Demo image Demo image Demo image Demo image Demo image Demo image Demo image Demo image

ಗಡಾಫಿ ಗರ್ಲ್ಸ್

  • ಭಾನುವಾರ, ಆಗಸ್ಟ್ 10, 2014
  • ಬಿಸಿಲ ಹನಿ

  • ಗಡಾಫಿ ಎಷ್ಟೊಂದು ಇಂಟೆರೆಸ್ಟಿಂಗ್ ವ್ಯಕ್ತಿಯಾಗಿದ್ದನೋ ಅಷ್ಟೇ ವಿವಾದಾತ್ಮಕ ವ್ಯಕ್ತಿ ಕೂಡಾ ಆಗಿದ್ದ. ಆತ ಕೊನೆತನಕ ವಿವಾದಾತ್ಮಕ ವ್ಯಕ್ತಿಯಾಗಿಯೇ ಉಳಿದ. ಅವನೇ ವಿವಾದಗಳಿಗೆ ಸಿಲುಕಿಕೊಳ್ಳುತ್ತಿದ್ದನೋ ಅಥವಾ ವಿವಾದಗಳೇ ಅವನನ್ನು ಸುತ್ತಿಕೊಳ್ಳುತ್ತಿದ್ದವೋ ಎಂದು ನಿರ್ಧರಿಸುವದು ಕಷ್ಟ. ಜೊತೆಗೆ ಆತನ ಬಗೆಗಿನ ದಂತಕಥೆಗಳು ಕೂಡಾ ಅವನಷ್ಟೇ ಜನಪ್ರಿಯವಾಗಿದ್ದವು. ಗಡಾಫಿ ಒಬ್ಬ ಕ್ರೂರ ಸರ್ವಾಧಿಕಾರಿ, ಲಂಪಟ, ಐಷಾರಾಮಿ ಜಿವನ ನಡೆಸುವವ, ತಿಕ್ಕಲು, ಸ್ತ್ರೀಲೋಲ, ಸಲಿಂಗಕಾಮಿ, ಲಿಬಿಯನ್ನರ ರಕ್ತ ಹೀರಿದವ, ಹರಕು ಬಾಯಿಯವ ಹಾಗಂತೆ ಹೀಗಂತೆ ಇನ್ನೂ ಏನೇನೋ ಆಪಾದನೆಗಳು ಅವನ ಮೇಲಿದ್ದವು. ಆದರೆ ವಾಸ್ತವದಲ್ಲಿ ಅವೆಲ್ಲಾ ಆಧಾರರಹಿತವಾಗಿದ್ದವು. ಹಾಗೆ ನೋಡಿದರೆ ಗಡಾಫಿ ಅಧಿಕಾರಕ್ಕೆ ಬಂದ ಮುಂಚಿನ ಕೆಲವು ವರ್ಷಗಳಲ್ಲಿ ತನ್ನ ವಿರುದ್ಧ ದನಿ ಎತ್ತಿದವರನ್ನು ಮುಗಿಸುವಷ್ಟು ಕ್ರೂರಿಯಾಗಿದ್ದು ನಿಜ. ಆದರೆ ಲಿಬಿಯನ್ನರಿಗೆ ಕೆಟ್ಟ ಆಡಳಿತ ನೀಡುವಷ್ಟು ಕ್ರೂರ ಸರ್ವಾಧಿಕಾರಿಯಾಗಲಿ, ಸ್ವಾರ್ಥಿಯಾಗಲಿ, ಲಂಪಟನಾಗಲಿ. ಐಷಾರಮಿಯಾಗಲಿ. ಲಿಬಿಯನ್ನರ ರಕ್ತ ಹೀರಿದವನಾಗಲಿ ಯಾವತ್ತೂ ಆಗಿರಲಿಲ್ಲ. ಬದಲಿಗೆ ಆತ ಲಿಬಿಯನ್ನರನ್ನು ತಾನು ಅಧಿಕಾರಕ್ಕೆ ಬಂದ ದಿನದಿಂದಲೂ ಎಷ್ಟು ಚನ್ನಾಗಿ ನೋಡಿಕೊಂಡಿದ್ದ ಮತ್ತು ಅವರಿಗೆ ಏನೆಲ್ಲಾ, ಎಷ್ಟೆಲ್ಲಾ ಸೌಲತ್ತುಗಳನ್ನು ಕೊಟ್ಟಿದ್ದನೆಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ. ಇನ್ನು ಆತ ತಿಕ್ಕಲು ಮತ್ತು ಹರಕು ಬಾಯಿಯವನಾಗಿದ್ದಂತೂ ನಿಜ. ಆತ ಎಂಥ ತಿಕ್ಕಲುನಾಗಿದ್ದ ಮತ್ತು ಆತನ ತಿಕ್ಕಲುತನದಿಂದಾಗಿ ಹೇಗೆ ಇಡಿ ಲಿಬಿಯಾ ಒಂದು ದಶಕದ ಕಾಲ ಇಂಗ್ಲೀಷ್ ಭಾಷೆಯ ಕಲಿಕೆಯಿಲ್ಲದೆ ಕತ್ತಲ ಕೂಪದಲ್ಲಿ ಮುಳುಗುವಂತಾಯಿತು ಎಂಬುದನ್ನು ಸಹ ನಾನು ನಿಮಗೆ ಈ ಹಿಂದಿನ (ಮೌಮರ್ ಗಡಾಫಿ ಮತ್ತು ಇಂಗ್ಲೀಷ್ ಭಾಷೆ) ಕಂತಿನಲ್ಲಿ ಹೇಳಿದ್ದೇನೆ.
    ನಾನು ಈ ಮೊದಲೇ ಹೇಳಿದಂತೆ ಕೆಲವು ಆಫ್ರಿಕನ್ ಪತ್ರಿಕೆಗಳನ್ನು ಹೊರತುಪಡಿಸಿ ಜಗತ್ತಿನ ಬಹುತೇಕ ಮಾಧ್ಯಮಗಳು ಗಡಾಫಿಯನ್ನು ಮುಂಚಿನಿಂದಲೂ ಅವನೊಬ್ಬ ಖಳನಾಯಕನೆಂಬಂತೆ ಚಿತ್ರಿಸಿಕೊಂಡು ಬಂದವು. ಅಷ್ಟೇ ಏಕೆ? ಅವರು ಅವರಿವರ ಬಾಯಿಂದ ಅವನ ಖಾಸಗಿ ವಿಷಯಗಳಿಗೆ ಬಗ್ಗೆ ತಿಳಿದುಕೊಂಡು, ಅವುಗಳಿಗೆ ರೆಕ್ಕೆಪುಕ್ಕ ಕಟ್ಟಿ, ಇಲ್ಲಸಲ್ಲದ್ದನ್ನು ಹೇಳಿ ರೋಚಕವಾಗಿ ವರದಿ ಮಾಡಿದವು. ಅದಕ್ಕೆ ಅವನ “ಹುಡುಗಿಯರು” ಕೂಡಾ ಹೊರತಾಗಿರಲಿಲ್ಲ. ಆ ಹುಡುಗಿಯರನ್ನು ಗಡಾಫಿ ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ಅದಕ್ಕೆಂದೇ ಅವರನ್ನು ತನ್ನ ಅರಮನೆಯಲ್ಲಿ ಇಟ್ಟುಕೊಂಡಿದ್ದ ಹಾಗಂತೆ ಹೀಗಂತೆ ಅಂತೆಲ್ಲಾ ಅಂತೆಕಂತೆಗಳ ಸುದ್ದಿ ಹಬ್ಬಿಸಿದ್ದರು. ಹಾಗಾಗಿ ಈ ವಿಷಯದಲ್ಲಿ ಗಡಾಫಿ ಎಷ್ಟೊಂದು ಕುಪ್ರಸಿದ್ಧಿಯನ್ನು ಪಡೆದಿದ್ದನೋ ಅಷ್ಟೇ ಕುಪ್ರಸಿದ್ಧಿಯನ್ನು ಅವನ “ಹುಡುಗಿಯರು” ಸಹ ಪಡೆದಿದ್ದರು. ಮಾಧ್ಯಮಗಳು ಅವರನ್ನೆಲ್ಲಾ “ಗಡಾಫಿ ಗರ್ಲ್ಸ್” ಎಂದೇ ಪರಿಹಾಸ ಮಾಡುತ್ತಿದ್ದವು.
    ಹಾಗಾದರೆ ಗಡಾಫಿ ಗರ್ಲ್ಸ್ ಎಂದರೆ ಯಾರು? ಅವರಿಗೂ ಗಡಾಫಿಗೂ ಏನು ಸಂಬಂಧ? ಅವರ ಸುತ್ತ ಹರಡಿಕೊಂಡಿದ್ದ ಕಥೆಗಳೆನು? ಅವು ಎಷ್ಟು ನಿಜವಾಗಿದ್ದವು ಮತ್ತು ಎಷ್ಟು ಸುಳ್ಳಿನಿಂದ ಕೂಡಿದ್ದವು ಎಂಬುದನ್ನು ಈಗ ನೋಡೋಣ.
    ಅಂಗರಕ್ಷಕಿಯರು (ಬಾಡಿಗಾರ್ಡ್ಸ್):
    ಅಸಲಿಗೆ ಗಡಾಫಿ ಗರ್ಲ್ಸ್ ಎಂದರೆ ಬೇರೆ ಯಾರೂ ಅಲ್ಲ. ಆತನ ಅಂಗರಕ್ಷಣೆಗೆಂದು ಅವನಿಂದಲೇ ನೇಮಕವಾದ ಅಂಗರಕ್ಷಕಿಯರು (ಬಾಡಿಗಾರ್ಡ್ಸ್) ಮತ್ತು ಪ್ರತಿನಿತ್ಯ ಆತನ ಆರೋಗ್ಯ ತಪಾಸಣೆ ಮಾಡಲು ನೇಮಕವಾದ ಉಕ್ರೇನಿಯನ್ ನರ್ಸ್‍ಗಳು. ಅವರೆಲ್ಲಾ ದಿನದ ಇಪ್ಪತ್ನಾಲ್ಕು ಘಂಟೆ ಸರದಿಯ ಮೇಲೆ ಅವನ ಮನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೇ ವಿನಃ ಯಾವತ್ತೂ ಅವನೊಟ್ಟಿಗೆ ಅವನ ಮನೆಯಲ್ಲಿ ಇರುತ್ತಿರಲಿಲ್ಲ. ಅವರೆಲ್ಲಾ ಬೇರೆಬೇರೆ ಕಡೆ ಇದ್ದು ತಮ್ಮ ಸರದಿ ಬಂದಾಗ ಕರ್ತವ್ಯ ನಿರ್ವಹಿಸಲು ಅವನ ಮನೆಗೆ ಬರುತ್ತಿದ್ದರು. ಆದರೆ ಅವರೆಲ್ಲಾ ಹೊರಗಡೆ ವಾಸಿಸುವಾಗ ಗಡಾಫಿಯ ಸುರಕ್ಷತೆಯ ದೃಷ್ಟಿಯಿಂದ ಅವರ ಚಲನವಲನಗಳನ್ನು ಮತ್ತು ಫೋನ್ ಕಾಲ್‍ಗಳನ್ನು ಅವರಿಗೆ ಗೊತ್ತಿಲ್ಲದಂತೆ ಗಮನಿಸಲಾಗುತ್ತಿತ್ತು.
    ಅದೆಲ್ಲಾ ಇರಲಿ. ಜಗತ್ತಿನ ಬೇರೆಲ್ಲಾ ನಾಯಕರುಗಳು ತಮ್ಮ ಅಂಗರಕ್ಷಣೆಗೆ ಪುರುಷ ಸೈನಿಕರನ್ನು ನೇಮಿಸಿಕೊಂಡರೆ ಗಡಾಫಿ ಮಾತ್ರ ಯಾಕೆ ತನ್ನ ಅಂಗರಕ್ಷಣೆಗೆ ಮಹಿಳಾ ಸೈನಿಕರನ್ನೇ ನೇಮಿಸಿಕೊಳ್ಳುತ್ತಿದ್ದ? ಅವನಿಗೆ ಸ್ತ್ರೀಯರೆಂದರೆ ಅಷ್ಟು ವ್ಯಾಮೋಹವಿತ್ತೆ? ಅಥವಾ ಆತ ನಿಜಕ್ಕೂ ಹೆಣ್ಣುಬಾಕನಾಗಿದ್ದು ಅವರೊಂದಿಗೆ ಚಕ್ಕಂದವಾಡುತ್ತಿದ್ದನೆ? ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿತ್ತೆ? ಎಂಬ ಇತಿಹಾಸವನ್ನು ಅವನ “ಗ್ರೀನ್ ಬುಕ್” ಮತ್ತು ಸ್ಥಳಿಯರ ಅಬಿಪ್ರಾಯದ ಹಿನ್ನೆಲೆಯಲ್ಲಿ ಕೆದಕುತ್ತಾ ಹೋದರೆ ನಮಗೆ ಗೊತ್ತಾಗುವದಿಷ್ಟೇ. ಗಡಾಫಿ ಒಬ್ಬ ಮುಸ್ಲಿಂ ನಾಯಕನಾಗಿದ್ದರೂ ಮುಂಚಿನಿಂದಲೂ ಮಹಿಳಾಪರ ಧೋರಣೆಯನ್ನು ಹೊಂದಿದವನಾಗಿದ್ದು ಆತ ಪರುಷರನ್ನು ಮತ್ತು ಮಹಿಳೆಯರನ್ನು ಸರಿಸಮನಾಗಿ ಕಾಣುತ್ತಿದ್ದ ಹಾಗೂ ತನ್ನ ದೇಶದ ಮಹಿಳೆಯರಿಗೆ ಸಮಾಜದ ಎಲ್ಲ ರಂಗಗಳಲ್ಲಿ ಸರಿಸಮನಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದ. ಏಕೆಂದರೆ ಅವನಿಗ ಮಹಿಳೆಯರ ಕಾರ್ಯದಕ್ಷತೆಯ ಬಗ್ಗೆ ಅಷ್ಟೊಂದು ವಿಶ್ವಾಸವಿತ್ತು. ಹಾಗೆಂದೇ ಗಡಾಫಿ ತನ್ನ ಅಂಗರಕ್ಷಣೆಗೆ ಮಹಿಳಾ ಸೈನಿಕರನ್ನು ನೇಮಿಸಿಕೊಳ್ಳುತ್ತಿದ್ದ ಮತ್ತು ಹಾಗೆ ನೇಮಿಸಿಕೊಳ್ಳುವದರ ಮೂಲಕ ಆತ ಹೊರಜಗತ್ತಿಗೆ ಹೆಂಗಸರು ಗಂಡಸರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟ. ಜೊತೆಗೆ ಹೆಂಗಸರಿಗೆ ಸೇನಾತರಬೇತಿ ನೀಡಿದರೆ ಅವರು ಆಪತ್ಕಾಲದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರು ಎನ್ನುವದು ಅವನ ಅಭಿಪ್ರಾಯವಾಗಿತ್ತೆಂದು ಇಲ್ಲಿನವರು ಹೇಳುತ್ತಾರೆ. ಆ ನಿಟ್ಟಿನಲ್ಲಿ ಗಡಾಫಿ ಮಹಿಳೆಯರನ್ನು ತನ್ನ ಅಂಗರಕ್ಷಕಿಯರನ್ನಾಗಿ (ದೇಶದ ಮಿಲ್ಟ್ರಿಪಡೆಯ ಅತ್ಯುನ್ನತ ಹುದ್ದೆ) ನೇಮಿಸಿಕೊಳ್ಳುವದರ ಮೂಲಕ ಅವರ ಕಾರ್ಯದಕ್ಷತೆಯನ್ನು ಹೊರಜಗತ್ತಿಗೆ ಮನದಟ್ಟು ಮಾಡಿದ ಪ್ರಪಂಚದ ಮೊಟ್ಟಮೊದಲ ಗಂಡಸೆಂಬ ಹೆಗ್ಗಳಿಕೆಗೆ ಪಾತ್ರನಾದ.

     

    1972 ರಲ್ಲಿ ಗಡಾಫಿ ತನ್ನ ದೇಶದ ಮುಖ್ಯಸ್ಥ ಹುದ್ದೆಗೆ ರಾಜೆನಾಮೆಯನ್ನಿತ್ತು “Brotherly Leader and Guide of the First of September Great Revolution of the Socialist People's Libyan Arab Jamahiriya” ಎಂಬ ಆಕರ್ಷಕ ಬಿರುದನ್ನಿಟ್ಟುಕೊಂಡು ದೇಶವನ್ನು ಆಳತೊಡಗಿದನೋ ಆಗ ತನ್ನ ಅಂಗರಕ್ಷಣೆಗಾಗಿ ಮಹಿಳೆಯರನ್ನು ನೇಮಿಸಿಕೊಂಡ. ಅವರ ಸಂಖ್ಯೆ ಸುಮಾರು 300-4೦೦ ರಷ್ಟಿದ್ದು ಅವರು ಸರದಿಯ ಮೇಲೆ ದಿನದ ಇಪ್ಪತ್ನಾಲ್ಕು ಘಂಟೆ ಗಡಾಫಿಯ ಕಾವಲು ಕಾಯಬೇಕಿತ್ತು. ಅವರೆಲ್ಲಾ ಲಿಬಿಯನ್ ಹುಡುಗಿಯರೇ ಆಗಿದ್ದು ಆತನ ಅಂಗರಕ್ಷಕರಾಗಲು ಅನೇಕ ಸುತ್ತುಗಳ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತಿತ್ತು. ಆದರೆ ಕೊನೆಯ ಸುತ್ತಿನ ಆಯ್ಕೆಯನ್ನು ಗಡಾಫಿಯೇ ಮಾಡುತ್ತಿದ್ದ ಹಾಗೂ ಕೊನೆಯ ಸುತ್ತಿನಲ್ಲಿ ಆಯ್ಕೆಯಾದ ಎಲ್ಲಾ ಮಹಿಳಾ ಸೈನಿಕರಿಂದ “ನಾವು ನಮ್ಮ ನಾಯಕನ ರಕ್ಷಣೆಗಾಗಿ ಸದಾ ಸಿದ್ಧ ಮತ್ತು ಅಗತ್ಯ ಬಿದ್ದರೆ ನಮ್ಮ ಪ್ರಾಣವನ್ನು ಬಲಿ ಕೊಟ್ಟಾದರು ಸರಿ ನಮ್ಮ ನಾಯಕನನ್ನು ಕಾಪಾಡುತ್ತೇವೆ ಮತ್ತು ನಾವು ಸೇವೆಯಲ್ಲಿರುವವರೆಗೂ ಕನ್ಯೆಯರಾಗಿಯೇ ಉಳಿಯತ್ತೇವೆ” ಎಂಬ ಪ್ರಮಾಣವಚನವನ್ನು ತೆಗೆದುಕೊಳ್ಳುತ್ತಿದ್ದ. 
     
    ಹಾಗೆ ನೇಮಕವಾದ ಅಂಗರಕ್ಷಕಿಯರಲ್ಲಿ ಗಡಾಫಿಗೆ ಮೂರು ಜನ ಅತ್ಯಂತ ನಂಬಿಕಸ್ತ ಅಂಗರಕ್ಷಕಿಯರಿದ್ದರು. ಅವರು ಕಾಯಂ ಆಗಿ ಅವನ ಹತ್ತಿರವೇ ಇರುತ್ತಿದ್ದರು ಹಾಗೂ ಅವನು ಎಲ್ಲೇ ಹೊದರು ಆ ಮೂರು ಜನರನ್ನು ಅವನೊಂದಿಗೆ ಕರೆದೊಯ್ಯುತ್ತಿದ್ದ. ಆದರೆ ಆತ ವಿದೇಶಕ್ಕೆ ಹೋದಾಗಲೆಲ್ಲಾ ಹೆಚ್ಚುವರಿಯಾಗಿ ತಾನೇ ಆರಿಸಿದ ಇತರೆ ನಾಲ್ಕು ಜನ ಅಂಗರಕ್ಷಕಿಯರನ್ನು ಕರೆದೊಯ್ಯುತ್ತಿದ್ದ. ಆ ಮೂರು ನಂಬಿಕಸ್ತ ಅಂಗರಕ್ಷಕಿಯರಲ್ಲಿ ಒಬ್ಬಳು ಸೆಭಾದ ಹತ್ತಿರವಿರುವ ತರಗನ್ ಎಂಬ ಊರಿನವಳು. ಆಕೆ ಹೇಳುವ ಪ್ರಕಾರ ಗಡಾಫಿ ತನ್ನ ವಿದೇಶ ಪ್ರವಾಸಕ್ಕಾಗಿ ಹೆಚ್ಚುವರಿಯಾಗಿ ಇತರೆ ನಾಲ್ಕು ಜನ ಅಂಗರಕ್ಷಕಿಯರನ್ನು ತಾನೇ ಆಯ್ಕೆ ಮಾಡಿ ಕರೆದೊಯ್ಯುತ್ತಿದ್ದ. ಹಾಗೆ ಆಯ್ಕೆಯಾದವರು ಎಷ್ಟು ಸಂತೋಷಪಡುತ್ತಿದ್ದರೆಂದರೆ ಅವರ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಏಕೆಂದರೆ ಹಾಗೆ ಹೋದವರಿಗೆ ಗಡಾಫಿ ತನ್ನ ಭಾವಚಿತ್ರವಿರುವ ಚಿನ್ನದ ವಾಚೊಂದನ್ನು ಉಡುಗೊರೆಯಾಗಿ ಕೊಡುತಿದ್ದನಲ್ಲದೇ ಬೋನಸ್ ಸಹ ಕೊಡುತ್ತಿದ್ದ. ಆ ಕಾರಣಕ್ಕಾಗಿ ಎಲ್ಲರೂ ತಮ್ಮನ್ನು ಆರಿಸಲಿ ತಮ್ಮನ್ನು ಆರಿಸಲಿ ಎಂಬ ಅಪೇಕ್ಷೆಯಿಂದ ಉತ್ಸುಕರಾಗಿ ಕಾಯುತ್ತಿದ್ದರಂತೆ. ಒಂದೊಂದು ಸಾರಿ ಗಡಾಫಿ ಕರೆದೊಯ್ದವರನ್ನೇ ಮತ್ತೊಮ್ಮೆ ಕರೆದೊಯ್ಯುತ್ತಿದ್ದನಂತೆ. ಹೀಗೆ ಆಯ್ಕೆ ಮಾಡುವದಕ್ಕೆ ನಿರ್ಧಿಷ್ಟ ಮಾನದಂಡಗಳೇನೂ ಇರಲಿಲ್ಲ. ಅದೆಲ್ಲಾ ಗಡಾಫಿಯ ಮೂಡು ಮತ್ತು ಆ ಹುಡುಗಿಯರ ಅದೃಷ್ಟವನ್ನು ಅವಲಂಬಿಸಿತ್ತಿರುತ್ತಂತೆ.        
    ಹಾಗಾದರೆ ಜಗತ್ತಿನ ಬಹುತೇಕ ಮಾಧ್ಯಮಗಳು ಹೇಳುವಂತೆ ಅವರೆಲ್ಲಾ ನಿಜಕ್ಕೂ ಸುಂದರಿಯರಾಗಿದ್ದರೆ? ಖಂಡಿತ ಎಲ್ಲರೂ ಸುಂದರಿಯರಾಗಿರಲಿಲ್ಲ. ಆದರೆ ಅವರೆಲ್ಲಾ ಗಡಾಫಿಯ ಮುಂದೆ ಸದಾ ಸುಂದರವಾಗಿ ಕಾಣಬೇಕಿತ್ತು. ಹಾಗೆಂದೇ ಅವರು ಸದಾ ಮುಖಕ್ಕೆ ಮೇಕಪ್ ಹಾಕಿಕೊಳ್ಳುತ್ತಿದ್ದರು, ತುಟಿಗಳಿಗೆ ಬಣ್ಣ ಬಳಿದುಕೊಳ್ಳುತ್ತಿದ್ದರು, ಉಗುರುಗಳಿಗೆ ನೇಲ್ ಪಾಲೀಶ್ ಹಚ್ಚಿಕೊಳ್ಳುತ್ತಿದ್ದರು ಹಾಗೂ ಹೈಹೀಲ್ಡ್ ಚಪ್ಪಲಿಗಳನ್ನು ಧರಿಸಿಕೊಂಡು ಸುಂದರವಾಗಿ ಕಾಣುತ್ತಿದ್ದರು. ಏಕೆಂದರೆ ಗಡಾಫಿ ಒಬ್ಬ ಸೌಂದರ್ಯ ಆರಾಧಕನಾಗಿದ್ದು ತನ್ನ ಸುತ್ತಲೂ ಸುಂದರವಾದ ವಸ್ತುಗಳು ಮತ್ತು ಸುಂದರವಾದ ಮನುಷ್ಯರಿರಬೇಕೆಂದು ಇಷ್ಟಪಡುತ್ತಿದ್ದ ಎಂದು ಆತನನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಆದರೆ ಅವರೆಲ್ಲಾ ಎಷ್ಟು ನಿಷ್ಟೆಯಿಂದ ಕೆಲಸ ಮಾಡುತ್ತಿದ್ದರೆಂದರೆ ತಮ್ಮ ನಾಯಕನ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಸಹ ಬಲಿ ಕೊಡಲು ಸಿದ್ಧರಿದ್ದರು. ಒಮ್ಮೆ ಅಂದರೆ 1998 ರಲ್ಲಿ ಗಡಾಫಿ ಲಿಬಿಯಾದ ಸಾರ್ವಜನಿಕ ಸಭೆಯೊಂದರಲ್ಲಿ ಭಾಷಣ ಮಾಡುವಾಗ ಕೆಲವು ಇಸ್ಲಾಂ ಮೂಲಭೂತವಾದಿಗಳು ಆತನ ಮೇಲೆ ಗುಂಡಿನ ಮಳೆಗರೆಯಲು ಪ್ರಯತ್ನಿಸಿದರು. ಆಗ ಆಯಿಷಾ ಎನ್ನುವ ಆಪ್ತ ಅಂಗರಕ್ಷಕಿ ಅವನಿಗೆ ಅಡ್ಡಲಾಗಿ ನಿಂತು ತಾನೇ ಗುಂಡುಗಳನ್ನು ತಾಕಸಿಕೊಂಡು ಅವನ ಪ್ರಾಣವನ್ನು ರಕ್ಷಿಸಿದಳು.
    ಅದೆಲ್ಲಾ ಸರಿ. ಗಡಾಫಿ ಯಾಕೆ ತನ್ನ ಅಂಗರಕ್ಷಕಿಯರೆಲ್ಲಾ ಕನ್ಯೆಯರೇ ಆಗಿರಬೇಕೆಂದು ಬಯಸುತ್ತಿದ್ದ? ಇದರ ಹಿಂದೆ ಏನು ಬಲವಾದ ಕಾರಣವಿತ್ತು? ಎಂದು ಕೇಳಿದರೆ ವಿದೇಶಿ ಮಾಧ್ಯಮಗಳು ಹೀಗೆ ಹೇಳುತ್ತವೆ; ಕನ್ಯೆಯರೇ ಯಾಕಿರಬೇಕಿತ್ತು ಎಂದರೆ ವಿಕೃತ ಕಾಮಿಯಾದ ಗಡಾಫಿ ತನ್ನ ಅಂಗರಕ್ಷಕಿಯರನ್ನು ಆಗಾಗ ಲೈಂಗಿಕವಾಗ ಶೋಷಿಸುತ್ತಿದ್ದನಲ್ಲದೇ ಅವರ ಮೀಸಲು ಮುರಿಯುವದರಲ್ಲಿ ಅವನು ಏನೋ ಒಂದು ವಿಲಕ್ಷಣ ತೃಪ್ತಿಯನ್ನು ಕಾಣುತ್ತಿದ್ದ ಎಂದು ಹೇಳುತ್ತವೆ. ಆದರೆ ಸ್ಥಳೀಯರ ಪ್ರಕಾರ ಇದೆಲ್ಲಾ ಬರೀ ಬೊಗಳೆ, ಆತ ಕನ್ಯೆಯರನ್ನೇ ಯಾಕೆ ತನ್ನ ಅಂಗರಕ್ಷಕಿಯರನ್ನಾಗಿ ಇಟ್ಟುಕೊಳ್ಳುತ್ತಿದ್ದನೆಂದರೆ ಪ್ರಾಚೀನ ಕಾಲದಲ್ಲಿ ಗ್ರೀಕರಲ್ಲಿ ಒಂದು ನಂಬಿಕೆಯಿತ್ತು; ಕನ್ಯೆಯರಾದವರಿಗೆ ತಮ್ಮ ಕೆಲಸದಲ್ಲಿ ಹೆಚ್ಚು ಏಕಾಗ್ರತೆ ಮತ್ತು ಗಮನವಿರುತ್ತದೆ ಹಾಗೂ ಅವರಿಗೆ ನಾವೇನೇ ಹೇಳಿದರೂ ಅದನ್ನು ಲಕ್ಷವಿಟ್ಟು ಮಾಡುತ್ತಾರೆ. ಈ ನಂಬಿಕೆಯನ್ನು ಗಡಾಫಿ ಕೂಡಾ ಬಲವಾಗಿ ನಂಬಿದ್ದ. ಹೀಗಾಗಿ ಅವನು ಸದಾ ಕನ್ಯೆಯರನ್ನೇ ತನ್ನ ಅಂಗರಕ್ಷಕಿಯರನ್ನಾಗಿ ನೇಮಿಸಿಕೊಳ್ಳುತ್ತಿದ್ದ.
    ಅಂದಹಾಗೆ ಗಡಾಫಿಯ ಅಷ್ಟು ಜನ ಅಂಗರಕ್ಷಕಿಯರು ಏನಾದರು? ಕ್ರಾಂತಿಯ ಸಮಯದಲ್ಲಿ ಕೆಲವರು ಬಂಧಿತರಾದರು, ಕೆಲವರು ನ್ಯಾಟೋ ದಾಳಿಯಲ್ಲಿ ಸತ್ತುಹೋದರು. ಇನ್ನು ಕೆಲವರು ಬೇರೆ ಬೇರೆ ದೇಶಗಳಲ್ಲಿ ತಲೆತಪ್ಪಿಸಿಕೊಂಡರು. ಯಾವಾಗ ಟ್ರಿಪೋಲಿ ಗಡಾಫಿಯ ಹಿಡಿತದಿಂದ ತಪ್ಪಿಹೋಯಿತೋ ಆಗ ತನ್ನ ಉಳಿದ ಅಷ್ಟು ಜನ ಅಂಗರಕ್ಷಕಿಯರಿಗೆ ಆತಇನ್ನು ನನ್ನನ್ನು ಬಿಟ್ಟುಬಿಡಿ. ನೀವು ಎಲ್ಲಾದರೂ ಪಾರಾಗಿ” ಎಂದು ಹೇಳಿದನಂತೆ. ಪ್ರಕಾರ ಪಾರಾಗುವ ಸಂದರ್ಭದಲ್ಲಿ ಕೆಲವರು ಸಿಕ್ಕಿಬಿದ್ದರು. ಕೆಲವರು ಬಂಡುಕೋರರ ಕೈಗೆ ಸಿಕ್ಕು ಸತ್ತುಹೋದರು. ಇನ್ನು ಕೆಲವರು ಬೇರೆ ಬೇರೆ ದೇಶಗಳಿಗೆ ಓಡಿಹೋದರು.
    ನರ್ಸುಗಳು:
    ಗಡಾಫಿಗೆ ನರ್ಸುಗಳ ಕ್ರೇಜು ವಿಪರೀತ ಇತ್ತು, ಹಾಗೆಂದೇ ಆತ ತನ್ನ ಮನೆ ತುಂಬಾ ನರ್ಸುಗಳನ್ನು ತುಂಬಿಕೊಂಡು ಅವರನ್ನು ಸಹ ಲೈಂಗಿಕವಾಗಿ ಶೋಷಿಸುತ್ತಿದ್ದ ಎಂದು ಎಂದಿನಂತೆ ವಿದೇಶಿ ಪತ್ರಿಕೆಗಳು ಮತ್ತು ಟೀವಿ ಮಾಧ್ಯಮಗಳು ಅದೇ ಹಳೆಯ ಹಾಡನ್ನೇ ಹಾಡಿದ್ದವು. ಆದರೆ ವಾಸ್ತವದಲ್ಲಿ ಬೇರೆಯದೇ ಸಂಗತಿ ಇತ್ತು. ಗಡಾಫಿಗೆ ತನ್ನ ಆರೋಗ್ಯದ ಬಗ್ಗೆ ವಿಪರೀತ ಕಾಳಜಿಯಿತ್ತು. ಅದಕ್ಕಾಗಿ ಆತ ತನ್ನ ಮತ್ತು ತನ್ನ ಕುಟುಂಬದವರ ಆರೋಗ್ಯ ತಪಾಸಣೆಗಾಗಿ ತನ್ನ ಮನೆಯಲ್ಲಿ ಇಬ್ಬರು ನುರಿತ ಲಿಬಿಯನ್ ಡಾಕ್ಟರುಗಳನ್ನು ಮತ್ತು ಐದು ಜನ ಉಕ್ರೇನಿಯನ್ ನರ್ಸುಗಳನ್ನು ಕಾಯಾಂಗಿ ನೇಮಿಸಿಕೊಂಡಿದ್ದ. ಅವರೆಲ್ಲಾ ಸರದಿಯ ಮೇಲೆ ಬಂದು ಕೆಲಸ ಮಾಡುತ್ತಿದ್ದರು. ಮೇಲಾಗಿ ಗಡಾಫಿಗೆ ಮುಂಚಿನಿಂದಲೂ ರಕ್ತದೊತ್ತಡ ಇದ್ದಿದ್ದರಿಂದ ಆಗಾಗ್ಗೆ ವೈದ್ಯಕೀಯ ಸಲಹ ಪಡೆಯಲು ನುರಿತ ವೈದ್ಯರು ಮತ್ತು ನರ್ಸುಗಳ ಪರಿವಾರವನ್ನೇ ಇಟ್ಟುಕೊಂಡಿದ್ದ. ಜೊತೆಗೆ ತಾನು ವಿದೇಶಕ್ಕೆ ಹೋದಾಗಲೆಲ್ಲಾ ಅವರನ್ನು ತನ್ನ ಸಂಗಡ ಕರೆದೊಯ್ಯುತಿದ್ದ. ಇದನ್ನೇ ನೆಪವಾಗಿಟ್ಟುಕೊಂಡು ಇಂಗ್ಲೀಷ್ ಪತ್ರಿಕೆಗಳು ಮತ್ತು ಟೀವಿ ಚಾನಲ್ ಗಳು ಅವನ ಮತ್ತು ಅವನ ನರ್ಸುಗಳ ಬಗ್ಗೆ ಕೆಟ್ಟದಾಗಿ ವರದಿ ಮಾಡಿದವು.
    ಆದರೆ ಗಡಾಫಿಯನ್ನು ತುಂಬಾ ಹತ್ತಿರದಿಂದ ನೋಡಿದ ಹಾಗೂ ಅವನ ಐದು ನರ್ಸುಗಳಲ್ಲಿ ಒಬ್ಬಳಾದ ಓಸ್ಕಾನಾ ಬಾಲಿನ್ಸ್ಕಾಯ ಗಡಾಫಿ ಬಗ್ಗೆ ಕೊಡುವ ಚಿತ್ರಣವೇ ಬೇರೆ. ಆಕೆ ಅವನನ್ನು ಕುರಿತು ಹೀಗೆ ಹೇಳುತ್ತಾಳೆ; ನಾವೆಲ್ಲರೂ (ಉಕ್ರೇನಿಯನ್ ನರ್ಸುಗಳು) ಅವನನ್ನು ‘ಡ್ಯಾಡಿ’ ಎಂದೇ ಕರೆಯುತ್ತಿದ್ದೆವು. ನಾವು ದಿನನಿತ್ಯ ಡ್ಯಾಡಿಯ ರಕ್ತದೊತ್ತಡವನ್ನು ಪರೀಕ್ಷಿಸಿ ಅದಕ್ಕೆ ತಕ್ಕನಾಗೆ ಮಾತ್ರೆಗಳನ್ನು ಕೊಡುತ್ತಿದ್ದೆವು. ಇದೊಂದನ್ನು ಬಿಟ್ಟರೆ ಡ್ಯಾಡಿ ಮಿಕ್ಕೆಲ್ಲಾ ವಿಷಯಗಳಲ್ಲಿ ಆರೋಗ್ಯವಂತನಾಗಿದ್ದ. ಡ್ಯಾಡಿ ನಮಗೆ ಕೆಲಸ ಕೊಟ್ಟ, ಒಳ್ಳೆ ಸಂಬಳ ಕೊಟ್ಟ, ಒಳ್ಳೆ ಬದುಕನ್ನು ಕೊಟ್ಟ. ಡ್ಯಾಡಿ ನಮ್ಮ ಬಗ್ಗೆ ಅತೀವ ಕಾಳಜಿಯನ್ನು ತೋರಿಸುತ್ತಿದ್ದು ನಾವಲ್ಲಿ ನಮ್ಮ ಮನೆ ಮತ್ತು ಮಕ್ಕಳೊಂದಿಗೆ ಸುಖವಾಗಿ ಇದ್ದೇವೋ ಇಲ್ವೋ ಎಂಬುದನ್ನು ಕೇಳಿ ತಿಳಿದುಕೊಳ್ಳುತ್ತಿದ್ದ. ಆತ ಪ್ರತಿ ವರ್ಷ ಸಪ್ಟಂಬರ್ 1 ರಂದು (ಅದು ಆತ ಅಧಿಕಾರಕ್ಕೆ ಬಂದ ದಿನ) ನಮಗೆ ಬೆಲೆಬಾಳುವ ಉಡುಗೂರೆಗಳನ್ನು ಹಾಗೂ ತನ್ನ ಭಾವ ಚಿತ್ರವಿರುವ ಬಂಗಾರದ ವಾಚನ್ನು ಗಿಫ್ಟಾಗಿ ಕೊಡುತ್ತಿದ್ದನಲ್ಲದೇ ನಮ್ಮೆಲ್ಲರನ್ನೂ ಗೌರವದಿಂದ ಕಾಣುತ್ತಿದ್ದ. ದುರಂತವೆಂದರೆ ಆತ ನಮ್ಮನ್ನು ಮತ್ತು ತನ್ನ ಅಂಗರಕ್ಷಕಿಯರನ್ನು ಲೈಂಗಿಕವಾಗಿ ಹಿಂಸಿಸುತ್ತಿದ್ದ ಎಂಬ ಗಾಳಿಸುದ್ದಿಯನ್ನು ಯಾರು ಹಬ್ಬಿಸಿದರೋ, ಯಾಕೆ ಹಬ್ಬಿಸಿದರೋ ಗೊತ್ತಿಲ್ಲ. ಆದರೆ ಡ್ಯಾಡಿ ಯಾವತ್ತೂ ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಿರಲಿಲ್ಲ. 
     
    ನಮ್ಮ ವೇಷ ಭೂಷಣಗಳ ಬಗ್ಗೆ ಕೆಲವು ಕಟ್ಟಳೆಗಳನ್ನು ವಿಧಿಸಿದ್ದ ಅಷ್ಟೇ. ನಾವು ಲಿಪ್ಸ್ಟಿಕ್ ಹಾಕುವದಾಗಲಿ, ಬಣ್ಣಬಣ್ಣದ ಉಡುಗೆಗಳನ್ನು ತೊಡುವದನ್ನಾಗಲಿ ಮಾಡುವಂತಿರಲಿಲ್ಲ. ನರ್ಸುಗಳು ಸೇವೆಗೆ ಒತ್ತು ಕೊಡಬೇಕೇ ಹೊರತು ವೇಷಭೂಷಣಕ್ಕಲ್ಲ ಎನ್ನುವದು ಅವನ ಅಭಿಪ್ರಾಯವಾಗಿತ್ತು. ನಾವು ಡ್ಯಾಡಿಯನ್ನು ಅವನ ರಕ್ತದೊತ್ತಡವನ್ನು ಪರೀಕ್ಷೆ ಮಾಡುವಾಗ ಮಾತ್ರ ಮುಟ್ಟುತ್ತಿದ್ದೆವು. ಆದರೂ ನಮ್ಮ ಬಗ್ಗೆ ಕೆಟ್ಟ ಸುದ್ದಿಯನ್ನು ಹಬ್ಬಿಸಿದರು. ಪ್ರತಿನಿತ್ಯ ಅವನ ಮನೆಯ ಕೌಂಪೊಂಡಿನೊಳಗಿರುವ ಉದ್ಯಾನವನದಲ್ಲಿ ಅವನನ್ನು ವಾಕ್ ಮಾಡಿಸುತ್ತಿದ್ದೆವು. ಡ್ಯಾಡಿ ಒಬ್ಬ ಒಳ್ಳೆ ಮನಶಾಸ್ತ್ರಜ್ಞನಾಗಿದ್ದ. ಆತ ಎಂಥ ಒಳ್ಳೆ ಮನಶಾಸ್ತ್ರಜ್ಞನಾಗಿದ್ದನೆಂದರೆ ಯಾರನ್ನಾದರು ಮೊಟ್ಟಮೊದಲಬಾರಿಗೆ ಭೇಟಿ ಮಾಡಿದಾಗ ಅವರ ಕೈ ಕುಲುಕುವದರ ಮೂಲಕ ಮತ್ತು ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುವದರ ಮೂಲಕ ಅವರು ಎಂಥ ವ್ಯಕ್ತಿ ಎಂಬುದನ್ನು ಆ ಕ್ಷಣದಲ್ಲಿಯೇ ಗ್ರಹಿಸಿಬಿಡುತ್ತಿದ್ದ.
    ಡ್ಯಾಡಿ ಲಿಬಿಯಾವನ್ನು ಕಟ್ಟಿ ಬೆಳಸಿದ್ದಲ್ಲದೇ ಲಿಬಿಯನ್ ರನ್ನು ಒಂಟೆ ಡುಬ್ಬದ ಮೇಲಿಂದ ಇಳಿಸಿ ಕಾರಿನಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದ. ಅಂಥ ಒಳ್ಳೆ ವ್ಯಕ್ತಿಯನ್ನು ಕೊಲ್ಲಲು ಅವರಿಗೆ ಮನಸ್ಸಾದರು ಹೇಗೆ ಬಂತು? ಎಂದು ನಿಟ್ಟುಸಿರಿಡುತ್ತಾಳೆ.   
    ಅಂದಹಾಗೆ ಇದುವರೆಗೂ ಬರೀ ಗಡಾಫಿಯ ಬಗ್ಗೆ ಬರೆಯುತ್ತಿದ್ದ ನಾನು ಇನ್ನು ಮುಂದೆ ಲಿಬಿಯಾದಲ್ಲಿನ ನನ್ನ ಅನುಭವಗಳು,  ಇಲ್ಲಿಯ ಜನಜೀವನ ಹಾಗೂ ಇತರೆ ವಿಷಯಗಳನ್ನು ಕುರಿತು ಬರೆಯುತ್ತೇನೆ. ಅಲ್ಲಿಯವರೆಗೆ ಕಾಯುತ್ತಿರಿ!      
     ಉದಯ್ ಇಟಗಿ
    ಫೋಟೋಗಳು:  ಅಂತರ್ಜಾಲ ಕೃಪೆ


    ಆಗಂತುಕ

  • ಬಿಸಿಲ ಹನಿ

  • ನಿಮಗೆ ನಿರ್ಧಿಷ್ಟ ಯೋಜನೆಗಳಿಲ್ಲ. ನೀವು ಗೊತ್ತುಗುರಿಯಿಲ್ಲದೆ ಮನೆಯಿಂದ ದೂರದೆಲ್ಲೆಲ್ಲೋ ಅಂಡಲೆಯುತ್ತಿರುತ್ತೀರಿ. ನಿಮ್ಮ ಬಳಿ ಹಣವಿಲ್ಲ. ನಿಮಗೆ ಸ್ಥಳೀಯ ಭಾಷೆ ಗೊತ್ತಿಲ್ಲ. ನೀವು ಹಿಂದಿ ಮತ್ತು ಇಂಗ್ಲೀಷಿನಲ್ಲಿ ಮಾತ್ರ ಮಾತನಾಡಬಲ್ಲಿರಿ. ಆದರೆ ಅಲ್ಲಿನ ಜನಕ್ಕೆ ಈ ಭಾಷೆಗಳ್ಯಾವವು ಅರ್ಥವಾಗಲಾರವು. ಇಂಥ ಪರಿಸ್ಥಿತಿಲಿ ನೀವು ಖಂಡಿತ ವಿಪತ್ತಿಗೆ ಸಿಲುಕುತ್ತೀರಿ ಹಾಗೂ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತೀರಿ.
    ನೀವು ಅಪಾಯದ ಸುಳಿಯಲ್ಲಿ ಸಿಲುಕಿರುತ್ತೀರಿ. ಆಗ ಅಪ್ಪಟ ಅಪರಿಚಿತನೊಬ್ಬ ಬಂದು ನಿಮ್ಮನ್ನು ಕಾಪಾಡಿದರೆ ನಿಮಗೇನನಿಸುತ್ತದೆ? ವರ್ಷಗಳುರುಳಿದರೂ ನೀವು ಆಗಿಂದಾಗ್ಗೆ ಆ ಘಟನೆಯನ್ನು ಮೆಲಕುಹಾಕುತ್ತಿರುತ್ತೀರಿ ಮತ್ತು ಆ ವ್ಯಕ್ತಿಯ ಉಪಕಾರವನ್ನು ಸ್ಮರಿಸುತ್ತಿರುತ್ತೀರಲ್ಲವೇ? 
    ಇದೀಗ ನಾನು ನನಗಾದ ಇಂಥದೇ ಅನುಭವವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ.
    ನನಗೆ ನನ್ನನ್ನೂ ಸೇರಿಸಿ ಮನುಷ್ಯರ ಬಗ್ಗೆ ಕೆಲವು ಅಸ್ಪಷ್ಟ ಕಲ್ಪನೆಗಳಿವೆ. ನಮ್ಮ ಸುತ್ತ ಒಳ್ಳೆಯವರಿದ್ದಾರೆ. ಕೆಟ್ಟವರಿದ್ದಾರೆ. ಕಳ್ಳರಿದ್ದಾರೆ. ಸುಳ್ಳರಿದ್ದಾರೆ. ಮಳ್ಳರಿದ್ದಾರೆ. ರೋಗಿಷ್ಟರಿದ್ದಾರೆ. ಇವರೆಲ್ಲರ ನಡುವೆ ನಾವು ಹುಶಾರಾಗಿ ಬದುಕಬೇಕಿದೆ. ಏಕೆಂದರೆ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚು. ಆದರೆ ಕೆಲವು ಸಾರಿ ನಮ್ಮ ಲೆಕ್ಕಾಚಾರ ತಲೆಕೆಳಗಾಗುತ್ತದೆ. ಒಮ್ಮೊಮ್ಮೆ ನಾವು ಕೆಲವರನ್ನು ಒಳ್ಳೆಯವರೆಂದುಕೊಳ್ಳುತ್ತೇವೆ. ಆದರೆ ಅವರು ಕೆಲವು ಸಲ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಇನ್ನು ಕೆಲವೊಮ್ಮೆ ಕೆಲವರನ್ನು ಕೆಟ್ಟವರೆಂದುಕೊಂಡಿರುತ್ತೇವೆ. ಆದರೆ ಅವರು ಒಮ್ಮೊಮ್ಮೆ ಒಳ್ಳೆಯದಾಗಿ ನಡೆದುಕೊಂಡು ನಮ್ಮನ್ನು ಅಚ್ಚರಿಗೊಳಿಸುತ್ತಾರೆ. ಈ ಸತ್ಯ ನಮಗೆ ಗೊತ್ತಾಗುವದು ನಮಗೂ ಇಂಥದೊಂದು ಅನುಭವ ಆದಾಗಲೇ!
    ಇದೀಗ ನನಗಾದ ಅಂಥ ಅನುಭವವೊಂದನ್ನು ನಾನಿಲ್ಲಿ ದಾಖಲಿಸಲು ಹೊರಟಿದ್ದೇನೆ. ಬಹುಶಃ, ನಿಮಗೆ ಇದೊಂದು ಕ್ಷುಲ್ಲಕ ವಿಷಯ ಅಂತಾ ಅನಿಸಬಹುದೇನೋ!
    ಅದೊಂದು ನಗರ. ಮನೆಯಿಂದ ಸುಮಾರು ಸಾವಿರದಾ ಐದನೂರು ಮೈಲಿಗಳಷ್ಟು ದೂರವಿರುವ ಕಣಿವೆ ಪ್ರದೇಶದಲ್ಲಿನ ಊರು. ಅಲ್ಲಿನ ಜನರಿಗೆ ಕರುಣೆ ಎಂಬುದೇ ಗೊತ್ತಿರಲಿಲ್ಲ. ಅವರು ಭಯಂಕರ ಕ್ರೂರಿಗಳಾಗಿದ್ದರು. ಕೊಲೆ, ಸುಲಿಗೆ, ದರೋಡೆ ಹಾಗೂ ಪಿಕ್-ಪಾಕೇಟ್ ಮಾಡುವದು ಅವರ ದಿನನಿತ್ಯದ ಕಾಯಕವಾಗಿತ್ತು. ವೃತ್ತಿಯಿಂದ ಅವರೆಲ್ಲಾ ಸೈನಿಕರು. ಆದರೆ ಅವರಲ್ಲಿ ಕೆಲವರು ದೂರದ ಊರುಗಳಿಗೆ ಹೋಗಿ ಹಣವನ್ನು ಕೈಗಡ ಕೊಟ್ಟು ಅದರಿಂದ ಬರುವ ಬಡ್ಡಿಯ ಮೇಲೆ ಬದುಕುತ್ತಿದ್ದರು. ಇನ್ನು ಕೆಲವರು ದೊಡ್ಡ ದೊಡ್ಡ ನಗರಗಳಲ್ಲಿನ ಬ್ಯಾಂಕುಗಳಲ್ಲೋ, ಮಿಲ್ಲುಗಳಲ್ಲೋ, ಇಲ್ಲವೇ ವಾಣಿಜ್ಯ ಮಳಿಗೆಗಳಲ್ಲೋ ವಾಚ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆಲ್ಲಾ ಹಣವೊಂದೇ ಮುಖ್ಯವಾಗಿತ್ತು. ಹಣಕ್ಕೋಸ್ಕರ ಅವರು ಏನು ಬೇಕಾದರು ಮಾಡುತ್ತಿದ್ದರು; ಕೊಲೆಯನ್ನು ಸಹ.
    ನಾನು ಅದೇ ಊರಲ್ಲಿ ಕೊಳಚೆ ಪ್ರದೇಶವೊಂದರಲ್ಲಿ ಅತಿ ಸಣ್ಣದಾದ ಮತ್ತು ಶುಚಿಯಲ್ಲದ ರೂಮೊಂದರಲ್ಲಿ ವಾಸಿಸುತ್ತಿದ್ದೆ. ನಾನಲ್ಲಿ ಪ್ರತಿನಿತ್ಯ ಅಲ್ಲಿಗೆ ವಲಸೆ ಬಂದ ಆಳುಗಳಿಗೆ ಬೆಳಿಗ್ಗೆ ಒಂಬತ್ತರಿಂದ ರಾತ್ರಿ ಹನ್ನೊಂದರವರೆಗೆ ಇಂಗ್ಲೀಷನ್ನು ಹೇಳಿಕೊಡುತ್ತಿದ್ದೆ. ನಾನವರಿಗೆ ಇಂಗ್ಲೀಷಿನಲ್ಲಿ ಅವರ ವಿಳಾಸವನ್ನು ಹೇಗೆ ಬರೆಯಬೇಕೆಂಬುದನ್ನು ಹೇಳಿಕೊಡುತ್ತಿದ್ದೆ. ಅವರಿಗೆಲ್ಲಾ ತಮ್ಮ ವಿಳಾಸ ಬರೆಯುವದನ್ನು ಕಲಿಯುವದೇ ಒಂದು ದೊಡ್ಡ ವಿದ್ಯಾಭ್ಯಾಸವಾಗಿತ್ತು. ಏಕೆಂದರೆ ದೂರದ ಊರಿನಲ್ಲಿರುವ ತಮ್ಮ ಬಂಧು-ಬಳಗಕ್ಕೆ ಆಗಿಂದಾಗ್ಗೆ ಪತ್ರವನ್ನು ತಮ್ಮದೇ ಭಾಷೆಯಲ್ಲಿ ಬರೆಯುತ್ತಿದ್ದರು. ಆದರೆ ವಿಳಾಸವನ್ನು ಮಾತ್ರ ಇಂಗ್ಲೀಷಿನಲ್ಲಿ ಬರೆಯಬೇಕಾಗುತ್ತಿತ್ತು. ಹೀಗಾಗಿ ಅಂಚೆ ಕಛೇರಿಗಳಲ್ಲಿ ವಿಳಾಸಗಳನ್ನು ಇಂಗ್ಲೀಷಿನಲ್ಲಿ ಬರೆಯಲು ಜನರಿದ್ದರು. ಆದರೆ ಅವರು ಒಂದರಿಂದ ನಾಲ್ಕಾಣೆಯಷ್ಟು ಹಣವನ್ನು ತೆಗೆದುಕೊಳ್ಳುತ್ತಿದ್ದರು.
    ಹಾಗಾಗಿ ನಾನು ಅವರಿಗೆ ಸ್ವಲ್ಪ ಹಣ ಉಳಿತಾಯವಾಗಲಿ ಎಂಬ ಉದ್ದೇಶದಿಂದ ಅವರಿಗೆ ವಿಳಾಸ ಬರೆಯುವದನ್ನು ಚನ್ನಾಗಿ ಹೇಳಿಕೊಟ್ಟೆ.
    ಆ ದಿನಗಳಲ್ಲಿ ನಾನು ನನ್ನ ಬೆಳಗಿನ ಟೀ ಮತ್ತು ಮಧ್ಯಾಹ್ನದ ಊಟದ ಖರ್ಚನ್ನು ಉಳಿಸುವದಕ್ಕೋಸ್ಕರ ದಿನವಿಡಿ ಮಲಗಿ ಸಂಜೆ ನಾಲ್ಕು ಘಂಟೆಗೆ ಏಳುತ್ತಿದ್ದೆ.
    ಎಂದಿನಂತೆ ನಾನು ಒಂದು ದಿನ ಸಂಜೆ ನಾಲ್ಕು ಘಂಟೆಗೆ ಎದ್ದು, ದಿನನಿತ್ಯದ ಕರ್ಮಗಳನ್ನೆಲ್ಲಾ ಮುಗಿಸಿ ಊಟಕ್ಕಾಗಿ ಹೊರಗೆ ನಡೆದೆ. ನಾನು ಆವತ್ತು ಕೋಟು ಹಾಕಿಕೊಂಡಿದ್ದೆ ಹಾಗೂ ಆ ಕೋಟಿನ ಕಿಸೆಯಲ್ಲಿ ನನ್ನ ವ್ಯಾಲೆಟ್ ಇಟ್ಟಿದ್ದೆ. ಅದರಲ್ಲಿ ಆವತ್ತಿನ ನನ್ನ ಇಡಿ ಜೀವಮಾನದ ಸಂಪಾದನೆ ಹದಿನಾಲ್ಕು ರೂಪಾಯಿಗಳಿದ್ದವು.
    ನಾನು ತುಂಬಾ ಜನಸಂದಣಿಯಿದ್ದ ಹೋಟೆಲ್ ವೊಂದಕ್ಕೆ ಹೋದೆ. ಅಲ್ಲಿ ಚಪಾತಿ ಮತ್ತು ಮಾಂಸದ ಸಾರಿನ ಭರ್ತಿ ಊಟವನ್ನು ಮಾಡಿದೆ. ಜೊತೆಗೆ ಟೀಯನ್ನೂ ಕುಡಿದೆ. ಒಟ್ಟು ಹನ್ನೊಂದು ಆಣೆಗೆ  ಬಿಲ್ ಬಂತು.
    ಬಿಲ್ ಕೊಡಲು ನಾನು ಕೋಟಿನ ಕಿಸೆಯೊಳಗೆ ಕೈ ಹಾಕಿದೆ. ನನ್ನ ಕಿಸೆಯೊಳಗಿನ ನನ್ನ ವ್ಯಾಲೆಟ್ ಮಾಯವಾಗಿತ್ತು.  ತಕ್ಷಣ ನಾನು ಧಾರಾಳವಾಗಿ ಬೆವರಲಾರಂಭಿಸಿದೆ. ಆಗಷ್ಟೇ ತಿಂದಿದ್ದೆಲ್ಲಾ ಆ ಕ್ಷಣಕ್ಕೆ ಜೀರ್ಣವಾಗಿ ಹೋದಂತಾಯಿತು.
    ನಾನು ಹೇಳಿದೆ, “ಯಾರೋ ನನ್ನ ವ್ಯಾಲೆಟ್ ನ್ನು ಎಗರಿಸಿದ್ದಾರೆ.”
    ಅಲ್ಲಿ ತುಂಬಾ ಜನರಿದ್ದರು. ಒಮ್ಮೆಗೆ ಅವರೆಲ್ಲಾ ಬೆಚ್ಚಿಬೀಳುವಂತೆ ಹೋಟೆಲ್ ಮಾಲಿಕ ದೊಡ್ಡದಾಗಿ ಗಹಗಹಿಸಿ ನಕ್ಕ. ಆತ ನನ್ನ ಕೋಟಿನ ಲೇಪಲನ್ನು ಹಿಡಿದು ಎಳೆಯುತ್ತಾ ಕಿರುಚಿದ, “ಈ ತೆರದ ಆಟಗಳು ನನ್ನ ಮುಂದೆ ನಡೆಯುವದಿಲ್ಲ. ಸುಮ್ಮನೆ ಹಣವಿಟ್ಟು ಹೋಗು......ಇಲ್ಲಾ ಅಂದ್ರೆ ನಿನ್ನ ಕಣ್ಣು ಕೀಳುತ್ತೇನೆ.” 
    ನಾನು ನನ್ನ ಸುತ್ತಲಿನ ಜನರನ್ನು ದಯನೀಯವಾಗಿ ನೋಡಿದೆ. ಅವರುಗಳ ಮುಖದ ಮೇಲೆ ಚೂರೇ ಚೂರು ಕರುಣೆ ಎಂಬುದು ಕಾಣಿಸಲಿಲ್ಲ. ಬದಲಿಗೆ ಅವರು ಹಸಿದ ತೋಳುಗಳಂತೆ ಕಾಣಿಸಿದರು.
    ಅವನು ನನ್ನ ಕಣ್ಣುಗಳನ್ನು ಕೀಳುತ್ತೇನೆ ಎಂದು ಹೇಳಿದ ಮೇಲೆ ಖಂಡಿತ ಕೀಳುತ್ತಾನೆ.
    ನಾನು ಹೇಳಿದೆ, “ನನ್ನ ಕೋಟು ಇಲ್ಲೇ ಇರಲಿ. ನಾನು ಈಗ ಹೋಗಿ ದುಡ್ಡು ತೆಗೆದುಕೊಂಡು ಬರುತ್ತೇನೆ.”
    ಆತ ಮತ್ತೊಮ್ಮೆ ಗಹಗಹಿಸಿ ನಗುತ್ತಾ ನನ್ನ ಕೋಟನ್ನು ತೆಗೆಯಲು ಹೇಳಿದ.
    ನಾನು ನನ್ನ ಕೋಟನ್ನು ತೆಗೆದೆ.
    ಅವನು ನನ್ನ ಷರ್ಟನ್ನು ತೆಗೆಯಲು ಹೇಳಿದ.
    ನಾನು ನನ್ನ ಷರ್ಟನ್ನು ತೆಗೆದೆ.
    ಅವನು ನನ್ನ ಶೂಗಳನ್ನು ಕಳಚಿಡಲು ಹೇಳಿದ.
    ನಾನು ಕಳಚಿಟ್ಟೆ.
    ಕೊನೆಯದಾಗಿ ಅವನು ನನ್ನ ಪ್ಯಾಂಟನ್ನು ಬಿಚ್ಚಲು ಹೇಳಿದ.
    ನನಗೆ ಆ ಇಡಿ ಯೋಜನೆ ನನ್ನನ್ನು ಬೆತ್ತಲುಗೊಳಿಸಿ, ನನ್ನ ಕಂಗಳನ್ನು ಕಿತ್ತು, ಹೊರಗೆ ಕಳಿಸುವಂತೆ ಭಾಸವಾಯಿತು.
    “ಒಳಗಡೆ ಏನೂ ಇಲ್ಲ.” ನಾನು ಮುಜುಗುರದಿಂದ ಹೇಳಿದೆ.
    ಎಲ್ಲರೂ ಗೊಳ್ಳೆಂದು ನಕ್ಕರು.
    ಹೋಟೆಲ್ ಮಾಲಿಕ ಹೇಳಿದ, “ನಂಗೆ ಅನುಮಾನವಿದೆ. ಒಳಗಡೆ ಏನಾದರು ಇದ್ದಿರಲೇಬೇಕು.”
    ಸುಮಾರು ಐವತ್ತು ಜನ ಅವನ ಮಾತನ್ನೇ ಪುನರುಚ್ಛರಿಸಿದರು, “ಹೌದ್ಹೌದು,  ಒಳಗಡೆ ಏನಾದರು ಇದ್ದಿರಲೇಬೇಕು!
    ನನ್ನ ಕೈಗಳು ನನ್ನ ಪ್ಯಾಂಟನ್ನು ಬಿಚ್ಚಲು ನಿರಾಕರಿಸಿದವು. ನಾನು ನನ್ನ ಕಲ್ಪನೆಯಲ್ಲಿ ಒಬ್ಬ ಮನುಷ್ಯ ಜನಸಂದಣಿಯಲ್ಲಿ ಕಣ್ಣುಗಳನ್ನು ಕಳೆದುಕೊಂಡು ಬೆತ್ತಲಾಗಿ ನಿಂತಿದ್ದನ್ನು ಊಹಿಸಿಕೊಂಡೆ. ಓ, ದೇವರೇ ಎಂಥ ಸಂದಿಗ್ಧ ಪರಿಸ್ಥಿತಿಗೆ ದೂಡಿದೆ ನನ್ನನ್ನು! ಎಂಥ ಕಠಿಣ ಪರೀಕ್ಷೆಗೆ ಒಡ್ಡಿದೆ! ಮುಗಿದು ಹೋಗಲಿ......ಒಮ್ಮೆ ಮುಗಿದು ಹೋಗಲಿ.......ಈ ಪರೀಕ್ಷೆ ಗಿರೀಕ್ಷೆ  ಎಲ್ಲ!
    ನಾನು ನನ್ನ ಪ್ಯಾಂಟಿನ ಒಂದೊಂದೇ ಗುಂಡಿಗಳನ್ನು ಬಿಚ್ಚತೊಡಗಿದೆ. ಅಷ್ಟರಲ್ಲಿ ದನಿಯೊಂದು ಕೇಳಿಸಿತು, “ನಿಲ್ಲಿ, ನಾನು ಹಣ ಕೊಡುತ್ತೇನೆ!”
    ಎಲ್ಲರೂ ದನಿ ಬಂದ ದಿಕ್ಕಿನತ್ತ ತಿರುಗಿದರು.
    ಅಲ್ಲಿ ಆರಡಿ ಎತ್ತರದ ಗೌರವರ್ಣದ ವ್ಯಕ್ತಿಯೊಬ್ಬ ನಿಂತಿದ್ದ. ಆತ ಬಿಳಿ ಬಟ್ಟೆಗಳನ್ನು ಧರಿಸಿದ್ದು ತಲೆಗೆ ಪೇಟವನ್ನು ಸುತ್ತಿದ್ದ. ಆತನಿಗೆ ದಪ್ಪ ಮೀಸೆ ಮತ್ತು ನೀಲಿ ಕಂಗಳಿದ್ದವು.
    ಆ ಪ್ರದೇಶದಲ್ಲಿ ನೀಲಿ ಕಂಗಳು ಸಾಮಾನ್ಯವಾಗಿದ್ದವು. ಅವನು ಮುಂದೆ ಬಂದು ಹೋಟೆಲ್ ಮಾಲಿಕನನ್ನು ಕೇಳಿದ, “ಎಷ್ಟು ಅಂತಾ ಹೇಳಿದಿರಿ?”
    “ಹನ್ನೊಂದು ಆಣೆ.”
    ಆತ ಹಣವನ್ನು ಸಂದಾಯ ಮಾಡಿದ. ಆಮೇಲೆ ನನ್ನೆಡೆಗೆ ತಿರುಗಿ, “ನಿನ್ನ ಬಟ್ಟೆಗಳನ್ನು ಹಾಕಿಕೋ.” ಎಂದು ಹೇಳಿದ.
    ನಾನು ಬಟ್ಟೆಗಳನ್ನು ಹಾಕಿಕೊಂಡೆ.
    “ಬಾ,” ಅವನು ನನ್ನನ್ನು ಕರೆದ. ನಾನು ಅವನೊಂದಿಗೆ ಹೊರಟೆ. ಅವನಿಗೆ ಕೃತಜ್ಞತೆ ಸಲ್ಲಿಸಲು ನನ್ನ ಬಳಿ ಶಬ್ದಗಳಿರಲಿಲ್ಲ. ನಾನವನಿಗೆ ಹೇಳಿದೆ “ನೀನು ತುಂಬಾ ಒಳ್ಳೆಯವನು. ನಿನ್ನಷ್ಟು ಒಳ್ಳೆಯವನನ್ನು ನಾನು ಇದುವರೆಗೂ ನೋಡಿಲ್ಲ.”
    ಅವನು ನಕ್ಕ.
    “ಏನು ನಿನ್ನ ಹೆಸರು?” ಅವನು ಕೇಳಿದ. ನಾನವನಿಗೆ ನನ್ನ ಹೆಸರು ಮತ್ತು ಎಲ್ಲಿಂದ ಬಂದಿರುವೆನೆಂಬುದನ್ನು ಹೇಳಿದೆ.
    ನಾನು ಅವನ ಹೆಸರು ಕೇಳಿದೆ. ಅವನು “ನನಗೆ ಹೆಸರಿಲ್ಲ.” ಎಂದು ಹೇಳಿದ.
    “ಹಾಗಾದ್ರೆ, ನಿನ್ನ ಹೆಸರು “ಕರುಣೆ” ಇರಬೇಕು” ನಾನು ಹೇಳಿದೆ.
    ಅದನ್ನು ಕೇಳಿ ಆತ ನಗಲಿಲ್ಲ. ನಾವು ನಡೆಯುತ್ತಾ ಒಂದು ನಿರ್ಜನ ಸೇತುವೆಯ ಬಳಿ ಬಂದೆವು.
    ಅವನು ಸುತ್ತಲೂ ಒಮ್ಮೆ ನೋಡಿದ. ಅಲ್ಲಿ ಯಾರೂ ಇರಲಿಲ್ಲ. “ಇಲ್ಕೇಳು, ನೀನು ಹಿಂದಿರುಗಿ ನೋಡದೆ ಇಲ್ಲಿಂದ ಹೋಗು. ಒಂದುವೇಳೆ ಯಾರಾದರು ನೀನು ನನ್ನನ್ನು ನೋಡಿರುವಿಯಾ ಎಂದು ನಿನ್ನನ್ನು ಕೇಳಿದರೆ ಇಲ್ಲ ಎಂದು ಹೇಳು.”   
    ನನಗೆ ಅರ್ಥವಾಯಿತು.
    ಅವನು ತನ್ನ ಜೇಬುಗಳಿಂದ ಸುಮಾರು ಐದು ವ್ಯಾಲೆಟ್ ಗಳನ್ನು ಹೊರತೆಗೆದನು. ಆ ಐದರಲ್ಲಿ ನಂದೂ ಒಂದಿತ್ತು.
    “ಇವುಗಳಲ್ಲಿ ನಿಂದ್ಯಾವುದು?”
    ನಾನು ನನ್ನ ವ್ಯಾಲೆಟ್ ಕಡೆ ತೋರಿಸಿದೆ.
    “ಅದನ್ನು ತೆಗೆದು ನೋಡು.”
    ನಾನು ತೆಗೆದು ನೋಡಿದೆ. ಅದರಲ್ಲಿ ನನ್ನ ದುಡ್ಡು ಹೇಗಿತ್ತೋ ಹಾಗೆಯೇ ಇತ್ತು. ನಾನದನ್ನು ನನ್ನ ಜೇಬಿನಲ್ಲಿಟ್ಟುಕೊಂಡೆ.
    “ಹೋಗು, ದೇವರು ನಿನಗೆ ಒಳ್ಳೇದು ಮಾಡಲಿ.” ಅವನು ಹೇಳಿದ.
    “ನಿನಗೂ ಅಷ್ಟೇ, ಆ ದೇವರು ಒಳ್ಳೇದು ಮಾಡಲಿ” ನಾನು ಪುನರುಚ್ಛರಿಸಿದೆ.

    ಮೂಲ ಮಲಯಾಳಂ: ವೈಕಂ ಮೊಹಮ್ಮದ್ ಬಶೀರ್
    ಇಂಗ್ಲೀಷಿಗೆ: ವಿ. ಅಬ್ದುಲ್ಲಾ
    ಕನ್ನಡಕ್ಕೆ: ಉದಯ್ ಇಟಗಿ

     
    ಈ ಕಥೆ ಇವತ್ತಿನ (10-08-2014) ಉದಯವಾಣಿಯಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ.
    http://epaper.udayavani.com/Display.aspx?Pg=H&Edn=MN&DispDate=8/10/2014