಜೆ ಸಲ್ಲಿಸಿದ ಮೇಲೆ ತನ್ನ ಎರಡೂ ಹಸ್ತಗಳನ್ನು ಜೋಡಿಸಿ ಕಾವಿಲಮ್ಮನಿಗೆ ನಮಸ್ಕರಿಸಿದ. ಕಾವಿಲಮ್ಮನ ಪಕ್ಕ ಯಾವುದೋ ಪುರಾತನ ಕಾಲದ ಪಣತಿಯೊಂದು ಉರಿಯುತ್ತಿತ್ತು. ಅದರ ಬೆಳಕು ಸ್ವಲ್ಪ ಹೆಚ್ಚೇ ಇತ್ತು.


    “ಉಣ್ಣಿ, ಯಾರದು?”


    ಚನ್ನಾಗಿರುವ ಉಡುಪಧಾರಿಯೊಬ್ಬ ಆ ಬಿಳಿ ಗೋಡೆಯ ಮೇಲೆ ಮೂಡಿದ. ಅವನು ಅಂಗಿ ಧರಿಸಿದ್ದ. ಕೂದಲನ್ನು ನೀಟಾಗಿ ಕತ್ತರಿಸಿ ಬಾಚಿದ್ದ. ಆದರೆ ಅಲ್ಲಿರುವರೆಲ್ಲರೂ ತಮ್ಮ ಕೂದಲನ್ನು ಬಾಚಿ ತುರುಬಿನಂತೆ ಗಂಟು ಕಟ್ಟಿದ್ದರಿಂದ ಅವರ ಮಧ್ಯ ಈ ವ್ಯಕ್ತಿ ಅಪರಿಚಿತನಂತೆ ಕಂಡ.


    “ಅವನು ಮೆಲಕ್ಕೋರನ್. ಮಸಿದಿ ಮಂದಿರಗಳನ್ನು ಕಟ್ಟುವವ.” ಉಣ್ಣಿ ಹೇಳಿದ.
    ಮೆಲಕ್ಕೋರನ್, ಕುರುಮಾನ್ ಪಣಿಕ್ಕನ್ ಇರುವಲ್ಲಿಗೆ ನಡೆದುಬಂದು ತಲೆ ಬಗ್ಗಿಸಿ ತನ್ನ ಎರಡೂ ಕೈಗಳನ್ನು ಜೋಡಿಸಿ ಅತ್ಯಂತ ಗೌರವದಿಂದ ನಮಸ್ಕರಿಸಿದ.


    ಪೂರ್ವದ ದಿಗಂತ ಕಳೆಗುಂದುತ್ತಿತ್ತು.
    “ಯಾರು ನೀನು?”


    “ನಾನು ಪಶ್ಚಿಮ ದೇಶದವನು. ಒಬ್ಬ ಮೇಸ್ತ್ರಿ. ಮೆಲಕ್ಕೋರನ್ ನನ್ನ ಹೆಸರು”


    “ನಿನಗೇನು ಬೇಕು?”


    “ಕೆಲಸ”


    ಪಣಿಕ್ಕನ್ ತನ್ನ ಆಪ್ತಸಲಹಾಗಾರನತ್ತ ನೋಡಿದ. ಆ ಪಂಜಿನ ಬೆಳಕಲ್ಲಿ ಅವನು ತನ್ನ ತಲೆ ಅಲ್ಲಾಡಿಸುತ್ತಿರುವದು ಕಾಣಿಸಿತು.
    ಒಡನೆಯೇ ಸಂಪಿಗೆ ಮರದ ಎಲೆಗಳು ಚರಚರನೆ ಸದ್ದು ಮಾಡಿದವು. ಅದರಲ್ಲಿದ್ದ ಬಣ್ಣ ಬಣ್ಣದ ಪಕ್ಷಿಗಳು ತಮ್ಮ ನಿದ್ರೆಯಲ್ಲಿಯೇ ಒಮ್ಮೆ ಕದಲಿದವು. ಗೂಡಿನಲ್ಲಿದ್ದ ಮೊಟ್ಟೆಗಳು ಗಾಳಿಯಲ್ಲಿ ಏನನ್ನೋ ಪಿಸುಗುಟ್ಟಿದಂತೆ ಭಾಸವಾಯಿತು.


    “ಮೆಲಕ್ಕೋರನ್, ನಿನಗಿಲ್ಲಿ ಕೆಲಸವಿಲ್ಲ. ಪಕ್ಕದ ರಾಜ್ಯಗಳಿಗೆ ಹೋಗಿ ಕೇಳು”


    “ಇಲ್ಲ, ಇಲ್ಲಿಯೇ ನಿಮ್ಮ ಕಣ್ಣೆದುರಿಗೆ ಈಗಲೇ ಮಾಡುವಂಥ ಒಂದು ಕೆಲಸವಿದೆ” ಮೆಲಕ್ಕೋರನ್ ಹೇಳಿ ಪುನಃ ವಿನಮ್ರನಾಗಿ ತಲೆಬಾಗಿ ನಿಂತ.


    ಪಣಿಕ್ಕನ್ ಆಶ್ಚರ್ಯಚಕಿತನಾಗಿ ಮತ್ತೊಮ್ಮೆ ತನ್ನ ಆಪ್ತಸಲಹಾಗಾರನತ್ತ ನೋಡಿದ.


    “ಈ ಮರವನ್ನೇ ನೋಡಿ” ಮೆಲಕ್ಕೋರನ್ ಹೇಳುತ್ತಾ ಹೋದ “ತುಂಬಾ ಹಳೆಯದಾಗಿದೆ. ಗೆದ್ದಲು ಹಿಡಿದು ಈಗಲೋ ಆಗಲೋ ಬಿದ್ದುಹೋಗುವಂತಿದೆ. ಕಾವಿಲಮ್ಮನಿಗೆ ಹೆಚ್ಚು ದಿನ ನೆರಳು ಕೊಡಲಾರದು. ಇದನ್ನು ಕಿತ್ತೊಗೆದು ಹೊಸ ಮರವೊಂದನ್ನು ನೆಡೋಣ”


    “ಹಾಗೆ ಮಾಡಲು ಸಾಧ್ಯವೇ?”
    “ನಾನು, ಎಂದೆಂದಿಗೂ ಗೆದ್ದಲು ಹಿಡಿಯದ, ಎಲೆಗಳನ್ನು ಉದುರಿಸಲಾರದಂಥ ಮರವೊಂದನ್ನು ನೇಡುತ್ತೇನೆ.”


    “ಅಂಥದ್ದೊಂದು ನಿಜಕ್ಕೂ ಇದೆಯೇ ಮೆಲಕ್ಕೋರನ್?”


    “ಹಾ, ಹೌದು ಪಶ್ಚಿಮ ದೇಶದಲ್ಲಿದೆ”


    “ಸರಿ, ಹಾಗಾದರೆ. ನಮಗೂ ಅಂಥದ್ದೊಂದು ಮರವೊಂದವಿರಲಿ. ಈ ಕೂಡಲೇ ನಿನ್ನ ಕೆಲಸವನ್ನು ಆರಂಭಿಸು.”


    ಮೆಲಕ್ಕೋರನ್ ತನ್ನ ತಲೆ ನೆಲಕ್ಕೆ ತಾಗುವಂತೆ ಬಗ್ಗಿ ನಮಸ್ಕರಿಸಿ ಆ ಕತ್ತಲಲ್ಲಿ ಮಾಯವಾದ. ಕುರುಮಾನ್ ತನ್ನ ಪಲ್ಲಕ್ಕಿಯಲ್ಲಿ ಕುಳಿತ. ಸೇವಕನೊಬ್ಬ ಬೀಸಣಿಗೆಯನ್ನು ಅವನ ಕೈಗಿತ್ತ. ಮುಂದೆ ಮುಂದೆ ಪಂಜಿನ ಬೆಳಕು ಹಿಂದೆ ಹಿಂದೆ ಪಲ್ಲಕ್ಕಿ ಹೊರಟು ಕುರುಮಾನ್ ಪಣಿಕ್ಕನ್‍ನ ವಾಡೆಯನ್ನು ತಲುಪಿತು.


    ಕತ್ತಲು ಕರಗುತ್ತಿತ್ತು. ಮರದ ಮೇಲ್ತುದಿಗಳು ಬಿಳಿಚಿಕೊಂಡಿದ್ದವು. ಪಣತಿಯಲ್ಲಿನ ಎಣ್ಣೆ ತೀರಿಹೋಗುತ್ತಿತ್ತು.


    “ಉಣ್ಣಿ, ಆ ಸಂಪಿಗೆ ಮರವನ್ನು ಕತ್ತರಿಸುತ್ತಾರಾ?” ಮುಠಾಶಿ ಹತಾಶಳಾಗಿ ಕೇಳಿದಳು.


    ಅಷ್ಟರಲ್ಲಿ ಮರ ಕತ್ತರಿಸಿದ ಸದ್ದು ಕೇಳಿಸಿತು. ಈ ಭೂಮಿಯಷ್ಟು ಹಳೆಯದಾದ ಮರವನ್ನು ಕತ್ತರಿಸಿದ ಮೇಲೆ ದಣಿವಾರಿಸಿಕೊಳ್ಳಲು ಮೆಲಕ್ಕೋರನ್ ಪಕ್ಕದಲ್ಲಿದ್ದ ಕಲ್ಲುಬಂಡೆಗೆ ಆತು ಕುಳಿತನು. ಆಹಾರವನ್ನು ಹುಡುಕಿಕೊಂಡು ಹೊರಗೆ ಹೋಗಿದ್ದ ಹಕ್ಕಿಗಳೆಲ್ಲಾ ಮರವನ್ನು ಕತ್ತರಿಸಿದ ಸದ್ದಿಗೆ ಹಾರುತ್ತಾ ವಾಪಾಸಾದವು. ತಮ್ಮ ಗೂಡುಗಳು, ಮೊಟ್ಟೆಗಳು ಕಾಣಿಸದೆ ಕಬ ಕಬ ಎಂದು ಚೀರುತ್ತಾ ಅಸಹಾಯಕವಾಗಿ ಅತ್ತಿಂದಿತ್ತ ವೃತ್ತಾಕಾರದಲ್ಲಿ ಹಾರಾಡತೊಡಗಿದವು. ಮೆಲಕ್ಕೋರನ್ ಅವುಗಳತ್ತ ಗರಸನ್ನು ಎಸೆದು ಓಡಿಸಲು ಪ್ರಯತ್ನಿಸಿದ. ಆದರವು ತಕ್ಷಣಕ್ಕೆ ಹಾರಿಹೋಗದೆ ಕತ್ತರಿಸಿದ ಮರದ ಬಳಿ ಸ್ವಲ್ಪ ಹೊತ್ತು ಸುಳಿದಾಡಿದವು.


    “ಅಯ್ಯೋ! ಪಾಪ ಉಣ್ಣಿ, ಪಾಪ” ಮುಠಾಶಿ ಮರುಗಿದಳು.


    ಉಣ್ಣಿ ಮುಂದುವರಿಸಿದ.


    ಗೋಡೆಯ ಮೇಲೆ ಮತ್ತೆ ಮೆಲಕ್ಕೋರನ್‍ನ ಆಕೃತಿ ಮೂಡಿತು. ಅವನು ಹುಚ್ಚಿಗೆ ಬಿದ್ದವರ ತರ ಮರವನ್ನು ಕಟ್ಟುವದರಲ್ಲಿ ಮಗ್ನನಾಗಿದ್ದ. ಮಧ್ಯ ಮಧ್ಯ ತಂಪಾದ ಎಳೆನೀರನ್ನು ಕುಡಿಯುತ್ತಿದ್ದುದರಿಂದ ಅದರ ಸಿಪ್ಪೆಗಳೆಲ್ಲಾ ಅವನ ಸುತ್ತಲೂ ಬಿದ್ದಿದ್ದವು. ಆಗಾಗ ಕುರುಮಾನ್ ತನ್ನ ಪಲ್ಲಕ್ಕಿಯಲ್ಲಿ ಬಂದು ಮೆಲಕ್ಕೋರನ್ ಏನು ಮಾಡುತ್ತಿದ್ದಾನೆಂಬುದನ್ನು ನೋಡಿಹೋಗುತ್ತಿದ್ದ. ಅವನು ಗಾಜಿನ ದಿನ್ನೆಯನ್ನು ಸಲಿಸಾಗಿ ನಯವಾಗಿ ಕೆತ್ತುವದನ್ನು ನೋಡಿ ಆಶ್ಚರ್ಯಚಕಿತನಾದ. ಗಾಜಿನ ಚೂರುಗಳು ಕಾವಿಲಮ್ಮಳ ಮುಂದೆ ರಾಶಿ ರಾಶಿಯಾಗಿ ಬಿದ್ದಿದ್ದವು. ಕೆಲವು ತುಂಟ ಮಕ್ಕಳು ಮಿರುಗುವ ಗಾಜಿನ ಚೂರುಗಳೊಂದಿಗೆ ಆಡುತ್ತಾ ಆಡುತ್ತಾ ತಮ್ಮ ಬೆರಳುಗಳನ್ನು ಕತ್ತರಿಸಿಕೊಂಡರು.


    “ಓ, ಉಣ್ಣಿ ಅವರಿಗೆ ರಕ್ತ ಬರ್ತಿದಿಯಾ?” ಮುಠಾಶಿ ಕೇಳಿದಳು


    ಮೊದಲು ಮೆಲಕ್ಕೋರನ್ ಮರದ ಬೇರುಗಳನ್ನು ನಂತರ ರೆಂಬೆಕೊಂಬೆಗಳನ್ನು ಕೆತ್ತಿದ. ಉಳಿದಿದ್ದು ಹೂ, ಎಲೆಗಳು ಮಾತ್ರ.


    ಎಲೆಗಳಿಗೆ ಹಸಿರು ಗಾಜು, ಹೂಗಳಿಗೆ ಬಿಳಿಗಾಜು ಬೇಕಾಗಿತ್ತು.


    ಮುಠಾಶಿ ಆ ಬೋಳುಬೋಳಾದ ಮರದತ್ತ ಒಮ್ಮೆ ನೋಡಿದಳು.


    “ಉಣ್ಣಿ, ಹೋಂ ವರ್ಕ್ ಮುಗಿಸೋದಿಲ್ವಾ? ಗಂಟೆ ಆಗಲೆ ಹತ್ತು ಮುಕ್ಕಾಲಾಗುತ್ತಾ ಬಂತು” ಉಣ್ಣಿಯ ಅಮ್ಮ ಕೇಳಿದಳು.


    “ಇನ್ನೇನು ಮುಗಿತಾ ಬಂತು ಅಮ್ಮ”


    “ಬೇಗ ಬೇಗ ಮುಗಿಸು”


    ಮುಠಾಶಿಗೆ ಇನ್ನೇನು ಕಥೆ ಮುಗಿತಾ ಬಂತು ಎಂದು ಗೊತ್ತಾಗಿ ಬೇಸರವಾಯಿತು. ತನ್ನ ಮುಖವನ್ನು ಕೆಳಗೆ ಹಾಕಿದಳು. ನಿದ್ರೆ ಹತ್ತಿರ ಸುಳಿಯುತ್ತಿಲ್ಲ.


    “ಉಣ್ಣಿ” ಅವನ ಕಿವಿಯಲ್ಲಿ ಪಿಸುಗುಟ್ಟಿದಳು “ಅವಸರದಿಂದ ಕತಿ ಮುಗಿಸಬೇಡ”
    ಉಣ್ಣಿ ನಿಧಾನಿಸಿದ.


    ಮೆಲಕ್ಕೋರನ್ ಎಲೆಗಳನ್ನು ಹಾಗೂ ಹೂಗಳನ್ನು ಕೆತ್ತಲು ಬಹಳ ದಿನಗಳನ್ನು ತೆಗೆದುಕೊಂಡ. ಪ್ರತಿಯೊಂದು ಹೂವನ್ನು, ಎಲೆಯನ್ನು ಅತ್ಯಂತ ನಾಜೂಕಾಗಿ ನಿರ್ಮಿಸಿದ.


    ಮೆಲಕ್ಕೋರನ್‍ನ ಕೆಲಸ ನೋಡಲು ಕುರುಮಾನ್ ಆಗಾಗ ತನ್ನ ಪಲ್ಲಕಿಯಲ್ಲಿ ಬಂದುಹೋಗಿ ಮಾಡಿದ. ಕೆಲವು ತುಂಟ ಹುಡುಗರು ಗಾಜಿನ ಚೂರುಗಳ ರಾಶಿಯ ಸುತ್ತ ನೆರೆದು ಅವುಗಳೊಂದಿಗೆ ಆಟವಾಡುತ್ತ ಮತ್ತೆ ಮತ್ತೆ ತಮ್ಮ ಬೆರಳುಗಳಿಗೆ ಗಾಯವನ್ನು ಮಾಡಿಕೊಳ್ಳುತಿದ್ದರು.


    “ಕೊನೆಗೂ ಒಂದೂವರೆ ವರ್ಷದ ನಂತರ ಮರದ ಕೆಲಸ ಮುಗಿಯಿತು” ಉಣ್ಣಿ ಹೇಳಿದ.


    ಕುರುಮಾನ್ ಪಣಿಕ್ಕನ್ ಆ ಮನಮೋಹಕ ಗಾಜಿನ ಮರವನ್ನೊ ನೋಡಿ ಮೋಹಕ್ಕೊಳಗಾದನು. ಹಸಿರು ಗಾಜಿನ ಎಲೆಗಳು ಹಾಗೂ ಬಿಳಿ ಗಾಜಿನ ಎಲೆಗಳು ಸೂರ್ಯನ ಬೆಳಕಿಗೆ ಮಿಂಚುತ್ತಿದ್ದುದರಿಂದ ಆ ನಸುಗತ್ತಲಲ್ಲೂ ಅವುಗಳ ಪಾರದರ್ಶಕತೆ ಆ ಸೂರ್ಯನನ್ನೂ ನಾಚಿಸುವಂತಿತ್ತು.


    ಈ ಅದ್ಭುತವಾದ ಮರವನ್ನು ನೋಡಲು ಜನ ಎಲ್ಲೆಂದರಲ್ಲಿಂದ ಬರತೊಡಗಿದರು. ಕುರುಮಾನ್‍ನಿಗೆ ಮಾತ್ರ ಇಂಥ ಮರವನ್ನು ಕಟ್ಟಿಸಲು ಸಾಧ್ಯ ಎಂದು ಜನ ಮಾತಾಡಿಕೊಂಡರು. ಕುರುಮಾನ್ ಹೆಮ್ಮೆಯಿಂದ ಬೀಗಿದ.


    ಮೆಲಕ್ಕೋರನ್‍ನ ಕೆಲಸವನ್ನು ಮೆಚ್ಚಿಕೊಂಡು ಕುರುಮಾನ್ ಅವನಿಗೆ ಬೆಲೆಬಾಳುವ ಉಡುಗೂರೆಗಳನ್ನು ನೀಡಿ ಸತ್ಕರಿಸಿದ.
    ಗಾಜಿನ ಮರವು ನೋಡಲು ಅದ್ಭುತವಾಗಿತ್ತು. ಸೌಂದರ್ಯದಖಣಿಯಂತಿತ್ತು. ಸೌಂದರ್ಯದಲ್ಲಿ ಅದನ್ನು ಸರಿಗಟ್ಟುವ ಮತ್ತಾವ ವಸ್ತುಗಳು ಅಲ್ಲಿರಲಿಲ್ಲ. ಆದರೇನು? ಅದರಲ್ಲಿ ಸುವಾಸನೆಯೇ ಇರಲಿಲ್ಲ. ಆ ಮರದ ಟೊಂಗೆಗಳಿಗೆ ರಮ್ಯವಾದ ಕೃತಕ ಗೂಡುಗಳನ್ನು ನೇತುಹಾಕಲಾಗಿತ್ತು. ಆದರೆ ಅಲ್ಲಿ ಬಣ್ಣಬಣ್ಣದ ಹಕ್ಕಿಗಳು ತಮ್ಮ ರೆಕ್ಕೆಗಳನ್ನು ಫಡಫಡಿಸುತ್ತಾ ಕುಳಿತಿರಲಿಲ್ಲ.


    ಈಗ ಉಣ್ಣಿ ಕಥೆ ಹೇಳುವದನ್ನು ಮುಗಿಸಿ ಮುಠಾಶಿಯೆಡೆಗೆ ನೋಡಿದ. ಅವಳು ಅದಾಗಲೇ ಗೋಡೆಗೊರಗಿಕೊಂಡು ನಿದ್ರೆ ಹೋಗಿದ್ದಳು.


    ಮಲಯಾಳಂ ಮೂಲ: ಎಮ್. ಮುಕುಂದನ್
    ಇಂಗ್ಲೀಷಗೆ: ಕೆ,ಎಮ್.ಶರೀಫ್ ಮತ್ತು ನೀರದಾ ಸುರೇಶ್
    ಕನ್ನಡಕ್ಕೆ: ಉದಯ್ ಇಟಗಿ


    1೦-4-2011 ರ ಉದಯವಾಣಿಯಲ್ಲಿ ಪ್ರಕಟವಾಗಿದೆ http://www.udayavani.com/news/61820L15-ಉಣ-ಣ-ಕಥ-.html

    ನಾವು ಹುಡುಗರೇ ಹೀಗೆ........

  • ಭಾನುವಾರ, ನವೆಂಬರ್ 29, 2009
  • ಬಿಸಿಲ ಹನಿ
  • (1)
    ಹೌದು ಕಣೋ ಮಂಜು
    ನಾವು ಹುಡುಗರೇ ಹೀಗೆ.......
    ಏನೇನೋ ವಟಗುಟ್ಟಲು ಹೋಗಿ
    ಹೇಳಬೇಕಾದ್ದನ್ನೆಲ್ಲ ನೇರವಾಗಿ ಹೇಳಿ
    ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
    ಮೈ ಜುಮ್ಮೆನ್ನಿಸುವ ಆಲೋಚನೆಗಳನೆಲ್ಲಾ
    ನಮ್ಮೊಳಗೆ ಹಿಡಿದಿಟ್ಟುಕೊಳ್ಳಲಾರದೆ
    ಹಾಳೆಯ ಮೇಲೆ ಬರೆದು ರೆಡ್‍ಹ್ಯಾಂಡಾಗಿ ಸಿಕ್ಕಿಬೀಳುತ್ತೇವೆ
    ಆಗಾಗ ಗುಲಾಬಿಯೊಂದನ್ನು ಹಿಡಿದು
    ಹುಡುಗಿಯರ ಹಿಂದೆನೇ ಸುತ್ತಿ ಸುತ್ತಿ ಉಗಿಸಿಕೊಳ್ಳುತ್ತೇವೆ
    ಇಲ್ಲವೇ ಒಮ್ಮೊಮ್ಮೆ ಸಿನೆಮಿಕ್ಕಾಗಿ
    ರೋಡಲ್ಲಿಯೇ ‘ಐ ಲವ್ ಯು’ ಎಂದು ಕಿರುಚಿ ಹೇಳಿ
    ಅವರನ್ನೂ ಪೇಚಿಗೆ ಸಿಲುಕಿಸಿ ನಾವೂ ಪೇಚಿಗೆ ಸಿಲಕುತ್ತೇವೆ
    ಇನ್ನೂ ಏನೇನೊ ಬೇರೆ ದಾರಿ ಹುಡುಕಿ
    ಹುಡುಗಿಯರನ್ನು ಒಲಿಸಿಕೊಳ್ಳಲು ಹೆಣಗುತ್ತೇವೆ
    ಅದನ್ನು ಅರ್ಥ ಮಾಡಿಕೊಳ್ಳಲಾರದೆ
    ಹುಡುಗಿಯರು ಕೈ ತಪ್ಪಿದಾಗ ನಿರಾಶರಾಗಿ
    ಸ್ವಲ್ಪ ದಿವಸ ಗಡ್ದ ಬಿಡುತ್ತೇವೆ ಗುಂಡು ಹಾಕುತ್ತೇವೆ
    ಆದರೆ ಮತ್ತೊಬ್ಬ ದೇವದಾಸನಾಗದಂತೆ ಎಚ್ಚರವಹಿಸುತ್ತೇವೆ
    ಮುಂದೆ ಅಪ್ಪ ಅಮ್ಮ ಹುಡುಕಿದ ಹುಡುಗಿಯನ್ನೇ ಮದುವೆಯಾಗಿ
    ಹೊಸ ಬದುಕಿಗೆ ಕಾಲಿಡುತ್ತೇವೆ
    ಆಗಾಗ ಹೆಂಡತಿಯಲ್ಲಿ ಅವಳಿಗೆ ಗೊತ್ತಾಗದಂತೆ
    ‘ಅವಳನ್ನು’ ಹುಡುಕುತ್ತೇವೆ
    ಆದರೆ ಅವಳ ಕೈಲಿ ಸಲೀಸಾಗಿ ಸಿಕ್ಕಿಬಿದ್ದು ಛೀ, ಥೂ ಅನಿಸಿಕೊಳ್ಳುತ್ತೇವೆ
    ಅಷ್ಟರಲ್ಲಿ ಬಚ್ಚಿಟ್ಟ ಭಾವನೆಗಳನೆಲ್ಲಾ ಬಿಚ್ಚಿಟ್ಟು
    ಹೆಂಡತಿಯ ಮುಂದೆ ಬಟಾಬಯಲಾಗಿಬಿಟ್ಟಿರುತ್ತೇವೆ
    ಮುಂದಿನ ಬದುಕಲ್ಲಿ ಮಜವೇ ಇರುವದಿಲ್ಲ ಮಂಜು.......
    (2)
    ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ
    ಎರಡೇ ಎರಡು ಮಕ್ಕಳ ತಂದೆಯಾಗಿ
    ಏದುಸಿರುಬಿಡುತ್ತಾ ಮಕ್ಕಳಿಗೆ ಐಸ್ ಕ್ರೀಂ ಕೊಡಿಸುವಾಗ
    ‘ಅವಳು’ ಸಿಗುತ್ತಾಳೆ
    ಕೂಲಾಗಿ ನಗುನಗುತ್ತಾ ಒಂದು ಹಾಯ್ ಹೇಳುತ್ತೇವೆ
    ಆದರವಳು ‘ನೀನು ನನ್ನವನಾಗಿದ್ದರೆ ಎಷ್ಟು ಚನ್ನಾಗಿರುತ್ತಿತ್ತಲ್ವ?’
    ಎಂದು ಕಣ್ಣಲ್ಲಿಯೇ ಹೇಳುತ್ತಾಳೆ
    ನಾವು ಮಾತ್ರ ಅಸಹಾಯಕ ನಗೆ ನಗುತ್ತಾ
    ಅವಳ ಗಂಡ ಮಕ್ಕಳ ಯೋಗಕ್ಷೇಮ ವಿಚಾರಿಸುವದೇ ಇಲ್ಲ
    ಯಾಕೆಂದರೆ ಅವನದೂ ಅದೇ ಕಥೆಯಲ್ಲವೆ?
    ಅದು ನಮಗೆ ಗೊತ್ತಿದ್ದದ್ದೇ ಅಲ್ಲವೇ?
    ನಾವು ಹುಡುಗರೇ ಹೀಗೆ..........

    -ಉದಯ್ ಇಟಗಿ

    ವಿ.ಸೂ: ಈ ಕವನವನ್ನು ಪ್ರತಿಭಾ ನಂದಕುಮಾರವರ “ನಾವು ಹುಡುಗಿಯರೇ ಹೀಗೆ” ಎನ್ನುವ ಕವನದ ಧಾಟಿಯಲ್ಲಿ ಹುಡುಗರು ಹೇಗಿರಬಹುದು ಎಂದು ಯೋಚಿಸಿ ಒಂದಷ್ಟು ತಮಾಷೆ ಒಂದಷ್ಟು ವಿಷಾದ ಭಾವದೊಂದಿಗೆ ಬರೆದಿರುವದು. ಹುಡುಗರಿಗೆ ಇಷ್ಟವಾಗಬಹುದು.

    ಫಕ್ರುದ್ದೀನ್ ಅವರ ಕೆಲವು ಹೈಕುಗಳು

  • ಮಂಗಳವಾರ, ನವೆಂಬರ್ 17, 2009
  • ಬಿಸಿಲ ಹನಿ
  • ಕಾವ್ಯವೊಂದು ಗುಲಾಬಿ
    ಅಷ್ಟು ಸುಲಭವಾಗಿ ಬೆಳೆಯಲಾರದದು
    ಎಲ್ಲರ ಮನೆಯಂಗಳದಲ್ಲಿ!

    ಬಲಗಳಲ್ಲಿಯೇ ಅತ್ಯಂತ ಕೆಟ್ಟ ಬಲ ಹಣ ಬಲ
    ಅವಕಾಶಕ್ಕೆ ತಕ್ಕಂತೆ ಅದು ಎಲ್ಲರನ್ನೂ
    ಕೊಂಡುಕೊಂಡುಬಿಡಬಲ್ಲದು ದೇವರನ್ನೂ ಸಹ!

    ಲಜ್ಜೆ ಪ್ರೀತಿಯ ಮೊದಲ ಕುರುಹು
    ಹಳೆಯ ಮಧುವಿನಷ್ಟೆ ಮಧುರ
    ಆದರದು ವಿರಳವಾಗಿದೆ ಇಂದಿನ ಪ್ರೀತಿಗಳಲ್ಲಿ!

    ಭೂಮಿ ಮತ್ತು ಸ್ವರ್ಗಗಳೆರಡರಲ್ಲೂ ಸಿಗುವ
    ಜೀವನದ ಒಂದೇ ಒಂದು ಪರಮ ಸುಖ
    ರತಿ ಸುಖ!

    ನಿನಗರಿವಿಲ್ಲದಂತೆ ನಿನ್ನ ಕಂಗಳ
    ಕಾಂತಿಯ ಹೊಂಬೆಳಕೊಂದು ಹುಟ್ಟುಹಾಕಿದೆ
    ನನ್ನೊಳಗೆ ನಿಷ್ಕಾಮ ಪ್ರೇಮವೊಂದನ್ನು!

    ಮನಸೊಂದು ಹೊಳೆಯುವ ವಜ್ರ
    ಹಾಯ್ದು ಹೋದರದರೊಳಗೆ ಪಚ್ಚೆಬೆಳಕೊಂದು
    ಮೂಡುವದಲ್ಲಿ ಕಾಮನಬಿಲ್ಲಿನ ಚಿತ್ತಾರ!

    ಮೂಲ ಇಂಗ್ಲೀಷ್: ಡಾ. ಮೊಹಮ್‍ದ್ ಫಕ್ರುದ್ದೀನ್
    ಕನ್ನಡಕ್ಕೆ: ಉದಯ್ ಇಟಗಿ
    ಚಿತ್ರ ಕೃಪೆ: http://www.avadhi.wordpress.com/

    ಓ ಗುಲಾಬಿಯೇ, ನೀನೆಷ್ಟು ಚೆಂದ ಸಾಕವ್ವ, ಪರವ್ವರ ಮುಂದೆ?

  • ಬುಧವಾರ, ನವೆಂಬರ್ 11, 2009
  • ಬಿಸಿಲ ಹನಿ
  • ನಾನು ಮೊನ್ನೆ ಬೆಂಗಳೂರಿನಿಂದ ಇಲ್ಲಿಗೆ ಬರುವಾಗ ಈಗಾಗಲೆ ನೋಡಿದ, ನೋಡಿರದ ಒಂದಷ್ಟು ವಿಸಿಡಿಗಳನ್ನು ಹೊತ್ತುಕೊಂಡು ಬಂದೆ. ಅದರಲ್ಲಿ ಬಹುಪಾಲು ವಿಸಿಡಿಗಳು ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳವು. ಅವುಗಳಲ್ಲಿ ಇತ್ತೀಚಿಗೆ ಉಮಾಶ್ರಿ ತಮ್ಮ ಶ್ರೇಷ್ಠ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ‘ಗುಲಾಬಿ’ಯೂ ಒಂದು. ಗುಲಾಬಿಯನ್ನು ನೋಡುವಾಗ ನನಗೇಕೋ ಗುಲಾಬಿ, ಸಾಕವ್ವ ಮತ್ತು ಪರವ್ವರ ಮುಂದೆ ಸಪ್ಪೆ ಸಪ್ಪೆ ಎನಿಸಿದಳು. ಸಾಕವ್ವ ಮತ್ತು ಪರವ್ವರು ಕಾಡಿದಂತೆ ಗುಲಾಬಿ ನನ್ನನ್ನು ಅಷ್ಟಾಗಿ ಕಾಡಲಿಲ್ಲ. ಬಹುಶಃ ಗುಲಾಬಿಯ ಪಾತ್ರಕ್ಕಿಂತ ಅವಳ ಕತೆ ಹಾಗಿರುವದರಿಂದ ಹಾಗೆ ಅನಿಸಿತೋ ಏನೋ ಗೊತ್ತಿಲ್ಲ. ಒಮ್ಮೊಮ್ಮೆ ಪಾತ್ರಗಳ ಗಟ್ಟಿತನ ಮತ್ತು ಅವುಗಳ ಬಲಾಬಲ ಹೆಚ್ಚಾಗಿ ಕಥೆಯನ್ನು ಅವಲಂಬಿಸಿರುವದರಿಂದ ಹಾಗೆ ಅನಿಸುತ್ತದೆ. ಜಗತ್ತಿನ ಯಾವುದೇ ಸಾಹಿತ್ಯ ತೆಗೆದುಕೊಳ್ಳಿ, ಸ್ತ್ರೀ ಪಾತ್ರಗಳು ನಮ್ಮನ್ನು ಕಾಡಿದಷ್ಟು ಪುರುಷ ಪಾತ್ರಗಳು ಅಷ್ಟಾಗಿ ಕಾಡಲಾರವು. ಇದಕ್ಕೆ ಸ್ತ್ರೀಯರ ಮನೋಲೋಕ ಪುರುಷರ ಮನೋಲೋಕಕ್ಕಿಂತ ಸೂಕ್ಷ್ಮ ಮತ್ತು ಸಂಕೀರ್ಣವಾಗಿರುವದೇ ಕಾರಣ.

    ವೈದೇಹಿಯವರು ಕನ್ನಡದ ಕರಾವಳಿ ಭಾಗದ ಸೂಕ್ಷ್ಮ ಮನಸ್ಸಿನ ಕತೆಗಾರ್ತಿ. ನಾನು ಅವರ ‘ಅಕ್ಕು’, ‘ಅಮ್ಮಚ್ಚಿ ನೆನೆಪು’ ‘ಶಾಕುಂತಳೆಯೊಡನೆ ಒಂದು ಅಪರಾಹ್ನ’ ಇನ್ನೂ ಮುಂತಾದ ಕತೆಗಳನ್ನು ಓದಿದ್ದೇನೆ. ಆದರೆ ಈ ಕತೆಯನ್ನು ಇನ್ನೂ ಓದಲಾಗಿಲ್ಲ. ಸಾಮಾನ್ಯವಾಗಿ ಸ್ತ್ರೀ ಸಂವೇದನೆಗಳ ಸುತ್ತ ಗಿರಕಿ ಹೊಡೆಯುವ ವೈದೇಹಿಯವರ ‘ಗುಲಾಬಿ’ಯ ಈ ಕತೆಯೂ ಇದಕ್ಕೆ ಹೊರತಾಗಿಲ್ಲ. ಆದರೆ ವೈದೇಹಿಯವರ ಕತೆಗೂ ಗಿರೀಶ್ ಅವರ ಕತೆಗೂ ಎಷ್ಟು ಸಾಮ್ಯವಿದೆಯೆಂಬುದು ನನಗೆ ಗೊತ್ತಿಲ್ಲ. ಹೀಗಾಗಿ ಚಲನಚಿತ್ರದಲ್ಲಿ ಮೂಡಿರುವ ಗುಲಾಬಿಯ ಕತೆಯನ್ನು ನಿಮ್ಮ ಮುಂದಿಡುತ್ತಾ ಸಾಕವ್ವ ಮತ್ತು ಪರವ್ವರ ಮುಂದೆ ಗುಲಾಬಿ ನನಗೇಕೆ ಅಷ್ಟಾಗಿ ಕಾಡಲಿಲ್ಲ ಎಂಬುದನ್ನು ಹೇಳುತ್ತೇನೆ.

    ‘ಉಮಾಶ್ರಿ ಎಂದರೆ ಸಾಕವ್ವ, ಸಾಕವ್ವ ಎಂದರೆ ಉಮಾಶ್ರಿ ಎನ್ನುವಷ್ಟರಮಟ್ಟಿಗೆ ಆ ಪಾತ್ರದೊಂದಿಗೆ ನನ್ನನ್ನು ನಾನು ಗುರುತಿಸಿಕೊಂಡಿದ್ದೇನೆ’ ಎಂದು ಸ್ವತಃ ಉಮಾಶ್ರಿಯವರೆ ಹೇಳುತ್ತಾರೆ. ಹೌದು, ಅವರ ಮಾತು ನಿಜ! ಎಂಬತ್ತರ ದಶಕದ ಆದಿಭಾಗದಲ್ಲಿ ಬಂದ ‘ಒಡಲಾಳ’ದ ಸಾಕವ್ವ ಉಮಾಶ್ರಿಯವರಿಗೆ ಕನ್ನಡ ರಂಗಭೂಮಿಯಲ್ಲೊಂದು ವಿಶಿಷ್ಟ ಸ್ಥಾನವೊಂದನ್ನು ಕಲ್ಪಿಸಿಕೊಟ್ಟಿತು. ಉಮಾಶ್ರೀ ಅವರೇ ಹೇಳುವಂತೆ, “ಅದು ಜೀವಮಾನದ ಶ್ರೇಷ್ಟ ಪಾತ್ರ ಮತ್ತು ಯಾವುದೇ ಕಲಾವಿದೆಗೆ ಎದುರಾಗುವ ದೊಡ್ಡ ಸವಾಲು”. “ಇವತ್ತು ನಾಟಕ ರಂಗದಲ್ಲಿ ‘ಆಸ್ಕರ್’ ಪ್ರಶಸ್ತಿ ಅಂತ ಏನಾದರು ಇದ್ದಿದ್ದರೆ ಅದು ಖಂಡಿತವಾಗಿ ಸಾಕವ್ವಳ ಅಭಿನಯದ ಉಮಾಶ್ರಿಯವರಿಗೆ ಸಲ್ಲುತ್ತಿತ್ತು” ಎಂದು ಬಹಳಷ್ಟು ಜನ ಇಂದಿಗೂ ಮಾತಾಡಿಕೊಳ್ಳುತ್ತಾರೆ. ಅಂಥ ಗಟ್ಟಿತನದ ಪಾತ್ರವದು. ನಾನು ಈ ನಾಟಕವನ್ನು ಈಗ್ಗೆ ನಾಲ್ಕು ವರ್ಷಗಳ ಹಿಂದೆ ರಂಗಶಂಕರದಲ್ಲಿ ನೋಡಿದಾಗ ಹಿಂದೆ ಸಾಕವ್ವಳ ಅಭಿನಯದ ಬಗ್ಗೆ ಅಲ್ಲಲ್ಲಿ ಓದಿ ಕಲ್ಪಿಸಿಕೊಂಡ ಉಮಾಶ್ರಿ ಇಲ್ಲಿಯೂ ಸಹ ಏನೂ ಬದಲಾಗದೆ ಕಾಣಿಸಿಕೊಂಡಾಗ ನಿಜಕ್ಕೂ ಅಚ್ಚರಿಯೆನಿಸಿತ್ತು. ದೇವನೂರರ ಸಾಕವ್ವಳಿಗೆ ಜೀವ ತುಂಬಿ ರಂಗದ ಮೇಲೆ ತರುವದು ನಿಜಕ್ಕೂ ಅದು ಯಾವುದೇ ಕಲಾವಿದೆಗೆ ಎದುರಾಗುವ ಒಂದು ದೊಡ್ಡ ಸವಾಲು. ಅದನ್ನು ಉಮಾಶ್ರಿಯವರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದರು. ನಾಟಕದಲ್ಲಿ ಸಾಕವ್ವ ತನ್ಮೂಲಕ ಇಡಿ ದಲಿತ ಲೋಕವನ್ನೇ ಬಿಚ್ಚಿಡುತ್ತಾ ತನ್ನ ಒಡಲಾಳದ ಸಂಕಟ, ತಲ್ಲಣಗಳನ್ನು ನಮ್ಮ ಮುಂದೆ ಹರಡುತ್ತಲೆ ನಮ್ಮನ್ನು ಅವಳ ತೆಕ್ಕೆಗೆ ತೆಗೆದುಕೊಳ್ಳುತ್ತಾಳೆ. ಅವಳು ಓರ್ವ ಮುಗ್ಧ ಹಾಗೂ ಗಟ್ಟಿತನದ ಮಹಿಳೆ. ಸ್ವಾವಲಂಬಿಯಾಗಿ ಬದುಕಲಿಚ್ಛಿಸುವವಳು. ಆಕೆ ಅಬಲೆಯಲ್ಲ. ಬಡತನದ ದಾರಿದ್ರ್ಯದ ನಡುವೆಯೂ ಸಂಸಾರವನ್ನು ಸರಿದೂಗಿಸಬೇಕೆಂಬ ಹಂಬಲ ಅವಳಲ್ಲಿದೆ. ಈ ಕಾರಣಕ್ಕೆ ಸಾಕವ್ವನ ಕಿರುಚಾಟ, ತಳಮಳ. ಸಂಕಟಗಳು ಮತ್ತು ಅಲ್ಲಿರುವ ಎಲ್ಲಾ ಗಂಡು ಪಾತ್ರಗಳಿಗಿಂತ ಗಟ್ಟಿ ನಿಲುವನ್ನುಳ್ಳ ಅವಳ ಮನಸ್ಸು ನಮ್ಮನ್ನು ತಾಗಿಬಿಡುವದರ ಮೂಲಕ ಸಾಕವ್ವ ನಮ್ಮ ನೆನಪಿನಲ್ಲಿ ಅಚ್ಚಳಿಯದೆ ಉಳಿದುಬಿಡುತ್ತಾಳೆ.

    ಉತ್ತರ ಕರ್ನಾಟಕದ ಜಾನಪದ ಕತೆಯೊಂದರ ಆಧಾರಿತ ’ಸಂಗ್ಯಾ ಬಾಳ್ಯಾ’ ಚಲನಚಿತ್ರದಲ್ಲಿನ ಪರವ್ವಳ ಪಾತ್ರ ವಿಶೇಷವಾಗಿ ನಮ್ಮ ಗಮನ ಸೆಳೆಯುತ್ತದೆ. ಆ ಚಿತ್ರವು ಅವರಿಗೆ ಪನೋರಮಾ ಶ್ರೇಷ್ಟ ಪೋಷಕ ನಟಿ ಪ್ರಶಸ್ತಿಯನ್ನು ತಂದುಕೊಟ್ಟಿತು. ಉತ್ತರ ಕರ್ನಾಟಕದ ಹೆಂಗಸೊಬ್ಬಳ ಬಾಡಿ ಲಾಂಗ್ವೇಜ್ ಹಾಗೂ ಡೈಲಾಗ್ ಡೆಲಿವರಿಯನ್ನೆಲ್ಲಾ ಚನ್ನಾಗಿ ಸ್ಟಡಿ ಮಾಡಿ ಕರಗತ ಮಾಡಿಕೊಂಡು ಅಭಿನಯಿಸುವದರ ಮೂಲಕ ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಅದು ಉಮಾಶ್ರೀಯ ವಿಶೇಷತೆ. ಸಂಗ್ಯಾನ ಅತ್ತೆ ಪಾರವ್ವ. ಅತ್ತೆ-ಅಳಿಯರದು ಅವಿನಾಭಾವ ಸಂಬಂಧ. ಅವನು ಏನು ಕೇಳಿದರೂ ಅದನ್ನು ನಡೆಸಿಕೊಡುವಂಥವಳು. ಸಂಗ್ಯಾ ಒಂದು ಸಾರಿ ಜಾತ್ರೆಯಲ್ಲಿ ಆ ಊರಿನ ಭಾರಿ ಶ್ರೀಮಂತ ಶೆಟ್ಟರ ರೂಪವಂತ ಹೆಂಡತಿಯನ್ನು ನೋಡಿ ಮೋಹಕ್ಕೊಳಗಾಗುತ್ತಾನೆ ಮತ್ತು ಅವಳೊಂದಿಗೆ ಒಂದು ರಾತ್ರಿಯನ್ನು ಕಳೆಯಬೇಕೆಂದುಕೊಳ್ಳುತ್ತಾನೆ. ಆಗ ಅದೇ ಜಾತ್ರೆಯಲ್ಲಿ ಅವಳಿಗೆ ಗೊತ್ತಿರಲಾರದೆ ಅವಳ ಚಿನ್ನದ ಸರಿಗೆಯನ್ನು ಕದಿಯುತ್ತಾನೆ. ಇದೇ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತನ್ನ ಅತ್ತೆ ಪರವ್ವಳ ಸಹಾಯ ತೆಗೆದುಕೊಳ್ಳುತ್ತಾನೆ. ಅವಳು ಮೊದಲು ಹಿಂದೆ ಮುಂದೆ ನೋಡಿದರೂ ಕೊನೆಗೆ ಹೇಗೋ ಅವಳ ಒಡತಿಯ ಮನವೊಲಿಸುತ್ತಾಳೆ. ಮುಂದೆ ಸಂಗ್ಯಾ ಮತ್ತು ಅವಳ ಒಡತಿ ಗಂಗಾಳ ಹಾದರ ಬಯಲಾಗಿ ಅವಳೂ ಅದರಲ್ಲಿ ಭಾಗಿಯಾಗಿದ್ದರಿಂದ ಹೆದರಿ ಊರು ಬಿಡುವ ಪ್ರಸಂಗ ಬರುತ್ತದೆ. ಅದೇ ಸಂದರ್ಭದಲ್ಲಿ ಅವಳ ಅಳಿಯ ಸಂಗ್ಯಾನಿಗೆ ಜೀವ ಬೆದರಿಕೆಯಿರುವದು ಗೊತ್ತಾಗಿ ತತ್ತರಿಸುತ್ತಾಳೆ. ತನ್ನ ಜೀವ ಉಳಿಸಿಕೊಳ್ಳಲು ಅವನನ್ನು ಊರು ಬಿಟ್ಟು ಹೋಗೆಂದು ಪರಿ ಪರಿಯಾಗಿ ಕೇಳಿಕೊಳ್ಳುತ್ತಾಳೆ. ಆದರೆ ಹಟವಾದಿ ಸಂಗ್ಯಾ ಅವಳ ಮಾತನ್ನು ಕೇಳುವದಿಲ್ಲ. ಕೊನೆಯ ಪ್ರಯತ್ನವೆಂಬಂತೆ ಈಗಾಗಲೇ ಕೆಟ್ಟು ತವರು ಮನೆ ಸೇರಿರುವ ಅವಳ ಒಡತಿ ಗಂಗಿ ಹತ್ತಿರ ಹೋಗಿ “ಸಂಗ್ಯಾನಿಗೆ ನೀನಾದರು ಊರು ಬಿಟ್ಟು ಹೋಗಲು ಹೇಳು” ಎಂದು ಬೇಡಿಕೊಳ್ಳುತ್ತಾಳೆ. ಅದಕ್ಕೆ ಅವಳ ಒಡತಿ ಆಯ್ತು ಎನ್ನುತ್ತಾಳೆ. ಪರವ್ವ ಅಷ್ಟಕ್ಕೆ ಸಮಾಧಾನಪಟ್ಟುಕೊಂಡು ಹೋಗುತ್ತಾಳೆ. ಮುಂದೆ ತಾನು ಮಾಡಿದ್ದರ ತಪ್ಪಿನ ಅರಿವಾಗಿ ಪರವ್ವ ಊರು ಬಿಟ್ಟು ಹೋಗುತ್ತಾಳೆ. ಇಲ್ಲಿ ಪರವ್ವ ಗಟ್ಟಿ ಹೆಂಗಸಾಗಿದ್ದರೂ ಅಳಿಯನ ಆಸೆಗೆ ಕಟ್ಟುಬಿದ್ದು ತನ್ನ ಒಡತಿಯ ಮನಸ್ಸನ್ನು ಬದಲಾಯಿಸುವದರ ಮೂಲಕ ತನಗಷ್ಟೆ ಅಲ್ಲದೆ ತನ್ನ ಅಳಿಯ ಮತ್ತು ತನ್ನ ಒಡತಿಗೂ ಸಹ ದುರಂತವನ್ನು ತಂದಿಡುತ್ತಾಳೆ. ಅವಳು ಮಾಡಿದ ಇಂಥ ತಪ್ಪಿನಿಂದ ಮೊದಮೊದಲು ಪ್ರೇಕ್ಷಕರ ನಿರಾಕರಣೆಗೆ ಗುರಿಯಾದರೂ ಕೊನೆಯಲ್ಲಿ ಅವಳು ಪಶ್ಛಾತಾಪ ಪಡುವ ರೀತಿಗೆ ಹಾಗೂ ಸಂಗ್ಯಾನನ್ನು ಉಳಿಸಿಕೊಳ್ಳುವಲ್ಲಿನ ಅವಳ ಮಾತೃತ್ವ ನಮ್ಮನ್ನು ಕಾಡಿಬಿಡುತ್ತದೆ.

    ಗುಲಾಬಿ ಒಬ್ಬ ಸೂಲಗಿತ್ತಿ. ತಾನಿರುವ ಊರಿನ ಹೆಂಗಸರ ಹೆರಿಗೆಯನ್ನು ಮಾಡಿಸುವದರಿಂದ ಅವಳು ಆ ಊರಿನವರಿಗೆಲ್ಲಾ ಬೇಕಾಗಿದ್ದಾಳೆ. ಆದರೆ ಅವಳ ಗಂಡನಿಗೆ ಮಾತ್ರ ಬೇಡವಾಗಿದ್ದಾಳೆ. ಅವಳ ಗಂಡ ಅವಳಿಗೆ ತಲಾಖ್ ಕೊಡದೆ ಇನ್ನೊಬ್ಬಳನ್ನು ಮದುವೆಯಾಗಿದ್ದಾನೆ. ಗುಲಾಬಿಗೆ ಮಕ್ಕಳಿಲ್ಲ. ಆದರೆ ಅವಳ ಸವತಿಗೆ ಒಂದು ಮಗುವಿದೆ. ಗುಲಾಬಿಗೆ ಹೇಗಾದರೂ ಆ ಮಗುವಿನ ಪ್ರೀತಿ ಸಂಪಾದಿಸಬೇಕೆಂಬ ಬಯಕೆ. ಆದರೆ ಅದು ಸವತಿ ಮತ್ಸರದಿಂದಾಗಿ ಆಗುತ್ತಿಲ್ಲ. ಹೀಗಾಗಿ ಅವಳು ಹತ್ತಿರದ ಊರಲ್ಲಿ ಇರುವ ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಾ ತನ್ನ ಹೊಸ ಕನಸುಗಳನ್ನು ಹೆಣೆಯುತ್ತಾಳೆ. ಈ ಮಧ್ಯೆ ಯಾವುದೋ ಶ್ರೀಮಂತರ ಮನೆಯಲ್ಲಿ ಸೂಲಗಿತ್ತಿಯ ಕೆಲಸ ಮಾಡಿದ್ದಕ್ಕೆ ಅವಳಿಗೆ ಊಡುಗೊರೆಯಾಗಿ ಬಣ್ಣದ ಟೆಲಿವಿಷನ್ ಸಿಗುತ್ತದೆ. ಅಲ್ಲಿಂದ ಗುಲಾಬಿಯ ಬದುಕು ಅನೇಕ ಕನಸುಗಳನ್ನ ಕಟ್ಟಿಕೊಳ್ಳುತ್ತಾ ಸಾಗುತ್ತದೆ. ಅವಳ ಮನೆಯಲ್ಲಿರುವ ಟೆಲಿವಿಷನ್ ಮತ್ತು ಧಾರಾವಾಹಿಗಳನ್ನು ನೋಡಲು ಬರುವ ಆಸುಪಾಸಿನವರಿಂದಾಗಿ ಅವಳ ಮನೆಯೇ ಅವಳದ್ದಲ್ಲ ಎನ್ನುವಂತೆ ಅಲ್ಲಿ ಹೆಂಗಸರು ಸೇರುತ್ತಾರೆ. ಟಿವಿ ನೋಡುತ್ತಾ ಅವರೆಲ್ಲ ಕಣ್ಣೀರು ಹಾಕುತ್ತಾರೆ. ನಗುತ್ತಾರೆ. ತಮ್ಮ ನಿತ್ಯ ಕಾಯಕದ ನಡುವೆಯೂ ತಾವು ನೋಡಿದ ಸೀರಿಯಲ್ ಕುರಿತು ಮಾತಾಡುತ್ತಾರೆ. ಸೀರಿಯಲ್ಲಿನ ಕತೆಯನ್ನ ತಮ್ಮ ಜೀವನಕ್ಕೆ ಆರೋಪಿಸಿಕೊಂಡು ಬದುಕಲು ಪ್ರಯತ್ನಿಸುತ್ತಾರೆ. ಅದೇ ಊರಿನ ಮೀನುಗಾರರಿಗೆ ಯಂತ್ರ ಚಾಲಿತ ದೋಣಿಗಳಿಂದ ಇರುವ ಸಂಕಷ್ಟಗಳನ್ನು ಮರೆಸಲು ಸಹ ಟೆಲಿವಿಷನ್ ಕಾರಣವಾಗುತ್ತದೆ. ಇದೇ ಸಮಯದಲ್ಲಿ ಎಲ್ಲೋ ನಡೆವ ಯುದ್ಧ ಊರಿನವರಲ್ಲಿ ದೇಶ ಪ್ರೇಮ ಮೂಡಿಸುತ್ತದೆ. ಈ ಸಮಯದಲ್ಲಿ ಹುಟ್ಟುವ ಕೋಮು ಗಲಭೆಗಳಿಂದ ಆ ಊರಿನಲ್ಲಿದ್ದ ಮುಸಲ್ಮಾನರೆಲ್ಲಾ ಮನೆ ಖಾಲಿ ಮಾಡಿಕೊಂಡು ಹೋಗುತ್ತಾರೆ. ಅಲ್ಲೇ ಉಳಿಯುವ ಗುಲಾಬಿಯನ್ನ ಮತೀಯವಾದಿಗಳು ಮನೆಯಿಂದ ಆಚೆಗೆ ಹಾಕುತ್ತಾರೆ. ಇಲ್ಲಿ ಚಿತ್ರದುದ್ದಕ್ಕೂ ಅಲ್ಲಲ್ಲಿ ತಣ್ಣನೆಯ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಾ ಬರುವ ಗುಲಾಬಿ ಕೊನೆಯಲ್ಲಿ ಅವಳನ್ನು ಮನೆಯಿಂದ ಹೊರಹಾಕಿ ದೋಣಿಯಲ್ಲಿ ಕೂಡಿಸುವಾಗ ಯಾವುದೇ ಪ್ರತಿಭಟನೆಯನ್ನು ಮಾಡದೆ ಸೋಲೊಪ್ಪಿಕೊಂಡುಬಿಡುತ್ತಾಳೆ. ಇದು ಅವಳು ಬದುಕಿದ ಕ್ರಮಕ್ಕೆ ವಿರುದ್ಧವಾಗಿ ನಿಲ್ಲುತ್ತದೆ. ಒಂದು ಪಾತ್ರವನ್ನು ಚಿತ್ರದುದ್ದಕ್ಕೂ ಸಮರ್ಥವಾಗಿ ಹಿಡಿದು, ಒಂದು ದನಿಯನ್ನು ಹೊರಡಿಸಿ, ಅದು ಗಿರಿಗೆ ಮುಟ್ಟಬಹುದು ಎನ್ನುವಂಥ ವಿಶ್ವಾಸವನ್ನು ಮೂಡಿಸುವ ಸಂದರ್ಭದಲ್ಲಿ ಆ ದನಿಯನ್ನು ಕ್ಷೀಣಗೊಳಿಸುವ ಅಥವಾ ಹಾಗೆ ಕಾಣಿಸುವಂತೆ ಬಿಂಬಿಸುವ ಪ್ರಯತ್ನ ಗುಲಾಬಿ ಪಾತ್ರವನ್ನು ಸಪ್ಪೆ ಸಪ್ಪೆಯನ್ನಾಗಿ ಮಾಡುತ್ತದೆ.

    ಗುಲಾಬಿ ಪ್ರತಿಭಟಿಸುತ್ತಲೇ ಸೋಲನ್ನೊಪ್ಪಿಕೊಳ್ಳುವದರಿಂದ ನಮ್ಮಲ್ಲಿ ನಿರಾಸೆ ಮೂಡಿಸುತ್ತಾಳೆ. ಸಾಕವ್ವ ಬಡತನದ ಮಧ್ಯೆಯೂ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವ ಹಂಬಲದಿಂದ ನಮ್ಮನ್ನು ಬೆರಗುಗೊಳಿಸುತ್ತಾಳೆ. ಪರವ್ವ ತಾನು ಮಾಡಿರುವ ಹೇಯ ಕೆಲಸಕ್ಕೆ ಪಶ್ಚಾತಾಪ ಪಡುತ್ತಲೇ ತನ್ನ ಕಣ್ಣಿರಿನಲ್ಲಿ ನಮ್ಮನ್ನು ತೊಯ್ಯಿಸಿಬಿಡುತ್ತಾಳೆ. ಈ ಕಾರಣದಿಂದ ಗುಲಾಬಿ ಸಾಕವ್ವ, ಪರವ್ವರಂತೆ ಮನದಲ್ಲಿ ನಿಲ್ಲುವದೇ ಇಲ್ಲ.

    -ಉದಯ ಇಟಗಿ
    ಕೃಪೆ: ಬಿ. ಸುರೇಶ್ ಅವರ ಬ್ಲಾಗ್ http://bsuresha.wordpress.com/

    ಹೆಣ್ಣು ಸದಾ ಸಂದಿಗ್ಧ, ಗೊಂದಲಗಳಲ್ಲಿಯೇ ತನ್ನ ಸಾಕಷ್ಟು ಸಮಯ ಕಳೆದು ಬಿಡುತ್ತಾಳೆ!

  • ಬುಧವಾರ, ನವೆಂಬರ್ 04, 2009
  • ಬಿಸಿಲ ಹನಿ
  • ಅದು 1999ನೇ ಇಸ್ವಿಯೋ ಅಥವಾ ೨೦೦೦ನೇ ಇಸ್ವಿಯೋ ನನಗೆ ಸರಿಯಾಗಿ ನೆನಪಿಲ್ಲ. ಅದು ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ- ಬೆಂಗಳೂರಿನ ಕಬ್ಬನ್ ಪಾರ್ಕಿನ ಬಾಲಭವನದಲ್ಲಿ ನಡೆದಿತ್ತು. ಅಲ್ಲೊಂದು ಕವಯಿತ್ರಿಯರ ಕವಿಗೋಷ್ಟಿ. ಆ ಗೋಷ್ಟಿಗೆ ಪ್ರತಿಭಾ ನಂದಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮವಿದ್ದುದು ಮದ್ಯಾಹ್ನ ಮೂರು ಗಂಟೆಗೆ. ನಾಲ್ಕು ಗಂಟೆಯಾದರೂ ಅವರು ಬರುವ ಯಾವುದೇ ಚಿಹ್ನೆಗಳು ಕಾಣಿಸಲಿಲ್ಲ. ಕಾಯ್ದು ಕಾಯ್ದು ನಾವೆಲ್ಲಾ ಸುಸ್ತಾಗಿದ್ದೆವು. ಈ ಮಧ್ಯ ಸಂಘಟಿಕರು ಅವರ ಆಫೀಸಿಗೆ ಹಾಗೂ ಮನೆಗೆ (ಆಗಿನ್ನೂ ಮೊಬೈಲ್ ಬಳಕೆ ಅಷ್ಟಾಗಿ ಇರಲಿಲ್ಲ) ಆಗಾಗ ಫೋನಾಯಿಸಿ “ಇನ್ನೇನು ಬರುತ್ತಾರೆ, ಈಗ ಬರುತ್ತಾರೆ, ಮಾರ್ಗ ಮಧ್ಯದಲ್ಲಿದ್ದಾರೆ,” ಎನ್ನುವ ವಿಷಯವನ್ನು ನಮಗೆ ಆಗಾಗ ಮೈಕಿನಲ್ಲಿ ಹೇಳುತ್ತಾ ನಮ್ಮನ್ನು update ಮಾಡುತ್ತಿದ್ದರು. ಊಹೂಂ ಆದರೂ ಅವರು ಬರುವ ಯಾವುದೇ ಚಿಹ್ನೆಗಳು ಕಾಣಿಸಲಿಲ್ಲ. ಕೊನೆಗೆ ಬೇಸತ್ತ ಸಂಘಟಿಕರು ಅವರಿಗೆ ಕೊನೆಯದೆಂಬಂತೆ ಫೋನಾಯಿಸಿದಾಗ “ನೀವು ಆರಂಭಿಸಿ. ನಾನು ಬರುತ್ತೇನೆ” ಎಂದು ಹೇಳಿ ಅಪ್ಪಣೆ ನೀಡಿದರು. ಹೀಗಾಗಿ ಅನಿವಾರ್ಯವಾಗಿ ಕವಿಗೋಷ್ಟಿ ಅಧ್ಯಕ್ಷರಿಲ್ಲದೇ ಆರಂಭವಾಯಿತು. ನಾವೆಲ್ಲಾ ಉಸ್ಸಪ್ಪಾ ಎಂದು ಉಸಿರುಬಿಟ್ಟು ಕವಯಿತ್ರಿಯರ ಕವನಗಳನ್ನು ಕೇಳಲು ಕಿವಿ ನಿಮಿರಿಸಿ ಕುಳಿತೆವು. ಅರ್ಧ ಜನ ಕವಯಿತ್ರಿಯರ ಕವನ ವಾಚನವಾದ ಮೇಲೆ ಪ್ರತಿಭಾ ಕೊನೆಗೂ ಆಗಮಿಸಿದರು. ಉಳಿದ ಅರ್ಧ ಜನ ಕವಯಿತ್ರಿಯರ ಕವನವನ್ನು ಕೇಳಿದ ನಂತರ ತಮ್ಮ ಅಧ್ಯಕ್ಷೀಯ ಭಾಷಣವನ್ನು ಆರಂಭಿಸುತ್ತಾ “ನಾನೇಕೆ ತಡವಾಗಿ ಬಂದೆ ಎಂಬುದನ್ನು ನಿಮಗೆ ಹೇಳಲೇಬೇಕು. ಇಲ್ಲದೆ ಹೋದರೆ ಅಪಚಾರವಾಗುತ್ತದೆ. ಹೇಳಿದ ಮೇಲೆ ನೀವು ನನ್ನನ್ನು ಕ್ಷಮಿಸುತ್ತೀರಾ? ಬಿಡುತ್ತೀರಾ? ಎಲ್ಲವೂ ನಿಮಗೆ ಸೇರಿದ್ದು” ಎಂದು ಹೇಳಿ ಮುಂದುವರಿಸುತ್ತಾ “ನಾನು ನನ್ನ ಕೆಲಸಕ್ಕೆ ತಕ್ಕಂತೆ ಇವತ್ತು ಟೀ ಶರ್ಟ್ ಮತ್ತು ಪ್ಯಾಂಟ್ ಹಾಕ್ಕೊಂಡಿದ್ದೆ. ಕೆಲಸವೇನೋ ಒಂದು ಗಂಟೆಯಷ್ಟೊತ್ತಿಗೆಲ್ಲಾ ಮುಗಿಯಿತು. ಕೆಲಸ ಮುಗಿದ ಮೇಲೆ ನಾನು ಕಛೇರಿಯಿಂದ ಹಾಗೆ ಹೊರಟಿದ್ದರೆ ಇಲ್ಲಿಗೆ ಸಮಯಕ್ಕೆ ಸರಿಯಾಗಿ ಬಂದು ಸೇರುತ್ತಿದ್ದೆ. ಆದರೆ ನನ್ನ ಪುರುಷ ಸಹದ್ಯೋಗಿಗಳು ‘ಏನ್ ಮೇಡಂ, ಕವಿಗೋಷ್ಟಿಗೆ ಹೋಗತಿದ್ದೀರಾ.... ಈ ಟೀ ಶರ್ಟ್ ಪ್ಯಾಂಟೆಲ್ಲಾ ಯಾಕೆ ಹಾಕ್ಕೊಂಡು ಹೋಗತೀರಾ? ಮನೆಗೆ ಹೋಗಿ ಲಕ್ಷಣವಾಗಿ ಸೀರೆ ಉಟ್ಕೊಂಡು ಹೋಗಿ’ ಅಂತ ಸಲಹೆ ನೀಡಿದರು. ಆಗ ನಾನು ‘ಹೀಗೆ ಹೋಗೋದಾ? ಅಥವಾ ಸೀರೆ ಉಟ್ಕೊಂಡು ಹೋಗೋದಾ?’ ಅಂತೆಲ್ಲಾ ಯೋಚಿಸಿ ಯೋಚಿಸಿ ಈ ಗೊಂದಲ, ಸಂದಿಗ್ಧತೆಯಿಂದ ಹೊರಬರವದರಲ್ಲಿಯೇ ಅರ್ಧ ಸಮಯ ಕಳೆದುಬಿಟ್ಟೆ. ಕೊನೆಗೆ ಸೀರೆ ಉಟ್ಕೊಂಡೇ ಹೋಗಬೇಕೆಂದು ತೀರ್ಮಾನಿಸಿ ಮನೆಗೆ ಹೋಗಿ ಸೀರೆ ಉಟ್ಕೊಂಡು ಬರೋದ್ರಲ್ಲಿ ಇಷ್ಟು ಹೊತ್ತಾಯಿತು. ಇಲ್ದಿದ್ರೆ ಸಮಯಕ್ಕೆ ಸರಿಯಾಗಿ ಬಂದು ಸೇರುತ್ತಿದ್ದೆ. ಹೆಣ್ಣು ಯಾವಾಗಲೂ ಇಂಥ ಸಂದಿಗ್ಧ, ಗೊಂದಲಗಳಲ್ಲಿಯೇ ಸಾಕಷ್ಟು ಸಮಯ ಕಳೆದು ಬಿಡುತ್ತಾಳೆ ಮತ್ತು ಅವಳೊಬ್ಬಳೇ ಆಗಾಗ ಇಂಥ ಚಿಕ್ಕ ಚಿಕ್ಕ ಸಂದಿಗ್ಧತೆಗಳಿಗೆ ಒಳಗಾಗುತ್ತಿರುತ್ತಾಳೆ. ಆದರೆ ಅದೇ ಪುರುಷನಾಗಿದ್ದರೆ ಉಟ್ಟ ಬಟ್ಟೆಯ ಮೇಲೆ ಹಾಗೆ ಬಂದುಬಿಡಬಹುದಿತ್ತು. ಯಾಕೆಂದರೆ ಅವನಿಗೆ ಇಂಥ ಗೊಂದಲಗಳು ಯಾವುತ್ತೂ ಎದುರಾಗುವದೇ ಇಲ್ಲ” ಎಂದು ಎಂದಿನಂತೆ ತಮ್ಮ ಸ್ತ್ರೀಪರ ಕಾಳಜಿಯ ಹಿನ್ನೆಲೆಯಲ್ಲಿ ಮಾತನಾಡಿದಾಗ ನೆರದಿದ್ದ ಪ್ರೇಕ್ಷಕರು ಕ್ಷಮಿಸದೆ ಇರುತ್ತಾರೆಯೇ? ನೀವೇ ಹೇಳಬೇಕು. ಇದಕ್ಕೆ ನೀವೇನಂತೀರಿ?
    -ಉದಯ ಇಟಗಿ

    ಹೊರನಾಡ ಕನ್ನಡಿಗನ ಸಧ್ಯದ ಮನಸ್ಸು

  • ಶನಿವಾರ, ಅಕ್ಟೋಬರ್ 31, 2009
  • ಬಿಸಿಲ ಹನಿ
  • ಆತ್ಮೀಯರೆ,
    ಮೊನ್ನೆ ‘ವಿಜಯ ಕರ್ನಾಟಕ’ ದಿನಪತ್ರಿಕೆಯು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ‘ಸಾಪ್ತಾಹಿಕ ವಿಜಯ’ಕ್ಕಾಗಿ ‘ಹೊರನಾಡ ಕನ್ನಡಿಗರ ಸದ್ಯದ ಮನಸ್ಸನ್ನು’ ದಾಖಲಿಸಲು ಹೊರನಾಡ ಕನ್ನಡಿಗನಾದ ನನಗೆ ಕೆಲವು ಪ್ರಶ್ನೆಗಳನ್ನು ಕಳಿಸಿ ಅದಕ್ಕೆ ನನ್ನ ಉತ್ತರವನ್ನು ಕೇಳಿತ್ತು. ಇಲ್ಲಿರುವ ಪ್ರಶ್ನೆಗಳಿಗೆ ಸುಮಾರು ೧೦೦-೧೫೦ ಪದಗಳಿಗೆ ಮೀರದಂತೆ ಉತ್ತರಿಸಿದರೂ ಆಯಿತು ಅಥವಾ ಈ ಪ್ರಶ್ನೆಗಳ ಹೊರತಾಗಿ ನಿಮಗೆ ಹೇಳಬೇಕಾದ್ದನ್ನು ಚುರುಕಾಗಿ ಚುಟುಕಾಗಿ ಬರೆದರೂ ಆದೀತು ಎನ್ನುವ ಶರತ್‍ನ್ನು ವಿಧಿಸಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ನನ್ನ ಜ್ಞಾನದ ಮಿತಿಯಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ನಾ ಕಂಡಂತೆ, ಕೇಳಿದಂತೆ, ಅನುಭವಿಸಿದಂತೆ ನನಗನಿಸಿದ್ದನ್ನು ಪ್ರಾಮಾಣಿಕವಾಗಿ ಉತ್ತರಿಸಿದ್ದೇನೆ. ಅದನ್ನೇ ಇಲ್ಲಿ ಮತ್ತೊಮ್ಮೆ ದಾಖಲಿಸಿ ಕೊಡುತ್ತಿದ್ದೇನೆ. ಅದು ಪ್ರಕಟವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಏನೇ ಇರಲಿ ಹೊರನಾಡ ಕನ್ನಡಿಗನಾದ ನನ್ನನ್ನು ಗುರುತಿಸಿ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ‘ವಿಜಯ ಕರ್ನಾಟಕ’ದ ಸಂಪಾದಕರಿಗೆ ಹಾಗೂ ಅದರ ಸಮಸ್ತ ಸಿಬ್ಬಂದಿ ವರ್ಗಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅವರ ಪ್ರೀತಿಗೆ ನಾನು ಯಾವತ್ತೂ ಆಭಾರಿಯಾಗಿದ್ದೇನೆ. ಆ ಪ್ರಶ್ನೋತ್ತರ ಮಾಲಿಕೆಯನ್ನು ನಿಮ್ಮೊಂದಿಗೂ ಯಾಕೆ ಹಂಚಿಕೊಳ್ಳಬಾರದೆಂದೆನಿಸಿ ನಿಮ್ಮ ಮುಂದೆ ಸಾದರಪಡಿಸುತ್ತೇದ್ದೇನೆ. ಈ ನಿಟ್ಟಿನಲ್ಲಿ ನಿಮ್ಮನ್ನೂ ಆರೋಗ್ಯ ಪೂರ್ಣ ಚರ್ಚೆಗೆ ಆಹ್ವಾನಿಸುತ್ತಿದ್ದೇನೆ. ಒಪ್ಪಿಸಿಕೊಳ್ಳಿ. ನಿಮಗೂ ಹಾಗು ಉಳಿದ ಬ್ಲಾಗಿಗರಿಗೂ ರಾಜ್ಯೋತ್ಸವದ ಶುಭಾಶಯಗಳು.
    * ಕನ್ನಡ-ಕರ್ನಾಟಕಕ್ಕಾಗಿ ನೀವು ಮಾಡಿದ ಅಥವಾ ಮಾಡುತ್ತಿರುವ ಒಂದು ಅತ್ಯುತ್ತಮ ಕೆಲಸ ಯಾವುದು?
    ನಾನು ಯಾವತ್ತೂ ನನ್ನ ಕೆಲಸವನ್ನು ಅತ್ಯುತ್ತಮ ಎಂದು ಭಾವಿಸುವದಿಲ್ಲ. ಅದಕ್ಕೆ ಎರಡು ಕಾರಣಗಳಿವೆ.
    ೧) ಒಂದು ಸಾರಿ ನಾವು ಮಾಡುವ/ಮಾಡಿದ ಕೆಲಸ ಅತ್ಯುತ್ತಮವಾಗಿದೆ ಎಂದು ನಮ್ಮ ಮನಸ್ಸಿಗೆ ಬಂದುಬಿಟ್ಟರೆ ಇನ್ನೂ ಮಾಡಬೇಕಾದ ಅತ್ಯುತ್ತಮಕ್ಕಿಂತ ಅತ್ಯುತ್ತಮವಾದ ಎಷ್ಟೋ ಕೆಲಸಗಳು ಹಾಗೆ ಉಳಿದು ಬಿಡುತ್ತವೆ. ಇದರ ಜೊತೆಗೆ ಅತ್ಯುತ್ತಮವಾದ ಕೆಲಸ ಮಾಡಲು ಬೇಕಾಗುವ ಕ್ರಿಯಾಶೀಲಮನಸ್ಸು ಮತ್ತು ಸೃಜನಶೀಲತೆಗಳೆರೆಡೂ ಸತ್ತುಹೋಗುತ್ತವೆ. ನಮ್ಮೊಳಗಿನ ಈ ಕ್ರಿಯಾಶೀಲಮನಸ್ಸು ಮತ್ತು ಸೃಜನಶೀಲತೆಗಳು ಉಳಿದು ಬೆಳೆಯಬೇಕೆಂದರೆ ನಾವು ಮಾಡುವ ಕೆಲಸವನ್ನು ಯಾವತ್ತೂ ಅತ್ಯುತ್ತಮ ಎಂದು ಭಾವಿಸಿಕೊಳ್ಳಬಾರದು. ಇಲ್ಲವಾದರೆ ನಾವು ನಿಂತ ನೀರಾಗಿ ಬಿಡುತ್ತೇವೆ. ಕೆಲಸ ಮಾಡುವವರು ಯಾವಾಗಲೂ ಹರಿಯುವ ನದಿಯಂತಿರಬೇಕೇ ಹೊರತು ನಿಂತ ನೀರಂತಲ್ಲ.
    ೨) ನಾವು ಮಾಡುವ/ಮಾಡಿದ ಕೆಲಸ ಅತ್ಯುತ್ತಮವಾಗಿದೆ ಎಂದು ಅನ್ನುಕೊಳ್ಳುತ್ತಿರುವಾಗಲೇ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಎಲ್ಲೋ ಒಂದು ಕಡೆ ಅಧಮವಾಗಿಬಿಟ್ಟಿರುತ್ತದೆ. ನಿಧಾನಕ್ಕೆ ಕುಳಿತು ಅದನ್ನು ಮತ್ತೊಮ್ಮೆ ಪರಿಶೀಲಿಸಿದಾಗಲೆ ನಮಗೆ ಅದರೊಳಗಿನ ತಪ್ಪುಗಳು ಎದ್ದು ಕಾಣುವವು. ತಪ್ಪುಗಳು ಕಂಡ ಮೇಲೆ ಇನ್ನು ‘ಅತ್ಯುತ್ತಮ’ ಕೆಲಸದ ಪ್ರಶ್ನೆ ಎಲ್ಲಿಂದ ಬಂತು?
    ಆ ನಿಟ್ಟಿನಲ್ಲಿ ಕನ್ನಡ-ಕರ್ನಾಟಕಕ್ಕಾಗಿ ಬರೆಯುವದೊಂದನ್ನು ಬಿಟ್ಟು ನಾನು ಇನ್ನೂ ಏನೇನೂ ಮಾಡಿಲ್ಲವೆಂದೇ ಹೇಳಬಹುದು. ಮುಂದೆ ನನ್ನದೇ ಆದ ಕೆಲವು ಯೋಜನೆಗಳಿವೆ. ನೋಡೋಣ.
    * ಕನ್ನಡ-ಕರ್ನಾಟಕದಲ್ಲಿ ನಿಮಗೆ ಅತ್ಯಂತ ಪ್ರಿಯ ಮತ್ತು ಅಪ್ರಿಯ ಸಂಗತಿ ಯಾವುದು?
    ಕರ್ನಾಟಕದ ಪ್ರಾಂತೀಯ ಭಾಷೆಗಳು ಜಾಗತಿಕರಣದ ಹೊಡೆತಕ್ಕೆ ಸಿಕ್ಕು ನಲುಗದೆ ಇನ್ನೂ ಹಾಗೆ ತಮ್ಮ ಸೊಗಡನ್ನು ಉಳಿಸಿಕೊಂಡಿರುವದು ಹಾಗೂ ಅವು ಅದೇ ಸೊಗಡಿನೊಂದಿಗೆ T. V ಮತ್ತು ಸಿನಿಮಾ ಮಾಧ್ಯಮಗಳನ್ನು ಪ್ರವೇಶಿಸಿ ಜನಪ್ರಿಯವಾಗುತ್ತಿರುವದು ಅತ್ಯಂತ ಖುಶಿಯ ವಿಚಾರ. ಇವತ್ತು ಬಹಳಷ್ಟು ನಿರ್ದೇಶಕರು ಪ್ರಾಂತೀಯ ಭಾಷೆಗಳನ್ನು ತಿದ್ದದೆ ತೀಡದೆ ವಿಶೇಷ ಒತ್ತು ಕೊಟ್ಟು ಹಾಗ್ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ ಈ ಹಿಂದೆ ಈ ಟೀವಿ ಕನ್ನಡದಲ್ಲಿ ಬರುತ್ತಿದ್ದ “ಮೂಡಲ ಮನೆ” ಧಾರಾವಾಹಿ ಭಾಷಾ ದೃಷ್ಟಿಯಿಂದ ಇಡಿ ಉತ್ತರ ಕರ್ನಾಟಕದ ಪ್ರಾದೇಶಿಕತೆಯನ್ನು ಕಟ್ಟಿಕೊಡುವದರ ಮೂಲಕ ಜನಮನ ಸೂರೆಗೊಂಡಿತ್ತು. ಈಗ ಬರುತ್ತಿರುವ “ಪಾರ್ವತಿ-ಪರಮೇಶ್ವರ” ಹಾಸ್ಯ ಧಾರಾವಾಹಿಯಲ್ಲಿ ಪಾತ್ರವೊಂದು (ಯಾವ ಪಾತ್ರವೆಂದು ಸರಿಯಾಗಿ ನೆನಪಿಲ್ಲ) ಮಾತನಾಡುವದು ಉತ್ತರ ಕರ್ನಾಟಕದ ಭಾಷೆಯಲ್ಲೇ. ಇತ್ತೀಚಿಗೆ ತಯಾರಾಗಿರುವ “ಮನಸಾರೆ” ಚಿತ್ರದಲ್ಲಿಯೂ ಸಹ ಉತ್ತರ ಕರ್ನಾಟಕದ ರಾಜು ತಾಳಿಕೋಟಿಯವರು ತಮ್ಮ ಟಿಪಿಕಲ್ ಶೈಲಿಯಲ್ಲಿ ಆ ಭಾಷೆಯನ್ನು ಮಾತನಾಡುವದರ ಮೂಲಕ ಪ್ರೇಕ್ಷಕರ ಮನವನ್ನು ಗೆದ್ದಿದ್ದಾರೆ. ಅಲ್ಲದೆ ಗಿರೀಶ್ ಕಾಸರವಳ್ಳಿಯವರು ಸಹ ತಮ್ಮ ಇತ್ತೀಚಿನ ಸಿನಿಮಾ “ಗುಲಾಬಿ ಟಾಕೀಸ್”ನಲ್ಲಿ ಮಂಗಳೂರಿನ ಬ್ಯಾರೆ ಭಾಷೆಯನ್ನು ಅದಿರುವಂತೆಯೇ ಅಳವಡಿಸಿಕೊಂಡಿರುವದು ಶ್ಲಾಘನೀಯ.
    ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡುವಂಥ ಪರಿಸ್ಥಿತಿ ನಿರ್ಮಾಣವಾಗಿರೋದು ಹಾಗೂ ಬಹಳಷ್ಟು ಬೆಂಗಳೂರಿನ ಕನ್ನಡಿಗರು ತಮ್ಮದೇ ನಾಡಿನ ಬೇರೆ ಪ್ರಾಂತ್ಯದವರನ್ನು ಮತ್ತು ಅವರಾಡುವ ಭಾಷೆಯನ್ನು ಕೀಳಾಗಿ ಕಂಡು ನೆರೆರಾಜ್ಯದವರೊಂದಿಗೆ ಅವರ ಭಾಷೆಯಲ್ಲೇ ಮಾತನಾಡುತ್ತಾ ಅವರೊಂದಿಗೆ ಅನ್ಯೋನ್ಯವಾಗಿರುವದು ಹೀನಾಯ ಹಾಗೂ ದುರ್ದೈವಕರ ಸಂಗತಿ. ಈ ತಾರತಮ್ಯ ಮೊದಲು ಹೋಗಬೇಕು. ಇಲ್ಲವಾದರೆ ಕರ್ನಾಟಕ ಏಕೀಕರಣಕ್ಕೆ ಏನರ್ಥ?
    * ಕನ್ನಡ-ಕರ್ನಾಟಕದ ಬಗೆಗಿನ ನಿಮ್ಮ ಒಂದು ಕನಸು?
    ಕನ್ನಡ ನಾಡಿನ ಮಕ್ಕಳೆಲ್ಲಾ ಕನ್ನಡ ಕಲಿಯುವದರ ಜೊತೆಗೆ ಇಂಗ್ಲೀಷ ಭಾಷೆಯನ್ನೂ ಕಲಿತು ಅದರ ಮೇಲೆ ಪ್ರಭುತ್ವವನ್ನು ಸಾಧಿಸಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಹೊರನಾಡಿನಲ್ಲೂ ಹಾರಿಸುವಂತಾಗಬೇಕು. ಇಂಗ್ಲೀಷ ಭಾಷೆ ಅಷ್ಟಾಗಿ ಗೊತ್ತಿರದ ಅರಬ್ ರಾಷ್ಟ್ರಗಳು ಸಹ ಇದೀಗ ಆ ಭಾಷೆಯ ಪ್ರಾಮುಖ್ಯತೆಯನ್ನು ಅರಿತು ಇಂಗ್ಲೀಷನ್ನು ಕಲಿಯಲು ವಿದ್ಯಾರ್ಥಿಗಳಿಗೆ ವಿಪುಲವಾದ ಅವಕಾಶಗಳನ್ನು ಮಾಡಿಕೊಡುತ್ತಿವೆ. ಉದಾಹರಣೆಗೆ ಈಗ್ಗೆ ಹತ್ತು ವರ್ಷಗಳಿಂದಷ್ಟೆ ಇಂಗ್ಲೀಷ ಭಾಷೆಯನ್ನು ಐಚ್ಚಿಕ ವಿಷಯವನ್ನಾಗಿ ಕಲಿಸಲು ತಿರ್ಮಾನಿಸಿದ ಲಿಬಿಯಾ ದೇಶ ಜಾಗತಿಕರಣ, ಹೊಸ ಹೊಸ ತಂತಜ್ಞಾನಗಳ ಪ್ರಭಾವದ ಹಿನ್ನೆಲೆಯಲ್ಲಿ ಇಂಗ್ಲೀಷನಲ್ಲಿ ಬಂದಿರುವ ಹೊಸ ಹೊಸ ವಿಷಯಗಳನ್ನು ಎತ್ತಿಕೊಂಡು “Internet English” ಎಂಬ ವಿಷಯವನ್ನು ಸಹ ಕಲಿಸಲು ಮುಂದಾಗಿದೆ. ಅಂದರೆ ಬೇರೆ ರಾಷ್ಟ್ರಗಳು ಇಂಗ್ಲೀಷ್ ಭಾಷಾ ಕಲಿಕೆಯಲ್ಲಿ ಹೊಸತನ್ನು ಅಳವಡಿಸಿಕೊಳ್ಳುತ್ತಿರುವಾಗ ನಾವಿನ್ನೂ “Internet English” ಇರಲಿ, ಇಂಗ್ಲೀಷ್ ಭಾಷೆಯನ್ನು ಕಲಿಸಬೇಕೇ? ಬೇಡವೆ? ಎನ್ನುವ ಚರ್ಚೆ ಜಿಜ್ಞಾಸೆಗಳಲ್ಲಿಯೇ ಕಾಲ ಕಳೆಯುತ್ತಿದ್ದೇವೆ. ಈ ಮನೋಭಾವನೆ ಹೋಗಿ ಎಲ್ಲರೂ ಇಂಗ್ಲೀಷ್ ಕಲಿಯುವಂತಾಗಬೇಕು. ಅದು ಇಂದಿನ ತಂತ್ರಜ್ಞಾನ ಮತ್ತು ಜಾಗತಿಕರಣ ಪ್ರಭಾವದ ಹಿನ್ನೆಲೆಯಲ್ಲಿ ಅವಶ್ಯ ಮತ್ತು ಅನಿವಾರ್ಯ.
    * ಈಗಿನ ಕನ್ನಡ ಸಾಹಿತ್ಯ-ಸಾಹಿತಿಗಳ ಬಗ್ಗೆ?
    ಈಗಿನ ಕನ್ನಡ ಸಾಹಿತ್ಯ ವಲಯದ ದೊಡ್ದ ದೊಡ್ಡ ಸಾಹಿತಿಗಳೆಲ್ಲ ಬರೆಯಲು ಸರಕಿರದೆಯೋ ಅಥವಾ ಅವರು ಮತ್ತದೇ ಹಳೆಯ ಜಾಡನ್ನು ಹಿಡಿದು ಬರೆದಿದ್ದನ್ನು ಓದುಗರು ಒಪ್ಪಿಕೊಳ್ಳಲಾರದ್ದಕ್ಕೋ ಏನೋ ಮೂಲೆಗುಂಪಾಗಿದ್ದಾರೆ. ಈಗೇನಿದ್ದರೂ ಉದಯೋನ್ಮುಖ ಬರಹಗಾರ ಬರಹಗಾರ್ತಿಯರ ಭರಾಟೆ. ಇವರೆಲ್ಲ ಬೇರೆ ಬೇರೆ ರಂಗಗಳ ಹಿನ್ನೆಲೆಯಿಂದ ಬಂದಿದ್ದರಿಂದ ಸಹಜವಾಗಿ ಇವರ ಕೃತಿಗಳಲ್ಲಿ ಹೊಸತನ ಎದ್ದು ಕಾಣುತ್ತಿದೆ. ಏಕತಾನತೆಯನ್ನು ಹೊಡೆದೋಡಿಸಿ ವೈವಿಧ್ಯತೆಯನ್ನು ಮೆರಿದಿದ್ದಾರೆ ಎಂದು ಹೇಳಬಹುದು. ಈ ನಡುವೆ ಬ್ಲಾಗ್ ಸಾಹಿತ್ಯ ಸಮೃದ್ಧವಾಗಿ ಬೆಳೆಯುತ್ತಿದೆ. ಅದರಲ್ಲಿ ಯಾರಿಗೂ ಕಡಿಮೆಯಿಲ್ಲದಂತೆ ಬರೆಯುವ ಒಂದಿಷ್ಟು ಒಳ್ಳೆಯ ಬರಹಗಾರರಿದ್ದಾರೆ. ಅಂಥವರನ್ನು ಹುಡುಕಿ ತೆಗೆದು ಪ್ರೋತ್ಸಾಹಿಸುವ, ಗೌರವಿಸುವ ಕೆಲಸ ಆಗಬೇಕಿದೆ. ಅದಲ್ಲದೇ ಪ್ರತ್ಯೇಕ ಬ್ಲಾಗ್ ಸಮ್ಮೇಳನ, ಬ್ಲಾಗ್ ಅಕ್ಯಾಡೆಮಿಗಳು ಬಂದರೆ ಬ್ಲಾಗಿಗರಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಮೆರೆಯಲು ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ.
    ನಮ್ಮ ಬಹಳಷ್ಟು ಸಾಹಿತಿಗಳು ಗೋಸುಂಬೆ ಜಾತಿಗೆ ಸೇರಿದವರು. ನಿಮಿಷಕ್ಕೊಂದು ಬಣ್ಣ ಬದಲಾಯಿಸುತ್ತಾ ಬರೆಯುವದೇ ಒಂದು ರೀತಿ ಬದುಕುವದೇ ಇನ್ನೊಂದು ರೀತಿಯಾಗಿ ತಮ್ಮ ನೈತಿಕ ಬಲವನ್ನು ಎಂದೋ ಕಳೆದುಕೊಂಡು ಬದುಕಿತ್ತಿದ್ದಾರೆ. ಬೇರೆಯವರಿಗೆ ಕನ್ನಡ ಕನ್ನಡ ಎಂದು ಹೇಳುತ್ತಲೇ ತಮ್ಮ ಮಕ್ಕಳು, ಮೊಮ್ಮೊಕ್ಕಳನ್ನು ಇಂಗ್ಲೀಷ ಶಾಲೆಗಳಿಗೆ ದಬ್ಬುತ್ತಿದ್ದಾರೆ. ಪ್ರಶಸ್ತಿ ಪುರಸ್ಕಾರಗಳಿಗೆ ಜಾತಿವಾದ, ಹೊಲಸು ರಾಜಕೀಯ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇಂಥವರಿಂದ ಆರೋಗ್ಯಪೂರ್ಣ ಸಮಾಜವೊಂದನ್ನು ನಿರೀಕ್ಷಿಸಲು ಸಾಧ್ಯವೇ?
    * ನೀವೀಗ ಕರ್ನಾಟಕದಲ್ಲೇ ಇದ್ದಿದ್ದರೆ ಏನು ಮಾಡುತ್ತಿದ್ದಿರಿ?!
    ಬಹುಶಃ, ಏನೂ ಇಲ್ಲ! ನಾನಾಯಿತು ನನ್ನ ಅಧ್ಯಾಪನ ವೃತ್ತಿಯಾಯಿತೆಂದು ಸುಮ್ಮನಿರುತ್ತಿದ್ದೆ. ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ನಾನು ಕೇವಲ ನನ್ನ ಆರ್ಥಿಕ ಮಟ್ಟವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕೆಂಬುದರ ಬಗ್ಗೆ ಯೋಚಿಸಿ ಯೋಚಿಸಿ ಕಾಲ ಹರಣ ಮಾಡಿ ಆಗಾಗ ಬರೆಯುತ್ತಿರುವದನ್ನು ಸಹ ಬರೆಯುತ್ತಿರಲಿಲ್ಲವೇನೋ!
    -ಉದಯ ಇಟಗಿ

    ಪ್ರತಿಭಾ ನಂದಕುಮಾರ್

  • ಭಾನುವಾರ, ಅಕ್ಟೋಬರ್ 25, 2009
  • ಬಿಸಿಲ ಹನಿ
  • (೧)
    ‘ಮತ್ತೆ ಅದೇ ಹಳೆಯ ಕಣಿ ಕೇಳಬೇಡ
    ಬಾಲಕರಿಲ್ಲದ ಬಾಲೆ ಆಯ್ಕೆ ಹೊರತು ಅನಿವಾರ್ಯವಲ್ಲ
    ಹಾಸುಂಡು ಬೀಸಿ ಒಗೆದ ಬಾಳು ನನ್ನದಲ್ಲ ನಿನ್ನದು
    ಗಾಣಕ್ಕೆ ಬಾಡಿಗೆ ಎತ್ತು ನಾನಂತೂ ಆಗುವುದಿಲ್ಲ’
    (೨)
    ‘ಎರಡು ವಿಷಯ ಹೇಳುತ್ತೇನೆ
    ಗಂಟು ಹಾಕಿ ನೆನಪಿಟ್ಟುಕೊಳ್ಳಿ
    ನನ್ನ ಶವ ಯಾತ್ರೆಯಲ್ಲಿ
    ಸೂಫಿ ಗಜಲ್ ಹಾಡಿ
    ತಿಥಿಗೆ ಆ ಸಾಬಿಯನ್ನು ಕರೆಯಿರಿ
    ಆಮೇಲೆ ನೀವೆಲ್ಲಾ ಬಡಿದಾಡಿಕೊಂಡು ಸಾಯಿರಿ!’
    (೩)
    ‘ನಡುರಾತ್ರಿಯಲ್ಲಿ ಹೊರಳಿ ಕೈಚಾಚಿ ಹುಡುಕಿ
    ಸ್ನಾನದ ನಂತರ ಸೀರೆ ಉಟ್ಟು
    ಮಣಿ ಸರಕ್ಕೆ ಕೈಚಾಚಿ
    ಅದಿನ್ನೂ ಅಲ್ಲೆ ಹಾಸಿಗೆಯಲ್ಲಿ
    ದಿಂಬಿನ ಕೆಳಗಿರಬೇಕೆಂದು ತಡಕಿ
    ಬಾಗಿಲ ಬೆಲ್‌ ಸದ್ದಿಗೆ ಮರೆತು ಹೊರಟು
    ಎರಡು ಲೀಟರ್ ಹಾಲು ಕೇಳಿ ತಲೆ ಚಚ್ಚಿಕೊಂಡು
    ಯಾರು ನೆನೆಸಿಟ್ಟರು ದೋಸೆಗೆ ರುಬ್ಬಲು
    ಒಂದು ಕೇಜಿ ಅಕ್ಕಿ?
    ಅಭ್ಯಾಸ ಬಲ, ಮರೆತೇ ಹೋಗುತ್ತದೆ
    ಎಷ್ಟು ವರ್ಷವಾದವು
    ಅವನು ಮನೆ ಬಿಟ್ಟು?
    (೪)
    ಅವಳು ಕುಡಿಯಬಹುದು, ಕುಣಿಯಬಹುದು, ಕೇಳಿಯಲ್ಲಿ ಮುಳುಗಿ ತೇಲಬಹುದು
    ಹಿಡಿಯಲಾರಿರಿ ನೀವು ಅವಳನ್ನು ಪಬ್ಬುಗಳಲ್ಲಿ
    ಹೊಡೆದು ಕೆಡವಿ ದಕ್ಕಿಸಿಕೊಳ್ಳಲಾರಿರಿ
    ಮಬ್ಬು ಬೆಳಕಲ್ಲಿ ಕಾಣಲಾರಿರಿ ನಿಮ್ಮ ಮಂಜುಕಣ್ಣುಗಳಲ್ಲಿ
    ಎದ್ದು ಬರುತ್ತಾಳೆ ನೂರು ನಾಲಿಗೆ ಚಾಚಿ ರಕ್ತ ಹೀರುತ್ತ

    ಹೀಗೆ ಒಮ್ಮೊಮ್ಮೆ ಅಬ್ಬರಿಸುತ್ತಾ, ಒಮ್ಮೊಮ್ಮೆ ತಮಾಷೆ ಮಾಡುತ್ತಾ. ಒಮ್ಮೊಮ್ಮೆ ಕನವರಿಸುತ್ತಾ, ಒಮ್ಮೊಮ್ಮೆ ಲೇವಡಿ ಮಾಡುತ್ತಾ ಬರೆಯುತ್ತಲೇ ಬಂದಿರುವ ಪ್ರತಿಭಾ ನಂದಕುಮಾರವರದು ಕನ್ನಡದ ಲೇಖಕಿಯರಲ್ಲಿ ಎದ್ದು ಕಾಣುವ ಹೆಸರು. ಅವರನ್ನು ಲೇಖಕಿ ಎನ್ನುವದಕ್ಕಿಂತ ಕವಯಿತ್ರಿ ಎನ್ನುವದೇ ಸೂಕ್ತ! ಏಕೆಂದರೆ ಅವರು ಕತೆ, ಕಾದಂಬರಿ, ಲೇಖನಗಳಿಗಿಂತ ಹೆಚ್ಚಾಗಿ ಬರೆದಿದ್ದು ಕಾವ್ಯವನ್ನೇ! ಅಲ್ಲದೇ ಸ್ವತಃ ಪ್ರತಿಭಾ “ನಾನು ನನ್ನನ್ನು ಲೇಖಕಿ ಎಂದು ಗುರುತಿಸಿಕೊಳ್ಳುವದಕ್ಕಿಂತ ಕವಯಿತ್ರಿ ಎಂದು ಗುರುತಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತೇನೆ” ಎಂದು ಹೇಳುತ್ತಾರೆ.

    ‘ನಾವು ಹುಡುಗೀಯರೇ ಹೀಗೆ’ (೧೯೮೩) ಎನ್ನುವ ತಮ್ಮ ಮೊದಲ ಕವನ ಸಂಕಲನದ ಮೂಲಕ ಕನ್ನಡ ಕಾವ್ಯ ಕ್ಷೇತ್ರಕ್ಕೆ ಕಾಲಿಟ್ಟ ಪ್ರತಿಭಾ ನಂದಕುಮಾರ್ ಕನ್ನಡ ಕಾವ್ಯ ಪ್ರಪಂಚಕ್ಕೆ ಒಂದು ಹೊಸ ಆಯಾಮವನ್ನೇ ತಂದುಕೊಟ್ಟರು. ಒಂದು ಕಡೆ ತಮ್ಮ ಕವನಗಳ ಮೂಲಕ ಕನ್ನಡಿಗರನ್ನು ಬೆಚ್ಚಿಬೀಳಿಸುತ್ತಲೇ ಇನ್ನೊಂದೆಡೆ ಅವರನ್ನು ಮೆಚ್ಚಿಸಿದವರೂ ಹೌದು! ಅವರ ಯಾವದಾದರೊಂದು ಕವನವನ್ನು ಯಾರಿಗಾದರು (ಕಾವ್ಯಾಸಕ್ತರಿಗೆ) ತೋರಿಸಿ ಇದನ್ನು ಯಾರು ಬರೆದಿದ್ದು ಹೇಳಿ? ಎಂದು ಕೇಳಿದರೆ ತಟ್ಟನೆ ಪ್ರತಿಭಾ ನಂದಕುಮಾರ ಎಂದು ಹೇಳುತ್ತಾರೆ. ಅಷ್ಟರಮಟ್ಟಿಗೆ ಪ್ರತಿಭಾ ತಮ್ಮ ವಿಶಿಷ್ಟ ಪ್ರಯೋಗ ಶೈಲಿಯೊಂದಿಗೆ ತಮ್ಮ ಕವನಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
    (೧)
    ಹೌದು ಕಣೆ ಉಷಾ
    ನಾವು ಹುಡುಗಿಯರೇ ಹೀಗೆ.........
    ಏನೇನೋ ವಟಗುಟ್ಟಿದರೂ
    ಹೇಳಲೇಬೇಕಾದ್ದನ್ನು ಹೇಳದೆ
    ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
    ಜುಮ್ಮೆನ್ನಿಸುವ ಆಲೋಚನೆಗಳನೆಲ್ಲಾ
    ಹಾಗೆ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
    ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.
    ಹೇಳಲೇಬೇಕು ಎನಿಸಿದ್ದನ್ನು
    ಹೇಳಹೋಗಿ ಹೆದರೆ ಏನೇನೋ ತೊದಲುತ್ತೇವೆ
    ‘ಐ ಲವ್ ಯೂ’ ಅಂತ ಹೇಳಲು ಕಷ್ಟಪಟ್ಟು
    ಬೇರೆ ಏನೇನೊ ದಾರಿ ಹುಡುಕಿ
    ಸಂದೇಶ ಮುಟ್ಟಿಸಲು ಹೆಣಗುತ್ತೇವೆ
    ಅದನ್ನು ಅರ್ಥ ಮಾಡಿಕೊಳ್ಳಲಾರದೆ
    ಹುಡುಗರು ಕೈ ತಪ್ಪಿದಾಗ ಮುಸು ಮುಸು ಅಳುತ್ತೇವೆ
    ಕೊನೆಗೆ ಬೇರೆ ಯಾರನ್ನೋ ಮದುವೆಯಾಗಬೇಕಾದಾಗ
    ನಾವೇ ದುರಂತ ನಾಯಕಿಯರೆಂದು
    ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೆವೆ
    ಗಂಡನಲ್ಲಿ ‘ಅವನನ್ನು’ ಹುಡುಕುತ್ತೇವೆ
    ಗಂಡನಿಗೆ ಮಾತ್ರ ಅದರ ಸುಳಿವೂ ಸಿಗದಂತೆ ನಟಿಸುತ್ತೇವೆ
    ಅಷ್ಟರಲ್ಲಿ ಒತ್ತಿಟ್ಟ ಭಾವನೆಗಳೆಲ್ಲ ಹರಳಾಗಿಬಿಟ್ಟಿರುತ್ತವೆ
    ಅರಳುವದೇ ಇಲ್ಲ ಉಷಾ.......
    (೨)
    ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ
    ಕೈಗೊಂದು ಕಾಲಿಗೊಂದು ಮಕ್ಕಳಾಗಿ
    ಏದುಸಿರು ಬಿಡುತ್ತಾ ತರಕಾರಿ ಕೊಳ್ಳುವಾಗ ‘ಅವನು’ ಸಿಗುತ್ತಾನೆ
    ನಮ್ಮ ಇಂದಿನ ಅವಸ್ಥೆಗೆ ಇವನೇ ಕಾರಣ ಅಂತ ರೋಷ ತಾಳುತ್ತೇವೆ
    ಆದರೆ ಮೇಲೆ ನಗು ನಗುತ್ತಾ ‘ಅವನ’ ಹೆಂಡತಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತೇವೆ
    ಯಾಕೆಂದರೆ ಅವಳದೂ ಅದೇ ಕಥೆಯಲ್ಲವೆ?
    ನಾವು ಹುಡುಗಿಯರೇ ಹೀಗೆ...........

    ಹೀಗೆ ಹುಡುಗಿಯರ ಬಗ್ಗೆ ಬರೆಯುವದರ ಮೂಲಕ ಪ್ರತಿಭಾ ಎಂಬತ್ತರ ದಶಕದ ಹುಡುಗಿಯರ (ಆದರೆ ಈ ದಶಕದ ಹುಡುಗಿಯರು ಹಾಗಿಲ್ಲ ಬಿಡಿ) ಆರಾಧ್ಯ ದೇವತೆಯಾದರು. ಈ ಕವನವನ್ನು ಆ ದಶಕದ ಎಷ್ಟೋ ಹುಡುಗಿಯರು ತಮ್ಮ ಅಂತರಂಗದ ಪಿಸುಮಾತೆಂಬಂತೆ ಡೈರಿಯಲ್ಲೋ ಅಥವಾ ನೋಟ್ ಪುಸ್ತಕದ ಕೊನೆಯಲ್ಲೆಲ್ಲೋ ಬರೆದಿಟ್ಟುಕೊಂಡು ಆಗಾಗ ತಮ್ಮಷ್ಟಕ್ಕೆ ತಾವೇ ಹಾಡಿಕೊಳ್ಳುತ್ತಾ ತಮ್ಮ ಅವಸ್ಥೆಗೆ ತಾವೇ ಮರುಕಪಟ್ಟರು. ಹಾಗೆಯೇ ತಮ್ಮ ಅಂತರಂಗದ ವಿಷಾದವನ್ನು ಹಾಡಾಗಿಸಿದ್ದಕ್ಕೆ ಪ್ರತಿಭಾರವರಿಗೆ ಒಂದು ಥ್ಯಾಂಕ್ಸ್ ಕೂಡ ಹೇಳಿದ್ದರು. ಯಾರೊಂದಿಗೂ ಹಂಚಿಕೊಳ್ಳಲಾಗದೆ ಒಳಗೊಳಗೆ ಉಳಿದು ಅಳಿಯುವ ಹುಡುಗಿಯರ ಒಳತೋಟಿಯನ್ನು ಬಿಚ್ಚಿಡುತ್ತಲೆ ‘ನಾವು ಹುಡುಗಿಯರೇ ಹೀಗೆ’ ಎಂಬ ಸತ್ಯವನ್ನು ಬಹಿರಂಗಪಡಿಸುವದರ ಮೂಲಕ ಮಡಿವಂತಿಕೆಯ ಸಮಾಜದಲ್ಲೂ ಅವರ ಮೇಲೆ ಅಗಾಧ ಮರುಕವೊಂದನ್ನು ಸೃಷ್ಟಿಸಿಬಿಟ್ಟರು ಪ್ರತಿಭಾ. ಇದು ಪ್ರತಿಭಾರವರಲ್ಲಿ ಅಡಕವಾಗಿರುವ ಕಾವ್ಯ ಪ್ರತಿಭೆಗೆ ಒಂದು ಉದಾಹರಣೆಯಷ್ಟೆ! ಕವನ ಕಟ್ಟಲು ಬೇಕಾಗುವ ಜಾಣ್ಮೆ, ತಾಳ್ಮೆ ಹಾಗೂ ಶ್ರದ್ಧೆಗಳೆಲ್ಲವೂ ಅವರಲ್ಲಿ ಮೊದಲಿನಿಂದಲೂ ಮನೆಮಾಡಿವೆ. ಹಾಗೆಂದೇ ಅವರ ಕವನಗಳು ಯಾವಾಗಲೂ ಪರಿಪಕ್ವಗೊಂಡ ಕವನಗಳಂತೆ ಕಾಣುತ್ತವೆ. ಆದರೆ ಇವರಿಗೆ ಕಾವ್ಯ ಸುಲಭವಾಗಿ ಒಲಿದಂತೆ ಅನುವಾದ ಅಷ್ಟಾಗಿ ಒಲಿದಿಲ್ಲವೆಂದು ಕಾಣುತ್ತದೆ. ಅದಕ್ಕೆ ಇತ್ತೀಚಿಗೆ ‘ಕೆಂಡ ಸಂಪಿಗೆ’ಯಲ್ಲಿ ಬಂದ ಅವರ ರಸಹೀನ ಅನುವಾದಗಳೇ ಸಾಕ್ಷಿ. ಬರಿ ಪದ್ಯದ ಸಾಲು ಸಾಲುಗಳನ್ನು ತರ್ಜುಮೆ ಮಾಡುವದನ್ನು ಬಿಟ್ಟು ಪದ್ಯವನ್ನು ಇಡಿಯಾಗಿ ಅನುಭವಿಸಿ ಕನ್ನಡಕ್ಕೆ ಹತ್ತಿರವಾಗುವಂತೆ ಕನ್ನಡಿಕರಿಸಿದರೆ ಕನ್ನಡದಲ್ಲಿ ಅವರೊಬ್ಬ ಉತ್ತಮ ಅನುವಾದಕಿಯಾಗುವದರಲ್ಲಿ ಎರಡು ಮಾತಿಲ್ಲ. ಆಶ್ಚರ್ಯವೆಂದರೆ ಅವರ ಇಂಗ್ಲೀಷ ಅನುವಾದಗಳು (ತಾವೇ ಅನುವಾದಿಸಿರುವ ತಮ್ಮ ಕನ್ನಡ ಕವನಗಳ ಇಂಗ್ಲೀಷ ಅನುವಾದಗಳು) ಕನ್ನಡ ಅನುವಾದಕ್ಕಿಂತ ಉತ್ತಮವಾಗಿವೆ. She seems to be a better translator in English than in Kannada.

    ಪ್ರತಿಭಾ ಕೇವಲ ತಮ್ಮ ವೈಯಕ್ತಿಕ ಕಷ್ಟನಷ್ಟದ ಬಗ್ಗೆಯೇ ಬರೆದುಕೊಂಡವರಲ್ಲ. ಕಾಲಕಾಲಕ್ಕೆ ಸಮಕಾಲೀನ ಸಾಮಾಜಿಕ ಘಟನೆಗಳಿಗೆ ಸ್ಪಂದಿಸುತ್ತ ಬಂದಿದ್ದಾರೆ; ವಿಶೇಷವಾಗಿ ಹೆಣ್ಣು ಮತ್ತು ಅವಳ ಶೋಷಣೆಯ ಸುತ್ತಮುತ್ತಲ ವಿಷಯಗಳಿಗೆ. ಅದಕ್ಕೊಂದು ಉತ್ತಮ ಉದಾಹರಣೆ ಇತ್ತೀಚಿಗೆ ಮಂಗಳೂರಿನ ಪಬ್‍ವೊಂದರಲ್ಲಿ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆದಾಗ ‘ದೇವಿ’ ಎನ್ನುವ ಕವನವನ್ನು ಬರೆಯುವದರ ಮೂಲಕ ತಾವು ಪೂಜಿಸುವ ದೇವತೆಗಳೇ ಕುಡಿದು ಕುಣಿದು ಕುಪ್ಪಳಿಸುವಾಗ ಮಂಗಳೂರಿನ ಹೆಣ್ಣುಮಕ್ಕಳು ಯಾವ ಲೆಕ್ಕ ಎಂದು ಸಂಪ್ರದಾಯವಾದಿಗಳನ್ನು ಕೇಳಿ ವಸ್ತು ಸ್ಥಿತಿಯ ಲೇವಡಿ ಮಾಡಿದರು.

    ‘ಅವಳು ಕುಡಿಯಬಹುದು, ಕುಣಿಯಬಹುದು, ಕೇಳಿಯಲ್ಲಿ ಮುಳುಗಿ ತೇಲಬಹುದು
    ಹಿಡಿಯಲಾರಿರಿ ನೀವು ಅವಳನ್ನು ಪಬ್ಬುಗಳಲ್ಲಿ
    ಹೊಡೆದು ಕೆಡವಿ ದಕ್ಕಿಸಿಕೊಳ್ಳಲಾರಿರಿ
    ಮಬ್ಬು ಬೆಳಕಲ್ಲಿ ಕಾಣಲಾರಿರಿ ನಿಮ್ಮ ಮಂಜುಕಣ್ಣುಗಳಲ್ಲಿ
    ಎದ್ದುಬರುತ್ತಾಳೆ ನೂರು ನಾಲಿಗೆ ಚಾಚಿ ರಕ್ತ ಹೀರುತ್ತ’

    ಇವೆಲ್ಲವುಗಳ ಮಧ್ಯ ಬಹುಶಃ ಇವತ್ತಿನ ಬಹಳಷ್ಟು ಹೆಂಗಸರು ಮುಖ ಸಿಂಡರಿಸುತ್ತಾ ಅಡಿಗೆ ಮಾಡುವದೆಂದರೆ ಅಲರ್ಜಿ ಎನ್ನುವ ಹೊತ್ತಿನಲ್ಲಿಯೇ ಪ್ರತಿಭಾ “ನನಗೆ ಅಡಿಗೆ ಮಾಡುವದೆಂದರೆ ಬಲು ಇಷ್ಟ” ಎಂದು ಹೇಳುತ್ತಾರೆ. ಅದಕ್ಕೆ ಕಾರಣವನ್ನೂ ಅವರೇ ಕೊಡುತ್ತಾರೆ ನೋಡಿ:

    ‘ಅಡುಗೆ ಮಾಡುವುದೆಂದರೆಬಹಳ ಇಷ್ಟ ನನಗೆ
    ಹೊರದಾರಿ ಅದು ನನ್ನೆಲ್ಲ ಆಕ್ರೋಶಗಳಿಗೆ
    ತೊಳೆದು ಸಿಪ್ಪೆ ಸುಲಿದು ಕತ್ತರಿಸಿ ಜಜ್ಜಿ ಕುಟ್ಟಿ
    ಹುರಿದು ಅರೆದು ರುಬ್ಬಿ ನುರಿದು ಬಾಡಿಸಿ ಬೇಯಿಸಿ
    ಕೊಟ್ಟಿ ಕಲೆಸಿ ಹಿಚುಕಿ ಮಸೆದು ಗಸಗಸನೆ ಕಡೆದು
    ಎತ್ತಿ ಹಾಕಿದರೆ ತಟ್ಟೆಗೆ ರುಚಿ ರುಚಿ ಅಂತ ತಿನ್ನುತ್ತಾರೆ’

    ಎಂದು ಬರೆದು ಪರೋಕ್ಷವಾಗಿ ತಮ್ಮ ಮೇಲೆ ದಬ್ಬಾಳಿಕೆ ನಡೆಸಿದವರ ವಿರುದ್ಧ ವ್ಯವಸ್ಥಿತವಾದ ಸೇಡೊಂದನ್ನು ತೀರಿಸಿಕೊಳ್ಳುತ್ತಾರೆ. ಬಹುಶಃ ಇದೇ ಕಾರಣಕ್ಕೇ ಇರಬೇಕು ಸಾಮಾನ್ಯವಾಗಿ ಹೆಂಗಸರು ಅಡಿಗೆ ಮಾಡುವಾಗ ಯಾಕೆ ಯಾವ ಗಂಡಸೂ ಅಡಿಗೆ ಮನೆಗೆ ಹೋಗುವದಿಲ್ಲವೆಂದು.

    ಪ್ರತಿಭಾ ಕೇವಲ ಇಂಥ ವಿಷಯಗಳಿಗೆ ಮಾತ್ರ ಅಂಟಿಕೊಳ್ಳದೆ ಬದುಕಿನ ಬೇರೆ ಬೇರೆ ಸ್ತರಗಳ ಬಗ್ಗೆಯೂ ಬರೆಯುತ್ತಾರೆ. ಪ್ರೀತಿಯ ಬಗ್ಗೆ ಮಾತನ್ನಾಡುತ್ತಾ ‘ಪ್ರೀತಿಯೊಂದೇ ನಿಶ್ಚಲ ಅದೇ ಜೀವನ ಆದರೂ ಅವರು ಕೇಳುತ್ತಾರೆ ಪುರಾವೆಗಳನ್ನ’ ಎಂದು ಆಕ್ರೋಶಪಡುತ್ತಾರೆ. ಆಧುನಿಕ ಬದುಕಿನ ಬಿಕ್ಕಟ್ಟನ್ನು ಕೆಳಗಿನ ಸಾಲುಗಳಲ್ಲಿ ಬಿಡಿಸಿಡುತ್ತಾ ಹೇಗೆ ಕಳವಳಪಡುತ್ತಾರೆ ನೋಡಿ.

    ‘ದೊಡ್ಡ ದೊಡ್ಡ ಮನೆಗಳಲ್ಲಿ
    ಚಿಕ್ಕ ಚಿಕ್ಕ ಕುಟುಂಬಗಳು
    ದೂರ ದೂರದ ಮೊಬೈಲ್‌ಗಳಲ್ಲಿ
    ಹತ್ತಿರವಾಗದ ಸಂದೇಶಗಳು
    ಊರ ತುಂಬಾ ಫಾಸ್ಟ್ ಫುಡ್‌ಗಳು
    ಚಡಪಡಿಸುವ ಸ್ಲೋ ಜೀರ್ಣಾಂಗಗಳು’

    ಇಂಥ ವಿಷಯಗಳಿಂದಲೇ ಪ್ರತಿಭಾ ಕಾವ್ಯಾಸಕ್ತರ ಕುತೂಹಲವನ್ನು ಕೆರಳಿಸುತ್ತಾರೆ ಮತ್ತು ಅವರನ್ನು ಆಕರ್ಷಿಸುವದರಲ್ಲಿ ಯಶಸ್ವಿಯಾಗುತ್ತಾರೆ.

    “ಇಂದಿನ ಕನ್ನಡ ಕಾವ್ಯದಲ್ಲಿ ಹೊಸದೇನಾದರು ಆಗುತ್ತಿದೆಯೇ?” ಎಂದು ಅವರನ್ನು ಕೇಳಿದರೆ ತಟ್ಟನೆ “ಖಂಡಿತ ಆಗುತ್ತಿದೆ. ಹಾಗೇನಾದರು ಆಗುತ್ತಿದ್ದರೆ ಅದು ಮಹಿಳೆಯರಿಂದಲೇ” ಎಂದು ಹೆಮ್ಮೆಯಿಂದ ಉತ್ತರಿಸುತ್ತಾರೆ. ಅವರ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದೆ ಕೂಡ.

    ಪ್ರತಿಭಾ ಒಬ್ಬ ಸ್ತ್ರೀವಾದಿ ಕವಯಿತ್ರಿ. ಅದಕ್ಕೆ ಅವರ ಕೃತಿಗಳೇ ಸಾಕ್ಷಿ. ಆದರೆ ಹಾಗಂತ ಹೇಳಿದರೆ ಅವರಿಗೆ ಕೋಪ ಬರುತ್ತದೆ. ಮಹಿಳೆಯರ ಕೃತಿಗಳನ್ನು feminine, female and femininity ಅಂತೆಲ್ಲಾ ವಿಂಗಡಿಸಬೇಡಿ. ಏಕೆಂದರೆ ನಿಮಗೆ ಗಂಡಸರಿಗೆ ಹೆಂಗಸರ ಕೃತಿಗಳನ್ನು ಹೇಗೆ ಓದಬೇಕೆಂಬುದು ಗೊತ್ತಿಲ್ಲ ಎಂದು ಅವರ ಮೇಲೆ ಹರಿಹಾಯುತ್ತಾರೆ. “ಏನ್ ಮೇಡಂ ನಿಮ್ಮ ಕವನ, ಲೇಖನಗಳೆಲ್ಲ ಸ್ತ್ರೀ ಸಂವೇದನೆಗಳಿಂದ ತುಂಬಿಹೋಗಿವೆ. ಸ್ತ್ರೀವಾದದ ಹಿನ್ನೆಲೆಯಲ್ಲಿ ರಚಿತವಾಗಿವೆ. ಹೀಗಿದ್ದೂ ನಿಮ್ಮನ್ನು ಸ್ತ್ರೀವಾದಿ ಎಂದು ಕರೆಯದಿರಲು ಹೇಗೆ ಸಾಧ್ಯ?” ಎಂದು ಕೇಳಿದರೆ “ನಿಮಗೆ ಬೇಕಾದರೆ ಕರೆದುಕೊಳ್ಳಿ, ನಂಗೇನೂ ಬೇಜಾರಿಲ್ಲ. ಆದರೆ ನಮಗೆಲ್ಲಾ ಯಾವಾಗಲೂ ಒಂದೇ ‘ಇಸಂ’ (ism) ನಡಿ ಬರೆಯುವದು ಕಷ್ಟವಾಗುತ್ತದೆ. ಏಕೆಂದರೆ ದಿನದ ಕೊನೆಯಲ್ಲಿ ನಾನೂ ಒಬ್ಬ ಮನುಷ್ಯಳು ಅದಕ್ಕಿಂತ ಹೆಚ್ಚಾಗಿ ಒಂದು ಹೆಣ್ಣು” ಎಂದು ಹೇಳಿ ಪ್ರತಿಭಾ ಕೇವಲ ಬರೆಯುವದರಲ್ಲಿ ಜಾಣೆಯಲ್ಲ ಮಾತನಾಡುವದರಲ್ಲೂ ಜಾಣೆ ಎಂದು ತೋರಿಸುತ್ತಾರೆ.

    ಅದೇನೇ ಇರಲಿ ಪ್ರತಿಭಾ ಕನ್ನಡದ ಒಬ್ಬ ಅಪರೂಪದ ಕವಿಯಿತ್ರಿ ಎನ್ನುವದರಲ್ಲಿ ಎರಡು ಮಾತಿಲ್ಲ. ಅವರ ಹಾಗೆ ಕವನ ಕಟ್ಟವ, ಇದ್ದದ್ದನ್ನು ಇದ್ದಕ್ಕಿದ್ದಂತೆ ಸೀದಾ ಸೀದಾ ಹೇಳುವ ಮತ್ತೊಬ್ಬ ಕವಯಿತ್ರಿ ಕನ್ನಡದಲ್ಲಿಲ್ಲ. ಪ್ರತಿಭಾ ಹೇಳುತ್ತಾರೆ ”ಬರೆಯಬೇಕು ಆ ಒಳಗಿನಿಂದ ಗುದ್ದಿಬರುವ ಒದ್ದೆ ಹಾಡಿನ ಬಗ್ಗೆ/ಒಂಟಿ ನಿಂತರೂ ಗುಂಪೆನ್ನಿಸುವ, ಗುಂಪಿನಲ್ಲಿ ಒಂಟಿ ಎನ್ನಿಸುವ ಬಗ್ಗೆ.” ಪ್ರತಿಭಾ ತಮ್ಮ ಬದುಕಿನುದ್ದಕ್ಕೂ ಹೀಗೆ ತಮ್ಮ ಒದ್ದೆ ಹಾಡುಗಳ ಬಗ್ಗೆ ಬರೆಯುತ್ತಾ ಸಾಗಲಿ. ನಾವು ಅವನ್ನು ಓದುತ್ತಾ ಓದುತ್ತಾ ತೊಯ್ದು ಹೋಗುವಂತಾಗಲಿ.

    -ಉದಯ ಇಟಗಿ.

    ಹಚ್ಚಿಡೋಣ ಹೃದಯದಂಗಳದಲ್ಲೊಂದು ಹಣತೆಯನ್ನು

  • ಶುಕ್ರವಾರ, ಅಕ್ಟೋಬರ್ 16, 2009
  • ಬಿಸಿಲ ಹನಿ
  • ಇಂದು ದೀಪಾವಳಿ
    ಎಲ್ಲರ ಮನೆಯಂಗಳದಲ್ಲೂ
    ಬರಿ ದೀಪಗಳದೇ ಸಾಲು
    ಎಲ್ಲೆಡೆ ಝಗಮಗಿಸುವ ಬೆಳಕು!
    ಆದರೂ ಅಲ್ಲೆಲ್ಲೋ ಒಂದು ಕಡೆ ಕತ್ತಲು ಹಾಗೆ ಉಳಿದುಕೊಂಡುಬಿಟ್ಟಿದೆ
    ಎಲ್ಲಿ ಎಂದು ಎಲ್ಲ ಕಡೆ ಮತ್ತೆ ಮತ್ತೆ ಕಣ್ಣು ಹಾಯಿಸಿದೆ
    ಗೊತ್ತಾಗಲೇ ಇಲ್ಲ!
    ಸುಮ್ಮನೆ ಹುಡುಕುತ್ತಾ ಹೊರಟೆ ಬುದ್ಧನಂತೆ
    ಯಾರೋ ನಕ್ಕು ಹೇಳಿದಂತಾಯಿತು
    ಹುಚ್ಚಪ್ಪ! ಕತ್ತಲಿರುವದು ಹೊರಗಲ್ಲ ನಿನ್ನೊಳಗೆ ಎಂದು
    ಅರೆರೆ, ಹೌದಲ್ಲವೆ?
    ಒಳಗೆ ಎಷ್ಟೊಂದು ಕತ್ತಲು ಗೂಡು ಕಟ್ಟಿದೆ
    ನಾವು ಒಳಗಿನ ಕತ್ತಲನ್ನು ಒಳಗೇ ಬಚ್ಚಿಟ್ಟು
    ಹೊರಗೆ ಮಾತ್ರ ಹಣತೆಗಳನ್ನು ಹಚ್ಚಿಡುತ್ತೇವೆಲ್ಲ?
    ಇದೆಂಥ ಮೂರ್ಖತನ?
    ಬದಲಾಗಿ ಹಚ್ಚಿಡೋಣ ಹೃದಯದಂಗಳದಲ್ಲೊಂದು ಹಣತೆಯನ್ನು
    ಮಾಯವಾದೀತಾಗ ಒಳ ಹೊರಗಿನ ಕತ್ತಲಗಳೆರಡೂ!
    ಆಗ ನಿತ್ಯ ದೀಪಾವಳಿ!
    ನಿತ್ಯ ಹರುಷಾವಳಿ!

    ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

    - ಉದಯ ಇಟಗಿ

    ನಾನು ನೀನಲ್ಲ

  • ಭಾನುವಾರ, ಅಕ್ಟೋಬರ್ 11, 2009
  • ಬಿಸಿಲ ಹನಿ
  • ನಾನು ನೀನಲ್ಲ
    ಆದರೆ ನೀನು
    ನಾನು ನಾನಾಗಿರಲು
    ಸಮಯವನ್ನಾಗಲಿ ಅವಕಾಶವನ್ನಾಗಲಿ
    ಕೊಡುವದೇ ಇಲ್ಲ !

    “ನಾನು ನೀನಾಗಿದ್ದಿದ್ದರೆ”
    ನಿನಗೆ ಗೊತ್ತು
    ಅದು ಸಾಧ್ಯವಿಲ್ಲವೆಂದು!
    ಆದರೂ ನೀನು ಬಿಡುವದಿಲ್ಲ
    ನನ್ನ ನಾನು ನಾನಾಗಿರಲು

    ನೀನು ನಾನೇನೋ ಎಂಬಂತೆ
    ಆಗಾಗ ನನ್ನ ವಿಷಯಗಳಲ್ಲಿ ಅನವಶ್ಯಕವಾಗಿ
    ತಲೆಹಾಕುತ್ತಿ ಮೂಗುತೂರಿಸುತ್ತಿ
    ಅವು ನಿನ್ನವೇನೋ ಎಂಬಂತೆ!

    ನೀನೊಬ್ಬ ಮೂರ್ಖ
    ಪದೆ ಪದೆ ನಾನು
    ನೀನಾಗಿರುವಂತೆ ನಿರೀಕ್ಷಿಸುತ್ತಿ
    ನಿನ್ನ ಹಾಗೆಯೇ ನಡೆಯಬೇಕೆಂದು
    ನುಡಿಯಬೇಕೆಂದು ಬಯಸುತ್ತಿ
    ನಿನಗೆ ಹೇಗೆ ತಿಳಿಹೇಳುವದು
    ನಾನು ನೀನಲ್ಲವೆಂದು?

    ಆ ದೇವರು ನನ್ನನ್ನು ನನ್ನನ್ನಾಗಿ ಮಾಡಿದ
    ನಿನ್ನನ್ನು ನಿನ್ನನ್ನಾಗಿ ಮಾಡಿದ
    ಆ ದೇವರಿಗೋಸ್ಕರಲಾದರೂ
    ನನ್ನ ನಾನಾಗಿರಲು ಬಿಡು
    ನೀನು ನೀನಾಗಿರು!

    ಆಫ್ರಿಕನ್ ಕವಿ: ರೋಲ್ಯಾಂಡ್ ಟೊಂಬೆಕೈ ಡೆಂಪೆಸ್ಟರ್
    ಕನ್ನಡಕ್ಕೆ: ಉದಯ ಇಟಗಿ

    ಮತ್ತೆ ಮತ್ತೆ ಚುಚ್ಚಿಸಿಕೊಳ್ಳದಿರಿ ಬರಹಗಾರರೆ.......

  • ಶುಕ್ರವಾರ, ಅಕ್ಟೋಬರ್ 09, 2009
  • ಬಿಸಿಲ ಹನಿ
  • ಮೊನ್ನೆ ಉತ್ತರ ಕರ್ನಾಟಕದಲ್ಲಿ ನೆರೆ ಸಂಭವಿಸಿ ಒಂದು ವಾರವಾಗುತ್ತಾ ಬಂದರೂ ಯಾವ ಬ್ಲಾಗರೂ ನೆರೆ ಸಂತ್ರಸ್ತರಿಗೆ ನಮ್ಮ ಬ್ಲಾಗರ್ಸ್ ಸಂಘದಿಂದ ಪರಿಹಾರ ನಿಧಿಯೊಂದನ್ನು ನೀಡಿದರೆ ಹೇಗೆ ಎಂದು ಯೋಚಿಸದೇ ಇದ್ದುದಕ್ಕೆ ಬೇಸತ್ತು ಬರಹಗಾರರೇ ಹೀಗಾದರೆ ಹೇಗೆಂದು ಅವರಿಗೆ ಅದೇ ಬ್ಲಾಗರ್ಸ್ ಜಾಲತಾಣದ ಮೂಲಕ ಇದರ ಬಗ್ಗೆ ಯೋಚಿಸಿ ಎಂದು ನನ್ನ ಲೇಖನವೊಂದರ ಮೂಲಕ ಸ್ವಲ್ಪ ಖಾರವಾಗಿ ಆಗ್ರಹಿಸಿದ್ದೆ. ಇದನ್ನು ಓದಿದ ಗಂಭೀರ ಬರಹಗಾರರೊಬ್ಬರು ನನ್ನ ಇಂಥ ಮಾತುಗಳಿಂದ ಅವರಿಗೆ (ಬರಹಗಾರರಿಗೆಲ್ಲರಿಗೂ) ಇರುಸುಮುರುಸಾಗಿದೆಯೆಂದು ಹಾಗೂ ಈ ಮೂಲಕ ಬರಹಗಾರರನ್ನು ಚುಚ್ಚಿದ್ದೇನೆಂದು ನೊಂದುಕೊಂಡು ಬರಹಗಾರರದು ಬರಿ ಬರೆಯುವದಷ್ಟೆ ಕೆಲಸ ಮಿಕ್ಕೆಲ್ಲವೂ ಬೇರೆಯವರದು ಎನ್ನುವಂತೆ ಬರಹಗಾರರನ್ನು ವಹಿಸಿಕೊಂಡು ಬರೆದ ತಮ್ಮ ಲೇಖನವೊಂದರ ಮೂಲಕ ಗಂಭೀರವಾಗಿ ಆರೋಪಿಸಿದ್ದಾರೆ. ಮೊದಲಿಗೆ ನನ್ನ ಮಾತಿನಿಂದ ಅವರಿಗೆ ಇರುಸುಮುರುಸಾಗಿದ್ದರೆ ಮುಜುಗರವಾಗಿದ್ದರೆ ಅದಕ್ಕೆ ನನ್ನ ವಿಷಾದವಿದೆ ಎಂದು ಹೇಳುತ್ತಾ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ಮೊದಲಿಗೆ ಇಡಿ ಉತ್ತರ ಕರ್ನಾಟಕ ನೆರೆಯಲ್ಲಿ ಕೊಚ್ಚಿಹೋಗಿರುವ ಇಂಥ ಸಂದರ್ಭದಲ್ಲೂ ಸಂತ್ರಸ್ತರಿಗೆ ಈಗಾಗಲೆ ತಮ ತಮ್ಮ ವ್ಯಯಕ್ತಿಕ ನೆಲೆಯಲ್ಲಿ ಸಹಾಯ ಮಾಡಿದ ಮೇಲೂ ಮತ್ತೆ ಬ್ಲಾಗರ್ಸ್ ಸಂಘದಿಂದ ಮಾಡಬೇಕೋ ಬೇಡವೋ? ಮಾಡಿದರೆ ಅದು ಸಂತ್ರಸ್ತರನ್ನು ತಲುಪುತ್ತದೋ ಇಲ್ಲವೋ ಎಂಬ ಚರ್ಚೆ, ಜಿಜ್ಞಾಸೆ ಮಾಡುತ್ತಾ ಕೂಡುವಂಥ ಸಮಯವೇ ಇದು? ಇಂಥ ಮೂರ್ಖತನಕ್ಕೆ ಏನು ಹೇಳಬೇಕು? ಇಂಥ ಕ್ಷುಲ್ಲಕ ವಿಷಯಗಳಿಗೇ ನಾನು ಬರಹಗಾರರನ್ನು hate ಮಾಡುವದು. ಒಂದು ವೇಳೆ ಎಲ್ಲರೂ ನಮ್ಮ ತರಾನೆ ಯೋಚಿಸಿದ್ದರೆ ಮೊನ್ನೆ ಮುಖ್ಯಮಂತ್ರಿಗಳು ಪಾದಯಾತ್ರೆ ಮೂಲಕ ದೇಣಿಗೆ ಸಂಗ್ರಹಿಸಲು ಹೊರಟಾಗ ಸಾರ್ವಜನಿಕರಿಂದ ಬರಿ ಬೆಂಗಳೂರೊಂದರಲ್ಲಿಯೇ ೩ ಕೋಟಿಯಷ್ಟು ಹಣ ಹೇಗೆ ಸಂಗ್ರಹವಾಗುತ್ತಿತ್ತು? ಸಂತ್ರಸ್ತರಿಗೆ ಸಹಾಯವಾದರೆ ಸಾಕೆಂದು ಎರೆಡೆರಡು ಬಾರಿ ಸಹಾಯ ಮಾಡಿದ ಎಷ್ಟೊ ಜನರಿದ್ದಾರೆ. ನಮ್ಮ ಬ್ಲಾಗರ್ ಶಿವು ಅವರ ಕೆಳಗೆ ಕೆಲಸ ಮಾಡುವ ಪೇಪರ್ ಬೀಟ್ ಹುಡುಗರು ಸಹ ಐದೋ ಹತ್ತೋ ರೂಗಳನ್ನು ನೀಡಿ ಸಹಾಯ ಮಾಡಿದ್ದಾರೆ. ಅಂಥದುರಲ್ಲಿ ನಾವು ಬರಹಗಾರರು ಈಗಾಗಲೆ ಸಹಾಯ ಮಾಡಿದಮೇಲೂ ಐವತ್ತೋ ಅರವತ್ತೋ ನೀಡದಿರುವಷ್ಟು ಕಡುಬಡವರೆ? ಸದರಿ ಲೇಖಕರು ಒಂದೇ ಉದ್ದೇಶಕ್ಕೆ ಎರಡೆರೆಡು ಬಾರಿ ಸಹಾಯ ಮಾಡದಿರುವಷ್ಟು ಬರಹಗಾರರು ಬಡವರಿದ್ದಾರೆ ಎಂದು ಹೇಳಿದ್ದಾರೆ. ಏನ್ ಸ್ವಾಮಿ? ಇವತ್ತಿನ ಕಾಲದಲ್ಲಿ ಯಾವ ಬರಹಗಾರ ಬರಿ ಬರವಣಿಗೆಯೊಂದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾನೆ? ಎಲ್ಲ ಬರಹಗಾರರಿಗೆ ಒಂದಲ್ಲ ಒಂದು ಉದ್ಯೋಗವಿದೆ. ಅದೂ ನಮ್ಮ ಬಹಳಷ್ಟು ಬ್ಲಾಗರ್ಸ್ ಒಳ್ಳೆ ಉದ್ಯೋಗದಲ್ಲಿದ್ದುಕೊಂಡೇ ಬರವಣಿಗೆಯನ್ನು ಮುಂದುವರಿಸುತ್ತಿದ್ದಾರೆ. ಅಂಥವರಿಂದ ಇನ್ನೊಂದು ಅತಿ ಸಣ್ಣ ಸಹಾಯವನ್ನು ನಿರೀಕ್ಷಿಸುವದು ತಪ್ಪೆ? ಏಕೆಂದರೆ ಸಹಾಯ ಮಾಡುವಾಗ ಇಂತಿಷ್ಟೆ ಮಾಡಬೇಕೆಂಬ ನಿಯಮವೇನೂ ಇಲ್ಲವಲ್ಲ? ಎಲ್ಲರೂ ಅವರವರ ಶಕ್ತಾನುಸಾರ ಮಾಡುತ್ತಾರೆ. ಆದರೆ ಕಡಿಮೆಕೊಟ್ಟರೆ ಎಲ್ಲಿ ತಮ್ಮ ಘನತೆಗೆ ಕುಂದು ಬರುತ್ತದೋ ಎಂದು ಹಿಂದೆ ಮುಂದೆ ನೋಡುವವರನ್ನು ಹಿಂದೆ ತಳ್ಳಿ. ಇಂಥ ಸಮಯದಲ್ಲೂ ಚರ್ಚೆ, ಜಿಜ್ಞಾಸೆ ಮಾಡುತ್ತಾ ಕಾಲ ಕಳೆಯುವದು ಬಿಟ್ಟು ತಕ್ಷಣ ನಾವು ಅಂದರೆ so called ಬರಹಗಾರರು ಕಾರ್ಯೋನ್ಮುಖರಾಗಬೇಕಿದೆ.

    ನಾನು ನನ್ನ ಲೇಖನದಲ್ಲಿ ನಾವು ಬರಹಗಾರರು ನಮ್ಮ ಮೇಲೆ ಗುರುತರವಾದ ಜವಾಬ್ದಾರಿಯಿದೆ, ಮೇಲಾಗಿ ನಮ್ಮದೇ ಆದಂತ ಸಂಘಟನೆಯಿರುವದರಿಂದ ಆ ಮೂಲಕ ಸದಸ್ಯರೆಲ್ಲಾ ಒಟ್ಟಾಗಿ ಒಂದು ಸಣ್ಣ ಪರಿಹಾರ ನಿಧಿಯೊಂದನ್ನು ನೀಡಿದ್ದರೆ ಒಳಿತಿತ್ತು ಎಂದು ನೇರವಾಗಿ ಅಲ್ಲದಿದ್ದರೂ ಸೂಕ್ಷ್ಮವಾಗಿ ಹಾಗೂ ಪರೋಕ್ಷವಾಗಿ ಹೇಳಿದ್ದೆ. ಹಾಗಂತ ನನಗೆ ಸಂಘಟನೆಗಳ ಮೂಲಕವೇ ಸಹಾಯ ಮಾಡಬೇಕೆನ್ನುವ ಖಯಾಲಿಯಿದೆಂದಲ್ಲ. ಏಕೆಂದರೆ ಈಗಾಗಲೆ ನಾನೂ ಸಹ ವ್ಯಯಕ್ತಿಕ ನೆಲೆಯಲ್ಲಿ ಸಹಾಯ ಮಾಡಿದ್ದೇನೆ. ಅದು ಇಲ್ಲಿ ಅಪ್ರಸ್ತುತ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಎಲ್ಲರೂ ಬರಹಗಾರರು ಹೇಗೆ ಸ್ಪಂದಿಸಬಹುದು? ಎಂದು ಕಾಯುತ್ತಿರುತ್ತಾರೆ ಹಾಗೂ ನಮ್ಮದೇ ಆದಂಥ ಒಂದು ಸಂಘಟನೆಯಿರುವದರಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ. ಹೇಗೆ ನೀವು ವ್ಯಯಕ್ತಿಕ ನೆಲೆಯಿಂದ ನಿಮ್ಮ ಕಛೇರಿಗಳಿಂದ, ಸಂಸ್ಥೆಗಳಿಂದ ದಾನ ಮಾಡುತ್ತೀರೋ ಹಾಗೆಯೇ ನಮ್ಮ ಬ್ಲಾಗರ್ಸ್ ಸಂಸ್ಥೆಯಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಿದ್ದರೆ ಒಳಿತಿತ್ತೆಂದೂ ಮೇಲಾಗಿ ಒಂದು ಸಂಘಟನೆಯಿಂದ ಅದೂ ಬರಹಗಾರರಂಥ ಸಂಘಟನೆಯಿಂದ ಮಾಡಿದ್ದರೆ ಅದಕ್ಕೆ ಒಂದು ಸಾತ್ವಿಕತೆಯಿರುವದರಿಂದ ಅದನ್ನು ಸಾಮಾನ್ಯವಾಗಿ ಯಾರೂ ದುರುಪಯೋಗ ಮಾಡಿಕೊಳ್ಳಲಾರರು ಒಂದು ವೇಳೆ ದುರುಪಯೋಗವಾದರು ಬರಹಗಾರರು ಕತ್ತಿನ ಪಟ್ಟಿ ಹಿಡಿದು ಕೇಳುತ್ತಾರೆ ಎಂಬ ಹೆದರಿಕೆಯಿಂದಾದರೂ ಅದನ್ನು ತಲುಪಿಸಬೇಕಾದ ಜಾಗಕ್ಕೆ ತಲುಪಿಸುತ್ತಾರೆ ಎಂಬ ಕಳಕಳಿಯಿಂದ ಹೇಳಿದ್ದೆ. ಆದರೆ ನನ್ನ ಉದ್ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇಂಥ ಒಂದು ಆಗ್ರಹದ ಮೂಲಕ ನಾನು ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತೇದ್ದೇನೆಂದೂ ಅಥವಾ ನಾನೊಬ್ಬ ದೊಡ್ದ ಸಮಾಜ ಸುಧಾರಕ ಎಂಬಂತೆ ಪೋಸ್ ಕೊಡುತ್ತಿದ್ದೇನೆಂದೂ ಕೆಲವು ಜನ ತಿಳಿದುಕೊಂಡಿದ್ದಾರೆ. ಅಂಥವರಿಗೆ ನಾನೇನೂ ಮಾಡಲಾಗುವದಿಲ್ಲ.

    ಅಸಲಿಗೆ ನಾನು ನನ್ನ ಲೇಖನದಲ್ಲಿ ಬ್ಲಾಗರ್ಸ್ ಸಂಘದ ಎಲ್ಲ ಸದಸ್ಯರಿಂದ ಒಂದಿಷ್ಟು ಪರಿಹಾರ ನಿಧಿ ನೀಡಿದರೆ ಸಾಕಿತ್ತು ಎಂದಷ್ಟೆ ಹೇಳಿದ್ದೆನೆ ಹೊರತು ಅವರು ಫೀಲ್ಡಿಗಿಳಿದು ಕಾರ್ಯೋನ್ಮುಖರಾಗಬೇಕೆಂದಲ್ಲ. ಆದರೆ ಸದರಿ ಆ ಬರಹಗಾರರು ತಪ್ಪಾಗಿ ಅರ್ಥ ಮಾಡಿಕೊಂಡು ಒಬ್ಬ ಲೇಖಕನದು ಬರಿ ಬರೆಯುವದಷ್ಟೆ ಕೆಲಸ ಆತ ಎಲ್ಲ ಕೆಲಸವನ್ನು ಮಾಡಲಾರ ಹಾಗೆ ಹೀಗೆ ಎಂದೆಲ್ಲಾ ಹೇಳಿದ್ದಾರೆ. ನಾನೂ ಅವರ ಈ ಮಾತನ್ನು ಒಂದು ಹಂತದವರೆಗೆ ಒಪ್ಪುತ್ತೇನೆ. ಆದರೆ ನಾವು ಬರೆಯುವದಕ್ಕೂ ಹಾಗೂ ನಾವು ನಡೆಸುವ ಬದುಕಿಗೂ ಗಾಢ ಸಂಬಂಧವಿರುವದರಿಂದ ಬರೆದಂತೆ ಬದುಕುವದು ಗೌರವಯುತವಾಗಿರುತ್ತದೆ. ಏಕೆಂದರೆ ಎಷ್ಟೋ ಬರಹಗಾರರಲ್ಲಿ ಕೊಳಕುತನ ಮನೆ ಮಾಡಿರುವದನ್ನು ನಾನು ತುಂಬಾ ಹತ್ತಿರದಿಂದ ನೋಡಿ ಬೇಸತ್ತಿದ್ದೇನೆ ಹಾಗೂ ಅವರ ಮೇಲಿನ ಗೌರವ ಕ್ಷಣಾರ್ಧದಲ್ಲಿ ಕರಗಿಹೋಗಿದೆ. ಬರಿ ಪುಸ್ತಕ ಬರೆಯುತ್ತಾ ಹೊಲಸು ರಾಜಕಾರಣ ಮಾಡುತ್ತಾ ಒಂದು ತರಗತಿಯನ್ನೂ ಸಹ ತೆಗೆದುಕೊಳ್ಳದೆ ಸದಾ ಕಾಲೇಜಿನಿಂದ ಹೊರಗುಳಿಯುವ ಬರಹಗಾರ ಅಧ್ಯಾಪಕ ಮಿತ್ರರನ್ನು ನಾನು ನೋಡಿದ್ದೇನೆ. ಎಲ್ಲೋ ಯಾರಿಗೋ ಪ್ರಶಸ್ತಿ ಬಂದರೆ ಅವರನ್ನು ಹೀಯಾಳಿಸಿ ಮಾತನಾಡುವ ಲೇಖಕಿಯರೊಬ್ಬರೊಟ್ಟಿಗೆ ಕೆಲಸ ಮಾಡಿದ್ದೇನೆ. ಕನ್ನಡ ಕನ್ನಡ ಎಂದು ಸಾರುವ ಕನ್ನಡದ ಖ್ಯಾತ ಕವಿಯೊಬ್ಬರ ಮಗಳು ನನ್ನ ವಿದ್ಯಾರ್ಥಿನಿಯಾಗಿದ್ದು ದ್ವಿತಿಯ ಪಿ.ಯು.ಸಿ ಯಲ್ಲಿ ನಾಲ್ಕೈದು ಬಾರಿ ಕನ್ನಡ ವಿಷಯದಲ್ಲಿಯೇ ಫೇಲ್ ಆಗಿದ್ದಳಲ್ಲದೆ ಕನ್ನಡ ಅಧ್ಯಾಪಕರ ಜೊತೆಯೂ ಸಹ ಆಕೆ ಇಂಗ್ಲೀಷನಲ್ಲಿಯೇ ಮಾತನಾಡುತ್ತಿದ್ದಳು. ಹೀಗಿರುವಾಗ ಲೇಖಕರಿಗೆ, ಬರಹಗಾರರಿಗೆ ನೈತಿಕ ಬಲವಾಗಲಿ, ಹೊಣೆಯಾಗಲಿ ಇರುವದಿಲ್ಲ. ಈ ಕಾರಣಕ್ಕಾಗಿಯೇ ನಾನು ನನ್ನ ಲೇಖನದಲ್ಲಿ ಇದೇ ವಿಷಯವನ್ನು ಒತ್ತಿ ಹೇಳಿದ್ದು.

    ಯಾರು ಏನೇ ಹೇಳಲಿ ತಡವಾಗಿದೆಯಾದರೂ ಈ ಕೂಡಲೆ ಬ್ಲಾಗರ್ಸ್ ಸಂಘದಿಂದ ಸಂತ್ರಸ್ತರಿಗೆ ಒಂದಿಷ್ಟು ಸಹಾಯವಾಗಲೇಬೇಕಿದೆ ಎಂದು ನಮ್ಮ ಬ್ಲಾಗರ್ಸ್ ತಾಣದ ಸದಸ್ಯರಾದ ಮನಸ್ಸು, ಜಯಲಕ್ಷ್ಮಿ ಪಾಟೀಲ್, ದಿನಕರ, ಮುಂತಾದವರು ನನ್ನ ಬ್ಲಾಗಲ್ಲಿ ಪ್ರತಿಕ್ರಿಯಿಸುವದರ ಮೂಲಕ ನಮ್ಮ ಸಂಘದ ಅಧ್ಯಕ್ಷರಾದ ಜಿ. ಮೋಹನ್ ಅವರನ್ನು ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಯೋಚಿಸುತ್ತಾರೆಂದು ಆಶಿಸುತ್ತಾ ಈ ಚರ್ಚೆಗೆ ತೆರೆ ಎಳೆಯುತ್ತಿದ್ದೇನೆ.
    -ಉದಯ್ ಇಟಗಿ

    ಏಳಿ, ಎದ್ದೇಳಿ ಬ್ಲಾಗಿಗರೇ, ನೆರೆಗೆ ಸಿಲುಕಿದವರಿಗೆ ನಿಮ್ಮ ಸಹಾಯ ಹಸ್ತವನ್ನು ಚಾಚಿರಿ!

  • ಸೋಮವಾರ, ಅಕ್ಟೋಬರ್ 05, 2009
  • ಬಿಸಿಲ ಹನಿ
  • ಥೂ, ನಮ್ಮ ಜನ್ಮಕ್ಕೊಂದಿಷ್ಟು ಬೆಂಕಿ ಹಾಕ! ನಾವು ಬರಹಗಾರರೇ ಹೀಗೆ! ಬರಿ ಬರಹದಲ್ಲಿ ಮಾತ್ರ ಮಾನವೀಯತೆ, ಪ್ರೀತಿ, ಅಂತಃಕರಣ, ಕನಿಕರದ ಬಗ್ಗೆ ಅಗಾಧವಾದದನ್ನು ಬರೆದು ಶಹಭಾಸ್ಗಿರಿ ಪಡೆಯುವ ನಾವು ನಿಜಜೀವನದಲ್ಲಿ ಇದ್ಯಾವುದಕ್ಕೂ ಸ್ಪಂದಿಸದೆ ತೆಪ್ಪಗೆ ಕುಳಿತು ಬಿಡುತ್ತೇವೆ. ಇದಕ್ಕೆ ಜ್ವಲಂತ ಸಾಕ್ಷಿ ಈಗಷ್ಟೆ ನಮ್ಮ ನಾಡಿನ ಉತ್ತರ ಕರ್ನಾಟಕದ ಭಾಗದಲ್ಲಿ ನಡೆದ ಪ್ರವಾಹದ ದುರಂತ! ಈ ದುರಂತ ಸಂಭವಿಸಿ ಒಂದು ವಾರವಾಗುತ್ತ ಬಂದರೂ ನಾವು ಬ್ಲಾಗಿಗರು ಬರಿ ನಮ್ಮ ನಮ್ಮ ಬ್ಲಾಗಗಳಲ್ಲಿ ಹೊಸ ಹೊಸ ಪೋಸ್ಟಿಂಗ್‍ಗಳನ್ನು ಪ್ರಕಟಿಸುವದರಲ್ಲಿ, ಅದನ್ನು ಸಿಂಗರಿಸುವದರಲ್ಲಿ ಮಾತ್ರ ಬಿಜಿಯಾಗಿದ್ದೇವೆ ಹೊರತು ನಮ್ಮಲ್ಲಿ ಯಾರೊಬ್ಬರೂ ನಮ್ಮದೇ ಬ್ಲಾಗರ್ಸ್ ಟೀಮ್‍ನಿಂದ ನೆರೆಯಲ್ಲಿ ಸಿಲುಕಿದ ಸಂತ್ರಸ್ತರ ನೋವಿಗೆ ಮಿಡಿಯುವದಾಗಲಿ, ಅಥವಾ ಅವರಿಗೆ ಹೇಗೆ ಸಹಾಯ ಮಾಡಬಹುದೆಂಬುದರ ಬಗ್ಗೆಯಾಗಲಿ ನಾವು ಯಾರೂ ಯೋಚಿಸುತ್ತಿಲ್ಲ. ಇಡಿ ಉತ್ತರ ಕರ್ನಾಟಕ ಜಲಪ್ರಳಯದಲ್ಲಿ ಅಕ್ಷರಶಃ ಕೊಚ್ಚಿಹೋಗಿದೆ. ಆದರೆ ನಾವು ಮಾತ್ರ ಯಾವ ರೀತಿಯೂ ಸ್ಪಂದಿಸುತ್ತಿಲ್ಲ. (ಈಗಾಗಲೇ ನೀವು ಸ್ಪಂದಿಸಿದ್ದರೆ ಸಹಾಯವನ್ನು ನೀಡಿದ್ದರೆ ನನ್ನ ಖಾರದ ಮಾತುಗಳಿಗೆ ಕ್ಷಮೆಯಿರಲಿ) ದುರಂತ ಸಂಭವಿಸಿದ ಮೇಲೆ ನಾವು ಅದರ ಮೇಲೆ ಬರಿ ಕಥೆ, ಕವನ, ಲೇಖನಗಳನ್ನು ಬರೆದುಬಿಟ್ಟರೆ ನಮ್ಮ ಜವಾಬ್ದಾರಿ ಮುಗಿಯಿತೆ? ನಾವು ಅವರಿಗೆ ಸಹಾಯ ಮಾಡಬಾರದೆ?

    ನಾನು ಕಾಯುತ್ತಲೇ ಇದ್ದೆ ಈ ಬಗ್ಗೆ ಒಬ್ಬರಾದರೂ ಮಾತನಾಡುತ್ತಾರಾ? ಎಂದು. ಕೊನೆಗೆ ಬೇಸತ್ತು ನಾನಿಲ್ಲಿ ಬರೆಯಬೇಕಾಗಿಬಂದಿದ್ದು ಅನಿವಾರ್ಯವಾಯಿತು. ಈ ಸಮಾಜದಲ್ಲಿ ಅತ್ಯಂತ ಜವಾಬ್ದಾರಿಯಿಂದಿರುವ ವ್ಯಕ್ತಿಗಳೆಂದರೆ ಲೇಖಕರು ಹಾಗೂ ಬರಹಗಾರರು. ಇದೀಗ ನಾವೇ ಹೀಗೆ ಸುಮ್ಮನೆ ಕುಳಿತುಬಿಟ್ಟರೆ ಹೇಗೆ? ಇಲ್ಲಿ ದೊಡ್ದ ದೊಡ್ದ ಬರಹಗಾರರಿದ್ದಾರೆ, ಲೇಖಕರಿದ್ದಾರೆ, ಬುದ್ಧಿಜೀವಿಗಳಿದ್ದಾರೆ ಇವರೆಲ್ಲ ಇತ್ತ ಗಮನಹರಿಸಲಾರರೆ? ಎಲ್ಲಕ್ಕಿಂತ ಹೆಚ್ಚಾಗಿ ಈಗಾಗಲೇ ನಮ್ಮದೇ ಆದಂಥ ಬ್ಲಾಗರ್ಸ್ ಟೀಮಿದೆ. ಎಲ್ಲ ಸದಸ್ಯರಿಂದ ದೇಣಿಗೆ ಸಂಗ್ರಹಿಸಿ ಕೊಟ್ಟರಾಯಿತು. ನಮ್ಮ ಟೀಮಿನಲ್ಲಿಯೇ ಯಾರಾದರೊಬ್ಬರು ಈ ಜವಾಬ್ದಾರಿಯನ್ನು ತೆಗೆದುಕೊಂಡು ನಮ್ಮ ಟೀಮಿನ ಅಧ್ಯಕ್ಷರಾದ ಜಿ.ಎನ್.ಮೋಹನ್ ಅವರ ಮುಂದಾಳತ್ವದಲ್ಲಿ ಎಲ್ಲ ಸದಸ್ಯರಿಂದ ಯಾಕೆ ದುಡ್ಡು ಸಂಗ್ರಹಿಸಿ ಕೊಡಬಾರದು? ನಮ್ಮ ಟೀಮಿನಲ್ಲಿ ಒಟ್ಟು ೧೭೦೦ ಸದಸ್ಯರಿದ್ದಾರೆ. ಒಬ್ಬೊಬ್ಬರೂ ೧೦೦ ರೂಪಾಯಿ ನೀಡಿದರೂ ಒಟ್ಟು ರೂ ೧,೭೦,೦೦೦ ಸಂಗ್ರಹಿಸಬಹುದು. ಅನಿವಾಸಿ ಕನ್ನಡಿಗರು, ದೊಡ್ದ ದೊಡ್ದ ಹುದ್ದೆಯಲ್ಲಿರುವವರು ಇನ್ನೂ ಹೆಚ್ಚಿಗೆ ನೀಡಬಹುದು. ಇದನ್ನು ಅವರಿವರ ಮೂಲಕ ಕೊಡುವ ಬದಲು ನಾವೇ ಒಟ್ಟಾಗಿ ಸಂಗ್ರಹಿಸಿ ನಮ್ಮ ಬ್ಲಾಗರ್ಸ್ ಟೀಮಿನಿಂದಲೇ ಕೊಟ್ಟರೆ ಒಳ್ಳೆಯದಲ್ಲವೆ? ಈಗಲೂ ತಡವಾಗಿಲ್ಲ. ಮನಸ್ಸು ಮಾಡಿದರೆ ಏನು ಬೇಕಾದರು ಮಾಡಬಲ್ಲೆವು. ಈ ಕೂಡಲೇ ಬೆಂಗಳೂರಿನಲ್ಲಿರುವ ಬ್ಲಾಗಿಗರಲ್ಲಿ ಯಾರಾದರೊಬ್ಬರು ಕಾರ್ಯಪ್ರವರ್ತರಾಗಿ ಈ ಕೆಲಸಕ್ಕೆ ಚಾಲನೆ ನೀಡಬಾರದೆ? ಅಥವಾ ಮೋಹನ್ ಅವರೇ ಎಲ್ಲರಲ್ಲಿ ಒಂದು ಮನವಿಯನ್ನು ಮಾಡಿ ದುಡ್ದು ಸಂಗ್ರಹಿಸಿ ಕೊಟ್ಟರೆ ಹೇಗೆ? ನಾವೆಲ್ಲ ಸಹೃದಯರು. ಬನ್ನಿ ನಮ್ಮ ಸಹಾಯ ಹಸ್ತವನ್ನು ನೀಡೋಣ, ಕುಸಿದ ಬದುಕನ್ನು ಮತ್ತೆ ಕಟ್ಟೋಣ. ಅವರ ಕಳೆದು ಕನಸುಗಳನ್ನು ಅವರಿಗೆ ಮತ್ತೆ ಹುಡುಕಿಕೊಡೋಣ. ಇದಕ್ಕೆ ನೀವೇನಂತೀರಿ?
    -ಉದಯ ಇಟಗಿ

    ಇದು ಉಮಾಶ್ರೀ!!

  • ಭಾನುವಾರ, ಸೆಪ್ಟೆಂಬರ್ 27, 2009
  • ಬಿಸಿಲ ಹನಿ
  • ನಾನು ಆಗ ತಾನೆ M.A ಮಾಡಿ ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದ್ದೆ. ಅದೇನು ನನ್ನ ಅದೃಷ್ಟವೋ ಏನೋ ನಾನು ಸೇರಿಕೊಂಡ ವರ್ಷವೇ ನಮ್ಮ ಕಾಲೇಜಿನ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭಕ್ಕೆ ನನ್ನ ಅಚ್ಚುಮೆಚ್ಚಿನ ನಟಿ ಉಮಾಶ್ರೀಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ನನಗೆ ಖುಶಿಯೋ ಖುಶಿ! ಏಕೆಂದರೆ ನಾನು ಆ ವೇಳೆಗಾಗಲೆ ‘ಸಂಗ್ಯಾ ಬಾಳ್ಯಾ’ ಚಿತ್ರದಲ್ಲಿನ ಅವರ ವಿಶೇಷ ಅಭಿನಯವನ್ನು ನೋಡಿ ಅವರ ಕಟ್ಟಾ ಅಭಿಮಾನಿಯಾಗಿದ್ದೆ. ಆ ಚಿತ್ರಕ್ಕೆ ಅವರು ರಾಜ್ಯಮಟ್ಟದ ಶ್ರೇಷ್ಟ ಪೋಷಕ ನಟಿ ಪ್ರಶಸ್ತಿಯನ್ನೂ ಗಿಟ್ಟಿಸಿದ್ದರು. ಇದೀಗ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕಾರ್ಯಕ್ರಮದ ದಿನ ನಮಗೆಲ್ಲರಿಗೂ ಉಮಾಶ್ರೀ ಬರುತ್ತಾರೋ ಇಲ್ಲವೋ ಎನ್ನುವ ಆತಂಕ ಇತ್ತು. ಏಕೆಂದರೆ ಬಹಳಷ್ಟು ಸಿನಿಮಾ ನಟರು ಮೊದಲು ಒಪ್ಪಿಕೊಂಡು ಕೊನೆ ಘಳಿಗೆಯಲ್ಲಿ ಕೈಕೊಟ್ಟು ಬಿಡುತ್ತಾರೆ. ಆದರೆ ಇಲ್ಲಿ ಹಾಗಾಗಲಿಲ್ಲ. ಉಮಾಶ್ರೀ ಬಂದರು. ಪ್ರಾಂಶುಪಾಲರು ನಮ್ಮನ್ನು ಪರಿಚಯಿಸಿದಾಗ ನಮ್ಮತ್ತ ಒಂದು ಮಂದಸ್ಮಿತವನ್ನು ಬೀರಿದರು. ನಂತರ ಕಾರ್ಯಕ್ರಮಕ್ಕೆ ಹೊರಟೇಬಿಟ್ಟರು. ಅಷ್ಟುಬಿಟ್ಟರೆ ಆವತ್ತು ಸಮಾರಂಭದ ಗಡಿಬಿಡಿಯಲ್ಲಿ ಅವರೊಂದಿಗೆ ಮಾತನಾಡಲಾಗಲೇ ಇಲ್ಲ!

    ಉಮಾಶ್ರೀ ಏನು ಮಾತನಾಡಬಹುದೆಂದು ನಮಗೆಲ್ಲ ಕುತೂಹಲವೋ ಕುತೂಹಲ! ಉಮಾಶ್ರೀ ಮಾತನಾಡಲು ಎದ್ದು ನಿಂತರು. ಒಮ್ಮೆ ಪ್ರೇಕ್ಷಕರತ್ತ ಮುಗುಳುನಗೆಯನ್ನು ಬೀರಿ ಆರಂಭಿಸಿಯೇ ಬಿಟ್ಟರು: ನಾವು ಗೆದ್ದಾಗ ಎಲ್ಲೊ ಒಂದು ಕಡೆ ಸೋತಿರುತ್ತೇವೆ, ಸೋತಾಗ ಇನ್ನೆಲ್ಲೋ ಒಂದು ಕಡೆ ಗೆದ್ದಿರುತ್ತೇವೆ! ಈ ಸೋಲು ಗೆಲವುಗಳನ್ನು ಸಮನಾಗಿ ಸ್ವೀಕರಿಸುವದೇ ಬದುಕು! ಹಾಗೆ ಸ್ವೀಕರಿಸುವದನ್ನು ಕಲಿಸುವದೇ ಕಲೆ! ಆ ಕಲೆ ಅಡಗಿರುವದೇ ಸಂಸ್ಕೃತಿಯಲ್ಲಿ! ಅಂಥ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಲೆಂದೇ ಇಂಥ ಸಾಂಸ್ಕೃತಿಕ ಸಮಾರಂಭಗಳನ್ನು ನಡೆಸೋದು! ಎಂದು ಫಿಲಾಸಫಿಕ್ ಆಗಿ ಮಾತನಾಡಿ ನಮ್ಮೆಲ್ಲರ ಚಪ್ಪಾಳೆಯನ್ನು ಗಿಟ್ಟಿಸಿದರು. ಅಷ್ಟೇ ಅಲ್ಲದೆ ಸಮಾರಂಭದ ಆಶಯಕ್ಕೆ ತಕ್ಕಂತೆ ಸಂಸ್ಕೃತಿ ಎಂದರೇನು? ಕಲೆ ಎಂದರೇನು? ಅದನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು? ಎಂಬುದನ್ನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಹಳಷ್ಟು ಅತಿಥಿಗಳು ಸಮಾರಂಭದ ಆಶಯವನ್ನೇ ಮರೆತು ಏನೇನೋ ಮಾತಾಡಿ ಬೋರ್ ಹೊಡೆಸಿಬಿಡುತ್ತಾರೆ. ಆದರೆ ಉಮಾಶ್ರೀ ಹಾಗೆ ನಿರಾಶೆಗೊಳಿಸಲಿಲ್ಲ. ಮಾತು ಮುಗಿದಾದ ಮೇಲೆ ಕಾರ್ಯಕ್ರಮದ ನಿರೂಪಕರು ಉಮಾಶ್ರೀಯವರನ್ನು “ಒಡಲಾಳ” ನಾಟಕದ ಒಂದೆರಡು ಡೈಲಾಗ್‍ಗಳನ್ನು ಹೇಳಲು ಕೇಳಿಕೊಂಡಾಗ “ಅಯ್ಯೋ, ಆ ಡೈಲಾಗ್ಸೆಲ್ಲಾ ಮರೆತಿದಿರೆ! ಬಹಳ ದಿವಸ ಆಯ್ತು ನೋಡಿ” ಎಂದು ಹೇಳಿ ನಕ್ಕು ಬೇರೆ ಇನ್ಯಾವುದೋ ಸಿನಿಮಾದ ಡೈಲಾಗ್‍ಗಳನ್ನು ಹೇಳುವದರ ಮೂಲಕ ಪ್ರೇಕ್ಷಕರ ಮನವನ್ನು ತಣಿಸಿದರು.

    ಎಲ್ಲರೂ ಮಾತನಾಡಿದ ನಂತರ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳಿದ್ದವು. ಉಮಾಶ್ರೀ ವಿದ್ಯಾರ್ಥಿಗಳ ಮನರಂಜನಾ ಕಾರ್ಯಕ್ರಮವನ್ನು ನೋಡಲು ಉಳಿದರು. ಕಾರ್ಯಕ್ರಮಗಳು ಶುರುವಾದವು. ವಿದ್ಯಾರ್ಥಿನಿಯರ ತಂಡವೊಂದು ಯಾವುದೋ ಒಂದು ಹಾಡಿಗೆ ನರ್ತಿಸುತ್ತಿದ್ದರು. ಮಧ್ಯದಲ್ಲಿ ಹುಡುಗಿಯೊಬ್ಬಳ ಸೆರಗು ಆಕಸ್ಮಿಕವಾಗಿ ಜಾರಿ ಕೆಳಗೆ ಬಿತ್ತು. ತಕ್ಷಣ ಆ ಹುಡುಗಿ ಅದನ್ನು ಸರಿಪಡಿಸಿಕೊಂಡಳಾದರೂ ಅಷ್ಟರಲ್ಲಿ ಸೇರಿದ್ದ ಹುಡುಗರೆಲ್ಲಾ ಅಸಹ್ಯ ರೀತಿಯಲ್ಲಿ ಸಿಳ್ಳೆ, ಚಪ್ಪಾಳೆಗಳನ್ನು ಹಾಕಿ ಆ ಹುಡುಗಿಗೆ ಅವಮಾನ ಮಾಡಿದರು. ಈ ಘಟನೆಯಿಂದ ಆ ಹುಡುಗಿಗಿಂತ ಉಮಾಶ್ರೀಯವರೆಗೇ ತುಂಬಾ ನೋವಾಯಿತು. ಆ ನೃತ್ಯ ಮುಗಿಯುತ್ತಿದ್ದುದನ್ನೇ ಕಾಯುತ್ತಿದ್ದ ಉಮಾಶ್ರೀಯವರು ವೇದಿಕೆಗೆ ಬಂದು ಮೈಕ್ ತೆಗೆದುಕೊಂಡು “ನಾನು ಹಿಂದೆ ‘ಒಡಲಾಳ’ದಲ್ಲಿ ಸಾಕವ್ವನ ಪಾತ್ರ ಮಾಡುತ್ತಿದ್ದೆ. ಆ ಪಾತ್ರಕ್ಕೆ ರವಿಕೆ (ಬ್ಲೌಸ್) ಹಾಕದೆ ಬರಿ ಸೆರಗಿನಿಂದ ನನ್ನ ಎದೆಯನ್ನು ಮುಚ್ಚಿಕೊಂಡು ನಾಟಕದುದ್ದಕ್ಕೂ ಅಭಿನಯಿಸಬೇಕೆಂದು ನಿರ್ದೇಶಕರು ಹೇಳಿದ್ದರು. ನಾನು ಆಯ್ತು ಅಂದೆ. ಒಂದು ಶೋನಲ್ಲಿ ನಾನು ಹೀಗೆ ಅಭಿನಯಿಸುತ್ತಿದ್ದೆ. ಬಹಳ ಆವೇಶದ ಸನ್ನಿವೇಶವದು. ನಾನು ತಲ್ಲೀನಳಾಗಿ ಅಭಿನಯಸುತ್ತಿರಬೇಕಾದರೆ ಆಕಸ್ಮಿಕವಾಗಿ ನನ್ನ ಸೀರೆ ಸೆರಗೂ ಜಾರಿಬಿತ್ತು. ಆದರೆ ಅಲ್ಲಿರುವ ಪ್ರೇಕ್ಷಕರು ಯಾರೂ ನಗಲಿಲ್ಲ. ಏಕೆಂದರೆ ಅವರ ಗಮನವೆಲ್ಲಾ ನನ್ನ ಅಭಿನಯದ ಮೇಲಿತ್ತೇ ಹೊರತು ನನ್ನ ದೇಹದ ಮೇಲಲ್ಲ. ಅದು ಕಲೆಗೆ ಕೊಟ್ಟ ಗೌರವವಾಗಿತ್ತು. ಒಬ್ಬ ಕಲಾವಿದೆಯನ್ನು ನಡೆಸಿಕೊಂಡ ರೀತಿ ಅಂಥದ್ದಿತ್ತು! ಅಲ್ಲಿದ್ದವರೆಲ್ಲಾ ಸಭ್ಯ ಕಲೋಪಾಸಕರು, ಇಲ್ಲಿರೋರು ಅಸಭ್ಯ ಕಲೋಪಾಸಕರು! ಇಂಥವರಿಗೆ ಸಂಸ್ಕೃತಿ ಮಹತ್ವವನ್ನು ಸಾರುವ ಸಾಂಸ್ಕೃತಿಕ ಸಂಘಗಳು ಬೇರೆ” ಎಂದು ವ್ಯಂಗವಾಗಿ ತಣ್ಣನೆಯ ಮಾತುಗಳಲ್ಲಿ ಆದರೆ ಮುಟ್ಟಿನೋಡಿಕೊಳ್ಳುವ ಹಾಗೆ ವಿದ್ಯಾರ್ಥಿಗಳಿಗೆ ಮಾತಿನ ಛಡಿಯೇಟನ್ನು ನೀಡಿದರು. ಅಷ್ಟು ಹೇಳಿದ್ದೇ ತಡ ಅವಮಾನ ಮಾಡಿದ ವಿದ್ಯಾರ್ಥಿಗಳೆಲ್ಲಾ ಒಬ್ಬೊಬ್ಬರಾಗಿ ಖಾಲಿಯಾದರು. ಇದು ಉಮಾಶ್ರೀ!! ಹಾಗೆಂದೇ ಅಂಥವರನ್ನು ತಡವಾದರೂ ಕಲಾಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ!

    -ಉದಯ ಇಟಗಿ

    ನಿನ್ನ ಪ್ರೀತಿಸುವದೇ ಒಂದು ಹಿಂಸೆ!

  • ಶುಕ್ರವಾರ, ಸೆಪ್ಟೆಂಬರ್ 25, 2009
  • ಬಿಸಿಲ ಹನಿ
  • ನಿನ್ನ ಒಲಿಸಿಕೊಳ್ಳುವದು ಹೇಗೆಂದು ಯೋಚಿಸಿ ಯೋಚಿಸಿ
    ನನ್ನ ರಾತ್ರಿಗಳು ಹಿಗ್ಗಿಹೋಗಿವೆ ನಿದ್ರೆಯಿಲ್ಲದೆ
    ಈಗ ಅನಿಸುತ್ತಿದೆ ನಿನ್ನ ಪ್ರೀತಿಸುವದೇ ಒಂದು ಹಿಂಸೆಯೆಂದು!
    ನೀನು ನನ್ನವಳು ಎಂಬ ಒಂದೇ ಒಂದು ಕಾರಣಕ್ಕೆ
    ಎಷ್ಟೊಂದನ್ನು ಸಹಿಸಿಕೊಂಡೆ ನಾನು
    ನಿನ್ನ ಈಟಿಯಂಥ ಇರಿತದ ಮಾತುಗಳನ್ನು,
    ಅಹಂಕಾರವನ್ನು, ಕೋಪ ತಾಪಗಳನ್ನು, ಸಿಟ್ಟು ಸೆಡುವುಗಳನ್ನು!
    ನೀನಿತ್ತ ನೋವುಗಳಿಗೆ ಲೆಕ್ಕವುಂಟೇ?
    ಒಮ್ಮೊಮ್ಮೆ ಅದ್ಭುತವಾಗಿ ಪ್ರೀತಿಸುತ್ತೀಯಾ
    ಒಮ್ಮೊಮ್ಮೆ ಸುಕಾಸುಮ್ಮನೆ ಶರಂಪರ ಜಗಳ ಕಾಯುತ್ತೀಯ
    ಒಮ್ಮೊಮ್ಮೆ ನಕ್ಕು ನಗುಸುತ್ತೀಯಾ
    ಒಮ್ಮೊಮ್ಮೆ ಕಾರಣವಿಲ್ಲದೆ ಕೆರಳಿ ಕೆಂಡವಾಗುತ್ತೀಯಾ
    ಒಮ್ಮೊಮ್ಮೆ ಸುಸುಮ್ಮನೆ ಮುಲುಮುಲು ಅತ್ತು
    ಮನೆ ಮನಗಳನ್ನು ಮಸಣವಾಗಿಸುತ್ತೀಯಾ
    ನೀನೊಬ್ಬಳೇ ಹೀಗೇನಾ? ಅಥವಾ ಹುಡುಗಿಯರೆಲ್ಲಾ ಹೀಗೇನಾ?
    ಉತ್ತರ ಹುಡುಕುತ್ತಿದ್ದೇನೆ; ಹೇಳುವರ್ಯಾರು?
    ಎಷ್ಟೆಲ್ಲಾ ಮಾಡಿದೆ ನಾ ನಿನಗೋಸ್ಕರ
    ನನ್ನತನವನ್ನು ಬಿಟ್ಟೆ ನನ್ನವರನ್ನು ಬಿಟ್ಟೆ
    ನನ್ನನ್ನು ನಾನು ಬದಲಾಯಿಸಿಕೊಂಡೆ
    ಕೊನೆಗೆ ನೀ ನಡೆದ ಹಾದಿಯಲ್ಲಿ ನಾನೂ ನಡೆದೆ
    ಆದರೂ ನಿನಗೆ ಕರುಣೆ ಬರಲಿಲ್ಲ!
    ಪ್ರತಿಸಲ ನಾನು ಸೋಲುತ್ತಲೇ ಹೋದೆ
    ನೀನು ಗೆಲ್ಲುತ್ತಲೇ ಬಂದೆ
    ನಿನಗೆ ನಿನ್ನ ಗೆಲುವಿನ ಹಟವೇ ಹೆಚ್ಚಾಯಿತು
    ಈಗೀಗ ನನ್ನ ಗಮನಿಸುವದಿರಲಿ
    ನನ್ನ ಬಗ್ಗೆ ಯೋಚಿಸುವದಿಲ್ಲ ಕೂಡ
    ಯಾಕೆ ಇಷ್ಟೊಂದು ಕೄರಿಯಾದೆ? ಏನು ಕಾರಣ?
    ಹೇಳು ನನ್ನರಗಿಣಿ ಏನಾದರು ಹೇಳು
    ಈಗಲಾದರೂ ಅಂದುಕೊಳ್ಳುತ್ತೇನೆ
    ನನಗೆ ನಿನ್ನ ಪ್ರೀತಿಯಲ್ಲಿ ಮರುಭರವಸೆಯಿದೆಯೆಂದು
    ಇಲ್ಲವಾದರೆ ನಿನ್ನ ಪ್ರೀತಿಸುವದೇ ಒಂದು ಹಿಂಸೆಯೆಂದು ಬಿಟ್ಟುಹಾಕುತ್ತೇನೆ!

    (ಅರೇಬಿ ಕವನವೊಂದರ ಶೀರ್ಷಿಕೆಯಾಧಾರದ ಮೇಲೆ ಕಲ್ಪನೆಯ ರೆಕ್ಕೆ ಪುಕ್ಕ ಕಟ್ಟಿ ನಾನೇ ಹೊಸೆದಿರುವ ಕವನವಿದು)
    - ಉದಯ ಇಟಗಿ

    ಎರಡು ಅನುವಾದಿತ ಕವನಗಳು

  • ಮಂಗಳವಾರ, ಸೆಪ್ಟೆಂಬರ್ 22, 2009
  • ಬಿಸಿಲ ಹನಿ
  • ಚಿನ್ನವಾಗಿರುವದೆಲ್ಲಾ ಹೊಳೆಯುವದಿಲ್ಲ

    ಚಿನ್ನವಾಗಿರುವದೆಲ್ಲಾ ಹೊಳೆಯುವದಿಲ್ಲ
    ಅತ್ತಿತ್ತ ಅಲೆದಾಡುವರೆಲ್ಲಾ ಕಳೆದುಹೋಗುವದಿಲ್ಲ
    ಮುದುಕರೆಲ್ಲಾ ದುರ್ಬಲವಾಗಿರುವದಿಲ್ಲ
    ಹಿಮವು ನೆಲದಾಳದ ಬೇರುಗಳನ್ನು ಮುಟ್ಟುವದಿಲ್ಲ
    ಕಿಡಿಯೊಂದರಿಂದಲೇ ಬೆಂಕಿ ಹೊತ್ತುತ್ತದೆ
    ಕತ್ತಲೆಯೊಳಗಿಂದಲೇ ಬೆಳಕೊಂದು ಸೀಳಿಕೊಂಡು ಬರುತ್ತದೆ
    ಮುರಿದ ಹೋದ ಹೂ ದಳವೊಂದು ಮತ್ತೆ ಸೇರುತ್ತದೆ
    ಕಿರೀಟ ಕಳೆದುಕೊಂಡುವರು ಮತ್ತೆ ರಾಜರಾಗಿ ಮೆರೆಯುತ್ತಾರೆ

    ಮೂಲ ಇಂಗ್ಲೀಷ: ಜಾನ್ ರೊನಾಲ್ಡ್ ರಿಯುಲ್ ಟೋಲ್ಕಿನ್
    ಕನ್ನಡಕ್ಕೆ: ಉದಯ ಇಟಗಿ

    ನಾನು ನಿನ್ನವಳಲ್ಲ

    ನಾನು ನಿನ್ನವಳಾಗಬೇಕೆಂದು ಬಯಸಿದರೂ
    ನಿನ್ನವಳಾಗಲಿಲ್ಲ
    ನಿನ್ನೊಳಗೆ ಕಳೆದುಹೋಗಬೇಕೆಂದಕೊಂಡರೂ
    ಕಳೆದುಹೋಗಲಾಗಲಿಲ್ಲ.
    ಬದಲಾಗಿ ಕಳೆದುಹೋದೆ ನಾ
    ಮಟ ಮಟ ಮಧ್ಯಾಹ್ನದಲ್ಲಿ ಮೇಣದ ಬೆಳಕಾಗಿ
    ಕರಗಿಹೋದೆ ನಾ ಸಾಗರದೊಳಗೆ ಮಂಜಿನ ಹನಿಯಾಗಿ!

    ನನಗೆ ಗೊತ್ತು
    ನೀನು ಈಗಲೂ ನನ್ನ
    ಚೆಂದವಾಗಿ ಪ್ರೀತಿಸುತ್ತೀಯಾ
    ನಿನ್ನ ಉಸಿರಾಗಿ ಪ್ರಜ್ವಲಿಸುವ ಜ್ವಾಲೆಯಾಗಿ
    ಆದರೂ ನಾನು ನಾನೇ
    ಬೆಳಕಲ್ಲಿ ಬೆಳಕಾಗಿರಬಯಸುವವಳು!

    ಓ, ಹುಡುಗ!
    ಭೋರ್ಗರೆದುಬಿಡು ಮತ್ತೊಮ್ಮೆ
    ಕೊಚ್ಚಿಹೋಗಲಿ ನಾ ನಿನ್ನ ಪ್ರೀತಿಯ ಹುಚ್ಚು ಹೊಳೆಯಲ್ಲಿ
    ಉಳಿದುಬಿಡುವೆ ನಾ ಆರದೆ ಉರಿವ ದೀಪವಾಗಿ
    ಬೀಸುವ ಬಿರುಗಾಳಿಯ ನಡುವೆಯೂ!

    ಇಂಗ್ಲೀಷ ಮೂಲ: ಸಾರಾ ಟಿಸ್ಡೇಲ್
    ಕನ್ನಡಕ್ಕೆ: ಉದಯ ಇಟಗಿ

    ಕಳೆದ ರಾತ್ರಿಯ ಮಳೆಯಲ್ಲಿ

  • ಶುಕ್ರವಾರ, ಸೆಪ್ಟೆಂಬರ್ 18, 2009
  • ಬಿಸಿಲ ಹನಿ
  • ‘ಕಳೆದ ರಾತ್ರಿಯ ಮಳೆಯಲ್ಲಿ’ ಎನ್ನುವ ಕವನವನ್ನು ಪ್ರಸಿದ್ಧ ತೆಲುಗು ಕವಿ ದೇವರಕೊಂಡ ಬಾಲಗಂಗಾಧರ ತಿಲಕರವರ “ನಿನ್ನ ರಾತ್ರಿ ವರ್ಷಾಮ್ಲೊ” (ಕಳೆದ ರಾತ್ರಿಯ ಮಳೆಯಲ್ಲಿ) ಎನ್ನುವ ತೆಲುಗು ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಇದು ೧೯೭೧ ರಲ್ಲಿ ಕೇಂದ್ರ ಸಾಹಿತ್ಯ ಅಕ್ಯಾಡೆಮೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅದರ ಕನ್ನಡ ಅನುವಾದ ಇಲ್ಲಿದೆ.

    ನಿನ್ನೆ ರಾತ್ರಿಯ ತುಂತುರು ಮಳೆಯಲ್ಲಿ ನೆನೆದುಕೊಂಡೇ ಬಂದು ನಿನ್ನ ಮನೆಯ ಬಾಗಿಲು ಬಡಿದೆ
    ನಿದ್ದೆಗಣ್ಣಲ್ಲೊಮ್ಮೆ ನನ್ನ ನೋಡಿ ಕರುಣಾಜನಕವಾಗಿ ನಕ್ಕು ಒಳಗೆ ಬರ ಹೇಳಿದೆ
    ಮಬ್ಬುಗತ್ತಲೆಯ ಚಂದಿರ ಕತ್ತಲನ್ನು ಸೀಳಿಕೊಂಡುಬಂದು ನನ್ನ ಕಣ್ಣೊಳಗೆ ಮಿನುಗಿದ
    ಹೂ ಮೇಲಿನ ಪರಾಗವೊಂದು ಹಾರಿಬಂದು ನನ್ನೆದೆಗೆ ಬಡಿದು ಕೆಳಗೆಬಿತ್ತು
    ನಾಚಿಕೆಯಿಂದ ತಲೆತಗ್ಗಿಸಿದೆ ನಿನ್ನತ್ತ ನೋಡಲಿಲ್ಲ
    ಅವಸರವಸರವಾಗಿ ಕೋಣೆಯೊಳಗೆ ಓಡಿಹೋಗಿ ಬಾಗಿಲು ಮುಚ್ಚಿಕೊಂಡೆ
    ಆ ಕತ್ತಲ ರಾತ್ರಿಯ ಏಕಾಂತದಲ್ಲಿ ಎತ್ತೆಂದೆರತ್ತ ಒಬ್ಬಂಟಿಯಾಗಿ ಓಡಾಡಿದೆ
    ಎಷ್ಟೊಂದು ನೋವುಗಳು! ಎಷ್ಟೊಂದು ನಿಟ್ಟುಸಿರುಗಳು!
    ಥಟ್ಟನೆ ನನ್ನೊಳಗಿನ ನಿನಾದ ನಿಂತುಹೋಯಿತು
    ಆ ರಾತ್ರಿ ನನ್ನ ಅಖಂಡ ಪ್ರೀತಿಯನ್ನು ಸಾದರಪಡಿಸಲೆಂದೇ
    ಸುಮಧುರ ಗೀತೆಗಳ ಗುಚ್ಚವೊಂದನ್ನು ಉಡುಗೊರೆಯಾಗಿ ಕೊಡಲು ತಂದಿದ್ದೆ
    ಊಹೂಂ, ಕೊಡಲಾಗಲಿಲ್ಲ ಹಾಗೆ ಹೊರಟುಹೋದೆ
    ಊರೂರು ಅಲೆಯುತ್ತಾ ಕಾಡು-ಮೆಡುಗಳನ್ನು ದಾಟುತ್ತಾ
    ನಭದ ನಕ್ಷತ್ರಗಳಿಗೆ ರಾಗ ಹಾಕುತ್ತಾ ಅನಂತಾನಂತ ಜಗದ ಗಡಿಗಳನ್ನು ಹುಡುಕುತ್ತಾ
    ಅತ್ತ ಇತ್ತ ಒಬ್ಬಂಟಿಯಾಗಿ ಅಲೆದಾಡಿದೆ ಆ ಕತ್ತಲ ರಾತ್ರಿಯ ಏಕಾಂತದಲ್ಲಿ
    ಎಲ್ಲಿ ನೋಡಿದರಲ್ಲಿ ಶೋಚನೀಯ ಕಣ್ಣುಗಳ ಪ್ರಶ್ನೆಗಳು
    ಮೂಕ ವೇದನೆಗಳ ಕರೆಗಳು ಗೋಳಿಡುವ ಪ್ರಲಾಪನೆಗಳು
    ನೋವಿನ ಬೇಗೆಯಲ್ಲಿ ಬೆಂದುಹೋದ ಜೀವಗಳು
    ಬರಿ ಇಂಥವೇ ದೃಶ್ಯಗಳು ಕಾಣಿಸಿದವು!

    ಮೂಲ ತೆಲಗು: ದೇವರಕೊಂಡ ಬಾಲಗಂಗಾಧರ ತಿಲಕ
    ಇಂಗ್ಲೀಷಗೆ: ಜೆ. ಸತ್ಯಾನಂದ ಕುಮಾರ
    ಕನ್ನಡಕ್ಕೆ: ಉದಯ ಇಟಗಿ

    ಕನಸುಗಳು

  • ಗುರುವಾರ, ಸೆಪ್ಟೆಂಬರ್ 17, 2009
  • ಬಿಸಿಲ ಹನಿ
  • ಕನಸುಗಳು ಕೈ ಜಾರಿ ಹೋಗದಂತೆ
    ಗಟ್ಟಿಯಾಗಿ ಹಿಡಿದಿಕೋ ಅವನ್ನು
    ಏಕೆಂದರೆ ಕನಸುಗಳಿಲ್ಲದ ಜೀವನ
    ರೆಕ್ಕೆ ಮುರಿದ ಹಕ್ಕಿಯಂತೆ
    ಮೇಲೆ ಹಾರಲಾರದದು!

    ಕನಸುಗಳನ್ನು ಗಟ್ಟಿಯಾಗಿ ತಬ್ಬಿಕೊಂಡು ಮುದ್ದಾಡು
    ಏಕೆಂದರೆ ಕನಸುಗಳೇ ಹೋದ ಮೇಲೆ
    ಜೀವನವೊಂದು ಬಂಜರು ಭೂಮಿ
    ಹೆಪ್ಪುಗಟ್ಟಿದ ಹಿಮದ ನೆಲದಂತೆ!

    ಇಂಗ್ಲೀಷ ಮೂಲ: ಲ್ಯಾಂಗ್‍ಸ್ಟನ್ ಹ್ಯೂಸ್
    ಕನ್ನಡಕ್ಕೆ: ಉದಯ ಇಟಗಿ
    ಚಿತ್ರ: http://www.flickr.com/ by Alison Lyons

    ಏಕೋ ಏನೋ ಅಲ್ಲಿ ಒಂದಷ್ಟು ಒಳದನಿಗಳು ಮಾರ್ದನಿಸಲೇ ಇಲ್ಲ!

  • ಭಾನುವಾರ, ಸೆಪ್ಟೆಂಬರ್ 13, 2009
  • ಬಿಸಿಲ ಹನಿ
  • ಇರುವದೆಲ್ಲವನ್ನು ಬಿಟ್ಟು ಸಾವಿರ ಸಾವಿರ ಮೈಲಿಗಳನ್ನು ದಾಟಿ ಸಾಗರದಾಚೆಯ ನನ್ನ ಕೆಲಸದ ಜಾಗಕ್ಕೆ ಮತ್ತೆ ಬಂದು ಕುಳಿತಿದ್ದೇನೆ. ಮನಸ್ಸು ಭಾರವಾಗಿದೆ. ಹೃದಯ ನಿಡುಸೊಯ್ಯುತ್ತದೆ. ನೆನಪುಗಳು ಮತ್ತೆ ಮತ್ತೆ ಭಾರತವನ್ನು ಮೆಲಕು ಹಾಕುವಂತೆ ಮಾಡುತ್ತವೆ. ಮನಸಿನೊಳಗೆ ಹುಟ್ಟುವ ಕಸಿವಿಸಿಗಳು ಕಣ್ಣಂಚಿನ ಹನಿಗಳಾಗಿ ಕೊನೆಗುಳ್ಳುತ್ತವೆ. ಏಕೋ ಏನೋ ಖಾಲಿ ಖಾಲಿಯಾದ ಹಾಗೆ ಅನಿಸುತ್ತದೆ. ನನ್ನ ಕೆಲಸ ಮತ್ತು ಅದರ ಹಿಂದಿರುವ ದೊಡ್ಡ ಮೊತ್ತದ ಸಂಬಳ ಮತ್ತೆ ನನ್ನ ಈ ಜಾಗಕ್ಕೆ ಎಳೆದು ತಂದು ನಿಲ್ಲಿಸಿವೆ. ಬದುಕು ಎಷ್ಟೊಂದು ವಿಚಿತ್ರ? ಎಲ್ಲಿಂದ ಎಲ್ಲಿಗೆ ಎಳೆದು ತಂದು ಬಿಡುತ್ತದೆಯಲ್ಲವೆ? ಎಳೆದ ಜಾಗಕ್ಕೆ ನೊಗ ಕಟ್ಟಿಕೊಂಡು ಹೋಗಲೇಬೇಕಾದ ತುರ್ತು ಮತ್ತು ಅನಿವಾರ್ಯತೆಗಳನ್ನು ಹರಡಿ ಮುಂದೇನು ಮಾಡುವೆ? ಎಂದು ಕೇಳಿ ಉತ್ತರಕ್ಕೂ ಕಾಯದೆ ಅಲ್ಲಿಗೆ ಹೋಗುವಂತೆ ದೂಡಿಬಿಡುತ್ತದೆ. ಈ ಕಾರಣಕ್ಕಾಗಿಯೇ ನಾನು ಸಹ ಇರುವದೆಲ್ಲವನ್ನು ಬಿಟ್ಟು ಇಲ್ಲದ್ದನ್ನು ಹುಡುಕಿಕೊಂಡು ಮತ್ತೆ ಇಷ್ಟು ದೂರ ಬಂದುಬಿಟ್ಟೆ. ನಿಜಕ್ಕೂ ಆ ಅನಿವಾರ್ಯತೆಯಿತ್ತೆ? ಎಂದು ಕೇಳಿಕೊಳ್ಳುವಾಗೆಲ್ಲಾ ದೊಡ್ಡ ಮೊತ್ತದ ಸಂಬಳದ ಮುಂದೆ ಬದುಕಿನ ಬೇರೆಲ್ಲ ವಿಷಯಗಳು ಗೌಣ ಎನಿಸಿಬಿಡುತ್ತವೆ. ಹಾಗೆ ಅನಿಸಬಾರದು ಆದರೆ ಅನಿಸಿಬಿಡುತ್ತದೆ. ಅದೇ ಬದುಕಿನ ಕಟುವಾಸ್ತವ ವಿಪರ್ಯಾಸ!

    ಮೊನ್ನೆಯಷ್ಟೆ ಇಲ್ಲಿಗೆ ಬಂದಿಳಿದಿದ್ದೇನೆ. ಆದರೂ ಮನಸ್ಸು ಮತ್ತೆ ಮತ್ತೆ ಭಾರತದ ಸುತ್ತ ಗಿರಕಿ ಹೊಡೆಯುತ್ತಲಿದೆ. ಆತ್ಮೀಯರನ್ನು, ಬಂಧು ಬಳಗದವರನ್ನು, ಜೀವದ ಗೆಳೆಯರನ್ನು, ಮಡದಿ, ಮಗಳನ್ನು ಬಿಟ್ಟು ಬಂದಿರುವಾಗ ಮತ್ತೆ ಮತ್ತೆ ಅವರದೇ ನೆನಪು ಕಾಡುತ್ತದೆ. ಅವರೊಟ್ಟಿಗೆ ಕಳೆದ ಕ್ಷಣಗಳನ್ನು ನೆನೆದು ಮನಸ್ಸು ಉಲ್ಲಾಸಿತವಾದಂತೆ ಬೇಡ ಬೇಡವೆಂದರೂ ಕೆಲವು ವಿಷಣ್ಣ ಸಂಗತಿಗಳು ಧಾಳಿಯಿಟ್ಟು ಮನಸ್ಸು ಮುದುಡುವಂತೆ ಮಾಡುತ್ತವೆ. ಆಗೆಲ್ಲಾ ಎಲ್ಲೋ ಓದಿದ ಒಂದು ಸಾಲು “ಬದುಕು ಸುಖವೂ ಅಲ್ಲ ದುಃಖವೂ ಅಲ್ಲ, ಅದು ಇವೆರಡರ ಮೊತ್ತ” ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತೇನೆ.

    ಬೆಂಗಳೂರಿಗೆ ಬಂದು ಇಳಿದ ಮೇಲೆ ವಿಮಾನ ನಿಲ್ದಾಣಕ್ಕೆ ಕಾರು ತೆಗೆದುಕೊಂಡು ಕರೆಯಲು ಬರುತ್ತೇನೆ ಎಂದು ಹೇಳಿದ ಜೀವದ ಗೆಳೆಯ ಮಂಜು ಬರದೇ ಹೋಗಿದ್ದು ಒಂದು ಕ್ಷಣ ಮನಸ್ಸಿಗೆ ಬೇಜಾರು ನೀಡಿತು. ಬಂದೇ ಬರುತ್ತಾನೆ ಎಂದು ನಿರೀಕ್ಷಿಸಿದ್ದೆ. ಆದರೆ ಬರಲಿಲ್ಲ. ನನ್ನ ನಿರೀಕ್ಷೆ ನೋವಾಗಿತ್ತು. ಅವನಿಗೆ ಬೆಂಗಳೂರಿನ ಬಿಜಿ ಬದುಕಲ್ಲಿ ಬಿಡುವು ಮಾಡಿಕೊಂಡು ಬರಲು ಪುರುಸೊತ್ತು ಸಿಕ್ಕಿರಲಿಕ್ಕಿಲ್ಲವೆಂದುಕೊಂಡು ನಾನೇ ಅಲ್ಲಿಂದ ಟ್ಯಾಕ್ಸಿಯೊಂದನ್ನು ಹಿಡಿದು ನೇರವಾಗಿ ನಮ್ಮ ಮನೆಗೆ ಬಂದೆವು. ಅಲ್ಲಿ ಸ್ವಾಗತಿಸುವವರು ಯಾರೂ ಇರದೆ ಇದ್ದುದರಿಂದ ಮುಚ್ಚಿದ ಬಾಗಿಲು ನಮ್ಮನ್ನು ನೋಡಿ ಅಣಕಿಸಿದಂತಾಯಿತು. ಬೀಗ ತೆಗೆದು ಸುಧಾರಿಸಿಕೊಳ್ಳುವಷ್ಟರಲ್ಲಿ ನನ್ನ ಬ್ಲಾಗ್ ಮಿತ್ರ ಶಿವು ಅವರ “Wel Come back to Bangalore” ಎನ್ನುವ ಸಂದೇಶವೊಂದು ನನ್ನ ಮೊಬೈಲಿಗೆ ಬಂದು ಬಿತ್ತು. ಅದನ್ನು ನೋಡಿ ಮುದಡಿದ್ದ ಮನಸ್ಸು ಮತ್ತೆ ಅರಳಿತು. ಅಲ್ಲಿಂದಾಚೆ ಬಂಧುಗಳು, ಸ್ನೇಹಿತರು, ಹಾಗೂ ಬ್ಲಾಗ್ ಮಿತ್ರರ ಕರೆಗಳು ಒಂದಾದ ಮೇಲೊಂದರಂತೆ ಬಂದ ನಂತರ ಪರ್ವಾಗಿಲ್ಲ ಆತ್ಮೀಯತೆ ಇನ್ನೂ ಹಾಗೆ ಉಳಿದುಕೊಂಡಿದೆ ಎನಿಸಿತು. ಅಂದೇ ಸಂಜೆ ಗೆಳೆಯ ಮಂಜು ಮನೆಗೆ ಬಂದು ಎಂದಿನಂತೆ ತನ್ನ ಬಿಗ್ ಸ್ಮೈಲ್‍ನೊಂದಿಗೆ ಒಂದು ವಾರ್ಮ್ ಹಗ್ ಕೊಟ್ಟಾಗ ಅವನ ಮೇಲಿನ ಕೋಪವೆಲ್ಲಾ ನೀರಾಗಿ ಕರಗಿತು.

    ಬಂದ ತಕ್ಷಣ ಬಹುಶಃ ಅದೇ ಸಂಜೆ ನನಗಿಷ್ಟವಾದ ಯಡಿಯೂರಿನ ಹೆರಿಗೆ ಆಸ್ಪತ್ರೆ ಮುಂದಿರುವ ಪಾನಿಪೂರಿ ತಿನ್ನಲು ಓಡಿದೆ. ಅಲ್ಲಿ ಸಾಲುಸಾಲಾಗಿದ್ದ ಬಜ್ಜಿ, ಇಡ್ಲಿ, ಪಾನಿಪೂರಿ ಅಂಗಡಿಗಳೆಲ್ಲ ಬೇರೆ ಬೇರೆ ಕಡೆ ಸ್ಥಳಾಂತರಗೊಡಿದ್ದವು. ಕೊನೆಗೂ ಹುಡುಕಿ ಪಾನಿಪೂರಿ, ಬಜ್ಜಿಗಳನ್ನು ತಿನ್ನುವಾಗ ಏಕೋ ಅವು ಅಷ್ಟಾಗಿ ರುಚಿಸಲಿಲ್ಲ. ಬಂದ ಮೂರು ದಿವಸಕ್ಕೆ ಊರಲ್ಲಿ ತಂಗಿಯ ಸೀಮಂತ ಕಾರಣವಿತ್ತು. ಅಲ್ಲಿಗೆ ಹೋದೆ. ಅಲ್ಲಿ ಅದ್ದೂರಿ ಸ್ವಾಗತವಿತ್ತು, ಆತಿಥ್ಯವಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ಆತ್ಮೀಯತೆಯಿತ್ತು. ಆ ಆತಿಥ್ಯ, ಆ ಆತ್ಮೀಯತೆ, ಆ ಕಾಳಜಿ ಬೆಂಗಳೂರಿನಲ್ಲಿ ಇಲ್ಲದ್ದು ನೋಡಿ ಬೇಸರವಾಗಿದ್ದಂತು ಸತ್ಯ. ಆದರೆ ಸಮಾರಂಭದ ಗಡಿಬಿಡಿಯಲ್ಲಿ ಎಲ್ಲರೊಂದಿಗೆ ಕುಳಿತು ಮಾತನಾಡಲು ಆಗಲಿಲ್ಲ. ನನಗೆ ಬದುಕಲು ಹೇಳಿಕೊಟ್ಟ ಹಾಗೂ ಆ ಬದುಕು ಒಂದು ಹಂತಕ್ಕೆ ಬಂದು ತಲುಪಲು ಹೆಣಗಾಡಿದ ಅಕ್ಕನೊಂದಿಗೆ ಕುಳಿತು ಮಾತನಾಡಲು ಆಗಲೇ ಇಲ್ಲ. ಆ ಗಿಲ್ಟ್ ಹೊತ್ತುಕೊಂಡೇ ಬೆಂಗಳೂರಿಗೆ ವಾಪಾಸಾದೆ. ನನ್ನ ಎತ್ತಿ ಆಡಿಸಿದ ಸೋದರ ಮಾವಂದಿರು, ಮನೆಯ ಆಳುಮಕ್ಕಳು ನನ್ನ ನೋಡಿ ಹುಬ್ಬೇರಿಸಿ ನನಗೆ ಒಂದು ತರದ ಮುಜುಗುರವನ್ನುಂಟು ಮಾಡಿದರು. ಇನ್ನು ಕೆಲವರು ಹಿಂದೆ ತೀರ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದವರು ಈಗ ನನ್ನೊಂದಿಗೆ ಮಾತನಾಡುವದಕ್ಕೆ ಸಹ ಸಂಕೋಚಪಟ್ಟುಕೊಂಡರು. ನಾನು ತುಂಬಾ ಬೆಳೆದು ಬಿಟ್ಟಿದ್ದೇನೆಂಬ ಕಾರಣಕ್ಕೆ ಕೆಲವರು ನನ್ನ ಮಾತನಾಡಿಸಲು ಹೆದರಿಕೊಂಡರು. ಇನ್ನು ಕೆಲವರಿಗೆ ಹಮ್ಮು ಬಿಮ್ಮುಗಳು! ನನ್ನ ಬದುಕು ಮೂರಾಬಟ್ಟೆಯಾಗಿ ಕೂತಿದ್ದಾಗ ಮಂಡ್ಯದಲ್ಲಿ ತಮ್ಮ ಮನೆಯಲ್ಲಿರಿಸಿಕೊಂಡು ಓದಿಸಿದ್ದ ಅತ್ತಿಗೆ, ಅಷ್ಟೊಂದು ಆತ್ಮೀಯವಾಗಿದ್ದ ಅತ್ತಿಗೆ ಸಮಾರಂಭಕ್ಕೆ ಬಂದಾಗ ಬರಿ ಒಂದೆರಡು ಮಾತುಗಳಲ್ಲಿ ಮಾತು ಮುಗಿಸಿದ್ದರು. ನಾನೇನು ಕಮ್ಮಿ? ಎನ್ನುವ ನನ್ನ ಅಹಂ ಕೂಡ ಅವರೊಂದಿಗೆ ಮಾತನಾಡದಂತೆ ತಡೆಹಿಡಿದುಬಿಟ್ಟಿತ್ತು. ನನಗೆ ಒಂದು ಸಂದಿಗ್ಧತೆ ಕಾಡುತ್ತದೆ. ನಾವು ಬೆಳೆಯುತ್ತಾ ಬೆಳೆಯುತ್ತಾ ಬದಲಾಗಿ ಬಿಡುತ್ತೇವೆಯಾ? ಅಥವಾ ನಮ್ಮ ಸುತ್ತಲಿನವರು ನಮ್ಮ ಬೆಳವಣಿಗೆಯನ್ನು ಕಂಡು ಅವರೇ ಬದಲಾಗಿ ಬಿಡುತ್ತಾರಾ? ಗೊತ್ತಿಲ್ಲ!

    ನಾನು ಈ ಸಾರಿ ಬರುವಾಗ ಬೆಂಗಳೂರಿನಲ್ಲಿ ಒಂದು ಸೈಟ್ ತೆಗೆಯಲೇಬೇಕು ಎಂದು ನಿರ್ಧರಿಸಿಕೊಂಡು ಬಂದಿದ್ದೆ. ಏಕೆಂದರೆ ನನಗೊಂದು ಸೈಟ್ ಇಲ್ಲ ಎನ್ನುವ ಕಾರಣಕ್ಕೇನೆ ಹತ್ತಿರದವರಿಂದ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಅವಮಾನಕ್ಕೊಳಗಾಗಿದ್ದೇನೆ, ಕೀಳಾಗಿ ಕಾಣಲ್ಪಟ್ಟಿದ್ದೇನೆ. ನಮಗೆ ಬರುವ ಸಂಬಳ ಅಲ್ಲಿಗಲ್ಲಿಗೆ ಸಾಕಾಗುತ್ತಿರುವ ವಿಷಯ ಗೊತ್ತಿದ್ದರೂ ಮದುವೆಯಾಗಿ ಆರು ತಿಂಗಳಿಗೇ ಕೆಲವರು ‘ಅಲ್ಲೊಂದು ಸೈಟ್ ಇದೆ ತಗೊಳ್ತಿರಾ?’ ಎಂದು ಕೇಳಿ ನನ್ನ ಆರ್ಥಿಕ ಪರಿಸ್ಥಿತಿಯನ್ನು ಅಣಕಿಸಿದ್ದಿದೆ. ನಾನು ಸಾಮಾನ್ಯವಾಗಿ ಹೊರಗಿನವರು ಯಾರಾದರು ಏನಾದರು ಅಂದರೆ ತಲೆಕೆಡಿಸಿಕೊಳ್ಳುವದಿಲ್ಲ. ಆದರೆ ತೀರ ಹತ್ತಿರದವರು ನಮ್ಮ ಮುಂದೆ ಚನ್ನಾಗಿ ಮಾತಾಡಿ (ಶೇಕ್ಷಪೀಯರನ ಖಳನಾಯಕ ‘ಇಯಾಗೋ’ ತರ) ಹಿಂದೆ ನಮ್ಮ ಬಗ್ಗೆಯೇ ಪಿತೂರಿ ನಡೆಸುವವರನ್ನು ಕಂಡರೆ ನನ್ನ ಪಿತ್ತ ನೆತ್ತಿಗೇರುತ್ತದೆ. ಅಂಥ ಕಿಡಿಗೇಡಿಗಳಿಗೆ ನಾನು ಏನು ಎಂದು ನಿರೂಪಿಸಬೇಕಿತ್ತು. ಹೀಗಾಗಿ ಬಂದ ಮಾರನೇ ದಿನದಿಂದಲೇ ಸೈಟಿನ ಬೇಟೆ ಆರಂಭಿಸಿದೆ. ಅಬ್ಬಾ! ಆಸ್ತಿ, ಅಂತಸ್ತುಗಳ ಮುಂದೆ ಒಬ್ಬ ವ್ಯಕ್ತಿಯ ಒಳ್ಳೆಯತನ, ಪ್ರತಿಭೆ, ಕೌಶಲ್ಯಗಳೆಲ್ಲವೂ ಗೌಣ ಎನಿಸಿಬಿಡುತ್ತವಲ್ಲವೇ? ಎಂದು ನನಗೆ ಮನದಟ್ಟಾಗಿದ್ದು ಆಗಲೇ! ಆ ನಿಟ್ಟಿನಲ್ಲಿ ಸೈಟೊಂದನ್ನು ತೆಗೆಯಲೇಬೇಕು ಎಂಬ ಹಟದೊಂದಿಗೆ ಎಲ್ಲ ಕಡೆ ಹುಡುಕಿ ಹೊರಟೆ. ದಿನಾ ಬೆಳಿಗ್ಗೆ ಒಂಬತ್ತು ಗಂಟೆಗೆ ಮನೆ ಬಿಟ್ಟರೆ ಮತ್ತೆ ವಾಪಾಸಾಗುತ್ತಿದ್ದುದು ರಾತ್ರಿ ಏಳಕ್ಕೋ, ಎಂಟಕ್ಕೋ! ಅಂತೂ ಕೊನೆಗೆ ಗೆಳೆಯ ಮಂಜುವಿನ ಸಹಾಯದಿಂದ ರಾಜ ರಾಜೇಶ್ವರಿ ನಗರದಲ್ಲಿ ಒಂದನ್ನು ತೆಗೆದುಬಿಟ್ಟೆ.

    ನಾನು ವೀಸಾವನ್ನು extend ಮಾಡಲು ಪ್ರಯತ್ನಿಸಿದೆ. ಸಾಧ್ಯವಾಗಲೇ ಇಲ್ಲ. ಆಗಿದ್ದರೆ ಇನ್ನೊಂದಿಷ್ಟು ದಿನ ಬೆಂಗಳೂರಿನಲ್ಲಿ ಸುಂದರ ಕ್ಷಣಗಳನ್ನು ಕಳೆಯಬಹುದಿತ್ತು. ಈ ನಡುವೆ ನನ್ನ ಕಾಲೇಜು ಗೆಳೆಯ ಶರತ್‍ನನ್ನು ಭೇಟಿ ಮಾಡಿ ಅವನ ಆರೋಗ್ಯದ ಬಗ್ಗೆ ವಿಚಾರಿಸಿದೆ. (ಅವನಿಗೆ ನಾಲ್ಕು ವರ್ಷಗಳ ಹಿಂದೆ kidney transplent ಆಗಿದೆ) ಈಗ ಪರ್ವಾಗಿಲ್ಲ ಮೊದಲಿಗಿಂತ ಲವಲವಿಕೆಯಿಂದ ಇದ್ದಾನೆ ಅನ್ನಿಸಿತು. ಇನ್ನೊಬ್ಬ ಕಾಲೇಜು ಗೆಳೆಯ ಮಂಡ್ಯದ ರಾಜೀವನನ್ನು ಭೇಟಿಯಾಗಲಾಗಲಿಲ್ಲ. ಕಾರಣ ಇಬ್ಬರಿಗೂ ಪುರುಸೊತ್ತು ಮಾಡಿಕೊಳ್ಳಲಾಗಲಿಲ್ಲ. ದೂರದ ಉಡುಪಿಯಿಂದ ಇನ್ನೊಬ್ಬ ಜೀವದ ಗೆಳೆಯ ರಾಘು ಬಂದಿದ್ದ. ನಾನು, ಮಂಜು ಮತ್ತು ಅವನು ಸೇರಿ ಹಳೆಯ ನೆನಪುಗಳ ಮೆರವಣಿಗೆಯಲ್ಲಿ ಮುಳುಗಿಹೋದೆವು. ಇಬ್ಬರೂ ಸೇರಿ ಮದುವೆಯನ್ನು ನಿರಾಕರಿಸುತ್ತಿರುವದರ ಬಗ್ಗೆ ಗೆಳೆಯ ಮಂಜುವಿನ ಮನಸ್ಸನ್ನು ಬದಲಾಯಿಸಲು ನೋಡಿದೆವು. ಆದರೆ ಬಹಳಷ್ಟು ಗಂಡ ಹೆಂಡತಿ ಸಂಬಂಧಗಳು ಹೊಂದಣಿಕೆಯಾಗದೆ ಬರಿ ಮುಸುಕಿನ ಗುದ್ದಾಟದಲ್ಲಿಯೇ ಮುಗಿದು ಹೋಗುವದರಿಂದ ಅವನು ಅದೇಕೋ ಮದುವೆಯಾಗಲು ಮನಸ್ಸೇ ಮಾಡಲಿಲ್ಲ! ನಾವೂ ಬಲವಂತ ಮಾಡಲುಹೋಗಲಿಲ್ಲ! ಈ ಮಧ್ಯ ಒಂದಿಷ್ಟು ಪುಸ್ತಕಗಳನ್ನು ಹಾಗು ನಾನು ನೋಡಿದ್ದ, ನೋಡಿರದ ಕೆಲವು ಪ್ರಶಸ್ತಿ ವಿಜೇತ ಚಿತ್ರಗಳ ಸೀಡಿಗಳನ್ನು ಕೊಂಡುಕೊಂಡು ಬಂದೆ.

    ಈ ಮಧ್ಯ ರಾಘು ನಾನು ದೂರದಿಂದ ಅಪರೂಪಕ್ಕೆ ಹೋಗಿದ್ದರಿಂದ ನನಗೆ ಬೇಜಾರಾಗದಿರಲೆಂದು ತನ್ನ ಒಂದಿಷ್ಟು ಕೆಲವು ಕಷ್ಟಗಳನ್ನು ನನ್ನೊಂದಿಗೆ ಹೇಳಿಕೊಳ್ಳಲು ಹಿಂಜರಿಯುತ್ತಿದ್ದ. ಎಂಥ ಸಂದರ್ಭದಲ್ಲೂ ಏನೆಲ್ಲವನ್ನು ಹಂಚಿಕೊಳ್ಳುತ್ತಿದ್ದ ರಾಘು ಇವನೇನಾ? ಎನಿಸಿಬಿಟ್ಟಿತು. “ಈ ಫಾರ್ಮಾಲಿಟಿಸ್ ಎಲ್ಲ ಬೇಡಪ್ಪಾ ಅದೇನು ಹೇಳು” ಎಂದು ನಾನೇ ಬಲವಂತ ಮಾಡಿ ಕೇಳಿದಾಗ ಎಲ್ಲವನ್ನು ಹೇಳಿಕೊಂಡ. ಮನಸ್ಸು ಒದ್ದೆಯಾಯಿತು. ರಿಸೆಶನ್ ನಿಂದ ಕೆಲಸ ಕಳೆದುಕೊಂಡ ಅವನ ಭಾವಂದಿರಿಗೆ ಈ ದೇಶದಲ್ಲಿ ಕೆಲಸ ಕೊಡಿಸಲು ಸಾಧ್ಯವಾ ನೋಡುತ್ತಿದ್ದೇನೆ. ನನ್ನ ಇನ್ನೋರ್ವ ಗೆಳೆಯ ಮಂಜು ಎಲ್ಲ ದಿನಗಳನ್ನೂ ನನ್ನೊಂದಿಗೆ ಕಳೆದು ನನಗೆ ಬೇಜಾರಾಗದಂತೆ ನೋಡಿಕೊಂಡ. ಬಹುಶಃ ಅವನ ಸಹಾಯವಿರದಿದ್ದರೆ ನಾನು ಸೈಟ್ ತೆಗೆಯುವದಕ್ಕೆ ಸಾಧ್ಯವಾಗುತ್ತಲೇ ಇರಲಿಲ್ಲ. ಇತ್ತೀಚಿಗೆ ಕೆಲಸದ ಒತ್ತಡದಿಂದ ಅವನ ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆಯಾದರೂ ಅವನ ಕಣ್ಣುಗಳಲ್ಲಿ ಹೊಸ ಹೊಸ ಕನಸುಗಳು ಪುಟಿಯುತ್ತಲೇ ಇದ್ದವು. ಅದೆಲ್ಲಿಂದ ಹುಡುಕುತ್ತಾನೋ ಮಾರಾಯಾ ಹೊಸ ಹೊಸ ಪ್ರಾಜೆಕ್ಟ್ ಗಳನ್ನು! ನನಗೂ ಒಂದೆರಡು ಪ್ರಾಜೆಕ್ಟ್ ಗಳ ಬಗ್ಗೆ ಹೇಳಿ ಇನ್ನೊಂದೆರಡು ವರ್ಷ ಇದ್ದು ಬಂದುಬಿಡು ಮಾರಾಯ. ಇಲ್ಲೇ ಏನಾದರು ಮಾಡೋಣ ಎಂದು ಹೇಳಿದಾಗ ನನ್ನ ಕಣ್ಣುಗಳು ತುಂಬಿ ಬಂದವು. ಅವನೇ ನನಗೆ ಹೊಸ ಹೊಸ ಕನಸುಗಳನ್ನು ಕಟ್ಟಿಕೊಟ್ಟು ಹೀಗ್ಹೀಗೆ ಮಾಡೋಣ ಎಂದು ಹೇಳಿದ. ನಾನು ಸರಿ ಎಂದು ಬಂದೆ. ಈ ಸಾರಿ ಮಾತ್ರ ನಾವಿಬ್ಬರೂ ನಾಟಕ, ಸಿನಿಮಾ ಎಂದು ಎಲ್ಲೂ ಸುತ್ತಾಡಲಾಗಲಿಲ್ಲ.

    ಇರುವ ಒಂದು ತಿಂಗಳ ರಜೆ ಬರಿ ಸೈಟ್ ಹುಡುಕುವದರಲ್ಲಿಯೇ ಮುಗಿದುಹೋಯಿತು. ಈ ಮಧ್ಯ ನನ್ನ ಬ್ಲಾಗ್ ಮಿತ್ರರನ್ನು ಒಂದೆಡೆ ಕಲೆಹಾಕಬೇಕು, ಅವರೊಂದಿಗೆ ಮನದಣಿಯೇ ಮಾತಾಡಬೇಕು ಎನ್ನುವ ಆಸೆ ಕೊನೆ ಘಳಿಗೆಯಲ್ಲಿ ಕೂಡಿಬಂತು. ನನಗೆ ಇರುವ ಅಲ್ಪ ಸಮಯದಲ್ಲಿ ಎಲ್ಲ ಮಿತ್ರರನ್ನು ಕರೆಯಲಾಗಲಿಲ್ಲ. ಕರೆದವರಲ್ಲಿ ಕೆಲವರು ಬಂದೂ ಇರಲಿಲ್ಲ. ಅಲ್ಲಿ ಸಾಹಿತ್ಯಿಕ ವಿಷಯದ ಬಗ್ಗೆ ಮಾತನಾಡಲಾಗಲೇ ಇಲ್ಲ. “ಸಂಪದ” ಸಂಪಾದಕ ಹರಿಪ್ರಸಾದ್ ಅವರು ಮುಂದೆ ಎಂದಾದರು ಊಟ, ತಿಂಡಿ ಅಂತೆಲ್ಲ ಇಟ್ಟುಕೊಳ್ಳದೆ ಬರಿ ಮಾತನಾಡಲೆಂದೇ ಸೇರೋಣವೆಂದರು. ನಾನು ಆಗಲಿ ಎಂದೆ. ಪ್ರಕಾಶ್ ಹೆಗಡೆಯವರು ಸದಾ ನಗು ನಗುತ್ತಾ ಎಲ್ಲರನ್ನು ನಗಿಸುತ್ತಾ ಬಾಳುವ ಇಂಟರೆಸ್ಟಿಂಗ್ ವ್ಯಕ್ತಿ ಅನಿಸಿತು. ಆ ದಿನ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಶಿವು ಮತ್ತು ಮಲ್ಲಿಕಾರ್ಜುನವರಿಂದ ಫೋಟೊ ತೆಗೆಸಿಕೊಂಡಿದ್ದು ಹೆಮ್ಮೆಯ ಮತ್ತು ಖುಶಿಯ ಸಂಗತಿಯಾಗಿತ್ತು. ಅವನ್ನೇ ಜಿ. ಮೋಹನ್ ಅವರು ಕನ್ನಡ ಬ್ಲಾಗರ್ಸ್ನಲ್ಲಿ ಹಾಕಿದ್ದರು. ಅದಕ್ಕೆ ಅವರಿಗೆ ನಾನು ಆಭಾರಿಯಾಗಿದ್ದೇನೆ. ಅವರನ್ನು ಭೇಟಿಯಾಗಲು ಸಾಧ್ಯವಾಗಲೇ ಇಲ್ಲ. ಎಲ್ಲ ಮುಗಿಸಿ ಹೊರಡುವಾಗ ನನ್ನೊಂದಿಗಿದ್ದಿದ್ದು ಅವರೊಂದಿಗೆ ಕಳೆದ ಅದ್ಬುತ ಕ್ಷಣಗಳ ನೆನಪುಗಳು ಮಾತ್ರ!

    ನಾನು ಹೊರಡುವ ದಿನ ಹತ್ತಿರ ಬಂದಂತೆ ರೇಖಾಳಿಗೂ, ಮಂಜುವಿಗೂ ಕಸಿವಿಸಿ ಶುರುವಾಯಿತು. ಮಗಳು ಭೂಮಿ ಮಾತ್ರ ಇದ್ಯಾವುದರ ಪರಿವೆಯಿಲ್ಲದೆ ಎಂದಿನಂತೆ ನಗುಮುಖ ಹೊತ್ತು ಓಡಾಡುತ್ತಿದ್ದಳು. ರೇಖಾಳಿಗೆ ಆಗಷ್ಟೆ ಸರಕಾರಿ ಕೆಲಸ ಸಿಕ್ಕಿದ್ದರಿಂದ ಅವಳು ಭವಿಷ್ಯದ ಸುರಕ್ಷತೆಯ ದೃಷ್ಟಿಯಿಂದ ಅದನ್ನು ಬಿಟ್ಟು ಬರಲು ಸಿದ್ಧಳಿರಲಿಲ್ಲ. ಅನಿವಾರ್ಯ ಕಾರಣಗಳಿಂದ ಹೆಂಡತಿ ಹಾಗು ಮಗಳನ್ನು ಬಿಟ್ಟು ಹೊರಡಬೇಕಾಯಿತು. ನನಗೆ ಹೇಗೂ ಸರಕಾರಿ ಕೆಲಸ ಇರುತ್ತೆ ಇದೊಂದು ವರ್ಷ ಇದ್ದು ಬಿಟ್ಟು ಬಾ ಎಂದು ಹೇಳಿದಳು. ಇದೇ ಮಾತನ್ನು ಅವಳ ಅಮ್ಮನ ಮನೆಕಡೆಯವರು ಯಾರಾದರು ಹೇಳುತ್ತಾರೇನೋ ಎಂದು ಕೊನೆ ಘಳಿಗೆಯವರೆಗೆ ಕಾಯ್ದೆ. ಊಹೂಂ, ಅವರು ಈ ವಿಷಯದ ಬಗ್ಗೆ ಚಕಾರವೆತ್ತಲಿಲ್ಲ. ಏಕೋ ಬೇಸರವಾಯಿತು. ನಾನು ಹೊರಡುವದಿನ ನನ್ನ ಅಕ್ಕನ ಮಗ ರಾಜು ಬೆಂಗಳೂರಿನಲ್ಲಿದ್ದುದರಿಂದ ಅವನು ನನ್ನ ನೋಡಲು ಬಂದ. ರಾಘು ಮತ್ತು ಮಂಜು ಬೆಳಿಗ್ಗೆಯಿಂದ ಜೊತೆಯಲ್ಲಿಯೇ ಇದ್ದರು. ಮಂಜುವಿಗೆ ಎರಡು ದಿನದಿಂದಲೇ ಜ್ವರವಿತ್ತು. ಆದರೆ ಅಂದು ಜಾಸ್ತಿಯಾಯಿತು. ಹಂದಿಜ್ವರದ ಭೀತಿ ಬೆಂಗಳೂರಿನಲ್ಲಿ ಹೆಚ್ಚಾಗಿದ್ದರಿಂದ ಅವನನ್ನು ಮೊದಲು ಆಸ್ಪತ್ರೆಗೆ ಹೋಗು ಎಂದು ಹೇಳಿದೆವು. ಅವರಣ್ಣ ಬಂದು ಕಾರಿನಲ್ಲಿ ಕರೆದುಕೊಂಡು ಹೋದರು. ಹೋಗುವಾಗ ಮುಖ ಬಾಡಿತ್ತು. ಅದು ಜ್ವರಕ್ಕಿಂತ ಹೆಚ್ಚಾಗಿ ನಾನು ಹೋಗುತ್ತಿದ್ದೇನೆ ಎಂಬ ಕಾರಣಕ್ಕೇ ಹೆಚ್ಚು ಬಾಡಿತ್ತು. ಸ್ವಲ್ಪ ಹೊತ್ತಿನ ನಂತರ ಮಂಜುವಿಗೆ ಫೋನ್ ಮಾಡಿ ವಿಚಾರಿಸಿದಾಗ ಬರಿ ವೈರಲ್ ಫಿವರ್ ಎಂದು ತಿಳಿದು ಮನಸ್ಸಿಗೆ ಎಷ್ಟೋ ಸಮಾಧಾನವಾಗಿತ್ತು. ನಂತರ ರಾಘು ಅಂದೇ ಬೆಂಗಳೂರಿನ ಇನ್ನೊಂದು ಮೂಲೆಯಲ್ಲಿರುವ ಅವರಕ್ಕನನ್ನು ಭೇಟಿ ಮಾಡಿ ತಾನು ಕೆಲಸ ಮಾಡುವ ಜಾಗ ಉಡುಪಿಗೆ ಹೋಗಬೇಕಾಗಿದ್ದರಿಂದ ಅತ್ಯಂತ ಬೇಜಾರಿನಿಂದಲೇ ಹೊರಟ. ಅವನ ನಂತರ ನಮ್ಮ ರಾಜಾನೂ ಹೊರಟ ಮೇಲೆ ಮನೆ ಮನಗಳೆಲ್ಲ ಖಾಲಿ ಖಾಲಿ ಎನಿಸಿ ಬರುವ ದುಃಖವನ್ನು ಹತ್ತಿಕ್ಕಿ ಹಿಡಿದೆ. ಆ ಬಳಿಕ ಮನೆ ತುಂಬಾ ಬರಿ ಮೌನವೇ ಆವರಿಸಿತ್ತು. ಹೀಗೆ ಕುಳಿತಿರುವಾಗ ರಾತ್ರಿ ಎಂಟು ಘಂಟೆಗೆ ಗೆಳೆಯ ಮಂಜು ಫೋನ್ ಮಾಡಿ ‘ಉದಯ ನೀನು ಹೋಗುತ್ತಿದ್ದೀಯ ಇನ್ನು ಬರುವದು ಒಂದು ವರ್ಷದ ನಂತರವೇ. ನಾನು ಒಂಟಿ ಎನಿಸುತ್ತಿದೆ. ನೀನು ಹೋರುಡುವ ದಿನವೇ ಪೇಶೆಂಟಾಗಿ ಮಲಗಿದ್ದೇನೆ. ಇಲ್ಲವಾದರೆ ನಾನೇ ನಿಮ್ಮನ್ನು ಏರ್ ಪೋರ್ಟಿಗೆ ಡ್ರಾಪ್ ಮಾಡುತ್ತಿದ್ದೆ’ ಎಂದು ಇದ್ದಕ್ಕಿದ್ದಂತೆ ಜೋರಾಗಿ ಅಳತೊಡಗಿದರು. ಅಲ್ಲಿಯವರೆಗೆ ತಡೆಹಿಡಿದಿದ್ದ ನನ್ನ ದುಃಖದ ಕಟ್ಟೆಯೊಡೆಯಿತು. ಎಂದೂ ಯಾವತ್ತೂ ಅಳದ ಮಂಜು ಅಂದು ಅತ್ತದ್ದು ಮಾತ್ರ ನನ್ನ ಮನಸ್ಸನ್ನು ಹಿಂಡಿಬಿಟ್ಟಿತು. ಮನಸ್ಸು ತಡೆಯಲಿಲ್ಲ. ರೇಖಾಳೂ “ನೀವು ಹೊರಡುವ ಸಮಯದಲ್ಲಿ ಅವರು ಜೊತೆಯಲ್ಲಿದ್ದರೆ ಇಬ್ಬರಿಗೂ ಸಮಾಧಾನ ಹೋಗಿ ಕರೆದುಕೊಂಡು ಬಿಡಿ” ಎಂದು ಹೇಳಿದಳು. ನಾನು ರಾತ್ರಿ ಒಂದು ಗಂಟೆಗೆ ಏರ್ ಪೋರ್ಟಿನಲ್ಲಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು. ಮನೆಯಿಂದ ಹೊರಡಲು ಇನ್ನೂ ಮೂರು ಗಂಟೆ ಬಾಕಿಯಿತ್ತು. ತಕ್ಷಣ ದೂರದ ರಾಜ ರಾಜೇಶ್ವರಿ ನಗರದಲ್ಲಿರುವ ಅವರ ಮನೆಗೆ ಹೋಗಿ ನೋಡಿಕೊಂಡು ಬರಬಹುದೆಂದು ಗಾಡಿ ತೆಗೆದುಕೊಂಡು ಹೊರಟೆ. ತುಂಬಾ ಮ್ಲಾನವದನರಾಗಿದ್ದರು. ನನ್ನ ನೋಡಿದವರೇ ಅಂಥ ಸ್ಥಿತಿಯಲ್ಲೂ ಮನೆಗೆ ಬರಲು ಒಪ್ಪಿದರು. ಕೊನೆಗೆ ಅವರ ಅಮ್ಮನ ಒಪ್ಪಿಗೆ ಪಡೆದು ಅವರಿಗೆ ಜರ್ಕಿನ್ ಹಾಗು ಮಫ್ಲರ್ ಹಾಕಿಸಿಕೊಂಡು ನನ್ನ ಎಲಿಚೇನಹಳ್ಳಿ ಮನೆಗೆ ಕರೆದುಕೊಂಡು ಬಂದೆ. ಬಂದ ನಂತರ ಇಬ್ಬರೂ ಮನಸ್ಪೂರ್ತಿ ಮಾತಾಡಿ ಮಲಗಿದೆವು. ಇಬ್ಬರಿಗೂ ಅದೆಂಥದೋ ಸಮಾಧಾನ. ರಾತ್ರಿ ಹನ್ನೆರಡು ಗಂಟೆಗೆ ಎದ್ದು ರೆಡಿಯಾಗಿ ಮಲಗಿರುವ ಮಗಳ ಚಿತ್ರವನ್ನು ಮನದ ತುಂಬಾ ಹೊತ್ತುಕೊಂಡು ರೇಖಾ ಮತ್ತು ಮಂಜುವಿಗೆ ವಿದಾಯ ಹೇಳಿ ಮಂಜುವಿನ ಅಣ್ಣನ ಕಾರಿನಲ್ಲಿ ಏರ್ ಪೋರ್ಟಿಗೆ ಹೊರಟೆ. ಹೋಗುವಾಗ ದಾರಿಯುದ್ದಕ್ಕೂ ಬೆಂಗಳೂರಿನ ತಂಗಾಳಿಯನ್ನು ಕೊನೆಯದೆಂಬಂತೆ ಒಮ್ಮೆ ಆಸ್ವಾದಿಸಿದೆ. ಇಮಿಗ್ರೇಶನ್ ಚೆಕ್ ಮುಗಿಸಿ ವೇಟಿಂಗ್ ಲಾಂಜಿನಲ್ಲಿ ಕುಳಿತಂತೆ ನೆನಪುಗಳು ಮತ್ತೆ ಮೆರವಣಿಗೆ ಹೊರಟವು. ಈ ನೆನಪುಗಳನ್ನೇ ಹೊತ್ತು ವಿಮಾನ ಹತ್ತಿದೆ. ವಿಮಾನ ಹಾರಾಟ ಆರಂಭಿಸಿ ಸ್ವಲ್ಪ ಹೊತ್ತಿಗೆ ಕನಸಿನ ನಿದ್ರೆ ಆವರಿಸಿಕೊಂಡಿತು. ಈ ನೆನಪುಗಳೆಲ್ಲಾ ಆ ಕನಸುಗಳಲ್ಲಿ ಕಳೆದುಹೋದವು.
    -ಉದಯ ಇಟಗಿ

    ಪ್ರೀತಿ Vs ಮದುವೆ

  • ಶನಿವಾರ, ಸೆಪ್ಟೆಂಬರ್ 05, 2009
  • ಬಿಸಿಲ ಹನಿ

  • ಆತ್ಮೀಯರೆ,
    “Love Vs Marriage” ಎನ್ನುವ ಇಂಗ್ಲೀಷ ಕವನವೊಂದು ಈಗ್ಗೆ ಸುಮಾರು ಏಳು ವರ್ಷಗಳ ಹಿಂದೆ “Deccan Herald” ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಕತ್ತರಿಸಿ ನನ್ನ ಸಂಗ್ರಹದಲ್ಲಿಟ್ಟುಕೊಂಡಿದ್ದೆ. ಆದರೆ ಅದರಲ್ಲಿ ಬರೆದವರ ಹೆಸರು ನಮೂದಿತವಾಗಿರಲಿಲ್ಲ. ಮೊನ್ನೆ ಹೀಗೆ ಏನನ್ನೋ ಹುಡುಕುವಾಗ ಆಕಸ್ಮಿಕವಾಗಿ ಕಣ್ಣಿಗೆ ಬಿತ್ತು. ಅದರ ಕನ್ನಡ ಅನುವಾದವನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನವೊಂದು ಇಲ್ಲಿದೆ. ಒಪ್ಪಿಸಿಕೊಳ್ಳಿ.

    ಪ್ರೀತಿ Vs ಮದುವೆ

    ಪ್ರೀತಿ ಎಂದರೆ ರಸ್ತೆಗಳೆಲ್ಲಿ ಒಬ್ಬರಿಗೊಬ್ಬರು ಲಲ್ಲೆಗೆರೆಯುತ್ತಾ ಕೈ ಕೈ ಹಿಡಿದು ನಡೆದಾಡುವದು
    ಮದುವೆ ಎಂದರೆ ಅದೇ ರಸ್ತೆಗಳಲ್ಲಿ ನಿಂತು ಒಬ್ಬರಿಗೊಬ್ಬರು ಕಿತ್ತಾಡುವದು

    ಪ್ರೀತಿ ಎಂದರೆ ಇಬ್ಬರೂ ಕೂಡಿ ತಮಗಿಷ್ಟವಾದ ಹೋಟೆಲ್ನರಲ್ಲಿ ತಮಗಿಷ್ಟ ಬಂದುದನ್ನು ಊಟ ಮಾಡುವದು
    ಮದುವೆ ಎಂದರೆ ಇಬ್ಬರೂ ತಮಗಿಷ್ಟವಾದುದನ್ನು ತಮಗಿಷ್ಟ ಬಂದ ಕಡೆ ತಿನ್ನುವದು

    ಪ್ರೀತಿ ಎಂದರೆ ಸೋಫಾದ ಮೇಲೆ ಒಬ್ಬರೊನ್ನೊಬ್ಬರು ಬೆಚ್ಚಗೆ ತಬ್ಬಿಕೊಂಡು ಲಲ್ಲೆಗರೆಯುವದು
    ಮದುವೆ ಎಂದರೆ ಅದೇ ಸೋಫಾದ ಮೇಲೆ ಕುಳಿತು ವ್ಯಾಜ್ಯಗಳನ್ನು ಇತ್ಯರ್ಥ ಮಾಡುವದು

    ಪ್ರೀತಿ ಎಂದರೆ ನಮ್ಮ ಮಕ್ಕಳು ಹೇಗಿರಬೇಕೆಂದು ಕನಸು ಕಾಣುವದು
    ಮದುವೆ ಎಂದರೆ ಅವರಿಂದ ದೂರ ಓಡಿಹೋಗುವದು ಹೇಗೆಂದು ಯೋಚಿಸುವದು

    ಪ್ರೀತಿ ಎಂದರೆ ಬೇಗ ಬೇಗನೆ ಶೃಂಗಾರ ಶಯ್ಯೆಗೆ ತೆರಳುವದು
    ಮದುವೆ ಎಂದರೆ ಮಲಗುವ ಕೋಣೆಗೆ ಓಡುವದು

    ಪ್ರೀತಿ ಎಂದರೆ ಪ್ರಣಯದ ಸುತ್ತಾಟ
    ಮದುವೆ ಎಂದರೆ ಜಲ್ಲಿ ಕಲ್ಲುಗಳ ಮೇಲಿನ ನಡೆದಾಟ

    ಪ್ರೀತಿ ಎಂದರೆ ಎಲ್ಲವೂ ಇಂಪು ತಂಪು ನಾದ ನಿನಾದ ಮಧುರ
    ಮದುವೆ ಎಂದರೆ ಬ್ಯಾಂಕುಗಳಲ್ಲಿನ ಝಣ ಝಣ ಕಾಂಚಾಣವೇ ಸುಮಧುರ

    ಪ್ರೀತಿ ಎಂದರೆ ಒಂದೇ ಪೇಯ ಎರಡು ನಳಿಕೆಗಳು
    ಮದುವೆ ಎಂದರೆ ಪೇಯ ಹೀರಿದ್ದು ಸಾಕಲ್ಲವೇ ಎಂಬ ಭಾವ

    ಪ್ರೀತಿ ಎಂದರೆ ಕುರುಡು
    ಮದುವೆ ಎಂದರೆ ಕಣ್ಣು ತೆರೆಸುವಾಟ


    ಮೂಲ ಇಂಗ್ಲೀಷ: ಅನಾಮೇಧಯ
    ಕನ್ನಡಕ್ಕೆ ಉದಯ ಇಟಗಿ
    ಚಿತ್ರ ಕೃಪೆ: www.flickr.com by Graceish

    ಗೆಳೆಯಾ ಬರುತೇನಿ ಮನದಾಗ ಇಡೋ ನೀನು!

  • ಸೋಮವಾರ, ಜುಲೈ 27, 2009
  • ಬಿಸಿಲ ಹನಿ
  • ಗೆಳೆಯಾ,
    ಈಗಷ್ಟೆ ಪಾಠ, ಪ್ರವಚನ, ಪರೀಕ್ಷೆ, ಮೌಲ್ಯಮಾಪನ ಅಂತೆಲ್ಲಾ ವರ್ಷಾಂತ್ಯದ ವೃತ್ತಿ ಬದುಕಿನ ಜಂಜಾಟಗಳನ್ನು ಮುಗಿಸಿ ಒಂದು ತಿಂಗಳ ಕಾಲ ನೆಮ್ಮದಿಯಾಗಿ ನಿಮ್ಮ ದೇಶದಲ್ಲಿದ್ದು ಬಾ ಎಂದು ಇಲ್ಲಿನ ನಮ್ಮ ವಿಶ್ವ ವಿದ್ಯಾನಿಲಯವು ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಂಬಳ ಸಮೇತ ನಮ್ಮನ್ನು ಸ್ವದೇಶಕ್ಕೆ ಕಳಿಸಿಕೊಡುತ್ತಿದೆ. ನಿಮಗೆ ತಿಳಿದಂತೆ ಈ ಬ್ಲಾಗ್ ಲೋಕ ನನಗೆ ನನ್ನದೇ ಆದಂತ ಸಾಹಿತ್ಯಿಕ ಹಾಗು ಸಾಂಸ್ಕೃತಿಕ ವಲಯವನ್ನು ನಿರ್ಮಿಸಿಕೊಟ್ಟಿದೆ. ಕಳೆದ ಸಾರಿ ಬಂದಾಗ ಹೆಂಡತಿ, ಮಗಳೊಂದಿಗೆ ಕಾಲ ಕಳೆದಿದ್ದಲ್ಲದೆ ನನ್ನ ಜೀವದ ಗೆಳೆಯ ಮಂಜುನನ್ನು ಕಟ್ಟಿಕೊಂಡು ಅಲ್ಲಿ ಇಲ್ಲಿ ಸುತ್ತಾಡಿದ್ದಾಯಿತು. ಆದರೆ ಈ ಸಾರಿ ನಾನಿರುವಷ್ಟು ಸಮಯವನ್ನು ನನ್ನ ಬ್ಲಾಗ್ ಗೆಳೆಯರೊಂದಿಗೆ, ಮೇ ಫ್ಲಾವರ್ ಮಿಡಿಯಾದವರೊಂದಿಗೆ ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿಮ್ಮೆಲ್ಲರ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಕಳೆಯಬೇಕೆಂದುಕೊಂಡಿರುವೆ. ನಾನು ಸಧ್ಯದಲ್ಲಿ ಅಂದರೆ ಇನ್ನೆರಡು ಮೂರು ದಿವಸದಲ್ಲಿ ಬೆಂಗಳೂರಿಗೆ ಬರುವವನಿದ್ದೇನೆ. ಬಂದ ಮೇಲೆ ನನ್ನ ಬ್ಲಾಗ್ ಗೆಳೆಯ/ಗೆಳತಿಯರನ್ನು ಭೇಟಿ ಆಗಬೇಕೆಂದಿರುವೆ. ಆದ್ದರಿಂದ ತಾವು ತಮ್ಮ ಫೋನ್ ನಂಬರ್ ಕೊಟ್ಟರೆ ಒಳಿತು. ಬಂದ ಮೇಲೆ ನಿಮ್ಮನ್ನು contact ಮಾಡೆತ್ತೇನೆ. ನಿಮಗೆಲ್ಲ ಸಮಯವಿದ್ದರೆ ಒಂದುಕಡೆ ಭೇಟಿಯಾಗಿ ಮನತುಂಬಿ ಮಾತಾಡೋಣ, ನಕ್ಕು ನಲಿಯೋಣ. ನಾನು ನಾಳೆ ಅಂದರೆ ಜುಲೈ 27 ರಂದು ಇಲ್ಲಿಂದ ಸಂಜೆ ಐದಕ್ಕೆ ಹೊರಟು ಬೆಳಿಗ್ಗೆ 1 ಗಂಟೆಗೆ ದುಬೈ ತಲುಪಿ ಅಲ್ಲಿಂದ ಬೆಳಿಗ್ಗೆ 3.30 ರ ಬೆಂಗಳೂರಿನ ಕನೆಕ್ಟಿಂಗ್ ಫ್ಲೈಟ್ ಹಿಡಿದು ಬೆಳಿಗ್ಗೆ 9 ಕ್ಕೆ ಬೆಂಗಳೂರನ್ನು ಜುಲೈ 28 ರಂದು ತಲುಪುವೆ. ಅಲ್ಲಿಂದಾಚೆ ನನ್ನ ಮೊಬೈಲ್ ನಂಬರ್ 98445 49386/87 ರಲ್ಲಿ ನಾನು ಸದಾ ಲಭ್ಯ. ಅದರಿಂದಾಚೆ ಬರಿ ಮಾತು! ಮಾತು! ಮಾತು! ನಡುನಡುವೆ ಒಂದಿಷ್ಟು ಹರಟೆ, ಖುಶಿ ಅಂತೆಲ್ಲಾ ಕಾಲ ಕಳೆಯುವದೇ ಕೆಲಸ. ಹೊರಡುವಾಗ ಒಂದಿಷ್ಟು ಹಸಿ ಹಸಿ ನೆನಪುಗಳನ್ನು ಹಾಗೂ ನಿಮ್ಮ ಭೇಟಿಯ ಕ್ಷಣಗಳನ್ನು ಮನದ ತುಂಬಾ ಹೊತ್ತು ಹೊರಡುತ್ತೇನೆ. ಆಗಬಹುದಲ್ಲವೆ?

    ಇದಲ್ಲದೆ ಇದೆ ಅವಧಿಯಲ್ಲಿ ತಂಗಿಯ ಸೀಮಂತ ಕಾರಣಕ್ಕೆ ಊರಿಗೆ ತೆರಳಬೇಕಾಗಿದೆ. ನನಗೆ ಬದುಕು ನೀಡಿದ ಬೆಂಗಳೂರನ್ನು ನೋಡಿ ಮನದಣಿಯಬೇಕಿದೆ. ಅದರಲ್ಲೂ ನನಗಿಷ್ಟವಾದ ಜಯನಗರ 4th ಬ್ಲಾಕ್‍ನ ಮೂಲೆ ಮೂಲೆ ಸುತ್ತಾಡಬೇಕಿದೆ. ಜೀವದ ಗೆಳೆಯ ಮಂಜುವಿನೊಂದಿಗೆ ಮನೆಗೆ ಹತ್ತಿರವಾದ ಯಡಿಯೂರು ಸರ್ಕ‌ಲ್‍ನಲ್ಲಿ ಸಿಗುವ ಮಿರ್ಚಿ, ಬೋಂಡಾ, ಪಾನಿಪೂರಿ, ಇಡ್ಲಿ ತಿನ್ನಬೇಕಿದೆ. ಸಾಧ್ಯವಾದರೆ ಸುರಿವ ಮಳೆಯ ಮಧ್ಯ ಗೆಳೆಯ ರಾಘು, ಮಂಜುವಿನೊಂದಿಗೆ ಹಿತಮಿತವಾಗಿ ಒಂದಿಷ್ಟು ಗುಂಡು ಹಾಕುತ್ತಾ ನಾವು ನಾವೇ ಕಾಲೆಳೆದುಕೊಳ್ಳಬೇಕಾಗಿದೆ, ರೇಗಿಸಿಕೊಳ್ಳಬೇಕಿದೆ. ಜೊತೆಗೆ ಮನದ ಮಾತುಗಳನ್ನು ಬಿಚ್ಚಿಡುತ್ತಾ ಬದುಕಲ್ಲಿ ಇನ್ನಷ್ಟು ಮುಂದೆ ಬರಲು ಏನು ಮಾಡಬಹುದು ಎಂಬುದನ್ನು ಯೋಚಿಸುತ್ತಾ ಸುಂದರ ಸಂಜೆಗಳನ್ನು ಕಳೆಯಬೇಕಿದೆ. ಮದುವೆಯೇ ಬೇಡ ಎನ್ನುತ್ತಿರುವ ಗೆಳೆಯ ಮಂಜುವಿನ ಮನಸ್ಸು ಬದಲಾಯಿಸಬೇಕಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಮೂರಾಬಟ್ಟಿಯಾದ ಕೆಲವರ ಬದುಕನ್ನು ಸರಿಪಡಿಸಬೇಕಾಗಿದೆ. ಬೆಂಗಳೂರಲ್ಲಿ ಸ್ವಂತಕ್ಕೆ ಮನೆ/ಸೈಟೊಂದನ್ನು ಖರೀದಿಸಬೇಕಿದೆ. ಕಾಲೇಜು ಗೆಳೆಯ ರಾಜೀವನ ಮಗಳನ್ನು ನೋಡಲು ಮಂಡ್ಯಕ್ಕೆ ಹೋಗಬೇಕಿದೆ. ಇನ್ನೋರ್ವ ಕಾಲೇಜು ಗೆಳೆಯ ಶರತ್‍ನನ್ನು ಭೇಟಿ ಮಾಡಿ ಅವನ ಸುಧಾರಿಸುತ್ತಿರುವ ಆರೋಗ್ಯದ ಬಗ್ಗೆ ವಿಚಾರಿಸಬೇಕಾಗಿದೆ. ಇಷ್ಟೆಲ್ಲವನ್ನು ಒಂದು ತಿಂಗಳ ಅವಧಿಯಲ್ಲಿ ಮಾಡುತ್ತೇನೆಯೇ? ಗೊತ್ತಿಲ್ಲ. ಹೀಗೆಲ್ಲಾ ಯೋಚಿಸುತ್ತಿರುವಂತೆಯೇ ರಾಬರ್ಟ್ ಫ್ರಾಸ್ಟನ ಸಾಲುಗಳು ನೆನಪಾಗುತ್ತವೆ.
    “The woods are lovely, dark, and deep,
    But I have promises to keep,
    And miles to go before I sleep,
    And miles to go before I sleep.”
    ಮನಸ್ಸು ಮತ್ತೆ ಕಾರ್ಯೋನ್ಮುಖವಾಗುತ್ತದೆ. ಇನ್ನು ಒಂದು ತಿಂಗಳು ನನ್ನ ಕೆಲಸದಲ್ಲಿ ಬಿಜಿಯಾಗಿರುವದರಿಂದ ನಿಮ್ಮ ಬ್ಲಾಗುಗಳಿಗೆ ಭೇಟಿ ನೀಡಿ ಪ್ರತಿಕ್ರಿಯಿಸುವದು ಆಗದೆ ಇರಬಹುದು. ಅದಕ್ಕಾಗಿ ತಮ್ಮ ಕ್ಷಮೆಯಿರಲಿ. ಹಾಗೆಯೇ “ಬಿಸಿಲ ಹನಿ”ಯು ಕೂಡ ಒಂದು ತಿಂಗಳು ಕಾಲ ವಿರಾಮ ತೆಗೆದುಕೊಳ್ಳುತ್ತಿದೆ. ಹೆಚ್ಚಿಗೆ ಏನೂ ಇಲ್ಲ. ಎಲ್ಲ ಅಲ್ಲಿ ಬಂದ ಮೇಲೆ.
    -ಉದಯ ಇಟಗಿ