Demo image Demo image Demo image Demo image Demo image Demo image Demo image Demo image

ಇರಲೇ? ಇರದಿರಲೇ? ಇದು ಪ್ರಶ್ನೆ

  • ಶುಕ್ರವಾರ, ಜುಲೈ 05, 2013
  • ಬಿಸಿಲ ಹನಿ
  • ಇಲ್ಲಿ ಈಗಾಗಲೇ ವಾರ್ಷಿಕ ಪರೀಕ್ಷೆಗಳನ್ನು ಮುಗಿಸಿ ಬೇಸಿಗೆಯ ರಜೆಯ ಮೇರೆಗೆ ನಾವೆಲ್ಲಾ ನಮ್ಮನಮ್ಮ ದೇಶಗಳಿಗೆ ಹೋಗಲು ಕಾತುರರಾಗಿದ್ದೇವೆ. ಪ್ರತಿವರ್ಷದಂತೆ ಈ ವರ್ಷವೂ ಬೇಸಿಗೆ ರಜೆಗೆ ನಮ್ಮನ್ನು ನಮ್ಮನಮ್ಮ ಊರುಗಳಿಗೆ ಕಳಿಸಲು ನಮ್ಮ ಯೂನಿವರ್ಷಿಟಿಯವರು ಟಿಕೇಟ್‍ಗಳನ್ನು ಸಿದ್ಧಪಡಿಸುತ್ತಿದ್ದಾರೆ. ಬಹುಶಃ, ಈ ತಿಂಗಳು 20 ರಂದು ನಾವು ಇಲ್ಲಿಂದ ಹೊರಡಬಹುದು. ಹೋದ ಮೇಲೆ ಮತ್ತೆ ಇಲ್ಲಿಗೆ ಹಿಂದಿರುಗಿ ಬರುತ್ತೇನೇಯೇ? ಗೊತ್ತಿಲ್ಲ! ಏಕೆಂದರೆ ಈಗ್ಗೆ ಒಂದು ತಿಂಗಳಿನಿಂದ ಮತ್ತೆ ಲಿಬಿಯಾಕ್ಕೆ ವಾಪಾಸಾಗಬೇಕೇ? ಬೇಡವೇ? ಎನ್ನುವ ಸಂದಿಗ್ಧತಯಲ್ಲಿ ಸಿಲುಕಿದ್ದೇನೆ. ಆ ಸಂದಿಗ್ಧತೆ ಅದೆಷ್ಟು ತೀವ್ರವಾಗಿದೆಯೆಂದರೆ ಯೋಚಿಸಿದಷ್ಟೂ ಅದು ನನ್ನನ್ನು ಮತ್ತೊಂದು, ಮಗದೊಂದು ಸಂದಿಗ್ಧತೆಗಳ ಸುಳಿಗೆ ದೂಡಿ ಮತ್ತಷ್ಟು ಕಂಗೆಡಿಸುತ್ತಿದೆ.


    ಪ್ರತಿವರ್ಷದಂತೆ ಈ ವರ್ಷವೂ ನಮ್ಮ ಯೂನಿವರ್ಷಿಟಿಯಿಂದ ಬಂದ “ನಿಮ್ಮನ್ನು ಮುಂದಿನ ವರ್ಷಕ್ಕೆ Renew ಮಾಡಲಾಗಿದೆ” ಎನ್ನುವ ಪತ್ರವನ್ನು ನಮ್ಮ ಡೀನ್ ನನ್ನ ಕೈಗಿಟ್ಟಾಗ ನಾನು ಖುಷಿಯಾಗಿದ್ದು ಸುಳ್ಳಲ್ಲ. ಇನ್ನೊಂದೆರೆಡು ವರ್ಷ ಅದ್ಹೇಗೋ ಇಲ್ಲಿ ಕಳೆದುಬಿಟ್ಟರೆ ಬೆಂಗಳೂರಿನಲ್ಲಿ ನನ್ನ ಕನಸಿನ ಮನೆ ಕಟ್ಟಬಹುದು, ಆಮೇಲೆ ಖಾಯಂ ಆಗಿ ಬೆಂಗಳೂರಿಗೆ ವಾಪಾಸಾಗಿ ಅಲ್ಲೇ ಏನಾದರು ಮಾಡಬಹುದು ಎಂದು ಹರ್ಷದಿಂದ ಕುಣಿದಾಡಿದ್ದೆ. ಜೊತೆಗೆ ಮನೆ ಹೇಗೆ ಕಟ್ಟಬೇಕು ಎನ್ನುವದರ ಬಗ್ಗೆ ಪ್ರತಿ ನಿಮಿಷವೂ ಇನ್ನಿಲ್ಲದಂತೆ ಕನಸುಕೊಂಡಿದ್ದೆ.

    ಆದರೆ ಅದೇಕೋ ಗೊತ್ತಿಲ್ಲ ಈಗ್ಗೆ ಒಂದು ತಿಂಗಳಿನಿಂದ ನಾನಿರುವ ಜಾಗ ಘಾಟ್ ಬಗ್ಗೆ ನನ್ನ ಮನಸ್ಸು ಬೋರೆದ್ದು ಹೋಗಿದ್ದೆ. ನಾನಿರುವ ಊರು ಘಾಟ್ ಬಂದು ಸಣ್ಣ ಹಳ್ಳಿಯಾದರೂ ಮೂಲಭೂತ ಸೌಕರ್ಯಗಳಿಗೇನೂ ಕೊರತೆಯಿಲ್ಲ. ಆದರೆ ಬೇಸರ ತರಿಸುವಂಥ ಜಾಗ. ಇಲ್ಲಿ ಒಂದು ಸರಿಯಾದ ಸಿನೆಮಾ ಥೇಟರ್ ಇಲ್ಲ. ಸಾಯಂಕಾಲ ಸುತ್ತಾಡಿಕೊಂಡು ಬರಲು ಒಂದು ಪಾಶ್ ಏರಿಯಾ ಇಲ್ಲ. ಒಂದು ಪಾರ್ಕ್ ಇಲ್ಲ. ಕ್ಲಬ್ಬುಗಳಿಲ್ಲ, ಶಾಪಿಂಗ್ ಮಾಲ್‍ಗಳಿಲ್ಲ, ಹಾಗೆಂದೇ ನಾವು ಇಲ್ಲಿ ಟೀವಿ ಮತ್ತು ಇಂಟರ್ನೆಟ್‍ಗೆ ಅಡಿಕ್ಟ್ ಆಗಿಬಿಟ್ಟೆವು. ಆದರೆ ಘಾಟ್‍ನ ಜನರನ್ನು, ಅವರ ಒಳ್ಳೆಯತನವನ್ನು ಎಂದಾದರೂ ಮರೆಯಲು ಸಾಧ್ಯವೇ? ಅವರು ನಮಗೆ ಕೊಡುವ ಮರ್ಯಾದೆ, ಗೌರವವನ್ನು ಹೇಗೆ ತಾನೇ ಮರೆಯಲು ಸಾಧ್ಯ?

    ಹೀಗಿದ್ದೂ ಈ ಸಹರಾ ಮರಭೂಮಿಯಲ್ಲಿ ನಾನು ಅದ್ಹೇಗೋ ಆರು ವರ್ಷಗಳನ್ನು ಕಳೆದುಬಿಟ್ಟೆ. ನನ್ನ ಆರು ವರ್ಷಗಳಲ್ಲಿ ಈ ಮರಭೂಮಿ ನನಗೆ ಒಂದಿಷ್ಟು ಹಸಿರು ಹಸಿರಾದ ನೆನಪುಗಳನ್ನು ಕೊಟ್ತಿದೆ. ಜೊತೆಗೆ ಹೈಪೋಥೈರಾಡಿಸಂ ಮತ್ತು ಸಕ್ಕರೆ ಕಾಹಿಲೆಗಳನ್ನು ಸಹ ಕೊಟ್ಟಿದೆ. ನಾನಿಲ್ಲಿ ಆರು ವರ್ಷಗಳನ್ನು ಕಳೆದಿದ್ದರಿಂದ ಈ ಊರು ನನಗೆ ತಾಳ್ಮೆಯಿಂದ ಹೇಗಿರಬೇಕೆಂಬುದನ್ನು ಕಲಿಸಿದೆ. ಬೇರೆ ಬೇರೆ ದೇಶದ ಒಳ್ಳೆಯ ಗೆಳೆಯರನ್ನು ಕೊಟ್ಟಿದೆ. ನನ್ನ ವೃತ್ತಿಗೆ ಸಂಬಂಧಪಟ್ಟ ಹಾಗೆ ಒಂದಷ್ಟು ಹೊಸ ಹೊಸ ವಿಷಯಗಳನ್ನು ಕಲಿಸಿದೆ. ಇಲ್ಲಿ ಸಾಕಷ್ಟು ಸಮಯ ಸಿಗುತ್ತಿದುದರಿಂದ ಒಳ್ಳೊಳ್ಳೆ ಪುಸ್ತಕಗಳನ್ನು ಓದಿದ್ದೇನೆ. ಒಳ್ಳೊಳ್ಳೆ (ಬೆಂಗಳೂರಿನಲ್ಲಿ ನೋಡಲು ಸಾಧ್ಯವಾಗದ) ಸಿನಿಮಾಗಳನ್ನು ನೋಡಿದ್ದೇನೆ.

    ಇಲ್ಲಿ ಕೆಲಸ ಮಾಡಿದ್ದರಿಂದಲೇ ನನಗೆ ಬೆಂಗಳರಿನಲ್ಲಿ ಎರಡು ಸೈಟ್‍ಗಳನ್ನು ತೆಗೆಯಲು ಸಾಧ್ಯವಾಯಿತು. ಮನೆಯೊಂದನ್ನು ಕಟ್ಟುವದು ಬಾಕಿಯಿದೆ. ಹಾಗಾಗಿ ಇನ್ನೊಂದೆರೆಡು ವರ್ಷ ಇಲ್ಲಿದ್ದಿದ್ದರೆ ಚನ್ನಾಗಿತ್ತು. ಆದರೆ ಅದೇಕೋ ಇನ್ನುಮುಂದೆ ಸಾಧ್ಯವಾಗುತ್ತಿಲ್ಲ, ಸಾಕಿನ್ನು ಜಾಗ ಬದಲಾಯಿಸೋಣ ಅನಿಸುತ್ತಿದೆ. ಹೋಗಲಿ ಇಲ್ಲಿಂದ ಆರುನೂರು ಕಿಲೋಮೀಟರ್ ದೂರವಿರುವ ಸೆಭಾಗಾದರೂ ಟ್ರಾನ್ಸಫರ್ ತೆಗೆದುಕೊಳ್ಳೋಣವೆಂದರೆ ನನ್ನ ಡೀನ್ ಮತ್ತು HOD “ಇಲ್ಲಿಯೇ ಶಿಕ್ಷಕರ ಕೊರತೆಯಿದೆ, ಇನ್ನು ನಿಮ್ಮನ್ನು ಬೇರೆ ಕಡೆ ಕಳಿಸುವದಾದರೂ ಹೇಗೆ?” ಎಂದು ನನ್ನನ್ನೇ ಕೇಳುತ್ತಾರೆ. ಜೊತೆಗೆ ಮೊದಲಾದರೆ ಇಲ್ಲಿ ತುಂಬಾ ಜನ ಇಂಡಿಯನ್ಸ್ ಇದ್ದರು. ಅದ್ಹೇಗೋ ಸಮಯ ಕಳೆದುಹೋಗುತ್ತಿತ್ತು. ಆದರೀಗ ಅವರ ಸಂಖ್ಯೆ ನನ್ನನ್ನೂ ಸೇರಿ ಎರಡು ಜನಕ್ಕೆ ಬಂದು ನಿಲ್ಲುವದರಲ್ಲಿದೆ. ಮೇಲಾಗಿ ಇತ್ತೀಚಿಗೆ ಇಲ್ಲಿ ದರೋಡೆಗಳು, ಬಾಂಬ್ ಬ್ಲಾಸ್ಟ್‍ಗಳು ಹೆಚ್ಚಾಗುತ್ತಿರುವದರಿಂದ ಅಷ್ಟೊಂದು ಸುರಕ್ಷತೆ ಅನಿಸುತ್ತಿಲ್ಲ.

    ಜೊತೆಗೆ ಪ್ರತಿ ವರ್ಷ ಸೆಮೆಸ್ಟರ್ ಬ್ರೇಕ್‍ನಲ್ಲಿ ಅಂದರೆ ಫೆಬ್ರುವರಿಯಲ್ಲಿ ನಾವು ಹತ್ತು ದಿನದ ಮಟ್ಟಿಗೆ ಇಂಡಿಯಾಕ್ಕೆ ಬರುತ್ತಿದ್ದೆವು. ಆದರೆ ಈ ಸಾರಿ ಹಾಗೆ ಬಂದಾಗ ನನ್ನ ಸಹೋದ್ಯೋಗಿಯೊಬ್ಬ ಅವರು ನಿಗದಪಡಿಸಿದ ದಿನಾಂಕದೊಳಗೆ ಬರದೆ ಆತನ ವೀಸಾ ತೀರಿಹೋಗಿ ಆತ ಮತ್ತೆ ಇಲ್ಲಿಗೆ ವೀಸಾ ತೆಗೆದುಕೊಂಡು ಬರಬೇಕಾದರೆ ಸುಮಾರು ಎರಡೂವರೆ ತಿಂಗಳಷ್ಟು ತಡವಾಗಿತ್ತು. ಆ ಸಮಯದಲ್ಲಿ ಆತ ತೆಗೆದುಕೊಳ್ಳಬೇಕಾಗಿದ್ದ ತರಗತಿಗಳೆಲ್ಲಾ ಅತಂತ್ರ ಸ್ಥಿತಿಯನ್ನು ತಲುಪಿದ್ದವು. ಹೀಗಾಗಿ ನಮ್ಮ ಡೀನ್ ಮತ್ತು HOD ಮುಂದಿನ ಸಾರಿ ಸೆಮೆಸ್ಟರ್ ಬ್ರೇಕಿನಲ್ಲಿ ಕಳಿಸುವದಿಲ್ಲ ಎಂದು ಸ್ಟ್ರಿಕ್ಟ್ ಆಗಿ ಹೇಳಿಬಿಟ್ಟಿದ್ದಾರೆ. ಸೆಮೆಸ್ಟರ್ ಮಧ್ಯದಲ್ಲಿ ಹೇಗೋ ಹೋಗಬಹುದಿತ್ತಲ್ಲ ಎಂಬ ಸಣ್ಣ ಆಸೆಯೂ ಕಮರಿಹೋಗಿದೆ. ಜೊತೆಗೆ ನಾನು ನನ್ನ ಹೈಪೋಥೈರಾಡಿಸಂ ಕಾಹಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೂ ಅದರಲ್ಲಿ ಏರುಪೇರಾಗುತ್ತಿರುವದರಿಂದ ಮನಸ್ಸು ಮಂಕು ಬಡಿದಂತಾಗುತ್ತಿದೆ (ಮನಸ್ಸು ಮಂಕು ಬಡಿದಂತಾಗುವದು ಈ ಕಾಹಿಲೆಯ ಮುಖ್ಯ ಲಕ್ಷಣ). ಅದೇನೂ ಭಯಪಡುವ ವಿಚಾರವಲ್ಲ. ಅದಕ್ಕೆ ನಾನು ತೆಗೆದುಕೊಳ್ಳುವ ಮಾತ್ರೆಯ ಡೋಸೆಜ್‍ನ್ನು ಸ್ವಲ್ಪ ಹೆಚ್ಚಿಸಿದರಾಯಿತು. ಆದರೆ ಈಗ ಇಲ್ಲಿಯ ಆಸ್ಪತ್ರೆಗಳಲ್ಲಿ ಇಂಡಿಯನ್ ಡಾಕ್ಟರುಗಳು ಇಲ್ಲ. ಅವರೆಲ್ಲಾ ಹೊರಟುಹೋಗಿ ಅವರ ಜಾಗದಲ್ಲಿ ಸುಡಾನಿ ಡಾಕ್ಟರುಗಳು ಬಂದಿದ್ದಾರೆ. ಆದರೆ ನನಗೆ ಅವರ ಹತ್ತಿರ ತೋರಿಸಲು ಭಯ. ಜೊತೆಗೆ ನನಗೆ ಅವರ ಮೇಲೆ ಅಷ್ಟು ನಂಬಿಕೆಯಿಲ್ಲ.

    ಹೀಗಾಗಿ ಈ ಸಾರಿ ನಾನು ಇಲ್ಲಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಸೌದಿಗೆ ಹೋಗಬೇಕೆಂದುಕೊಂಡಿದ್ದೇನೆ. ಸಾದಿ ಏಕೆಂದರೆ ಅಲ್ಲಿಯ ಪ್ರತಿಯೊಂದು ಜಾಗದಲ್ಲಿ ತುಂಬಾ ಜನ ಇಂಡಿಯನ್ಸ್, ಮತ್ತು ಇಂಡಿಯನ್ ಹೋಟೆಲ್‍ಗಳಿವೆ ಎಂದು ಕೇಳಲ್ಪಟ್ಟಿದ್ದೇನೆ. ಜೊತೆಗೆ ಆ ದೇಶದಲ್ಲಿ ಸಾಕಷ್ಟು ಜನ ಇಂಡಿಯನ್ ಡಾಕ್ಟರುಗಳಿದ್ದುದರಿಂದ ಏನಾದರೂ ಹೆಚ್ಚುಕಮ್ಮಿಯಾದರೆ ನಮ್ಮ ಸಹಾಯಕ್ಕೆ ಅವರಿರುತ್ತಾರೆ ಎನ್ನುವ ಧೈರ್ಯವಿದೆ. ಮೇಲಾಗಿ ಅಲ್ಲಿ ಮಲ್ಟಿಪಲ್ ಎಕ್ಸಿಟ್ ಮತ್ತು ರೀಎಂಟ್ರಿ ವೀಸಾ ಇರುವದರಿಂದ ರಜೆ ಸಿಕ್ಕಾಗಲೆಲ್ಲಾ ಮಧ್ಯದಲ್ಲಿ ನಾವು ಇಂಡಿಯಾಕ್ಕೆ ಆಗಾಗ್ಗೆ ಬರಬಹುದೆಂದು ಹೇಳುತ್ತಾರೆ. ಅಲ್ಲಿಗೆ ಹೋದರೆ ಇನ್ನೂ ಒಂದು ಅನುಕೂಲವಿದೆ. ಅದೇನೆಂದರೆ ನನ್ನ ಹೆಂಡತಿಯೂ ಕಾಲೇಜಿನಲ್ಲಿ ಕೆಲಸ ಮಾಡಬಹುದು ಮತ್ತು ನನ್ನ ಮಗಳನ್ನು ಅಲ್ಲಿರುವ ಯಾವುದಾದರೊಂದು ಇಂಡಿಯನ್ ಸ್ಕೂಲುಗಳಲ್ಲಿ ಓದಿಸಬಹುದೆಂಬ ಭರವಸೆಯಿದೆ. ಅಂತೆಯೇ ಅಲ್ಲಿ ಸಾಕಷ್ಟು ಇಂಡಿಯನ್ ಯೂನಿವರ್ಷಿಟಿಗಳ ಶಾಖೆಗಳಿರುವದರಿಂದ ನಾನ ಯಾವುದಾದರೂ ಕೋರ್ಸ್ ಮಾಡಲು ಸಹಾಯವಾಗುತ್ತದೆ.

    ಆದರೆ ಒಳಮನಸ್ಸು ಮಾತ್ರ “ಇಷ್ಟು ಸಂಬಳ ಮತ್ತೆಲ್ಲಿ ಸಿಗಲಾರದು. ಇನ್ನೊಂದೆರೆಡು ವರ್ಷ ಹೇಗಾದರೂ ಮಾಡಿ ಇದ್ದುಬಿಡು. ಮನೆ ಕಟ್ಟಿಯಾದ ಮೇಲೆ ಎಲ್ಲಿಗೆ ಬೇಕಾದರೂ ಹೋಗು.” ಎಂದು ಹೇಳುತ್ತಿದೆ. ಆದರೆ ಎಲ್ಲವನ್ನೂ ತರ್ಕದಿಂದ ನೋಡುವ ನನ್ನ ಬುದ್ಧಿ ಮಾತ್ರ “ಸೌದಿಗೆ ಹೋದರೆ ನಿನಗೆ ಎಷ್ಟೆಲ್ಲಾ ಅನುಕೂಲಗಳಿವೆ. ಅಲ್ಲಿಗೇ ಹೋಗಿಬಿಡು.” ಎಂದು ಹೇಳುತ್ತಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಒಂದು ವೇಳೆ ಸೌದಿಗೆ ಹೋಗಬೇಕೆಂದರೆ ಬಹುಶಃ, ಸ್ವಲ್ಪ ತಡವಾಗಬಹುದು. ಏಕೆಂದರೆ ನಾನೀಗ ಬಂದರೆ ಸೌದಿಗೆ ನಡೆಯುವ ಇಂಟ್ರ್ಯೂಗಳು ಇಷ್ಟೊತ್ತಿಗಾಗಲೇ ಮುಗಿದುಹೋಗಿರುತ್ತವೆ. ಪರ್ವಾಗಿಲ್ಲ. ಇದೇ ಸಮಯದಲ್ಲಿ ಈ ಸಾರಿ ಒಂದು ಕೋರ್ಸ್ ಮಾಡಿಕೊಳ್ಳಬೇಕೆಂದಿದ್ದೇನೆ. ಅದನ್ನು ಮಾಡಿಕೊಂಡರೆ ಸೌದಿಯಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲೂ ಸಾಕಷ್ಟು ಅವಕಾಶಗಳು ಸಿಗುವ ಸಾಧ್ಯತೆಯಿದೆ.

    ಅಂದಹಾಗೆ, ಇದೆಲ್ಲಾ ಸಧ್ಯದ ಮಾತು. ಈಗ ಅನಿಸಿದ್ದು ಅಷ್ಟೇ! ಆದರೆ ನನ್ನ ರಜೆ ಮುಗಿಯುವಷ್ಟರಲ್ಲಿ ಮತೇನು ಅನಿಸುತ್ತದೋ? ಗೊತ್ತಿಲ್ಲ. ನಾನು ಮತ್ತೆ ಮನಸ್ಸು ಬದಲಾಯಿಸಿ ಲಿಬಿಯಾಕ್ಕೆ ಹಿಂದಿರುಗಿ ಬರುತ್ತೇನೇಯೇ? ಅಥವಾ ಬದುಕು ಕೊಂಡೊಯ್ದಲ್ಲಿಗೆ ಬೇರೆ ಕಡೆ ಹೋಗುತ್ತೇನೇಯೇ? ಎಲ್ಲವನ್ನೂ ಕಾದುನೋಡಬೇಕಿದೆ.

    -ಉದಯ್ ಇಟಗಿ