Demo image Demo image Demo image Demo image Demo image Demo image Demo image Demo image

ಮನಸ್ಸು ಕೆಡಿಸುವ ಮತ್ಸ್ಯಗಂಧಿಯರು

  • ಶನಿವಾರ, ಜುಲೈ 20, 2013
  • ಬಿಸಿಲ ಹನಿ

  • ನೀವೇನೆ ಹೇಳಿ ನಮ್ಮ ಭಾರತೀಯ ಹೆಣ್ಣುಮಕ್ಕಳಷ್ಟು ಲಕ್ಷಣ ಬೇರೆ ಯಾವ ಹೆಣ್ಣುಮಕ್ಕಳು ಇಲ್ಲಾರಿ. ಹಾಗಂತಾ ಒಮ್ಮೆ ನನ್ನ ಸಹೋದ್ಯೋಗಿ ಇಲ್ಲಿನ ಹೆಣ್ಣುಮಕ್ಕಳನ್ನು ಕುರಿತು ಹೇಳಿದಾಗ ನನಗೂ ಹಾಗೆ ಅನಿಸಿತ್ತು ನಾನು ಜೋರ್ಡಾನಿಯನ್, ಮೊರೆಟ್ಯಾನಿಯನ್, ಸಿರಿಯನ್, ತುನಿಶಿಯನ್ ಹುಡುಗಿಯರನ್ನು ನೋಡುವವರೆಗೂ. ಆದರೆ ಇವರನ್ನು ನೋಡಿದ ಮೇಲೆ ನಮ್ಮ ಭಾರತೀಯ ಹೆಣ್ನುಮಕ್ಕಳಷ್ಟೇ ಚೆಂದವಾಗಿ ಇನ್ನೂ ಅನೇಕರಿದ್ದಾರೆ ಅನಿಸಿದ್ದು ಸುಳ್ಲಲ್ಲ. ಆದರೆ ಇಲ್ಲಿಯ ಹುಡುಗಿಯರು ನೋಡಲು ಅಷ್ಟಕ್ಕಷ್ಟೆ. ಅಂದರೆ ಅದರರ್ಥ ಇಡಿ ಲಿಬಿಯಾದ ಹುಡುಗಿಯರು ಎಂದಲ್ಲ. ನಾನು ಹೇಳಿದ್ದು ನಾನಿರುವ ದಕ್ಷಿಣ ಭಾಗದ ಹುಡುಗಿಯರ ಬಗ್ಗೆ ಮಾತ್ರ. ಏಕೆಂದರೆ ಈ ಭಾಗದ ಬಹುತೇಕ ಜನರು ಕಪ್ಪು. ಇಲ್ಲಿ ಹೆಚ್ಚಾನು ಹೆಚ್ಚು ಬ್ಲ್ಯಾಕ್ ರೇಸ್ ಇರುವದರಿಂದ ನೂರಕ್ಕೆ ತೊಂಬತೈದರಷ್ಟು ಜನ ಕಪ್ಪಾಗಿದ್ದಾರೆ. ಹಾಗಂತ ಕಪ್ಪಗಿರುವವರೆಲ್ಲಾ ಕುರೂಪಿಗಳೆಂದು ನಾನು ಹೇಳುತ್ತಿಲ್ಲ. ಆದರೆ ಅದೇಕೋ ‘ಈ ಕಪ್ಪು ಸುಂದರಿಯರು’ ಮಾತ್ರ ನಮ್ಮ ಸೌಂದರ್ಯದ ಪರಿಕಲ್ಪನೆಗಳಿಗೆ ಫಿಟ್ ಆಗುವದಿಲ್ಲ. ಆದರೆ ಉತ್ತರ ಮತ್ತು ಪೂರ್ವ ಭಾಗದಲ್ಲಿ ಅಂದರೆ ಟ್ರಿಪೋಲಿ, ಬೆಂಗಾಜಿ, ಮಿಸ್ರಟಾ, ಜಾವಿಯಾ, ಸಬ್ರತಾ, ಜ್ವಾರಾ, ಆಲ್ಕೂಮ್ಸ್ ಮುಂತಾದ ಊರುಗಳಲ್ಲಿನ ಹುಡುಗಿಯರೆಲ್ಲರೂ ಬಿಳಿಯರಾಗಿದ್ದು ನೋಡಲು ಆಕರ್ಷಕವಾಗಿ ಕಾಣುತ್ತಾರೆ. ಹುಡುಗಿಯರು ಮಾತ್ರವಲ್ಲ ಅಲ್ಲಿಯ ಹುಡುಗರು ಸಹ ಬಿಳಿಯರಾಗಿದ್ದು ನೋಡಲು ಅಷ್ಟೇ ಚನ್ನಾಗಿದ್ದಾರೆ. ಅಲ್ಲಿರುವದು ಬರೀ ವೈಟ್ ರೇಸ್! ಒಬ್ಬೇ ಒಬ್ಬ ಕಪ್ಪು ಮನುಷ್ಯನನ್ನು ನೋಡಲಾರರಿ. ಆದರೆ ಇಲ್ಲಿ ಬ್ಲ್ಯಾಕ್ ರೇಸ್ ಹೆಚ್ಚು. ಬಿಳಿಯರ ಸಂಖ್ಯೆ ತುಂಬಾ ವಿರಳ. ಕರಿಯರನ್ನು ಕಂಡರೆ ಬಿಳಿಯರಿಗೆ ಏನೋ ಒಂಥರಾ ತಾತ್ಸಾರ! ಅವಕಾಶ ಸಿಕ್ಕಾಗಲೆಲ್ಲಾ ಬಿಳಿಯರು ಕರಿಯರನ್ನು ಶೋಷಿಸುವದುಂಟು. ಅದಕ್ಕೊಂದು ಉದಾಹರಣೆ ಎಂದರೆ ಒಮ್ಮೆ ನಾವು ಸೆಭಾದಿಂದ ಟ್ರಿಪೊಲಿಗೆ ಬಸ್ಸ್‍ಲ್ಲಿ ಹೋಗುತ್ತಿರಬೇಕಾದರೆ ನಮ್ಮ ಜೊತೆ ಒಂದಿಬ್ಬರು ಕಪ್ಪು ಲಿಬಿಯನ್‍ರು ಪ್ರಯಾಣಿಸುತ್ತಿದ್ದರು. ಅಲ್ಲಿಯ ಚೆಕ್‍ಪೋಸ್ಟ್‍ಗಳಲ್ಲಿದ್ದ ಬಿಳಿ ಪೋಲಿಷ್‍ರು ಇವರನ್ನು ನೋಡಿ ಬೇಕಂತಲೇ ಅವರಿಗೆ ಆ ಪತ್ರ ಈ ಪತ್ರ ಎಂದೆಲ್ಲಾ ಕೇಳಿ ಅವರಿಗೆ ಕಿರುಕುಳ ನೀಡಿದ್ದನ್ನು ನಾನು ಗಮನಿಸಿದ್ದೆ. ಹೀಗಾಗಿ ಇವರಿಬ್ಬರ ಮಧ್ಯ ಆಗಾಗ್ಗೆ ಒಂದಲ್ಲಾ ಒಂದು ಕಾರಣಕ್ಕಾಗಿ ತಿಕ್ಕಾಟಗಳು ನಡೆಯುತ್ತಲೇ ಇರುತ್ತವೆ ಮತ್ತು ಅದು ಗಡಾಫಿ ಸತ್ತ ಮೇಲೆ ಇನ್ನೂ ಹೆಚ್ಚಾಗಿದೆ ಎಂದು ಹೇಳಬಹುದು.
    ನಾನಿರುವ ಸ್ಥಳ ಘಾಟ್‍ನಲ್ಲಿ ಅಷ್ಟಾಗಿ ಈ ಬೇಧ-ಭಾವ ಇಲ್ಲ. ಕಾರಣ ಇಲ್ಲಿ ಹೆಚ್ಚಾನು ಹೆಚ್ಚು ಕಪ್ಪು ಜನರೇ ಇರುವದು. ಆದರೆ ಇಲ್ಲಿಂದ 650 ಕಿ.ಮೀ. ದೂರದಲ್ಲಿರುವ ಸೆಭಾದಲ್ಲಿ ಅರ್ಧ ಬಿಳಿಯರು ಅರ್ಧ ಕರಿಯರು ಇರುವದರಿಂದ ಅಲ್ಲಿ ಆಗಾಗ ಏನಾದರೊಂದು ತಿಕ್ಕಾಟಗಳು ನಡೆದು ಅದು ದೊಡ್ದದೊಡ್ದ ಗಲಾಟೆಗಳಲ್ಲಿ ಕೊನೆಯಾಗುವದುಂಟು. ಆದರೆ ನನ್ನ ಆರು ವರ್ಷದ ಅವಧಿಯಲ್ಲಿ ಯಾವತ್ತೂ ಕರಿಯರು ತಮ್ಮ ಬಗ್ಗೆ ಕೀಳರಿಮೆಯನ್ನು ಬೆಳೆಸಿಕೊಂಡಿದ್ದನ್ನು ನಾನು ನೋಡಿಲ್ಲ. ಬದಲಾಗಿ ಅವರು ಕಪ್ಪಾಗಿರುವದಕ್ಕೆ ಹೆಮ್ಮೆ ಪಡುತ್ತಾರೆ. ಅಂದಹಾಗೆ ನಾವೆಲ್ಲಾ ದೂರದಲ್ಲಿ ಕುಳಿತುಕೊಂಡು ಆಫ್ರಿಕಾದವರೆಂದರೆ ಬರೀ ಕಪ್ಪು ವರ್ಣದವರು, ಕರಿಯರು ಎಂದುಕೊಳ್ಳುತ್ತೇವೆ. ನಾನು ಕೂಡಾ ಹಾಗೆ ಎಂದುಕೊಂಡು ಬಂದೆ. ಆದರೆ ಇಲ್ಲಿಗೆ ಬಂದ ಮೇಲೆ ಇಲ್ಲಿ ಅನೇಕ ಬಿಳಿಯರನ್ನು ನೋಡಿದ ಮೇಲೆ ನನ್ನ ನಂಬಿಕೆ ಹುಸಿಯಾಯಿತು. ಏಕೆಂದರೆ ಆಫ್ರಿಕಾದ ಕೆಲವು ದೇಶಗಳು ಅಂದರೆ  ಈಜಿಪ್ಟ್, ಜೋರ್ಡಾನ್, ಸಿರಿಯಾ, ತುನಿಶಿಯಾ, ಮಾಲಿ, ಮೊರೆಟ್ಯಾನ್. ಮೊರ್ಯಾಕೋ ಇನ್ನೂ ಮುಂತಾದ ದೇಶಗಳಲ್ಲಿ ನಿಮಗೆ ಬರೀ ಬಿಳಿಯರೇ ಕಾಣಿಸುತ್ತಾರೆ. ಅವರು ಹೆಚ್ಚುಕಮ್ಮಿ ಯೂರೋಪಿಯನ್ನರಂತೆ ಕಾಣುತ್ತಾರೆ.  ಆ ಕಾರಣಕ್ಕಾಗಿಯೇ ಅವರಿಗೆ ಅದೇನೋ ಒಂಥರಾ ಸುಪಿರಿಯಾರಿಟಿ ಕಾಂಪ್ಲೆಕ್ಸ್ ಇದ್ದು ಕರಿಯರನ್ನು ಅಸಡ್ಡೆಯಿಂದ ಕಾಣುತ್ತಾರೆ. ಅವರು ಕರಿಯರನ್ನು ಬಾಹ್ಯವಾಗಿ ಚನ್ನಾಗಿ ಮಾತನಾಡಿಸಿದರೂ ಅಂತರಂಗದಲ್ಲಿ ಯಾವತ್ತೂ ಪ್ರೀತಿಸಲಾರರು. ಈ ರೀತಿಯ ವರ್ಣ ಬೇಧ-ಭಾವ ಜಗತ್ತಿನ ಯಾವ ಭಾಗದಲ್ಲಿ ಇಲ್ಲ ಹೇಳಿ? ನಾವು ಏನೇ ಕಾನೂನು ರೂಪಿಸಿದ್ದರೂ ಶತಶತಮಾನಗಳಿಂದ ಬಂದ ಕರಿಯರೆಡೆಗಿನ ನಮ್ಮ ಅಸಡ್ಡೆ ಅಷ್ಟು ಸುಲಭವಾಗಿ ಹೋಗಲಾರದು ಎಂದು ಕಾಣುತ್ತದೆ.  
    ಅದೆಲ್ಲಾ ಇರಲಿ. ನಾನೀಗ ಹೇಳಹೊರಟಿದ್ದು ಇಲ್ಲಿನ ಮತ್ಶ್ಯಗಂಧಿಯರ ಬಗ್ಗೆ. ಮತ್ಸ್ಯಗಂಧಿಯರೆಂದರೆ ಮೊರೆಟ್ಯಾನಿಯನ್ ಚೆಲುವೆಯರ ಬಗ್ಗೆ. ಇವರು ಮೂಲತಃ ಮೊರ್ಯಾಟೋ ದೇಶದವರಾಗಿದ್ದು ಕೆಲಸವನ್ನು ಹುಡುಕಿಕೊಂಡೋ, ವ್ಯಾಪಾರದ ಉದ್ದೇಶದಿಂದಲೋ ಲಿಬಿಯಾಕ್ಕೆ ವಲಸೆ ಬರುತ್ತಾರೆ. ಹಾಗೆ ನೋಡಿದರೆ ಲಿಬಿಯಾ ಅರ್ಧಕ್ಕರ್ದ ಬರೀ ವಿದೇಶಿಯರಿಂದಲೇ ತುಂಬಿಹೋಗಿದೆ. ಏಕೆಂದರೆ ಇಲ್ಲಿಯವರು ವಿದೇಶಿಯರ ಮೇಲೆ ಎಷ್ಟು ಅವಲಂಬಿತರಾಗಿದ್ದಾರೆಂದರೆ ಅವರಿಲ್ಲದೆ ಯಾವ ಕೆಲಸವೂ ನಡೆಯುವದಿಲ್ಲ. ಇದಕ್ಕೆ ಕಾರಣವೂ ಇದೆ. ಗಡಾಫಿ ಇರಬೇಕಾದಾಗ ಇವರು ಕೇಳಿದಾಗಲೆಲ್ಲಾ ಸಾಲ, ಊಟ, ವಸತಿ, ಶಿಕ್ಷಣ, ನೀರು, ವಿದ್ಯುತ್, ಮುಂತಾದವಗಳನ್ನು ಪುಕ್ಕಟೆಯಾಗಿ ಕೊಡುತ್ತಿದ್ದರಿಂದ ಇಲ್ಲಿನವರಿಗೆ ಕಷ್ಟಪಟ್ಟು ದುಡಿಯಬೇಕು ಅನಿಸಲೇ ಇಲ್ಲ. ದುಡಿಯಲು ಗೊತ್ತಿಲ್ಲದ ಇವರು ಸಹಜವಾಗಿ ಇತರರ ಮೇಲೆ ಅವಲಂಬಿತರಾದರು. ಹಾಗೆಂದೇ ಇಲ್ಲಿ ಈಜಿಪ್ಸಿಯನ್ನರು (ಮಶರಾತಿಗಳು), ಫಿಲಿಫೈನ್‍ಗಳು, ಜೋರ್ಡಾನಿಗಳು, ಸುಡಾನಿಗಳು, ಇರಾಕಿಗಳು, ಪಾಕಿಸ್ತಾನಿಗಳು, ಪ್ಯಾಲೆಸ್ತಿಯನ್‍ರು, ಇಂಡಿಯನ್‍ರು, ಗನಾಗಳು (ಗನಾ ದೇಶದವರು), ಗಾಂಬಿಯನ್‍ರು (ಗಾಂಬಿಯಾ ದೇಶದವರು), ನೈಜರ್ಗಳು (ನೈಜರ್ ದೇಶದವರು), ನೈಜಿರಿಯನ್‍ರು (ನೈಜಿರಿಯಾದವರು) ಇದ್ದಾರೆ. ಅವರೆಲ್ಲಾ ಇಲ್ಲಿಗೆ ಕೆಲಸ ಹುಡುಕಿಕೊಂಡು ಬರುತ್ತಾರೆ. ಇವರಲ್ಲಿ ಇಂಡಿಯನ್‍ರು, ಜೋರ್ಡಾನಿಗಳು, ಸುಡಾನಿಗಳು, ಫಿಲಿಫೈನ್‍ಗಳು, ಇರಾಕಿಗಳು, ಹೆಚ್ಚು ಕಮ್ಮಿ ಉಪನ್ಯಾಸಕರಾಗಿಯೋ, ಡಾಕ್ಟರ್ ಆಗಿಯೋ, ಇಂಜಿನೀಯರ್ ಆಗಿಯೋ, ನರ್ಸ್‍ಗಳಾಗಿಯೋ ಕೆಲಸ ಮಾಡುತ್ತಾರೆ. ಈಜಿಪ್ಸಿಯನ್ನರು ಪಕ್ಕಾ ವ್ಯಾಪಾರಿಗಳಾಗಿದ್ದು ಇಲ್ಲಿನ ಮುಕ್ಕಾಲುಪಾಲು ಮಾರುಕಟ್ಟೆಯನ್ನು ಅವರೇ ಆಕ್ರಮಿಸಿಕೊಂಡಿದ್ದಾರೆ. ಪಾಕಿಸ್ತಾನಿಗಳು ಅಕ್ಕಸಾಲಿಗರಾಗಿಯೋ, ಇಲ್ಲವೇ ಫೋಟೋಗ್ರಾಫರ್ ಆಗಿಯೋ ಜೀವನ ನಡೆಸುತ್ತಾರೆ. ಇನ್ನು ಗನಾ, ಗಾಂಬಿಯಾ, ನೈಜರ್, ನೈಜೀರಿಯಾ ಮುಂತಾದ ಬಡ ರಾಷ್ಟ್ರಗಳಿಂದ ಬಂದವರು ಅತ್ಯಂತ ಕೆಳದರ್ಜೆಯ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇವರಲ್ಲಿ ಬಹುತೇಕರು ಸ್ವೀಪರ್ ಆಗಿಯೋ, ಪ್ಲಂಬರ್ ಆಗಿಯೋ, ಪೇಂಟರ್ ಆಗಿಯೋ, ಇಲ್ಲವೇ ಕಾಬ್ಲರ್ ಆಗಿಯೋ ಕೆಲಸ ಮಾಡುತ್ತಾರೆ. 

    ರಸ್ತೆ ಬದಿಯಲ್ಲಿ ತಮ್ಮ ಸಲಕರಣೆಗಳನ್ನಿಟ್ಟುಕೊಂಡು ಕೆಲಸಕ್ಕಾಗಿ ಕಾಯುತ್ತಿರುವ ನೈಜರ್, ನೈಜಿರಿಯಾ, ಗಾಂಬಿಯಾ, ಗನಾ ದೇಶದ ಯುವಕರು. 

    ಆದರೆ ಟ್ರಿಪೋಲಿ, ಬೆಂಗಾಜಿ, ಮಿಸ್ರಟಾ ಮುಂತಾದ ದೊಡ್ಡ ದೊಡ್ದ ನಗರಗಳಲ್ಲಿ ಕಷ್ಟಪಟ್ಟು ದುಡಿಯವ ಲಿಬಿಯನ್‍ರಿದ್ದಾರೆ. ಅಲ್ಲಿ ಜೀವನವೆಚ್ಚ ದುಬಾರಿಯಾಗಿರುವದರಿಂದ ಬಹುತೇಕರು ಎರೆಡೆರೆಡು ಕೆಲಸ ಮಾಡಿ ತಮ್ಮ ಜೀವನ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಾರೆ. ನಾನು ಟ್ರಿಪೋಲಿಯಲ್ಲಿ ಭೇಟಿ ಮಾಡಿದ ಅನೇಕ ಟ್ಯಾಕ್ಷಿ ಡ್ರೈವರ್ ಗಳು ಬೆಳಿಗ್ಗೆ ಲೆಕ್ಚರರ್ ಆಗಿಯೋ, ಟೀಚರ್ ಆಗಿಯೋ ಇಲ್ಲ ಲಾಯರ್ ಆಗಿಯೋ ಕೆಲಸ ಮಾಡುತ್ತಿದ್ದವರು. ಆ ನಿಟ್ಟಿನಲ್ಲಿ ಇಲ್ಲಿಯವರಿಗೆ ಉನ್ನತ ಹುದ್ದೆಯಲ್ಲಿದ್ದರೂ ಕೆಳದರ್ಜೆಯ ಕೆಲಸ ಮಾಡಲು ಯಾವುದೇ ಅಹಂ ಆಗಲಿ ಅಥವಾ Dignity of Labor  ಆಗಲಿ ಇಲ್ಲ.  
    ರಸ್ತೆಯನ್ನು ಸ್ವಚ್ಛಗೊಳಿಸುತ್ತಿರುವ ನೈಜರ್ ಯುವಕ.

    ಅಂದಹಾಗೆ ನಾನು ಮೊರೆಟ್ಯಾನಿಯನ್ ಚೆಲುವೆಯರ ಬಗ್ಗೆ ಹೇಳುತ್ತಿದ್ದೆ. ಬೇರೆ ವಿದೇಶಿಯರಂತೆ ಮೊರೆಟ್ಯಾನಿಯನ್ ಹೆಣ್ಣುಮಕ್ಕಳು ಸಹ ತಮ್ಮ ಸುಯೋಗ ಹುಡುಕಿಕೊಂಡು ಲಿಬಿಯಾಕ್ಕೆ ಬರುತ್ತಾರೆ. ಇಲ್ಲಿ ಚನ್ನಾಗಿ ದುಡಿದುಕೊಂಡು ಸ್ವಲ್ಪ ವರ್ಷಗಳ ನಂತರ  ಮತ್ತೆ ತಮ್ಮ ದೇಶಕ್ಕೆ ವಾಪಾಸಾಗುತ್ತಾರೆ. ಇನ್ನು ಕೆಲವರು ಇಲ್ಲಿಯೇ ಸೆಟಲ್ ಆಗುತ್ತಾರೆ. ಹೀಗೆ ಕೆಲಸ ಹುಡುಕಿಕೊಂಡು ಬಂದ ಇವರಲ್ಲಿ ಕೆಲವರು ಇಲ್ಲಿಯ ಹೋಟೆಲ್‍ಗಳಲ್ಲಿ ವೇಟರೆಸ್ ಆಗಿ ಕೆಲಸ ಮಾಡುತ್ತಾರೆ. ಇನ್ನು ಕೆಲವರು ಅಂದರೆ ಆರ್ಥಿಕವಾಗಿ ಸಬಲವಾಗಿರುವವರು ತಾವೇ ಒಂದು ಸ್ವಂತ ಹೋಟೆಲ್ ಆರಂಭಿಸುತ್ತಾರೆ. ಮೊದಮೊದಲು ಸಣ್ಣದಾಗಿ ಆರಂಭಿಸಿ ನಿಧಾನವಾಗಿ ದೊಡ್ಡಮಟ್ಟವನ್ನು ತಲುಪುತ್ತಾರೆ. ಮತ್ತೆ ಕೆಲವರು ಈಗಾಗಲೇ ಸ್ಥಳೀಯರ ಒಡೆತನದಲ್ಲಿರುವ ದೊಡ್ಡ ದೊಡ್ದ ಹೋಟೆಲ್‍ಗಳಲ್ಲಿ ಊಟ, ತಿಂಡಿ, ಚಹಾ, ಕಾಫಿಯ ಕಾಂಟ್ರ‍್ಯಾಕ್ಟನ್ನು ತೆಗೆದುಕೊಳ್ಳುತ್ತಾರೆ. ನಿಮಗೆ ಗೊತ್ತಿರಲಿ. ಈ ಮೊರೆಟ್ಯಾನಿಯನ್‍ರ ಹೋಟೆಲ್‍ಗಳಲ್ಲಿ ಹೆಚ್ಚು ಕಮ್ಮಿ ಅವರ ಹೆಣ್ಣುಮಕ್ಕಳೇ ತುಂಬಿರುತ್ತಾರೆ. ಅಂದರೆ ಹೋಟೆಲ್ ಮಾಲಿಕರಿಂದ ಹಿಡಿದು, ಅಡಿಗೆ ಮಾಡುವವರು, ಲಾಂಡ್ರಿಯವರು, ಕ್ಲೀನ್ ಮಾಡುವವರು, ವೇಟರ‍್‍ಗಳು ಎಲ್ಲವನ್ನೂ ಅವರೇ ಮಾಡುತ್ತಾರೆ. ವ್ಯಾಪಾರದ ದೃಷ್ಟಿಯಿಂದ ಗಂಡಸರನ್ನು ಆಕರ್ಷಿಸಲು ಇದು ಅವರಿಗೆ ತುಂಬಾ ಅನುಕೂಲಕರವಾಗಿದೆ. ನೋಡಲು ಹೆಚ್ಚುಕಮ್ಮಿ ಯೂರೋಪಿಯನ್ನರಂತಿದ್ದು ಮೈಕೈ ತುಂಬಿಕೊಂಡು ಆಕರ್ಷಕವಾಗಿ ಕಾಣುತ್ತಾರೆ. ಸದಾ ಸ್ವಚ್ಛ ಸ್ವಚ್ಛ! ಇವರು ಹತ್ತಿರ ಬಂದರೆ ಅದೆಂಥದೋ ಮೀನಿನ ವಾಸನೆ ಬರುವದರಿಂದ ನಾವು ಅವರನ್ನು ‘ಮತ್ಸ್ಯಗಂಧಿಯರು’ ಎಂದು ಕರೆಯುತ್ತೇವೆ. ಒಮ್ಮೆ ನನ್ನ ಲಿಬಿಯನ್ ಫ್ರೆಂಡ್ ಇವರನ್ನು ಕುರಿತು ಹೀಗೆ ಹೇಳಿದ್ದ “ಇವರು ವೇಟರ್ ಕೆಲಸದ ಜೊತೆಗೆ ಅವಕಾಶ ಸಿಕ್ಕರೆ ಮೈ ಮಾರಿಕೊಳ್ಳಲೂ ತಯಾರಿರುತ್ತಾರೆ. ಹಾಗೆಂದೇ ಇವರ ಹೋಟೆಲ್‍ಗಳು ಸದಾ ಗಂಡಸರಿಂದ ಕಿಕ್ಕಿರಿದು ತುಂಬಿರುತ್ತವೆ.  ಹಾಗಂತಾ ಅವರು ತಮ್ಮ ಹೋಟೆಲ್‍ನಲ್ಲಿ ಸೂಳೆಗಾರಿಕೆಯನ್ನು ನಡೆಸುತ್ತಾರೆ ಅಂತಾ ಅರ್ಥವಲ್ಲ. ಏಕೆಂದರೆ ಲಿಬಿಯಾದಲ್ಲಿ ಸೂಳೆಗಾರಿಕೆಗೆ ಅವಕಾಶವಿಲ್ಲ. ಅದು ಕಾನೂನು ಬಾಹಿರವಾಗಿದ್ದು ಸಿಕ್ಕಿಹಾಕಿಕೊಂಡರೆ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಆ ಕಾರಣಕ್ಕಾಗಿ ಅವರು ತಾವು ತಾವೇ ಈ ಕಾರ್ಯಕ್ಕೆ ಮುಂದಾಗುವದಿಲ್ಲ ಮತ್ತು ಹಾಗೆಲ್ಲಾ ಇವರು ಗಂಡಸರು ಕರೆದ ತಕ್ಷಣ ಬರುವವರಲ್ಲ! ಮೊದಲು ಗಂಡಸರು ಇವರ ಹೋಟೆಲ್‍ಗಳಿಗೆ ಮೇಲಿಂದ ಮೇಲೆ ಭೇಟಿ ಕೊಟ್ಟು ಅವರಿಗೆ ಹತ್ತಿರವಾಗಬೇಕು. ನಿಧಾನಕ್ಕೆ ಅವರನ್ನು ಆಕರ್ಷಿಸಬೇಕು. ಕಣ್ಣಲ್ಲೇ ಕಾಮ ಸಂದೇಶಗಳನ್ನು ಕಳಿಸಬೇಕು. ರೋಮ್ಯಾಂಟಿಕ್ ಆಗಿ ಮಾತನಾಡುತ್ತಾ ಹತ್ತಿರವಾಗಬೇಕು, ಒಂದೆರೆಡು ಫ್ಲರ್ಟ್ ಮಾಡಬೇಕು. ಸುಳ್ಳೇಸುಳ್ಳು ಒಂದು ಲವ್ ಹುಟ್ಟಿಸಬೇಕು. ವ್ಯವಹಾರ ಕುದುರಿಸಬೇಕು. ಆಮೇಲಿನಿದ್ದರೂ ಮುಂದಿನದೆಲ್ಲಾ; ಅದೂ ಅವರು ಆ ಗಂಡಸರನ್ನು ಇಷ್ಟಪಟ್ಟರೆ ಮಾತ್ರ. ನಂತರ ಕದ್ದು ಮುಚ್ಚಿ  ಅವರು ಸೂಚಿಸಿದ ಒಂದು ರಹಸ್ಯ ಸ್ಥಳಕ್ಕೆ ಹೋಗಿ ಮುಗಿಸಿಕೊಳ್ಳಬೇಕು. ಹಾಗೆಂದೇ ಅವರೊಟ್ಟಿಗೆ ವ್ಯವಹರಿಸುವಾಗ ತುಂಬಾ ಹುಶಾರಾಗಿರಬೇಕಾಗುತ್ತದೆ. ಹಾಗಂತಾ ಬರೀ ಇವರು ಮಾತ್ರ ಸೂಳೆಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅಂತಾ ಅಲ್ಲ. ಪಕ್ಕದ ನೈಜರ್, ನೈಜಿರಿಯಾ, ಗನಾ ಮುಂತಾದ ಬಡ ರಾಷ್ಟ್ರಗಳ ಹೆಣ್ಣುಮಕ್ಕಳು ತಮ್ಮ ಹೊಟ್ಟೆ ಹೊರೆದುಕೊಳ್ಳಲು ಇಲ್ಲಿಗೆ ಬಂದು ಸೂಳೆಗಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಸಹ ಹೇಳಿದ್ದ. ಗಡಾಫಿ ಇರಬೇಕಾದರೆ ಸೂಳೆಗಾರಿಕೆ ಅಷ್ಟಾಗಿ ನಡೆಯುತ್ತಿರಲಿಲ್ಲವೆಂದೂ ಈಗ ಧಾರಾಳವಾಗಿ ನಡೆಯುತ್ತಿದೆ ಎಂದು ಇಲ್ಲಿನವರು ಹೇಳುತ್ತಾರೆ. ಆದರೆ ಬಹಳಷ್ಟು ಲಿಬಿಯನ್‍ರು ಈ ಕಪ್ಪು ಸುಂದರಿಯರನ್ನು ಇಷ್ಟಪಡದೆ ಟ್ರಿಪೋಲಿಗೆ ಹತ್ತಿರವಿರುವ ತುನಿಸಿಯಾಕ್ಕೆ ಅಲ್ಲಿಯ ವೇಶ್ಯೆಯರನ್ನು ಅನುಭವಿಸಲು ಆಗಾಗ್ಗೆ ಹೋಗುತ್ತಿರುತ್ತಾರೆಂದು ಹೇಳುತ್ತಾರೆ.    
    ಅದೇನೆ ಇರಲಿ. ನಾನಾ ಕಾರಣಗಳಿಗಾಗಿ ತಮ್ಮ ಕುಟುಂಬಗಳನ್ನು ತಮ್ಮ ದೇಶದಲ್ಲಿಯೇ ಬಿಟ್ಟು ಇಲ್ಲಿ ನೆಲೆಸಿರುವ ಅನೇಕ ವಿದೇಶಿಯರು ಈ ಮೊರೆಟ್ಯಾನಿಯನ್ ಚೆಲುವೆಯರ ಬೆನ್ನು ಹತ್ತುವದುಂಟು. ಅವರನ್ನು ಪಡೆಯುವದು ಅಷ್ಟು ಸುಲಭವಲ್ಲವೆಂದು ಗೊತ್ತಾದ ಮೇಲೂ ಅವರ ಮೇಲೆ ಸುಖಾಸುಮ್ಮನೆ ಆಸೆಯನ್ನು ಬೆಳೆಸಿಕೊಳ್ಳುವದುಂಟು. ಎಷ್ಟೋ ಸಾರಿ ಈ ಗಂಡಸರು ತಮ್ಮ ಹತ್ತಿಟ್ಟ ಕಾಮನೆಗಳನ್ನು ಒಮ್ಮೆ ಹೊರಗೆಡವಿ ಸುಖದಸುಪ್ಪತಿಗೆಯಲ್ಲಿ ತೇಲೊಣ, ದೇಹದ ವಾಂಛೆಗಳನ್ನು ಒಮ್ಮೆ ತೀರಿಸಿಕೊಂಡುಬಿಡೋಣ ಎಂದುಕೊಂಡು ಹೋಗುತ್ತಾರೆ. ಆದರೆ ಅವರನ್ನು ಅಷ್ಟು ಸುಲಭವಾಗಿ ಆಕರ್ಷಿಸಲಾಗದೆ ಸೋತು ಬಂದ ದಾರಿಗೆ ಸುಂಖವಿಲ್ಲದೆ ಹಿಂದಿರುಗುತ್ತಾರೆ. ಮೇಲಾಗಿ ಅವರು ಇಲ್ಲಿಯ ರೀತಿರಿವಾಜುಗಳಿಗೆ ಹೆದರಿ ಸುಮ್ಮನಾಗಿಬಿಡುತ್ತಾರೆ. ಹಾಗೆಂದೇ ನಾನು ಈ ಮೊರೆಟ್ಯಾನಿಯನ್ ಚಲುವೆಯರನ್ನು ಬರೀ ಮನಸ್ಸನ್ನು ಕೆಡಿಸವ ಮತ್ಸ್ಯಗಂಧಿಯರೆಂದು ಮಾತ್ರ ಕರೆದಿದ್ದು!

    -ಉದಯ್ ಇಟಗಿ

    ಮಳೆಯಲ್ಲಿ ಸಿಕ್ಕ ಅವರಿಬ್ಬರು. .........

  • ಬಿಸಿಲ ಹನಿ

  • ಇದು ಬದೂನ್‍(ಬಿರುಗಾಳಿ)ಗಳ ಸಮಯ. ಅಂದರೆ ಇಲ್ಲೀಗ ಚಳಿಗಾಲ ಮುಗಿದು ಬೇಸಿಗೆ ಕಾಲಿಡುತ್ತಿದೆ ಅಂತಾ ಅರ್ಥ. ಚಳಿಗಾಲ ಮುಗಿದು ಬೇಸಿಗೆಕಾಲ ಕಾಲಿಡುವ ಸಂಕ್ರಮಣ ಕಾಲಘಟ್ಟದಲ್ಲಿಯೇ ಈ ಬಿರುಗಾಳಿಗಳು ಅದೆಲ್ಲಿರುತ್ತವೋ ಒಮ್ಮಿಂದೊಮ್ಮೆಲೆ ಧುತ್ತೆಂದು ಇಳಿದು ನಮ್ಮ ಪ್ರಾಣ ತೆಗೆಯುತ್ತವೆ. ಅವು ಒಮ್ಮೊಮ್ಮೆ ಎಷ್ಟೊಂದು ಭಯಂಕರವಾಗಿರುತ್ತವೆಂದರೆ ನಮ್ಮ ಪಕ್ಕದಲ್ಲಿಯೇ ಇರುವ ವ್ಯಕ್ತಿಯನ್ನು ನಮಗೆ ಕಾಣದಷ್ಟು ಧೂಳಿನ ಕಣಗಳಿಂದ ಮುಚ್ಚಿಹಾಕಿಬಿಡುತ್ತವೆ. ಜೊತೆಗೆ ನಮ್ಮ ಮೂಗಿನೊಳಕ್ಕೆ ಹೊಕ್ಕು ಉಸಿರಾಟಕ್ಕೂ ತೊಂದರೆಯುನ್ನುಂಟು ಮಾಡುತ್ತವೆ. ಆಗೆಲ್ಲಾ ನಾವು ಬೇಗಬೇಗನೆ ಮನೆಯೊಳಕ್ಕೆ ಸೇರಿಕೊಂಡು ಫ್ಯಾನು ಹಾಕಿಕೊಂಡು ಕುಳಿತುಬಿಡುತ್ತೇವೆ. ಹೊತ್ತು ಗೊತ್ತಿಲ್ಲದೆ ಬರುವ ಈ ಬದೂನ್‍ಗಳು ಮನೆ, ಮನುಷ್ಯರನ್ನೆಲ್ಲಾ ಧೂಳು ಧೂಳಾಗಿಸುತ್ತವೆ. ಒಂದೊಂದು ಸಾರಿ ಮನೆ ಮಾಳಿಗೆಯ ಮೇಲೆ ಸಿಕ್ಕಿಸಿದ ದೊಡ್ಡದೊಡ್ಡ ಟೀವಿ ಡಿಶ್‍ಗಳು ಸಹ ಗಾಳಿಯಲ್ಲಿ ಹಾರಿಕೊಂಡು ಎತ್ತೆತ್ತಲೋ ಹೋಗಿ ಬೀಳುವದುಂಟು. ಈ ಸಮಯದಲ್ಲಿಯೇ ವಿವಿಧ ಆಕಾರ, ಆಕೃತಿಗಳೊಂದಿಗೆ ಬಿದ್ದುಕೊಂಡಿರುವ ಸಹರಾ ಮರಳು ಗುಡ್ಡಗಳು ಗಾಳಿಯ ಹೊಡೆತಕ್ಕೆ ಸಿಕ್ಕಿ ಇನ್ನೆಲ್ಲೋ ಹೋಗಿ ಇನ್ಯಾವುದೋ ಆಕಾರ, ಆಕೃತಿಗಳನ್ನು ತಾಳಿ ನಿಲ್ಲುತ್ತವೆ. ನಾನಾಗ ಅಂದುಕೊಳ್ಳುತ್ತೇನೆ; ಈ ಮರಳು ಗುಡ್ಡಗಳು ಹಾಗೂ ಮನುಷ್ಯರ ನಡುವೆ ಅಂಥ ವ್ಯತ್ಯಾಸವೇನಿಲ್ಲ ಅಂತಾ. ಈ ಮರಳು ಗುಡ್ಡಗಳಂತೆ ಮನುಷ್ಯ ಕೂಡಾ ಬದುಕಿನ ಹೊಡೆತಗಳಿಗೆ ಸಿಕ್ಕಿ ತನ್ನ ಸ್ಥಾನ ಹಾಗೂ ಆಕಾರವನ್ನು ಬದಲಾಯಿಸಿ ಏನೇನೋ ಆಗಿ ನಿಲ್ಲುತ್ತಾನೆ.


    ಈ ಬಿರುಗಾಳಿಗಳ ಬೆನ್ನ ಹಿಂದೆಯೇ ಇಲ್ಲಿ ಮಳೆಗಾಲ ಶುರುವಾಗುತ್ತದೆ. ಮಳೆಗಾಲವೆಂದರೆ ನಮ್ಮಲ್ಲಿ ಧೋ ಧೋ ಎಂದು ಸುರಿದು ರಸ್ತೆಯ ಮೇಲೆಲ್ಲಾ ನೀರು ಹರಿದಾಡುತ್ತದಲ್ಲ? ಅಂಥ ಮಳೆಯಲ್ಲ. ಬರೀ ಐದು ನಿಮಿಷ ಪಟಪಟ ಅಂತಾ ಹನಿದು ನಿಲ್ಲುವ ಜೋರು ಮಳೆ ಇಲ್ಲವೇ ಒಂದೆರೆಡು ನಿಮಿಷ ಜುಮುರು ಜುಮುರಾಗಿ ಸುರಿದು ನಿಲ್ಲುವ ಸಣ್ಣ ಮಳೆ ಮಾತ್ರ. ಲಿಬಿಯಾದ ಈ ಭಾಗ (ದಕ್ಷಿಣ) ಬಹುತೇಕ ಮರಭೂಮಿಯಾಗಿದ್ದರಿಂದ ಇಲ್ಲಿ ಮಳೆ ಬೀಳುವದೇ ಅಪರೂಪ. ಆದರೆ ಲಿಬಿಯಾದ ಉತ್ತರ ಭಾಗದಲ್ಲಿ ಅಂದರೆ ಟ್ರಿಪೋಲಿ, ಬೆಂಗಾಜಿ, ಮಿಶ್ರಟಾ, ಸಬ್ರತಾ ಮುಂತಾದ ಊರುಗಳಲ್ಲಿ ಆಗಾಗ ಹೇಳಿಕೊಳ್ಳುವಷ್ಟಲ್ಲದಿದ್ದರೂ ತಕ್ಕಮಟ್ಟಿಗೆ ಮಳೆ ಬೀಳುವದುಂಟು. ಮೊನ್ನೆ ಇಲ್ಲೊಂದು (ಘಾಟ್‍ನಲ್ಲಿ) ಜೋರು ಮಳೆ ಬಿತ್ತು. ಜೋರು ಮಳೆಯೆಂದರೆ ಮಾಮೂಲಿಗಿಂತ ಸ್ವಲ್ಪ ದೊಡ್ದದಾಗಿಯೇ ಬಿದ್ದಿದ್ದರಿಂದ ನಮಗೆ ಅದೇ ಜೋರು ಮಳೆಯಾಗಿ ಕಾಣಿಸಿತು. ಏಕೆಂದರೆ ಇಲ್ಲಿ ಜೋರು ಮಳೆ ಬೀಳುವದೇ ಅಪರೂಪ! ಘಾಟ್‍ನ ನನ್ನ ಆರು ವರ್ಷದ ವಾಸದ ಅವಧಿಯಲ್ಲಿ ಈ ರೀತಿ ಜೋರಾಗಿ ಮಳೆ ಬಿದ್ದಿದ್ದು ಎರಡನೇ ಬಾರಿಯೋ, ಮೂರನೇ ಬಾರಿಯೋ? ಅಷ್ಟೆ. ಇಲ್ಲೇನಿದ್ದರೂ ಬರೀ ಜುಮುರು ಮಳೆ ಮಾತ್ರ! ಅದೂ ಕೇವಲ ಐದಾರು ನಿಮಿಷಗಳು! ಈ ಕಾರಣಕ್ಕಾಗಿಯೇನೋ ಇಲ್ಲಿನವರ ಮತ್ತು ಮಳೆಯ ನಡುವಿನ ನೆಂಟಸ್ತಿಕೆ ಅಷ್ಟಕ್ಕಷ್ಟೆ! ಅವರಿಗೆ ಮಳೆಯ ಮಧುರ ನೆನಪುಗಳಾಗಲಿ, ಅದರೊಂದಿಗೆ ಹುಟ್ಟುವ ಬೆಚ್ಚನೆಯ ಕನಸುಗಳಾಗಲಿ ಇಲ್ಲವೇ ಇಲ್ಲ ಎನ್ನಬಹುದು. ಆದರೆ ನಮಗೆ ಮಳೆಯೆಂದರೆ ಏನೆಲ್ಲಾ! ಮಳೆಯೆಂದರೆ ಜಡಗಟ್ಟಿದ ಮನಸ್ಸನ್ನು ಬಡಿದೆಬ್ಬಿಸುವ ಸಂಜೀವಿನಿ, ಮಳೆಯೆಂದರೆ ಮಧುರ ಪ್ರೀತಿಯ ನೆನಪನ್ನು ಮೆಲಕುಹಾಕುವ ಸಮಯ, ಮಳೆಯೆಂದರೆ ಸಂಗಾತಿಯ ಸನಿಹವ ಬಯಸುವ ಹೊಂಗನಸು, ಮಳೆಯೆಂದರೆ...........ಇನ್ನೂ ಏನೇನೋ! ಒಂದೇ, ಎರಡೇ ಅದರ ಆಲಾಪಗಳು? ನಾನು ಮಳೆ ಬಂದಾಗಲೆಲ್ಲಾ ಆ ಮಳೆಯನ್ನು ಮತ್ತು ಅದರೊಟ್ಟಿಗೇಳುವ ಮಣ್ಣಿನ ವಾಸನೆಯನ್ನು ಸವಿಯಲೆಂದೇ ಹೊರಗೆ ಬಂದು ನಿಲ್ಲುತ್ತೇನೆ. ನಿಂತಂತೆ ಮಳೆಯ ನೆನಪಿನ ಆಲಾಪಗಳು ಕಿವಿಯಲ್ಲಿ ಗುಂಯ್ಯಗುಡತೊಡಗುತ್ತವೆ. ಜುಮುರು ಮಳೆಗೆ ಒಂದು ಆಲಾಪವಾದರೆ ಬಿರುಸು ಮಳೆಗೆ ಹತ್ತು ಹಲವು! ಮೊನ್ನೆ ಕೂಡಾ ಹೀಗೆ ಮಳೆಯಲ್ಲಿ ನಿಂತು ಅದನ್ನು ಆಸ್ವಾದಿಸುವಾಗ ಫಕ್ಕನೆ ‘ಅವರಿಬ್ಬರು’ ನೆನಪಾದರು. ಅವರಿಬ್ಬರೆಂದರೆ ಇಂಥದೇ ಒಂದು ಬಿರುಸು ಮಳೆಯಲ್ಲಿ ಒಮ್ಮೆ ಟ್ರಿಪೋಲಿಯಲ್ಲಿ ನಾನು ಅಸಹಾಯಕನಾಗಿ ನಿಂತಾಗ ನನಗೆ ಸಹಾಯವನ್ನು ನೀಡಿದ, ತಮ್ಮ ಮಾನವೀಯತೆಯ ಮೂಲಕ ನನ್ನ ಮನಸ್ಸನ್ನು ತಾಕಿದ ಮನುಷ್ಯರು! ಅವರ ಬಗ್ಗೆ ನಿಮಗೂ ಹೇಳಲೇಬೇಕೆನಿಸಿ ಈ ಸಾರಿ ಅವರ ಬಗ್ಗೆ ಬರೆಯುತ್ತಿದ್ದೇನೆ.

    ಅದು 2010 ರ ಜೂನ್ ಕೊನೆವಾರ ಇರಬೇಕು. ಆ ವರ್ಷ ನನ್ನ ಹೆಂಡತಿ ಮತ್ತು ಮಗಳು ಎರಡನೆಯ ಬಾರಿಗೆ ಲಿಬಿಯಾಕ್ಕೆ ಬಂದಿಳಿದಿದ್ದರು. ಆ ವರ್ಷ ಅವರಿಗೆ ವೀಸಾ ತುಂಬಾ ತಡವಾಗಿ ಸಿಕ್ಕಿತ್ತು. ಜೊತೆಗೆ ಜೂನ್ ಕೊನೆವಾರ ಮುಗಿದು ಜುಲೈ 1 ಕ್ಕೆ ನನ್ನ ಹೆಂಡತಿಯ ಕಾಲೇಜು ಆರಂಭವಾಗುತ್ತಿದ್ದುದರಿಂದ ಆಕೆ ಆ ದಿನ ತಾನು ಖಡ್ಡಯವಾಗಿ ಅಲ್ಲಿರಲೇ ಬೇಕೆಂದು ಹೊರಟೇ ಬಿಟ್ಟಳು. ನನಗಿಲ್ಲಿ ರಜೆ ಆರಂಭವಾಗಲು ಇನ್ನೂ ಒಂದು ತಿಂಗಳ ಬಾಕಿಯಿದ್ದುದರಿಂದ ನಾನು ಅವರೊಟ್ಟಿಗೆ ಹೋಗುವ ಹಾಗಿರಲಿಲ್ಲ. ಹಾಗಾಗಿ ನಾನು ಅವರಿಬ್ಬರನ್ನೇ ಕಳಿಸಲು ನಿರ್ಧರಿಸಿದೆ. ಆ ಪ್ರಕಾರ ಅವರಿಬ್ಬರನ್ನು ಟ್ರಿಪೋಲಿಯವರಿಗೆ ಕರೆದುಕೊಂಡು ಹೋಗಿ ಅಲ್ಲಿಂದ ವಿಮಾನ ಹತ್ತಿಸಿ ಬಂದರಾಯಿತೆಂದುಕೊಂಡು ಹೊರಟೆ.

    ನಿಮಗೆ ಗೊತ್ತಿರಲಿ ಲಿಬಿಯಾದ ಯಾವುದೇ ಭಾಗದಲ್ಲಿ ನೀವು ಪ್ರಯಾಣಿಸಬೇಕಾದರೆ ನಿಮ್ಮ ಬಳಿ ಖಡ್ಡಾಯವಾಗಿ ಪಾಸ್ಪೋರ್ಟ್ ಹಾಗೂ ಹೆಲ್ತ್ ಕಾರ್ಡ್ (HIV ಮತ್ತು ಹೆಪಟೈಟಸ್ ಖಾಯಿಲೆಗಳನ್ನು ಪರೀಕ್ಷೆ ಮಾಡಿಸಿ ತೆಗೆದುಕೊಂಡ ಕಾರ್ಡು) ಇರಲೇ ಬೇಕು. ಈ ಕಾಯಿದೆ ನಮಗೆ ಮಾತ್ರವಲ್ಲ ಲಿಬಿಯನ್‍ರಿಗೂ ಸಹ ಅನ್ವಯಿಸುತ್ತದೆ. ಅವರು ಎಲ್ಲಿಗೆ ಹೋಗಬೇಕಾದರೂ ತಮ್ಮೊಂದಿಗೆ ‘ಪತಾಕಾ’ (ಐಡೆಂಟಿಟಿ ಕಾರ್ಡ್) ಮತ್ತು ಹೆಲ್ತ್ ಕಾರ್ಡನ್ನು ಒಯ್ಯಲೇಬೇಕು. ಒಂದು ವೇಳೆ ಒಯ್ಯದಿದ್ದರೆ ಭಾರಿ ಮೊತ್ತದ ದಂಡ ತೆರಬೇಕಾಗುತ್ತದೆ ಇಲ್ಲವೇ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ವಿದೇಶಿಯರಾದರೆ ಇನ್ನೂ ಹೆಚ್ಚಿನ ದಂಡ ಕೊಡಬೇಕಾಗುತ್ತದೆ ಮತ್ತು ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಏಕೆಂದರೆ ಇಲ್ಲಿ ಪ್ರತಿ ನೂರು ಕಿಲೋಮೀಟರಿಗೊಂದು ಚೆಕ್‍ಪೋಸ್ಟ್ ಇರುವದರಿಂದ ಅಲ್ಲಿ ಪ್ರಯಾಣಿಕರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸುತ್ತಾರೆ. ಇದಕ್ಕೆ ಕಾರಣವೂ ಇದೆ. ಘಾಟ್‍ನ ಸಹರಾ ಮರಭೂಮಿ ನೈಜರ್, ನೈಜಿರಿಯಾ, ಗನಾ, ಗಾಂಬಿಯಾ ಮುಂತಾದ ವಿದೇಶಿಯರಿಗೆ ಅನೇಕ ಕಳ್ಳದಾರಿಗಳನ್ನು ಕಲ್ಪಿಸಿಕೊಟ್ಟಿದೆ. ಅವರು ಈ ಕಳ್ಳದಾರಿಗಳ ಮೂಲಕ ಲಿಬಿಯಾದೊಳಕ್ಕೆ ನಡೆದುಕೊಂಡು ಬರುತ್ತಾರೆ. ಇಲ್ಲಿ ’ಅಕಾಮಾ’ (ರೆಸಿಡೆನ್ಸ್ ವೀಸಾ) ತೆಗೆದುಕೊಳ್ಳದೆ ತಮ್ಮ ಹೊಟ್ಟೆ ಹೊರೆದುಕೊಳ್ಳಲು ಎಂಥದೋ ಒಂದು ಕೆಲಸವನ್ನು ಹುಡುಕಿಕೊಂಡು ಅಕ್ರಮವಾಗಿ ಬದುಕತೊಡಗುತ್ತಾರೆ. ಮತ್ತೆ ಕೆಲವರು ಇಲ್ಲಿಂದ ಅದ್ಹೇಗೋ ಟ್ರಿಪೋಲಿಗೆ ಹೋಗಿ ಅಲ್ಲಿಂದ ತಮ್ಮ ಪಾಸ್ಪೋರ್ಟ್‍ವೊಂದರಿಂದಲೇ ಸಮುದ್ರ ಮಾರ್ಗವಾಗಿ ಇಟಲಿಗೋ, ರೋಮ್‍ಗೋ, ಫ್ರಾನ್ಸಿಗೋ ಕೆಲಸ ಹುಡುಕಿಕೊಂಡು ಹೋಗುತ್ತಾರೆ. ಹೀಗೆ ಅಕ್ರಮವಾಗಿ ಬದುಕುವ ಇಂಥವರಿಂದ ಸಮಾಜ ಘಾತುಕ ಕೆಲಸಗಳು ಜರಗುವ ಸಂಭವನೀಯತೆಯಿರುವದರಿಂದ ಇವರ ಮೇಲೆ ಸದಾ ಒಂದು ಹದ್ದಿನ ಕಣ್ಣಿಟ್ಟಿರುತ್ತಾರೆ ಹಾಗೂ ಇಂಥವರನ್ನು ಮಟ್ಟ ಹಾಕಲೆಂದೇ ಇಷ್ಟೆಲ್ಲಾ ನಿಯಮಗಳು ಜಾರಿಯಲ್ಲಿವೆ ಎಂದು ಇಲ್ಲಿನವರು ಹೇಳುತ್ತಾರೆ.

    ಲಿಬಿಯಾದ ದಕ್ಷಿಣ ಭಾಗದಲ್ಲಿ ನಮಗೆ ಅಂದರೆ ಭಾರತೀಯರಿಗೆ ಪಾಸ್ಪೋರ್ಟ್ ಇರದಿದ್ದರೂ ಪರ್ವಾಗಿಲ್ಲ ನಾವು ಕೆಲಸ ಮಾಡುವ ಸಂಸ್ಥೆಯಿಂದ ನೀಡಿದ ಐಡೆಂಟಿಟಿ ಕಾರ್ಡ್‍ವೊಂದನ್ನು ತೋರಿಸಿದರೆ ಸಾಕು ನಮಗೆ ಚೆಕ್ ಪೋಸ್ಟ್‍ಗಳಲ್ಲಿ ಮತ್ತು ಹೋಟೆಲ್‍ಗಳಲ್ಲಿ ಸುಲಭವಾಗಿ ಎಂಟ್ರಿ ಸಿಗುತ್ತೆ. ಚೆಕ್ ಪೋಸ್ಟ್‍ಗಳಲ್ಲಿ ಒಂದೊಂದು ಸಾರಿ ನಾವು ಭಾರತೀಯರೆಂದು ಗೊತ್ತಾದ ತಕ್ಷಣ ನಮ್ಮನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸುವ ಗೋಜಿಗೆ ಹೋಗುವದಿಲ್ಲ. ಭಾರತೀಯರ ಮೇಲೆ ಅವರಿಗೆ ಅಷ್ಟು ನಂಬಿಕೆ ಮತ್ತು ಗೌರವ! ಆದರೆ ಉತ್ತರ ಭಾಗದಲ್ಲಿ ಹಾಗಲ್ಲ. ಖಡ್ಡಯವಾಗಿ ನಾವು ಪಾಸ್ಪೋರ್ಟ್ ಮತ್ತು ಹೆಲ್ತ್ ಕಾರ್ಡ್‍ಗಳನ್ನು ಹೊಂದಿರಲೇಬೇಕಾಗುತ್ತದೆ. ಅಲ್ಲಿ ಸಹ ನಾವು ಭಾರತೀಯರೆಂದು ಗೊತ್ತಾದ ತಕ್ಷಣ ನಮ್ಮನ್ನು ಹೆಚ್ಚು ತಪಾಸಿಸದೆ ಬರೀ ಪಾಸ್ಪೋರ್ಟ್ ಮತ್ತು ಹೆಲ್ತ್ ಕಾರ್ಡುಗಳನ್ನು ನೋಡಿ ಬಿಟ್ಟು ಬಿಡುತ್ತಾರೆ.

    ಈ ಮೊದಲೇ ಹೇಳಿದಂತೆ ನಾನು, ನನ್ನ ಹೆಂಡತಿ ಮತ್ತು ಮಗಳನ್ನು ಇಂಡಿಯಾಕ್ಕೆ ಕಳಿಸಲು ಘಾಟ್‍ನಿಂದ ಟ್ರಿಪೋಲಿಗೆ ವಿಮಾನದಲ್ಲಿ ಹೊರಟುಬಂದೆ. ಘಾಟ್‍ನಿಂದ ಟ್ರಿಪೋಲಿಗೆ ವಿಮಾನ ಪ್ರಯಾಣ ಕೇವಲ ಒಂದೂವರೆ ಘಂಟೆ ಮತ್ತು ಹೆಚ್ಚಿನ ತಪಾಸಣೆಯನ್ನು ಎದುರಿಸುವ ಪ್ರಮೇಯ ಬೀಳುವದಿಲ್ಲ. ಆದರೆ ರಸ್ತೆ ಮಾರ್ಗದ ಪ್ರಯಾಣ ಸುಮಾರು ಹದಿನೆಂಟು ಘಂಟೆಗಳನ್ನು ತೆಗೆದುಕೊಳ್ಳುವದಲ್ಲದೆ ದಾರಿಯುದ್ದಕ್ಕೂ ಸಾಕಷ್ಟು ತಪಾಸಣೆಯನ್ನು ಎದುರಿಸಬೇಕಾಗುತ್ತದೆ. ಬರುವಾಗ ನಾನು ನನ್ನ ಪಾಸ್ಪೋರ್ಟ್ ತೆಗೆದುಕೊಂಡಿರಲಿಲ್ಲ. ಏಕೆಂದರೆ ಮುಂದಿನ ಇಪ್ಪತ್ತು ದಿನಗಳಲ್ಲಿ ಬೇಸಿಗೆ ರಜೆಯ ಮೇಲೆ ನಾವೆಲ್ಲಾ ಲೆಕ್ಚರರ್ಸ್ ನಮ್ಮ ನಮ್ಮ ದೇಶಗಳಿಗೆ ಹೋಗುತ್ತಿದ್ದುದರಿಂದ ನಮ್ಮ ಪಾಸ್ಪೋರ್ಟ್‍ಗಳನ್ನು ಎಕ್ಸಿಟ್ ಮತ್ತು ರೀಎಂಟ್ರಿ ವೀಸಾ ಮಾಡಿಸಲು ಯೂನಿವರ್ಷಿಟಿಯವರು ತೆಗೆದುಕೊಂಡಿದ್ದರು. ಹೀಗಾಗಿ ನಾನು ಪಾಸ್ಪೋರ್ಟ್ ಇಲ್ಲದೇ ಬರೀ ಐಡಿ ಕಾರ್ಡ್‍ನೊಂದಿಗೆ ಟ್ರಿಪೋಲಿಗೆ ಹೊರಟು ಬಂದೆ. ನಾನು ನಮ್ಮ ಕಾಲೇಜಿನಿಂದ ’ನನ್ನ ಪಾಸ್ಪೋರ್ಟ್‍ನ್ನು ಎಕ್ಸಿಟ್ ಮತ್ತು ರೀಎಂಟ್ರಿ ವೀಸಾ ಮಾಡಿಸಲು ಯೂನಿವರ್ಷಿಟಿಯವರು ತೆಗೆದುಕೊಂಡಿದ್ದರಿಂದ ಈ ಪತ್ರವನ್ನೇ ಪಾಸ್ಪೋರ್ಟ್ ಎಂದು ಪರಿಗಣಿಸಿ’ ಎಂದು ಒಂದು ಪತ್ರವನ್ನು ತೆಗೆದುಕೊಂಡಿದ್ದರೂ ಸಾಕಿತ್ತು. ಆದರೆ ನಾನು ಅದ್ಯಾವುದನ್ನು ಮಾಡದೆ ಬರೀ ಐಡಿ ಕಾರ್ಡಿನೊಂದಿಗೆ ಹೊರಟು ಬಂದಿದ್ದೆ. ಮೇಲಾಗಿ ನನ್ನ ಪಾಸ್ಪೋರ್ಟ್ ಇರದಿದ್ದರೇನಂತೆ? ಹೇಗೂ ನನ್ನ ಹೆಂಡತಿ ಮತ್ತು ಮಗಳ ಪಾಸ್ಪೋರ್ಟ್‍ನಲ್ಲಿ ನನ್ನ ಹೆಸರು ಇರುತ್ತದಲ್ಲ? ಅಷ್ಟು ಸಾಕು. ಜೊತೆಗೆ ನನ್ನ ಐಡಿ ಕಾರ್ಡು ಬೇರೆ ಇದೆ. ಇವನ್ನು ತೋರಿಸಿದರೆ ನಡೆಯುತ್ತೆ ಎಂಬ ಹುಂಭ ಧೈರ್ಯದಲ್ಲಿ ಟ್ರಿಪೋಲಿಗೆ ಸಾಯಂಕಾಲ ಆರು ಘಂಟೆಗೆ ಬಂದಿಳಿದೆ.
    ನನ್ನ ಹೆಂಡತಿ ಮತ್ತು ಮಗಳು ಹೋಗುವ ಫ್ಲೈಟ್ ಮಾರನೆಯ ದಿನ ಮಧ್ಯಾಹ್ನ ಮೂರು ಘಂಟೆಗ ಇದ್ದುದರಿಂದ ಆ ದಿನ ನಾವು ಟ್ರಿಪೋಲಿಯ ಹೋಟೆಲ್‍ವೊಂದರಲ್ಲಿ ಉಳಿದುಕೊಳ್ಳುವದು ಅನಿವಾರ್ಯವಾಗಿತ್ತು. ಇಲ್ಲಿಂದ ಎಂಬತ್ತು ಕಿಲೋಮೀಟರ್ ದೂರದಲ್ಲಿರುವ ಸಬ್ರತಾದಲ್ಲಿನ ನನ್ನ ಸ್ನೇಹಿತ ಸುರೆಂದ್ರನ ಮನೆಗೆ ಹೋಗಬಹುದಾಗಿತ್ತು. ಆದರೆ ಇಲ್ಲಿಂದ ಅಷ್ಟುದೂರ ಹೋಗುವದು ಮತ್ತೆ ಮಾರನೆಯ ದಿನ ತರಾತುರಿಯಲ್ಲಿ ಎದ್ದು ಬರುವದು ನಮಗೆ ಬೇಡವಾಗಿತ್ತು. ಹೀಗಾಗಿ ಹೋಟೆಲ್‍ನಲ್ಲಿ ಉಳಿದುಕೊಳ್ಳಲು ನಿರ್ಧರಿಸಿದೆವು. ನಾನವನಿಗೆ ಬೇಕಂತಲೇ ಕಾಲ್ ಕೂಡಾ ಮಾಡಲಿಲ್ಲ. ಮಾಡಿದ್ದಿದ್ದರೆ ಅವನು ತನ್ನ ಮನೆಗೇ ಬರಬೇಕೆಂದು ಒತ್ತಾಯಿಸುವದು ಮತ್ತು ನಾನು ಹೊರಟು ನಿಲ್ಲುವದು ಅನಿವಾರ್ಯವಾಗುತ್ತಿತ್ತು. ಇದ್ಯಾವುದು ಬೇಡವೆಂದೇ ನಾವು ಹೋಟೆಲ್‍ನಲ್ಲಿ ಉಳಿಯಲು ನಿರ್ಧರಿಸಿದೆವು. ಆ ಪ್ರಕಾರ ನಾನು ಮಾಮೂಲಾಗಿ ಉಳಿದುಕೊಳ್ಳುತ್ತಿದ್ದ ಹಾಗೂ ಟ್ರಿಪೋಲಿ ಹಡಗು ನಿಲ್ದಾಣದ ಪಕ್ಕದಲ್ಲಿದ್ದ ಹೋಟೆಲ್‍ಗೆ ಟ್ಯಾಕ್ಷಿಯಲ್ಲಿ ಬಂದಿಳಿದೆ. ಆದರೆ ನನ್ನ ಬಳಿ ಪಾಸ್ಪೋರ್ಟ್ ಇರದಿದ್ದ ಕಾರಣ ಹೋಟೆಲ್ ಮಾಲಿಕ ನಮಗೆ ರೂಮನ್ನು ಕೊಡಲು ನಿರಾಕರಿಸಿದ. ನಾನು ನನ್ನ ಐಡಿ ಕಾರ್ಡನ್ನು ತೋರಿಸಿದೆ. ನನ್ನ ಹೆಂಡತಿ ಮತ್ತು ಮಗಳ ಪಾಸ್ಪೋರ್ಟ್‍ನಲ್ಲಿ ನನ್ನ ಹೆಸರು ಇರುವದನ್ನು ತೋರಿಸಿದೆ. ಪರಿ ಪರಿಯಾಗಿ ಬೇಡಿಕೊಂಡೆ. ಬೇಕಾದರೆ ಒಂದಿಪ್ಪತ್ತು ದಿನಾರಗಳನ್ನು ಹೆಚ್ಚಿಗೆ ಕೊಡುತ್ತೇನೆಂದೆ. ನಮ್ಮ ಡೀನ್‍ಗೆ ಕಾಲ್ ಮಾಡಿ ಅವನ ಜೊತೆ ಮಾತಾಡಿ ಅವನಿಗೆ ರೂಮು ಕೊಡಲು ಹೇಳಿ ಎಂದು ಕೇಳಿಕೊಂಡೆ. ಊಹೂಂ, ಅವ ಯಾವುದಕ್ಕೂ ಜಗ್ಗಲಿಲ್ಲ. ಏನು ಮಾಡಿದರೂ ಕೊಡಲಿಲ್ಲ. “ಪಾಸ್ಪೋರ್ಟ್ ಖಡ್ಡಾಯವಾಗಿರಲೇಬೇಕು, ಇದು ಲಿಬಿಯಾದ ರೂಲು. ರೂಲ್ ವಿರುದ್ಧ ನಾವು ಹೊಗಲಾರೆವು. ಏನಾದರು ಹೆಚ್ಚು ಕಮ್ಮಿಯಾದರೆ ನಾವು ತಲೆಕೊಡಬೇಕಾಗುತ್ತದೆ. ಸಾರಿ. ಬೇರೆ ಕಡೆ ಟ್ರೈ ಮಾಡಿ. ಸಿಕ್ಕರೂ ಸಿಗಬಹುದು” ಎಂದು ಹೇಳಿದ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಮಳೆ ಹನಿಯತೊಡಗಿತು. ಸಣ್ಣಗೆ ಶುರುವಾದ ಮಳೆ ಕ್ರಮೇಣ ಜೋರಾಗಿ ಸುರಿಯತೊಡಗಿತು. ಸುಮಾರು ಅರ್ಧ ಘಂಟೆಯಾದರೂ ಮಳೆ ನಿಲ್ಲುವ ಲಕ್ಷಣಗಳೇ ಕಾಣಲಿಲ್ಲ. ನಾನು ಇದನ್ನೇ ನೆಪಮಾಡಿಕೊಂಡು “ಈ ಸುರಿವ ಮಳೆಯಲ್ಲಿ ನಾವು ಇನ್ಯಾವ ಹೋಟೆಲ್ ಹುಡುಕಿಕೊಂಡು ಹೋಗೋಣ. ದಯವಿಟ್ಟು ಇಲ್ಲಿಯೇ ಕೊಡಿ” ಎಂದು ಮತ್ತೊಮ್ಮೆ ಕೇಳಿದೆ. ಊಹೂಂ, ಅವ ಏನು ಮಾಡಿದರೂ ಕರಗಲಿಲ್ಲ. ನಾನು ಅಸಹಾಯಕನಾಗಿ ನಿಂತೆ. ನಮ್ಮ ಸಂದಿಗ್ಧ ಪರಿಸ್ಥಿತಿಯನ್ನು ನೋಡಿ ನನ್ನ ಹೆಂಡತಿ ಅಳತೊಡಗಿದಳು. ಆಗಲೂ ಆತ ಕರಗಲಿಲ್ಲ. ಅಷ್ಟರಲ್ಲಿ ಅದೇ ಹೊಟೆಲ್‍ನಲ್ಲಿ ಉಳಿದುಕೊಂಡಿದ್ದ ಮಧ್ಯ ವಯಸ್ಕ ಹೆಂಗಸೊಬ್ಬಳು ಹೊರಗಿನಿಂದ ಬಂದು ತನ್ನ ರೂಮು ಕೀ ಇಸಿದುಕೊಳ್ಳಲು Receptionist ಬಳಿ ನಡೆದು ಬಂದಳು. ಅಲ್ಲಿ ನನ್ನ ಹೆಂಡತಿ ಅಳುತ್ತಾ ನಿಂತಿರುವದನ್ನು ನೋಡಿ ಏನಾಯಿತೆಂದು Receptionistನನ್ನು ಅರೇಬಿಕ್‍ನಲ್ಲಿ ಕೇಳಿದಳು. ಆತ ಎಲ್ಲ ವಿವರಿಸಿಯಾದ ಮೇಲೆ ನಮ್ಮ ಕಡೆ ತಿರುಗಿ “Hello, Excuse me. How can I help you?” ಎಂದು ಕೇಳಿದಳು. ನಾನು ನಡೆದಿದ್ದೆಲ್ಲವನ್ನೂ ಹೇಳಿದೆ. ಆಕೆ ಕೂಡಾ ಅವನ ಮನವೊಲಿಸಲು ಪ್ರಯತ್ನಿಸಿದಳು. ಪ್ರಯೋಜನವಾಗಲಿಲ್ಲ. ಆಗ ನಾನು ಗೆಳೆಯ ಸುರೇಂದ್ರನ ಮನೆಗೆ ಹೋದರಾಯಿತೆಂದುಕೊಂಡು ಅವನಿಗೆ ಫೋನ್ ಮಾಡಿದೆ. ಆದರೆ ಅವ ಫೋನ್ ತೆಗೆಯಲಿಲ್ಲ. ಮತ್ತೆ ಮತ್ತೆ ಮಾಡಿದೆ. ಊಹೂಂ, ನನ್ನ ದುರಾದೃಷ್ಟಕ್ಕೆ ಅವ ಆ ಸಮಯದಲ್ಲಿ ಫೋನ್ ತೆಗೆಯಲಿಲ್ಲ. ನಾನು ಮತ್ತಷ್ಟು ವಿಚಲಿತನಾಗಿ ನಿಂತೆ. ಆಗ ಆ ಹೆಣ್ಣುಮಗಳು “Don’t worry. I’ll take you to some other hotels. Let’s try your luck. But they may be bit costlier than this hotel. Is that ok with you?” ಎಂದು ಕೇಳಿದಳು. ನಾನಾಗ “ದುಡ್ದು ಎಷ್ಟು ಖರ್ಚಾದರು ಪರ್ವಾಗಿಲ್ಲ. ಒಟ್ಟಿನಲ್ಲಿ ರೂಮೊಂದು ಸಿಕ್ಕರೆ ಸಾಕು” ಎಂದು ಹೇಳಿದೆ. ಈ ಮಧ್ಯ ಗೆಳೆಯ ಸುರೇಂದ್ರನಿಗೆ ಫೋನಾಯಿಸುತ್ತಲೇ ಇದ್ದೆ. ಆದರೆ ಅದೇಕೋ ಅವನು ತೆಗೆಯುತ್ತಿರಲೇ ಇಲ್ಲ. ಬೇರೆ ಹೋಟೆಲ್‍ಗೆ ಹೋದರಾಯಿತೆಂದುಕೊಂಡು ನಮ್ಮ ಲಗೇಜ್ ಎತ್ತಿಕೊಂಡು ರಸ್ತೆಗೆ ಬರುತ್ತಿದ್ದಂತೆ ಆಕೆಯೇ ಹೋಗಿ ಟ್ಯಾಕ್ಷಿ ತೆಗೆದುಕೊಂಡುಬಂದಳು. ಮಳೆ ಸುರಿಯುತ್ತಲೇ ಇತ್ತು. ಆ ಮಳೆಯಲ್ಲಿಯೇ ಹತ್ತಿರದಲ್ಲೇ ಇದ್ದ ಇನ್ನೊಂದು ಹೋಟೆಲ್‍ಗೆ ಹೋದೆವು. ಅಲ್ಲಿ ಆಕೆ “ನೀವು ಟ್ಯಾಕ್ಶಿಯಲ್ಲೇ ಕೂತಿರಿ. ನಾನು ಡ್ರೈವರ‍್ನೊಂದಿಗೆ ಹೋಗಿ ವಿಚಾರಿಸಿಕೊಂಡು ಬರುತ್ತೇನೆ.” ಎಂದು ನಮ್ಮನ್ನು ಕೆಳಗೆ ಇಳಿಯಲು ಬಿಡದೇ ಆಕೆಯೇ ಹೋಗಿ ವಿಚಾರಿಕೊಂಡು ಬಂದಳು. ಅಲ್ಲೂ ಅವರು ಪಾಸ್ಪೋರ್ಟ್ ಇಲ್ಲದವರಿಗೆ ರೂಮು ಕೊಡುವದಿಲ್ಲ ಎಂದು ಹೇಳಿದರು. ನನಗೆ ಆತಂಕ ಹೆಚ್ಚಾಯಿತು. ನಾನು ಮತ್ತೆ ಗೆಳೆಯನಿಗೆ ಫೋನಾಯಿಸಿದೆ. ಪುಣ್ಯಾತ್ಮ ತೆಗೆಯಲೇ ಇಲ್ಲ. “ಇನ್ನೂ ಒಂದಿಷ್ಟು ಹೊಟೆಲ್‍ಗಳಲ್ಲಿ ಕೇಳೋಣ ಇರಿ. ಸಿಕ್ಕರೂ ಸಿಗಬಹುದು.” ಎಂದು ನಮಗೆ ಧೈರ್ಯ ತುಂಬುತ್ತಲೇ ಇನ್ನೊಂದಿಷ್ಟು ಹೋಟೆಲ್‍ಗಳಿಗೆ ಕರೆದುಕೊಂಡು ಹೋದಳು. ಎಲ್ಲ ಕಡೆ ಒಂದೇ ಉತ್ತರ ಬಂತು; ಪಾಸ್ಪೋರ್ಟ್ ಇಲ್ಲದವಿರಿಗೆ ರೂಮು ಕೊಡುವದಿಲ್ಲ ಎಂದು. ನಾನು ಅಕ್ಷರಶಃ ಅಸಹಾಯಕನಾಗಿ ನಿಂತೆ. ನನ್ನ ಆತಂಕ ಇಮ್ಮುಡಿಯಾಯಿತು. ನನ್ನ ಹೆಂಡತಿ ಮತ್ತೆ ಅಳತೊಡಗಿದಳು. ಈ ದೇಶದಲ್ಲಿ ಯಾಕಿಂಥ ಸ್ಟ್ರಿಕ್ಟ್ ರೂಲ್ಸು? ಇದೆಂಥಾ ನಿಯಮಗಳು? ಎಂದು ಶಾಪ ಬೇರೆ ಹಾಕಿದಳು. ಆದರೆ ನಾವು ಆ ನಿಯಮಗಳಿಗೆ ತಲೆಬಾಗದೆ ವಿಧಿಯಿರಲಿಲ್ಲ. ನನ್ನ ಹೆಂಡತಿ ಒಂದೇ ಸಮನೆ ಅಳುವದನ್ನು ನೋಡಿ ಆಕೆ “ದಯವಿಟ್ಟು ಅಳಬೇಡಿ. ನಿಮಗೆ ಎಲ್ಲಾದರೂ ಒಂದು ಕಡೆ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸುತ್ತೇನೆ. ನಾನು ಬೆಂಗಾಜಿಯವಳು. ನಾನು ಕೆಲಸದ ಮೇಲೆ ಟ್ರಿಪೋಲಿಗೆ ಬಂದು ಈ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದೇನೆ. ನನಗೆ ಇಲ್ಲಿ ಯಾರೂ ಫ್ರೆಂಡ್ಸ್ ಆಗಲಿ, ರಿಲೆಟಿವ್ಸ್ ಆಗಲಿ ಇಲ್ಲ. ಇದ್ದಿದ್ದರೆ ನಿಮ್ಮನ್ನು ಅಲ್ಲಿಗೆ ಕಳಿಸಿಕೊಡುತ್ತಿದ್ದೆ. ಆದರೂ ಏನೋ ಒಂದು ವ್ಯವಸ್ಥೆ ಮಾಡುತ್ತೇನೆ. Be positive.” ಎಂದು ನಮಗೆ ಸಮಾಧಾನ ಹೇಳುತ್ತಾ ನಮ್ಮ ಟ್ಯಾಕ್ಷಿ ಡ್ರೈವರ‍್ನೊಂದಿಗೆ ಅದೇನೇನೋ ಅರೇಬಿಕ್‍ನಲ್ಲಿ ಮಾತಾಡಿ ಮತ್ತೆ ನಮ್ಮ ಕಡೆ ತಿರುಗಿ “ಈ ಟ್ಯಾಕ್ಷಿ ಡ್ರೈವರ್ ಮನೆಯಲ್ಲಿ ಉಳಿದುಕೊಳ್ತಿರಾ? ಅವನೂ ಒಪ್ಪಿದ್ದಾನೆ. ನಿಮಗೆ ಇದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ.” ಎಂದು ಹೇಳಿದಳು. ಆಗ ಟ್ಯಾಕ್ಷಿ ಡ್ರೈವರ್ “ನಮ್ಮ ಮನೆಗೆ ಬನ್ನಿ. ಅಲ್ಲಿ ಎರಡು ರೂಮುಗಳಿವೆ. ಒಂದು ರೂಮಿನಲ್ಲಿ ನೀವಿರಿ. ಬೆಳಿಗ್ಗೆ ನಾನೇ ನಿಮ್ಮನ್ನು ಏರ್ಪೋರ್ಟ್‍ಗೆ ಡ್ರಾಪ್ ಮಾಡುತ್ತೇನೆ. ನನ್ನ ಹೆಂಡತಿಗೂ ಹೇಳುತ್ತೆನೆ. ಆಕೆ ಖಂಡಿತ ಒಪ್ಪುತ್ತಾಳೆ. ನೀವೇನು ಆತಂಕ ಪಡಬೇಕಾಗಿಲ್ಲ.” ಎಂದು ಹೇಳುತ್ತಿದ್ದಂತೆ ಅವನ ಹೃದಯ ವೈಶಾಲ್ಯಕ್ಕೆ ನಮ್ಮಿಬ್ಬರ ಕಣ್ಣುಗಳು ಒದ್ದೆಯಾದವು. ಯಾರೆಂದು ಸರಿಯಾಗಿ ಗೊತ್ತಿರದ ನಮ್ಮಂತ ಅಪರಿಚಿತರನ್ನು ತನ್ನ ಮನೆಗೆ ಬಂದು ಇರಿ ಎಂದು ಹೇಳುತ್ತಿದ್ದಾನಲ್ಲ ಇವನು ಅದೆಂಥ ದೊಡ್ದ ವ್ಯಕ್ತಿಯಾಗಿರಬೇಕು? ಟ್ರಿಪೋಲಿಯಂಥ ಮಹಾನಗರದಲ್ಲಿ ಇನ್ನೂ ಇಂಥ ಜನರಿದ್ದಾರೆಯೇ? ಮಾನವೀಯ ಮೌಲ್ಯಗಳು ಇನ್ನೂ ಉಳಿದುಕೊಂಡಿವೆಯೇ? ಎಂದು ಅಚ್ಚರಿಪಡುತ್ತಿರುವಾಗಲೇ ಆಕೆ ಮತ್ತೆ “Yes, you can stay with him. No doubt, he is a good person. Moreover, you have no other go. Think positively” ಎಂದು ಹೇಳುತ್ತಾ ನಮ್ಮ ಆತಂಕವನ್ನು ದೂರಮಾಡಿದಳು. ನಮಗೂ ಬೆರೆ ದಾರಿ ಇರಲಿಲ್ಲ. ಅವನು ಅಷ್ಟೆಲ್ಲಾ ಭರವಸೆಯನ್ನು ಕೊಟ್ಟ ಮೇಲೂ ಅವನು ಹೇಗೋ ಏನೋ ಎಂದು ಯೋಚಿಸುತ್ತಾ ಕುಳಿತುಕೊಳ್ಳುವದರಲ್ಲಿ ಅರ್ಥವಿಲ್ಲ. ಮೇಲಾಗಿ ಅವನನ್ನು ಬಿಟ್ಟರೆ ಗತಿಯಿರಲಿಲ್ಲ. ಆದದ್ದಾಗಲಿ ಅವನೊಂದಿಗೆ ಹೋಗುವದೇ ಒಳ್ಳೆಯದೆಂದು ನಿರ್ಧರಿಸಿದೆವು. ಆಗ ಘಂಟೆ ರಾತ್ರಿ ಎಂಟನ್ನು ದಾಟಿತ್ತು. ಅಷ್ಟರಲ್ಲಿ ಗೆಳೆಯ ಸುರೇಂದ್ರನ ಫೋನ್ ಬಂತು. ಆತ ತನ್ನ ಫೋನ್‍ನ್ನು ಮನೆಯಲ್ಲಿಯೇ ಬಿಟ್ಟು ಹೊರಗೆ ಹೋಗಿದ್ದರಿಂದ ನಮ್ಮ ಫೋನ್‍ನ್ನು ತೆಗೆಯಲಿಲ್ಲ ಎಂದು ಹೇಳಿದ. ಸಧ್ಯ ಸಿಕ್ಕನಲ್ಲ ಎಂದು ಖುಷಿಯಾಯಿಯಿತು. ನಾವು ನಮ್ಮ ಪರಿಸ್ಥಿತಿಯನ್ನು ವಿವರಿಸಿದೆವು. ಅವನು ಈ ಕೂಡಲೇ ಹೊರಟು ಬನ್ನಿ ಎಂದು ಹೇಳಿದ. ನಮಗೆ ಹೋದ ಉಸಿರು ಮರಳಿ ಬಂದಂತಾಯಿತು.


    ಇನ್ನು ನಾವು ಟ್ಯಾಕ್ಷಿ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಸಬ್ರತಾಗೆ ಹೋಗಬೇಕಿತ್ತು. ಆಕೆ ಟ್ಯಾಕ್ಷಿ ನಿಲ್ದಾಣದವರೆಗೆ ನಿಮ್ಮನ್ನು ಬಿಡುತ್ತೇನೆ ಬನ್ನಿ ಎಂದು ನಾವು ಬಂದ ಟ್ಯಾಕ್ಷಿಯಲ್ಲೇ ಕರೆದುಕೊಂಡು ಹೊರಟಳು. ಅಷ್ಟೊತ್ತಿಗಾಗಲೇ ಮಳೆ ನಿಂತಿತ್ತು. ನನ್ನ ಮಗಳು ಹಸಿವೆ ಎನ್ನುತ್ತಿದ್ದಳು. ಟ್ಯಾಕ್ಷಿ ನಿಲ್ದಾಣ ತಲಪುತ್ತಿದ್ದಂತೆ ಆಕೆ ಮೊದಲು ಇಳಿದು ಹೋಗಿ ಸೇಬು ಹಣ್ಣು, ಬಾಳೆಹಣ್ಣು, ಕೇಕ್, ನೀರಿನ ಬಾಟಲ್ ಮತ್ತು ಚಾಕಲೇಟ್‍ನ್ನು ತಂದು ನಮ್ಮ ಕೈಗಿಡುತ್ತಾ “ಮಗು ಹಸಿದಿದೆ. ಮೊದಲು ಅವಳಿಗೆ ತಿನಿಸಿ.” ಎಂದು ಹೇಳಿದಾಗ ನಮ್ಮಿಬ್ಬರ ಹೃದಯಗಳಲ್ಲಿ ಆರ್ದ್ರತೆ ಜಿನುಗದೇ ಇರಲು ಸಾಧ್ಯವಾಗಲಿಲ್ಲ. ನಾವು ಅವರಿಬ್ಬರ ಪ್ರೀತಿಗೆ, ಉಪಕಾರಕ್ಕೆ ಮೂಕವಿಸ್ಮಿತರಾದೆವು. ಆಕೆಯ ಉಪಕಾರವನ್ನು ಹೇಗೆ ತೀರಿಸುವದೆಂದು ಗೊತ್ತಾಗದೆ “ನೀವು ಕೊಂಡುತಂದ ಹಣ್ಣುಗಳಿಗಾದರೂ ದುಡ್ಡನ್ನು ತೆಗೆದುಕೊಳ್ಳಿ” ಎಂದು ನಾನು ದುಡ್ಡನ್ನು ಕೊಡಲು ಮುಂದಾದಾಗ ಏನು ಮಾಡಿದರೂ ತೆಗೆದುಕೊಳ್ಳಲಿಲ್ಲ. ಅಷ್ಟು ಹೊತ್ತು ಟ್ಯಾಕ್ಷಿಯಲ್ಲಿ ಸುತ್ತಾಡಿದ್ದಕ್ಕೆ ಬಾಡಿಗೆ ಕೊಡಲು ಹೋದರೆ ಆಕೆ ಅದನ್ನೂ ಕೊಡಿಸಿಕೊಡಲಿಲ್ಲ. ಆದರೆ ನಾನೇ ಡ್ರೈವರ್ನ ಕೈಯಲ್ಲಿ ಬಲವಂತವಾಗಿ ಹತ್ತು ದಿನಾರಿನ ನೋಟೊಂದನ್ನು ತುರುಕಿದೆ. ಅಲ್ಲಿಂದ ನಮ್ಮನ್ನು ಸಬ್ರತಾಗೆ ಹೋಗುವ ಟ್ಯಾಕ್ಷಿಯಲ್ಲಿ ಕೂರಿಸಿ ನಮಗೆ ಬೈ ಹೇಳಿದರು. ಹೋಗುವ ಮುನ್ನ ಆಕೆ ತನ್ನ ಮೊಬೈಲ್ ನಂಬರ್ ಕೊಟ್ಟು “ಸಬ್ರತಾ ಮುಟ್ಟಿದ ತಕ್ಷಣ ನನಗೊಂದು ಫೋನ್ ಮಾಡಿ. All the best” ಎಂದು ನಸುನಗುತ್ತಾ ನಮ್ಮನ್ನು ಬಿಳ್ಕೊಟ್ಟಳು. ಡ್ರೈವರ್ ಕೂಡಾ “ಒಂದು ವೇಳೆ ನಿಮ್ಮ ಫ್ರೆಂಡ್ ಇರದೇ ಇದ್ದರೆ ನನ್ನ ಮನೆಗೇ ಬನ್ನಿ. ತೊಂದರೆಯಿಲ್ಲ.” ಎಂದು ಹಳಿ ತನ್ನ ಮನೆಯ ಅಡ್ರೆಸ್ ಮತ್ತು ಫೋನ್ ನಂಬರ್ ಕೊಟ್ಟನು. ನಾವು ಅವರಿಬ್ಬರ ಉಪಕಾರವನ್ನು ಮನದ ತುಂಬಾ ತುಂಬಿಕೊಳ್ಳತ್ತಾ ಸಬ್ರತಾದತ್ತ ಹೊರಟೆವು. ದಾರಿಯುದ್ದಕ್ಕೂ ಅವರ ಕಾಳಜಿ, ನಮ್ಮಂಥ ಅಪರಿಚಿತರಿಗೆ ಸ್ಪಂದಿಸಿದ ರೀತಿ ನಮ್ಮನ್ನು ಬೆರಗುಗೊಳಿಸುತ್ತಲೇ ಹೋಯಿತು. ಅವರಿಬ್ಬರ ಹೇಸರೇನೆಂದು ನನಗೀಗ ಸರಿಯಾಗಿ ನೆನಪಿಲ್ಲ. ಆದರೆ ಅವರ ಮುಖಗಳು ಹಾಗೂ ಅವರೊಳಗಿನ ಮನುಷ್ಯತ್ವ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತುಬಿಟ್ಟಿವೆ.


    ನಮ್ಮ ಬದುಕಿನ ಸುದೀರ್ಘ ಪ್ರಯಾಣದಲ್ಲಿ ಯಾರ್ಯಾರೋ ನಮಗೆ ಉಪಕಾರ ಮಾಡುತ್ತಾರೆ, ಯಾರ್ಯಾರೋ ನಮ್ಮ ಆಪಾದ್ಭಾಂದವರಾಗುತ್ತಾರೆ, ಯಾರು ಯಾರೋ ನಮಗೆ ಸಹಾಯ ಹಸ್ತ ನೀಡುತ್ತಾರೆ. ಅಂಥವರನ್ನು ಜೀವನಪೂರ್ತಿ ನೆನಪಿಟ್ಟುಕೊಂಡು, ಅವರ ಬಗ್ಗೆ ಜಗತ್ತಿಗೆ ಸಾರಿ ಸಾರಿ ಹೇಳುತ್ತಾ ಈ ಯಾಂತ್ರಿಕ ಜಗತ್ತಿನಲ್ಲಿ ಮಾನವೀಯತೆಯೆನ್ನುವದು ಇನ್ನೂ ಇದೆ ಎಂದು ಮನದಟ್ಟು ಮಾಡಿಸುವ ಕೆಲಸವನ್ನು ಬಿಟ್ಟು ಬೇರೇನು ಮಾಡಲು ಸಾಧ್ಯ?


    -ಉದಯ್ ಇಟಗಿ



    ಇರಲೇ? ಇರದಿರಲೇ? ಇದು ಪ್ರಶ್ನೆ

  • ಶುಕ್ರವಾರ, ಜುಲೈ 05, 2013
  • ಬಿಸಿಲ ಹನಿ
  • ಇಲ್ಲಿ ಈಗಾಗಲೇ ವಾರ್ಷಿಕ ಪರೀಕ್ಷೆಗಳನ್ನು ಮುಗಿಸಿ ಬೇಸಿಗೆಯ ರಜೆಯ ಮೇರೆಗೆ ನಾವೆಲ್ಲಾ ನಮ್ಮನಮ್ಮ ದೇಶಗಳಿಗೆ ಹೋಗಲು ಕಾತುರರಾಗಿದ್ದೇವೆ. ಪ್ರತಿವರ್ಷದಂತೆ ಈ ವರ್ಷವೂ ಬೇಸಿಗೆ ರಜೆಗೆ ನಮ್ಮನ್ನು ನಮ್ಮನಮ್ಮ ಊರುಗಳಿಗೆ ಕಳಿಸಲು ನಮ್ಮ ಯೂನಿವರ್ಷಿಟಿಯವರು ಟಿಕೇಟ್‍ಗಳನ್ನು ಸಿದ್ಧಪಡಿಸುತ್ತಿದ್ದಾರೆ. ಬಹುಶಃ, ಈ ತಿಂಗಳು 20 ರಂದು ನಾವು ಇಲ್ಲಿಂದ ಹೊರಡಬಹುದು. ಹೋದ ಮೇಲೆ ಮತ್ತೆ ಇಲ್ಲಿಗೆ ಹಿಂದಿರುಗಿ ಬರುತ್ತೇನೇಯೇ? ಗೊತ್ತಿಲ್ಲ! ಏಕೆಂದರೆ ಈಗ್ಗೆ ಒಂದು ತಿಂಗಳಿನಿಂದ ಮತ್ತೆ ಲಿಬಿಯಾಕ್ಕೆ ವಾಪಾಸಾಗಬೇಕೇ? ಬೇಡವೇ? ಎನ್ನುವ ಸಂದಿಗ್ಧತಯಲ್ಲಿ ಸಿಲುಕಿದ್ದೇನೆ. ಆ ಸಂದಿಗ್ಧತೆ ಅದೆಷ್ಟು ತೀವ್ರವಾಗಿದೆಯೆಂದರೆ ಯೋಚಿಸಿದಷ್ಟೂ ಅದು ನನ್ನನ್ನು ಮತ್ತೊಂದು, ಮಗದೊಂದು ಸಂದಿಗ್ಧತೆಗಳ ಸುಳಿಗೆ ದೂಡಿ ಮತ್ತಷ್ಟು ಕಂಗೆಡಿಸುತ್ತಿದೆ.


    ಪ್ರತಿವರ್ಷದಂತೆ ಈ ವರ್ಷವೂ ನಮ್ಮ ಯೂನಿವರ್ಷಿಟಿಯಿಂದ ಬಂದ “ನಿಮ್ಮನ್ನು ಮುಂದಿನ ವರ್ಷಕ್ಕೆ Renew ಮಾಡಲಾಗಿದೆ” ಎನ್ನುವ ಪತ್ರವನ್ನು ನಮ್ಮ ಡೀನ್ ನನ್ನ ಕೈಗಿಟ್ಟಾಗ ನಾನು ಖುಷಿಯಾಗಿದ್ದು ಸುಳ್ಳಲ್ಲ. ಇನ್ನೊಂದೆರೆಡು ವರ್ಷ ಅದ್ಹೇಗೋ ಇಲ್ಲಿ ಕಳೆದುಬಿಟ್ಟರೆ ಬೆಂಗಳೂರಿನಲ್ಲಿ ನನ್ನ ಕನಸಿನ ಮನೆ ಕಟ್ಟಬಹುದು, ಆಮೇಲೆ ಖಾಯಂ ಆಗಿ ಬೆಂಗಳೂರಿಗೆ ವಾಪಾಸಾಗಿ ಅಲ್ಲೇ ಏನಾದರು ಮಾಡಬಹುದು ಎಂದು ಹರ್ಷದಿಂದ ಕುಣಿದಾಡಿದ್ದೆ. ಜೊತೆಗೆ ಮನೆ ಹೇಗೆ ಕಟ್ಟಬೇಕು ಎನ್ನುವದರ ಬಗ್ಗೆ ಪ್ರತಿ ನಿಮಿಷವೂ ಇನ್ನಿಲ್ಲದಂತೆ ಕನಸುಕೊಂಡಿದ್ದೆ.

    ಆದರೆ ಅದೇಕೋ ಗೊತ್ತಿಲ್ಲ ಈಗ್ಗೆ ಒಂದು ತಿಂಗಳಿನಿಂದ ನಾನಿರುವ ಜಾಗ ಘಾಟ್ ಬಗ್ಗೆ ನನ್ನ ಮನಸ್ಸು ಬೋರೆದ್ದು ಹೋಗಿದ್ದೆ. ನಾನಿರುವ ಊರು ಘಾಟ್ ಬಂದು ಸಣ್ಣ ಹಳ್ಳಿಯಾದರೂ ಮೂಲಭೂತ ಸೌಕರ್ಯಗಳಿಗೇನೂ ಕೊರತೆಯಿಲ್ಲ. ಆದರೆ ಬೇಸರ ತರಿಸುವಂಥ ಜಾಗ. ಇಲ್ಲಿ ಒಂದು ಸರಿಯಾದ ಸಿನೆಮಾ ಥೇಟರ್ ಇಲ್ಲ. ಸಾಯಂಕಾಲ ಸುತ್ತಾಡಿಕೊಂಡು ಬರಲು ಒಂದು ಪಾಶ್ ಏರಿಯಾ ಇಲ್ಲ. ಒಂದು ಪಾರ್ಕ್ ಇಲ್ಲ. ಕ್ಲಬ್ಬುಗಳಿಲ್ಲ, ಶಾಪಿಂಗ್ ಮಾಲ್‍ಗಳಿಲ್ಲ, ಹಾಗೆಂದೇ ನಾವು ಇಲ್ಲಿ ಟೀವಿ ಮತ್ತು ಇಂಟರ್ನೆಟ್‍ಗೆ ಅಡಿಕ್ಟ್ ಆಗಿಬಿಟ್ಟೆವು. ಆದರೆ ಘಾಟ್‍ನ ಜನರನ್ನು, ಅವರ ಒಳ್ಳೆಯತನವನ್ನು ಎಂದಾದರೂ ಮರೆಯಲು ಸಾಧ್ಯವೇ? ಅವರು ನಮಗೆ ಕೊಡುವ ಮರ್ಯಾದೆ, ಗೌರವವನ್ನು ಹೇಗೆ ತಾನೇ ಮರೆಯಲು ಸಾಧ್ಯ?

    ಹೀಗಿದ್ದೂ ಈ ಸಹರಾ ಮರಭೂಮಿಯಲ್ಲಿ ನಾನು ಅದ್ಹೇಗೋ ಆರು ವರ್ಷಗಳನ್ನು ಕಳೆದುಬಿಟ್ಟೆ. ನನ್ನ ಆರು ವರ್ಷಗಳಲ್ಲಿ ಈ ಮರಭೂಮಿ ನನಗೆ ಒಂದಿಷ್ಟು ಹಸಿರು ಹಸಿರಾದ ನೆನಪುಗಳನ್ನು ಕೊಟ್ತಿದೆ. ಜೊತೆಗೆ ಹೈಪೋಥೈರಾಡಿಸಂ ಮತ್ತು ಸಕ್ಕರೆ ಕಾಹಿಲೆಗಳನ್ನು ಸಹ ಕೊಟ್ಟಿದೆ. ನಾನಿಲ್ಲಿ ಆರು ವರ್ಷಗಳನ್ನು ಕಳೆದಿದ್ದರಿಂದ ಈ ಊರು ನನಗೆ ತಾಳ್ಮೆಯಿಂದ ಹೇಗಿರಬೇಕೆಂಬುದನ್ನು ಕಲಿಸಿದೆ. ಬೇರೆ ಬೇರೆ ದೇಶದ ಒಳ್ಳೆಯ ಗೆಳೆಯರನ್ನು ಕೊಟ್ಟಿದೆ. ನನ್ನ ವೃತ್ತಿಗೆ ಸಂಬಂಧಪಟ್ಟ ಹಾಗೆ ಒಂದಷ್ಟು ಹೊಸ ಹೊಸ ವಿಷಯಗಳನ್ನು ಕಲಿಸಿದೆ. ಇಲ್ಲಿ ಸಾಕಷ್ಟು ಸಮಯ ಸಿಗುತ್ತಿದುದರಿಂದ ಒಳ್ಳೊಳ್ಳೆ ಪುಸ್ತಕಗಳನ್ನು ಓದಿದ್ದೇನೆ. ಒಳ್ಳೊಳ್ಳೆ (ಬೆಂಗಳೂರಿನಲ್ಲಿ ನೋಡಲು ಸಾಧ್ಯವಾಗದ) ಸಿನಿಮಾಗಳನ್ನು ನೋಡಿದ್ದೇನೆ.

    ಇಲ್ಲಿ ಕೆಲಸ ಮಾಡಿದ್ದರಿಂದಲೇ ನನಗೆ ಬೆಂಗಳರಿನಲ್ಲಿ ಎರಡು ಸೈಟ್‍ಗಳನ್ನು ತೆಗೆಯಲು ಸಾಧ್ಯವಾಯಿತು. ಮನೆಯೊಂದನ್ನು ಕಟ್ಟುವದು ಬಾಕಿಯಿದೆ. ಹಾಗಾಗಿ ಇನ್ನೊಂದೆರೆಡು ವರ್ಷ ಇಲ್ಲಿದ್ದಿದ್ದರೆ ಚನ್ನಾಗಿತ್ತು. ಆದರೆ ಅದೇಕೋ ಇನ್ನುಮುಂದೆ ಸಾಧ್ಯವಾಗುತ್ತಿಲ್ಲ, ಸಾಕಿನ್ನು ಜಾಗ ಬದಲಾಯಿಸೋಣ ಅನಿಸುತ್ತಿದೆ. ಹೋಗಲಿ ಇಲ್ಲಿಂದ ಆರುನೂರು ಕಿಲೋಮೀಟರ್ ದೂರವಿರುವ ಸೆಭಾಗಾದರೂ ಟ್ರಾನ್ಸಫರ್ ತೆಗೆದುಕೊಳ್ಳೋಣವೆಂದರೆ ನನ್ನ ಡೀನ್ ಮತ್ತು HOD “ಇಲ್ಲಿಯೇ ಶಿಕ್ಷಕರ ಕೊರತೆಯಿದೆ, ಇನ್ನು ನಿಮ್ಮನ್ನು ಬೇರೆ ಕಡೆ ಕಳಿಸುವದಾದರೂ ಹೇಗೆ?” ಎಂದು ನನ್ನನ್ನೇ ಕೇಳುತ್ತಾರೆ. ಜೊತೆಗೆ ಮೊದಲಾದರೆ ಇಲ್ಲಿ ತುಂಬಾ ಜನ ಇಂಡಿಯನ್ಸ್ ಇದ್ದರು. ಅದ್ಹೇಗೋ ಸಮಯ ಕಳೆದುಹೋಗುತ್ತಿತ್ತು. ಆದರೀಗ ಅವರ ಸಂಖ್ಯೆ ನನ್ನನ್ನೂ ಸೇರಿ ಎರಡು ಜನಕ್ಕೆ ಬಂದು ನಿಲ್ಲುವದರಲ್ಲಿದೆ. ಮೇಲಾಗಿ ಇತ್ತೀಚಿಗೆ ಇಲ್ಲಿ ದರೋಡೆಗಳು, ಬಾಂಬ್ ಬ್ಲಾಸ್ಟ್‍ಗಳು ಹೆಚ್ಚಾಗುತ್ತಿರುವದರಿಂದ ಅಷ್ಟೊಂದು ಸುರಕ್ಷತೆ ಅನಿಸುತ್ತಿಲ್ಲ.

    ಜೊತೆಗೆ ಪ್ರತಿ ವರ್ಷ ಸೆಮೆಸ್ಟರ್ ಬ್ರೇಕ್‍ನಲ್ಲಿ ಅಂದರೆ ಫೆಬ್ರುವರಿಯಲ್ಲಿ ನಾವು ಹತ್ತು ದಿನದ ಮಟ್ಟಿಗೆ ಇಂಡಿಯಾಕ್ಕೆ ಬರುತ್ತಿದ್ದೆವು. ಆದರೆ ಈ ಸಾರಿ ಹಾಗೆ ಬಂದಾಗ ನನ್ನ ಸಹೋದ್ಯೋಗಿಯೊಬ್ಬ ಅವರು ನಿಗದಪಡಿಸಿದ ದಿನಾಂಕದೊಳಗೆ ಬರದೆ ಆತನ ವೀಸಾ ತೀರಿಹೋಗಿ ಆತ ಮತ್ತೆ ಇಲ್ಲಿಗೆ ವೀಸಾ ತೆಗೆದುಕೊಂಡು ಬರಬೇಕಾದರೆ ಸುಮಾರು ಎರಡೂವರೆ ತಿಂಗಳಷ್ಟು ತಡವಾಗಿತ್ತು. ಆ ಸಮಯದಲ್ಲಿ ಆತ ತೆಗೆದುಕೊಳ್ಳಬೇಕಾಗಿದ್ದ ತರಗತಿಗಳೆಲ್ಲಾ ಅತಂತ್ರ ಸ್ಥಿತಿಯನ್ನು ತಲುಪಿದ್ದವು. ಹೀಗಾಗಿ ನಮ್ಮ ಡೀನ್ ಮತ್ತು HOD ಮುಂದಿನ ಸಾರಿ ಸೆಮೆಸ್ಟರ್ ಬ್ರೇಕಿನಲ್ಲಿ ಕಳಿಸುವದಿಲ್ಲ ಎಂದು ಸ್ಟ್ರಿಕ್ಟ್ ಆಗಿ ಹೇಳಿಬಿಟ್ಟಿದ್ದಾರೆ. ಸೆಮೆಸ್ಟರ್ ಮಧ್ಯದಲ್ಲಿ ಹೇಗೋ ಹೋಗಬಹುದಿತ್ತಲ್ಲ ಎಂಬ ಸಣ್ಣ ಆಸೆಯೂ ಕಮರಿಹೋಗಿದೆ. ಜೊತೆಗೆ ನಾನು ನನ್ನ ಹೈಪೋಥೈರಾಡಿಸಂ ಕಾಹಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೂ ಅದರಲ್ಲಿ ಏರುಪೇರಾಗುತ್ತಿರುವದರಿಂದ ಮನಸ್ಸು ಮಂಕು ಬಡಿದಂತಾಗುತ್ತಿದೆ (ಮನಸ್ಸು ಮಂಕು ಬಡಿದಂತಾಗುವದು ಈ ಕಾಹಿಲೆಯ ಮುಖ್ಯ ಲಕ್ಷಣ). ಅದೇನೂ ಭಯಪಡುವ ವಿಚಾರವಲ್ಲ. ಅದಕ್ಕೆ ನಾನು ತೆಗೆದುಕೊಳ್ಳುವ ಮಾತ್ರೆಯ ಡೋಸೆಜ್‍ನ್ನು ಸ್ವಲ್ಪ ಹೆಚ್ಚಿಸಿದರಾಯಿತು. ಆದರೆ ಈಗ ಇಲ್ಲಿಯ ಆಸ್ಪತ್ರೆಗಳಲ್ಲಿ ಇಂಡಿಯನ್ ಡಾಕ್ಟರುಗಳು ಇಲ್ಲ. ಅವರೆಲ್ಲಾ ಹೊರಟುಹೋಗಿ ಅವರ ಜಾಗದಲ್ಲಿ ಸುಡಾನಿ ಡಾಕ್ಟರುಗಳು ಬಂದಿದ್ದಾರೆ. ಆದರೆ ನನಗೆ ಅವರ ಹತ್ತಿರ ತೋರಿಸಲು ಭಯ. ಜೊತೆಗೆ ನನಗೆ ಅವರ ಮೇಲೆ ಅಷ್ಟು ನಂಬಿಕೆಯಿಲ್ಲ.

    ಹೀಗಾಗಿ ಈ ಸಾರಿ ನಾನು ಇಲ್ಲಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಸೌದಿಗೆ ಹೋಗಬೇಕೆಂದುಕೊಂಡಿದ್ದೇನೆ. ಸಾದಿ ಏಕೆಂದರೆ ಅಲ್ಲಿಯ ಪ್ರತಿಯೊಂದು ಜಾಗದಲ್ಲಿ ತುಂಬಾ ಜನ ಇಂಡಿಯನ್ಸ್, ಮತ್ತು ಇಂಡಿಯನ್ ಹೋಟೆಲ್‍ಗಳಿವೆ ಎಂದು ಕೇಳಲ್ಪಟ್ಟಿದ್ದೇನೆ. ಜೊತೆಗೆ ಆ ದೇಶದಲ್ಲಿ ಸಾಕಷ್ಟು ಜನ ಇಂಡಿಯನ್ ಡಾಕ್ಟರುಗಳಿದ್ದುದರಿಂದ ಏನಾದರೂ ಹೆಚ್ಚುಕಮ್ಮಿಯಾದರೆ ನಮ್ಮ ಸಹಾಯಕ್ಕೆ ಅವರಿರುತ್ತಾರೆ ಎನ್ನುವ ಧೈರ್ಯವಿದೆ. ಮೇಲಾಗಿ ಅಲ್ಲಿ ಮಲ್ಟಿಪಲ್ ಎಕ್ಸಿಟ್ ಮತ್ತು ರೀಎಂಟ್ರಿ ವೀಸಾ ಇರುವದರಿಂದ ರಜೆ ಸಿಕ್ಕಾಗಲೆಲ್ಲಾ ಮಧ್ಯದಲ್ಲಿ ನಾವು ಇಂಡಿಯಾಕ್ಕೆ ಆಗಾಗ್ಗೆ ಬರಬಹುದೆಂದು ಹೇಳುತ್ತಾರೆ. ಅಲ್ಲಿಗೆ ಹೋದರೆ ಇನ್ನೂ ಒಂದು ಅನುಕೂಲವಿದೆ. ಅದೇನೆಂದರೆ ನನ್ನ ಹೆಂಡತಿಯೂ ಕಾಲೇಜಿನಲ್ಲಿ ಕೆಲಸ ಮಾಡಬಹುದು ಮತ್ತು ನನ್ನ ಮಗಳನ್ನು ಅಲ್ಲಿರುವ ಯಾವುದಾದರೊಂದು ಇಂಡಿಯನ್ ಸ್ಕೂಲುಗಳಲ್ಲಿ ಓದಿಸಬಹುದೆಂಬ ಭರವಸೆಯಿದೆ. ಅಂತೆಯೇ ಅಲ್ಲಿ ಸಾಕಷ್ಟು ಇಂಡಿಯನ್ ಯೂನಿವರ್ಷಿಟಿಗಳ ಶಾಖೆಗಳಿರುವದರಿಂದ ನಾನ ಯಾವುದಾದರೂ ಕೋರ್ಸ್ ಮಾಡಲು ಸಹಾಯವಾಗುತ್ತದೆ.

    ಆದರೆ ಒಳಮನಸ್ಸು ಮಾತ್ರ “ಇಷ್ಟು ಸಂಬಳ ಮತ್ತೆಲ್ಲಿ ಸಿಗಲಾರದು. ಇನ್ನೊಂದೆರೆಡು ವರ್ಷ ಹೇಗಾದರೂ ಮಾಡಿ ಇದ್ದುಬಿಡು. ಮನೆ ಕಟ್ಟಿಯಾದ ಮೇಲೆ ಎಲ್ಲಿಗೆ ಬೇಕಾದರೂ ಹೋಗು.” ಎಂದು ಹೇಳುತ್ತಿದೆ. ಆದರೆ ಎಲ್ಲವನ್ನೂ ತರ್ಕದಿಂದ ನೋಡುವ ನನ್ನ ಬುದ್ಧಿ ಮಾತ್ರ “ಸೌದಿಗೆ ಹೋದರೆ ನಿನಗೆ ಎಷ್ಟೆಲ್ಲಾ ಅನುಕೂಲಗಳಿವೆ. ಅಲ್ಲಿಗೇ ಹೋಗಿಬಿಡು.” ಎಂದು ಹೇಳುತ್ತಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಒಂದು ವೇಳೆ ಸೌದಿಗೆ ಹೋಗಬೇಕೆಂದರೆ ಬಹುಶಃ, ಸ್ವಲ್ಪ ತಡವಾಗಬಹುದು. ಏಕೆಂದರೆ ನಾನೀಗ ಬಂದರೆ ಸೌದಿಗೆ ನಡೆಯುವ ಇಂಟ್ರ್ಯೂಗಳು ಇಷ್ಟೊತ್ತಿಗಾಗಲೇ ಮುಗಿದುಹೋಗಿರುತ್ತವೆ. ಪರ್ವಾಗಿಲ್ಲ. ಇದೇ ಸಮಯದಲ್ಲಿ ಈ ಸಾರಿ ಒಂದು ಕೋರ್ಸ್ ಮಾಡಿಕೊಳ್ಳಬೇಕೆಂದಿದ್ದೇನೆ. ಅದನ್ನು ಮಾಡಿಕೊಂಡರೆ ಸೌದಿಯಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲೂ ಸಾಕಷ್ಟು ಅವಕಾಶಗಳು ಸಿಗುವ ಸಾಧ್ಯತೆಯಿದೆ.

    ಅಂದಹಾಗೆ, ಇದೆಲ್ಲಾ ಸಧ್ಯದ ಮಾತು. ಈಗ ಅನಿಸಿದ್ದು ಅಷ್ಟೇ! ಆದರೆ ನನ್ನ ರಜೆ ಮುಗಿಯುವಷ್ಟರಲ್ಲಿ ಮತೇನು ಅನಿಸುತ್ತದೋ? ಗೊತ್ತಿಲ್ಲ. ನಾನು ಮತ್ತೆ ಮನಸ್ಸು ಬದಲಾಯಿಸಿ ಲಿಬಿಯಾಕ್ಕೆ ಹಿಂದಿರುಗಿ ಬರುತ್ತೇನೇಯೇ? ಅಥವಾ ಬದುಕು ಕೊಂಡೊಯ್ದಲ್ಲಿಗೆ ಬೇರೆ ಕಡೆ ಹೋಗುತ್ತೇನೇಯೇ? ಎಲ್ಲವನ್ನೂ ಕಾದುನೋಡಬೇಕಿದೆ.

    -ಉದಯ್ ಇಟಗಿ