Demo image Demo image Demo image Demo image Demo image Demo image Demo image Demo image

ಮರಣ ವೃತ್ತಾಂತ

  • ಶುಕ್ರವಾರ, ಮೇ 07, 2010
  • ಬಿಸಿಲ ಹನಿ
  • ಆತ್ಮೀಯರೆ,
    ಏ.ಕೆ.ರಾಮಾನುಜನ್ ಭಾರತೀಯ ಪ್ರಸಿದ್ಧ ಇಂಗ್ಲೀಷ್ ಕವಿ. “ಮರಣ ವೃತ್ತಾಂತ” (Obituary) ಎನ್ನುವದು ಅವರು ಅವರಪ್ಪ ಸತ್ತ ಮೇಲೆ ಬರೆದ ಒಂದು ಕವನ. ಸಾಮಾನ್ಯವಾಗಿ ನಾವೆಲ್ಲ ವ್ಯಕ್ತಿ ಸತ್ತ ಮೇಲೆ ಅವರನ್ನು ಹೊಗಳುತ್ತಾ, ಉತ್ಪ್ರೇಕ್ಷಿಸುತ್ತಾ ಅವರ ಬಗ್ಗೆ ಬರೆದು ದಿನ ಪತ್ರಿಕೆಗಳಲ್ಲಿ ಪ್ರಕಟಿಸುತ್ತೇವೆ. ಆದರೆ ಇಲ್ಲಿ ಕವಿ ಅವರಪ್ಪನನ್ನು ಇದ್ದಕ್ಕಿದ್ದಂತೆ ಈ “ಮರಣ ವೃತ್ತಾಂತ”ದಲ್ಲಿ ಸೆರೆ ಹಿಡಿದಿದ್ದಾರೆ. ಬಹುಶಃ ಕವಿಯ ಅಪ್ಪ ತನ್ನ ಕುಟುಂಬದವರ ಜೊತೆ ಅಷ್ಟೊಂದು ಚನ್ನಾಗಿರಲಿಲ್ಲವೆಂದು ಕಾಣುತ್ತದೆ. ಅಥವಾ ಅವನೊಬ್ಬ ಬೇಜವಾಬ್ದಾರಿ ಅಪ್ಪನಾಗಿರಬಹುದು. ಆ ಕಾರಣಕ್ಕೆ ಕವಿ ಅಪ್ಪನ ಮೇಲೆ ಸಿಟ್ಟಾಗಿದ್ದಾನೆ. ಆ ಸಿಟ್ಟು ಕವನದುದ್ದಕ್ಕೂ ಕಾಣುತ್ತದೆ. ಇಲ್ಲಿ ವ್ಯಕ್ತಿ ಸತ್ತ ಮೇಲೆ ಅವನಿರುವಂತೆ ಅವನನ್ನು ಸೆರೆಹಿಡಿದಿರುವದು ಕವಿಯ ನೇರ ಹಾಗೂ ನಿಷ್ಟುರ ನಡವಳಿಕೆಯನ್ನು ತೋರಿಸುತ್ತದೆ.


    ಅಪ್ಪ ಸತ್ತಾಗ
    ನಮಗೆ ಅಂತಾ ಬಿಟ್ಟು ಹೋಗಿದ್ದು
    ಮೇಜಿನ ತುಂಬ ಒಂದಷ್ಟು ಧೂಳು ತುಂಬಿದ ಕಾಗದ ಪತ್ರಗಳು,
    ಒಂದಿಷ್ಟು ಸಾಲ, ಒಂದಿಬ್ಬರು ಅವಿವಾಹಿತ ಹೆಣ್ಣುಮಕ್ಕಳು
    ಹಾಗೂ ಇನ್ನೂ ಹಾಸಿಗೆಯಲ್ಲೇ ಉಚ್ಚೇ ಮಾಡುವ ಮೊಮ್ಮಗ.
    ಸಾಲದ್ದಕ್ಕೆ ಆ ಮೊಮ್ಮಗನಿಗೆ ಅವ ಸತ್ತ ಮೇಲೆ
    ಆಕಸ್ಮಿಕವಾಗಿ ಇವನ ಹೆಸರನ್ನೇ ಇಡಬೇಕಾಯಿತು.


    ಜೊತೆಗೆ ಅವನು ನಮಗೆ ಅಂತಾ ಬಿಟ್ಟು ಹೋಗಿದ್ದು
    ಮನೆಯಂಗಳದಲ್ಲಿನ ಬಾಗಿದ ತೆಂಗಿನ ಮರಕ್ಕೆ ಆತುಕೊಂಡೇ ನಿಂತಿರುವ
    ಹಾಗೂ ನಾವು ಮುದುಕರಾಗುವಷ್ಟೊತ್ತಿಗೆ ಬಿದ್ದು ಹೋಗುವ ಮನೆ.
    ಸದಾ ಒಣಗಿ ಕೃಶವಾಗಿದ್ದ ಅಪ್ಪ
    ಉರಿಯಲು ತಯಾರಾಗಿದ್ದವನಂತೆ
    ಆತನ ಹೆಣ ಸುಡುವಾಗ ಪುರಪುರನೆ ಉರಿದುಹೋದ.


    ಇದಲ್ಲದೆ ಗಂಡು ಮಕ್ಕಳಿಗೆ ಅಂತಾ ಅವ ಬಿಟ್ಟು ಹೋಗಿದ್ದು
    ಅರ್ಧ ಸುಟ್ಟ ಒರಟೊರಟಾದ ಬೆನ್ನು ಮೂಳೆಗಳು.
    ಪುರೋಹಿತರು ಹೇಳಿದಂತೆ
    ನಾವವನ್ನು ಹುಶಾರಾಗಿ ಆಯ್ದುಕೊಂಡು
    ಹತ್ತಿರದ ರೈಲು ನಿಲ್ದಾಣದ ಬಳಿಯಿರುವ
    ತ್ರಿವೇಣಿ ಸಂಗಮದಲ್ಲಿ ಪೂರ್ವಾಭಿಮುಖವಾಗಿ ನಿಂತು
    ನದಿಯಲ್ಲಿ ತೇಲಿಬಿಟ್ಟೆವು.
    ಹೀಗಾಗಿ ಅವನ ಹೆಸರು,
    ಜನನ, ಮರಣದ ದಿನಾಂಕಗಳನ್ನೊಳಗೊಂಡ
    ಗೋರಿಯನ್ನಾಗಲಿ, ಸಮಾಧಿಯನ್ನಾಗಲಿ
    ರಚಿಸುವ ಪ್ರಮೇಯ ಬೀಳಲಿಲ್ಲ.

    ಅಪ್ಪ ತನ್ನನ್ನೂ ಒಳಗೊಂಡಂತೆ
    ಯಾವುದನ್ನೂ ಸರಿಯಾಗಿ ನಿಭಾಯಿಸಲಿಲ್ಲ.
    ಅವನು ಎಷ್ಟು ಸುಲುಭವಾಗಿ ಹುಟ್ಟಿದನೋ
    ಅಷ್ಟೇ ಸುಲಭವಾಗಿ ಸತ್ತು ಹೋದ.
    ಒಂದು ಮಟ ಮಟ ಮಧ್ಯಾಹ್ನ
    ಮದ್ರಾಸಿನ ಬ್ರಾಹ್ಮಣ ಕೇರಿಯೊಂದರಲ್ಲಿ ಸಿಸೇರಿಯನ್ ಮೂಲಕ ಹುಟ್ಟಿದ,
    ಅಂತೆಯೇ ಹಣ್ಣಿನ ಮಾರ್ಕೇಟೊಂದರಲ್ಲಿ
    ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸತ್ತು ಹೋದ.


    ಆದರೆ ನಾಲ್ಕು ದಿನಗಳ ನಂತರ
    ಯಾರೋ ಒಬ್ಬರು ನನಗೆ ಹೇಳಿದರು
    ಪತ್ರಿಕೆಯೊಂದರ ಒಳಪುಟಗಳಲ್ಲಿ
    ಅವನ ಬಗ್ಗೆ ಎರಡು ಸಾಲು ಹೊಗಳಿ ಬರೆಯಲಾಗಿದೆಂದು
    ಅವ ಸತ್ತು ನಾಲ್ಕು ವಾರಗಳ ನಂತರ
    ಅದನ್ನೇ ಗುಜರಿ ಅಂಗಡಿಯವನಿಗೆ ಮಾರಲಾಗಿತ್ತು.
    ಅವನದನ್ನು ತಿರುಗಿ ನಾನು ದಿನಸಿ ಸಾಮಾನುಗಳನ್ನು ಕೊಳ್ಳುವ
    ಕಿರಾಣಿ ಅಂಗಡಿಯವನಿಗೆ ಮಾರಿದ್ದ.
    ಆ ಅಂಗಡಿಯವನು ಕಟ್ಟಿಕೊಟ್ಟ ಪೊಟ್ಟಣಗಳಲ್ಲಿ
    ಬರುವ ಸುದ್ದಿಗಳನ್ನು ನಾನು ಆಗಾಗ ಮೋಜಿಗಾಗಿ ಓದುವದು ರೂಡಿ.
    ಅಂತೆಯೇ ಅಪ್ಪನ ಮರಣ ವೃತ್ತಾಂತದ ಸಾಲುಗಳು
    ಇಲ್ಲಿ ಏನಾದರೂ ಸಿಗುತ್ತವೆಯೇನೋ ಎಂದು ಹುಡುಕಾಡುತ್ತೇನೆ.

    ಏನಾದರಾಗಲಿ ಅವ ಹೊರಟು ಹೋಗಿದ್ದಾನೆ ನಮ್ಮನ್ನೆಲ್ಲ ಬಿಟ್ಟು
    ನಮಗೆ ಅಂತಾ ಬೇರೇನನ್ನೂ ಬಿಡದಿದ್ದರೂ
    ಬಿಟ್ಟು ಹೋಗಿದ್ದಾನೆ ಬದಲಾದ ಅಮ್ಮನನ್ನು
    ಹಾಗೂ ವರ್ಷ ವರ್ಷವೂ ಮಾಡಲೇಬೇಕಾದ ಅವನ ತಿಥಿಯನ್ನು!


    ಮೂಲ ಇಂಗ್ಲೀಷ್: ಏ.ಕೆ.ರಾಮಾನುಜನ್
    ಭಾವಾನುವಾದ: ಉದಯ್ ಇಟಗಿ

    2 ಕಾಮೆಂಟ್‌(ಗಳು):

    sunaath ಹೇಳಿದರು...

    ಅಪ್ಪನ ಬಗೆಗೆ ನಿರ್ಭಾವುಕತೆಯಿಂದ ಬರೆದ ಕವನವಿದು.
    ಅನುವಾದವನ್ನು ತುಂಬ ಸಮರ್ಥವಾಗಿ ಮಾಡಿದ್ದೀರಿ.
    ಲಂಕೇಶರ ‘ಅಮ್ಮ’ ಕವನವು ಥಟ್ಟನೆ ನೆನಪಾಯಿತು. ಎರಡರ ಭಾವಗಳ ನಡುವೆ ಅಜಗಜಾಂತರ!

    Unknown ಹೇಳಿದರು...

    Hummmm... Anuvaada chennaagittu..