Demo image Demo image Demo image Demo image Demo image Demo image Demo image Demo image

ಲಿಬಿಯನ್‍ರು ಮತ್ತು ಹಿಂದಿ ಸಿನಿಮಾಗಳು

  • ಮಂಗಳವಾರ, ಜೂನ್ 25, 2013
  • ಬಿಸಿಲ ಹನಿ
  • ನಾವು ಲಿಬಿಯಾಕ್ಕೆ ಬಂದ ಹೊಸತರಲ್ಲಿ ನಮಗಿನ್ನೂ ಇಲ್ಲಿ ಪ್ರಸಾರವಾಗುವ ಟೀವಿ ಚಾನಲ್‍ಗಳ ಬಗ್ಗೆ ಏನೆಂದರೆ ಏನೂ ಗೊತ್ತಿರಲಿಲ್ಲ. ಹೀಗಿರುವಾಗ ನಾವು ಮನೆಯಿಂದ ಹೊರಗಡೆ ಹೋದಾಗಲೆಲ್ಲಾ ನಮಗೆ ಹೊಸದಾಗಿ ಸಿಗುವ ಯಾವುದೇ ಲಿಬಿಯನ್ ನಮ್ಮನ್ನು ನೋಡಿ “ಓ. ಹಿಂದ್ ಹಿಂದ್! (ಓ, ಇಂಡಿಯನ್!)” ಎಂದು ಉದ್ಗಾರ ತೆಗೆಯುತ್ತಾ ಹತ್ತಿರ ಬಂದು “ಕೆಫೆಹಲಾಲ್? (ಹೇಗಿದ್ದೀರಿ?) ಎಂದು ಉಭಯಕುಶಲೋಪಾರಿಯನ್ನು ವಿಚಾರಿಸುತ್ತಾ ನಮ್ಮನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಬೆನ್ನಹಿಂದೆಯೇ ನೇರವಾಗಿ ನಮ್ಮನ್ನು ಹಿಂದಿ ಸಿನಿಮಾಕ್ಕೆ ಸಂಬಂಧಪಟ್ಟಹಾಗೆ “ನಿಮಗೆ ಅಮಿತಾಬ್ ಬಚ್ಚನ್ ಗೊತ್ತೆ? ಶಾರುಖ್ ಖಾನ್ ನಿಮ್ಮ ಮನೆಯ ಪಕ್ಕದಲ್ಲಿಯೇ ಇರುವನೆ? ಐಶ್ಚರ್ಯಾ ರೈ ಅಮಿತಾಬ್ ಬಚ್ಚನ್ ಸೊಸೆಯಂತೆ, ಹೌದೆ? ಕತ್ರಿನಾ ಕೈಫ್ ಅದೆಷ್ಟು ಸುಂದರವಾಗಿದ್ದಾಳೆ? ಧರ್ಮೇಂದರ್ ಈಗಲೂ ನಟಿಸುತ್ತಾನೆಯೇ? ಹೇಮಾ ಮಾಲಿನಿ ಹೇಗಿದ್ದಾಳೆ? ಸಲ್ಮಾನ್ ಖಾನ್ ಯಾಕಿನ್ನೂ ಮದುವೆಯಾಗಿಲ್ಲ? ನಿಮ್ಮ ಬಳಿ ಹಿಂದಿ ಸಿನಿಮಾ ಹಾಡುಗಳಿದ್ದರೆ ನಮ್ಮ ಫ್ಲ್ಯಾಶ್‍ (ಪೆನ್‍ ಡ್ರೈವ್) ನಲ್ಲಿ ಹಾಕಿಕೊಡುತ್ತೀರಾ?” ಹೀಗೆ ಶಾರುಖ್ ಖಾನ್, ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮುಂತಾದವರೆಲ್ಲಾ ನಮ್ಮ ಮನೆಯ ಪಕ್ಕದಲ್ಲಿರುವರೇನೋ, ಅಥವಾ ಅವರೆಲ್ಲಾ ನಮ್ಮ ಸ್ನೇಹಿತರೋ, ನೆಂಟರೇನೋ ಎಂಬಂತೆ ಕೇಳುತ್ತಿದ್ದರೆ ನಾವೆಲ್ಲಾ ಆಶ್ಚರ್ಯ ಮತ್ತು ಹೆಮ್ಮೆಯಿಂದ ಬೀಗುತ್ತಿದ್ದೆವು. ಮಾತ್ರವಲ್ಲ ಅವರಿಗೆ ರೇಖಾ ಗೊತ್ತು, ಜಿತೆಂದ್ರ್ ಗೊತ್ತು, ಕರೀನಾ ಕಪೂರ್ ಗೊತ್ತು, ಸೈಫ್‍ಅಲಿ ಖಾನ್ ಗೊತ್ತು, ಪ್ರಿಯಾಂಕಾ ಚೋಪ್ರಾ ಗೊತ್ತು...........ಹೀಗೆ ಪಟ್ಟಿ ಇನ್ನೂ ಬೆಳೆಯುತ್ತಾ ಹೋಗುತ್ತದೆ.


    ನನಗೋ ಭಾರೀ ಕುತೂಹಲ ನಮ್ಮ ಹಿಂದಿ ಸಿನಿಮಾ ನಟ ನಟಿಯರೆಲ್ಲಾ ಇವರಿಗೆ ಹೇಗೆ ಗೊತ್ತೆಂದು? ಈ ಹಿನ್ನೆಲೆಯಲ್ಲಿ ನಾನು ಕುತೂಹಲ ತಡೆಯಲಾರದೆ ಒಂದು ಸಾರಿ ಅವರನ್ನು ಕೇಳಿಯೇ ಬಿಟ್ಟೆ, “ನಿಮಗೆ ಇವರೆಲ್ಲಾ ಹೇಗೆ ಗೊತ್ತು? ಇವರೆಲ್ಲಾ ನಿಮಗೆ ತುಂಬಾ ವರ್ಷದಿಂದ ಪರಿಚಯವಿರೋ ತರ ಕೇಳುತ್ತೀರಲ್ಲ?“ ಅದಕ್ಕವರು “ಅವರೆಲ್ಲಾ ಇಲ್ಲಿ ಪ್ರಸಾರವಾಗುವ Zee Aflam, ಮತ್ತು B4U Aflam ಎನ್ನುವ ಹಿಂದಿ ಸಿನಿಮಾ ಚಾನಲ್‍ಗಳ ಮೂಲಕ ಪರಿಚಯ.” ಎಂದು ಹೇಳಿದ್ದರು. ಮುಂದುವರಿದು “ಹಿಂದ್ (ಇಂಡಿಯನ್) ಫಿಲ್ಮ್ಸ್ ಕೋಯಿಸ್ (ಚನ್ನಾಗಿದೆ), ಮಿಯ್ಯಾ ಮಿಯ್ಯಾ (ಅತ್ಯುತ್ತಮ)” ಎಂದು ಹೇಳುತ್ತಾ ಹಿಂದಿ ಸಿನಿಮಾಗಳನ್ನು ಬಾಯಿತುಂಬಾ ಹೊಗಳಿದ್ದರು. ಪರ್ವಾಗಿಲ್ಲ ನಮ್ಮ ಬಾಲಿವುಡ್ ನಟ-ನಟಿಯರು ಇಲ್ಲಿಯವರಿಗೂ ತಮ್ಮ ಜನಪ್ರೀಯತೆಯ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಖುಷಿಯಾಗಿತ್ತು. ನನಗಿಂತ ಮೊದಲೇ ಇಲ್ಲಿ ಸುಮಾರು ವರ್ಷಗಳಿಂದ ಇದ್ದ ಭಾರತೀಯರನ್ನು ನಾನು ಒಮ್ಮೆ ಹೀಗೆ ಕೇಳಿದ್ದೆ “ನೀವು ಇಲ್ಲಿಗೆ ಬಂದ ಹೊಸತರಲ್ಲಿ ಅವರು ನಿಮ್ಮನ್ನೂ ಇದೇ ರೀತಿ ಹಿಂದಿ ಸಿನಿಮಾಗಳ ಕುರಿತಂತೆ ಪ್ರಶ್ನೆಗಳನ್ನು ಕೇಳುತ್ತಿದ್ದರೆ?” ಅವರು ಹೌದೆಂದು ತಲೆಯಲ್ಲಾಡಿಸುತ್ತಾ “ಇಲ್ಲಿಯವರಿಗೆ ಹಿಂದಿ ಸಿನಿಮಾಗಳೆಂದರೆ ಅದೇನೋ ಒಂಥರಾ ಹುಚ್ಚು” ಎಂದು ಹೇಳಿದ್ದರು. ಇವರಿಗೇಕೆ ಇಷ್ಟೊಂದು ಹಿಂದಿ ಸಿನಿಮಾಗಳ ಹುಚ್ಚು? ಇವರ (ಅರೇಬಿಕ್) ಭಾಷೆಯಲ್ಲಿ ಸಿನಿಮಾಗಳು ಬರುವದಿಲ್ಲವೆ? ಬಂದರೂ ಅವು ಅಷ್ಟೊಂದು ಚನ್ನಾಗಿರುವದಿಲ್ಲವೆ? ಯಾಕೆ? ಏನು? ಹೇಗೆ? ಅಂತೆಲ್ಲಾ ಬೆನ್ಹತ್ತಿ ಹೋದಾಗ ಗೊತ್ತಾಗಿದ್ದು ಈ ದೇಶದಲ್ಲಿ ಸಿನಿಮಾಗಳೇ ತಯಾರಾಗುವದಿಲ್ಲ ಎನ್ನುವ ಸಂಗತಿ. ಇಲ್ಲಿ ಮಾತ್ರವಲ್ಲ ಈಜಿಪ್ಟ್ ವೊಂದನ್ನು ಬಿಟ್ಟರೆ ಬಹಳಷ್ಟು ಅರೇಬಿಕ್ ದೇಶಗಳಲ್ಲಿ ಸಿನಿಮಾಗಳು ತಯಾರಾಗುವದಿಲ್ಲವೆಂದರೆ ನೀವು ನಂಬಲೇಬೇಕು. ತಯಾರಾದರೂ ಎರಡ್ಮೂರು ವರ್ಷಕ್ಕೊಮ್ಮೆ ಒಂದೋ ಅಥವಾ ಎರಡು ಸಿನಿಮಾಗಳು ತಯಾರಾಗುತ್ತವೆ. ಆದರೆ ಅವು ನಮ್ಮ ಹಿಂದಿ ಚಲನಚಿತ್ರಗಳಿಗೆ ಯಾವ ರೀತಿಯಲ್ಲೂ ಸಾಟಿಯಾಗುವದಿಲ್ಲ. ಹಾಗೆಂದೇ ನಮ್ಮ ಸಿನಿಮಾಗಳಿಗಿಲ್ಲಿ ಅಧಿಕ ಜನಪ್ರಿಯತೆಯಿದೆ.

    ಹಾಗೆ ನೋಡಿದರೆ ಅರಬ್ ಸಿನಿಮಾಗಳ ನಿರ್ಮಾಣ ಹೆಚ್ಚಾಗಿದ್ದೇ ತೀರಾ ಇತ್ತೀಚಿಗೆ. ಅದೂ ಅಲ್ಜಿರಿಯಾ, ಲೆಬನಾನ್, ಪ್ಯಾಲೆಸ್ತಿನಿಯಾ, ತುನಿಶಿಯಾ, ಹಾಗೂ ಸಿರಿಯಾಗಳಲ್ಲಿ ಮಾತ್ರ. ಅತಿ ಹೆಚ್ಚು ಅರಬ್ ಸಿನಿಮಾಗಳ ನಿರ್ಮಾಣದ ಕೀರ್ತಿ ಈಜಿಪ್ಟ್ ದೇಶಕ್ಕೆ ಸಲ್ಲುತ್ತದೆ. ಏಕೆಂದರೆ ಮುಕ್ಕಾಲು ಪಾಲು ಅರಬ್ ಸಿನಿಮಾಗಳು ತಯಾರಾಗುವದು ಈಜಿಪ್ಟ್ ದೇಶದ ರಾಜಧಾನಿ ಕೈರೋದಲ್ಲಿಯೇ. ಲಿಬಿಯಾ ಸೇರಿದಂತೆ ಬಹುತೇಕ ಅರೇಬಿಕ್ ದೆಶಗಳಲ್ಲಿ ಸಿನಿಮಾಗಳ ನಿರ್ಮಾಣ ಬಹುತೇಕ ಕಿರುಚಿತ್ರಗಳಿಗೆ ಮತ್ತು ಟೀವಿ ಚಿತ್ರಗಳಿಗೆ ಮಾತ್ರ ಸೀಮಿತವಾಗಿದೆ. ಜೋರ್ಡಾನ್, ಲೆಬನಾನ್, ಇರಾಕ್ ದೇಶಗಳು ಸಿನಿಮಾಗಳನ್ನು ನಿರ್ಮಿಸಿವೆಯಾದರೂ ಅವು ಕೇವಲ ಬೆರಳಣಿಕೆಯಷ್ಟಾಗಿವೆ. 19ನೇ ಶತಮಾನದಲ್ಲಿ ಅಂದರೆ ಸಿನಿಮಾ ಆಗಷ್ಟೆ ಆವಿಷ್ಕಾರಗೊಂಡ ಸಂದರ್ಭದಲ್ಲಿ ಮಧ್ಯಪ್ರಾಚ್ಯದ ಬಹುತೇಕ ರಾಷ್ಟ್ರಗಳು ಬ್ರಿಟಿಷ್ ಮತ್ತು ಫ್ರೆಂಚ್‍ರ ಅಧೀನಕ್ಕೆ ಒಳಪಟ್ಟಿದ್ದವು. ಸಿನಿಮಾ ಆವಿಷ್ಕಾರಗೊಂಡು ಎರಡು ದಶಕಗಳ ನಂತರ ಈ ಎರಡು ಬಲಾಢ್ಯ ದೇಶಗಳು ‘ಸೈಕ್ಸ್-ಪೈಕಾಟ್’ ಒಪ್ಪಂದದ ಮೂಲಕ ಅರಬ್ ರಾಷ್ಟ್ರಗಳನ್ನು ಎರಡು ಭಾಗ ಮಾಡಿಕೊಂಡು ಆಳತೊಡಗಿದವು. ಪರಿಣಾಮವಾಗಿ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಇನ್ನೂ ಸ್ವತಂತ್ರವಾಗಿರದ ಅರಬ್ ರಾಷ್ಟ್ರಗಳಿಗೆ ಸಿನಿಮಾಗಳ ತಯಾರಿಕೆಯಲ್ಲಿ ಅಡಚಣೆಯುಂಟಾಯಿತು. ಆದರೆ ಈಜಿಪ್ಟ್ ಮಾತ್ರ ಇದಕ್ಕೆ ಹೊರತಾಗಿತ್ತು. ಆ ಸಮಯದಲ್ಲಿಯೇ ಅರಬ್ ಮಾರುಕಟ್ಟೆ ಯೂರೋಪಿನ ವ್ಯಾಪಾರ ಸಗಟುಗಳಿಂದ ತುಂಬಿಹೋಗಿದ್ದರಿಂದ ಸಹಜವಾಗಿ ಯೂರೋಪಿಯನ್ನರು ಬಂಡವಾಳ ಹೂಡಿಕೆದಾರರಾದರು ಹಾಗೂ ಸ್ಥಳೀಯ ಉದ್ದಿಮೆದಾರರು ಹಿಂದೆ ಸರಿದರು. ಅರಬ್‍ರ ಮೇಲೆ ರಾಜಕೀಯ ದಬ್ಬಾಳಿಕೆ ನಡೆದುದಷ್ಟೇ ಅಲ್ಲದೆ ಸಾಂಸ್ಕೃತಿಕ ದಬ್ಬಾಳಿಕೆಯೂ ನಡೆಯಿತು. ಮೊದಲಿಗೆ ಇಲ್ಲಿನ ಸಿನಿಮಾ ಥೇಟರ್ ಗಳು ವಿದೇಶಿಯರ ಒಡೆತನದಲ್ಲಿದ್ದುದರಿಂದ ಅವರು ತಮ್ಮ ಭಾಷೆಯ ಚಿತ್ರಗಳನ್ನು ಮಾತ್ರ ತಯಾರಿಸಿದರು. ಆದರೆ ಅವು ಸ್ಥಳೀಯರನ್ನು ತಲುಪವಲ್ಲಿ ವಿಫಲವಾದ್ದರಿಂದ ಸಿನಿಮಾ ತಯಾರಿಕೆಯಿಂದ ಅವರಿಗೆ ಅಪಾರ ನಷ್ಟವುಂಟಾಯಿತು. ಆದರೆ ವಸಾಹತುಕಾಲದಲ್ಲಿ ತಕ್ಕಮಟ್ಟಿಗೆ ಸ್ವತಂತ್ರವಾಗಿದ್ದ ಈಜಿಪ್ಟ್ ನ್ಯಾಷನಲ್ ಫಿಲ್ಮ್ ಇಂಡಸ್ಟ್ರಿಯನ್ನು ಸ್ಥಾಪಿಸುವ ಹಂತದವರೆಗೂ ತಲುಪಿತು. 1909 ರಲ್ಲಿ ತಮ್ಮ ನಾಯಕನ ಅಂತ್ಯಕ್ರಿಯೆಯ ಮೆರವಣಿಗಿಯನ್ನು ಚಿತ್ರಿಕರಿಸುವದರ ಮೂಲಕ ಆರಂಭವಾದ ಅವರ ಸಿನಿಮಾ ನಿರ್ಮಾಣ 1934 ರಲ್ಲಿ ಈಜಿಪ್ಸಿಯನ್ ಫಿಲ್ಮ್ ಇಂಡಸ್ಟ್ರಿಯನ್ನು ಸ್ಥಾಪಿಸುವ ಮಟ್ಟಕ್ಕೂ ಬೆಳೆಯಿತು. ಅಲ್ಲಿಂದಾಚೆ ಅನೇಕ ಅರೇಬಿಕ್ ಸಿನಿಮಾಗಳನ್ನು ತಯಾರಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು.

    ವಿವಿಧ ಅರೇಬಿಕ್ ದೇಶಗಳಿಂದ ಪ್ರಸಾರವಾಗುವ ಅರೇಬಿಕ್ ಟೀವಿ ಚಾನಲ್‍ಗಳು ಹೆಚ್ಚಾಗಿ ಕೈರೋದಲ್ಲಿ ತಯಾರಾಗುವ ಸಿನಿಮಾಗಳನ್ನೇ ಪ್ರಸಾರ ಮಾಡುತ್ತವೆ. ಅದು ಬಿಟ್ಟರೆ ಅರೇಬಿಕ್ ಮೆಗಾ ಧಾರಾವಾಹಿಗಳನ್ನು ಹಾಗೂ ಡಾಕುಮೆಂಟರಿಗಳನ್ನು ಪ್ರಸಾರಮಾಡುತ್ತವೆ. ಹೀಗಾಗಿ Zee Aflam ಮತ್ತು B4U Aflam ಎನ್ನುವ ಎರಡು ಚಾನಲ್‍ಗಳು ಇಲ್ಲಿಯವರಿಗೆ ಹುಚ್ಚು ಹಿಡಿಸಿವೆ. ನಾನು ಮೊದಮೊದಲು ಲಿಬಿಯನ್‍ರಿಗೆ ಮಾತ್ರ ನಮ್ಮ ಹಿಂದಿ ಚಿತ್ರಗಳ ಬಗ್ಗೆ ಕ್ರೇಜ್ ಇರಬಹುದೆಂದುಕೊಂಡಿದ್ದೆ. ಆದರೆ ಯಾವಾಗ ನನ್ನ ಜೋರ್ಡಾನಿ, ಸಿರಿಯನ್, ಸುಡಾನಿ ಸಹೋದ್ಯೋಗಿಗಳು ಸಹ ಹಿಂದಿ ಫಿಲ್ಮ್ಸ್ ಬಗ್ಗೆ ಮಾತನಾಡತೊಡಗಿದರೋ ಆಗ ನನಗೆ ಗೊತ್ತಾಯಿತು ಈ ಅರಬ್‍ರಿಗೆ ನಮ್ಮ ಚಿತ್ರಗಳೆಂದರೆ ತುಂಬಾ ಇಷ್ಟ ಎಂದು. ಆದರೆ ನಾ ಕಂಡಂತೆ ಈಜಿಪ್ಸಿಯನ್ನರು ಮಾತ್ರ ಅಷ್ಟಾಗಿ ನಮ್ಮ ಹಿಂದಿ ಚಿತ್ರಗಳತ್ತ ಒಲವು ಬೆಳೆಸಿಕೊಂಡಿಲ್ಲ. ಬಹುಶಃ, ನಮ್ಮಲ್ಲಿ ಬಾಲಿವುಡ್ ಫಿಲ್ಮ್ ಇಂಡಸ್ಟ್ರಿ ಇದ್ದಂತೆ ಅವರಲ್ಲೂ ಸಹ ಅವರದೇ ಆದ ಅರೇಬಿಕ್ ಫಿಲ್ಮ್ ಇಂಡಸ್ಟ್ರಿ ಇರುವದೇ ಅದಕ್ಕೆ ಕಾರಣವಿರಬಹುದು.

    ಅಂದಹಾಗೆ ಇಲ್ಲಿಯವರಿಗೆ ನಮ್ಮ ಹಿಂದಿ ಸಿನಿಮಾಗಳ ಹುಚ್ಚು ಹಿಡಿಸಿದ ಎರದು ಚಾನಲ್‍ಗಳೆಂದರೆ ಒಂದು Zee Aflam, ಇನ್ನೊಂದು B4U Aflam. Zee Aflam ಎನ್ನುವದು ಇಂಡಿಯಾ-ಬೇಸ್ಡ್ ಚಾನಲ್ ಆಗಿದ್ದು Zee Entertainment Enterprises ಒಡೆತನದಲ್ಲಿ ದುಬೈನಲ್ಲಿ ಆರಂಭವಾದ ಚಾನಲ್. ಸೌದಿ ಅರೇಬಿಯಾವನ್ನು ಒಳಗೊಂಡಂತೆ ಅನೇಕ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅತ್ಯಂತ ಜನಪ್ರೀಯತೆಯನ್ನು ಪಡೆದುಕೊಂಡ ಚಾನಲ್ ಇದು. ನೈಲ್ ಸ್ಯಾಟ್‍ನಿಂದ ದಿನದ ಇಪ್ಪತ್ನಾಲ್ಕು ಘಂಟೆ ಬರೀ ಹಿಂದಿ ಸಿನಿಮಾಗಳನ್ನು ಮಾತ್ರ ಪ್ರಸಾರ ಮಾಡುವ ಚಾನಲ್ ಇದು. ಇದು ಮೊದಮೊದಲು ಹಿಂದಿ ಸಿನಿಮಾಗಳನ್ನು ಅರೇಬಿಕ್ ಸಬ್‍ಟೈಟಲ್ಸ್ ಸಮೇತ ಪ್ರಸಾರ ಮಾಡುತ್ತಿತ್ತು. ಆದರೆ ಇದೀಗ ಬಹುತೇಕ ಹಿಂದಿ ಸಿನಿಮಾಗಳನ್ನು ಅರೇಬಿಕ್ ಭಾಷೆಗೆ ಡಬ್ ಮಾಡಿ ಪ್ರಸಾರ ಮಾಡುತ್ತಿದೆ. ಹೀಗಾಗಿ ಅವು ಇನ್ನೂ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರ ಜೊತೆಗೆ ಅದೇ ನೈಲ್ ಸ್ಯಾಟ್‍ನಲ್ಲಿ ಅರೇಬಿಕ್ ಸಬ್‍ಟೈಟಲ್‍ಗಳೊಂದಿಗೆ ಹಿಂದಿ ಸಿನಿಮಾಗಳನ್ನು ಪ್ರಸಾರ ಮಾಡುವ ಮತ್ತೊಂದು ಚಾನೆಲ್ ಎಂದರೆ B4U Aflam. ಇದರಲ್ಲೂ ದಿನದ ಇಪ್ಪತ್ನಾಲ್ಕು ಘಂಟೆ ಹಿಂದಿ ಸಿನೆಮಾಗಳನ್ನು ಅರೇಬಿಕ್ ಸಬ್‍ಟೈಟಲ್ಸ್ ಸಮೇತ ಪ್ರಸಾರ ಮಾಡುತ್ತಾರೆ.

    ಇಲ್ಲಿನವರು ಅದೆಷ್ಟು ತಮ್ಮ ಸಿನಿಮಾಗಳನ್ನು ನೋಡುತ್ತಾರೋ ಗೊತ್ತಿಲ್ಲ! ಆದರೆ ಅದಕ್ಕಿಂತ ಹೆಚ್ಚಾಗಿ ಈ ಎರಡು ಚಾನಲ್‍ಗಳಲ್ಲಿ ಪ್ರಸಾರವಾಗುವ ಹಿಂದಿ ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತಾರೆ. ಹಾಗೆಂದೇ ಇಲ್ಲಿನವರಿಗೆ ನಮ್ಮ ಹಿಂದಿ ಚಲನಚಿತ್ರಗಳ ನಟ-ನಟಿಯರೆಲ್ಲಾ ಗೊತ್ತು. ನಮ್ಮ ಅನೇಕ ಹಿಂದಿ ಚಿತ್ರಗೀತೆಗಳು ಗೊತ್ತು. ನನ್ನ ಬಹಳಷ್ಟು ವಿದ್ಯಾರ್ಥಿಗಳು ಹಿಂದಿ ಸಿನಿಮಾಗಳ ಹಾಡುಗಳನ್ನು ತಮ್ಮ ಮೊಬೈಲ್‍ನಲ್ಲಿ ಹಾಕಿಕೊಂಡು ಆಗಾಗ್ಗ ಕೇಳುತ್ತಿರುತ್ತಾರೆ. ಇನ್ನು ನನ್ನ ವಿದ್ಯಾರ್ಥಿನಿಯರಂತೂ ಐಶ್ಚರ್ಯ್ ರೈ ಫ್ಯಾನ್ ಮಾತ್ರವಲ್ಲ ಆಕೆ ಹಾಕಿಕೊಳ್ಳುವ ಬಳೆ, ಡ್ರೆಸ್‍ಗಳ ಫ್ಯಾನ್ ಕೂಡ ಆಗಿದ್ದಾರೆ. ಆಕೆ ಅಭಿನಯಿಸಿದ “ಹಮ್ ದಿಲ್ ದೇ ಚುಕೆ ಸನಮ್” ಚಿತ್ರದ “ಆಖೋ ಕಿ.......” ಹಾಡೆಂದರೆ ಅವರಿಗೆ ಪಂಚಪ್ರಾಣ. “ಆ ಹಾಡಿನಲ್ಲಿ ಅದೆಷ್ಟು ಚನ್ನಾಗಿ ಕಾಣುತ್ತಾಳೆ? ಆ ಹಾಡಿನಲ್ಲಿ ಆಕೆ ಹಾಕಿಕೊಂಡಿರುವ ಡ್ರೆಸ್ಸ್‍ಗೆ ನಿಮ್ಮಲ್ಲಿ ಏನನ್ನುತ್ತಾರೆ? ಅಂಥದೊಂದು ಡ್ರೆಸ್ ನಮಗೂ ಒಂದು ತಂದುಕೊಡುತ್ತೀರಾ? How beautiful she is! We wish we were like Aishwarya Rai.” ಎಂದು ಆಕೆಯ ಬಗೆಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಅಂದಮೇಲೆ ಅವರಿಗೆ ಹಿಂದಿ ಸಿನಿಮಾಗಳ ಹುಚ್ಚು ಅದೆಷ್ಟಿರಬಹುದೆನ್ನುವದನ್ನು ನೀವೇ ಲೆಕ್ಕ ಹಾಕಿ! ನಾನು ಒಮ್ಮೆ ಅವರನ್ನು “ನಿಮಗೇಕೆ ಹಿಂದಿ ಸಿನಿಮಾಗಳೆಂದರೆ ಅಷ್ಟು ಇಷ್ಟ? ಅದರಲ್ಲಿ ಯಾವ ಅಂಶವನ್ನು ಇಷ್ಟಪಡುತ್ತೀರಿ?” ಎಂದು ಕೇಳಿದ್ದೆ. ಮುಖ್ಯವಾಗಿ ಹಾಡುಗಳು, ಡ್ಯಾನ್ಸ್, ಸೆಟ್ಟಿಂಗ್ಸ್, ಕಥೆ, ಮತ್ತು ಅವುಗಳಲ್ಲಿ ನವಿರು ನವಿರಾಗಿ ನಿರೂಪಿತವಾಗುವ ಪ್ರೀತಿ ಎಂದು ಮೈ ಕುಣಿಸುತ್ತಾ ಹುಬ್ಬು ಹಾರಿಸುತ್ತಾ ಹೇಳಿದ್ದರು. ಅಷ್ಟೇ ಅಲ್ಲ ನಮ್ಮ ಎಷ್ಟೋ ಹಿಂದಿ ಸಿನಿಮಾಗಳ ಲವ್ ಸೀನ್‍ಗಳು ಅವರ ಪ್ರೀತಿಗೂ ಪ್ರೇರಣೆಯಾಗಿವೆ ಎಂದು ಮುಚ್ಚುಮರೆಯಿಲ್ಲದೆ ಹೇಳುತ್ತಾರೆ.

    ಇದರಿಂದಲೇ ಗೊತ್ತಾಗುತ್ತದಲ್ಲವೇ ಅವರಿಗೆ ನಮ್ಮ ಹಿಂದಿ ಸಿನಿಮಾಗಳೆಂದರೆ ಅದೆಷ್ಟು ಹುಚ್ಚು ಅಂತಾ? ಎತ್ತಣ ಹಿಂದಿ ಸಿನಿಮಾಗಳು, ಎತ್ತಣ ಲಿಬಿಯನ್‍ರು? ಎತ್ತಣದಿಂದೆತ್ತ ಸಂಬಂಧವಯ್ಯಾ?

    -ಉದಯ್ ಇಟಗಿ

    ಅಪ್ಪಾ, ನನ್ನ ನೆನಪುಗಳಲ್ಲಿ ನೀನೆಲ್ಲಿ?

  • ಬಿಸಿಲ ಹನಿ

  • ಅಪ್ಪನೇ,


    ನಾನು ನಿನ್ನನ್ನು ಹೀಗೆ ನೇರಾನೇರ ಬರೀ “ಅಪ್ಪನೇ” ಎಂದು ಕರೆದಿದ್ದು ನಿನಗೆ ಕಸಿವಿಸಿಯೆನಿಸುತ್ತಿರಬಹುದು. ಅಥವಾ ಅನ್ನಿಸದೆಯೂ ಇರಬಹುದು! ಕಸಿವಿಸಿ ಯಾಕೆಂದರೆ ಸೌಜನ್ಯಕ್ಕಾದರೂ ನನ್ನ ಮಗ ನನ್ನನ್ನು “ಪ್ರೀತಿಯ ಅಪ್ಪನೇ” ಎಂದು ಸಂಬೋಧಿಸಬಹುದಿತ್ತಲ್ಲ ಎಂದು! ಕ್ಷಮಿಸು! ನಾನು ನಿನನ್ನು ಹಾಗೆ ಕರೆಯಲಾರೆ! ಏಕೆಂದರೆ ನೀನು ಬರೀ ಅಪ್ಪನಾಗಿಯೇ ಉಳಿದೇ ಹೊರತು ನಮಗ್ಯಾರಿಗೂ ಪ್ರೀತಿಯ ಅಪ್ಪನಾಗುವ ಪ್ರಯತ್ನವನ್ನು ನೀನು ಯಾವತ್ತೂ ಮಾಡಲಿಲ್ಲ! ಪ್ರೀತಿಗೆ ಪಾತ್ರರಾಗದವರನ್ನು “ಪ್ರಿತಿಯ” ಎಂದು ಕರೆಯುವದಾದರೂ ಹೇಗೆ?

    ಹಾಗಂತ ನನಗೆ ಸೌಜನ್ಯವಾಗಲಿ, ಪ್ರೀತಿಸುವದಾಗಲಿ ಗೊತ್ತಿಲ್ಲ ಅಂತಾ ಅಲ್ಲಾ! ಖಂಡಿತ ಇದೆ! ನಿನ್ನ ಹೊಟ್ಟೆಯಲ್ಲಿ ಹುಟ್ಟಿಯೂ ನಿನ್ನಂತಾಗದೆ ಅದ್ಭುತವಾಗಿ ಪ್ರಿತಿಸುವದನ್ನು ಕಲಿತಿದ್ದೇನೆ, ಜವಾಬ್ದಾರಿಗಳನ್ನು ನಿರ್ವಹಿಸುವದನ್ನು ಕಲಿತಿದ್ದೇನೆ, ಕರ್ತವ್ಯಗಳನ್ನು ನಿಭಾಯಿಸುವದನ್ನು ಕಲಿತಿದ್ದೇನೆ. ಹೆಂಡತಿ-ಮಗಳ ಬೇಕು-ಬೇಡಗಳನ್ನು ಗಮನಿಸುವದನ್ನು ಕಲಿತಿದ್ದೇನೆ. ನಿನ್ನಂತೆ ಉಂಡಾಡಿ ಗುಂಡನಾಗದೆ ಘನತೆಯ ಬದುಕನ್ನು ಬದುಕುವದನ್ನು ಕಲಿತಿದ್ದೇನೆ!

    ನಿನಗೀಗ ಎಪ್ಪತ್ತೈದೋ ಎಪ್ಪತ್ತಾರೋ? ನನಗೆ ಮೂವತ್ತೆಂಟು! ಇವತ್ತು ಕುಳಿತುಕೊಂಡು ಈ ಮೂವತ್ತೆಂಟು ವರ್ಷಗಳಲ್ಲಿನ ನನ್ನ ನೆನಪುಗಳಲ್ಲಿ ನೀನೆಲ್ಲಿ? ಎಂದು ಹುಡುಕುತ್ತಿದ್ದೇನೆ. ಊಹೂಂ, ಎಲ್ಲೂ ನಿನ್ನ ಸುಳಿವೇ ಇಲ್ಲ! ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು, ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ, ಅಪ್ಪ ಎಂದರೆ ಇನ್ನೂ ಏನೇನೋ ನೆನಪುಗಳು ಅಂತಾ ಹೇಳುತ್ತಾರಲ್ಲ? ಇದ್ಯಾವ ನೆನಪುಗಳನ್ನು ನೀನು ನನಗೆ ಕೊಡದೆ ನನ್ನನ್ನು ವಂಚಿಸಿಬಿಟ್ಟಿ!

    ಯಾವತ್ತಾದರೂ ನೀನು ನನ್ನನ್ನು ನಿನ್ನ ಹೆಗಲ ಮೇಲೆ ಹೊತ್ತು ತಿರುಗಾಡಿದ್ದು, ನಿನ್ನ ನೋಡಿದ ಕೂಡಲೇ ನಾನು ನನ್ನ ಎರಡೂ ಕೈ ಚಾಚಿ ನಕ್ಕಿದ್ದು, ಒಂದು ದಿನವಾದರೂ ನನ್ನ ಕೈ ಹಿಡಿದು ನಡೆಸಿದ್ದು, ಒಂದು ನಾಲ್ಕು ರಸ್ತೆ ಸುತ್ತಿಸಿದ್ದು, ಹತ್ತಿರ ಕೂತು ಮಾತನಾಡಿದ್ದು, ಪ್ರೀತಿಯಿಂದ ನನ್ನ ಕರೆದಿದ್ದು, ಯಾವ ಸ್ಕೂಲು? ಏನು? ಎಂದು ವಿಚಾರಿಸಿದ್ದು. ಊಹೂಂ, ಒಂದೂ ನನ್ನ ನೆನಪಲ್ಲಿಲ್ಲ! ನಿನ್ನ ನೆನಪಲ್ಲೇನಾದರೂ ಇದೆಯಾ? ಹೋಗಲಿ, ನಾನು ಅಪ್ಪ ಎಂಬ ಸಲಿಗೆಯಿಂದ ನಿನ್ನ ಹತ್ತಿರ ಯಾವತ್ತಾದರೂ ಹಟ, ರಚ್ಚೆ ಹಿಡಿದಿದ್ದು, ಅದಕ್ಕೆ ಪ್ರತಿಯಾಗಿ ನೀನು ಗದರಿದ್ದು ನೆನಪಿದಿಯಾ? ಬಹುಶಃ, ಇರಲಿಕ್ಕಿಲ್ಲ! ಪ್ರೀತಿಸಿದರೆ ತಾನೆ? ದಂಡಿಸುವ ಹಕ್ಕು ಬರೋದು?

    ಇನ್ನು ಕಸಿವಿಸಿ ಅನಿಸದಿರಬಹುದು ಎಂದು ಹೇಳಿದ್ದು ಇಷ್ಟು ದಿನ ಯಾವೊಂದೂ ವಿಷಯಕ್ಕೆ ಕಸಿವಿಸಿಗೊಳ್ಳದವ ‘ಪ್ರೀತಿಯ’ ಎನ್ನುವ ಒಂದೇ ಒಂದು ಪದವನ್ನು ಪ್ರಯೋಗಿಸದಿದ್ದಕ್ಕೆ ಕಸಿವಿಸಿಗೊಳ್ಳುತ್ತೀಯಾ ಎಂದು ನನಗೆ ಅನಿಸುವದಿಲ್ಲ. ಏಕೆಂದರೆ ಏನು ತಿವಿದರೂ ಏನು ಅಂದರೂ ಏನೂ ಆಗದವ ನೀನು! ಏನೊಂದೂ ಆಗದವರ ಹತ್ತಿರ ಪ್ರೀತಿಯ ಅಗಾಧತೆ ಮತ್ತು ಅದಕ್ಕಂಟಿ ಬರುವ ಜವಾಬ್ದಾರಿಗಳ ಕುರಿತು ಮಾತನಾಡುವದರಲ್ಲಿ ಏನು ಅರ್ಥವಿದೆ?

    ನನಗೆ ಗೊತ್ತು ನನ್ನ ಈ ಪತ್ರ ನಿನ್ನ ಮನಸ್ಸನ್ನಾಗಲಿ, ಮಿದುಳನ್ನಾಗಲಿ ತಟ್ಟಲಾರದೆಂದು. ಆದರೂ ಇದನ್ನು ಬರೆಯುತ್ತಿದ್ದೇನೆ! ಏಕೆ ಗೊತ್ತಾ? ನನ್ನೊಳಗಿನ ಸಿಟ್ಟನ್ನು, ಕೇವಲ ನನ್ನೊಳಗಿನ ಸಿಟ್ಟನ್ನು ಹೊರಹಾಕುವದಕ್ಕೆ ಮಾತ್ರ! ಅದಾಗಲೇ ನಿನ್ನ ಬಗ್ಗೆ ಆಗಾಗ ಅಲ್ಲಲ್ಲಿ ಅಷ್ಟಿಷ್ಟು ಬರೆದು ನನ್ನ ಸಿಟ್ಟನ್ನು, ಆಕ್ರೋಶವನ್ನು ಹೊರಹಾಕಿದ್ದೇನೆ. ಆದರೂ ಕಮ್ಮಿಯಾಗಿಲ್ಲ ನೋಡು! ಹೊರಹಾಕಿದಷ್ಟೂ ಮತ್ತೆ ಮತ್ತೆ ಉಕ್ಕಿ ಬರುತ್ತಲೇ ಇರುತ್ತದೆ!

    ಅಪ್ಪ ನನಗೆ ಬರೀ ನೆನಪು! ಎದುರಿಗೆ ಅಲೆದಾಡೋ ನೀನು ಅವನ ಭೂತ! ಜೀವಂತವಾಗಿದ್ದು ಇಲ್ಲದೆ ಛಾಯೆಯಾಗಿ ಬದುಕುವ ಸ್ಥಿತಿ ತಲುಪಿ ಬಿಟ್ಟಿದ್ದೀಯಾ. ಏಕೆಂದರೆ ನಾನು ಬುದ್ಧಿ ಬಂದಾಗಿಂದ ನಿನ್ನೊಟ್ಟಿಗಿನ ನನ್ನ ತಂತುಗಳನ್ನು ಕಡಿದುಕೊಂಡು ಬಂದಿದ್ದೇನೆ. ಒಂದು ವೇಳೆ ನೀನು ಇಲ್ಲದೇ ಇದ್ದಿದ್ದರೆ ನಿನ್ನ ಬಗ್ಗೆ ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಂಡಿರುತಿದ್ದೆ. ಎದುರಿಗಿದ್ದು ಇಲ್ಲದ ಹಾಗೆ ಆದೆಲ್ಲ! ನನಪಿನಲ್ಲಿ ಎದುರುಗಡೆ ಕೂತು ಕೈಗೆ ಸಿಗದೆ, ಕನಸಿನಲ್ಲೂ ತಂದೆ ಸುಖ ಇಲ್ಲದ ಹಾಗೆ ಮಾಡಿದೆಯೆಲ್ಲ? ನಾನಿವತ್ತು ಇದನ್ನೆಲ್ಲಾ ಯಾಕೆ ಹೇಳಿದೆನೆಂದರೆ ನಿನ್ನಂತ ಅಪ್ಪನಿಗೆ ಮಗನಾಗಿ ಹುಟ್ಟಿಯೂ ನಾನು ನಿನ್ನಂತಾಗದೆ ನನ್ನ ಬುದ್ಧಿ ಮತ್ತು ಚೈತನ್ಯದ ಮೇಲೆ ಮೇಲೆ ಬಂದಿದ್ದೇನೆಂದು ಹೇಳಲು! ಅದಕ್ಕೆ ನಿನ್ನ ಜೀನ್ಸ್ ಗಳು ಸಹಕಾರಿಯಾಗಿರಬಹುದು ಎಂದು ನೀನು ಒಳಗೊಳಗೆ ಎಣಿಸಿ ಹೆಮ್ಮಪಡುತ್ತಿದ್ದರೆ ಅದು ನಿನ್ನ ತಪ್ಪು! ಏಕೆಂದರೆ ನಿನ್ನ ಜೀನ್ಸ್‍ ಗಳೇನಿದ್ದರೂ ನನ್ನನ್ನು ನಿನ್ನಂತೆ ಕಾಣಿಸಿಕೊಳ್ಳುವದರಲ್ಲಿ ಮಾತ್ರ ಸಹಕಾರಿಯಾದವೇ ಹೊರತು ನಿನ್ನ ಬುದ್ಧಿ ಮತ್ತು ಗುಣವನ್ನು ರೂಪಿಸುವಲ್ಲಿ ಅಲ್ಲ! ಹಾಗೆಂದೇ ನಾನಿವತ್ತು ಎಲ್ಲ ಸ್ತರಗಳಲ್ಲಿ ನಿನಗಿಂತ ಎಷ್ಟೋ ಭಿನ್ನವಾಗಿ ನಿಂತಿದ್ದೇನೆ!

    ಅಂದಹಾಗೆ ನೀನು ನನಗೆ ನಿನ್ನ ಜೀನ್ಸ್ ಗಳನ್ನು ಕೊಡುವದರ ಜೊತೆಗೆ ಒಂದಿಷ್ಟು ಪ್ರಿತಿಯನ್ನೂ ಕೊಟ್ಟಿದ್ದಿದ್ದರೆ ಬಹುಶಃ, ಇವತ್ತು ಯಾವ ಮಕ್ಕಳೂ ಬರೆಯಲಾರದಂಥ ಅದ್ಭುತವಾದಂಥ ಒಲುಮೆಯ ಪತ್ರವೊಂದನ್ನು ನಿನಗೆ ಬರೆದು ನಿನ್ನನ್ನು ಈ ಜಗತ್ತು ಹಾಡಿ ಹೊಗಳುವಂತೆ ಮಾಡುತ್ತಿದ್ದೆನೇನೋ!

    ಕ್ಷಮಿಸು, ಆ ಅದೃಷ್ಟಕ್ಕೆ ನೀನು ಪಾತ್ರನಾಗಲಿಲ್ಲ!

    ಇತಿ ನಿನ್ನ ಮಗ

    ಉದಯ್ ಇಟಗಿ



    ಮರಭೂಮಿಯೆಂದರೆ ಬರೀ ಮರಳಲ್ಲ..........

  • ಶನಿವಾರ, ಜೂನ್ 08, 2013
  • ಬಿಸಿಲ ಹನಿ
  • ನಾನು ಸೆಭಾಕ್ಕೆ ಬಂದ ಮಾರನೆಯ ದಿನವೇ ನಮ್ಮ ಯೂನಿವರ್ಷಿಟಿಯವರು ನನಗೆ ಅಲ್ಲಿಂದ 660K.M ದೂರವಿರುವ ಘಾಟ್ Arts & Science ಕಾಲೇಜಿಗೆ ಪೋಸ್ಟಿಂಗ್ ಆಗಿದೆಯೆಂದೂ ಹಾಗೂ ಅದಾಗಲೇ ಕ್ಲಾಸುಗಳು ಆರಂಭವಾಗಿರುವದರಿಂದ ನಾನು ಘಾಟ್‍ಗೆ ತಕ್ಷಣ ಹೋಗಬೇಕೆಂದೂ ಹೇಳಿದರು. ಆ ಪ್ರಕಾರ ಮಾರನೆಯ ದಿನ ಟ್ಯಾಕ್ಸಿಯೊಂದನ್ನು ನಾನುಳಿದುಕೊಂಡಿರುವ ಹೋಟೆಲ್‍ಗೆ ನನ್ನನ್ನು ಪಿಕ್ ಮಾಡಲು ಕಳಿಸಿದ್ದರು. ಆ ಟ್ಯಾಕ್ಸಿ ಡ್ರೈವರ್ ಬೆಳಿಗ್ಗೆ 11.30ಕ್ಕೆ ನನ್ನನ್ನು ಕರೆದುಕೊಂಡು ಘಾಟ್‍ನತ್ತ ಹೊರಟ. ದಾರಿಯುದ್ದಕ್ಕೂ ಜಗತ್ತಿನ ಅತಿದೊಡ್ದ ಮರಭೂಮಿ ‘ಸಹರಾ’ ಅಡ್ದಲಾಗಿ ಮಲಗಿತ್ತು. ಎಲ್ಲಿ ನೋಡಿದರಲ್ಲಿ ಮರಳು, ಮರಳು, ಬರೀ ಮರಳು! ನಾನು ಮೊಟ್ಟ ಮೊದಲಬಾರಿಗೆ ನನ್ನ ಜೀವನದಲ್ಲಿ ಮರಭೂಮಿಯೊಂದನ್ನು ನೋಡಿದ್ದೆ; ಅದೂ ಜಗತ್ತಿನ ಅತಿ ದೊಡ್ದ ಮರಭೂಮಿಯನ್ನು! ನೋಡುವ ಮೊದಲು ಮರಭೂಮಿಯ ಬಗ್ಗೆ ಅನೇಕ ಕಥೆಗಳನ್ನು ಕೇಳಿದ್ದೆ: ಮರಭೂಮಿಯೆಂದರೆ ಬರೀ ಮರಳು ಮತ್ತು ಬಿಸಿಲು ಮಾತ್ರ ಎಂದಕೊಂಡಿದ್ದೆ. ಆದರೆ ಇಲ್ಲಿಯೂ ಒಂದು ಭಯಂಕರ ಚಳಿಗಾಲ ಇರುತ್ತದೆ ಎನ್ನುವದು ನನ್ನ ಗಮನಕ್ಕೆ ಬಂದಿದ್ದು ನಾನಿಲ್ಲಿ ವಾಸಿಸಲು ಆರಂಭಿಸಿದಾಗಲೇ! ಮರಭೂಮಿಯೆಂದರೆ ಬರಡಾಗಿರುತ್ತದೆ, ಅಲ್ಲಿ ಏನೂ ಬೆಳೆಯುವದಿಲ್ಲ, ನೀರು ಸಿಗುವದಿಲ್ಲ, ನೀರನ್ನು ಹುಡುಕಿಕೊಂಡು ಜನ ಮೈಲಿಗಟ್ಟಲೆ ಹೋಗುತ್ತಾರೆ ಹಾಗೆ ಹೀಗೆ ಇನ್ನೂ ಏನೇನೋ........ ಇದೀಗ ಅದನ್ನೆಲ್ಲಾ ಕಣ್ಣಾರೆ ಕಂಡು ಅನುಭವಿಸುವ ಪರಿ ನನ್ನದಾಗಿತ್ತು. ವಿಪರ್ಯಾಸವೆಂದರೆ ಇಂಥ ಮರಭೂಮಿಯಲ್ಲಿ ನನ್ನ ಬದುಕಿನ ಹಸಿರನ್ನು ಹುಡುಕಿ ಬಂದಿದ್ದೆ. ನಾನು ಘಾಟ್‍ಗೆ ಬಂದ ಹೊಸತರಲ್ಲಿಯೇ ನನ್ನ ಇಂಡಿಯನ್ ಸಹೋದ್ಯೋಗಿಗಳು ಹಾಗೂ ಇಲ್ಲಿಯ ಆಸ್ಪತ್ರೆಯೊಂದರಲ್ಲಿ ಹಲ್ಲಿನ ಡಾಕ್ಟರ್ ಆಗಿದ್ದ ನಮ್ಮ ಇಂಡಿಯನ್ ಡಾಕ್ಟರ್ ಸುನೀಲ್ ಅವರನ್ನು ಕರೆದುಕೊಂಡು ಸಹರಾ ಮರಭೂಮಿಯನ್ನು ನೋಡಲು ಹೊರಟೆ. ಅದೇನೋ ಗೊತ್ತಿಲ್ಲ! ನನಗೆ ಒಮ್ಮೆ ಮರಭೂಮಿಯ ಒಳಗೆ ಹೋಗಿ ಬರಬೇಕು, ಅದರ ಒಡಲಾಳವನ್ನು ಬಗೆದು ನೋಡಬೇಕು ಎನ್ನುವ ಅದಮ್ಯ ಬಯಕೆ ಹೆಚ್ಚಾಗಿಬಿಟ್ಟಿತ್ತು.
    ಜಗತ್ತಿನ ಅತಿ ದೊಡ್ಡ ಮರಭೂಮಿಯಾದ ಸಹರಾ ಸುಮಾರು ಒಂಬತ್ತು ಮಿಲಿಯನ್ ಚ.ಕಿ.ಮಿ.ನಷ್ಟು ದೊಡ್ಡದಾಗಿದ್ದು ಸಹರಾ ಆಫ್ರಿಕಾ ಖಂಡದ 1/3 ನಷ್ಟು ಭಾಗವನ್ನು ಆಕ್ರಮಿಸಿಕೊಂಡಿದೆ. ಇದು ಆದಿ, ಮಧ್ಯ, ಹಾಗೂ ಅಂತ್ಯ ಸಹರಾ ಮರಭೂಮಿಗಳಾಗಿ ವಿಭಜನೆ ಹೊಂದಿದ್ದು ಮಧ್ಯದ ಭಾಗವು ಲಿಬಿಯಾ ಮತ್ತು ಅಲ್ಜಿರೀಯಾದಲ್ಲಿದೆ. ನಾವಿರುವ ಊರು ಘಾಟ್ ಸಹರಾ ಮರಭೂಮಿಯ ಮಧ್ಯಯೇ ಇದೆ! ಸುತ್ತಲೂ ಮರಭೂಮಿ. ನಡುವೆ ಈ ಊರು. ಈ ಊರಿಂದಾಚೆ ನಾವು ಯಾವ ದಿಕ್ಕಿನೆಡೆಗಾದರೂ ಸರಿ ಸ್ವಲ್ಪ ದೂರಕ್ಕೆ ನಡೆದುಕೊಂಡು ಬಂದರೆ ಸಾಕು ತಟ್ಟನೆ ನಮ್ಮ ಕಣ್ಣಿಗೆ ಕಾಣಿಸುವದು ಬರೀ ಮರಳು, ಮರಳು ಮತ್ತು ಮರಳು! ಇಲ್ಲಿ ಮರಳು ಬಿಟ್ಟರೆ ಬೆರೇನೂ ಇಲ್ಲ! ಹಾಗಂತಾ ಇತರರಂತೆ ನಾನೂ ನಂಬಿದ್ದೆ. ಆದರೆ ಯಾವಾಗ ಒಮ್ಮೆ ಸಹರಾ ಮರಭೂಮಿಯ ಒಳಹೊಕ್ಕು ಬಂದೆನೋ ಆಗ ನನ್ನ ನಂಬಿಕೆಗಳೆಲ್ಲಾ ತಲೆಕೆಳಗಾಗಿದ್ದವು. ಅಲ್ಲಲ್ಲಿ ಚಿತ್ತಚಿತ್ತಾರವಾಗಿ ಬಿದ್ದುಕೊಂಡ ಒಂದಷ್ಟು ಮರಳು ಗುಡ್ಡಗಳು, ಆ ಗುಡ್ದಗಳ ಅಕ್ಕಪಕ್ಕದಲ್ಲಿ ಬೆಳೆದ ಒಂದಿಷ್ಟು ಹಸಿರು ಪೊದೆಗಳು. ಪೊದೆಗಳಿಗೆ ಸ್ವಲ್ಪ ದೂರದಲ್ಲಿಯೇ ಎತ್ತರಕ್ಕೆ ಬೆಳೆದು ನಿಂತ ಮರಗಳು, ಅಲ್ಲಲ್ಲಿ ಸಿಗುವ ಒಂದಷ್ಟು ಸಿಹಿನೀರ ಒರತೆಗಳು. ಚಿಕ್ಕ ಚಿಕ್ಕ ಝರಿಗಳು, ಬಿಸಿನೀರ ಬುಗ್ಗೆಗಳು, ಇವುಗಳ ಮಧ್ಯ ವ್ಯವಸಾಯಕ್ಕಾಗಿ ಉಪಯೋಗಿಸಲ್ಪಡುವ ಒಂದಷ್ಟು ಫಲವತ್ತಾದ ನೆಲ, ಈ ನೆಲದೊಳಗೆ ಹುದುಗಿರುವ ಅಪಾರ ಅಂತರ್ಜಲ, ವರ್ಷದಲ್ಲಿ ಒಂದೋ ಎರಡೋ ಸಾರಿ ಬೀಳುವ ಮಳೆ, ಅಬ್ಬಾ, ಒಂದೇ? ಎರಡೇ? ಈ ಬೃಹತ್ ಮರಭೂಮಿಯಲ್ಲಿ ಏನೇನೆಲ್ಲಾ ಇದೆ! ಅದನ್ನೆಲ್ಲಾ ಕಂಡುಕೊಳ್ಳುವ ತಾಳ್ಮೆ ಮತ್ತು ವ್ಯವಧಾನ ನಮಗಿರಬೇಕಷ್ಟೇ ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡಿದ್ದೆ.
    ಇಲ್ಲಿನ ಸಹರಾ ಮರಭೂಮಿಯಲ್ಲಿ ಸುಮಾರು 200 ಕಿ.ಮಿ. ಉದ್ದದಷ್ಟು ಬೃಹದಾಕಾರವಾಗಿ ಬೆಳೆದುನಿಂತ ಪರ್ವತವೊಂದಿದೆ. ಅದೇ ‘ಅಕಾಕುಸ್’ ಪರ್ವತ. ಈ ಪರ್ವತ ಘಾಟ್‍ನಿಂದ ಸುಮಾರು 200 ಕಿ.ಮಿ. ದೂರವಿರುವ ಅವಿನಾತ್ ಎಂಬ ಹಳ್ಳಿಯಿಂದ ಆರಂಭವಾಗಿ ಘಾಟ್ ಮೂಲಕ ಹಾಯ್ದು ಇಲ್ಲಿಂದ ಎಂಟು ಕಿ.ಮಿ. ದೂರವಿರುವ ಆಲ್ ಬರ್ಕತ್ ಎಂಬ ಹಳ್ಳಿಯಿಂದ ಸ್ವಲ್ಪ ದೂರಕ್ಕೆ ಸಾಗಿ ಕೊನೆಗೊಳ್ಳುತ್ತದೆ. ಈ ಮರಭೂಮಿಯ ನಡುವೆ ಈ ಪರ್ವತ ಹೇಗೆ ಸೃಷ್ಟಿಯಾಯಿತು ಎಂದು ಸ್ಥಳಿಯರನ್ನು ಕೇಳಿದರೆ ಇಲ್ಲಿ ಹಿಂದೆ ಸಮುದ್ರವಿತ್ತಂತೆ, ಆ ಸಮುದ್ರದಲ್ಲಿ ದೊಡ್ದ ದೊಡ್ದ ಕಲ್ಲಿನ ಬಂಡೆಗಳು, ಬೆಟ್ಟಗುಡ್ಡಗಳು ಇದ್ದು ಸಮುದ್ರ ಕರಗಿಹೋದ ಮೇಲೆ ಬರೀ ಮರಳು ಮತ್ತು ಈ ಕಲ್ಲು ಪರ್ವತ ಮಾತ್ರ ಉಳಿದುಕೊಂಡಿವೆ ಎಂದು ಹೇಳುತ್ತಾರೆ. ‘ಅಕಾಕುಸ್’ ಪರ್ವತ ಅತ್ಯಂತ ಪುರಾತನವಾಗಿದ್ದು ಇಲ್ಲಿ ಈಜಿಪ್ಟ್ ನಾಗರಿಕತೆ ಹುಟ್ಟುವದಕ್ಕಿಂತ ಮುಂಚೆಯೇ ನಮಗೆ ಗೊತ್ತೇ ಇರದ ಪುರಾತನ ನಾಗರಿಕತೆಗಳು ಹುಟ್ಟಿದ್ದವು ಎಂದು ಇತಿಹಾಸಕಾರರು ಹೇಳುತ್ತಾರೆ. ಏಕೆಂದರೆ ಈ ಪರ್ವತದೊಳಗೆ ಹನ್ನೆರೆಡು ಸಾವಿರ ವರ್ಷಗಳಷ್ಟು ಹಳೆಯದಾದ ಗುಹೆಗಳು ಇದ್ದು ಅಲ್ಲಿ ಮಾನವರು ವಾಸಿಸಿದ್ದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ ಹಾಗೂ ಇಲ್ಲಿ ಸಿಕ್ಕ ಕೆಲವು ಆಯುಧಗಳು ಮತ್ತು ಚಿತ್ರಗಳು ಆ ಜನರವೇ ಎಂದು ಹೇಳಲಾಗುತ್ತದೆ. ಏನೇ ಆಗಲಿ ಈ ಅಕಾಕುಸ್ ಪರ್ವತ ಸಹರಾ ಮರಭೂಮಿಗೆ ಒಂದು ಕಳಶವಿದ್ದಂತಿದ್ದು ಇಲ್ಲಿನ ಮರಭೂಮಿಗೆ ಒಂದು ವಿಶೇಷ ಸೌಂದರ್ಯವನ್ನು ತಂದುಕೊಟ್ಟಿದೆ. ಹಾಗೆಂದೇ ಸಹರಾ ಮರಭೂಮಿಯನ್ನು ನೋಡಲು ಬಂದ ಪ್ರವಾಸಿಗರ್ಯಾರು ಇದನ್ನು ನೋಡದೆ ಹಾಗೆ ಹೋಗುವದಿಲ್ಲ. ಇಲ್ಲಿಗೆ ಸಾಕಷ್ಟು ಜನ ಯೂರೋಪಿಯನ್ನರು ಪ್ರವಾಸಕ್ಕೆಂದು ಬಂದು ಮರಭೂಮಿಯ ಮಧ್ಯ ಟೆಂಟ್‍ಗಳನ್ನು ಹಾಕಿಕೊಂಡು ಎರಡ್ಮೂರು ದಿನವಿದ್ದು ಹೋಗುತ್ತಾರೆ. ಘಾಟ್‍ನಿಂದ ಹನ್ನೆರೆಡು ಕಿ.ಮಿ. ದೂರದಲ್ಲಿ ಅಂದರೆ ಸಹರಾ ಮರಭೂಮಿಯ ಅಂತರಾಳದಲ್ಲಿ ಬಿಸಿನೀರಿನ ಬುಗ್ಗೆಯೊಂದು ಇದೆ. ಆ ಬಿಸಿನೀರಿನ ಬುಗ್ಗೆ ವಿಶೇಷ ಔಷಧಿ ಗುಣಗಳನ್ನು ಹೊಂದಿದ್ದು ಕೀಲುನೋವು. ಮಂಡಿನೋವು, ಹಾಗೂ ಚರ್ಮರೋಗವನ್ನು ಬಹುಬೇಗನೆ ಗುಣಪಡಿಸುತ್ತದೆ ಎಂದು ಇಲ್ಲಿನವರು ಹೇಳುತ್ತಾರೆ. ಈ ಬಿಸಿನೀರಿನ ಬುಗ್ಗೆಗೆ ಎರಡು ಪ್ರತ್ಯೇಕ ಪೈಪ್‍ಗಳನ್ನು ಜೋಡಿಸಿದ್ದು ಅವು ಹೆಂಗಸರಿಗೆ ಮತ್ತು ಗಂಡಸರಿಗೆ ಪ್ರತ್ಯೇಕವಾಗಿ ಕಟ್ಟಿಸಲಾದ ಸ್ನಾನಗೃಹದ ಎರಡು ದೊಡ್ಡ ಟಬ್‍ಗಳಿಗೆ ಬೀಳುವಂತೆ ಮಾಡಿದ್ದಾರೆ. ಆ ಟಬ್‍ನಲ್ಲಿ ಸುಮಾರು ಎಂಟತ್ತು ಜನ ಒಟ್ಟಿಗೆ ಸ್ನಾನಮಾಡಬಹುದು. ಕೀಲುನೋವು, ಮಂಡಿನೋವು, ಹಾಗೂ ಚರ್ಮರೋಗದ ಖಾಯಿಲೆಯಿರುವವರು ಚಿಕಿತ್ಸೆ ಪಡೆಯಲು ಗಂಟೆಗಟ್ಟಲೆ ಈ ಟಬ್‍ನಲ್ಲಿ ಬಿದ್ದುಕೊಂಡಿರುತ್ತಾರೆ. ಎಷ್ಟೋ ಜನ ದೂರದ ಊರುಗಳಿಂದ ಬಂದು ಇಲ್ಲಿ ಟೆಂಟ್ ಹಾಕಿಕೊಂಡು ತಿಂಗಳಾನುಗಟ್ಟಲೆ ವಾಸಮಾಡಿ ಚಿಕಿತ್ಸೆ ಪಡೆದು ಹಿಂದಿರುಗುತ್ತಾರೆ.
    ನಾನಿರುವ ಊರು ಘಾಟ್‍ನಿಂದ 100 ಕಿ.ಮಿ. ದೂರದಲ್ಲಿರುವ ಅವಿನಾತ್ ಎಂಬ ಊರಿದೆ. ಅಲ್ಲಿನ ಸಹರಾ ಮರಭೂಮಿಯಲ್ಲಿ ನೈಸರ್ಗಿಕವಾಗಿ ಉದ್ಭವಿಸಿದ ಅಪರೂಪದ ಶಿಲಾಕೃತಿಗಳಿವೆ. ಅವು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ನೋಡಲು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಇಲ್ಲಿಂದ 350 ಕಿ.ಮಿ. ದೂರದಲ್ಲಿರುವ ಒಬಾರಿ ಎಂಬ ಪಟ್ಟಣಕ್ಕೆ ಹತ್ತಿರದಲ್ಲಿ “ಗೆಬ್ರಾನ್” ಎಂಬ ಒಂದು ಸರೋವರವಿದೆ. ಇದು ನಯನಮನೋಹರವಾಗಿದ್ದು ಲಿಬಿಯಾದಲ್ಲಿ ಅತ್ಯಂತ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದೆ. ಇದು ಮರಳು ದಿನ್ನೆಗಳ ಮಧ್ಯ ಇದ್ದು ಸುತ್ತಲೂ ತಾಳೆಮರಗಳಿಂದ ಆವರಿಸಲ್ಪಟ್ಟಿದೆ. “ಗೆಬ್ರಾನ್” ಎನ್ನುವದು ಗೆಬರ್ (ಸಮಾಧಿ) ಮತ್ತು ಆನ್ (ಒಂದು ಹೆಸರು) ಎಂಬ ಎರಡು ಪದಗಳಿಂದ ಉಂಟಾಗಿದ್ದು ಪುರಾತನ ಕಾಲದ ವಲಸೆಗರ ಗುಂಪೊಂದು ಇಲ್ಲಿ ಸ್ವಲ್ಪ ದಿವಸ ತಂಗಿ ಮುಂದೆ ಹೋಗಿರಬಹುದು ಎಂದು ಹೇಳಲಾಗುತ್ತದೆ. ಅದಕ್ಕೆ ಸಾಕ್ಷಿಯಾಗಿ ಮರಳಲ್ಲಿ ಹೂತು ಹೋದ ಅವರ ಸಮಾಧಿಗಳು ಈಗಲೂ ಕಾಣಿಸುತ್ತವೆ. ಇಲ್ಲಿಂದ ಸ್ವಲ್ಪ ದೂರದಲ್ಲಿಯೇ ಫೆಜಾನ್ ಎಂಬ ಹಳ್ಳಿಯಿದೆ. ಇಲ್ಲಿ ಪೆಲಿಯೋಲಿಥಿಕ್ ಮತ್ತು ನಿಯೋಲಿಥಿಕ್ ಕಾಲದ ಜನರು ಬಳಸುತ್ತಿದ್ದ ಕೊಡ್ಲಿ ಹಾಗೂ ಮತ್ತಿತರ ಆಯುಧಗಳು ದೊರಕಿವೆ ಎಂದು ಭೂಗರ್ಭಶಾಸ್ತ್ರಜ್ಞರು ಹೇಳುತ್ತಾರೆ.
     ಮರುಭೂಮಿಯಲ್ಲಿ ನೀರು ಸಿಗುವದೆಂದರೆ ಕೇವಲ ಓಯಾಸಿಸ್ನಲ್ಲಿ ಮಾತ್ರ ಎಂದುಕೊಂಡಿರುವ ಜನರಿಗೆ ಇಲ್ಲೂ ಅಂತರ್ಜಲ ಅಪಾರವಾಗಿದ್ದು ನೆಲದಲ್ಲಿ ನೀರು ಹೇರಳವಾಗಿ ಓಡಾಡುತ್ತಿದೆ ಎಂಬುದು ಗೊತ್ತಿರುವುದಿಲ್ಲ. ಅದೂ ಇಲ್ಲಿನ (ಬೇರೆ ಕಡೆ ಹೇಗೋ ಗೊತ್ತಿಲ್ಲ) ಸಹರಾ ಮರಭೂಮಿಯಲ್ಲಿ ಅಂತರ್ಜಲ ಸಮೃದ್ಧವಾಗಿದ್ದು ಸುಮಾರು ನಲವತ್ತು ಐವತ್ತು ಅಡಿಗೆಲ್ಲಾ ನೀರು ಸಿಕ್ಕುಬಿಡುತ್ತದೆ. ಇತ್ತೀಚಿಗೆ ಇಲ್ಲಿ ಭೂವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪ್ರಕಾರ ಬೇರೆ ಜಾಗಕ್ಕಿಂತ ಇಲ್ಲಿ ಅಂತರ್ಜಲ ಹತ್ತುಪಟ್ಟು ಹೆಚ್ಚಾಗಿದೆಯೆಂದು ತಿಳಿದುಬಂದಿದೆ. ಹಾಗೆಂದೇ ಇಲ್ಲಿ ಯಾವ ಜಾಗದಲ್ಲಿ ಬೇಕಾದರೂ ಬೋರ್ ಹಾಕಿದರೆ ಬಹಳ ಬೇಗನೆ ನೀರು ಸಿಕ್ಕುಬಿಡುತ್ತದೆ ಮತ್ತು ಅದು ಹೆಚ್ಚುಕಮ್ಮಿ ಸಿಹಿಯಾಗಿರುತ್ತದೆ. ನೀವು ನಂಬುತ್ತಿರೋ ಇಲ್ವೋ ಘಾಟ್‍ನಲ್ಲಿ ನಮ್ಮ ಕಾಲೇಜು ಹತ್ತಿರದಲ್ಲಿ ಬೋರ್ವೆಲ್‍ವೊಂದನ್ನು ಹಾಕಿದ್ದು ಅದು ಸುಮಾರು 35 ವರ್ಷಗಳಿಂದ ಅರ್ಧ ಘಾಟ್‍ಗಾಗುವಷ್ಟು ನೀರನ್ನು ಒದಗಿಸುತ್ತಿದೆಯೆಂದೂ ಇಷ್ಟಾದರೂ ಅದರ ಅಂತರ್ಜಲ ಮಾತ್ರ ಕುಸಿದಿಲ್ಲವೆಂದೂ ಇಲ್ಲಿಯ ಜನ ಹೇಳುತ್ತಾರೆ. ಆರು ವರ್ಷದ ನನ್ನ ಘಾಟ್ ಜೀವನದಲ್ಲಿ ಒಂದು ವರ್ಷವೂ ಇಲ್ಲಿನ ಜನ ನೀರಿಗಾಗಿ ತಹತಹಿಸಿದ್ದನ್ನು ನಾನು ನೋಡಿಲ್ಲ. ಮಳೆಯೇ ಬೀಳದ ಈ ಪ್ರದೇಶದಲ್ಲಿ ಅದ್ಹೇಗೆ ನೀರು ಶೇಖರಣೆಗೊಂಡಿದೆ ಹಾಗೂ ವರ್ಷದಿಂದ ವರ್ಷಕ್ಕೆ ಅದ್ಹೇಗೆ ಹೆಚ್ಚುತ್ತಾ ಹೋಗುತ್ತದೆ ಎನ್ನುವ ಪ್ರಶ್ನೆಗೆ ನನಗೆ ಈಗಲೂ ಉತ್ತರ ಸಿಕ್ಕಿಲ್ಲ.
    1953ರಲ್ಲಿ ತೈಲ ಹುಡುಕಾಟಕ್ಕಾಗಿ ಇಲ್ಲಿನ ಭೂಮಿಯನ್ನು ಕೊರಯುತ್ತಿರಬೇಕಾದರೆ ಅಪಾರ ಪ್ರಮಾಣದ ಸಿಹಿನೀರು ಚಿಮ್ಮಿ ಇಲ್ಲಿನ ನೆಲದೊಳಗೆ ಅಡಗಿರುವ ಅಪಾರ ಪ್ರಮಾಣದ ಜಲಸಂಪತ್ತನ್ನು ಪರಿಚಯಿಸತಂತೆ. ಮುಂದೆ 1969ರಲ್ಲಿ ಅಧಿಕಾರಕ್ಕೆ ಬಂದ ಗಡಾಫಿ ಇದರ ಸದ್ಬಳಕೆ ಮಾಡಿಕೊಳ್ಳಲು ಮಾನವ ನಿರ್ಮಿತ ನೀರಾವರಿ ಯೋಜನೆಯೊಂದಕ್ಕೆ ಕೈಹಾಕಿದನಂತೆ. ಅದು 1984ರಲ್ಲಿ ಪೂರ್ಣಗೊಂಡು ಜಗತ್ತಿನ ಅತಿ ದೊಡ್ದ ಮಾನವ ನಿರ್ಮಿತ ನದಿಯೆಂಬ ಹೆಗ್ಗಳಿಕೆಗೆ ಪಾತ್ರವಾಯಿತಂತೆ. ಇಡಿ ಲಿಬಿಯಾದ ತುಂಬಾ ಸುಮಾರು 1,300 ಬಾವಿಗಳಿದ್ದು ದಿನವೊಂದಕ್ಕೆ 7,100,000 ಕ್ಯೂಬಿಕ್ ಮೀಟರ್ ಗಳಷ್ಟು ಟ್ರಪೋಲಿ, ಬೆಂಗಾಜಿ, ಸಿರ್ತ್ ಮುಂತಾದ ನಗರಗಳಿಗೆ ನೀರು ಸರಬರಜಾಗುತ್ತದೆ ಹಾಗೂ ಇದೇ ನೀರನ್ನು ಉಪಯೋಗಿಸಿಕೊಂಡು ಮರಭೂಮಿಯಲ್ಲಿ ಅಲ್ಲಲ್ಲಿ ಬೇಸಾಯ ಮಾಡಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುವವರಿದ್ದಾರೆ. ಹಾಗೆ ನೋಡಿದರೆ ಲಿಬಿಯಾದ ಕೃಷಿ ಚಟುವಟಿಕೆಗಳು ಹೆಚ್ಚು ನಡೆಯುವದು ಸಮುದ್ರ ತೀರದ ಪ್ರದೇಶಗಳಲ್ಲಿ. ಅಲ್ಲಿ ಮುಖ್ಯವಾಗಿ ಬಾರ್ಲಿ, ಗೋದಿ, ಟೊಮ್ಯಾಟೋ, ಕಿತ್ತಳೆ, ಸೇಬು, ಕಲ್ಲಂಗಡಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಹಾಗೆಂದೇ ಹೆಚ್ಚಿನ ತರಕಾರಿಗಳು ಟ್ರಿಪೋಲಿ, ಬೆಂಗಾಜಿಯಿಂದ ಇಲ್ಲಿಗೆ ರವಾನೆಯಾಗುತ್ತವೆ. ಆದರೆ ಇಲ್ಲಿ ಮರಭೂಮಿಯಲ್ಲಿ ಸಣ್ಣ ಪ್ರಮಾಣದಲ್ಲಿ ಗೋದಿ, ಬಾರ್ಲಿ, ಕಲ್ಲಂಗಡಿ, ಟೊಮ್ಯಾಟೋ ಮತ್ತು ಮುಖ್ಯವಾಗಿ ಖರ್ಜೂರಗಳನ್ನು ಬೆಳೆಯುತ್ತಾರೆ. ಲಿಬಿಯಾದ ದಕ್ಷಿಣ ಭಾಗದಲ್ಲಿ ಹೆಚ್ಚು ಹಳ್ಳಿಗಳೇ ಇದ್ದು ಇಲ್ಲಿನ ಜನರು ಆಡುಕುರಿಗಳನ್ನು ಸಾಕುವದರಿಂದ ಅವಕ್ಕೆ ಬೇಕಾದ ಹುಲ್ಲನ್ನು ಸಹ ಬೆಳೆದು ಮಾರುತ್ತಾರೆ. ಆದರೆ ಹಾಲು ಮತ್ತು ಮೊಸರಿನ ಪ್ಯಾಕ್ಗಳು ಇಲ್ಲಿಂದ 1500 ಕಿ.ಮಿ. ದೂರದಲ್ಲಿರುವ ಮಿಸ್ರತಾ ಎಂಬ ಊರಿನಿಂದ ಇಲ್ಲಿಗೆ ಬರುತ್ತವೆ. ಮತ್ತು ಬಹಳಷ್ಟು ತರಕಾರಿಗಳು ಸೆಭಾ ಮತ್ತು ಒಬಾರಿಯಿಂದ ಇಲ್ಲಿಗೆ ರವಾನೆಯಾಗುತ್ತವೆ. ಅಂದಹಾಗೆ ಇಲ್ಲಿನವರು ಆಡುಕರಿಗಳನ್ನು ಸಾಕುವದು ಹಬ್ಬಹರಿದಿನಗಳಲ್ಲಿ ಅವುಗಳನ್ನು ಮಾರಿ ಲಾಭಮಾಡಿಕೊಳ್ಳುವದಕ್ಕೆ. ಅಂದರೆ ಅವು ಚಿಕ್ಕವಾಗಿದ್ದಾಗ ಸಣ್ಣ ಬೆಲೆಗೆ ತಂದು ತಮ್ಮ ಫಾರ್ಮ್ ಹೌಸ್‍ಗಳಲ್ಲಿ ಸಾಕಿ ಅವಕ್ಕೆ ಚನ್ನಾಗಿ ತಿನಿಸಿ ದೊಡ್ದದಾದ ಮೇಲೆ ರಮದಾನ್ ಮತ್ತು ಈದ್ ಹಬ್ಬಗಳಿಗೆ ಇತರರಿಗೆ ಒಳ್ಳೆ ಬೆಲೆಗೆ ಮಾರಿ ಲಾಭಮಾಡಿಕೊಳ್ಳುತ್ತಾರೆ.

    ಈಗ ಹೇಳಿ ಮರಭೂಮಿಯೆಂದರೆ ಬರೀ ಬಿಸಿಲು ಮತ್ತು ಮರಳು ಮಾತ್ರವೇ?



    -ಉದಯ್ ಇಟಗಿ



    ಮೌಮರ್ ಗಡಾಫಿ ಮತ್ತು ಇಂಗ್ಲೀಷ್ ಭಾಷೆ

  • ಸೋಮವಾರ, ಫೆಬ್ರವರಿ 18, 2013
  • ಬಿಸಿಲ ಹನಿ
  • ಲಿಬಿಯಾದಲ್ಲಿ ನಲವತ್ತೆರೆಡು ವರ್ಷಗಳ ಕಾಲ ಹುಲಿಯಂತೆ ಮೆರೆದು ಕೊನೆಗೆ ಹೇಳ ಹೆಸರಿಲ್ಲದಂತೆ ನಾಶವಾದ ಮೌಮರ್ ಗಡಾಫಿ ತನ್ನ ದಕ್ಷ ಆಡಳಿತಕ್ಕೆ ಹೆಸರುವಾಸಿಯದಂತೆ ತನ್ನ ವಿಚಿತ್ರ ಪೋಷಾಕುಗಳಿಗೆ, ದುಡುಕುತನಕ್ಕೆ, ಹಟಮಾರಿತನಕ್ಕೆ, ಹಾಗೂ ಹರಕುಬಾಯಿಗೆ ಕೂಡ ಅಷ್ಟೇ ಹೆಸರುವಾಸಿಯಾಗಿದ್ದ. ಗಡಾಫಿ ಎಷ್ಟರಮಟ್ಟಿನ ಹರಕುಬಾಯಿಯವನಾಗಿದ್ದನೆಂದರೆ ಮುಂಚಿನಿಂದಲೂ ಅಮೆರಿಕನ್ನರ ಬದ್ಧ ವೈರಿಯಾಗಿದ್ದ ಆತ ಅವಕಾಶ ಸಿಕ್ಕಾಗಲೆಲ್ಲಾ ಅವರನ್ನು ಯಾವುದೇ ಮುಲಾಜಿಲ್ಲದೆ, ಹಿಂಜರಿಕೆಯಿಲ್ಲದೆ ಬಹಿರಂಗವಾಗಿ ಟೀಕಿಸಿ ಅವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದ. ಈ ವಿಷಯದಲ್ಲಿ ಇತರೆ ಮುಸ್ಲಿಂ ರಾಷ್ಟ್ರಗಳ ನಾಯಕರು ಗಡಾಫಿಯನ್ನು ‘ಹಾಗೆಲ್ಲಾ ಅಮೆರಿಕನ್ನರನ್ನು ಬಹಿರಂಗವಾಗಿ ಟೀಕಿಸಬೇಡ’ ಎಂದು ಎಚ್ಚರಿಸಿದ್ದರೂ ಅವ ಅದನ್ನು ಲೆಕ್ಕಿಸದೆ ಪುಂಖಾನುಪುಂಖವಾಗಿ ಸಂದರ್ಭ ಸಿಕ್ಕಾಗಲೆಲ್ಲಾ ಅವರನ್ನು ತರಾಟೆಗೆ ತೆಗೆದುಕೊಂಡು ಅವರ ವಿರೋಧ ಕಟ್ಟಿಕೊಳ್ಳುತ್ತಿದ್ದನಲ್ಲದೇ ಇದೇ ಕಾರಣಕ್ಕಾಗಿ ಇನ್ನಿಲ್ಲದಂತೆ ನಾಶವಾಗಿ ಹೋದ.


    ಸಣ್ಣ ವಯಸ್ಸಿಗೇ ಅಧಿಕಾರಕ್ಕೇರಿದ ಗಡಾಫಿ ಒಬ್ಬ ದಕ್ಷ ಆಡಳಿತಗಾರನಾಗಿದ್ದ. ಆತನ ಆಡಳಿತಾವಧಿಯಲ್ಲಿ ಲಿಬಿಯಾ ಮಾನವ ಸಂಪನ್ಮೂಲ ಅಭಿವೃದ್ಧಿ, ಶಿಕ್ಷಣ, ಆರೋಗ್ಯ. ಕೃಷಿ-ಕೈಗಾರಿಕೆಗಳಲ್ಲಿ ಇಡೀ ಆಫ್ರಿಕಾದಲ್ಲೇ ಮೊದಲ ಸ್ಥಾನ ಪಡೆದುಕೊಂಡಿತ್ತು. ಜೊತೆಗೆ ಲಿಬಿಯಾದ ರಾಷ್ಟ್ರೀಯ ತಲಾದಾಯವು ಜಗತ್ತಿನ ಉತ್ತಮ ತಲಾದಾಯ ಇರುವ ದೇಶಗಳ ಸಾಲಿಗೆ ಸೇರಿತ್ತು. ಹೀಗಾಗಿ ಗಡಾಫಿ ಸಹಜವಾಗಿ ಲಿಬಿಯಾದ ಜನತೆಗೆ ಒಬ್ಬ ಭರವಸೆಯ ನಾಯಕನಾಗಿ ಕಾಣಿಸಿದ. ಆದರೆ ಅವನು ಅನೇಕ ತಿಕ್ಕಲುತನಗಳಿಂದ ಕೂಡಿದ ಮನುಷ್ಯನಾಗಿದ್ದ. ಆತ ರಾಜಕೀಯವಾಗಿ ಎಷ್ಟೊಂದು ಸಂವೇದನಾಶೀಲನಾಗಿದ್ದನೋ ಅಷ್ಟೇ ತಿಕ್ಕಲುನಾಗಿದ್ದ. ಆತನ ತಿಕ್ಕಲುತನಗಳಿಗೆ ಲೆಕ್ಕವಿರಲಿಲ್ಲ! ಆದರೆ ಅವು ಸಾಧ್ಯವಾದಷ್ಟು ವ್ಯಯಕ್ತಿಕವಾಗಿರುತ್ತಿದ್ದವೇ ಹೊರತು ಸಾರ್ವಜನಿಕ ಜೀವನದ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ.

    ಆದರೆ ಒಮ್ಮೆಯಂತೂ ಆತ ದುಡುಕಿ ತೆಗೆದುಕೊಂಡ ನಿರ್ಧಾರ ಇಡೀ ಲಿಬಿಯಾದ ಭವಿಷ್ಯದ ಮೇಲೆ ಕೆಟ್ಟಪರಿಣಾಮ ಬೀರಿತು. ಮಾತ್ರವಲ್ಲ ಅವನ ಆಡಳಿತಾವಧಿಯಲ್ಲಿ ಅದೊಂದು ಕಪ್ಪುಚುಕ್ಕೆಯಾಗಿ ಉಳಿಯಿತು. ಅದೇನೆಂದರೆ ಅಮೆರಿಕನ್ನರ ಬದ್ಧವೈರಿಯಾಗಿದ್ದ ಗಡಾಫಿ ಅವರನ್ನು ದ್ವೇಷಿಸಿದ್ದಷ್ಟೇ ಅಲ್ಲದೇ ಅವರ ಮಾತೃಭಾಷೆಯಾದ ಇಂಗ್ಲೀಷನ್ನು ಕೂಡ ತೀವ್ರವಾಗಿ ದ್ವೇಷಿಸುತ್ತಿದ್ದ. ಆ ಕಾರಣಕ್ಕಾಗಿ ತನ್ನ ದೇಶದ ಜನತೆ ಸಹ ಅವರ ಮಾತೃಭಾಷೆಯಾದ ಇಂಗ್ಲೀಷ್ ಭಾಷೆಯನ್ನು ಕಲಿಯಕೂಡದೆಂದು ತಾಕೀತು ಮಾಡಿಬಿಟ್ಟ. ಆ ಮೂಲಕ ತನ್ನ ದೇಶದಲ್ಲಿ ಇಂಗ್ಲೀಷ್ ಭಾಷೆಯ ಕಲಿಕೆಯನ್ನು ನಿಷೇಧಿಸುವದರ ಮೂಲಕ ಅಲ್ಲಿಯ ಒಂದು ತಲೆಮಾರನ್ನು ಸುಮಾರು ಹತ್ತು ವರ್ಷಗಳ ಕಾಲ ವಂಚಿಸಿಬಿಟ್ಟ.

    ಈ ನಿರ್ಧಾರದಿಂದಾಗಿ ಇಡೀ ಲಿಬಿಯಾ ಒಂದು ದಶಕದ ಕಾಲ ಕತ್ತಲ ಕೂಪದಲ್ಲಿ ಮುಳುಗಿತು. ಇಪ್ಪತ್ತನೇ ಶತಮಾನದ ಅಂಚಿನಲ್ಲಿದ್ದ ಇಡಿ ಜಗತ್ತು ಇಂಗ್ಲೀಷ್ ಭಾಷೆಯನ್ನು ಕಲಿಯಲು ಏನೆಲ್ಲ ಸಾಹಸಗಳನ್ನು ಮಾಡುತ್ತಿರಬೇಕಾದರೆ ಒಂದು ದೇಶ ಕ್ಷುಲ್ಲಕ ಕಾರಣಕ್ಕಾಗಿ ಆ ಭಾಷೆ ನಮಗೆ ಬೇಡವೇ ಬೇಡ ಎಂದು ನಿಷೇಧಿಸಿದರೆ ಅಲ್ಲಿಯ ಪರಿಸ್ಥಿತಿ ಹೇಗಿರಬೇಡ? ನೀವೇ ಊಹಿಸಿಕೊಳ್ಳಿ. ಪರಿಣಾಮವಾಗಿ ಇಂಗ್ಲೀಷ್ ಭಾಷೆಯ ಕಲಿಕೆ ಮತ್ತು ಕಲಿಸುವಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಕೈ ಬಿಡಲಾಯಿತು. ಇಂಗ್ಲೀಷ್ ಭಾಷೆಗೆ ಸಂಬಂಧಪಟ್ಟ ಹಾಗೆ ಅಷ್ಟೂ ಪುಸ್ತಕಗಳನ್ನು ಅಂದಿನ ಶಿಕ್ಷಣ ಮಂತ್ರಿಯ ಸಮ್ಮುಖದಲ್ಲಿ ಸಾರ್ವಜನಿಕವಾಗಿ ಸುಟ್ಟುಹಾಕಲಾಯಿತು. ಅತ್ತ ಲಿಬಿಯಾ ನಿಧಾನವಾಗಿ ಇಂಗ್ಲೀಷ್ ಭಾಷೆಯ ಸಂಪರ್ಕವಿಲ್ಲದೇ ಹೊರಜಗತ್ತಿನಿಂದ ದೂರ ಸರಿಯುತ್ತಿದ್ದಂತೆ ಇತ್ತ ಜನರು ಇಂಗ್ಲೀಷ್ ಭಾಷೆಯತ್ತ ನಿರ್ಭಾವುಕತೆಯನ್ನು ಬೆಳೆಸಿಕೊಳ್ಳತೊಡಗಿದರು. ಅದೊಂದು ಶತೃ ಭಾಷೆ, ಆ ಭಾಷೆಯನ್ನು ನಾವು ಕಲಿಯಕೂಡದು ಎನ್ನುವ ನಿರ್ಧಾರವನ್ನು ತಳೆದರು. ಈಗಲೂ ಆ ಭಾಷೆಯ ಬಗ್ಗೆ ಇಲ್ಲಿಯ ಜನರಲ್ಲಿ ಒಂದು ತೆರನಾದ ಫೋಬಿಯಾ ಇದೆ. ಆದರೆ ಕೆಲವು ಪ್ರಜ್ಞಾವಂತ ಶ್ರೀಮಂತ ಜನರು ಪಕ್ಕದ ರಾಷ್ಟ್ರಗಳಾದ ಈಜಿಪ್ಟ್, ನೈಜರ್, ನೈಜೇರಿಯಾ, ಗನಾ ದೇಶಗಳಿಗೆ ಹೋಗಿ ಇಂಗ್ಲೀಷ್ ಭಾಷೆಯನ್ನು ಕಲಿತು ಬಂದರು. ಆದರೆ ಮಧ್ಯಮವರ್ಗ ಮತ್ತು ಬಡ ಜನರು ಎ, ಬಿ, ಸಿ, ಡಿ ಕೂಡಾ ಕಲಿಯದೇ ಹಾಗೆ ಉಳಿದುಬಿಟ್ಟರು. ಹೀಗಾಗಿ ಇಲ್ಲಿಯ ಜನ ಗಡಾಫಿಯನ್ನು ಅವನ ಬೇರೆಲ್ಲ ಕೆಲಸಗಳಿಗೆ ಹೊಗಳಿದರೂ ಈ ಒಂದು ನಿರ್ಧಾರಕ್ಕೆ ಮಾತ್ರ ಇವತ್ತಿಗೂ ಹಿಡಿಹಿಡಿ ಶಾಪ ಹಾಕುತ್ತಾರೆ.

    ಅಷ್ಟಕ್ಕೂ ಗಡಾಫಿ ಲಿಬಿಯಾದಲ್ಲಿ ಇಂಗ್ಲೀಷ್ ಭಾಷೆಯನ್ನು ಹತ್ತು ವರ್ಷಗಳ ಕಾಲ ಅಂದರೆ 1986 ರಿಂದ 1996 ರ ವರೆಗೆ ನಿಷೇಧಿಸಿದ್ದಾದರೂ ಏಕೆ? ಅಂಥ ಬಲವಾದ ಕಾರಣವೇನಿತ್ತು? ಎಂದು ಇಲ್ಲಿಯವರನ್ನು ಕೇಳಿದರೆ ಬಹಳಷ್ಟು ಜನ ಅದೆಲ್ಲದಕ್ಕೂ ಗಡಾಫಿಯ ತಿಕ್ಕಲುತನ ಮತ್ತು ಅಮೆರಿಕನ್ನರ ಮೇಲಿನ ವ್ಯಯಕ್ತಿಕ ದ್ವೇಷವೇ ಕಾರಣವೆಂದು ಹೇಳುತ್ತಾರೆ. ಐರ್ಲಂಡ್‍ನಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಚಟುವಟಿಕೆಗಳಿಗೆ ಲಿಬಿಯಾದ ಬೆಂಬಲವಿದೆಯೆಂಬ ಕಾರಣಕ್ಕೆ ಯೂರೋಪ್ ಮಾತ್ರ ಲಿಬಿಯಾವನ್ನು ‘ಭಯೋತ್ಪದಕ’ ದೇಶಗಳ ಪಟ್ಟಿಯಲ್ಲಿಟ್ಟಿತ್ತು. ಆದರೆ 1986ರಲ್ಲಿ ಬರ್ಲಿನ್‍ನ ನೈಟ್ ಕ್ಲಬ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಗಡಾಫಿಯ ಪಾತ್ರವನ್ನು ಸಂಶಯಿಸಿ ಅಮೆರಿಕಾ ಕೂಡಾ ಲಿಬಿಯಾವನ್ನು ’ಭಯೋತ್ಪದಕ’ ದೇಶಗಳ ಪಟ್ಟಿಯಲ್ಲಿಟ್ಟಿತ್ತಲ್ಲದೇ ಪ್ರತಿಕಾರವಾಗಿ ಲಿಬಿಯಾದ ರಾಜಧಾನಿ ಟ್ರಿಪೋಲಿಯ ಮೇಲೆ ಬಾಂಬ್ ದಾಳಿ ನಡೆಸಿತು. ಈ ಕಾರಣಕ್ಕಾಗಿ ಲಿಬಿಯಾದ ಮೇಲೆ ತಾತ್ಕಾಲಿಕ ದಿಗ್ಬಂಧವನ್ನು ಹೇರಿತು ಕೂಡಾ. ಮುಂದೆ ಅಂದರೆ 1988ರಲ್ಲಿ ಸ್ಕಾಟ್ಲೆಂಡ್‍ನ ಲಾಕರ್-ಬಿ ಎನ್ನುವ ಪಟ್ಟಣದ ಮೇಲೆ ಹಾರಾಡುತ್ತಿದ್ದ ಅಮೆರಿಕಾದ ಪಾನ್ ಅಮ್ 103 ಎನ್ನುವ ವಿಮಾನವೊಂದನ್ನು ಸ್ಫೋಟಿಸಿದ ಆರೋಪವೂ ಲಿಬಿಯಾದ ಮೇಲೆ ಬಂತು. ಬಹುಕಾಲ ಗಡಾಫಿ ಇದನ್ನು ನಿರಾಕರಸುತ್ತಲೇ ಬಂದ. ಈ ಕಾರಣಕ್ಕಾಗಿ ವಿಶ್ವಸಂಸ್ಥೆ ಲಿಬಿಯಾವನ್ನು ಮತ್ತೆ ನಿಷೇಧಕ್ಕೆ ಗುರಿಪಡಿಸಿತು. ಇದು ಗಡಾಫಿಯನ್ನು ರೊಚ್ಚಿಗೆಬ್ಬಿಸಿತಲ್ಲದೆ ಅಮೆರಿಕನ್ನರ ಮೇಲಿನ ಕೋಪಕ್ಕಾಗಿ ಅವರ ಮಾತೃಭಾಷೆಯಾದ ಇಂಗ್ಲೀಷ್ ಭಾಷೆಯನ್ನು ನಾವೇಕೆ ಓದಬೇಕು? ಬರೆಯಬೇಕು? ಮಾತನಾಡಬೇಕು? ಎಂದು ದುಡುಕಿ ಅದನ್ನು ತನ್ನ ದೇಶದಿಂದ ನಿಷೇಧಗೊಳಿಸಿಬಿಟ್ಟ.

    ಆದರೆ Amazigh International Council ನ (Amazigh ಎನ್ನುವದು ಲಿಬಿಯಾದಲ್ಲಿ ಮುಂಚಿನಿಂದಲೂ ಕಡೆಗಣಿಸಲ್ಪಟ್ಟ ಅಲ್ಪಸಂಖ್ಯಾತ ಬುಡಕಟ್ಟು ಜನಾಂಗ) ನಿರ್ದೇಶಕರಾದ ಹಫೀದ್ ಫಿಸ್ ಹೀಗೆ ಹೇಳುತ್ತಾರೆ, “ಗಡಾಫಿ ಸುಮಾರು ಹತ್ತು ವರ್ಷಗಳ ಕಾಲ ಇಂಗ್ಲೀಷ್ ಭಾಷೆಯನ್ನು ನಿಷೇಧಿಸಿದ್ದು ಅಮೆರಿಕನ್ನರ ಮೇಲಿನ ಕೋಪ ಎನ್ನುವದು ಒಂದು ನೆಪವಷ್ಟೆ. ಆದರೆ ನಿಜದ ಸಂಗತಿ ಬೇರೆಯೇ ಇದೆ. ಗಡಾಫಿಗೆ ಲಿಬಿಯನ್ನರ ಬಗ್ಗೆ ಭಯವಿತ್ತು. ತಾನು ಅಧಿಕಾರಕ್ಕೆ ಬಂದಂದಿನಿಂದ ಗಡಾಫಿ ನಿಧಾನವಾಗಿ ಲಿಬಿಯನ್ನರ ಮೆಲೆ ತನ್ನ ಹತೋಟಿಯನ್ನು ಸಾಧಿಸಿ ಮೆಲ್ಲನೆ ಅವರ ಮೆಲೆ ದಬ್ಬಾಳಿಕೆ ನಡೆಸತೊಡಗಿದ. ಅವರು ಇಂಗ್ಲೀಷ್ ಭಾಷೆಯನ್ನು ಕಲಿತರೆ ಎಲ್ಲಿ ತನ್ನ ದಬ್ಬಾಳಿಕೆಯ ಬಗ್ಗೆ ಹೊರಜಗತ್ತಿಗೆ ಹೇಳಿಬಿಡುತ್ತಾರೋ ಎನ್ನುವ ಭಯವಿತ್ತು ಅವನಿಗೆ. ಹೀಗಾಗಿ ಅವನು ಉದ್ದೇಶಪೂರ್ವಕವಾಗಿ ಇಂಗ್ಲೀಷ್ ಭಾಷೆಯನ್ನು ತನ್ನ ದೇಶದಿಂದ ನಿಷೇಧಿಸಿನಲ್ಲದೆ ಆ ಮೂಲಕ ತನ್ನ ದೇಶದ ಜನರು ಆ ಭಾಷೆಯನ್ನು ಕಲಿಯದಂತೆ ಮಾಡಿಬಿಟ್ಟ. ಹಾಗೆ ನೋಡಿದರೆ ಗಡಾಫಿ ತನ್ನ ಬದ್ಧ ವೈರಿ ದೇಶವಾದ ಅಮೆರಿಕವೂ ಸೆರಿದಂತೆ ಬಹಳಷ್ಟು ಇಂಗ್ಲೀಷ್ ಮಾತನಾಡುವ ದೇಶಗಳ ಜೊತೆ ತನ್ನ ಸಂಬಂಧವನ್ನು ಚನ್ನಾಗಿಯೇ ಇಟ್ಟುಕೊಂಡಿದ್ದ. ತನ್ನ ಈ ನೀತಿಯನ್ನು ಲಿಬಿಯಾದ ಜನತೆ ಹೊರಜಗತ್ತಿನೊಂದಿಗೆ ಸಂಪರ್ಕ ಇಟ್ಟುಕೊಳ್ಳದಂತೆ ಒಂದು ಅಸ್ತ್ರದಂತೆ ಬಳಸಿದ.” ಇವರ ಹೇಳಿಕೆಯನ್ನು ಗಡಾಫಿ ಇಂಗ್ಲೀಷ್ ಭಾಷೆಯನ್ನು ನಿಷೇಧಗೊಳಿಸುವ ಮುಂಚಿನ ದಿನಗಳಿಗೂ ಹಾಗೂ ನಂತರದ ದಿನಗಳಿಗೂ ಹೋಲಿಸಿ ಕೂಲಂಕುಷವಾಗಿ ಪರಿಶೀಲಿಸಿದರೆ ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲ ಅನಿಸುತ್ತದೆ. ಯಾಕೆಂದರೆ ಗಡಾಫಿ ತಾನು ಅಧಿಕಾರಕ್ಕೆ ಬಂದ ವರ್ಷದಿಂದಲೇ ಇಂಗ್ಲೀಷ್ ಭಾಷೆಯೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹೆಚ್ಚಿನ ವ್ಯಾಸಾಂಗ ಮಾಡಲು ತನ್ನ ಪ್ರಜೆಗಳನ್ನು ಸ್ಕಾಲರ್ಶಿಪ್ ಕೊಟ್ಟು ಅಮೆರಿಕಾ, ಬ್ರಿಟನ್ ಮುಂತಾದ ಇಂಗ್ಲೀಷ್ ಮಾತನಾಡುವ ದೇಶಗಳಿಗೆ ಕಳಿಸುತ್ತಿದ್ದ. ಒಂದು ವೇಳೆ ಅವನಿಗೆ ಲಿಬಿಯನ್ನರ ಬಗ್ಗೆ ಭಯವಿದ್ದಿದ್ದರೆ ಅವನ್ಯಾಕೆ ಹಾಗೆ ಇಂಗ್ಲೀಷ್ ಮಾತನಾಡುವ ದೇಶಗಳಿಗೆ ಅವರನ್ನು ಕಳಿಸುತ್ತಿದ್ದ? ಅಥವಾ ಗಡಾಫಿಯ ದಬ್ಬಾಳಿಕೆಯ ಬಗ್ಗೆ ಹೊರಜಗತ್ತಿಗೆ ಹೇಳುವವರಿದ್ದರೆ 1986ರಗಿಂತ ಮೊದಲೇ ಇಂಗ್ಲೀಷ್ ಕಲಿತ ಲಿಬಿಯನ್ನರು ಇದ್ದಿರಲಿಲ್ಲವೆ? ಅವರೆಲ್ಲಾ ಆತನ ಬಗ್ಗೆ ಹೇಳಬಹುದಿತ್ತಲ್ಲ? ಮತ್ತು ಇಂಗ್ಲೀಷ್ ಭಾಷೆಯ ಮೇಲೆ ಹೇರಿದ್ದ ನಿಷೇಧವನ್ನು ಹಿಂತೆಗೆದುಕೊಂಡ ನಂತರ ಜನ ಇಂಗ್ಲೀಷ್ ಕಲಿತು ತನ್ನ ದಬ್ಬಾಳಿಕೆಯ ಬಗ್ಗೆ ಹೊರಜಗತ್ತಿಗೆ ತಿಳಿಸಬಹುದು ಎಂಬ ಭಯ ಅವನಿಗಿದ್ದರಲಿಲ್ಲವೆ? ಹಾಗಿದ್ದೂ ಅವನು ಯಾಕೆ ಇಂಗ್ಲೀಷ್ ಕಲಿಕೆಗೆ ಉತ್ತೇಜನ ಕೊಟ್ಟ? ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಒಂದೇ. ಗಡಾಫಿ ಇಂಗ್ಲೀಷ್ ಭಾಷೆಯನ್ನು ನಿಷೇಧಿಸಿದ್ದು ಅಮೆರಿಕಾದವಾರ ಮೇಲಿನ ಕೋಪಕ್ಕಾಗಿಯೇ ಹೊರತು ಖಂಡಿತ ಅದರ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ ಎನ್ನುವದು ಸ್ಪಷ್ಟವಾಗುತ್ತದೆ.

    ಇದನ್ನು ಆಲ್ ಮೊಘಾನಿ ಹಸನ್ ಮೊಹಮ್‍ದ ಎನ್ನುವ ಪಿ.ಎಚ್‍ಡಿ. ವಿದ್ಯಾರ್ಥಿಯೊಬ್ಬ ಹೀಗೆ ಪುಷ್ಟಿಕರಿಸುತ್ತಾನೆ. ಆತ “Students’ Perceptions of Motivation in English Language Learning in Libya” ಎನ್ನುವ ತನ್ನ ಇಂಗ್ಲೀಷ್ ಪ್ರೌಡಪ್ರಬಂಧದಲ್ಲಿ ಗಡಾಫಿಗೆ ಇಂಗ್ಲೀಷ್ ಭಾಷೆ ಮತ್ತು ಅಮೆರಿಕನ್ನರ ಮೇಲಿದ್ದ ಹಗೆತನ ಹೇಗೆ ಲಿಬಿಯನ್ನರ ಇಂಗ್ಲೀಷ್ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಿತು ಮತ್ತು ಈ ವಿಷಯದಲ್ಲಿ ಪ್ರಜೆಗಳು ಕೂಡಾ ಹೇಗೆ ತಮ್ಮ ರಾಜನನ್ನೇ ಅನುಸರಿಸಿದರು ಎನ್ನುವದನ್ನು ಹೇಳುತ್ತಾನೆ. ಮುಂದುವರಿದು ಮತ್ತೆ ಹೀಗೆ ಹೇಳುತ್ತಾನೆ. ಒಂದು ಸಾರಿ ಗಡಾಫಿ ತನ್ನ ಭಾಷಣದಲ್ಲಿ ಅಮೆರಿಕನ್ನರನ್ನು ಕುರಿತಂತೆ ಹೀಗೆ ಆಪಾದಿಸಿದ್ದ; “ಜಮ್ಹಾರಿಯಾ(Socialist People's Libyan Arab Jamahiriya)ದ ಸ್ವಾಂತ್ರ್ಯಕ್ಕೆ ಧಕ್ಕೆ ತರುವ ಸಾಮ್ರಾಜ್ಯಶಾಹಿ ರಾಷ್ಟ್ರವಾದ ಅಮೆರಿಕಾವನ್ನು ಮತ್ತದರ ಧೋರಣೆಯನ್ನು ನಾವು ತೀವ್ರವಾಗಿ ಖಂಡಿಸುತ್ತೆವೆ. ಆ ನಿಟ್ಟಿನಲ್ಲಿ ನಾವೆಲ್ಲಾ ಅಮೆರಿಕನ್ನರ ಹುಟ್ಟು ದ್ವೇಷಿಗಳು. ಅಮೆರಿಕನ್ನರೆಡಗಿನ ನಮ್ಮ ಈ ದ್ವೇಷ ಇತಿಹಾಸದಲ್ಲಿ ದಾಖಲಾಗಲಿ.” ಅಮೆರಿಕನ್ನರೆಡಗಿನ ಈತನ ಈ ಭಯಂಕರ ದ್ವೇಷ ಲಿಬಿಯಾದ ಜನರ ಮೇಲೆಯೂ ಗಾಢವಾದ ಪರಿಣಾಮ ಬೀರಿತು. ಅವನಂತೆ ಅವರು ಕೂಡಾ ಅಮೆರಿಕನ್ನರ ಹುಟ್ಟು ದ್ವೇಷಿಗಳಾದರು ಮತ್ತು ಇಂಗ್ಲೀಷ್ ಭಾಷೆಯನ್ನು ದ್ವೇಷಿಸತೊಡಗಿದರು.

    ಕ್ರಮೇಣ ಅಮೆರಿಕಾದ ಜೊತೆ ಲಿಬಿಯಾದ ಸಂಬಂಧ ಸರಿಹೋಗುತ್ತಿದ್ದಂತೆ ಗಡಾಫಿಗೆ ಇಂಗ್ಲೀಷ್ ಭಾಷೆಯ ಮಹತ್ವದ ಅರಿವಾಗತೊಡಗಿತು. ಮಾತ್ರವಲ್ಲ ಇಂಗ್ಲೀಷ್‍ನ್ನು ಕಲಿಯದೇ ಹೋದರೆ ಅಮೆರಿಕನ್ನರು ನಡೆಸುವ ಕಾರುಬಾರುಗಳು ನಮಗೆ ಗೊತ್ತೇ ಆಗುವದಿಲ್ಲ ಹಾಗೂ ಲಿಬಿಯಾಕ್ಕೆ ಒಳ್ಳೆಯ ಭವಿಷ್ಯವಿರುವದಿಲ್ಲ ಎಂಬ ಸತ್ಯವನ್ನು ಮನಗಂಡ. ಹೀಗಾಗಿ ಆತ ಮತ್ತೆ ಇಂಗ್ಲೀಷ್ ಭಾಷೆಯ ಕಲಿಕೆಯನ್ನು ಆರಂಭಿಸಿದ. ಕೆಲವರು ಆತ ಇಂಗ್ಲೀಷ್ ಭಾಷೆಯನ್ನು ನಿಷೇಧಿಸಿ ಆರು ವರ್ಷಗಳ ನಂತರ ಅಂದರೆ 1992ರಲ್ಲಿ ಅದರ ಕಲಿಕೆಯನ್ನು ಮತ್ತೆ ಆರಂಭಿಸಿದನೆಂದೂ ಆದರೆ ಅದು ಇಡಿ ದೇಶದ ತುಂಬಾ ವಿಸ್ತರಣೆಯಾದದ್ದು 1996ರಲ್ಲಿ ಮಾತ್ರ ಎಂದು ಹೇಳುತ್ತಾರೆ. ಇನ್ನು ಕೆಲವರು ಸರಿ ಸುಮಾರು ಹತ್ತು ವರ್ಷಗಳ ಕಾಲ ಅಂದರೆ 1986ರಿಂದ 1996ರವರೆಗೆ ಲಿಬಿಯಾ ಇಂಗ್ಲೀಷ್ ಭಾಷೆಯ ಮುಖವನ್ನೇ ಕಾಣಲಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಏನೇ ಆಗಲಿ 1996 ರಿಂದಾಚೆ ಇಂಗ್ಲೀಷ್ ಭಾಷೆಯನ್ನು ಕಲಿಯಲಿಕ್ಕೆ ಏನೆಲ್ಲ ಸೌಕರ್ಯಗಳು ಬೇಕೋ ಅವನ್ನೆಲ್ಲಾ ಗಡಾಫಿ ಕಲ್ಪಿಸಿಕೊಟ್ಟ. ಪಕ್ಕದ ದೇಶಗಳಾದ ಗನಾ, ನೈಜೇರಿಯಾ, ಕೀನ್ಯಾ, ಈಜಿಪ್ಟ್ ಗಳಿಂದ ಇಂಗ್ಲೀಷ್ ಶಿಕ್ಷಕರನ್ನು ನೇಮಿಸಿಕೊಂಡು ಮತ್ತೆ ಇಂಗ್ಲೀಷ್ ಕಲಿಸತೊಡಗಿದ. ಇಲ್ಲಿಯ ಪ್ರೈಮರಿ, ಪ್ರಿಪರೇಟರಿ, ಹಾಗೂ ಸೆಕೆಂಡರಿ ಶಾಲೆಯ ಇಂಗ್ಲೀಷ್ ಪಠ್ಯಪುಸ್ತಕಗಳನ್ನು ರಚಿಸಲು ಇಂಗ್ಲೀಷ್‍ರ ಸಹಾಯ ತೆಗೆದುಕೊಂಡನು. ಆ ಕಾರಣಕ್ಕಾಗಿಯೇ ಇಲ್ಲಿಯ ಇಂಗ್ಲೀಷ್ ಪಠ್ಯಪುಸ್ತಕಗಳು ತುಂಬಾ ಉತ್ಕೃಷ್ಟ ಮಟ್ಟದಲ್ಲಿವೆ. ದುರಂತವೆಂದರೆ ಅವನ್ನು ಸರಿಯಾಗಿ ಕಲಿಸಲು ಒಳ್ಳೆಯ ಶಿಕ್ಷಕರೇ ಇಲ್ಲ. ಈ ಮಧ್ಯ ಸಮೀಕ್ಷೆಯೊಂದನ್ನು ನಡೆಸಿ ಭಾರತೀಯರು ಕೂಡಾ ಇಂಗ್ಲೀಷಿನಲ್ಲಿ ಬ್ರಿಟಿಷ್‍ರಿಗಿಂತ ಏನೂ ಕಮ್ಮಿಯಿಲ್ಲ ಎಂಬ ಸತ್ಯವನ್ನು ಕಂಡುಕೊಂಡನು. ಆ ಪ್ರಕಾರ 2000 ದಿಂದಾಚೆ ಲಿಬಿಯಾದ ಕಾಲೇಜುಗಳಲ್ಲಿ ಭಾರತೀಯ ಇಂಗ್ಲೀಷ್ ಉಪನ್ಯಾಸಕರನ್ನು ನೇಮಿಸಿಕೊಂಡು ಇಂಗ್ಲೀಷ್ ಭಾಷೆಯ ಕಲಿಕೆಗೆ ಹೆಚ್ಚಿನ ಒತ್ತನ್ನು ಕೊಟ್ಟನು.

    ಅದೆಲ್ಲಾ ಇರಲಿ. ಇಷ್ಟೆಲ್ಲಾ ಹೇಳುತ್ತಿದ್ದ ಗಡಾಫಿ ಇಂಗ್ಲೀಷ್ ಭಾಷೆಯನ್ನು ಕಲಿತಿದ್ದನೆ? ಅವನಿಗೆ ಇಂಗ್ಲೀಷಿನಲ್ಲಿ ಮಾತನಾಡಲು ಬರುತ್ತಿತ್ತೆ? ಎಂದು ಕೇಳಿದರೆ ಉತ್ತರ ಹೌದು ಅಥವಾ ಇಲ್ಲ ಎಂದು ಬರುತ್ತದೆ. ಏಕೆಂದರೆ ಗಡಾಫಿ ಇಂಗ್ಲೀಷ್ ಕಲಿತಿದ್ದು ತನ್ನ ಸೆಕೆಂಡರಿ ಶಾಲೆಯಲ್ಲಿ ಮತ್ತು ಬಿ.ಎ. ಓದುತ್ತಿರಬೇಕಾದರೆ ಮಾತ್ರ. ಮುಂದೆ ಆತ ತನ್ನ ಓದನ್ನು ಅರ್ಧದಲ್ಲಿ ಮೊಟಕುಗೊಳಿಸಿ ಲಿಬಿಯಾದ ಗದ್ದುಗೆಯನ್ನೆರಿದ್ದರಿಂದ ತನ್ನ ಶಿಕ್ಷಣಕ್ಕೆ ತಿಲಾಂಜಲಿಯನ್ನು ಇಡಬೇಕಾಯಿತು. ಹೀಗಾಗಿ ಆತ ಇಂಗ್ಲೀಷ್ ಕಲಿತಿದ್ದೇನಿದ್ದರೂ ಅಲ್ಪ ಸ್ವಲ್ಪ ಮಾತ್ರ. ಅವನಿಗೆ ಇಂಗ್ಲೀಷ್‍ನಲ್ಲಿ ಮಾತನಾಡಲು ಬರುತ್ತಿತ್ತೆಂದರೆ ಬರುತ್ತಿತ್ತು. ಇಲ್ಲವೆಂದರೆ ಇಲ್ಲ. ಒಂದು ವೇಳೆ ಇಂಗ್ಲೀಷಿನಲ್ಲಿ ಮಾತನಾಡಲೇಬೇಕಾದ ಪ್ರಸಂಗ ಬಂದರೆ ಹರಕು ಮುರುಕು ಇಂಗ್ಲೀಷ್‍ನಲ್ಲಿ ಮಾತನಾಡುತ್ತಿದ್ದ. ಅಥವಾ ತುಂಬಾ ತಯಾರಿಯನ್ನು ಮಾಡಿಕೊಂಡು ಮಾತನಾಡುತ್ತಿದ್ದ. ಇಂಗ್ಲೀಷ್ ಚಾನಲ್‍ಗಳಿಗೆ ಸಂದರ್ಶನ ಕೊಡಬೇಕಾದಾಗ ಅಥವಾ ಬೇರೆ ಬೇರೆ ರಾಷ್ಟ್ರದ ನಾಯಕರೊಂದಿಗೆ ಮಾತನಾಡುವಾಗ ಅವನ ಪಕ್ಕದಲ್ಲಿ ಸದಾ ಅರೇಬಿಕ್ ಮತ್ತು ಇಂಗ್ಲೀಷ್ ಭಾಷೆಗಳೆರೆಡನ್ನೂ ಬಲ್ಲ ಒಬ್ಬ ನುರಿತ ಅನುವಾದಕನಿರುತ್ತಿದ್ದ. ಇಂಗ್ಲೀಷಿನಲ್ಲಿ ಮಾತನಾಡಿದ್ದನ್ನು ಆತ ಅರೇಬಿಕ್ ಭಾಷೆಗೆ ಅನುವಾದಿಸಿ ಗಡಾಫಿಗೆ ಹೇಳುತ್ತಿದ್ದ ಹಾಗೂ ಗಡಾಫಿ ಹೇಳಿದ್ದನ್ನು ಇಂಗ್ಲೀಷಿಗೆ ಅನುವಾದಿಸಿ ಇತರರಿಗೆ ರವಾನಿಸುತ್ತಿದ್ದ.

    ಒಮ್ಮೆ ಅಂದರೆ 1999 ರಲ್ಲಿ ಸುಪ್ರಸಿದ್ಧ ಸಂದರ್ಶಕಿ ಡ್ಯಾಫ್ನಿ ಗಡಾಫಿಯನ್ನು B.B.C. ಚಾನಲ್‍ಗೆ ಸಂದರ್ಶಿಸುತ್ತಾ ಹೀಗೆ ಕೇಳಿದ್ದಳು. “So… when are you going to quit and leave the stage for someone else?” ಈ ಪ್ರಶ್ನೆಗೆ ಗಡಾಫಿಯ ಅನುವಾದಕ ಭಯಕ್ಕೋ, ಮುಜುಗರಕ್ಕೋ, ಅಥವಾ ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರದ್ದಕ್ಕೋ ಸುಮ್ಮನೆ ಕುಳಿತಿದ್ದ. ಡ್ಯಾಫ್ನಿ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದಳು. ಅನುವಾದಕ ಆಗಲೂ ಸುಮ್ಮನಿದ್ದ. ಆಗ ಡ್ಯಾಫ್ನಿ ಈ ಪ್ರಶ್ನೆಯನ್ನು ಅರೇಬಿಕ್‍ನಲ್ಲಿ ಕೇಳೋಣ ಎಂದುಕೊಳ್ಳುತ್ತಿರುವಾಗಲೇ ತಕ್ಷಣ ಇಂಗ್ಲೀಷ್ ಸರಿಯಾಗಿ ಮಾತನಾಡಲು ಬಾರದ ಗಡಾಫಿ ಯಾವುದೇ ಅನುವಾದದ ಸಹಾಯವಿಲ್ಲದೆ ಹೀಗೆ ಹೇಳಿದ್ದ; "It is not about me quitting, after all – I am the head of a revolution…”

                                                      
                             ಬಿಬಿಸಿ ಸಂದರ್ಶನಕ್ಕಾಗಿ ಸ್ಟುಡಿಯೋಕ್ಕೆ ಕರೆದೊಯ್ಯುವ ಮುನ್ನ ಗಡಾಫಿ ಡ್ಯಾಫ್ನಿ ಜೊತೆ
    ಹೀಗಿದ್ದೂ ಗಡಾಫಿ ಸಪ್ಟಂಬರ್ 23, 2009 ರಂದು ವಿಶ್ವಸಂಸ್ಥೆಯಲ್ಲಿ ತನ್ನ ಅನುವಾದಕನಿಗೆ ಹೆಚ್ಚು ತೊಂದರೆ ಕೊಡದೆ ಸಾಕಷ್ಟು ತಯಾರಿ ಮಾಡಿಕೊಂಡು ತಾನು ಹೇಳಬೇಕಾದ್ದೆಲ್ಲವನ್ನೂ ಸುಮಾರು 90 ನಿಮಿಷಗಳ (ಅಂದರೆ ಕೊಟ್ಟ ಅವಧಿಗಿಂತ 15 ನಿಮಿಷ ಹೆಚ್ಚಿಗೆ ತೆಗೆದುಕೊಂಡು) ಕಾಲ ಇಂಗ್ಲೀಷಿನಲ್ಲಿ ಹೇಳಿ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದ. ಇದು ಆತ ವಿಶ್ವಸಂಸ್ಥೆಯಲ್ಲಿ ಮೊಟ್ಟಮೊದಲ ಬಾರಿಗೆ ಮಾಡಿದ ಭಾಷಣವಾಗಿತ್ತು. ಆದರೆ ಅಲ್ಲಿ ಅಮೆರಿಕಾವೂ ಸೇರಿದಂತೆ ಇತರೆ ಇಂಗ್ಲೀಷ್ ದೇಶಗಳ ನಾಯಕರುಗಳು ಆತನನ್ನು ಕೀಳಾಗಿ ಕಂಡರು. ಆತನ ಭಾಷಣಕ್ಕೆ ಆಗಿನ ಬ್ರಿಟಿಷ್ ಪ್ರಧಾನ ಮಂತ್ರಿ ಗೋರ್ಡನ್ ಬ್ರೌನ್ ಸೇರಿದಂತೆ ಬೇರೆ ದೇಶದ ಗಣ್ಯವ್ಯಕ್ತಿಗಳ್ಯಾರೂ ಹಾಜರಾಗಲೇ ಇಲ್ಲ. ಅಷ್ಟೇ ಏಕೆ US ಸೆಕ್ರೇಟರಿಯಾಗಿದ್ದ ಹಿಲೇರಿ ಕ್ಲಿಂಟನ್ ಮತ್ತು ಅಮೇರಿಕಾದ ರಾಯಭಾರಿಗಳು ಸಹ ಅವನು ಭಾಷಣ ಆರಂಭಿಸುವ ಮೊದಲೇ ಅಲ್ಲಿಂದ ಎದ್ದು ಹೋದರು.

    ಆದರೂ ಗಡಾಫಿ ಪಟ್ಟು ಬಿಡದೆ ತಾನು ಹೇಳಬೇಕಾದ್ದನ್ನು ಯಾವುದೇ ಹಿಂಜರಿಕೆಯಿಲ್ಲದೆ ಇಂಗ್ಲೀಷಿನಲ್ಲಿ ಹೇಳುತ್ತಾ ಹೋದ. ಮೊದಲಿಗೆ ಮನೆಗೆ ಬಂದ ಅತಿಥಿಗಳನ್ನು ಹೇಗೆ ಸತ್ಕರಿಸಬೇಕು ಎನ್ನುವದನ್ನು ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ನೋಡಿ ಕಲಿಯಿರಿ ಎಂದು ಸೂಚ್ಯವಾಗಿ ಅಮೆರಿಕಾಕ್ಕೆ ಹೇಳುತ್ತಾ ವಿಶ್ವಸಂಸ್ಥೆ ತನ್ನ ಕಲಮು 2 ರ ಪ್ರಕಾರ ತನ್ನ ಎಲ್ಲ ಸದಸ್ಯರನ್ನು ಸಮನಾಗಿ ಕಾಣಬೇಕು. ಆದರೆ ವಾಸ್ತವದಲ್ಲಿ ಇದು ರೂಢಿಯಾಗೇ ಇಲ್ಲ ಎಂದು ಹೇಳುವದರ ಮೂಲಕ ತನಗಾದ ತಾರತಮ್ಯವನ್ನು ಎತ್ತಿ ತೋರಿಸಿದ್ದ. ಮುಂದುವರಿಯುತ್ತಾ ವಿಶ್ವಸಂಸ್ಥೆ ಹುಟ್ಟಿರುವದೇ ಜಗತ್ತಿನ ಯಾವುದೇ ಭಾಗದಲ್ಲಿ ಯುದ್ಧಗಳಾಗದಂತೆ ನೋಡಿಕೊಳ್ಳುವದಕ್ಕೆ ಅಂದರೆ ವಿಶ್ವಶಾಂತಿ ಕಾಪಾಡುವದಕ್ಕೆ. ಆದರೆ ಅದು ಹುಟ್ಟಿದಾಗಿನಿಂದ ಅಂದರೆ 1945ರಿಂದ ಜಗತ್ತಿನ ನಾನಾ ಕಡೆ 65 ಯುದ್ಧಗಳು ನಡೆದಿವೆ. ಅವನ್ನು ತಡೆಗಟ್ಟುವಲ್ಲಿ ವಿಶ್ವಸಂಸ್ಥೆ ವಿಪಲವಾಗಿದೆ. ಹೀಗಿದ್ದ ಮೇಲೆ ವಿಶ್ವಸಂಸ್ಥೆ ಯಾಕಿರಬೇಕು ಎಂದು ಕಿಡಿಕಾರಿದ್ದ. ಮತ್ತೆ ಮುಂದುವರಿದು ಬೇರೆ ರಾಷ್ಟ್ರಗಳ ವಿಷಯದಲ್ಲಿ ಅಮೆರಿಕಾ ಮೂಗು ತೂರಿಸುವದನ್ನು ಮೊದಲು ನಿಲ್ಲಿಸಲಿ ಎಂದು ಹೇಳುತ್ತಾ ಇರಾಕ್ ಯುದ್ಧವನ್ನು ಅಮೆರಿಕಾದ “ಕೇಡಿನ ಪರಮಾವಧಿ” ಎಂದು ಕಟುಕಿದ್ದ. ಪ್ಯಾಲೈಸ್ತೀನಾದ ಬಿಕ್ಕಟ್ಟಿನ ಕುರಿತಂತೆ ಪ್ಯಾಲೈಸ್ತೀನಿಯನ್ನರು ಮತ್ತು ಇಸ್ರೇಲಿಯರು ಒಟ್ಟಿಗೆ ಒಂದೇ ದೇಶದಲ್ಲಿ ಸಹಬಾಳ್ವೆಯನ್ನು ನಡೆಸುವಂತಾಗಬೇಕು ಎಂದು ಕರೆಕೊಟ್ಟಿದ್ದ. ಆದರೆ ಅವನ ಭಾಷಣವನ್ನು ಕೇಳಿದವರೆಲ್ಲಾ ಅವನೇನು ಮಾತನಾಡಿದನೆಂದು ನಮಗೆ ಸರಿಯಾಗಿ ಅರ್ಥವಾಗಲೇ ಇಲ್ಲ. ಅಲ್ಲದೇ ಅವನ ಭಾಷಣ ಒಂದಕ್ಕೊಂದು ಸರಿಯಾದ ಜೋಡಣೆಯಿಲ್ಲದೆ ಅಸಂಬದ್ಧವಾಗಿತ್ತು ಎಂದು ಟೀಕಿಸುವದರ ಮೂಲಕ ಮತ್ತೆ ಅವನನ್ನು ಕಡೆಗಣಿಸಿದ್ದರು.

    -ಉದಯ್ ಇಟಗಿ

    ಬಿಟ್ಟೆನೆಂದರೂ ಬಿಡದೀ ಮಾಯೆ..........

  • ಶನಿವಾರ, ಫೆಬ್ರವರಿ 02, 2013
  • ಬಿಸಿಲ ಹನಿ
  • ಇಲ್ಲಿ ಈಗ ಭರ್ತಿ ಚಳಿ. ಅಂದರೆ ಇಲ್ಲೀಗ ಚಳಿಗಾಲದ ಪರ್ವಕಾಲ. ಅಬ್ಬಾ! ಅದ್ಯಾವ ಪರಿ ಚಳಿ ಎಂದರೆ ಒಳಗೆ ಥರ್ಮಲ್ ವೇರ್ಸ್, ಮೇಲೆ ದಪ್ಪದಪ್ಪನೆ ಉಣ್ಣೆ ಅಂಗಿ, ಕೈಗೆ ಗ್ಲೌಸುಗಳನ್ನು ಹಾಕಿಕೊಂಡು ಕುಳಿತರೂ ಗಡಗಡ ನಡುಗಿಸುವ ಈ ಚಳಿ ನಮ್ಮ ಮೈ ಮನಸ್ಸುಗಳನ್ನು ಮರಗಟ್ಟಿಸಿಬಿಡುತ್ತದೆ. ಎಲ್ಲಿ ಹೋದರೂ ಬಿಡದ ಈ ಚಳಿ ನಮ್ಮನ್ನು ಬಲವಂತವಾಗಿ ಹೀಟರ್ ಗಳ ಮುಂದೆ ಎಳೆದು ತಂದು ಕೂರಿಸಿಸಿಬಿಡುತ್ತದೆ. ಹೀಗೆ ಹೀಟರ್ ಮುಂದೆ ಕುಳಿತುಕೊಂಡು ಮೈ ಕಾಯಿಸಿಕೊಳ್ಳುತ್ತಿದ್ದಂತೆ ಮರಗಟ್ಟಿದ ಮೈ ನಿಧಾನವಾಗಿ ಸಡಿಲವಾಗತೊಡಗುತ್ತದೆ. ಮೈ ಬೆಚ್ಚಗಾಗುತ್ತಿದ್ದಂತೆ ಮನಸ್ಸು ಕೂಡಾ ತಾನೇ ತಾನಾಗಿ ಅದೆಂಥದೋ ಬೆಚ್ಚಗಿನ ಭಾವಕ್ಕೆ ಒಳಗಾಗಿ ಬಿಡುತ್ತದೆ. ಸ್ವಲ್ಪ ಹೊತ್ತು ಮೈ ಕಾಯಿಸಿಕೊಳ್ಳುವದು, ಮತ್ತೆ ಹೀಟರ್ ನಿಂದ ಹಿಂದೆ ಸರಿಯೋದು. ಮೈ ಕಾಯಿಸಿಕೊಳ್ಳುವದು, ಮತ್ತೆ ಹೀಟರ್ ನಿಂದ ಹಿಂದೆ ಸರಿಯೋದು. ಹೀಗೆ ಸಾಗುತ್ತಲೇ ಇರುತ್ತದೆ. ಹೀಟರ್ ಮುಂದೆ ಮೈ ಕಾಯಿಸುತ್ತಾ ಕುಳಿತಂತೆ ಅದೆಂಥದೋ ಸುಖ ನಮ್ಮನ್ನು ತನ್ನೊಳಗೆ ಎಳೆದುಕೊಂಡುಬಿಡುತ್ತದೆ. ಹೀಟರ್ ಬಿಟ್ಟೇಳಬೇಕು. ಆದರೆ ಬಿಟ್ಟೇಳದಂತೆ ಮಾಡಿಬಿಡುತ್ತದೆ. ಬಿಟ್ಟೆನೆಂದರೂ ಬಿಡದೀ ಮಾಯೆ!
    ಅಂದಹಾಗೆ ಈ ಸಾರಿ ಚಳಿಗಾಲಕ್ಕೆ ಲಿಬಿಯಾದ ಎಲ್ಲ ಕಛೇರಿಗಳ ಕೆಲಸದ ಸಮಯವನ್ನು ಬದಲು ಮಾಡಿದ್ದಾರೆ. ಅಲ್ಲಲ್ಲ ದಿನದ ಸಮಯವನ್ನೇ ಒಂದು ಘಂಟೆಯಷ್ಟು ಹಿಂದೆ ತಳ್ಳಿದ್ದಾರೆ. ಅಂದರೆ ಈ ಹಿಂದೆ ದಿನದ ಅವಧಿಯ ಪ್ರಕಾರ ಎಂಟು ಘಂಟೆಗೆ ಆರಂಭವಾಗಬೇಕಿದ್ದ ನಮ್ಮ ಕಾಲೇಜು ಈಗ ಒಂಬತ್ತು ಘಂಟೆಗೆ ಆರಂಭವಾಗುತ್ತದೆ. ಆದರೆ ಅವರು ಅದನ್ನೇ ಎಂಟು ಘಂಟೆ ಎಂದು ಕರೆಯುತ್ತಾರೆ. ಹಿಂದಿನ ಅವಧಿಯ ಪ್ರಕಾರ ಇಲ್ಲಿ ಬೆಳಗಿನ ಎಂಟು ಘಂಟೆಗೆ ಇನ್ನೂ ಸ್ವಲ್ಪ ಕತ್ತಲಿರುವದರಿಂದ ಕಛೇರಿಗಳಿಗೆ ಹೋಗಲು ತೊಂದರೆಯಾಗುತ್ತದೆಂದು ಈಗ ಒಂದು ಘಂಟೆಯಷ್ಟು ಸಮಯವನ್ನು ಕಡಿತಗೊಳಿಸಿದ್ದಾರೆಂದೂ ಹಾಗೂ ಹಿಂದಿನ ಒಂಬತ್ತು ಘಂಟೆಯನ್ನೇ ಈಗ ಅವರು ಎಂಟು ಘಂಟೆಯೆಂದು ಹೇಳಲು ಸರಕಾರವೇ ಆದೇಶ ಹೊರಡಿಸಿದೆಯೆಂದೂ ಹೇಳಿದರು. ಅಂದರೆ ಒಂದು ಘಂಟೆಯಷ್ಟು ಸಮಯವನ್ನು ಹಿಂದೆ ಸರಿಸಿದ್ದಾರೆ. ಈ ನಿಯಮವನ್ನು ಗಡಾಫಿ ಇರಬೇಕಾದರೆ ಒಂದೆರೆಡು ವರ್ಷ ಜಾರಿಗೆ ತಂದು ಆಮೇಲೆ ನಿಲ್ಲಿಸಿಬಿಟ್ಟನಂತೆ. ಆದರೆ ಈಗ ಹೊಸ ಸರಕಾರ ಮತ್ತೆ ಅದನ್ನೇ ಜಾರಿಗೆ ತಂದಿದೆ. ಅಂದಹಾಗೆ ಈ ತರ ಒಂದು ಘಂಟೆಯಷ್ಟು ಸಮಯವನ್ನು ಹಿಂದೆ ತಳ್ಳುವದು ಯಾಕೆ? ಬದಲಾಗಿ ಎಂಟು ಘಂಟೆಗೆ ಆರಂಭಿಸಿ ಎರಡು ಘಂಟೆಗೆ ಮುಗಿಸುವ ಬದಲು ಒಂಬತ್ತು ಘಂಟೆಗೆ ಆರಂಭಿಸಿ ಮೂರು ಘಂಟೆಗೆ ಮುಗಿಸಬಹುದಲ್ಲ? ಅದ್ಯಾಕೆ ಸುಖಾಸುಮ್ಮನೆ ಸಮಯವನ್ನು ಬದಲಾಯಿಸುತ್ತಿರಿ? ಎಂದು ನಾನು ನನ್ನದೇ ತಾರ್ಕಿಕ ನೆಲೆಗಟ್ಟಿನಲ್ಲಿ ಇಲ್ಲಿಯವರನ್ನು ಕೇಳಿದ್ದೆ. ಅವರು ಮೊದಲು ನನ್ನ ತರ್ಕವನ್ನು ಅರ್ಥಮಾಡಿಕೊಳ್ಳದೇ ಪಿಳಿಪಿಳಿ ಕಣ್ಣು ಬಿಟ್ಟರೆ ನಂತರ ಎಲ್ಲವೂ ಒಂದೇ ಎಂದು ನಕ್ಕಿದ್ದರು. ಸಮಯವನ್ನೇ ಬದಲಾಯಿಸುವ ಇವರು ಇನ್ನೇನನ್ನು ಬದಲಾಯಿಸಬಲ್ಲರು? ಎಂದು ಸುಮ್ಮನೆ ನನ್ನಷ್ಟಕ್ಕೆ ನಾನೇ ಏನೇನೋ ಕಲ್ಪಿಸಿಕೊಂಡು ನಗುತ್ತಿರಬೇಕಾದರೆ ನನ್ನ ಜೋರ್ಡಾನಿ ಸಹೋದ್ಯೋಗಿಯೊಬ್ಬ ತಮ್ಮ ದೇಶದಲ್ಲೂ ಚಳಿಗಾಲದಲ್ಲಿ ಒಂದು ಘಂಟೆಯಷ್ಟು ಸಮಯವನ್ನು ಕಡಿತಗೊಳಿಸುತ್ತಾರೆಂದೂ ಅದರಲ್ಲಿ ನಗುವಂಥದ್ದೇನಿದೆಯೆಂದೂ ನನ್ನ ಹುಸಿಮುನಿಸಿನಿಂದ ನೋಡಿದ್ದ. ನಾನು ಎಷ್ಟೇ ಆಗಲಿ ನೀವು ಅರಬ್‍ರೆಲ್ಲಾ ಒಂದೇ ತಳಿ ಅಲ್ವಾ ಎಂದು ಅವನೆದುರಿಗೇ ಮತ್ತಷ್ಟು ಜೋರಾಗಿ ನಕ್ಕಿದ್ದೆ.

    ನಾವು ಲಿಬಿಯಾಕ್ಕೆ ಬರುವ ಮುನ್ನ ನಮ್ಮ ಕನ್ಸಲ್ಟಂಟ್ ಇಲ್ಲಿಯ ಚಳಿಯ ಬಗ್ಗೆ ಸಾಕಷ್ಟು ಹೇಳಿದ್ದರೂ ಅಷ್ಟೇನೂ ಇರಲಿಕ್ಕಿಲ್ಲ ಎಂದು ಉದಾಸೀನ ಮಾಡಿದ್ದೆವು. ಆದರೆ ಇಲ್ಲಿ ಯಾವಾಗ ಚಳಿಗಾಲ ಶುರುವಾಯಿತೋ ನಮ್ಮ ಕನ್ಸಲ್ಟಂಟ್ ಹೇಳಿದ್ದು ವಾಸ್ತವದಲ್ಲಿ ಅರಿವಾಗತೊಡಗಿತ್ತು. ಇಂಡಿಯಾದಿಂದ ತಂದ ಉಣ್ಣೆ ಬಟ್ಟೆಗಳು ಸಾಕಾಗದೆ ಇಲ್ಲಿಯ ಸೂಕಿ(ಸಂತೆ)ನಲ್ಲಿ ವಿಶೇಷವಾಗಿ ಚಳಿಗಾಲಕ್ಕೆಂದೇ ತಯಾರಿಸಿದ ಮತ್ತಷ್ಟು ಬಟ್ಟೆಗಳನ್ನು ಖರೀದಿಸಿದ್ದೆವು. ಬಂದ ಹೊಸತರಲ್ಲಿ ಇಲ್ಲಿಯ ಚಳಿಗೆ ನಮ್ಮ ದೇಹ ಹೊಂದಿಕೊಳ್ಳದೆ ಸಾಕಷ್ಟು ಪಾಡು ಪಡಬೇಕಾಯಿತು. ನಿಧಾನವಾಗಿ ನಮ್ಮ ದೇಹ ಇಲ್ಲಿಯ ಚಳಿಗೆ ಅಲರ್ಜಿಕ್ ಆಗಿ ನವೆ ಶುರುವಾಯಿತು. ಯಾವಾಗೆಂದರೆ ಅವಾಗ ಎಲ್ಲೆಂದರಲ್ಲಿ ನಮ್ಮ ಮೈಯನ್ನು ಕೆರೆದು ಕೆರೆದು ಸಾಕಾಗಿಹೋಯಿತು. ನಿದ್ರೆಯಿಲ್ಲದೆ ಹೊರಳಾಡಿದೆವು. ಎಷ್ಟೋ ಸಾರಿ ಈ ಪರಿಯ ನವೆಯನ್ನು ತಡೆದುಕೊಳ್ಳಲಾಗದೆ ನಮ್ಮ ಕೆಲಸದ ಕಾಂಟ್ರ್ಯಾಕ್ಟ್‍ನ್ನು ಅರ್ಧದಲ್ಲಿ ಮೊಟಕುಗೊಳಸಿ ಹೋಗಿಬಿಡೋಣ ಎನಿಸಿದ್ದಿದೆ. ಆದರೆ ನಮಗೆ ಸಿಗುತ್ತಿದ್ದ ದೊಡ್ಡ ಮೊತ್ತದ ಸಂಬಳ ‘ಇವತ್ತಲ್ಲ ನಾಳೆ ಸರಿಹೋಗಬಹುದು, ಇರು’ ಎಂದು ಹಿಡಿದು ನಿಲ್ಲಿಸಿತ್ತು. ತದನಂತರದಲ್ಲಿ ಇಲ್ಲಿಯ ಆಸ್ಪತ್ರೆಗಳಲ್ಲಿ ನಮ್ಮ ಇಂಡಿಯನ್ ಡಾಕ್ಟರುಗಳು ಇಂಟ್ರ‍ಾ ಮ್ಯಾಸ್ಕುಲರ್ ಇಂಜೆಕ್ಷನ್ ಕೊಟ್ಟು ಕಡಿಮೆ ಮಾಡಿದ್ದರು. ಕ್ರಮೇಣ ನಮ್ಮ ದೇಹ ಇಲ್ಲಿಯ ಚಳಿಗೆ ಹೊಂದಿಕೊಳ್ಳತೊಡಗಿತು.
    ಒಂದೊಂದು ಸಾರಿ ಇಷ್ಟೊಂದು ಚಳಿ ಅಭ್ಯಾಸವಿರದ ನಮಗೆ ಈ ಬದುಕು ಬೇಕಾ? ಸಾಕಿನ್ನು ಹೊರಟುಬಿಡೋಣ ಅಂತೆಲ್ಲಾ ಅನಿಸುತ್ತದೆ. ಆದರೆ ಒಂದಾದ ಮೇಲೊಂದರಂತೆ ಉದ್ಭವಿಸುವ ನಮ್ಮ ಬದುಕಿನ ಕಮಿಟ್‍ಮೆಂಟ್‍ಗಳು ಮತ್ತು ನಮ್ಮ ಒಂದಷ್ಟು ಆಸೆಗಳು ನಮ್ಮನ್ನು ಇಲ್ಲಿಯೇ ಜೋತು ಬೀಳುವಂತೆ ಮಾಡುತ್ತವೆ. ಜೊತೆಗೆ ನಮ್ಮ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರ ಸಣ್ಣ ಪುಟ್ಟ ಕಮಿಟ್‍ಮೆಂಟಗಳು ಕೂಡ ನಮ್ಮ ಹೆಗಲೇರಿ ನಮ್ಮನ್ನು ಹೋಗದಂತೆ ತಡೇಹಿಡಿಯುತ್ತವೆ. ಹಾಗೆ ನೋಡಿದರೆ ಹೊರದೇಶದಲ್ಲಿ ದುಡಿಯುತ್ತಿರುವ ನಮ್ಮಂಥವರು ಇಲ್ಲಿಗೆ ಬರುವ ಮುನ್ನ ಈ ದುಡಿಮೆಯಿಂದ ಇದ್ದ ಬಿದ್ದ ಒಂದಷ್ಟು ಸಾಲಗಳನ್ನು ತೀರಿಸಿ ಮತ್ತೆ ಇಂಡಿಯಾಕ್ಕೆ ವಾಪಾಸಾಗಿ ನಮ್ಮ ಎಂದಿನ ಕೆಲಸವನ್ನು ಮುಂದುವರಿಸದರಾಯಿತು ಎಂದುಕೊಂಡು ಬರುತ್ತೇವೆ. ಆದರೆ ಕ್ರಮೇಣ ಮಕ್ಕಳನ್ನು ಒಳ್ಳೆ ಸ್ಕೂಲಿಗೆ ಸೇರಿಸಲು ಹಣ ಬೇಕು. ಅದಕ್ಕೆ ಇನ್ನೊಂದು ವರ್ಷ ದುಡಿದುಕೊಂಡು ಹೋದರಾಯಿತು ಎಂದು ಇನ್ನೊಂದು ವರ್ಷ ಮುಂದುವರೆಸುತ್ತೇವೆ. ಅದು ಮುಗಿಯುತ್ತಿದ್ದಂತೆ ವಾರಿಗೆಯವರು, ಸ್ನೇಹಿತರು ಒಂದು ಸೈಟ್ ತೆಗೆದುಕೊಂಡಿದ್ದಾರೆ. ನಾನೂ ಒಂದು ತೆಗೆದುಕೊಳ್ಳಬೇಕು. ಮತ್ತೆ ಅದಕ್ಕೋಸ್ಕರ ಇನ್ನೊಂದೆರೆಡು ವರ್ಷ ಉಳಿಯುತ್ತೇವೆ. ಅದರ ಕಮಿಟ್‍ಮೆಂಟ್ ಮುಗಿಯುತ್ತಿದ್ದಂತೆ ಇನ್ನೊಂದು ಸೈಟ್ ತೆಗೆದುಬಿಡೋಣ ಕಷ್ಟಕಾಲಕ್ಕೆ ಆಗಬಹುದು ಎನ್ನುವ ದೂರದ ಆಸೆ. ಅದಕ್ಕೋಸ್ಕರ ಮತ್ತೊಂದೆರೆಡು ವರ್ಷ. ಅದರ ಸಾಲ ಎಲ್ಲಾ ತೀರುತ್ತಿದ್ದಂತೆ ಹೇಗೂ ಒಳ್ಳೆ ಸಂಬಳ ಇದೆ. ನಮ್ಮದೇ ಒಂದು ಸೂರನ್ನು ಯಾಕೆ ಮಾಡಿಕೊಳ್ಳಬಾರದು ಎನಿಸಿ ಮತ್ತೆ ಅದಕ್ಕಾಗಿ ಇನ್ನೊಂದೆರೆಡು ವರ್ಷ ಉಳಿಯುತ್ತೇವೆ. ಅದೆಲ್ಲಾ ಮುಗಿಯುತ್ತಿದ್ದಂತೆ ಇಷ್ಟೊಂದು ದೊಡ್ಡ ಮೊತ್ತದ ಸಂಬಳಕ್ಕೆ ಕೆಲಸಮಾಡಿ ಒಗ್ಗಿಹೋದ ಮನಸ್ಸು ಇಂಡಿಯಾದಲ್ಲಿ ಸಿಗುವ ಸಣ್ಣ ಮೊತ್ತದ ಸಂಬಳಕ್ಕೆ ಕೆಲಸಮಾಡಲು ಅಣಿಯಾಗುತ್ತದೆಯೇ? ಹೀಗಾಗಿ ಮತ್ತೆ ಇನ್ನೊಂದೆರೆಡು ವರ್ಷ ದುಡಿದುಕೊಂಡು ಬಂದ ಹಣವನ್ನು ಬ್ಯಾಂಕಿನಲ್ಲಿಟ್ಟುಕೊಂಡು ನೆಮ್ಮದಿಯ ಜೀವನ ನಡೆಸದರಾಯಿತು ಎಂದುಕೊಂಡು ಮತ್ತೆ ಒಂದೆರೆಡು ವರ್ಷ ಮುಂದೂಡುತ್ತೇವೆ. ಹೀಗೆ ಹೋಗಬೇಕೆಂದುಕೊಳ್ಳುವದು....... ಮತ್ತೆ ಮುಂದೂಡುವದು ..... ಹೋಗಬೇಕೆಂದುಕೊಳ್ಳುವದು....... ಮತ್ತೆ ಮುಂದೂಡುವದು .....ನಡೆಯುತ್ತಲೇ ಇರುತ್ತದೆ. ಮನುಷ್ಯನ ಆಸೆಗಳಿಗೆ ಕೊನೆ ಎಲ್ಲಿ? ಹೀಗೆ ಒಂದಾದ ಮೇಲೊಂದು ಆಸೆಗಳನ್ನು ತೀರಿಸಿಕೊಳ್ಳುವಷ್ಟೊತ್ತಿಗೆ ನಮ್ಮ ಬದುಕಿನ ಎಂಟತ್ತು ವರ್ಷಗಳನ್ನು ನಿಜವಾದ ಆಪ್ಯಾಯನಗಳಿಲ್ಲದೆ ಕಳೆದುಬಿಟ್ಟಿರುತ್ತೇವೆ.

    ಎಷ್ಟೋ ಸಾರಿ ಇರುವಲ್ಲೇ, ಇದ್ದಿದ್ದರಲ್ಲೇ, ಇರುವಂತೆಯೇ ಬದುಕೋಣ. ಇಲ್ಲಿ ಸುಖಾಸುಮ್ಮನೆ ಸತ್ತು ಬದುಕುವದೇಕೆ? ಎಂದುಕೊಳ್ಳುತ್ತೇವೆ. ಊಹೂಂ ಮನಸ್ಸು ಕೇಳುವದೇ ಇಲ್ಲ. ನಮಗೆ ದಿನಾರಿನಲ್ಲಿ ಬರುವ ಸಂಬಳವನ್ನು ಪ್ರತಿ ತಿಂಗಳು ಖರ್ಚು ಕಳೆದು ಎಷ್ಟು ಉಳಿಯಿತು ಎನ್ನುವದನ್ನು ಡಾಲರ್ ನಿಂದ (ಅಂದರೆ ಡಾಲರ್ ನಿಂದ ದಿನಾರಿಗೆ ಇರುವ ಎಕ್ಸ್ಚೆಂಚ್ ರೇಟ್‍ನಿಂದ) ದಿನಾರಿಗೆ ಭಾಗಿಸುತ್ತಾ ಮತ್ತೆ ಅದನ್ನು ಐವತೈದರಿಂದ ರೂಪಾಯಿಗಳಿಗೆ ಗುಣಿಸಿ, ಈ ತಿಂಗಳು ಇಷ್ಟು ಉಳಿಸಿದ್ದೇವೆ ಎಂದು ಹೆಮ್ಮೆಯಿಂದ ಬೀಗುತ್ತೇವೆ. ವರ್ಷದ ಕೊನೆಯಲ್ಲಿ ಅಬ್ಬಾ ಈ ಸಾರಿಯ ಗಳಿಕೆ ಇಷ್ಟು ಆಯ್ತಲ್ಲ ಎಂದು ಖುಷಿಯಿಂದ ಮುಖವರಳಿದರೆ ಮನಸ್ಸು ಇನ್ನೊಂದು ವರ್ಷ ದುಡಿದುಕೊಂಡು ಹೋದರಾಯಿತು ಎಂದು ಲೆಕ್ಕ ಹಾಕುತ್ತದೆ. ಅದು ಕಳೆಯುತ್ತಿದ್ದಂತೆ ಮತ್ತೆ ಮುಂದಿನ ವರ್ಷಕ್ಕೆ ಮುಂದೂಡಿರುತ್ತೇವೆ. ಹೀಗೆ ಭಾಗಾಕಾರ, ಗುಣಾಕಾರ, ಸಂಕಲನದಲ್ಲಿಯೇ ಲೆಕ್ಕ ಹಾಕುವ ನಾವು ನಮ್ಮ ಬದುಕಿನಲ್ಲಿ ಕಳೆದುಕೊಂಡಿದ್ದೇನು ಎನ್ನುವದನ್ನು ನಾವು ಲೆಕ್ಕ ಹಾಕುವದೇ ಇಲ್ಲ. ನಾವು ಹೋಗಲಿ ಹೊರಜಗತ್ತು ಕೂಡಾ ಲೆಕ್ಕಹಾಕುವದಿಲ್ಲ.

    ಹಾಗೆ ನೋಡಿದರೆ ಹೊರಜಗತ್ತು ನಮ್ಮಂಥ ಎನ್‍ಆರ್‍ಐಗಳ ಬಗ್ಗೆ ಮತ್ತು ನಮ್ಮ ಬದುಕಿನ ಬಗ್ಗೆ ಅನೇಕ ಫ್ಯಾಂಟಸಿಗಳನ್ನು ಕಟ್ಟಿಕೊಂಡಿರುತ್ತದೆ. ದೊಡ್ದ ಮೊತ್ತದ ಸಂಬಳ ತರುವ ನಾವು ಅವರ ಕಣ್ಣಲ್ಲಿ ಸ್ವರ್ಗ-ಸುಖಿಗಳಾಗಿ ಕಾಣುತ್ತೇವೆ. ಅಸಲಿಗೆ ನಾವು ಎಂತೆಂಥ ಸ್ವರ್ಗ-ಸುಖಗಳಿಂದ ವಂಚಿತರಾಗಿದ್ದೇವೆ ಎನ್ನುವದು ಅವರ ಗಮನಕ್ಕೆ ಬರುವದೇ ಇಲ್ಲ. ನಮ್ಮ ನೋವುಗಳು, ನಮ್ಮ ಬಾಧೆಗಳು, ನಮ್ಮ ತಳಮಳಗಳು, ತವಕ-ತಲ್ಲಣಗಳು ಯಾರಿಗೂ ಅರ್ಥವಾಗುವದೇ ಇಲ್ಲ. ಹೊರಗಿನವರು ಹೋಗಲಿ ನಮ್ಮ ಹತ್ತಿರದವರಾದ ನಮ್ಮ ನೆಂಟರು, ಸ್ನೇಹಿತರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಯಾರೂ ಅರ್ಥಮಾಡಿಕೊಳ್ಳುವದಿಲ್ಲ. ಅವರೇನಪ್ಪಾ ಎನ್‍ಆರ್‍ಐಗಳು. ಅಷ್ಟು ಸಂಬಳ ತರುತ್ತಾರೆ, ಅವರಿಗೇನು ಕಮ್ಮಿ, ಸುಖವಾಗಿದ್ದಾರೆ ಎಂಬ ಭಾವದಲ್ಲೇ ನಮ್ಮನ್ನು ನೋಡುತ್ತಾರೆ. ಆದರೆ ಬದುಕನ್ನು ಕಟ್ಟಿಕೊಳ್ಳಲು ಸಾವಿರ ಸಾವಿರ ಮೈಲಿ ದೂರದಲ್ಲಿ ಬಂದು ಕುಳಿತ ನಮ್ಮಂಥವರ ನೋವುಗಳು, ಸಂಕಷ್ಟಗಳು, ತಳಮಳಗಳು, ವ್ಯಥೆಗಳು. ನಮಗಷ್ಟೇ ಗೊತ್ತಿರುತ್ತೇವೆ.

    ಹೀಗೆ ಕೆಲಸ ಅರಸಿಕೊಂಡು ದೂರದ ದೇಶದಲ್ಲಿ ಬಂದು ಕುಳಿತಿರುವ ನಾವು ಮೊದಲಿಗೆ ಒಂದು ಸಾಮಾಜಿಕ ಬದುಕಿಗಾಗಿ ತಡಕಾಡುತ್ತೇವೆ. ಅದೇನೂ ಕಷ್ಟವಾಗುವದಿಲ್ಲ. ಎಲ್ಲೆಲ್ಲೂ ಮನುಷ್ಯರೇ ಇರುವದರಿಂದ ಮನುಷ್ಯ ಇತರ ಮನುಷ್ಯರೊಟ್ಟಿಗೆ ಬಹಳ ಬೇಗನೆ ಸಂಪರ್ಕ ಬೆಳೆಸುತ್ತಾನೆ. ಬಣ್ಣ ಬೇರೆ ಇರಬಹುದು, ಭಾಷೆ ಬೇರೆ ಇರಬಹುದು, ನಡಾವಳಿಗಳು ಬೇರೆ ಇರಬಹುದು. ಆದರೆ ಭಾವನೆಗಳು ಒಂದೇ ಅಲ್ವೇ? ನಿಧಾನಕ್ಕೆ ನಮ್ಮ ಭಾವನೆಗಳಿಗೆ ಸರಿಹೊಂದುವವರನ್ನು ಆರಿಸಿ ಅವರೊಟ್ಟಿಗೆ ಭಾವನಾತ್ಮಕ ಸಂಬಂಧ ಬೆಸೆಯುತ್ತೇವೆ. ಹೊಸ ಹೊಸ ನೆನಪುಗಳನ್ನು ಕಟ್ಟಿಕೊಳ್ಳತೊಡಗುತ್ತೆವೆ. ಆದರೆ ಇದರ ಜೊತೆಗೆ ದೂರದ ಇಂಡಿಯಾದಲ್ಲಿರುವ ನಮ್ಮ ಅಕ್ಕ-ತಂಗಿಯರ, ಅಣ್ಣ-ತಮ್ಮಂದಿರ, ಸ್ನೇಹಿತರ, ಹಾಗೂ ಬಂಧುಗಳ ನೆನಪುಗಳು ಇನ್ನಿಲ್ಲದಂತೆ ಕಾಡುತ್ತವೆ. ಜೊತೆಗೆ ನಾವಿಲ್ಲಿರುವಾಗ ಅಲ್ಲಿ ನಡೆಯುವ ನಮ್ಮ ಹತ್ತಿರದ ಬಂಧು-ಬಳಗದವರ ಮದುವೆ-ಮುಂಜಿಯಂಥ ಸಭೆ ಸಮಾರಂಭಗಳನ್ನು ಮಿಸ್ ಮಾಡಿಕೊಳ್ಳುವದು ಮನಸ್ಸಿಗೆ ಖೇದವೆನಿಸುತ್ತದೆ. ಮಾತ್ರವಲ್ಲ ನಮ್ಮ ಮೆಚ್ಚಿನ ಬರಹಗಾರರ ಬಿಡುಗಡೆಗೊಂಡ ಪುಸ್ತಕಗಳನ್ನು ತಕ್ಷಣ ಓದಲಾರದ್ದಕ್ಕೆ ಒದ್ದಾಡುತ್ತೇವೆ. ಜೊತೆಗೆ ಹೊಸ ಹೊಸ ನಾಟಕ, ಸಿನಿಮಾಗಳನ್ನು ತಕ್ಷಣ ನೋಡದ್ದಕ್ಕಾಗಿ ಹಪಹಪಿಸುತ್ತೇವೆ. ನಮಗಿಷ್ಟವಾದ ಪಾನಿಪೂರಿ........ ಎಮ್.ಟಿ.ಆರ್ ಮಸಾಲೆ ದೋಸೆ....... ಮೈಯಾಸ್‍ನ ಊಟ........ ಗಾಂಧಿ ಬಜಾರಿನ ಒಬ್ಬಟ್ಟು,...... ಫೋರ್ತ್ ಬ್ಲಾಕಿನಲ್ಲಿ ಸಣ್ಣದೊಂದು ಶಾಪಿಂಗ್.......ಎಂ.ಜಿ. ರೋಡಿನಲ್ಲಿ ಸುಮ್ಮನೆ ಒಂದು ಸುತ್ತಾಟ........ ಸ್ನೇಹಿತರೊಟ್ಟಿಗೆ ಗುಂಡು ಪಾರ್ಟಿ........ಸಿಗ್ನಲ್‍ನಲ್ಲಿ ಮೈ ಮನಗಳನ್ನು ಪುಳಕಗೊಳಿಸುವ ಸ್ಕೂಟಿ ಹುಡುಗಿಯರ ಕುಡಿನೋಟಗಳು.........ಅಬಬ್ಬಾ ಒಂದೇ.... ಎರಡೇ......ಎಷ್ಟೊಂದು ಆಪ್ಯಾಯಮಾನವೆನಿಸುವಂಥ ಸಂಗತಿಗಳಿಂದ ವಂಚಿತರಾಗುತ್ತೇವೆ.

    ಇಲ್ಲಿ ಲಿಬಿಯಾದಲ್ಲಿ ಇಂಗ್ಲೀಷ್ ಮೀಡಿಯಂ ಶಾಲೆಗಳಿಲ್ಲ. ಇದ್ದರೂ ಹೇಳಿಕೊಳ್ಳುವಂತ ಗುಣಮಟ್ಟವಿರದ ಸ್ಕೂಲುಗಳವು. ಹೀಗಿರುವಾಗ ಹೇಗೆ ತಾನೆ ನಾವು ನಮ್ಮ ಮಕ್ಕಳನ್ನು ಇಲ್ಲಿ ಓದಿಸಲು ಮುಂದಾಗುತ್ತೇವಿ? ಹೀಗಾಗಿ ನಮಗೆ ದೂರದ ಭಾರತದಲ್ಲಿ ನಮ್ಮ ಕುಟುಂಬ ಬಿಟ್ಟಿರುವದು ಅನಿವಾರ್ಯವಾಗುತ್ತದೆ. ಇಂಥ ಸಂದರ್ಭಗಳಲ್ಲಿಯೇ ನಾವು ಕೆಲಸದ ಮೇಲೆ ಇಂಡಿಯಾದಿಂದ ಇಷ್ಟು ದೂರವಿದ್ದರೂ ನಮ್ಮ ಬಗ್ಗೆ ಅಲ್ಲಿ ಏನೇನೋ ಸುದ್ಧಿಗಳು ಹರಡುವದಲ್ಲೆದೇ ನಮ್ಮ ಕುಟುಂಬದವರ ಬಗ್ಗೆಯೂ ಸಹ ಇಲ್ಲ ಸಲ್ಲದ ಕಥೆಗಳು ಹುಟ್ಟಿ ಇಲ್ಲಿಯವರೆಗೂ ರವಾನೆಯಾಗಿಬಿಡುತ್ತವೆ. ಕೆಟ್ಟವರ ಬಗೆಗಿನ ಒಳ್ಳೆ ಸುದ್ದಿ ಕೇಳುವದಕ್ಕಿಂತ ಒಳ್ಳೆಯವರ ಬಗೆಗಿನ ಕೆಟ್ಟ ಸುದ್ಧಿಗಳನ್ನು ಕೇಳಲು ಜಗತ್ತು ಹೆಚ್ಚು ಕಾತರಿಸುತ್ತಿರುತ್ತದೆ. ಅದೇನೇ ಬಂದರೂ ನಮ್ಮ ಮತ್ತು ನಮ್ಮ ಕುಟುಂಬದವರ ಮಧ್ಯ ಇರುವ ಅಪಾರ ನಂಬಿಕೆ ನಮ್ಮನ್ನು ಇಲ್ಲಿ ಗಟ್ಟಿಯಾಗಿ ತಳವೂರುವಂತೆ ಮಾಡುತ್ತದೆ ಮತ್ತು ಒಮ್ಮೊಮ್ಮೆ ನಾವವನ್ನು ತಮಾಷೆಯಾಗಿ ತೆಗೆದುಕೊಳ್ಳುತ್ತಾ ಸಾಕಷ್ಟು ಎಂಜಾಯ್ ಮಾಡುತ್ತೇವೆ. ಆದರೆ ಹೀಗೆ ಹರಡುವ ಸುದ್ದಿಗಳು ಒಮ್ಮೊಮ್ಮೆ ನಿಜವಿದ್ದರೂ ಇರಬಹುದೇ ಎನ್ನುವ ಗುಮಾನಿಯನ್ನು ಹುಟ್ಟು ಹಾಕಿ ಮನಸ್ಸನ್ನು ಕಲಕಿಬಿಡುತ್ತವೆ.

    ಮೊನ್ನೆ ಏನಾಯಿತೆಂದರೆ ಇಲ್ಲಿ ಕೆಲಸ ಮಾಡುವ ನಮ್ಮ ಉತ್ತರ ಪ್ರದೇಶದ ಡಾಕ್ಟರೊಬ್ಬರ ಹೆಂಡತಿಯ ಹಳೆ ಗೆಳತಿಯೊಬ್ಬಳು ಇಂಡಿಯಾದಲ್ಲಿ ಬಹಳ ದಿನಗಳ ನಂತರ ಆಕೆಯನ್ನು ನೋಡಲು ಅವರ ಮನೆಗೆ ಹೋದಾಗ “ಏನೇ, ನಿನ್ನ ಗಂಡ ಅಲ್ಲಿ ಬೇರೆ ಯಾರನ್ನೋ ಮದುವೆಯಾಗಿದ್ದಾನಂತೆ. ನೀನು ನೋಡಿದರೆ ಹಾಗೇ ಇದ್ದೀಯಾ. ನೀನು ಯಾಕೆ ಇನ್ನೊಂದು ಮದುವೆ ಆಗಬಾರದು?” ಎಂದು ಎರಡು ಮಕ್ಕಳ ತಾಯಿಯಾಗಿರುವ ಆಕೆಗೆ ಬಿಟ್ಟಿ ಉಪದೇಶ ಕೊಟ್ಟು ಹೋಗಿದ್ದಲ್ಲದೆ ಅವರಿಬ್ಬರ ಮಧ್ಯ ತಂದಿಟ್ಟಿದ್ದಳು. ಆಕೆ ಮೊದಲು ಇದನ್ನು ನಂಬಿರಲಿಲ್ಲವಾದರೂ “ಯಾವುದಕ್ಕೂ ಈ ಗಂಡಸರನ್ನು ನಂಬೋದಿಕ್ಕಾಗುವದಿಲ್ಲ” ಎಂದು ಆಕೆ ಮೊದಲು ಗಂಡನಿಗೆ ಫೋನ್ ಮಾಡಿ ಆತ ಇನ್ನೊಂದು ಮದುವೆಯಾಗಿಲ್ಲ ಎನ್ನುವದನ್ನು ಖಾತ್ರಿಪಡಿಸಿಕೊಂಡಿದ್ದಳು. ಸಾಲದ್ದಕ್ಕೆ ಇಲ್ಲಿರುವ ಆತನ ಸಹೋದ್ಯೋಗಿಗಳಿಗೆ ಮತ್ತೆ ಮತ್ತೆ ಫೋನ್ ಮಾಡಿ “ನನ್ನ ಗಂಡ ಇನ್ನೊಂದು ಮದುವೆಯಾಗಿಲ್ಲ ತಾನೆ?” ಎಂದು ಮತ್ತೆ ಮತ್ತೆ ಕೇಳಿ ಖಾತ್ರಿಪಡಿಸಿಕೊಂಡಿದ್ದಳು.

    ಇನ್ನೊಂದು ಸಾರಿ ಇಲ್ಲಿ ನನ್ನೊಟ್ಟಿಗೆ ಕೆಲಸ ಮಾಡುವ ಲೆಕ್ಚರರೊಬ್ಬರ ಹೆಂಡತಿಯ ಬಗ್ಗೆ ಏನೇನೋ ಸುದ್ದಿ ಹಬ್ಬಿಸಿ ಅದು ಆಕೆಯ ಗಂಡನ ಮನೆಯವರ ಕಿವಿಯನ್ನು ತಲುಪವಂತೆ ಮಾಡಿಬಿಟ್ಟಿದ್ದರು. ಆಕೆ ದೂರದ ವಿಜಯವಾಡದಲ್ಲಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲು ಕ್ಯಾಷಿಯರ್ ಆಗಿದ್ದರು. ಈಗ ಅವರನ್ನು ಹೌಸಿಂಗ್ ಲೋನ್ ಸೆಕ್ಷನ್‍ಗೆ ಹಾಕಲಾಗಿದೆ. ಲೋನ್ ಸ್ಯಾಂಕ್ಷನ್ ಮಾಡುವ ಮೊದಲು ಆಕೆ ತನ್ನ ಒಬ್ಬ ಪುರುಷ ಸಹೋದ್ಯೋಗಿಯೊಂದಿಗೆ ಇಲ್ಲವೇ ತನ್ನ ಮ್ಯಾನೇಜರ‍್ ನೊಂದಿಗೆ ಸೈಟ್ ಹತ್ತಿರ ಹೋಗಿ ಎಲ್ಲವನ್ನೂ ಪರಿಶೀಲಿಸಬೇಕಾಗುತ್ತದೆ. ಹೀಗೆ ಒಂದೆರೆಡು ಸಾರಿ ಆಕೆ ತನ್ನ ಸಹದ್ಯೋಗಿಯೊಂದಿಗೆ ಸ್ಕೂಟರ್‍ನಲ್ಲೋ, ಆಟೋದಲ್ಲೋ ಹೋಗುವದನ್ನು ಆಕೆಯ ಮನೆಯ ಪಕ್ಕದವನೊಬ್ಬ ನೋಡಿ ಹತ್ತಿರದಲ್ಲಿರುವ ಆಕೆಯ ಗಂಡನ (ಅಂದರೆ ನನ್ನ ಸಹೋದ್ಯೋಗಿಯ) ಊರಿನವರಿಗೆ “ನಿಮ್ಮ ಸೊಸೆ ಯಾರ್ಯಾರದೋ ಜೊತೆ ಓಡಾಡುತ್ತಿದ್ದಾಳೆ” ಎಂದೆಲ್ಲಾ ಏನೇನೋ ಕಥೆ ಕಟ್ಟಿ ಹೇಳಿ ಅವರ ಮನಸ್ಸನ್ನು ಕೆಡಿಸಿದ್ದ. ಅವರು ನೇರವಾಗಿ ನನ್ನ ಸಹೋದ್ಯೋಗಿಗೆ ವಿಷಯ ಹೀಗೀಗೆ ಅಂತಾ ಫೋನ್ ಮಾಡಿ ಹೇಳಿದಾಗ ಅವನು ಬಿದ್ದು ಬಿದ್ದು ನಕ್ಕಿದ್ದಲ್ಲದೆ ಅವನ ಮನೆಯವರಿಗೆ ತನ್ನ ಹೆಂಡತಿಯ ಕೆಲಸದ ವೈಖರಿಯ ಬಗ್ಗೆ ಮತ್ತು ಹಾಗೆ ಆಕೆ ತನ್ನ ಕೆಲಸದ ಮೇಲೆ ತನ್ನ ಪುರುಷ ಸಹೋದ್ಯೋಗಿಗಳೊಟ್ಟಿಗೆ ಹೋಗುವದು ಅನಿವಾರ್ಯವಾಗಿರುತ್ತದೆಂದು ಸಮಜಾಯಿಸಿ ನೀಡುವದರಲ್ಲಿ ಸಾಕುಸಾಕಾಗಿ ಹೋಗಿದ್ದ. ಇನ್ನೊಂದು ಸಾರಿ ಲಕ್ನೋದ ನನ್ನ ಸಹೋದ್ಯೋಗಿಯ ಹೆಂಡತಿ ಒಮ್ಮೆ ತನ್ನ ಗಂಡನ ಗೆಳೆಯನೊಟ್ಟಿಗೆ ಸಿನಿಮಾಕ್ಕೆ ಹೋಗಿದ್ದನ್ನೇ ದೊಡ್ಡ ಗುಲ್ಲು ಮಾಡಿದ್ದರು. ನಾವು ಇಂಥ ವಿಷಯಗಳನ್ನು ತುಂಬಾ ತಮಾಷೆಯಾಗಿ ತೆಗೆದುಕೊಂಡು ಆಗಾಗ ಲೇವಡಿ ಮಾಡುತ್ತಾ ನಗುತ್ತಿರುತ್ತೇವೆ.

    ಇನ್ನು ಇಲ್ಲಿಯ ಅನಿವಾಸಿ ಭಾರತೀಯರ ಸೆಕ್ಸ್ ವಿಷಯಕ್ಕೆ ಸಂಬಂಧಪಟ್ಟ ಹಾಗೆ ನಾನು ನಿಮಗೆ ಹೇಳಲೇಬೇಕು. ತಂತಮ್ಮ ಕುಟುಂಬದಿಂದ ದೂರವಿರುವ ಎಷ್ಟೋ ಎನ್.ಆರ್.ಐಗಳು ಸ್ಪರ್ಷಸುಖವೇನುಂಬುದನ್ನೇ ಮರೆತಿರುತ್ತಾರೆ. ನಾವು ಬಿಡಿ ದೊಡ್ಡ ಕೆಲಸದಲ್ಲಿರುವವರು ವರ್ಷಕ್ಕೆ ಎರಡೊ ಮೂರೋ ಸಾರಿ ನಮ್ಮನಮ್ಮ ಊರಿಗೆ ಹೋಗಿ ಎರಡೆರೆಡು ತಿಂಗಳು ಇದ್ದು ಬರುತ್ತೇವೆ. ಈ ಮಧ್ಯ ನಮ್ಮ ಹೆಂಡಿರು ಮತ್ತು ಮಕ್ಕಳು ರಜೆಯಿದ್ದಾಗ ಬಂದು ಇಲ್ಲಿ ಎರಡು ತಿಂಗಳಮಟ್ಟಿಗೆ ಇದ್ದು ಹೋಗುತ್ತಾರೆ. ಆದರೆ ಕೇವಲ ಮೂವತ್ತು ಸಾವಿರ ರೂಪಾಯಿಗೋಸ್ಕರ (ಊಟ ಮತ್ತು ಸಾಮೂಹಿಕ ವಸತಿ ಉಚಿತ) ಇಲ್ಲಿಗೆ ದುಡಿಯಲು ಬಂದ ಮೇಸ್ತ್ರಿಗಳು, ಪ್ಲಂಬರ್ ಗಳು, ಎಲೆಕ್ಟ್ರೀಶಿಯನ್‍ಗಳ ಕಥೆ ಕೇಳುವದಂತೂ ಬೇಡವೇ ಬೇಡ. ಇವರು ಎರಡು ವರ್ಷಕ್ಕೋ ಮೂರು ವರ್ಷಕ್ಕೋ ಒಂದು ಸಾರಿ ತಮ್ಮ ಊರಿಗೆ ಹೋಗಬೇಕು; ಅದೂ ಅವರ ಕಾಂಟ್ರ್ಯಾಕ್ಟರ್ ವಿಮಾನದ ಟಿಕೇಟ್‍ಗಳನ್ನು ತೆಗೆದುಕೊಟ್ಟರೆ ಮಾತ್ರ. ಹೀಗಾಗಿ ಅವರ ಮೈ ರತಿಸುಖವನ್ನು ಅನುಭವಿಸುವ ರೋಮಾಂಚನವನ್ನೇ ಕಳೆದುಕೊಂಡಿರುತ್ತದೆ. ಹಾಗೆ ಬಿಟ್ಟರೆ ಮರೆತೇಹೋಗಬಹುದೆಂದು ಇಲ್ಲಿಯ ವಿವಿಧ ಸ್ಯಾಟ್ಲೈಟ್‍ಗಳಲ್ಲಿ ಬರುವ ಹಾಟ್ ಮೂವಿಗಳನ್ನು ನೋಡುತ್ತಾ ತಮ್ಮಷ್ಟಕ್ಕೆ ತಾವೇ ರತಿಸುಖ ಅನುಭವಿಸುತ್ತಾರೆ ಹಾಗೂ ಅವನ್ನು ರೆಕಾರ್ಡ (ಕಾಪಿ) ಮಾಡಿಕೊಳ್ಳುತ್ತಾರೆ. ಇಲ್ಲಿಂದ ಎರಡು ವರ್ಷಗಳ ನಂತರವೋ, ಮೂರುವರ್ಷಗಳ ನಂತರವೋ ಭಾರತಕ್ಕೆ ಹೋಗುವಾಗ ಇಲ್ಲಿ ಯಥೇಚ್ಛವಾಗಿ ದೊರೆಯುವ ರತಿಸುಖವನ್ನು ಕೆರಳಿಸುವಂಥ ವಿವಿಧ ಮಾತ್ರೆಗಳನ್ನು ಹಾಗೂ ಜೆಲ್‍ಗಳನ್ನು ಹೊತ್ತೊಯ್ಯುತ್ತಾರೆ. ಮಾತ್ರವಲ್ಲ ಇಂಥವರು ಯಾವಾಗಲೋ ಒಮ್ಮೆ ತಮ್ಮ ಊರಿಗೆ ಹೋಗುವದರಿಂದ ಮಕ್ಕಳಿಗೆ ತಂದೆ ಅಂದರೆ ಯಾರು ಅಂತಾನೆ ಗೊತ್ತಿರುವದಿಲ್ಲ. ಇವರು ಪ್ರೀತಿಯಿಂದ ಅವನ್ನು ಅಪ್ಪಿಕೊಳ್ಳಲು ಹೋದರೆ ಅವು ಅಮ್ಮಂದಿರ ಸೆರಗಿನಲ್ಲಿ ಬಚ್ಚಿಟ್ಟುಕೊಳ್ಳುತ್ತವೆ ಇಲ್ಲವೇ ಇವರನ್ನು ನೋಡಿ ಅಳುತ್ತವೆ. ಹಾಗಂತ ಅವರು ಬಂದು ನಮ್ಮ ಮುಂದೆ ಹೇಳುವಾಗ ಕಣ್ಣೀರಾಗುತ್ತಾರೆ. ಅವರ ಕಣ್ಣೀರು ನೋಡಿ ಒಂದು ಲ್ಯಾಪ್‍ಟಾಪ್ ಹಾಗೂ ಇಂಟರ್ನೆಟ್ ತೆಗೆದುಕೊಂಡು ನಿಮ್ಮ ಕುಟುಂಬದವರ ಜೊತೆ ಸಂಪರ್ಕದಲ್ಲಿದ್ದರೆ ನಿಮ್ಮ ಮಕ್ಕಳು ಭಾವನಾತ್ಮಾಕವಾಗಿ ಹತ್ತಿರವಾಗಬಹುದು ಎಂದೇನೋ ಹೇಳೋಣ ಅಂತಾ ನಾಲಗೆ ತುದಿಯ ಮೇಲೆ ಬರುತ್ತದೆ. ಆದರೆ ತಕ್ಷಣ ಅವರ ಸಣ್ಣಮೊತ್ತದ ಸಂಬಳಕ್ಕೆ ಅವನ್ನೆಲ್ಲಾ ಭರಿಸಲಾಗದು ಎಂದು ಯೋಚಿಸಿ ಸುಮ್ಮನಾಗಿಬಿಡುತ್ತೇವೆ. ಆದರೆ ಅವರ ಬದುಕು ಎಂದಿನಂತೆ ಮತ್ತದೇ ಮೋಹನ ಮುರುಳಿಯ ನಿನಾದವನ್ನು ಬೆನ್ಹತ್ತಿ ಹೋಗುತ್ತದೆ.

    ಹೀಗಿದ್ದೂ ಇಲ್ಲಿ ಕೆಲವರು ಇಪ್ಪತೈದು, ಮೂವತ್ತು ವರ್ಷಗಳನ್ನು ಕಳೆದಿದ್ದಾರೆ. ಇಲ್ಲಿದ್ದುಕೊಂಡೇ ಮಕ್ಕಳನ್ನು ಚನ್ನಾಗಿ ಓದಿಸಿ ಒಳ್ಳೆ ಕೆಲಸಕ್ಕೆ ಸೇರಿಸಿದ್ದಾರೆ. ಸ್ವಂತಕ್ಕೆ ಮನೆಯೊಂದನ್ನು ಕಟ್ಟಿಕೊಂಡಿದ್ದಾರೆ. ಒಂದಷ್ಟು ಬ್ಯಾಂಕ್ ಬ್ಯಾಲೆನ್ಸ್, ಎಫ್.ಡಿಗಳನ್ನು ಮಾಡಿಟ್ಟಿದ್ದಾರೆ. ಹೆಂಡತಿ-ಮಕ್ಕಳಿಗೆ ಚಿನ್ನ ತೆಗೆದಿಟ್ಟಿದ್ದಾರೆ. ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಮಾಡಬೇಕಾದ ಕರ್ತವ್ಯಗಳನ್ನೆಲ್ಲಾ ಮಾಡಿ ಮುಗಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಇಳಿಗಾಲದಲ್ಲೂ ಮನೆ ಕಟ್ಟಿಸಿದ ಸಾಲವನ್ನು ತೀರಿಸಲೋ, ಅಥವಾ ಮಕ್ಕಳ ಮದುವೆಯನ್ನು ಮಾಡಲೋ ಇಲ್ಲಿಗೆ ಕೆಲಸ ಹುಡುಕಿಕೊಂಡು ಬರುತ್ತಾರೆ. ತಮ್ಮ ಐವತ್ತೇಳನೇ ವಯಸ್ಸಿಗೆ ಇಲ್ಲಿಗೆ ಬಂದ ನನ್ನ ಸಹೋದ್ಯೋಗಿ ಡಾ. ಬಾಸ್ಕರ‍್ ಅವರು ಇದೀಗ ಮೂರು ವರ್ಷಗಳನ್ನು ಪೂರೈಸಿದ್ದಾರೆ. ಡಾ. ಶಂಕರ್ ಅವರು ಇಲ್ಲಿ ಮೂವತ್ತು ವರ್ಷಗಳಷ್ಟು ಕೆಲಸ ಮಾಡಿ ಮಕ್ಕಳನ್ನು ಒಳ್ಳೆ ಕೆಲಸಕ್ಕೆ ಸೇರಿಸಿದ್ದಾರೆ. ಅವರು ಈಗ್ಗೆ ಎರಡು ವರ್ಷಗಳ ಹಿಂದೆಯಷ್ಟೇ ಇಂಡಿಯಾಕ್ಕೆ ವಾಪಾಸಾಗಿದ್ದಾರೆ. ಡಾಕ್ಟರ್ ಸಾಹು ಇಲ್ಲಿ ಹದಿನಾರು ವರ್ಷಗಳನ್ನು ಕಳೆದು ಮೊನ್ನೆಯಷ್ಟೇ ಇಂಡಿಯಾಕ್ಕೆ ಹಿಂದಿರುಗಿದ್ದಾರೆ. ಒಮ್ಮೆ ನಾನವರನ್ನು “ನೀವು ಪಡೆದುಕೊಂಡಿದ್ದಕ್ಕಿಂತ ಕಳಕೊಂಡಿದ್ದೇ ಹೆಚ್ಚು ಅಲ್ಲವೇ?” ಎಂದು ಕೇಳಿದ್ದೆ. ಅದಕ್ಕೆ ಅವರೆಲ್ಲಾ ಹೇಳಿದ್ದೊಂದೇ “ನಾವು ಕೆಲಸದ ನಿಮಿತ್ತ ಹೊರದೇಶಗಳಲ್ಲಿ ಉಳಿದಾಗ ಪಡೆದುಕೊಂಡಷ್ಟೇ ಕಳೆದುಕೊಂಡಿದ್ದೂ ಇದೆ. ಆದರೆ ನಮಗೆ ಈ ಬಗ್ಗೆ ಬೇಜಾರಿಲ್ಲ. ಏಕೆಂದರೆ ನಾವು ನಮಗಾಗಿ ಮಾತ್ರ ಬದುಕಲಿಲ್ಲ. ಇತರರಿಗಾಗಿಯೂ ಬದುಕಿದ್ದೇವೆ. ಮಾಡಬೇಕಾದ ಕರ್ತವ್ಯಗಳನ್ನು ಮಾಡಿ ಮುಗಿಸಿದ ತೃಪ್ತಿ ಇದೆ. ಇಷ್ಟಕ್ಕೂ ಜೀವನದಲ್ಲಿ ಒಂದನ್ನು ಪಡೆದುಕೊಳ್ಳಲು ಇನ್ನೊಂದನ್ನು ಕಳೆದುಕೊಳ್ಳಲೇಬೇಕಾಗುತ್ತದೆ. ಅದು ಬದುಕಿನ ನಿಯಮ. ಅದನ್ನು ಯಾರಿಂದಲೂ ಮೀರಲು ಸಾಧ್ಯವಿಲ್ಲ.”

    ಬದುಕು ಎಷ್ಟೊಂದು ವಿಚಿತ್ರ? ಎಲ್ಲೋ ಹುಟ್ಟುತ್ತೇವೆ, ಎಲ್ಲೋ ಬೆಳೆಯುತ್ತೇವೆ, ಇನ್ನೆಲ್ಲೋ ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇವೆ. ಹಾಗೆಯೇ ಬದುಕು ಎಷ್ಟೊಂದು ನಿಷ್ಠುರ ಅಸಹನೀಯ! ಎಲ್ಲೋ ಏನೋ ಮಾಡಿಕೊಂಡಿರುತ್ತೇವೆ. ಇದ್ದಕ್ಕಿದ್ದಂತೆ ಇನ್ನೆಲ್ಲಿಗೋ ಎಳೆದು ತಂದುಬಿಡುತ್ತದೆ. ನಾವು ಹೋಗಲು ತಯಾರಿರದಿದ್ದರೂ ಹೋಗಲೇಬೇಕಾದ ತುರ್ತು ಮತ್ತು ಅನಿವಾರ್ಯತೆಗಳನ್ನು ನಮ್ಮ ಮುಂದೆ ಹರಡಿ ಮುಂದೇನು ಮಾಡುವೆ? ಎಂದು ಕೇಳಿ ನಮ್ಮ ಉತ್ತರಕ್ಕೂ ಕಾಯದೆ ಅಲ್ಲಿಗೆ ನೊಗ ಕಟ್ಟಿಕೊಂಡು ಹೋಗುವಂತೆ ಮಾಡಿಬಿಡುತ್ತದೆ. ಈ ಕಾರಣಕ್ಕಾಗಿಯೇ ನಾನು ಸಹ ಇರುವದನ್ನು ಬಿಟ್ಟು ಇಲ್ಲದ್ದನ್ನು ಹುಡುಕಿಕೊಂಡು ಬದುಕು ಕಟ್ಟಿಕೊಳ್ಳಲು ಇಷ್ಟು ದೂರ ಬಂದುಬಿಟ್ಟೆ. ನಿಜಕ್ಕೂ ಇಲ್ಲಿಗೆ ಬರುವ ಅನಿವಾರ್ಯತೆಯಿತ್ತೆ? ಎಂದು ಕೇಳಿಕೊಳ್ಳುವಾಗಲೆಲ್ಲಾ ನನ್ನ ಕೆಲಸ ಮತ್ತು ಅದರ ಹಿಂದಿನ ದೊಡ್ಡ ಮೊತ್ತದ ಸಂಬಳಗಳ ಮುಂದೆ ಈ ಎಲ್ಲ ವಿಷಯಗಳು ಗೌಣ ಎನಿಸಿಬಿಡುತ್ತವೆ. ಹಾಗೆ ಅನಿಸಬಾರದು. ಆದರೆ ಅನಿಸಿಬಿಡುತ್ತದೆ.

    ಈ ಸಂದರ್ಭದಲ್ಲಿ ಕವಿ ಶಿಕಾರಿಪುರ ಹರಿಹರೇಶ್ವರರ ಸಾಲುಗಳು ನೆನಪಾಗುತ್ತವೆ.

    ತಾವು ಕಾಣದ ತಾಣ

    ಕೇಳಿ ತಿಳಿಯದ ದೇಶ

    ಇತ್ತ ಬಂದದ್ದೇ ಅರಾಮವಾಗಿರಲಿಕ್ಕೆ;

    ರೆಕ್ಕೆ ಸುಡದೆ ಸಾಧ್ಯವಾದಷ್ಟು

    ಗಳಿಸಿ ಉಳಿಸಲಿಕ್ಕೆ.

    ಇನ್ನು ಊರಿಗೆ ಹಿಂದಿರುಗುವದೇನಿದ್ದರೂ

    ಮಳೆಗಾಲಕ್ಕೆ ಮಾತ್ರ.



    -ಉದಯ್ ಇಟಗಿ




    “ಇಂಗ್ಲೀಷ್ ವಿಂಗ್ಲೀಷ್” ಗೃಹಿಣಿಯೊಬ್ಬಳು ಇಂಗ್ಲೀಷ್ ಕಲಿಯುವ ಕಥೆಯಷ್ಟೇ ಅಲ್ಲ

  • ಶನಿವಾರ, ಡಿಸೆಂಬರ್ 08, 2012
  • ಬಿಸಿಲ ಹನಿ


  • “ಇಂಗ್ಲಿಷ್ ವಿಂಗ್ಲಿಷ್” ಗೃಹಿಣಿಯೊಬ್ಬಳು ಇಂಗ್ಲಿಷ್ ಬಾರದೇ ಪೇಚಾಡುವ, ಅವಮಾನಕ್ಕೊಳಗಾಗುವ ಮತ್ತದನ್ನು ಜಯಿಸಿ ಬರುವ ಕಥೆ ಮಾತ್ರವಲ್ಲ ಹೆಣ್ಣೊಬ್ಬಳ ಛಲ, ಆತ್ಮವಿಶ್ವಾಸ, ಮತ್ತವಳ ಜೀವನ ಪ್ರೀತಿಯ ಪ್ರತೀಕದ ಕಥೆಯೂ ಹೌದು ಹಾಗೂ ಎಲ್ಲಿಯೂ ತನ್ನ ಸಂಯದ ಎಲ್ಲೆಯನ್ನು ಮೀರದೆ ಎಲ್ಲವನ್ನೂ ಚಾಕಚಕ್ಯತೆಯಿಂದ ನಿಭಾಯಿಸಿ ಎಲ್ಲರನ್ನೂ, ಎಲ್ಲವನ್ನೂ ಗೆಲ್ಲುವ ಒಬ್ಬ ಪರಿಪೂರ್ಣ ಮಹಿಳೆಯೊಬ್ಬಳ ಕಥೆಯೂ ಹೌದು. ನಿರ್ದೇಶಕಿ ಗೌರಿ ಶಿಂಧೆ ತೀರಾ ಸಾಮಾನ್ಯವೆನಿಸುವಂಥ ಮತ್ತು ಇವತ್ತಿನ ಜಗತ್ತಿನಲ್ಲಿ ಇಂಗ್ಲೀಷಿನಲ್ಲಿ ಮಾತನಾಡಲೇಬೇಕಾದಂಥ ಅನಿವಾರ್ಯತೆಯ ಕಥಾವಸ್ತುವೊಂದನ್ನು ಆಯ್ದುಕೊಂಡು ಅದನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ ಪ್ರೇಕ್ಷಕರ ಮನಸ್ಸನ್ನು ಗೆದ್ದು ಬಿಡುವಲ್ಲಿ ಯಶಸ್ವಿಯಾಗಿಬಿಡುತ್ತಾರೆ. ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರ ಅಲ್ಲವೇನೋ ಅನಿಸುವಷ್ಟರಮಟ್ಟಿಗೆ ಚಿತ್ರದುದ್ದಕ್ಕೂ ಗೌರಿ ಶಿಂಧೆ ಬಿಗುವಾದ ನಿರೂಪಣೆಯನ್ನು ಕಾಯ್ದುಕೊಂಡು ಬಂದಿದ್ದಾರೆ. ಎಲ್ಲೂ ಅನವಶ್ಯಕ ದೃಶ್ಯಗಳನ್ನು ತುರುಕದೆ, ಅನವಶ್ಯಕ ಸಂಭಾಷಣೆಗಳನ್ನು ಹೆಣೆಯದೆ ಹೇಳಬೇಕಾದ್ದನ್ನು ಚಿಕ್ಕ ಚಿಕ್ಕ ದೃಶ್ಯಗಳ ಮೂಲಕ ಮನಮುಟ್ಟುವಂತೆ ಹೇಳುತ್ತಾರೆ. ಹ್ಯಾಟ್ಸಾಫ್ ಟು ಗೌರಿ ಶಿಂಧೆ!


    ಇವತ್ತಿನ ಜಗತ್ತಿನಲ್ಲಿ ಇಂಗ್ಲೀಷ್ ಎಷ್ಟೊಂದು ಅವಶ್ಯಕ ಮತ್ತು ಅನಿವಾರ್ಯವಾಗಿದೆಯೆಂದರೆ ಇಂಗ್ಲೀಷ್ ಬಾರದವರನ್ನು ಅವಮಾನಿಸುವ, ಕೀಳಾಗಿ ಕಾಣುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರು ಯಾರೇ ಆಗಿರಲಿ (ಹೆಣ್ಣು ಅಥವಾ ಗಂಡು), ಎಷ್ಟೇ ಓದಿರಲಿ, ಎಷ್ಟೇ ಸ್ಮಾರ್ಟ್ ಆಗಿರಲಿ, ಅಥವಾ ಏನೆಲ್ಲ ಸ್ಕಿಲ್‍ಗಳನ್ನು ಹೊಂದಿರಲಿ ಆದರೆ ಇಂಗ್ಲೀಷ್ ಸ್ಪೀಕಿಂಗ್ ಸ್ಕಿಲ್ ಇಲ್ಲದೇ ಹೋದರೆ ಏನೆಲ್ಲ ಅನುಭವಿಸಬೇಕಾಗುತ್ತದೆ ಎನ್ನುವದನ್ನು ಎಷ್ಟು ಜಾಗೂರುಕತೆಯಿಂದ ನಿರ್ದೇಶಕಿ ನಿರೂಪಿಸುತ್ತಾರೋ ಅಷ್ಟೇ ಜಾಗೂರುಕತೆಯಿಂದ ಅದನ್ನು ಕಲಿತರೆ ಎಷ್ಟೆಲ್ಲ ಪಡೆಯಬಹುದೆನ್ನುವದನ್ನು ಸಹ ಹೇಳುತ್ತಾರೆ. ಇಲ್ಲಿ ನಿರ್ದೇಶಕಿ ಇಂಗ್ಲೀಷ್ ಭಾಷೆ ಅನ್ಯ ಭಾಷೆಗಳ ಮೇಲೆ ದಾಳಿ ಮಾಡುತ್ತಿದೆ ಎನ್ನುವ ಒಣ ಹಾರಾಟಕ್ಕೆ ಇಂಬು ಕೊಡದೆ, ಆ ಭಾಷೆ ಹೇಗೆ ನಮ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ ಮತ್ತದನ್ನು (ಎಷ್ಟು ಬೇಕೋ ಅಷ್ಟನ್ನು) ಅಪ್ಪಿಕೊಳ್ಳುವದು ಎಷ್ಟೊಂದು ಅನಿವಾರ್ಯವಾಗಿದೆ ಎನ್ನುವದನ್ನು ಯಾವೊಂದೂ ಹಿಜರಿತವಿಲ್ಲದೆ ಅತ್ಯಂತ ಸಲೀಸಾಗಿ ಹೇಳಿಬಿಡುತ್ತಾರೆ.

    ಕಥಾನಾಯಕಿ ಶಶಿ ಒಬ್ಬ ಸಾಮಾನ್ಯ ಮಧ್ಯಮವರ್ಗದ ಮಹಿಳೆ. ಎಲ್ಲ “ಹೌಸ್ ವೈಪ್” ಮಹಿಳೆಯರಂತೆ ಶಶಿ ಕೂಡ ದಿನಾ ಬೆಳಿಗ್ಗೆ ಎದ್ದು ಅತ್ತೆ, ಗಂಡ, ಮತ್ತು ಮಕ್ಕಳ ಅವಶ್ಯಕತೆಗಳನ್ನು ಪೂರೈಸುತ್ತಾ ಮನೆಯನ್ನು ನಿಭಾಯಿಸುವ ಒಬ್ಬ ಸಾಮಾನ್ಯ ಗೃಹಿಣಿ ಮತ್ತು ಆಕೆ ತನ್ನ ಬಿಡುವಿನ ವೇಳೆಯಲ್ಲಿ ಲಡ್ಡುಗಳನ್ನು ಮಾಡುತ್ತಾ ಅವುಗಳನ್ನು ಮನೆಮನೆಗೆ ಹೋಗಿ ಮಾರುತ್ತಾ ಒಂದಷ್ಟು ಪುಡಿಗಾಸನ್ನು ಸಂಪಾದಿಸುವವಳು. ಸಿನಿಮಾ ಆರಂಭವಾಗುವದೇ ಅವಳ ದಿನಚರಿಯೊಂದಿಗೆ. ಬೆಳಿಗ್ಗೆ ಎದ್ದು ಕಾಫಿ ಮಾಡಿಕೊಂಡು ಕುಡಿಯುತ್ತಾ ಆಗಷ್ಟೇ ಬಂದ ದಿನಪತ್ರಿಕೆಯ ಪುಟವನ್ನು ತಿರುವಿ ಹಾಕಬೇಕು ಅನ್ನುವಷ್ಟರಲ್ಲಿ ಅವಳ ಅತ್ತೆ ಕಾಫಿ ಬೇಕು ಎಂದು ಕೇಳುತ್ತಾಳೆ. ಶಶಿ ಆಕೆಗೆ ಕಾಫಿ ಹಾಕಿಕೊಟ್ಟು ಮತ್ತೆ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದಂತೆ ಗಂಡ ಚಹಾ ಬೇಕೆಂದು ಕೇಳುತ್ತಾನೆ. ಅದಾದ ಮೇಲೆ ಮನೆಯವರೆಲ್ಲರಿಗೂ ತಿಂಡಿ ತಯಾರಿಸುವ ಕೆಲಸ. ಹೀಗೆ ಒಂದಾದ ಮೇಲೊಂದು ಬೆಳಗಿನ ಕೆಲಸ ಮಾಡುವದರಲ್ಲಿ ತೊಡಗುವದರಿಂದ ಆಕೆಗೆ ದಿನಪತ್ರಿಕೆಯನ್ನು ಓದಲಾಗುವದೇ ಇಲ್ಲ. ಆದರೆ ಆಕೆ ಈ ಬಗ್ಗೆ ಒಂಚೂರು ಬೇಸರವನ್ನು ವ್ಯಕ್ತಪಡಿಸದೆ ತನ್ನ ಕೆಲಸದಲ್ಲಿ ಮಗ್ನಳಾಗುತ್ತಾಳೆ.

    ಮುಂದಿನ ದೃಶ್ಯದಲ್ಲಿ ನಿರ್ದೇಶಕಿ ಚಿತ್ರದ ಆಶಯದ ಬಗ್ಗೆ ಸುಳಿವು ಕೊಟ್ಟುಬಿಡುತ್ತಾರೆ. ತಿಂಡಿ ತಯಾರಿಸಿದ ಮೇಲೆ ಎಲ್ಲರಿಗೂ ಬಡಿಸಬೇಕಾದರೆ ಶಶಿಯ ಮಗಳು ಸಪ್ನಾ ಬ್ರೌನ್ ಬ್ರೆಡ್ಡೇ ಬೇಕೆಂದು ಗೋಗರೆಯುತ್ತಾಳೆ. ಮಗನೂ ಅದನ್ನೇ ಕೇಳುತ್ತಾನೆ. ಆದರೂ ಅವಳು ಒಂದಿಷ್ಟು ಬೇಸರ ಮಾಡಿಕೊಳ್ಳದೆ ಮಾಡಿಕೊಡುತ್ತಾಳೆ. “ಸಪ್ನಾ, ನೀನು ಈ ರೀತಿ ಬ್ರೌನ್ ಬ್ರೆಡ್, ವೈಟ್ ಎಗ್ಸ್ ಕೇಳೋದೆಲ್ಲಾ ನೀನು ಆ ಝಾಸ್ ಡ್ಯಾನ್ಸ್ ಕ್ಲಾಸು ಸೇರಿದಾಗಿನಿಂದ ಶುರುವಾಗಿದೆ.” ಎಂದು ಮಗಳ ಮೇಲೆ ಹುಸಿ ಮುನಿಸು ತೋರಿಸುತ್ತಾಳೆ. ತಕ್ಷಣ ಆಕೆಯ ಮಗಳು ಮತ್ತು ಗಂಡ ಅವಳ ತಪ್ಪು ಉಚ್ಛಾರಣೆಯನ್ನು ಪರಿಹಾಸ್ಯ ಮಾಡುತ್ತಾ ಬಿದ್ದು ಬಿದ್ದು ನಗುತ್ತಾರೆ. ಶಶಿಗೆ ಅವಮಾನವಾಗುತ್ತದೆ. ಪಕ್ಕದಲ್ಲಿಯೇ ಇರುವ ಮಗ “ಮಾ, ಅದು ಝಾಸ್ ಡ್ಯಾನ್ಸ್ ಅಲ್ಲ. ಝೇಸ್ ಡ್ಯಾನ್ಸ್.” ಎಂದು ಹೇಳಿದಾಗ ಅವಳು ಪೆಚ್ಚಾಗುತ್ತಾಳೆ. ಅಲ್ಲಿಂದಾಚೆ ಅವಳು ಆ ಪದವನ್ನೆ ಮತ್ತೆ ಮತ್ತೆ ಮನನ ಮಾಡುವದರ ಮೂಲಕ ಅವಳ ಇಂಗ್ಲೀಷ್ ಕಲಿಯುವ ತುಡಿತ ಸಣ್ಣದಾಗಿ ಶುರುವಾಗುತ್ತದೆ.

    ಇಂಗ್ಲೀಷ್ ಬರದೆ ಇರುವ ಶಶಿ ತನ್ನ ಮಗಳಿಂದಲೇ ಕೀಳಾಗಿ ಕಾಣಲ್ಪಡುತ್ತಾಳೆ. ಒಂದು ಸಾರಿ ಶಶಿಯ ಮಗಳು ಸಪ್ನಾ ತನ್ನ ಗೆಳತಿ ರೂಪಲ್‍ಳ ಮನೆಯಲ್ಲಿ ಓದು ಮುಗಿಸಿ ವಾಪಾಸಾದಾಗ ಶಶಿ ಅವಳನ್ನು “ಎಲ್ಲಿಗೆ ಹೋಗಿದ್ದೆ? ಇಲ್ಲೇ ಮನೆಯಲ್ಲೇ ಓದ್ಕೋಬಹುದಿತ್ತಲ್ವ?” ಎಂದು ಕೇಳುತ್ತಾಳೆ. ಅದಕ್ಕೆ ಮಗಳು “ಇಂಗ್ಲೀಷ್ ಲಿಟರೇಚರ್ ನೀನು ಹೇಳಿಕೊಡುತಿದ್ಯಾ?” ಎಂದು ವ್ಯಂಗ್ಯವಾಗಿ ಹೇಳಿ ಅವಳನ್ನು ನೋಯಿಸುತ್ತಾಳೆ. ಇನ್ನೊಂದು ಸಾರಿ ಅವಳ ಸ್ಕೂಲಿನಲ್ಲಿ ಪೇರೆಂಟ್ಸ್ ಟೀಚರ್ ಮೀಟಿಂಗ್ ದಿನ ಶಶಿಯ ಗಂಡನಿಗೆ ಹೋಗಲಾಗದಿರುವದರಿಂದ ಅನಿವಾರ್ಯವಾಗಿ ಆಕೆ ಹೋಗಬೇಕಾಗುತ್ತದೆ. ಆದರೆ ಮಗಳಿಗೆ ಅವಳನ್ನು ತನ್ನ ಸ್ಕೂಲಿಗೆ ಕರೆದೊಯ್ಯಲು ಇಷ್ಟವಿಲ್ಲ. ಏಕೆಂದರೆ ಶಶಿಗೆ ಇಂಗ್ಲೀಷ್ ಮಾತನಾಡಲು ಬರುವದಿಲ್ಲ. ಆದರೆ ಶಶಿ ಹೋಗೇ ಹೋಗುತ್ತಾಳೆ. ಅಲ್ಲಿ ಮಗಳ ಗೆಳತಿಯ ಅಮ್ಮನೊಂದಿಗೆ ಶಶಿ ಮಾತನಾಡುವಾಗ ಅವಳ ಮಗಳೇ ಎಲ್ಲದಕ್ಕೂ ಇಂಗ್ಲೀಷಿನಲ್ಲಿ ಉತ್ತರ ಕೊಡುತ್ತಾಳೆ ಹಾಗೂ ಅಲ್ಲಿ ಬಹಳ ಹೊತ್ತು ನಿಂತರೆ ಎಲ್ಲಿ ತನ್ನ ಅಮ್ಮನಿಗೆ ಇಂಗ್ಲೀಷ್ ಬರುವದಿಲ್ಲ ಅನ್ನುವ ಸತ್ಯ ತನ್ನ ಗೆಳತಿಯ ಅಮ್ಮನಿಗೆ ಗೊತ್ತಾಗಿಬಿಡುತ್ತದೋ ಎಂದು ಅವಳನ್ನು ಆದಷ್ಟು ಬೇಗ ಅಲ್ಲಿಂದ ಜಾಗ ಖಾಲಿ ಮಾಡಿಸುತ್ತಾಳೆ. ಮುಂದೆ ಮಗಳ ಕ್ಲಾಸ್ ಟೀಚರ‍್ ನ್ನು ಭೇಟಿಯಾದಾಗ ಆತ ಅವಳ performance ಬಗ್ಗೆ ಇಂಗ್ಲೀಷ್‍ನಲ್ಲಿ ಹೇಳುವಾಗ ಶಶಿ ಅವರನ್ನು ತಡೆದು “Father, my English is not good. ನಿಮಗೆ ತೊಂದರೆ ಇಲ್ಲದಿದ್ದರೆ ಹಿಂದಿಯಲ್ಲೇ ಹೇಳುತ್ತೀರಾ?” ಎಂದು ಕೇಳುತ್ತಾಳೆ. ಹೀಗೆ ಆಕೆ ಹಿಂದಿಯಲ್ಲಿ ಮಾತನಾಡುವಾಗ ಮಗಳು ಸಪ್ನಾ ತನ್ನ ಟೀಚರ್ ಮುಂದೆ ಮುಜುಗರಕ್ಕೀಡಾಗುತ್ತಾಳೆ ಮತ್ತು ತನ್ನ ಅಮ್ಮ ಹಿಂದಿಯಲ್ಲಿ ಮಾತನಾಡಿದ್ದು ತನ್ನ ಪ್ರತಿಷ್ಟೆಗೆ ಕುಂದು ಎಂದು ಭಾವಿಸುತ್ತಾಳೆ. ಈ ಸನ್ನಿವೇಶದ ಮೂಲಕ ನಿರ್ದೇಶಕಿ ಇವತ್ತಿನ ‘ಇಂಗ್ಲೀಷ್ ಮೀಡಿಯಂ’ ಮಕ್ಕಳ ಈ ತೆರನಾದ ಮನೋಸ್ಥಿತಿಯು ಅತ್ಯಂತ ಸಹಜವೆಂಬಂತೆ ನಿರೂಪಿಸುತ್ತಾರೆ.

    ಮುಂದೆ ತನ್ನ ಅಕ್ಕನ ಮಗಳ ಮದುವೆ ತಯಾರಿ ಸಲುವಾಗಿ ಒಬ್ಬಳೇ ಅಮೆರಿಕಾಕ್ಕೆ ಹೋಗಬೇಕಾಗಿ ಬಂದಾಗ ವಿಮಾನ ನಿಲ್ದಾಣದಲ್ಲಿ ಇಂಗ್ಲೀಷ್ ಬರದ ಶಶಿ ಅನುಭವಿಸುವ ಆತಂಕ, ಕಳವಳಗಳು ನಮ್ಮ ಮನಸ್ಸನ್ನು ಕಲಕಿಬಿಡುತ್ತವೆ. ಹೀಗೆ ಧುತ್ತೆಂದು ಬರೀ ಇಂಗ್ಲೀಷ್ ಮಾತನಾಡುವ ದೇಶಕ್ಕೆ ಬಂದಿಳಿದಾಗ ಅಲ್ಲಿ ಶಶಿ ಹೇಗೆ ನಿಭಾಯಿಸುತ್ತಾಳೆ ಎನ್ನುವದೇ ಚಿತ್ರದ ಕುತೂಹಲಕಾರಿ ಘಟ್ಟ. ಇಲ್ಲಿಂದ ಮುಂದೆ ಬರೀ ಇಂಗ್ಲೀಷ್ ಮಾತನಾಡುವ ಅಮೆರಿಕದಂಥ ಅಪರಿಚಿತ ಪರಿಸರದಲ್ಲಿ ಇಂಗ್ಲಿಷ್‍ನಲ್ಲಿ ವ್ಯವಹರಿಸಲಾಗದೆ ಶಶಿ ಕೀಳರಿಮೆಯಿಂದ ನರಳುತ್ತಾಳೆ, ಒಂದು ಸಾರಿ ಶಶಿಯ ಅಕ್ಕನ ಮಗಳ ಭಾವಿಪತಿ ಮನೆಗೆ ಭೇಟಿ ಕೊಟ್ಟಾಗ ಎಲ್ಲರೂ ಅವನೊಂದಿಗೆ ಇಂಗ್ಲೀಷ್‍ನಲ್ಲಿ ವ್ಯವಹರಿಸುವದನ್ನು ನೋಡಿ ಶಶಿಗೆ ತಾನು ಪರಕೀಯಳು ಎಂಬ ಭಾವ ಮೂಡುತ್ತದೆ. ಮುಂದೆ ಮನ್‍ಹತ್ತನ್ ಕಾಫಿ ಶಾಪೊಂದರಲ್ಲಿ ಸ್ಯಾಂಡ್‍ವಿಚ್ ಮತ್ತು ಕಾಫಿ ಆರ್ಡರ್ ಮಾಡಲು ಹೋಗಿ ಅಲ್ಲಿಯ ಜನರ ಗೇಲಿಗೊಳಗಾಗುತ್ತಾಳೆ. ಈ ಘಟನೆ ಅವಳ ಆತ್ಮಗೌರವಕ್ಕೆ ಧಕ್ಕೆ ತರುವದಲ್ಲದೆ ಅಲ್ಲಿ ಅವಳನ್ನು ನಾಲ್ಕು ವಾರಗಳ ಇಂಗ್ಲಿಷ್ ಕ್ರ್ಯಾಸ್ ಕೋರ್ಸಿಗೆ ಸೇರಿಕೊಳ್ಳುವಂತೆ ಪ್ರೇರಿಪಿಸುತ್ತದೆ.

    ಇಂಗ್ಲೀಷ್ ಕ್ಲಾಸಿನಲ್ಲಿ ಮೆಕ್ಸಿಕನ್ ನ್ಯಾನಿ, ಪಾಕಿಸ್ತಾನಿ ಡ್ರೈವರ್, ಚೈನೀಸ್ ಹೇರ್ ಸ್ಟೈಲಿಸ್ಟ್, ಸೌಥ್ ಇಂಡಿಯನ್ ಸಾಫ್ಟ್ವೇರ್ ಇಂಜಿನೀಯರ್, ಮತ್ತು ಫ್ರೆಂಚ್ ಚೆಫ್ ನನ್ನು ಭೇಟಿಯಾಗುತ್ತಾಳೆ. ಅವರೆಲ್ಲರೂ ಪ್ರಪಂಚದ ಮೂಲೆ ಮೂಲೆಯಿಂದ ಕೆಲಸ ಹುಡುಕಿಕೊಂಡು ಅಮೆರಿಕಾಕ್ಕೆ ಬಂದವರು. ಆದರೆ ಇಂಗ್ಲೀಷ್ ಬರದೆ ಇರುವವರು. ಅವರನ್ನು ನೋಡಿ ಶಶಿಗೆ ತಾನೊಬ್ಬಳೇ ಈ ಕೀಳರಿಮೆಯಿಂದ ಬಳಲುತ್ತಿಲ್ಲ, ಇನ್ನೂ ಎಷ್ಟೋ ಜನ ಇದ್ದಾರೆ ಎಂದು ಕೊಂಚ ಸಮಾಧಾನವಾಗುತ್ತದೆ. ಅಲ್ಲಿ ಅವರೊಟ್ಟಿಗಿನ ಸ್ನೇಹ ಮತ್ತು ಅವಳ ಟೀಚರ್ ನೀಡುವ ಪ್ರೋತ್ಸಾಹ ಅವಳಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತದೆ. ಅಲ್ಲಿ ಇಂಗ್ಲೀಷ್ ಕಲಿಯಲು ಬಂದ ಅವರೆಲ್ಲರೂ ಎಷ್ಟೋ ಪ್ರಸಂಗಗಳಲ್ಲಿ ಹೇಳಬೇಕಾದ್ದನ್ನು ಇಂಗ್ಲೀಷಿನಲ್ಲಿ ಹೇಳಲಾಗದೆ, ಪದಗಳಿಗೆ ತಡಕಾಡುವಾಗ ಧೀಡಿರ್ ಅಂತ ಮಾತೃಭಾಷೆಗೆ ಹಿಂದಿರುಗುತ್ತಾರೆ. ಅವರೆಲ್ಲರೂ ಇಂಗ್ಲೀಷ್ ಕಲಿಯುವ ಪರಿ ಮತ್ತು ಅದರ ಹಿಂದಿನ ಅವಶ್ಯಕತೆಯನ್ನು ನಿರ್ದೇಶಕಿ ತುಂಬಾ ರಿಯಲಿಸ್ಟಿಕ್ ಆಗಿ ಕಟ್ಟಿಕೊಡುತ್ತಾರೆ.

    ಹೀಗೆ ನಿಧಾನವಾಗಿ ಶಶಿ ಎಡುವತ್ತಾ, ತಡವರಿಸುತ್ತಾ ಕೊನೆಗೂ ಇಂಗ್ಲೀಷ್ ಕಲಿಯುತ್ತಾಳೆ. ಕೊನೆಯಲ್ಲಿ ಶಶಿ ಹೊಸದಾಗಿ ಮದುವೆಯಾದ ಹೆಣ್ಣು-ಗಂಡನ್ನು ಉದ್ದೇಶಿಸಿ ಒಂದೊಂದೇ ವಾಕ್ಯವನ್ನು ಪೋಣಿಸುತ್ತಾ ಇಂಗ್ಲೀಷಿನಲ್ಲಿ ಮಾತನಾಡುದು ನಮ್ಮ ಮೆಚ್ಚುಗೆಯನ್ನು ಗಳಿಸುವದಲ್ಲದೆ ನಮ್ಮ ಮನಸ್ಸನ್ನು ತಾಕಿಬಿಡುತ್ತದೆ. ಹೀಗೆ ಸ್ವಂತ ಆಸಕ್ತಿ ಹಾಗು ಪರಿಶ್ರಮದಿಂದ ಶಶಿ ಇಂಗ್ಲಿಷ್ ಕಲಿತು ಇಡಿ ಪ್ರಪಂಚವನ್ನೇ ಗೆದ್ದ ಭಾವದಲ್ಲಿ ಹೊಸ ಆತ್ಮವಿಶ್ವಾಸದೊಂದಿಗೆ ಸ್ವದೇಶಕ್ಕೆ ಮರಳುತ್ತಾಳೆ. ಇಂಗ್ಲೀಷ್ ಕಲಿತ ಮೇಲೆ ಶಶಿ ಅದನ್ನು ಅವಶ್ಯಕತೆ ಬಿದ್ದಾಗ ಮಾತ್ರ ಬಳಸುತ್ತಾಳೆ. ಅಥವಾ ಅದರ ಮೇಲೆ ಅನವಶ್ಯಕ ವ್ಯಾಮೋಹವನ್ನು ಬೆಳೆಸಿಕೊಳ್ಳುವದಿಲ್ಲ. ಆಕೆ ಸ್ವದೇಶಕ್ಕೆ ಮರಳುವಾಗ ವಿಮಾನದಲ್ಲಿ ಗಗನಸಖಿ ಇಂಗ್ಲೀಷ್ ದಿನಪತ್ರಿಕೆಗಳನ್ನು ಪ್ರಯಾಣಿಕರಿಗೆ ವಿತರಿಸುತ್ತಾ ಬರುವಾಗ ಶಶಿಯ ಗಂಡ ಇಂಗ್ಲೀಷ್ ಪತ್ರಿಕೆ ತೆಗೆದುಕೊಳ್ಳುತ್ತಾನೆ. ಆದರೆ ಶಶಿ ಹಿಂದಿ ಪತ್ರಿಕೆ ಬೇಕೆಂದು ಕೇಳುತ್ತಾಳೆ. ಆ ಮೂಲಕ ಶಶಿ ಇಂಗ್ಲೀಷ್ ಕಲಿತರೂ ತನ್ನ ಮಾತೃಭಾಷೆಯ ಮೇಲಿನ ಪ್ರೀತಿಯನ್ನು, ಗೌರವವನ್ನು ಕಳೆದುಕೊಳ್ಳುವದಿಲ್ಲವೆಂದು ಗೊತ್ತಾಗುತ್ತದೆ.

    ಶಶಿ ಒಬ್ಬ ಸಾಮಾನ್ಯ ಗೃಹಿಣಿಯಾದರೂ ಆಧುನಿಕ ಸಮಾಜದ ಬದಲಾವಣೆಗಳನ್ನು ಎಗ್ಗಿಲ್ಲದೆ ಒಪ್ಪಿಕೊಳ್ಳುವಂಥವಳು. ತಮ್ಮ ಟೀಚರ್ ಒಬ್ಬ ಗೇ ಅಂತಾ ಗೊತ್ತಾದಾಗ ಅವನ ವಿದ್ಯಾರ್ಥಿಗಳು ಅವನನ್ನು ಆಡಿಕೊಂಡು ನಗುತ್ತಾರೆ. ಆದರೆ ಶಶಿ ಅವರನ್ನು ಖಂಡಿಸುತ್ತಾ ‘ಅವರು ಮನುಷ್ಯರಲ್ಲವೇ?’ ಎಂದು ಅದೊಂದು ಸಾಮಾನ್ಯ ವಿಷಯವೆಂಬಂತೆ ಸ್ವೀಕರಿಸುತ್ತಾಳೆ. ಇನ್ನು ತನ್ನ ಟೀನೇಜ್ ಮಗಳು ತುಂಡುಲಂಗವನ್ನು ಹಾಕಿಕೊಂಡು ಕಾಫಿ ಡೇಗೆ ಹೋಗುವದನ್ನು ಮತ್ತು ತನ್ನ ಮುಂದೆಯೇ ತನ್ನ ಗಂಡ, ಪರ ನಾರಿಯನ್ನು ಹಗ್ ಮಾಡುವುದನ್ನು ನಿರಾಳವಾಗಿ ಒಪ್ಪಿಕೊಳ್ಳುತ್ತಾಳೆ.

    ಸಿನಿಮಾದ ಮುಖ್ಯ ಆಕರ್ಷಣೆ ಶಶಿಯ ಫ್ರೆಂಚ್ ಸಹಪಾಠಿ ಮತ್ತು ಶಶಿಯ ಅಕ್ಕನ ಮಗಳು. ಅವರಿಬ್ಬರೂ ಶಶಿಗೆ ಇಂಗ್ಲೀಷ್ ಕಲಿಯುವದರಲ್ಲಿ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಅವಳ ಫ್ರೆಂಚ್ ಸಹಪಾಠಿ ಕೂಡ ಶಶಿಯಂತೆ ಅಡಿಗೆಯನ್ನೇ ಕೆಲಸವನ್ನಾಗಿ ಮಾಡಿಕೊಂಡವ. ಇದೇ ಕಾರಣಕ್ಕಾಗಿ ಅವರಿಬ್ಬರೂ ಹತ್ತಿರವಾಗುತ್ತಾರೆ. ಆತ ಶಶಿಯ ಲಡ್ಡು ಬಗ್ಗೆ, ಅವಳ ಅಡಿಗೆ ಕಲೆಯ ಬಗ್ಗೆ, ಮತ್ತು ಅವಳ ಸ್ಪೋಕನ್ ಇಂಗ್ಲೀಷ್ ಬಗ್ಗೆ ಇಂಗ್ಲೀಷಿನಲ್ಲಿ ಒಂದೊಂದೇ ಪದವನ್ನು ಪೋಣಿಸುತ್ತಾ ಅವಳನ್ನು ಹುರಿದುಂಬಿಸುತ್ತಾನೆ. ಹೀಗೆ ಶಶಿಯನ್ನು ಹುರಿದುಂಬಿಸುತ್ತಲೇ ನಿಧಾನವಾಗಿ ಅವಳೆಡೆಗೆ ಆಕರ್ಷಿತನಾಗುತ್ತಾನೆ. ಆದರೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಪಡೆದ ಶಶಿ ಅವನ ಪ್ರೀತಿಯನ್ನು ನಯವಾಗಿ ತಿರಸ್ಕರಿಸುತ್ತಾಳೆ. ಆದರೂ ಅವರಿಬ್ಬರ ನಡುವೆ ನಡೆಯುವ ಮಧುರ ಮಾತುಕತೆ ನಮಗೆ ಇಷ್ಟವಾಗುದೆ ಹೋದರೆ ಕೇಳಿ. ಆತ ಎಷ್ಟೋ ಸಾರಿ ಹೇಳಬೇಕಾದ್ದನ್ನು ತನ್ನ ಮುಗುಳುನಗೆಯೊಂದರಲ್ಲೇ ಎಲ್ಲವನ್ನು ಹೇಳುತ್ತಾನೆ. ಇನ್ನು ಇಡಿ ಚಿತ್ರದಲ್ಲಿ ಶಶಿಯ ಅತ್ತೆಯನ್ನು ಬಿಟ್ಟರೆ ಅವಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವವಳೆಂದರೆ ಶಶಿಯ ಅಕ್ಕನ ಮಗಳು. ಆಕೆ ಹೆಜ್ಜೆಹೆಜ್ಜೆಗೂ ಶಶಿಗೆ ಇಂಗ್ಲೀಷ್ ಕಲಿಯಲು ಪ್ರೋತ್ಸಾಹ ನೀಡುವದರ ಮೂಲಕ ಶಶಿಗೆ ಆಸರೆಯಾಗಿ ನಿಲ್ಲುತ್ತಾಳೆ.

    ಇನ್ನು ಶಶಿಯ ಪಾತ್ರಕ್ಕೆ ಶ್ರೀದೇವಿ ಪ್ರತಿಯೊಂದು ದೃಶ್ಯದಲ್ಲಿ ಅತ್ಯಂತ ಸಹಜವಾಗಿ ಅಭಿನಯಿಸುವದರ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಎಲ್ಲೂ ಆಕೆಯ ಅಭಿನಯ ನಾಟಕೀಯ ಅನಿಸುವದೇ ಇಲ್ಲ. ಆಕೆಯನ್ನು ಬಿಟ್ಟರೆ ಮತ್ಯಾರು ಸರಿಹೊಂದುತ್ತಿರಲಿಲ್ಲವೇನೋ ಅನ್ನುವಷ್ಟರಮಟ್ಟಿಗೆ ಶ್ರೀದೇವಿ ಪಾತ್ರದೊಳಕ್ಕೆ ಇಳಿದು ನಟಿಸಿದ್ದಾರೆ. ಬಹುಶಃ ಆಕೆಗೆ ಈ ಪಾತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಸಿಕ್ಕರೂ ಸಿಗಬಹುದು. ಶಶಿಯನ್ನು “ನೀನು ಲಡ್ಡು ಮಾಡುವದಕ್ಕಾಗಿಯೇ ಹುಟ್ಟಿರುವದು” ಎಂದು ಅವಳನ್ನು ಛೇಡಿಸಿದರೂ ಮನಃಪೂರ್ವಕವಾಗಿ ಪ್ರೀತಿಸುವ ಅವಳ ಗಂಡನಾಗಿ ಅಭಿನಯಿಸಿದ ಆದಿಲ್ ಹುಸೇನ್ ಗಮನ ಸೆಳೆಯುತ್ತಾರೆ. ಇನ್ನು ಶಶಿಯ ಅಕ್ಕನಾಗಿ ಸುಜಾತ ಕುಮಾರ್, ಅವಳ ಪ್ರೀತಿಯ ಅತ್ತೆಯಾಗಿ ಸುಲಭಾ ದೇಶಪಾಂಡೆ, ಅಮೆರಿಕನ್ನರಿಗೇ ನಿಮ್ಮ ಎಕಾನಮಿಯನ್ನು ಇಂಪ್ರೂವ್ ಮಾಡಲು ಬಂದಿದ್ದೇನೆ ಎಂದು ಹೇಳುವ ಅಮಿತಾಬಚ್ಚನ್, ಹಾಗೂ ಶಶಿಯ ಮಕ್ಕಳಾಗಿ ಅಭಿನಯಿಸಿದ ಮಕ್ಕಳಿಬ್ಬರೂ ಮನಸ್ಸಿನಲ್ಲಿ ಅಚ್ಚೊತ್ತಿಬಿಡುತ್ತಾರೆ.

    -ಉದಯ್ ಇಟಗಿ



    ಗುರುತು ಪತ್ರ

  • ಶನಿವಾರ, ಡಿಸೆಂಬರ್ 01, 2012
  • ಬಿಸಿಲ ಹನಿ
  • ಕವನದ ಹಿನ್ನೆಲೆ: ಮೊಹಮ್‍ದ ಡರ್ವಿಸ್ ಪ್ಯಾಲೈಸ್ತೀನಾದ ಪ್ರಸಿದ್ಧ ಕವಿ. ಹುಟ್ಟಿದ್ದು 1941ರಲ್ಲಿ ಪ್ಯಾಲೈಸ್ತೀನಾದ ಆಲ್-ಬಿರ್ವಿ ಎನ್ನುವ ಒಂದು ಸಣ್ಣ ಹಳ್ಳಿಯಲ್ಲಿ. 1948ರಲ್ಲಿ ಇಸ್ರೇಲಿಯರು ಈತನ ಊರಾದ ಆಲ್-ಬಿರ್ವಿಯನ್ನು ಆಕ್ರಮಿಸಿಕೊಂಡಿದ್ದರಿಂದ ಅವರಿಗೆ ಹೆದರಿ ಈತನ ಕುಟುಂಬ ಲೆಬನಾನ್‍ಗೆ ಓಡಿಹೋಗುತ್ತದೆ. ಒಂದು ವರ್ಷ ಬಿಟ್ಟು ಮತ್ತೆ ಅವರು ತಮ್ಮ ಊರಿಗೆ ವಾಪಾಸಾದಾಗ ಈತನ ಊರು ಸೇರಿದಂತೆ ಹಲವು ಊರುಗಳು ಇಸ್ರೇಲಿಯರ ದಾಳಿಗೆ ನಾಶವಾಗಿ ಅವರ ಹಿಡಿತದಲ್ಲಿ ಸಿಕ್ಕಿಕೊಳ್ಳುತ್ತವೆ. ಹೀಗಾಗಿ ಡರ್ವಿಸ್ ಕುಟುಂಬ ಬೇರೊಂದು ಹಳ್ಳಿಯಲ್ಲಿ ನೆಲೆಸಬೇಕಾಗುತ್ತದೆ. ಆ ಮೂಲಕ ಅವರು ತಮ್ಮದೇ ನೆಲದಲ್ಲಿ ಪರಕೀಯರಾಗಿ ಜೀವಿಸತೊಡಗುತ್ತಾರೆ. ತಮ್ಮದೇ ನೆಲದಲ್ಲಿ ತಮಗೆ ಸ್ಥಾನಪಲ್ಲಟವಾಗಿದ್ದನ್ನು ಹಾಗೂ ತಮ್ಮ ಗುರುತು ಅಳಿಸಿಹೋಗುವದನ್ನು ಕವಿ ಇನ್ನಿಲ್ಲದಂತೆ ಅನುಭವಿಸುತ್ತಾನೆ. ಹಾಗೆಂದೇ ಅವನ ಕವನಗಳು 1948ರಲ್ಲಿ ಉಂಟಾದ ಆಪತ್ತಿನಿಂದ ಪ್ಯಾಲೈಸ್ತೀನಿಯನ್ನರು ಅನುಭವಿಸಿದ ನಷ್ಟಗಳನ್ನು ಹಾಗೂ ಅವರ ಮೇಲೆ ಇಸ್ರೇಲಿಯರು ನಡೆಸಿದ ಸಾಂಸ್ಕೃತಿಕ ಮತ್ತು ರಾಜಕೀಯ ದಬ್ಬಾಳಿಕೆಯನ್ನು ಚಿತ್ರಿಸುತ್ತವೆ. ಪ್ರಸ್ತುತ ಕವನದಲ್ಲಿ ಕವಿಯು ಇಸ್ರೇಲಿಯರು ಪ್ಯಾಲೈಸ್ತೀನಿಯನ್ನರ ಗುರುತನ್ನು ಅಳಿಸಿಹಾಕುವ ಪ್ರಯತ್ನಗಳಿಗೆ ತೀವ್ರ ವಿರೋಧವನ್ನು ಹಾಗೂ ಆಕ್ರೋಶವನ್ನು ವ್ಯಕ್ತಪಡಿಸುತ್ತಾನೆ.



    ಬರೆದುಕೊಳ್ಳಿ!

    ನಾನೊಬ್ಬ ಅರೇಬಿ

    ನನ್ನ ಗುರುತು ಪತ್ರದ ಸಂಖ್ಯೆ ಐವತ್ತು ಸಾವಿರ

    ನನಗೆ ಎಂಟು ಜನ ಮಕ್ಕಳು

    ಒಂಬತ್ತನೆಯದು ಈ ಬೇಸಿಗೆಯ ನಂತರ ಬರುತ್ತದೆ.

    ನಿಮಗೆ ಕೋಪವೇ?


    ಬರೆದುಕೊಳ್ಳಿ!

    ನಾನೊಬ್ಬ ಅರೇಬಿ

    ನಾನು ನನ್ನ ಗೆಳೆಯರೊಟ್ಟಿಗೆ

    ಕಲ್ಲುಗಣಿಯಲ್ಲಿ ಕೆಲಸ ಮಾಡುವವ

    ನನಗೆ ಎಂಟು ಜನ ಮಕ್ಕಳು

    ಅವರೆಲ್ಲರ ಊಟ, ವಸತಿ,

    ಓದು, ಬಟ್ಟೆಬರೆಯೆಲ್ಲವನ್ನೂ

    ಈ ಕಲ್ಲುಗಣಿ ದುಡಿಮೆಯಲ್ಲಿಯೇ

    ತೂಗಿಸುತ್ತೇನೆ.

    ನಿಮಗೆ ಕೋಪವೇ?


    ನಾನು ನಿಮ್ಮ ಮನೆಯ

    ಬಾಗಿಲಿಗೆ ಬಂದು ಭಿಕ್ಷೆ ಬೇಡುವದಿಲ್ಲ.

    ಅಥವಾ ನಿಮ್ಮ ಕಾಲಿಗೆ ಬಿದ್ದು

    ಕರುಣೆ ತೋರಿಸೆಂದು ಬೇಡಿ

    ಸಣ್ಣವನಾಗುವದಿಲ್ಲ.

    ಅದಕ್ಕೇ ನಿಮಗೆ ಕೋಪವೇ?


    ಬರೆದುಕೊಳ್ಳಿ!

    ನಾನೊಬ್ಬ ಅರೇಬಿ

    ಬಿರುದು ಬಾವಲಿಗಳಿಲ್ಲದ

    ಸಾಧಾರಣ ಮನುಷ್ಯ.

    ರೊಚ್ಚಿಗೆದ್ದ ಜನರ ನಾಡಿನಲ್ಲಿ

    ತಾಳ್ಮೆಯಿಂದ ಕಾಯುತ್ತಿದ್ದೇನೆ.

    ನನ್ನ ಹುಟ್ಟಿಗಿಂತ ಮೊದಲೇ

    ನಾನಿಲ್ಲಿ ಬೇರು ಬಿಟ್ಟಿದ್ದೇನೆ

    ಅಷ್ಟೇ ಏಕೆ ಯುಗಗಳು ಆರಂಭವಾಗುವದಕ್ಕೆ ಮುಂಚೆ,

    ಪೈನ್ ಮತ್ತು ಆಲಿವ್ ವೃಕ್ಷಗಳು ಹುಟ್ಟುವ ಮುಂಚೆ

    ಹಾಗೂ ಹುಲ್ಲು ಹುಟ್ಟುವ ಮೊದಲೇ

    ನಾನಿಲ್ಲಿ ಗಟ್ಟಿಯಾಗಿ ನೆಲೆಯೂರಿದ್ದೇನೆ.

    ನನ್ನ ಅಪ್ಪ ಸಾಧಾರಣ

    ರೈತಾಪಿ ಕುಟುಂಬದಿಂದ ಬಂದವನು

    ನನ್ನ ಅಜ್ಜನೂ ಸಹ ರೈತನೇ!

    ಅವ ಒಳ್ಳೆಯ ಮನೆತನದಲ್ಲಿ ಹುಟ್ಟಲಿಲ್ಲ

    ಒಳ್ಳೆಯ ಶಿಕ್ಷಣ ಪಡೆಯಲಿಲ್ಲ.

    ಆದರೆ ನನಗೆ ಓದನ್ನು ಹೇಳಿ ಕೊಡುವ ಮೊದಲು

    ಸೂರ್ಯನಿಗೆ ಮುಖಮಾಡಿ ನಿಲ್ಲುವದನ್ನು ಹೇಳಿಕೊಟ್ಟವನು.

    ನನ್ನ ಮನೆ ಹುಲ್ಲು ಕಡ್ಡಿಗಳಿಂದ

    ಮಾಡಿದ ಕಾವಲುಗಾರನ ಗುಡಿಸಲಿನಂತಿದೆ.

    ಹೇಳಿ, ನಿಮಗೆ ನನ್ನ ಸ್ಥಾನಮಾನದ ಬಗ್ಗೆ ತೃಪ್ತಿಯೇ?


    ಬರೆದುಕೊಳ್ಳಿ!

    ನಾನೊಬ್ಬ ಅರೇಬಿ

    ನೀವು ನನ್ನ ಪೂರ್ವಿಕರ

    ಹಣ್ಣುತೋಟ ಮತ್ತು ನಾನು ನನ್ನ ಮಕ್ಕಳೊಟ್ಟಿಗೆ

    ಉಳುಮೆ ಮಾಡುತ್ತಿದ್ದ ಭೂಮಿಯನ್ನು

    ಕಿತ್ತುಕೊಂಡವರು.

    ನೀವು ನಮಗೆ

    ಈ ಕಲ್ಲುಬಂಡೆಗಳನ್ನು ಬಿಟ್ಟು

    ಬೇರೇನೇನನ್ನೂ ಬಿಡಲಿಲ್ಲ.

    ಆದರೂ ನಿಮಗೆ ಕೋಪವೇ!


    ಆದ್ದರಿಂದ

    ಬರೆದುಕೊಳ್ಳಿ

    ಮೊದಲ ಪುಟದ ಮೊದಲ ಸಾಲಿನಲ್ಲಿ.

    ನಾನು ಜನರನ್ನು ದ್ವೇಷಿಸುವದಿಲ್ಲ

    ಅಥವಾ ಆಕ್ರಮಿಸುವದಿಲ್ಲ.

    ಆದರೆ ನಾನು ಹಸಿದರೆ,

    ರೊಚ್ಚಿಗೆದ್ದರೆ

    ದುರಾಕ್ರಮಣಕಾರರ ಮಾಂಸವೇ

    ನನ್ನ ಆಹಾರವಾಗುತ್ತದೆ.

    ಎಚ್ಚರ.........

    ಎಚ್ಚರ.........

    ನನ್ನ ಹಸಿವಿನ ಬಗ್ಗೆ

    ಮತ್ತು ನನ್ನ ರೊಚ್ಚಿನ ಬಗ್ಗೆ!



    ಮೂಲ ಅರೇಬಿ: ಮೊಹಮ್‍ದ ಡರ್ವಿಸ್

    ಕನ್ನಡಕ್ಕೆ: ಉದಯ್ ಇಟಗಿ





    ಬಿಳಿ ಸಾಹೇಬನಿಗೊಂದು ಭೋಜನಕೂಟ

  • ಭಾನುವಾರ, ನವೆಂಬರ್ 11, 2012
  • ಬಿಸಿಲ ಹನಿ
  • ಈ ಸಂಜೆ ಮಿಸ್ಟರ್ ಶಾಮನಾಥನು ತನ್ನ ಮೇಲಾಧಿಕಾರಿಗಾಗಿ ತನ್ನ ಮನೆಯಲ್ಲಿ ಭೋಜನಕೂಟವೊಂದನ್ನು ಏರ್ಪಡಿಸಿದ್ದಾನೆ. ಹೀಗಾಗಿ ಬೆಳಿಗ್ಗೆಯಿಂದ ಅವನು ಮತ್ತು ಅವನ ಹೆಂಡತಿ ಮಿಸೆಸ್ ಶಾಮನಾಥ್ ಒಂದಲ್ಲಾ ಒಂದು ಕೆಲಸದಲ್ಲಿ ಮುಳುಗಿಹೋಗಿದ್ದಾರೆ. ಅದೆಷ್ಟೊಂದು ತಮ್ಮ ಕೆಲಸದಲ್ಲಿ ಮುಳುಗಿದ್ದಾರೆಂದರೆ ಇಬ್ಬರಿಗೂ ತಮ್ಮ ಬೆವರನ್ನು ಒರೆಸಿಕೊಳ್ಳವಷ್ಟು ಪುರುಸೊತ್ತಾಗಲಿ, ಸಮಯವಾಗಲಿ ಸಿಕ್ಕಿಲ್ಲ.

    ಮಿಸೆಸ್ ಶಾಮನಾಥ್ ಇವತ್ತು ಕೆಲಸದ ಗಡಿಬಿಡಿಯಲ್ಲಿ ಒಂದು ಗೌನುನಷ್ಟೇ ಹಾಕಿಕೊಂಡು ತನ್ನ ಕೂದಲನ್ನು ಬಾಚದೆ ಹಾಗೆ ತುರುಬು ಕಟ್ಟಿ ಬಿಟ್ಟಿದ್ದಳು. ಆದರೆ ಮುಖಕ್ಕೆ ಪೌಡರ್ ಮತ್ತು ಕೆನ್ನೆಗೆ ಕೆಂಪು ಬಳಿದುಕೊಳ್ಳುವದನ್ನು ಮರೆತಿರಲಿಲ್ಲ. ಮಿಸ್ಟರ್ ಶಾಮನಾಥ್ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಸಿಗರೇಟ್ ಮೇಲೆ ಸಿಗರೇಟ್ ಸೇದುತ್ತಾ ಅತ್ತಿಂದಿತ್ತ ಆತಂಕದಲ್ಲಿ ಸುಳಿದಾಡುತ್ತಿದ್ದ. ಇಬ್ಬರೂ ಒಬ್ಬರಿಗೊಬ್ಬರು “ಅದನ್ನು ಮಾಡು, ಇದನ್ನು ಮಾಡು, ಅದನ್ನಿಲ್ಲಿಡು, ಇದನ್ನಿಲ್ಲಿಡು” ಎಂದು ಹೇಳುತ್ತಾ ಆ ಕೋಣೆಯಿಂದ ಈ ಕೋಣೆಗೆ ಈ ಕೋಣೆಯಿಂದ ಆ ಕೋಣೆಗೆ ಅವಸರವಸರವಾಗಿ ಓಡಾಡುತ್ತಿದ್ದರು.

    ಅಂತಿಮವಾಗಿ ಎಲ್ಲ ತಯಾರಿಗಳು ಮುಗಿದಾಗ ಸಂಜೆ ಐದು ಘಂಟೆಯಾಗಿತ್ತು. ವರಾಂಡದಲ್ಲಿ ಒಂದು ಟೇಬಲ್, ಒಂದಿಷ್ಟು ಖುರ್ಚಿಗಳು, ಸ್ಟೂಲ್‍ಗಳು, ನ್ಯಾಪ್ಕಿನ್‍ಗಳು ಮತ್ತು ಹೂದಾನಿಗಳನ್ನು ಜೋಡಿಸಿಡಲಾಯಿತು. ಕುಳಿತುಕೊಳ್ಳುವ ಕೊಠಡಿಯಲ್ಲಿ ಕುಡಿತಕ್ಕೆ ಏರ್ಪಾಡು ಮಾಡಲಾಯಿತು. ದಿನ ಬಳಕೆಯ ಅನವಶ್ಯಕ ವಸ್ತುಗಳನ್ನೆಲ್ಲಾ ಕಪಾಟುಗಳ ಹಿಂದೆ ಹಾಗೂ ಮಂಚಗಳ ಕೆಳಗೆ ಬಚ್ಚಿಡಲಾಯಿತು. ತಯಾರಿಯೆಲ್ಲಾ ಮುಗಿದಾದ ಮೇಲೆ ಶಾಮನಾಥನಿಗೆ ಇದ್ದಕ್ಕಿದ್ದಂತೆ ತನ್ನ ಅಮ್ಮನ ಬಗ್ಗೆ ಯೋಚನೆ ಶುರುವಾಯಿತು. ಅವಳನ್ನು ಏನು ಮಾಡುವದು? ಎಲ್ಲಿ ಬಚ್ಚಿಡುವದು? ಇಡೀ ಕಾರ್ಯಕ್ರಮಕ್ಕೆ ಆಕೆ ಒಂದು ದೊಡ್ಡ ತೊಡರಾಗುವಂತೆ ಭಾಸವಾಗತೊಡಗಿದಳು.

    ಇಷ್ಟು ಹೊತ್ತು ಅವನಾಗಲಿ, ಅವನ ತಕ್ಕ ಹೆಂಡತಿಯಾಗಲಿ ಈ ವಿಷಯದ ಬಗ್ಗೆ ಒಂಚೂರು ತಲೆಕೆಡಿಸಿಕೊಂಡಿರಲಿಲ್ಲ. ಮಿಸ್ಟರ್ ಶಾಮನಾಥನು ಮಿಸೆಸ್ ಶಾಮನಾಥನೆಡೆಗೆ ತಿರುಗುತ್ತಾ ಇಂಗ್ಲೀಷಿನಲ್ಲಿ ಕೇಳಿದ “ಅಮ್ಮನನ್ನು ಏನು ಮಾಡುವದು?”

    ಮಿಸೆಸ್ ಶಾಮನಾಥ ತನ್ನ ಕೆಲಸವನ್ನು ನಿಲ್ಲಿಸಿ ಒಂದು ಕ್ಷಣ ಯೋಚಿಸಿ ಹೇಳಿದಳು “ಆಕೆಯನ್ನು ನಮ್ಮ ಮನೆಯ ಹಿಂದೆ ಇರುವ ಆಕೆಯ ಗೆಳತಿಯ ಮನೆಗೆ ಕಳಿಸಿಬಿಡಿ. ಈ ರಾತ್ರಿ ಅಲ್ಲೇ ಉಳಿದು ಬೆಳಿಗ್ಗೆ ಎದ್ದು ಬರಲಿ.”

    ಶಾಮನಾಥನು ಸಿಗರೇಟೊಂದನ್ನು ಬಾಯಲ್ಲಿಟ್ಟುಕೊಳ್ಳುತ್ತಾ ತನ್ನ ಹೆಂಡತಿಯನ್ನು ಒಮ್ಮೆ ದಿಟ್ಟಿಸಿ ನೋಡಿದ. ಮರುಕ್ಷಣ ಏನನ್ನೋ ಯೋಚಿಸಿ ತನ್ನ ತಲೆಯನ್ನು ಅಲ್ಲಾಡಿಸುತ್ತಾ ಹೇಳಿದ, “ಬೇಡ. ಅಲ್ಲಿಗೆ ಕಳಿಸುವದು ಬೇಡ. ಇವತ್ತು ಅಮ್ಮ ಅಲ್ಲಿಗೆ ಹೋದರೆ ನಾಳೆಯಿಂದ ಆ ಮುದುಕಿ ಮತ್ತೆ ನಮ್ಮ ಮನೆಗೆ ಬರುವದಿಕ್ಕೆ ಶುರುಮಾಡುತ್ತೆ. ಅದು ನಂಗೆ ಬೇಕಿಲ್ಲ. ನಿನಗೇ ಗೊತ್ತಲ್ಲ? ಈ ಹಿಂದೆ ಆಕೆಯನ್ನು ದೂರವಿಡಲು ನಾವು ಎಷ್ಟೊಂದು ಕಷ್ಟಪಡಬೇಕಾಯಿತೆಂದು? ಬದಲಿಗೆ, ಅಮ್ಮನಿಗೆ ಬೇಗನೆ ಊಟ ಮಾಡಿ ಅವಳ ಕೋಣೆಯಲ್ಲಿರಲು ಹೇಳಿದರಾಯಿತು. ಹೇಗೂ ಅತಿಥಿಗಳು ಬರೋದು ಎಂಟು ಘಂಟೆಗೆ! ಅಷ್ಟರಲ್ಲಿ ಅವಳು ಎಲ್ಲ ಮುಗಿಸಿ ಕೋಣೆಯಲ್ಲಿದ್ದರಾಯಿತು.”

    ಇಬ್ಬರಿಗೂ ಅದೊಂದು ಒಳ್ಳೆಯ ಸಲಹೆಯಂತೆ ಕಂಡಿತು ಮತ್ತದನ್ನು ಒಟ್ಟಿಗೆ ಅನುಮೋದಿಸಿದರು. ಆದರೆ ಮಿಸೆಸ್ ಶಾಮನಾಥ್ ಇದ್ದಕ್ಕಿದ್ದಂತೆ ಏನನ್ನೋ ಜ್ಞಾಪಿಸಿಕೊಳ್ಳುತ್ತಾ ಹೇಳಿದಳು “ನಿಮಗೇ ಗೊತ್ತೇ ಇದೆ! ಅತ್ತೆ ಜೋರಾಗಿ ಗೊರಕೆ ಹೊಡೆಯುತ್ತಾರೆ! ಇಲ್ಲಿ ವರಾಂಡದಲ್ಲಿ ಎಲ್ಲ ಜನ ಊಟ ಮಾಡುವಾಗ ಅವರು ಅಕಸ್ಮಾತ್ ನಿದ್ದೆ ಹೋಗಿ ಗೊರಕೆ ಹೊಡೆಯೋಕೆ ಶುರು ಮಾಡಿದರೆ ಏನು ಮಾಡೋದು? ಅವರ ರೂಮು ಬೇರೆ ವರಾಂಡಾದ ಪಕ್ಕದಲ್ಲಿಯೇ ಇದೆ!”

    “ಹಾಗಾದರೆ ಆಕೆಯನ್ನು ಆಕೆಯ ಕೋಣೆಗೆ ಬೇಗನೆ ಕಳಿಸಿ ಬಾಗಿಲನ್ನು ಮುಚ್ಚಿ ಒಳಗಿನಿಂದ ಬೋಲ್ಟ್ ಹಾಕಿಕೊಳ್ಳಲು ಹೇಳಿದರಾಯಿತು. ಆಮೇಲೆ ನಾನದನ್ನು ಹೊರಗಿನಿಂದ ಲಾಕು ಮಾಡುತ್ತೇನೆ. ಅಥವಾ ಅವಳನ್ನು ಒಳಗೆ ಕಳಿಸಿ ನಮ್ಮ ಪಾರ್ಟಿ ಮುಗಿಯುವವರೆಗೂ ನಿದ್ದೆ ಮಾಡಬೇಡ, ಎಚ್ಚರವಿರು ಎಂದು ಹೇಳಿದರಾಯಿತು. ಅಷ್ಟೇ........”

    “ಒಂದು ವೇಳೆ ಅವರಿಗೆ ತೂಕಡಿಕೆ ಬಂದರೆ? ಈ ಪಾರ್ಟಿ ಬೇರೆ ಎಷ್ಟೊತ್ತಿಗೆ ಮುಗಿಯುತ್ತೋ ದೇವರೇ ಬಲ್ಲ! ನೀವು ಬೇರೆ ಕುಡಿಯೋಕೆ ಶುರು ಮಾಡಿದರೆ ಬೇಗನೆ ಮುಗಿಸಲ್ಲ.”

    ಶಾಮನಾಥನಿಗೆ ರೇಗಿಹೋಯಿತು. ಕೋಪದಲ್ಲಿ ತನ್ನ ಕೈಗಳನ್ನು ಒದರುತ್ತಾ ಹೇಳಿದ “ಅವಳನ್ನು ಅವಾಗಲೇ ನನ್ನ ತಮ್ಮನ ಮನೆಗೆ ಕಳಿಸೋನಿದ್ದೆ. ಆದರೆ ನೀನೆ......ನೀನೆ ಎಲ್ಲ ಮಾಡಿದ್ದು! ಎಲ್ರ ಕಣ್ಣಲ್ಲಿ ಒಳ್ಳೇಳಾಗೋಕೆ ಹೋಗಿ ಮಧ್ಯ ಮೂಗು ತೂರಿಸಿ ನಿಲ್ಲಿಸಿದಿ!!”

    “ಈಗ ಅದೆಲ್ಲಾ ಯಾಕೆ? ಅವತ್ತು ಅಗಿದ್ದೇ ಬೇರೆ! ಆ ವಿಷ್ಯ ಬಿಡಿ ಈಗ...............” ಮಿಸೆಸ್ ಶಾಮನಾಥ ವಿಷಯವನ್ನು ಮರೆಸಿದಳು.

    ಮಿಸ್ಟರ್ ಶಾಮನಾಥ ಸುಮ್ಮನಾದ. ಇದು ವಾದ ಮಾಡುವ ಸಮಯಯಾಗಲಿ, ಸಂದರ್ಭವಾಗಲಿ ಅಲ್ಲವೆಂದುಕೊಂಡು ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಮುಂದಾದ. ಸ್ವಲ್ಪ ಹೊತ್ತು ಯೋಚಿಸಿ ಬಳಿಕ ತನ್ನ ತಾಯಿಯಿದ್ದ ಕೋಣೆಗೆ ಬಂದ. ಆ ಕೋಣೆ ವರಾಂಡಕ್ಕೆ ಸರಿಯಾಗಿ ಮುಖಮಾಡಿಕೊಂಡು ನಿಂತಿತ್ತು. ಅಲ್ಲಿ ಅವನ ತಾಯಿ ಗೋಡೆಗಾನಿಸಿಟ್ಟ ಹೊರಸಿನ ಮೇಲೆ ತಲೆ ತುಂಬಾ ಸೆರಗನ್ನು ಹೊದ್ದು ಕೈಯಲ್ಲಿ ಜಪಮಣಿಯನ್ನು ಹಿಡಿದು ಪ್ರಾರ್ಥಿಸುತ್ತಾ ಕುಳಿತಿದ್ದಳು. ಬೆಳಿಗ್ಗೆಯಿಂದ ಇವರಿಬ್ಬರ ಆತಂಕವನ್ನು ನೋಡಿ ಅವಳೆದೆ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ಇವತ್ತು ಮಗನ ಆಫೀಸಿನಿಂದ ಬಿಳಿ ಸಾಹೇಬರು ಬರುವವರಿದ್ದಾರೆ. ಎಲ್ಲ ಸುಖಕರವಾಗಿ ಸಾಗಲಿ ಎಂದು ಪ್ರಾರ್ಥಿಸಿದಳು.



    “ಅಮ್ಮ, ಇವತ್ತು ನೀನು ಬೇಗನೆ ಊಟ ಮಾಡಿಬಿಡು. ಅತಿಥಿಗಳು ಏಳೂವರೆಗೆಲ್ಲಾ ಬಂದು ಬಿಡುತ್ತಾರೆ.” ಶಾಮನಾಥ ಹೇಳಿದ.

    ಆಕೆ ತನ್ನ ತಲೆಯ ಮೇಲಿನ ಸೆರಗನ್ನು ಸರಿಸುತ್ತಾ ಮಗನೆಡೆಗೆ ನೋಡುತ್ತಾ ಹೇಳಿದಳು, “ನಾನಿವತ್ತು ಊಟ ಮಾಡೋದಿಲ್ಲ ಮಗಾ. ಮನೆಯಲ್ಲಿ ಮೀನು-ಮಾಂಸ ಮಾಡಿದ ದಿನ ನಾನು ಯಾವತ್ತು ಊಟ ಮಾಡಿದ್ದೇನೆ?”

    “ಆಯ್ತು. ಅದೇನು ಮಾಡಬೇಕು ಅಂತಿದ್ದೆಯೋ ಅದನ್ನೆಲ್ಲಾ ಬೇಗ ಮಾಡಿ ಮುಗಿಸು.”

    “ಸರಿ, ಮಗಾ”

    “ಹಾಂ, ಅಮ್ಮ, ಮರೆತಿದ್ದೆ. ನಾವು ಮೊದಲು ಸಿಟ್ಟಿಂಗ್ ರೂಮಿನಲ್ಲಿ ಕುಳಿತಿರುತ್ತೇವೆ. ಅಷ್ಟೊತ್ತು ನೀನು ವರಾಂಡದಲ್ಲಿರು. ಆಮೇಲೆ ನಾವು ಹೊರಗೆ ಬಂದಾಗ ಬಾತ್‍ರೂಮ್ ಮೂಲಕ ಹಾದು ಸಿಟ್ಟಿಂಗ್ ರೂಮಿಗೆ ಹೋಗು.”

    ಅವನ ತಾಯಿ ಏನೂ ಮಾತನಾಡಲಿಲ್ಲ. ಅವನನ್ನೊಮ್ಮೆ ನೋಡಿ ಮೆತ್ತಗೆ ಹೇಳಿದಳು, “ಸರಿ, ಮಗಾ.”

    “ಹಾಂ, ಇನ್ನೊಂದು ವಿಷ್ಯ! ಇವತ್ತು ಬೇಗನೆ ಮಲಗೋದಿಕ್ಕೆ ಹೋಗಬೇಡ. ನೀನು ಗೊರಕೆ ಹೊಡೆಯುವ ಸದ್ದು ಅಷ್ಟು ದೂರದವರೆಗೂ ಕೇಳಿಸುತ್ತೆ.”

    ತಕ್ಷಣ ಅವನ ತಾಯಿ ನಾಚಿಕೆ ಬಿಟ್ಟು ಹೇಳಿದಳು, “ನಾನೇನ್ ಮಾಡ್ಲಿ, ಮಗಾ? ಅದೆಲ್ಲಾ ನನ್ನ ಕೈಲಿಲ್ಲಾ. ನಾನು ಜಡ್ಡಿಗೆ ಬಿದ್ದು ಎದ್ದಾಗಿನಿಂದ ನಂಗೆ ಮೂಗಿನಿಂದ ಸರಿಯಾಗಿ ಉಸಿರಾಡೋದಿಕ್ಕೆ ಆಗ್ತಿಲ್ಲ.”

    ಮಿಸ್ಟರ್ ಶಾಮನಾಥ್ ಅತಿಥಿಗಳು ಬರುವದಕ್ಕೆ ಮುನ್ನ ಎಲ್ಲವನ್ನೂ ಅಚ್ಚುಕಟ್ಟಾಗಿ ಸಿದ್ಧಗೊಳಿಸಿದ. ಆದರೂ ಮನಸ್ಸಿಗೇಕೋ ಸಮಾಧಾನವಿರಲಿಲ್ಲ. ಒಂದುವೇಳೆ ಬಾಸ್ ಈ ಕಡೆಗೆ ಬಂದರೆ? ಸುಮಾರು ಎಂಟ್ಹತ್ತು ಜನ ಅತಿಥಿಗಳು! ಇಂಡಿಯನ್ ಆಫಿಸಿಯಲ್ಸ್ ಮತ್ತವರ ಹೆಂಡಿರು! ಯಾರಾದರೂ ಬಾತ್‍ರೂಮಿಗೆ ಹೋಗಬಹುದು. ಆಗ ಅವರು ಅಕಸ್ಮಾತ್ ಅಮ್ಮನನ್ನು ನೋಡಿಬಿಟ್ಟರೆ ಏನು ಮಾಡೋದು? ಶಾಮನಾಥ ಕೋಪದಲ್ಲಿ ತನ್ನ ಕೈಕೈ ಹಿಸುಕಿಕೊಂಡ. ಒಂದು ಖುರ್ಚಿಯನ್ನೆತ್ತಿಕೊಂಡು ಅದನ್ನು ವರಾಂಡದಲ್ಲಿರುವ ತನ್ನ ತಾಯಿಯ ಕೋಣೆಯ ಹೊರಬಾಗಿಲ ಬಳಿ ಇಡುತ್ತಾ “ಅಮ್ಮ, ಇಲ್ಲಿ ಬಾ. ಇದರ ಮೇಲೆ ಕುಳಿತ್ಕೋ” ಎಂದು ಹೇಳಿದ.

    ಅವನ ತಾಯಿ ತನ್ನ ಜಪಮಣಿಯನ್ನು ಒಂದು ಕೈಲಿ ಹಿಡಿದುಕೊಂಡು ಇನ್ನೊಂದು ಕೈಲಿ ತನ್ನ ಸೆರಗನ್ನು ಸರಿಮಾಡಿಕೊಳ್ಳುತ್ತಾ ನಿಧಾನವಾಗಿ ನಡೆದು ಬಂದು ಆ ಖುರ್ಚಿಯ ಮೇಲೆ ಕಾಲಿಟ್ಟುಕೊಂಡು ಕುಳಿತಳು.

    “ಅಯ್ಯೋ, ಹಾಗಲ್ಲಮ್ಮ! ಖುರ್ಚಿ ಮೇಲೆ ಕಾಲಿಟ್ಕೊಂಡು ಕೂರಬಾರದು. ಇದು ಹೊರಸು ಅಲ್ಲ.”

    ಅವನ ತಾಯಿ ಕಾಲು ಇಳಿಬಿಟ್ಟಳು.

    “ಎಲ್ರೂ ಇರುವಾಗ ಬರಿಗಾಲಲ್ಲಿ ಎಲ್ಲೂ ಓಡಾಡಬೇಡ. ಆ ನಿನ್ನ ದರಿದ್ರ ಕಟ್ಟಿಗೆ ಚಪ್ಪಲಿಗಳನ್ನು ಹಾಕಿಕೊಂಡು ಯಾರ ಮುಂದೆನೂ ಸುಳಿಬೇಡ.”

    ಅವನ ತಾಯಿ ತುಟಿ ಪಿಟ್ಟೆನ್ನಲಿಲ್ಲ.

    “ಯಾವ ಡ್ರೆಸ್ ಹಾಕ್ಕೊಂತಿಯಮ್ಮ?”

    “ನನ್ಹತ್ರ ಇರೋದು ಮಗಾ! ಅಥವಾ ನೀನು ಯಾವುದನ್ನು ಹೇಳ್ತಿಯಾ ಅದನ್ನು ಮಗಾ!”

    ಬಾಯಲ್ಲಿ ಸಿಗರೇಟ್‍ನ್ನಿಟ್ಟುಕೊಂಡೇ ಮಿಸ್ಟರ್ ಶಾಮನಾಥ ಅವಳನ್ನೊಮ್ಮೆ ಓರೆಗಣ್ಣಿನಿಂದ ನೋಡುತ್ತಾ ಆಕೆಯ ಉಡುಗೆಯನ್ನು ಪರಿಶೀಲಿಸಿದ. ಶಾಮನಾಥನಿಗೆ ಎಲ್ಲವೂ ಸರಿಯಾದ ರೀತಿಯಲ್ಲಿಯೇ ಆಗಬೇಕು. ಮನೆಯ ಆಗುಹೋಗುಗಳೆಲ್ಲಾ ಅವನ ಮೂಲಕವೇ ಆಗಬೇಕು: ಮನೆಯಲ್ಲಿ ಹುಕ್‍ಗಳೆಲ್ಲರಿಬೇಕು? ಮಂಚಗಳೆಲ್ಲರಿಬೇಕು? ಯಾವ ಸೈಜಿನ ಟೇಬಲ್ಲಿರಬೇಕು? ಯಾವ ಬಣ್ಣದ ಕರ್ಟನ್ನುಗಳಿರಬೇಕು? ಕೊನೆಗೆ ಅವನ ಹೆಂಡತಿ ಯಾವ ಸೀರೆ ಉಡಬೇಕು? ಎನ್ನುವದನ್ನು ಕೂಡ ನಿರ್ಧರಿಸವವನು ಅವನೇ! ಶಾಮನಾಥನಿಗೆ ಇಷ್ಟೆಲ್ಲಾ ತಯಾರಿ ಮಾಡಿದ್ದರೂ ಏನೋ ಒಂದು ಅಳುಕಿದ್ದೇ ಇತ್ತು. ಒಂದುವೇಳೆ ಬಾಸ್ ಅಮ್ಮನನ್ನು ನೋಡಿಬಿಟ್ಟರೆ? ಅವರಿಗೆ ಮುಜುಗರವಾಗಬಹುದು. ಆಕೆಯ ವೇಷಭೂಷಣಗಳನ್ನು ನೋಡಿ ಅಸಹ್ಯಪಟ್ಟುಕೊಳ್ಳಬಹುದು. ಏನು ಮಾಡುವದು? ಶಾಮನಾಥ ಪೇಚಿಗೆ ಸಿಲುಕಿದ. ಇದೇ ಯೋಚನೆಯಲ್ಲಿ ಆತ ಒಂದು ಸಾರಿ ತನ್ನ ಅಮ್ಮನನ್ನು ಕೆಳಗಿನಿಂದ ಮೇಲಿನವರೆಗೆ ನೋಡಿ ಹೇಳಿದ “ಅಮ್ಮ, ಈ ಸಂಜೆ ಬಿಳಿ ಸಲ್ವಾರ್ ಮತ್ತು ಬಿಳಿ ಕಮೀಜ್‍ನ್ನು ಹಾಕಿಕೋ....... ಹೋಗು ಈಗ್ಲೇ ಹಾಕಿಕೊಂಡು ಬಾ....... ನಾನು ನೋಡಬೇಕು.”

    ಆಕೆ ಬಟ್ಟೆ ಬದಲಾಯಿಸಲು ನಿಧಾನವಾಗಿ ಎದ್ದು ತನ್ನ ಕೋಣೆಯೊಳಗೆ ಹೋದಳು. ಶಾಮನಾಥ ಮತ್ತೊಮ್ಮೆ ತನ್ನ ಹೆಂಡತಿಗೆ ಇಂಗ್ಲೀಷಿನಲ್ಲಿ ಹೇಳಿದ. “ಈಕೆ ಸಮಸ್ಯೆಯಾಗಲಿದ್ದಾಳೆ......ಜನ ವಿವೇಕದಿಂದ ಮಾತನಾಡುವ ಹಾಗಿದ್ದರೆ ಮಾತ್ರ ಮಾತನಾಡಬೇಕು. ಇಲ್ಲದಿದ್ದರೆ ತೆಪ್ಪಗಿರಬೇಕು. ಅದು ಬಿಟ್ಟು ಈಕೆ ಏನೋ ಮಾತನಾಡಲು ಹೋಗಿ ಇನ್ನೇನೋ ಮಾತನಾಡಿ ನಗೆಪಾಟಲಿಗೀಡಾದರೆ? ಬಾಸ್‍ ತಪ್ಪಾಗಿ ತಿಳಿಯಬಹುದು. ಆಗ ಇಡೀ ಪಾರ್ಟಿಯ ಮೂಡು ಹಾಳಾಗಿಬಿಡುತ್ತದೆ.”

    ಅವನ ತಾಯಿ ಬಿಳಿ ಸಲ್ವಾರ್ ಮತ್ತು ಬಿಳಿ ಕಮೀಜ್‍ನ್ನು ತೊಟ್ಟು ಹೊರಬಂದಳು. ಆಕೆ ಆ ಉಡುಗೆಯಲ್ಲಿ ಮುಂಚೆಗಿಂತ ಸ್ವಲ್ಪ ಕುಳ್ಳಗಿರುವಂತೆ ಕಂಡಳು. ಇನ್ನು ಆಕೆಯ ಸುಕ್ಕುಗಟ್ಟಿದ ದೇಹ ಬಿಳಿ ಬಟ್ಟೆಯಲ್ಲಿ ಸುತ್ತಿದಂತೆ ಕಾಣುತ್ತಿತ್ತು. ಅವಳ ಅಳಿದುಳಿದ ಕೂದಲುಗಳು ದುಪ್ಪಟ್ಟಾದೊಳಗೆ ಅಡಗಿಕೊಂಡಿದ್ದವು. ಈಗ ಮೊದಲಿಗಿಂತ ಮತ್ತಷ್ಟು ಕುರೂಪಿಯಾಗಿ ಕಂಡಳು.

    “ಗುಡ್! ಚನ್ನಾಗಿದೆ. ಬಳೆ ಅಥವಾ ಒಡವೆಗಳೇನಾದರಿದ್ದರೆ ಅವನ್ನೂ ಹಾಕಿಕೋ. ಪರ್ವಾಗಿಲ್ಲ.”

    “ಒಡವೆ ಎಲ್ಲಿಂದ ತರ್ಲಿ ಮಗಾ? ನಾನು ಅವನ್ನೆಲ್ಲಾ ನಿನ್ನ ಓದಿಸೋಕೆ ಮಾರಿದ್ದು ನಿಂಗೆ ಗೊತ್ತೇ ಇದೆ.”

    ಈ ಮಾತು ಶಾಮನಾಥನನ್ನು ಬಾಣದಂತೆ ಬಂದು ನಾಟಿತು. ಸ್ವಲ್ಪ ಖಾರವಾಗಿ ಹೇಳಿದ “ಅದನ್ನೆಲ್ಲಾ ಹೇಳೋ ಅಗತ್ಯ ಏನಿದೆ ಈಗ? ಸುಮ್ನೆ ನಿನ್ಹತ್ರ ಯಾವ ಒಡವೆನೂ ಇಲ್ಲಾ ಅಂತಾ ಹೇಳು, ಸಾಕು. ನಂಗೆ ಅರ್ಥವಾಗುತ್ತೆ. ಆ ವಿಷ್ಯ ಯಾಕೆ ಕೆದಕತಿಯಾ ಈಗ? ನೀನು ಒಡವೆ ಮಾರಿದ್ದು ನಿಂಗೆ ಲಾಭವೇ ಆಗಿದೆ. ನಿನ್ನ ಮಗ ಓದಿ ಕೆಲಸಕ್ಕೆ ಸೇರಿದ. ಅದುಬಿಟ್ಟು ಫೇಲ್ ಆಗಿ ವಾಪಸ್ ಬಂದು ಮನೇಲಿ ಕೂರಲಿಲ್ವಲ್ಲ? ಅದಕ್ಕೆ ಖುಷಿಪಡು...... ನೀನು ಏನೇನು ಕೊಟ್ಟಿದ್ದೀಯೋ ಅದರ ಎರಡರಷ್ಟು ವಾಪಾಸ್ ಕೊಡತೇನಿ ತಗೋ......!

    “ಅಯ್ಯೋ, ದೇವರೆ! ಎಲ್ಲಾದ್ರು ಉಂಟೆ? ನಿನ್ನಿಂದ ನಾನು ಒಡವೆ ವಾಪಾಸ್ ತಗೊಳ್ಳೋದಂದ್ರೇನು? ಏನೋ ಬಾಯಿ ತಪ್ಪಿ ಹಾಗೆ ಹೇಳಿಬಿಟ್ಟೆ ಮಗಾ! ನನ್ನ ನಾಲ್ಗಿ ಸುಡ್ಲಿ!”

    ಆಗಲೇ ಘಂಟೆ ಐದೂವರೆಯಾಗಿತ್ತು. ಶಾಮನಾಥನು ಸ್ನಾನ ಮುಗಿಸಿ ಸಿದ್ಧವಾಗಬೇಕಿತ್ತು. ಮಿಸೆಸ್ ಶಾಮನಾಥ ಅದಾಗಲೇ ತನ್ನ ಕೋಣೆ ಸೇರಿ ಬಹಳ ಹೊತ್ತಾಗಿತ್ತು. ಶಾಮನಾಥನು ಅಲ್ಲಿಂದ ಹೋಗುವ ಮುನ್ನ ತನ್ನ ತಾಯಿಗೆ ಮತ್ತೊಂದು ಉಪದೇಶ ನೀಡಿದ. “ಅಮ್ಮ, ದಿನಾ ಮೂಗನ ತರ ಕೂತ್ಕೊಳ್ಳೋ ಹಾಗೆ ಕೂತ್ಕೋಬೇಡ. ಅಕಸ್ಮಾತ್ ಸಾಹೇಬ್ರೇನಾದರು ಈ ಕಡೆ ಬಂದು ನಿನ್ನ ಏನಾದ್ರು ಕೇಳಿದರೆ, ಸರಿಯಾಗಿ ಉತ್ತರ ಕೊಡು.”

    “ನಾನು ಯಾವತ್ತೂ ಈಸ್ಕೂಲಿಗೆ ಹೋಗಿ ಓದು ಬರಹ ಕಲಿತವಳಲ್ಲ. ಹಿಂಗಿದ್ದ ಮೇಲೆ ನಾನ್ಹೇಗೆ ಅವರಿಗೆ ಉತ್ತರ ಕೊಡಲಿ? ಅವರಿಗೆ ಮೊದ್ಲೇ ಹೇಳಿಬಿಡು ನಾನು ಓದು ಬರಹ ಬರದಾಕಿ ಎಂದು. ಆಗ ಅವರು ನನ್ನ ಏನೂ ಕೇಳೋದಿಲ್ಲ.”

    ಏಳು ಘಂಟೆಯಾಗುತ್ತಿದ್ದಂತೆ ಅವನ ತಾಯಿಯ ಎದೆ ಒಂದೇ ಸಮನೆ ಹೊಡೆದುಕೊಳ್ಳತೊಡಗಿತು. ಒಂದು ವೇಳೆ ಬಾಸ್ ಅವಳ ಬಳಿ ಬಂದು ಏನಾದರೂ ಕೇಳಿದರೆ ಏನು ಹೇಳುವದು? ಅವಳು ದೂರದಿಂದಲೇ ಇಂಗ್ಲೀಷರನ್ನು ನೋಡಿದರೆ ಸಾಕು ಹೆದರಿಬಿಡುತ್ತಿದ್ದಳು. ಈಗ ಬರುತ್ತಿರುವವರು ಅಮೆರಿಕಾದ ಸಾಹೇಬರು ಬೇರೆ. ಅವರೇನು ಕೇಳುತ್ತಾರೋ? ಈಕೆ ಏನು ಹೇಳುತ್ತಾಳೋ? ದೇವರಿಗೊಂದು ಗೊತ್ತು! ಆಕೆ ಸುಮ್ಮನೆ ಮನೆಯ ಹಿಂದೆ ಇರುವ ಆಕೆಯ ವಿಧವೆ ಗೆಳತಿಯ ಮನೆಗೆ ಹೋಗಿದ್ದರಾಗುತ್ತಿತ್ತು! ಆದರೆ ಅವಳು ತಾನೆ ಹೇಗೆ ಮಗನ ಮಾತನ್ನು ಮೀರುತ್ತಾಳೆ? ಈಗ ಸುಮ್ಮನೆ ಕಾಲು ಇಳಿಬಿಟ್ಟು ಆ ಖುರ್ಚಿಯ ಮೇಲೆ ಕುಳಿತುಕೊಂಡಳು.

    ಒಂದು ಯಶಸ್ವಿ ಪಾರ್ಟಿ ಅಂದ ಮೇಲೆ ಅಲ್ಲಿ ಮದ್ಯ ಯಥೇಚ್ಛವಾಗಿ ಹರಿಯಲೇಬೇಕು. ಶಾಮನಾಥನ ಪಾರ್ಟಿ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಅದು ಯಶಸ್ವಿನ ತುತ್ತತುದಿಯನ್ನು ಮುಟ್ಟುವದರಲ್ಲಿತ್ತು. ಅವರ ಸಂಭಾಷಣೆಯೂ ಸಹ ಮದ್ಯವನ್ನು ಗ್ಲಾಸಿಗೆ ಸುರಿದಷ್ಟೇ ವೇಗದಲ್ಲೇ ಸಾಗುತ್ತಿತ್ತು. ಅಲ್ಲಿ ಯಾವುದೇ ಅಡ್ಡಿ ಆತಂಕಗಳಿರಲಿಲ್ಲ. ಸಾಹೇಬರು ವಿಸ್ಕಿಯನ್ನು ತುಂಬಾ ಇಷ್ಟಪಟ್ಟರು. ಸಾಹೇಬರ ಹೆಂಡತಿ ಮನೆಯ ಕರ್ಟನ್ನುಗಳನ್ನು, ಸೋಫಾ ಕವರಿನ ವಿನ್ಯಾಸವನ್ನು, ಹಾಗೂ ದಿವಾನಖಾನೆಯ ಅಲಂಕಾರವನ್ನು ತುಂಬಾ ಇಷ್ಟಪಟ್ಟಳು. ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು?

    ಪಾನಗೋಷ್ಠಿಯ ಎರಡನೇ ಸುತ್ತಿನಿಂದ ಮಾತ್ರ ಸಾಹೇಬರು ಜೋಕುಗಳನ್ನು ಹೇಳುವದಿಕ್ಕೆ, ತಮಾಷೆ ಮಾಡುವದಕ್ಕೆ ಶುರು ಮಾಡಿದರು. ಆಫಿಸಿನಲ್ಲಿ ಎಷ್ಟು ಫ್ರೆಂಡ್ಲಿಯಾಗಿರುತ್ತಿದ್ದರೋ ಅಷ್ಟೆ ಫ್ರೆಂಡ್ಲಿಯಾಗಿ ಇಲ್ಲೂ ಇದ್ದರು. ಮತ್ತವರ ಹೆಂಡತಿ ಕಪ್ಪು ಗೌನನ್ನು ಧರಿಸಿ, ಕುತ್ತಿಗೆಗೆ ಬಿಳಿ ಮುತ್ತಿನ ಹಾರವನ್ನು ಹಾಕಿಕೊಂಡು, ಪೌಡರ್ ಮತ್ತು ಸುಗಂಧ ದ್ರವ್ಯಗಳಲ್ಲಿ ಘಮಗುಡುತ್ತಾ ಅಲ್ಲಿರುವ ಭಾರತೀಯ ಹೆಣ್ಣುಮಕ್ಕಳ ಮೆಚ್ಚುಗೆಗೆ ಪಾತ್ರಳಾದಳು. ಆಕೆ ಎಲ್ಲದಕ್ಕೂ ಒಯ್ಯಾರದಿಂದ ನಗುತ್ತಾ ತಲೆ ಅಲ್ಲಾಡಸುತ್ತಿದ್ದಳು. ಶಾಮನಾಥನ ಹೆಂಡತಿ ತನ್ನ ಹಳೆಯ ಸ್ನೇಹಿತೆಯೇನೋ ಎಂಬಷ್ಟು ಸಲಿಗೆಯಿಂದ ಆಕೆಯ ಹತ್ತಿರ ಮಾತನಾಡುತ್ತಿದ್ದಳು.

    ಪಾನಗೋಷ್ಠಿಯ ಪ್ರವಾಹದಲ್ಲಿ ಮುಳುಗಿದವರಿಗೆ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ. ಅದಾಗಲೇ ಹತ್ತು ಘಂಟೆ ಮೂವತ್ತು ನಿಮಿಷವಾಗಿತ್ತು.

    ಕೊನೆಯದಾಗಿ ಎಲ್ಲರೂ ತಂತಮ್ಮ ಗ್ಲಾಸುಗಳಿಂದ ಕೊನೆಯ ಗುಟುಕನ್ನು ಹೀರಿ ಖಾಲಿ ಮಾಡಿದರು. ಈಗ ಎಲ್ಲರೂ ಎದ್ದು ಊಟಕ್ಕಾಗಿ ಕುಳಿತುಕೊಳ್ಳುವ ಕೊಠಡಿಯತ್ತ ಹೊರಟರು. ದಾರಿ ತೋರಿಸಲು ಶಾಮನಾಥ ಮುಂದೆ ನಡೆದರೆ ಅವನ ಹಿಂದೆ ಅವನ ಬಾಸ್ ಮತ್ತು ಇತರ ಅತಿಥಿಗಳು ನಡೆದರು.

    ವರಾಂಡಕ್ಕೆ ಬರುತ್ತಿದ್ದಂತೆ ಅಲ್ಲಿ ಅವನ ಅಮ್ಮ ಕುಳಿತಿದ್ದ ದೃಶ್ಯವನ್ನು ನೋಡಿ ಶಾಮನಾಥ ಇದ್ದಕ್ಕಿದ್ದಂತೆ ದಂಗು ಬಡಿದವನಂತೆ ನಿಂತುಬಿಟ್ಟ. ಅವನ ತಾಯಿ ವರಾಂಡದಲ್ಲಿದ್ದ ತನ್ನ ಕೋಣೆಯ ಮುಂದುಗಡೆ ಬಲಭಾಗದಲ್ಲಿ ಮಗನ ಆದೇಶದಂತೆ ಸರಿಯಾಗಿ ಖುರ್ಚಿಯ ಮೇಲೆ ಕುಳಿತಿದ್ದಳು. ಆದರೆ ಅವಳ ಪಾದಗಳು ಖುರ್ಚಿಯ ಮೇಲಿದ್ದವು. ಅವಳ ತಲೆ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಜೋಲಾಡುತ್ತಿತ್ತು ಹಾಗೂ ಅವಳ ಬಾಯಿಂದ ಭಯಂಕರ ಗೊರಕೆಯ ಸದ್ದು ಹೊರಡುತ್ತಿತ್ತು. ಅವಳ ದುಪ್ಪಟ್ಟಾ ತಲೆಯ ಮೇಲಿಂದ ಕೆಳಗೆ ಜಾರಿತ್ತು. ಇವರೆಲ್ಲರ ಸದ್ದಿನಿಂದಾಗಿ ಆಕೆ ಎಚ್ಚರಗೊಂಡಳು.

    ಆಕೆಯನ್ನು ನೋಡಿದ್ದೇ ತಡ ಶಾಮನಾಥನ ಪಿತ್ತ ನೆತ್ತಿಗೇರಿತು. ಶಾಮನಾಥನಿಗೆ ಅವಳ ಕಾಲನ್ನು ಹಿಡಿದು ದರದರನೆ ಎಳೆದು ಅವಳ ಕೋಣೆಯಲ್ಲಿ ಬೀಸಾಕಬೇಕೆನಿಸಿತು. ಆದರೆ ಅವನ ಬಾಸ್ ಮತ್ತು ಇತರ ಅತಿಥಿಗಳು ಹತ್ತಿರದಲ್ಲಿಯೇ ಇದ್ದುದರಿಂದ ಅದು ಸಾಧ್ಯವಾಗಲಿಲ್ಲ.

    ಪಕ್ಕದಲ್ಲಿಯೇ ಇದ್ದ ಶಾಮನಾಥನ ಇಂಡಿಯನ್ ಅಧಿಕಾರಿಗಳ ಹೆಂಡಿರು ಅವನ ಅಮ್ಮನನ್ನು ನೋಡಿ ಕಿಸಿಕಿಸಿಯೆಂದು ನಕ್ಕರು. ಆದರೆ ಬಾಸ್ ಮಾತ್ರ “ಪೂರ್ ಡಿಯರ್!” ಎಂದು ಸೌಮ್ಯವಾಗಿ ಹೇಳಿದರು.

    ಇವರೆಲ್ಲರನ್ನು ನೋಡಿ ಅಮ್ಮ ಆತುರಾತುರದಲ್ಲಿ ನೇರವಾಗಿ ಕುಳಿತಳು. ತನ್ನ ಮುಂದಿರುವ ಅಷ್ಟೂ ಜನರನ್ನು ನೋಡಿ ಗಾಬರಿಯಲ್ಲಿ ಅಮ್ಮನಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ತಕ್ಷಣ ತನ್ನ ದುಪ್ಪಟ್ಟಾವನ್ನು ತಲೆಯ ಮೇಲೆಳೆದುಕೊಳ್ಳುತ್ತಾ ಎದ್ದು ನಿಂತು ನೆಲವನ್ನೇ ದಿಟ್ಟಿಸತೊಡಗಿದಳು. ಅವಳ ಕಾಲುಗಳು ಭಯದಿಂದ ತತ್ತರಿಸುತ್ತಿದ್ದವು.

    “ಅಮ್ಮ, ಹೋಗಿ ಮಲ್ಕೋ. ಇನ್ನೂ ಯಾಕ ಎದ್ದಿದ್ದೀಯಾ?” ಎಂದು ಹೇಳುತ್ತಾ ಶಾಮನಾಥನು ತನ್ನ ಬಾಸ್‍ನನ್ನು ನೋಡಿ ಪೆಚ್ಚು ನಗೆ ನಕ್ಕ.

    ಬಾಸ್ ನಗುತ್ತಾ ನಿಂತಲ್ಲಿಂದಲೇ “ನಮಸ್ತೆ” ಎಂದು ಹೇಳಿದರು.

    ಅವನ ತಾಯಿ ಹಿಂದುಮುಂದು ನೋಡುತ್ತಾ ಅತ್ಯಂತ ಸಂಕೋಚದಿಂದ ಒಂದು ಕೈಯನ್ನು ದುಪ್ಪಟ್ಟಾದೊಳಗಿಟ್ಟು ಅದರಲ್ಲಿ ಜಪಮಣಿಯನ್ನು ಹಿಡಿದು ಇನ್ನೊಂದು ಕೈಯನ್ನು ದುಪ್ಪಟ್ಟಾದ ಹೊರಗಿಟ್ಟು ಅವೆರಡನ್ನೂ ಜೋಡಿಸಿ ನಮಸ್ತೆ ಎಂದು ಹೇಳಿದಳು. ಆದರೆ ಅದು ಸರಿಯಾಗಿ ಬರಲಿಲ್ಲ. ಶಾಮನಾಥ ಹಲ್ಲುಕಚ್ಚಿದ. ಅಷ್ಟರಲ್ಲಿ ಬಾಸ್ ತನ್ನ ಬಲಗೈಯನ್ನು ಚಾಚಿ ಅವಳ ಕೈ ಕುಲುಕಲು ಮುಂದಾದ. ಆದರೆ ಆಕೆ ಮತ್ತಷ್ಟು ಗಾಬರಿಗೊಳಗಾದಳು.

    “ಅಮ್ಮ, ಕೈ ಶೇಕ್ ಮಾಡು”

    ಅವಳ ಬಲಗೈಯಲ್ಲಿ ಜಪಮಣಿಯಿದ್ದುದರಿಂದ ಅವಳು ತಾನೆ ಹೇಗೆ ಕೈ ಕುಲುಕಿಯಾಳು? ಗಾಬರಿಯಲ್ಲಿ ಅವಳು ತನ್ನ ಎಡಗೈಯನ್ನು ತೆಗೆದು ಸಾಹೇಬರ ಕೈಯಲ್ಲಿಟ್ಟಳು. ಶಾಮನಾಥ ಒಳಗೇ ಕುದಿಯತೊಡಗಿದ. ಅವನ ಇಂಡಿಯನ್ ಅಧಿಕಾರಿಗಳ ಹೆಂಡಿರು “ಹೇ ಹೇ.....” ಎಂದು ಹಲ್ಲು ಗಿಂಜಿದರು.

    “ಹಾಗಲ್ಲಮ್ಮಾ. ಬಲಗೈಯಿಂದ ಶೇಕ್ ಮಾಡಬೇಕು ಅಂತಾ ನಿಂಗೆ ಗೊತ್ತಿಲ್ವಾ? ಎಲ್ಲಿ ಬಲಗೈ ಕೊಡು.”

    ಅಷ್ಟೊತ್ತಿಗಾಗಲೇ ಬಾಸ್ ಅವಳ ಎಡಗೈಯನ್ನು ಹಲವಾರು ಬಾರಿ ಕುಲುಕಿ ಇಂಗ್ಲೀಷಿನಲ್ಲಿ ಕೇಳುತ್ತಿದ್ದರು “ಹೌ ಡು ಯೂ ಡು?”

    “ಅಮ್ಮ, ಸಾಹೇಬರಿಗೆ ಹೇಳು, ‘ಐ ಯಾಮ್ ಫೈನ್. ಐ ಯಾಮ್ ವೆಲ್.’ ಅಂತಾ”

    ಅವನ ತಾಯಿ ಏನೋ ಒಂದು ಗೊಣಗಿದಳು.

    “ಅಮ್ಮ ಹೇಳ್ತಿದ್ದಾಳೆ, ಅವಳು ಚನ್ನಾಗಿದ್ದಾಳಂತೆ. ಎಲ್ಲಿ ಅಮ್ಮ ನೀನೂ ಒಂದು ಸಾರಿ ಹೇಳು, ‘ಹೌ ಡು ಯೂ ಡು?’”

    ಅವಳು ನಿಧಾನವಾಗಿ ಅತ್ಯಂತ ಮುಜುಗರದಿಂದ ಹೇಳಿದಳು, “ಹೌ ಡು ಡು..........”

    ಅಲ್ಲಿ ನಗೆಯ ರಿಂಗಣ ಮೊಳಗಿತು.

    ಬಿಗುವಿನಿಂದ ಕೂಡಿದ್ದ ವಾತಾವರಣ ಈಗ ಸ್ವಲ್ಪ ತಿಳಿಯಾಯಿತು. ಸಾಹೇಬರು ಇಡೀ ಸನ್ನಿವೇಶವನ್ನು ಹತೋಟಿಗೆ ತೆಗೆದುಕೊಂಡಿದ್ದರು. ಜನರೆಲ್ಲಾ ಒಬ್ಬರೊನ್ನೊಬ್ಬರು ತಮಾಷೆ ಮಾಡಿಕೊಳ್ಳುತ್ತಾ ನಗತೊಡಗಿದರು. ಆದರೆ ಶಾಮನಾಥನು ಇನ್ನೂ ಕಳವಳಗೊಂಡೇ ಇದ್ದ.

    ಸಾಹೇಬರು ಇನ್ನೂ ಅಮ್ಮನ ಕೈ ಹಿಡಿದೇ ಇದ್ದರು. ಅಮ್ಮ ನಾಚಿ ನೀರಾಗುತ್ತಿದ್ದಳು. ಸಾಹೇಬರ ಬಾಯಿಂದ ಮದ್ಯದ ವಾಸನೆ ಅವಳ ಮೂಗಿಗೆ ಬಂದು ಬಡಿಯುತ್ತಿತ್ತು.

    ಶಾಮನಾಥ ಇಂಗ್ಲೀಷಿನಲ್ಲಿ ಹೇಳಿದ “ನನ್ನಮ್ಮ ಹಳ್ಳಿಯಿಂದ ಬಂದಾಕೆ. ತನ್ನ ಮುಕ್ಕಾಲು ಜೀವನವನ್ನು ಅಲ್ಲೇ ಕಳೆದಾಕೆ. ಅದಕ್ಕೇ ಅವಳಿಗೆ ನಿಮ್ಮನ್ನು ಕಂಡರೆ ಏನೋ ಒಂಥರಾ ಹಿಂಜರಿತ.”

    ಇದನ್ನು ಕೇಳಿ ಬಾಸ್ ತುಂಬಾ ಖುಷಿಪಟ್ಟ. “ರಿಯಲೀ? ನಂಗೆ ಜಾನಪದ ಹಾಡುಗಳೆಂದರೆ ತುಂಬಾ ಇಷ್ಟ. ಹಾಗಾದ್ರೆ ನಿಮ್ಮ ತಾಯಿಗೆ ಜಾನಪದ ಹಾಡು, ಕುಣಿತಗಳೆಲ್ಲ ಗೊತ್ತಿರಬೆಕಲ್ಲ?” ಎಂದು ಹೇಳುತ್ತಾ ಆಕೆಯನ್ನೇ ದಿಟ್ಟಿಸಿ ನೋಡತೊಡಗಿದ.

    “ಅಮ್ಮ, ಸಾಹೇಬರಿಗೆ ನೀನು ಒಂದು ಹಾಡು ಹಾಡಬೇಕಂತೆ. ಯಾವುದೋ ಒಂದು ಹಾಡು ಸಾಕು. ಹೇಗೂ ನಿಂಗೆ ಬಹಳಷ್ಟು ಹಾಡುಗಳು ಗೊತ್ತಿವೆಯಲ್ಲಾ?”

    ಅವನ ತಾಯಿ ವಿನಮ್ರಳಾಗಿ ಉತ್ತರಿಸಿದಳು, “ಹೇಗೆ ಹಾಡಲಿ ಮಗಾ? ಯಾವತ್ತಾದರೂ ನಾನು ಹಾಡಿದ್ದಿದೆಯೇ?”

    “ಅರೆ, ಅಮ್ಮಾ! ಅತಿಥಿಗಳು ಕೇಳಿದಾಗ ಇಲ್ಲ ಅನ್ನೋಕಾಗುತ್ಯೆ? ಸಾಹೇಬರು ತುಂಬಾ ಖುಷಿಯಲ್ಲಿದ್ದಾರೆ. ನೀನು ಹಾಡದೆ ಹೋದರೆ ಅವರು ಬೇಜಾರು ಮಾಡ್ಕೊತಾರೆ.”

    “ಯಾವ ಹಾಡು ಹಾಡಲಿ ಮಗಾ? ನಂಗ್ಯಾವದು ಗೊತ್ತಿದೆ?”

    “ಅರೆ! ಯಾವುದೋ ಒಂದು ಒಳ್ಳೆ ಜಾನಪದ ಗೀತೆ.”

    ಅಷ್ಟು ಹೇಳುತ್ತಿದ್ದಂತೆ ಇಂಡಿಯನ್ ಆಫೀಸಿಯಲ್ಸ್ ಮತ್ತವರ ಹೆಂಡಿರು ಚಪ್ಪಾಳೆ ತಟ್ಟತೊಡಗಿದರು. ಅಮ್ಮ ದೀನಳಾಗಿ ಮಗನನ್ನೊಮ್ಮೆ ಸೊಸೆಯನ್ನೊಮ್ಮೆ ನೋಡತೊಡಗಿದಳು.

    ಈ ಮಧ್ಯೆ ಅವಳ ಮಗ ಗಂಭೀರವಾಗಿ ಆಜ್ಞಾಪಿಸಿದ, “ಅಮ್ಮ!”

    ಮಗ ಅಪ್ಪಣೆ ಕೊಟ್ಟ ಮೇಲೆ ವಾದ ಮಾಡುವ ಪ್ರಶ್ನೆಯೇ ಇರಲಿಲ್ಲ. ಆಕೆ ಕೆಳಗೆ ಕೂತು ತನ್ನ ಬಡುಕಲು ದ್ವನಿಯಲ್ಲಿ ನಡುಗುತ್ತಾ ಯಾವುದೋ ಒಂದು ಮದುವೆ ಹಾಡನ್ನು ಹಾಡತೊಡಗಿದಳು.

    ಅದು ತುಂಬಾ ತಮಾಷೆಯಾಗಿದ್ದುದರಿಂದ ಇಂಡಿಯನ್ ಹೆಣ್ಣುಮಕ್ಕಳು ಬಿದ್ದುಬಿದ್ದು ನಗತೊಡಗಿದರು. ಮೂರು ಸಾಲು ಹಾಡಿರಲಿಕ್ಕಿಲ್ಲ ಅಮ್ಮ ಹಾಡುವದನ್ನು ನಿಲ್ಲಿಸಿಬಿಟ್ಟಳು. ವರಾಂಡ ಚಪ್ಪಾಳೆಯ ಸದ್ದಿನಿಂದ ಪ್ರತಿದ್ವನಿಸತೊಡಗಿತು. ಸಾಹೇಬರು ಚಪ್ಪಾಳೆಯ ಮೇಲೆ ಚಪ್ಪಾಳೆ ಹೊಡೆಯತೊಡಗಿದರು. ಶಾಮನಾಥನ ಕಸಿವಿಸಿ ಈಗ ಹೆಮ್ಮೆಯಾಗಿ ತಿರುಗಿತು. ಅವನ ತಾಯಿ ಪಾರ್ಟಿಗೆ ಒಂದು ಹೊಸ ಕಳೆಯನ್ನು ತಂದುಕೊಟ್ಟಿದ್ದಳು.

    ಚಪ್ಪಾಳೆಯ ಸದ್ದು ಕಡಿಮೆಯಾದ ಮೇಲೆ ಬಾಸ್ ಕೇಳಿದ “ನಿಮ್ಮ ಪಂಜಾಬಿನ ಹಳ್ಳಿಗಳಲ್ಲಿ ಯಾವ್ಯಾವ ಕರಕುಶಲಕಲೆಗಳಿವೆ?”

    ಶಾಮನಾಥ ಸಂತೋಷದಿಂದ ತೊನೆಯುತ್ತಾ “ಓ, ತುಂಬಾ ಇವೆ ಸಾಹೇಬರೇ! ಎಲ್ಲಾ ಒಂದೊಂದು ಸೆಟ್‍ನ್ನು ನಿಮಗೆ ಉಡುಗೊರೆಯಾಗಿ ಕೊಡುತ್ತೇನೆ. ಅವನ್ನು ನೋಡಿ ನೀವು ಖಂಡಿತ ಇಷ್ಟಪಡುತ್ತೀರಿ.”

    ಆದರೆ ಸಾಹೇಬರು ತಲೆ ಅಲ್ಲಾಡಿಸುತ್ತಾ ಹೇಳಿದರು, “ಬೇಡ, ಅಂಗಡಿಯಿಂದ ನಂಗೇನೂ ಬೇಡ. ಮನೆಯಲ್ಲಿ ಮಾಡಿದ ವಸ್ತುಗಳು ಬೇಕು. ಅಂದಹಾಗೆ ಪಂಜಾಬಿ ಮನೆಗಳಲ್ಲಿ ಯಾವ್ಯಾವ ಕರಕುಶಲಕಲೆಗಳನ್ನು ಮಾಡ್ತಾರೆ? ಇಲ್ಲಿ ಹೆಣ್ಮಕ್ಕಳು ಏನೇನು ಹೆಣಿತಾರೆ?”

    ಶಾಮನಾಥ ಸ್ವಲ್ಪ ಯೋಚಿಸಿ ಹೇಳಿದ “ಹುಡುಗೀರು ಗೊಂಬೆಗಳನ್ನು ಮಾಡ್ತಾರೆ. ಹೆಂಗಸರು ಪುಲ್ಕಾರಿಗಳನ್ನು ಮಾಡ್ತಾರೆ.”

    “ಪುಲ್ಕಾರಿ? ಹಾಗಂದರೇನು?”

    ಪುಲ್ಕಾರಿ ಎಂದರೇನೆಂದು ಸರಿಯಾಗಿ ವಿವರಿಸಲು ಬಾರದೆ ಶಾಮನಾಥನು ತನ್ನ ತಾಯಿಯನ್ನು ಕೇಳಿದ, “ಮನೇಲಿ ಯಾವುದಾದರೂ ಹಳೇ ಪುಲ್ಕಾರಿ ಇದೆಯಾ?”

    ಆಕೆ ಒಳಗೆ ಹೋಗಿ ಒಂದು ಹಳೆಯ ಪುಲ್ಕಾರಿ ತೆಗೆದುಕೊಂಡು ಬಂದಳು.

    ಸಾಹೇಬರು ತುಂಬಾ ಆಸಕ್ತಿಯಿಂದ ಬಣ್ಣಬಣ್ಣದ ಕಸೂತಿ ಹಾಕಿದ ಆ ಬಟ್ಟೆಯನ್ನು ಪರೀಕ್ಷಿಸಿದರು. ಅದು ಹಳೆಯ ಬಟ್ಟೆಯಾಗಿದ್ದು ಅಲ್ಲಲ್ಲಿ ದಾರ ಕಿತ್ತಿತ್ತು. ಇನ್ನು ಕೆಲವು ಕಡೆ ಪಿಸಿದಿತ್ತು. ಇದನ್ನು ಗಮನಿಸಿದ ಶಾಮನಾಥನು ಹೇಳಿದ “ಸಾಹೇಬರೇ, ಇದು ಹರಿದುಹೋಗಿದೆ. ನಿಮಗೆ ಹೊಸಾದು ಮಾಡಿಸಿಕೊಡ್ತೇನೆ. ನನ್ನ ತಾಯಿ ಮಾಡಿಕೊಡ್ತಾಳೆ. ಅಮ್ಮ, ಸಾಹೇಬರಿಗೆ ನಿನ್ನ ಪುಲ್ಕಾರಿ ತುಂಬಾ ಇಷ್ಟವಾಗಿದೆ. ನೀನು ಅವರಿಗೆ ಇಂಥದೊಂದು ಮಾಡಿಕೊಡ್ತಿಯಲ್ವಾ?”

    ಅವನ ತಾಯಿ ಮೌನವಾಗಿದ್ದಳು. ನಂತರ ಮೆಲ್ಲಗೆ ಅಳಕುತ್ತಾ ಹೇಳಿದಳು “ಈಗ ಎಷ್ಟೂ ಅಂತಾ ನೋಡೋಕಾಗುತ್ತೆ ಮಗಾ? ನಂಗೆ ಬೇರೆ ವಯಸ್ಸಾಗಿದೆ. ಮುದಿ ಕಂಗಳು ಹೇಗೆ ತಾನೆ ನೋಡಬಲ್ಲವು?”

    ಆದರೆ ಅವನ ತಾಯಿಯನ್ನು ಅರ್ಧದಲ್ಲಿ ತಡೆಯುತ್ತಾ ಶಾಮನಾಥ ಸಾಹೇಬರಿಗೆ ಹೇಳಿದ “ಆಕೆ ಖಂಡಿತ ನಿಮಗೊಂದು ಮಾಡಿಕೊಡ್ತಾಳೆ. ಯೋಚ್ನೆ ಮಾಡಬೇಡಿ. ನೀವದನ್ನು ನೋಡಿ ಖುಷಿಪಡೋದರಲ್ಲಿ ಎರಡು ಮಾತಿಲ್ಲ.”

    ಸಾಹೇಬರು ತಲೆದೂಗುತ್ತಾ ಅವನಿಗೊಂದು ಥ್ಯಾಂಕ್ಸ್ ಹೇಳಿ ಸಣ್ಣದಾಗಿ ಓಲಾಡುತ್ತ ಡೈನಿಂಗ್ ಟೇಬಲ್‍ನತ್ತ ನಡೆದರು. ಬೇರೆ ಅತಿಥಿಗಳೆಲ್ಲಾ ಅವರನ್ನು ಹಿಂಬಾಲಿಸಿದರು.

    ಎಲ್ಲರೂ ಅಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮುದುಕಿ ನಿಧಾನವಾಗಿ ಎದ್ದು ಅವರ ಕಣ್ಣಿಗೆ ಕಾಣಿಸದಂತೆ ತನ್ನ ಕೋಣೆಯೊಳಗೆ ಹೋದಳು.

    ಆಕೆ ಕೋಣೆಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಅವಳ ಕಂಗಳು ತುಂಬಿ ಬಂದವು. ಅವನ್ನು ತನ್ನ ದುಪ್ಪಟ್ಟಾದಿಂದ ಪದೆಪದೆ ಒರೆಸಿಕೊಂಡಳಾದರೂ ಮತ್ತೆ ಮತ್ತೆ ತುಂಬಿ ಬಂದವು. ತನ್ನನ್ನು ಸಮಾಧಾನಪಡಿಸಿಕೊಳ್ಳುತ್ತಾ ತನ್ನ ಮಗನಿಗೆ ದೀರ್ಘಾಯಸ್ಸು ಸಿಗಲಿ ಎಂದು ಆ ದೇವರಲ್ಲಿ ಕಣ್ಣು ಮುಚ್ಚಿ ಪ್ರಾರ್ಥಿಸಿದಳು. ಆದರೆ ಅವಳ ಕಣ್ಣೀರು ಮಾನ್ಸೂನ್ ಮಳೆಯಂತೆ ಒಂದೇ ಸಮನೆ ತೊಟ್ಟಿಕ್ಕತ್ತಿದ್ದವು.

    ಅದು ಮಧ್ಯರಾತ್ರಿಯಾಗಿರಬಹುದು. ಅತಿಥಿಗಳೆಲ್ಲಾ ಊಟಮಾಡಿ ಒಬ್ಬೊಬ್ಬರಾಗಿ ಜಾಗ ಖಾಲಿಮಾಡಿದರು. ಅಮ್ಮ ಏನನ್ನೋ ನೋಡುತ್ತಾ ಗೋಡೆಗೊರಗಿಕೊಂಡು ಕುಳಿತಿದ್ದಳು. ಬೆಳಿಗ್ಗೆಯಿಂದ ಮನೆಯಲ್ಲಿದ್ದ ಉದ್ವಿಗ್ನತೆ ಈಗ ಮಾಯವಾಗಿತ್ತು. ಸುತ್ತಮುತ್ತಲಿನ ಮನೆಗಳಿಗೆ ಆವರಿಸಿದ್ದ ನೀರವತೆ ಈಗ ಶಾಮನಾಥನ ಮನೆಗೂ ಆವರಿಸಿತ್ತು. ಇದ್ದಕ್ಕಿದ್ದಂತೆ ಯಾರೋ ಅವಳ ಬಾಗಿಲನ್ನು ಜೋರಾಗಿ ತಟ್ಟಿದರು.

    “ಅಮ್ಮ, ಬಾಗಿಲು ತೆಗಿ!”

    ಅವಳ ಎದೆ ಧಸಕ್ಕೆಂದಿತು. ಅವಸರವಸರವಾಗಿ ಎದ್ದು ನಿಂತಳು. ಇನ್ನೊಂದು ತಪ್ಪೇನಾದರು ಮಾಡಿದ್ದೇನೆಯೇ? ಯಾಕಾದರೂ ನಿದ್ದೆ ಮಾಡಿದೆನೋ? ಯಾಕಾದರೂ ತೂಕಡಿಕೆ ಬಂತೋ? ಎಂದು ಇನ್ನಿಲ್ಲದಂತೆ ಅವಳು ತನ್ನನ್ನು ತಾನೇ ಶಪಿಸಿಕೊಂಡಳು.

    ಆಕೆಯ ಮಗ ಇನ್ನೂ ಅವಳನ್ನು ಕ್ಷಮಿಸಿಲ್ಲವೆ? ನಡುಗುವ ಕೈಗಳಿಂದ ಬಾಗಿಲನ್ನು ತೆಗೆದಳು.

    ಬಾಗಿಲನ್ನು ತೆಗೆಯುತ್ತಿದ್ದಂತೆ ಶಾಮನಾಥ ಮುಂದೆ ಬಂದು ಅವಳನ್ನು ತಬ್ಬಿಕೊಂಡ.

    “ಓ, ಅಮ್ಮ! ಈ ರಾತ್ರಿ ನೀನು ಅದ್ಭುತವಾದ ಪವಾಡವನ್ನೇ ಮಾಡಿಬಿಟ್ಟೆ. ಸಾಹೇಬರು ತುಂಬಾ ಸಂತೋಷಪಟ್ಟರು. ಐ ಯಾಮ್ ಹ್ಯಾಪಿ. ಐ ಕಾಂಟ್ ಟೆಲ್ ಯೂ. ಓ, ಅಮ್ಮಿ! ಅಮ್ಮಿ!”

    ಅವಳ ಸಣಕಲು ದೇಹ ಅವನ ಅಪ್ಪುಗೆಯಲ್ಲಿ ಮುದುಡಿ ಕೂತಿತ್ತು. ಅವಳ ಕಂಗಳಲ್ಲಿ ಮತ್ತೆ ನೀರು ಚಿಮ್ಮಿತು. ಅವನ್ನು ಒರೆಸಿಕೊಳ್ಳುತ್ತಾ “ಮಗಾ, ನನ್ನನ್ನು ಹರಿದ್ವಾರಕ್ಕೆ ಕಳಿಸಿಬಿಡು. ನಾನು ನಿಂಗೆ ತುಂಬಾ ದಿವಸದಿಂದ ಹೇಳ್ತಾನೇ ಇದ್ದೇನೆ.”

    ತಕ್ಷಣ ಶಾಮನಾಥನು ತನ್ನ ಅಪ್ಪುಗೆಯನ್ನು ಸಡಿಲಗೊಳಿಸಿ ಹುಬ್ಬುಗಂಟಿಕ್ಕುತ್ತಾ ಕೇಳಿದ “ಏನಮ್ಮಾ? ಏನು ಹೇಳಿದೆ ನೀನು? ಇದ್ಯಾವ ರಾಗ ಶುರು ಮಾಡಿದಿ ಈಗ?”

    ಶಾಮನಾಥನ ಕೋಪ ಹೆಚ್ಚುತ್ತಾ ಹೋಯಿತು. “ಏನಮ್ಮಾ ನನ್ನ ಮರ್ಯಾದೆ ಕಳಿಬೇಕಂತ ಮಾಡಿಯಾ? ಜನಾ ಎಲ್ಲಾ ಏನು ಅಂತಾರೆ? ಮಗ ಅವರಮ್ಮನ್ನ ತನ್ನ ಜೊತೆ ಇಟ್ಕೊಳ್ಳಲಾರದೆ ಹರಿದ್ವಾರಕ್ಕೆ ಕಳಿಸಿದ್ದಾನೆ ನೋಡು ಅಂತಾ ಆಡಿಕೊಳ್ಳೊಲ್ಲಾ?”

    “ಇಲ್ಲ ಮಗಾ! ನೀನೀಗ ನಿನ್ನ ಹೆಂಡತಿ ಜೊತೆ ಹ್ಯಾಗೆ ಬೇಕೋ ಹಾಗಿರು. ನಾನು ಚನ್ನಾಗಿ ಉಂಡಿದ್ದೇನೆ, ಉಟ್ಟಿದ್ದೇನೆ. ನಂದು ಎಲ್ಲಾ ಮುಗಿದಿದೆ. ಇಲ್ಲಿ ಇದ್ದು ಏನು ತಾನೆ ಮಾಡ್ಲಿ? ಏನೋ ಇರೋ ಇನ್ನು ಸ್ವಲ್ಪ ದಿನ ದೇವರ ಹೆಸರು ಹೇಳಿಕೋತ ಕಾಲ ಕಳಿತೇನಿ. ನನ್ನ ಹರಿದ್ವಾರಕ್ಕೆ ಕಳಿಸಿಬಿಡು!”

    “ನೀನು ಹೋದರೆ ಪುಲ್ಕಾರಿ ಹೆಣೆದುಕೊಡೋರು ಯಾರು? ನಿನ್ನ ಮುಂದೆನೇ ಸಾಹೇಬರಿಗೆ ಪುಲ್ಕಾರಿ ಹೆಣಿಸಿಕೊಡ್ತೇನಿ ಅಂತಾ ಹೇಳಿದ್ದೇನೆ.”

    “ಪುಲ್ಕಾರಿ ಹೆಣೆದು ಕೊಡುವಷ್ಟು ನನ್ನ ಕಣ್ಣು ಕಾಣಿಸೋದಿಲ್ಲ ಮಗಾ. ಬೇರೆ ಎಲ್ಲಾದ್ರೂ ಹೆಣಿಸಿಕೊಡು. ಅಥವಾ ಒಂದು ರೆಡಿಮೇಡೇ ತಂದುಕೊಡು.”

    “ಅಮ್ಮಾ, ನನ್ನ ಕೆಳಗಿಳಿಸಬೇಕಂತ ಮಾಡಿಯೇನು? ನನ್ನ ಭವಿಷ್ಯದ ಏಳಿಗೆಯನ್ನು ಹಾಳು ಮಾಡಬೇಕಂತ ಅನ್ಕೊಂಡಿದ್ದೀಯಾ? ನಿಂಗೊತ್ತಿಲ್ವಾ ಸಾಹೇಬರನ್ನು ಖುಶಿಗೊಳಿಸಿದರೆ ನಂಗೆ ಪ್ರಮೋಶನ್ ಸಿಗುತ್ತೆ ಅಂತಾ?”

    ಅವನ ತಾಯಿ ಸ್ವಲ್ಪ ಹೊತ್ತು ಸುಮ್ಮನಿದ್ದು ಬಳಿಕ ಮಗನನ್ನು ನೋಡುತ್ತಾ ಕೇಳಿದಳು “ನಿಂಗೆ ಪ್ರಮೋಶನ್ ಸಿಗುತ್ತಾ? ಸಾಹೇಬರು ನಿಂಗೆ ಪ್ರಮೋಶನ್ ಕೊಡ್ತಾರಾ? ಅವರು ಹಾಗಂತ ಹೆಳಿದ್ದಾರೆಯೇ?”

    “ಹಾಗಂತ ಏನೂ ಹೇಳಿಲ್ಲ. ಆದರೆ ಅವರು ಎಷ್ಟು ಖುಷಿಯಾಗಿದ್ದರು ಅಂತಾ ನೀನೇ ನೋಡಲಿಲ್ವಾ? ಅವರು ಹೇಳ್ತಾ ಇದ್ದರು ನೀನು ಪುಲ್ಕಾರಿ ಹೆಣೆಯೋಕೆ ಶುರು ಮಾಡಿದಾಗ ಅದನ್ನು ಹೇಗೆ ಮಾಡತಿಯಾ ಅಂತ ನೋಡೋಕೆ ಒಂದು ದಿವಸ ಬರ್ತಾರಂತೆ. ನಾವು ಸಾಹೇಬರನ್ನು ಸಂತೋಷಪಡಿಸಿದರೆ ನಂಗೆ ಇದಕ್ಕಿಂತ ಒಳ್ಳೆ ಕೆಲಸ ಸಿಗ್ತದಮ್ಮಾ. ನಾನು ಸೀನಿಯರ್ ಎಗ್ಜಿಕ್ಯುಟಿವ್ ಆಗಬಹುದು.”

    ನಿಧಾನವಾಗಿ ಸುಕ್ಕುಗಟ್ಟಿದ ಅವನ ತಾಯಿಯ ಮುಖ ಕಾಂತಿಯಿಂದ ಪ್ರಕಾಶಿಸತೊಡಗಿತು. ಕಂಗಳು ಮಿಂಚಿನಿಂದ ಹೊಳೆಯತೊಡಗಿದವು.

    “ಹಾಗಾದ್ರೆ ನಿಂಗೆ ಪ್ರಮೋಷನ್ ಸಿಗುತ್ತಾ ಮಗಾ?”

    “ಹಾಗೆ ಸಿಕ್ಕಬಿಡುತ್ತಾ ಅಮ್ಮಾ? ನಾನು ಸಾಹೇಬರನ್ನು ಖುಷಿಪಡಿಸಿದರೆ ಮಾತ್ರ ಅವರು ಏನಾದರೂ ಮಾಡ್ತಾರೆ. ಇಲ್ಲಾಂದ್ರೆ ಅವರನ್ನು ಖುಷಿಪಡಿಸಿ ಪ್ರಮೋಷನ್ ತಗೊಳ್ಳೋ ಜನರಿಗೇನೂ ಕೊರತೆಯಿಲ್ಲ.”

    “ಹಾಗಾದ್ರೆ ನಾನು ಮಾಡ್ತೀನಿ ಮಗಾ. ಹೇಗೋ ಬೇಕೋ ಹಾಗೆ ಮಾಡ್ತೀನಿ.”

    ಆಕೆ ಮನಸ್ಸಲ್ಲಿ ತನ್ನ ಮಗನ ಉಜ್ವಲ ಭವಿಷ್ಯಕ್ಕಾಗಿ ಉತ್ಕಟವಾಗಿ ಹಾರೈಸಿದಳು. ಶಾಮನಾಥನು ತನ್ನ ತಾಯಿಗೆ “ಈಗ ಮಲಗು” ಎಂದು ಹೇಳಿ ಕೊಂಚ ಮುಗ್ಗರಿಸುತ್ತಾ ತನ್ನ ಕೋಣೆಯತ್ತ ನಡೆದುಬಂದ.



    ಮೂಲ: ಭೀಷ್ಮ ಸಹಾನಿ

    ಕನ್ನಡಕ್ಕೆ: ಉದಯ್ ಇಟಗಿ

    ಈ ಕಥೆ ಫೆಬ್ರುವರಿ 24, 2013ರ “ಉದಯವಾಣಿ” ಯಲ್ಲಿ ಪ್ರಕಟವಾಗಿದೆ.
    http://www.udayavani.com/news/255625L15-ಬ-ಳ--ಸ-ಹ-ಬನ-ಗ---ದ--ಭ-ಜನಕ-ಟ.html


























    ಈ ಸಂಜೆ ಪ್ರಿತಿಯೊಡನೆ

  • ಭಾನುವಾರ, ಅಕ್ಟೋಬರ್ 14, 2012
  • ಬಿಸಿಲ ಹನಿ
  • ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ - ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್‍ನ ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ಆ ಗಡಿಯಾರವನ್ನು ನೋಡುತ್ತಾ ಸಮಯವನ್ನು ಧೃಡಪಡಿಸಿಕೊಂಡ. ಅವನ ಎದೆ ಒಂದೇಸಮನೇ ಜೋರಾಗಿ ಹೊಡೆದುಕೊಳ್ಳುತ್ತಿತ್ತು; ಅದೆಷ್ಟು ಜೋರಾಗಿ ಹೊಡೆದುಕೊಳ್ಳುತ್ತಿತ್ತೆಂದರೆ ಆ ಸದ್ದನ್ನು ಕೇಳಿ ಅವನೇ ಭಯಗೊಂಡನಲ್ಲದೆ ಅವನದನ್ನು ತಹಬದಿಗೆ ತರಲು ಇನ್ನಿಲ್ಲದ ಪ್ರಯತ್ನಮಾಡಿ ಸೋಲುತ್ತಿದ್ದ.

    ಇನ್ನಾರೇ ಆರು ನಿಮಿಷ! ಆ ಆರು ನಿಮಿಷಗಳಲ್ಲಿ ಆತ ಅವಳನ್ನು ಭೇಟಿಯಾಗಲಿದ್ದ; ಅವಳೆಂದರೆ ಹದಿಮೂರು ತಿಂಗಳುಗಳಿಂದ ಅವನ ಜೀವನದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಾಕೆ. ಅವಳನ್ನೆಂದೂ ನೋಡಿಲ್ಲ, ಮಾತನಾಡಿಸಿಲ್ಲ. ಆದರೆ ಅವಳು ಬರೆದ ಪತ್ರಗಳು ಮಾತ್ರ ಅವನೊಟ್ಟಿಗೆ ಬಹಳಷ್ಟು ಮಾತನಾಡಿವೆ. ಜೊತೆಗೆ ಸಾಕಷ್ಟು ಸ್ಫೂರ್ತಿ, ಬೆಂಬಲ ನೀಡಿವೆ.

    ಮಾಹಿತಿ ಕೇಂದ್ರಕ್ಕೆ ಅಂಟಿ ಕುಳಿತಂತೆ ಆತನಿಗೆ ಆ ಭಯಾನಕ ಯುದ್ಧದ ರಾತ್ರಿಯ ನೆನಪಾಯಿತು. ಪಕ್ಕದಲ್ಲೇ ಜನರು ಪ್ರಶ್ನೆಗಳ ಮಳೆ ಸುರಿಸುತ್ತಾ ಅಲ್ಲಿನ ಅಧಿಕಾರಿಗಳಿಗೆ ಮುಗಿಬಿದ್ದಿದ್ದರು.

    ಒಂದುಸಾರಿ ತಾನು ಯುದ್ಧ ಮಾಡುತ್ತಿದ್ದ ಕತ್ತಲ ರಾತ್ರಿಯಲ್ಲಿ ಅಚಾನಾಕಾಗಿ ತನ್ನ ಯುದ್ಧ ವಿಮಾನವೊಂದು ವೈರಿಗಳ ಪಾಳಯದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅದನ್ನಾತ ಬಿಡಿಸಿಕೊಳ್ಳಲು ಹೆಣಗಾಡುತ್ತಿರಬೇಕಾದರೆ ಅದನ್ನು ನೋಡಿ ವೈರಿ ವಿಮಾನ ಚಾಲಕ ಕುಹಕ ನಗೆ ನಕ್ಕಿದ್ದ. ಅಂದಿನಿಂದ ಅವನಿಗೆ ಆಗಾಗ ಭಯ ಆವರಿಸುತ್ತಿತ್ತು.

    ಈ ರೀತಿ ಅವನು ಆಗಾಗ ಭಯಗೊಳ್ಳುತ್ತಿದ್ದುದನ್ನು ತನ್ನದೊಂದು ಪತ್ರದಲ್ಲಿ ಆಕೆಯ ಹತ್ತಿರ ನಿವೇದಿಸಿಕೊಂಡಿದ್ದ. ಅದಕ್ಕವಳಿಂದ ಉತ್ತರವೂ ಬಂದಿತ್ತು. “ಹೌದು, ನೀನು ಭಯಗೊಂಡಿರುವೆ.....ಎಲ್ಲ ಯೋಧರಂತೆ! ಹೆದರದ ಯೋಧರು ಯಾರಿದ್ದಾರೆ? ಅಂಥಾ ಧೀರಾನುಧೀರ ರಾಜ ಡೇವಿಡ್‍ನೂ ಹೆದರಿರಲಿಲ್ಲವೆ? ಅದಕ್ಕೆ ಅಲ್ಲವೇ ಆತ ಇಪ್ಪತ್ಮೂರನೇ ಪ್ರಾರ್ಥನಾಗೀತೆ (ಕ್ರಿಶ್ಚಿಯನ್ನರ) ಯನ್ನು ಬರೆದಿದ್ದು? ಮುಂದಿನ ಬಾರಿ ನೀ ಭಯಗೊಂಡಾಗ ನಾ ನಿನಗಾಗಿ ಪಠಿಸುತ್ತಿರುವದನ್ನು ಕಲ್ಪಿಸಿಕೋ: “ಸಾವಿನ ನೆರಳಿನ ಕಣಿವೆಯಲ್ಲಿ ನಾ ನಡೆದಾಡುತ್ತಿದ್ದರೂ, ನನಗ್ಯಾವ ದುಷ್ಟಶಕ್ತಿಗಳ ಭಯವಿಲ್ಲ, ಏಕೆಂದರೆ ನೀ ನನ್ನ ಜೊತೆಯಲ್ಲಿರುವೆ.” ಅವನು ಅವಳ ದ್ವನಿಯನ್ನು ಕಲ್ಪಿಸಿಕೊಂಡು ಉತ್ತೇಜಿತನಾಗಿದ್ದ.
    ಇನ್ನು ಕೆಲವೇ ಕೆಲವು ಕ್ಷಣಗಳಲ್ಲಿ ಅವಳ ನೈಜ, ಮಧುರ ಧ್ವನಿಯನ್ನು ಕೇಳುವವನಿದ್ದಾನೆ.
    ಆರಕ್ಕೆ ನಾಲ್ಕು ನಿಮಿಷ ಮಾತ್ರ ಬಾಕಿಯಿದೆ. ಅವನು ಚುರುಕಾದ.

    ಅಸಂಖ್ಯ ತಾರಾಗಣಗಳ ಚಪ್ಪರದಡಿ ಜನ ಲಗುಬಗೆಯಿಂದ ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಅವರೆಲ್ಲರ ಮಧ್ಯದಿಂದ ಚೆಂದನೆಯ ಹುಡುಗಿಯೊಬ್ಬಳು ನಡೆದು ಬಂದು ಅವನ ಹತ್ತಿರದಲ್ಲೇ ಹಾದು ಹೋದಳು. ಲೆಫ್ಟಿನಂಟ್ ಬ್ಲಾಂಡ್ಫೋರ್ಡ್ ಕುಳಿತಲ್ಲೇ ಕದಲಿದ. ಅವಳು ತನ್ನ ಸೂಟಿನ ಮೇಲೆ ಕಡುಗೆಂಪು ಬಣ್ಣದ ಹೂ ಧರಿಸಿದ್ದಳು. ಆದರದು ಇವರಿಬ್ಬರ ಒಪ್ಪಂದದಂತೆ ಚಿಕ್ಕ ಕೆಂಗುಲಾಬಿಯಾಗಿರಲಿಲ್ಲ. ಮೇಲಾಗಿ ಈ ಹುಡುಗಿ ಹದಿನೆಂಟರ ತರುಣಿಯಾಗಿದ್ದಳು. ಆದರೆ ಹೋಲಿಸ್ ಮೀನಲ್ ಅವನಿಗೆ ಯಾವುದೇ ಮುಚ್ಚುಮರೆಯಿಲ್ಲದೆ ತನಗೆ ಮೂವತ್ತು ವರ್ಷ ಎಂದು ಹೇಳಿದ್ದಳು. “ಆದರೇನಂತೆ? ನನಗೀಗ ಮೂವತ್ತೆರೆಡು.” ಎಂದು ಬರೆದಿದ್ದ. ಆದರೆ ಅವನಿಗಾದುದು ಇಪ್ಪತ್ತೊಂಬೊತ್ತು ಮಾತ್ರ.

    ಅವನ ಮನಸ್ಸು ಆ ಪುಸ್ತಕಕ್ಕೆ ಮರಳಿತು. ಫ್ಲೋರಿಡಾದ ತರಬೇತಿ ಶಿಬಿರದಲ್ಲಿದ್ದವನಿಗೆ ಸೈನ್ಯದ ಗ್ರಂಥಾಲಯದಲ್ಲಿದ್ದ ಸಾವಿರಾರು ಪುಸ್ತಕಗಳಲ್ಲಿ ದೇವರೇ ಆ ಪುಸ್ತಕವನ್ನು ಇವನ ಕೈಗೆ ನೀಡಿದಂತಿತ್ತು. ಆ ಪುಸ್ತಕದ ಹೆಸರು “Of Human Bondage”. ಅದರ ತುಂಬಾ ಹೆಂಗಸೊಬ್ಬಳು ತನ್ನ ಕೈ ಬರಹದಲ್ಲಿ ಬರೆದಿಟ್ಟ ಕೆಲವು ಟಿಪ್ಪಣಿಗಳಿದ್ದವು. ಈ ರೀತಿ ಪುಸ್ತಕಗಳಲ್ಲಿ ಬರೆಯುವದನ್ನು ಅವನು ಎಂದೂ ಇಷ್ಟಪಡುತ್ತಿರಲಿಲ್ಲ. ಆದರೆ ಇಲ್ಲಿ ಬರೆದಿದ್ದ ಟಿಪ್ಪಣಿಗಳು ತುಂಬಾ ವಿಭಿನ್ನವಾಗಿದ್ದರಿಂದ ಅವನ ಮನಸ್ಸನ್ನು ಬಹುವಾಗಿ ತಾಕಿದ್ದವು. ಒಂದು ಹೆಂಗಸು ಇಷ್ಟು ಸೂಕ್ಷ್ಮವಾಗಿ ಮತ್ತು ಇಷ್ಟು ಚನ್ನಾಗಿ ಒಬ್ಬ ಗಂಡಸಿನ ಎದೆಯಾಳವನ್ನು ಅರ್ಥಮಾಡಿಕೊಳ್ಳಬಹುದೆಂಬ ಊಹೆ ಕೂಡ ಆತನಿಗಿರಲಿಲ್ಲ. ಆಕೆ ಹೋಲಿಸ್ ಮೀನಲ್; ಆಕೆಯ ಹೆಸರು ಪುಸ್ತಕ-ಫಲಕದ ಮೇಲೆ “ಹೋಲಿಸ್ ಮೀನಲ್” ಎಂದು ಬರೆದಿತ್ತು. ನ್ಯೂಯಾರ್ಕ್ ಟೆಲಿಫೋನ್ ಡೈರೆಕ್ಟರಿ ತೆಗೆದುಕೊಂಡು ಅವಳ ವಿಳಾಸವನ್ನು ಪತ್ತೆ ಹಚ್ಚಿ ಅಂದೇ ಅವಳಿಗೆ ಪತ್ರವನ್ನು ಬರೆದ. ಅವಳೂ ಉತ್ತರಿಸಿದಳು. ಅವನು ಕೆಲಸದ ನಿಮಿತ್ತ ಬೇರೆ ಬೇರೆ ಊರುಗಳಿಗೆ ಹೋಗಬೇಕಾಗಿ ಬಂತು. ಹೋದ ಕಡೆಗಳಿಂದಲೇ ಬಿಡುವು ಮಾಡಿಕೊಂಡು ಅವಳಿಗೆ ಪತ್ರ ಬರೆಯುತ್ತಿದ್ದ. ಅವಳೂ ಉತ್ತರಿಸುತ್ತಿದ್ದಳು. ಅವರಿಬ್ಬರ ಪತ್ರವ್ಯವಹಾರ ಮುಂದುವರಿಯಿತು.

    ಹದಿಮೂರು ತಿಂಗಳುಗಳು ಕಾಲ ಅವಳು ಶ್ರದ್ಧೆಯಿಂದ ಚಾಚೂ ತಪ್ಪದೇ ಉತ್ತರ ಬರೆದಳು ಮತ್ತು ಅವನಿಂದ ಯಾವುದೇ ಕಾಗದ ಬರದೇ ಹೋದಾಗ ಅವಳೇ ಬರೆಯುತ್ತಿದ್ದಳು. ನಿಧಾನವಾಗಿ ಲೆಫ್ಟಿನೆಂಟ್ ಬ್ಲಾಂಡ್ಫೋರ್ಡ್‍ನಿಗೆ ತಾನು ಅವಳನ್ನು ಪ್ರೀತಿಸುತ್ತಿದ್ದೇನೆ ಮತ್ತು ಅವಳೂ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಅನಿಸತೊಡಗಿತು.

    ಒಂದುಸಾರಿ ಅವಳಿಗೆ ಅವಳ ಫೋಟೋ ಕಳುಹಿಸಲು ಕೋರಿದ. ಆದರೆ ಆಕೆ ಆತನ ಕೋರಿಕೆಯನ್ನು ತಿರಸ್ಕರಿಸಿ ತನ್ನ ಪೋಟೋವನ್ನು ಕಳುಹಿಸಲಿಲ್ಲ. ಮೇಲಾಗಿ, ಹಾಗೆಲ್ಲಾ ಫೋಟೋ ಕಳಿಸುವದು ಅವಳಿಗೆ ಸರಿಯೆನಿಸಲಿಲ್ಲ. ಅದಕ್ಕವಳು ಕಾರಣವನ್ನೂ ಕೊಟ್ಟಿದ್ದಳು. “ನಿನ್ನ ಭಾವನೆಗಳು ನಿಜವೇ ಆಗಿದ್ದರೆ, ಪ್ರಾಮಾಣಿಕವಾಗಿದ್ದರೆ ನನ್ನ ರೂಪ ಮುಖ್ಯವಾಗುವುದಿಲ್ಲ. ನಾನೇನಾದರೂ ರೂಪವತಿಯಾಗಿದ್ದರೆ, ನೀ ನನ್ನ ರೂಪಕ್ಕೆ ಮರುಳಾಗಿ ಪ್ರೀತಿಸಿದೆ ಎಂಬ ಭಾವನೆ ನನ್ನನ್ನು ಕಾಡುತ್ತಿರುತ್ತದೆ ಮತ್ತು ಆ ರೀತಿಯ ಪ್ರೀತಿ ನನ್ನಲ್ಲಿ ಹೇಸಿಕೆ ಹುಟ್ಟಿಸುತ್ತದೆ. ಒಂದುವೇಳೆ ನಾನೇನಾದರೂ ಕುರೂಪಿಯಾಗಿದ್ದರೆ, (ಇರಬಹುದೆಂದು ನೀನು ನಂಬಬೇಕು) ನೀನು ಒಂಟಿಯಾಗಿರುವೆ ಮತ್ತು ಅದೇ ಕಾರಣಕ್ಕೆ ನಿನ್ನ ಒಂಟಿತನವನ್ನು ಹೋಗಲಾಡಿಸಲು ನನಗೆ ಪತ್ರ ಬರೆಯುತ್ತಿದ್ದೀಯಾ ಎಂದು ನಂಬಬೇಕಾಗುತ್ತದೆ. ಬೇಡ, ನನ್ನ ಪೋಟೋವನ್ನು ಕೇಳಬೇಡ. ನೀನೇ ನ್ಯೂಯಾರ್ಕಿಗೆ ಬಂದಾಗ ನನ್ನನ್ನು ನೋಡಿದ ಮೇಲೆ ಒಂದು ನಿರ್ಧಾರಕ್ಕೆ ಬರುವಿಯಂತೆ. ನೆನಪಿರಲಿ, ನನ್ನ ನೋಡಿದ ಮೇಲೆ ನಿನಗೆ ನನ್ನ ಸಂಬಂಧ ಮುಂದುವರಿಸಬೇಕೆನಿಸಿದರೆ ಮುಂದುವರಿಸು. ಇಲ್ಲವಾದರೆ ಇಲ್ಲ. ಆಯ್ಕೆ ನಿನಗೆ ಬಿಟ್ಟಿದ್ದು.”

    ಇದೀಗ ಹಸಿರು ಸೂಟು ಧರಿಸಿದ್ದ ಹುಡುಗಿಯೊಬ್ಬಳು ಅತಿ ವೇಗವಾಗಿ ಅವನ ಪಕ್ಕದಲ್ಲೇ ನಡೆದು ಹೋದಳು. ಆರಕ್ಕೆ ಒಂದು ನಿಮಿಷ ಮಾತ್ರ...............

    ಲೆಫ್ಟಿನೆಂಟ್ ಬ್ಲಾಂಡ್ಫೋರ್ಡ್‍ನ ಎದೆ ಆತನ ವಿಮಾನದ ಎತ್ತರಕ್ಕೆ ಜಿಗಿಯಿತು.

    ಒಬ್ಬಳು ನವತರುಣಿ ಅವನ ಬಳಿಗೆ ನಡೆದು ಬಂದಳು. ಅವಳು ನೀಳ ಮತ್ತು ತೆಳ್ಳಗಿನ ಶರೀರದವಳಾಗಿದ್ದು ಆಕರ್ಷಕ ಮೈಕಟ್ಟನ್ನು ಹೊಂದಿದ್ದಳು. ಅವಳ ಹೊಂಬಣ್ಣದ ಕೂದಲು ಸುರುಳಿ ಸುರುಳುಯಾಗಿ ಸುತ್ತಿಕೊಂಡು ಅವಳ ಕೋಮಲ ಕಿವಿಗೆ ಮುತ್ತನ್ನಿಡುತ್ತಿದ್ದವು. ಅವಳ ಕಂಗಳು ನೀಲಿ ಹೂಗಳಂತಿದ್ದವು. ಅವಳ ತುಟಿ ಮತ್ತು ಗಲ್ಲ ಮೃದು ನಿಲುವನ್ನು ತಳೆದಿದ್ದವು. ಅವಳು ತನ್ನ ತಿಳಿ ಹಸುರಿನ ಉಡುಗೆಯಲ್ಲಿ ವಸಂತ ಋತುವೇ ಮೈವೆತ್ತಂತೆ ಬಂದಳು. ಅವನು ಅವಳೆಡೆಗೆ ನಡೆದುಬಂದ. ಆದರೆ ಅವಳು ಗುಲಾಬಿಯನ್ನು ತೊಟ್ಟಿಲ್ಲವೆಂಬುದನ್ನು ಆತ ಗಮನಿಸಲಿಲ್ಲ.

    ಆತ ಅವಳನ್ನು ಸಮೀಪಿಸುತ್ತಿದ್ದಂತೆ ಅವಳ ತುಟಿಗಳ ಮೇಲೆ ಸಣ್ಣದೊಂದು ತುಂಟ ನಗು ಸುಳಿದು ಮಾಯವಾಯಿತು.

     “ನೀವು ನನ್ನ ಹಾದಿಯಲ್ಲಿದ್ದೀರಾ, ಲೆಫ್ಟಿನೆಂಟ್?” ಎಂದೇನೋ ಗುನುಗುನಿಸಿದಳು. ತನಗರಿವಿಲ್ಲದೆಯೇ, ಆತ ಒಂದು ಹೆಜ್ಜೆ ಅವಳಿಗೆ ಹತ್ತಿರವಾದ. ಅಲ್ಲಿ ಹೋಲಿಸ್ ಮೀನಲ್‍ಳನ್ನು ನೋಡಿದ. ಆಕೆ ಸರಿಯಾಗಿ ಆ ಹುಡುಗಿಯ ಹಿಂದೆಯೇ ನಿಂತಿದ್ದಳು. ಸುಮಾರು ನಲವತ್ತರ ಹತ್ತಿರವಿರಬಹುದಾದ ಹೆಂಗಸು ಆಕೆ. ಅವಳು ತನ್ನ ಮಾಸಲು ಕೂದಲನ್ನು ತಾನು ಧರಿಸಿದ್ದ ಟೋಪಿಯೊಳಗೆ ಅಡಗಿಸಿಟ್ಟಿದ್ದಳು. ನೋಡಲು ಸ್ವಲ್ಪ ಧಡೂತಿಯಾಗಿದ್ದು ತನ್ನ ದಪ್ಪನೆಯ ಕಾಲುಗಳನ್ನು ಷೂನೊಳಗೆ ಬಲವಂತವಾಗಿ ತುರುಕಿದಂತೆ ಕಾಣುತ್ತಿತ್ತು. ಆದರೆ ಅವಳು ತನ್ನ ಸುಕ್ಕುಗಟ್ಟಿದ್ದ ಕಂದುಬಣ್ಣದ ಮೇಲಂಗಿ(ಸೂಟಿನಲ್ಲಿ)ಯಲ್ಲಿ ಕೆಂಗುಲಾಬಿ ಧರಿಸಿದ್ದಳು.

    ತಿಳಿ ಹಸಿರು ಬಣ್ಣದ ಉಡುಗೆ (ಸೂಟು) ತೊಟ್ಟಿದ್ದ ಹುಡುಗಿ ಮೆಲ್ಲನೆ ಅಲ್ಲಿಂದ ಮಾಯವಾದಳು.

    ಬ್ಲಾಂಡ್ಫೋರ್ಡ್ ಇಕ್ಕಟ್ಟಿಗೆ ಸಿಲುಕಿದ. ಅಲ್ಲಿಂದ ಮಾಯವಾದ ಹುಡುಗಿಯನ್ನು ಹಿಂಬಾಲಿಸಬೇಕೋ? ಅಥವಾ ತನ್ನ ಕಣ್ಮುಂದೆ ಇರುವ ಹೋಲಿಸ್ ಮೀನಲ್‍ಳಿಗೆ ಮನಸೋಲಬೇಕೋ? ಒಂದು ಕ್ಷಣ ಗಲಿಬಿಲಿಗೊಂಡ. ಆದರೆ ಪ್ರತಿಬಾರಿ ಅವನನ್ನು ಹುರಿದುಂಬಿಸಿದ, ಅವನಲ್ಲಿ ಸ್ಫೂರ್ತಿಯನ್ನು ತುಂಬಿದ ಹಾಗೂ ಇನ್ಮುಂದೆ ಜೀವನ ಪೂರ್ತಿ ತನ್ನ ಜೊತೆಯಲ್ಲೇ ಇರುವ ಹೋಲಿಸ್ ಮೀನಲ್‍ಳ ಚೈತನ್ಯಕ್ಕೆ ಅವನ ಮನಸ್ಸು ಸೋತಿತ್ತು. ಇದೀಗ ಅವರಿಬ್ಬರು ಮುಖಾಮುಖಿಯಾಗಿ ನಿಂತಿದ್ದರು. ಅವಳಿಗೆ ದುಂಡುದುಂಡಾದ ಮಾಸಲು ಮುಖವಿತ್ತು. ಆದರೆ ಅದರಲ್ಲಿ ಸ್ಥಿಗ್ನಸೌಂದರ್ಯ ಮನೆಮಾಡಿತ್ತು. ಅವಳ ಕಂಗಳು ಬೆಚ್ಚನೆಯ ಪ್ರೀತಿಯನ್ನು ಹೊರಸೂಸುತ್ತಿದ್ದವು.

    ಲೆಫ್ಟಿನೆಂಟ್ ಬ್ಲಾಂಡ್ಫೋರ್ಡ್ ಹಿಂದೆ ಸರಿಯಲಿಲ್ಲ. ಆತನ ಕೈ ಬೆರಳುಗಳು “Of Human Bondage” ಪುಸ್ತಕವನ್ನು ದೃಢವಾಗಿ ಹಿಡಿದಿದ್ದವು. ಅದು ಆಕೆಗೆ ಈತನನ್ನು ಗುರುತುಹಿಡಿಯಲು ಸಹಕಾರಿಯಾಗಿತ್ತು. ಪ್ರಾಯಶಃ ಇದು ಪ್ರೀತಿಯಲ್ಲ, ಅದಕ್ಕಿಂತಲೂ ಮಿಗಿಲಾದ, ಅಮೂಲ್ಯವಾದ ಜೀವಮಾನವಿಡಿ ಒಬ್ಬರಿಗೊಬ್ಬರು ಋಣಿಯಾಗಿರಬೇಕಾದ ಒಂದು ಅಪೂರ್ವ ಸ್ನೇಹ ಸಂಬಂಧ.

    ಆತ ತನ್ನ ಎದೆ ಸೆಟಿಸಿ ಆಕೆಗೆ ಒಂದು ಸೆಲ್ಯೂಟ್ ಹೇಳಿದ. ತನ್ನ ಕೈಯಲ್ಲಿದ್ದ ಪುಸ್ತಕವನ್ನು ಅವಳೆಡೆಗೆ ಚಾಚುತ್ತಾ ತನಗೆ ನಿರಾಶೆಯಾದರೂ ಹೇಳಿದ: “ನಾನು ಲೆಫ್ಟಿನೆಂಟ್ ಜಾನ್ ಬ್ಲಾಂಡ್ಫೋರ್ಡ್ ಮತ್ತು ನೀವು...... ? ನೀವು....... ಮಿಸ್ ಮೀನಲ್ ಅಲ್ಲವೆ? ನಿಮ್ಮನ್ನು ಭೇಟಿಯಾದದ್ದು ಬಹಳ ಸಂತೋಷವಾಯಿತು..... ನಿಮ್ಮದೇನೂ ಅಭ್ಯಂತರವಿರದಿದ್ದರೆ ನನ್ನ ಜೊತೆ......ನನ್ನ ಜೊತೆ ಊಟಕ್ಕೆ ಬರುವಿರಾ?” ಅವಳ ಮುಖ ನಗುವಿನಿಂದ ಅರಳಿತು. “ಇದೆಲ್ಲಾ ಏನೆಂದು ನನಗೆ ಗೊತ್ತಿಲ್ಲ ಮಗು” ಎಂದು ಆಶ್ಚರ್ಯಚಕಿತಳಾಗಿ ಹೇಳಿದಳು. “ಇದೀಗ ತಾನೇ ಇಲ್ಲಿಂದ ಹೋದ ತಿಳಿ ಹಸಿರು ಉಡುಗೆ ತೊಟ್ಟಿದ್ದ ಆ ಯುವತಿ ಈ ಗುಲಾಬಿಯನ್ನು ತೊಡುವಂತೆ ವಿನಂತಿಸಿದಳು. ಒಂದುವೇಳೆ ನೀವೇನಾದರೂ ನನ್ನನ್ನು ಊಟಕ್ಕೆ ಕರೆದರೆ ಅವಳು ನಿಮಗಾಗಿ ಮುಂದಿನ ರಸ್ತೆಯಲ್ಲಿರುವ ಹೋಟೆಲ್‍ನಲ್ಲಿ ಕಾಯುತ್ತಿರುತ್ತಾಳೆಂದು ಹೇಳಬೇಕೆಂದಳು. ನಾನು ಒಪ್ಪಿದೆ. ಇದೊಂದು ರೀತಿಯ ಪರೀಕ್ಷೆ........ಪ್ರೇಮಪರೀಕ್ಷೆಯೆಂದೂ ಹೇಳಿದಳು. ನನಗೀಗಾಗಲೇ ನಿನ್ನಷ್ಟೆತ್ತರ ಬೆಳೆದಿರುವ ಇಬ್ಬರು ಗಂಡು ಮಕ್ಕಳಿದ್ದಾರೆ. ಅದಕ್ಕೇ ನಾನೂ ಆ ಯುವತಿಯ ಮಾತಿಗೆ ಸಮ್ಮತಿಸಿದೆ.” ಎಂದು ನಗುತ್ತಾ ಅಲ್ಲಿಂದ ತೆರಳಿದಳು.

    ಲೆಫ್ಟಿನೆಂಟ್ ಬ್ಲಾಂಡ್ಫೋರ್ಡ್ ಖುಶಿಯಿಂದ ಆ ಹೋಟೆಲ್‍ನತ್ತ ಹೆಜ್ಜೆ ಹಾಕತೊಡಗಿದ.
    ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್
    ಕನ್ನಡಕ್ಕೆ: ಉದಯ್ ಇಟಗಿ

    ಈ ಕಥೆ ಇವತ್ತಿನ ಅಂದರೆ ಅಕ್ಟೋಬರ್  14, 2012 ರ “ಉದಯವಾಣಿ” ಯಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ; http://www.udayavani.com/news/199761L15-ಈ-ಸ-ಜ--ಪ-ರ-ತ-ಯ-ಡನ-.html