Demo image Demo image Demo image Demo image Demo image Demo image Demo image Demo image

ಲಿಬಿಯನ್‍ರು ಮತ್ತು ಹಿಂದಿ ಸಿನಿಮಾಗಳು

  • ಮಂಗಳವಾರ, ಜೂನ್ 25, 2013
  • ಬಿಸಿಲ ಹನಿ
  • ನಾವು ಲಿಬಿಯಾಕ್ಕೆ ಬಂದ ಹೊಸತರಲ್ಲಿ ನಮಗಿನ್ನೂ ಇಲ್ಲಿ ಪ್ರಸಾರವಾಗುವ ಟೀವಿ ಚಾನಲ್‍ಗಳ ಬಗ್ಗೆ ಏನೆಂದರೆ ಏನೂ ಗೊತ್ತಿರಲಿಲ್ಲ. ಹೀಗಿರುವಾಗ ನಾವು ಮನೆಯಿಂದ ಹೊರಗಡೆ ಹೋದಾಗಲೆಲ್ಲಾ ನಮಗೆ ಹೊಸದಾಗಿ ಸಿಗುವ ಯಾವುದೇ ಲಿಬಿಯನ್ ನಮ್ಮನ್ನು ನೋಡಿ “ಓ. ಹಿಂದ್ ಹಿಂದ್! (ಓ, ಇಂಡಿಯನ್!)” ಎಂದು ಉದ್ಗಾರ ತೆಗೆಯುತ್ತಾ ಹತ್ತಿರ ಬಂದು “ಕೆಫೆಹಲಾಲ್? (ಹೇಗಿದ್ದೀರಿ?) ಎಂದು ಉಭಯಕುಶಲೋಪಾರಿಯನ್ನು ವಿಚಾರಿಸುತ್ತಾ ನಮ್ಮನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಬೆನ್ನಹಿಂದೆಯೇ ನೇರವಾಗಿ ನಮ್ಮನ್ನು ಹಿಂದಿ ಸಿನಿಮಾಕ್ಕೆ ಸಂಬಂಧಪಟ್ಟಹಾಗೆ “ನಿಮಗೆ ಅಮಿತಾಬ್ ಬಚ್ಚನ್ ಗೊತ್ತೆ? ಶಾರುಖ್ ಖಾನ್ ನಿಮ್ಮ ಮನೆಯ ಪಕ್ಕದಲ್ಲಿಯೇ ಇರುವನೆ? ಐಶ್ಚರ್ಯಾ ರೈ ಅಮಿತಾಬ್ ಬಚ್ಚನ್ ಸೊಸೆಯಂತೆ, ಹೌದೆ? ಕತ್ರಿನಾ ಕೈಫ್ ಅದೆಷ್ಟು ಸುಂದರವಾಗಿದ್ದಾಳೆ? ಧರ್ಮೇಂದರ್ ಈಗಲೂ ನಟಿಸುತ್ತಾನೆಯೇ? ಹೇಮಾ ಮಾಲಿನಿ ಹೇಗಿದ್ದಾಳೆ? ಸಲ್ಮಾನ್ ಖಾನ್ ಯಾಕಿನ್ನೂ ಮದುವೆಯಾಗಿಲ್ಲ? ನಿಮ್ಮ ಬಳಿ ಹಿಂದಿ ಸಿನಿಮಾ ಹಾಡುಗಳಿದ್ದರೆ ನಮ್ಮ ಫ್ಲ್ಯಾಶ್‍ (ಪೆನ್‍ ಡ್ರೈವ್) ನಲ್ಲಿ ಹಾಕಿಕೊಡುತ್ತೀರಾ?” ಹೀಗೆ ಶಾರುಖ್ ಖಾನ್, ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮುಂತಾದವರೆಲ್ಲಾ ನಮ್ಮ ಮನೆಯ ಪಕ್ಕದಲ್ಲಿರುವರೇನೋ, ಅಥವಾ ಅವರೆಲ್ಲಾ ನಮ್ಮ ಸ್ನೇಹಿತರೋ, ನೆಂಟರೇನೋ ಎಂಬಂತೆ ಕೇಳುತ್ತಿದ್ದರೆ ನಾವೆಲ್ಲಾ ಆಶ್ಚರ್ಯ ಮತ್ತು ಹೆಮ್ಮೆಯಿಂದ ಬೀಗುತ್ತಿದ್ದೆವು. ಮಾತ್ರವಲ್ಲ ಅವರಿಗೆ ರೇಖಾ ಗೊತ್ತು, ಜಿತೆಂದ್ರ್ ಗೊತ್ತು, ಕರೀನಾ ಕಪೂರ್ ಗೊತ್ತು, ಸೈಫ್‍ಅಲಿ ಖಾನ್ ಗೊತ್ತು, ಪ್ರಿಯಾಂಕಾ ಚೋಪ್ರಾ ಗೊತ್ತು...........ಹೀಗೆ ಪಟ್ಟಿ ಇನ್ನೂ ಬೆಳೆಯುತ್ತಾ ಹೋಗುತ್ತದೆ.


    ನನಗೋ ಭಾರೀ ಕುತೂಹಲ ನಮ್ಮ ಹಿಂದಿ ಸಿನಿಮಾ ನಟ ನಟಿಯರೆಲ್ಲಾ ಇವರಿಗೆ ಹೇಗೆ ಗೊತ್ತೆಂದು? ಈ ಹಿನ್ನೆಲೆಯಲ್ಲಿ ನಾನು ಕುತೂಹಲ ತಡೆಯಲಾರದೆ ಒಂದು ಸಾರಿ ಅವರನ್ನು ಕೇಳಿಯೇ ಬಿಟ್ಟೆ, “ನಿಮಗೆ ಇವರೆಲ್ಲಾ ಹೇಗೆ ಗೊತ್ತು? ಇವರೆಲ್ಲಾ ನಿಮಗೆ ತುಂಬಾ ವರ್ಷದಿಂದ ಪರಿಚಯವಿರೋ ತರ ಕೇಳುತ್ತೀರಲ್ಲ?“ ಅದಕ್ಕವರು “ಅವರೆಲ್ಲಾ ಇಲ್ಲಿ ಪ್ರಸಾರವಾಗುವ Zee Aflam, ಮತ್ತು B4U Aflam ಎನ್ನುವ ಹಿಂದಿ ಸಿನಿಮಾ ಚಾನಲ್‍ಗಳ ಮೂಲಕ ಪರಿಚಯ.” ಎಂದು ಹೇಳಿದ್ದರು. ಮುಂದುವರಿದು “ಹಿಂದ್ (ಇಂಡಿಯನ್) ಫಿಲ್ಮ್ಸ್ ಕೋಯಿಸ್ (ಚನ್ನಾಗಿದೆ), ಮಿಯ್ಯಾ ಮಿಯ್ಯಾ (ಅತ್ಯುತ್ತಮ)” ಎಂದು ಹೇಳುತ್ತಾ ಹಿಂದಿ ಸಿನಿಮಾಗಳನ್ನು ಬಾಯಿತುಂಬಾ ಹೊಗಳಿದ್ದರು. ಪರ್ವಾಗಿಲ್ಲ ನಮ್ಮ ಬಾಲಿವುಡ್ ನಟ-ನಟಿಯರು ಇಲ್ಲಿಯವರಿಗೂ ತಮ್ಮ ಜನಪ್ರೀಯತೆಯ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಖುಷಿಯಾಗಿತ್ತು. ನನಗಿಂತ ಮೊದಲೇ ಇಲ್ಲಿ ಸುಮಾರು ವರ್ಷಗಳಿಂದ ಇದ್ದ ಭಾರತೀಯರನ್ನು ನಾನು ಒಮ್ಮೆ ಹೀಗೆ ಕೇಳಿದ್ದೆ “ನೀವು ಇಲ್ಲಿಗೆ ಬಂದ ಹೊಸತರಲ್ಲಿ ಅವರು ನಿಮ್ಮನ್ನೂ ಇದೇ ರೀತಿ ಹಿಂದಿ ಸಿನಿಮಾಗಳ ಕುರಿತಂತೆ ಪ್ರಶ್ನೆಗಳನ್ನು ಕೇಳುತ್ತಿದ್ದರೆ?” ಅವರು ಹೌದೆಂದು ತಲೆಯಲ್ಲಾಡಿಸುತ್ತಾ “ಇಲ್ಲಿಯವರಿಗೆ ಹಿಂದಿ ಸಿನಿಮಾಗಳೆಂದರೆ ಅದೇನೋ ಒಂಥರಾ ಹುಚ್ಚು” ಎಂದು ಹೇಳಿದ್ದರು. ಇವರಿಗೇಕೆ ಇಷ್ಟೊಂದು ಹಿಂದಿ ಸಿನಿಮಾಗಳ ಹುಚ್ಚು? ಇವರ (ಅರೇಬಿಕ್) ಭಾಷೆಯಲ್ಲಿ ಸಿನಿಮಾಗಳು ಬರುವದಿಲ್ಲವೆ? ಬಂದರೂ ಅವು ಅಷ್ಟೊಂದು ಚನ್ನಾಗಿರುವದಿಲ್ಲವೆ? ಯಾಕೆ? ಏನು? ಹೇಗೆ? ಅಂತೆಲ್ಲಾ ಬೆನ್ಹತ್ತಿ ಹೋದಾಗ ಗೊತ್ತಾಗಿದ್ದು ಈ ದೇಶದಲ್ಲಿ ಸಿನಿಮಾಗಳೇ ತಯಾರಾಗುವದಿಲ್ಲ ಎನ್ನುವ ಸಂಗತಿ. ಇಲ್ಲಿ ಮಾತ್ರವಲ್ಲ ಈಜಿಪ್ಟ್ ವೊಂದನ್ನು ಬಿಟ್ಟರೆ ಬಹಳಷ್ಟು ಅರೇಬಿಕ್ ದೇಶಗಳಲ್ಲಿ ಸಿನಿಮಾಗಳು ತಯಾರಾಗುವದಿಲ್ಲವೆಂದರೆ ನೀವು ನಂಬಲೇಬೇಕು. ತಯಾರಾದರೂ ಎರಡ್ಮೂರು ವರ್ಷಕ್ಕೊಮ್ಮೆ ಒಂದೋ ಅಥವಾ ಎರಡು ಸಿನಿಮಾಗಳು ತಯಾರಾಗುತ್ತವೆ. ಆದರೆ ಅವು ನಮ್ಮ ಹಿಂದಿ ಚಲನಚಿತ್ರಗಳಿಗೆ ಯಾವ ರೀತಿಯಲ್ಲೂ ಸಾಟಿಯಾಗುವದಿಲ್ಲ. ಹಾಗೆಂದೇ ನಮ್ಮ ಸಿನಿಮಾಗಳಿಗಿಲ್ಲಿ ಅಧಿಕ ಜನಪ್ರಿಯತೆಯಿದೆ.

    ಹಾಗೆ ನೋಡಿದರೆ ಅರಬ್ ಸಿನಿಮಾಗಳ ನಿರ್ಮಾಣ ಹೆಚ್ಚಾಗಿದ್ದೇ ತೀರಾ ಇತ್ತೀಚಿಗೆ. ಅದೂ ಅಲ್ಜಿರಿಯಾ, ಲೆಬನಾನ್, ಪ್ಯಾಲೆಸ್ತಿನಿಯಾ, ತುನಿಶಿಯಾ, ಹಾಗೂ ಸಿರಿಯಾಗಳಲ್ಲಿ ಮಾತ್ರ. ಅತಿ ಹೆಚ್ಚು ಅರಬ್ ಸಿನಿಮಾಗಳ ನಿರ್ಮಾಣದ ಕೀರ್ತಿ ಈಜಿಪ್ಟ್ ದೇಶಕ್ಕೆ ಸಲ್ಲುತ್ತದೆ. ಏಕೆಂದರೆ ಮುಕ್ಕಾಲು ಪಾಲು ಅರಬ್ ಸಿನಿಮಾಗಳು ತಯಾರಾಗುವದು ಈಜಿಪ್ಟ್ ದೇಶದ ರಾಜಧಾನಿ ಕೈರೋದಲ್ಲಿಯೇ. ಲಿಬಿಯಾ ಸೇರಿದಂತೆ ಬಹುತೇಕ ಅರೇಬಿಕ್ ದೆಶಗಳಲ್ಲಿ ಸಿನಿಮಾಗಳ ನಿರ್ಮಾಣ ಬಹುತೇಕ ಕಿರುಚಿತ್ರಗಳಿಗೆ ಮತ್ತು ಟೀವಿ ಚಿತ್ರಗಳಿಗೆ ಮಾತ್ರ ಸೀಮಿತವಾಗಿದೆ. ಜೋರ್ಡಾನ್, ಲೆಬನಾನ್, ಇರಾಕ್ ದೇಶಗಳು ಸಿನಿಮಾಗಳನ್ನು ನಿರ್ಮಿಸಿವೆಯಾದರೂ ಅವು ಕೇವಲ ಬೆರಳಣಿಕೆಯಷ್ಟಾಗಿವೆ. 19ನೇ ಶತಮಾನದಲ್ಲಿ ಅಂದರೆ ಸಿನಿಮಾ ಆಗಷ್ಟೆ ಆವಿಷ್ಕಾರಗೊಂಡ ಸಂದರ್ಭದಲ್ಲಿ ಮಧ್ಯಪ್ರಾಚ್ಯದ ಬಹುತೇಕ ರಾಷ್ಟ್ರಗಳು ಬ್ರಿಟಿಷ್ ಮತ್ತು ಫ್ರೆಂಚ್‍ರ ಅಧೀನಕ್ಕೆ ಒಳಪಟ್ಟಿದ್ದವು. ಸಿನಿಮಾ ಆವಿಷ್ಕಾರಗೊಂಡು ಎರಡು ದಶಕಗಳ ನಂತರ ಈ ಎರಡು ಬಲಾಢ್ಯ ದೇಶಗಳು ‘ಸೈಕ್ಸ್-ಪೈಕಾಟ್’ ಒಪ್ಪಂದದ ಮೂಲಕ ಅರಬ್ ರಾಷ್ಟ್ರಗಳನ್ನು ಎರಡು ಭಾಗ ಮಾಡಿಕೊಂಡು ಆಳತೊಡಗಿದವು. ಪರಿಣಾಮವಾಗಿ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಇನ್ನೂ ಸ್ವತಂತ್ರವಾಗಿರದ ಅರಬ್ ರಾಷ್ಟ್ರಗಳಿಗೆ ಸಿನಿಮಾಗಳ ತಯಾರಿಕೆಯಲ್ಲಿ ಅಡಚಣೆಯುಂಟಾಯಿತು. ಆದರೆ ಈಜಿಪ್ಟ್ ಮಾತ್ರ ಇದಕ್ಕೆ ಹೊರತಾಗಿತ್ತು. ಆ ಸಮಯದಲ್ಲಿಯೇ ಅರಬ್ ಮಾರುಕಟ್ಟೆ ಯೂರೋಪಿನ ವ್ಯಾಪಾರ ಸಗಟುಗಳಿಂದ ತುಂಬಿಹೋಗಿದ್ದರಿಂದ ಸಹಜವಾಗಿ ಯೂರೋಪಿಯನ್ನರು ಬಂಡವಾಳ ಹೂಡಿಕೆದಾರರಾದರು ಹಾಗೂ ಸ್ಥಳೀಯ ಉದ್ದಿಮೆದಾರರು ಹಿಂದೆ ಸರಿದರು. ಅರಬ್‍ರ ಮೇಲೆ ರಾಜಕೀಯ ದಬ್ಬಾಳಿಕೆ ನಡೆದುದಷ್ಟೇ ಅಲ್ಲದೆ ಸಾಂಸ್ಕೃತಿಕ ದಬ್ಬಾಳಿಕೆಯೂ ನಡೆಯಿತು. ಮೊದಲಿಗೆ ಇಲ್ಲಿನ ಸಿನಿಮಾ ಥೇಟರ್ ಗಳು ವಿದೇಶಿಯರ ಒಡೆತನದಲ್ಲಿದ್ದುದರಿಂದ ಅವರು ತಮ್ಮ ಭಾಷೆಯ ಚಿತ್ರಗಳನ್ನು ಮಾತ್ರ ತಯಾರಿಸಿದರು. ಆದರೆ ಅವು ಸ್ಥಳೀಯರನ್ನು ತಲುಪವಲ್ಲಿ ವಿಫಲವಾದ್ದರಿಂದ ಸಿನಿಮಾ ತಯಾರಿಕೆಯಿಂದ ಅವರಿಗೆ ಅಪಾರ ನಷ್ಟವುಂಟಾಯಿತು. ಆದರೆ ವಸಾಹತುಕಾಲದಲ್ಲಿ ತಕ್ಕಮಟ್ಟಿಗೆ ಸ್ವತಂತ್ರವಾಗಿದ್ದ ಈಜಿಪ್ಟ್ ನ್ಯಾಷನಲ್ ಫಿಲ್ಮ್ ಇಂಡಸ್ಟ್ರಿಯನ್ನು ಸ್ಥಾಪಿಸುವ ಹಂತದವರೆಗೂ ತಲುಪಿತು. 1909 ರಲ್ಲಿ ತಮ್ಮ ನಾಯಕನ ಅಂತ್ಯಕ್ರಿಯೆಯ ಮೆರವಣಿಗಿಯನ್ನು ಚಿತ್ರಿಕರಿಸುವದರ ಮೂಲಕ ಆರಂಭವಾದ ಅವರ ಸಿನಿಮಾ ನಿರ್ಮಾಣ 1934 ರಲ್ಲಿ ಈಜಿಪ್ಸಿಯನ್ ಫಿಲ್ಮ್ ಇಂಡಸ್ಟ್ರಿಯನ್ನು ಸ್ಥಾಪಿಸುವ ಮಟ್ಟಕ್ಕೂ ಬೆಳೆಯಿತು. ಅಲ್ಲಿಂದಾಚೆ ಅನೇಕ ಅರೇಬಿಕ್ ಸಿನಿಮಾಗಳನ್ನು ತಯಾರಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು.

    ವಿವಿಧ ಅರೇಬಿಕ್ ದೇಶಗಳಿಂದ ಪ್ರಸಾರವಾಗುವ ಅರೇಬಿಕ್ ಟೀವಿ ಚಾನಲ್‍ಗಳು ಹೆಚ್ಚಾಗಿ ಕೈರೋದಲ್ಲಿ ತಯಾರಾಗುವ ಸಿನಿಮಾಗಳನ್ನೇ ಪ್ರಸಾರ ಮಾಡುತ್ತವೆ. ಅದು ಬಿಟ್ಟರೆ ಅರೇಬಿಕ್ ಮೆಗಾ ಧಾರಾವಾಹಿಗಳನ್ನು ಹಾಗೂ ಡಾಕುಮೆಂಟರಿಗಳನ್ನು ಪ್ರಸಾರಮಾಡುತ್ತವೆ. ಹೀಗಾಗಿ Zee Aflam ಮತ್ತು B4U Aflam ಎನ್ನುವ ಎರಡು ಚಾನಲ್‍ಗಳು ಇಲ್ಲಿಯವರಿಗೆ ಹುಚ್ಚು ಹಿಡಿಸಿವೆ. ನಾನು ಮೊದಮೊದಲು ಲಿಬಿಯನ್‍ರಿಗೆ ಮಾತ್ರ ನಮ್ಮ ಹಿಂದಿ ಚಿತ್ರಗಳ ಬಗ್ಗೆ ಕ್ರೇಜ್ ಇರಬಹುದೆಂದುಕೊಂಡಿದ್ದೆ. ಆದರೆ ಯಾವಾಗ ನನ್ನ ಜೋರ್ಡಾನಿ, ಸಿರಿಯನ್, ಸುಡಾನಿ ಸಹೋದ್ಯೋಗಿಗಳು ಸಹ ಹಿಂದಿ ಫಿಲ್ಮ್ಸ್ ಬಗ್ಗೆ ಮಾತನಾಡತೊಡಗಿದರೋ ಆಗ ನನಗೆ ಗೊತ್ತಾಯಿತು ಈ ಅರಬ್‍ರಿಗೆ ನಮ್ಮ ಚಿತ್ರಗಳೆಂದರೆ ತುಂಬಾ ಇಷ್ಟ ಎಂದು. ಆದರೆ ನಾ ಕಂಡಂತೆ ಈಜಿಪ್ಸಿಯನ್ನರು ಮಾತ್ರ ಅಷ್ಟಾಗಿ ನಮ್ಮ ಹಿಂದಿ ಚಿತ್ರಗಳತ್ತ ಒಲವು ಬೆಳೆಸಿಕೊಂಡಿಲ್ಲ. ಬಹುಶಃ, ನಮ್ಮಲ್ಲಿ ಬಾಲಿವುಡ್ ಫಿಲ್ಮ್ ಇಂಡಸ್ಟ್ರಿ ಇದ್ದಂತೆ ಅವರಲ್ಲೂ ಸಹ ಅವರದೇ ಆದ ಅರೇಬಿಕ್ ಫಿಲ್ಮ್ ಇಂಡಸ್ಟ್ರಿ ಇರುವದೇ ಅದಕ್ಕೆ ಕಾರಣವಿರಬಹುದು.

    ಅಂದಹಾಗೆ ಇಲ್ಲಿಯವರಿಗೆ ನಮ್ಮ ಹಿಂದಿ ಸಿನಿಮಾಗಳ ಹುಚ್ಚು ಹಿಡಿಸಿದ ಎರದು ಚಾನಲ್‍ಗಳೆಂದರೆ ಒಂದು Zee Aflam, ಇನ್ನೊಂದು B4U Aflam. Zee Aflam ಎನ್ನುವದು ಇಂಡಿಯಾ-ಬೇಸ್ಡ್ ಚಾನಲ್ ಆಗಿದ್ದು Zee Entertainment Enterprises ಒಡೆತನದಲ್ಲಿ ದುಬೈನಲ್ಲಿ ಆರಂಭವಾದ ಚಾನಲ್. ಸೌದಿ ಅರೇಬಿಯಾವನ್ನು ಒಳಗೊಂಡಂತೆ ಅನೇಕ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅತ್ಯಂತ ಜನಪ್ರೀಯತೆಯನ್ನು ಪಡೆದುಕೊಂಡ ಚಾನಲ್ ಇದು. ನೈಲ್ ಸ್ಯಾಟ್‍ನಿಂದ ದಿನದ ಇಪ್ಪತ್ನಾಲ್ಕು ಘಂಟೆ ಬರೀ ಹಿಂದಿ ಸಿನಿಮಾಗಳನ್ನು ಮಾತ್ರ ಪ್ರಸಾರ ಮಾಡುವ ಚಾನಲ್ ಇದು. ಇದು ಮೊದಮೊದಲು ಹಿಂದಿ ಸಿನಿಮಾಗಳನ್ನು ಅರೇಬಿಕ್ ಸಬ್‍ಟೈಟಲ್ಸ್ ಸಮೇತ ಪ್ರಸಾರ ಮಾಡುತ್ತಿತ್ತು. ಆದರೆ ಇದೀಗ ಬಹುತೇಕ ಹಿಂದಿ ಸಿನಿಮಾಗಳನ್ನು ಅರೇಬಿಕ್ ಭಾಷೆಗೆ ಡಬ್ ಮಾಡಿ ಪ್ರಸಾರ ಮಾಡುತ್ತಿದೆ. ಹೀಗಾಗಿ ಅವು ಇನ್ನೂ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರ ಜೊತೆಗೆ ಅದೇ ನೈಲ್ ಸ್ಯಾಟ್‍ನಲ್ಲಿ ಅರೇಬಿಕ್ ಸಬ್‍ಟೈಟಲ್‍ಗಳೊಂದಿಗೆ ಹಿಂದಿ ಸಿನಿಮಾಗಳನ್ನು ಪ್ರಸಾರ ಮಾಡುವ ಮತ್ತೊಂದು ಚಾನೆಲ್ ಎಂದರೆ B4U Aflam. ಇದರಲ್ಲೂ ದಿನದ ಇಪ್ಪತ್ನಾಲ್ಕು ಘಂಟೆ ಹಿಂದಿ ಸಿನೆಮಾಗಳನ್ನು ಅರೇಬಿಕ್ ಸಬ್‍ಟೈಟಲ್ಸ್ ಸಮೇತ ಪ್ರಸಾರ ಮಾಡುತ್ತಾರೆ.

    ಇಲ್ಲಿನವರು ಅದೆಷ್ಟು ತಮ್ಮ ಸಿನಿಮಾಗಳನ್ನು ನೋಡುತ್ತಾರೋ ಗೊತ್ತಿಲ್ಲ! ಆದರೆ ಅದಕ್ಕಿಂತ ಹೆಚ್ಚಾಗಿ ಈ ಎರಡು ಚಾನಲ್‍ಗಳಲ್ಲಿ ಪ್ರಸಾರವಾಗುವ ಹಿಂದಿ ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತಾರೆ. ಹಾಗೆಂದೇ ಇಲ್ಲಿನವರಿಗೆ ನಮ್ಮ ಹಿಂದಿ ಚಲನಚಿತ್ರಗಳ ನಟ-ನಟಿಯರೆಲ್ಲಾ ಗೊತ್ತು. ನಮ್ಮ ಅನೇಕ ಹಿಂದಿ ಚಿತ್ರಗೀತೆಗಳು ಗೊತ್ತು. ನನ್ನ ಬಹಳಷ್ಟು ವಿದ್ಯಾರ್ಥಿಗಳು ಹಿಂದಿ ಸಿನಿಮಾಗಳ ಹಾಡುಗಳನ್ನು ತಮ್ಮ ಮೊಬೈಲ್‍ನಲ್ಲಿ ಹಾಕಿಕೊಂಡು ಆಗಾಗ್ಗ ಕೇಳುತ್ತಿರುತ್ತಾರೆ. ಇನ್ನು ನನ್ನ ವಿದ್ಯಾರ್ಥಿನಿಯರಂತೂ ಐಶ್ಚರ್ಯ್ ರೈ ಫ್ಯಾನ್ ಮಾತ್ರವಲ್ಲ ಆಕೆ ಹಾಕಿಕೊಳ್ಳುವ ಬಳೆ, ಡ್ರೆಸ್‍ಗಳ ಫ್ಯಾನ್ ಕೂಡ ಆಗಿದ್ದಾರೆ. ಆಕೆ ಅಭಿನಯಿಸಿದ “ಹಮ್ ದಿಲ್ ದೇ ಚುಕೆ ಸನಮ್” ಚಿತ್ರದ “ಆಖೋ ಕಿ.......” ಹಾಡೆಂದರೆ ಅವರಿಗೆ ಪಂಚಪ್ರಾಣ. “ಆ ಹಾಡಿನಲ್ಲಿ ಅದೆಷ್ಟು ಚನ್ನಾಗಿ ಕಾಣುತ್ತಾಳೆ? ಆ ಹಾಡಿನಲ್ಲಿ ಆಕೆ ಹಾಕಿಕೊಂಡಿರುವ ಡ್ರೆಸ್ಸ್‍ಗೆ ನಿಮ್ಮಲ್ಲಿ ಏನನ್ನುತ್ತಾರೆ? ಅಂಥದೊಂದು ಡ್ರೆಸ್ ನಮಗೂ ಒಂದು ತಂದುಕೊಡುತ್ತೀರಾ? How beautiful she is! We wish we were like Aishwarya Rai.” ಎಂದು ಆಕೆಯ ಬಗೆಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಅಂದಮೇಲೆ ಅವರಿಗೆ ಹಿಂದಿ ಸಿನಿಮಾಗಳ ಹುಚ್ಚು ಅದೆಷ್ಟಿರಬಹುದೆನ್ನುವದನ್ನು ನೀವೇ ಲೆಕ್ಕ ಹಾಕಿ! ನಾನು ಒಮ್ಮೆ ಅವರನ್ನು “ನಿಮಗೇಕೆ ಹಿಂದಿ ಸಿನಿಮಾಗಳೆಂದರೆ ಅಷ್ಟು ಇಷ್ಟ? ಅದರಲ್ಲಿ ಯಾವ ಅಂಶವನ್ನು ಇಷ್ಟಪಡುತ್ತೀರಿ?” ಎಂದು ಕೇಳಿದ್ದೆ. ಮುಖ್ಯವಾಗಿ ಹಾಡುಗಳು, ಡ್ಯಾನ್ಸ್, ಸೆಟ್ಟಿಂಗ್ಸ್, ಕಥೆ, ಮತ್ತು ಅವುಗಳಲ್ಲಿ ನವಿರು ನವಿರಾಗಿ ನಿರೂಪಿತವಾಗುವ ಪ್ರೀತಿ ಎಂದು ಮೈ ಕುಣಿಸುತ್ತಾ ಹುಬ್ಬು ಹಾರಿಸುತ್ತಾ ಹೇಳಿದ್ದರು. ಅಷ್ಟೇ ಅಲ್ಲ ನಮ್ಮ ಎಷ್ಟೋ ಹಿಂದಿ ಸಿನಿಮಾಗಳ ಲವ್ ಸೀನ್‍ಗಳು ಅವರ ಪ್ರೀತಿಗೂ ಪ್ರೇರಣೆಯಾಗಿವೆ ಎಂದು ಮುಚ್ಚುಮರೆಯಿಲ್ಲದೆ ಹೇಳುತ್ತಾರೆ.

    ಇದರಿಂದಲೇ ಗೊತ್ತಾಗುತ್ತದಲ್ಲವೇ ಅವರಿಗೆ ನಮ್ಮ ಹಿಂದಿ ಸಿನಿಮಾಗಳೆಂದರೆ ಅದೆಷ್ಟು ಹುಚ್ಚು ಅಂತಾ? ಎತ್ತಣ ಹಿಂದಿ ಸಿನಿಮಾಗಳು, ಎತ್ತಣ ಲಿಬಿಯನ್‍ರು? ಎತ್ತಣದಿಂದೆತ್ತ ಸಂಬಂಧವಯ್ಯಾ?

    -ಉದಯ್ ಇಟಗಿ

    ಅಪ್ಪಾ, ನನ್ನ ನೆನಪುಗಳಲ್ಲಿ ನೀನೆಲ್ಲಿ?

  • ಬಿಸಿಲ ಹನಿ

  • ಅಪ್ಪನೇ,


    ನಾನು ನಿನ್ನನ್ನು ಹೀಗೆ ನೇರಾನೇರ ಬರೀ “ಅಪ್ಪನೇ” ಎಂದು ಕರೆದಿದ್ದು ನಿನಗೆ ಕಸಿವಿಸಿಯೆನಿಸುತ್ತಿರಬಹುದು. ಅಥವಾ ಅನ್ನಿಸದೆಯೂ ಇರಬಹುದು! ಕಸಿವಿಸಿ ಯಾಕೆಂದರೆ ಸೌಜನ್ಯಕ್ಕಾದರೂ ನನ್ನ ಮಗ ನನ್ನನ್ನು “ಪ್ರೀತಿಯ ಅಪ್ಪನೇ” ಎಂದು ಸಂಬೋಧಿಸಬಹುದಿತ್ತಲ್ಲ ಎಂದು! ಕ್ಷಮಿಸು! ನಾನು ನಿನನ್ನು ಹಾಗೆ ಕರೆಯಲಾರೆ! ಏಕೆಂದರೆ ನೀನು ಬರೀ ಅಪ್ಪನಾಗಿಯೇ ಉಳಿದೇ ಹೊರತು ನಮಗ್ಯಾರಿಗೂ ಪ್ರೀತಿಯ ಅಪ್ಪನಾಗುವ ಪ್ರಯತ್ನವನ್ನು ನೀನು ಯಾವತ್ತೂ ಮಾಡಲಿಲ್ಲ! ಪ್ರೀತಿಗೆ ಪಾತ್ರರಾಗದವರನ್ನು “ಪ್ರಿತಿಯ” ಎಂದು ಕರೆಯುವದಾದರೂ ಹೇಗೆ?

    ಹಾಗಂತ ನನಗೆ ಸೌಜನ್ಯವಾಗಲಿ, ಪ್ರೀತಿಸುವದಾಗಲಿ ಗೊತ್ತಿಲ್ಲ ಅಂತಾ ಅಲ್ಲಾ! ಖಂಡಿತ ಇದೆ! ನಿನ್ನ ಹೊಟ್ಟೆಯಲ್ಲಿ ಹುಟ್ಟಿಯೂ ನಿನ್ನಂತಾಗದೆ ಅದ್ಭುತವಾಗಿ ಪ್ರಿತಿಸುವದನ್ನು ಕಲಿತಿದ್ದೇನೆ, ಜವಾಬ್ದಾರಿಗಳನ್ನು ನಿರ್ವಹಿಸುವದನ್ನು ಕಲಿತಿದ್ದೇನೆ, ಕರ್ತವ್ಯಗಳನ್ನು ನಿಭಾಯಿಸುವದನ್ನು ಕಲಿತಿದ್ದೇನೆ. ಹೆಂಡತಿ-ಮಗಳ ಬೇಕು-ಬೇಡಗಳನ್ನು ಗಮನಿಸುವದನ್ನು ಕಲಿತಿದ್ದೇನೆ. ನಿನ್ನಂತೆ ಉಂಡಾಡಿ ಗುಂಡನಾಗದೆ ಘನತೆಯ ಬದುಕನ್ನು ಬದುಕುವದನ್ನು ಕಲಿತಿದ್ದೇನೆ!

    ನಿನಗೀಗ ಎಪ್ಪತ್ತೈದೋ ಎಪ್ಪತ್ತಾರೋ? ನನಗೆ ಮೂವತ್ತೆಂಟು! ಇವತ್ತು ಕುಳಿತುಕೊಂಡು ಈ ಮೂವತ್ತೆಂಟು ವರ್ಷಗಳಲ್ಲಿನ ನನ್ನ ನೆನಪುಗಳಲ್ಲಿ ನೀನೆಲ್ಲಿ? ಎಂದು ಹುಡುಕುತ್ತಿದ್ದೇನೆ. ಊಹೂಂ, ಎಲ್ಲೂ ನಿನ್ನ ಸುಳಿವೇ ಇಲ್ಲ! ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು, ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ, ಅಪ್ಪ ಎಂದರೆ ಇನ್ನೂ ಏನೇನೋ ನೆನಪುಗಳು ಅಂತಾ ಹೇಳುತ್ತಾರಲ್ಲ? ಇದ್ಯಾವ ನೆನಪುಗಳನ್ನು ನೀನು ನನಗೆ ಕೊಡದೆ ನನ್ನನ್ನು ವಂಚಿಸಿಬಿಟ್ಟಿ!

    ಯಾವತ್ತಾದರೂ ನೀನು ನನ್ನನ್ನು ನಿನ್ನ ಹೆಗಲ ಮೇಲೆ ಹೊತ್ತು ತಿರುಗಾಡಿದ್ದು, ನಿನ್ನ ನೋಡಿದ ಕೂಡಲೇ ನಾನು ನನ್ನ ಎರಡೂ ಕೈ ಚಾಚಿ ನಕ್ಕಿದ್ದು, ಒಂದು ದಿನವಾದರೂ ನನ್ನ ಕೈ ಹಿಡಿದು ನಡೆಸಿದ್ದು, ಒಂದು ನಾಲ್ಕು ರಸ್ತೆ ಸುತ್ತಿಸಿದ್ದು, ಹತ್ತಿರ ಕೂತು ಮಾತನಾಡಿದ್ದು, ಪ್ರೀತಿಯಿಂದ ನನ್ನ ಕರೆದಿದ್ದು, ಯಾವ ಸ್ಕೂಲು? ಏನು? ಎಂದು ವಿಚಾರಿಸಿದ್ದು. ಊಹೂಂ, ಒಂದೂ ನನ್ನ ನೆನಪಲ್ಲಿಲ್ಲ! ನಿನ್ನ ನೆನಪಲ್ಲೇನಾದರೂ ಇದೆಯಾ? ಹೋಗಲಿ, ನಾನು ಅಪ್ಪ ಎಂಬ ಸಲಿಗೆಯಿಂದ ನಿನ್ನ ಹತ್ತಿರ ಯಾವತ್ತಾದರೂ ಹಟ, ರಚ್ಚೆ ಹಿಡಿದಿದ್ದು, ಅದಕ್ಕೆ ಪ್ರತಿಯಾಗಿ ನೀನು ಗದರಿದ್ದು ನೆನಪಿದಿಯಾ? ಬಹುಶಃ, ಇರಲಿಕ್ಕಿಲ್ಲ! ಪ್ರೀತಿಸಿದರೆ ತಾನೆ? ದಂಡಿಸುವ ಹಕ್ಕು ಬರೋದು?

    ಇನ್ನು ಕಸಿವಿಸಿ ಅನಿಸದಿರಬಹುದು ಎಂದು ಹೇಳಿದ್ದು ಇಷ್ಟು ದಿನ ಯಾವೊಂದೂ ವಿಷಯಕ್ಕೆ ಕಸಿವಿಸಿಗೊಳ್ಳದವ ‘ಪ್ರೀತಿಯ’ ಎನ್ನುವ ಒಂದೇ ಒಂದು ಪದವನ್ನು ಪ್ರಯೋಗಿಸದಿದ್ದಕ್ಕೆ ಕಸಿವಿಸಿಗೊಳ್ಳುತ್ತೀಯಾ ಎಂದು ನನಗೆ ಅನಿಸುವದಿಲ್ಲ. ಏಕೆಂದರೆ ಏನು ತಿವಿದರೂ ಏನು ಅಂದರೂ ಏನೂ ಆಗದವ ನೀನು! ಏನೊಂದೂ ಆಗದವರ ಹತ್ತಿರ ಪ್ರೀತಿಯ ಅಗಾಧತೆ ಮತ್ತು ಅದಕ್ಕಂಟಿ ಬರುವ ಜವಾಬ್ದಾರಿಗಳ ಕುರಿತು ಮಾತನಾಡುವದರಲ್ಲಿ ಏನು ಅರ್ಥವಿದೆ?

    ನನಗೆ ಗೊತ್ತು ನನ್ನ ಈ ಪತ್ರ ನಿನ್ನ ಮನಸ್ಸನ್ನಾಗಲಿ, ಮಿದುಳನ್ನಾಗಲಿ ತಟ್ಟಲಾರದೆಂದು. ಆದರೂ ಇದನ್ನು ಬರೆಯುತ್ತಿದ್ದೇನೆ! ಏಕೆ ಗೊತ್ತಾ? ನನ್ನೊಳಗಿನ ಸಿಟ್ಟನ್ನು, ಕೇವಲ ನನ್ನೊಳಗಿನ ಸಿಟ್ಟನ್ನು ಹೊರಹಾಕುವದಕ್ಕೆ ಮಾತ್ರ! ಅದಾಗಲೇ ನಿನ್ನ ಬಗ್ಗೆ ಆಗಾಗ ಅಲ್ಲಲ್ಲಿ ಅಷ್ಟಿಷ್ಟು ಬರೆದು ನನ್ನ ಸಿಟ್ಟನ್ನು, ಆಕ್ರೋಶವನ್ನು ಹೊರಹಾಕಿದ್ದೇನೆ. ಆದರೂ ಕಮ್ಮಿಯಾಗಿಲ್ಲ ನೋಡು! ಹೊರಹಾಕಿದಷ್ಟೂ ಮತ್ತೆ ಮತ್ತೆ ಉಕ್ಕಿ ಬರುತ್ತಲೇ ಇರುತ್ತದೆ!

    ಅಪ್ಪ ನನಗೆ ಬರೀ ನೆನಪು! ಎದುರಿಗೆ ಅಲೆದಾಡೋ ನೀನು ಅವನ ಭೂತ! ಜೀವಂತವಾಗಿದ್ದು ಇಲ್ಲದೆ ಛಾಯೆಯಾಗಿ ಬದುಕುವ ಸ್ಥಿತಿ ತಲುಪಿ ಬಿಟ್ಟಿದ್ದೀಯಾ. ಏಕೆಂದರೆ ನಾನು ಬುದ್ಧಿ ಬಂದಾಗಿಂದ ನಿನ್ನೊಟ್ಟಿಗಿನ ನನ್ನ ತಂತುಗಳನ್ನು ಕಡಿದುಕೊಂಡು ಬಂದಿದ್ದೇನೆ. ಒಂದು ವೇಳೆ ನೀನು ಇಲ್ಲದೇ ಇದ್ದಿದ್ದರೆ ನಿನ್ನ ಬಗ್ಗೆ ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಂಡಿರುತಿದ್ದೆ. ಎದುರಿಗಿದ್ದು ಇಲ್ಲದ ಹಾಗೆ ಆದೆಲ್ಲ! ನನಪಿನಲ್ಲಿ ಎದುರುಗಡೆ ಕೂತು ಕೈಗೆ ಸಿಗದೆ, ಕನಸಿನಲ್ಲೂ ತಂದೆ ಸುಖ ಇಲ್ಲದ ಹಾಗೆ ಮಾಡಿದೆಯೆಲ್ಲ? ನಾನಿವತ್ತು ಇದನ್ನೆಲ್ಲಾ ಯಾಕೆ ಹೇಳಿದೆನೆಂದರೆ ನಿನ್ನಂತ ಅಪ್ಪನಿಗೆ ಮಗನಾಗಿ ಹುಟ್ಟಿಯೂ ನಾನು ನಿನ್ನಂತಾಗದೆ ನನ್ನ ಬುದ್ಧಿ ಮತ್ತು ಚೈತನ್ಯದ ಮೇಲೆ ಮೇಲೆ ಬಂದಿದ್ದೇನೆಂದು ಹೇಳಲು! ಅದಕ್ಕೆ ನಿನ್ನ ಜೀನ್ಸ್ ಗಳು ಸಹಕಾರಿಯಾಗಿರಬಹುದು ಎಂದು ನೀನು ಒಳಗೊಳಗೆ ಎಣಿಸಿ ಹೆಮ್ಮಪಡುತ್ತಿದ್ದರೆ ಅದು ನಿನ್ನ ತಪ್ಪು! ಏಕೆಂದರೆ ನಿನ್ನ ಜೀನ್ಸ್‍ ಗಳೇನಿದ್ದರೂ ನನ್ನನ್ನು ನಿನ್ನಂತೆ ಕಾಣಿಸಿಕೊಳ್ಳುವದರಲ್ಲಿ ಮಾತ್ರ ಸಹಕಾರಿಯಾದವೇ ಹೊರತು ನಿನ್ನ ಬುದ್ಧಿ ಮತ್ತು ಗುಣವನ್ನು ರೂಪಿಸುವಲ್ಲಿ ಅಲ್ಲ! ಹಾಗೆಂದೇ ನಾನಿವತ್ತು ಎಲ್ಲ ಸ್ತರಗಳಲ್ಲಿ ನಿನಗಿಂತ ಎಷ್ಟೋ ಭಿನ್ನವಾಗಿ ನಿಂತಿದ್ದೇನೆ!

    ಅಂದಹಾಗೆ ನೀನು ನನಗೆ ನಿನ್ನ ಜೀನ್ಸ್ ಗಳನ್ನು ಕೊಡುವದರ ಜೊತೆಗೆ ಒಂದಿಷ್ಟು ಪ್ರಿತಿಯನ್ನೂ ಕೊಟ್ಟಿದ್ದಿದ್ದರೆ ಬಹುಶಃ, ಇವತ್ತು ಯಾವ ಮಕ್ಕಳೂ ಬರೆಯಲಾರದಂಥ ಅದ್ಭುತವಾದಂಥ ಒಲುಮೆಯ ಪತ್ರವೊಂದನ್ನು ನಿನಗೆ ಬರೆದು ನಿನ್ನನ್ನು ಈ ಜಗತ್ತು ಹಾಡಿ ಹೊಗಳುವಂತೆ ಮಾಡುತ್ತಿದ್ದೆನೇನೋ!

    ಕ್ಷಮಿಸು, ಆ ಅದೃಷ್ಟಕ್ಕೆ ನೀನು ಪಾತ್ರನಾಗಲಿಲ್ಲ!

    ಇತಿ ನಿನ್ನ ಮಗ

    ಉದಯ್ ಇಟಗಿ



    ಮರಭೂಮಿಯೆಂದರೆ ಬರೀ ಮರಳಲ್ಲ..........

  • ಶನಿವಾರ, ಜೂನ್ 08, 2013
  • ಬಿಸಿಲ ಹನಿ
  • ನಾನು ಸೆಭಾಕ್ಕೆ ಬಂದ ಮಾರನೆಯ ದಿನವೇ ನಮ್ಮ ಯೂನಿವರ್ಷಿಟಿಯವರು ನನಗೆ ಅಲ್ಲಿಂದ 660K.M ದೂರವಿರುವ ಘಾಟ್ Arts & Science ಕಾಲೇಜಿಗೆ ಪೋಸ್ಟಿಂಗ್ ಆಗಿದೆಯೆಂದೂ ಹಾಗೂ ಅದಾಗಲೇ ಕ್ಲಾಸುಗಳು ಆರಂಭವಾಗಿರುವದರಿಂದ ನಾನು ಘಾಟ್‍ಗೆ ತಕ್ಷಣ ಹೋಗಬೇಕೆಂದೂ ಹೇಳಿದರು. ಆ ಪ್ರಕಾರ ಮಾರನೆಯ ದಿನ ಟ್ಯಾಕ್ಸಿಯೊಂದನ್ನು ನಾನುಳಿದುಕೊಂಡಿರುವ ಹೋಟೆಲ್‍ಗೆ ನನ್ನನ್ನು ಪಿಕ್ ಮಾಡಲು ಕಳಿಸಿದ್ದರು. ಆ ಟ್ಯಾಕ್ಸಿ ಡ್ರೈವರ್ ಬೆಳಿಗ್ಗೆ 11.30ಕ್ಕೆ ನನ್ನನ್ನು ಕರೆದುಕೊಂಡು ಘಾಟ್‍ನತ್ತ ಹೊರಟ. ದಾರಿಯುದ್ದಕ್ಕೂ ಜಗತ್ತಿನ ಅತಿದೊಡ್ದ ಮರಭೂಮಿ ‘ಸಹರಾ’ ಅಡ್ದಲಾಗಿ ಮಲಗಿತ್ತು. ಎಲ್ಲಿ ನೋಡಿದರಲ್ಲಿ ಮರಳು, ಮರಳು, ಬರೀ ಮರಳು! ನಾನು ಮೊಟ್ಟ ಮೊದಲಬಾರಿಗೆ ನನ್ನ ಜೀವನದಲ್ಲಿ ಮರಭೂಮಿಯೊಂದನ್ನು ನೋಡಿದ್ದೆ; ಅದೂ ಜಗತ್ತಿನ ಅತಿ ದೊಡ್ದ ಮರಭೂಮಿಯನ್ನು! ನೋಡುವ ಮೊದಲು ಮರಭೂಮಿಯ ಬಗ್ಗೆ ಅನೇಕ ಕಥೆಗಳನ್ನು ಕೇಳಿದ್ದೆ: ಮರಭೂಮಿಯೆಂದರೆ ಬರೀ ಮರಳು ಮತ್ತು ಬಿಸಿಲು ಮಾತ್ರ ಎಂದಕೊಂಡಿದ್ದೆ. ಆದರೆ ಇಲ್ಲಿಯೂ ಒಂದು ಭಯಂಕರ ಚಳಿಗಾಲ ಇರುತ್ತದೆ ಎನ್ನುವದು ನನ್ನ ಗಮನಕ್ಕೆ ಬಂದಿದ್ದು ನಾನಿಲ್ಲಿ ವಾಸಿಸಲು ಆರಂಭಿಸಿದಾಗಲೇ! ಮರಭೂಮಿಯೆಂದರೆ ಬರಡಾಗಿರುತ್ತದೆ, ಅಲ್ಲಿ ಏನೂ ಬೆಳೆಯುವದಿಲ್ಲ, ನೀರು ಸಿಗುವದಿಲ್ಲ, ನೀರನ್ನು ಹುಡುಕಿಕೊಂಡು ಜನ ಮೈಲಿಗಟ್ಟಲೆ ಹೋಗುತ್ತಾರೆ ಹಾಗೆ ಹೀಗೆ ಇನ್ನೂ ಏನೇನೋ........ ಇದೀಗ ಅದನ್ನೆಲ್ಲಾ ಕಣ್ಣಾರೆ ಕಂಡು ಅನುಭವಿಸುವ ಪರಿ ನನ್ನದಾಗಿತ್ತು. ವಿಪರ್ಯಾಸವೆಂದರೆ ಇಂಥ ಮರಭೂಮಿಯಲ್ಲಿ ನನ್ನ ಬದುಕಿನ ಹಸಿರನ್ನು ಹುಡುಕಿ ಬಂದಿದ್ದೆ. ನಾನು ಘಾಟ್‍ಗೆ ಬಂದ ಹೊಸತರಲ್ಲಿಯೇ ನನ್ನ ಇಂಡಿಯನ್ ಸಹೋದ್ಯೋಗಿಗಳು ಹಾಗೂ ಇಲ್ಲಿಯ ಆಸ್ಪತ್ರೆಯೊಂದರಲ್ಲಿ ಹಲ್ಲಿನ ಡಾಕ್ಟರ್ ಆಗಿದ್ದ ನಮ್ಮ ಇಂಡಿಯನ್ ಡಾಕ್ಟರ್ ಸುನೀಲ್ ಅವರನ್ನು ಕರೆದುಕೊಂಡು ಸಹರಾ ಮರಭೂಮಿಯನ್ನು ನೋಡಲು ಹೊರಟೆ. ಅದೇನೋ ಗೊತ್ತಿಲ್ಲ! ನನಗೆ ಒಮ್ಮೆ ಮರಭೂಮಿಯ ಒಳಗೆ ಹೋಗಿ ಬರಬೇಕು, ಅದರ ಒಡಲಾಳವನ್ನು ಬಗೆದು ನೋಡಬೇಕು ಎನ್ನುವ ಅದಮ್ಯ ಬಯಕೆ ಹೆಚ್ಚಾಗಿಬಿಟ್ಟಿತ್ತು.
    ಜಗತ್ತಿನ ಅತಿ ದೊಡ್ಡ ಮರಭೂಮಿಯಾದ ಸಹರಾ ಸುಮಾರು ಒಂಬತ್ತು ಮಿಲಿಯನ್ ಚ.ಕಿ.ಮಿ.ನಷ್ಟು ದೊಡ್ಡದಾಗಿದ್ದು ಸಹರಾ ಆಫ್ರಿಕಾ ಖಂಡದ 1/3 ನಷ್ಟು ಭಾಗವನ್ನು ಆಕ್ರಮಿಸಿಕೊಂಡಿದೆ. ಇದು ಆದಿ, ಮಧ್ಯ, ಹಾಗೂ ಅಂತ್ಯ ಸಹರಾ ಮರಭೂಮಿಗಳಾಗಿ ವಿಭಜನೆ ಹೊಂದಿದ್ದು ಮಧ್ಯದ ಭಾಗವು ಲಿಬಿಯಾ ಮತ್ತು ಅಲ್ಜಿರೀಯಾದಲ್ಲಿದೆ. ನಾವಿರುವ ಊರು ಘಾಟ್ ಸಹರಾ ಮರಭೂಮಿಯ ಮಧ್ಯಯೇ ಇದೆ! ಸುತ್ತಲೂ ಮರಭೂಮಿ. ನಡುವೆ ಈ ಊರು. ಈ ಊರಿಂದಾಚೆ ನಾವು ಯಾವ ದಿಕ್ಕಿನೆಡೆಗಾದರೂ ಸರಿ ಸ್ವಲ್ಪ ದೂರಕ್ಕೆ ನಡೆದುಕೊಂಡು ಬಂದರೆ ಸಾಕು ತಟ್ಟನೆ ನಮ್ಮ ಕಣ್ಣಿಗೆ ಕಾಣಿಸುವದು ಬರೀ ಮರಳು, ಮರಳು ಮತ್ತು ಮರಳು! ಇಲ್ಲಿ ಮರಳು ಬಿಟ್ಟರೆ ಬೆರೇನೂ ಇಲ್ಲ! ಹಾಗಂತಾ ಇತರರಂತೆ ನಾನೂ ನಂಬಿದ್ದೆ. ಆದರೆ ಯಾವಾಗ ಒಮ್ಮೆ ಸಹರಾ ಮರಭೂಮಿಯ ಒಳಹೊಕ್ಕು ಬಂದೆನೋ ಆಗ ನನ್ನ ನಂಬಿಕೆಗಳೆಲ್ಲಾ ತಲೆಕೆಳಗಾಗಿದ್ದವು. ಅಲ್ಲಲ್ಲಿ ಚಿತ್ತಚಿತ್ತಾರವಾಗಿ ಬಿದ್ದುಕೊಂಡ ಒಂದಷ್ಟು ಮರಳು ಗುಡ್ಡಗಳು, ಆ ಗುಡ್ದಗಳ ಅಕ್ಕಪಕ್ಕದಲ್ಲಿ ಬೆಳೆದ ಒಂದಿಷ್ಟು ಹಸಿರು ಪೊದೆಗಳು. ಪೊದೆಗಳಿಗೆ ಸ್ವಲ್ಪ ದೂರದಲ್ಲಿಯೇ ಎತ್ತರಕ್ಕೆ ಬೆಳೆದು ನಿಂತ ಮರಗಳು, ಅಲ್ಲಲ್ಲಿ ಸಿಗುವ ಒಂದಷ್ಟು ಸಿಹಿನೀರ ಒರತೆಗಳು. ಚಿಕ್ಕ ಚಿಕ್ಕ ಝರಿಗಳು, ಬಿಸಿನೀರ ಬುಗ್ಗೆಗಳು, ಇವುಗಳ ಮಧ್ಯ ವ್ಯವಸಾಯಕ್ಕಾಗಿ ಉಪಯೋಗಿಸಲ್ಪಡುವ ಒಂದಷ್ಟು ಫಲವತ್ತಾದ ನೆಲ, ಈ ನೆಲದೊಳಗೆ ಹುದುಗಿರುವ ಅಪಾರ ಅಂತರ್ಜಲ, ವರ್ಷದಲ್ಲಿ ಒಂದೋ ಎರಡೋ ಸಾರಿ ಬೀಳುವ ಮಳೆ, ಅಬ್ಬಾ, ಒಂದೇ? ಎರಡೇ? ಈ ಬೃಹತ್ ಮರಭೂಮಿಯಲ್ಲಿ ಏನೇನೆಲ್ಲಾ ಇದೆ! ಅದನ್ನೆಲ್ಲಾ ಕಂಡುಕೊಳ್ಳುವ ತಾಳ್ಮೆ ಮತ್ತು ವ್ಯವಧಾನ ನಮಗಿರಬೇಕಷ್ಟೇ ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡಿದ್ದೆ.
    ಇಲ್ಲಿನ ಸಹರಾ ಮರಭೂಮಿಯಲ್ಲಿ ಸುಮಾರು 200 ಕಿ.ಮಿ. ಉದ್ದದಷ್ಟು ಬೃಹದಾಕಾರವಾಗಿ ಬೆಳೆದುನಿಂತ ಪರ್ವತವೊಂದಿದೆ. ಅದೇ ‘ಅಕಾಕುಸ್’ ಪರ್ವತ. ಈ ಪರ್ವತ ಘಾಟ್‍ನಿಂದ ಸುಮಾರು 200 ಕಿ.ಮಿ. ದೂರವಿರುವ ಅವಿನಾತ್ ಎಂಬ ಹಳ್ಳಿಯಿಂದ ಆರಂಭವಾಗಿ ಘಾಟ್ ಮೂಲಕ ಹಾಯ್ದು ಇಲ್ಲಿಂದ ಎಂಟು ಕಿ.ಮಿ. ದೂರವಿರುವ ಆಲ್ ಬರ್ಕತ್ ಎಂಬ ಹಳ್ಳಿಯಿಂದ ಸ್ವಲ್ಪ ದೂರಕ್ಕೆ ಸಾಗಿ ಕೊನೆಗೊಳ್ಳುತ್ತದೆ. ಈ ಮರಭೂಮಿಯ ನಡುವೆ ಈ ಪರ್ವತ ಹೇಗೆ ಸೃಷ್ಟಿಯಾಯಿತು ಎಂದು ಸ್ಥಳಿಯರನ್ನು ಕೇಳಿದರೆ ಇಲ್ಲಿ ಹಿಂದೆ ಸಮುದ್ರವಿತ್ತಂತೆ, ಆ ಸಮುದ್ರದಲ್ಲಿ ದೊಡ್ದ ದೊಡ್ದ ಕಲ್ಲಿನ ಬಂಡೆಗಳು, ಬೆಟ್ಟಗುಡ್ಡಗಳು ಇದ್ದು ಸಮುದ್ರ ಕರಗಿಹೋದ ಮೇಲೆ ಬರೀ ಮರಳು ಮತ್ತು ಈ ಕಲ್ಲು ಪರ್ವತ ಮಾತ್ರ ಉಳಿದುಕೊಂಡಿವೆ ಎಂದು ಹೇಳುತ್ತಾರೆ. ‘ಅಕಾಕುಸ್’ ಪರ್ವತ ಅತ್ಯಂತ ಪುರಾತನವಾಗಿದ್ದು ಇಲ್ಲಿ ಈಜಿಪ್ಟ್ ನಾಗರಿಕತೆ ಹುಟ್ಟುವದಕ್ಕಿಂತ ಮುಂಚೆಯೇ ನಮಗೆ ಗೊತ್ತೇ ಇರದ ಪುರಾತನ ನಾಗರಿಕತೆಗಳು ಹುಟ್ಟಿದ್ದವು ಎಂದು ಇತಿಹಾಸಕಾರರು ಹೇಳುತ್ತಾರೆ. ಏಕೆಂದರೆ ಈ ಪರ್ವತದೊಳಗೆ ಹನ್ನೆರೆಡು ಸಾವಿರ ವರ್ಷಗಳಷ್ಟು ಹಳೆಯದಾದ ಗುಹೆಗಳು ಇದ್ದು ಅಲ್ಲಿ ಮಾನವರು ವಾಸಿಸಿದ್ದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ ಹಾಗೂ ಇಲ್ಲಿ ಸಿಕ್ಕ ಕೆಲವು ಆಯುಧಗಳು ಮತ್ತು ಚಿತ್ರಗಳು ಆ ಜನರವೇ ಎಂದು ಹೇಳಲಾಗುತ್ತದೆ. ಏನೇ ಆಗಲಿ ಈ ಅಕಾಕುಸ್ ಪರ್ವತ ಸಹರಾ ಮರಭೂಮಿಗೆ ಒಂದು ಕಳಶವಿದ್ದಂತಿದ್ದು ಇಲ್ಲಿನ ಮರಭೂಮಿಗೆ ಒಂದು ವಿಶೇಷ ಸೌಂದರ್ಯವನ್ನು ತಂದುಕೊಟ್ಟಿದೆ. ಹಾಗೆಂದೇ ಸಹರಾ ಮರಭೂಮಿಯನ್ನು ನೋಡಲು ಬಂದ ಪ್ರವಾಸಿಗರ್ಯಾರು ಇದನ್ನು ನೋಡದೆ ಹಾಗೆ ಹೋಗುವದಿಲ್ಲ. ಇಲ್ಲಿಗೆ ಸಾಕಷ್ಟು ಜನ ಯೂರೋಪಿಯನ್ನರು ಪ್ರವಾಸಕ್ಕೆಂದು ಬಂದು ಮರಭೂಮಿಯ ಮಧ್ಯ ಟೆಂಟ್‍ಗಳನ್ನು ಹಾಕಿಕೊಂಡು ಎರಡ್ಮೂರು ದಿನವಿದ್ದು ಹೋಗುತ್ತಾರೆ. ಘಾಟ್‍ನಿಂದ ಹನ್ನೆರೆಡು ಕಿ.ಮಿ. ದೂರದಲ್ಲಿ ಅಂದರೆ ಸಹರಾ ಮರಭೂಮಿಯ ಅಂತರಾಳದಲ್ಲಿ ಬಿಸಿನೀರಿನ ಬುಗ್ಗೆಯೊಂದು ಇದೆ. ಆ ಬಿಸಿನೀರಿನ ಬುಗ್ಗೆ ವಿಶೇಷ ಔಷಧಿ ಗುಣಗಳನ್ನು ಹೊಂದಿದ್ದು ಕೀಲುನೋವು. ಮಂಡಿನೋವು, ಹಾಗೂ ಚರ್ಮರೋಗವನ್ನು ಬಹುಬೇಗನೆ ಗುಣಪಡಿಸುತ್ತದೆ ಎಂದು ಇಲ್ಲಿನವರು ಹೇಳುತ್ತಾರೆ. ಈ ಬಿಸಿನೀರಿನ ಬುಗ್ಗೆಗೆ ಎರಡು ಪ್ರತ್ಯೇಕ ಪೈಪ್‍ಗಳನ್ನು ಜೋಡಿಸಿದ್ದು ಅವು ಹೆಂಗಸರಿಗೆ ಮತ್ತು ಗಂಡಸರಿಗೆ ಪ್ರತ್ಯೇಕವಾಗಿ ಕಟ್ಟಿಸಲಾದ ಸ್ನಾನಗೃಹದ ಎರಡು ದೊಡ್ಡ ಟಬ್‍ಗಳಿಗೆ ಬೀಳುವಂತೆ ಮಾಡಿದ್ದಾರೆ. ಆ ಟಬ್‍ನಲ್ಲಿ ಸುಮಾರು ಎಂಟತ್ತು ಜನ ಒಟ್ಟಿಗೆ ಸ್ನಾನಮಾಡಬಹುದು. ಕೀಲುನೋವು, ಮಂಡಿನೋವು, ಹಾಗೂ ಚರ್ಮರೋಗದ ಖಾಯಿಲೆಯಿರುವವರು ಚಿಕಿತ್ಸೆ ಪಡೆಯಲು ಗಂಟೆಗಟ್ಟಲೆ ಈ ಟಬ್‍ನಲ್ಲಿ ಬಿದ್ದುಕೊಂಡಿರುತ್ತಾರೆ. ಎಷ್ಟೋ ಜನ ದೂರದ ಊರುಗಳಿಂದ ಬಂದು ಇಲ್ಲಿ ಟೆಂಟ್ ಹಾಕಿಕೊಂಡು ತಿಂಗಳಾನುಗಟ್ಟಲೆ ವಾಸಮಾಡಿ ಚಿಕಿತ್ಸೆ ಪಡೆದು ಹಿಂದಿರುಗುತ್ತಾರೆ.
    ನಾನಿರುವ ಊರು ಘಾಟ್‍ನಿಂದ 100 ಕಿ.ಮಿ. ದೂರದಲ್ಲಿರುವ ಅವಿನಾತ್ ಎಂಬ ಊರಿದೆ. ಅಲ್ಲಿನ ಸಹರಾ ಮರಭೂಮಿಯಲ್ಲಿ ನೈಸರ್ಗಿಕವಾಗಿ ಉದ್ಭವಿಸಿದ ಅಪರೂಪದ ಶಿಲಾಕೃತಿಗಳಿವೆ. ಅವು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ನೋಡಲು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಇಲ್ಲಿಂದ 350 ಕಿ.ಮಿ. ದೂರದಲ್ಲಿರುವ ಒಬಾರಿ ಎಂಬ ಪಟ್ಟಣಕ್ಕೆ ಹತ್ತಿರದಲ್ಲಿ “ಗೆಬ್ರಾನ್” ಎಂಬ ಒಂದು ಸರೋವರವಿದೆ. ಇದು ನಯನಮನೋಹರವಾಗಿದ್ದು ಲಿಬಿಯಾದಲ್ಲಿ ಅತ್ಯಂತ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದೆ. ಇದು ಮರಳು ದಿನ್ನೆಗಳ ಮಧ್ಯ ಇದ್ದು ಸುತ್ತಲೂ ತಾಳೆಮರಗಳಿಂದ ಆವರಿಸಲ್ಪಟ್ಟಿದೆ. “ಗೆಬ್ರಾನ್” ಎನ್ನುವದು ಗೆಬರ್ (ಸಮಾಧಿ) ಮತ್ತು ಆನ್ (ಒಂದು ಹೆಸರು) ಎಂಬ ಎರಡು ಪದಗಳಿಂದ ಉಂಟಾಗಿದ್ದು ಪುರಾತನ ಕಾಲದ ವಲಸೆಗರ ಗುಂಪೊಂದು ಇಲ್ಲಿ ಸ್ವಲ್ಪ ದಿವಸ ತಂಗಿ ಮುಂದೆ ಹೋಗಿರಬಹುದು ಎಂದು ಹೇಳಲಾಗುತ್ತದೆ. ಅದಕ್ಕೆ ಸಾಕ್ಷಿಯಾಗಿ ಮರಳಲ್ಲಿ ಹೂತು ಹೋದ ಅವರ ಸಮಾಧಿಗಳು ಈಗಲೂ ಕಾಣಿಸುತ್ತವೆ. ಇಲ್ಲಿಂದ ಸ್ವಲ್ಪ ದೂರದಲ್ಲಿಯೇ ಫೆಜಾನ್ ಎಂಬ ಹಳ್ಳಿಯಿದೆ. ಇಲ್ಲಿ ಪೆಲಿಯೋಲಿಥಿಕ್ ಮತ್ತು ನಿಯೋಲಿಥಿಕ್ ಕಾಲದ ಜನರು ಬಳಸುತ್ತಿದ್ದ ಕೊಡ್ಲಿ ಹಾಗೂ ಮತ್ತಿತರ ಆಯುಧಗಳು ದೊರಕಿವೆ ಎಂದು ಭೂಗರ್ಭಶಾಸ್ತ್ರಜ್ಞರು ಹೇಳುತ್ತಾರೆ.
     ಮರುಭೂಮಿಯಲ್ಲಿ ನೀರು ಸಿಗುವದೆಂದರೆ ಕೇವಲ ಓಯಾಸಿಸ್ನಲ್ಲಿ ಮಾತ್ರ ಎಂದುಕೊಂಡಿರುವ ಜನರಿಗೆ ಇಲ್ಲೂ ಅಂತರ್ಜಲ ಅಪಾರವಾಗಿದ್ದು ನೆಲದಲ್ಲಿ ನೀರು ಹೇರಳವಾಗಿ ಓಡಾಡುತ್ತಿದೆ ಎಂಬುದು ಗೊತ್ತಿರುವುದಿಲ್ಲ. ಅದೂ ಇಲ್ಲಿನ (ಬೇರೆ ಕಡೆ ಹೇಗೋ ಗೊತ್ತಿಲ್ಲ) ಸಹರಾ ಮರಭೂಮಿಯಲ್ಲಿ ಅಂತರ್ಜಲ ಸಮೃದ್ಧವಾಗಿದ್ದು ಸುಮಾರು ನಲವತ್ತು ಐವತ್ತು ಅಡಿಗೆಲ್ಲಾ ನೀರು ಸಿಕ್ಕುಬಿಡುತ್ತದೆ. ಇತ್ತೀಚಿಗೆ ಇಲ್ಲಿ ಭೂವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪ್ರಕಾರ ಬೇರೆ ಜಾಗಕ್ಕಿಂತ ಇಲ್ಲಿ ಅಂತರ್ಜಲ ಹತ್ತುಪಟ್ಟು ಹೆಚ್ಚಾಗಿದೆಯೆಂದು ತಿಳಿದುಬಂದಿದೆ. ಹಾಗೆಂದೇ ಇಲ್ಲಿ ಯಾವ ಜಾಗದಲ್ಲಿ ಬೇಕಾದರೂ ಬೋರ್ ಹಾಕಿದರೆ ಬಹಳ ಬೇಗನೆ ನೀರು ಸಿಕ್ಕುಬಿಡುತ್ತದೆ ಮತ್ತು ಅದು ಹೆಚ್ಚುಕಮ್ಮಿ ಸಿಹಿಯಾಗಿರುತ್ತದೆ. ನೀವು ನಂಬುತ್ತಿರೋ ಇಲ್ವೋ ಘಾಟ್‍ನಲ್ಲಿ ನಮ್ಮ ಕಾಲೇಜು ಹತ್ತಿರದಲ್ಲಿ ಬೋರ್ವೆಲ್‍ವೊಂದನ್ನು ಹಾಕಿದ್ದು ಅದು ಸುಮಾರು 35 ವರ್ಷಗಳಿಂದ ಅರ್ಧ ಘಾಟ್‍ಗಾಗುವಷ್ಟು ನೀರನ್ನು ಒದಗಿಸುತ್ತಿದೆಯೆಂದೂ ಇಷ್ಟಾದರೂ ಅದರ ಅಂತರ್ಜಲ ಮಾತ್ರ ಕುಸಿದಿಲ್ಲವೆಂದೂ ಇಲ್ಲಿಯ ಜನ ಹೇಳುತ್ತಾರೆ. ಆರು ವರ್ಷದ ನನ್ನ ಘಾಟ್ ಜೀವನದಲ್ಲಿ ಒಂದು ವರ್ಷವೂ ಇಲ್ಲಿನ ಜನ ನೀರಿಗಾಗಿ ತಹತಹಿಸಿದ್ದನ್ನು ನಾನು ನೋಡಿಲ್ಲ. ಮಳೆಯೇ ಬೀಳದ ಈ ಪ್ರದೇಶದಲ್ಲಿ ಅದ್ಹೇಗೆ ನೀರು ಶೇಖರಣೆಗೊಂಡಿದೆ ಹಾಗೂ ವರ್ಷದಿಂದ ವರ್ಷಕ್ಕೆ ಅದ್ಹೇಗೆ ಹೆಚ್ಚುತ್ತಾ ಹೋಗುತ್ತದೆ ಎನ್ನುವ ಪ್ರಶ್ನೆಗೆ ನನಗೆ ಈಗಲೂ ಉತ್ತರ ಸಿಕ್ಕಿಲ್ಲ.
    1953ರಲ್ಲಿ ತೈಲ ಹುಡುಕಾಟಕ್ಕಾಗಿ ಇಲ್ಲಿನ ಭೂಮಿಯನ್ನು ಕೊರಯುತ್ತಿರಬೇಕಾದರೆ ಅಪಾರ ಪ್ರಮಾಣದ ಸಿಹಿನೀರು ಚಿಮ್ಮಿ ಇಲ್ಲಿನ ನೆಲದೊಳಗೆ ಅಡಗಿರುವ ಅಪಾರ ಪ್ರಮಾಣದ ಜಲಸಂಪತ್ತನ್ನು ಪರಿಚಯಿಸತಂತೆ. ಮುಂದೆ 1969ರಲ್ಲಿ ಅಧಿಕಾರಕ್ಕೆ ಬಂದ ಗಡಾಫಿ ಇದರ ಸದ್ಬಳಕೆ ಮಾಡಿಕೊಳ್ಳಲು ಮಾನವ ನಿರ್ಮಿತ ನೀರಾವರಿ ಯೋಜನೆಯೊಂದಕ್ಕೆ ಕೈಹಾಕಿದನಂತೆ. ಅದು 1984ರಲ್ಲಿ ಪೂರ್ಣಗೊಂಡು ಜಗತ್ತಿನ ಅತಿ ದೊಡ್ದ ಮಾನವ ನಿರ್ಮಿತ ನದಿಯೆಂಬ ಹೆಗ್ಗಳಿಕೆಗೆ ಪಾತ್ರವಾಯಿತಂತೆ. ಇಡಿ ಲಿಬಿಯಾದ ತುಂಬಾ ಸುಮಾರು 1,300 ಬಾವಿಗಳಿದ್ದು ದಿನವೊಂದಕ್ಕೆ 7,100,000 ಕ್ಯೂಬಿಕ್ ಮೀಟರ್ ಗಳಷ್ಟು ಟ್ರಪೋಲಿ, ಬೆಂಗಾಜಿ, ಸಿರ್ತ್ ಮುಂತಾದ ನಗರಗಳಿಗೆ ನೀರು ಸರಬರಜಾಗುತ್ತದೆ ಹಾಗೂ ಇದೇ ನೀರನ್ನು ಉಪಯೋಗಿಸಿಕೊಂಡು ಮರಭೂಮಿಯಲ್ಲಿ ಅಲ್ಲಲ್ಲಿ ಬೇಸಾಯ ಮಾಡಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುವವರಿದ್ದಾರೆ. ಹಾಗೆ ನೋಡಿದರೆ ಲಿಬಿಯಾದ ಕೃಷಿ ಚಟುವಟಿಕೆಗಳು ಹೆಚ್ಚು ನಡೆಯುವದು ಸಮುದ್ರ ತೀರದ ಪ್ರದೇಶಗಳಲ್ಲಿ. ಅಲ್ಲಿ ಮುಖ್ಯವಾಗಿ ಬಾರ್ಲಿ, ಗೋದಿ, ಟೊಮ್ಯಾಟೋ, ಕಿತ್ತಳೆ, ಸೇಬು, ಕಲ್ಲಂಗಡಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಹಾಗೆಂದೇ ಹೆಚ್ಚಿನ ತರಕಾರಿಗಳು ಟ್ರಿಪೋಲಿ, ಬೆಂಗಾಜಿಯಿಂದ ಇಲ್ಲಿಗೆ ರವಾನೆಯಾಗುತ್ತವೆ. ಆದರೆ ಇಲ್ಲಿ ಮರಭೂಮಿಯಲ್ಲಿ ಸಣ್ಣ ಪ್ರಮಾಣದಲ್ಲಿ ಗೋದಿ, ಬಾರ್ಲಿ, ಕಲ್ಲಂಗಡಿ, ಟೊಮ್ಯಾಟೋ ಮತ್ತು ಮುಖ್ಯವಾಗಿ ಖರ್ಜೂರಗಳನ್ನು ಬೆಳೆಯುತ್ತಾರೆ. ಲಿಬಿಯಾದ ದಕ್ಷಿಣ ಭಾಗದಲ್ಲಿ ಹೆಚ್ಚು ಹಳ್ಳಿಗಳೇ ಇದ್ದು ಇಲ್ಲಿನ ಜನರು ಆಡುಕುರಿಗಳನ್ನು ಸಾಕುವದರಿಂದ ಅವಕ್ಕೆ ಬೇಕಾದ ಹುಲ್ಲನ್ನು ಸಹ ಬೆಳೆದು ಮಾರುತ್ತಾರೆ. ಆದರೆ ಹಾಲು ಮತ್ತು ಮೊಸರಿನ ಪ್ಯಾಕ್ಗಳು ಇಲ್ಲಿಂದ 1500 ಕಿ.ಮಿ. ದೂರದಲ್ಲಿರುವ ಮಿಸ್ರತಾ ಎಂಬ ಊರಿನಿಂದ ಇಲ್ಲಿಗೆ ಬರುತ್ತವೆ. ಮತ್ತು ಬಹಳಷ್ಟು ತರಕಾರಿಗಳು ಸೆಭಾ ಮತ್ತು ಒಬಾರಿಯಿಂದ ಇಲ್ಲಿಗೆ ರವಾನೆಯಾಗುತ್ತವೆ. ಅಂದಹಾಗೆ ಇಲ್ಲಿನವರು ಆಡುಕರಿಗಳನ್ನು ಸಾಕುವದು ಹಬ್ಬಹರಿದಿನಗಳಲ್ಲಿ ಅವುಗಳನ್ನು ಮಾರಿ ಲಾಭಮಾಡಿಕೊಳ್ಳುವದಕ್ಕೆ. ಅಂದರೆ ಅವು ಚಿಕ್ಕವಾಗಿದ್ದಾಗ ಸಣ್ಣ ಬೆಲೆಗೆ ತಂದು ತಮ್ಮ ಫಾರ್ಮ್ ಹೌಸ್‍ಗಳಲ್ಲಿ ಸಾಕಿ ಅವಕ್ಕೆ ಚನ್ನಾಗಿ ತಿನಿಸಿ ದೊಡ್ದದಾದ ಮೇಲೆ ರಮದಾನ್ ಮತ್ತು ಈದ್ ಹಬ್ಬಗಳಿಗೆ ಇತರರಿಗೆ ಒಳ್ಳೆ ಬೆಲೆಗೆ ಮಾರಿ ಲಾಭಮಾಡಿಕೊಳ್ಳುತ್ತಾರೆ.

    ಈಗ ಹೇಳಿ ಮರಭೂಮಿಯೆಂದರೆ ಬರೀ ಬಿಸಿಲು ಮತ್ತು ಮರಳು ಮಾತ್ರವೇ?



    -ಉದಯ್ ಇಟಗಿ