Demo image Demo image Demo image Demo image Demo image Demo image Demo image Demo image

ನಮಗೆ ಗೊತ್ತಿಲ್ಲದ ಶೇಕ್ಷಪೀಯರ್

  • ಶುಕ್ರವಾರ, ಮೇ 29, 2009
  • ಬಿಸಿಲ ಹನಿ
  • ಶೇಕ್ಷಪೀಯರನ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ? ಆತ ಈ ಜಗತ್ತು ಕಂಡ ಅತ್ಯದ್ಭುತ ನಾಟಕಕಾರ, ಕವಿ, ಹಾಗೂ ಮನಃಶಾಸ್ತ್ರಜ್ಞ! ನಾನಿಲ್ಲಿ ಉದ್ದೇಶಪೂರ್ವಕವಾಗಿ ಅವನನ್ನು ಮನಃಶಾಸ್ತ್ರಜ್ಞ ಎಂದು ಕರೆದಿದ್ದೇನೆ. ಏಕೆಂದರೆ ಆತ ಯಾವುದೇ ಮನಃಶಾಸ್ತ್ರವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡದೇಹೋದರೂ ತನ್ನ ಪಾತ್ರಗಳ ಮೂಲಕ ಅವನಷ್ಟು ಸೊಗಸಾಗಿ ಮನುಷ್ಯರ ಮನಸ್ಸಿನ ಚಿತ್ರಣವನ್ನು ಕಟ್ಟಿಕೊಟ್ಟಷ್ಟು ಬಹುಶಃ ಜಗತ್ತಿನ ಬೇರಾವ ಲೇಖಕನಾಗಲಿ, ಮನಃಶಾಸ್ತ್ರಜ್ಞನಾಗಲಿ ಇದುವರೆಗೂ ಕಟ್ಟಿಕೊಟ್ಟಿಲ್ಲ. ಪಾತ್ರಗಳ ಮನಸ್ಸಿನಾಳಕ್ಕೆ ಇಳಿದು ಅಲ್ಲಿ ನಡೆಯುವ ತುಮುಲವನ್ನು, ವೈಚಿತ್ರ್ಯವನ್ನು ಬಗೆಯುತ್ತಾ, ಶೋಧಿಸುತ್ತಾ ಮನುಷ್ಯ ಸ್ವಭಾವವನ್ನು ಇದ್ದಕ್ಕಿದ್ದಂತೆ ಅನಾವರಣಗೊಳಿಸುವ ಅವನ ಪರಿ ಅತ್ಯದ್ಭುತವಾದದ್ದು! ಹಾಗೆಂದೇ ಆತ ಪಾತ್ರಗಳ ಸೃಷ್ಟಿಗೆ, ಬಳಸುವ ಭಾಷೆಗೆ, ಪದಗಳ ಲಾಲಿತ್ಯಕ್ಕೆ, ಹಾಗೂ ಅವನ ಕಂಡಿಕೆಗಳಿ(Quotations)ಗೆ ಹೆಸರುವಾಸಿಯಾಗಿದ್ದಾನೆ. ಇದುವರೆಗೂ ಅವನನ್ನು ಸರಿಗಟ್ಟುವ ಮತ್ತೊಬ್ಬ ಲೇಖಕ ಬಂದಿಲ್ಲವೆಂಬುದೇ ವಿಮರ್ಶಕರ ಅಭಿಪ್ರಾಯವಾಗಿದೆ. ಆದರೆ ದೀಪದ ಬುಡದಲ್ಲಿಯೇ ಕತ್ತಲು ಎನ್ನುವಂತೆ ಬೇರೆಲ್ಲ ಲೇಖಕರ ಬಗ್ಗೆ, ಗಣ್ಯವ್ಯಕ್ತಿಗಳ ಬಗ್ಗೆ ಅನೇಕ ಊಹಾಪೋಹಗಳಿರುವಂತೆ ಆತನ ಬಗ್ಗೆಯೂ ಸಹ ಕೆಲವು ಊಹಾಪೋಹಗಳಿದ್ದವು. ಅವುಗಳಲ್ಲಿ ಕೆಲವು ನಿಜವೂ ಕೆಲವು ಸುಳ್ಳುಗಳಾಗಿದ್ದವು. ಅಂಥ ಒಂದಿಷ್ಟು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೆಂದೇ ಈ ಲೇಖನ ಬರೆಯುತ್ತಿದ್ದೇನೆ.
    1) ಶೇಕ್ಷಪೀಯರನ ಹುಟ್ಟಿನ ದಿನದ ಬಗ್ಗೆ ಇದುವರೆಗೂ ಯಾವುದೇ ನಿಖರವಾದ ಮಾಹಿತಿ ದೊರೆತಿಲ್ಲವಾದ್ದರಿಂದ ಆತ ಎಂದು ಹುಟ್ಟಿದ ಎಂದು ಸರಿಯಾಗಿ ಹೇಳುವದು ಸಾಧ್ಯವಾಗಿಲ್ಲ. ಆದರೆ ಸಿಕ್ಕ ಕೆಲವೇ ಕೆಲವು ಆಧಾರಗಳ ಮೇಲೆ ಆತ ಏಪ್ರಿಲ್ ೨೩, ೧೫೬೪ ರಲ್ಲಿ ಸ್ಟ್ರ್ಯಾಟ್ ಪೋರ್ಡ್ ಎವಾನ್ ಎಂಬಲ್ಲಿ ಹುಟ್ಟಿದನೆಂದು ನಂಬಲಾಗಿದೆ. ಹುಟ್ಟಿ ಸರಿಯಾಗಿ ೫೨ ವರ್ಷಗಳ ನಂತರ ಅಂದರೆ ಏಪ್ರಿಲ್ ೨೩, ೧೬೧೬ ರಂದು ಸತ್ತನೆಂದು ಊಹಿಸಲಾಗಿದೆ. ಅವನ ಹುಟ್ಟು ಹಬ್ಬದ ದಿನವೇ ಅವನ ಮರಣದ ದಿನವೂ ಸಹ ಆಗಿತ್ತು ಎಂಬುದು ವಿಶೇಷ ಮತ್ತು ದುರಂತ.
    2) ಶೇಕ್ಷಪೀಯರನ ಅಪ್ಪ ಪ್ರಸಿದ್ಧ ಉಣ್ಣೆ ವ್ಯಾಪಾರಿಯಾಗಿದ್ದು ಬಡ್ಡಿ ವ್ಯಾಪಾರವನ್ನು ಸಹ ಮಾಡುತ್ತಿದ್ದನೆಂದು ನಂಬಲಾಗಿದೆ. ಆದರೆ ಶೇಕ್ಷಪೀಯರ್ ತನ್ನ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸುತ್ತಿದ್ದಂತೆ ಅವರಪ್ಪನಿಗೆ ವ್ಯಾಪಾರದಲ್ಲಿ ಭಾರಿ ನಷ್ಟವುಂಟಾಗಿ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಅದನ್ನು ಸುಧಾರಿಸಲು ಆತ ಉದ್ಯೋಗವನ್ನರಸಿ ಹುಟ್ಟೂರನ್ನು ಬಿಟ್ಟು ಲಂಡನ್‍ಗೆ ವಲಸೆಹೋದನೆಂದು ಹೇಳಲಾಗಿದೆ. ಆದರೆ ಇನ್ನು ಕೆಲವು ಮೂಲಗಳು ಆತ ತನ್ನ ಹುಟ್ಟೂರಿನಲ್ಲಿ ಚಮರಿಮೃಗವನ್ನು ಬೇಟೆಯಾಡಿದ್ದರ ಆಪಾದನೆಯ ಮೇಲೆ ಅವನನ್ನು ಗಡಿಪಾರು ಮಾಡಲಾಯಿತೆಂದು ಹೇಳುತ್ತವೆ.
    3) ಹೀಗೆ ಲಂಡನ್‍ಗೆ ಕೆಲಸ ಹುಡುಕಿಕೊಂಡು ಬಂದ ಅವನು ನಾಟಕ ಕಂಪನಿಯೊಂದರಲ್ಲಿ ಮೊಟ್ಟ ಮೊದಲಿಗೆ ಮಾಡಿದ ಕೆಲಸ ‘ಕುದರೆ ಚಾಕರಿ’ ಕೆಲಸ. ಆಗಿನ ಕಾಲದಲ್ಲಿ ಶ್ರೀಮಂತರು ನಾಟಕ ನೋಡಲು ಕುದರೆಯ ಮೇಲೆ ಬರುತ್ತಿದ್ದುದರಿಂದ ಅವರು ನಾಟಕ ನೋಡವಷ್ಟು ಹೊತ್ತು ಅವರ ಕುದರೆಗಳನ್ನು ನೋಡಿಕೊಳ್ಳುತ್ತಿದ್ದ. ಕ್ರಮೇಣ ಆತ ನಟನಾಗಿ, ನಾಟಕಕಾರನಾಗಿ ಭಡ್ತಿ ಪಡೆದು ಜಗತ್ತಿನ ತುಂಬ ಹೆಸರುವಾಸಿಯಾದ.
    4) ಶೇಕ್ಷಪೀಯರ್ ಮಹಾನ್ ಸಾಹಸಿ, ತುಂಟ ಹಾಗು ರಸಿಕನಾಗಿದ್ದ. ಪ್ರಾಯಕ್ಕೆ ಕಾಲಿಡುತ್ತಿದ್ದಂತೆಯೇ ತನ್ನ ಪಕ್ಕದೂರಿನ ಹುಡುಗಿಯನ್ನು ಮದುವೆಗೆ ಮೊದಲೇ ಬಸಿರು ಮಾಡಿದ್ದರಿಂದ ವಿಧಿಯಲ್ಲದೆ ಅವಳನ್ನೇ ಮದುವೆಯಾಗಬೇಕಾಗಿಬಂತು. ಅವಳ ಹೆಸರು ‌ಯ್ಯಾನ್ ಹ್ಯಾಥ್ ವೇ. ಅವಳು ವಯಸ್ಸಿನಲ್ಲಿ ಅವನಿಗಿಂತ ಎಂಟು ವರ್ಷ ದೊಡ್ದವಳಾಗಿದ್ದು ಮದುವೆಯಾದಾಗ ಅವಳು ಮೂರು ತಿಂಗಳು ಗರ್ಬಿಣಿಯಾಗಿದ್ದಳು. ಇದಲ್ಲದೆ ಶೇಕ್ಷಪೀಯರನಿಗೆ ಅವನ ಹಾದರಕ್ಕೆ ಹುಟ್ಟಿದ ಮಗನೊಬ್ಬನಿದ್ದ ಎಂದು ನಂಬಲಾಗಿದೆ. ಅವನ ಹೆಸರು ವಿಲಿಯಂ ಡೆವಿನಾಂಟ್.
    5) ಬಹಳಷ್ಟು ಲೇಖಕರು ಹಾಗೂ ರಾಜಕೀಯ ಧುರಿಣರು ಶೇಕ್ಷಪೀಯರ್ ಯಾವತ್ತೂ ಯಾವುದೇ ನಾಟಕವಾಗಲಿ, ಕವನವಾಗಲಿ ಬರೆಯಲೇ ಇಲ್ಲ, ಅವನಿಗೇನಿದ್ದರೂ ಸಾಹಸಿ ಕೆಲಸಗಳಲ್ಲಿ ಮಾತ್ರ ಆಸಕ್ತಿಯಿತ್ತೇ ಹೊರತು ಬರೆಯುವದರಲ್ಲಿರಲಿಲ್ಲವೆಂದು ಹೇಳುತ್ತಾರೆ. ಯಾರೋ ಬರೆದಿದ್ದನ್ನು ಕದ್ದು ತನ್ನ ಹೆಸರನ್ನು ಹಾಕಿಕೊಂಡು ತಾನೇ ಬರಿದಿದ್ದು ಎಂದು ಹೇಳಿಕೊಂಡು ಹಣ ಮತ್ತು ಹೆಸರುಗಳೆರಡನ್ನು ಗಳಿಸಿದನೆಂದು ಹೇಳಲಾಗುತ್ತದೆ.
    6) ಶೇಕ್ಷಪೀಯರ್ ತಾನು ಬರೆದ ೩೭ ನಾಟಕಗಳನ್ನು ಯಾವತ್ತೂ ಪ್ರಕಟಪಡಿಸುವ ಸಾಹಸಕ್ಕೆ ಕೈಹಾಕಲೇ ಇಲ್ಲ. ಅವೇನಿದ್ದರೂ ಅವನು ಸತ್ತು ಏಳು ವರ್ಷಗಳ ನಂತರ ಪ್ರಕಟಗೊಂಡವು. ಆದರೆ ಅವನ ‘Venus’ ಹಾಗು ‘Adonis’ ಎಂಬೆರಡು ನೀಳ್ಗವನಗಳು ಬಹಳ ಜನಪ್ರಿಯಗೊಂಡು ಅವನ ಶ್ರೀಮಂತ ಸ್ನೇಹಿತ ಎರ್ಲ್ ಅಪ್ ಸೌಥ್ ಯ್ಯಾಂಪ್ಟ್ ನಿಂದ ಸಾಕಷ್ಟು ಹಣವು ಉಡುಗೊರೆಯ ರೂಪದಲ್ಲಿ ಹರಿದು ಬಂದು ಕೊನೆಗಾಲದಲ್ಲಿ ಅವನು ನೆಮ್ಮದಿಯ ಮೇಲ್ದರ್ಜೆಯ ಬದಕನ್ನು ನಡೆಸಲು ಸಹಾಯ ಮಾಡಿದವು.
    7) ಶೇಕ್ಷಪೀಯರನಿಗೆ ಜುಡಿತ್ ಎಂಬ ತಂಗಿಯೊಬ್ಬಳಿದ್ದಳು. ಅವಳು ಅವನಷ್ಟೇ ಸಮರ್ಥವಾಗಿ ಬರೆಯುಬಲ್ಲವಳಾಗಿದ್ದು ಒಮ್ಮೊಮ್ಮೆ ಅವನನ್ನೂ ಮೀರಿಸುತ್ತಿದ್ದಳು. ಅವಳಿಗಿರುವ ಪದಗಳ ಚಾಕಚಕ್ಯತೆ, ಲಾಲಿತ್ಯ, ಅವುಗಳ ಜೋಡಣೆ ಶೇಕ್ಷಪೀಯರಿನಿಗೂ ಸಹ ಇರಲಿಲ್ಲ. ಆದರೆ ಅವಳು ‘ಹೆಣ್ಣು’ ಎಂಬ ಕಾರಣಕ್ಕೆ ಪುರುಷ ಪ್ರಧಾನ ಸಮಾಜದಲ್ಲಿ ಅವಳಿಗೆ ಸರಿಯಾದ ಪ್ರೋತ್ಸಾಹ ಸಿಗದೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವದರ ಮೂಲಕ ಸ್ತ್ರೀ ಪ್ರತಿಭೆಯೊಂದು ಕಮುರಿಹೋಯಿತು. ಇವಳ ಬಗ್ಗೆ ಹೆಚ್ಚಿಗೆ ತಿಳಿಯಲು ನಾನೇ ಬರೆದಿರುವ ಈ ಲೇಖನದ ಕೊಂಡಿಯ ಮೇಲೆ ಕ್ಲಿಕ್ಕಿಸಿ. http://bisilahani.blogspot.com/2008/12/blog-post_5795.html
    8) ಶೇಕ್ಷಪೀಯರನ ಕೃತಿಗಳಲ್ಲಿ ಸುಮಾರು ಆರನೂರು ವಿವಿಧ ಜಾತಿಯ ಪಕ್ಷಿಗಳ ಉಲ್ಲೇಖವಿದೆ. ಅವುಗಳಲ್ಲಿ ತುಂಬಾ ಜನಪ್ರಿಯವಾಗಿರುವ, ನಮಗೆ ಈಗಾಗಲೇ ಗೊತ್ತಿರುವ ಪಕ್ಷಿಗಳಾದ ಬಾತುಕೋಳಿ. ಹುಂಜ, ಪಾರಿವಾಳ, ಗುಬ್ಬಿ ಮೊದಲಾದವುಗಳನ್ನು ಹೆಸರಿಸಬಹುದಾಗಿದೆ.
    9) ಶೇಕ್ಷಪೀಯರ್ `dog’ ಅಥವಾ `dogs’ ಎನ್ನುವ ಪದವನ್ನು ಸುಮಾರು ೨೦೦ ಬಾರಿ ಬಳಸಿದ್ದಾನೆ. ಇದಲ್ಲದೆ ‘watchdog’ ಎನ್ನುವ ಸಂಕೀರ್ಣ ಪದವೊಂದನ್ನು ಮೊಟ್ಟಮೊದಲಿಗೆ ಬಳಸಿದವನೇ ಇವನು.
    10) ಶೇಕ್ಷಪೀಯರನಿಗೆ ಎರ್ಲ್ ಅಪ್ ಸೌಥ್ ಯ್ಯಾಂಪ್ಟ್ ನೆಂಬ ಅತ್ಯಂತ ಸ್ಪುರದ್ರೂಪಿ ಸಲಿಂಗಕಾಮಿ ಗೆಳೆಯನಿದ್ದ. ಅವನು ಆಗರ್ಭ ಶ್ರೀಮಂತನಾಗಿದ್ದು ಶೇಕ್ಷಪೀಯರನ ಜೀವದ ಗೆಳೆಯನು ಸಹ ಆಗಿದ್ದ. ಅವರಿಬ್ಬರ ಸ್ನೇಹದ ಗಾಢತೆ ಎಷ್ಟಿತ್ತೆಂದರೆ ಎರ್ಲ್ ಅಪ್ ಸೌಥ್ ಯ್ಯಾಂಪ್ಟನ್ನನು ಶೇಕ್ಷಪೀಯರನನ್ನು ಬಿಟ್ಟಿರಲಾರದೆ ಅವನನ್ನು ತನ್ನ ಅರಮನೆಯಲ್ಲಿಯೇ ಇರಿಸಿಕೊಂಡಿದ್ದನು. ಆದರೆ ಮುಂದೆ ಹುಡುಗಿಯೊಬ್ಬಳ ವಿಷಯಕ್ಕೆ ಅವರಿಬ್ಬರ ಸ್ನೇಹ ಮುರಿದುಬಿತ್ತು (ಈ ಬಗ್ಗೆ ಮುಂದೆ ಯಾವತ್ತಾದರು ಬರೆಯುವೆ). ಆದರೂ ಶೇಕ್ಷಪೀಯರ ಅವನನ್ನು ಅತ್ಯಂತ ಗಾಢವಾಗಿ ಪ್ರೀತಿಸುತ್ತಿದ್ದ. ಅದಕ್ಕೆ ಅವನು ಬರೆದ ೧೫೪ ಸುನಿತ(sonnet)ಗಳಲ್ಲಿ ೧೨೬ ಸುನಿತಗಳು ಗೆಳೆತನಕ್ಕೂ ೨೮ ಸುನಿತಗಳು ಪ್ರೀತಿಗೂ ಮೀಸಲಾಗಿರುವದೇ ಸಾಕ್ಷಿ. ಆ ೧೨೬ ಸುನಿತಗಳ ಕೆಲವು ಸುನಿತಗಳಲ್ಲಿ ಅಲ್ಲಲ್ಲಿ ಅವನ ಸ್ನೇಹಿತನ ಅಪೂರ್ವ ಸೌಂದರ್ಯದ ಚಿತ್ರಣ ಸಿಗುತ್ತದೆ. ಈ ಎಲ್ಲ ಆಧಾರಗಳ ಮೇಲೆ ಕೆಲವು ವಿಮರ್ಶಕರು ಅವರಿಬ್ಬರು ಸಲಿಂಗಕಾಮಿಗಳಾಗಿದ್ದರೆಂದು ಊಹಿಸಿದರೂ ಅದನ್ನು ಬಹಿರಂಗಪಡಿಸುವ ಧೈರ್ಯವನ್ನು ಮಾಡಿರಲಿಲ್ಲ. ಆದರೆ ತಿರ ಇತ್ತಿಚಿಗಷ್ಟೆ ಅಂದರೆ ೧೯೯೮ರಲ್ಲಿ ಅಮೆರಿಕದ ಸಂಶೋಧನಾ ವಿದ್ಯಾರ್ಥಿನಿಯೊಬ್ಬಳು (ಹೆಸರು ನೆನಪಿಲ್ಲ) ಸಾಕಷ್ಟು ಪುರಾವೆಗಳ ಮೂಲಕ ಈ ವಿಷಯವನ್ನು ಹೊರಗೆಡವಿ ಭಾರಿ ವಿವಾದಕ್ಕೊಳಗಾಗಿದ್ದಳು.
    ಶೇಕ್ಷಪೀಯರ್ ಹೇಗೆ ಇರಲಿ ಅವನನ್ನು ಅವನೆಲ್ಲ ಬಲಹೀನತೆಗಳ ಸಮೇತ ಒಪ್ಪಿಕೊಂಡಾಗಲೇ ಆತ ನಮಗೆ ಇಷ್ಟವಾಗುವದು, ಆತನ ಬಗ್ಗೆ ಒಂದು ಸಹಜ ಗೌರವ ಮೂಡುವದು. ಈ ಮಾತು ಶೇಕ್ಷಪೀಯರನ ವಿಷಯದಲ್ಲಿ ಮಾತ್ರವಲ್ಲ ನಮ್ಮಗಳ ವಿಷಯದಲ್ಲೂ ಅಷ್ಟೇ ಸತ್ಯ ಅಲ್ಲವೆ?
    -ಉದಯ ಇಟಗಿ
    ಕೃಪೆ:
    1) http://www.nosweatshakespeare.com/
    2) http://shakespeare.about.com/

    17 ಕಾಮೆಂಟ್‌(ಗಳು):

    ಜಲನಯನ ಹೇಳಿದರು...

    ಉದಯ್
    ಮಹಾನ್ ರಚನಾಕಾರರು, ಪ್ರಸಿದ್ಧರನ್ನು ಬಹಳವಾಗಿ ಕಾಡುವುದು ಅವರ ಹಿಂದೆ ಬರುವ ವಿವಾದಗಳು..ಇದ್ದಾಗಲೂ ಅವರು ಸತ್ತಮೇಲೂ. ಇಂತಹ ವಿಷಯದ ಶೇಕ್ಸ್ ಪಿಯರ್ ನ ಸುತ್ತಲ ನಮಗರಿವಿಲ್ಲದ ವಿಷಯಗಳ ಪಿಟಾರವನ್ನೇ ತೆರೆದು ಇಟ್ಟಿದ್ದೀರ ನಿಮ್ಮ ಬ್ಲಾಗಿನ ಮೂಲಕ. ಹಲವಾರು ವಿಷಯಗಳು ನಮಗೆ ತಿಳಿದಿಲ್ಲ...ಇನ್ನು ರಚನೆಗಳು ಆತ ಕದ್ದದ್ದೋ ಸ್ವಂತದ್ದೋ..ನಮಗೆ ಅನಾವಶ್ಯಕ...ಅಥ್ವಾ ಅಸಂಗತ ಎನ್ನೋಣವೇ..? ವಿಷಯಗಳನ್ನು (ಹೊಸ ಹೊಸ) ಬ್ಲಾಗಿಸುತ್ತಿರಿ...ನಿಮ್ಮ ಅನುವಾದಗಳೂ ಚನ್ನಾಗಿ ಮೂಡಿ ಬರುತ್ತಿವೆ, ಇವುಗಳನ್ನು ಪ್ರಕಟಿಸುವ ಯೋಜನೆ ಏನಾದರೂ ಇದೆಯೇ?

    shivu.k ಹೇಳಿದರು...

    ಷೇಕ್ಸ್‌ಫೀಯರನ ಬಗ್ಗೆ ಕಾಲೇಜಿನ ಪಠ್ಯಗಳಲ್ಲಿ ಮಾತ್ರ ಗೊತ್ತಿತ್ತು. ಇಲ್ಲಿ ಅವನ ಬಲ, ದೌರ್ಬಲ್ಯ, ಒಳ-ಹೊರಜಗತ್ತು, ಮಿತ್‌ಗಳು, ಬದುಕು, ಇತ್ಯಾದಿಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ....ಅವನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲವಂತೂ ನನಗಿದೆ. ಸಾಧ್ಯವಾದಷ್ಟು ಬೇಗ ಬರೀರಿ ಸರ್,

    ಸಂಗ್ರಹ ಯೋಗ್ಯ ಬರಹ ಸರ್.

    ಅಭಿನಂಧನೆಗಳು

    Unknown ಹೇಳಿದರು...

    ಶೇಕ್ಸ್ ಪಿಯರ್ನ ಬಗ್ಗೆ ನಮಗೆ ಗೊತ್ತಿಲ್ಲದ ಹತ್ತು ಸಂಗತಿಗಳನ್ನು ಕ್ರೋಢೀಕರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಎಲ್ಲಾ ಮಹಾನ್ ವ್ಯಕ್ತಿಗಳ ಬಗ್ಗೆಯೂ ಹೀಗೆಯೇ ಆಗಿರುತ್ತದೆ. ಕಾಳಿದಾಸನ ಪೂರ್ಣ ವಿವರಗಳು ಇನ್ನೂ ಲಭ್ಯವಾಗಿಲ್ಲ! ಭಗವಾನ್ ಬುದ್ಧನ ಬಗ್ಗೆಯೂ ಇಂತಹುದೇ ಹಲವಾರು ಅನುಮಾನಗಳಿವೆ. ಬಹುಶಃ ಅವರೆಲ್ಲರೂ ಬದುಕಿದ್ದಾಗ, ಜನರಿಂದ ಗುರುತಿಸಲ್ಪಟ್ಟಿರಲಿಲ್ಲವೇನೋ ಅನ್ನಿಸುತ್ತದೆ. ಅವರ ಸಾವಿನ ನಂತರ ಅವರ ಮಹತ್ವ ಜಗತ್ತಿಗೆ ಮನಗಂಡಿರಬೇಕು. ಇಲ್ಲಾ, ಅವರ ಅನುಯಾಯಿಗಳೇ ಈ ಬಗೆಯ ಹಲವಾರು ದಂತಕಥೆಗಳು ಹುಟ್ಟಿಸಿ, ತಮ್ಮ ನಾಯಕನ ಬಗ್ಗೆ ಜನರಲ್ಲಿ ಒಂದು ಬಗೆಯ ಕೌತುಕವನ್ನು ಮೂಡಿಸಿದ್ದಿರಬೇಕು. ಇವೆಲ್ಲಾ ನನ್ನ ಅನಿಸಿಕೆಗಳು ಮಾತ್ರ.

    sunaath ಹೇಳಿದರು...

    ಉದಯ,
    ಶೇಕ್ಸಪಿಯರನ ಜೀವನದ ಮಾಹಿತಿಗಳನ್ನು ಒದಗಿಸಿದ್ದಕ್ಕಾಗಿ ಧನ್ಯವಾದಗಳು.

    Ittigecement ಹೇಳಿದರು...

    ಉದಯ್...

    ಷೇಕ್ಸಪೀಯರ್.. ಕ್ರತಿಗಳನ್ನು ಕೆಲವು ಓದಿದ್ದೆ...

    ಅವನ ಬಗ್ಗೆ ಇಷ್ಟೆಲ್ಲ ಮಾಹಿತಿ ತಿಳಿದಿರಲಿಲ್ಲ....

    ಮಹಾಭಾರತದ ಕಾವ್ಯ ಹಾಗು ಅವನ ಕ್ರತಿಗಳ ಬಗೆಗಿನ ಒಂದು ತುಲನಾತ್ಮಕವಾದ ಲೇಖನ ಓದಿದ್ದೆ..

    ಅವನ ಬಗೆಗೆ ತಿಳಿಯದ ಹಲವಾರು ವಿಷಯ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು...

    ಬಿಸಿಲ ಹನಿ ಹೇಳಿದರು...

    ಜಲನಯನವರೆ,
    ನೀವು ಹೇಳಿದಂತೆ ದೊಡ್ಡ ದೊಡ್ಡ ವ್ಯಕ್ತಿಗಳ ಬಗ್ಗೆ ದೊಡ್ಡ ದೊಡ್ಡ ದಂತಕತೆಗಳಿವೆ. ಅದಕ್ಕೆ ಶೇಕ್ಷಪೀಯರನು ಕೂಡ ಹೊರತಾಗಿಲ್ಲ.ಇನ್ನು ರಚನೆಗಳು ಆತ ಕದ್ದದ್ದೋ ಸ್ವಂತದ್ದೋ ಎಂದು ಗೊಂದಲ ತಾಳುವ ಬದಲು ಅವನೇ ಬರೆದಿದ್ದು ಎಂದುಕೊಂಡು ಓದಿದರೆ ಅವನ ಬಗ್ಗೆ ಇನ್ನೂ ಹೆಚ್ಚಿನ ಗೌರವ ಮೂಡುತ್ತದೆ. ನನ್ನ ಅನುವಾದಗಳನ್ನು ಮೆಚ್ಚಿಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್. ಅವುಗಳನ್ನು ಪ್ರಕಟಿಸುವ ಯೋಜನೆಯೇನೋ ಇದೆ. ಆದರೆ ಸರಿಯಾದ ಪ್ರಕಾಶಕರು ಸಿಗಬೇಕಲ್ಲ? ನನ್ನ ಸಹಬ್ಲಾಗಿಗರೊಂದಿಗೆ ಈ ವಿಷಯವನ್ನು ಚರ್ಚಿಸಿದಾಗ ಅದರಲ್ಲಿರುವ ಸಾಕಷ್ಟು ಎಡರು ತೊಡರುಗಳು ಗೊತ್ತಾಗಿ ಸಧ್ಯಕ್ಕೆ ಆ ಯೋಚನೆಯನ್ನು ಮುಂದೂಡಿದ್ದೇನೆ. ಈ ಸಾರಿ ಬೆಂಗಳೂರಿಗೆ ಹೋದಾಗ ಕೂಲಂಕುಷವಾಗಿ ಪರಿಶೀಲಿಸಿ ಒಂದು ತೀರ್ಮಾನ ತೆಗೆದುಕೊಳ್ಳುವೆ.

    ಬಿಸಿಲ ಹನಿ ಹೇಳಿದರು...

    ಶಿವು,
    ಶೇಕ್ಷಪೀಯರನ ವ್ಯಯಕ್ತಿಕ ಬದುಕು ತುಂಬಾ ನಿಗೂಢ ನಿಗೂಢವಾಗಿದೆ. ಆದರೆ ಸಿಕ್ಕಿರುವ ಕೆಲವು ಮಾಹಿತಿಗಳು ಹಾಗೂ ಅವನ ಕೃತಿಗಳ ಆಧಾರದ ಮೇಲೆ ಅವನ ಬದುಕು ಹೀಗಿರಬಹುದು ಎಂದು ಊಹಿಸಲಾಗಿದೆ ಹೊರತು ಅದು ನಿಜವಲ್ಲ. ಇವನ್ನೆಲ್ಲ ಒತ್ತಟ್ಟಿಗಿಟ್ಟು ಆ ಕೃತಿಗಳನ್ನು ಅವನೇ ಬರೆದಿರಬಹುದು ಎಂದುಕೊಂಡು ಓದಿದರೆ ಖಂಡಿತ ಅವನ ಬಗ್ಗೆ ಗೌರವ ಮೂಡುವದರಲ್ಲಿ ಎರಡು ಮಾತಿಲ್ಲ. ಸಧ್ಯದಲ್ಲಿಯೇ ಅವನ ಪ್ರೇಮ ಪ್ರಕರಣದ ಬಗ್ಗೆ ಹಾಗೂ ಅವನ ಗೆಳೆತನದ ಬಗ್ಗೆ ಬರೆಯಲಿದ್ದೇನೆ.

    ಬಿಸಿಲ ಹನಿ ಹೇಳಿದರು...

    ಸತ್ಯನಾರಾಯಣ ಸರ್,
    ನೀವು ಹೇಳಿದಂತೆ ಎಲ್ಲಾ ಮಹಾನ್ ವ್ಯಕ್ತಿಗಳ ಬಗ್ಗೆ ಕೆಲವು ದಂತಕತೆಗಳಿದ್ದವು. ಅವು ನಿಜವೋ ಸುಳ್ಳೋ ಅವರಿರುವಾಗಲೆ ಹುಟ್ಟಿಕೊಂಡಿದ್ದವೋ ಅಥವಾ ಅವರು ಸತ್ತನಂತರ ಅವರ ಅನುಯಾಯಿಗಳು ಹುಟ್ಟಿಸಿದರೋ ಗೊತ್ತಿಲ್ಲ. ಆದರೆ ನಮ್ಮಂತ ಸಾಮಾನ್ಯ ಓದುಗರಿಗೆ ಅವು ಖುಶಿ ಕೊಡುವದು ಖಂಡಿತ ಸತ್ಯ! ಆದರೆ ಈ ಯಾವ ದಂತಕತೆಗಳಿಂದ ಪೂರ್ವಾಗ್ರಹಪೀಡಿತರಾಗದೆ ಸುಮ್ಮನೆ ಒಮ್ಮೆ ಅವರನ್ನು ನೋಡಿದರೆ ಖಂಡಿತ ಅವರು ಇಷ್ಟವಾಗುತ್ತಾರೆ ಅಲ್ಲವೆ?

    ಬಿಸಿಲ ಹನಿ ಹೇಳಿದರು...

    ಥ್ಯಾಂಕ್ಸ್ ಸುನಾಥ್ ಸರ್.

    ಬಿಸಿಲ ಹನಿ ಹೇಳಿದರು...

    ಪ್ರಕಾಶ್ ಅವರೆ,
    ಶೇಕ್ಷಪೀಯರನ ಬಗ್ಗೆ ನಮಗೆ ತಿಳಿಯದ ಇನ್ನೂ ಬೇಕಾದಷ್ಟು ವಿಷಯಗಳಿವೆ. ನಾನಿಲ್ಲಿ ಮುಖ್ಯವಾದ ಹತ್ತು ವಿಷಯಗಳನ್ನು ಮಾತ್ರ ಸಂಗ್ರಹಿಸಿ ಕೊಟ್ಟಿದ್ದೇನೆ. ಆದರೆ ಇವನ್ನೆಲ್ಲ ಒತ್ತಟ್ಟಿಗಿಟ್ಟು ಅವನನ್ನು ಒಮ್ಮೆ ಓದಿದರೆ ನಮ್ಮ ಬದುಕಿನ ಸಮಗ್ರ ಚಿತ್ರಣ ಸಿಗುವದರಲ್ಲಿ ಸಂಶಯವಿಲ್ಲ.

    ಸಾಗರದಾಚೆಯ ಇಂಚರ ಹೇಳಿದರು...

    ಬಿಸಿಲ ಹನಿ,
    ಆ ಮಹಾನ ಕವಿಯ ಬಗೆಗೆ ಓದುವುದು ಯಾವಾಗಲು ಸುಯೋಗವೇ, ಜಗತ್ತು ಕಂಡ ಮಾಹನ್ ನಾಟಕಕಾರನಿಗೆ ದೊಡ್ಡ ನಮನ.
    ಇದನ್ನು ತಿಳಿಸಿದ ನಿಮಗೆ ಅಭಿನಂದನೆಗಳು

    Unknown ಹೇಳಿದರು...

    ಹೌದು... ಶೇಕ್ಷಪೀಯರನ ಬಗ್ಗೆ ಹಿಂದೆ ಎಲ್ಲೊ ಓದಿದ್ದೆ... ಆತ ಏನೂ ಬರೆದಿದ್ದೆ ಇಲ್ಲ.. ಎಲ್ಲವೂ ಕದ್ದದ್ದು ಎಂದು ವಾದಿಸುವವರೂ ತುಂಬಾ ಜನರಿದ್ದಾರೆ... ಆದರೆ ನೀವಂದಂತೆ ಅದನ್ನು ಆತನೇ ಬರೆದದ್ದು ಎಂದುಕೊಂಡು ಓದಿದರೆ ಆತನ ಬಗ್ಗೆ ಗೌರವ ಮೂಡಿಸಿಕೊಳ್ಳಲು ನನ್ನ ಮನಸ್ಸು ಒಪ್ಪುತ್ತಿಲ್ಲ.. ಈ ಬಗ್ಗೆ ಸಂಶೋಧನೆ ನಡೆದು ಆತನ ಬಂಡವಾಳ ಹೊರಗೆ ಬರಲೇ ಬೇಕು... ಅದನ್ನು ಆತನೇ ಬರೆದದ್ದಾದರೆ ಸರಿ ... ಇಲ್ಲಾಂದ್ರೆ ಆ ಪುಸ್ತಕಗಳ ನಿಜವಾದ ಲೇಖಕನಿಗೆ ಅನ್ಯಾಯವಾದಂತೆ...

    ಬಿಸಿಲ ಹನಿ ಹೇಳಿದರು...

    ಗುರುಮೂರ್ತಿಯವರೆ,
    ಶೇಕ್ಷಪೀಯರನ ಬಗೆಗೆ ಏನೇ ಇರಲಿ ಅದನ್ನು ಮರೆತು ಅವನನ್ನು ಮರೆತು ಓದಿದರೆ ನೀವು ಹೇಳಿದಂತೆ ಅವನು ಖಂಡಿತ ಇಷ್ಟವಾಗುತ್ತಾನೆ.

    ಬಿಸಿಲ ಹನಿ ಹೇಳಿದರು...

    ರವಿಕಾಂತವರೆ,
    ನಿಜವಾದ ಶೇಕ್ಷಪೀಯರು ಯಾರು ಎಂಬುದನ್ನು ಕಂಡು ಹಿಡಿಯಲೇಬೇಕೆಂದು ನೀವು ಹೇಳಿರುವಿರಿ. ಆ ಕುರಿತು ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇವೆ. ಸೆಪ್ಟೆ೦ಬರ್ ೮ ೨೦೦೭ರಲ್ಲಿ ಬ್ರಿಟಿಶ್ ನ ಸುಪ್ರಸಿದ್ಧ ನಟರಾದ ಡೆರೆಕ್ ಜಾಕೋಬಿ ಮತ್ತು ಮಾರ್ಕ್ ರೈಲಾನ್ಸ್ ಶೇಕ್ಷಪೀಯರನ ಕೃತಿಗಳ ನಿಜವಾದ ಕರ್ತೃತ್ವದ ಬಗ್ಗೆ ಪ್ರಶ್ನಿಸಿ ಇ೦ಗ್ಲೆ೦ಡಿನ ಶಿಕೆಸ್ಟರ‍್ನಲ್ಲಿ ನಡೆದ "I Am Shakespeare" ಎ೦ಬ ನಾಟಕದ ಪ್ರದರ್ಶನದಲ್ಲಿ ಅನಾವರಣಗೊಳಿಸಿದರು. ಆದರೆ ಇದಕ್ಕೆ ಸಾಕಷ್ಟು ಪುರಾವೆಗಳು ಇಲ್ಲದ ಕಾರಣ ಅದನ್ನು ನಿಜವೆಂದು ನಂಬಲಿಕ್ಕಾಗುವದಿಲ್ಲ.ಈ ಕಾರ‍ಣಕ್ಕಾಗಿ ಅವನು ನಿಗೂಢವಾಗಿ ಉಳಿಯುತ್ತಾನೆ. ಇದೆಲ್ಲವನ್ನು ಮರೆತು ಅವನ ಕೃತಿಗಳನ್ನು ಒಮ್ಮೆ ಓದಿದರೆ ಅವನು ಇಷ್ಟವಾಗುವದರಲ್ಲಿ ಖಂಡಿತ ಸಂದೇಹವಿಲ್ಲ.

    ಶಿವಪ್ರಕಾಶ್ ಹೇಳಿದರು...

    Thanks for informative articles.

    ಬಿಸಿಲ ಹನಿ ಹೇಳಿದರು...

    Thanks Shivaprakash.

    ಅಂತರ್ವಾಣಿ ಹೇಳಿದರು...

    ಉದಯ ಅವರೆ,
    ಒಳ್ಳೆ ಮಾಹಿತಿ ಕೊಟ್ಟಿದ್ದೀರ ಇಂತ ಮಹಾ ನಾಟಕಕಾರನ ಬಗ್ಗೆ.