Demo image Demo image Demo image Demo image Demo image Demo image Demo image Demo image

ಗಡಾಫಿ ಇಲ್ಲದ ಲಿಬಿಯಾ

  • ಮಂಗಳವಾರ, ಫೆಬ್ರವರಿ 21, 2012
  • ಬಿಸಿಲ ಹನಿ
  • ಲಿಬಿಯಾದಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆ, ಹಾಗೂ ಆತನ ಮಗ ಸೈಫ್‍ನ ಬಂಧನದಲ್ಲಿ ಕೊನೆಯಾದ ಮೇಲೆ NTC (National Transition Council) ಗೆ ಇದ್ದ ಎಲ್ಲ ಕಂಟಕಗಳು ಮುಗಿದು ನೆಮ್ಮದಿಯ ನಿಟುಸಿರು ಬಿಟ್ಟಿತ್ತು. ಇದರ ಬೆನ್ನಹಿಂದೆಯೇ ತಾತ್ಕಾಲಿಕವಾಗಿ ಹಂಗಾಮಿ ಸರಕಾರವೊಂದನ್ನು ರಚಿಸಿ ತತ್‍ಕ್ಷಣದ ಸವಾಲುಗಳನ್ನು ಎದುರಿಸುವದೇ ಅದರ ಮುಂದಿನ ಗುರಿಯಾಗಿತ್ತು. ಅದರಲ್ಲೂ ಬಹುಮುಖ್ಯವಾಗಿ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಎದುರಿಸುವದು ಮೊದಲ ಆದ್ಯತೆಯಾಗಿತ್ತು. ಹೀಗಾಗಿ ಕ್ರಾಂತಿಯ ಸಮಯದಲ್ಲಿ ಇಲ್ಲಿಂದ ತೆರೆವುಗೊಳಿಸಲಾದ ಬಹಳಷ್ಟು ವಿದೇಶಿ ವೈದ್ಯರುಗಳನ್ನು ಹಾಗೂ ವಿದೇಶಿ ಉಪನ್ಯಾಸಕರುಗಳನ್ನು ಮತ್ತೆ ವಾಪಾಸು ಕರೆಸಿಕೊಳ್ಳಬೇಕೆಂದು ಹಂಗಾಮಿ ಸರಕಾರ ಫರ್ಮಾನು ಹೊರಡಿಸಿತ್ತು. ಆ ಪ್ರಕಾರ ನನಗೆ ವೀಸಾ ಸಿಕ್ಕು ನಾನು ಜನೇವರಿ ೧೦ಕ್ಕೆ ಬೆಂಗಳೂರಿನಿಂದ ಲಿಬಿಯಾಕ್ಕೆ ಹಾರಿ ಬಂದಿದ್ದೆ. “ಎಮಿರೇಟ್ಸ್ ಏರ್ಲೈನ್ಸ್” ಲಿಬಿಯಾಕ್ಕೆ ಇನ್ನೂ ತನ್ನ ಸಂಚಾರವನ್ನು ಆರಂಭಿಸದೇ ಇದ್ದ ಕಾರಣ ನಾನು ಕೈರೋಗೆ ಬಂದು ಅಲ್ಲಿಂದ ‘ಈಜಿಪ್ಟ್ ಏರ್’ ಮೂಲಕ ನೇರವಾಗಿ ಬೆಂಗಾಜಿಗೆ ಬಂದಿಳಿದಿದ್ದೆ.

    ಈ ಬೆಂಗಾಜಿ ಇಡಿ ಲಿಬಿಯಾದಲ್ಲಿಯೇ ಮೊಟ್ಟಮೊದಲ ಬಾರಿಗೆ ಮೌಮರ್ ಗಡಾಫಿಯ ವಿರುದ್ಧ ಕ್ರಾಂತಿಯ ಕಹಳೆಯನ್ನು ಊದಿದ ನೆಲ. ಇಲ್ಲಿಯ ಜನ ೨೦೦೬ ಫೆಬ್ರುವರಿ ೧೭ ರಂದು ಗಡಾಫಿಯ ವಿರುದ್ಧ ಬಂಡೆದ್ದಿದ್ದರು. ಆದರೆ ಆ ಹೋರಾಟವನ್ನು ಹತ್ತಿಕ್ಕುವಲ್ಲಿ ಗಡಾಫಿ ಯಶಸ್ವಿಯಾಗಿದ್ದ. ಆದರೆ ಮತ್ತೆ ಐದು ವರ್ಷಗಳ ನಂತರ ಅದೇ ನೆಲದ ಜನ ಅಂದರೆ ೨೦೧೧ ಫೆಬ್ರುವರಿ ೧೭ ರಂದು ಗಡಾಫಿ ವಿರುದ್ಧ ಹೋರಾಟಕ್ಕೆ ಇಳಿದರು. ಈ ಬಾರಿ ತಮ್ಮ ಹೋರಾಟವನ್ನು ಇಡಿ ಲಿಬಿಯಾದ ತುಂಬಾ ಒಂದು ದೊಡ್ಡಮಟ್ಟದ ಕ್ರಾಂತಿಯನ್ನಾಗಿ ತೀವ್ರಗೊಳಿಸುವಲ್ಲಿ ಯಶಸ್ವಿಯಾಗಿ ಬಲಿಷ್ಠ ಸರ್ವಾಧಿಕಾರಿ ಮೌಮರ್ ಗಡಾಫಿಯನ್ನು ಹೇಳಹೆಸರಿಲ್ಲದಂತೆ ನಾಶಮಾಡಿದರು. ಈ ನಿಟ್ಟಿನಲ್ಲಿ ಆ ಕ್ರಾಂತಿಯ ಮೊದಲ ಯಶಸ್ಸು, ಕೀರ್ತಿ ಹಾಗೂ ಹೆಮ್ಮೆ ಈ ನೆಲದ ಜನರಿಗೆ ಸಲ್ಲುತ್ತದೆ. ಇದೀಗ ನಾನು ಆ ನೆಲದ ಮೇಲೆ ನಿಂತಿದ್ದೆ. ನಿಂತಂತೆ ಏನೋ ಒಂದು ತೆರದ ಪುಳಕ, ಹೆಮ್ಮೆ ನನ್ನಲ್ಲಿ ಮೂಡಿದವು. ಜೊತೆಗೆ ‘ನಾವು ಎಷ್ಟೇ ಆಗಲಿ ಹೊರಗಿನವರು. ಇಲ್ಲಿ ಕೆಲಸ ಮಾಡಲು ಬಂದವರು. ಗಡಾಫಿಯಿದ್ದರೇನು? ಇನ್ನೊಬ್ಬ ಇದ್ದರೇನು? ನಮಗೆ ಎಲ್ಲರೂ ಅಷ್ಟೆ’ ಎನ್ನುವ ಭಾವವೊಂದು ನನ್ನ ಮನದಲ್ಲಿ ಹಾದು ಹೋಯಿತು. ಆದರೆ ಇದೀಗ ನಾನು ಗಡಾಫಿಯಿದ್ದ ನಾಡಿಗೂ ಮತ್ತು ಗಡಾಫಿಯಿಲ್ಲದ ನಾಡಿಗೂ ಪ್ರತ್ಯಕ್ಷದರ್ಶಿಯಾಗಿ ನಿಂತಿದ್ದೆ. ಗಡಾಫಿಯಿದ್ದಾಗ ಈ ನಾಡು ಹೇಗಿತ್ತೆಂದು ಇಲ್ಲಿ ಮೂರುವರೆ ವರ್ಷಗಳ ಕಾಲ ಇದ್ದು ನೋಡಿದ್ದೆ. ಈಗ ಸಹಜವಾಗಿ ಆತನಿಲ್ಲದ ನಾಡು ಹೇಗಿದೆ ಎಂದು ತಿಳಿಯುವ ಕುತೂಹಲ ನನ್ನಲ್ಲಿತ್ತು. ಹೀಗಾಗಿ ಈ ಒಂದು ತಿಂಗಳ ಕಾಲ ಗಡಾಫಿಯಿಲ್ಲದ ನಾಡಿನ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆಹಾಕಿ ಹಾಗೂ ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸಿ ಈ ಲೇಖನವನ್ನು ಬರೆಯುತ್ತಿದ್ದೇನೆ.



    ಲಿಬಿಯನ್ನರ ಹೊಸದೆಂದು ಹೇಳಲಾದ ಹಳೆಯ ರಾಷ್ಟ್ರಧ್ವಜ
    ನಾನು ಬೆಂಗಾಜಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿದು ಹೊರಬರುತ್ತಿದ್ದಂತೆ ನನ್ನನ್ನು ಮೊಟ್ಟಮೊದಲು ಸ್ವಾಗತಿಸಿದ್ದು ಆ ದೇಶದ ಹೊಸ ಭಾವುಟ. ಗಡಾಫಿಯ ಹಸಿರು ಭಾವುಟ ಹೋಗಿ ಅದರ ಜಾಗದಲ್ಲಿ ಮಧ್ಯ ಅರ್ಧ ಚಂದ್ರ ಮತ್ತು ನಕ್ಷತ್ರವೊಂದರ ಚಿಹ್ನೆಯಿರುವ ಕೆಂಪು, ಕಪ್ಪು ಮತ್ತು ಹಸಿರು ಬಣ್ಣಗಳ ತ್ರಿವರ್ಣ ಧ್ವಜ ಬಂದು ಕುಳಿತಿತ್ತು. ನಾನದನ್ನು ಮೊದಲು ಹೊಸ ಭಾವುಟ ಇರಬೇಕೆಂದುಕೊಂಡಿದ್ದೆ. ಆದರೆ ಆಮೇಲೆ ಗೊತ್ತಾಯಿತು ೧೯೫೧ ರಲ್ಲಿ ಲಿಬಿಯಾ ಇಟ್ಯಾಲಿಯನ್ನರ ದಾಸ್ಯದಿಂದ ಬಿಡುಗಡೆ ಹೊಂದಿದ ಸಂದರ್ಭದಲ್ಲಿ ಈ ಭಾವುಟವನ್ನು ಸ್ವತಂತ್ರ ಲಿಬಿಯಾದ ಅಧಿಕೃತ ಭಾವುಟವೆಂದು ಘೋಷಿಸಿದ್ದರೆಂದು. ಜೊತೆಗೆ ಈ ದೇಶದ ನೇತಾರ ಒಮರ್ ಮುಖ್ತಾರನ ಫೋಟೋವೊಂದು ನಿಲ್ದಾಣದ ಹೊರಗೆ ರಾರಾಜಿಸುತ್ತಿರುವದು ಕಾಣಿಸಿತು. ಈ ಒಮರ್ ಮುಖ್ತಾರ ಲಿಬಿಯಾದ ಸಿರನೈಕಾ ಪ್ರಾಂತ್ಯದವನಾಗಿದ್ದು ಇಟೆಲಿಯ ಸಾಮ್ರಾಜ್ಯಶಾಹಿಗಳ ವಿರುದ್ಧ ಮೊಟ್ಟ ಮೊದಲಿಗೆ ಬಂಡೆದ್ದು ಲಿಬಿಯನ್ನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದವನಾಗಿದ್ದ. ಈತನನ್ನು “ಲಯನ್ ಆಫ್ ಡೆಸರ್ಟ್” ಎಂದು ಸಹ ಕರೆಯುತ್ತಾರೆ. ನನಗೆ ಈ ಬದಲಾವಣೆಯನ್ನು ನೋಡಿ ಖುಶಿಯಾಯಿತು; ಪರ್ವಾಗಿಲ್ಲ ಹೊಸ ಸರಕಾರ ತನ್ನ ದೇಶಕ್ಕಾಗಿ ಹೋರಾಡಿದ ಮಹಾತ್ಮನನ್ನು ನೆನೆಸಿಕೊಂಡಿದೆ ಎಂದು. ಒಳಗಡೆ ಗಡಾಫಿಯ ಉಳಿದ ಮಕ್ಕಳ ಫೋಟೋಗಳನ್ನು ಹಾಕಿ ಕೆಳಗಡೆ ಇವರ ಸುಳಿವು ಸಿಕ್ಕಲ್ಲಿ ತಕ್ಷಣ ಸಂಪರ್ಕಿಸಬೇಕೆಂದು ಹೇಳಿ ಒಂದು ಫೋನ್ ನಂಬರ‍್ ನ್ನು ಕೊಡಲಾಗಿತ್ತು.


    ಬಂಡುಕೋರರಿಗೆ ಬೇಕಾಗಿರುವ ಗಡಾಫಿಯ ಉಳಿದ ಮಕ್ಕಳು

    ಅದರ ಪಕ್ಕದಲ್ಲಿಯೇ ಗನ್ನಿನ ಚಿತ್ರವೊಂದನ್ನು ಹಾಕಿ ಅದರ ಕೆಳಗೆ ಇವುಗಳನ್ನು ಲೈಸನ್ಸ್ ಇಲ್ಲದೆ ಉಪಯೋಗಿಸುವದು ಶಿಕ್ಷಾರ್ಹ ಎಂದು ಬರೆಯಲಾಗಿತ್ತು. ನನಗೆ ಬೆಂಗಾಜಿಯಿಂದ ಟ್ರಿಪೋಲಿಗೆ ಮುಂದಿನ ಎರಡು ಗಂಟೆಗಳಲ್ಲಿ ವಿಮಾನವಿದ್ದುದರಿಂದ ಅಲ್ಲಿ ಸಾಕಷ್ಟು ಸಮಯ ಕಳೆಯಲಾಗಲಿಲ್ಲ. ಅಲ್ಲಿಂದ ಬೆಳಿಗ್ಗೆ ೧೧.೩೦ಕ್ಕೆ ಟ್ರಿಪೋಲಿಯತ್ತ ಹೊರಟೆ. ಮುಂದೆ ಅಲ್ಲಿಂದ ನಾನು ಮಾರನೆ ದಿನ ಸೆಭಾಕ್ಕೆ ಹೋಗಬೇಕಾಗಿತ್ತು.


    ನಮ್ಮ ವಿಮಾನ ಟ್ರಿಪೋಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತ್ತಿದ್ದಂತೆ ಅದರ ಕೆಲವು ಜಾಗಗಳು ನನಗೆ ವಿಮಾನದ ಒಳಗಿನಿಂದಲೇ ಯುದ್ಧದ ಸಮಯದಲ್ಲಿ ಅಲ್ಲಲ್ಲಿ ಹಾನಿಯಾಗಿರುವದು ಕಾಣಿಸಿತು. ಇಳಿದು ಶೌಚಾಲಯಕ್ಕೆ ಹೋದರೆ “ಅಬ್ಬ, ನಮ್ಮಲ್ಲಿನ ಪಬ್ಲಿಕ್ ಟಾಯ್ಲೆಟ್‍ಗಳು ಎಷ್ಟೋ ವಾಸಿ” ಎನಿಸಿತು. ಬಹುಶಃ, ಈ ವಿಮಾನ ನಿಲ್ದಾಣದ ಪಕ್ಕದಲ್ಲಿಯೇ ಗಡಾಫಿ ಅರ್ಧ ಕಟ್ಟಿಸಿಬಿಟ್ಟ ವಿಮಾನ ನಿಲ್ದಾಣವನ್ನು ಪೂರ್ಣಗೊಳಿಸುತ್ತಿರಬೇಕು, ಹೀಗಾಗಿ ಇದನ್ನು ನಿರ್ಲಕ್ಷ್ಯಸಿಸಲಾಗಿದೆ ಎಂದುಕೊಂಡು ಸುಮ್ಮನಾದೆ. ಅಲ್ಲಿಂದ ಟ್ಯಾಕ್ಶಿಯೊಂದನ್ನು ತೆಗೆದುಕೊಂಡು ಹೋಟೆಲ್‌ನತ್ತ ಹೊರಟೆ. ಹೋಗುವಾಗ ದಾರಿಯಲ್ಲಿ ಗಡಾಫಿಯ ವಿರುದ್ಧ ಬರೆದ ಆತನ ವ್ಯಂಗ್ಯ ಚಿತ್ರಗಳು ಮತ್ತು ಸ್ಲೋಗನ್‍ ಗಳು ಕಾಣಿಸಿದವು.




    ಗಡಾಫಿಯ ವಿರುದ್ಧ ಬರೆದ ಸ್ಲೋಗನ್ ಗಳು

    ಜೊತೆಗೆ ಸ್ವತಂತ್ರ ಲಿಬಿಯಾದ ಹರ್ಷೋದ್ಗಾರದ ವಾಕ್ಯಗಳು ಕಾಣಿಸಿದವು. ಅವುಗಳ ಫೋಟೊ ತೆಗೆಯುತ್ತಾ ಟ್ಯಾಕ್ಷಿ ಡ್ರೈವರ್ ನನ್ನು “ಈಗ ಲಿಬಿಯಾ ಹೇಗಿದೆ?” ಎಂದು ಕೇಳಿದೆ. ಅವನು ಅರ್ಧ ಇಂಗ್ಲೀಷ್ ಅರ್ಧ ಅರೇಬಿಕ್ ಭಾಷೆಯಲ್ಲಿ “ತವ್ವಾ ಲಿಬಿಯಾ ಮಿಯ್ಯಾ ಮಿಯ್ಯಾ (ಈಗ ಲಿಬಿಯಾ ತುಂಬಾ ಚನ್ನಾಗಿದೆ) Now Libya is free. Gadafi no good. He was killed because he was eating alone” ಎಂದು ತನ್ನದೇ ಭಾಷೆಯಲ್ಲಿ ಹೇಳಿದ. ಗಡಾಫಿಯನ್ನು ಒಂದಷ್ಟು ಬಯ್ಯುತ್ತಾ ಆತನ ಮಕ್ಕಳಿಗೆ ಏನೇನಾಯಿತು? ಅವರಲ್ಲಿ ಎಷ್ಟು ಜನ ಸತ್ತಿದ್ದಾರೆ? ಎಷ್ಟು ಜನ ಎಲ್ಲೆಲ್ಲಿದ್ದಾರೆ? ಎನ್ನುವದನ್ನು ಸಹ ಹೇಳಿದ. ಅಷ್ಟರಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಮೌಮರ್ ಗಡಾಫಿಯ ಅರಮನೆ ‘ಬಾಬ್-ಆಲ್-ಅಜಿಜಾ’ ಬಂತು. ನಾನು ಅವನಿಗೆ ಅಲ್ಲಿ ಸ್ವಲ್ಪ ಹೊತ್ತು ನಿಲ್ಲಿಸುವಂತೆ ಹೇಳಿ ಫೋಟೋ ತೆಗೆಯಲು ಹೊರಟೆ. ಅವನು ಒಳಗೆ ಹೋಗುವಂತಿಲ್ಲ ಎಂದು ಎಚ್ಚರಿಸಿದ. ನಾನು ಹೊರಗಿನಿಂದಲೇ ಸರಸರನೆ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸತೊಡಗಿದೆ. ಅಲ್ಲಿ ಗಡಾಫಿಯ ಭವ್ಯ ಅರಮನೆ ಹೇಳಹೆಸರಿಲ್ಲದಂತೆ ಅವಶೇಷಗಳಾಗಿ ಬಿದ್ದಿತ್ತು. ಇಲ್ಲೇ ಅಲ್ಲವೇ ಗಡಾಫಿ ಐಷಾರಾಮಿ ಜೀವನ ನಡೆಸಿದ್ದು? ಐಭೋಗದ ಬದುಕನ್ನು ಬದುಕಿದ್ದು? ಒಂದೊಮ್ಮೆ ಸಕಲ ಸೌಲತ್ತುಗಳನ್ನು ಹೊಂದಿದ್ದ ಈ ಅರಮನೆ ಈಗ ಸಂಪೂರ್ಣವಾಗಿ ನೆಲಸಮವಾಗಿತ್ತು.


    ಒಡೆದು ಹಾಕಿರುವ ಗಡಾಫಿಯ ಅರಮನೆ

    ಗಡಾಫಿ ಅರಮನೆಯ ಅವಶೇಷಗಳು

    ಗಡಾಫಿ ಅರಮನೆಯ ಕೌಂಪೊಂಡು ಗೋಡೆಯ ಮೇಲೆ ಕಾವಲುಗಾರರು ನಿಲ್ಲುತ್ತಿದ್ದ ಎತ್ತರದ ಸ್ಥಳ


    ಈ ಮೊದಲು ಸಾಮಾನ್ಯವಾಗಿ ಇಡಿ ಲಿಬಿಯಾದ ತುಂಬಾ ಬಹಳಷ್ಟು ರಸ್ತೆಗಳಲ್ಲಿ, ಬೀದಿಗಳಲ್ಲಿ, ಕಛೇರಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಖಡ್ಡಾಯವಾಗಿ ಗಡಾಫಿಯ ವಿವಿಧ ಭಂಗಿಯ ಹಾಗೂ ವಿವಿಧ ಪೋಷಾಕುಗಳನ್ನು ಧರಿಸಿದ ಪೋಸ್ಟರ್ ಅಥವಾ ಫೋಟೋಗಳು ರಾರಾಜಿಸುತ್ತಿದ್ದವು. ಈಗ ಅವನ್ನೆಲ್ಲಾ ತೆಗೆದು ಖಾಲಿಬಿಡಲಾಗಿದೆ.



    ಗಡಾಫಿಯ ಪೋಸ್ಟರನ್ನು ಕಿತ್ತು ಹಾಕಿ ಖಾಲಿ ಬಿಟ್ಟಿರುವ ಫ್ರೇಮುಗಳು

    ಒಂದಷ್ಟು ಕಡೆ ಅವುಗಳ ಜಾಗದಲ್ಲಿ ಆ ದೇಶದ ಮಹಾತ್ಮ ಒಮರ್ ಮುಖ್ತಾರನ ಫೋಟೋಗಳನ್ನು ಹಾಕಲಾಗಿದೆ. ನಾನು ಟ್ರಿಪೋಲಿಯ ಮುಖ್ಯ ಶಾಪಿಂಗ್ ಏರಿಯಾದಲ್ಲಿರುವ ಹೋಟೆಲ್‍ಗೆ ಬಂದ ನಂತರ ಸಂಜೆ ಒಂದಷ್ಟು ಸುತ್ತಾಡಿ ಬರಲೆಂದು ಹೊರಗೆ ಹೋದೆ. ಇಡಿ ನಗರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ಸ್ವಲ್ಪ ಹೊತ್ತು ಓಡಾಡಿರಲಿಕ್ಕಿಲ್ಲ ರಾತ್ರಿ ಎಂಟು ಗಂಟಗೆಲ್ಲಾ ಅಂಗಡಿ ಮುಗ್ಗಟ್ಟುಗಳು ಬಾಗಿಲು ಹಾಕಿಸುವದು ಕಾಣಿಸಿತು. “ಅರೆ, ಇದೇನಿದು? ಮೊದಲೆಲ್ಲಾ ಈ ರಸ್ತೆಗಳಲ್ಲ ರಾತ್ರಿ ಹನ್ನೆರೆಡರ ತನಕ ಅಂಗಡಿಗಳ ಬಾಗಿಲುಗಳನ್ನು ತೆರದಿಡುತ್ತಿದ್ದರು. ಈಗ ಗಲಾಟೆಯೆಲ್ಲಾ ಮುಗಿದು ತಣ್ಣಗಾದ ಮೇಲೂ ಏಕಿಷ್ಟು ಅವಸರ?” ಎಂದು ಅಚ್ಚರಿಗೊಂಡು ಅಂಗಡಿಯ ಮಾಲಿಕನೊಬ್ಬನನ್ನು ಕೇಳಿಯೇಬಿಟ್ಟೆ. ಅದಕ್ಕವನು “ಗಡಾಫಿ ಹೋದ ಮೇಲೆ ಲಿಬಿಯಾದಲ್ಲಿ Law and Order ಪ್ರಾಬ್ಲಂ ಇದೆ. ಇಲ್ಲಿ ಯಾವಾಗಬೇಕಾದರೂ ಏನಾದರೂ ಆಗಬಹುದು. ಕಳ್ಳತನ, ದರೋಡೆಗಳು ಹೆಚ್ಚಾಗಿವೆ. ಇದ್ದಕ್ಕಿದ್ದಂತೆ ಗುಂಡಿನ ಮೊರೆತ ಕೇಳಿಸುತ್ತದೆ. ಏಕೆಂದರೆ ಯುದ್ಧದ ಸಮಯದಲ್ಲಿ ಅದ್ಹೇಗೋ ಎಲ್ಲರ ಕೈಯಲ್ಲಿ ಗನ್‍ಗಳು ಬಂದಿವೆ.” ಎಂದು ಹರಕುಮುರುಕು ಇಂಗ್ಲೀಷಿನಲ್ಲಿ ಹೇಳಿದ. ನಾನು ಪರಿಸ್ಥಿತಿಯ ತೀವ್ರತೆಯನ್ನು ಅರ್ಥ ಮಾಡಿಕೊಂಡು ಟ್ಯಾಕ್ಷಿ ಹಿಡಿದು ಹೋಟೆಲ್‍ಗೆ ಬಂದೆ. ಬರುವಾಗ ಆ ಟ್ಯಾಕ್ಷಿ ಡ್ರವರ‍್ ನನ್ನು ಬೇಕಂತಲೇ “ಈಗ ಗಡಾಫಿಯಿಲ್ಲ. ಲಿಬಿಯಾ ಸ್ವತಂತ್ರವಾಗಿದೆ. ನಿಮಗೆಲ್ಲಾ ಖುಶಿಯಾಗಿರಬೇಕಲ್ಲವೆ? ಇನ್ನುಮುಂದೆ ಈ ದೇಶ ಬಹಳಬೇಗನೆ ಅಭಿವೃದ್ಧಿ ಹೊಂದುತ್ತದಲ್ಲವೆ?” ಎಂದು ಕೇಳಿದೆ. ಅದಕ್ಕವನು “ಏನು ಅಭಿವೃದ್ಧಿನೋ ಏನೋ! ಗಡಾಫಿಯಿರುವಾಗಲೇ ನಮ್ಮ ದೇಶ ಸುಸ್ಥಿತಿಯಲ್ಲಿತ್ತು. ಏಕೆಂದರೆ ಆತ ಅಮೆರಿಕನ್ನರನ್ನು ದೂರವಿಟ್ಟಿದ್ದ. ಈಗ ಇವರು ಅವರ ಕೈಗೆ ಕೊಟ್ಟು ಕುಳಿತಿದ್ದಾರೆ. ಇನ್ನು ಅಭಿವೃದ್ಧಿಯ ಮಾತೆಲ್ಲಿ? ಈ ಅಮೆರಿಕನ್ನರು ಮತ್ತು ಯೂರೋಪಿಯನ್ನರು ಮೂಗು ತೂರಿಸಿದ ಮೇಲೆ ಮುಗಿಯಿತು; ಅಲ್ಲಿ ಶಾಂತಿ ನೆಲೆಸಲು ತುಂಬಾ ದಿನ ಬೇಕಾಗುತ್ತದೆ. ಇಲ್ಲೇ ನೋಡಿ ಟ್ರಿಪೋಲಿಯಲ್ಲಿ ಕ್ರಾಂತಿ ಮುಗಿದು ೪ ತಿಂಗಳಾಗುತ್ತಾ ಬಂದರೂ ಪ್ರತಿನಿತ್ಯ ಒಂದಲ್ಲ ಒಂದು ಗಲಭೆ ನಡೆಯುತ್ತಲೇ ಇರುತ್ತವೆ. ಗಡಾಫಿಯ ಬೆಂಬಲಿಗರು ಇನ್ನೂ ಸಾಕಷ್ಟು ಜನ ಇದ್ದಾರೆ. ಅವರನ್ನು ಹತ್ತಿಕ್ಕಲು ಈಗಿನ ಸರಕಾರ ಹರಸಾಹಸ ಮಾಡುತ್ತಿದೆ” ಎಂದು ವಿಷಾದದಿಂದ ಹೇಳಿದ.


    ಯುದ್ಧದಲ್ಲಿ ಮಡಿದವರು
    “ಗಡಾಫಿಯಿಲ್ಲದ ಲಿಬಿಯಾ ನಿಮಗೆ ಹೇಗೆ ಕಾಣಿಸುತ್ತದೆ?” ಎಂದು ಸೆಭಾಗೆ ಬಂದಿಳಿದ ಮೇಲೆ ಕನ್ನಡದವರೇ ಆದ ನನ್ನ ಸಹೋದ್ಯೋಗಿ ಡಾ. ನವೀನ್ ಅವರನ್ನು ಕೇಳಿದ್ದೆ. ಅವರು ನಸುನಗುತ್ತಾ “ಗಂಡನಿಲ್ಲದ ಹೆಂಡತಿಯಂತೆ” ಎಂದು ಉತ್ತರಿಸಿದ್ದರು. ಆ ನಸುನಗೆಯ ಹಿಂದೆ ಗಡಾಫಿಯಿಲ್ಲದ ಲಿಬಿಯಾದ ಮೇಲೆ ಇನ್ಯಾರ್ಯಾರೋ ಕಣ್ಣು ಹಾಕುತ್ತಿದ್ದಾರೆ ಎನ್ನುವ ಅವ್ಯಕ್ತ ನೋವಿತ್ತು. ಮಾತ್ರವಲ್ಲ ಗಡಾಫಿಯಿಲ್ಲದ ಲಿಬಿಯಾವನ್ನು ಸ್ವೀಕರಿಸುವದು ಕಷ್ಟಸಾಧ್ಯ ಎನ್ನುವ ಭಾವವಿತ್ತು. ಈ ಭಾವ ನಮ್ಮಂಥ ವಿದೇಶಿಯರಿಗಿದ್ದಿದ್ದು ನನಗೆ ಅಚ್ಚರಿ ಎನಿಸಲಿಲ್ಲ. ಆದರೆ ಇಲ್ಲಿನ ಅನೇಕ ಸ್ಥಳೀಯರಲ್ಲೂ ಇದೇ ಭಾವನೆಯಿದ್ದಿದ್ದು ನನಗೆ ಅಚ್ಚರಿಯನ್ನು ತಂದಿತ್ತು. ಆದರೆ ಅವರು ಇದನ್ನು ಬಹಿರಂಗಪಡಿಸದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಮುಕ್ಕಾಲು ಜನ ಈ ಹೊಸ ಸರಕಾರವನ್ನು ಮಾನಸಿಕವಾಗಿ ಒಪ್ಪಿಕೊಳ್ಳಲು ಇನ್ನೂ ತಯಾರಿಲ್ಲ. ಆದರೆ ಒಪ್ಪಿಕೊಳ್ಳದೆ ವಿಧಿಯಿಲ್ಲ. ಏಕೆಂದರೆ ಅವರಲ್ಲಿ ಬಹುತೇಕರು ಗಡಾಫಿ ಬೆಂಬಲಿಗರು. ಗಡಾಫಿ ಬೆಂಬಲಿಗರೆಂದು ಗೊತ್ತಾದ ತಕ್ಷಣ ಅಂಥವರನ್ನು ಜೈಲಿಗೆ ಅಟ್ಟಲಾಗುತ್ತಿದೆ. ಮಾತ್ರವಲ್ಲ ಇಲ್ಲಿನ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ಗಡಾಫಿ ಬೆಂಬಲಿಗರನ್ನು ಬದಲಾಯಿಸಲಾಗಿದೆ. ಈ ದಕ್ಷಿಣದ ಭಾಗದಲ್ಲಿ ಸಾಕಷ್ಟು ಜನ ಗಡಾಫಿ ಬೆಂಬಲಿಗರಿರುವದರಿಂದಲೇ ಸಧ್ಯದ ಸರಕಾರ ಈ ಭಾಗದ ಕಡೆಗೆ ಮೊದಲು ಮೊಬೈಲ್ ಸಿಗ್ನಲ್‍ಗಳು ಸಿಗದಂತೆ ಮಾಡಿದರು. ಆಮೇಲೆ ಇಂಟರ್ನೆಟ್ ಸೌಲಭ್ಯವನ್ನು ಕತ್ತರಿಸಿದರು. ನಂತರ ವಾರಕ್ಕೊಂದು ಸಾರಿ ೧೮ ಗಂಟೆಗಳ ಕಾಲ ವಿದ್ಯುತ್ ಸರಬುರಾಜು ನಿಲ್ಲಿಸಿದರು. ಆ ಮೂಲಕ ಸರಕಾರ ಪರೋಕ್ಷವಾಗಿ ಇಲ್ಲಿಯ ಜನರ ಮೇಲೆ ಒತ್ತಡ ಹೇರುವದರ ಮೂಲಕ ತನ್ನತ್ತ ಬಗ್ಗಿಸಿಕೊಳ್ಳಲು ನೋಡುತ್ತಿದೆ ಎಂದು ಜನ ಮಾತಾಡಿಕೊಂಡರು. ಈಗಲೂ ಇದೇ ಸ್ಥಿತಿ ಇಲ್ಲಿ ಮುಂದುವರಿದಿದೆ.

    ಗಲಭೆಯ ಸಮಯದಲ್ಲಿ ಹಾನಿಗೀಡಾದ ಸೆಭಾ ವಿಶ್ವವಿದ್ಯಾನಿಲಯ

    ಲಿಬಿಯಾ ಈಗ ಸಂಪೂರ್ಣವಾಗಿ ಗಡಾಫಿಯ ದಾಸ್ಯದಿಂದ ಮುಕ್ತವಾಗಿದೆ. ಸ್ವತಂತ್ರವಾಗಿದೆ. ಆದರೆ ಸ್ವಾತಂತ್ರ್ಯದ ಪರಿಕಲ್ಪನೆಯ ಕುರಿತಂತೆ ಅವರವದೇ ಅಭಿಪ್ರಾಯಗಳನ್ನು ಹಾಗೂ ಗೊಂದಲಗಳನ್ನು ಇಲ್ಲಿಯವರು ಮುಂದಿಡುತ್ತಾರೆ. ನಾನು ಘಾಟ್‍ಗೆ ಬಂದ ಮೇಲೆ ನನ್ನ ವಿಭಾಗದ ಮುಖ್ಯಸ್ಥರಾದ ಅಹಮ್‍ದನನ್ನು (ಹೆಸರು ಬದಲಾಯಿಸಲಾಗಿದೆ) “ಈಗ ಲಿಬಿಯಾ ಸ್ವತಂತ್ರವಾಗಿದೆ. ಇನ್ನುಮುಂದೆ ಶೀಘ್ರದಲ್ಲಿಯೇ ನೀವು ಒಂದು ಪ್ರಜಾರಾಜ್ಯವನ್ನು ಹೊಂದಲಿದ್ದೀರಿ. ನಿಮಗೆ ಹೇಗನಿಸುತ್ತೆ?” ಎಂದು ಕೇಳಿದ್ದೆ. ಅದಕ್ಕವರು ಉತ್ತರಿಸುತ್ತಾ “ಈ ಕ್ರಾಂತಿಯೆನ್ನುವದು ಒಂದು ಸಾಮೂಹಿಕ ಸನ್ನಿಯಿದ್ದಂತೆ. ಎಲ್ಲೋ ಯಾರೋ ಒಂದಷ್ಟು ಜನ ದಂಗೆಯೆದ್ದರು. ಅವರನ್ನು ನೋಡಿ ಬೇರೆಯವರೂ ದಂಗೆಯಿದ್ದರು. ಅವರೊಂದಿಗೆ ಈ ನ್ಯಾಟೋ ಕೈಜೋಡಿಸಿತು. ಅಲ್ಲಿಗೆ ಎಲ್ಲ ಮುಗಿಯಿತು. ಈ ರಕ್ತಪಾತ, ಅಪಾರ ಸಾವು, ನೋವು ಎಲ್ಲ ಬೇಕಾಗಿತ್ತ? ಇವರು ಪ್ರಜಾರಾಜ್ಯ ಬೇಕೆನ್ನುತ್ತಿದ್ದಾರೆ. ಪ್ರಜಾರಾಜ್ಯದಲ್ಲಿ ಎಲ್ಲವೂ ಸರಿಯಾಗಿರುತ್ತದಾ? ಅಲ್ಲಿ ಪ್ರತಿಭಟಿಸುವ ಹಕ್ಕೊಂದನ್ನು ಬಿಟ್ಟರೆ ಬೇರೆ ಏನಿರುತ್ತದೆ? ಹೋಗಲಿ ಪ್ರತಿಭಟಿಸುವ ಎಲ್ಲರಿಗೂ ನ್ಯಾಯ ಸಿಗುತ್ತದಾ? Take for example your country India. Do you think that all the principles of democracy are fully implemented over there? Can you go and ask your primeminister directly for what you have not got? Or can you say that so called your ‘democratic’ politicians are not corrupt and have not made any property for themselves? Or you being a part of democracy, against how many politicians have you raised your voice? Have you ever enjoyed the true freedom of democracy? I know you have not and it’s not possible also. Then why should we have this system?” ಎಂದು ನನಗೆ ಮರು ಪ್ರಶ್ನೆ ಹಾಕುತ್ತಾರೆ. ಮುಂದುವರಿದು “ಹಿಂದೆ ನಮ್ಮವನೇ ಆದ ಗಡಾಫಿ ಕೊಳ್ಳೆಹೊಡೆದರೂ ನಮಗೆ ಚನ್ನಾಗಿ ಅನುಕೂಲಮಾಡಿಕೊಟ್ಟಿದ್ದ. ಆದರೆ ಈಗ ಅಮೆರಿಕನ್ನರು, ಮತ್ತು ಬೇರೆಯವರು ಇಲ್ಲಿಯ ತೈಲವನ್ನು ಮುಂದಿನ ಇಪ್ಪತ್ತು ವರ್ಷಗಳ ಕಾಲ ಕೊಳ್ಳೆಹೊಡೆಯುತ್ತಾರೆ. ನನಗೆ ಇದರಲ್ಲಿ ಯಾವ ವ್ಯತ್ಯಾಸವೂ ಕಾಣಿಸುವದಿಲ್ಲ.” ಎಂದು ನಗುತ್ತಾರೆ. ಪೋಸ್ಟ್ ಆಫಿಸಿನ ಜನರಲ್ ಮ್ಯಾನೇಜರ್ ಒಬ್ಬರು “ಹಿಂದೆ ಗಡಾಫಿಯಿರುವಾಗ ಹಸಿರು ಭಾವುಟವಿತ್ತು. ಈಗ ಹೊಸ ಸರಕಾರ ಅದನ್ನು ಬದಲಾಯಿಸಿ ಎಂದು ಹೇಳಿತು. ಬದಲಾಯಿಸಿದ್ದೇವೆ. ಯಾರು ಬಂದರೂ ಹೋದರೂ ನಮಗೆಲ್ಲಾ ಒಂದೇ! ನಾವೆನು ಮಾಡೋಕಾಗುತ್ತೆ?” ಎಂದು ಕೈ ಚೆಲ್ಲುತ್ತಾರೆ. ಅವರ ಅಸಿಸ್ಟಂಟ್ ಜುಮಾ (ಹೆಸರು ಬದಲಾಯಿಸಲಾಗಿದೆ “ಹಿಂದೆ ನಾನು ಆಪಿಸಿಗೆ ಬೆಳಿಗ್ಗೆ ೮ ಕ್ಕೆ ಬಂದು ಮದ್ಯಾಹ್ನ ೧.೩೦ಕ್ಕೆ ಹೋಗುತ್ತಿದ್ದೆ. ಈಗ ಬೆಳಿಗ್ಗೆ ೧೦ ಗಂಟೆಗೆ ಬಂದು ಮದ್ಯಾಹ್ನ ೧೨.೩೦ಕ್ಕೆಲ್ಲಾ ಹೊರಟು ಹೋಗುತ್ತೆನೆ. ಏಕೆಂದರೆ ಈಗ ನಾವು ಸ್ವತಂತ್ರರು. ಏನು ಬೇಕಾದರು ಮಾಡಬಹುದು. Libya is free” ಎಂದು ಜೋರಾಗಿ ನಗತೊಡಗುತ್ತಾಳೆ. ಮುಂದೆ ನಾನು ಸ್ಥಳಿಯ ಪತ್ರಕರ್ತನೊಬ್ಬನನ್ನು ಭೇಟಿಮಾಡಿದೆ. “ನಾನು ಹಿಂದೆ freelance journalist ಆಗಿ ಕೆಲಸ ಮಾಡುತ್ತಿದ್ದೆ. ಈಗ full time journalist ಆಗುತ್ತಿದ್ದೇನೆ. ಏಕೆಂದರೆ ಲಿಬಿಯಾ democratic country ಆಗಲಿದೆ. ಈ democratic country ಗಳಲ್ಲಿ ಬರೆಯಲು ಸಾಕಷ್ಟು ವಿಷಯಗಳಿರುತ್ತವೆ. Freedom of expression ಇರುವದರಿಂದ ನಿಮಿಷಕ್ಕೊಂದೊಂದು ಸುದ್ಧಿಯನ್ನು ಹಾಕಬಹುದು” ಎಂದು ಕಣ್ಣು ಮಿಟುಕಿಸುತ್ತಾನೆ. ಇನ್ನು ವಿದ್ಯಾರ್ಥಿಗಳಂತೂ “ನಮಗೆ ಹೊಸ ಸರಕಾರ ಬೇಡವೇ ಬೇಡ. ಇಷ್ಟವಿಲ್ಲ.” ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಇನ್ನೂ ಗಡಾಫಿಯ ಫೋಟೋವನ್ನು ತಮ್ಮ ಖಾಸಗಿ ಕೋಣೆಗಳಲ್ಲಿ ಮತ್ತು ಹಾಸ್ಟೆಲ್‍ಗಳಲ್ಲಿ ಹಾಕಿಕೊಂಡಿದ್ದಾರೆ. ನಾನು ಮೊನ್ನೆ ಗ್ರಾಮರ್ ವಿಷಯವನ್ನು ಹೇಳಿಕೊಡುವಾಗ ಸುಮ್ಮನೆ ”Gadafi was a dictator” ಎನ್ನುವ ವಾಕ್ಯವೊಂದನ್ನು ಬೋರ್ಡಿನ ಮೇಲೆ ಬರೆದೆ. ತಕ್ಷಣ ವಿದ್ಯಾರ್ಥಿಗಳೆಲ್ಲಾ “No, never. He was never ever a dictator. Mr. Uday, don’t say anything bad of Gadafi. He had given so much for us. We still love him and we still love his favorite color ‘green’. See….. ....” ಎಂದು ಹಸಿರು ಬಣ್ಣದ ಮೊಬೈಲ್ ಮತ್ತು ಪೆನ್ಸಿಲ್‍ಗಳನ್ನು ತೋರಿಸುತ್ತಾರೆ. ನಾನು ನೀವೆಲ್ಲಾ ವಿದ್ಯಾರ್ಥಿಗಳು ಇಂಥ ಚರ್ಚೆಯನ್ನೆಲ್ಲಾ ಬಿಟ್ಟು ಓದಿನ ಕಡೆ ಗಮನ ಕೊಡಬೇಕು ಎಂದು ಬುದ್ಧಿವಾದ ಹೇಳುತ್ತೇನೆ.


    ವಿಜಯದ ಸಂಕೇತವನ್ನು ಬಿಂಬಿಸುವ ಗೋಡೆ ಚಿತ್ರ
    ಹೊಸ ಹಂಗಾಮಿ ಸರಕಾರಕ್ಕೆ ದೇಶದ ಎಲ್ಲೆಡೆ ಗಡಾಫಿ ಬೆಂಬಲಿಗರ ಸಂಖ್ಯೆ ಸಾಕಷ್ಟಿದೆ ಎಂದು ಗೊತ್ತು. ಈಗಾಗಲೇ ಸುಮಾರು 2000 ದಷ್ಟು ಬೆಂಬಲಿಗರನ್ನು ಜೈಲಿಗೆ ಹಾಕಿ ಮನಬಂದಂತೆ ಹಿಂಸಿಸಲಾಗಿದೆ. ಇದನ್ನುಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ತೀವ್ರವಾಗಿ ಖಂಡಿಸಿದೆ. ಜೈಲಲ್ಲಿರುವವರು ನ್ಯಾಯಾಲಯದ ಮೊರೆಹೊಕ್ಕಿದ್ದಾರೆ. ಅವರಿಗೆ ನ್ಯಾಯ ಸಿಗುತ್ತಾ? ಇಲ್ಲ ಸಾವೇ ಗತಿಯಾಗುತ್ತಾ? ಎನ್ನುವದನ್ನು ಕಾದುನೊಡಬೇಕಿದೆ. ಈಗಲೂ ಟ್ರಿಪೋಲಿ, ಬೆಂಗಾಜಿ, ಮಿಸ್ರತಾಗಳಲ್ಲಿ ಆಗಾಗ ಗಡಾಫಿ ಬೆಂಬಲಿಗರು ಮತ್ತು ಬಂಡುಕೋರರ ಮಧ್ಯ ಘರ್ಷಣೆಗಳು ಸಂಭವಿಸುತ್ತಿವೆ. ಈ ತೆರದ ಘರ್ಷಣೆಗಳು ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವೆ. ಹೊಸ ಸರಕಾರ ಮೊದಲು ಬಲಪ್ರಯೋಗ ಮಾಡಿ ಜನರನ್ನು ತಮ್ಮತ್ತ ಒಲಿಸಿಕೊಳ್ಳಲು ನೋಡಿದರು. ಆದರೆ ಅದು ಸಾಧ್ಯವಾಗದೇ ಹೋದಾಗ ಹೊಸಹೊಸ ಸವಲತ್ತುಗಳನ್ನು ಕೊಡುವದರ ಮೂಲಕ ಅವರನ್ನು ಒಲಿಸಿಕೊಳ್ಳಲು ನೋಡುತ್ತಿದ್ದಾರೆ. ಆ ಪ್ರಕಾರ ಲಿಬಿಯನ್ನರ ಸಂಬಳ ಸಧ್ಯದಲ್ಲಿಯೇ ದ್ವಿಗುಣವಾಗಲಿದೆ ಎಂಬ ಸುದ್ಧಿಯಿದೆ. ಈ ರಮದಾನ್ ಮತ್ತು ಈದ್ ಹಬ್ಬಗಳ ಕೊಡುಗೆಯಾಗಿ ಸರಕಾರಿ ಒಡೆತನದಲ್ಲಿರುವ “ಲಿಬಿಯಾನಾ ಮತ್ತು ಆಲ್ ಮದಾರ್” ಮೊಬೈಲ್‍ಗಳಿಗೆ ತಲಾ ೬೦ ದಿನಾರ್ (ರೂ. ೨೪೦೦) ಗಳಷ್ಟು ಉಚಿತ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿದೆ. ಉನ್ನತ ಶಿಕ್ಷಣ ಸಚಿವರು ಇನ್ನುಮುಂದೆ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ೭೫ ದಿನಾರ್ (ರೂ. ೩೦೦೦) ಗಳಷ್ಟು ಒಂಬತ್ತು ತಿಂಗಳ ಕಾಲ ಸ್ಟೈಫಂಡ್ ನೀಡಲಾಗುವದು ಎಂದು ಘೋಷಿಸಿದ್ದಾರೆ. ಒಂದು ಸಾರಿ ಜನರ ಮೇಲೆ ಹಿಡಿತ ಸಾಧಿಸಿದ ಮೇಲೆ ಹಂಗಾಮಿ ಸರಕಾರ ಚುನಾವಣೆಗಳನ್ನು ನಡೆಸಲಿದೆ. ಆನಂತರ ಪ್ರಜಾಪ್ರಭುತ್ವ ಸರಕಾರಕ್ಕೆ ಚಾಲನೆ ಸಿಗಲಿದೆ. ಆದರೆ ಸಧ್ಯದ ಸರಕಾರ, ಗಡಾಫಿಯ ಬೆಂಬಲಿಗರು ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ ಎಂದು ತಾಕೀತು ಮಾಡುತ್ತಿದೆ. ಆದರೆ ಅವರು ನಮಗೇಕೆ ಅವಕಾಶವಿಲ್ಲ? ಅವಕಾಶ ಮಾಡಿಕೊಡದೆಹೋದರೆ ಉಗ್ರರೂಪದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


    ಇತ್ತ ಕಡೆ ಹೊಸ ಸರಕಾರ ಗಡಾಫಿಯ ಹೆಸರನ್ನು ಸಂಪೂರ್ಣವಾಗಿ ಅಳಿಸಿಹಾಕಲು ನೋಡುತ್ತಿದೆ. ಗಡಾಫಿತನ ಎಲ್ಲೂ ಇರಲೇಬಾರದೆಂಬಂತೆ ಪಣ ತೊಟ್ಟಂತೆ ಕಾಣಿಸುತ್ತಿದೆ. ಆತನ ಭಾವಚಿತ್ರವಿರುವ ನೋಟುಗಳನ್ನು ನಿಧಾನವಾಗಿ ಚಲಾವಣೆಯಿಂದ ರದ್ದುಪಡಿಸಲು ನೋಡುತ್ತಿದೆ. ಎಲ್ಲ ಸಾರ್ವಜನಿಕ ಕಛೇರಿ, ಸ್ಥಳಗಳಿಂದ ಆತನ ಫೋಟೋಗಳನ್ನು ತೆಗೆದುಹಾಕಲಾಗಿದೆ. ಆತ ಹಾಕಿಕೊಟ್ಟ ರೀತಿ ರಿವಾಜುಗಳನ್ನು, ಚಿಂತನೆಗಳನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗುತ್ತಿದೆ. ಹಣದುಬ್ಬರದಿಂದ ಪದಾರ್ಥಗಳ ಬೆಲೆಗಳು ಮೊದಲಿಗಿಂತ ೧೫% ನಷ್ಟು ಹೆಚ್ಚಾಗಿದ್ದರಿಂದ ಅದನ್ನು ಹತೋಟಿಗೆ ತರಲು ಸರಕಾರ ಹೆಣಗಾಡುತ್ತಿದೆ. ಬ್ಯಾಂಕುಗಳಲ್ಲಿ ಯಾವಾಗಲೂ ದುಡ್ಡಿನ ಕೊರತೆಯಿದ್ದು ಪರಿಸ್ಥಿತಿ ಸುಧಾರಿಸುವವರಿಗೂ ಒಬ್ಬನು ತನ್ನ ಸಂಬಳದ ೪೦% ಭಾಗದಷ್ಟು ಹಣವನ್ನು ಮಾತ್ರ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಯುದ್ಧದ ಸಮಯದಲ್ಲಿ ಎಲ್ಲರ ಕೈಗೆ ಬಂದ ಗನ್ನುಗಳನ್ನು ಸರಕಾರ ಹಿಂತೆಗೆದುಕೊಳ್ಳುವಲ್ಲಿ ವಿಫಲವಾಗಿದೆ.

    ಸ್ವಾತಂತ್ರ್ಯ ಪ್ರತೀಕದ ಗೋಡೆ ಚಿತ್ರ


    ಈ ಎಲ್ಲದರ ಮಧ್ಯ ಮೊನ್ನೆ ಅಂದರೆ ಫೆಬ್ರುವರಿ ೧೭ ರಂದು ಬಿಗಿ ಭದ್ರತೆಯ ನಡುವೆಯೇ ಲಿಬಿಯಾ ಮೊದಲ ವರ್ಷದ ಕ್ರಾಂತಿಯ ಸಂಭ್ರಮದಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿತು. ಬೆಂಗಾಜಿಯಲ್ಲಿ ಈ ಆಚರಣೆಗೆ ದೊಡ್ಡಮಟ್ಟದ ಪ್ರತಿಕ್ರಿಯೆ ಸಿಕ್ಕಿತು. ಪ್ರತಿಯೊಂದು ಮನೆಯ ಹೆಣ್ಣುಮಕ್ಕಳು ನವವಧುವಿನಂತೆ ಸಿಂಗರಿಸಿಕೊಂಡು ತಮ್ಮ ಮನೆಯನ್ನು ಬೇರೆ ಬೇರೆ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಮತ್ತು ರಾಷ್ಟ್ರ ಧ್ವಜಗಳಿಂದ ಅಲಂಕರಿಸಿ ಸ್ವಾತಂತ್ರೋತ್ಸವನ್ನು ಆಚರಿಸಿದರು ಎಂದು ಲಿಬಿಯಾದ ಇಂಗ್ಲೀಷ್ ಪತ್ರಿಕೆ “ದಿ ಟ್ರಿಪೋಲಿ ಪೋಸ್ಟ್” ವರದಿ ಮಾಡಿದೆ. ಆದರೆ ದಕ್ಷಿಣದ ಭಾಗದಲ್ಲಿ ಇದಕ್ಕೆ ಸಿಕ್ಕ ಪ್ರತಿಕ್ರಿಯೆ ನೀರಸವಾಗಿತ್ತು. ಈ ಉತ್ಸವದ ಮುನ್ನಾ ದಿನ ಸರಕಾರ ಇಡಿ ಲಿಬಿಯಾದ ತುಂಬಾ ಪ್ರತಿಯೊಂದು ಮನೆಗೆ ಒಂದು ತಿಂಗಳಿಗಾಗುವಷ್ಟು ಅಕ್ಕಿ, ಗೋಧಿ ಹಿಟ್ಟು, ಶಾವಿಗೆ, ಎಣ್ಣೆ ಮುಂತಾದ ದಿನಸಿಗಳನ್ನು ಉಚಿತವಾಗಿ ವಿತರಿಸಿದೆ. ಆ ದಿನ ಶುಕ್ರವಾರ ಬಂದಿದ್ದರಿಂದ ಸರಕಾರ ಮಾರನೆ ದಿವಸ
    ಸಾರ್ವತ್ರಿಕ ರಜೆಯನ್ನು ಘೋಷಿಸಿ ಲಿಬಿಯನ್ನರ ಮೆಚ್ಚುಗೆ ಗಳಿಸಲು ನೋಡಿತು. ಸರಕಾರ, ಇದೆ ರೀತಿ ಮುಂದೆಯೂ ಸಹ ಎಲ್ಲ ರಿತಿಯಲ್ಲಿ ಲಿಬಿಯನ್ನರ ಮೆಚ್ಚುಗೆಯನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತದಾ? ಕಾದು ನೋಡಬೇಕಿದೆ.

    -ಉದಯ್ ಇಟಗಿ
    ಈ ಲೇಖನ 4-3-2012 ರ “ಸಂಯುಕ್ತ ಕರ್ನಾಟಕ”ದಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ http://www.samyukthakarnatakaepaper.com/27598/Samyuktha-Karnataka/Mar-04-2012-Bangalore#page/13/1

    ನಿಜಾರ್ ಖಬ್ಬಾನಿಯ ಒಂದಷ್ಟು ಪ್ರೇಮ ಕವನಗಳು; ಪ್ರೇಮಿಗಳ ದಿನಕ್ಕಾಗಿ

  • ಮಂಗಳವಾರ, ಫೆಬ್ರವರಿ 14, 2012
  • ಬಿಸಿಲ ಹನಿ


  • ಸಿರಿಯಾ ಮೂಲದ ಅರೇಬಿ ಕವಿ (1923-1998) ನಿಜಾರ್ ಖಬ್ಬಾನಿ ಇಪ್ಪತ್ತನೇ ಶತಮಾನದ ಪ್ರಸಿದ್ಧ ಕವಿ. ಅರೇಬಿ ಭಾಷೆಯ ‘ಪ್ರೇಮ ಕವಿ’ ಎಂದೇ ಖ್ಯಾತಿ ಹೊಂದಿರುವ ನಿಜಾರ್ ಖಬ್ಬಾನಿಯ ಬಹಳಷ್ಟು ಕವನಗಳು ಪ್ರೀತಿ ಮತ್ತು ಪ್ರಣಯದ ಸುತ್ತ ಸುತ್ತುತ್ತವೆ. ಆದರೆ ಈತನ ಕವನಗಳು ಪ್ರೀತಿಯ ಬಗ್ಗೆ ಅಗಾಧವಾದಂಥದ್ದೇನನ್ನೂ ಹೇಳದೆ ಅದರ ಹುಚ್ಚುತನಗಳನ್ನು ಮತ್ತದರ ಪರಕಾಷ್ಠತೆಯನ್ನು ಮಾತ್ರ ಕಟ್ಟಿಕೊಡುತ್ತವೆ. ಆದರೂ ವಿಮರ್ಶಕರು ‘ಪ್ರೇಮಿಗಳು ಈತನ ಕವನಗಳನ್ನು ಓದದ ಹೊರತು ಪ್ರೀತಿಯೆಂದರೇನೆಂದು ಅರ್ಥಮಾಡಿಕೊಳ್ಳಲಾರರು’ ಎಂದು ಅಭಿಪ್ರಾಯಪಡುತ್ತಾರೆ. ಅಂಥ ಒಂದಷ್ಟು ಕವನಗಳನ್ನು ಪ್ರೇಮಿಗಳ ದಿನಕ್ಕಾಗಿ ಕನ್ನಡಕ್ಕೆ ಅನುವಾದಿಸಿದ್ದೇನೆ.

    ನಾನು ನಿನ್ನ ಬೇರೆ ಪ್ರಿಯಕರನಂತಲ್ಲ ಪ್ರಿಯೆ!

    ನಾನು ನಿನ್ನ ಬೇರೆ ಪ್ರಿಯಕರನಂತಲ್ಲ ಪ್ರಿಯೆ!
    ಅವನು ನಿನಗೆ ಮೋಡ ತಂದು ಕೊಟ್ಟರೆ
    ನಾನು ನಿನಗೆ ಮಳೆಹನಿಯಾಗಿ ಸುರಿಯುವೆ
    ಅವನು ನಿನಗೆ ಉರಿವ ದೀಪ ಕೊಟ್ಟರೆ
    ನಾನು ನಿನಗೆ ಹೊಳೆವ ಚಂದಿರನನ್ನು ತರುವೆ
    ಅವನು ನಿನಗೆ ಮರದ ಹೂಗಳನ್ನು ಕಿತ್ತುಕೊಟ್ಟರೆ
    ನಾನು ನಿನಗೆ ಮರವಾಗಿ ನೆರಳನಿಡುವೆ
    ಅವನು ನಿನಗೆ ಹಡಗನ್ನು ತಂದುಕೊಟ್ಟರೆ
    ನಾನದರ ನಾವಿಕನಾಗಿ ಜೊತೆಯಲ್ಲಿ ಸಾಗುವೆ.

    ಅವಸರದ ಮುತ್ತು

    ಪ್ರತಿಸಲ ನಾವಿಬ್ಬರೂ
    ಸಾಕಷ್ಟು ವಿರಹ ವೇದನೆಯನ್ನನುಭವಿಸಿ
    ಮತ್ತೆ ಒಂದಾಗಿ
    ನಾನು ನಿನಗೆ ಮುತ್ತನ್ನಿಡುವಾಗಲೆಲ್ಲಾ
    ನನಗನಿಸುತ್ತೆ
    ಅವಸರವಸರವಾಗಿ
    ನಾನೊಂದು ಪ್ರೇಮಪತ್ರವನ್ನು ಬರೆದು
    ಅಂಚೆಡಬ್ಬಕ್ಕೆ ಹಾಕುತ್ತಿದ್ದೇನೆಂದು!


    ಭಾಷೆ

    ಪ್ರೀತಿಯಲ್ಲಿ ಮುಳುಗಿದ ಹುಡುಗನೊಬ್ಬ
    ಹೇಗೆ ತಾನೆ ಮತ್ತೆ ಮತ್ತೆ ಅವವೆ
    ಸವಕಳಿ ಹಿಡಿದ ಪದಗಳನ್ನು ಬಳಸಿಯಾನು
    ಎಲ್ಲ ಹುಡುಗಿಯರು
    ತನ್ನ ಪ್ರಿಯತಮ
    ಭಾಷಾತಜ್ಞನಾಗಿರಬೇಕು
    ಭಾಷಾಪಂಡಿತನಾರಬೇಕೆಂದು ಹಂಬಲಿಸುವಾಗ?
    ಹಾಗೆಂದೇ ನಾನು ಆ ಭಾಷೆ ಈ ಭಾಷೆಗಳನ್ನು ಬಿಟ್ಟು
    ಬರೀ ಪ್ರೀತಿಯ ಭಾಷೆಯೊಂದನ್ನು ಮಾತ್ರ
    ಸೂಟುಕೇಸಿನಲ್ಲಿ ತುಂಬಿಕೊಂಡುಬಂದು
    ಅವಳ ಮುಂದೆ ಸುರಿದೆ
    ಅವಳು ಕುಣಿದು ಕುಪ್ಪಳಿಸಿದಳು.

    ನಿನ್ನ ಧ್ಯಾನ

    ನಾನು ಆಗಾಗ
    ಸಮುದ್ರ ತಟದ ಮೇಲೆ ಕುಳಿತುಕೊಂಡು
    ನಿನ್ನ ಬಗ್ಗೆ ಧೇನಿಸುವಾಗಲೆಲ್ಲಾ
    ಅಲೆಗಳು ಬಂದು
    ನನ್ನ ಪಾದಗಳಿಗೆ ಕಚಗುಳಿಯನ್ನಿಟ್ಟು
    ಏನು ಯೋಚಿಸುತ್ತಿರುವಿ ಎಂದು ಕೇಳುತ್ತವೆ?
    ಏನೆಂದು ಹೇಳಲಿ ನಾನು ಅವಕೆ?
    ನಾನೇನಾದರೂ
    ನಿನ್ನನ್ನು ಎಷ್ಟೊಂದು ಪ್ರೀತಿಸುತ್ತಿದ್ದೇನೆ,
    ಎಷ್ಟೊಂದು ಹಚ್ಚಿಕೊಂಡಿದ್ದೇನೆಂದು
    ಆ ಅಲೆಗಳಿಗೆ ಹೇಳಿದ್ದರೆ
    ಬಹುಶಃ, ಅವು ಎರಡೂ ದಡಗಳನ್ನು ಬಿಟ್ಟು
    ಸುಮ್ಮನೆ ನನ್ನನ್ನು ಹಿಂಬಾಲಿಸುತ್ತಿದ್ದವೇನೋ!


    ಉರಿವ ದೀಪಕ್ಕಿಂತ ಹೊಳೆವ ಸೂರ್ಯ ಚೆಂದ

    ಉರಿವ ದೀಪಕ್ಕಿಂತ ಹೊಳೆವ ಸೂರ್ಯ ಚೆಂದ
    ಬರಡು ಶಬ್ದಗಳಿಗಿಂತ ಮಿಡಿವ ಕವನ ಚೆಂದ
    ಬಿರಿದ ಅಧರಗಳಿಗಿಂತ ಮಧುರ ಮುತ್ತು ಚೆಂದ
    ನಮ್ಮಿಬ್ಬರಿಗಿಂತ ನಾನು ನಿನಗೆ ಬರೆದ ಪ್ರೇಮ ಪತ್ರಗಳೇ ಚೆಂದ
    ಏಕೆಂದರೆ ಕೊನೆಗೆ ಈ ಜಗದಲ್ಲಿ ಉಳಿವ ಏಕೈಕ ಸಾಕ್ಷಿ ಅವೊಂದೇ!
    ಅವಕೆ ಮಾತ್ರ ಸಾಧ್ಯ - ನಿನ್ನ ಸೌಂದರ್ಯವನ್ನು ಬಿಡಿಸಿಡಲು
    ಹಾಗೂ ನನ್ನ ಹುಚ್ಚುತನವನ್ನು ಸಾರಿ ಹೇಳಲು!


    ನಿನ್ನ ಪ್ರೀತಿ

    ನಿನ್ನ ಪ್ರೀತಿ
    ನಿನ್ನ ಕಂಗಳಷ್ಟೇ
    ನಿಗೂಢ,
    ಗಹನ,
    ಹಾಗೂ ಇಂದ್ರಿಯಾತೀತ.
    ಹುಟ್ಟು, ಸಾವುಗಳನ್ನು
    ಊಹಿಸಲಾಗದಂತೆ
    ನಿನ್ನ ಪ್ರೀತಿಯನ್ನು ಸಹ
    ಊಹಿಸಲಾಗದು.

    ನಮ್ಮ ಮನೆಯ ಟೆಲಿಫೋನು ರಿಂಗಣಿಸಿದಾಗ

    ನಮ್ಮ ಮನೆಯ ಟೆಲಿಫೋನು ರಿಂಗಣಿಸಿದಾಗ
    ಸಣ್ಣ ಮಗುವಿನಂತೆ
    ನಾನು ಅತ್ಯುತ್ಸಾಹದಿಂದ
    ಅದರತ್ತ ಓಡುತ್ತೇನೆ.
    ಆ ನಿರ್ಭಾವುಕ ಸಾಧನವನ್ನು
    ತಬ್ಬಿಕೊಳ್ಳುತ್ತೇನೆ.
    ತಬ್ಬಿಕೊಳ್ಳುತ್ತಾ
    ಅದರ ತಣ್ಣನೆಯ ತಂತಿಗಳನ್ನು ಹಿಂಡುತ್ತೇನೆ.
    ಹಿಂಡುತ್ತಾ ಹಿಂಡುತ್ತಾ ಕಾಯುತ್ತೇನೆ
    ನಿನ್ನ ಬೆಚ್ಚನೆಯ ದನಿಗಾಗಿ
    ಹಾಗೂ ಮಧುರ ಸಂಗೀತದಂತೆ ತೇಲಿ ಬರುವ
    ನಿನ್ನ ಮಾತುಗಳಿಗಾಗಿ.
    ತಕ್ಷಣ ನಾನು ಖುಶಿಯಿಂದ ಕಿರುಚುತ್ತೇನೆ
    ನೀನು ನನ್ನನ್ನು ನೆನಪಿಸಿಕೊಂಡಿದ್ದಕ್ಕಾಗಿ
    ಹಾಗೂ ಕಾಣದ ಜಗವೊಂದರಿಂದ
    ನನಗೆ ಕರೆ ಮಾಡಿದ್ದಕ್ಕಾಗಿ!

    ನಿನಗಾಗಿ

    ನಿನಗಾಗಿ
    ಕೇವಲ ನಿನಗಾಗಿ
    ನಾನು ಪ್ರತ್ಯೇಕ ಪದಗಳನ್ನು
    ಬಳಸಬೇಕಿದೆ
    ಹೊಸ ಭಾಷೆಯೊಂದನ್ನು
    ಹುಟ್ಟುಹಾಕಬೇಕಿದೆ
    ನಿನ್ನ ದೇಹ ಸೌಂದರ್ಯವನ್ನು ಬಣ್ಣಿಸಲು
    ಹಾಗೂ ನನ್ನ ಪ್ರೀತಿಯ ಆಳವನ್ನು ಹಿಡಿದಿಡಲು!



    ಬೇಕಾಗಿದೆ

    ನಾನು ಶಬ್ದಕೋಶ
    ಹಾಗೂ ನನ್ನ ತುಟಿಗಳಿಗೆ ವಿದಾಯ ಹೇಳಬೇಕಿದೆ.
    ಏಕೆಂದರೆ ನನಗೆ ಬಳಸಿದ ಪದಗಳನ್ನೇ
    ಬಳಸಿ ಬಳಸಿ ಸಾಕಾಗಿಹೋಗಿದೆ.
    ನನಗೆ ಬೇರೇನೋ ಬೇಕಾಗಿದೆ
    ಚೆರಿ-ಗಿಡವನ್ನಾಗಿ
    ಅಥವಾ ಬೆಂಕಿಪೊಟ್ಟಣವನ್ನಾಗಿ
    ಬದಲಾಯಿಸುವಂಥದ್ದು
    ಅಥವಾ ಮಾತುಗಳನ್ನು
    ಮುತ್ತುಗಳನ್ನಾಗಿ ಪರಿವರ್ತಿಸುವಂಥದ್ದು
    ಅಪ್ಸರೆಯರು ಸಾಗರದಿಂದ ಎದ್ದು ಬರುವಂತೆ
    ಅಥವಾ ಮಾಂತ್ರಿಕನ ದಂಡದಿಂದ ಕೋಳಿಪಿಳ್ಳೆಗಳು ಉದುರುವಂತೆ
    ಶಬ್ದಗಳು ತಾವೇ ತಾವಾಗಿ ಹೊರಹೊಮ್ಮುವಂಥ
    ಬಾಯೊಂದು ನನಗೆ ಬೇಕಿದೆ.

    ಮೂಲ ಅರೇಬಿ: ನಿಜಾರ್ ಖಬ್ಬಾನಿ
    ಕನ್ನಡಕ್ಕೆ: ಉದಯ್ ಇಟಗಿ


    ಈ ಕವನಗಳು ಇವತ್ತಿನ ಕೆಂಡಸಂಪಿಗೆಯಲ್ಲಿ ಪ್ರಕಟವಾಗಿವೆ. ಅದರ ಲಿಂಕ್ ಇಲ್ಲಿದೆ http://kendasampige.com/article.php?id=5120

    ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು-ನೆನಪಾಗಿ ಕಾಡದಂತ ಗೆಳೆಯ ಒಮ್ಮೊಮ್ಮೆ ನೆನಪಾಗಿ ಕಾಡುತ್ತಾನೆ

  • ಗುರುವಾರ, ಫೆಬ್ರವರಿ 09, 2012
  • ಬಿಸಿಲ ಹನಿ
  • ಈತ ನನ್ನ ಕಾಲೇಜು ಗೆಳೆಯ. ಅದೇಕೋ ಗೊತ್ತಿಲ್ಲ; ಇಂದು ಈತ ತುಂಬಾ ನೆನಪಾದ. ನೆನಪಾಗಿ ಕಾಡುವಂತ ಗೆಳೆಯನಲ್ಲ ಇವನು. ಆದರೂ ನೆನಪಾದ. ಅಥವಾ ನಾನೇ ನೆನಪಿಸಿಕೊಂಡೆನೇನೋ! ಹಾಗೆ ನೋಡಿದರೆ ಆತ ನನ್ನ ಹೃದಯಕ್ಕೆ ಹತ್ತಿರವಾಗಿರಬಹುದಾದಂತ ಗೆಳೆಯನಲ್ಲ. ಆದರೂ ಹತ್ತಿರವಾಗಿಸಿಕೊಂಡಿದ್ದೆ. ಏಕೆಂದರೆ ನನಗೆ ಬೇರೆ ದಾರಿಯಿರಲಿಲ್ಲ. ಇದ್ದ ಸಹಪಾಠಿಗಳಲ್ಲಿ ಬೇರೆ ಯಾರೂ ಅಷ್ಟಾಗಿ ಇಷ್ಟವಾಗದೆ ಹೋದಾಗ ಇವನೊಬ್ಬ ಮಾತ್ರ ಇಷ್ಟವಾಗಿದ್ದ. ಗೆಳೆತನಕ್ಕೆ ಅನಿವಾರ್ಯವಾಗಿದ್ದ. ಇವನೊಂದಿಗೆ ಗೆಳೆತನ ಮಾಡಬಹುದೆಂದೆನಿಸಿತ್ತು. ಮಾಡಿದೆ.


    ನಮ್ಮಿಬ್ಬರ ಮಧ್ಯ ಅಂಥ ಗಾಢತೆ ಇರಲಿಲ್ಲವಾದರೂ ನಾನು ನನ್ನೊಳಗನ್ನು ಅವನ ಮುಂದೆ ತೆರದಿಟ್ಟಿದ್ದೆ. ಅವನೂ ಅಷ್ಟೆ; ಅವನದೆಲ್ಲವನ್ನೂ ನನ್ನೊಂದಿಗೆ ಹಂಚಿಕೊಂಡಿದ್ದ. ಕದ್ದು ಬ್ಲೂ ಫಿಲ್ಮ್ ನೋಡಿದ್ದರಿಂದ ಹಿಡಿದು ತಾನು ಪಿ.ಯು.ಸಿ.ಯಲ್ಲಿರಬೇಕಾದರೆ ತನ್ನ ಸಹಪಾಠಿಯೊಬ್ಬಳನ್ನು ಇಷ್ಟಪಟ್ಟಿದ್ದು, ಅವಳು ಇನ್ಯಾರನ್ನೋ ಇಷ್ಟಪಟ್ಟಿದ್ದು ಎಲ್ಲವನ್ನೂ ನ್ನನ್ನೊಂದಿಗೆ ಹೇಳಿಕೊಂಡಿದ್ದ. ಆದರೆ ಹಂಚಿಕೊಂಡ ಮೇಲೆ ಅವನು ಹಗುರಾಗುತ್ತಿದ್ದನಾ? ಗೊತ್ತಿಲ್ಲ. ಆದರೆ ನನ್ನೊಂದಿಗೆ ಹಂಚಿಕೊಂಡ ವಿಷಯಗಳನ್ನು ಅವನು ಬೇರೆ ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ ಎನ್ನುವದು ಮಾತ್ರ ಸತ್ಯ! ನಾನು? ನಾನು ಅವನೊಂದಿಗೆ ಹಂಚಿಕೊಳ್ಳುವಾಗ ಹಗುರಾದಂತೆನಿಸುತ್ತಿತ್ತು. ಆದರೆ ನಿಜಕ್ಕೂ ಹಗುರಾಗುತ್ತಿದ್ದೆ ಎಂದು ಖಡಾಖಂಡಿತವಾಗಿ ಹೆಳಲಾರೆ. ಏಕೆಂದರೆ ನನ್ನದೆಲ್ಲವನ್ನೂ ಇವನೊಂದಿಗೆ ಹಂಚಿಕೊಳ್ಳಲೇಬೇಕೆಂಬ ತುಡಿತಕ್ಕಿಂತ ಹೆಚ್ಚಾಗಿ ಒಮ್ಮೆ ಹಂಚಿಕೊಂಡು ಬಿಡಬೆಕು ಎನ್ನುವ ಒಳಗಿನ ಒತ್ತಡದಿಂದ ಹಂಚಿಕೊಳ್ಳುತ್ತಿದ್ದೆ.


    ಹಾಗೆ ನೋಡಿದರೆ ನಮ್ಮಿಬ್ಬರಲ್ಲಿ ಯಾವುದೇ ಸಾಮ್ಯತೆ ಇರಲಿಲ್ಲ. ಆದರೂ ಅವನನ್ನು ವಿನಾಕಾರಣ ಇಷ್ಟಪಡುತ್ತಿದ್ದೆ. ವಿನಾಕಾರಣ ಪ್ರೀತಿಸುತ್ತಿದ್ದೆ. ನಾನು ಕಲಾತ್ಮಕ ಚಿತ್ರಗಳನ್ನು ಇಷ್ಟಪಟ್ಟರೆ ಅವನು ಕಮರ್ಷಿಯಲ್ ಚಿತ್ರಗಳನ್ನು ಇಷ್ಟಪಡುತ್ತಿದ್ದ. ನಾನು ಸಾಹಿತ್ಯದ ಬಗ್ಗೆ ಮಾತಾಡಿದರೆ ಅವನು ರವಿಚಂದ್ರನ್ ಚಿತ್ರಗಳ ಬಗ್ಗೆ ಮಾತಾಡುತ್ತಿದ್ದ. ನಾನು ಹುಡುಗಿಯರೊಂದಿಗೆ ಇಷ್ಟಪಟ್ಟು ಮಾತಿಗಿಳಿದರೆ ಅವನು ಅವರಿಂದ ಮಾರು ದೂರ ಓಡಿಹೋಗುತ್ತಿದ್ದ. ನನಗೆ ಕಥೆ, ಕಾದಂಬರಿಗಳನ್ನು ಓದುವ ಹುಚ್ಚಿದ್ದರೆ ಅವನಿಗೆ ಟೀವಿ ನೋಡುವ ಹುಚ್ಚು. ಹೀಗೆ......ಉತ್ತರ-ದಕ್ಷಿಣ ಅಂತಾರಲ್ಲ ಹಾಗೆ ನಾವಿಬ್ಬರೂ ಬೇರೆ ಬೇರೆ ದಿಕ್ಕುಗಳಂತಿದ್ದೆವು. ಇಬ್ಬರ ನಡುವೆ ಬೌದ್ಧಿಕವಾಗಿ ಅಗಾಧ ಅಂತರವಿತ್ತು ಆದರೂ ಒಬ್ಬರಿಗೊಬ್ಬರು ಹತ್ತಿರವಿರುತ್ತಿದ್ದೆವು.


    ನಿಜಕ್ಕೂ ನಾನು ಅವನಲ್ಲಿ ಏನನ್ನು ನೋಡಿ ಇಷ್ಟಪಟ್ಟೆನೋ ಗೊತ್ತಿಲ್ಲ. ಅಂತೂ ಇಷ್ಟಪಟ್ಟೆ. ಗೆಳೆತನ ಮುಂದುವರಿಯಿತು. ಅದು ಯಾವತ್ತೂ ಭೋರ್ಗರೆಯುವದಾಗಲಿ, ಉಕ್ಕಿ ಹರಿಯುವದಾಗಲಿ ಮಾಡಲಿಲ್ಲ. ಅಸಲಿಗೆ ಅದರಲ್ಲಿ ನೊರೆತೆರೆಗಳೇಳಲಿಲ್ಲ. ತಣ್ಣಗೆ ಗುಪ್ತಗಾಮಿನಿಯಂತೆ ಹರಿಯುತ್ತಾಹೋಯಿತು. ಎಂದಾದರೊಮ್ಮೆ ಒಟ್ಟಿಗೆ ಸಿನಿಮಾಕ್ಕೆ ಹೊಗುತ್ತಿದ್ದೆವು. ಹುಡುಗಿಯರ ಬಗ್ಗೆ ಮಾತನಾಡುತ್ತಿದ್ದೆವು. ಲೇಡಿ ಲೆಕ್ಚರರ್ಸ್ ಬಗ್ಗೆ ಏನೋ ಒಂದು ಕಾಮೆಂಟು ಮಾಡುತ್ತಾ ಕಿಸಿಕಿಸಿಯೆಂದು ನಗುತ್ತಿದ್ದೆವು.


    ನನ್ನ ಡಿಗ್ರಿ ಮುಗಿದಾದ ಮೇಲೆ ನಾನು ಬೆಂಗಳೂರಿಗೆ ಬಂದೆ. ಮುಂದೆ ಅವನು ಮಾಸ್ಟರ್ ಡಿಗ್ರಿ ಮುಗಿಸಿ ಬೆಂಗಳೂರಿಗೆ ಬಂದ. ಬೆಂಗಳೂರಿಗೆ ಬಂದಾಗಲೂ ಅಷ್ಟೆ ಅವನನ್ನು ನೋಡಲೇಬೇಕು, ಮಾತನಾಡಿಸಲೇಬೇಕು ಎಂಬ ಒಳತುಡಿತಗಳೇನೂ ಇರಲಿಲ್ಲ. ಬಿಡುವಿದ್ದಾಗ ಅವನೇ ನನ್ನ ಹುಡುಕಿಕೊಂಡು ಬರುತ್ತಿದ್ದ. ಹೀಗೆ ಬಂದಾಗ ಅವನನ್ನು ಇತರೆ ಗೆಳೆಯರೊಂದಿಗೆ ಡಾಬಾಗೆ ಕರೆದುಕೊಂಡು ಹೋಗುತ್ತಿದ್ದೆ. ಅವನು ಗುಂಡು ಹಾಕುತ್ತಿರಲಿಲ್ಲ. ಆದರೆ ನಾವು ಗುಂಡುಹಾಕುವಾಗ ಮಾತ್ರ ಜಾಲಿ ಬಾರಿನ ಪೋಲಿ ಗೆಳೆಯರಾಗುತ್ತಿದ್ದೆವು. ಅವನು ‘ಗಾಂಡಲೀನಳ ಗೋಪಿ’ಯಂತಾಗಿ ನನ್ನ ಗೇಲಿಗೊಳಗಾಗುತ್ತಿದ್ದ.


    ಮುಂದೆ ಅವನಿಗೆ ಆರೋಗ್ಯದಲ್ಲಿ ಅಗಾಧ ಏರು-ಪೇರಾಗಿ ತೀರ ಸಣ್ಣ ವಯಸ್ಸಿಗೆ ತುಂಬಾ ಬಳಲಿದ. ಅದೇಕೋ ಅವತ್ತಿನಿಂದ ಅವನ ಬಗ್ಗೆ ಸ್ವಲ್ಪ ಸಾಫ್ಟ್ ಕಾರ್ನರ್ ಹೆಚ್ಚಾಯಿತು. ಪದೆಪದೆ ಅವನನ್ನು ನೋಡಲು ಅವನಿರುವಲ್ಲಿಗೆ ಹೋಗುತ್ತಿದ್ದೆ. ಹೋದಾಗ ನಮ್ಮ ಕಾಲೇಜು ದಿನಗಳ ನೆನಪುಗಳನ್ನು ಹರಡಿಕೊಂಡು ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದೆವು. ಅಷ್ಟೊತ್ತಿಗಾಗಲೇ ನನಗೆ ಮದುವೆಯಾಗಿತ್ತು. ಆದರೆ ಅವನು ಹಾಗೆ ಉಳಿದ. ಅನಾರೋಗ್ಯ ವ್ಯಕ್ತಿಗೆ ಯಾರು ತಾನೆ ಹೆಣ್ಣು ಕೊಡುತ್ತಾರೆ? ಒಳ್ಳೆ ಕೆಲಸ, ಒಳ್ಳೆ ಸಂಬಳ, ಅನುಕೂಲಸ್ಥನಾಗಿದ್ದಾನೆ. ನಾನೇ ಒಂದು ಸಾರಿ ನನ್ನ ಮನಸ್ಸು ತಡೆಯದೆ ಕೇಳಿಬಿಟ್ಟೆ ”ನಿನ್ನ ಆರೋಗ್ಯದ ಬಗ್ಗೆ ಇದ್ದ ಹಕೀಕತ್‍ನ್ನು ಹೇಳಿ ಯಾಕೆ ಮದುವೆಯಾಗಬಾರದು?” ಎಂದು. ಅವನದಕ್ಕೆ “ಆಗಬಹುದು. ಆದರೆ ಹೆಣ್ಣು ಕೊಡುವವರು ಸಿಗಬೇಕಲ್ಲ? ಸಿಕ್ಕರೂ ಈಗ ಹೂಂ ಎಂದು ಆಮೇಲೆ ತಿವಿಯತೊಡಗಿದರೆ ಏನು ಮಾಡುವದು? ಅದಕ್ಕಿಂತ ಮದುವೆಯಾಗದೇ ಇರೋದೇ ಲೇಸು.” ಎಂದು ಮೊದಲು ನಿರಾಶನಾಗಿ ನಕ್ಕ. ಆಮೇಲೆ “ಅಂಥ ಹುಡುಗಿ ಸಿಕ್ಕರೆ ನೋಡೋಣ” ಎಂದು ಆಶಾವಾದವನ್ನೂ ವ್ಯಕ್ತಪಡಿಸಿದ. ನಾನು ಹೆಚ್ಚು ಬಲವಂತ ಮಾಡಲು ಹೋಗಲಿಲ್ಲ. ಅವನು ಹೇಳುವದರಲ್ಲಿ ಒಂದು ಅರ್ಥ ಇದೆ ಎಂದುಕೊಂಡು ಸುಮ್ಮನಾದೆ.


    ಇಂಥ ಹುಡುಗ ಇವತ್ತೇಕೋ ತುಂಬಾ ನೆನಪಾದ. ಅವನ ಬಗ್ಗೆ ಬರೆಯಬೇಕಿನಿಸಿ ಇಲ್ಲಿ ಬರೆಯುತ್ತಿದ್ದೇನೆ. ಆ ಮೂಲಕ ಒಂದು ಗೆಳೆತನ ಎಂದರೆ ಹೀಗೂ ಇರುತ್ತದಾ? ಎಂದು ನನಗೇ ಅಚ್ಚರಿಯಾಗುವಷ್ಟು ಕಣ್ಣಮುಂದೆ ಹಾದು ಹೋಯಿತು.

    ಕಾಡಿಗೆ ಎದುರಾಗಿ ನಿಂತ ಹುಡುಗಿ ಭಾಗ - 2

  • ಮಂಗಳವಾರ, ಅಕ್ಟೋಬರ್ 25, 2011
  • ಬಿಸಿಲ ಹನಿ
  • ನಿಮಗೆ ಆಶ್ಚರ್ಯವಾಗಬಹುದು-ನನಗೆ ಹಸಿವೆಯೇ ಎನಿಸುತ್ತಿರಲಿಲ್ಲ. ಆದರೂ ಆಗೊಮ್ಮೆ ಈಗೊಮ್ಮೆ ಪಾರ್ಸಲ್ಲಿನಲ್ಲಿದ್ದ ಸಿಹಿತಿಂಡಿಯನ್ನು ತಿಂದು ನನ್ನ ಅಲ್ಪಸ್ವಲ್ಪ ಹಸಿವೆಯನ್ನು ನೀಗಿಸಿಕೊಳ್ಳುತ್ತಿದ್ದೆ. ಮರದಲ್ಲಿ ಸಿಹಿಯಾದ ಹಣ್ಣುಗಳು ಕಾಣಿಸಿದವು. ಆದರೆ ಅವನ್ನು ತಿನ್ನಲು ಹೋಗಲಿಲ್ಲ. ಏಕೆಂದರೆ ಅವುಗಳಲ್ಲಿ ಬಹಳಷ್ಟು ಹಣ್ಣುಗಳು ನೋಡಲು ಚನ್ನಾಗಿದ್ದರೂ ಕೆಲವೊಮ್ಮೆ ವಿಷಪೂರಿತವಾಗಿರುತ್ತವೆಂದು ನನಗೆ ಗೊತ್ತಿತ್ತು. ನಾನು ಮುಸ್ಸಂಜೆಯವರೆಗೂ ನಡೆಯುತ್ತಲೇ ಇದ್ದೆ. ಕೊನೆಗೆ ನದಿ ದಂಡೆ ಮೇಲೆ ಒಂದು ನುಣುಪಾದ ಜಾಗ ಸಿಕ್ಕಿತು. ಅಂದು ಆ ರಾತ್ರಿಯನ್ನು ಅಲ್ಲಿಯೇ ಕಳೆಯಲು ನಿರ್ಧರಿಸಿದೆ.

    ಮರುದಿವಸ ಬೆಳಿಗ್ಗೆ ಎದ್ದಾಗ ಸೂರ್ಯ ಅದಾಗಲೇ ನೆತ್ತಿಯ ಮೇಲೆ ಬಂದಿದ್ದ. ದಿನನಿತ್ಯದ ವಾಡಿಕೆಯಂತೆ ಕೋಲಿನಿಂದ ಹುಲ್ಲನ್ನು ಸರಿಸುತ್ತಾ, ನೆಲವನ್ನು ತಡಕಾಡುತ್ತಾ, ಜೇಡರ ಹುಳುಗಳೇನಾದರೂ ಇವೆಯೋ ಎಂಬುದನ್ನು ಪರೀಕ್ಷಿಸುತ್ತಾ ಎಚ್ಚರಿಕೆಯಿಂದ ನಡೆಯುತ್ತಿದ್ದೆ. ಒಮ್ಮೊಮ್ಮೆ ನದಿ ದಂಡೆಯ ಮೇಲಿನ ರಸ್ತೆ ದುಸ್ತರವಾದಾಗ ಈಜಿಕೊಂಡು ಹೋಗುತ್ತಿದ್ದೆ. ಹೀಗೆ ನಡೆದುಕೊಂಡು ಹೋಗುತ್ತಿರುವಾಗ ನನ್ನ ಬ್ಯಾಗಿನಲ್ಲಿದ್ದ ಸಿಹಿತಿಂಡಿಗಳು ತೂತಿನ ಮೂಲಕ ಬಿದ್ದುಹೋಗಿದ್ದವು. ನನಗೆ ಹಸಿವಿಯೇ ಅನಿಸದಿದ್ದರಿಂದ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.

    ನಡೆಯುತ್ತಾ ಹೋದಂತೆ ಸ್ವಲ್ಪ ದೂರದರಲ್ಲಿಯೇ ನನಗೆ ರಣಹದ್ದುಗಳು ಕಂಡವು. ಬಹುಶಃ, ಅಲ್ಲೆಲ್ಲೋ ಹೆಣಗಳಿರಬೇಕು. ಅವು ವಿಮಾನ ಅಪಘಾತದಲ್ಲಿ ಮಡಿದ ವ್ಯಕ್ತಿಗಳ ಮಾಂಸ ತಿನ್ನಲು ಅಲ್ಲಿ ಸೇರಿರಬೇಕು ಎಂದು ನನಗೆ ಕೂಡಲೇ ಗೊತ್ತಾಯಿತು. ಎಲ್ಲಿ ಹೆಣಗಳಿರುತ್ತವೋ ಅಲ್ಲಿ ಸಾಮಾನ್ಯವಾಗಿ ಹದ್ದುಗಳಿರುತ್ತವೆ.

    ನಾನಿನ್ನೂ ನಮ್ಮ ವಿಮಾನದ ಭಗ್ನಾವಶೇಷಗಳು ಬಿದ್ದ ಜಾಗದಲ್ಲಿಯೇ ಇದ್ದೆ. ನಾನು ನಡೆದು ಹೋಗುತ್ತಿದ್ದಂತೆ ವಿಮಾನದ ಮೈಕಟ್ಟಿನ ಒಂದು ಭಾಗ ಅಲ್ಲಿ ಬಿದ್ದಿರುವದು ಕಾಣಿಸಿತು. ವಿಮಾನದ ಸಂಖ್ಯೆ ಇನ್ನೂ ಹಾಗೆ ಕಾಣುತ್ತಿತ್ತು. ಸ್ವಲ್ಪ ದೂರದರಲ್ಲಿಯೇ ಮುರಿದು ಬಿದ್ದ ವಿಮಾನದ ಇನ್ನೊಂದು ಭಾಗ ಕಾಣಿಸಿತು. ಅದು ಕ್ಯಾಬಿನ್ನಿನಂತಿದ್ದು ಅದರ ವೈರ್ ಗಳು ತಳಕುಹಾಕಿಕೊಂಡಿದ್ದವು.

    ಅಲ್ಲಿ ಪೆಟ್ರೋಲ್ ವಾಸನೆ ಇನ್ನೂ ಹಾಗೆ ಇತ್ತು. ಆದರೆ ಬದುಕುಳಿದವರ ಬಗ್ಗೆ ಯಾವಂದೂ ಕುರುಹುಗಳು ಕಾಣಿಸಲಿಲ್ಲ. ಆ ಅವಶೇಷದ ಬಳಿ ನಾನು ಬಹಳ ಹೊತ್ತು ನಿಲ್ಲಲಿಲ್ಲ. ಏಕೆಂದರೆ ನಾನು ಮುಂದೆ ಸಾಗಲೇಬೇಕಿತ್ತು. ಆದರೂ ನಾನು ನಡೆದು ಹೋಗಬೇಕಾದ ದಾರಿ ನಿಧಾನವಾಗಿ ಸಾಗುತ್ತಿದ್ದರಿಂದ ನನ್ನ ಪಯಣ ಅಷ್ಟಾಗಿ ಪ್ರಗತಿ ಕಂಡಿರಲಿಲ್ಲ.

    ಎರಡನೆಯ ದಿನವಾಗಲಿ, ಮೂರನೆಯ ದಿನವಾಗಲಿ ನನ್ನ ಗಾಯಗಳು ನಂಗೆ ಒಂಚೂರು ನೋವು ಕೊಡಲಿಲ್ಲ. ಬದಲಾಗಿ ಅತಿಯಾದ ಬಿಸಿಲಿನಿಂದ ನನ್ನ ಬೆನ್ನಲ್ಲಿ ಅಸಾಧ್ಯ ಉರಿಯೂತವುಂಟಾಯಿತು. ಏಕೆಂದರೆ ನನ್ನ ಡ್ರೆಸ್ಸಿನ ಹಿಂಭಾಗದಲ್ಲಿ ಕಟ್ಟಿಕೊಳ್ಳುವ ಬೆಲ್ಟಿನ ಗುಂಡಿ ಕಿತ್ತುಹೋಗಿತ್ತು ಹಾಗೂ ನನ್ನ ಬೆನ್ನು ಬಿಸಿಲಿಗೆ ತೆರೆದುಕೊಂಡಿತ್ತು. ಮರಗಳ ಸಂಧಿಯಿಂದ ತೂರಿ ಬರುವ ಸೂರ್ಯನ ಕಿರಣಗಳು ನನ್ನ ಬೆನ್ನನ್ನು ಸುಟ್ಟುಹಾಕಿದ್ದವು. ಪೆರುವಿನ ಕಾಡುಗಳಲ್ಲಿ ಎಷ್ಟು ಕೆಟ್ಟ ಮಳೆ ಇರುತ್ತದ್ ಅಷ್ಟೇ ಕೆಟ್ಟ ಬಿಸಿಲು ಕೂಡ ಇರುತ್ತದೆ. ಹಿತಮಿತವಾದ ಹವಾಮಾನ ಜೀವನಕ್ಕೆ ಒಗ್ಗಿಕೊಂಡ ಯೂರೋಪಿನ ಜನ ಇವೆರೆಡೂ ವೈಪರಿತ್ಯಗಳಿಗೆ ಹೊಂದಿಕೊಳ್ಳಲಾರರು.

    ಎರಡನೆಯ ರಾತ್ರಿ ಸಾಕಷ್ಟು ವಿಶ್ರಾಂತಿ ತೆಗೆದುಕೊಂಡೆ. ಮಾರನೆಯ ದಿನ ಮತ್ತೆ ನನ್ನ ಪ್ರಯಾಣವನ್ನು ಮುಂದುವರೆಸಿದೆ. ಬೆನ್ನ ಮೇಲೆ ಅಸಾಧ್ಯ ಉರಿಯೂತವಿದ್ದಾಗ್ಯೂ ನಾನು ಸಾಕಷ್ಟು ದೂರವನ್ನು ನಡೆದೆ. ನಾನು ನೀರು ಮತ್ತು ಸಿಹಿತಿಂಡಿಗಳನ್ನು ಬಿಟ್ಟು ಬೇರೇನೂ ತಿನ್ನುತ್ತಿರಲಿಲ್ಲ. ಆದರೂ ನನ್ನಲ್ಲಿ ಶಕ್ತಿ ಇನ್ನೂ ಉಳಿದಿದೆ ಎಂದನಿಸುತ್ತಿತ್ತು. ಮೇಲಿಂದ ಮೇಲೆ ನನಗೆ ಸೊಳ್ಳೆಗಳು, ನೊಣಗಳು ಕಚ್ಚಿ ಹಿಂಸೆಯಿಡುತ್ತಿದ್ದವು. ಅವುಗಳನ್ನು ದೂರವಿಡಲು ಸಾಧ್ಯವಿರಲಿಲ್ಲ. ಅವನ್ನು ಲೆಕ್ಕಿಸದೆ ನಡೆಯಬೇಕಿತ್ತು. ಪ್ರತಿಸಾರಿ ಸೊಳ್ಳೆಗಳು ಕಚ್ಚಿದಾಗ ಅವು ನನ್ನ ಚರ್ಮದ ಕೆಳಗೆ ಮೊಟ್ಟೆಗಳನ್ನಿಡುತ್ತಿದ್ದವು ಹಾಗೂ ತದನಂತರದಲ್ಲಿ ಅವು ಮರಿಗಳಾಗಿ ಹೊರಬರುತ್ತಿದ್ದವು. ಇದನ್ನು ನಾನು ಗಮನಿಸಲೇ ಇಲ್ಲ.

    ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ವಿಮಾನಗಳ ಹಾರಾಟದ ಸದ್ದು ಕೇಳಿಸಿತು. ನಾನು ಖುಶಿಯಿಂದ ವಿಮಾನದ ಸದ್ದು ಬಂದತ್ತ ಕೂಗಿದೆ. ಮತ್ತೆ ಮತ್ತೆ ಕೂಗಿದೆ ಹಾಗೆ ಜೋರಾಗಿ ಕೂಗುತ್ತಾ ಹೋದೆ. ನಂಗೆ ಗೊತ್ತಿತ್ತು ನಾನು ಕೂಗುವದು ಅವರಿಗೆ ಕೇಳಿಸುವದಿಲ್ಲ-ಅದೊಂದು ವ್ಯರ್ಥ ಪ್ರಯತ್ನವೆಂದು. ಆದರೂ ಬಿಡದೆ ಒಂದೇ ಸಮನೆ “ಹಲೋ, ಹೆಲ್ಪ್....ಹೆಲ್ಪ್” ಎಂದು ಕೂಗುತ್ತಾ ಹೋದೆ. ಬಾರಿ ಬಾರಿ ಕೂಗಿದೆ “ಹಲೋ, ಹೆಲ್ಪ್” ಎಂದು. ಊಹೂಂ, ಪ್ರಯೋಜನವಾಗಲಿಲ್ಲ.

    ವಿಮಾನಗಳೇನೋ ನನಗೆ ಹತ್ತಿರವಾಗಿಯೇ ಇದ್ದವು. ಆದರೆ ವಿಮಾನ ಚಾಲಕರು ಮರದ ಕೆಳಗಿದ್ದ ನನ್ನನ್ನು ಹೇಗೆ ನೋಡಿಯಾರು? ಅಥವಾ ನನ್ನ ದನಿಯಾದರೂ ಅವರಿಗೆ ಹೇಗೆ ಕೇಳಿಸೀತು? ನಾನಾದರೂ ಆ ಮರಗಳ ಸಂಧಿಯಿಂದ ಅವರನ್ನು ಹೇಗೆ ನೋಡೇನು? ಯಾವುದೊಂದೂ ಸಾಧ್ಯವಿರಲಿಲ್ಲ! ಆದರೂ ಅವರ ಗಮನವನ್ನು ನನ್ನತ್ತ ಸೆಳೆಯಲು ಹರಸಾಹಸ ಮಾಡುತ್ತಿದ್ದೆ.

    ವಿಮಾನದ ಸದ್ದು ಕ್ರಮೇಣ ಸತ್ತುಹೋಯಿತು. ನಾನು ಪುನಃ ಒಂಟಿಯಾದೆ. ಆದರೆ ದೃತಿಗೆಡಲಿಲ್ಲ. ಸುಮ್ಮನೆ ನಡೆಯುತ್ತಾ ಹೋದೆ. ನಂಗೆ ಹಸಿವೆ ಎನಿಸುತ್ತಿರಲಿಲ್ಲ. ಆಗಾಗ ಮಾತ್ರ ನದಿಯ ಶುಭ್ರ ನೀರನ್ನು ಕುಡಿದು ಮುಂದೆ ಸಾಗುತ್ತಿದ್ದೆ. ಕೈಯಲ್ಲಿ ಭರವಸೆ ಮಾತ್ರ ಇನ್ನೂ ಹಾಗೆಯೇ ಉಳಿದಿತ್ತು.

    ನನ್ನ ಬಳಿಯಿದ್ದ ಸಿಹಿತಿಂಡಿಗಳೆಲ್ಲಾ ಇದೀಗ ಖಾಲಿಯಾಗಿದ್ದವು. ತಿನ್ನಲೂ ಏನೂ ಇರಲಿಲ್ಲ. ಆದರೂ ಯೋಚಿಸಲಿಲ್ಲ. ನಾನು ನದಿ ದಂಡೆಯ ಮೇಲೆ ಪ್ರಯಾಸದಿಂದ ಸಾಗುತ್ತಿದ್ದೆ. ಆಗೆಲ್ಲಾ ಮೊಸಳೆಗಳು ನನ್ನತ್ತ ಈಜಿಕೊಂಡು ಬರುತ್ತಿದ್ದವು. ನನಗೆ ತಕ್ಷಣ ಅಲ್ಲಿ ವಿಷಕಾರಿ ಮೀನುಗಳಿರುವದು ನೆನಪಿಗೆ ಬಂತು. ಅವು ಸಾಮಾನ್ಯವಾಗಿ ನದಿ ದಂಡೆ ಮೇಲೆಯೇ ಮಲಗಿರುತ್ತಿದ್ದವು. ನಾನು ಅಕಸ್ಮಾತಾಗಿ ಈ ಮೀನಿನ ಮೇಲೆ ಕಾಲಿಟ್ಟರೆ ನನ್ನ ಕಥೆ ಮುಗಿದಂತೆಯೇ ಸರಿ ಎಂದುಕೊಂಡು ಈಗ ಮತ್ತಷ್ಟು ಹುಶಾರಾಗಿ ನಡೆಯುತ್ತಾ ಹೋದೆ.

    ಒಂಬತ್ತನೆಯ ದಿನ ನಡೆಯುತ್ತಾ ಹೋದಂತೆ ಅನತಿ ದೂರದಲ್ಲಿ ಒಂದು ದೋಣಿ ಇರುವದು ಕಾಣಿಸಿತು. ನಾನು ಮೊದಲು ಅದಾಗಲೇ ಯಾರೋ ಬಳಸಿ ಬೀಸಾಡಿದ ಮುರುಕಲು ದೋಣಿಯಾಗಿರಬಹುದೆಂದುಕೊಂಡೆ. ಆದರೆ ಹತ್ತಿರ ಹೋಗಿ ನೋಡಿದ ಮೇಲೆ ಗೊತ್ತಾಯಿತು ಅದೊಂದು ಗಟ್ಟಿ ಮರದಿಂದ ಹೊಸದಾಗಿ ಮಾಡಿದ ದೋಣಿಯೆಂದು.

    ಮೂಲ ಇಂಗ್ಲೀಷ್: ಜ್ಯೂಲಿಯನ್ ಕೆಫ್ಕೆ
    ಕನ್ನಡಕ್ಕೆ: ಉದಯ್ ಇಟಗಿ

    ಮಹಾಪತನ

  • ಶುಕ್ರವಾರ, ಅಕ್ಟೋಬರ್ 21, 2011
  • ಬಿಸಿಲ ಹನಿ

  • ಆಫ್ರಿಕಾದ ಒಂದು ಮೂಲೆಯಲ್ಲಿ ಅರಬ್ ಜಗತ್ತಿಗೆ ಹತ್ತಿರವಾಗಿರುವ ಲಿಬಿಯಾ ಬುಡಕಟ್ಟುಗಳಿಂದ ತುಂಬಿದ ದೇಶ. ಗಡಾಫಿ ಹುಟ್ಟಿದ್ದು 1942ರಲ್ಲಿ ಸಿರ್ತ್ ನಲ್ಲಿ. ತಂದೆ-ತಾಯಿಗಳು ಅಲೆಮಾರಿ ಬುಡಕಟ್ಟೊಂದಕ್ಕೆ ಸೇರಿದವರು. ಶಿಕ್ಷಣ ಪಡೆಯಲು ಗಡಾಫಿಗೆ ಕಷ್ಟವಾಗಲಿಲ್ಲ. ಬೆಂಗಾಝಿ ವಿಶ್ವವಿದ್ಯಾನಿಲಯದಲ್ಲಿ ಭೂಗೋಳ ಕಲಿಯಲು ಸೇರಿದರೂ ರಾಜಕೀಯವಾಗಿ ಬಹಳ ಸಂವೇದನಾಶೀಲನಾಗಿದ್ದರಿಂದ ಪದವಿ ಪಡೆಯುವ ತನಕ ವಿಶ್ವವಿದ್ಯಾನಿಲಯದಲ್ಲಿ ಉಳಿಯಲಿಲ್ಲ. ಈಜಿಪ್ಟಿನ ಮುತ್ಸದ್ಧಿ ಗಮಾಲ ಅಬ್ದುಲ್ ನಾಸೆರ್ ಅವರ ಅರಬ್ ಸಮಾಜವಾದದಿಂದ ಪ್ರಭಾವಿತಾದ ಗಡಾಫಿ 1956ರಲ್ಲಿ ಸೂಯೇಝ್ ಬಿಕ್ಕಟ್ಟಿನ ಸಂದರ್ಭದಲ್ಲಿ ಇಸ್ರೇಲ್ ವಿರೋಧಿ ಪ್ರಮುಖ ಪಾತ್ರವಹಿಸಿದ. ರಾಜಕೀಯ ಮಹತ್ವಾಕಾಂಕ್ಷೆಯ ಬಾಗವಾಗಿಯೇ ಸೇನೆಗೆ ಸೇರಿದ.


    ಗ್ರೀಸ್ ನಲ್ಲಿರುವ ಹೆಲೆನಿಕ್ ಮಿಲಿಟರ್ ಅಕಾಡೆಮಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಹೊತ್ತಿನಲ್ಲೇ ಲಿಬಿಯಾದ ರಾಜಸತ್ತೆಯನ್ನು ಕಿತ್ತೆಸೆಯುವ ಸಂಚು ರೂಪಿಸಿದ್ದ ಗಡಾಫಿಗೆ ಆಗ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ. ಮುಂದೆ ಬ್ರಿಟನ್ ನಲ್ಲೂ ಸೇನಾ ಶಿಕ್ಷಣವನ್ನು ಪಡೆದು ಸ್ವದೇಶಕ್ಕೆ ಹಿಂದಿರುಗಿದ ಮೇಲೆ ತನ್ನ ಸಂಚನ್ನು ಕಾರ್ಯರೂಪಕ್ಕೆ ತಂದ. ಹಾಗೆ ನೋಡಿದರೆ ಲಿಬಿಯಾಕ್ಕೆ ಬಹುದೊಡ್ಡ ಅರಸೊತ್ತಿಗೆಯ ಇತಿಹಾಸವೇನೂ ಇಲ್ಲ. ಇಲ್ಲಿದ್ದದ್ದು ಏಕೈಕ ದೊರೆ ಇದ್ರಿಸ್. 1969ರಲ್ಲಿ ಈತ ಚಿಕಿತ್ಸೆ ಪಡೆಯಲು ಟರ್ಕಿಗೆ ಹೋಗಿದ್ದಾಗ ಗಡಾಫಿ ನೇತೃತ್ವದ ಸೇನೆಯ ಕಿರಿಯ ಅಧಿಕಾರಿಗಳ ಗುಂಪೊಂದು ರಾಜಕುಮಾರನನ್ನು ಬಂಧನದಲ್ಲಿಟ್ಟಿತು. ಹೀಗೆ ರಕ್ತರಹಿತ ಕ್ರಾಂತಿಯೊಂದರ ಮೂಲಕ ಲಿಬಿಯಾ ಅರಸೊತ್ತಿಗೆಯಿಂದ ಸ್ವತಂತ್ರವಾಗಿ ಅರಸನೆಂದು ಹೇಳಿಕೊಳ್ಳದ ಮತ್ತೊಬ್ಬ ಅರಸನ ಕೈವಶವಾಯಿತು.

    1969ರಿಂದಲೂ ಲಿಬಿಯಾ ದೇಶದ ಸರ್ವಾಧಿಕಾರಿಯಾಗಿದ್ದ ಕರ್ನಲ್ ಮೌಮರ್ ಗಡಾಫಿ ಲಿಬಿಯಾವನ್ನು ನಲವತ್ತೆರೆಡು ವರ್ಷಗಳ ಕಾಲ ಸಮರ್ಥವಾಗಿ ಆಳಿದವ. ಸಣ್ಣ ವಯಸ್ಸಿಗೇ ಅಧಿಕಾರಕ್ಕೇರಿದ ಗಡಾಫಿಯ ಬಗ್ಗೆ ಲಿಬಿಯಾದ ಜನರಿಗೂ, ಜಗತ್ತಿಗೂ ಒಂದಷ್ಟು ನಿರೀಕ್ಷೆಗಳಿದ್ದವು. ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಬದಲಾವಣೆಗಳು ನಡೆಯುತ್ತಿದ್ದ ಕಾಲ ಘಟ್ಟದಲ್ಲಿ ಅಧಿಕಾರಕ್ಕೇರಿದ ಯುವಕ ಗಡಾಫಿ ಅನೇಕರಿಗೆ ಆಫ್ರಿಕಾ ಹಾಗೂ ಅರಬ್ ಜಗತ್ತಿನ ಚೆಗುವಾರನಂತೆ ಕಂಡದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಇದಕ್ಕೆ ತಕ್ಕಂತೆ ದೇಶದ ಮುಖ್ಯಸ್ಥನಾಗಿ ಅಧಿಕಾರಕ್ಕೇರಿದ ನಂತರವೂ ಇತರರಂತೆ ತನ್ನನ್ನು ಸೇನೆಯ ಮುಖ್ಯಸ್ಥನಾಗಿ ಘೋಷಿಸಿಕೊಳ್ಳದೆ ’ಕರ್ನಲ್’ ಪದವಿಯಲ್ಲೇ ಉಳಿದುಕೊಂಡಿದ್ದು ಹಲವರಲ್ಲಿ ಭರವಸೆಯನ್ನು ಮೂಡಿಸಿತು.


    1969ರಲ್ಲಿ ಅಧಿಕಾರಕ್ಕೆ ಬಂದ ನಂತರ ಲಿಬಿಯಾ ಅಳವಡಿಸಿಕೊಂಡಿದ್ದ ಸಂವಿಧಾನವನ್ನು ರದ್ದು ಮಾಡಿ ತನ್ನದೇ ಆದ ಹೊಸ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಚಿಂತನೆಗಳಿರುವ “ದಿ ಗ್ರೀನ್ ಬುಕ್” ಪ್ರಕಟಿಸಿ ಅದರನುಸಾರ ಆಡಳಿತ ನಡೆಸಿದ. ಗಡಾಫಿಯ ಆಡಳಿತದಲ್ಲಿ ಲಿಬಿಯಾ ಅಪಾರ ಪ್ರಗತಿ ಸಾಧಿಸಿತು. ಮಾನವ ಸಂಪನ್ಮೂಲ ಅಭಿವೃದ್ಧಿ, ಶಿಕ್ಷಣ, ಆರೋಗ್ಯ. ಕೃಷಿ-ಕೈಗಾರಿಕೆಗಳಲ್ಲಿ ಇಡೀ ಆಫ್ರಿಕಾದಲ್ಲೇ ಲಿಬಿಯಾ ಮೊದಲ ಸ್ಥಾನದಲ್ಲಿತ್ತು. ಜೊತೆಗೆ ಲಿಬಿಯಾದ ರಾಷ್ಟ್ರೀಯ ತಲಾದಾಯವು ಜಗತ್ತಿನ ಉತ್ತಮ ತಲಾದಾಯ ಇರುವ ದೇಶಗಳ ಸಾಲಿಗೆ ಸೇರಿತ್ತು.


    ಲಿಬಿಯಾದ ಕುರಿತಂತೆ ಹೊರಜಗತ್ತಿನಲ್ಲಿ ಸ್ವಲ್ಪಮಟ್ಟಿಗೆ ಒಳ್ಳೆಯ ಅಭಿಪ್ರಾಯವೇ ಇತ್ತು. ಐರ್ಲಂಡ್ ನಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಚಟುವಟಿಕೆಗಳಿಗೆ ಲಿಬಿಯಾದ ಬೆಂಬಲವಿದೆಯೆಂಬ ಕಾರಣಕ್ಕೆ ಯೂರೋಪ್ ಮಾತ್ರ ಲಿಬಿಯಾವನ್ನು ’ಭಯೋತ್ಪದಕ’ ದೇಶಗಳ ಪಟ್ತಿಯಲ್ಲಿಟ್ಟಿತ್ತು. 1986ರಲ್ಲಿ ಬರಿನ್ ನ ನೈಟ್ ಕ್ಲಬ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಗಡಫಿಯ ಪಾತ್ರವನ್ನು ಸಂಶಯಿಸಿ ಅಮೆರಿಕಾ ಲಿಬಿಯಾದ ಮೇಲೆ ಬಾಂಬ್ ದಾಳಿ ನಡೆಸಿತ್ತು. 1988ರಲ್ಲಿ ಸ್ಕಾಟ್ಲೆಂಡ್ ನಲ್ಲಿ ಪಾನ್ ಅಮ್ ವಿಮಾನದಲ್ಲಿ ಬಂಬಿಟ್ತ ಅರೋಪವೂ ಲಿಬಿಯಾದ ಮೇಲಿತ್ತು. ಬಹುಕಾಲ ಇದನ್ನು ಗಡಫಿ ನಿರಾಕರಸುತ್ತಲೇ ಬಂದಿದ್ದ. ಈ ಕಾರಣಕ್ಕಾಗಿ ಲಿಬಿಯಾವನ್ನು ವಿಶ್ವಸಂಸ್ಥೆ ನಿಷೇಧಕ್ಕೆ ಗುರಿಪಡಿಸಿತ್ತು. 2003ರಲ್ಲಿ ಈ ಅಪರಾಧ ಒಪ್ಪಿಕೊಂಡು ಮೃತರಿಗೆ ಪರಿಹಾರ ಕೊಟ್ಟದ್ದು ಈಗ ಇತಿಹಾಸ.


    1969ರ ತನಕ ಲಿಬಿಯಾ ಎಣ್ಣೆ ಬಾವಿಗಳಿಂದ ಎಣ್ಣೆ ತೆಗೆಯುವ ತಂತ್ರಜ್ಞಾನಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಅವಲಂಬಿತವಾಗಿತ್ತು. ಇದನ್ನು ದುರುಪಯೋಗ ಪಡೆದುಕೊಂಡ ಹೊರದೇಶಿಯ ಕಂಪನಿಗಳು ತಮ್ಮ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಎಣ್ಣೆಯ ದರವನ್ನು ನಿಗದಿಗೊಳಿಸಿ ಎಣ್ಣೆ ವ್ಯಾಪಾರದಲ್ಲಿ ಅರ್ಧ ಲಾಭವನ್ನು ಹೊಡೆಯುತ್ತಿದ್ದವು. ತೈಲ ಸಂಪನ್ಮೂಲವನ್ನೂ ಮಾರಿಕೊಂಡು, ಲಾಭವನ್ನೂ ಪಡೆಯದೆ ಲಿಬಿಯಾ ಸಂಕಷ್ಟದಲ್ಲಿತ್ತು. ಆದರೆ ಈತ 1969ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಪರದೇಶಿ ಕಂಪನಿಗಳ ಗುತ್ತಿಗೆಯನ್ನು ಮರುಪರಿಶೀಲಿಸಿ ಹತೋಟಿಗೆ ತೆಗೆದುಕೊಂಡ. ತನ್ನ ನಿರ್ಧಾರವನ್ನು ಒಪ್ಪದ ಕಂಪನಿಗಳಿಗೆ ಎಣ್ಣೆ ಉತ್ಪಾದನೆಯನ್ನು ನಿಲ್ಲಿಸುವ ಬೆದರಿಕೆ ಹಾಕಿದ. ಇತರೆ ತೈಲ ರಾಷ್ಟ್ರಗಳಿಗೂ ಸಹ ತನ್ನ ನೀತಿಯನ್ನೇ ಅನುಸರಿಸಿ ಎಂದು ಗಡಾಫಿ ಸಲಹೆಯನ್ನಿತ್ತ. ಪರಿಣಾಮವಾಗಿ ಈ ರಾಷ್ಟ್ರಗಳು ಬಹಳ ಬೇಗ ಶ್ರೀಮಂತವಾದವು. ಲಿಬಿಯಾದಲ್ಲಿ ಹೇರಳ ತೈಲ ಸಂಪನ್ಮೂಲವಿತ್ತು. ಆದರೆ ಜನಸಂಖ್ಯೆ ಕಡಿಮೆಯಿತ್ತು. ಇದನ್ನರಿತ ಗಡಾಫಿ ತೈಲ ಸಂಪನ್ಮೂಲಗಳಿಂದ ಬಂದ ಲಾಭವನ್ನು ದೇಶದ ಉದ್ದಾರಕ್ಕಾಗಿ ಚೆಲ್ಲಿದ. ಹೀಗಾಗಿ ಲಿಬಿಯಾ ಬಹಳ ಬೇಗನೆ ಜಗತ್ತಿನ ಭೂಪಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ಮಿಂಚತೊಡಗಿತು.

    ನಾನು ಇವನ್ನೆಲ್ಲಾ ಈತ ರಾಜಕೀಯವಾಗಿ ಎಷ್ಟೊಂದು ಸಂವೇದನಾಶಿಲನಾಗಿದ್ದ, ಚಾಣಾಕ್ಷನಾಗಿದ್ದ ಎಂದು ತೋರಿಸಲು ಹೇಳಿದೆ. ಹಾಗಾದರೆ ಇನ್ನು ಲಿಬಿಯಾದ ಅಧ್ಯಕ್ಷನಾಗಿ ಆತ ಲಿಬಿಯನ್ನರಿಗೆ ಮಾಡಿದ್ದೇನು ಎಂಬುದನ್ನು ಹೇಳಿದರೆ ಅಲ್ಲಿ ನಿಜಕ್ಕೂ ಕ್ರಾಂತಿಯೊಂದರ ಅವಶ್ಯಕತೆಯಿತ್ತೆ? ಅದು ಗಡಾಫಿಯ ಹತ್ಯೆಯಲ್ಲಿ ಕೊನೆಯಾಗಬೇಕಿತ್ತೆ? ಖಂಡಿತ ಇದರ ಹಿಂದೆ ಅಮೆರಿಕಾದ ಕೈವಾಡವಿದೆಯಲ್ಲವೆ? ಎಂದು ನಿಮಗನಿಸಿದರೆ ಆಶ್ಚರ್ಯವಿಲ್ಲ. ದೂರದಲ್ಲಿ ಕುಳಿತಕೊಂಡ ನಾವೆಲ್ಲರೂ ಗಡಾಫಿ ಬಗ್ಗೆ ಆತ ಒಬ್ಬ ಕೄರ ಸರ್ವಾಧಿಕಾರಿ, ಲಂಪಟ, ಐಷಾರಾಮಿ ಜಿವನ ನಡೆಸುವವ, ತಿಕ್ಕಲು, ಸ್ತ್ರೀಲೋಲ, ಸಲಿಂಗಕಾಮಿ, ಲಿಬಿಯನ್ನರ ರಕ್ತ ಹೀರಿದವ ಎಂದು ಇನ್ನೂ ಏನೇನೋ ಆತನ ಬಗ್ಗೆ ತಿಳಿದುಕೊಂಡಿದ್ದೇವೆ. ಆದರೆ ವಾಸ್ತವದಲ್ಲಿ ಇವು ಅರ್ಧ ಸತ್ಯ. ಅರ್ಧ ಸುಳ್ಳು. ಹಾಗೆ ನೋಡಿದರೆ ಗಡಾಫಿ ತನ್ನ ವಿರುದ್ಧ ದನಿ ಎತ್ತಿದವರನ್ನು ಮುಗಿಸುವಷ್ಟು ಕೄರಿಯಾಗಿದ್ದನೆ ಹೊರತು ಲಿಬಿಯನ್ನರಿಗೆ ಕೆಟ್ಟ ಆಡಳಿತ ನೀಡುವಷ್ಟು ಕೄರ ಸರ್ವಾಧಿಕಾರಿಯಾಗಲಿ, ಸ್ವಾರ್ಥಿಯಾಗಲಿ ಯಾವತ್ತೂ ಆಗಿರಲಿಲ್ಲ. ಇದು ನಾನು ಲಿಬಿಯಾದಲ್ಲಿ ಮೂರೂವರೆ ವರ್ಷ ಇದ್ದು ಕಂಡುಕೊಂಡ ಸತ್ಯ. ಹಾಗೆ ಒಂದು ವೇಳೆ ಆತ ಅಷ್ಟೊಂದು ಕೄರಿಯಾಗಿದ್ದರೆ ಅಥವಾ ಕೆಟ್ಟ ಆಡಳಿತ ನಡೆಸಿದ್ದರೆ ಆತ 42 ವರ್ಷಗಳ ಕಾಲ ಆಳ್ವಿಕೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ಸರಿಯಾಗಿ ಅಂತರಾಷ್ಟ್ರೀಯ ಚಾನೆಲ್ಗಂಳಾದ ಬಿ.ಬಿ.ಸಿ. ಮತ್ತು ಆಲ್ಜೇಜಿರಾಗಳು ಗಡಾಫಿಯನ್ನು ಒಬ್ಬ ಖಳನಾಯಕನಂತೆ ಚಿತ್ರಿಸಿಕೊಂಡು ಬಂದವು. ಇದು ಮುಂಚಿನಿಂದಲೂ ಲಿಬಿಯಾದ ತೈಲ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟ ಅಮೆರಿಕನ್ನರಿಗೆ ಲಿಬಿಯಾದ ಮೇಲೆ ಹಿಡಿತ ಸಾಧಿಸಲು ಮತ್ತಷ್ಟು ಅನುಕೂಲವನ್ನು ಮಾಡಿಕೊಟ್ಟಿತು.



    ಗಡಾಫಿ ಒಬ್ಬ ತಿಕ್ಕಲು ಸರ್ವಾಧಿಕಾರಿಯಾದರೂ ಆತ ರಾಜಕೀಯವಾಗಿ ಬಹಳ ಸಂವೇದನಾಶೀಲನಾಗಿದ್ದ. ಇಡಿ ಆಫ್ರಿಕಾ ಖಂಡದಲ್ಲಿ ಆಫ್ರಿಕಾದ ಇತರ ಅನೇಕ ದೇಶಗಳಿಗಿಂತ ಲಿಬಿಯಾವನ್ನು ಮುಂಚೂಣಿಯಲ್ಲಿಟ್ಟಿದ್ದ. ನೆರೆ ರಾಷ್ಟ್ರಗಳಾದ ಟ್ಯುನಿಶಿಯಾದಲ್ಲಿ, ಈಜಿಪ್ಟ್ನಲ್ಲಿ ಸರ್ಕಾರಗಳು ಉರುಳುತ್ತಿದ್ದಂತೆ ಲಿಬಿಯಾದಲ್ಲೂ ಜನರು ಬೀದಿಗಿಳಿದಿದ್ದಾರೆ ಎಂದು ನಾವೆಲ್ಲಾ ದೂರದಲ್ಲಿ ಕುಳಿತುಕೊಂಡು ಯೋಚಿಸಿದ್ದೆವು. ಆದರೆ ನಾನು ಅಲ್ಲಿ ಮೂರುವರೆ ವರ್ಷಗಳಿಂದ ಇದ್ದು ಗಮನಿಸಿದ್ದೇನೆಂದರೆ ದಂಗೆಯೇಳುವಷ್ಟು ಕೆಟ್ಟದಾಗಿ ಲಿಬಿಯಾ ಯಾವತ್ತೂ ಈ ಎರಡು ರಾಷ್ಟ್ರಗಳಂತಿರಲಿಲ್ಲ. ಅದು ಸದಾ ಪ್ರಗತಿಯ ಮುಂಚೂಣಿಯಲ್ಲಿರಲು ಕೆಲಸ ಮಾಡುತ್ತಿತ್ತು. ಏಕೆಂದರೆ ಅಭಿವೃದ್ಧಿಯ ವಿಚಾರದಲ್ಲಿ ಗಡಾಫಿಯದು ಎತ್ತಿದ ಕೈ. ಪ್ರತಿಯೊಂದು ಹಳ್ಳಿ ಹಳ್ಳಿಗೂ ಆಸ್ಪತ್ರೆ, ಶಾಲೆ, ಕಾಲೇಜು, ಬ್ಯಾಂಕು, ಪೋಸ್ಟ್ ಅಫೀಸು, ಒಳ್ಳೆಯ ರಸ್ತೆ ಇನ್ನೂ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದ. ಅಲ್ಲಿನ ಜನಕ್ಕೆ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ನೀಡಿದ್ದ. ಮಾತ್ರವಲ್ಲ ಅಲ್ಲಿನ ಬಹುತೇಕ ಪ್ರಜೆಗಳು ಸರಕಾರಿ ಕೆಲಸದಲ್ಲಿದ್ದಾರೆ. ಒಂದು ವೇಳೆ ಅವರ ವಿದ್ಯಾಭ್ಯಾಸ ಮುಗಿದ ಮೇಲೆ ತಕ್ಷಣಕ್ಕೆ ಕೆಲಸ ಸಿಗದೆ ಹೋದರೆ ಅವರಿಗೆ ಆಯಾ ಹುದ್ದೆಗೆ ನಿಗದಿಪಡಿಸಿದಷ್ಟು ಸಂಬಳವನ್ನು ಕೆಲಸ ಸಿಗುವವರಿಗೂ ಪ್ರತಿ ತಿಂಗಳು ನೀಡುತ್ತಿದ್ದ. ಅಲ್ಲಿನ ವಿದ್ಯಾವಂತ ಯುವಕರನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ಡಮ್ ಮುಂತಾದ ದೇಶಗಳಿಗೆ ಸ್ಕಾಲರ್ ಶಿಪ್ ಕೊಟ್ಟು ಕಳಿಸುತ್ತಿದ್ದ. ಜೊತೆಗೆ ಅವರು ಓದು ಮುಗಿಸುವವರೆಗೂ ಅವರ ವಸತಿ ಮತ್ತು ಕಾರಿನ ಖರ್ಚುವೆಚ್ಚವನ್ನು ಅವನೇ ಭರಿಸುತ್ತಿದ್ದ. ಅವರಿಗೆ ಮಾತ್ರವಲ್ಲ ಹಾಗೆ ಹೋಗುವವರ ಹೆಂಡತಿ ಮತ್ತು ಮಕ್ಕಳಿಗೆ ತಿಂಗಳಿಗೆ ಅಲ್ಲಿನ ಖರ್ಚು ವೆಚ್ಚಕ್ಕಾಗಿ ತಲಾ 3೦೦೦ ಡಾಲರ್ ಕೊಡುತ್ತಿದ್ದ. ನಮಗೆ ಲಂಡನ್ ಮತ್ತು ಅಮೆರಿಕಾದಲ್ಲಿ ಓದುವದು ಕನಸಿನ ಮಾತಾದರೆ ಅವರಿಗೆ ಅತಿ ಸುಲಭದಲ್ಲಿ ಎಟಕುತ್ತಿತ್ತು.

    ಇತ್ತೀಚಿಗೆ ತೈಲ ಸಂಪನ್ಮೂಲಗಳಿಂದ ಬಂದ ಲಾಭವನ್ನು ಲಿಬಿಯನ್ನರ ಸಂಬಳವನ್ನು ದ್ವಿಗುಣಗೊಳಿಸುವದರ ಮೂಲಕ ಹಂಚಿದ್ದ. ಶೀಘ್ರದಲ್ಲಿಯೇ ಒಂದು ದಿನಾರಿಗೆ (ಅಂದರೆ ಭಾರತದ 36-37 ರೂ.ಗೆ) 6 ಲೀಟರ್ ನಷ್ಟು ದೊರೆಯುತ್ತಿದ್ದ ಪೆಟ್ರೋಲನ್ನು 10 ಲೀಟರಿಗೆ ಹೆಚ್ಚಿಸುವವನಿದ್ದ. ಅಲ್ಲಿನ ಜನಕ್ಕೆ ಬಡ್ಡಿರಹಿತ ಲೋನ್ ಮೇಲೆ ವಾಸಿಸಲು ಮನೆಗಳನ್ನು ಕಟ್ಟಿಸಿಕೊಡುತ್ತಿದ್ದ. ಹಾಗೆ ನೋಡಿದರೆ ಲಿಬಿಯನ್ನರು ಆ ಸಾಲದ (ಅಸಲನ್ನು) ಐದೋ, ಆರೋ ಕಂತುಗಳನ್ನು ಕಟ್ಟಿಬಿಟ್ಟು ಕೈ ತೊಳೆದುಕೊಂಡುಬಿಡುತ್ತಿದ್ದರು. ಮುಂದಿನದನ್ನು ಏಕೆ ಕಟ್ಟಲಿಲ್ಲ ಎಂದು ಕೂಡ ಆತ ಕೇಳುವದಕ್ಕೆ ಹೋಗುತ್ತಿರಲಿಲ್ಲ. ಕಾರುಗಳನ್ನು ಫ್ಯಾಕ್ಟರಿಗಳು ನಿಗದಿಪಡಿಸಿದ ದರದಲ್ಲಿಯೇ ಮಾರಾಟ ಮಾಡುತ್ತಿದ್ದ.

    ಆತನ ಆಡಳಿತದಲ್ಲಿ ಲಿಬಿಯಾ ದೇಶ ಯಾರಿಂದಲೂ ಒಂದು ಪೈಸೆಯಷ್ಟು ಸಾಲ ತೆಗೆದುಕೊಂಡಿರಲಿಲ್ಲ. ಒಬ್ಬೇ ಒಬ್ಬ ಭಿಕ್ಷುಕನನ್ನು ಅಲ್ಲಿ ಕಾಣುವಂತಿರಲಿಲ್ಲ. ಹಾಗೆ ಒಂದು ವೇಳೆ ಕಂಡರೆ ಅವರು ಲಿಬಿಯಾದ ಭಿಕ್ಷುರಲ್ಲ. ಬದಲಾಗಿ, ಅವರು ಈಜಿಪ್ಟ್ ಅಥವಾ ನೈಜರ್, ನೈಜಿರೀಯಾ ದೇಶದ ಭಿಕ್ಷುಕರಾಗಿರುತ್ತಾರೆ. ಹೆಣ್ಣುಮಕ್ಕಳ ವಿಷಯದಲ್ಲಿ ಕೂಡ ಗಡಾಫಿ ಔದಾರ್ಯವನ್ನು ತೋರಿಸಿದ್ದ. ಇತರೆ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳು ಹೊರಗೆ ಹೋಗುವಾಗ ಬುರ್ಖಾ ಹಾಕಿಕೊಂಡೇ ಹೋಗಬೇಕು ಎನ್ನುವ ನಿಯಮಗಳಿರುವಂತೆ ಅಂಥ ಕಟ್ಟಳೆಗಳ್ಯಾವದನ್ನು ಅವನು ವಿಧಿಸಿರಲಿಲ್ಲ. ಅವರಿಗೆ ಎಲ್ಲ ರಂಗಗಳಲ್ಲೂ ಸರಿ ಸಮನಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದ. ದುರಂತವೆಂದರೆ ಜಗತ್ತಿನ ಎಲ್ಲ ಪತ್ರಿಕೆಗಳು, ಟೀವಿ ಚಾನಲ್ ಗಳು ಮತ್ತು ಇತರೆ ಮಾಧ್ಯಮಗಳು ಆತ ಲಿಬಿಯನ್ನರಿಗೆ ಕೊಟ್ಟ ಸೌಲತ್ತುಗಳನ್ನಾಗಲಿ ಅಥವಾ ಆತನ ಇನ್ನೊಂದು ಮುಖವನ್ನು ತೆರೆದಿಡುವ ಪ್ರಯತ್ನವನ್ನಾಗಲಿ ಯಾವತ್ತೂ ಮಾಡಲೇ ಇಲ್ಲ.

    ಗಡಾಫಿ ಯಾವತ್ತೂ IMFನಿಂದಾಗಲಿ, ವರ್ಲ್ದ್ ಬ್ಯಾಂಕಿನಿಂದಾಗಲಿ ಹೆಚ್ಚಿನ ಬಡ್ಡಿದರದಲ್ಲಿ ಸಾಲ ತೆಗೆದುಕೊಳ್ಳಲು ಒಪ್ಪುತ್ತಿರಲಿಲ್ಲ. ಲಿಬಿಯಾವನ್ನು ಆರ್ಥಿಕವಾಗಿ ಆದಷ್ಟೂ ಸ್ವತಂತ್ರವಾಗಿಟ್ಟಿದ್ದ. ಗಡಾಫಿ, ತೈಲ ಉತ್ಪನ್ನ ರಾಷ್ಟ್ರಗಳಿಗೆ ತೈಲ ಮಾರಾಟ ಮಾಡಿದ ಹಣವನ್ನು ಡಾಲರ್ ಗಳಲ್ಲಾಗಲಿ, ಯೂರೋಗಳಾಲ್ಲಗಲಿ ಸ್ವೀಕರಿಸಬೇಡಿ ಬದಲಾಗಿ ಚಿನ್ನದ ರೂಪದಲ್ಲಿ ಸ್ವೀಕರಿಸಿ ಎಂದು ಹೇಳಿದ್ದ. ಆದರೆ ಅಮೆರಿಕಾವೂ ಸೇರಿದಂತೆ ಬೇರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತೈಲವನ್ನು ಕೊಳ್ಳುವಷ್ಟು ಚಿನ್ನವಿರಲಿಲ್ಲ. ಒಂದು ವೇಳೆ ಗಡಾಫಿ ಹೇಳಿದಂತೆ ಚಿನ್ನ ಕೊಟ್ಟು ತೈಲವನ್ನು ಕೊಂಡುಕೊಂಡಿದ್ದರೆ ಈ ಎಲ್ಲ ರಾಷ್ಟ್ರಗಳು ದಿವಾಳಿಯೇಳುವ ಸಂಭವವಿತ್ತು. ಇದೇ ಗಡಾಫಿಯ ಹತ್ಯೆಗೆ ಮೂಲ ಕಾರಣವಾಯಿತು. ಇದೆಲ್ಲದಕ್ಕೆ ಅಲ್ಲಿ ಎದ್ದ ಕ್ರಾಂತಿಯೊಂದು ನೆಪವಾಯಿತಷ್ಟೆ. ಸದಾ ತನ್ನ ಹಿತಾಸಕ್ತಿಯ ಬಗ್ಗೆಯೇ ಯೋಚಿಸುತ್ತಲೇ ಬೇರೆಯವರಿಗೆ ಸಹಾಯ ಮಾಡುವ ನೆಪದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವ ಅಮೆರಿಕಾದ ಪರಮನೀಚತನಕ್ಕೆ ಕೊನೆಯಾದರು ಇದೆಯೇ?



    ಏನಾದರಾಗಲಿ 42 ವರ್ಷ ಲಿಬಿಯಾದ ಅವಿಭಾಜ್ಯ ಅಂಗವೇ ಆಗಿದ್ದ ಗಡಾಫೆ ಈಗ ಅಲ್ಲಿಲ್ಲ. ಅವನಿಲ್ಲದ ಲಿಬಿಯಾ ಹೇಗಿರುತ್ತದೆ? ಅವನ ನಂತರದ ದಿನಗಳು ಹೇಗಿರುತ್ತವೆ? ಮುಂದೇನಾಗಬಹುದು? ಲಿಬಿಯಾವನ್ನು ಸಂಕ್ರಮಣ ಕಾಲಘಟ್ಟಕ್ಕೆ ತಂದು ನಿಲ್ಲಿಸುರುವ NTC (National Transition Council) ಲಿಬಿಯಾದ ಜನತೆಗೆ ಗಡಾಫಿ ಕೊಟ್ಟ ಆಡಳಿತವನ್ನೇ ಮುಂದುವರಿಸುತ್ತದೆಯೇ? ಅಥವಾ ಅವನಿಗಿಂತ ಚನ್ನಾಗಿ ನಡೆಸುತ್ತದೆಯೆ? ಅಥವಾ ಇರಾಕಿನಂತೆ, ಅಫಘಾನಿಸ್ತಾದಂತೆ ಲಿಬಿಯಾ ಸಹ ಅಮೆರಿಕಾದ ಕೈಗೊಂಬೆಯಾಗಿ ಉಳಿಯುತ್ತದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು. ಒಟ್ಟಿನಲ್ಲಿ ಗಡಾಫಿಯ ಸಾವನ್ನು ಲಿಬಿಯಾ ದೇಶದ ದುರಂತವೆನ್ನಬೇಕೋ ಅಥವಾ ಕಾಲದ ವ್ಯಂಗ್ಯವೆನ್ನಬೇಕೋ ತಿಳಿಯುತ್ತಿಲ್ಲ.

    -ಉದಯ್ ಇಟಗಿ


    ಈ ಲೇಖನ ಇವತ್ತಿನ ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ. ಇದರ ಲಿಂಕ್ ಇಲ್ಲಿದೆ http://kendasampige.com/article.php?id=4828

    ಕಾಡಿಗೆ ಎದುರಾಗಿ ನಿಂತ ಹುಡುಗಿ - ಭಾಗ 1

  • ಭಾನುವಾರ, ಅಕ್ಟೋಬರ್ 02, 2011
  • ಬಿಸಿಲ ಹನಿ
  • ನನಗೆ ವಿಮಾನ ಹಾರಾಟವೆಂದರೆ ಬಲು ಇಷ್ಟ. ನಾನು ಈಗಾಗಲೇ ಬಹಳಷ್ಟು ಸಾರಿ ವಿಮಾನದಲ್ಲಿ ಪ್ರಯಾಣಿಸಿದ್ದರಿಂದ ನನಗೆ ವಿಮಾನವೆಂದರೆ ಒಂಚೂರು ಹೆದರಿಕೆಯೆನಿಸುತ್ತಿರಲಿಲ್ಲ. ಹೀಗಾಗಿ ಲೀಮಾದಲ್ಲಿ ನಾನು ನನ್ನ ತಾಯಿಯೊಡನೆ ವಿಮಾನದೊಳಕ್ಕೆ ಕುಳಿತಂತೆ ನನಗೆ ನಿರಾತಂಕವೆನಿಸಿತು. ಅದು ಕ್ರಿಸ್ಮಸ್ ಮುನ್ನಾ ದಿನ. ನಾವು ಪುಕಲ್ಪಾದಲ್ಲಿ ಕಾಡಿನಿಂದಾಚೆಯಿರುವ ನನ್ನ ತಂದೆಯನ್ನು ನೋಡಲು ಹೋಗುತ್ತಿದ್ದೆವು. ನಮಗೆ ಈಗಾಗಲೇ ನನ್ನ ತಂದೆ ಹಬ್ಬಕ್ಕಾಗಿ ಕ್ರಿಸ್ಮಸ್ ಗಿಡವನ್ನು ತಯಾರಿಸಿಟ್ಟುಕೊಂಡು ನಮ್ಮನ್ನು ಸ್ವಾಗತಿಸಲು ಕಾಯುತ್ತಿದ್ದನೆಂದು ಗೊತ್ತಿತ್ತು.

    ಬೆಳಿಗ್ಗೆ 7 ಗಂಟೆಗೆ ಹೊರಡಬೇಕಿದ್ದ ನಮ್ಮ ವಿಮಾನ ’ಲಾಕ್-ಹೀಡ್ ಎಲೆಕ್ಟ್ರಾ’ 11.15 ಆದರೂ ಇನ್ನೂ ಹೊರಡದೇ ಇದ್ದದ್ದು ನಂಗೆ ಒಂಚೂರು ಬೇಸರ ಮೂಡಿಸಲಿಲ್ಲ. ಏಕೆಂದರೆ ಪೆರುವಿನಲ್ಲಿ ವಿಮಾನಗಳು ಸಮಯಕ್ಕೆ ಸರಿಯಾಗಿ ಹೊರಡುವದು ತುಂಬಾ ಅಪರೂಪವಾಗಿತ್ತು ಮತ್ತು ನನಗದು ಒಗ್ಗಿಹೋಗಿತ್ತು. ವಿಮಾನದಲ್ಲಿ ಒಟ್ಟು 80 ಜನ ಪ್ರಯಾಣಿಕರಿದ್ದರು. ಆದರೆ ನಾನು ಅದ್ಹೇಗೋ 19ನೇ ಸಾಲಿನಲ್ಲಿರುವ ಬಲಬದಿಯ ಕಿಟಕಿ ಪಕ್ಕದ ಆಸನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಎಲ್ಲವೂ ಸಹಜವಾಗಿಯೇ ಇತ್ತು: ವಿಮಾನ ನೆಲದಿಂದ ಮೇಲಕ್ಕೆ ಹಾರುವದು, ಪೆಸಿಫಿಕ್ ಸಾಗರದ ಮೇಲೆ ಸುತ್ತು ಹಾಕುವದು, ನಿಧಾನಕ್ಕೆ ಎತ್ತರ ಹೆಚ್ಚಿಸಿಕೊಳ್ಳುವದು, ಆಂಡೀಸ್ ಪರ್ವತಗಳನ್ನು ದಾಟುವದು, ಮಧ್ಯಾಹ್ನದ ಊಟ ಹಾಗೂ ಗಗನ ಸಖಿಯರ ಮಂದಹಾಸಳು.........ಹೀಗೆ ಎಲ್ಲವೂ ಸುಖಕರವಾಗಿತ್ತು.

    ನಾವು ಹಿಮದಿಂದಾವೃತವಾದ ಆಂಡೀಸ್ ಪರ್ವತ ಶಿಖರಗಳನ್ನೂ ಹಾಗೂ ಪೂರ್ವದುದ್ದಕ್ಕೂ ಚಾಚಿಕೊಂಡು ನಿಂತಿರುವ ದಟ್ಟ ಕಾಡುಗಳನ್ನೂ ನೋಡುತ್ತಾ ಕುಳಿತೆವು. ಸ್ವಲ್ಪ ಹೊತ್ತಿನ ನಂತರ ಗಗನ ಸಖಿಯರು ಮಂದಹಾಸ ಬೀರುತ್ತಾ ಊಟದ ತಟ್ಟೆಗಳನ್ನು ಎತ್ತಲು ಬಂದರು. ಅಷ್ಟೊತ್ತಿಗಾಗಲೆ ಕೆಲವು ಪ್ರಯಾಣಿಕರು ನಿದ್ರೆ ಹೋಗಿದ್ದರು.

    ಲೀಮಾದಿಂದ ಪುಕಲ್ಪಾದವರಿಗೆ ವಿಮಾನ ಪ್ರಯಾಣದ ಸಮಯ ಕೇವಲ ಒಂದು ಗಂಟೆಯಷ್ಟೆ. ಹೊರಗಡೆ ಯಾವುದೇ ಮಂಜಿನ ಮುಸುಕಗಳಿಲ್ಲದೆ ಎಲ್ಲವೂ ನಿಚ್ಛಳವಾಗಿದ್ದರೆ ಜಗತ್ತಿನಲ್ಲಿಯೇ ಈ ವಿಮಾನ ಹಾರಾಟ ಅತ್ಯಂತ ನಯನ ಮನೋಹರವಾಗಿರುತ್ತದೆ. ಆದರೆ ಹಾರಾಟ ಆರಂಭಿಸಿ ಅರ್ಧ ಗಂಟೆಯೊಳಗೆ ಹೊರಗಿನ ದೃಶ್ಯಗಳೆಲ್ಲವೂ ಮಂಕಾದವು. ಇದ್ದಕ್ಕಿದ್ದಂತೆ ನಾವು ಕುಳಿತ ವಿಮಾನ ಕುಲುಕಾಡತೊಡಗಿತು. ಆ ಕುಲುಕಾಟ ರಭಸವಾಗುತ್ತಿದ್ದಂತೆ ನಮಗೆಲ್ಲರಿಗೂ ಸೀಟು ಬೆಲ್ಟುಗಳನ್ನು ಬಿಗಿದುಕೊಳ್ಳುವಂತೆ ಸೂಚನೆ ನೀಡಲಾಯಿತು. ಆಗಲೂ ಸಹ ನಾನು ಎದೆಗುಂದಲಿಲ್ಲ. ಏಕೆಂದರೆ ಈ ರೀತಿಯ ಹವಾಮಾನ ಪ್ರಕ್ಷುಬ್ಧತೆ ಪರ್ವತಗಳು ಪೂರ್ವ ದಿಕ್ಕಿನೆಡೆಗೆ ಬಾಗಿ ಚಾಚಿಕೊಂಡಿರುವ ಕಡೆಯಲ್ಲೆಲ್ಲಾ ಸರ್ವೇ ಸಾಮಾನ್ಯವೆಂದು ನನಗೆ ಗೊತ್ತಿತ್ತು.

    ಇದ್ದಕ್ಕಿದ್ದಂತೆ ನಮ್ಮ ಕಿಟಕಿಗಿ ಅಡ್ದಲಾಗಿ ಮಳೆ ಪಟಪಟನೆ ಬೀಳತೊಡಗಿತು. ಈಗ ನಮ್ಮ ವಿಮಾನ ಲಂಬವಾಗಿ ಚಲಿಸತೊಡಗಿತು. ಮೊಟ್ಟಮೊದಲಬಾರಿಗೆ ವಿಮಾನದಲ್ಲಿದ್ದ ಪ್ರಯಾಣಿಕರು ಒಮ್ಮೆ ಕಿರುಚಿದರು.

    ನಾನು ಕಿಟಕಿಯಿಂದಾಚೆ ಮೋಡಗಳಲ್ಲಿ ಮಿಂಚಿ ಮರೆಯಾದ ಕೋಲ್ಮಿಂಚೊಂದನ್ನು ನೋಡಿದೆ. ಅದು ತೀರಾ ಅಪಾಯಕಾರಿ ಎನಿಸುವಷ್ಟರಮಟ್ಟಿಗೆ ನಮ್ಮ ಹತ್ತಿರದಲ್ಲಿ ಹಾದುಹೋಯಿತು. ನಾವು ಪುಕಾಲ್ಪವನ್ನು ಬಹಳ ಸಮಯದ ಹಿಂದೆಯೇ ಸೇರಿರಬೇಕಾಗಿತ್ತು. ಆದರೆ ಇನ್ನೂ ಹೋಗುತ್ತಲೇ ಇದ್ದೆವು. ಮತ್ತೆ ವಿಮಾನದ ಕುಲುಕಾಟ ತೀವ್ರವಾಯಿತು. ಈಗ ಮತ್ತಷ್ಟು ಕಿರಿಚಾಟಗಳು ಕೇಳಿಸಿದವು. ಈ ಸಾರಿ ಅದು ಮೊದಲಿಗಿಂತ ಜೋರಾಗಿತ್ತು. ಹಿಂದೆಯೇ ರ್ಯಾಕಿನಲ್ಲಿಟ್ಟಿದ್ದ ಕೆಲವು ಹ್ಯಾಂಡ್ ಲಗೇಜುಗಳು ಕೆಳಗೆ ಬಿದ್ದವು.

    “ಇದೇ ಕೊನೆ” ನನ್ನ ಅಮ್ಮ ಹೇಳಿದಳು. ಅಮ್ಮ, ಒಮ್ಮೆ ಅಮೆರಿಕಾದಲ್ಲೆಲ್ಲೋ ವಿಮಾನದಲ್ಲಿ ಪ್ರಯಾಣಿಸುವಾಗ ಕೆಟ್ಟ ಬಿರುಗಾಳಿಗೆ ಸಿಕ್ಕು ಭಾರಿ ಹೊಯ್ದಾಟಕ್ಕೆ ಸಿಲುಕಿದ್ದಳು. ಅಂದಿನಿಂದ ಅವಳಿಗೆ ವಿಮಾನ ಹಾರಾಟವೆಂದರೆ ಭಯವಿತ್ತು. ಆದರೆ ಈ ಸಾರಿ ಅವಳಿಗೆ ಗಾಬರಿಯಾಗಿದ್ದು ವಿಮಾನದ ಹೊಯ್ದಾಟದಿಂದಲ್ಲ. ಆದರೆ ಅದಕ್ಕೆ ತಗುಲಿಕೊಂಡಿರುವ ಬೆಂಕಿಯಿಂದ.

    ನಾನು ವಿಮಾನದ ಬಲಭಾಗದ ರೆಕ್ಕೆಯಿಂದ ಹೊರಹೊಮ್ಮುವ ಶುಭ್ರ ಹಳದಿ ಬೆಂಕಿಯ ಜ್ವಾಲೆಗಳನ್ನು ನೋಡಿದೆ. ನನ್ನ ಅಮ್ಮನನ್ನೂ ನೋಡಿದೆ. ಅವಳು ಭಯದಿಂದ ನಡಗುತ್ತಿದ್ದಳು. ಅದೇ ವೇಳೆಗೆ ವಿಮಾನ ಒಮ್ಮೆ ಭಯಂಕರವಾಗಿ ಕುಲುಕಿತು. ಅಷ್ಟೆ, ಮರುಕ್ಷಣ ನಾನು ವಿಮಾನದೊಳಗಿಲ್ಲ ಎಂಬ ಅರಿವಾಯಿತು. ನಾನು ವಿಮಾನದ ಹೊರಗೆ ನನ್ನ ಸೀಟಿನಲ್ಲಿ ಕುಳಿತುಕೊಂಡು ತೆರೆದ ಗಾಳಿಯಲ್ಲಿ ಹಾರಾಡುತ್ತಿದ್ದೆ.




    ನಂಗಿನ್ನೂ ಚನ್ನಾಗಿ ನೆನಪಿದೆ-ನಾನು ಬಿಗಿಯಾಗಿ ಸೀಟು ಬೆಲ್ಟನ್ನು ಬಿಗಿದುಕೊಂಡಿದ್ದರಿಂದ ನನ್ನ ಹೊಟ್ಟೆ ಒತ್ತಿದಂತಾಗಿ ನನಗೆ ಉಸಿರಾಡಲಾಗುತ್ತಿರಲಿಲ್ಲ. ಜೊತೆಗೆ ನಾನು ಗಾಳಿಯಲ್ಲಿ ಗಿರಗಿರನೆ ತಿರುಗುತ್ತಾ ಕೆಳಗೆ ಬೀಳುತ್ತಿದ್ದನೆಂದು ಅರಿವಾಯಿತು. ಹಾಗೆ ಎತ್ತರದಿಂದ ಗಿರಗಿರನೆ ಕೆಳಗೆ ಬೀಳುವಾಗ ನನ್ನ ಕೆಳಗಿರುವ ಕಾಡಿನ ಮರಗಳು ಕಾಲಿಫ್ಲವರಿನಂತೆ, ಬಹಳಷ್ಟು ಕಾಲಿಫ್ಲವರಿನಂತೆ ವೃತ್ತಾಕಾರವಾಗಿ ಸುತ್ತುತ್ತಿರುವಂತೆ ಭಾಸವಾದವು. ಆಮೇಲೇನಾಯಿತೋ ನನಗೆ ಗೊತ್ತಿಲ್ಲ. ಅಷ್ಟರಲ್ಲಿ ನನಗೆ ಎಚ್ಚರ ತಪ್ಪಿತು.

    ಮಾರನೆಯ ದಿನ ಮಳೆಯಿಂದಾಗಿ ನನಗೆ ಎಚ್ಚರವಾಯ್ತು. ಮಳೆ ಬಿರುಸಾಗಿ ಸುರಿಯುತ್ತಿತ್ತು. ಗುಡುಗುಗಳ ಆರ್ಭಟ ಕೇಳಿಸುತ್ತಿತ್ತು. ಬೆಳಕು ಗೋಚರಿಸುತ್ತಿತ್ತು.

    ನಾನು ನನ್ನ ಸೀಟಿನ ಕೆಳಗೆ ಮಲಗಿದ್ದೆ. ಆದರೆ ನನ್ನ ಪಕ್ಕದ ಸೀಟು ಖಾಲಿಯಾಗಿತ್ತು. ನನ್ನ ಅಮ್ಮನ ಬಗ್ಗೆ ಯಾವೊಂದು ಕುರುಹು ಇರಲಿಲ್ಲ. ಮಾತ್ರವಲ್ಲ, ನನ್ನ ಅಮ್ಮನ ಎಡಭಾಗಕ್ಕೆ ಕುಳಿತ ವ್ಯಕ್ತಿಯ ಬಗ್ಗೆಯೂ ಸಹ ಯಾವೊಂದು ಕುರುಹು ಕಾಣಿಸಲಿಲ್ಲ. ವಿಮಾನ ಜೋರಾಗಿ ಕುಲುಕಿದಾಗ ಅವನಿನ್ನೂ ನಿದ್ರೆ ಮಾಡುತ್ತಲೇ ಇದ್ದ. ಅಲ್ಲಿ ವಿಮಾನದ ಕುರುಹುಗಳಾಗಲಿ, ಅವಶೇಷಗಳಾಗಲಿ ನನಗೆ ಎಲ್ಲೂ ಕಾಣಿಸಲಿಲ್ಲ. ನಾನು ಒಬ್ಬಂಟಿಯಾಗಿ ಬಿದ್ದಿದ್ದೆ. ನನ್ನೊಟ್ಟಿಗೆ ವಟಗುಟ್ಟುವ ಕಪ್ಪೆಗಳು ಮತ್ತು ಜಿರ್ರಗೂಡುವ ಹುಳುಗಳು ಮಾತ್ರ ಇದ್ದವು.

    ನಾನು ಸುತ್ತಮುತ್ತಲು ಕಣ್ಣು ಬಿಟ್ಟು ನೋಡಿದೆ. ತಕ್ಷಣ ನಾನು ಭೂಮಿಗೆ ತುಸು ಇಳಿಜಾರಾಗಿರುವ ಕಾಡೊಂದರಲ್ಲಿ ಬಿದ್ದಿರುವೆನೆಂದು ಅರಿವಾಯಿತು.
    ನಿಮಗೆ ಆಶ್ಚರ್ಯವಾಗಬಹುದು. ನಾನು ಅಷ್ಟು ಎತ್ತರದಿಂದ ಕೆಳಕ್ಕೆ ಬಿದ್ದರೂ ನನಗೆ ಅಷ್ಟಾಗಿ ಬಿದ್ದಿದ್ದೇನೆ ಅನಿಸಿರಲಿಲ್ಲ. ನನ್ನ ಸೀಟು ಬೆಲ್ಟು ಕಿತ್ತು ಹೋಗಿತ್ತು. ಜೊತೆಗೆ ನನ್ನ ಶೂ, ಕನ್ನಡಕ, ಹಾಗೂ ನನ್ನ ಅಮ್ಮ ಉಡುಗೊರೆಯಾಗಿ ಕೊಟ್ಟ ಉಂಗುರ ಎಲ್ಲವೂ ಕಳೆದುಹೋಗಿದ್ದವು. ನಾನು ಹಾಕಿಕೊಂಡಿದ್ದ ’ಹಿಪ್ಪೀ’ ಡ್ರೆಸ್ಸು ಒಂಚೂರು ಹರಿಯದೆ ಹಾಗೆ ಇದ್ದದ್ದು ನನಗೆ ಆಶ್ಚರ್ಯವನ್ನುಂಟುಮಾಡಿತ್ತು. ನನ್ನ ಕುತ್ತಿಗೆಯ ಕೆಳಭಾಗದ ಮೂಳೆಯೊಂದು ವಿಚಿತ್ರ ರೀತಿಯಲ್ಲಿ ಹೊರಚಾಚಿಕೊಂಡಿತ್ತು. ಮೊದಮೊದಲು ನಾನದನ್ನು ನನ್ನ ಶರ್ಟಿನ ಕಾಲರ್ ಇರಬಹುದೆಂದುಕೊಂಡೆ. ಆಮೇಲೆ ಅದು ಕುತ್ತಿಗೆಯ ಕೆಳಭಾಗದ ಮೂಳೆಯೆಂದು ಖಾತ್ರಿಯಾಯಿತು. ನನ್ನ ಒಂದು ಕಣ್ಣು ಊದಿಕೊಂಡಿತ್ತು. ತಲೆಯ ಮೇಲೆ ಹೊಡೆತ ಬಿದ್ದಿತ್ತು ಹಾಗೂ ಪಾದದ ಮೇಲೆ ಸಣ್ಣ ಗಾಯವಾಗಿತ್ತು. ಆದರೂ ನಂಗೆ ಒಂಚೂರು ನೋವಿರಲಿಲ್ಲ. ಆದರೆ ಏಳಲು ಹಾಗು ಎದ್ದು ಸುತ್ತಮುತ್ತ ನೋಡಲು ನನ್ನಲ್ಲಿ ಒಂಚೂರು ಚೈತನ್ಯ ಇರಲಿಲ್ಲವಾದ್ದರಿಂದ ನಾನು ಇಡಿ ರಾತ್ರಿಯನ್ನು ಅರೆ ನಿದ್ರೆ, ಅರೆ ಎಚ್ಚರದಲ್ಲಿ ಕಳೆದೆ.

    ಮರುದಿವಸ ಬೆಳಿಗ್ಗೆ ಎದ್ದಾಗ ಒಂದು ಕ್ಷಣ ನನ್ನ ತಲೆ ತಿರುಗಿದಂತೆ ಭಾಸವಾಯಿತು. ನನ್ನ ಬಳಿ ಪಾರ್ಸಲ್ಲೊಂದು ಬಿದ್ದಿತ್ತು. ತೆರೆದು ನೋಡಿದೆ ಅದರೊಳಗೆ ಒಂದು ಕೇಕು ಹಾಗೂ ಕೆಲವು ಆಟಿಕೆಗಳಿದ್ದವು. ಆ ಕೇಕು, ಅವತ್ತು ಕ್ರಿಸ್ಮಸ್ ಹಬ್ಬವಿದೆಯೆಂದು ಜ್ಞಾಪಿಸಿತು. ನನಗೆ ನನ್ನ ಅಪ್ಪ ಮತ್ತು ಅವನ ಕ್ರಿಸ್ಮಸ್ ಗಿಡ ನೆನಪಾಯಿತು. ತಕ್ಷಣ ನಾನು ನಿರ್ಧರಿಸಿದೆ; ಬಹುಶಃ ಅಪ್ಪ, ಅದಾಗಲೇ ಅವನ ಹೆಂಡತಿಯನ್ನು ಕಳೆದುಕೊಂಡಾಗಿದೆ. ಇನ್ನು ಉಳಿದಿರುವದು ಮಗಳು. ಆತ ಅವಳನ್ನೂ ಸಹ ಕಳೆದುಕೊಳ್ಳುವಂತಾಗಬಾರದು-ಅದಕ್ಕೋಸ್ಕರವಾದರೂ ನಾನು ಬದುಕಲೇ ಬೇಕು.

    ನನ್ನ ಅಪ್ಪ-ಅಮ್ಮ ನನಗೆ ಈ ಮೊದಲೇ ಕಾಡಿನ ಗಂಡಾಂತರಗಳ ಬಗ್ಗೆ ಅಲ್ಪ ಸ್ವಲ್ಪ ತಿಳಿವಳಿಕೆ ಕೊಟ್ಟಿದ್ದರು; ಉದಾಹರಣೆಗೆ ದೊಡ್ಡ ದೊಡ್ದ ಪ್ರಾಣಿಗಳಾದ ಓಸ್ಲಾಟ್, ಜಾಗೂರ್, ಅಥವಾ ಟೇಪ್ರೀಸ್ ಅಂಥ ಅಪಾಯಕಾರಿಯಲ್ಲ ಆದರೆ ಸಣ್ಣ ಸಣ್ಣ ಹುಳುಹುಪ್ಪಡಿಗಳಾದ ಜೇಡರಹುಳು, ಇರುವೆಗಳು, ನೊಣಗಳು, ಸೊಳ್ಳೆಗಳು ತುಂಬಾ ಅಪಾಯಕಾರಿಯೆಂದು. ಜೊತೆಗೆ ಒಂದು ವೇಳೆ ಕಾಡಿನಲ್ಲಿ ಕಳೆದುಹೋದರೆ ಮೊದಲು ನದಿಯೊಂದನ್ನು ಕಂಡುಹಿಡಿಯಲು ಪ್ರಯತ್ನಪಡಬೇಕು. ಏಕೆಂದರೆ ನದಿಯ ದಂಡೆಗುಂಟ ಮರ ಕಡಿಯುವ ಕೊನಿಬೋ, ಶಿಪಿಬೋ, ಕ್ಯಾಕ್ಟೈಬೋ, ಜನಾಂಗಕ್ಕೆ ಸೇರಿದ ರೆಡ್ ಇಂಡಿಯನ್ನರು ಅಲ್ಲಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಇಲ್ಲವೇ ಬೇಸಾಯ ಮಾಡಿಕೊಂಡಿರುವ ಬಿಳಿಯರು ಕಾಣಸಿಗುತ್ತಾರೆ. ನದಿಗಳೇ ಅವರ ರಸ್ತೆಗಳು. ಕೊನೆಗೆ ಈ ಎಲ್ಲ ರಸ್ತೆಗಳು ರಿಯೊ ಉಕ್ಯಾಲಿ ಎಂಬ ನದಿಗುಂಟ ಇರುವ ದೊಡ್ಡ ರಸ್ತೆಗೆ ಬಂದು ಸೇರುತ್ತವೆ. ಮುಂದೆ ರಿಯೊ ಉಕ್ಯಾಲಿ ನದಿಯು ಹರಿದುಕೊಂಡು ಬಂದು ದೊಡ್ಡದಾದ ಅಮೇಜಾನ್ ನದಿಯನ್ನು ಸೇರುತ್ತದೆ ಎಂದು ಹೇಳಿದ್ದರು.




    ಹೀಗಾಗಿ ಮೊದಲು ನಾನು ನದಿಯೊಂದನ್ನು ಕಂಡುಹಿಡಿಯಲೇಬೇಕಿತ್ತು; ಅದರಲ್ಲೂ ರಿಯೊ ಉಕ್ಯಾಲಿ ನದಿಯನ್ನು. ಏಕೆಂದರೆ ಪುಕಲ್ಪಾ ಇದ್ದದ್ದು ಉಕ್ಯಾಲಿ ನದಿ ದಂಡೆ ಮೇಲೆ. ಅಲ್ಲಿ ನನ್ನ ಅಪ್ಪ ಕಾಯುತ್ತಿದ್ದ-ನಮಗಾಗಿ.

    ನಾನು ಆ ಕ್ರಿಸ್ಮಸ್ ಕೇಕು ತಿನ್ನಲು ಹೋಗಲಿಲ್ಲ. ಬರೀ ಒಂದೇ ಒಂದು ತುಂಡು ರುಚಿ ನೋಡಿ ಬಿಟ್ಟೆ. ಅದು ನೆನೆದು ಹಸಿಯಾಗಿದ್ದರಿಂದ ಅಷ್ಟೇನೂ ರುಚಿಯಾಗಿರಲಿಲ್ಲ. ಬದಲಾಗಿ, ಆ ಪಾರ್ಸಲ್ಲಿನಿಂದ ಬೇರೆ ಕೆಲವು ಸಿಹಿತಿಂಡಿಗಳ ಪೊಟ್ಟಣವನ್ನು ಹೊರತೆಗೆದು ತಿಂದೆ. ಅದನ್ನು ಯಾರೋ ಕ್ರಿಸ್ಮಸ್ ಉಡುಗೂರೆಯಾಗಿ ತೆಗೆದುಕೊಂಡು ಹೋಗುತ್ತಿದ್ದರೆಂದು ಕಾಣುತ್ತದೆ.

    ನನಗೆ ಅಲ್ಲೊಂದು ಕೋಲು ಸಿಕ್ಕಿತು. ಆ ಕೋಲಿನ ಸಹಾಯದಿಂದ ದಾರಿಗಾಗಿ ತಡಕಾಡುತ್ತಾ ಮತ್ತು ಆ ದಾರಿಯಲ್ಲಿ ಯಾವುದೇ ಜೇಡ, ಇರುವೆ, ಹಾವುಗಳಿಲ್ಲವೆಂದು ಖಚಿತಪಡಿಸಿಕೊಳ್ಳುತ್ತಾ ನಡೆಯುತ್ತಾ ಹೊರಟೆ. ಒಂದೆರೆಡು ಹೆಜ್ಜೆ ಕಿತ್ತಿಟ್ಟಿರಲಿಕ್ಕಿಲ್ಲ, ಮತ್ತೆ ತಲೆ ತಿರುಗಿತು. ಮೇಲಿಂದ ಮೇಲೆ ನಾನು ವಿಶ್ರಾಂತಿ ತೆಗೆದುಕೊಳ್ಳಬೇಕಿತ್ತು. ಏಕೆಂದರೆ ಪ್ರತಿ ನಾಲ್ಕು ಹೆಜ್ಜೆಗೆ ಇಡಿ ಭೂಮಿಯೇ ಗಿರಗಿರನೆ ತಿರುಗಿದಂತೆ ಭಾಸವಾಗುತ್ತಿದ್ದುದರಿಂದ ನನಗೆ ಏನನ್ನೂ ಗಮನವಿಟ್ಟು ನೋಡಲು ಸಾಧ್ಯವಾಗುತ್ತಿರಲಿಲ್ಲ.

    ಕ್ರಮೇಣ ನನಗೆ ಅತಿ ಹತ್ತಿರದಲ್ಲೆಲ್ಲೋ ನೀರಿನ ಝುಳುಝುಳು ಶಬ್ಧ ಕೇಳಿಸಿತು. ನನ್ನ ಕಿವಿಗಳು ತಟ್ಟನೆ ನಿಮಿರಿದವು- ಈ ಶಬ್ಧ ನದಿಯೊಂದರ ಹರಿವ ಶಬ್ಧದಂತೆ ಇದೆಯೆಲ್ಲಾ ಎಂದು.
    ಹೋಗಿ ನೋಡಿದೆ. ಆದರದು ನದಿಯಾಗಿರಲಿಲ್ಲ. ಅಲ್ಲಿ ನದಿಯೊಂದು ಸಣ್ಣ ಹಳ್ಳವಾಗಿ ಮಾರ್ಪಟ್ಟಿತ್ತು ಅಷ್ಟೆ. ಅದರ ನೀರು ತಿಳಿಯಾಗಿದ್ದರಿಂದ ಅಲ್ಲಿ ಒಂದಷ್ಟು ನೀರನ್ನು ಕುಡಿದು ವಿಶ್ರಮಿಸಿದೆ. ಅಲ್ಲಿಂದ ಆ ಹಳ್ಳ ದೊಡ್ದದಾದ ಹಳ್ಳವೊಂದಕ್ಕೆ ದಾರಿ ತೋರಿಸಲಿತ್ತು.

    ಪೆರುವಿನ ಕಾಡಿನಲ್ಲಿ ಹರಿಯುವ ನದಿಗಳು ನೇರವಾಗಿ ಒಂದೇ ಸರಳ ರೇಖೆಯಲ್ಲಿ ಹರಿಯುವದಿಲ್ಲ. ಅವು ವಕ್ರ ವಕ್ರವಾಗಿ ಅನೇಕ ತಿರುವುಗಳಲ್ಲಿ ಹರಿಯುತ್ತವಾದ್ದರಿಂದ ನದಿ ದಂಡೆಗುಂಟ ಸುತ್ತು ಹಾಕಿಕೊಂಡು ಮೈಲಿಗಟ್ಟಲೆ ನಡೆದರೂ ಕೊನೆಯಲ್ಲಿ ನೂರು ಗಜದಷ್ಟು ದಾರಿ ಕೂಡ ಸವೆದಿರುವದಿಲ್ಲ.
    ಅಲ್ಲಿ ಸೊಳ್ಳೆಗಳಿದ್ದವು. ಭಯಂಕರ ಸೊಳ್ಳೆಗಳು. ಭಾರಿ ಪ್ರಮಾಣದ ಸಂಖ್ಯೆಯಲ್ಲಿದ್ದು ಅಕ್ಷರಶಃ ನರಕವನ್ನು ತೆರೆದಿಟ್ಟಿದ್ದವು. ಇವಲ್ಲದೆ ನದಿಯ ದಂಡೆಯ ಮೇಲೆ ಮೊಸಳೆಗಳು ಮಲಗಿದ್ದವು; ಆಸೆಬುರುಕ ಮೊಸಳೆಗಳು. ಜೊತೆಗೆ ಅಲ್ಲಿ ಚೂಪು ಹಲ್ಲಿನ ಮೀನುಗಳು ಬೇರೆ ಇದ್ದವು. ಅವು ಸದಾ ರಕ್ತ ಒಸರುವ ಗಾಯಗಳಿಗಾಗಿ ಹಾತೊರೆಯುತ್ತಿದ್ದವು. ನನ್ನ ಪಾದದ ಮೇಲೆ ಬೇರೆ ½ ಇಂಚು ಆಳ ಹಾಗೂ 2 ½ ಇಂಚು ಅಗಲದಷ್ಟು ಗಾಯವಾಗಿತ್ತಲ್ಲ? ಹೀಗಾಗಿ ನಾನು ತಕ್ಷಣ ಹುಶಾರಾದೆ.

    ಆದಾಗ್ಯೂ ನಾನು ನದಿಯ ಬಳಿಯೇ ಇರಬೇಕಿತ್ತು. ಅದನ್ನು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ನದಿ ದಂಡೆಗಳು ದಟ್ಟವಾಗಿ ಬೆಳೆದಿದ್ದರಿಂದ ಅಲ್ಲಿ ಪ್ರತಿ ಹೆಜ್ಜೆಯೂ ಕಷ್ಟಕರವಾಗಿತ್ತು. ಕೆಲವು ಸಾರಿ ನಾನು ನದಿಯ ಮೂಲಕ ಹಾದುಹೋಗಬೇಕಿತ್ತು. ಏಕೆಂದರೆ ಒಮ್ಮೊಮ್ಮೆ ಒಣಗಿದ ಎಲೆಗಳು ಇಲ್ಲವೇ ಮರದ ಟೊಂಗೆಗಳು ರಾಶಿರಾಶಿಯಾಗಿ ಮುರಿದುಕೊಂಡು ಬಿದ್ದು ನನ್ನ ದಾರಿಯನ್ನು ಮುಚ್ಚಿಹಾಕುತ್ತಿದ್ದವು.

    ಹೀಗೆ ನಡೆದುಕೊಂಡು ಹೋಗುತ್ತಿರುವಾಗ ತಕ್ಷಣ ನನಗೆ ಗುಂಯ್ಯಗುಡುವ ನೊಣಗಳ ಸದ್ದು ಕೇಳಿಸಿತು. ಅದರ ಹಿಂದೆಯೇ ವಿಮಾನದ ಮೂರು ಸೀಟುಗಳು ಕಾಣಿಸಿದವು. ಪಕ್ಕದಲ್ಲಿಯೇ ಮೂರು ಹುಡುಗಿಯರ ಹೆಣಗಳು ಬಿದ್ದಿದ್ದವು. ಅವು ಕೊಳೆತು ನಾರುತ್ತಿದ್ದು ಅವುಗಳ ಸುತ್ತಲೂ ನೊಣಗಳು ಮುತ್ತಿಕೊಂಡಿದ್ದವು. ನಾನು ಅವುಗಳ ಪಕ್ಕದಲ್ಲಿ ಹಾದುಹೋಗುತ್ತಿದ್ದಂತೆ ಅವುಗಳಲ್ಲಿ ನನ್ನ ಅಮ್ಮನ ಹೆಣ ಇರಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೆ.


    ಮೂಲ ಇಂಗ್ಲೀಷ್: ಜ್ಯೂಲಿಯನ್ ಕೆಫ್ಕೆ
    ಕನ್ನಡಕ್ಕೆ: ಉದಯ್ ಇಟಗಿ

    ಶಿಕ್ಷಣದ ಸಂತೆಯಲ್ಲೊಬ್ಬ ಸಂತ

  • ಸೋಮವಾರ, ಸೆಪ್ಟೆಂಬರ್ 05, 2011
  • ಬಿಸಿಲ ಹನಿ

  • ಕಳೆದ ವರ್ಷ ಶ್ರಾವಣದ ಒಂದು ದಿನ ಗದುಗಿನ ಕಾಟನ್ ಮಾರ್ಕೆಟ್ ರೋಡಿನಲ್ಲಿರುವ ಅಣ್ಣಿಗೇರಿ ಮಾಸ್ತರರ ಆಶ್ರಮ ಹೊಕ್ಕಾಗ ಬೆಳಿಗ್ಗೆ 11.45 ರ ಸಮಯ. ಅದಾಗಲೇ ಹುಡುಗರೆಲ್ಲಾ ಸಾಲಿಗೆ ಹೋಗಿದ್ದರಿಂದ ಎಲ್ಲೆಡೆ ನೀರವ ಮೌನ ಆವರಿಸಿತ್ತು. ಆದರೆ ಆ ಆಶ್ರಮದ ಮರದಲ್ಲಿರುವ ಪಕ್ಷಿಗಳು ಆಗೊಮ್ಮೆ ಈಗೊಮ್ಮೆ ಕೂಗು ಹಾಕುತ್ತಾ ಅಲ್ಲಿ ಆವರಿಸಿದ್ದ ಮೌನವನ್ನು ಮುರಿಯಲು ಪ್ರಯತ್ನಿಸುತ್ತಿದ್ದವು. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಕಣ್ಣಾಮುಚ್ಚಾಲೆಯಾಡುವ ಸೂರ್ಯ ಅಂದು ಅದೇನೋ ಬೆಳಿಗ್ಗಿನಿಂದಲೇ ಪ್ರಖರವಾಗಿ ಬೆಳಗುತ್ತಿದ್ದ. ನಾವು ಅವರ ಹತ್ತಿರ ಅಪಾಯಿಂಟ್ಮೆಂಟ್ ತೆಗೆದುಕೊಂಡಿರಲಿಲ್ಲ. ಅದರ ಅವಶ್ಯಕತೆಯೂ ಇರಲಿಲ್ಲ. ನೇರವಾಗಿ ಭೇಟಿಯಾಗಬಹುದಿತ್ತು. ಹೀಗಾಗಿ ಕೇಳಬೇಕಾದ್ದನ್ನು ಒಂದಷ್ಟು ಮನಸ್ಸಲ್ಲೇ ಯೋಚಿಸಿಕೊಂಡು ಹೊರಟೆ.




    ನಾವು ಗೇಟ್ ತೆರೆದು ಒಳಗೆ ಹೋಗುತ್ತಿದ್ದಂತೆ ಆಶ್ರಮದ ಕೋಣೆಯೊಂದರ ಮುಂದೆ ಖುರ್ಚಿ ಹಾಕಿಕೊಂಡು ತಾವೇ ಬೆಳೆಸಿದ ಹೂದೋಟದತ್ತ ದೃಷ್ಟಿ ನೆಟ್ಟು ಕುಳಿತಿದ್ದ ಅಣ್ಣಿಗೇರಿ ಮಾಸ್ತರರು ನಮ್ಮನ್ನು ನೋಡಿದವರೆ ಎದ್ದು ನಿಂತು ಹಣೆಗೆ ಕೈ ಹಚ್ಚಿ ತಮ್ಮ ಕನ್ನಡಕದೊಳಗಿಂದ ನಮ್ಮನ್ನು ನೋಡತೊಡಗಿದರು. ನಾವು ಅವರಿಗೆ ಗೊತ್ತು ಸಿಗದೇ ಹೋದರೂ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಕಡೆ “ಬರ್ರೀ,... ಬರ್ರೀ..... ಒಳಗ ಬರ್ರೀ.” ಎಂದು ಮನೆಗೆ ಬಂದ ಅತಿಥಿಗಳನ್ನು ಸ್ವಾಗತಿಸುವಂತೆ ನಮ್ಮನ್ನು ಸಹ ಆತ್ಮೀಯವಾಗಿ ಸ್ವಾಗತಿಸಿದರು. ಬೆನ್ನಹಿಂದೆಯೇ “ಲೇ ತಮ್ಮಾ, ಅಲ್ಲೊಂದೆರೆಡು ಖುರ್ಚಿ ತಗೊಂಬಾರೋ” ಎಂದು ಅಲ್ಲೇ ಇದ್ದ ಶಿಷ್ಯನಿಗೆ ಆಜ್ಞೆಯಿತ್ತರು. ಆ ಶಿಷ್ಯ ಓಡಿಹೋದವನೆ ಮಾಸ್ತರರ ಪಕ್ಕದಲ್ಲಿ ಒಂದೆರೆಡು ಖುರ್ಚಿಯನ್ನು ತಂದುಹಾಕಿದ. ಅಂದು ಆ ಹುಡುಗ ಮೈಯಲ್ಲಿ ಹುಶಾರಿಲ್ಲದ ಕಾರಣ ಸಾಲಿಗೆ ಹೋಗದೆ ಆಶ್ರಮದಲ್ಲೇ ಉಳಿದಿದ್ದ. ಆಗಷ್ಟೆ ಚೇತರಿಸಿಕೊಂಡು ತಕ್ಕಮಟ್ಟಿಗೆ ಓಡಾಡುತ್ತಿದ್ದ.




    ಆಗ ತಾನೆ ವಿದ್ಯಾರ್ಥಿಗಳನ್ನು ಕಳಿಸಿ ಹೊರಗೆ ಖುರ್ಚಿಯ ಮೆಲೆ ಬಿಳಿ ನೆಹರೂ ಶರ್ಟ್, ಬಿಳಿ ಪಂಚೆಯನ್ನು ಹಾಕಿಕೊಂಡು ಕುಳಿತಿದ್ದ ಮಾಸ್ತರರು ಥೇಟ್ ಗಾಂಧಿವಾದಿಯಂತೆ ಕಂಡರು. ಅವರಿಗೆ 82 ವರ್ಷ ವಯಸ್ಸಾಗಿದೆ ಎಂದು ಹೇಳಿದರೆ ನಮಗೆ ನಂಬಲಸಾಧ್ಯವಾಗಿತ್ತು. ಏಕೆಂದರೆ ನಾನು ಎರಡು ದಶಕಗಳ ಹಿಂದೆ ಅವರ ಕೈಲಿ ಓದುವಾಗ ಅವರ ಕಂಗಳಲ್ಲಿ ಯಾವ ಹೊಳಪು ಇತ್ತೋ ಅದೇ ಹೊಳಪು ಇನ್ನೂ ಹಾಗೆ ಇತ್ತು. ಮುಖದಲ್ಲಿ ಎಂದಿನಂತೆ ಅದೇ ಲವಲವಿಕೆ, ಉತ್ಸಾಹ, ಚೈತನ್ಯ ಎಲ್ಲವೂ ಹಾಗೆ ಇದ್ದವು. ನಾನು ಅವರನ್ನು ನೋಡಿದವನೆ ಅವರ ಪಾದಗಳಿಗೆ ನಮಸ್ಕರಿಸಿ “ನಾನು ಉದಯ್ ಇಟಗಿ ಅಂತಾ-ನಿಮ್ಮ ಹಳೆಯ ವಿದ್ಯಾರ್ಥಿ. 88 ರಿಂದ 91 ರವರೆಗೆ ನಿಮ್ಮ ಕೈಯಲ್ಲಿ ಕಲಿತವನು. ಈಗ ನಾನು ಇಂಗ್ಲೀಷ್ ಉಪನ್ಯಾಸಕನಾಗಿ ಲಿಬಿಯಾದಲ್ಲಿ ಕೆಲಸ ಮಾಡುತ್ತಿದ್ದೇನೆ” ಎಂದು ನನ್ನನ್ನು ನಾನು ಪರಿಚಯಿಸಿಕೊಂಡೆ. ಸಾವಿರ ಸಾವಿರ ಶಿಷ್ಯ ಬಳಗವನ್ನು ಹೊಂದಿರುವ ಮಾಸ್ತರರು ನನ್ನನ್ನು ಹೇಗೆ ತಾನೆ ಗುರುತು ಹಿಡಿದಾರು? ಆದರೂ “ಗುಡ್, ವೇರಿಗುಡ್” ಎಂದು ಹೆಮ್ಮೆಯಿಂದ ಬೀಗುತ್ತಾ ನನ್ನ ಬೆನ್ನು ಚಪ್ಪರಿಸಿದರು. ಮುಂದುವರೆದು “ಬಾಳ ಜನ ಹುಡುಗ್ರು ನೋಡ್ರಿ. ಗೊತ್ತು ಹತ್ತಂಗಿಲ್ಲ. ನೀವs ಗೊತ್ತುಪಡಿಸ್ಕೋಬೇಕ್ರಿ. ನಿಮ್ಮನ್ನ ಗೊತ್ತುಹಿಡಿದಿದ್ದಕ ಮನಸ್ಸಿಗೆ ಕೆಟ್ಟ ಮಾಡ್ಕೋಬ್ಯಾಡ್ರಿ.” ಎಂದು ಕ್ಷಮೆ ಯಾಚಿಸುವ ದನಿಯಲ್ಲಿ ಹೇಳಿದರು.




    ನಾನು “ಇರ್ಲಿ ಸರ್. ನಿಮಗಾದ್ರು ಹೆಂಗ ಗೊತ್ತು ಹಿಡಿಲಿಕ್ಕಾದಾತು? ಎಲ್ಲಾ ಶಿಕ್ಷಕರು ತಮ್ಮ ಎಲ್ಲಾ ಶಿಷ್ಯರನ್ನು ನೆನಪಿನಲ್ಲಿಟ್ಕೋಳಿದಿಕ್ಕೆ ಆಗೋದಿಲ್ರಿ. ಬಾಳ ಕಷ್ಟ ಐತಿ” ಎಂದು ನಕ್ಕೆ. “ನೀವೂ ಮಾಸ್ತರ ಅಲ್ರಿ ಮತ್ತ? ನಮ್ಮದು ನಿಮ್ಮದು ಒಂದ ಅನುಭವ! ಇದರ ಮ್ಯಾಲೆ ಹೆಚ್ಚಿಂದು ಹೇಳೋದರ ಏನ ಐತಿ. ಎಲ್ಲಾನೂ ಅರ್ಥ ಮಾಡ್ಕೋತಿರಿ” ಎಂದು ಅವರೂ ನಕ್ಕರು. ಆ ನಗೆಯಲ್ಲಿ ಅದಮ್ಯ ಜೀವನೋತ್ಸಾಹ ಪುಟಿಯುತ್ತಿತ್ತು. ನಾನು ಅವರನ್ನು ಎರಡು ದಶಕಗಳ ಹಿಂದೆ ನೋಡಿದ್ದಕ್ಕೂ, ಈಗ ನೋಡುವದಕ್ಕೂ ದೈಹಿಕವಾಗಿ ಒಂಚೂರು ವ್ಯತ್ಯಾಸ ಕಾಣಿಸಲಿಲ್ಲ. ಅದೇ ಸದೃಢ ದೇಹ. ಅದೇ ಹೊಳೆಯುವ ಕಂಗಳು. ಅದೇ ಕಂಠ, ಅದೇ ಮಾತು, ಅದೆ ಹಾಸ್ಯಪ್ರಜ್ಞೆ, ಅದೇ ಚೈತನ್ಯ ಎಲ್ಲವೂ ಇನ್ನೂ ಹಾಗೇ ಇದ್ದವು.



    ಮಾಸ್ತರರು ಪ್ರಚಾರಪ್ರಿಯರಲ್ಲ. ಮೊದಲಿನಿಂದಲೂ ಸದ್ದಿಲ್ಲದೆ ಕೆಲಸ ಮಾಡುತ್ತಾ ಬಂದವರು. ಮೀಡಿಯಾ, ಪತ್ರಿಕೆಯವರು, ಫೋಟೋ ಎಂದರೆ ಅವರಿಗೆ ಅಲರ್ಜಿ ಎನ್ನುವದು ನನಗೆ ಚನ್ನಾಗಿ ಗೊತ್ತಿತ್ತು. ಹೀಗಾಗಿ ನಾನೇ ಸಂಕೋಚದಿಂದ “ಸರ್, ದಿನಪತ್ರಿಕೆಯೊಂದಕ್ಕೆ ನಿಮ್ಮ ಮೇಲೆ ಒಂದು ಲೇಖನ ಬರಿಬೇಕಂತ ಮಾಡೇನ್ರಿ. ಹಿಂಗಾಗಿ ನಿಮ್ಮಕೂಡ ಒಂದಷ್ಟು ಮಾತಾಡಿ ವಿಷಯ ಸಂಗ್ರಹಣೆ ಮಾಡಿ ಬರಿತೇನ್ರಿ. ಅದಕ ಅವಕಾಶ ಮಾಡಿಕೊಡ್ರಿ” ಎಂದು ಅತ್ಯಂತ ವಿನಮ್ರತೆಯಿಂದ ಕೇಳಲೋ ಬೇಡ್ವೋ ಎಂಬಂತೆ ಕೇಳಿದೆ. ನಾನು ಅಷ್ಟು ಕೇಳಿದ್ದೇ ತಡ “ಹುಚ್ಚರು ಅದೀರಿ ನೀವು. ಅಲ್ರಿ, ನಾ ಏನ್ ಮಾಡೇನಿ ಅಂತಾ ನನ್ನ ಮೇಲೆ ಲೇಖನ ಬರಿಯೋಕೆ ಹೊಂಟೀರಿ ನೀವು? ಎಷ್ಟೊಂದು ಜನ ಎಷ್ಟೊಂದು ಮಾಡ್ಯಾರ? ಎಷ್ಟೊಂದು ಸಾಧಿಸ್ಯಾರ? ಅವರ ಬಗ್ಗೆ ಬರೀರಿ. ಅವರಿಗೆ ಇನ್ನೂ ಹುರುಪು ಬರ್ತದ. ನಾ ಏನ್ ಸಾಧಿಸೀನಿ ಅಂತಾ ಬರಿತೀರಿ? I am just an ordinary man. What is there to write about me? ಸುಮ್ಮನೆ ಕೂತ್ಕೊಂಡು ಮಾತಾಡಂಗ ಇದ್ರ ಮಾತಾಡ್ರಿ” ಎಂದು ಗದರಿದರು. ನನಗೆ ಮೊದಲೇ ಇವರನ್ನು ಈ ವಿಷ್ಯದಲ್ಲಿ ಒಪ್ಪಿಸುವದು ಕಷ್ಟ ಎಂದು ಚನ್ನಾಗಿ ಗೊತ್ತಿದ್ದರಿಂದ ಪಟ್ಟು ಬಿಡದೇ ಕೊನೆಪಕ್ಷ ನನ್ನ ಬ್ಲಾಗಿನಲ್ಲಾದರೂ ಬರೆಯಲು ಅವಕಾಶ ಮಾಡಿಕೊಡಿ ಎಂದು ಅಂಗಲಾಚಿದೆ. ನಾನು ಬೇಡಿಕೊಳ್ಳುವ ರೀತಿಯನ್ನು ನೋಡಿ ಮಾಸ್ತರರು ಕೊನೆಗೂ ಕರಗಿದರು, ಒಪ್ಪಿಕೊಂಡರು. “ಅಲ್ರೀ, ನನ್ನ ಬಗ್ಗೆ ಬರಿತೇನಿ ಅಂತೀರಿ. ಬರೆಯೋದಾದ್ರ ಬರೆ ಒಳ್ಳೇದ ಬರಿಬ್ಯಾಡ್ರಿ. ಕೆಟ್ಟದ್ದೂ ಬರೀರಿ. ನಾನೂ ಮನುಷ್ಯಾ ಅದೀನಿ. ನಂದರಾಗು ಒಳ್ಳೇದು ಕೆಟ್ಟದ್ದೂ ಎರಡೂ ಅದವು. ಹೌದಲ್ರಿ?” ಎಂದು ಕೇಳಿದರು.

    ನಾನು “ನೀವು ಹೇಳೋದು ಖರೆ ಐತ್ರಿ ಸರ್. ಆದ್ರ ನಾನು ಇಷ್ಟು ದಿವಸ ನಿಮ್ಮನ್ನು ಗುರಗಳನ್ನಾಗಿಯೇ ನೋಡಿದ್ರಿಂದ ನಂಗ ಇದವರೆಗೂ ನಿಮ್ಮಲ್ಲಿ ಯಾವ್ದೂ ಕೆಟ್ಟದ್ದು ಕಂಡಿಲ್ರಿ. ಮೇಲಾಗಿ, ನಿಮ್ಮ ಕೆಟ್ಟತನದ ಬಗ್ಗೆ ತಿಳ್ಕೊಬೇಕಂದ್ರ ನಾನು ನಿಮ್ಮ ಹತ್ತಿರದ ಒಡನಾಡಿಯಾಗಿರಬೇಕು, ಇಲ್ಲ ಗೆಳೆಯನಾಗಿರಬೇಕು. ಆದ್ರ ನಾನು ಇವೆರೆಡೂ ಅಲ್ಲಲ್ರಿ?” ಎಂದು ನಕ್ಕೆ. ಜೊತೆಗೆ ಅವರೂ ನಕ್ಕರು. ನಾನು ಮುಂದುವರೆದು “ಕೆಟ್ಟದ್ದು ಬರೆಯುವಂಥದ್ದು ಕೆಟ್ಟದೇನು ಮಾಡೀರಿ ನೀವು? ನೀವು ಮಾಸ್ತರಾದಾಗಿಂದ ನಿಮ್ಮ ಜೀವನಾನ ವಿದ್ಯಾರ್ಥಿಗಳಿಗೋಸ್ಕರ ತೇದಿರಿ. ನಮ್ಮಂತ ವಿದ್ಯಾರ್ಥಿಗಳನ್ನು ರೂಪಿಸಿದ್ದೀರಿ. ನಿಮ್ಮ ಬಗ್ಗೆ ಕೆಟ್ಟದ್ದು ಬರದ್ರ ನನಗ ಕೆಟ್ಟಾಕೈತ್ರೀ” ಎಂದು ತರ್ಕದ ಮಾತನಾಡಿ ಮಾಸ್ತರರ ಬಾಯಿ ಕಟ್ಟಿಬಿಟ್ಟೆ.

    ಮುಂದೆ ಮಾಸ್ತರರು ಹೆಚ್ಚಿಗೇನೂ ಮಾತನಡದೆ ನಾನು ಮಾಡುವ ಕೆಲಸಕ್ಕೆ ಮೌನ ಸಮ್ಮತಿಯನ್ನು ಕೊಟ್ಟರು. ನಾನು ನನ್ನ ಕ್ಯಾಮರಾವನ್ನು ನನ್ನ ಅಕ್ಕನ ಮಗನ ಕೈಗಿಡುತ್ತಾ ಆಶ್ರಮದ ಒಂದಿಷ್ಟು ಫೋಟೋಗಳನ್ನು ಹಾಗೂ ನಾವು ಮಾತನಾಡುವದನ್ನು ಮಾಸ್ತರರಿಗೆ ಗೊತ್ತಾಗದಂತೆ ಕ್ಲಿಕ್ಕಿಸು ಎಂದು ಸೂಚನೆಯನ್ನು ಕೊಟ್ಟು ಮಾಸ್ತರರೊಂದಿಗೆ ಮಾತಿಗಿಳಿದೆ. ಆದರೆ ಅವನು ಒಂದಷ್ಟು ಫೋಟೋಗಳನ್ನು ತೆಗೆದಿರಲಿಕ್ಕಿಲ್ಲ, ಆಗಲೇ ಮಾಸ್ತರರಿಗೆ ಅವನು ಕದ್ದು ಫೋಟೋ ತೆಗೆಯುವದು ಗೊತ್ತಾಗಿಹೋಯಿತು. “ಏಯ್, ಬ್ಯಾಡ್ರಿ, ಫೋಟೋ, ಗೀಟೋ ಏನು ಬ್ಯಾಡ್ರಿ. ಹಿಂಗಾದ್ರ ನಾನು ನಿಮ್ಮ ಕೂಡ ಮಾತಾಡಂಗಿಲ್ಲ ನೋಡ್ರಿ” ಎಂದು ಮನಿಸಿಕೊಂಡರು. ನಾನು ಅವರನ್ನು ಮತ್ತೆ ಪರಿಪರಿಯಾಗಿ ಓಲೈಸುತ್ತಾ at least ನಾವು ಮಾತನಾಡುವದನ್ನಾದರೂ ವಿಡಿಯೋ ತೆಗೆದುಕೊಳ್ಳಲು ಅನುಮತಿ ಕೊಡಬೇಕು ಎಂದು ಕೇಳಿಕೊಂಡೆ. ನಾನು ನನ್ನ ಅಕ್ಕನ ಮಗನಿಗೆ ವಿಡಿಯೋ ತೆಗೆಯಲು ಹೇಳಿ ನಾನು ಮಾಸ್ತರರೊಂದಿಗೆ ಮಾತಿಗಿಳಿದೆ. ಕಾಲು ಗಂಟೆ ಅವನು ವಿಡಿಯೋ ತೆಗೆದಿರಲಿಕ್ಕಿಲ್ಲ ಆಗಲೇ ಮಾಸ್ತರರು “ಸಾಕು ಬಿಡ್ರಿ, ಸಾಕು. ಎಷ್ಟು ತೆಗಿತೀರಿ? ಕ್ಯಾಮರಾ ಬಂದ್ ಮಾಡಬಿಡ್ರಿ” ಎಂದು ಹೇಳಿದರು. ನಾನು “ದಯವಿಟ್ಟು ನಮ್ಮ ಮಾತುಕತೆ ಮುಗಿಯುವರೆಗೂ ರೆಕಾರ್ಡ್ ಆಗಲಿ. ಇದು ಲೇಖನ ಬರೆಯುವದಕ್ಕೆ ಸಹಾಯವಾಗುತ್ತೆ” ಎಂದೆ. ಅವರು ಮನಸ್ಸಿಲ್ಲದೆ ಒಪ್ಪಿಕೊಂಡರು.

    ಶಿಕ್ಷಣ ಎಂಬುದು ವ್ಯಾಪಾರೀಕರಣಗೊಂಡು ಉದ್ಯಮದ ರೂಪ ಪಡೆದ ಈ ಹೊತ್ತಿನಲ್ಲಿ ಹಾಗೂ ಟೂಷನ್ ಎಂಬ ಮಹಾಮಾರಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ದಂಧೆಯಾಗಿ ನಡೆಯುತ್ತಿರುವ ಇವತ್ತಿನ ದಿನಗಳಲ್ಲಿ ಇಲ್ಲೊಬ್ಬ ನಿವೃತ್ತ ಶಿಕ್ಷಕರು ಮಕ್ಕಳಿಗೋಸ್ಕರ ಉಚಿತ ಅಕ್ಷರ ದಾಸೋಹ ನಡೆಸುತ್ತಾರೆ. ಅವರೇ ಶ್ರೀಯುತ ಬಿ.ಜಿ. ಅಣ್ಣಿಗೇರಿಯವರು. ಶಿಕ್ಷಣದ ಸಂತೆಯಲ್ಲೊಬ್ಬ ಸಂತನಂತಿರುವ ಈ ಶಿಕ್ಷಕ ಗದುಗಿನ ತುಂಬಾ ಅಣ್ಣಿಗೇರಿ ಸರ್, ಅಣ್ಣಿಗೇರಿ ಮಾಸ್ತರ್ ಎಂದೇ ಹೆಸರಾದವರು. ನಿರಂತರವಾಗಿ 56 ವರ್ಷಗಳಿಂದ ಉಚಿತ ಶಿಕ್ಷಣ ದಾಸೋಹ ನಡೆಸುತ್ತಿರುವ ಇವರು ಮೊದಲಿನಿಂದಲೂ ಸದ್ದುಗದ್ದಲವಿಲ್ಲದೇ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಬಂದವರು. ಈ ಕಾರಣಕ್ಕಾಗಿಯೇ ಅವರು ಈ ಭಾಗದ ಬಡ ವಿದ್ಯಾರ್ಥಿಗಳ ಪಾಲಿಗೆ ಆರಾಧ್ಯ ದೈವವಾಗಿದ್ದಾರೆ. ಜೀವನ ಪರ್ಯಂತ ಬ್ರಹ್ಮಚಾರಿಯಾಗಿದ್ದುಕೊಂಡೇ ವಿದ್ಯಾರ್ಥಿಗಳ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆಶ್ರಮದ ಮಕ್ಕಳೇ ತಮ್ಮ ಮಕ್ಕಳೆಂದು ಭಾವಿಸಿ ಸತತ 56ವರ್ಷಗಳಿಂದ ಆ ಮಕ್ಕಳಿಗೆ ತಮ್ಮದೆಲ್ಲವನ್ನೂ ಧಾರೆಯೆರೆದಿದ್ದಾರೆ. ಮದುವೆ ಯಾಕೆ ಆಗಲಿಲ್ಲ ಎಂದು ಕೇಳಿದರೆ ಮೊದಲಿನಿಂದಲೂ ಬಡತನದಲ್ಲಿಯೇ ಬೆಂದೆದ್ದು ಬಂದಿದ್ದರಿಂದ ಮದುವೆಯ ಬಗೆಗಿನ ಮಧುರ ಕಲ್ಪನೆಗಳು ನನ್ನಲ್ಲಿ ಹುಟ್ಟಲೇ ಇಲ್ಲ ಎಂದು ಹೇಳುತ್ತಾರೆ. ತಮ್ಮ 33ನೇ ವಯಸ್ಸಿನಲ್ಲಿ ಒಮ್ಮೆ ಮದುವೆಯ ಯೋಚನೆ ಬಂತಂತೆ. ಆದರೆ ಅವರು ನಡೆಸುತ್ತಿದ್ದ ವಿಶೇಷ ತರಗತಿಗಳಿಂದಾಗಿ ಮದುವೆಯ ಬಗ್ಗೆ ಚಿಂತಿಸಲು ಅವಕಾಶ ಸಿಗಲಿಲ್ಲ ಎಂದು ನಗುತ್ತಾ ಹೇಳುತ್ತಾರೆ.
    ಶ್ರೀಯುತ ಅಣ್ಣಿಗೇರಿಯವರು ಗದಗ್ ಜಿಲ್ಲೆಯ ರೋಣ ತಾಲೂಕಿನ ಮುದೇನಗೂಡಿಯಲ್ಲಿ ಜೂನ್ 3, 1930ರಲ್ಲಿ ಬಡ ಕುಟುಂಬವೊಂದರಲ್ಲಿ ಹುಟ್ಟಿದರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗ್ರಾಮಸ್ಥರ ಹಣಕಾಸಿನ ಸಹಾಯದಿಂದ ಮುದೇನಗೂಡಿಯಲ್ಲಿ ಮುಗಿಸಿದರು. ಮುಂದೆ ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ರೋಣಕ್ಕೆ ಹೋದರು. ಅಲ್ಲಿ ವಾರಾನ್ನ ತಿಂದುಕೊಂಡು ಓದಿದರು. 1954 ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬಿ.ಎ. ಬಿ. ಇಡ್ ಪದವಿ ಪದವಿ ಪಡೆದುಕೊಂಡು ಅದೇ ವರ್ಷ ಗದುಗಿನ ಮಾಡೆಲ್ ಹೈಸ್ಕೂಲಿನಲ್ಲಿ (ಈಗಿನ ಸಿ.ಎಸ್.ಪಾಟೀಲ್ ಹೈಸ್ಕೂಲಿನಲ್ಲಿ) ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು. ಮುಂದೆ ಅದೇ ಹೈಸ್ಕೂಲಿನ ಹೆಡ್ಮಾಸ್ಟರ್ ಆಗಿ 1988 ರಲ್ಲಿ ನಿವೃತ್ತರಾದವರು. ಅವರ ಕಾಲದಲ್ಲಿ ಮಾಡೆಲ್ ಹೈಸ್ಕೂಲ್ ಕೀರ್ತಿಯು ಉತ್ತುಂಗ ಶಿಖರವನ್ನು ಮುಟ್ಟಿತ್ತು.



    ಅವರು ಗದುಗಿಗೆ ಬಂದ ವರ್ಷವೇ ಅಲ್ಲಿಯ ದಲಾಲರ ಸಹಾಯದಿಂದ ಕಾಟನ್ ಮಾರ್ಕೆಟ್ ರೋಡಿನಲ್ಲಿರುವ ಒಂದು ವಕಾರದಲ್ಲಿ ಸಣ್ಣದೊಂದು ಕೋಲಿ ಹಿಡಿದು, ದೂರದ ಊರಿಂದ ಗದುಗಿಗೆ ಓದಲು ಬರುವ ಹುಡುಗರನ್ನು ತಮ್ಮಲ್ಲಿರಿಸಿಕೊಂಡು ಓದಿಸತೊಡಗಿದರು. ಮುಂದೆ ಅದು ಒಂದು ಪರಿಪಾಠವಾಗಿ ಬೆಳೆದು ಇವತ್ತು ಒಂದು ಸಣ್ಣ ಆಶ್ರಮವಾಗಿ ನಿಂತಿದೆ. ಇಲ್ಲಿ 80ಕ್ಕೂ ಹೆಚ್ಚು ಜನರು ತಂತಮ್ಮ ಊರಿನಿಂದ ಬುತ್ತಿ ತರಿಸಿಕೊಂಡು ಬೆಳಿಗ್ಗೆ ಊಟ ಮಾಡುತ್ತಾರೆ. ಮಧ್ಯಾಹ್ನಕ್ಕೆ ಸಾಲಿಯಲ್ಲಿ ಕೊಡುವ ಬಿಸಿಯೂಟ ಮಾಡುತ್ತಾರೆ. ರಾತ್ರಿ ಹಳೆ ವಿದ್ಯಾರ್ಥಿಯೊಬ್ಬರು ಕೊಡಿಸಿದ ಅಕ್ಕಿಯಿಂದ ಅನ್ನ ತಯಾರಿಸಿ, ತೋಂಟದಾರ್ಯ ಮಠದಿಂದ ಸಾರು ತಂದು ಊಟ ಮಾಡುತ್ತಾರೆ.

    ಅಣ್ಣಿಗೇರಿ ಮಾಸ್ತರರದು ಶಿಸ್ತುಬದ್ಧ ಜೀವನ. ಆ ಇಳಿ ವಯಸ್ಸಿನಲ್ಲೂ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಐದಾರು ಕಿಲೊಮೀಟರಿನಷ್ಟು ವಾಕ್ ಹೋಗುತ್ತಾರೆ. ನಂತರ ಸ್ನಾನ, ಪ್ರಾರ್ಥನೆ ಮಾಡುತ್ತಾರೆ, ಪ್ರಾರ್ಥನೆಯಲ್ಲಿ ಆಶ್ರಮದ ಮಕ್ಕಳು ಸಹ ಭಾಗಿಯಾಗುತ್ತಾರೆ. ಇದಾದ ಬಳಿಕ ಏಳು ಗಂಟೆಯಿಂದ ಹತ್ತು ಗಂಟೆಯವರೆಗೆ ತರಗತಿಗಳಿಗೆ ಹೋಗುತ್ತಾರೆ. ಆನಂತರ ಲಘು ಉಪಾಹಾರ, ಒಂದಷ್ಟು ಅಧ್ಯಯನ, ಮಧ್ಯಾಹ್ನ ಮಿತವಾದ ಆಹಾರ ಸೇವನ, ಬಳಿಕ ವಿಶ್ರಾಂತಿ, ನಂತರ ಸುಮಾರು ಎರಡು ಗಂಟೆಗಳಷ್ಟು ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ಅಷ್ಟೊತ್ತಿಗೆ ಸಾಯಂಕಾಲದ ಪಾಠಕ್ಕಾಗಿ ಮಕ್ಕಳು ಬಂದಿರುತ್ತಾರೆ. ಮತ್ತೆ ಅವರಿಗೆ ಸಂಜೆ ಆರರಿಂದ ಏಳು ಗಂಟೆಯವರೆಗೆ ಪಾಠ ತೆಗೆದುಕೊಳ್ಳುತ್ತಾರೆ. ಆನಂತರ ತಮ್ಮ ಆಶ್ರಮದಲ್ಲಿ ವಸತಿಯಿರುವ ಮಕ್ಕಳೊಂದಿಗೆ ಸಮಾಲೋಚನೆ ನಡೆಸುತ್ತಾ, ಅವರ ಕುಂದುಕೊರತೆಗಳನ್ನು ಗಮನಿಸುತ್ತಾ, ಅವರ ವಿಧ್ಯಾಭ್ಯಾಸದ ಪ್ರಗತಿಯ ಬಗ್ಗೆ ವಿಚಾರಿಸುತ್ತಾ, ಅವರಿಗೆ ಬುದ್ಧಿವಾದ ಹೇಳುತ್ತಾ, ತಪ್ಪಿದ್ದರೆ ಬಯ್ಯುತ್ತಾ, ಅವರನ್ನು ತಿದ್ದುತ್ತಾ, ಓದುವದಕ್ಕೆ ಹುರಿದುಂಬಿಸುತ್ತಾ ತಮ್ಮ ಸಮಯ ಕಳೆಯತ್ತಾರೆ. ಈ ತರದ ಜೀವನಕ್ರಮವನ್ನು ಕಟ್ಟುನಿಟ್ಟಾಗಿ ಚಾಚೂತಪ್ಪದೇ ಪಾಲಿಸುತ್ತಾರೆ.

    ಮೊದಲೆಲ್ಲಾ ಇವರೊಟ್ಟಿಗೆ ಹುಣಶಿಮರದ ಸರ್, ಗಾಣಿಗೇರ ಸರ್ ಅವರು ಇಲ್ಲಿಗೆ ಬಂದು ಉಚಿತವಾಗಿ ವಿಜ್ಞಾನ ಮತ್ತು ಗಣಿತದ ಪಾಠಗಳನ್ನು ಹೇಳಿ ಹೋಗುತ್ತಿದ್ದರು. ಆದರೆ ಅವರೆಲ್ಲಾ ಈಗ ಬರುವದನ್ನು ನಿಲ್ಲಿಸಿದ್ದಾರೆ. ಯಾಕೆಂದು ಕೇಳಿದರೆ “ಅಲ್ರಿ ಅವರೂ exist ಆಗಬೇಕಲ್ರಿ. ಅವರಿಗೂ ಮದುವೆಯಾಯಿತು. ಹೆಂಡತಿ ಮಕ್ಕಳಿರೋರು. ಬರೇ ಪುಗಸೆಟ್ಟಿ ಪಾಠ ಮಾಡು ಅಂದ್ರ ಎಷ್ಟು ದಿವಸ ಮಾಡ್ತಾರ?” ಎಂದು ನಗುತ್ತಾ ನಮಗೇ ಮರುಪ್ರಶ್ನೆ ಹಾಕುತ್ತಾರೆ ಮಾಸ್ತರರು.

    ಹೀಗಾಗಿ ಈಗ ಬರೀ ಅಣ್ಣಿಗೇರಿ ಮಾಸ್ತರ್ ಒಬ್ಬರೇ ಎಲ್ಲ ತರಗತಿಗಳಿಗೆ ಇಂಗ್ಲೀಷ್ ಮತ್ತು ಗಣಿತದ ಪಾಠ ಹೇಳುತ್ತಾರೆ. ಆದರೆ ಸಮಾಯಾಭಾವ ಹಾಗೂ ಒಬ್ಬರೇ ಎಲ್ಲವನ್ನೂ ನಿಭಾಯಿಸಬೇಕಿದ್ದರಿಂದ ಈಗ ಬರೀ 9 ಮತ್ತು 10ನೇ ತರಗತಿಗಳಿಗೆ ಮಾತ್ರ ಪಾಠ ಮಾಡುತ್ತಾರೆ. ಅಣ್ಣಿಗೇರಿ ಸರ್ ಅವರದು ಗಣಿತ ಮತ್ತು ಇಂಗ್ಲೀಷ್ ಹೇಳುವದರಲ್ಲಿ ಎತ್ತಿದ ಕೈ. ಇವರು ಪಾಠ ಮಾಡುವ ರೀತಿ ಹೇಗಿರುತ್ತದೆಂದರೆ ಎಲ್ಲವನ್ನೂ ಬುನಾದಿಯಿಂದಲೇ ಆರಂಭಿಸುತ್ತಾರೆ. ಉದಾಹರಣೆಗೆ ಲಂಭಕೋನ ತ್ರಿಭುಜಕ್ಕೆ ಸಂಬಂಧಪಟ್ಟಹಾಗೆ ಪೈಥಾಗೋರಸ್ ನ ಪ್ರಮೇಯವನ್ನು ಬೇರೆಯವರ ಹಾಗೆ ನೇರವಾಗಿ ಆರಂಭಿಸುವ ಮೊದಲು ಲಂಭಕೋನ ತ್ರಿಭುಜ ಎಂದರೇನು? ಅದರ ಲಕ್ಷಣಗಳೇನು? ಹಾಗೂ ಹೇಗೆ ಲಂಭಕೋನ ತ್ರಿಭುಜದಲ್ಲಿ ವಿಕರ್ಣದ ವರ್ಗವು ಉಳಿದೆರೆಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ ಎನ್ನುವದನ್ನು ಅನೇಕ ಉದಾಹರಣೆಗಳ ಮೂಲಕ ವಿವರಿಸುತ್ತಾ ಪೈಥಾಗೋರಸ್ ನ ಪ್ರಮೇಯದೊಳಕ್ಕೆ ಇಳಿಯುತ್ತಾರೆ. ಪ್ರಮೇಯ ಹೇಳಿಕೊಟ್ಟ ಮಲೆ ಅಷ್ಟಕ್ಕೆ ಸುಮ್ಮನಾಗುವದಿಲ್ಲ. ಅದನ್ನು ಮತ್ತೆ ಮತ್ತೆ ಹೇಳುತ್ತಾ, ವಿದ್ಯಾರ್ಥಿಗಳ ಕೈಲಿ ಹೇಳಿಸುತ್ತಾ ವಿದ್ಯಾರ್ಥಿಗಳಿಗೆ ಮನದಟ್ಟುಮಾಡಿಕೊಡುವದರ ಮೂಲಕ ಎಂಥ ದಡ್ಡನನ್ನೂ ಅರ್ಥ ಮಾಡಿಸುತ್ತಾರೆ. ಇಂಗ್ಲೀಷನ್ನೂ ಅವರು ಹೆಚ್ಚು ಕಮ್ಮಿ ಇದೇ ರೀತಿ ಹೇಳಿಕೊಡುತ್ತಾರೆ, ಇಂಗ್ಲೀಷ್ ಗ್ರಾಮೀಣ ಭಾಗದ ಮಕ್ಕಳಿಗೆ ಕಬ್ಬಿಣದ ಕಡಲೆಯಿದ್ದಂತೆ. ಆದರೆ ಅಣ್ಣಿಗೇರಿ ಮಾಸ್ತರರು ಅದನ್ನು ಸರಳವಾಗಿಸುತ್ತಾ, ಇಂಗ್ಲೀಷಿನ ಸಣ್ಣ ಸಣ್ಣ ವಾಕ್ಯಗಳಲ್ಲಿ ಹೇಳುತ್ತಾ ಅರ್ಥ ಮಾಡಿಸುತ್ತಾರೆ. ಮಾತ್ರವಲ್ಲ, ಮದ್ಯ ಮಧ್ಯ ವಿದ್ಯಾರ್ಥಿಗಳನ್ನು ನಗಿಸುತ್ತಾ, ತಾವು ಅವರೊಂದಿಗೆ ಮಕ್ಕಳಾಗಿ ಎಲ್ಲೂ ಬೋರಾಗದಂತೆ ಪಾಠ ಹೇಳಿಕೊಡುತ್ತಾರೆ. ಇದು ಅವರು ಪಾಠ ಮಾಡುವ ವೈಖರಿ.



    ಈ ತರದ ಕ್ಲಾಸುಗಳು ಬರಿ ಆಶ್ರಮದಲ್ಲಿರುವವರಿಗೆ ಮಾತ್ರ ಸೀಮಿತವಾಗಿರುವದಿಲ್ಲ. ಹಳ್ಳಿಯ ಬಡಮಕ್ಕಳು ಸೇರಿದಂತೆ ಗದಗ-ಬೇಟಗೇರಿಯ ಶ್ರೀಮಂತರ ಮಕ್ಕಳೂ ಸಹ ಅವರ ಬಳಿ 100ಕ್ಕೂ ಹೆಚ್ಚು ಜನ ಟೂಷನ್ ಗೆ ಬರುತ್ತಾರೆ. ನಾನು ಅವರ ಬಳಿ ಪಾಠಕ್ಕೆ ಹೋಗುವಾಗ (ಅಂದರೆ 1990 ರಲ್ಲಿ) ಒಂದೊಂದು ತರಗತಿಯಲ್ಲಿ ಇನ್ನೂರು ವಿದ್ಯಾರ್ಥಿಗಳು ಇರುತ್ತಿದ್ದರು. ಒಂದೊಂದು ಸಾರಿ ಕೋಣೆ ಹಿಡಿಸದೆ ಇದ್ದಾಗ ಬಯಲಲ್ಲಿರುವ ಮರದ ಕೆಳಗೆ ತರಗತಿಗಳು ನಡೆಯುತ್ತಿದ್ದವು. ಆಗ ಅವು ನಮಗೆಲ್ಲಾ ಗುರುಕುಲ ಪದ್ಧತಿಯನ್ನು ಜ್ಞಾಪಿಸುತ್ತಿದ್ದವು. ಆದರೆ ಈಗ ಕ್ಲಾಸಿಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕಾರಣ ಕೇಳಿದರೆ ಮಾಸ್ತರರು ಹಸನ್ಮುಖಿಯಾಗಿ “ಅಲ್ರೀ, ಈಗಿನ ಸ್ಟೂಡೆಂಟ್ಸ್ ಗೆ ಆಗಿನ ಸ್ಟೂಡೆಂಟ್ಸ್ ಗೆ ಬಾಳ ಫರಕ್ ಐತ್ರಿ. ಈಗಿನ ಹುಡುಗರು ’ಅಣ್ಣಿಗೇರಿ ಮಾಸ್ತರಗ ವಯಸ್ಸಾಗೇತಿ. ಅವ ಏನ್ ಪಾಠ ಮಾಡ್ತಾನ?’ ಅಂತಾರ್ರಿ. ಇನ್ನು ಅವರ ಪೇರೆಂಟ್ಸ್ ’ಅಣ್ಣಿಗೇರಿ ಮಾಸ್ತರ್ ರೊಕ್ಕಾನ ತಗೊಳಲ್ಲ. ರೊಕ್ಕ ತಗೊಳ್ಳದಾಂವ ಅದೇನು ಪಾಠ ಮಾಡ್ತಾನ? ಸುಮ್ನ ಬೇರೆ ಕಡೆ ಪಾಠಕ್ಕ ಹೊಗಿ ಉದ್ಧಾರ ಆಗ್ರಿ’ ಅಂತಾ ಹೇಳ್ತಾರಂತರೀ” ಎಂದು ಈಗಿನ ವಿದ್ಯಾರ್ಥಿಗಳು ಹಾಗೂ ಅವರ ತಂದೆತಾಯಿಗಳ ಮನೋಸ್ಥಿತಿಯ ಬಗ್ಗೆ ವಿಷಾದ ಮಿಶ್ರಿತ ತಿಳಿಹಾಸ್ಯದಲ್ಲಿ ಹೇಳುತ್ತಾರೆ.

    ಇವತ್ತು ಅವರ ಕೈಯಲ್ಲಿ ಕಲಿತವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಅವರೆಲ್ಲಾ ಸೇರಿ ಆಶ್ರಮವನ್ನು ನವೀಕರಿಸಿ ಕೊಟ್ಟಿದ್ದಾರೆ. ಆದರೆ ಈಗ್ಗೆ ಕೆಲವು ವರ್ಷಗಳಿಂದ ಅವರನ್ನು ಅವರಿದ್ದ ಜಾಗದಿಂದ ಒಕ್ಕಲೆಬ್ಬಿಸುವ ಸಂಚು ನಡೆಯಿತು. ಈ ಸಂದರ್ಭದಲ್ಲಿ ಗದುಗಿನ ಪ್ರಸಿದ್ಧ ದಲಾಲಿ ವ್ಯಾಪಾರಿ ದಿವಂಗತ ಮಲ್ಲೇಶಪ್ಪ ಗೌರಿಪೂರವರು ಅವರ ಸಹಾಯಕ್ಕೆ ಬಂದು ಅವರಿರುವ ಜಾಗವನ್ನು ಅವರ ಹೆಸರಿಗೆ ಮಾಡಿಸಿಕೊಟ್ಟರು. ಅವರ ಈ ಸಹಾಯವನ್ನು ಮಾಸ್ತರರು ವಿಶೇಷ ಕೃತಜ್ಞತೆಯಿಂದ ನೆನೆಯುತ್ತಾರೆ.

    33 ವರ್ಷ ಸರ್ಕಾರಿ ಶಿಕ್ಷಕರಾಗಿದ್ದರೂ ಮಾಸ್ತರರು ತಮಗೇ ಅಂತಾ ಆಸ್ತಿ ಮಾಡಿಕೊಳ್ಳಲಿಲ್ಲ, ಹಣ ಗಳಿಸಲಿಲ್ಲ, ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗಲಿಲ್ಲ. ಮುಂಚಿನಿಂದಲೂ ಏನನ್ನೂ ಅಪೇಕ್ಷಿಸದೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡವರು. ಆದರೆ ಇವರ ಈ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರ ಅವರಿಗೆ 2003 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಇವರು ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಲು ಬೆಂಗಳೂರಿಗೆ ಬಂದಾಗ ಪತ್ರಕರ್ತನೊಬ್ಬ “ಪ್ರಶಸ್ತಿ ಸ್ವೀಕರಿಸುವದಕ್ಕೆ ಗದುಗಿನಿಂದ ಬೆಂಗಳೂರಿಗೆ ಬಂದಿದ್ದೀರಿ. ನಿಮಗೇನನಿಸುತ್ತೆ?” ಅಂತಾ ಕೇಳಿದ್ದ. ಅದಕ್ಕೆ ಮಾಸ್ತರರು “ನಂಗ ಬಾಳ ತ್ರಾಸು ಅನಸಾಕ ಹತೈತ್ರಿ. ಯಾಕಂದ್ರ ಎರಡು ದಿವಸ ಆತು ಮಕ್ಕಳನ್ನ ಅಷ್ಟ ಆಶ್ರಮದಾಗ ಬಿಟ್ಟು ಬಂದಿದೇನ್ರಿ. ಪಾಪ, ಅವರು ಹೆಂಗ ಇರ್ತಾರ ಏನ? ಈ ಕಾರ್ಯಕ್ರಮ ಮುಗಿದ ತಕ್ಷಣ ಇವತ್ತ ರಾತ್ರಿನ ಗದಿಗ್ಗೆ ಬಸ್ ಹತ್ತತೇನ್ರಿ.” ಎಂದಾಗ ಆ ಪತ್ರಕರ್ತ ’ಸಾಮಾನ್ಯವಾಗಿ ಎಲ್ಲರೂ ಈ ಸಂದರ್ಭದಲ್ಲಿ ತಾವು ಮಾಡಿದ್ದನ್ನು ಹಾಡಿ ಹೊಗಳುತ್ತಾ ಪ್ರಶಸ್ತಿ ಬಂದಿದ್ದಕ್ಕೆ ಖುಶಿಯಾಯಿತು. ಹಾಗೆ ಹೀಗೆ” ಅಂತಾ ಹೇಳ್ತಾರೆ ಆದರೆ ಅದರ ಬದಲು ಆ ಸಮಯದಲ್ಲೂ ತಮ್ಮ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದನ್ನು ಕೇಳಿ ಬೆರಗಾಗಿದ್ದ.

    ಇಂಥವರು ನನ್ನ ಗುರುಗಳಾಗಿದ್ದೇ ನನ್ನ ಅದೃಷ್ಟ. ಇವರ ಕೈಲಿ ಮೂರು ವರ್ಷ ವಿದ್ಯಾರ್ಥಿಯಾಗಿ ಕಲಿತಿದ್ದೆನಾದರೂ ಈಗ ಮತ್ತೆ ಅವರೊಂದಿಗೆ ಮಾತನಾಡುವದೇ ಒಂದು ಸೌಭಾಗ್ಯ ಎಂದು ಭಾವಿಸಿ ಮಾತಿಗಿಳಿದೆ. ಮಾತನಾಡುತ್ತಾ ಮಾಸ್ತರರು ಐದು ದಶಕಗಳ ಹಿಂದಿನಿಂದ ಇದುವರೆಗೂ ತಮ್ಮ ವೃತ್ತಿ ಜೀವನದಲ್ಲಿ ಏನೇನು ನಡೆಯಿತು ಎನ್ನುವದನ್ನೆಲ್ಲಾ ಕಟ್ಟಿಕೊಟ್ಟರು. ಮೂರು ಗಂಟೆ ಕಳೆದಿದ್ದೇ ಗೊತ್ತಾಗಲಿಲ್ಲ. ಈ ಮಧ್ಯ ಮಾಸ್ತರರು “ಲೇ ತಮ್ಮಾ, ಸಾಹೇಬರಿಗೆ ಒಂದೆರೆಡು ಚಹಾ ತಗೊಂಬಾರೋ” ಎಂದು ತಮ್ಮ ಶಿಷ್ಯನಿಗೆ ಆಜ್ಞೆಯಿತ್ತರು. ನಾನು ಬೇಡವೆಂದೆ. ಮಾಸ್ತರರು ಕೇಳಲಿಲ್ಲ. ಒತ್ತಾಯ ಮಾಡಿ “ಏಯ್, ತಗೊಂಬಾ ಹೋಗೋ” ಎಂದು ಮತ್ತೊಮ್ಮೆ ಶಿಷ್ಯನಿಗೆ ಹೇಳಿದರು. ಶಿಷ್ಯ ಚಹಾ ತರಲು ರೆಡಿಯಾದ. ನಾನಾಗ “ಒಂದು ಶುಗರ್ ಲೆಸ್ ಇರಲಿ” ಎಂದೆ. ಮಾಸ್ತರರು ಅಚ್ಚರಿಯಿಂದ ನನ್ನತ್ತ ನೋಡಿದರು. ನಾನು “ಹೌದು, ಕಳೆದ ಒಂದು ವರ್ಷದಿಂದ ನಾನು ಡಯಾಬಿಟಿಕ್ ಆಗಿದ್ದೇನೆ” ಎಂದೆ. ಆಗ ಮಾಸ್ತರರು ಕಳಕಳಿಯಿಂದ “ಏಯ್. ಏನ್ರೀ ಇದು? ಇಷ್ಟ ಸಣ್ಣ ವಯಸ್ಸಿಗೆ ಡಯಾಬಿಟಿಸ್ ಬಂದಿದೆಯಾ? ಹುಷಾರ್ರೀ, ಆರೋಗ್ಯದ ಬಗ್ಗೆ ಕಾಳಜಿ ತಗೊಳ್ರೀ. ನೀವಿನ್ನೂ ಬಾಳ ದಿವಸ ಬದುಕಿ ಬಾಳಬೇಕಾದವರು” ಎಂದು ಪ್ರೀತಿಯ ಸಲಹೆಯನ್ನಿತ್ತರು. ನಾನು ಅವರಿಗೆ ಕಣ್ಣಲ್ಲೇ ಥ್ಯಾಂಕ್ಸ್ ಹೇಳಿ ಸಂದರ್ಶಿಸತೊಡಗಿದೆ.



    • ನಿಮ್ಮ ದೃಷ್ಟಿಯಲ್ಲಿ ಗುರು ಎಂದರೆ ಯಾರು? ಅವನು ಹೇಗಿರಬೇಕು?
    ಅಲ್ರಿ, ಗುರು ಅನ್ನಂವಗ ಅಸ್ಥಿತ್ವ ಬರೋದ ವಿದ್ಯಾರ್ಥಿಗಳಿಂದ! ವಿದ್ಯಾರ್ಥಿಗಳ ಇಲ್ಲದ ಮೇಲೆ ಗುರು ಎಲ್ಲಿರತಾನ? ಹಿಂಗಾಗಿ ಮೊದ್ಲು ಶಿಷ್ಯರು ಹುಟ್ತಾರ. ಆಮೇಲೆ ಗುರುಗಳು ಹುಟ್ತಾರ. ಈ ವಿಷ್ಯಕ್ಕೆ ಎಲ್ಲಾ ಗುರುಗಳು ತಮ್ಮ ಶಿಷ್ಯರ ಬಗ್ಗೆ ಋಣಿಯಾಗಿರಲೇಬೇಕು. ಯಾಕಂದ್ರ ಒಬ್ಬ ಗುರು ದೊಡ್ಡವನಾಗೋದು ಅವನ ಶಿಷ್ಯರಿಂದ. ಅವರು ಮಾಡಿದ ಸಾಧನೆಯಿಂದ. ದ್ರೋಣಾಚಾರ್ಯ ಒಬ್ಬ ಗುರು ಅಂತಾ ಜಗತ್ತಿಗೆ ಗೊತ್ತಾಗಿದ್ದು ಏಕಲವ್ಯನಂಥ ಶಿಷ್ಯನಿಂದ. ಅರಿಸ್ಟಾಟಲ್ ಬೆಳಕಿಗೆ ಬಂದಿದ್ದು ಅವನ ಶಿಷ್ಯ ಸಾಕ್ರೇಟಿಸ್ ನಿಂದ. ಈಗ ನಾನೂ ಒಬ್ಬ ಗುರು ಅಂತಾ ಗೊತ್ತಾಗಿದ್ದು ಕೂಡ ನಿಮ್ಮಂತ ವಿದ್ಯಾರ್ಥಿಗಳಿಂದ. ಹಾಗೆ ನೋಡಿದ್ರ ಗುರುಗಳದು ಹೇಳಿಕೊಳ್ಳುವಂಥ ರೋಲ್ ಏನೂ ಇರಲ್ರಿ. He is just a guide. ಆದರೆ ಸತತ ಪರಿಶ್ರಮದಿಂದ ಒಬ್ಬ ವಿದ್ಯಾರ್ಥಿ ಮುಂದೆ ಬರ್ತಾನಲ್ಲ ಅವನಿಗೆ ನಾವು ಮೊದಲು ಕೃತಜ್ಞತೆ ಸಲ್ಲಿಸಬೇಕು.

    ಗುರು ಆದವನು ಹಿಂಗಿಂಗ ಇರಬೇಕು ಅಂತಾ ಹೇಳಾಕ ನಾನ್ಯಾರ್ರಿ?

    • ಇವತ್ತಿನ ವಿದ್ಯಾರ್ಥಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?

    ಈಗೀಗ ವಿದ್ಯಾರ್ಥಿಗಳಲ್ಲಿ ಶಿಕ್ಷಕರ ಬಗ್ಗೆ ಸ್ವಲ್ಪ ಗೌರವ ಕಮ್ಮಿಯಾಗಿದೆ ಅನ್ನೋದು ನಿಜ. ಹಿಂದೆ ವಿದ್ಯಾರ್ಥಿಗಳು ವಿಧೇಯಕರಾಗಿರುತ್ತಿದ್ದರು. ಹೇಳಿದ ಮಾತು ಕೇಳೋರು. ಹೇಳಿದ ಕೆಲಸ ಮಾಡೋರು. ಆದ್ರ ಈಗ ಏನರ ಹೇಳಾಕ ಹೋದ್ರ “ನೀ ಯಾರು ನಂಗ ಹೇಳಾಂವ?” ಅಂತಾ ನಮ್ಮನ್ನ ಕೇಳ್ತಾರ.
    ಮೊನ್ನೆ ನಮ್ಮ ಆಶ್ರಮದಾಗ ಒಬ್ಬ ಹುಡುಗ ಊಟದ ತಾಟು ತಿಪ್ಯಾಗ ಒಗದಿದ್ದ. ಕಾಲಾಗ ಹಾಕ್ಕೊಳ್ಳೋ ಬೂಟನ್ನು ಕೋಲ್ಯಾಗ ಇಟ್ಟು ಅದರ ಮ್ಯಾಲೆ ಚಾದರ ಹೊಚ್ಚಿ ಭದ್ರವಾಗಿ ಇಟ್ಟಿದ್ದ. ಇದನ್ನ ನೋಡಿ ನಂಗ ಬಾಳ ಕೆಟ್ಟ ಅನಿಸ್ತು. ಸಿಟ್ಟು ಬಂತು. ಸಿಟ್ಟಿನ್ಯಾಗ ಒಂದು ನಾಲ್ಕ ಹೊಡೆದೆ. ಊಟ ಮಾಡೋ ತಾಟು ತಿಪ್ಯಾಗ ಒಗಿಬ್ಯಾಡ ಅಂತಾ ಹೇಳಿದೆ. ಆಗ ಆ ಹುಡುಗ ನನ್ನ ಮುಂದ ಏನೂ ಮಾತಾಡಲಿಲ್ಲ. ಆದ್ರ ಮಾಳೆ ಮರುದಿವಸ ಎಲ್ಲಾರ ಮುಂದ “ನಮ್ಮ ಅಪ್ಪಗ ಬುದ್ಧಿ ಇಲ್ಲ. ಅಂವಾ ಇಲ್ಲಿ ನನ್ನ ಸಾಲಿ ಕಲಿಯಾಕ ಬಿಟ್ಟಾನ. ಅಣ್ಣಿಗೇರಿ ಮಾಸ್ತರಗ ಬುದ್ಧಿ ಇಲ್ಲ, ಅಂವಾ ಅದನ್ನ ಮಾಡಬ್ಯಾಡ, ಇದನ್ನ ಮಾಡಬ್ಯಾಡ ಅಂತಾ ಹೇಳ್ತಾನ” ಇಂಥದಕ್ಕ ಏನು ಹೇಳೋದು?

    • ಈ ರೀತಿ ವಿಧ್ಯಾರ್ಥಿಗಳು ಆಗೋದಕ್ಕ ಯಾರು ಕಾರಣ? ತಂದೆ-ತಾಯಿಗಳೋ? ಶಿಕ್ಷಕರೋ?

    ಇಬ್ಬರೂ ಅಲ್ರೀ. ಯಾಕಂದ್ರ ಯಾವ ತಂದ–ತಾಯಿನೂ ಮಕ್ಕಳಿಗೆ ಉಡಾಳಾಗು ಅಂತಾ ಹೇಳಲ್ರೀ. ಹಂಗs ಯಾವ ಶಿಕ್ಷಕನೂ ಹೇಳಂಗಿಲ್ರೀ. ನನಗನಿಸ್ತದ ಇವತ್ತಿನ ದುನಿಯಾದಾಗ ಮಕ್ಕಳನ್ನು ಬೆಳಿಸೋದರಲ್ಲಿ ಎಲ್ಲೋ ಏನೋ ಮಿಸ್ ಆಗಾಕಹತೈತಿ. ಅದು ಏನೂ ಅಂತಾ ಇನ್ನೂ ಹುಡಕೋದರಾಗ ಅದೇವಿ.

    • ಹಾಗಾದ್ರೆ ಇವತ್ತಿನ ಶಿಕ್ಷಣ ಪದ್ಧತಿ ಕಾರಣ ಅಂತಿರೇನು?

    ಹಂಗೂ ಅಲ್ರೀ. ಯಾಕಂದ್ರ ಎಲ್ಲಾ ಮಕ್ಕಳು ತಮ್ಮ ಸಾಲ್ಯಾಗ ’ಮಾರಲ್ ಎಜುಕೇಶನ್’ ಅನೋ ಪಿರಿಯಡ್ನ್ಯಾಗ ಮೊದಲಿನಿಂದಲೂ ನೀತಿಕಥೆ ಕಲ್ಕೋತ ಬಂದಿರ್ತಾರ್ರೀ. ಆದ್ರ ನೀತಿಕಥೆಗಳು ಎಲ್ಲಾ ಮಕ್ಕಳ ಮೇಲೆ ಪರಿಣಾಮ ಬೀರ್ತವ ಅಂತಾ ಹೇಳಾಕ ಬರಂಗಿಲ್ಲ ನೋಡ್ರಿ. ಹಿಂಗಾಗಿ ನೀತಿಕಥೆಗಳು ನೀತಿಕಥೆಗಳಾಗಿಯೇ ಉಳಿದುಬಿಡ್ತವ. ಎಲ್ಲೋ ಒಂದಿಬ್ಬರು ಇವನ್ನ ಅಳವಡಿಸಿಕೊಂಡು ಒಳ್ಳೆಯವರಾಗ್ತಾರ.

    • ನಿಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿ ಯಾರಾದರೂ ಇದ್ದಾರಾ?

    ನಾನು ಎಂಟನೇ ಕ್ಲಾಸಿನಲ್ಲಿರಬೇಕಾದ್ರ ಭಯಂಕರ ಜ್ವರ ಬಂದು ನನ್ನ ಸೊಂಟ ಪೂರ್ತಿ ಸ್ವಾದೀನ ಕಳಕೊಂಡು ನಡ್ಯಾಕ ಬರಲಾರದಂಗಾತು. ಸ್ವಲ್ಪ ದಿವಸ ಆದ ಮೇಲೆ ಜ್ವರ ಬಿಟ್ಟಿತು. ಆದ್ರ ಸೊಂಟದ ನೋವು ಇನ್ನೂ ಹಂಗ ಇತ್ತು. ಸಾಲಿಗೆ ಹೋಗಲಾರದಂಗಾತು. ಆಗ ನಮ್ಮ ಮನ್ಯಾಗಿನಿವರು ’ಇವ ಸಾಲಿಗೆ ಹೋಗೋದು ಹತೈತಿ ಅಂತಾ ಹೇಳಿ ಹಿಂಗ ನಾಟ್ಕ ಮಾಡಾಕ ಹತ್ಯಾನ’ ಅಂತಾ ಆಡಿಕೊಂಡ್ರು. ಆಗ ನನಗೆ ರೋಣದ ಹೈಸ್ಕೂಲಿನ ಹೆಡ್ಮಾಸ್ಟರ್ ಜಿ.ವಿ.ಕುಲಕರ್ಣಿಯವರ ಕಡಿಂದ ಬುದ್ಧಿ ಹೇಳಸಲಿಕ್ಕೆ ನಮ್ಮ ಅಪ್ಪ ಮತ್ತು ನನ್ನ ಪ್ರೈಮರಿ ಸ್ಕೂಲ್ ಟೀಚರ್ ಒಬ್ಬರು ಕರಕೊಂಡು ಹೋದ್ರು. ಅವರು ನನ್ನ ಅಪ್ಪನ್ನ ನೋಡಿ ನೀವೇನಾಗಬೇಕು ಇವಗ ಅಂತಾ ಕೇಳಿದರು. ನಮ್ಮ ಅಪ್ಪ ನಾನು ಈ ಹುಡುಗನ ತಂದಿರೀ ಅಂದ. ನಮ್ಮ ಮಾಸ್ತರನ್ನು ನೋಡಿ ನೀವೇನಾಗಬೇಕು ಇವಗ ಅಂತಾ ಕೇಳಿದರು. ಅವರು ನಾನು ಇವನ ಮಾಸ್ತರು ಅಂದ್ರು. ಅವರು ತಕ್ಷಣ ನನ್ನ ಮುಖವನ್ನು ನೋಡಿ ಕೈ ಬಿಡ್ರಿ ಅವನ್ನ ಅವ ಓದ್ತಾನ. ಓದಿ ಶಾಣ್ಯಾ ಆಗತಾನ. ನಾನು ಅವನ್ನ ಓದಿಸ್ತೇನೆ ಅಂದ್ರು. ತಕ್ಷಣ ನನಗೆ ಆ ವ್ಯಕ್ತಿಯ ಬಗ್ಗೆ ಎಲ್ಲಿಲ್ಲದ ಗೌರವ ಬಂತು. ನನ್ನ, ನನ್ನಪ್ಪ ನಂಬಲಿಲ್ಲ, ನನಗ ಕಲಿಸಿದ ಮಾಸ್ತರು ನಂಬಲಿಲ್ಲ. ಆದ್ರ ಗುರ್ತು ಪರಿಚಯ ಇಲ್ಲದ ಹೊರಗಿನವರು ನಂಬಿದರಲ್ಲಾ ಅಂತಾ ಬಾಳ ಖುಶಿಯಾಯಿತು. What a great man he is! ಅಂತಾ ಅನಿಸ್ತು. ನಾನಾಗ ವಾರಾನ್ನ ತಿಂದು ಓದ್ತಿದ್ದೆ. ವಾರಾನ್ನ ಬಿಡಿಸಿ ಮುಂದ ಅವರು ನನಗೋಸ್ಕರ ಅಂತಾನ ಒಂದು ಬೋರ್ಡಿಂಗ್ ತೆರೆದರು. ಅಲ್ಲಿ ಮೊದಲಿಗೆ ನಾನೂ ಸೇರಿ ಮೂರೇ ಮೂರು ವಿದ್ಯಾರ್ಥಿಗಳಿದ್ದೆವು. ಮುಂದ ಅದು ಬೆಳಕೊಂತ ಹೋತು. ಇವತ್ತು ಅದು ಬಸವೇಶ್ವರ ಬೋರ್ಡಿಂಗ್ ಆಗಿ ಇನ್ನೂ ಐತಿ. ಒಬ್ಬ ಶಿಕ್ಷಕನಲ್ಲಿರಬೇಕಾದ ನಿಜವಾದ ಗುಣ ಅಂದ್ರ ಇದು. ಇಂಥವರನ್ನು ಯಾವತ್ತಾದರೂ ಮರೆಯಲು ಸಾದ್ಯವೆ?

    • ನೀವು ಕಲಿಸುವದರ ಜೊತೆಗೆ ವಿದ್ಯಾರ್ಥಿಗಳಿಂದ ಏನಾದರು ಕಲಿತಿದ್ದಿದೆಯಾ?

    ಖಂಡಿತ ಐತ್ರಿ. ಒಬ್ಬ ಶಿಕ್ಷಕ ಕಲಿಸೋದಕ್ಕಿಂತ ತನ್ನ ವಿದ್ಯಾರ್ಥಿಗಳಿಂದ ಬಾಳ ಕಲಿತಾನ್ರಿ. ನಾನು ಅಂಥಾ ಎರಡು ಪ್ರಸಂಗ ಹೇಳತೇನಿ ಕೇಳ್ರಿ. ನನಗೊಬ್ಬ ಸುರೇಶ್ ಶಾಬಾದಿಮಠ ಅಂತಾ ಹೇಳಿ ಒಬ್ಬ ಸ್ಟೂಡೆಂಟ್ ಇದ್ದ. ಅವನು ಓದೋದರಲ್ಲಿ ಬಾಳ ಮುಂದ ಇದ್ದ ಮತ್ತು ಯಾವಾಗ್ಲೂ ನಂಬರ್ ಹಚ್ಚಿ ಪಾಸ್ ಆಗತಿದ್ದ. ಆದ್ರ ಅವನ ಜತಿ ಓದೋ ಇನ್ನೊಬ್ಬ ಹುಡುಗ ಇವನ್ನ ಓದೋದರಲ್ಲಿ ಹೆಂಗರಾ ಮಾಡಿ ಹಿಂದ ಒಗಿಬೇಕು ಅಂತಾ ಅವನೂ ಬಾಳ ಕಷ್ಟಪಟ್ಟು ಓದ್ತಾ ಇದ್ದ. ಆದ್ರ ಶಾಬಾದಿಮಠನ್ನ ಹಿಂದ ಒಗಿಲಿಕ್ಕೆ ಇವನ ಕೈಲಿಂದ ಆಗ್ತಾನ ಇರಲಿಲ್ಲ. ಇದೇ ಕಾರಣಕ್ಕ ಆ ಹುಡುಗ ಶಾಬಾದಿಮಠನ್ನ ದ್ವೇಷಿಸುತ್ತಿದ್ದ ಮತ್ತು ಆ ವಿಷಯ ಶಾಬಾದಿಮಠನಿಗೂ ಗೊತ್ತಿತ್ತು. ಮುಂದ ನಾವು ಶೈಕ್ಷಣಿಕ ಟೂರ್ ಇಟ್ಟಾಗ ಶಾಬಾದಿಮಠನ ವೈರಿಗೆ ಬರಾಕ ಆಗಲಿಲ್ಲ. ಯಾಕಂದ್ರ ಅವ ಬಾಳ ಬಡವ ಇದ್ದ. ಅದನ್ನು ತಿಳಿದ ಶಾಬಾದಿಮಠ ಖುದ್ದಾಗಿ ತಾನೇ ಕೈಯಿಂದ ರೊಕ್ಕಾ ಹಾಕಿ ಆ ಹುಡುಗನ್ನು ಕರಕೊಂಡು ಬಂದ. ನನಗ ಇದನ್ನು ನೋಡಿ ಬಾಳ ಆಶ್ಚರ್ಯ ಆಯ್ತು. ನಿಮ್ಮ ವೈರಿಗಳನ್ನೂ ಪ್ರೀತಿಸಿ ಎನ್ನುವ ವಿವೇಕಾನಂದರ ಮಾತನ್ನು ಆತ ಪ್ರ್ಯಾಕ್ಟಿಕಲಿ ಮಾಡಿ ತೋರಿಸಿದ್ದ. ನಾವಿನ್ನೂ ವಿವೇಕಾನಂದರ ಆ ಮಾತನ್ನು ಥೆಯರ್ಯಾಟಿಕಲಿ ಪಾಲಿಸ್ತಾ ಇದ್ರ ಅವ ಪ್ರ್ಯಾಕ್ಟಿಕಲಿ ಪಾಲಿಸಿ ತೋರಿಸಿದ್ದ.

    ಇನ್ನೊಬ್ಬಳು ವಿಜಯಲಕ್ಷ್ಮಿ ಅಂಗಡಿ ಅಂತಾ. ಅಕಿ ಗೆಳತಿಯೊಬ್ಬಳು ಹಿರೇಮಠ ಅಂತಾ ಬಾಳ ಬಡವಿ. ವಿಜಯಲಕ್ಷ್ಮಿ ತನ್ನ ಗೆಳತಿ ಪರಿಸ್ಥಿತಿ ನೋಡಿ ತನ್ನ ಅಪ್ಪನಿಗೆ ಹೇಳಿ ಆಕೆಯನ್ನು ತನ್ನ ಮನೆಯಲ್ಲಿಟ್ಟುಕೊಂಡು ಓದಿಸಿದಳು. ಇಂಥ ಔದಾರ್ಯ ಮೆರೆದ ಆ ಹುಡುಗಿಯನ್ನು ಮರೆಯುವದಾದರೂ ಹೇಗೆ? ಇಂಥ ಔನತ್ಯ ಎಷ್ಟು ಜನಕ್ಕೆ ಬರುತ್ತದೆ? ಮಾನವೀಯತೆಯ ಮೇಲೆ ನಾವು ಬರೇ ದೊಡ್ಡ ದೊಡ್ಡ ಭಾಷಣ ಬಿಗಿತೇವಿ, ದೊಡ್ಡ ದೊಡ್ಡ ಪುಸ್ತಕ ಬರಿತೇವಿ. ಆದ್ರ ಎಷ್ಟು ಜನ ನಾವು ಈ ಮಾನವೀಯತೆಯನ್ನು ಮೆರೆದಿದ್ದೇವೆ ಹೇಳ್ರಿ ನೋಡೋಣ? ಇದಕ್ಕಿಂತ ಹೆಚ್ಚಿಂದು ಒಬ್ಬ ಶಿಕ್ಷಕ ವಿದ್ಯಾರ್ಥಿಗಳಿಂದ ಕಲಿಯೋದಾದರು ಏನಿದೆ ಹೇಳ್ರಿ?
    ಈ ಮೇಲಿನ ವಿದ್ಯಾರ್ಥಿಗಳಿಬ್ಬರು ಸಾಮಾನ್ಯರು. ದೊಡ್ಡವರು ಮಾಡೋದು ದೊಡ್ಡದಲ್ಲ. ಸಣ್ಣವರು ಮಾಡೋದು ದೊಡ್ಡದಾಗುತ್ತೆ. ದೊಡ್ಡವರು ಮಾಡಿದ್ದನ್ನು ಹೈಲೈಟ್ ಮಾಡೋದು ಬಿಟ್ಟು ಸಣ್ಣವರ ಔದಾರ್ಯವನ್ನು ಹೈಲೈಟ್ ಮಾಡ್ರಿ. ಆಗ ನಮ್ಮ ದೇಶ ಮುಂದಕ ಬರತೈತಿ.

    • ನೀವು ಬಿ.ಎ. ಬಿ.ಇಡ್ ಅಂತೀರಿ. ಆದರೆ ಅದ್ಹೇಗೆ ಗಣಿತ ಕಲಿಸ್ತೀರಿ?

    ನಾನು ಈ ಆಶ್ರಮ ಶುರು ಮಾಡಿದಾಗ ಎಂಟು ಜನ ಇದ್ದರು. ಆಗ ನಾನು ಬರೀ ಇಂಗ್ಲೀಷ್ ಮತ್ತು ಸಮಾಜ ಹೇಳತಿದ್ದೆ. ಆದ್ರ ನಮ್ಮ ಹುಡುಗರು ಗಣಿತನೂ ಹೇಳು ಅಂದ್ರು. ನಾನು ನನಗ ಗಣಿತ ಬರಂಗಿಲ್ಲ. ಇನ್ನ ನಾ ಹೆಂಗ ನಿಮಗೆ ಹೇಳ್ಲೀ ಅಂದೆ. ಅವರು ಹೆಂಗಾರ ಮಾಡಿ ಹೇಳ್ರಿ ಅಂತಾ ಒತ್ತಾಯ ಮಾಡಾಕ ಶುರು ಮಾಡಿದರು. ಆಗ ನಮ್ಮ ಸಾಲ್ಯಾಗ ಎಸ್.ಪಿ.ಗಾರ್ಗಿ ಅಂತಾ ಒಬ್ಬರು ಗಣಿತ ಮಾಸ್ತರ್ ಇದ್ದರು. ಅವರು ಆಗಲೇ ರಿಟ್ರೈಡ್ ಆಗಿದ್ದರು. ನಾನು ದಿನಾ ಅವರ ಮನಿಗೆ ಹೋಗಿ ಗಣಿತ ಹೇಳಿಸ್ಕೊಂಡು ಬರ್ತಿದ್ದೆ. ಅದನ್ನ ಬಂದು ಹುಡುಗರಿಗೆ ಹೇಳತಿದ್ದೆ. ಹುಡುಗರಿಗೂ ಇಂಟ್ರೆಸ್ಟ್ ಬಂತು. ನಂಗೂ ಇಂಟ್ರೆಸ್ಟ್ ಬಂತು. ಹಿಂಗ ಹೇಳಕೋತ ಹೋದೆ. ಅದ ವರ್ಷsನಾ ನನ್ನ ಕೈಯಾಗ ಕಲಿತ ಒಂದು ಹುಡುಗ S.S.L.C. ಪರೀಕ್ಷೆಯಲ್ಲಿ 10ನೇ ರ್ಯಾಂಕ್ ಬಂದ. ನನಗ ಬಾಳ ಖುಶಿ ಆತು. ಮುಂದ 1981ರಾಗ Text Books ಚೇಂಜ್ ಆದವು. ಆಗ ಕಾಲೇಜು ಮಾಥ್ಸ್ ಇಟ್ರು. ನನಗ ಈ ಮ್ಯಾಥ್ಸ್ ಬರ್ತಾನ ಇರಲಿಲ್ಲ. ಆಗ ನನ್ನ ಕೈಯಾಗ ಕಲಿತ ಹುಡುಗನೊಬ್ಬ ಕಾಲೇಜಿನ್ಯಾಗ ಮ್ಯಾಥ್ಸ್ ಲೆಕ್ಚರರ್ ಆಗಿದ್ದ. ಅವನ್ನ ಕರಿಸಿ ನೀನು ಪಾಠ ಮಾಡು ನಾನು ಕೇಳ್ತೀನಿ ಅಂದೆ. ಅವ ಆ ರೀತಿ ಪಾಠ ಮಾಡ್ಕೋತ ಹೋದ. ನಾನು ಕೇಳ್ಕೋತ ಹೋದೆ. ಎಲ್ಲಾ ಕೇಳಕೊಂಡ ಮ್ಯಾಲೆ ನಾನು ಕಲಿಸೋಕ ಶುರು ಮಾಡಿದೆ. ಹಿಂಗ ನಾನೂ ಒಬ್ಬ ಗಣಿತದ ಮಾಸ್ತರ್ ಆದೆ.



    • ಈ ಸಂದರ್ಭದಲ್ಲಿ ನೀವು ಶಿಕ್ಷಕರಿಗೆ ಏನಾದ್ರೂ ಕಿಮಾತು ಹೇಳ್ತೀರಾ?

    ಅಯ್ಯಯ್ಯೊ! ನಾನು ಕಿವಿಮಾತು ಹೇಳುವಷ್ಟು ದೊಡ್ಡವನಲ್ರಿ. ಆದ್ರ ಒಂದ ಒಂದು ಮಾತು ಏನು ಹೇಳ್ತೀನಿ ಅಂದ್ರ ಪಾಠದ ವಿಷಯದಲ್ಲಿ ನಿಮ್ಮನ್ನು ನಂಬಿಕೊಂಡು ಬಂದ ಮಕ್ಕಳಿಗೆ ಮೋಸ ಮಾಡಬ್ಯಾಡ್ರಿ ಅಷ್ಟ.

    • ನಿಮ್ಮ ನಂತರ ಈ ಆಶ್ರಮದ ಉಸ್ತುವಾರಿ ಯಾರು ವಹಿಸಿಕೊಳ್ಳುತ್ತಾರೆ? ಈ ಪರಂಪರೆ ಹೀಗೆ ಮುಂದುವರಿಯುತ್ತಾ?

    God alone knows! ಮರಿಸ್ವಾಮಿ ಬಿಡಾಕ ನಾ ಏನ್ ಮಠ ಕಟ್ಟೇನೇನ್ರೀ? ನಂಗ ಮೊನ್ನೆ ಒಂದಷ್ಟು ಜನ ಬಂದು ನಿಮ್ಮ ಹಸರಿನ್ಯಾಗ ಒಂದು ಟ್ರಸ್ಟ್ ಮಾಡ್ತೀವಿ ಅಂತಾ ಹೇಳಿದ್ರು. ನಾನು ಬ್ಯಾಡ ಅಂದೆ. ಯಾಕಂದ್ರ ನನ್ನ ಹೆಸರಿನ್ಯಾಗ ಟ್ರಸ್ಟ್ ಮಾಡೋದು, ಸಂಸ್ಥೆ ಕಟ್ಟೋದು ನಂಗ ಇಷ್ಟ ಇಲ್ಲ. ಯಾಕಂದ್ರ ಒಂದು ಟ್ರಸ್ಟ್ ಆಂತಾದ್ರ ಮುಂದ ಅದಕ ಒಬ್ಬ ಪ್ರಸಿಡೆಂಟ್ ಅಂತಾ ಆಗಬೇಕು, ಸೆಕ್ರೇಟರಿ ಅಂತಾ ಆಗಬೇಕು. ಇನ್ನ ಆ ಅಧಿಕಾರಕ್ಕೆ ಜಗಳ ಶುರು ಆಕೈತಿ. ಹಣದ ದುರಪಯೋಗವೂ ಆಗಬಹುದು. ನನ್ನ ಹೆಸರಿನ್ಯಾಗ ಇದೆಲ್ಲಾ ನಡೆಯೋದು ನಂಗೆ ಒಂಚೂರು ಇಷ್ಟ ಇಲ್ಲ. ಹಿಂಗಾಗಿ ನನ್ನ ತರಾನ ಯೋಚ್ನೆ ಮಾಡೋರು ಯಾರದರೂ ಇದನ್ನು ನಡೆಸಿಕೊಂಡು ಹೋದ್ರೂ ಸಂತೋಷ. ಹೋಗದಿದ್ದರೂ ಸಂತೋಷ. (ನಗತೊಡಗಿದರು)


    ಅಣ್ಣಿಗೇರಿ ಮಾಸ್ತರರೊಂದಿಗೆ ಮಾತನಾಡುವದೆಲ್ಲಾ ಮುಗಿದ ಮೇಲೆ “ಸರ್, ನಿಮ್ಮ ಆಶ್ರಮಕ್ಕೆ ಏನಾದರೂ ಬೇಕಾದ್ರೆ ಹೇಳಿ. ಕೊಡಿಸಿ ಹೋಗ್ತೀನಿ. ಇಲ್ಲ ಅಂದ್ರ ದುಡ್ಡು ಕೊಡ್ತಿನಿ ನಿಮಗ ಹೆಂಗ ಬೇಕೋ ಹಂಗ ಉಪಯೋಗಿಸಿಕೊಳ್ಳಿ” ಎಂದು ಚೆಕ್ ಕೊಡಲು ಹೋದಾಗ ಅತ್ಯಂತ್ರ ವಿನಮ್ರರಾಗಿ ಏನೂ ಬೇಡ ಎಂದು ನಿರಾಕರಿಸಿದರು. ನಾನು ಮತ್ತೆ ಮತ್ತೆ ಒತ್ತಾಯಿಸಿದೆ. ಆದರೆ ಅವರು ಏನೂ ಮಾಡಿದರೂ ತೆಗೆದುಕೊಳ್ಳಲಿಲ್ಲ. ಸರ್, ನಿಮಗೆ ನಿಮ್ಮ ಪಿಂಚಣಿಯೊಂದರಿಂದಲೇ ಇಲ್ಲಿರುವ ಮಕ್ಕಳಿಗೆ ಊಟ ಹಾಕುವದು ಕಷ್ಟವಾಗಬಹುದು. ದಯವಿಟ್ಟು ತೆಗೆದುಕೊಳ್ಳಿ ಎಂದೆ. ಅವರು ಸಧ್ಯ ಈಗ ಎಲ್ಲ ಇದೆ. ಮುಂದೆ ಬೇಕಾದರೆ ಕೇಳುತ್ತೇನೆ ಎಂದರು. ನಾನು ನನ್ನ ಬೆಂಗಳೂರಿನ ವಿಳಾಸ ಹಾಗೂ ಫೋನ್ ನಂಬರ್ ಕೊಟ್ಟು ಬಂದೆ.

    ಬರುವಾಗ ತಲೆತುಂಬಾ ಮಾಸ್ತರರದೇ ಧ್ಯಾನ. ಎಂಥ ಅದ್ಭುತ ವ್ಯಕ್ತಿತ್ವ! ಎಂಥ ವಿಶಾಲ ಹೃದಯ! ಎಂಥ ಅದ್ಭುತ ಶಿಕ್ಷಕ! ಇವರ ನಡೆ ನುಡಿ ನಮಗೆಲ್ಲಾ ಮಾದರಿಯಾಗಲಿ, ಸ್ಪೂರ್ತಿಯಾಗಲಿ, ದಾರಿದೀಪವಾಗಲಿ. ಶಿಕ್ಷಕರ ದಿನಾಚಾರಣೆಯಂದು ನಾವು ನಮ್ಮ ಶಿಕ್ಷಕರಿಗೆ ವಿಶ್ ಮಾಡುವದರ ಜೊತೆಗೆ ಇಂಥವರನ್ನು ಹುಡುಕಿ ತೆಗೆದು ಅವರನ್ನು ಸನ್ಮಾನ ಮಾಡಿದರೆ ಆ ಆಚರಣೆಗೊಂದು ಅರ್ಥವಾದರೂ ಸಿಕ್ಕೀತು. ಅಲ್ಲವೇ?

    -ಉದಯ್ ಇಟಗಿ

    ಈ ಲೇಖನ ಸಪ್ಟಂಬರ್ 5, 2011 ರ ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ. http://kendasampige.com/article.php?id=4703

    ಫೋಟೋಗಳು: ಶಿವರಾಜ್ ಗೌರಿಪೂರು

    ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ........

  • ಭಾನುವಾರ, ಆಗಸ್ಟ್ 21, 2011
  • ಬಿಸಿಲ ಹನಿ
  • ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ
    ಎಲ್ಲಿ ಮತ್ತು ಹೇಗೆ? – ನನಗೆ ಗೊತ್ತಿಲ್ಲ.
    ಬಹುಶಃ, ನಾನು ನೀನು ಬಿಡಿಸುವ ಚಿತ್ರಕ್ಕೆ
    ಕಲ್ಪನೆಯ ವಸ್ತುವಾಗಬಹುದು.
    ಅಥವಾ ನಿನ್ನ ಕ್ಯಾನ್ವಾುಸ್ ಮೇಲೆ
    ನೀನೆ ಬಿಡಿಸಿಟ್ಟ ನಿಗೂಢ ಗೆರೆಗಳೆಲ್ಲೆಲ್ಲೋ ಅಡಗಿಕೊಂಡು
    ನಿಧಾನವಾಗಿ ಕ್ಯಾನ್ವಾೂಸ್ ತುಂಬಾ ಹರಡಿಕೊಂಡು
    ನಿನ್ನನ್ನೇ ದಿಟ್ಟಿಸಿ ನೋಡುತ್ತಾ ಕುಳಿತುಕೊಳ್ಳಬಹುದು.

    ಪ್ರಾಯಶಃ, ನಾನೊಂದು ಸೂರ್ಯ ರಶ್ಮಿಯಾಗಿ
    ನಿನ್ನ ಬಣ್ಣಗಳ ಆಲಿಂಗನದಲ್ಲಿ ಕಳೆದುಹೋಗಬಹುದು.
    ಇಲ್ಲವೇ ನಿನ್ನ ಕ್ಯಾನ್ವಾ್ಸ್ ಮೇಲೆ
    ನಾನೇ ಬಣ್ಣ ಬಳಿದುಕೊಂಡು
    ಒಂದು ಚಿತ್ರವಾಗಿ ಮೂಡಬಹುದು.
    ಒಟ್ಟಿನಲ್ಲಿ ಖಂಡಿತ ನಿನ್ನ ಸಂಧಿಸುತ್ತೇನೆ
    ಆದರೆ ಹೇಗೆ ಮತ್ತು ಎಲ್ಲಿ? – ನನಗೆ ಗೊತ್ತಿಲ್ಲ.

    ಬಹುಶಃ, ನಾನೊಂದು ನೀರಿನ ಬುಗ್ಗೆಯಾಗಬಹುದು.
    ಬುಗ್ಗೆಯಾಗಿ ಅದರಿಂದ ಉಕ್ಕುವ
    ನೊರೆನೊರೆ ನೀರಿನ ಹನಿಗಳನ್ನು
    ನಿನ್ನ ಎದೆಯ ಮೇಲೆ ಚಿಮುಕಿಸಿ ಉಜ್ಜುತ್ತೇನೆ.
    ಉಜ್ಜುತ್ತಾ ಉಜ್ಜುತ್ತಾ ನಿನ್ನನ್ನು ನನ್ನೆದೆಗೆ ಒತ್ತಿಕೊಂಡು ಮುತ್ತಿಡುತ್ತೇನೆ
    ನನಗೆ ಇದು ಬಿಟ್ಟರೆ ಬೇರೇನೂ ಗೊತ್ತಿಲ್ಲ
    ಏನಾದರಾಗಲಿ, ನಾನು ಮತ್ತೆ ನಿನ್ನೊಂದಿಗಿರುತ್ತೇನೆ.


    ಈ ದೇಹ ಹೋದರೆ
    ಎಲ್ಲವೂ ಹೋದಂತೆ.
    ಆದರೆ ಅದರೊಂದಿಗೆ ಹೆಣೆದುಕೊಂಡ
    ನೆನಪಿನ ದಾರದುಂಡೆಗಳು
    ಮತ್ತೆ ಎಳೆ ಎಳೆಯಾಗಿ ಬಿಚ್ಚಿಕೊಳ್ಳತೊಡಗುತ್ತವೆ.
    ನಾನು ಆ ಎಳೆಗಳನ್ನೆ ಹಿಡಿದುಕೊಂಡು
    ಮತ್ತೆ ದಾರದುಂಡೆಗಳನ್ನಾಗಿ ಸುತ್ತುತ್ತೇನೆ.
    ಸುತ್ತುತ್ತಾ ಸುತ್ತುತ್ತಾ ಅಲ್ಲಿ ನಿನ್ನ ಕಾಣುತ್ತೇನೆ.
    ಆ ಮೂಲಕ ಮತ್ತೆ ನಿನ್ನನ್ನು ಬಂದು ಸೆರುತ್ತೇನೆ..

    ಮೂಲ ಪಂಜಾಬಿ; ಅಮೃತಾ ಪ್ರೀತಂ
    ಇಂಗ್ಲೀಷಿಗೆ: ನಿರುಪಮಾ ದತ್ತ
    ಕನ್ನಡಕ್ಕೆ: ಉದಯ್ ಇಟಗಿ
    (ಕವಯತ್ರಿ ಅಮೃತಾ ಪ್ರೀತಂ ಕಾಯಿಲೆಯಿಂದ ಹಾಸಿಗೆ ಹಿಡಿದಾಗ ತನ್ನ ಪತಿ ಇಮ್ರೋಜ್ ಗೋಸ್ಕರ ಈ ಕವನ ಬರೆದಿದ್ದು. ಇಮ್ರೋಜ್ ಒಬ್ಬ ಚಿತ್ರಕಲಾವಿದನಾಗಿದ್ದ.)




    ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು - ನನ್ನದಲ್ಲದ ಹೆಸರಿನಲ್ಲಿ ಬರೆಯುವ ಖುಶಿ!

  • ಶುಕ್ರವಾರ, ಜುಲೈ 01, 2011
  • ಬಿಸಿಲ ಹನಿ


  • ಈ ಜಗತ್ತಿನಲ್ಲಿ ಹೆಸರಿಲ್ಲದವರು ಯಾರು ಇದ್ದಾರೆ ಹೇಳಿ? ಎಲ್ಲರಿಗೂ ಏನಾದರೊಂದು ಹೆಸರಿದ್ದೇ ಇರುತ್ತದಲ್ಲವೆ? ಹೀಗಾಗಿ ಎಲ್ಲರಿಗೂ ಇರುವಂತೆ ನಂಗೂ ಒಂದು ಹೆಸರು ಅಂತಾ ಇದೆ. ನಂಗೂ ನನ್ನದೇ ಆದಂತ ಒಂದು ಅಸ್ಥಿತ್ವ, ಊರು-ಕೇರಿ, ದೆಸೆ-ದಿಕ್ಕು ಎಲ್ಲ ಇವೆ. ಜೊತೆಗೆ ಒಂದಿಷ್ಟು ಬಂಧುಗಳು, ಹಿತೈಷಿಗಳು, ಗೆಳೆಯರು, ಶತ್ರುಗಳು ಎಲ್ಲರೂ ಇದ್ದಾರೆ. ಆದರೂ ನಾನೊಬ್ಬ ಅನಾಮೇಧಯ! ಹಾಗಂತ ನನ್ನನ್ನು ನಾನೇ ಕರೆದುಕೊಂಡಿದ್ದೇನೆ. ಹೆಸರಿದ್ದೂ ‘ನಾನೊಬ್ಬ ಅನಾಮೇಧಯ’ ಅಂತಾ ಹೇಳಿಕೊಳ್ಳುವದರಲ್ಲಿನ ನಿಜವಾದ ಖುಶಿ, ಆತ್ಮತೃಪ್ತಿ, ಪ್ರಾಮಾಣಿಕತೆ ಬೇರೆ ಯಾವುದರಲ್ಲೂ ಸಿಗುವದಿಲ್ಲ. ಏಕೆಂದರೆ ನಮ್ಮದಲ್ಲದ ಹೆಸರಿನಲ್ಲಿ ನಾವು ಬರೆದಾಗಲೇ ನಾಚಿಕೆ, ಮಾನ, ಅಪಮಾನಗಳ ಹಂಗನ್ನು ತೊರೆದು ಎಲ್ಲವನ್ನು ಬಿಚ್ಚಿಟ್ಟು ಬೆತ್ತಲಾಗೋಕೆ ಸಾಧ್ಯ. ನಾವು ಬದುಕುತ್ತಾ ಬದುಕುತ್ತಾ ನಾವಾಗಿ ಬದುಕಲಾಗುವದಿಲ್ಲ. ಅಥವಾ ಪರಿಸ್ಥಿತಿಗಳು ನಮ್ಮನ್ನು ಹಾಗೆ ಬದುಕಲು ಬಿಡುವದಿಲ್ಲ. ನಾವೆಲ್ಲಾ ಬದುಕುವದು ಒಳಗೊಂದು ಹೊರಗೊಂದರಂತೆ! ನಾವು ಎಷ್ಟೇ ನಾವು ನಾವಾಗಿ ಬದುಕುತ್ತೇವೆಂದರೆ ಅದು ಸಾಧ್ಯವಾಗುವದೇ ಇಲ್ಲ. ಒಂದೊಂದು ಸಾರಿ ನಮ್ಮೊಳಗೆ ನಾವೇ ಪ್ರಾಮಾಣಿಕರಾಗಿರುವದು ಕಷ್ಟವಾಗುತ್ತದೆ. ಹೀಗಾಗಿ ಈ ಬರಹದಲ್ಲಾದರೂ ನನ್ನೊಳಗನ್ನು ಒಮ್ಮೆ ಬಿಚ್ಚಿ ಬೆತ್ತಲಾಗಬೇಕು, ನನ್ನ ಸಾಚಾತನವನ್ನು ನಾನೇ ಬಯಲಿಗೆಳೆಯಬೇಕು, ನನ್ನ ಅಂತರಂಗದೊಡನೆ ನಾನೇ ಮುಖಾಮುಖಿಯಾಬೇಕು ಹಾಗೂ ಆ ಮೂಲಕ ನನ್ನನ್ನು ಇನ್ನೊಮ್ಮೆ ನಾನೇನೆಂದು ಕಂಡುಕೊಳ್ಳಬೇಕಾಗಿದೆ. ಹಾಗೆಂದೇ ಈ ಡೈರಿ ಬರೆಯುತ್ತಿದ್ದೇನೆ......

    ಹೀಗೆ ನನ್ನನ್ನು ನಾನು ನಾನಿರುವಂತೆ ನನ್ನ ನಿಜ ನಾಮಧೇಯದಲ್ಲಿ ಬಿಚ್ಚಿಟ್ಟರೆ ನನ್ನ ಹೆಸರಿಗೊಂದು ಕಳಂಕ ಅಂಟಿಕೊಳ್ಳಬಹುದು ಎಂಬ ಆತಂಕ ನನಗಿದೆ. ಅದು ನನಗಿಷ್ಟವಿಲ್ಲ. ಇಷ್ಟವಿಲ್ಲ ಎನ್ನುವದಕ್ಕಿಂತ ಎಲ್ಲವನ್ನೂ ಬಿಚ್ಚಿಟ್ಟು ನಿಮ್ಮ ಮುಂದೆ ಬೆತ್ತಲಾಗುವ ಧೈರ್ಯ ನನಗಿಲ್ಲ. ಅಥವಾ ನನ್ನ ಬಗ್ಗೆ ಎಲ್ಲವನ್ನೂ ತಿಳಿಸಿ ಆಮೇಲಿಂದ ನಿಮ್ಮೊಂದಿಗೆ ಮುಜುಗುರಕ್ಕೀಡಾಗುವ ಪ್ರಸಂಗಗಳನ್ನೆದುರಿಸುವ ತಾಕತ್ತೂ ನನಗಿನ್ನೂ ಬಂದಿಲ್ಲ. ಒಂದು ವೇಳೆ ನಾನು ನನ್ನ ನಿಜವಾದ ಹಸರಿನಲ್ಲಿಯೇ ಬರೆದೆನೆಂದು ಇಟ್ಟುಕೊಳ್ಳಿ. ಆಗ ನನ್ನ ನೇರತನ, ಪ್ರಾಮಾಣಿಕತೆಯನ್ನು ನೀವು ಈಗ ಒಪ್ಪಿಕೊಂಡರೂ ಮುಂದೆ ಎಂದಾದರೂಂದು ದಿನ ಅದನ್ನು ಎತ್ತಿ ಆಡುವ, ಆಡಿಕೊಳ್ಳುವ, ಛೇಡಿಸುವ, ಛೇದಿಸುವ, ಚುಡಾಯಿಸುವ ಇಲ್ಲವೇ ಗೇಲಿ ಮಾಡುವ ಸಂಭವನೀಯತೆ ಇರುತ್ತದಾದ್ದರಿಂದ ನಾನು ನನ್ನದಲ್ಲದ ಹೆಸರಿನಲ್ಲಿ ಬರೆಯುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ನನ್ನ ಬಗ್ಗೆ ಬರೆದುಕೊಳ್ಳಬೇಕಾದರೆ ಸಹಜವಾಗಿ ನನ್ನ ಆಪ್ತವಲಯದವರ, ಬಂಧುಗಳ, ಸ್ನೇಹಿತರ ಬಗ್ಗೆಯೂ ಒಂಚೂರು ಹೇಳಬೇಕಾಗುತ್ತದೆ. ನಾನು ಹೀಗೆ ನೇರಾ ನೇರಾ ಅವರೆಲ್ಲರ ಅಪ್ಪಣೆಯಿಲ್ಲದೆ ಅವರ ಬಗ್ಗೆ ಬರೆದರೆ ಅವರಿಗೆ ಖಂಡಿತ ನೋವಾಗುತ್ತದೆ. ಒಂದು ವೇಳೆ ಅಪ್ಪಣೆ ಸಿಕ್ಕರೂ ತಮ್ಮ ಬಗ್ಗೆ ಕೆಟ್ಟ ಸಂಗತಿಗಳು ದಾಖಲಾಗುವದನ್ನು ಅವರು ಸಹಿಸಲಾರರು. ಏಕೆಂದರೆ ಅವರಿಗೆ ಅವರ ತಪ್ಪು-ಒಪ್ಪುಗಳು, ಅಂಕುಡೊಂಕುಗಳು, ಓರೆಕೋರೆಗಳು ಬಹಿರಂಗವಾಗುವದು ಇಷ್ಟವಾಗುವದಿಲ್ಲ. ಜಗತ್ತು ಇರುವದೇ ಹಾಗೆ! ಜನ ತಮ್ಮ ತಪ್ಪುಗಳನ್ನು ಎತ್ತಿ ತೋರಿಸಿ, ತಿದ್ದಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಆದರೆ ಹಾಗೆ ತೋರಿಸ ಹೊರಟರೆ ಖಂಡಿತ ಅವರಿಗದು ಇಷ್ಟವಾಗುವದಿಲ್ಲ. ಇನ್ನು ತಿದ್ದಿಕೊಳ್ಳುವ ಮಾತಂತೂ ದೂರವೇ ಉಳಿಯಿತು. ಇದು ನಾನು ಬುದ್ಧಿ ಬಂದಾಗಿನಿಂದ ಕಂಡುಕೊಂಡ ಸತ್ಯ! ಮೇಲಾಗಿ ನನಗೂ ಅವರ ಬಗ್ಗೆ ಹಾಗೆಲ್ಲಾ ಖುಲ್ಲಂಖುಲ್ಲಾ ಬರೆದು ಅವರಿಗೆ ಮುಜುಗುರವನ್ನಾಗಲಿ, ಕಸಿವಿಸಿಯನ್ನಾಗಲಿ ಉಂಟುಮಾಡಲು ಇಷ್ಟವಿಲ್ಲ.

    ಹೀಗಾಗಿ ನಾನು ಅನಾಮೇಧಯ ಎಂಬ ಹಸರಿನಲ್ಲೇ ನನ್ನ ಡೈರಿಯನ್ನು ಬರೆಯುತ್ತೇನೆ. ಬೇಕಾದರೆ ನೀವು ನಿಮ್ಮ ಗುರುತಿಗೋಸ್ಕರ ನನ್ನನ್ನು ‘ಇಂತಿಂಥಾ ಜಿಲ್ಲೆಯ ಇಂತಿಂಥಾ ತಾಲೂಕಿನ ಇಂತಿಪ್ಪ ಪುಟ್ಟಹಳ್ಳಿಯಲ್ಲಿ ಇಂತೆಂಬವರಿಗೆ ಹುಟ್ಟಿದ ಇಂತಿಪ್ಪ ಎಂಬಾತ ಈಗ ಈ ಡೈರಿಯನ್ನು ಬರೆಯುತ್ತಿದ್ದಾನೆ’ ಎಂದು ಗುರುತಿಸಿಕೊಳ್ಳಿ. ನ್ನನ್ನದೇನೂ ಅಭಂತರವಿಲ್ಲ. ಆದರೆ ನಾನ್ಯಾರಿರಬಹುದು ಎಂದು ತಿಳಿದುಕೊಳ್ಳುವ ಹುಚ್ಚು ಸಾಹಸಕ್ಕೆ ಮಾತ್ರ ಕೈ ಹಾಕಬೇಡಿ. ಒಂದು ವೇಳೆ ಹುಡುಕಲು ಪ್ರಯತ್ನಪಟ್ಟರೂ ನಾನು ಹೊರಗೆಲ್ಲಿ ಸಿಗುವದಿಲ್ಲ. ಏಕೆಂದರೆ ನಾನು ನಿಮ್ಮೊಳಗೇ ಅಡಗಿ ಕುಳಿತಿದ್ದೇನೆ. ಇಲ್ಲಿ ನಾನು ಬರೆದುಕೊಳ್ಳುವದು ನನ್ನ ಬಗ್ಗೆಯೇ! ಆದರೆ ಮನುಷ್ಯ ಸದಾ ಒಂಟಿಯಾಗಿರಲು ಸಾಧ್ಯವಿಲ್ಲ ನೋಡಿ. ಹೀಗಾಗಿ ನನ್ನೊಂದಿಗೆ ನನ್ನ ಒಂದಿಷ್ಟು ಗೆಳೆಯರು, ಗೆಳತಿಯರು, ಬಂಧುಗಳು ಹಾಗು ಇತರೆ ಜನರು ಆಗಾಗ್ಗೆ ಈ ಡೈರಿಯಲ್ಲಿ ಬಂದು ಹೋಗುತ್ತಾರೆ. ಆಫ್ಕೋರ್ಸ್, ಅವರಿಗೂ ನನ್ನಂತೆಯೇ ಹೆಸರಿದೆಯಾದರೂ ಅವರನ್ನು ಅವರ ನಿಜದ ಹೆಸರಿನಲ್ಲಿ ಕರೆದು ಅವರ ಹೆಸರುಗಳನ್ನು ಬಹಿರಂಗಪಡಿಸುವದಿಲ್ಲ. ನಿಮಗೆ ಓದುವಾಗ ನಿಮ್ಮ ತಿಳುವಳಿಕಿಗಿರಲಿ ಹಾಗೂ ನಿಮಗೆ ಅರ್ಥಮಾಡಿಕೊಳ್ಳಲು ಯಾವುದೇ ಗೊಂದಲವಾಗಬಾರದೆಂದು ಅವರಿಗೆಲ್ಲಾ ಸುಳ್ಳು ಸುಳ್ಳು ಹೆಸರುಗಳನ್ನು ನೀಡಿದ್ದೇನೆ.

    ನನಗೆ ಮೊದಲಿನಿಂದಲೂ ಒಂದು ಆಸೆಯಿತ್ತು: ನಾನಿರುವಂತೆ ನನ್ನ ಬಗ್ಗೆ ಬರೆದುಕೊಳ್ಳಬೇಕೆಂದು. ಅದು ಇವತ್ತು ಕೂಡಿ ಬಂದಿದೆ. ಬರೆಯುತ್ತಾ ಬರೆಯುತ್ತಾ ಯಾವುದೇ ಮುಚ್ಚುಮರೆಯಿಲ್ಲದೆ ನನ್ನೊಳಗನ್ನು ಒಮ್ಮೆ ನಿಮ್ಮ ಮುಂದೆ ತೆರೆದಿಡಬೇಕು, ನಿಮ್ಮೊಡನೆ ಒಮ್ಮೆ ಹಂಚಿಕೊಳ್ಳಬೇಕು, ಹಂಚಿ ಹಗುರಾಗಬೇಕು, ನೀವದನ್ನು ಕೇಳುತ್ತಾ ಕೇಳುತ್ತಾ ನಿಮ್ಮನ್ನು ನೀವು ನನ್ನೊಂದಿಗೆ ಗುರುತಿಸಕೊಳ್ಳಬೇಕು ಎಂದು. ಏಕೆಂದರೆ ನಾನು ಎಂಬುದು ಬರಿ ನಾನು ಮಾತ್ರವಲ್ಲ. ಅಲ್ಲಿ ನೀವಿದ್ದೀರಿ. ಅವನಿದ್ದಾನೆ. ಅವಳಿದ್ದಾಳೆ. ಅವರಿದ್ದಾರೆ, ಇವರಿದ್ದಾರೆ. ಇನ್ನೂ ಯಾರ್ಯಾರೋ ಇದ್ದಾರೆ. ಹೀಗಾಗಿ ನನ್ನಲ್ಲಿ ನೀವು ನಿಮ್ಮದೇ ಪ್ರತಿಬಿಂಬವನ್ನು, ನಿಮ್ಮ ಗೆಳೆಯ, ಗೆಳತಿಯರ ಪ್ರತಿಬಿಂಬಗಳನ್ನು ಅಥವಾ ನಿಮಗೆ ಹತ್ತಿರದವರ ಪ್ರತಿಬಿಂಬಗಳನ್ನು ಕಂಡರೆ ಅಚ್ಚರಿಯೇನಿಲ್ಲ. ಅಷ್ಟಕ್ಕೂ ನಾನಿಲ್ಲಿ ಬರೆಯುವದಾದರೂ ಏನನ್ನು? ನನ್ನ ಒಂದಿಷ್ಟು ಕನಸು-ಕನವರಿಕೆಗಳನ್ನು, ನೆನಪು-ನೇವರಿಕೆಗಳನ್ನು, ತವಕ-ತಲ್ಲಣಗಳನ್ನು, ನೋವ-ನಲಿವುಗಳನ್ನು, ಆಸೆ-ನಿರಾಶೆಗಳನ್ನು, ನನ್ನೊಳಗೇ ಹುಟ್ಟಿ ಸಾಯುವ ನನ್ನ ಒಂದಿಷ್ಟು ದ್ವಂದಗಳನ್ನು, ತಳಮಳಗಳನ್ನು, ಬದುಕಿನ ವಿಪರ್ಯಾಸಗಳನ್ನು ಹೀಗೆ ಇನ್ನೂ ಏನೇನೋ..........ಜೊತೆಗೆ ನನ್ನೊಳಗಿನ ಒಂದಷ್ಟು ಪುಳಕವನ್ನು, ಆತ್ಮವಂಚನೆಯನ್ನು, ಈರ್ಷೆಯನ್ನು, ಅಸಹಾಯಕತೆಯನ್ನು ಮತ್ತು ಯಾರೊಂದಿಗೂ ಹಂಚಿಕೊಳ್ಳಲಾಗದೆ ನನ್ನೊಳಗೇ ಬಚ್ಚಿಟ್ಟ ನನ್ನ ಒಂದಿಷ್ಟು ಪ್ರೇಮ-ಕಾಮಗಳನ್ನು ಹಾಗೂ ಮನುಷ್ಯ ಸಹಜ ದೌರ್ಬಲ್ಯಗಳಾದ ನನ್ನ ಸಿಟ್ಟು, ಆಕ್ರೋಶಗಳನ್ನು.

    ಅಂದಹಾಗೆ ನಾನಿಲ್ಲಿ ಎದ್ದೆ, ಕೂತೆ, ತಿಂದೆ, ತಿರುಗಾಡಿದೆ ಎಂಬಂತಹ ನೀರಸ ವಿಷಯಗಳನ್ನು ಬರೆಯುಲು ಹೋಗುವದಿಲ್ಲ. ನಾ ಕಂಡಿದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು ನನಗೆ ಬಿಡುವಾದಾಗ ನೇರಾನೇರ ದಾಖಲಿಸುತ್ತಾ ಹೋಗುತ್ತೇನಷ್ಟೆ. ಅದರಲ್ಲಿ ವರ್ತಮಾನ, ಭೂತ, ಭವಿಷತ್ ಕಾಲದ ಸಂಗತಿಗಳೆಲ್ಲಾ ಅಡಗಿರುತ್ತವೆ. ನೀವು ಬೇಕಾದರೆ ನನ್ನನ್ನು ಮೂರ್ಖನೆನ್ನಿ, ಹುಚ್ಚನೆನ್ನಿ, ವಿಕ್ಷಿಪ್ತ ಮನಸ್ಸಿನವನೆನ್ನಿ ಏನು ಬೇಕಾದರೂ ಅನ್ನಿ. ಐ ಡೋಂಟ್ ಕೇರ್!

    ಮತ್ತೊಂದು ವಿಷ್ಯ. ಒಬ್ಬ ಮನುಷ್ಯನ ಬದುಕಿನಲ್ಲಿ ಕೆಲವೊಂದಿಷ್ಟ ದಿನಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ದಿನಗಳು ಪ್ರಮುಖವಾಗಿರುವದಲ್ಲಿವಾದ್ದರಿಂದ ನಾನು ನನ್ನ ಡೈರಿಯಲ್ಲಿ ದಿನಾಂಕವನ್ನು ನಮೂದಿಸುವ ಗೋಜಿಗೆ ಹೋಗಿಲ್ಲ. ಏನಾದರೊಂದು ಮಹತ್ತರವಾದದ್ದು ನಡೆದ ದಿನವನ್ನು ಮಾತ್ರ ಆ ದಿನಾಂಕ ಸಮೇತ ನಮೂದಿಸುತ್ತೇನೆ.

    ಇನ್ನೊಂದು ವಿಷ್ಯ: ಮನುಷ್ಯರ ಬಗ್ಗೆ ಆಸಕ್ತಿಯಿರಬೇಕೇ ಹೊರತು ಕುತೂಹಲವಿರಬಾರದು. ಇಷ್ಟು ಸಾಕಲ್ಲವೆ? ಸಧ್ಯಕ್ಕೆ ಈ ಡೈರಿಯನ್ನು ಮುಚ್ಚಿಡಿ. ಮತ್ತೆ ಬಿಡುವಾದಾಗ ಮತ್ತೊಂದು ವಿಷಯವನ್ನು ಬರೆದಿಟ್ಟಿರುತ್ತೇನೆ. ಆಗ ಬಂದು ಓದಬಹುದು. ಅಲ್ಲಿಯವರೆಗೆ ಬೈ ಬೈ.......

    ‘ಪುಟ್ಟಕ್ಕನ ಹೈವೇ’ ನಲ್ಲಿ ಒಂದಷ್ಟು ಹೊತ್ತು..............

  • ಭಾನುವಾರ, ಮೇ 29, 2011
  • ಬಿಸಿಲ ಹನಿ

  • ಮೊಟ್ಟ ಮೊದಲಿಗೆ ನಾನು ಬಿ. ಸುರೇಶ್ ಅವರಿಗೆ ಒಂದು ಹ್ಯಾಟ್ಸಾಫ್ ಹೇಳುತ್ತೇನೆ-ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಪುಟ್ಟಕ್ಕನ ಮೆಡಿಕಲ್ ಕಾಲೇಜು’ ಎನ್ನುವ ಸಣ್ಣಕತೆಯೊಂದನ್ನು ‘ಪುಟ್ಟಕ್ಕನ ಹೈವೇ’ ಎಂಬ ಸುಮಾರು ಎರಡು ಗಂಟೆಗಳಷ್ಟು ಅದ್ಭುತ ಸಿನಿಮಾವೊಂದನ್ನಾಗಿ ಮಾರ್ಪಡಿಸಿದ್ದಕ್ಕೆ. ಬಿ.ಸುರೇಶ್ ಅವರ ಬಹಳಷ್ಟು ಟೀವಿ ಧಾರಾವಾಹಿಗಳು ಹತ್ತರಲ್ಲಿ ಹನ್ನೊಂದಾಗಿ ಹೊರಬರುತ್ತವೆಯಾದರೂ ಅವರು ಆಗೊಮ್ಮೆ ಈಗೊಮ್ಮೆ ತಯಾರಿಸುವ ಸಿನಿಮಾಗಳು ಅತ್ಯದ್ಭುತವಾಗಿರುತ್ತವೆ. ಈ ಹಿಂದೆ ಅವರು ತಯಾರಿಸಿದ ‘ಅರ್ಥ’ ಸಿನಿಮಾ ಕೂಡ ಒಳ್ಳೆಯ ಸಿನಿಮಾವಾಗಿದ್ದು, ಅದು ಮೊದಲ ಅತುತ್ತಮ ಚಲನಚಿತ್ರವೆಂದು ರಾಜ್ಯ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತ್ತು. ಈ ಸಿನಿಮಾದ ನಾಯಕ ಎಲ್ಲವನ್ನೂ ಎಲ್ಲರನ್ನೂ ಅರ್ಥಮಾಡಿಕೊಳ್ಳಲು ಹೋಗಿ ಕೊನೆಗೆ ಏನೂ ಅರ್ಥವಾಗದೆ ಕಂಗಾಲಾಗುತ್ತಾನೆ. ಆ ಮೂಲಕ ಸುರೇಶ್ ಅವರು ಇಲ್ಲಿ ಮನುಷ್ಯರು ಹಾಗೂ ಅವರ ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲುಹೋದಷ್ಟೂ ಅವರು ಸಂಕೀರ್ಣವಾಗುತ್ತಾ ಹೋಗುತ್ತಾರೆ ಎನ್ನುವ ಸಂದೇಶವನ್ನು ಕೊಡುತ್ತಾರೆ. ಆದರೆ ಈ ಸಾರಿ ಸಣ್ಣಕತೆಯೊಂದನ್ನು ತೆಗೆದುಕೊಂಡು ಅದನ್ನು ಸಮಕಾಲೀನ ಸಮಸ್ಯೆಗಳಿಗೆ ಸರಿಹೊಂದುವಂತೆ ಮಾರ್ಪಡಿಸಿ ಅದನ್ನೊಂದು ಒಳ್ಳೆ ಸಿನಿಮಾವನ್ನಾಗಿ ತಯಾರಿಸಿದ್ದಾರೆ. ಇದೀಗ ಅದು ಬಿಡುಗಡೆಯಾಗಿದ್ದು ಹಾಗೂ ಈಗಷ್ಟೆ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದು ನಮಗೆಲ್ಲಾ ಗೊತ್ತೇ ಇದೆ. ಬಿ.ಸುರೇಶ್ ಅವರೇ ಹೇಳುವಂತೆ ಅವರ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಿದ್ದು ಹಾಗೂ ರಾಷ್ಟ್ರಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದು ಕೇವಲ ಕಾಕತಾಳಿಯ ಮಾತ್ರ.

    ‘ಪುಟ್ಟಕ್ಕನ ಹೈವೇ’ ಹೆಸರೇ ಹೇಳುವಂತೆ ಹೈವೇ ಬರುವದಕ್ಕಿಂತ ಮುಂಚೆ ಪುಟ್ಟಕ್ಕನ ಬದುಕಿನ ಆಸು ಪಾಸುಗಳು ಹೇಗಿದ್ದವು ಮತ್ತು ಅವು ಹೈವೇ ಬಂದಮೇಲೆ ಹೇಗಾದವು ಎನ್ನುವದನ್ನು ತುಂಬಾ ಕಲಾತ್ಮಾಕವಾಗಿ ಕಟ್ಟಿಕೊಡುತ್ತದೆ. ಅದನ್ನು ಸುಂದರ ನಿರೂಪಣೆ ಮತ್ತು ಅರ್ಥಗರ್ಭಿತ ದೃಶ್ಯ ರೂಪಕಗಳೊಂದಿಗೆ ಸುರೇಶ್ ಮತ್ತಷ್ಟು ಮೆರಗುಗೊಳಿಸುತ್ತಾರೆ. ಆಧುನಿಕ ಅಭಿವೃದ್ಧಿಯ ನೆಪದಲ್ಲಿ ಏನೊಂದು ಅರಿಯದ ಪುಟ್ಟಕ್ಕ ಮತ್ತು ಅವಳಂಥವರ (ಮುಖ್ಯವಾಗಿ ರೈತರ) ಶೋಷಣೆ ಹೇಗೆ ಆಗುತ್ತದೆ ಎನ್ನುವದನ್ನು ಹೇಳುತ್ತಲೇ ಎಲ್ಲರೂ ಸಮಾನರೇ ಎಂದು ಸಾರುವ ಈ ದೇಶದಲ್ಲಿ ಬಡವರ ಪಾಲಿಗೆ ನ್ಯಾಯ ಎನ್ನುವದು ಯಾವಾಗಲೂ ಹೇಗೆ ಮರಿಚಿಕೆಯಾಗಿ ಉಳಿಯುತ್ತದೆ ಎನ್ನುವದನ್ನು ನೋಡಿದರೆ ನಮ್ಮ ಕರುಳು ಚುರ್ರೆನ್ನುತ್ತದೆ. ಬಡವರ ಶೋಷಣೆ, ಹತಾಶೆ, ನೋವುಗಳು ನಮ್ಮನ್ನು ತಟ್ಟುತ್ತಿದ್ದಂತೆಯೇ ನಮಗೆ ಅವರ ಮೇಲೆ ಅನುಕಂಪ ಬರುವದು ಸಹಜ. ಆದರೆ ಅದರ ಬೆನ್ನ ಹಿಂದೆಯೇ ದಿನಾ ಕಾರು, ಬೈಕಲ್ಲಿ ಓಡಾಡುವವ ನಮ್ಮಂತವರಿಗೆ ಇಂಥದೊಂದು ಹೈವೇ ಬೇಕೆನಿಸುವದು ಅಷ್ಟೇ ಸಹಜ. ಆ ಸಹಜ ಹಂಬಲದ ಹಿಂದೆ ಪುಟ್ಟಕ್ಕನಂತವರ ತ್ಯಾಗ, ಶೋಷಣೆ ಹಾಗೂ ನೋವು ಇರುತ್ತದೆ ಎಂದು ನಮಗೆ ಒಂಚೂರು ಅನಿಸುವದೇ ಇಲ್ಲ. ಅದನ್ನು ನಮಗೆ ಮನದಟ್ಟು ಮಾಡಲೆಂದೇ ನಿರ್ದೇಶಕ ಪುಟ್ಟಕ್ಕನ ಕಥೆಯನ್ನು ಅದ್ಭುತವಾಗಿ ಹೇಳುತ್ತಾ ಹೋಗುತ್ತಾರೆ. ಚಿತ್ರದಲ್ಲಿ ಪುಟ್ಟಕ್ಕ ಹೇಳುತ್ತಾಳೆ- ‘ಈ ಬದುಕಿನ್ಯಾಗೆ ಸೋಲಿನ ಮೇಲೆ ಸೋಲು ಬರ್ತವೆ. ಆದರೆ ಹೋರಾಡೋ ಹುಮ್ಮಸ್ಸು ಮಾತ್ರ ಹೋಗೋದೇ ಇಲ್ಲ ನೋಡು.’ ಆದರೆ ಕೊನೆಯಲ್ಲಿ ಅವಳ ಬದುಕಿಗಿಂತ ಅವಳಿರುವ ವ್ಯವಸ್ಥೆ ಅವಳ ಹುಮ್ಮಸ್ಸನ್ನು ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ. ಅವಳು ಮಾತ್ರವಲ್ಲ ಅವಳಂತೆ ಹೋರಾಡುವ ಎಲ್ಲರೂ ಹುಮ್ಮಸ್ಸು ಕಳೆದುಕೊಂಡು ಪರಿಸ್ಥಿತಿಯೊಂದಿಗೆ ರಾಜಿಮಾಡಿಕೊಂಡು ಹೊಸ ಬದುಕು ಕಟ್ಟಿಕೊಳ್ಳುತ್ತಾರೆ. ಆದರೆ ಪುಟ್ಟಕ್ಕ ಮಾತ್ರ ಇತ್ತ ತನ್ನ ಮೊದಲಿನ ಬದುಕು ಸಿಗದೆ ಅತ್ತ ರಾಜಿಮಾಡಿಕೊಳ್ಳದೆ ದಿಕ್ಕು ತೋಚದವಳಾಗುತ್ತಾಳೆ.

    ‘ಪುಟ್ಟಕ್ಕನ ಹೈವೇ’ ಆರಂಭವಾಗುವದೇ ಅವಳು ಹೈವೇಗುಂಟ ನಡೆದುಕೊಂಡು ಹೋಗುವ ದೃಶ್ಯದೊಂದಿಗೆ. ಹಾಗೆ ನಡೆದುಕೊಂಡು ಹೋಗುತ್ತಲೇ ಅವಳು ಫ್ಲ್ಯಾಶ್ ಬ್ಯಾಕ್ ಗೆ ಜಾರುತ್ತಾಳೆ. ಆ ಹೈವೇ ಬರುವದಕ್ಕಿಂತ ಮುಂಚೆ ಅಲ್ಲಿ ಒಂದಷ್ಟು ಹೊಲ ಮಾಡಿಕೊಂಡು ಅವಳು ತನ್ನ ಗಂಡನೊಟ್ಟಿಗೆ ನೆಮ್ಮದಿಯಿಂದ ಇರುತ್ತಾಳೆ. ಆದರೆ ವಿಧಿಯಾಟವೇನೋ ಗಂಡ ಹೃದಯಾಘಾತದಿಂದ ಸತ್ತುಹೋಗುತ್ತಾನೆ. ಆದರೂ ಅವಳು ಛಲ ಬಿಡದೆ ಅದೇ ಹೊಲದಲ್ಲಿ ಗೇಯ್ಮೆ ಮಾಡಿಕೊಂಡು ತನ್ನ ಮಗಳೊಟ್ಟಿಗೆ ನೆಮ್ಮದಿಯ ಜೀವನ ನಡೆಸುತ್ತಾಳೆ. ಆಮೇಲಿಂದ ಅಲ್ಲೊಂದು ಹೈವೇ ಮಾಡಬೇಕೆಂದು ಸರಕಾರ ತೀರ್ಮಾನಿಸಿದಾಗ ಅವಳು ಮತ್ತು ಇನ್ನಿತರರು ಹೊಲ ಕಳೆದುಕೊಳ್ಳುವ ಪ್ರಸಂಗ ಬರುತ್ತದೆ. ಆಗ ಪ್ರತಿಭಟನೆಗಳು, ಹೋರಾಟಗಳು ಶುರುವಾಗುತ್ತವೆ. ಅದರಲ್ಲಿ ಪುಟ್ಟಕ್ಕನೂ ಭಾಗಿಯಾಗುತ್ತಾಳೆ. ಆದರೆ ದಿನಕಳೆದಂತೆ ಅವಳಿಗೆ ತನಗೆ ಬೆಂಬಲ ಸೂಚಿಸುವವರು ಹಾಗೂ ಸರಕಾರಿ ಅಧಿಕಾರಿಗಳ ಸೋಗಲಾಡಿತನ ಗೊತ್ತಾಗಿ ಮತ್ತಷ್ಟು ಹತಾಶಳಾಗುತ್ತಾಳೆ. ಕೊನೆಯಲ್ಲಿ ತನ್ನ ಮುಂದಿನ ಗತಿಯೇನಾಗುತ್ತದೆ ಎಂದು ಜಿಲ್ಲಾಧಿಕಾರಿಯಿಂದ ತಿಳಿದುಕೊಳ್ಳಲು ಹೋದಾಗ ಅವಳಿಗೆ ಒಂದು ಸತ್ಯ ಗೊತ್ತಾಗುತ್ತದೆ. ಅದೇನೆಂದರೆ ಅವಳು ಮತ್ತು ಅವಳೂರಿನ ಒಂದಷ್ಟು ಜನ ಈ ಹಿಂದೆ ಸರಕಾರ ಅವರಿದ್ದ ಜಾಗದಲ್ಲಿ ಒಂದು ಆಣೆಕಟ್ಟು ಕಟ್ಟಬೇಕೆಂದು ಅವರ ಜಮೀನನ್ನು ಕಿತ್ತುಕೊಂಡು ಬೇರೆ ಕಡೆ ಒಂದಷ್ಟು ಜಮೀನನ್ನು ಪರಿಹಾರ ರೂಪವಾಗಿ ನೀಡಿ ಕೈ ತೊಳೆದುಕೊಂದು ಬಿಡುತ್ತದೆ. ಅವರು ಪಾಲಿಗೆ ಬಂದಿದ್ದು ಪಂಚಾಮೃತ ಎಂದುಕೊಂಡು ಅಲ್ಲಿ ಹೇಗೋ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಪುಟ್ಟಕ್ಕ ಮತ್ತು ಅವಳ ಗಂಡ ಅದನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಬೇಕು ಎನ್ನುವ ತಿಳುವಳಿಕೆ ಇರದಷ್ಟು ಅಮಾಯಕರು. ಈಗ ಸರಕಾರ ಅಲ್ಲಿ ಹೈವೇ ಮಾಡಬೆಕೆಂದು ಏನೋ ಒಂದಿಷ್ಟು ಪರಿಹಾರ ನೀಡಿ ಮತ್ತೆ ಅವರ ಜಮೀನನ್ನು ಕಿತ್ತುಕೊಳ್ಳಲು ನೋಡುತ್ತದೆ. ಆದರೆ ಪುಟ್ಟಕ್ಕನಿಗೆ ಅವಳ ಹೊಲ ಅವಳ ಹೆಸರಲ್ಲಿಲ್ಲ ಎಂಬ ಕಾರಣಕ್ಕಾಗಿ ಅವಳಿಗೆ ಆ ಪರಿಹಾರ ಸಿಗದೆ ಹೋಗುತ್ತದೆ. ಪುಟ್ಟಕ್ಕ ದಿಗ್ಭ್ರಾಂತಳಾಗಿ ಮುಂದೇನು ಮಾಡಬಹುದೆಂದು ಜಿಲ್ಲಾಧಿಕಾರಿಯನ್ನು ಕೇಳುತ್ತಾಳೆ. ಆಕೆ ಪುಟ್ಟಕ್ಕನಿಗೆ “ಈಗ ನಿನ್ನನ್ನು ಉಳಿಸೋದಕ್ಕೆ ಆ ಮುಖ್ಯಮಂತ್ರಿಯಿಂದ ಮಾತ್ರ ಸಾಧ್ಯ. ನೀನು ಅವರನ್ನೇ ಹೋಗಿ ಕಾಣು” ಎಂದು ಹೇಳುತ್ತಾಳೆ. ಆ ಪ್ರಕಾರ ಪುಟ್ಟಕ್ಕ ಬೆಂಗಳೂರಿಗೆ ಹೊರಡಲು ಅನುವಾಗುತ್ತಾಳೆ. ಹೋಗುವ ಮುನ್ನ ತನಗಿದ್ದ ಒಬ್ಬಳೇ ಒಬ್ಬಳು ಮಗಳನ್ನು ತನ್ನ ಆಪ್ತ ಗೆಳತಿ ಅಂಬಕ್ಕನ ಸುಪರ್ದಿಗೆ ಒಪ್ಪಿಸಿ “ನಾ ಬರೋಗಂಟ ನನ್ನ ಮಗಳು ನಿನ್ನ ಹತ್ರಾನೆ ಇರ್ಲಿ. ನೀನು ಅವಳನ್ನ ಚನ್ನಾಗಿ ನೋಡಿಕೊಳ್ಳತೀಯಾ ಅನ್ನೋ ನಂಬಿಕೆ ನನಗಿದೆ” ಎಂದು ಹೇಳಿ ಆ ಭರವಸೆಯಲ್ಲಿ ಬೆಂಗಳೂರಿಗೆ ಹೊರಡುತ್ತಾಳೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಯ ಮನೆಗೆ ಬರುತ್ತಿದ್ದಂತೆ ಸರಕಾರ ಬಿದ್ದುಹೋಗಿ ಎಲ್ಲರೂ ತಂತಮ್ಮ ಖುರ್ಚಿಯನ್ನು ಉಳಿಸಿಕೊಳ್ಳುವದರಲ್ಲಿ ನಿರತರಾಗಿದ್ದಾರೆ ಇನ್ನು ಅವಳ ಸಮಸ್ಯೆಗೆ ಪರಿಹಾರ ಸೂಚಿಸುವವರು ಅಲ್ಲಿ ಯಾರೂ ಇಲ್ಲ ಎನ್ನುವದು ಗೊತ್ತಾಗುತ್ತದೆ. ಮುಖ್ಯಮಂತ್ರಿಯ ಮನೆಯ ಮುಂದೆ ಒಬ್ಬ ಟೀವಿ ಮಾಧ್ಯಮದ ಪ್ರತಿನಿಧಿಯಿದ್ದಾನೆ. ಅವನು ಈಗಾಗಲೇ ಬಿದ್ದ ಸರಕಾರದ ಬಗ್ಗೆ ವರದಿಯನ್ನು ನೀಡಲು ಬಂದಿದ್ದಾನೆ. ಈ ಹಿಂದೆ ಅವನು ಹೈವೇ ಬರುವದಕ್ಕಿಂತ ಮುಂಚೆ ರೈತರ ಹೋರಾಟದ ಸಂದರ್ಭದಲ್ಲಿ ಪುಟ್ಟಕ್ಕನನ್ನು ಸಂದರ್ಶಿಸಿದ್ದರಿಂದ ಆಕೆ ಅವನಿಗೆ ಗೊತ್ತು. ಅವನನ್ನು ನೋಡಿದವಳೆ ಅವನಿಂದೇನಾದರೂ ತನಗೆ ನ್ಯಾಯ ಸಿಗುತ್ತದಾ ಎಂದು ಪುಟ್ಟಕ್ಕ ಅವನ ಹತ್ತಿರ ತನ್ನ ದುಃಖ ತೋಡಿಕೊಳ್ಳುತ್ತಾಳೆ. ಅವನೋ ಯವುದಕ್ಕೂ ಇರಲಿ ತನ್ನ ಟೀವಿಗೆ ಒಂದು ಒಳ್ಳೆ ಶೋ ಆಗುತ್ತದೆಂದು ಹೀಗ್ಙೀಗೆ ಹೇಳು, ಹೀಗ್ಙೀಗೆ ಅಧಿಕಾರಿಗಳ ವಿರುದ್ಧ ಬಯ್ಯಿ ಎಂದು ಹೇಳಿ ಅವಳು ಹೇಳುವದನ್ನೆಲ್ಲಾ ಶೂಟ್ ಮಾಡಿಕೊಂಡು ನೆಟ್ಟಗೆ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಪುಟ್ಟಕ್ಕ ಕುಸಿದುಬೀಳುತ್ತಾಳೆ. ಆಮೇಲಿಂದ ಪುಟ್ಟಕ್ಕ ತನ್ನೂರು ಬಿಸಲಳ್ಳಿಗೆ ಬರುವಷ್ಟರಲ್ಲಿ ಊರಲ್ಲಿ ಅದಾಗಲೇ ಹೈವೇ ಬಂದು ಬಹಳಷ್ಟು ಬದಲಾಗಿರುತ್ತದೆ. ತನ್ನ ಹೊಲ ಎಲ್ಲಿ ಎಂದು ಕೇಳುತ್ತಾ ಬರುತ್ತಾಳೆ. ಯಾರೋ ಅವಳ ಗೆಳತಿ ಅಂಬಕ್ಕನ ಮನೆಯನ್ನು ತೋರಿಸುತ್ತಾರೆ. ಪುಟ್ಟಕ್ಕ ಅಂಬಕ್ಕನ ಮನೆಗೆ ಬರುತ್ತಿದ್ದಂತೆಯೇ ಅವಳು ಮತ್ತು ಅವಳ ಗಂಡ ಇಬ್ಬರೂ ಸೇರಿ ಹೈವೇ ಪಕ್ಕದಲ್ಲಿಯೇ ಒಂದು ಡಾಬಾ ತೆರೆದಿದ್ದು ಗೊತ್ತಾಗುತ್ತದೆ. ಪುಟ್ಟಕ್ಕ ವಾಪಾಸು ಬರುವದೇ ಇಲ್ಲ ಎಂದುಕೊಂಡಿದ್ದ ಅಂಬಕ್ಕ ಗೆಳತಿಯನ್ನು ಸಡಗರದಿಂದ ಬರಮಾಡಿಕೊಳ್ಳುತ್ತಾಳೆ. ಪುಟ್ಟಕ್ಕ ಮೊದಲು ತನ್ನ ಮಗಳ ಬಗ್ಗೆ ಕೇಳದೆ ತನ್ನ ಹೊಲ ಎಲ್ಲಿದೆ ಎಂದು ಕೇಳುತ್ತಾಳೆ. ಅದಕ್ಕೆ ಅಂಬಕ್ಕ ಅವಳು ನಿಂತಿರುವ ಜಾಗವೇ ಅವಳ ಹೊಲ ಎಂದು ಹೇಳುತ್ತಾಳೆ. ಆಗ ಅಂಬಕ್ಕನ ಗಂಡ ನಡೆದಿದ್ದಲ್ಲೆವನ್ನು ಹೇಳುತ್ತಾನೆ. ಅವಳು ಬೆಂಗಳೂರಿಗೆ ಹೋದ ಮೇಲೆ ಅವಳ ಹೊಲವನ್ನು ಸರಕಾರದವರು ಆಕ್ರಮಿಸಿಕೊಂಡಿದ್ದು, ಅಲ್ಲಿಂದ ಸರಕಾರ ಬೇಗನೆ ಕಾಮಗಾರಿಯನ್ನು ಆರಂಭಿಸಿದ್ದು, ಹೈವೇ ಅವಳ ಗಂಡನ ಗೋರಿಯ ಮೇಲೆ ಹಾದು ಹೊದದ್ದು ಹಾಗೂ ಈಗ ಅವನು ಅವಳ ಹೊಲದಲ್ಲಿ ಉಳಿದ ನಾಲ್ಕು ಗುಂಟೆ ಜಾಗವನ್ನು ಸರಕಾರದಿಂದ ಕೊಂಡುಕೊಂಡು ಅಲ್ಲೊಂದ ಡಾಬಾ ಅರಂಭಿಸಿದ್ದು ಎಲ್ಲವನ್ನೂ ಹೇಳುತ್ತಾನೆ. ಪುಟ್ಟಕ್ಕ ಇದೆಲ್ಲವನ್ನು ಕೇಳಿ ಜರ್ಝರಿತಳಾಗುತ್ತಿದ್ದಂತೆ ಅವಳಿಗೆ ಹೈವೇ ಕೆಳಗಿನಿಂದ ತನ್ನ ಮಗಳು ಸೆರಗು ಮತ್ತು ಕೂದಲನ್ನು ಸರಿಪಡಿಸಿಕೊಳ್ಳುತ್ತಾ ಬರುವದು ಕಾಣಿಸುತ್ತದೆ. ಅವಳಿಗೆ ತಕ್ಷಣ ತನ್ನ ಮಗಳು ಸೂಳೆಗಾರಿಕೆಗೆ ಇಳಿದಿದ್ದಾಳೆ ಎಂದು ಗೊತ್ತಾಗಿಹೋಗುತ್ತದೆ. ಅಂಬಕ್ಕ ಅಪರಾಧಿ ಪ್ರಜ್ಞೆಯಿಂದ ನಲುಗಿಹೋಗುತ್ತಾ “ನಿನ್ನ ಮಗಳನ್ನು ನಾನು ನಿಂಗೆ ಕೊಟ್ಟ ಮಾತಿನಂತೆ ನೋಡಿಕೊಳ್ಳಲಾಗಲಿಲ್ಲ ಕ್ಷಮಿಸಿಬಿಡೆ ಪುಟ್ಟಕ್ಕ” ಎಂದು ಅಳುತ್ತಾಳೆ. ಪುಟ್ಟಕ್ಕ ಮಾತ್ರ ಉದಾರತಯಿಂದ ಗೆಳತಿಯನ್ನು ಕ್ಷಮಿಸಿ ತನ್ನ ಮಗಳು ಹಾಗೂ ಗೆಳತಿಯನ್ನು ಕರೆದುಕೊಂಡು ಮಣ್ಣುಹಾದಿಯಲ್ಲಿ ನಡೆಯುತ್ತಾ ಹೋಗುತ್ತಾಳೆ. ಇತ್ತಕಡೆ ಹೈವೇ ಮೇಲೆ ಮುಂದಿನ ಎಲೆಕ್ಷನ್ ಗಾಗಿ ಪ್ರಚಾರ ಭರದಿಂದ ಸಾಗುವದನ್ನು ಕಾಣುತ್ತೇವೆ. ಆ ಪ್ರಚಾರದಲ್ಲಿ ಅಂಬಕ್ಕನ ಗಂಡನೂ ಇರುತ್ತಾನೆ.

    ‘ಪುಟ್ಟಕ್ಕನ ಹೈವೇ’ಯಲ್ಲಿ ಸೃಜನಶೀಲ ಮನಸ್ಸೊಂದು ಘಟನೆಯೊಂದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಹಾಗೂ ಆ ಕಥೆಯ ಮೂಲಕ ಒಬ್ಬ ನಿರ್ದೇಶಕನಾದವನು ಹೇಗೆ ತನ್ನ ಆತಂಕಗಳನ್ನು ಬಿಚ್ಚಿಬಿಡಬಲ್ಲ ಎನ್ನುವದನ್ನು ಬಿ. ಸುರೇಶ್ ಸಮರ್ಥವಾಗಿ ತೋರಿಸಿಕೊಟ್ಟಿದ್ದಾರೆ. ಇಲ್ಲಿ ಸುರೇಶ್ ಅಭಿವೃದ್ಧಿ ಬೇಡ ಎಂದು ಹೇಳುತ್ತಿಲ್ಲ. ಆದರೆ ಅಭಿವೃದ್ಧಿಯ ನೆಪದಲ್ಲಿ ನಡೆಯುವ ಡೊಂಬರಾಟಗಳನ್ನು ಹೇಳುತ್ತಲೇ, ಪುಟ್ಟಕ್ಕನಂತ ಮುಗ್ಧ ಜನರ ಬದುಕು ಹೇಗೆ ಮೂರಾಬಟ್ಟಿಯಾಗುತ್ತದೆ ಎನುವದನ್ನು ಮನದಟ್ಟು ಮಾಡುತ್ತಾರೆ. ಇನ್ನು ಚಿತ್ರದಲ್ಲಿ ಬರುವ ರೂಪಕಗಳು ಅದ್ಭುತವಾಗಿವೆ. ಸಾಲಾಗಿ ಹರಿಯುವ ಇರುವೆಗಳು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಗುಳೆ ಹೊರಡುತ್ತಲೇ ಇರಬೇಕಾದ ಮುಗ್ಧ ಜನರನ್ನು, ಬಲೆ ನೇಯುವ ಜೇಡ ಮೇಲಾಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು, ಕಣ್ಣಾಮುಚ್ಚಾಲೆ ಆಡುವ ಮಿಡತೆ ನಮ್ಮ ಅಕ್ಕ ಪಕ್ಕದಲ್ಲೇ ಇರುವ ಮೋಸಗಾರರನ್ನು, ಹಾಗೂ ರಸ್ತೆಯ ಮೇಲೆ ತೆವಳುತ್ತಾ ಸಾಗುವ ಬಸವನಹುಳು ಅಭಿವೃದ್ಧಿಯನ್ನು ಒಪ್ಪಿಕೊಂದು ನಡೆಯುವ ಜನವನ್ನು ಅತ್ಯಂತ ಮಾರ್ಮಿಕವಾಗಿ ಸೂಚಿಸುತ್ತವೆ. ಇನ್ನು ಪಾತ್ರಗಳ ವಿಷಯದ ಬಗ್ಗೆ ಹೆಳುವದಾದರೆ ಶೃತಿ ಪುಟ್ಟಕ್ಕನ ನೋವು ಸಂಕಟ, ತೊಳಲಾಟವೆಲ್ಲವನ್ನು ಚನ್ನಾಗಿ ಅರ್ಥಮಾಡಿಕೊಂಡೇ ಅಭಿನಯಿಸಿದ್ದಾರೆ. ಪ್ರಕಾಶ್ ರೈ ಶನಿಕೃಷ್ಣನಾಗಿ ನಗು ನಗುತ್ತಲೇ ಪುಟ್ಟಕ್ಕನಂತವರ ನಡ ಮುರಿಯುತ್ತಾನೆ. ಇತ್ತ ಅಭಿವೃದ್ಧಿಯ ಪರವೂ ನಿಲ್ಲದೆ ಅತ್ತ ಸಂಪೂರ್ಣವಾಗಿ ವಿರೋಧಿಸದೇ ನಡುವೆ ತನ್ನ ಬೇಳೆ ಬೇಯಿಸಿಕೊಳ್ಳಲು ನೋಡುತ್ತಾನೆ. ಕೊನೆಗೆ ತನ್ನ ಮೂಲ ಐಡೆಂಟಿಯನ್ನೇ ಕಳೆದುಕೊಂಡು ವ್ಯವಸ್ಥೆಯೊಂದಿಗೆ ರಾಜಿಮಾಡಿಕೊಳ್ಳುವದರ ಮೂಲಕ ಹೊಸದೊಂದು ಐಡೆಂಟಿಟಿಯನ್ನು ಕಂಡುಕೊಳ್ಳುತ್ತಾನೆ. ಪುಟ್ಟಕ್ಕನ ಗೆಳತಿಯ ಪಾತ್ರದಲ್ಲಿ ಅಂಬಕ್ಕನಾಗಿ ವೀಣಾ ಸುಂದರ್ ಬಹುಕಾಲ ನೆನಪಿನಲ್ಲಿ ಉಳಿಯುತ್ತಾರೆ. ಇನ್ನುಳಿದಂತೆ ಶ್ರೀನಿವಾಸ ಪ್ರಭು, ಅಚ್ಯುತಕುಮಾರ್ ತಮ್ಮ ಎಂದಿನ ನಟನೆಯಿಂದ ಗಮನ ಸೆಳೆಯುತ್ತಾರೆ.

    ಚಿತ್ರಕ್ಕೆ ರಾಮಚಂದ್ರರ ಛಾಯಾಗ್ರಹಣ ಹಾಗೂ ಹಂಸಲೆಖ ಅವರ ಸಂಗೀತ ಸಮರ್ಥವಾಗಿ ಒದಗಿಬಂದಿವೆ. ಆದರೆ ಚಿತ್ರದ ಕೊನೆಯಲ್ಲಿ ಪುಟ್ಟಕ್ಕ ಬೆಂಗಳೂರಿಗೆ ಹೋಗಿ ವಾಪಾಸಾಗುವಾಗ ಅವಳು ತನ್ನ ಗಂಟನ್ನು ಕಳೆದುಕೊಳ್ಳುವದು ಹಾಗೂ ಅದರಿಂದಲೇ ಏನೋ ಅವಳು ತನ್ನೂರು ಬಿಸಲಳ್ಳಿಗೆ ವಾಪಾಸಾಗುವಷ್ಟರಲ್ಲಿ ಎರಡು ತಿಂಗಳಾಗಿರುವದು, ಮತ್ತು ಆ ಎರಡು ತಿಂಗಳಲ್ಲೇ ಆ ಊರಿಗೆ ಹೈವೇ ಬಂದು ಸಾಕಷ್ಟು ಬದಲಾವಣೆಯಾಗಿದ್ದು ತೀರ ನಾಟಕೀಯವೆನಿಸುತ್ತದೆ. ಏನೇ ಆಗಲಿ ನಿರ್ದೇಶಕನಾಗಿ ಸುರೇಶ್ ಹೊಸ ಸಾಧ್ಯತೆಗಳಿಗೆ ಹಂಬಲಿಸಿರುವ ಚಿತ್ರವಿದು. ತುಂಬಾ ದಿನದ ಮೇಲೆ ಒಂದು ಒಳ್ಳೆಯ ಸಿನಿಮಾ ನೊಡಿದ ಅನುಭವವಾಗುತ್ತದೆ. ಸುರೇಶ್ ಅವರಿಂದ ಇಂಥ ಚಿತ್ರಗಳು ಮತ್ತಷ್ಟು ಬರಲಿ.

    -ಉದಯ್ ಇಟಗಿ

    ಹೊರನಾಡ ಕನ್ನಡಿಗರ ಕನ್ನಡ ಅನುಕಂಪದ ಕನ್ನಡವಾಗಬಾರದು

  • ಭಾನುವಾರ, ಏಪ್ರಿಲ್ 24, 2011
  • ಬಿಸಿಲ ಹನಿ
  • ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಗಾಗಿ ‘“ವಿದೇಶದಲ್ಲಿ ಕನ್ನಡ”’ ಎನ್ನುವ ವಿಷಯದ ಮೇಲೆ ಡಾ. ಹಂ. ಪ.ನಾಗರಾಜಯ್ಯನವರು ಒಂದು ಲೇಖನವನ್ನು ಬರೆದು ಕಳಿಸಿ ಎಂದು ನನ್ನ ಕೇಳಿದಾಗ ಸಮಯದಭಾವ ಮತ್ತು ನನ್ನ ಒಂದಿಷ್ಟು ಸೋಂಬೇರಿತನದಿಂದಾಗಿ ಲೇಖನ ಕಳಿಸಿಕೊಡಲಾಗಲಿಲ್ಲ. ಈಗ ವಿಶ್ವ ಕನ್ನಡ ಸಮ್ಮೇಳನ ಮುಗಿದು ಅದರ ಸ್ಮರಣ ಸಂಚಿಕೆಯೂ ಬಿಡುಗಡೆಯಾಗಿದ್ದು ಹಳೆಯ ಮಾತು. ಆದರೆ ಅದರ ಸಂಪಾದಕ ಮಂಡಳಿ ಇದೀಗ ಮತ್ತೆ ಆ ಪುಸ್ತಕವನ್ನು ಪುನರ್ ಪರಿಶೀಲಿಸಿ ಪ್ರಕಟಿಸುವದರಿಂದ ನನಗೆ ಮತ್ತೆ ಲೇಖನ ಬರೆದುಕೊಡಲು ಕೇಳಿದ್ದಾರೆ. ಹೀಗೆ ಕೇಳಿದ ಮೇಲೂ ನಾನು ಬರೆಯದೆ ಸುಮ್ಮನೆ ಕುಳಿತರೆ ಅದು ನನ್ನ ಅಹಂಕಾರವನ್ನು ಹಾಗೂ ನಿರ್ಲಕ್ಷ್ಯತನವನ್ನು ತೋರಿಸುವದರಿಂದ ಈ ಸಾರಿ ತಪ್ಪಿಸಿಕೊಳ್ಳಲು ನನ್ನ ಮನಸ್ಸು ಒಪ್ಪಲಿಲ್ಲ. ಅದರ ಪರಿಣಾಮವೇ ಈ ಲೇಖನ.


    ಸಂಪಾದಕ ಮಂಡಳಿ ಹೊರನಾಡ ಕನ್ನಡಿಗರಿಗೆ ಮುಖ್ಯವಾಗಿ ಮೂರು ಪ್ರಶ್ನೆಗಳನ್ನು ಕೇಳಿತ್ತು. ಅವು ಯಾವುವೆಂದರೆ-
    1. ನೀವು ಕಂಡಂತೆ ವಿದೇಶದಲ್ಲಿ ಕನ್ನಡ ಬೆಳೆದು ಬಂದ ಬಗೆ ಹೇಗೆ?
    2. ಒಳನಾಡಿನ ಕನ್ನಡಿಗರಿಗಿಂತ ಹೊರನಾಡ ಕನ್ನಡಿಗರಿಗೆ ಕನ್ನಡ ಭಾಷೆಯ ಮೆಲೆ ಹೆಚ್ಚು ಪ್ರೀತಿ ಹಾಗೂ ಒಲವಿರುತ್ತದಂತೆ, ಹೌದೆ?
    3. ಅಲ್ಲಿಯ ಕನ್ನಡ ಸಂಘಗಳಿಂದ ನಡೆಸುವ ಚಟುವಟಿಕೆಗಳು/ಕಾರ್ಯಕ್ರಮಗಳು ಹೇಗಿರುತ್ತವೆ? ಹಾಗೂ ಅಂಥ ಕಾರ್ಯಕ್ರಮಗಳನ್ನು ನಡೆಸುವಾಗ ಸ್ಥಳೀಯ ಸರಕಾರದಿಂದ ಪ್ರೋತ್ಸಾಹವೇನಾದರೂ ಸಿಗುತ್ತದೆಯೇ? ಅಥವಾ ತೊಂದರೆಗಳೇನಾದರೂ ಎದುರಾಗುತ್ತವೆಯೇ?


    ಈ ಮೇಲಿನ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಲೇಖನ ಸಿದ್ಧಪಡಿಸಿ ಎಂದು ಹೇಳಿತ್ತು. ಆದ ಕಾರಣ ಲೇಖನದಲ್ಲಿ ನನಗನಿಸಿದ್ದನ್ನು ನೇರವಾಗಿ ಹೇಳಿದ್ದೇನೆ. ಇದೀಗ ಅದು ಪ್ರಿಂಟಾಗಿ ಹೊರಬರಲಿದೆ ಎಂದು ಅದರ ಜವಾಬ್ದಾರಿಯನ್ನು ಹೊತ್ತುಕೊಂಡ ಜಿ. ಎನ್. ಮೋಹನ್ ಸರ್ ಹೇಳಿದ್ದಾರೆ. ಅದೇ ಲೇಖನವನ್ನು ನನ್ನ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.


    ವಿದೇಶಿ ಕನ್ನಡಿಗರು ಹಾಗೂ ಅವರ ಕನ್ನಡ ಪ್ರೇಮ ಕುರಿತಂತೆ ಒಂದು ವಿಶೇಷವಾದ ಪ್ರೀತಿ ಹಾಗು ಅಭಿಮಾನದಿಂದ ಮಾತನಾಡುವ ಚಟ ನಮ್ಮಲ್ಲಿ ಮೊದಲಿನಿಂದಲೂ ಜಾರಿಯಲ್ಲಿದೆ. ಏಕೆಂದರೆ ನಮಗೆ ಹತ್ತಿರದಲ್ಲಿರುವವರಿಗಿಂತ ದೂರದಲ್ಲಿರುವವರ ಬಗ್ಗೆಯೇ ಹೆಚ್ಚು ಕುತೂಹಲ ಹಾಗೂ ಆಸಕ್ತಿ. ಹೀಗಾಗಿ ಅವರೇನೇ ಮಾಡಿದರು ಅದು ವಿಶೇಷ ಅನಿಸುತ್ತದೆ ಹಾಗೂ ಸಹಜವಾಗಿ ಬೇರೆಯವರ ಮೆಚ್ಚುಗೆಗೆ ಪಾತ್ರವಾಗುತ್ತದೆ. ನನಗೆ ಒಂದೊಂದು ಸಾರಿ ಈ ರೀತಿಯ ಮೆಚ್ಚುಗೆ ಉತ್ಪ್ರೇಕ್ಷೆ ಅನಿಸಿಬಿಡುತ್ತದೆ. ಏಕೆಂದರೆ ಒಬ್ಬನು ವಿದೇಶದಲ್ಲಿದ್ದು ತನ್ನ ತಾಯ್ನಾಡಿಗೆ ಮರಳಿ ಬಂದು ಕನ್ನಡದಲ್ಲಿ ಮಾತನಾಡಿದರೆ ‘“ಓ! ಪರ್ವಾಗಿಲ್ರಿ ಅವನಿನ್ನೂ ಕನ್ನಡದಲ್ಲಿಯೇ ಮಾತನಾಡುತ್ತಾನೆ”’ ಎಂದು ಉದ್ಗಾರ ತೆಗೆಯುತ್ತಾರೆ. ಉದಾಹರಣೆಗೆ ಮೊನ್ನೆ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹೊರನಾಡ ಕನ್ನಡತಿ ಐಶ್ಚರ್ಯ್ ರೈ ತಪ್ಪು ತಪ್ಪು ಕನ್ನಡದಲ್ಲಿ ಮಾತನಾಡಿದಾಗಲೂ ಸಹ ಜನ ಚಪ್ಪಾಳೆ ಹೊಡೆದರು. ಆಕೆಯ ಭಾಷಣಕ್ಕೆ ಚಪ್ಪಾಳೆ ಹೊಡೆದಷ್ಟು ಅನಂತಮೂರ್ತಿಯವರ ಭಾಷಣಕ್ಕಾಗಲಿ, ಶಿವರುದ್ರಪ್ಪನವರ ಭಾಷಣಕ್ಕಾಗಲಿ ಹೊಡೆಯಲಿಲ್ಲ. ಏಕೆಂದರೆ ಆಕೆ ಒಬ್ಬ ಸಿನಿಮಾ ತಾರೆ, ವಿಶ್ವ ಸುಂದರಿ ಎನ್ನುವದರ ಜೊತೆಗೆ ಹೊರನಾಡ ಕನ್ನಡತಿ ಎಂಬ ಕಾರಣವೂ ಇದ್ದಿರಬಹುದಲ್ಲವೆ ಆಕೆಗೆ ವಿಶೇಷ ರಿಯಾಯಿತಿ ತೋರಿಸಲು? ಪರ್ವಾಗಿಲ್ಲ ಇಷ್ಟಾದರು ಕನ್ನಡದಲ್ಲಿ ಮಾತನಾಡಿದಳಲ್ಲ ಎಂದು ಜನ ಅಷ್ಟಕ್ಕೆ ಸಮಾಧಾನಪಟ್ಟುಕೊಂಡರು. ಇನ್ನು ಅಲ್ಲಿಗೆ ಬಂದ ಕೆಲವು ವಿದೇಶಿ ಕನ್ನಡಿಗರು ಸಭೆಯನ್ನು ಉದ್ದೇಶಿಸಿ ಮಾತನಡುವಾಗ ಮಧ್ಯ ಮಧ್ಯ ಒಂದೆರೆಡು ವಾಕ್ಯಗಳನ್ನು ಇಂಗ್ಲೀಷಿನಲ್ಲಿಯೇ ಉದ್ದರಿಸಿದರು. ಆದರೂ ಅವರು ಅಡಿದ್ದೆಲ್ಲವೂ ಚೆಂದವಾಗಿಯೇ ಕಂಡಿತು. ಅದನ್ಯಾರು ಪ್ರತಿಭಟಿಸಲು ಹೋಗಲಿಲ್ಲ. ಏಕೆಂದರೆ ಅವರೆಲ್ಲಾ ಅಷ್ಟಾದರೂ ಕನ್ನಡಕ್ಕೆ ಕಿಂಚಿತ್ತು ಸೇವೆ ಸಲ್ಲಿಸುತ್ತಿದ್ದಾರಲ್ಲ ಎಂದು ಜನ ಭಾವಿಸಿದಂತಿತ್ತು. ಇನ್ನು ವಿದೇಶದಲ್ಲಿದ್ದವನು ಬರಹಗಾರನಾಗಿದ್ದರಂತೂ ಮುಗಿದೇಹೋಯಿತು. ಅವನದು ಕಳಪೆ ಸಾಹಿತ್ಯವಾಗಿದ್ದರೂ ಸರಿಯೇ. ದೂರದ ದೇಶದಲ್ಲಿದ್ದರೂ ಅವರಿಗೆ ಕನ್ನಡ ಭಾಷೆಯ ಮೇಲೆ ವಿಶೇಷ ಅಕ್ಕರೆ ಹಾಗೂ ಒಲವು ಎಂಬ ಕನಿಕರ ಭಾವಕ್ಕೊಳಗಾಗುತ್ತದೆ. ಮಾತ್ರವಲ್ಲ ಅವರು ಬರೆದಿದ್ದು ‘ಕನ್ನಡದ ಕೈಂಕರ್ಯ’ ಎಂಬ ಅನುಕಂಪದ ಲೇಬಲ್ ನಡಿ ವಿಶೇಷ ಸ್ಥಾನಮಾನ ಗಳಿಸಿಬಿಡುತ್ತದೆ. ನನ್ನ ಪ್ರಕಾರ ಇದೇ ರೀತಿಯ ಬೆಳವಣಿಗೆಗಳು ಮುಂದುವರೆದರೆ ಇಂಥ ಕಳಪೆ ಸಾಹಿತ್ಯವನ್ನೇ ಮುಂದೆ ಎಂದಾದರೂ ಒಂದು ದಿನ ಶ್ರೇಷ್ಟ ಸಾಹಿತ್ಯ ಎಂದು ಪರಿಗಣಿಸುವ ದಿನಗಳು ದೂರವಿಲ್ಲ ಎಂದನಿಸುತ್ತದೆ.


    ನಾನು ಈ ಮೊದಲೇ ಹೇಳಿದಂತೆ ಹೊರನಾಡ ಕನ್ನಡಿಗರ ಬಗ್ಗೆ ‘ವಿದೇಶದಲ್ಲಿದ್ದರೂ ಕನ್ನಡ ಭಾಷೆಯ ಮೇಲೆ ಅವರಿಗೆ ಅಪಾರ ಪ್ರೀತಿ, ಒಲವು ಹಾಗೂ ಕನ್ನಡ ಭಾಷೆಯ ಮೇಲೆ ಎಲ್ಲರಿಗಿಂತ ತುಸು ಹೆಚ್ಚೇ ಅಭಿಮಾನವಿರುತ್ತದೆ’ ಎಂದು ಜನ ವೈಭವಿಕರಿಸಿ ಹೇಳುವದು ವಾಡಿಕೆ. ಆದರೆ ನನ್ನ ಪ್ರಕಾರ ಅದು ಶುದ್ಧ ತಪ್ಪು. ಅದೇನಿದ್ದರೂ ಬರೀ ಹಪಹಪಿಕೆ ಅಷ್ಟೇ. ಒಬ್ಬ ಕನ್ನಡಿಗ ಉದ್ಯೋಗ ನಿಮಿತ್ತ ಹೊರನಾಡಿಗೆ ಹೋದಾಗ ಕನ್ನಡಿಗರಿಲ್ಲದ ನೆಲದಲ್ಲಿ ಆತ ತನ್ನ ಮಾತೃಭಾಷೆಯಾದ ಕನ್ನಡವನ್ನು ಕುರಿತು ಯೋಚಿಸುವದು ಸರ್ವೇಸಾಮಾನ್ಯ. ಏಕೆಂದರೆ ಅಲ್ಲಿ ಕನ್ನಡದಲ್ಲಿ ಮಾತನಾಡುವವರು ಯಾರಾದರೂ ಸಿಗುತ್ತಾರೆಯೇ ಎಂದು ಸದಾ ಹಂಬಲಿಸುತ್ತಿರುತ್ತಾನೆ, ಹಪಹಪಿಸುತ್ತಿರುತ್ತಾನೆ. ಈ ಹಪಹಪಿಕೆಯನ್ನೇ ನಾವು ಅಭಿಮಾನವೆಂದು ತಪ್ಪಾಗಿ ಗ್ರಹಿಸುವದು ಎಷ್ಟರಮಟ್ಟಿಗೆ ಸರಿ?


    ನಾವು ನಮ್ಮ ಕನ್ನಡ ನೆಲದಿಂದ ಉದ್ಯೋಗ ಅರಸಿ ಹೊರನಾಡಿಗೆ ಹೋದಾಗ ಸಹಜವಾಗಿ ನಮ್ಮ ನಾಡಿನ ಬಗ್ಗೆ, ಭಾಷೆಯ ಬಗ್ಗೆ ಒಂದು ಪ್ರೀತಿ ಇದ್ದೇ ಇರುತ್ತದೆ. ಈ ಪ್ರೀತಿಯೇ ನಮ್ಮನ್ನು ನಮ್ಮ ಭಾಷೆಯ ಬಗ್ಗೆ ಸದಾ ಯೋಚಿಸುವಂತೆ, ಚಿಂತಿಸುವಂತೆ ಮಾಡುತ್ತದೆ. ಜೊತೆಗೆ ಕನ್ನಡ ಸಂಘಗಳನ್ನು ಹುಟ್ಟುಹಾಕುವಂತೆ ಪ್ರೇರಣೆ ನೀಡುತ್ತದೆ. ನಾವು ಇಂಥ ಸಂಘಗಳನ್ನು ಹುಟ್ಟುಹಾಕುವ ಮೂಲ ಉದ್ದೇಶ ಅಲ್ಲಿರುವ ಕನ್ನಡಿಗರೆಲ್ಲರನ್ನೂ ಒಂದು ಕಡೆ ಕಲೆ ಹಾಕುವದಕ್ಕೆ. ಬರೀ ಸಂಘವೊಂದಿದ್ದರೆ ಎಲ್ಲರೂ ಒಟ್ಟಾಗಿ ಸೇರಲು ಹೇಗೆ ಸಾಧ್ಯ? ಅಲ್ಲಿ ಏನಾದರೊಂದು ಕಾರ್ಯಕ್ರಮ ನಡೆದರೆ ತಾನೆ ಸಾಧ್ಯವಾಗೋದು? ಹೀಗಾಗಿ ಅಲ್ಲಿ ಒಂದಿಷ್ಟು ಕಾರ್ಯಕ್ರಮಗಳು ನಡೆಯುತ್ತವೆ. ಇಂಥ ಕಾರ್ಯಕ್ರಮಗಳು ಕನ್ನಡದಲ್ಲಿಯೇ ನಡೆಯುತ್ತಾವಾದರೂ ಅವು ಕನ್ನಡ ಭಾಷೆಯ ಬೆಳವಣಿಗೆಗೆ ಒಂಚೂರು ಸಹಾಯ ಮಾಡುವದಿಲ್ಲ ಎನ್ನುವದು ನನ್ನ ಅಭಿಪ್ರಾಯ. ಏಕೆಂದರೆ ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾಗುವಂಥ ಯಾವೊಂದೂ ಗಂಭೀರ ಚಿಂತನೆಯೂ ಅಲ್ಲಿ ನಡೆಯುವದಿಲ್ಲ. ಅಕಸ್ಮಾತ್ ಆ ಸಂಘಗಳು ಸಾಹಿತ್ಯಿಕ ಪತ್ರಿಕೆಗಳನ್ನೇನಾದರೂ ಹೊರತರುತ್ತಿದ್ದರೆ ಅವು ಗುಣಮಟ್ಟದಲ್ಲಿ ಅತ್ಯಂತ ಕೆಳದರ್ಜೆಯಿಂದ ಕೂಡಿದ್ದು ಅವುಗಳಲ್ಲಿ ಕೇವಲ ಬೆರಳಣಿಕೆಯಷ್ಟು ಲೇಖನಗಳು ಮಾತ್ರ ಚನ್ನಾಗಿರುತ್ತವೆ. ಇನ್ನುಳಿದಂತೆ ಇತರೆ ಪುಟಗಳ ತುಂಬ ಬರೀ ‘ಪುಷ್ಫ ಕವಿ’, ‘ಪೋರಿ ಕವಿ’, ‘ಮತ್ಸ್ಯ ಕವಿ’ ‘ಪತಂಗ ಕವಿ’ಗಳ ಕವನಗಳೇ ರಾರಾಜಿಸುತ್ತಿರುತ್ತವೆ. ಈ ನಿಟ್ಟಿನಲ್ಲಿ ವಿದೇಶದಲ್ಲಿ ನಾವು ಹುಟ್ಟುಹಾಕಿದ ಕನ್ನಡದ ವೇದಿಕೆಗಳಿಂದ ನಿಜಕ್ಕೂ ಕನ್ನಡ ಭಾಷೆಯ ಬೆಳವಣಿಗೆಯಾಗುತ್ತದೆ ಎನ್ನುವದು ಬರಿ ಭ್ರಮೆ ಅಷ್ಟೇ.


    ಇನ್ನು ಈ ತರದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಾಗ ನಮ್ಮಲ್ಲಿ ಅಲ್ಲಿಯ ಸರಕಾರದಿಂದ ಯಾವುದೇ ಪ್ರೋತ್ಸಾಹ ಸಿಗುವದಿಲ್ಲ. ಹಾಗೆ ನಿರೀಕ್ಷಿಸುವದು ಕೂಡ ತಪ್ಪಾಗುತ್ತದೆ. ಆದರೆ ಇದುವರೆಗೂ ಲಿಬಿಯಾದಲ್ಲಿ ನಮ್ಮ ಕಾರ್ಯಕ್ರಮಗಳಿಗೆ ಯಾವುದೇ ತೊಂದರೆಯಾಗಲಿ, ಆತಂಕವಾಗಲಿ ಎದುರಾಗಿಲ್ಲ. ಹಾಗೆ ನೋಡಿದರೆ ಕರ್ನಾಟಕದಲ್ಲಿಯೇ ಇಂಥ ಪ್ರಸಂಗಗಳು ಎದುರಾಗೋದು ಹೆಚ್ಚು. ಉದಾಹರಣೆಗೆ ಕರ್ನಾಟಕದ ಕೆಲವು ಭಾಗಗಳಲ್ಲಿ ಅಂದರೆ ಹೆಚ್ಚಾಗಿ ಗಡಿ ಭಾಗಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ನೆರೆರಾಜ್ಯದವರಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಈಗ ವಿಶ್ವ ಕನ್ನಡ ಸಮ್ಮೇಳನವನ್ನೇ ನೋಡಿ. ಅದನ್ನು ಬೆಳಗಾವಿಯಲ್ಲಿ ನಡೆಸಕೂಡದೆಂದು ಮರಾಠಿಗರು ಎಷ್ಟೊಂದು ಬೆದರಿಕೆಯನ್ನು ಒಡ್ಡಿದ್ದರು. ಸಮ್ಮೇಳನ ಮುಗಿಯುವವರೆಗೂ ಅವರು ಏನಾದರೂ ತೊಂದರೆ ಮಾಡಿಯಾರು ಎಂಬ ಭಯ, ಆತಂಕವಿದ್ದೇ ಇತ್ತು. ಈ ತರದ ತೊಂದರೆಗಳ್ಯಾವವು ಅಲ್ಲಿ ಜರಗುವದಿಲ್ಲ ಎನ್ನುವದು ಮಾತ್ರ ನೆಮ್ಮದಿಯ ವಿಷಯ.


    - ಉದಯ್ ಇಟಗಿ